ಜಾತ್ಯತೀತರೆಂಬ ಕೋಮುವಾದಿಗಳು (ಭಾಗ-೨)

20 Aug 2008

0 ಪ್ರತಿಕ್ರಿಯೆ
ಭಾಗ-೨

(ಈ ಲೇಖನ ಡಿ.ಎಸ್‌. ನಾಗಭೂಷಣ ಅವರ ’ಕಾಶ್ಮೀರ ಬೆಂಕಿ: ಎಚ್ಚರವಿರಲಿ’ ಎಂಬ ಲೇಖನಕ್ಕೆ ನೀಡಿದ ಪ್ರತಿಕ್ರಿಯಾ ಲೇಖನದ ಎರಡನೇ ಭಾಗ. ಮೂಲ ಲೇಖನವನ್ನು http://sampada.net/article/10890 ದಲ್ಲಿ ನೋಡಬಹುದು. ನನ್ನ ಲೇಖನದ ಮೊದಲ ಭಾಗವನ್ನು http://sampada.net/article/10916 ನಲ್ಲಿ ನೋಡಬಹುದು)

ಅಮರನಾಥ ವಿವಾದದ ಬಗ್ಗೆ ಪ್ರಸ್ತಾಪಿಸುತ್ತ ನಾಗಭೂಷಣ ಅವರು ಹೀಗೆ ಬರೆಯುತ್ತಾರೆ: ಅಮರನಾಥದ ಗುಹಾಂತರ್ಗತ ಹಿಮಲಿಂಗವನ್ನು ಮೊದಲು ನೋಡಿ ಜಗತ್ತಿಗೆ ಪರಿಚಯಿಸಿದವ ಒಬ್ಬ ಮುಸ್ಲಿಂ ದನಗಾಹಿ. ನಂತರ, ಅಮರನಾಥ ಯಾತ್ರೆ ಪ್ರಾರಂಭವಾದಾಗ, ಯಾತ್ರಿಕರ ಕಷ್ಟಸುಖ ನೋಡಿಕೊಂಡಿದ್ದೂ ಮುಸ್ಲಿಮರೇ. ಹದಿನೈದು ವರ್ಷಗಳ ಹಿಂದೆ ನೈಸರ್ಗಿಕ ಪ್ರಕೋಪಕ್ಕೆ ಯಾತ್ರಿಗಳು ಸಿಲುಕಿದಾಗ ಅವರ ನೆರವಿಗೆ ಧಾವಿಸಿದ್ದೂ ಸ್ಥಳೀಯ ಮುಸ್ಲಿಮರೇ. ಹಾಗೆ ನೋಡಿದರೆ, ಅಮರನಾಥ ಯಾತ್ರೆಯನ್ನು ನಿರ್ವಹಿಸುವುದು ಕಾಶ್ಮೀರಿ ಮುಸ್ಲಿಮರ ಒಂದು ವಾರ್ಷಿಕ ಸಂಪ್ರದಾಯವೇ ಆಗಿಹೋಗಿದೆ. ಆದರೆ, ನೈಸರ್ಗಿಕ ಪ್ರಕೋಪದ ನಂತರ, ಜಮ್ಮು ಕಾಶ್ಮೀರದ ಆಗಿನ ಮುಖ್ಯಮಂತ್ರಿ ಫಾರೂಕ್‌ ಅಬ್ದುಲ್ಲಾ, ಯಾತ್ರೆಯ ವ್ಯವಸ್ಥಿತ ನಿರ್ವಹಣೆಗಾಗಿ ಅಮರನಾಥ ದೇವಸ್ಥಾನ ಮಂಡಳಿ ರಚಿಸಿ, ಯಾತ್ರೆ ಕಾಲದ ತಾತ್ಕಾಲಿಕ ಬಳಕೆಗಾಗಿ ೪೦ ಹೆಕ್ಟೇರ್‌ ಅರಣ್ಯ ಭೂಮಿ ಒದಗಿಸಿತು...”

ಈ ಮಾಹಿತಿ ನೀಡುವಾಗ ನಾಗಭೂಷಣ ಅವರು ಸಮಚಿತ್ತರಾಗೇ ಇದ್ದಾರೆ. ನಂತರ ಅವರಲ್ಲಿ ಜಾತ್ಯತೀತ ಭೂತ ಆವರಿಸಿಕೊಂಡಿತೆಂದು ಕಾಣುತ್ತದೆ. ಏಕೆಂದರೆ, ಇದ್ದಕ್ಕಿದ್ದಂತೆ ಅವರ ಆಕ್ರೋಶ ಜಮ್ಮು ಕಾಶ್ಮೀರದ ಹಿಂದಿನ ರಾಜ್ಯಪಾಲ ಲೆಫ್ಟಿನೆಂಟ್‌ ಜನರಲ್‌ ಎಸ್‌.ಕೆ. ಸಿನ್ಹಾ ಮೇಲೆ ತಿರುಗುತ್ತದೆ. ಅದಕ್ಕೆ ಕಾರಣ, ಅಧಿಕಾರದ ಕೊನೆಯ ದಿನಗಳಲ್ಲಿ ಅವರು ದೇವಸ್ಥಾನ ಆಡಳಿತ ಮಂಡಳಿ ಪುನರ್‌ರಚಿಸಿ ರಾಜ್ಯಪಾಲರು ಹಿಂದು ಆಗಿದ್ದರೆ, ಮಂಡಳಿಯ ಅಧ್ಯಕ್ಷತೆಯನ್ನು ಅವರೇ ವಹಿಸಬಹುದೆಂದು ’ಕೋಮು ಅಂಶ’ವನ್ನು ಸೇರಿಸಿದರಂತೆ!

ಅಲ್ಲ ಡಿಎಸ್‌ಎನ್‌ ಅವರೇ, ಹಿಂದುಗಳಿಗೆ ಸಂಬಂಧಿಸಿದ ಮಂಡಳಿಗೆ ಹಿಂದು ವ್ಯಕ್ತಿಯೊಬ್ಬ ಅಧ್ಯಕ್ಷ ಆಗುವುದರಲ್ಲಿ ತಪ್ಪೇನಿದೆ? ಅಷ್ಟಕ್ಕೂ ಜಗತ್ತಿನ ಎಲ್ಲ ಕಡೆ ನಡೆಯುತ್ತಿರುವುದು ಇದೇ ಅಲ್ಲವೆ? ಹಜ್‌ ಯಾತ್ರಾ ಕಮಿಟಿಗೆ ಎಲ್‌.ಕೆ. ಆಡ್ವಾಣಿ ಅಧ್ಯಕ್ಷರಾಗಲು ಬರುತ್ತದೆಯೆ? ಒಂದು ವೇಳೆ ಹಾಗೆ ಬರುವುದಾದರೂ, ಅದಕ್ಕೆ ಮುಸ್ಲಿಮರು ಒಪ್ಪಿಕೊಂಡಾರೆ? ಸಂಬಂಧಗಳು ಸಹಜವಾಗಿರುವಾಗ ಇಂತಹ ನಿಯಮಗಳ ಅವಶ್ಯಕತೆ ಇರುವುದಿಲ್ಲ. ಆದರೆ, ಕಾಶ್ಮೀರ ವಿವಾದ, ಅಮರನಾಥ ಯಾತ್ರಾ ಮಂಡಳಿ ರಚನೆ ಹಾಗೂ ಪುನರ್‌ರಚನೆಗಿಂತ ಸಾಕಷ್ಟು ಮುಂಚಿನದು ಎಂಬುದು ತಮ್ಮ ಗಮನದಲ್ಲಿಲ್ಲವೆ? ಅಷ್ಟಕ್ಕೂ ಲೆ.ಜ. ಸಿನ್ಹಾ ಸೇರಿಸಿರುವ ಅಂಶ, ’ಒಂದು ವೇಳೆ ರಾಜ್ಯಪಾಲ ಹಿಂದು ಆಗಿದ್ದರೆ...’ ಎಂದು ಮಾತ್ರವೇ ಹೊರತು, ಎಲ್ಲಾ ಕಾಲಕ್ಕೂ ಹಿಂದುಗಳೇ ಮಂಡಳಿಯ ಅಧ್ಯಕ್ಷರಾಗಿರಬೇಕು ಎಂದಲ್ಲವಲ್ಲ?

ಡಿಎಸ್‌ಎನ್‌ ಪ್ರಕಾರ ಲೆ.ಜ. ಸಿನ್ಹಾ ಇನ್ನೂ ಒಂದು ’ಕೋಮು’ ಅಂಶವನ್ನು ಸೇರಿಸಿದರು. ಅದರ ಪ್ರಕಾರ, ದೇವಸ್ಥಾನದ ಬಳಕೆಗೆಂದು ತಾತ್ಕಾಲಿಕವಾಗಿ ನೀಡಿದ್ದ ೪೦ ಹೆಕ್ಟೇರ್‌ ಅರಣ್ಯ ಭೂಮಿಯನ್ನು ಶಾಶ್ವತವಾಗಿ ಮಂಡಳಿಗೆ ವರ್ಗಾಯಿಸಲು ಶಿಫಾರಸು ಮಾಡಿದ್ದು.

ಈ ಅಂಶದಲ್ಲಿ ನಾಗಭೂಷಣ ಅವರಿಗೆ ಕಂಡ ಮಹಾಪರಾಧವೇನೋ! ಎಲ್ಲಿಯವರೆಗೆ ಅಮರನಾಥ ಲಿಂಗ ಇರುತ್ತದೋ, ಅಲ್ಲಿಯವರೆಗೆ ಹಿಂದುಗಳು ಅಲ್ಲಿಗೆ ಯಾತ್ರೆ ಹೋಗುವವರೇ. ಹೀಗಿರುವಾಗ ದೇವಸ್ಥಾನ ಭೂಮಿಯನ್ನು ಮಂಡಳಿಗೆ ವರ್ಗಾಯಿಸಿದರೆ ಅದರಲ್ಲಿ ತಪ್ಪೇನಿದೆ? ಈಗ ಕಾಶ್ಮೀರದ ತುಂಬ ಭಾರತೀಯ ಸೇನಾ ನೆಲೆಗಳಿಲ್ಲವೆ? ಅವುಗಳ ಸ್ಥಾಪನೆಗೆ ಭೂಮಿ ಸಿಕ್ಕಿಲ್ಲವೆ? ಪ್ರವಾಸಿ ತಾಣಗಳಿಗೆ ಭೂಮಿ ನೀಡಿಲ್ಲವೆ? ರೈಲು, ವಿದ್ಯುತ್‌, ಬಸ್‌ ನಿಲ್ದಾಣ, ಆಸ್ಪತ್ರೆಗಳು, ಮಸೀದಿಗಳಿಗೆ ಭೂಮಿ ನೀಡಿಲ್ಲವೆ? ಇವಕ್ಕೆ ಏಳದ ಆಕ್ಷೇಪಣೆ ಅದೆಲ್ಲೋ ಎತ್ತರದ ಪರ್ವತದ ತಪ್ಪಲಿನಲ್ಲಿ ಹುದುಗಿರುವ ಪ್ರದೇಶದ ಸುತ್ತಮುತ್ತಲಿನ ಕಾಡುಭೂಮಿ ನೀಡಿದಾಗ ಏಕೆ ಉದ್ಭವವಾಗುತ್ತದೆ?

ಏಕೆಂದರೆ, ಇತರ ಧರ್ಮಗಳು ಬೆಳೆಯುವುದು ಮುಸ್ಲಿಮರಿಗೆ ಇಷ್ಟವಿಲ್ಲ. ಹೀಗಾಗಿ ೧೯೪೮ರಲ್ಲಿ ಮಾಡಿಕೊಂಡ ಒಪ್ಪಂದಕ್ಕೆ ಅವರು ಅಷ್ಟು ಬಿಗಿಯಾಗಿ ಅಂಟಿಕೊಂಡಿರುವುದು. ನಮ್ಮ ಸಂವಿಧಾನಕ್ಕೇ ಆ ಪರಿಯ ತಿದ್ದುಪಡಿಗಳಾಗಿವೆ. ಹೀಗಿರುವಾಗ, ಧಾರ್ಮಿಕ ಯಾತ್ರೆಗೆ ಸಂಬಂಧಿಸಿದಂತೆ ಒಂದು ಸಣ್ಣ ತಿದ್ದುಪಡಿಯಾದರೆ ಅದರಲ್ಲಿ ತಪ್ಪೇನಿದೆ?

೧೯೪೮ರ ಒಪ್ಪಂದದ ಅನಿವಾರ್ಯತೆ ಏನಿತ್ತು ಎಂಬುದು ’ಬುದ್ಧಿಜೀವಿ’ಯಾಗಿರುವ ನಾಗಭೂಷಣ ಅವರೇ ನಿಮಗೆ ಗೊತ್ತಿಲ್ಲವೆ? ಸ್ವಾತಂತ್ರ ಬಂದ ಅರವತ್ತೊಂದು ವರ್ಷಗಳ ನಂತರವೂ ಕಾಶ್ಮೀರವನ್ನು ಒಂದು ಸ್ವಾಯತ್ತ ಸ್ಥಿತಿಯಲ್ಲಿ ಇರಿಸುವ ಅಪಾಯ ನಿಮಗೆ ತಿಳಿಯುತ್ತಿಲ್ಲವೆ? ಅದೆಂಥ ಕೋಮುವಾದ ನಿಮ್ಮನ್ನು ಆವರಿಸಿರಬಹುದು!

ಅಷ್ಟಕ್ಕೂ ಇಲ್ಲಿ ಪ್ರಸ್ತಾಪವಾಗಿರುವುದು ದೇವಸ್ಥಾನ ಆಡಳಿತ ಮಂಡಳಿಗೆ ಜಮೀನು ನೀಡುವ ವಿಷಯ. ಅದೂ ಕೇವಲ ಶಿಫಾರಸು ಮಾತ್ರ. ಲೆ.ಜ. ಸಿನ್ಹಾ ಸೂಚಿಸಿದ್ದು ೪೦ ಹೆಕ್ಟೇರ್‌ ಅರಣ್ಯ ಭೂಮಿಯ ಹಸ್ತಾಂತರ. ಅದನ್ನು ಹಸ್ತಾಂತರಿಸಲಾಗದು ಎಂದು ಹೇಳಿದ್ದರೆ ಪರವಾಗಿದ್ದಿಲ್ಲ. ಅಥವಾ ಲೀಸ್‌ (ಗುತ್ತಿಗೆ) ನೀಡಿದ್ದರೂ ಸಾಕಿತ್ತು.

ತಮ್ಮ ಗಮನಕ್ಕೆಂದು ೨೦೦೦ನೇ ಇಸ್ವಿಯಲ್ಲಿ ಜಾರಿಗೆ ಬಂದ ’ದಿ ಜಮ್ಮು ಅಂಡ್‌ ಕಾಶ್ಮೀರ್‌ ಶ್ರೀ ಅಮರನಾಥಜಿ ಶ್ರೈನ್‌ ಆಕ್ಟ್‌ ೨೦೦೦’ನಲ್ಲಿರುವ ಕೆಲವು ಅಂಶಗಳನ್ನು ಕೊಡುತ್ತಿದ್ದೇನೆ. ನೆನಪಿರಲಿ, ಈ ಕಾಯಿದೆ ಜಾರಿಗೆ ಬಂದಿದ್ದು ಎಂಟು ವರ್ಷಗಳ ಹಿಂದೆ.

ಅದರ ಪ್ರಕಾರ: There is an Act of the Jammu & Kashmir legislature, called ‘The Jammu and Kashmir Shri Amarnathji Shrine Act, 2000’. This Act which provides for the constitution of the Shrine Board, also defines the duties of the Board. Section 16 of the Act reads as under:
16. Duties of the Board
Subject to the provisions of this Act and of any bye-laws made thereunder, it shall be the duty of the Board :-
(a) to arrange for the proper performance of worship at the Holy Shrine;
(b) to provide facilities for the proper performance of worship by the pilgrims;

(c) To make arrangements for the safe custody of the funds, valuables and jewellery and for the preservation of the Board Fund;
(d) To undertake developmental activities concern the area of the Shrine and its surroundings;
(e) To make provision for the payment of suitable emoluments to the salaried staff;
(f) To make suitable arrangements for the imparting of religious instructions and general education to the pilgrims;
(g) To undertake, for the benefit of worshippers and pilgrims:
(i) the construction of buildings for their accommodation;
(ii) the construction of sanitary works;

(iii) the improvement of means of communication.
(h) To make provision of medical relief for worshippers and pilgrims;
(i) to do all such things as may be incidental and conducive to the efficient management, maintenance and administration of the Holy Shrine and the Board Funds and for the convenience of the pilgrims.

ಇದರಲ್ಲಿ ಪ್ರಸ್ತಾಪಿತಗೊಂಡ ಡಿ, ಎಫ್‌ ಮತ್ತು ಜಿ ಅಂಶಗಳನ್ನು ಪರಿಶೀಲಿಸಿ. ಲಕ್ಷಾಂತರ ಜನರು ಪಾಲ್ಗೊಳ್ಳುವ ಯಾತ್ರೆಯಲ್ಲಿ, ಅದೂ ದುರ್ಗಮ ಪ್ರದೇಶದ ಹಾಗೂ ಭಯೋತ್ಪಾದನೆ ಭೀತಿ ಇರುವ ಪ್ರದೇಶದಲ್ಲಿ ಕನಿಷ್ಟ ಸೌಲಭ್ಯಗಳಾದರೂ ಇರಬೇಕಲ್ಲವೆ? ಅದಕ್ಕೆ ಬೇಕಾದಂತೆ ಭೂಮಿಯನ್ನು ನೀಡುವುದು ಆ ರಾಜ್ಯದ ಅಥವಾ ಒಟ್ಟಾರೆ ಸರ್ಕಾರದ ಕರ್ತವ್ಯ ಅಲ್ಲವೆ? ನಿಯಮದ ಪ್ರಕಾರ, ಇದನ್ನೆಲ್ಲಾ ನೋಡಿಕೊಳ್ಳುವ ಜವಾಬ್ದಾರಿ ಅಮರನಾಥ ಮಂಡಳಿಯದು. ಸರ್ಕಾರ ಮಂಡಳಿಯ ತೀರ್ಮಾನಕ್ಕೆ ಗೌರವ ಕೊಡಬೇಕಾಗುತ್ತದೆ. ಏಕೆಂದರೆ, ಅದು ಕಾನೂನುಬದ್ಧವಾಗಿ ರಚನೆಯಾದ ಮಂಡಳಿ.

ಎಂಟು ವರ್ಷಗಳ ಹಿಂದೆಯೇ ಮಂಡಳಿ ಅಸ್ತಿತ್ವಕ್ಕೆ ಬಂದಿದೆ. ಆಗ ಎತ್ತದ ಆಕ್ಷೇಪಣೆಗಳು ಈಗೇಕೆ ಕಾಣಿಸಿಕೊಂಡವು? ಪ್ರತಿಯೊಂದು ಬೆಳವಣಿಗೆಯನ್ನೂ ಕೋಮುಕಣ್ಣಲ್ಲೇ ನೋಡುವ ಕಾಶ್ಮೀರಿ ಮುಸ್ಲಿಮರು ಆಗೇಕೆ ಸುಮ್ಮನಿದ್ದರು?

ಡಿಎಸ್‌ಎನ್‌ ಅವರೇ, ಭಾರತದಲ್ಲಿ ಧಾರ್ಮಿಕ ಚಟುವಟಿಕೆಗಳನ್ನು ಸರ್ಕಾರ ನೇರವಾಗಿ ನಡೆಸುವುದಿಲ್ಲ. ಅದಕ್ಕಾಗಿ ಸಮಿತಿಗಳು ಹಾಗೂ ಮಂಡಳಿಗಳು ರಚನೆಯಾಗಿರುತ್ತವೆ. ತಂತಮ್ಮ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಸೂಕ್ತ ನಿರ್ಧಾರಗಳನ್ನು ಕೈಗೊಳ್ಳುವ ಕಾನೂನುಬದ್ಧ ಹಕ್ಕು ಅವಕ್ಕಿರುತ್ತದೆ. ಸಂವಿಧಾನದ ಕಲಂ ೨೬ ಮತ್ತು ೨೭ ಕೂಡ ಇದೇ ಅಂಶವನ್ನು ಸ್ಪಷ್ಟಪಡಿಸುತ್ತವೆ.

Article 26ರ ಪ್ರಕಾರ:
Freedom to manage religious affairs:
Subject to public order, morality and health, every religious denomination or any section thereof shall have the right—
(a) to establish and maintain institutions for religious and charitable purposes;
(b) to manage its own affairs in matters of religion;
(c) to own and acquire movable and immovable property; and
(d) to administer such property in accordance with law.

ತನ್ನ ಧಾರ್ಮಿಕ ಚಟುವಟಿಕೆಗಳನ್ನು ನಡೆಸುವ ಹಕ್ಕು ಪ್ರತಿಯೊಂದು ಧರ್ಮಕ್ಕೂ ಇದೆ. ಅದರ ಸಲುವಾಗಿ, ತನ್ನದೇ ಆದ ಧಾರ್ಮಿಕ ಸಂಸ್ಥೆಗಳನ್ನು ಅಥವಾ ದತ್ತಿ ಸಂಸ್ಥೆಗಳನ್ನು ಹುಟ್ಟು ಹಾಕಬಹುದು, ಚರ ಮತ್ತು ಸ್ಥಿರ ಆಸ್ತಿ ಹೊಂದಬಹುದು ಹಾಗೂ ಕಾನೂನುಬದ್ಧವಾಗಿ ಈ ಆಸ್ತಿಗಳ ನಿರ್ವಹಣೆ ಮಾಡಬಹುದು. ಈಗ ಅಮರನಾಥ ಮಂಡಳಿ ಮಾಡುತ್ತಿರುವುದೂ ಇದನ್ನೇ. ಸಂವಿಧಾನಬದ್ಧವಾಗಿಯೇ ಇರುವ ಈ ಚಟುವಟಿಕೆಯಲ್ಲಿ ತಾವು ಹೇಗೆ ಕೋಮುವಾದವನ್ನು ಹೆಕ್ಕಿದಿರೋ!

ಸಂವಿಧಾನದ ಕಲಂ ೨೭ ಕೂಡ ಇದನ್ನೇ ಹೇಳುತ್ತದೆ.
Freedom as to payment of taxes for promotion of any particular religion.
No person shall be compelled to pay any taxes, the proceeds of which are specifically appropriated in payment of expenses for the promotion or maintenance of any particular religious denomination.
All faiths deserve equal respect. And the State should not discriminate between followers of different faiths. This is the meaning of Indian secularism. It enjoins on us to create proper amenities, with necessary infrastructure, at the pilgrimage centres of all communities. There can be no double standards in this matter.

ಆ ಪ್ರಕಾರ, ಧರ್ಮಗಳ ನಡುವೆ ಭೇದ ಎಣಿಸಬಾರದು. ಅದು ಭಾರತೀಯ ಜಾತ್ಯತೀತ ಧೋರಣೆಯ ಮುಖ್ಯ ಆಶಯ. ಹಜ್‌ ಯಾತ್ರೆ ನಡೆಯುತ್ತಿರುವುದೇ ಇಂತಹ ಆಶಯದ ಹಿನ್ನೆಲೆಯಲ್ಲಿ. (ಈಗ ಬಿಡಿ, ಅದಕ್ಕೂ ರಾಜಕೀಯ ಲೇಪ ಬಂದುಬಿಟ್ಟಿದೆ. ಹಜ್‌ ಯಾತ್ರೆ ಸಂಘಟಿಸಲು ತೋರುವಷ್ಟು ಉತ್ಸಾಹ ಹಾಗೂ ಕಾಳಜಿಯನ್ನು ಇತರ ಪ್ರಮುಖ ಧರ್ಮಗಳ ಆಚರಣೆಗಳಿಗೆ ನಮ್ಮ ಸರ್ಕಾರ ತೋರುತ್ತಿಲ್ಲ!) ಅಂಥದೇ ಆಶಯ ಅಮರನಾಥ ಯಾತ್ರೆಯಲ್ಲಿಯೂ ಇರಬೇಕು. ಒಂದು ವೇಳೆ ಇಲ್ಲದಿದ್ದರೆ, ಇರುವಂತೆ ನೋಡಿಕೊಳ್ಳಬೇಕು. ಅಷ್ಟಕ್ಕೂ ಹಿಂದುಗಳು ಹೋಗುತ್ತಿರುವುದು ವಿದೇಶಕ್ಕೇನೂ ಅಲ್ಲವಲ್ಲ? ತಮ್ಮದೇ ದೇಶದ ಒಂದು ಭಾಗಕ್ಕೆ ತಾನೆ? ಅಲ್ಲಿ ಕನಿಷ್ಠ ಸೌಲಭ್ಯಗಳನ್ನು ನೀಡದಿದ್ದರೆ ಹೇಗೆ? ನೀಡಲು ಮುಂದಾದರೆ, ಅದಕ್ಕೂ ಸಲ್ಲದ ಕಾರಣಗಳನ್ನು ಮುಂದೊಡ್ಡಿ ಅಡ್ಡಿಪಡಿಸಿದರೆ ಹೇಗೆ? ಇಂತಹ ಸಣ್ಣತನವನ್ನು ಪ್ರತಿಭಟಿಸಿದರೆ ಅದ್ಹೇಗೆ ತಪ್ಪಾಗುತ್ತದೆ?

ಅಮರನಾಥ ಲಿಂಗ ಇರುವ ಗುಹೆಗೆ ನೈಸರ್ಗಿಕ ಸವಾಲುಗಳನ್ನು ಎದುರಿಸಿಯೇ ಹೋಗಬೇಕು. ಈಗಿರುವ ಸೌಲಭ್ಯಗಳನ್ನು ನೋಡಿದರೆ, ಅತ್ಯಂತ ಶಕ್ತ ಯುವಕ-ಯುವತಿಯರು ಮಾತ್ರ ಯಾತ್ರೆ ಕೈಗೊಳ್ಳಬಹುದು. ಹೀಗಿರುವಾಗ, ಧಾರ್ಮಿಕ ಶ್ರದ್ಧೆಯ ಇತರ ವಯೋಮಾನದ ಜನ ಏನು ಮಾಡಬೇಕು? ಮಂಡಳಿ ರಚನೆಯಾಗಿ ಎಂಟು ವರ್ಷಗಳಾದ ನಂತರವೂ ಕನಿಷ್ಠ ಮೂಲಸೌಕರ್ಯಗಳನ್ನು ಒದಗಿಸದಿದ್ದರೆ ಹೇಗೆ? ನಿಮಗೆ ಇಂತಹ ವಿಷಯಗಳು ಏಕೆ ಹೊಳೆಯುತ್ತಿಲ್ಲ ಡಿ.ಎಸ್‌. ನಾಗಭೂಷಣ ಅವರೇ?

ಕಾಶ್ಮೀರಕ್ಕೆ ಪ್ರವಾಸಿಗಳು ಬರಲು ಎಲ್ಲ ವ್ಯವಸ್ಥೆ ಕಲ್ಪಿಸುತ್ತೀರಿ. ಅದಕ್ಕೇನೂ ವಿರೋಧವಿಲ್ಲ. ಆದರೆ, ಧಾರ್ಮಿಕ ಕ್ಷೇತ್ರಕ್ಕೆ ಅದನ್ನು ನಿರಾಕರಿಸುತ್ತಿರುವುದು ಏಕೆ?

ಏಕೆಂದರೆ, ಪ್ರವಾಸೋದ್ಯಮದಿಂದ ಹಣ ಬರುವುದು ಕಾಶ್ಮೀರಿ ಮುಸ್ಲಿಮರಿಗೆ. ಹೀಗಾಗಿ, ಅದಕ್ಕೆ ವಿರೋಧವಿಲ್ಲ. ಅಮರನಾಥ ಯಾತ್ರೆಯಿಂದಲೂ ಕಾಶ್ಮೀರಿ ಮುಸ್ಲಿಮರಿಗೆ ಆರ್ಥಿಕ ಲಾಭವಿದೆ. ಆದರೆ, ಇಲ್ಲಿ ಧಾರ್ಮಿಕ ಅಂಶವಿರುವುದರಿಂದ ಅವರು ಒಪ್ಪುತ್ತಿಲ್ಲ. ನಾಳೆ ಎಲ್ಲಾ ಹಿಂದುಗಳು ಬಂದು ಅಮರನಾಥ ಮಾರ್ಗದುದ್ದಕ್ಕು ನೆಲೆಸಿದರೆ ಹೇಗೆ ಎಂಬ ಆತಂಕ ಅವರನ್ನು ಕಾಡುತ್ತಿರಬೇಕು.

ಹಾಗಾದರೆ ಇದು ಜಾತ್ಯತೀತ ಧೋರಣೆಯಾ ಡಿಎಸ್‌ಎನ್‌.?

ನಮ್ಮ ಧರ್ಮ ಬೆಳೆಯಲಿ, ಆದರೆ, ಇತರರ ಧರ್ಮ ಬೆಳೆಯುವುದು ಬೇಡ ಎಂಬುದು ಅದ್ಹೇಗೆ ಜಾತ್ಯತೀತ ಧೋರಣೆಯಾಗುತ್ತದೆ? ಮುಸ್ಲಿಮರು ಪ್ರತಿಭಟಿಸುತ್ತಿರುವುದು ಈ ಕಾರಣಕ್ಕೆ ಅಲ್ಲವೆ? ಹೀಗಿದ್ದರೂ ಇದರಲ್ಲಿ ನಿಮಗೆ ರಾಜಕೀಯ ವಾಸನೆ ಬಡಿಯುತ್ತದೆ. ಕೋಮುವಾದದ ವಾಸನೆ ತಾಕುತ್ತದೆ. ಆದರೆ, ಈ ವಾಸನೆ ಕೇವಲ ಹಿಂದುಗಳದ್ದು ಮಾತ್ರ ಎಂಬುದು ನಿಮ್ಮ ವೈಚಾರಿಕ ಸಣ್ಣತನಕ್ಕೆ ಸಾಕ್ಷಿ. ಮುಸ್ಲಿಮರಿಂದಲೂ ಇಂಥದೇ ವಾಸನೆ ಬರುತ್ತಿರುವುದು ತಮ್ಮ ಬುದ್ಧಿಜೀವಿ ನಾಸಿಕಕ್ಕೆ ಏಕೆ ಗೊತ್ತಾಗಲಿಲ್ಲವೋ!

ಎಲ್ಲಕ್ಕೂ ಮುಖ್ಯ ಎಂದರೆ, ೧೭-೫-೨೦೦೫ರಂದು ಹೈಕೋರ್ಟ್‌‌ನ ವಿಭಾಗೀಯ ಪೀಠ ಅಮರನಾಥ ಮಂಡಳಿ ಪುನರ್‌ರಚನೆ ಕುರಿತಾದ ಎಲ್ಲ ಆಕ್ಷೇಪಣೆಗಳನ್ನೂ ತಳ್ಳಿಹಾಕಿ, ಯಾತ್ರೆ ಸುಗಮವಾಗಿ ನಡೆಯಲು ಬೇಕಾದ ಮಾನದಂಡಗಳನ್ನು ರೂಪಿಸಿದೆ. ತನ್ನ ತೀರ್ಪಿನಲ್ಲಿ ಹೈಕೋರ್ಟ್‌ “The land to be allotted by the Board would be only for the purposes of its user and would remain allotted for the duration of the yatra. The board shall also identify the sites to be allotted for the purposes of ‘Langar’, erection of detachable pre-fabricated huts and toilets etc. which would not be permanent in nature and which are liable to be removed after the yatra is over. The Board shall identify the person/agency to whom the site would be allotted so as to enable the State Government to screen the activities of such person/agency……” ಎಂದು ಸ್ಪಷ್ಟಪಡಿಸಿದೆ.

ಹೀಗಿದ್ದರೂ ಮುಸ್ಲಿಮರು ಭಯಪಡುತ್ತಿರುವುದೇಕೆ? ಜಾತ್ಯತೀತ ವಕ್ತಾರರಾದ ನಿಮ್ಮಲ್ಲಿ ಏನಂಥ ಭಯ ಹುಟ್ಟಿಕೊಂಡಿರುವುದು? ತಮ್ಮ ಧಾರ್ಮಿಕ ಕ್ಷೇತ್ರಕ್ಕೆ ಹೋಗಲು ತಾತ್ಕಾಲಿಕ ಸೌಲಭ್ಯಗಳನ್ನು ಕಲ್ಪಿಸಲೂ ಬಿಡುತ್ತಿಲ್ಲ ಎಂದ ಮೇಲೆ ಕಾಶ್ಮೀರಿ ಮುಸ್ಲಿಮರ ಬಗ್ಗೆ ದೇಶದ ಇತರ ಬಹುಸಂಖ್ಯಾತ ಜನರಲ್ಲಿ ಅದೆಂಥ ಪ್ರೀತಿ ಹುಟ್ಟೀತು? ನಾಳೆ ಇದೇ ಧೋರಣೆಯನ್ನು ಮುಸ್ಲಿಮರಿಗೆ ಸಂಬಂಧಿಸಿದ ಕ್ಷೇತ್ರಗಳಲ್ಲಿ ತೋರಿದರೆ ಹೇಗೆ? ಅದನ್ನು ವಿರೋಧಿಸುವ ನೈತಿಕತೆ ಯಾರಿಗಿದ್ದೀತು?

ನಿಮ್ಮನ್ನು ಬಿಡಿ, ನೀವು ಪ್ರತಿಯೊಂದನ್ನೂ ಕೋಮು ಕನ್ನಡಕ ಹಾಕಿಕೊಂಡೇ ನೋಡುತ್ತೀರಿ, ಬರೆಯುತ್ತೀರಿ. ನಿಮಗೆ ಇಂತಹ ಪ್ರಶ್ನೆಗಳು ಕಾಡುವುದಿಲ್ಲ. ಒಂದು ವೇಳೆ ಇತರರು ಅವನ್ನು ಕೇಳಿದರೂ ನೀವು ಉತ್ತರಿಸುವುದಿಲ್ಲ. ಏಕೆಂದರೆ, ನಿಮಗೆ ಅಂತಹ ಸಾಮಾಜಿಕ ಜವಾಬ್ದಾರಿಯೇ ಇಲ್ಲ. ಈ ಸಾಲನ್ನು ನಾನು ತುಂಬ ಯೋಚಿಸಿ ಬರೆಯುತ್ತಿದ್ದೇನೆ. ಕೇವಲ ಉಗ್ರವಾದಿಗಳಷ್ಟೇ ಅಲ್ಲ ಸಮಾಜದ ಸ್ವಾಸ್ಥ್ಯ ಕೆಡಿಸುವವರು. ನಿಮ್ಮಂಥ ತಪ್ಪು ಧೋರಣೆಯ ವ್ಯಕ್ತಿಗಳೂ ಅವರಲ್ಲಿ ಸೇರುತ್ತೀರಿ. ಏಕಪಕ್ಷೀಯ ವಿಚಾರಧಾರೆ ಹರಡಲು ಯತ್ನಿಸುತ್ತ, ಆ ಮೂಲಕ ಪ್ರಚಾರ ಪಡೆಯುತ್ತ, ಅದನ್ನೇ ಮನ್ನಣೆ ಎಂದು ಭಾವಿಸಿಕೊಂಡು ಇನ್ನಷ್ಟು ಅಪಾಯಕಾರಿಗಳಾಗುತ್ತೀರಿ.

ಸತ್ಯವನ್ನು ಒಪ್ಪಿಕೊಳ್ಳದ ನಿಮ್ಮಂಥವರಿಗೆ ಧಿಕ್ಕಾರವಿರಲಿ.

- ಚಾಮರಾಜ ಸವಡಿ

ಜಾತ್ಯತೀತರೆಂಬ ಕೋಮುವಾದಿಗಳು (ಭಾಗ-೧)

16 Aug 2008

3 ಪ್ರತಿಕ್ರಿಯೆ

(ಈ ಲೇಖನ ಡಿ.ಎಸ್‌. ನಾಗಭೂಷಣ ಅವರ ’ಕಾಶ್ಮೀರ ಬೆಂಕಿ: ಎಚ್ಚರವಿರಲಿ’ ಎಂಬ ಲೇಖನಕ್ಕೆ ಪ್ರತಿಕ್ರಿಯೆ. ಮೂಲ ಲೇಖನವನ್ನು http://sampada.net/article/10890 ದಲ್ಲಿ ನೋಡಬಹುದು)

ಸನ್ಮಾನ್ಯ ಡಿ.ಎಸ್‌. ನಾಗಭೂಷಣ ಅವರ ’ಕಾಶ್ಮೀರ ಬೆಂಕಿ: ಎಚ್ಚರವಿರಲಿ’ ಲೇಖನ ಜಾತ್ಯತೀತ ಹೆಸರಲ್ಲಿ ಹುಷಾರಾಗಿ ಹೆಣೆದ ಲೇಖನ ಎಂದು ಹೇಳಲು ಬಯಸುತ್ತೇನೆ. ಇಡೀ ವಿವಾದದಲ್ಲಿ ಮುಸ್ಲಿಮರನ್ನು ನೇರವಾಗಿ ಖಂಡಿಸದೇ, ಅವರ ಧೋರಣೆಯ ಹಿಂದಿರುವ ಧರ್ಮಾಂಧತೆಯನ್ನು ಬಯಲಿಗೆ ತಾರದೇ, ಇಡೀ ವಿವಾದದ ಹಿಂದೆ ಹಿಂದು ಧರ್ಮ ಪರ ಸಂಘಟನೆಗಳ ಹುನ್ನಾರ ಇದೆ ಎಂಬಂತೆ ಬಿಂಬಿಸಲು ಲೇಖಕರು ಯತ್ನಿಸಿದ್ದಾರೆ.

ಇದಕ್ಕೆ ಬೆಂಬಲವಾಗಿ ಸತ್ಯವನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಬಳಸಿಕೊಂಡಿದ್ದಾರೆ ನಾಗಭೂಷಣ ಅವರು.

ಅವರ ಲೇಖನದ ಈ ಸಾಲುಗಳನ್ನೇ ನೋಡಿ:

’’ಆಗಸ್ಟ್ 14ರವರೆಗೂ ತನ್ನ ಪ್ರತಿಭಟನೆಯನ್ನು ಮುಂದುವರೆಸಲು ನಿರ್ಧರಿಸಿರುವ ಜಮ್ಮು ಸಂಘರ್ಷ ಸಮಿತಿ 62ನೇ ಸ್ವಾತಂತ್ರ್ಯೋತ್ಸವಕ್ಕೆ ತನ್ನ ವಿಶಿಷ್ಟ ಕೊಡುಗೆಯನ್ನು ಸಲ್ಲಿಸಿದೆ ಎಂದೇ ಹೇಳಬೇಕು. ರಾಜ್ಯದ ಈವರೆಗಿನ ರಾಜಕಾರಣ; ಕಾಶ್ಮೀರ ಕಣಿವೆ ಮುಸ್ಲಿಮರದ್ದೂ, ಜಮ್ಮು ತಪ್ಪಲು ಹಿಂದೂಗಳದ್ದು ಎಂಬ ವಿಭಾಗೀಕರಣಕ್ಕೆ ಕಾರಣವಾಗಿರುವುದರಿಂದ ಸದ್ಯದ ಈ ಸಮಸ್ಯೆಗೆ ದಟ್ಟ ಕೋಮು ಬಣ್ಣ ಕೂಡಾ ಬಂದಿದೆ.”

ಇದು ಇವತ್ತಿನ ಬಣ್ಣವಲ್ಲ ನಾಗಭೂಷಣ ಅವರೇ. ಜಮ್ಮು ಕಾಶ್ಮೀರ ರಾಜ್ಯ ರಚನೆಯಾದಾಗಿನಿಂದ ಇರುವಂಥದ್ದು. ಇತಿಹಾಸದ ಬಗ್ಗೆ ನಿಮಗೆ ಚೆನ್ನಾಗಿ ಗೊತ್ತಿರುವುದರಿಂದ, ಮತ್ತು ತಕ್ಕಮಟ್ಟಿಗೆ ಬಹಳಷ್ಟು ಜನರೂ ಅದನ್ನು ಅರಿತುಕೊಂಡಿರುವುದರಿಂದ, ಕೋಮುಬಣ್ಣ ಇವತ್ತಿನದಲ್ಲ ಎಂಬುದನ್ನು ಮತ್ತೆ ವಿವರಿಸಬೇಕಾಗಿಲ್ಲ ಅನಿಸುತ್ತದೆ.

ನಿಮ್ಮ ಮುಂದಿನ ಸಾಲುಗಳು ಕೂಡಾ ಮುಸ್ಲಿಂ ಪರ ಸಂಘಟನೆಗಳು ಹಾಗೂ ಉಗ್ರವಾದಿಗಳ ಮೇಲಿನ ಅನುಕಂಪವನ್ನೇ ವ್ಯಕ್ತಪಡಿಸುತ್ತವೆ ”ಇದರಿಂದ ನಿರಂತರವಾಗಿ ಲಾಭ ಪಡೆಯುತ್ತಿರುವವರೆಂದರೆ, ಕಾಶ್ಮೀರದ ಪ್ರತ್ಯೇಕತಾವಾದಿ ಗುಂಪುಗಳು ಮತ್ತು ಉಗ್ರವಾದಿ ಸಂಸ್ಥೆಗಳು. ಮೊನ್ನೆ ಜಮ್ಮು ಬಂದ್ ವಿರುದ್ಧ ಶ್ರೀನಗರದಲ್ಲಿ ನಡೆದ ಮೆರವಣಿಗೆಯಲ್ಲಿ ಅನೇಕ ಉಗ್ರವಾದಿ ಗುಂಪುಗಳು ಬಹಿರಂಗವಾಗಿ ಕಾಣಿಸಿಕೊಂಡು ರಾಷ್ಟ್ರವಿರೋಧಿ ಘೋಷಣೆಗಳನ್ನು ಕೂಗತೊಡಗಿದ್ದು ಮತ್ತು ಇದನ್ನು ನಮ್ಮ ಭದ್ರತಾ ಪಡೆಗಳು ಮೂಕ ಪ್ರೇಕ್ಷಕರಾಗಿ ನೋಡುತ್ತಾ ನಿಲ್ಲುವಂತಾದದ್ದು ಇದಕ್ಕೊಂದು ಉದಾಹರಣೆ.” ಎಂದು ಹೇಳುತ್ತೀರಿ. ಅದರ ನಂತರದ ಘಟನೆಗಳನ್ನೇಕೆ ಉದಾಹರಿಸಿಲ್ಲ? ಶ್ರೀನಗರದ ಲಾಲ್‌ಚೌಕದಲ್ಲಿ ಆಗಸ್ಟ್‌ ೧೫ರಂದು ಹಾರಿಸಲಾಗಿದ್ದ ರಾಷ್ಟ್ರಧ್ವಜವನ್ನು ಮಧ್ಯಾಹ್ನ ೩.೪೫ರ ಹೊತ್ತಿಗೆ ಇಳಿಸಿದ ಮುಸ್ಲಿಂ ಸಂಘಟನೆಗಳು ಹಾಗೂ ಉಗ್ರವಾದಿಗಳು, ಅಲ್ಲಿ ತಮ್ಮ ಸಂಘಟನೆಗಳ ಧ್ವಜಗಳನ್ನು ಹಾರಿಸಿದರು. ಸಂಘಟನೆಗೆ ಸೇರಿದ ಮಹಿಳಾ ಸದಸ್ಯರು ರಾಷ್ಟ್ರಧ್ವಜ ಸುಟ್ಟರು. ನೀವು ಹೇಳಿದಂತೆ ನಮ್ಮ ಭದ್ರತಾ ಪಡೆಗಳು ಅದನ್ನು ಮೂಕಪ್ರೇಕ್ಷರಾಗಿ ನೋಡುತ್ತಾ ನಿಂತಿದ್ದರು. ಏಕೆ ಗೊತ್ತೆ? ಆಗ ಅವರು ರಂಗಕ್ಕೆ ಇಳಿದಿದ್ದರೆ ಮತ್ತೊಂದು ರಕ್ತಪಾತವಾಗುತ್ತಿತ್ತು. ಅದೂ ಸ್ವಾತಂತ್ರ ದಿನದಂದು. ಅದಕ್ಕೇ ಸುಮ್ಮನಿದ್ದರು. (ಟೈಮ್ಸ್‌ ಆಫ್‌ ಇಂಡಿಯಾ ೧೬-೮-೨೦೦೮)

ಮುಂದೆ ನೀವು ಕಾಶ್ಮೀರ ಸಮಸ್ಯೆ ಉಲ್ಬಣವಾಗಿದ್ದು ಹೇಗೆ ಎಂಬುದನ್ನು ಹೇಳುತ್ತ, ಕೇವಲ ಕೇಂದ್ರ ಸರ್ಕಾರ ಮತ್ತು ಅದು ಸ್ಥಾಪಿಸಿದ್ದ ಕೈಗೊಂಬೆ ರಾಜ್ಯ ಸರ್ಕಾರಗಳು ಇವತ್ತಿನ ಪರಿಸ್ಥಿತಿಗೆ ಕಾರಣ ಎನ್ನುತ್ತೀರಿ. ಇದಕ್ಕೆ ಸಮರ್ಥನೆಯಾಗಿ ”ಬಾಬ್ರಿ ಮಸೀದಿ ನಾಶ ಹಾಗೂ ಆಫ್ಘನಿಸ್ಥಾನ ಮತ್ತು ಇರಾಕ್‌ಗಳ ಮೇಲಿನ ಅಮೆರಿಕಾದ ಆಕ್ರಮಣಗಳ ನಂತರವಂತೂ ಈ ಸಮಸ್ಯೆಗೆ ಜಾಗತಿಕ ಆಯಾಮ ದೊರೆತು, ಪ್ರತ್ಯೇಕತಾವಾದ ಕೋಮುವಾದವಾಗಿ ಪರಿವರ್ತಿತವಾಗಿ, ಸಮಸ್ಯೆಯನ್ನು ಉಲ್ಬಣಗೊಳಿಸಿದೆ” ಎಂದು ಬರೆಯುತ್ತೀರಿ. ಅಂದರೆ, ಬಾಬ್ರಿ ಮಸೀದಿ ನಾಶ ಹಾಗೂ ಆಫ್ಘನಿಸ್ತಾನ ಮತ್ತು ಇರಾಕ್‌ ಮೇಲಿನ ಅಮೆರಿಕ ಆಕ್ರಮಣದಿಂದ ಕಾಶ್ಮೀರ ಸಮಸ್ಯೆಗೆ ಜಾಗತಿಕ ಆಯಾಮ ದೊರೆತು, ಪ್ರತ್ಯೇಕತಾವಾದ ಕೋಮುವಾದವಾಗಿ ಪರಿವರ್ತನೆಯಾಯಿತು ಎಂಬುದು ನಿಮ್ಮ ಬರಹದ ಅರ್ಥ. ಅಂದರೆ, ಮೇಲಿನ ಬೆಳವಣಿಗೆಗಳ ಮುಂಚೆ ಜಮ್ಮು ಕಾಶ್ಮೀರದಲ್ಲಿ ಕೋಮುವಾದ ಇರಲಿಲ್ಲವೆ? ಜಗತ್ತಿನ ಇಂತಹ ಸಮಸ್ಯೆಗಳ ಹಿನ್ನೆಲೆ ಅವಲೋಕಿಸಿದರೆ, ಕೋಮುವಾದವೇ ಪ್ರತ್ಯೇಕತಾವಾದವಾಗಿ ಬದಲಾಗಿದ್ದು ಸರಳವಾಗಿ ಗೋಚರಿಸುತ್ತದೆ. ನಮ್ಮ ದೇಶ ವಿಭಜನೆಯಾಗಿದ್ದೇ ಕೋಮುವಾದದಿಂದ ಎಂಬುದನ್ನು ಏಕೆ ಮರೆಯುತ್ತೀರಿ?

ನಿಮ್ಮ ಲೇಖನದ ಮುಂದಿನ ಪ್ಯಾರಾವಂತೂ ಜಾತ್ಯತೀತ ಹೆಸರಿನ ಬಹುತೇಕ ಕೋಮುವಾದಿಗಳ ದೃಷ್ಟಿಕೋನವನ್ನೇ ಪ್ರತಿಫಲಿಸುತ್ತದೆ.

”ಆದರೆ ಸ್ವಾತಂತ್ರ್ಯೋತ್ತರ ಭಾರತದ ರಾಜಕಾರಣ ರಾಷ್ಟ್ರೀಯ ಏಕತೆಯ ಹೆಸರಿನಲ್ಲಿ, ಸಂವಿಧಾನ ಪ್ರತಿಪಾದಿಸಿದ್ದ ಒಕ್ಕೂಟ ರಾಷ್ಟ್ರದ ಭಾವನೆಯ ವಿರುದ್ಧ ಆಚರಿಸಿಕೊಂಡು ಬರುತ್ತಿರುವ ಕೇಂದ್ರೀಕೃತ ಆಡಳಿತ ನೀತಿಯ ಫಲವಾಗಿ ವಿವಿಧ ರಾಜ್ಯಗಳ ಭಾಷೆ-ಸಂಸ್ಕೃತಿ ಸಂಪ್ರದಾಯಗಳು ಘಾಸಿಗೊಂಡಿರುವಂತೆ, ಇಲ್ಲೂ ಆ ಬಹು ಸಂಸ್ಕೃತಿಯ ಸಂಪ್ರದಾಯ ಘಾಸಿಗೊಂಡಿದೆ. ಸ್ಥಳೀಯ ಸಂಸ್ಕೃತಿಯ ಪರಿಮಳ ನಾಶವಾಗಿ ಈ ಮುಸ್ಲಿಂ ಬಹುಸಂಖ್ಯಾತರ ರಾಜ್ಯ, ರಾಷ್ಟ್ರೀಯತೆಯ ಅತಿಗಳಿಗೆ ಸಿಕ್ಕಿ ಕೋಮುವಾದಕ್ಕೆ ಬಲಿಯಾಗಿದೆ. ಇದರಿಂದಾಗಿ, ಭಾರತದ ಬಹು ಸಂಪ್ರದಾಯಗಳ ಸಂಸ್ಕೃತಿಗೆ ಹತ್ತಿರವಿದ್ದ ಕಾರಣದಿಂದಾಗಿ ಭಾರತದಲ್ಲಿ ಸಹಜವಾಗಿ ಒಂದಾಗಬೇಕಿದ್ದ ಈ ರಾಜ್ಯ, ಈಗ ತನ್ನ ಮುಕ್ತಿಗಾಗಿ ಪಾಕಿಸ್ತಾನದ ಕಡೆ ನೋಡುವಂತಾಗಿದೆ.” ಈ ವಾಕ್ಯಗಳನ್ನು ಬರೆಯುವುದಕ್ಕೆ ಜಾತ್ಯತೀತರೆನ್ನಿಸಿಕೊಳ್ಳುವ ಹಂಬಲ ಬಿಟ್ಟು ಬೇರೆ ಏನೂ ನನಗೆ ಕಾಣುತ್ತಿಲ್ಲ. ನಿಮ್ಮ ಪ್ರಕಾರ, ಕಾಶ್ಮೀರದ ಇವತ್ತಿನ ಸಮಸ್ಯೆಗೆ ಕೇಂದ್ರ ಸರ್ಕಾರದ ನೀತಿಯೇ ಕಾರಣವೇ ಹೊರತು, ಸ್ಥಳೀಯ ಬಹುಸಂಖ್ಯಾತ ಮುಸ್ಲಿಂ ಕಾಶ್ಮೀರಿಗಳ ಕೊಡುಗೆ ಏನೇನೂ ಇಲ್ಲ. ಇದನ್ನು ಒಪ್ಪಲು ಸಾಧ್ಯವೆ? ದೇಶ ಸ್ವಾತಂತ್ರವಾದಾಗಿನಿಂದ ಇಂದಿನವರೆಗೆ, ದೇಶದ ಮುಖ್ಯವಾಹಿನಿಯ ಚಟುವಟಿಕೆಗಳಲ್ಲಿ ಈ ಮುಸ್ಲಿಂ ಬಹುಸಂಖ್ಯಾತ ಕಾಶ್ಮೀರಿಗಳು ಎಷ್ಟರ ಮಟ್ಟಿಗೆ ಪಾಲ್ಗೊಂಡಿದ್ದಾರೆ? ಈ ದೇಶವನ್ನು ತಮ್ಮದು ಎಂಬ ಭಾವನೆಯಲ್ಲಿ ಯಾವತ್ತು ನೋಡಿದ್ದಾರೆ? ನೀವೇ ಹೇಳುವಂತೆ ಜಮ್ಮು ಕಾಶ್ಮೀರದಲ್ಲಿ ಹಿಂದು, ಮುಸ್ಲಿಂ ಮತ್ತು ಬೌದ್ಧ ಧರ್ಮೀಯರು ಬಹುಸಂಖ್ಯಾತರು. ಆದರೆ, ಇವತ್ತು ಮುಸ್ಲಿಂರ ಪ್ರಾಬಲ್ಯ ಬಿಟ್ಟರೆ ಎಷ್ಟರ ಮಟ್ಟಿಗೆ ಇತರ ಧರ್ಮೀಯರು ನೀತಿ ನಿರ್ಣಯದ ಶಕ್ತಿ ಹೊಂದಿದ್ದಾರೆ?

ಇಷ್ಟೇ ಅಲ್ಲ, ಶ್ರೀನಗರ ಹೆದ್ದಾರಿ ಬಂದ್‌ನಿಂದಾಗಿ ವ್ಯಾಪಾರ ಕಳೆದುಕೊಂಡಿರುವ ಕಾಶ್ಮೀರಿಗಳು ಅನಿವಾರ್ಯವಾಗಿ ತಮ್ಮ ಸರಕನ್ನು ಮಾರಲು ಪಾಕ್‌ ಆಕ್ರಮಿತ ಕಾಶ್ಮೀರದ ಕಡೆ ಹೊರಳಿದ್ದಾರೆ ಎಂದು ಸಹಾನುಭೂತಿ ವ್ಯಕ್ತಪಡಿಸಿದ್ದೀರಿ (ಹಾಗಾಗಿಯೇ, ಈಗ ಜಮ್ಮು ಕಡೆ ವಾಹನ ಸಂಚಾರ ಸ್ತಬ್ಧಗೊಂಡಿರುವ ಹಿನ್ನೆಲೆಯಲ್ಲಿ ಕಾಶ್ಮೀರಿ ವ್ಯಾಪಾರಿಗಳು ತಮ್ಮ ಸರಕಿನ ಉಳಿವಿಗಾಗಿ ಅದನ್ನು ಈ 'ಆಝಾದ್ ಕಾಶ್ಮೀರ'ದೆಡೆಗೆ ತಿರುಗಿಸದೆ ವಿಧಿಯಿಲ್ಲವೆಂದು ಹೇಳುತ್ತಿದ್ದಾರೆ. ಆದರೆ ಇದನ್ನು ರಾಷ್ಟ್ರ ವಿರೋಧಿ ಕ್ರಮ ಎಂದು ಕರೆದಿರುವ ಜಮ್ಮು ಸಂಘರ್ಷ ಸಮಿತಿಗೆ, ತಾನು ನಿರಂತರ ಬಂದ್ ಹೆಸರಿನಲ್ಲಿ ರಸ್ತೆ ತಡೆ ನಡೆಸುತ್ತಾ ಕಾಶ್ಮೀರಕ್ಕೆ ಆರ್ಥಿಕ ದಿಗ್ಬಂಧನ ಹೇರಿರುವುದು ಕೂಡಾ ರಾಷ್ಟ್ರ ವಿರೋಧಿ ಕ್ರಮ....) ಇದು ಯಾವ ಜಾತ್ಯತೀತ ನಿಲುವು ಸ್ವಾಮಿ?

ಲೇಖನ ಉದ್ದವಾದೀತೆಂಬ ಅಳುಕಿನಿಂದ, ಅಮರನಾಥ ಕುರಿತ ಸಂಗತಿಗಳನ್ನು ಈ ಲೇಖನದ ಎರಡನೇ ಭಾಗದಲ್ಲಿ ಬರೆಯುತ್ತೇನೆ. ಮುಸ್ಲಿಂರನ್ನು ಓಲೈಸುವುದೇ ಜಾತ್ಯತೀತ ಧೋರಣೆ ಎಂದು ನಿಮ್ಮಂಥವರು ನಂಬಿಕೊಂಡಿದ್ದೀರಿ. ಅದಕ್ಕೆ ಪುರಾವೆ ಒದಗಿಸಲು, ಸತ್ಯ ಸಂಗತಿಗಳನ್ನು ಆಯ್ದು ತಿರುಚಿ ಪ್ರಕಟಿಸುತ್ತೀರಿ. ಪ್ರತ್ಯೇಕತಾವಾದ ಹುಟ್ಟಿದ್ದೇ ಕೇಂದ್ರ ಸರ್ಕಾರದ ನೀತಿಯಿಂದ ಎನ್ನುತ್ತೀರಿ. ಆದರೆ, ಕೇಂದ್ರದ ನೀತಿ ಎಲ್ಲ ರಾಜ್ಯಗಳ ಮಟ್ಟಿಗೂ ಒಂದೇ ಇದೆ ಎಂಬುದನ್ನೇಕೆ ಮರೆಯುತ್ತೀರಿ? ರಾಷ್ಟ್ರದ ಮುಖ್ಯವಾಹಿನಿಯನ್ನು ಮೊದಲಿನಿಂದಲೂ ದ್ವೇಷಿಸುತ್ತ ಬಂದಿರುವ ಮುಸ್ಲಿಂ ಧರ್ಮಾಂಧರ ಪರ ನಿಲ್ಲುವುದು ನಿಮ್ಮಂಥ ಕೆಲ ಕೋಮುವಾದಿ ’ಜಾತ್ಯತೀತ’ರ ನಿಲುವಾಗಿದೆ. ಸರಿಯಾಗಿ ಹೇಳಬೇಕೆಂದರೆ, ಚಟವಾಗಿದೆ. ಹಾಗೆ ಮಾಡಿದರೆ ಮಾತ್ರ ನಿಮ್ಮಂಥವರಿಗೆ ಪ್ರತ್ಯೇಕ ಮನ್ನಣೆ ಸಿಗುತ್ತದೆ.

ಇದನ್ನೆಲ್ಲ ಏಕೆ ಹೇಳಿದೆನೆಂದರೆ, ಈ ಲೇಖನ ಬರೆಯುವ ಸಮಯದಲ್ಲಿ ಅಹ್ಮದಾಬಾದ್‌ನ ಇತ್ತೀಚಿನ ಬಾಂಬ್‌ ಸ್ಫೋಟಗಳ ಹಿಂದೆ ಸಿಮಿ ಕೈವಾಡ ಇದೆ ಎಂಬುದು ಪ್ರಾಥಮಿಕ ತನಿಖೆಯಿಂದ ಸಾಬೀತಾಗಿದೆ. ಅದಕ್ಕೆ ಪುರಾವೆಯಾಗಿ ಕೆಲವು ವ್ಯಕ್ತಿಗಳನ್ನು ಗುಜರಾತ್‌ ಪೊಲೀಸರು ಬಂಧಿಸಿದ್ದೂ ಆಗಿದೆ. ಇದಕ್ಕೂ ಸಾಕಷ್ಟು ಮುಂಚೆಯೇ ಸಿಮಿ ಕೈವಾಡ ಈ ಸ್ಫೋಟಗಳ ಹಿಂದಿತ್ತು ಎಂಬುದನ್ನು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಬಹಿರಂಗವಾಗಿ ಹೇಳಿದ್ದವು. ಹೀಗಿದ್ದರೂ ಕೋಮು ವಿರೋಧಿ ವೇದಿಕೆಯವರು, ನಿಮ್ಮಂಥ ಪ್ರಜ್ಞಾವಂತರು ಸ್ಫೊಟದ ಹಿಂದಿನ ಧರ್ಮಾಂಧರನ್ನು, ಅವರ ಉದ್ದೇಶಗಳನ್ನು, ಅವರು ಹಿಡಿದ ನೀಚ ಮಾರ್ಗವನ್ನು ಖಂಡಿಸಲಿಲ್ಲ. ಬಾಬಾ ಬುಡನ್‌ಗಿರಿ ವಿಷಯಕ್ಕೆ ಸಂಬಂಧಿಸಿದಂತೆ ನೀಡಿದ ಹೇಳಿಕೆಗಳು, ನಡೆದ ಮಾರ್ಗ ಹಾಗೂ ನಾಟಕೀಯತೆ ತೋರುವ ಚಟುವಟಿಕೆಗಳು ಇಂತಹ ವಿಷಯಗಳಲ್ಲಿ ಯಾವತ್ತೂ ವ್ಯಕ್ತವಾಗಿಲ್ಲ.

ಹೀಗಾಗಿ, ನಿಮ್ಮಂಥವರು ಕೋಮುವಾದ, ಧರ್ಮಾಂಧತೆ ಎಂದು ಬರೆದಾಗೆಲ್ಲ, ನೀವು ಕೂಡಾ ಕಣ್ಣಿಗೆ ಧರ್ಮಾಂಧತೆಯ ಕನ್ನಡಕ ಹಾಕಿಕೊಂಡೇ ಬರೆಯುತ್ತೀರಿ ಎಂದು ಬಲವಾಗಿ ಅನ್ನಿಸತೊಡಗುತ್ತದೆ. ಇಲ್ಲದಿದ್ದರೆ, ಕೆಟ್ಟದ್ದನ್ನು ಯಾರು ಮಾಡಿದರೇನು ಎಂದು ನೇರವಾಗಿ ಅವರ ದೋಷಗಳನ್ನೂ ಟೀಕಿಸುತ್ತಿದ್ದಿರಿ. ಖಂಡಿಸುತ್ತಿದ್ದಿರಿ. ಅಂಥದ್ದು ಆಗಿಲ್ಲ ಎಂಬ ಕಾರಣಕ್ಕೆ ನಿಮ್ಮ ಈ ಲೇಖನ, ನಿಮ್ಮಂಥವರು ನೀಡುವ ಹೇಳಿಕೆ, ಬರೆದ ಲೇಖನಗಳು, ಮಾಡಿದ ಚಳವಳಿಗಳು ಹಾಸ್ಯಾಸ್ಪದವಾಗಿ ಕಾಣುತ್ತವೆ. ಎಲ್ಲೋ ವಿದೇಶದಲ್ಲಿ ವ್ಯಂಗ್ಯಚಿತ್ರವೊಂದು ಪ್ರವಾದಿಯನ್ನು ಕುರಿತಾಗಿತ್ತು ಎಂಬ ವಿಷಯಕ್ಕೆ ಭಾಷೆ, ವಿಷಯ, ಚಿತ್ರ ಗೊತ್ತಿರದ ಮುಸ್ಲಿಮರು ಪ್ರತಿಭಟನೆ ನಡೆಸುವುದನ್ನು ನೋಡಿದರೆ ಯಾವ ಭಾವನೆ ಉಂಟಾಗುತ್ತದೋ, ಅಂಥದೇ ಭಾವನೆ ನಿಮ್ಮಂಥವರು ಅದನ್ನು ಬೆಂಬಲಿಸಿ ಬರೆದಾಗ, ಹೇಳಿಕೆ ನೀಡಿದಾಗ, ಹಾಗೂ ಹಿಂದು ದೇವತೆಗಳ ಅವಹೇಳನ ಬಹಿರಂಗವಾದಾಗಲೂ ನೋಡಿಕೊಂಡು ಸುಮ್ಮನಿದ್ದಾಗ ಆಗುತ್ತದೆ.

ತಪ್ಪು ಯಾರೇ ಮಾಡಿರಲಿ, ಅವರ ಜಾತಿ, ಹಿನ್ನೆಲೆ ನೋಡದೇ ಅದನ್ನು ತಪ್ಪು ಎಂದು ಸರಳವಾಗಿ ಹೇಳಲು ನಿಮ್ಮಂಥವರಿಗೆ ಏಕೆ ಸಾಧ್ಯವಾಗುವುದಿಲ್ಲ? ಏಕೆ ಈ ದ್ವಂದ್ವ?

- ಚಾಮರಾಜ ಸವಡಿ

ಮಧ್ಯಮದಲ್ಲೇ ಉಳಿದ ಮಾಧ್ಯಮ

13 Aug 2008

3 ಪ್ರತಿಕ್ರಿಯೆ
(ಶಶಿಕುಮಾರ್‌ ಅವರು ಸಂಪದದಲ್ಲಿ ಬರೆದಿದ್ದ ಲೇಖನಕ್ಕೆ ಪ್ರತಿಕ್ರಿಯೆ/ಪೂರಕವಾಗಿ ಇದನ್ನು ಬರೆಯುತ್ತಿದ್ದೇನೆ. ಮೂಲ ಲೇಖನವನ್ನು http://sampada.net/article/10660 ದಲ್ಲಿ ನೋಡಬಹುದು )

ಶಶಿಕುಮಾರ್‌ ಅವರು ’ಸುದ್ದಿಸೂಳೆಯ ಬೆನ್ನತ್ತಿ ಹೊರಟಿರುವ ಮಾಧ್ಯಮಗಳು’ (ಭಾಗ-೧)ರಲ್ಲಿ ಸಾಕಷ್ಟು ಮುಖ್ಯ ವಿಷಯಗಳನ್ನು ಪ್ರಸ್ತಾಪಿಸಿದ್ದಾರೆ. ಮಾಧ್ಯಮ ಹೇಗೆ ಮಧ್ಯಮ ಹಂತದಲ್ಲೇ ಉಳಿದುಬಿಟ್ಟಿದೆ ಎಂಬುದನ್ನು ವಿವರವಾಗಿಯೇ ಬರೆದಿದ್ದಾರೆ. ಅವರು ಬರೆದಿದ್ದು ಒಂದೇ ಕಂತು ಹಾಗೂ ಇತರ ಕಂತುಗಳು ಇನ್ನೂ ಬರಬೇಕಿವೆ. ಆದರೆ, ಮೊದಲನೇ ಕಂತಿನಲ್ಲಿ ಪ್ರಸ್ತಾಪವಾಗಿರುವ ವಿಷಯಗಳು ಹಾಗೂ ಧೋರಣೆ ನೋಡಿದರೆ, ಇತರ ಕಂತುಗಳು ಬರಬಹುದಾದ ರೀತಿಯನ್ನು ತಕ್ಕಮಟ್ಟಿಗೆ ಊಹಿಸಬಹುದು.

ನಾನೂ ಪತ್ರಕರ್ತ. ವೃತ್ತಿಗಷ್ಟೇ ಅಲ್ಲ, ಪ್ರವೃತ್ತಿಗೂ ಅದನ್ನೇ ನೆಚ್ಚಿಕೊಂಡವನು. ಮಾಡುತ್ತಿದ್ದ ಸರ್ಕಾರಿ ಕೆಲಸ ಬಿಟ್ಟು ಪತ್ರಕರ್ತನಾದವನು. ಆದ್ದರಿಂದ, ವೃತ್ತಿಯ ಬಗ್ಗೆ ನನಗೆ ಸಾಕಷ್ಟು ಬದ್ಧತೆ, ಆಸಕ್ತಿ ಹಾಗೂ ಪ್ರೀತಿ ಇದೆ. ಹಾಗಂತ ಅದರ ದೋಷಗಳನ್ನು ಸಮರ್ಥಿಸುವುದಿಲ್ಲ. ಸಂಸ್ಥೆಯೊಂದರಲ್ಲಿ ಕೆಲಸ ಮಾಡುವಾಗ, ತೋರಲೇಬೇಕಾದ ಅನಿವಾರ್ಯತೆಗಳನ್ನು ಹೊರತುಪಡಿಸಿ, ಅದನ್ನು ಕಟುವಾಗಿ ಟೀಕಿಸುತ್ತಲೇ ಬಂದಿದ್ದೇನೆ. ಹೀಗಾಗಿ, ಶಶಿಕುಮಾರ ಹೇಳಲು ಹೊರಟಿರುವ ವಿಷಯಗಳ ಬಗ್ಗೆ ಅಧಿಕೃತವಾಗಿ ಪ್ರತಿಕ್ರಿಯೆ ಬರೆಯುವ ಅಧಿಕಾರ ನನಗಿದೆ. ಅದಕ್ಕಿಂತ ಹೆಚ್ಚಾಗಿ, ಬರೆಯಲೇಬೇಕಾದ ಜವಾಬ್ದಾರಿಯೂ ಇದೆ.

ಮಾಧ್ಯಮ ವರ್ತಿಸುತ್ತಿರುವ ರೀತಿಯ ಬಗ್ಗೆ ನನಗೆ ಸಾಕಷ್ಟು ಆಕ್ಷೇಪಣೆಗಳಿವೆ.

ಜನಾಕರ್ಷಣೆಯೇ ಮಾಧ್ಯಮದ ಮುಖ್ಯ ಗುರಿಯಾಗಿರುವುದು ಮೊದಲನೇ ಆಕ್ಷೇಪಣೆ. ಏನಾದರೂ ಸರಿ, ಓದುಗರನ್ನು/ವೀಕ್ಷಕರನ್ನು ಸೆಳೆಯಬೇಕು ಎಂಬುದು ಇವತ್ತಿನ ಮಾಧ್ಯಮದ ಅಲಿಖಿತ ನಿಯಮ. ಬದ್ಧತೆ, ಸಾಮಾಜಿಕ ಜವಾಬ್ದಾರಿ, ವಿವೇಚನೆ ಮುಂತಾದ ವಿಷಯಗಳು ಅಥವಾ ಭಾವನೆಗಳನ್ನು ನನ್ನ ವೃತ್ತಿ ಜೀವನದಲ್ಲಿ ನಾನು ಕಂಡಿದ್ದು ಅತಿ ವಿರಳ ಎಂದೇ ಹೇಳಬಹುದು. ಒಂದು ವಿಷಯವನ್ನು ಹೇಗೆ ಪ್ರಸ್ತುತಪಡಿಸಬೇಕು ಎಂಬುದಕ್ಕಿಂತ, ಹೇಗೆ ಪ್ರಸ್ತುತಪಡಿಸಿದರೆ ಇತರರಿಗಿಂತ ಹೆಚ್ಚು ವೀಕ್ಷಕರು/ಓದುಗರನ್ನು ಅದು ಆಕರ್ಷಿಸುತ್ತದೆ ಎಂಬುದರ ಬಗ್ಗೆ ತಲೆ ಕೆಡಿಸಿಕೊಳ್ಳುವವರೇ ಹೆಚ್ಚು. ಇದೊಂದು ರೋಗದಂತೆ ಮಾಧ್ಯಮ ಕಚೇರಿಗಳನ್ನು ಆವರಿಸಿದ್ದು, ಇಂಥದೇ ರೀತಿಯಲ್ಲಿ ಸುದ್ದಿ ಬರೆಯಿರಿ ಎಂದು ತಮ್ಮ ಆಧೀನ ಪತ್ರಕರ್ತ ಸಹೋದ್ಯೋಗಿಗಳ ಮೇಲೆ ಒತ್ತಡ ಹೇರಲಾಗುತ್ತದೆ. ಪತ್ರಿಕೋದ್ಯಮ ಕೇವಲ ವೃತ್ತಿಯಾಗುತ್ತಿರುವ ಈ ದಿನಗಳಲ್ಲಿ, ಹಿರಿಯ ಪತ್ರಕರ್ತರ ಆಜ್ಞೆಯನ್ನು ಉಲ್ಲಂಘಿಸಲು ಆದೀತೆ? ಒಂದು ವೇಳೆ ಉಲ್ಲಂಘಿಸಿದರೂ, ಅವನು ಬಹುಕಾಲ ಆ ಸಂಸ್ಥೆಯಲ್ಲಿ ಇರಲಾರ. ಇರುವಂತಹ ವಾತಾವರಣವೂ ಅವನ ಪಾಲಿಗೆ ಉಳಿಯುವುದಿಲ್ಲ. ಹಲವಾರು ಪತ್ರಿಕಾ ಕಚೇರಿಗಳಲ್ಲಿ, ಟಿವಿ ಮಾಧ್ಯಮದಲ್ಲಿ ನಾನು ಕೆಲಸ ಮಾಡುವಂತಾಗಲು ಇಂತಹ ಉಲ್ಲಂಘನೆಯೂ ಒಂದು ಮುಖ್ಯ ಕಾರಣ.

ಹೀಗಿರುವಾಗ, ಸುದ್ದಿಯ ಔಚಿತ್ಯ ಹಾಗೂ ಅದನ್ನು ಪ್ರಸ್ತುತಪಡಿಸುವ ಔಚಿತ್ಯದ ಬಗ್ಗೆ ಯಾರು ಯೋಚಿಸಬೇಕು? ಯಾರು ಅದನ್ನು ಸಮದೃಷ್ಟಿಯಿಂದ ಜಾರಿಗೊಳಿಸಬೇಕೋ, ಅವರೇ ರಂಜನೀಯವಾಗಿ ಅದನ್ನು ಬಿಂಬಿಸಲು ಮುಂದಾಗಿರುವಾಗ, ತೀರ ಕೆಳ ಹಂತದಲ್ಲಿರುವ ವಿವೇಚನೆಯುಳ್ಳ ಪತ್ರಕರ್ತ ತನ್ನ ಹೃದಯದ ಮಾತನ್ನು ನಡೆಸಲು ಹೇಗೆ ಸಾಧ್ಯವಾದೀತು?

ಮಾಧ್ಯಮ ಕಚೇರಿಯಲ್ಲಿ ನಿತ್ಯ ಹಲವಾರು ರೀತಿಯ ಸುದ್ದಿಗಳು ಬರುತ್ತಿರುತ್ತವೆ. ಎಲ್ಲವನ್ನೂ ಹೃದಯಕ್ಕೆ ಹತ್ತಿರವಾಗಿ ತೆಗೆದುಕೊಂಡು ವಿಶ್ಲೇಷಿಸುವುದು ಸಾಧ್ಯವಾಗದು. ಅಲ್ಲಿ ಭಾವನೆಗಿಂತ, ಕರ್ತವ್ಯಪ್ರಜ್ಞೆಯೇ ಹೆಚ್ಚು ಕೆಲಸ ಮಾಡಬೇಕಾಗುತ್ತದೆ. ನಿಜ. ಹಾಗಂತ, ನಿರ್ಭಾವುಕರಾಗಿ ಕೆಲಸ ಮಾಡಲಾಗದು. ವೃತ್ತಿ ಪ್ರಜ್ಞೆಯೊಂದಿಗೆ ವಿವೇಚನೆಯಿಂದಲೂ ಕೆಲಸ ಮಾಡುವುದು ನಿಜವಾದ ವೃತ್ತಿಪರತೆ. ಆದರೆ, ನಮ್ಮ ಮಾಧ್ಯಮ ಸಂಸ್ಥೆಗಳಲ್ಲಿ ಆ ಬದ್ಧತೆ ತೀರಾ ವಿರಳವಾಗುತ್ತಿದೆ.

ನಾನೂ ತುಂಬ ಮಾಧ್ಯಮ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದೇನೆ. ಇಂತಹ ಬದ್ಧತೆ ಇಟ್ಟುಕೊಂಡು ಕೆಲಸ ಮಾಡಿದವರನ್ನು ನೋಡಿದ್ದು ಬಲು ಅಪರೂಪ. ಸಮದೃಷ್ಟಿ ಇರುವ ಹಿರಿಯ ಪತ್ರಕರ್ತರು ಸಾಕಷ್ಟಿದ್ದರೂ, ಮ್ಯಾನೇಜ್‌ಮೆಂಟ್‌ನ ಒತ್ತಡಗಳಿಗೆ ಸಿಲುಕಿ ಅವರ ಸಮದೃಷ್ಟಿ ಹೊರಟುಹೋಗಿದೆ. ಅವರಿಂದ ಉತ್ತಮ ಪ್ರತಿಕ್ರಿಯೆ ನಿರೀಕ್ಷಿಸಲು ಆಗದು.

ಇದಕ್ಕೆ ಪರಿಹಾರ ಎಂದರೆ, ನಮ್ಮ ನಮ್ಮ ಮಿತಿಯಲ್ಲಿ ಸುದ್ದಿಯನ್ನು ರಂಜನೀಯ ಮಾಡಲು ಹೋಗದಿರುವುದು. ಅದನ್ನು ನಾನು ವೃತ್ತಿ ಜೀವನದುದ್ದಕ್ಕೂ ಪಾಲಿಸುತ್ತ ಬಂದಿದ್ದೇನೆ. ಅದಕ್ಕಾಗಿ ಕೆಲ ಬಾರಿ ನೌಕರಿಯನ್ನೂ ಕಳೆದುಕೊಂಡಿದ್ದೇನೆ. ಆದರೂ, ನನ್ನ ಮಿತಿಯಲ್ಲಿ ಅದನ್ನು ಪಾಲಿಸುವಲ್ಲಿ ಹಿಂದೇಟು ಹಾಕಿಲ್ಲ. ಬಹಳಷ್ಟು ಸಾರಿ, ಅಂತಹ ವಿವೇಚನೆಯುಳ್ಳ ಬರವಣಿಗೆಗಾಗಿ ಹಿರಿಯ ಸಹೋದ್ಯೋಗಿಗಳಿಂದ ಬೈಸಿಕೊಂಡಾಗಿದೆ. ಬರೆದಿದ್ದನ್ನು ರಂಜನೀಯವಾಗುವಂತೆ ತಿದ್ದಿಕೊಡುವ ಅನಿವಾರ್ಯತೆಗೂ ಸಿಲುಕಿದ್ದಾಗಿದೆ. ಆದರೂ, ಮೊದಲ ಬರವಣಿಗೆ ರಂಜನೀಯವಾಗದಂತೆ ನೋಡಿಕೊಳ್ಳುವ ಪ್ರಯತ್ನ ಮಾತ್ರ ಬಿಟ್ಟಿಲ್ಲ.

ಶಶಿಕುಮಾರ್‌ ಬರೆದಂತೆ, ಮಾಧ್ಯಮಗಳು ಸುದ್ದಿಸೂಳೆಯ ಬೆನ್ನತ್ತಿ ಹೊರಟಿವೆ. ಅದರಲ್ಲಿ ಎರಡು ಮಾತಿಲ್ಲ. ಆದರೆ, ಹಾಗೆ ಬೆನ್ನು ಹತ್ತುವ ಭರದಲ್ಲಿ ಅವು ಎಲ್ಲರನ್ನೂ ಸೂಳೆಯರು ಎಂಬಂತೆ ನೋಡುತ್ತಿರುವುದು ನಿಜಕ್ಕೂ ಅಪಾಯಕಾರಿ. ಕಂಡ ಪ್ರತಿಯೊಂದು ಹೆಣ್ಣೂ ಬೆಲೆವೆಣ್ಣು ಇರಬಹುದೆ ಎಂಬ ಅನುಮಾನ ಖಂಡಿತ ಆರೋಗ್ಯಕರವಲ್ಲ. ಇದು ಇಡೀ ಸಮಾಜವನ್ನು ಹಾದಿ ತಪ್ಪಿಸುವ ಬೆಳವಣಿಗೆ. ಇದಕ್ಕೆ ಬೇಕಾದಷ್ಟು ಕಾರಣಗಳಿರಬಹುದು, ಬೇಕಾದಷ್ಟು ಅನಿವಾರ್ಯತೆಗಳಿರಬಹುದು. ಆದರೆ, ಅವ್ಯಾವೂ ಈ ದೃಷ್ಟಿಕೋನಕ್ಕೆ ಸಮರ್ಥನೆಗಳಲ್ಲ ಹಾಗೂ ಅಂತಹ ವಿವರಣೆಯನ್ನು ಒಪ್ಪುವುದು ಸಾಧ್ಯವೂ ಇಲ್ಲ.

ದುರಂತವೆಂದರೆ, ರಂಜನೀಯ ಸುದ್ದಿಗಳನ್ನು ಕೊಡದ ಮಾಧ್ಯಮಗಳು ವೀಕ್ಷಕರನ್ನು ಸೆಳೆಯುವಲ್ಲಿ, ಓದುಗರನ್ನು ಆಕರ್ಷಿಸುವಲ್ಲಿ ಹಿಂದೆ ಬೀಳುತ್ತಿವೆ. ಮಾಧ್ಯಮ ಕೂಡಾ ಒಂದು ವೃತ್ತಿ. ಅಲ್ಲಿ ಹಣ ಹಾಕಿ ಹಣ ಗಳಿಸಬೇಕಿದೆ. ಹೀಗಾಗಿ, ಹೆಚ್ಚು ಲಾಭ ಬರುವ ಸರಕನ್ನು ಮಾರಲು ಮಾಧ್ಯಮ ಸಂಸ್ಥೆಗಳು ಯತ್ನಿಸುತ್ತಿವೆ. ಇದು ತಪ್ಪಬೇಕೆಂದರೆ, ಓದುಗರಲ್ಲಿ ಹೆಚ್ಚಿನ ಜಾಗೃತಿ ಮೂಡಬೇಕು. ಜೊತೆಜೊತೆಗೆ ಮಾಧ್ಯಮಗಳಿಗೂ ಒಂದು ಮಟ್ಟದ ಅಂಕುಶ ಬೇಕೇಬೇಕು. ಎರಡೂ ಕಡೆಯಿಂದ ಈ ಕ್ರಿಯೆ ನಡೆದಾಗ ಮಾತ್ರ, ಮಾಧ್ಯಮ ಕೊಂಚ ಜವಾಬ್ದಾರಿ ಕಲಿಯಲು ಸಾಧ್ಯ. ಇಲ್ಲದಿದ್ದರೆ, ಬಲುಬೇಗ ಇಡೀ ಸಮಾಜದ ಸ್ವಾಸ್ಥ್ಯ ಕೆಟ್ಟುಹೋಗುತ್ತದೆ.

ಒಂದಂತೂ ನಿಜ. ಸಮಾಜದಲ್ಲಿ ಏನು ನಡೆಯುತ್ತಿದೆಯೋ, ಮಾಧ್ಯಮದಲ್ಲಿ ಅದೇ ಬರುತ್ತದೆ. ಸಮಾಜಕ್ಕೆ ಹೊರತಾದ ಯಾವುದನ್ನೂ ಮಾಧ್ಯಮ ನೀಡಲು ಹೋಗುವುದಿಲ್ಲ. ಸಮಾಜದಲ್ಲಿರುವ ಅನಾಚಾರ, ಕೊಳಕು, ದುಷ್ಟತನದ ಚಿತ್ರಣವೇ ಮಾಧ್ಯಮದಲ್ಲಿಯೂ ಕಾಣುತ್ತಿದೆ. ಆದರೆ, ಕೇವಲ ಈ ಚಿತ್ರಣ ಮಾತ್ರ ಕಾಣುವಂತಾಗಿರುವುದು ಅಪಾಯಕಾರಿ. ಈ ಕೊಳಚೆಯ ಹೊರತಾಗಿಯೂ ಸಮಾಜದಲ್ಲಿ ಉತ್ತಮವಾದ ವಿಷಯಗಳು ಬೇಕಾದಷ್ಟಿವೆ. ಅವನ್ನು ಪ್ರಸ್ತುತಪಡಿಸುವ ಜವಾಬ್ದಾರಿಯನ್ನು ಮಾಧ್ಯಮ ಬೆಳೆಸಿಕೊಳ್ಳಬೇಕು. ಅದೇ ರೀತಿ, ಅಂತಹ ವಿಷಯಗಳನ್ನು ಆಸ್ವಾದಿಸುವ ಅಭಿರುಚಿಯನ್ನು ಓದುಗ/ವೀಕ್ಷಕರೂ ಬೆಳೆಸಿಕೊಳ್ಳಬೇಕಿದೆ.

ಇಷ್ಟೆಲ್ಲ ಹೇಳಿದ ನಂತರವೂ, ಮಾಧ್ಯಮ ಇವತ್ತು ತುಳಿಯುತ್ತಿರುವ ಹಾದಿ ಸರಿಯಲ್ಲ ಎಂದು ಮತ್ತೆ ಒಪ್ಪಿಕೊಳ್ಳುತ್ತೇನೆ. ಇದಕ್ಕೊಂದು ಅಂಕುಶ ಇರಲಿ. ಸ್ವಯಂ ಸಂಯಮ ಸಾಧ್ಯವಿಲ್ಲ ಎಂಬುದು ಈಗಾಗಲೇ ಸಾಬೀತಾಗಿರುವುದರಿಂದ, ಕಾನೂನು ಅಂಕುಶ ಸ್ವಲ್ಪಮಟ್ಟಿಗೆ ಕೆಲಸ ಮಾಡಬಲ್ಲುದು. ಆದರೆ, ಸರ್ಕಾರಿ ಅಂಕುಶ ಅಭಿವ್ಯಕ್ತಿ ಸ್ವಾತಂತ್ರವನ್ನು ಕಿತ್ತುಕೊಳ್ಳದಿರಲಿ. ಗಾಳಿಪಟದ ಸೂತ್ರದಂತೆ, ಪಟವನ್ನು ಹಿಡಿದಿಟ್ಟಿರಲಿ. ಆದರೆ, ಅದರ ಹಾರಾಟಕ್ಕೆ ಧಕ್ಕೆ ತಾರದಿರಲಿ.

ಬಹುಶಃ ಶಶಿಕುಮಾರ್‌ ಹಾಗೂ ಅವರಂಥ ಸಾವಿರಾರು ಮಿತ್ರರ, ಸಹೃದಯಿ ಓದುಗ/ವೀಕ್ಷಕರ ಬಯಕೆಯೂ ಇದೇ ಇರಬಹುದು.
- ಚಾಮರಾಜ ಸವಡಿ

ಮತ್ತದೇ ಖಾಲಿತನ, ಬೇಸರ

7 Aug 2008

6 ಪ್ರತಿಕ್ರಿಯೆ


ಹಾಡುಗಳ ಸಿಡಿ ಇಟ್ಟಲ್ಲೇ ಇದೆ. ಒಂದೇ ಕ್ಲಿಕ್ಕಿಗೆ ಕಿಶೋರ್‌ ಹಾಡತೊಡಗುತ್ತಾನೆ. ಆದರೆ ಬೆರಳುಗಳು ಚಲಿಸುವುದಿಲ್ಲ.

ಕೈ ಚಾಚಿದರೆ ಕಗ್ಗ ಸಿಗುತ್ತದೆ. ಡಿವಿಜಿ ವೇದಾಂತ ಹೇಳುತ್ತಾರೆ. ಡಾಮ್ನಿಕ್‌ ಲ್ಯಾಪಿಯರ್‌ ಚೆಂದಗೆ ಕತೆ ಹೇಳುತ್ತಾನೆ. ತರುಣ್‌ ತೇಜ್‌ಪಾಲ್‌ ಇದ್ದಕ್ಕಿದ್ದಂತೆ ಖಾಲಿಯಾದ ಸ್ಥಿತಿ ವರ್ಣಿಸುತ್ತಾನೆ. ಭೈರಪ್ಪನವರು ಸಾರ್ಥ ಹೊರಡುತ್ತಾರೆ. ತಾವು ಖಾಲಿಯಾಗಿದ್ದೇವೆ ಎಂಬುದನ್ನು ಅನಂತಮೂರ್ತಿ ಋಜುವಾತು ಮಾಡುತ್ತಾರೆ. ಆದರೂ ಕೈ ಚಾಚುವುದಿಲ್ಲ.

ಜೇಬಲ್ಲೇ ಇದೆ ಕೀಲಿ. ಬೆರಳೊತ್ತಿದರೆ ಸ್ಕೂಟಿ ಶುರುವಾಗುತ್ತದೆ. ಎಂಟೂ ದಿಕ್ಕುಗಳಿಗೆ ಯಾತ್ರೆ ಹೊರಡಬಲ್ಲುದು. ಆದರೂ ಕೈ ಸುಮ್ಮನಿದೆ.


ಎರಡೇ ಬಟನ್ನಿಗೆ ಮೆಚ್ಚಿನ ಚಾನೆಲ್‌ ಪ್ರತ್ಯಕ್ಷವಾಗುತ್ತದೆ. ಗಂಟೆ ಒಂಬತ್ತಾಯಿತೆ? ಪ್ರೈಮ್‌ ನ್ಯೂಸ್‌ ಬರುತ್ತಿರುತ್ತವೆ. ಏಕೋ ಸುದ್ದಿಗಳು ಬೇಸರ ಹುಟ್ಟಿಸುತ್ತವೆ. ರಿಮೋಟ್‌ ಅಲ್ಲೇ ಕೂತಿದೆ. ಆಜ್ಞೆಗಾಗಿ ಕಾಯುವ ಸಾಕುನಾಯಿಯಂತೆ.


ಯಾವಾಗ ಬೇಕಾದರೂ ಮೊಳಗಬಲ್ಲ ಮೊಬೈಲ್‌ ಪಕ್ಕಕ್ಕಿದೆ, ಥೇಟ್‌ ಸಿಡಿಯಲು ಸಿದ್ಧವಾದ ಬಾಂಬ್‌ನಂತೆ. ಬೆರಳೊತ್ತಿದರೆ ಇಷ್ಟಪಡುವ ಹಲವಾರು ಮಿತ್ರರು ಅಂಕೆಗಳಾಗಿ ಕಾಯುತ್ತಿದ್ದಾರೆ. ಆದರೂ ಕೈ ಅತ್ತ ಸರಿಯುತ್ತಿಲ್ಲ.


ಹಳೆಯ ಫೊಟೊಗಳ ಆಲ್ಬಮ್ಮುಗಳಿವೆ. ಅಚ್ಚಾದ ರಾಶಿರಾಶಿ ಪತ್ರಿಕೆಗಳಿವೆ. ಅಚ್ಚಿಗೆ ಕೊಡದೇ ಹಾಗೇ ಇಟ್ಟುಕೊಂಡ ನೂರಾರು ಬರಹಗಳಿವೆ. ಕಣ್ಣು ಮುಚ್ಚಿದರೆ ಮನಸ್ಸು ಮೂವತ್ತು ವರ್ಷ ಹಿಂದಕ್ಕೂ ಹೋಗಬಲ್ಲುದು. ಎಳೆಎಳೆಯನ್ನೂ ಹೆಕ್ಕಿ ನೆನಪಿನ ಚಾದರ ನೇಯಬಲ್ಲುದು. ಯಾವುದೋ ಎಳೆ ಹಿಡಿದೆಳೆದರೆ ಹಾಡಾಗುತ್ತದೆ, ಪ್ರಬಂಧವಾಗುತ್ತದೆ, ಕತೆಯಾಗುತ್ತದೆ, ಕೊಂಚ ಶ್ರದ್ಧೆಯಿಂದ ಕೂತರೆ ಕವಿತೆಯೂ ಆಗುತ್ತದೆ. ಆದರೂ ಮನಸ್ಸು ಸುಮ್ಮನಿದೆ.


ಕಿಟಕಿಯಾಚೆಯ ಬಾಳೆ ಗಿಡವೂ ಸುಮ್ಮನಿದೆ. ಜೊತೆಗಿದ್ದು ನೆಮ್ಮದಿ ನೀಡುತ್ತಿದ್ದ ಪೆನ್ನೂ ಸುಮ್ಮನಿದೆ. ರಿಮೋಟ್‌ ಸುಮ್ಮನಿದೆ. ಗಾಡಿಯ ಇಗ್ನಿಷನ್‌ ಕೀ ಸುಮ್ಮನಿದೆ. ಮೊಬೈಲ್‌ ಅನ್ನು ನಾನೇ ಸುಮ್ಮನಾಗಿಸಿದ್ದೇನೆ. ಏಕೋ ಗದ್ದಲ ಮಾಡುವ ಮಕ್ಕಳೂ ಮಲಗಿದ್ದಾರೆ. ಮತ್ತೇನು ವಿಶೇಷ ಎನ್ನುವ ಮಡದಿಯೂ ಮಲಗಿದ್ದಾಳೆ. ಏನೂ ವಿಶೇಷ ಇಲ್ಲವೆನ್ನುವಂತೆ ಬೆಂಗಳೂರಿನ ಗದ್ದಲದ ಟ್ರಾಫಿಕ್ಕೂ ಮೌನವಾಗಿದೆ.


ಬೀಟ್‌ ಪೋಲೀಸನ ಸಿಳ್ಳೆಯೂ ಕೇಳುತ್ತಿಲ್ಲ. ಸಂಗಾತಿಗಾಗಿ ಬೊಗಳುವ ನಾಯಿಯೂ ಸುಮ್ಮನಿದೆ. ಇಷ್ಟೊತ್ತಿಗೆ ಹೋಗಬೇಕಿದ್ದ ಕರೆಂಟ್‌ ಕೂಡ ಏತಕ್ಕೋ ಕಾಯುವಂತೆ ಬೆಳಗುತ್ತಲೇ ಇದೆ. ಮೋಡ ಚೆದುರಿ ಅಚ್ಚರಿಯಿಂದ ಚಂದ್ರ ಕೂಡ ಹೊರಬಂದಿದ್ದಾನೆ.


ಮರೆಯದೇ ಗೇಟ್‌ ಬೀಗ ಹಾಕಿದ್ದೇನೆ. ಗಾಡಿ ಲಾಕ್‌ ಮಾಡಿದ್ದೇನೆ. ಚಾರ್ಜಿಂಗ್‌ ದೀಪಗಳನ್ನು ಪ್ಲಗ್ಗಿಗೆ ಸಿಕ್ಕಿಸಿದ್ದೇನೆ. ಬಾಗಿಲುಗಳನ್ನು ಭದ್ರವಾಗಿ ಮುಚ್ಚಿದ್ದೇನೆ. ನಿನ್ನೆಯ ಕೆಲಸಗಳು ಕರಾರುವಾಕ್ಕಾಗಿ ಮುಗಿದಿವೆ. ನಾಳೆ ಏನು ಮಾಡಬೇಕೆಂಬುದು ಇಂದೇ ಸ್ಪಷ್ಟವಾಗಿದೆ.


ಇವತ್ತು ಮಾಡುವುದು ಏನು?


ಮತ್ತದೇ ಬೇಸರ, ಖಾಲಿತನ, ಏಕಾಂತ !

- ಚಾಮರಾಜ ಸವಡಿ

ಕಿಟಕಿಯಾಚೆಯ ಚಿತ್ರ

0 ಪ್ರತಿಕ್ರಿಯೆ
ಸಣ್ಣಗೇ ಮಳೆ ಸುರಿಯುತ್ತಿದೆ.

ಕಂಪ್ಯೂಟರ್‌ ಇಟ್ಟಿರುವ ಕೋಣೆಯ ಕಿಟಕಿಯಾಚೆ, ಮಳೆ ಪಟ ಪಟ ಎಂದು ಬಾಳೆ ಎಲೆ ಮೇಲೆ ಬೀಳುವುದು ಕಾಣುತ್ತಿದೆ. ಪಕ್ಕದ ಕಟ್ಟಡದಲ್ಲಿರುವ ಅವಿವಾಹಿತ ಹುಡುಗರು ಯಾವಾಗಲೋ ನೆಟ್ಟಿದ್ದು. ಎಲೆ ಅಗಲಿಸಿ ಬೆಳೆಯುತ್ತಿದೆ. ಅದರ ನೆರಳಡಿ ಪುಟ್ಟ ಬಾವಿ. ಸಿಮೆಂಟ್‌ ರಿಂಗ್‌ಗಳನ್ನು ಪೇರಿಸಿ ಕಟ್ಟಿರುವ ನಗರದ ಬಾವಿ. ಅದಕ್ಕೊಂದು ಜಾಲರಿಯುಳ್ಳ ಮುಚ್ಚಳ. ಆಗೀಗ ಮುಚ್ಚಳ ತೆರೆದು, ಹಗ್ಗ ಇಳಿಬಿಟ್ಟು ನೀರೆತ್ತುತ್ತಾರೆ ಹುಡುಗರು. ಅವರು ಬಳಸಿದ ನೀರನ್ನು ಹೀರಿಕೊಂಡು ಬೆಳೆಯುತ್ತಿದೆ ಬಾಳೆ.


ಮಳೆ ಬೀಳುತ್ತಿರುವುದರಿಂದ ಹುಡುಗರಾರೂ ಕಾಣುತ್ತಿಲ್ಲ. ಬಾವಿಯ ಜಾಲರಿ ಬಾಗಿಲು ಮುಚ್ಚಿಕೊಂಡಿದೆ. ಬಾಳೆ ಗಿಡದ ಹಿಂದೆ ಮಳೆಯ ಮಂಕಿನಲ್ಲಿ ನಿಂತ ಎರಡಂತಸ್ತಿನ ಮನೆಗಳು. ಅದರಾಚೆ ಕಪ್ಪುಗಟ್ಟಿರುವ ಮೋಡ. ಮಧ್ಯಾಹ್ನದವರೆಗೆ ಬಿಸಿಲು ಚೆನ್ನಾಗಿತ್ತು. ಇದ್ದಕ್ಕಿದ್ದಂತೆ ಮೋಡಗಳು ಧಾವಿಸಿ ಬಂದವು. ನೋಡನೋಡುತ್ತಲೇ ಸಣ್ಣಗೆ ಶುರುವಾದ ಮಳೆ ಬಿಟ್ಟೇ ಇಲ್ಲ.

ಈಗ ಕಿಟಕಿಯಾಚೆಯ ಚಿತ್ರಣ ಪೂರ್ತಿ ಬದಲಾಗಿದೆ. ಬಿಸಿಲಿನಲ್ಲಿ ಮಂಕಾದಂತೆ ಕಾಣುತ್ತಿದ್ದ ಬಾಳೆಯ ಎಲೆಗಳಲ್ಲಿ ಈಗ ಹಸಿರಿನ ಹೊಸ ರಂಗು. ಎಲೆಗಳ ಮೇಲೆ ಮಳೆಯ ಮುತ್ತಿನ ಹನಿಗಳು. ತುಸು ಗಾಳಿ ಬೀಸಿದರೂ ಮುತ್ತುಗಳು ಉದುರುತ್ತವೆ. ಹೊಸ ಮುತ್ತುಗಳು ಬಂದು ಸೇರುತ್ತವೆ. ಬಾವಿಯ ಜಾಲರಿ ಮೇಲೆ ಬೀಳುವ ಹನಿಗಳು ಒಡೆದು ಅಲ್ಲೊಂದು ವಿಸ್ಮಯ ಲೋಕ ಸೃಷ್ಟಿಯಾಗಿದೆ.

ಕ್ರಮೇಣ ಮೋಡಗಳು ಚೆದುರಿದವು. ಬೆಳಕು ತೂರಿ ಬಂತು. ಬಾಳೆಗಿಡ ಮೊದಲಿಗಿಂತ ಹೆಚ್ಚು ಸ್ಪಷ್ಟವಾಗಿ ನಳನಳಿಸಿತು. ಅದರ ಎಲೆಗಳಲ್ಲೀಗ ಸಮಾಗಮದ ನಂತರದ ಹೆಣ್ಣಿನ ಸೊಗಸು. ಮಳೆಯಲ್ಲಿ ಮಿಂದು ಬಾವಿಯ ಜಾಲರಿ ಸ್ವಚ್ಛವಾಗಿದೆ. ಕಿಟಕಿಯಾಚೆಗಿನ ಚಿತ್ರ ಈಗ ಮೊದಲಿಗಿಂತ ಸ್ಪಷ್ಟ, ಸ್ಫುಟ.

ಇಡೀ ಕಿಟಕಿಯ ಚೌಕಟ್ಟೇ ಚಿತ್ರವೊಂದರ ಚೌಕಟ್ಟಿನಂತಾಗಿ, ಆಚೆಯ ದೃಶ್ಯಗಳು ಚಿತ್ರವಾಗಿವೆ. ಯಾರು ಬಿಡಿಸಿದರು ಇದನ್ನು? ಮಳೆಯೆ, ಮೋಡವೆ, ನೆಟ್ಟ ಬಾಳೆ ಗಿಡವೇ, ತಿಳಿ ಸಂಜೆಯ ಮುಂಚಿನ ರಂಗೇ? ಎಲ್ಲ ಕೈ ಜೋಡಿಸಿ ಬಿಡಿಸಿದ ಚಿತ್ರಕ್ಕೆ ಕೋಣೆಯ ಕಿಟಕಿಯ ಚೌಕಟ್ಟು. ಅದರ ಹಿಂದೆ ನಾನು. ಹಣ ನೀಡದ, ಹಣ ನೀಡಿದರೂ ಸಿಗದ ಅಪೂರ್ವ ಚಿತ್ರವೊಂದನ್ನು ನೋಡುತ್ತ ನೋಡುತ್ತ ಅದರಲ್ಲೇ ಮುಳುಗಿಹೋದೆ.

ಥ್ಯಾಂಕ್ಸ್‌ ಬದುಕೇ. ಪಕ್ಕದ ಮನೆಯಲ್ಲಿ ಒಂದಿಷ್ಟು ಜಾಗ ಉಳಿಸಿದ್ದಕ್ಕೆ, ಅಲ್ಲಿ ನೆಲೆಸಲು ಬಂದ ಹುಡುಗರಲ್ಲಿ ವೃಕ್ಷಪ್ರೀತಿ ಹುಟ್ಟಿಸಿದ್ದಕ್ಕೆ, ಆವರಣದಲ್ಲೊಂದು ಬಾವಿ ತೋಡಿಸಿದ್ದಕ್ಕೆ, ಮಧ್ಯಾಹ್ನ ಬಂದ ಅಕಾಲಿಕ ಮಳೆಗೆ, ನೆರಳು-ಬೆಳಕಿನಾಟ ಆಡಿದ ಸೂರ್ಯನಿಗೆ, ನಾನಿರುವ ಮನೆಯ ಕಿಟಕಿಗೆ,

ಹಾಗೂ ಅದರ ಮೂಲಕ ಅಪೂರ್ವ ಚಿತ್ರಣ ನೋಡಬಲ್ಲ ಮನಃಸ್ಥಿತಿಯನ್ನು ನನ್ನಲ್ಲಿ ಉಳಿಸಿದ್ದಕ್ಕೆ.

- ಚಾಮರಾಜ ಸವಡಿ

ಮುಚ್ಚಳವಿಲ್ಲದ ಪೆನ್ನು

2 Aug 2008

2 ಪ್ರತಿಕ್ರಿಯೆ
ತುಂಬ ದಿನವಾಗಿತ್ತು ಪೆನ್ನು ಹೊರ ತೆಗೆದು ಬರೆಯಲು ಕೂತು.

ಹಳೆಯ ಪೆನ್ನು. ಅಂದರೆ, ಬಳಸದೇ ತುಂಬ ದಿನವಾಗಿತ್ತು. ಮಸಿ ಒಣಗಿದೆಯೇ ಎಂಬ ಅನುಮಾನ ಕಾಡಿದರೂ, ಪಕ್ಕದಲ್ಲೇ ಇದ್ದ ಪತ್ರಿಕೆಯೊಂದರ ಜಾಹೀರಾತಿನ ಮೇಲೆ ಗೀಚಿ ನೋಡಿದೆ. ಮೊದಲೊಂದಿಷ್ಟು ಉದ್ದ ಮಸಿ ಕಾರದೇ ಎಳೆದುಕೊಂಡು ಹೋದ ಪೆನ್ನು, ನಂತರ ಚೆಂದನೆಯ ಡೊಂಕು ಗೆರೆ ಕೊರೆಯಿತು. ಪರವಾಗಿಲ್ಲ, ಬದುಕಿದೆ ಎಂದು ಪೆನ್ನನ್ನು ಕೈಲಿ ಹಿಡಿದುಕೊಂಡು ಬರೆಯಲೆಂದೇ ತಂದುಕೊಂಡಿದ್ದ ಎ-೪ ಗಾತ್ರದ ಸುರುಳಿ ಕಟ್ಟಿನ ಹಾಳೆ ಪುಸ್ತಕ ತೆರೆದೆ.

ಮನಸ್ಸು ಅರೆಕ್ಷಣ ಎಲ್ಲೋ ಸಿಕ್ಕಿ ಹಾಕಿಕೊಂಡಿತು.

ತುಂಬ ದಿನಗಳ ಹಿಂದೆ, ಅಂದರೆ, ಪತ್ರಿಕಾ ಕಚೇರಿಯಲ್ಲಿ ಕೈಬರಹದ ಬರವಣಿಗೆ ನಿಷೇಧಿಸುವುದಕ್ಕೆ ಮುಂಚೆ, ನಿತ್ಯ ಹೀಗೇ ಬರೆಯುತ್ತಿದ್ದೆ. ಆಗ ಪೆನ್ನೆತ್ತಿಕೊಂಡರೆ ವರದಿಗಳು ಸರಾಗವಾಗಿ ಹರಿಯುತ್ತಿದ್ದವು. ಬರೆದಿದ್ದನ್ನು ಓದಿ, ಒಂದಿಷ್ಟು ಕಾಗುಣಿತ ತಪ್ಪುಗಳನ್ನು ಅಲ್ಲೇ ತಿದ್ದಿ, ಫೋಟೊಗಳ ಹಿಂದೆ ವಿವರ ಹಾಗೂ ವರದಿ ಶೀರ್ಷಿಕೆ ಬರೆದು, ಕ್ಲಿಪ್‌ನಲ್ಲಿ ಬಂಧಿಸಿ, ಲಕೋಟೆಯಲ್ಲಿಟ್ಟು ಬಸ್‌ ಡ್ರೈವರ್‌ ಮೂಲಕ ಕಳಿಸುತ್ತಿದ್ದೆ. ಮರುದಿನ ಬೆಳಗಿನ ನಿದ್ದೆಗಣ್ಣಲ್ಲಿ ಬಾಗಿಲ ಮುಂದೆ ಬಿದ್ದ ಪತ್ರಿಕೆ ಎತ್ತಿಕೊಂಡಾಗ, ನಿನ್ನೆಯ ಕೈಬರಹ ವರದಿ ಅಚ್ಚುಕಟ್ಟಾಗಿ ಅಚ್ಚಾಗಿ ಬಂದಿರುತ್ತಿತ್ತು. ಓಹ್‌, ನಿದ್ದೆಗಣ್ಣಿನಲ್ಲಿಯೂ ಅಪಾರ ಸಂತಸ.

ಅದಾದ ನಂತರ, ಬದುಕು ಊರುಗಳನ್ನು ಸುತ್ತಿಸಿತು. ಹಲವಾರು ಪತ್ರಿಕಾ ಕಚೇರಿಗಳ ಮೆಟ್ಟಿಲೇರಿ ಇಳಿಸಿತು. ಆದರೆ, ಪೆನ್ನು ಯಾವತ್ತೂ ಜೇಬಿನಿಂದ ಕದಲಿರಲಿಲ್ಲ. ಇದೇ ಪೆನ್ನಿನ ಮೂಲಕ ಕೆಲಸಕ್ಕೆ ಅರ್ಜಿ ಬರೆದಿದ್ದೆ. ನೌಕರಿ ದಕ್ಕಿದ್ದಕ್ಕೆ ಧನ್ಯವಾದ ಬರೆದಿದ್ದೆ. ಮುಂದೆ ವರ್ಷಗಟ್ಟಲೇ ವರದಿ/ಲೇಖನಗಳನ್ನು ಬರೆದೆ. ರಾಜೀನಾಮೆಗಳನ್ನೂ ಬರೆದಿದ್ದೇನೆ. ಎಷ್ಟೊಂದು ಬರೆದರೂ ಪೆನ್ನು ಎಂದೂ ಬಸವಳಿಯಲಿಲ್ಲ.

ಆದರೆ, ಕಂಪ್ಯೂಟರ್‌ ಎಂಬ ಯಂತ್ರ ಬಂದ ಕೂಡಲೇ ಅದರ ಮಸಿಯೇ ಆರಿದಂತಾಯಿತು.

’ಮುಂದಿನ ತಿಂಗಳ ಒಂದನೇ ತಾರೀಖಿನಿಂದ, ಫ್ಯಾಕ್ಸ್‌ ಅಥವಾ ಕೊರಿಯರ್‌ ಮೂಲಕ ಕಳಿಸುವ ಕೈಬರಹದ ವರದಿಗಳನ್ನು ಅಚ್ಚು ಹಾಕುವುದಿಲ್ಲ. ಏನಿದ್ದರೂ ಕಂಪ್ಯೂಟರ್‌ನಲ್ಲೇ ಟೈಪ್‌ ಮಾಡಿ ಮೋಡೆಮ್‌ ಮೂಲಕ ಕಳಿಸಬೇಕು’ ಎಂಬ ಪತ್ರ ಸಂಪಾದಕರಿಂದ ಬಂದಾಗ, ನನಗಿಂತ ಪೆನ್ನಿಗೇ ಹೆಚ್ಚು ಬೇಸರವಾಗಿತ್ತು. ಮೊದಲ ಬಾರಿ ಕಂಪ್ಯೂಟರ್‌ ಮುಂದೆ ಕೂತು, ಕೀಲಿಮಣೆಗಳನ್ನು ತೊಡರುತ್ತ ಒತ್ತುವಾಗ, ಪೆನ್ನು ಅಪನಂಬಿಕೆಯಿಂದ ನೋಡಿತ್ತು.

ಮೊದಮೊದಲು ತುಂಬ ಬೇಸರವಾಗಿತ್ತು. ಆದರೆ, ದಿನಗಳು ಬಲುಬೇಗ ಬದಲಾದವು. ನೋಟ್ಸ್‌ ತೆಗೆದುಕೊಳ್ಳುವಾಗ ಹೊರತುಪಡಿಸಿ, ಇತರ ಸಮಯದಲ್ಲಿ ಜೇಬಿನಿಂದ ಇಳಿಯುವ ಅವಕಾಶ ಪೆನ್ನಿಗೆ ಬರಲೇ ಇಲ್ಲ. ಮೊದಮೊದಲು ಕಾಡಿದ್ದ ಹಳಹಳಿ ನಂತರ ರೂಢಿಯಾಯಿತು. ಕೀಬೋರ್ಡ್‌ ಸರಾಗವಾಯಿತು. ಮನಸ್ಸಿನಲ್ಲಿ ವಿಚಾರಗಳು ಮೂಡುವ ವೇಗದಲ್ಲೇ ಬೆರಳುಗಳೂ ಕೀಬೋರ್ಡ್‌ ಮೇಲೆ ಹರಿದಾಡುವುದು ರೂಢಿಯಾಗಿ, ಪೆನ್ನು ಕೇವಲ ಅಲಂಕಾರಿಕ ವಸ್ತುವಾಗಿಬಿಟ್ಟಿತು.

ಆದರೂ, ಅದರ ಸಂಗ ತೊರೆಯಲಿಲ್ಲ.

ಅದು ಜೇಬಿನಲ್ಲಿದ್ದರೆ ಎಂಥದೋ ನೆಮ್ಮದಿ. ತುಂಬ ಬೇಸರವಾದಾಗ, ಅದನ್ನು ಕೈಗೆ ತೆಗೆದುಕೊಂಡು, ಕ್ಯಾಪ್‌ ತೆರೆದು, ಬೆರಳುಗಳ ನಡುವೆ ತಿರುಗಿಸುತ್ತ ಕೂತರೆ ಎಂಥದೋ ಸಮಾಧಾನ. ವಿಚಾರಗಳು ತಾನೇ ತಾನಾಗಿ ಬರುತ್ತವೆ. ಹೊಸ ವಿಚಾರಗಳು ಮೂಡುತ್ತವೆ. ಬರೆಯಬೇಕೆಂದುಕೊಂಡಿದ್ದು ಕೈಬೆರಳಿನ ಮೂಲಕ ಇಳಿದು, ಇನ್ನೇನು ಪೆನ್ನಿನ ಮೂಲಕ ಮಸಿಯಾಗಿ ಹರಿದು ಅಕ್ಷರಗಳಾಗಿಬಿಡುತ್ತವೆ ಎನ್ನುವಂತೆ ಉಕ್ಕುತ್ತವೆ. ಆದರೆ, ಭಾವನೆ ಉಕ್ಕುತ್ತಲೇ ಪೆನ್ನು ಪಕ್ಕಕ್ಕಿಟ್ಟ ಕೈಗಳು ಕಂಪ್ಯೂಟರ್‌ ಕೀಬೋರ್ಡ್‌‌ನ ಮೇಲೆ ಹರಿದಾಡುತ್ತವೆ. ಪೆನ್ನು ಅಸಹಾಯಕತೆಯಿಂದ, ಅವಮಾನದಿಂದ ನೋಡುತ್ತಿರುವಂತೆ, ಚೆಂದನೆಯ ಅಕ್ಷರಗಳು ಮಾನಿಟರ್‌ ಮೇಲೆ ಮೂಡತೊಡಗುತ್ತವೆ. ಕ್ಯಾಪ್‌ ಇಲ್ಲದ ಬೋಳು ಪೆನ್ನನ್ನು ನಾನೂ ಮರೆತುಬಿಡುತ್ತೇನೆ.

ವರ್ಷಗಟ್ಟಲೇ ಇದು ನಡೆದುಕೊಂಡು ಬಂದಿತ್ತು.

ಇವತ್ತು ಏಕೋ ಮನಸ್ಸು ಖಾಲಿ ಖಾಲಿ. ವೀಕ್‌ ಆಫ್‌ ಇದ್ದುದರಿಂದ, ನಿತ್ಯದ ವೃತ್ತಿ ವಾತಾವರಣ ಇಲ್ಲದೇ ಬೇಸರವಾಗಿದೆಯೇನೋ ಅಂದುಕೊಂಡು ಸ್ವಲ್ಪ ಹೊತ್ತು ಸುಮ್ಮನೇ ಅದು ಇದು ಓದುತ್ತ ಕೂತೆ. ಆದರೂ ಸಮಾಧಾನವಾಗಲಿಲ್ಲ. ಕೀ ಬೋರ್ಡ್‌ ಪಕ್ಕಕ್ಕಿಟ್ಟ ಪೆನ್ನು ಕರೆದಂತಾಯಿತು. ಎತ್ತಿಕೋ ಎಂದಂತಾಯಿತು. ಎತ್ತಿಕೊಂಡೆ. ಮನಸ್ಸಿಗೆ ಹಾಯ್‌ ಅನ್ನಿಸಿತು. ಸ್ವಲ್ಪ ಹೊತ್ತು ಅದನ್ನೇ ತಿರುಗಿಸುತ್ತ ಕೂತೆ. ಭಾವನೆಗಳು ಉಕ್ಕಿದವು. ಭೋರ್ಗರೆದವು. ಪೆನ್ನನ್ನು ಪಕ್ಕಕ್ಕಿಟ್ಟು ಕಂಪ್ಯೂಟರ್‌ ಆನ್‌ ಮಾಡಿ ನೋಡುತ್ತೇನೆ:

ಪೆನ್‌ ಮುಖದಲ್ಲಿ ನೋವಿನ ಛಾಯೆ !

ಇಲ್ಲ ಮಿತ್ರ, ಇವತ್ತೇನಿದ್ದರೂ ನಿನ್ನ ಬಗ್ಗೆಯೇ ಬರೆಯುತ್ತೇನೆ ಎಂದುಕೊಂಡೆ. ಕೀ ಬೋರ್ಡ್‌ ಸಹಕರಿಸಿತು. ಬೆರಳುಗಳು ನಲಿದಾಡಿದವು. ಬರೆದಾದ ಮೇಲೆ, ತೃಪ್ತಿಯಿಂದ ಪೆನ್‌ ಕಡೆ ನೋಡಿದೆ.

ಅದರ ಮುಖದ ಮೇಲೂ ತೃಪ್ತಿಯ ಬೆಳಕು !

- ಚಾಮರಾಜ ಸವಡಿ