ರೆಂಬೆ ಕೊಂಬೆಗಳಿಲ್ಲದ ಮರಗಳು

29 Nov 2008

3 ಪ್ರತಿಕ್ರಿಯೆ

’ನಾನು ಇಂಥವರ ಶಿಷ್ಯ ಅಥವಾ ಶಿಷ್ಯೆ’ ಎಂಬ ಮಾತನ್ನು ಆಗಾಗ ಕೇಳುತ್ತಿರುತ್ತೇವೆ. ’ಗುರುವಿಗೆ ತಕ್ಕ ಶಿಷ್ಯ/ಶಿಷ್ಯೆ’ ಎಂಬ ಮಾತೂ ಉಂಟು.

ಪಿ. ಲಂಕೇಶ್ ಅಂತಹ ಹಲವಾರು ಜನರನ್ನು ಬೆಳೆಸಿದರು. ತಮ್ಮ ಮಕ್ಕಳಿಂದ ಬರೆಸದೇ ಈಗ ತಾನೆ ತಾರುಣ್ಯಕ್ಕೆ ಕಾಲಿಡುತ್ತಿದ್ದ ಹುಡುಗ-ಹುಡುಗಿಯರಿಂದ ಬರೆಸಿ ಪತ್ರಿಕೆ ಬೆಳೆಸಿದ್ದಷ್ಟೇ ಅಲ್ಲ, ಅವರನ್ನೂ ಬೆಳೆಸಿದರು. ಲಂಕೇಶರ ಕಾಲದಲ್ಲಿ ಪ್ರವರ್ಧಮಾನಕ್ಕೆ ಬಂದ ಹಲವಾರು ಉತ್ತಮ ಬರಹಗಾರರು ಅದಕ್ಕೆ ಸಾಕ್ಷಿ. ಇಂಥದೇ ಉದಾಹರಣೆಯನ್ನು ಪತ್ರಿಕೋದ್ಯಮವೊಂದೇ ಅಲ್ಲ, ಪ್ರತಿಯೊಂದು ಕ್ಷೇತ್ರದಲ್ಲಿಯೂ ನೋಡಬಹುದು. ಪುಟ್ಟಣ್ಣ ಕಣಗಾಲ್ ಹಲವಾರು ಕಲಾವಿದ/ಕಲಾವಿದೆಯರನ್ನು ರೂಪಿಸಿದರು.

ಸದ್ಯಕ್ಕೆ ಪತ್ರಿಕೋದ್ಯಮವನ್ನಷ್ಟೇ ನೋಡುವುದಾದರೆ, ಲಂಕೇಶರ ನಂತರ ಆ ಮಾದರಿಯನ್ನು ಅನುಸರಿಸಿ ಯಶಸ್ವಿಯಾದವರು ಅಗ್ನಿ ಶ್ರೀಧರ್. ಪತ್ರಿಕೋದ್ಯಮದಲ್ಲಿ ಏನೇನೂ ಅನುಭವವಿಲ್ಲದೇ ಇದ್ದರೂ, ಅಗ್ನಿ ಶ್ರೀಧರ್ ’ಅಗ್ನಿ’ ಪತ್ರಿಕೆ ಆರಂಭಿಸಿದರು. ಹಲವಾರು ಪತ್ರಕರ್ತರನ್ನು ಹುಟ್ಟುಹಾಕಿದರು. ತಾವೂ ಬೆಳೆದರು, ಹೊಸಬರನ್ನೂ ಬೆಳೆಸಿದರು.

ಆ ಕಾಲ ಮರೆಯಾಗಿ ಹೋಯಿತೆ ಎಂದು ಹಲವಾರು ಸಾರಿ ನನಗೆ ಅನ್ನಿಸಿದೆ.

ನನ್ನ ಚಿಕ್ಕ ಅನುಭವದ ಹಿನ್ನೆಲೆಯಲ್ಲಿ ನೋಡಿದರೂ, ಈ ವೃತ್ತಿಯಲ್ಲಿ ತುಂಬ ಜನ ಪ್ರತಿಭಾವಂತರು ಇರುವುದು ನನ್ನ ಗಮನಕ್ಕೆ ಬಂದಿದೆ. ಅವರಲ್ಲಿ ಆದರ್ಶಗಳಿವೆ, ಕನಸುಗಳಿವೆ, ಪ್ರತಿಭೆಯಿದೆ. ಒಂದಿಷ್ಟು ಸಾಣೆ ಹಿಡಿಯುವ, ಪೋಷಿಸುವ ಕೆಲಸ ನಡೆದರೂ ಸೊಗಸಾಗಿ ಬರೆಯಬಲ್ಲವರು ತುಂಬ ಜನ ಸಿಗುತ್ತಾರೆ. ಅವರಿಗೆ ಒಂದಿಷ್ಟು ಮಾರ್ಗದರ್ಶನ ಬೇಕಿದೆ. ಅವರಿಗೆ ಕೈಹಿಡಿದು ಬರೆಸಬೇಕಿಲ್ಲ. ಅವರನ್ನು ಅವರ ಪಾಡಿಗೆ ಬಿಟ್ಟರೂ ಸಾಕು, ತುಂಬ ಚೆನ್ನಾಗಿ ಬರೆಯುತ್ತಾರೆ. ಹೊಸ ಹೊಳಹುಗಳನ್ನು ಹೆಕ್ಕಿ ತರುತ್ತಾರೆ. ಅಂಥವರಿಗೆ ಒಂಚೂರು ಅವಕಾಶ, ಪ್ರೋತ್ಸಾಹ ನೀಡಿದರೂ ಸಾಕು, ಇವತ್ತು ಪತ್ರಿಕೋದ್ಯಮದಲ್ಲಿ ಕಾಣುತ್ತಿರುವ ಹಲವಾರು ಸಮಸ್ಯೆಗಳು ತಮಗೆ ತಾವೆ ನಿವಾರಣೆಯಾಗುತ್ತವೆ.

ಆದರೆ, ಅಂತಹ ಕೆಲಸ ನಡೆಯುತ್ತಿಲ್ಲ.

ಅವಕಾಶ ಕೊಡಬಹುದಾದ ಹಂತದಲ್ಲಿರುವವರಿಗೆ ಇಂತಹ ಯುವ ಪ್ರತಿಭೆಗಳನ್ನು ಬೆಳೆಸಲು ಏನೋ ಅಳುಕು. ಅವರನ್ನು ಪ್ರೋತ್ಸಾಹಿಸಿದರೆ, ತಮಗಿಂತ ಮೇಲೆ ಬಂದುಬಿಡುತ್ತಾರೇನೋ ಎಂಬ ಹಿಂಜರಿಕೆ. ಹಾಗಾಗಬಾರದು ಎಂಬ ಅಸೂಯೆ. ನಾನು ಕಷ್ಟಪಟ್ಟು ಮೇಲೆ ಬಂದಿದ್ದೇನೆ. ಅವರೂ ಹಾಗೇ ಮಾಡಲಿ ಎಂಬ ದುರ್ಬುದ್ಧಿ. ಅಷ್ಟೇ ಆದರೆ, ಪರವಾಗಿಲ್ಲ. ಆದರೆ, ಬೆಳೆಯುವ ಕುಡಿಯನ್ನು ಮೊಳಕೆಯಲ್ಲೇ ಚಿವುಟುವ ನೀಚತನವೂ ಸೇರಿಕೊಂಡಿರುತ್ತದೆ. ಹೀಗಾಗಿ, ಎಷ್ಟೋ ಪ್ರತಿಭಾವಂತರು ತೆರೆಮರೆಯಲ್ಲೇ ಇದ್ದಾರೆ. ಅವರಿಗೆ ಅವಕಾಶಗಳಿಲ್ಲ.

ಹಾಗಂತ ಅವರು ಪೂರ್ತಿ ನಾಶವಾಗಿಬಿಡುತ್ತಾರೆ ಎಂದಲ್ಲ. ತಮ್ಮ ಸರದಿಗಾಗಿ ಅವರು ತುಂಬ ಕಾಯಬೇಕಾಗುತ್ತದೆ. ಸಾಕಷ್ಟು ಹೋರಾಟ ನಡೆಸಬೇಕಾಗುತ್ತದೆ. ಸಂಸ್ಥೆಗಳ ಮೇಲೆ ಸಂಸ್ಥೆಗಳನ್ನು ಬದಲಿಸಬೇಕಾಗುತ್ತದೆ. ಹಲವಾರು ರೀತಿಯ ಪ್ರಯೋಗಗಳನ್ನು ನಡೆಸಿ, ತಮ್ಮ ಪ್ರತಿಭೆ ಮುಕ್ಕಾಗದಂತೆ ಕಾಪಾಡಿಕೊಳ್ಳಬೇಕಾಗುತ್ತದೆ. ಆದರೆ, ಇಷ್ಟೆಲ್ಲ ಬೆಳವಣಿಗೆಗಳ ಮಧ್ಯೆ ಎಷ್ಟೋ ಜನ ನಿರಾಶರಾಗುತ್ತಾರೆ. ನಿರ್ಲಿಪ್ತರಾಗುತ್ತಾರೆ. ಆಸಕ್ತಿ ಕಳೆದುಕೊಂಡು ವೃತ್ತಿಯಿಂದ, ಪ್ರವೃತ್ತಿಯಿಂದ ವಿಮುಖರಾಗುತ್ತಾರೆ. ಬಹಳಷ್ಟು ಜನ ಸಿನಿಕರಾಗಿ, ವ್ಯವಸ್ಥೆ ವಿರುದ್ಧ ಆಕ್ರೋಶ ಬೆಳೆಸಿಕೊಂಡು ಕಂಟಕಪ್ರಾಯರಾಗುತ್ತಾರೆ. ಅದು ಇನ್ನಷ್ಟು ಅಪಾಯಕಾರಿ ಬೆಳವಣಿಗೆ.

ಯಾವುದೇ ಸಂಸ್ಥೆ ನೋಡಿದರೂ ಈ ಮಾತಿಗೆ ಸಾಕ್ಷ್ಯ ಸಿಗುತ್ತದೆ. ತನ್ನ ಮಕ್ಕಳನ್ನು ಬಿಟ್ಟು ಇತರರು ಬೆಳೆಯಬಾರದು ಎಂದು ಹೊರಟರು ಎಚ್.ಡಿ. ದೇವೇಗೌಡ. ಅದರಿಂದ ಪಕ್ಷ ಬೆಳೆಯಲಿಲ್ಲ. ಇದ್ದ ಅಧಿಕಾರವನ್ನೂ ಅವರು ಕಳೆದುಕೊಳ್ಳಬೇಕಾಯಿತು. ಹಲವಾರು ನಾಯಕರು ಪಕ್ಷ ಬಿಟ್ಟು ಹೋದರು. ಹಿಂದೆ ಇದೇ ಮಾದರಿಯನ್ನು ದಿ. ಪ್ರಧಾನಿ ಇಂದಿರಾ ಗಾಂಧಿ ಅನುಸರಿಸಿದ್ದರು. ಅದರ ಪರಿಣಾಮ ಏನಾಯಿತು ಎಂಬುದು ಎಲ್ಲರಿಗೂ ಸ್ಪಷ್ಟ. ಇತರರ ಸಹಜ ಅವಕಾಶಗಳನ್ನು, ಬೆಳವಣಿಗೆಯನ್ನು ತಡೆಯುವ ವ್ಯಕ್ತಿ ತನ್ನ ಬೆಳವಣಿಗೆ ಹಾಗೂ ಅವಕಾಶಗಳಿಗೇ ಕಲ್ಲು ಹಾಕಿಕೊಳ್ಳುತ್ತಾನೆ.

ಹಿಂದೊಮ್ಮೆ ಓದಿದ ವಿಷಯವೊಂದು ಇಲ್ಲಿ ನೆನಪಾಗುತ್ತಿದೆ: ನಿಕೃಷ್ಟ, ಮಹತ್ವವಲ್ಲದ ಎಂದು ನಾವು ಭಾವಿಸುವ ಜೀವಿಯೂ ತನ್ನ ಸಂತಾನ ಸೃಷ್ಟಿಸಿ ಸಾಯುತ್ತದೆ. ಒಂದು ಸಾಧಾರಣ ಬೀಜವೂ, ತನ್ನ ಬದುಕಿನ ಅವಧಿಯಲ್ಲಿ ತನ್ನಂಥ ಹಲವಾರು ಬೀಜಗಳನ್ನು ಸೃಷ್ಟಿಸುತ್ತದೆ. ಆದರೆ, ಪ್ರತಿಭಾವಂತರು, ಆಯಕಟ್ಟಿನ ಹುದ್ದೆಯಲ್ಲಿರುವವರು ಈ ನಿಕೃಷ್ಟ ಜೀವಿಗೂ ಕಡೆಯಾಗಿ ವರ್ತಿಸುವುದು ಏಕೆಂಬುದೇ ಅರ್ಥವಾಗುವುದಿಲ್ಲ. ಅದಕ್ಕೆ ಕಾರಣಗಳಿರಬಹುದು. ಆದರೆ, ಅದರಿಂದ ಯಾರಿಗೂ ಉಪಯೋಗವಿಲ್ಲ. ರೆಂಬೆ ಕೊಂಬೆಗಳು ವಿಸ್ತರಿಸುತ್ತಿದ್ದರೇ ಮರ ಬೆಳೆವುದು. ಹಾಗೆ, ಪ್ರತಿಭಾವಂತ ಬೆಳೆಯುವುದು ತನ್ನ ಜೊತೆಗಿರುವವರ ಬೆಳವಣಿಗೆಯಿಂದ ಮಾತ್ರ.

ಇಲ್ಲದಿದ್ದರೆ, ಹೈಬ್ರಿಡ್ ಬೀಜದಂತೆ ಆಗುತ್ತಾರೆ ಇಂಥ ಪ್ರತಿಭಾವಂತರು. ತಾವವು ಮಾತ್ರ ಬೆಳೆಯುತ್ತಾರೆ. ಆದರೆ, ಅವರ ಸೃಷ್ಟಿ ನಪುಂಸಕವಾಗಿ ವ್ಯರ್ಥವಾಗುತ್ತದೆ.

- ಚಾಮರಾಜ ಸವಡಿ

ಅಲಾರಾಂಗೆ ಚಳಿಗಾಲವಿಲ್ಲ.

22 Nov 2008

3 ಪ್ರತಿಕ್ರಿಯೆ

ಅದಕ್ಕೆ ಮಳೆಗಾಲವೂ ಇಲ್ಲ, ಬೇಸಿಗೆ ಕಾಲವೂ ಇಲ್ಲ. ಅದಕ್ಕೆ ಇರುವುದು ಒಂದೇ ಕಾಲ. ಅದು ಸಮಯ.

ಯಾವಾಗ ಸೆಟ್ ಮಾಡಿರುತ್ತೇವೋ, ಆ ಕಾಲಕ್ಕೆ ಸರಿಯಾಗಿ ಬಡಿದುಕೊಳ್ಳುವುದೊಂದೇ ಅದಕ್ಕೆ ಗೊತ್ತು. ಹಾಗೆ ಬಡಿದುಕೊಳ್ಳುತ್ತಾ, ನಮ್ಮನ್ನೂ ಬಡಿದು ಎಬ್ಬಿಸುತ್ತದೆ. ಅಥವಾ ಎಬ್ಬಿಸಲು ಬಡಿದಾಡುತ್ತದೆ.

ಮೋಡ ತುಂಬಿದ ಬೆಂಗಳೂರಿನ ಆಕಾಶದ ಕೆಳಗೆ, ರಸ್ತೆಗಳು ಅಂಗಾತ ಮಲಗಿ ಮೋಡವನ್ನೇ ದಿಟ್ಟಿಸಿ ನೋಡುತ್ತ ಮಲಗಿರುವ ಹೊತ್ತು ಬಡಿದುಕೊಳ್ಳುವುದೆಂದರೆ ಅದಕ್ಕೆ ತುಂಬ ಇಷ್ಟ. ಆಗ ಸಮಯ ಎಷ್ಟಾಗಿರುತ್ತದೆಂಬುದು ನನಗೆ ಗೊತ್ತು. ಆದರೂ, ಅಲಾರಾಂನ ತಲೆ (?) ಕೆಟ್ಟಿದೆ ಎಂದು ನಂಬಲು ಮನಸ್ಸು ಬಯಸುತ್ತದೆ. ಅಷ್ಟು ಬೇಗ ನಸುಕಿನ ಐದು ಗಂಟೆಯಾಯಿತೆ? ಎಂದು ನಂಬಲು ಅದು ತಯಾರಿರುವುದಿಲ್ಲ. ನಿದ್ದೆಗಟ್ಟಣಿನಲ್ಲೇ ಹುಡುಕಿ ಅಲಾರಾಂ ತಲೆಗೆ ಮೊಟಕುತ್ತೇನೆ. ಪಾಪ, ಸುಮ್ಮನಾಗುತ್ತದೆ. ಆದರೆ, ಅದರ ಎಚ್ಚರಿಕೆ ಮನಸ್ಸಿನ ಗಡಿಯಾರದೊಳಗೆ ಸೇರಿಕೊಂಡು ಟಕ್ ಟಕ್ ಅನ್ನಲು ಶುರುವಾಗಿರುತ್ತದೆ. ಅದನ್ನು ಮೊಟಕಲಾಗದು.

ಮೊದಲಿನಿಂದಲೂ ಹೀಗೇ. ಅಲಾರಾಂ ಬಡಿದುಕೊಂಡ ನಂತರ ಮತ್ತೆ ಮಲಗುವುದು ನನಗೆ ಕಷ್ಟ. ಅವತ್ತು ಮಾಡಬೇಕಾದ ಕೆಲಸಗಳ ಪಟ್ಟಿಯನ್ನು ಮನಸ್ಸು ಓದಲು ಶುರು ಮಾಡುತ್ತದೆ. ಹೊರಗೆ ಚಳಿ ಇರಲಿ, ಮಳೆ ಇರಲಿ, ಕೆಟ್ಟ ಸೆಕೆ ಇರಲಿ- ಅದರ ಪಟ್ಟಿ ಓದುವಿಕೆ ತಪ್ಪುವುದಿಲ್ಲ. ಈ ನನ್ನಗಂದು ಮನಸ್ಸು ಅಲಾರಾಂಗಿಂತ ಹೆಚ್ಚು ಕ್ರಿಯಾಶೀಲ, ಕರಾರುವಾಕ್ಕು. ಆದರೂ, ಸ್ವಲ್ಪ ಹೊತ್ತು ಸೋಮಾರಿತನ ಅನುಭವಿಸುತ್ತ ಅದರ ಪಟ್ಟಿ ಓದುವಿಕೆಯನ್ನು ನಿರಾಸಕ್ತಿಯಿಂದ ಕೇಳಿಸಿಕೊಳ್ಳುತ್ತೇನೆ. ಅರೆ, ಇದು ನಿತ್ಯದ ವರಾತ ಬಿಡು ಅಂದು ಮತ್ತೆ ಮಲಗಲು ಯತ್ನಿಸುತ್ತೇನೆ.

ಆದರೆ, ಮನಸಿನ ಟಿಕ್ ಟಿಕ್ ಶುರುವಾಗಿಬಿಟ್ಟಿರುತ್ತದೆ.

ಒಂಚೂರು ಹೊರಳಾಡುತ್ತೇನೆ. ಸುಳ್ಳು ಸುಳ್ಳೇ ಮುಸುಕೆಳೆದು, ಇನ್ನೂ ಐದಾಗಿಲ್ಲ ಅಂದುಕೊಳ್ಳುತ್ತ ಮಲಗಲು ಯತ್ನಿಸುತ್ತೇನೆ. ’ಹೊರಗೆ ಯಾವ ಪರಿ ಚಳಿ ಇದೆ. ಈ ಚಳಿಯಲ್ಲಿ ಎದ್ದು ಮಾಡುವಂಥ ಮಹತ್ಕಾರ್ಯ ಏನಿದೆ’ ಅಂದುಕೊಳ್ಳುತ್ತ ಮನಸ್ಸನ್ನು ಒಲಿಸಲು ಯತ್ನಿಸುತ್ತೇನೆ. ಬಡ್ಡಿಮಗಂದು, ಟಿಕ್ ಟಿಕ್ ನಿಲ್ಲಿಸುವುದಿಲ್ಲ.

ಇನ್ನು ಏಳದೇ ವಿಧಿಯಿಲ್ಲ.

ಆಲಸ್ಯದಿಂದ ಎದ್ದು ಹಾಸಿಗೆಯಲ್ಲೇ ಕೂಡುತ್ತೇನೆ. ’ಈಗ ನೀರು ತಣ್ಣಗಿರುತ್ತದೆ. ಕಾಲ ಮೇಲೆ ಬಿದ್ದರೆ ಮುಗೀತು, ಮಂಕಾಗುತ್ತೇನೆ’ ಎಂದೆಲ್ಲ ಹೇಳಿಕೊಂಡು ಮನಸ್ಸನ್ನು ಕಳ್ಳತನದಿಂದ ಆಲಿಸುತ್ತೇನೆ. ’ಟಿಕ್ ಟಿಕ್ ಟಿಕ್...!’ ಊಹೂಂ, ಅದು ಕೇಳಿಸಿಕೊಳ್ಳುತ್ತಿಲ್ಲ. ’ಇವತ್ತು ಮಾಡುವಂಥ ಕೆಲಸವೇನೂ ಇಲ್ಲ ಗುರೂ’ ಅನ್ನುತ್ತೇನೆ. ಆದರೂ, ’ಟಿಕ್ ಟಿಕ್ ಟಿಕ್...!’

ಉಪಯೋಗವಿಲ್ಲ. ನಾನೇ ಪಳಗಿಸಿದ ಪಶು ನನ್ನ ಮಾತು ಕೇಳುತ್ತಿಲ್ಲ. ನಿರಾಸೆಯಾಗುತ್ತದೆ. ವಿಧಿಯಿಲ್ಲದೇ ಏಳುತ್ತೇನೆ. ಹೊದಿಕೆ ಮಡಿಸಿ ದಿಂಬಿನ ಮೇಲಿಟ್ಟು, ಉಳಿದಿದ್ದನ್ನು ಹೆಂಡತಿ, ಮಕ್ಕಳು ಎದ್ದನಂತರ ಮಡಿಸಿದರಾಯಿತೆಂದು ಬಾತ್‌ರೂಮಿಗೆ ಹೊರಡುತ್ತೇನೆ.

ಅಲ್ಲಿ ನೀರು ನಿಜಕ್ಕೂ ತಣ್ಣಗಿದೆ.

’ಹೇಳಲಿಲ್ಲವಾ ನಾನು?’ ಅಂದು ಮನಸ್ಸನ್ನು ಬೈದುಕೊಳ್ಳುತ್ತೇನೆ. ’ತಣ್ಣಗಿದ್ದರೆ ಇದ್ದೀತು ಬಿಡು’ ಎಂಬ ಉತ್ತರ. ಎಲಾ ಬಡ್ಡೀಮಗನೇ ಎಂದು ಬೈದುಕೊಂಡು ಪ್ರಾತಃರ್ವಿಧಿ ಮುಗಿಸುತ್ತೇನೆ. ಮುಖ ಒರೆಸಿಕೊಳ್ಳುವಾಗ ತಾಜಾತನ ಎನ್ನುವುದು ನಿಧಾನವಾಗಿ ಆವರಿಸಿಕೊಳ್ಳತೊಡಗಿದಾಗ ಮನಸ್ಸು ಉಲ್ಲಸ. .

ಯಥಾಪ್ರಕಾರ, ಕಂಪ್ಯೂಟರ್ ಆನ್ ಮಾಡಿದಾಗ, ನೆಟ್ ಕೈಕೊಟ್ಟಿರುತ್ತದೆ. ಮತ್ತೆ ಮಲಗಲು ಇದಕ್ಕಿಂತ ಒಳ್ಳೆಯ ನೆವ ಯಾವುದಿದೆ? ಆದರೆ, ತಣ್ಣೀರಿನಲ್ಲಿ ಮುಖ ಮತ್ತೊಂದು ಶುದ್ಧ ಮಾಡಿಕೊಂಡವನಿಗೆ ಮತ್ತೆ ನಿದ್ದೆ ಹತ್ತುವುದು ಕಷ್ಟ. ಸಿದ್ಧವಾಗೇ ಇರುವ ಪುಸ್ತಕವನ್ನು ತೆಗೆದುಕೊಂಡು ಓದಲು ಶುರು ಮಾಡುತ್ತೇನೆ.

ಮನಸ್ಸು ತೆರೆದುಕೊಳ್ಳುತ್ತದೆ. ಓದುತ್ತ ತಲೆ ಅಲ್ಲಾಡಿಸುತ್ತದೆ. ಮತ್ತೆ ಮತ್ತೆ ಮನನ ಮಾಡಿಕೊಳ್ಳುತ್ತ ಸುಖಿಸುತ್ತದೆ. ಆಹಾ ಅನ್ನುತ್ತದೆ. ಛೇ ಛೇ ಎಂದು ಲೊಚಗುಡುತ್ತದೆ. ಛೀ ಎಂದು ಗೊಣಗುತ್ತದೆ. ಉಶ್ ಎಂದು ನಿಟ್ಟುಸಿರಿಡುತ್ತದೆ. ಓದುತ್ತ ಓದುತ್ತ ಅದರಲ್ಲೇ ಲೀನವಾಗಿಬಿಡುತ್ತದೆ.

ಅಷ್ಟೊತ್ತಿಗೆ ಗಂಟೆ ಆರು. ಸಣ್ಣ ಹುಲಿ ಆಕಳಿಸುತ್ತ, ನಿಧಾನವಾಗಿ ಗುರುಗುಡುತ್ತದೆ. ಆದರೆ ಹಾಸಿಗೆ ಬಿಟ್ಟು ಎದ್ದು ಬರುವುದಿಲ್ಲ. ಆರೂವರೆಗೆ, ಅದರ ಅಕ್ಕ ಗುಟುರು ಹಾಕುತ್ತದೆ. ಆಗ ಏಳುತ್ತದೆ ತಾಯಿ ಹುಲಿ. ಗುರುಗುಡುವ, ಪರ್‌ಗುಡುವ ಮರಿಹುಲಿಗಳನ್ನು ಎಬ್ಬಿಸಿ ಬಾತ್‌ರೂಮಿಗೆ ಕರೆದೊಯ್ಯುತ್ತದೆ. ಮುಚ್ಚಿದ ಬಾಗಿಲಿನ ಒಳಗೆ ಅವು ಬಿಸಿ ನೀರಲ್ಲಿ ಸುಖಿಸುವ, ಕಿರಿಚಾಡುವ ಸದ್ದುಗಳು ಕೋಣೆಯಲ್ಲಿ ಕೂತವನನ್ನು ನಿಧಾನವಾಗಿ ತಾಕುತ್ತಿರುತ್ತವೆ. ಇನ್ನೈದು ನಿಮಿಷ ಅಷ್ಟೇ, ಹುಲಿಮರಿಗಳು ನನ್ನ ಮೇಲೆ ನೆಗೆಯಲು ಎಂದು ಮನಸ್ಸು ಎಚ್ಚರಿಸುತ್ತದೆ. ಅಷ್ಟೊತ್ತಿಗೆ ಓದು ಮುಗಿಸಿ, ಪುಟ ಗುರುತು ಇಟ್ಟು ಪುಸ್ತಕ ಮುಚ್ಚುವಷ್ಟರಲ್ಲಿ ಮರಿ ಹುಲಿಗಳು ಕೋಣೆಯೊಳಗೆ ದಾಳಿ ಇಟ್ಟಾಗಿರುತ್ತದೆ.

ಅದು ಕಾಫಿ ಸಮಯ !

ಹುಲಿಮರಿಗಳು ಹಾಲು ಕುಡಿಯುತ್ತವೆ. ಕಾಫಿ-ಹಾಲಿನ ತಟ್ಟೆ ಸುತ್ತ ಪರ್‌ಗುಡುತ್ತ ಕೂತು ಹಾಲು ಹೀರುತ್ತವೆ. ನಾನು ಮತ್ತು ಈಕೆ ನಿಧಾನವಾಗಿ ಕಾಫಿ ಕುಡಿಯುತ್ತೇವೆ. ಹೊರಗೆ ಸೂರ್ಯನ ಮೊದಲ ಕಿರಣ ನೆಲ ತಾಕುತ್ತಿರುತ್ತದೆ.

ಈಗ ಹುಲಿಗಳು ವಾಕಿಂಗ್‌ಗೆ ರೆಡಿ. ಅವಕ್ಕೆ ಬೆಚ್ಚಗಿನ ಬಟ್ಟೆ ಹಾಕಿ, ಶೂ ತೊಡಿಸಿ, ಬಾಗಿಲಿಗೆ ಬೀಗ ಹಾಕಿಕೊಂಡು ರಸ್ತೆಗಿಳಿಯುತ್ತೇವೆ. ಮರಿ ಹುಲಿಯ ಕೈಯನ್ನು ತಾಯಿ ಹುಲಿ ಹಾಗೂ ಮರಿಯ ಅಕ್ಕನ ಕೈಯನ್ನು ನಾನು ಹಿಡಿದುಕೊಂಡು ಬೆಳಗಿನ ತಾಜಾತನ ಆಸ್ವಾದಿಸುತ್ತ ಹೊರಡುತ್ತೇವೆ. ದಾರಿಯಲ್ಲಿ ಬಾಗಿಲು ತೆರೆದುಕೊಂಡ ಕಿರಾಣಿ ಅಂಗಡಿಯಿಂದ ’ಕೌಸಲ್ಯಾ, ಸುಪ್ರಜಾ...’

ಮರಿಹುಲಿಗಳು ಕೇಕೆ ಹಾಕುತ್ತವೆ. ಆ ದಿನದ ಮೊದಲ ಮುಗುಳ್ನಗು ನನ್ನಲ್ಲಿ ಬಿಚ್ಚಿಕೊಳ್ಳುತ್ತದೆ.

- ಚಾಮರಾಜ ಸವಡಿ

ಚಪ್ಪಲಿ ಎಂಬ ದೊರೆಯೇ, ನಿನಗಾರು ಸರಿಯೇ...!

20 Nov 2008

3 ಪ್ರತಿಕ್ರಿಯೆ

ಚರ್ಮದ ಚಪ್ಪಲಿಗಳವು. ಕೊಂಡು ಮೂರು ತಿಂಗಳಾಗಿತ್ತು. ಬಸ್ ಹತ್ತುವಾಗ ಇಳಿಯುತ್ತಿದ್ದ ಯಾವನೋ ಪಾಪಿ ಅದರ ಮೇಲೆ ಕಾಲಿಟ್ಟಿದ್ದ. ಹತ್ತುವ ಅವಸರದಲ್ಲಿ ಕಾಲನ್ನು ಬಲವಾಗಿ ಎತ್ತಿದಾಗ ಉಂಗುಷ್ಠ ಅಲ್ಲೇ ಹರ ಹರಾ ಅಂದಿತು.

ರಿಪೇರಿ ಮಾಡಿಸೋಣ ಅಂದುಕೊಂಡರೂ, ಮನಸ್ಸಿಗೆ ಹಳಹಳಿ ತಪ್ಪಲಿಲ್ಲ. ಚಪ್ಪಲಿ ಮೇಲೆ ಕಾಲಿಟ್ಟು ಅದಕ್ಕೊಂದು ಗತಿ ಕಾಣಿಸಿದ ಪಾಪಿಗೆ ಮನದಣಿಯೇ ಶಪಿಸಿದೆ.

ಹಾಗಂತ ಚಪ್ಪಲಿ ಸರಿಯಾದೀತೆ? ಬಸ್ ಇಳಿಯುವವರೆಗೂ ಅದರದೇ ಚಿಂತೆ. ನಾನಿಳಿಯುವ ಸ್ಟಾಪ್‌ನಲ್ಲಿ ಚಪ್ಪಲಿ ದುರಸ್ತಿ ಅಂಗಡಿ ಇರಲಿ ದೇವರೇ ಎಂದು ಬೇಡಿಕೊಂಡೆ.

ಆದರೆ, ದೇವರು ತಥಾಸ್ತು ಅನ್ನಲಿಲ್ಲ. ಬಸ್ ಇಳಿದಾಗ ರಿಪೇರಿ ಅಂಗಡಿ ಇರಲಿ, ಆ ಪರಿ ಸಂದಣಿಯಲ್ಲಿ ಸರಿಯಾಗಿ ನಿಲ್ಲುವುದಕ್ಕೂ ಆಗದಂಥ ಪರಿಸ್ಥಿತಿ. ಹೇಗೋ ಕಾಲೆಳೆದುಕೊಂಡು, ಶಪಿಸಿಕೊಳ್ಳುತ್ತ ಅಲ್ಲೇ ಹತ್ತಿರದ ಯಾವುದೋ ಅಂಗಡಿ ಮುಂದೆ ನಿಂತೆ. ನನ್ನ ದುರಾದೃಷ್ಟಕ್ಕೆ ಅದು ಫ್ಯಾನ್ಸಿ ಸ್ಟೋರ್. ಅಂಗಡಿ ಮುಂದೆ ಅನುಮಾನಾಸ್ಪದವಾಗಿ ನಿಂತ ನನ್ನನ್ನು ಅನುಮಾನದಿಂದ ನೋಡುತ್ತ ಒಳ ಹೋದರು ಹುಡುಗಿಯರು. ಇದು ಸರಿಯಲ್ಲ ಅಂದುಕೊಂಡು ಮತ್ತೆ ಕಾಲೆಳೆಯುತ್ತ ಹೊರಟೆ.

ಚಪ್ಪಲಿ ದುರಸ್ತಿ ಮನಸ್ಸಿನಿಂದ ಬಿಟ್ಟು ಹೋಯಿತು. ಅರ್ಜೆಂಟಾಗಿ ಹೊಸವನ್ನು ಕೊಳ್ಳಬೇಕು. ಇವನ್ನು ಅದೇ ಡಬ್ಬದಲ್ಲಿ ಪ್ಯಾಕ್ ಮಾಡಿಸಿಕೊಂಡು, ಬಿಡುವಾದಾಗ ದುರಸ್ತಿ ಮಾಡಿಸುವುದು ಅಂದುಕೊಂಡೆ.

ಆದರೆ, ದೇವರು ಮತ್ತೆ ತಥಾಸ್ತು ಅನ್ನಲಿಲ್ಲ.

ಹತ್ತಿರದಲ್ಲೆಲ್ಲೂ ಚಪ್ಪಲಿ ಅಂಗಡಿ ಕಾಣಲಿಲ್ಲ. ರೆಡಿಮೇಡ್ ಬಟ್ಟೆಗಳ ಅಂಗಡಿಳೇ ಎಲ್ಲ ಕಡೆ. ಅಲ್ಲಲ್ಲಿ ರೆಸ್ಟುರಾಂಟ್‌ಗಳು, ಎಲೆಕ್ಟ್ರಾನಿಕ್ಸ್ ಅಂಗಡಿಗಳು ಕಂಡವು. ಇವುಗಳ ಮಧ್ಯೆ, ಕೊನೆಗೊಂದು ಡಬ್ಬಾ ಚಪ್ಪಲಿ ಅಂಗಡಿ ಸಿಕ್ಕರೂ ಸಾಕು ಎಂದು ಮನಸ್ಸು ಹಂಬಲಿಸಿತು. ಕಣ್ಣಾಡಿಸುತ್ತ, ಕಾಲೆಳೆದುಕೊಂಡು ಹೊರಟ ನನ್ನ ಸ್ಥಿತಿ ಕಂಡು ನನಗೇ ಸಿಟ್ಟು.

ದುರಾದೃಷ್ಟ ಚಪ್ಪಲಿ ರೂಪದಲ್ಲೂ ಬರುತ್ತದೆ. ಅಷ್ಟೇ ಅಲ್ಲ, ಅದು ನಿಜಕ್ಕೂ ಹೀನಾಯವಾಗಿರುತ್ತದೆ ಎಂಬುದು ಅವತ್ತು ನನ್ನ ಅನುಭವಕ್ಕೆ ಬಂದಿತು. ನಾನು ಹೊರಟ ಫುಟ್‌ಪಾತ್‌ನಲ್ಲಿ ಪಾಲಿಕೆಯವರ ದುರಸ್ತಿ ಕೆಲಸ ನಡೆದಿತ್ತು. ಫುಟ್‌ಪಾತ್ ಅನ್ನು ಅಲ್ಲಲ್ಲಿ ಅಗಿದಿದ್ದರು, ನೀರು ಮಡುಗಟ್ಟಿತ್ತು. ಸಾಮಾನ್ಯ ಸಂದರ್ಭಗಳಲ್ಲಾದರೆ ಜಿಗಿದು ದಾಟಿ ಹೋಗುತ್ತಿದ್ದೆ. ಆದರೆ, ಈಗ ನಾನು ತಾತ್ಕಾಲಿಕವಾಗಿ ಕುಂಟ. ಜಿಗಿಯಲಾರೆ. ಆದರೆ, ಜಿಗಿಯದೇ ಇರಲಾಗದು ಅನ್ನುವಂತಿದೆ ಫುಟ್‌ಪಾತ್.

ನೀರು ನಿಂತ ಕಡೆ ಬೇಗ ದಾಟದಿದ್ದರೆ, ವಾಹನಗಳು ಪಿಚಕಾರಿ ಹೊಡೆದು ಹೋಗುತ್ತವೆ. ಆಗ ಚಪ್ಪಲಿ ಜೊತೆ ಹೊಸ ಬಟ್ಟೆಯನ್ನೂ ಖರೀದಿ ಮಾಡಬೇಕಾದೀತು ಎಂಬ ಎಚ್ಚರಿಕೆಯನ್ನು ನೀಡಿ ಮನಸ್ಸು ಸುಮ್ಮನಾಯಿತು. ಸುಮ್ಮನಾಗುವುದೇನು ’ಬ್ಲ್ಯಾಂಕ್’ ಅಂತಾರಲ್ಲ, ಹಾಗಾಯಿತು. ಫುಟ್‌ಪಾತ್ ಅಗೆದ ಜಾಗದಲ್ಲಿ ಮಂಕನಂತೆ ನಿಂತೆ.

ಒಂದೆರಡು ವಾಹನಗಳು ಅಪಾಯಕಾರಿ ಅನಿಸುವಷ್ಟು ಹತ್ತಿರ ಬಂದವು. ತಕ್ಷಣ ಸರಿದು ನಿಂತೆ. ಆದರೆ, ಉಂಗುಷ್ಠ ಹರಿದ ಚಪ್ಪಲಿ ನನ್ನ ವೇಗಕ್ಕೆ ಬರಲಿಲ್ಲ. ಅದು ಅಲ್ಲೇ ಉಳಿಯಿತು. ಖಾಲಿ ಪಾದ ಕೆಸರನ್ನು ಮೆತ್ತಿಕೊಂಡು ಹಿಂದಕ್ಕೆ ಬಂತು.

ಇದು ನಿಜಕ್ಕೂ ಪಾಪಿ ದಿನ ಎಂದು ಮತ್ತೆ ಶಪಿಸಿಕೊಂಡೆ. ಕೆಸರನ್ನು ಅಲ್ಲೇ ಕಲ್ಲಿಗೆ ಒರೆಸಿ, ಇನ್ನೂ ಅಂಟುಅಂಟಾಗಿದ್ದ ಪಾದಕ್ಕೆ ಉಂಗುಷ್ಠ ಹರಿದ ಚಪ್ಪಲಿ ಸೇರಿಸಿ ಕಾಲೆಳೆಯುತ್ತ ವಿರುದ್ಧ ದಿಕ್ಕಿಗೆ ಹೊರಟೆ. ಎಲ್ಲಾದರೂ ಒಂದು ಅಂಗಡಿ ಕಾಣಲಿ ದೇವರೇ ಅಂತ ಬೇಡಿಕೊಳ್ಳುತ್ತ ಒಂದಿಷ್ಟು ಹೊತ್ತು ಅಲೆದಾಡಿದೆ.

’ಯುರೇಕಾ!’

ಮೂಲೆಯಲ್ಲೊಂದು ಡಬ್ಬಾ ಚಪ್ಪಲಿ ಅಂಗಡಿ ಇದೆ! ನಿಧಿ ಸಿಕ್ಕಷ್ಟು ಸಂತೋಷವಾಯಿತು. ಪರವಾಗಿಲ್ಲ, ಮೊದಮೊದಲು ಸತಾಯಿಸಿದರೂ ದೇವರು ಕೊನೆಗೆ ತಥಾಸ್ತು ಅನ್ನುತ್ತಾನೆ ಎಂದು ಖುಷಿಪಡುತ್ತ ಅಂಗಡಿ ಮುಂದೆ ನಿಂತೆ. ನನಗೇನು ಬೇಕು ಎಂಬುದನ್ನು ನಾನು ಬಾಯಿ ಬಿಟ್ಟು ಹೇಳಬೇಕಿರಲಿಲ್ಲ. ನನ್ನ ಕೊಳೆಯಾದ ಕಾಲು ಹಾಗೂ ಉಂಗುಷ್ಠ ಹರಿದ ಚಪ್ಪಲಿಗಳೇ ಅದನ್ನು ಮಜಬೂತಾಗಿ ಹೇಳಿದ್ದವು.

ನನ್ನ ನೋಡುತ್ತಲೇ ಅಂಗಡಿಯವ ಚಂಗನೇ ಎಗರಿ ಬಂದ. ಯಾವ ಸೈಜ್ ಸರ್ ಅಂದ. ಹೇಳಿದೆ. ಅದುವರೆಗೆ ಕೇಳಿರದ ಬ್ರಾಂಡ್‌ಗಳ ನಾಲ್ಕೈದನ್ನು ನನ್ನೆದುರು ಇಟ್ಟು, ಹಾಕಿ ನೋಡಿ ಸರ್ ಅಂದ.

ನೋಡಿದೆ. ಒಂದು ಜೊತೆ ಒಪ್ಪಿಗೆಯಾದವು. ಆದರೆ, ಏಕೋ ಬಿಗಿಯಾಗುತ್ತವೆ ಅನಿಸಿತು. ಪರವಾಗಿಲ್ಲ ಸರ್, ಒಂದೆರಡು ದಿನ ಹಾಕಿದರೆ ಸರಿಯಾಗುತ್ತವೆ. ಲೂಸ್ ಆಗಿರೋದನ್ನು ತಗೊಂಡ್ರೆ ಆಮೇಲೆ ನಡೆಯುವಾಗ ನಿಮಗಿಂತ ಮುಂಚೆ ಅವೇ ಹೋಗಿಬಿಡುತ್ತವೆ ಎಂದು ಸಮಾಧಾನವನ್ನೂ ಎಚ್ಚರಿಕೆಯನ್ನೂ ಒಮ್ಮೆಲೇ ಹೇಳಿದ ಅಂಗಡಿಯವ.

ಅವನ ಮಾತನ್ನು ಕೇಳದಿರಲು ಸಾಧ್ಯವೆ? ನನ್ನಂಥ ಎಷ್ಟೊಂದು ಅಸಹಾಯಕರನ್ನು ನೋಡಿಲ್ಲ ಆತ? ಹೀಗಾಗಿ ಬಿಗಿಯಾದ ಚಪ್ಪಲಿಗಳನ್ನೇ ಖರೀದಿಸಿದೆ. ನನ್ನ ಹಳೆಯ ಜೋಡುಗಳನ್ನು ಹೊಸಾ ಡಬ್ಬದಲ್ಲಿ ಹಾಕಿ, ಅದನ್ನು ಪ್ಲಾಸ್ಟಿಕ್ ಬ್ಯಾಗ್‌ನಲ್ಲಿ ಸೇರಿಸಿ ಕೈಗಿಟ್ಟ. ಬಿಲ್ ಕೊಟ್ಟು ಹೊರ ಬಂದೆ.

ಜಗತ್ತನ್ನೇ ಗೆದ್ದ ಸಮಾಧಾನ. ಕಾಲಲ್ಲಿ ಹೊಸ ಚಪ್ಪಲಿ ಕಚ್ಚಿಕೊಂಡು ಕೂತಿತ್ತು, ಎಂದೆಂದೂ ನಿನ್ನನು ನಾನು ಬಿಟ್ಟಿರಲಾರೆ ಎಂಬಂತೆ. ನಾನು ಕೂಡಾ, ಬಿಟ್ಟರೆ ಕೆಟ್ಟೇನು ಎಂಬಂತೆ ಬಿಗಿಯಿಂದಲೇ ಹೊರಟೆ. ಇನ್ನು ಬಸ್‌ಗೆ ಕಾಯುವುದು ವ್ಯರ್ಥ ಎಂದು ಆಟೊ ಹಿಡಿದೆ.

ಕಚೇರಿಯಲ್ಲಿ ಚಪ್ಪಲಿ ಸಾಧು ಸ್ವಭಾವದಿಂದಲೇ ಇತ್ತು. ಯಾವಾಗ, ಕೆಲಸ ಮುಗಿಸಿಕೊಂಡು ಮನೆ ಕಡೆ ಹೋಗಲು ಬಸ್‌ಸ್ಟಾಪ್‌ನತ್ತ ಹೆಜ್ಜೆ ಹಾಕತೊಡಗಿದೆನೋ, ಆಗ ತನ್ನ ಅಸಲಿ ಬುದ್ಧಿ ತೋರಿಸಿತು. ಏಕೋ ಕಾಲೊಳಗೆ ಹರಳಿನಂಥದು ಒತ್ತುತ್ತಿದೆ ಅನಿಸಿ ಕಷ್ಟಪಟ್ಟು ಬಿಡಿಸಿಕೊಂಡು ನೋಡುತ್ತೇನೆ! ಹೆಬ್ಬೆರಳಿನ ಮೇಲ್ಗಡೆ ಚರ್ಮ ಕೆಂಪಾಗಿದೆ. ಮೆಲ್ಲಗೇ ಸವರಿದರೆ ಉರಿಯತೊಡಗಿತು.

ಅರೆರೆ, ಹೊಸ ಚಪ್ಪಲಿ ಕಚ್ಚತೊಡಗಿದೆ.

ಆದರೆ, ಏನು ಮಾಡುವುದು? ಬಿಗಿ ಚಪ್ಪಲಿಯನ್ನು ಮತ್ತೆ ಹುಷಾರಾಗಿ ಕಾಲಿಗೆ ತೊಡಿಸಿಕೊಂಡೆ. ಕಾಲು ಅಳುಕಿತು. ಕಣ್ಣು ತುಳುಕಿದವು. ಯಕಃಶ್ಚಿತ್ ಕಾಲೊಳಗಿನ ವಸ್ತು ಕಣ್ಣಲ್ಲಿ ನೀರು ಬರುವಂತೆ ಮಾಡಿತಲ್ಲ ಎಂಬ ರೋಷ ಉಕ್ಕಿತು. ಆದರೆ, ಏನೂ ಮಾಡುವ ಹಾಗಿಲ್ಲ. ಕೈಯಲ್ಲಿ ಹಳೆ ಚಪ್ಪಲಿಗಳಿದ್ದ ಹೊಸ ಡಬ್ಬಾ ಬೇರೆ ಇದೆ. ನನ್ನನ್ನು ಇಂಥ ದುಃಸ್ಥಿತಿಗೆ ದೂಡಿದ ಸಿಟಿ ಬಸ್‌ನ ಪಾಪಿಗೆ ಹಿಡಿಶಾಪ ಹಾಕುತ್ತ ಹೊರಟೆ.

ಅದು ಎಂಥಾ ನಡಿಗೆ ಅಂತೀರಿ. ಆಯಕಟ್ಟಿನ ಜಾಗದಲ್ಲಿ ಕುರುವಾದವರು ನಡೆಯುವಂತೆ ಬಲೇ ಹುಷಾರಿಂದ, ಒಂಥರಾ ಗತ್ತಿನಿಂದ ನಿಧಾನವಾಗಿ ಹೊರಟೆ. ಹೆಜ್ಜೆ ಊರಿದಾಗೆಲ್ಲ, ಚಪ್ಪಲಿ ಕಚ್ಚುತ್ತಿತ್ತು. ತುಟಿ ಅವಡುಗಚ್ಚುತ್ತಿತ್ತು. ಐದೇ ನಿಮಿಷದಲ್ಲಿ ಬಸ್‌ಸ್ಟಾಪ್‌ನಲ್ಲಿ ಇರುತ್ತಿದ್ದವ ಅಂದು ಅರ್ಧ ಗಂಟೆ ತಗೊಂಡೆ. ಮನೆ ಹತ್ತಿರದ ಸ್ಟಾಪ್‌ನಲ್ಲಿ ಇಳಿದು, ಮನೆ ಸೇರುವಾಗ ಮತ್ತೆ ಅರ್ಧ ಗಂಟೆ.

ಬಂದವನೇ ಮೊದಲು ಚಪ್ಪಲಿಯನ್ನು ಕೈಹಾಕಿ ಕಿತ್ತೆಸೆದೆ. ಕಾಲು ತೊಳೆಯುವಾಗ, ತಣ್ಣೀರು ಹಾಕಿಕೊಂಡರೂ ಕೆಂಪಾದ ಜಾಗ ಭಗಭಗ ಉರಿಯಿತು. ಹಳೆಯ ಜೋಡುಗಳನ್ನು ಮೂಲೆಗೆಸೆದೆ. ಅವುಗಳ ಅವಶ್ಯಕತೆ ಇಲ್ಲ. ಕಾಲು ದುರಸ್ತಿಯಾಗುವವರೆಗೂ ಚಪ್ಪಲಿ ಪಥ್ಯ!

ಹೀಗಿರಲಾಗಿ, ಗೆಳೆಯ ಎಂಬ ಹಿತಶತ್ರುವೊಬ್ಬ ಒಂದು ಬಿಟ್ಟಿ ಸಲಹೆ ಕೊಟ್ಟ. ನಿನ್ನ ಕಾಲಿಗೆ ಬಿಗಿಯಾಗುತ್ತಿದ್ದರೆ, ನಿನಗಿಂತ ದೊಡ್ಡ ಕಾಲಿರುವವರ ಹತ್ತಿರ ಅದನ್ನು ಒಂದು ದಿನ ಸರ್ವೀಸಿಂಗ್‌ಗೆ ಬಿಡು. ಅವರು ಹಾಕಿಬಿಟ್ಟ ನಂತರ ನೀನು ಹಾಕಿಕೋ, ಸರಿಯಾಗುತ್ತೆ ಅಂದ.

ಒಳ್ಳೆ ಐಡಿಯಾ ಅನಿಸಿತು.

ಆದರೆ, ನನ್ನ ಪಾದಕ್ಕಿಂತ ದೊಡ್ಡ ಪಾದವಿರುವ ದ್ವಿಪಾದಿಯನ್ನು ಹುಡುಕುವುದು ಎಲ್ಲಿ? ನನ್ನ ದೊಡ್ಡ ಕಾಲಿನ ಗೆಳೆಯರನ್ನು ನೆನಪಿಸಿಕೊಂಡೆ. ಆದರೆ, ಅವರ ಕಾಲು ಉದ್ದ. ನನ್ನಷ್ಟೇ ಗಿಡ್ಡರಾದ, ಆದರೆ, ನನಗಿಂತ ದೊಡ್ಡ ಪಾದ ಹೊಂದಿರುವವರೇ ಸರ್ವೀಸಿಂಗ್‌ಗೆ ಉತ್ತಮ.

ಶಾರ್ಟ್‌‌ಲಿಸ್ಟ್ ಮಾಡುತ್ತ ಹೋದಂತೆ, ಮನೆ ಹತ್ತಿರ ತರಕಾರಿ ಮಾರಲು ಬರುವ ಹುಡುಗ ಒಪ್ಪಿಗೆಯಾದ. ಹೇಗಿದ್ದರೂ ಮನೆ ಮನೆ ತಿರುಗುವವ. ನಾವು ಅವನ ಹತ್ತಿರವೇ ದಿನಾ ತರಕಾರಿ ಕೊಳ್ಳೋದು. ಪುಕ್ಕಟೆ ಹಾಕಿಕೊ ಮಾರಾಯಾ ಅಂದರೆ ಇಲ್ಲವೆನ್ನಲಾರ ಅನಿಸಿದಾಗ, ಪರಿಹಾರ ಸಿಕ್ಕ ನೆಮ್ಮದಿ.

ಮರುದಿನ ಪತ್ರಿಕ ಹುಡುಗನನ್ನು ಕಾಯುವುದು ಮರೆತು ತರಕಾರಿಯವನ ವಿಚಿತ್ರ ಕೂಗಿಗೆ ಕಿವಿಗೊಟ್ಟು ನಿಂತೆ. ಪುಣ್ಯಾತ್ಮ ಎಂಟುಗಂಟೆಯಾದರೂ ಬರಲಿಲ್ಲ. ಗೇಟಿನ ಹತ್ತಿರವೇ ನಿಂತು ಪೇಪರ್ ಓದಿದೆ. ಕಾಫಿ ಕುಡಿದೆ. ಕಚೇರಿಗೆ ಅವಸರದಿಂದ ಹೊರಟವರನ್ನು ನೋಡುತ್ತ ನಿಂತೆ. ಹೆಂಡತಿಗೆ ಅಸಮಾಧಾನ. ಬಂದರೆ, ಕೂಗ್ತಾನೆ ಒಳಗೆ ಬನ್ರೀ ಎಂದು ಆವಾಜ್‌ ಹಾಕಿದಳು. ಕ್ಯಾರೆ ಅನ್ನದೇ ಗೇಟಿಗೆ ಅಂಟಿಕೊಂಡೇ ನಿಂತೆ.

ಎಂಟಾದ ನಂತರ ಪ್ರತ್ಯಕ್ಷನಾದ ಆಸಾಮಿ ಕಂಡ ಕೂಡಲೇ ಪುಳಕ! ಅವತ್ತು ಅವಶ್ಯತೆಗಿಂತ ಹೆಚ್ಚು ತರಕಾರಿ ಕೊಂಡೆ, ಹೆಚ್ಚು ಮಾತಾಡಿದೆ. ದುಡ್ಡು ಕೊಡುವಾಗ, ಚಪ್ಪಲಿ ಸರ್ವೀಸಿಂಗ್ ಮಾಡಿಕೊಡುವ ವಿನಂತಿ ಮುಂದಿಟ್ಟೆ.

ಮೊದಲು ಅವ ನನ್ನನ್ನು ಮಿಕಿಮಿಕಿ ನೋಡಿದ. ನಂತರ ಮುಗುಳ್ನಕ್ಕ. ಆಗಲಿ ಸರ್ ಕೊಡಿ ಎಂದು ಕೃಪೆಯಿಟ್ಟು ನನ್ನ ಚಪ್ಪಲಿಯೊಳಗೆ ತನ್ನ ಕಾಲಿಟ್ಟು ನನ್ನನ್ನು ಕೃತಾರ್ಥನನ್ನಾಗಿ ಮಾಡಿದ. ನಾಳೆ ವಾಪಸ್ ಬಿಡ್ತೀನಿ ಎಂದು ಹೇಳಿ ತನ್ನ ಕರ್ಣಕಠೋರ ಧ್ವನಿಯಲ್ಲಿ ತರಕಾರಿಗಳ ಹೆಸರು ಕೂಗುತ್ತ ಹೊರಟ. ನನ್ನ ಹೊಸಾ ಚಪ್ಪಲಿ ಅವನ ಕಾಲಿಗೆ ಹೇಗೆ ಕಾಣುತ್ತವೆಂಬುದನ್ನು ನೋಡುತ್ತ ಕೊಂಚ ಹೊತ್ತು ಅಲ್ಲೇ ನಿಂತಿದ್ದೆ. ಎಂಥದೋ ಸಮಾಧಾನ !

ಮರು ದಿನ ಅದೇ ರೀತಿ ಗೇಟಿಗೆ ಒರಗಿಕೊಂಡು ನಿಂತೆ. ಚಪ್ಪಲಿ ವಸೂಲು ಮಾಡಬೇಕಲ್ಲ! ಎಂಟಾಯಿತು, ಎಂಟೂವರೆಯಾಯಿತು, ಒಂಬತ್ತು. ಊಹೂಂ. ತರಕಾರಿಯವ ಕಾಣಲಿಲ್ಲ. ಅವನ ಕರ್ಣಕಠೋರ ಕೂಗು ಕೇಳಲಿಲ್ಲ. ಅರೆರೆ, ನನ್ನ ಚಪ್ಪಲಿ ಹಾರಿಸಿಕೊಂಡು ಹೋದನಾ ಬಡ್ಡೀಮಗ ಎಂದು ಮನಸ್ಸು ಕುದಿಯಿತು.

ಅವತ್ತೇಕೋ ಸಮಾಧಾನವೇ ಇಲ್ಲ. ನನಗೇಕೋ ಚಪ್ಪಲಿ ಭಾಗ್ಯವೇ ಇಲ್ಲ ಎಂಬ ಹಳಹಳಿ. ಕಚೇರಿಯಲ್ಲಿ ಕೂತಾಗಲೂ ಮನಸ್ಸು ಪಾದರಕ್ಷೆಗಳನ್ನೇ ನೆನಪಿಸಿಕೊಳ್ಳುತ್ತಿತ್ತು. ’ಯಾಕ್ರೀ ಒಂಥರಾ ಇದ್ದೀರಿ’ ಅಂದರು ಸಹೋದ್ಯೋಗಿಗಳು. ಏನು ಹೇಳಲಿ? ಮನಸ್ಸಿನ ಎದುರು ಚಪ್ಪಲಿ ಜೋಡಿ ತಾಳಗಳಂತೆ ಕುಣಿದಾಡುತ್ತ ಏಕಾಗ್ರತೆ ಕಸಿದವು.

ಅದರ ಮರುದಿನವೂ ಗೇಟಿಗೆ ಒರಗಿ ತರಕಾರಿಯವನ ಧ್ಯಾನಕ್ಕೆ ತೊಡಗಿದೆ. ಎಂಟು ಗಂಟೆಯ ಸುಮಾರು, ಬೀದಿಯ ತಿರುವಿನಲ್ಲಿ ಕರ್ಣಕಠೋರ ಕೂಗು ಕೇಳಿಸಿತು.

ಆಹಾ, ಅದೆಷ್ಟು ಸುಮಧುರವಾಗಿ ಕೇಳಿಸಿತು ನನಗೆ! ಬಂದ ನನ್ನ ಚಪ್ಪಲಿ ಸರ್ವೀಸ್‌ದಾರ ಎಂದು ಮನಸ್ಸು ಕುಣಿದಾಡಿತು. ಗೇಟು ತೆರೆದುಕೊಂಡು ಅವನಿದ್ದಲ್ಲಿಗೇ ಹೋಗಿಬಿಡಲೇ ಎಂಬ ವಿಚಾರ ಬಂದರೂ, ಮರ್ಯಾದೆಗೆ ಅಂಜಿ ತಳಮಳಿಸುತ್ತ ಸುಮ್ಮನೇ ನಿಂತೆ. ನನ್ನ ಹೆಂಡತಿಗೆ ಯಥಾಪ್ರಕಾರ ಅಸಮಾಧಾನ!

ಕೊನೆಗೂ ಬಂದ ಪುಣ್ಯಾತ್ಮ. ಕಾಲಲ್ಲಿ ನನ್ನವೇ ಚಪ್ಪಲಿಗಳು. ತರಕಾರಿ ಕೊಳ್ಳುವುದು ಮರೆತು ಚಪ್ಪಲಿ ವಿಷಯವೇ ಬಾಯಿಗೆ ಬಂತು. ಅದನ್ನು ಕೇಳಿ ಅವನ ಮುಖದಲ್ಲಿ ನಗೆ. ಕಳ್ಳ ಬಡ್ಡೀಮಗ, ನಗುತ್ತಾನೆ ಎಂದು ಮನಸ್ಸು ಕ್ರುದ್ಧವಾದರೂ ನಾನೂ ಸುಳ್ಳುಸುಳ್ಳೇ ನಕ್ಕೆ.

ಅವನು ಬಿಟ್ಟ ಚಪ್ಪಲಿಗಳಿಗೆ ನನ್ನ ಕಾಲು ಸೇರಿಸಿ, ನೆಪಕ್ಕೆ ಒಂದೆರಡು ಸೊಪ್ಪಿನ ಕಟ್ಟು ತೆಗೆದುಕೊಂಡು ದಿಗ್ವಿಜಯ ಸಾಧಿಸಿದವನಂತೆ ಒಳ ಬಂದೆ. ಕಂಪೌಂಡ್‌ನಲ್ಲೇ ನಡೆದಾಡಿ ಪರೀಕ್ಷಿಸಿದೆ. ಈಗ ಕಾಲು ಒತ್ತುತ್ತಿಲ್ಲವಾದರೂ, ಏಕೋ ಚಪ್ಪಲಿಗಳು ಕಾಲಲ್ಲಿ ನಿಲ್ಲುತ್ತಿಲ್ಲ ಅನಿಸಿತು.

ಇನ್ನೊಂದೆರಡು ಸುತ್ತು ಓಡಾಡಿ ನೋಡಿದೆ. ಹೌದು, ಚಪ್ಪಲಿಗಳು ಈಗ ಒತ್ತುತ್ತಿಲ್ಲ. ಆದರೆ, ಕಾಲಿನ ಅಂಕೆಗೂ ಸಿಕ್ಕುತ್ತಿಲ್ಲ. ಪಾದ ಮತ್ತು ಚಪ್ಪಲಿಯ ನಡುವೆ ಸಣ್ಣ ಗಾತ್ರದ ಮೊಬೈಲ್‌ ತೂರಿಸುವಷ್ಟು ಜಾಗ ಉಂಟಾಗಿದೆ!

ತರಕಾರಿಯವನ ಪಾದದ ಉದ್ದ ನನ್ನ ಪಾದದಷ್ಟೇ ಇದ್ದಿರಬಹುದು, ಆದರೆ ಗಾತ್ರ ನನಗಿಂತ ತೀರಾ ದೊಡ್ಡದಿರಬೇಕು. ಅದಕ್ಕೆಂದೇ ಚಪ್ಪಲಿ ಅವನ ಪಾದಕ್ಕೆ ರಿಶೇಪ್ ಆಗಿವೆ.

ಅರೆರೆ, ಘಾತವಾಯಿತು ಎಂದು ಮನಸ್ಸು ಹಳಹಳಿಸತೊಡಗಿತು. ಮೊದಲು ಚಪ್ಪಲಿ ನನ್ನ ಪಾದಕ್ಕಿಂತ ಚಿಕ್ಕದಿತ್ತು. ಈಗ ಅದಕ್ಕಿಂತ ದೊಡ್ಡದಾಗಿದೆ. ಇಂಥ ಅನಾಹುತಕಾರಿ ವಸ್ತುಗಳಿಗೆ ಸರ್ವೀಸಿಂಗ್ ಮಾಡಿಸುವ ಐಡಿಯಾ ಕೊಟ್ಟ ಧೂರ್ತ ಗೆಳೆಯನನ್ನು ಮನಸಾರೆ ಬೈದುಕೊಂಡೆ.

ಮರುದಿನವೂ ಗೇಟಿನ ಬಳಿ ಕಾಯ್ದು ನಿಂತೆ. ಎಂಟಾದ ನಂತರ ತರಕಾರಿಯವ ಬಂದ. ಚಪ್ಪಲಿ ಸರಿಯಾದವಾ ಸರ್ ಎಂದು ಕೇಳಿದ ಅವನಿಗೆ ನೇರ ಉತ್ತರ ಕೊಡದೇ, ಇವನ್ನು ನೀನೇ ಇಟ್ಟುಕೋ ಮಾರಾಯ, ನಾನು ಬೇರೆ ಜೊತೆ ತಗೊಂಡೆ ಅಂದೆ. ಆತ ಅಚ್ಚರಿಯಿಂದ ನೋಡುತ್ತಿದ್ದಂತೆ, ರಸ್ತೆಯ ಮಧ್ಯೆಯೇ ಚಪ್ಪಲಿ ಅವನ ಮುಂದೆ ಬಿಟ್ಟು, ಬರಿಗಾಲಲ್ಲೇ ಒಳಗೆ ಬಂದೆ. ನೋಡಿದರೆ, ನನ್ನ ಹೆಂಡತಿ ಮುಸಿಮುಸಿ ನಗುತ್ತಿದ್ದಾಳೆ.

ಏಕೋ!?

- ಚಾಮರಾಜ ಸವಡಿ

ಒಂದು ರೂಪಾಯಿ ಎಂದು ಹೀಗಳೆಯದಿರಿ

14 Nov 2008

10 ಪ್ರತಿಕ್ರಿಯೆ

ರಸ್ತೆಯಲ್ಲೇನೋ ಮಿಂಚುತ್ತದೆ.

ಅದು ಏನು ಎಂಬುದನ್ನು ಗುರುತಿಸಿದಾಗ ನಿಮ್ಮ ಕಣ್ಣುಗಳೂ ಮಿಂಚುತ್ತವೆ. ’ಅರೆ ವ್ಹಾ, ಒಂದು ರೂಪಾಯಿ!’ ಎಂದು ಮನಸ್ಸು ಅರಳುತ್ತದೆ. ಖುಷಿಯಿಂದ ನಾಣ್ಯವನ್ನು ಕೈಗೆತ್ತಿಕೊಂಡು ಪರೀಕ್ಷಿಸುತ್ತೀರಿ. ಅನುಮಾನವೇ ಇಲ್ಲ. ಅದು ಪಕ್ಕಾ ಒಂದು ರೂಪಾಯಿ.

ನೀವು ಎಷ್ಟೇ ಸಂಬಳ ಪಡೆಯುವವರಾಗಿರಿ, ಹೀಗೆ ಅನಾಯಾಸವಾಗಿ ದೊರೆತ ದುಡ್ಡು ತರುವ ಖುಷಿ ಗಳಿಕೆಯ ಖುಷಿಯನ್ನು ಮೀರಿಸುತ್ತದೆ. ಸಿಕ್ಕಿದ್ದು ಒಂದೇ ರೂಪಾಯಿಯಾದರೂ ಆ ಕ್ಷಣಗಳಲ್ಲಿ ಅದು ಕೊಡುವ ಖುಷಿಯೇ ವಿಚಿತ್ರ. ಅರೆ, ಒಂದು ರೂಪಾಯಿ ಬಗ್ಗೆ ಎಷ್ಟೊಂದು ಹೇಳ್ತಿದ್ದೀ ಎಂದು ಹೀಗಳೆಯದಿರಿ. ಅದಕ್ಕೆ ಅಪಾರ ಸಾಧ್ಯತೆಗಳಿವೆ.

ಹಳ್ಳಿಯ ಕಡೆ ಯಾವ ಅಂಗಡಿಗೇ ಹೋಗಿ, ಒಂದು ರೂಪಾಯಿಗೆ ನಿಮಗೆ ಅರ್ಧ ಕಪ್ ಚಹ ಖಂಡಿತ ಸಿಗುತ್ತದೆ. ಒಂದು ಮೆಣಸಿನಕಾಯಿ ಬಜ್ಜಿ ಗ್ಯಾರಂಟಿ. ಬೀಡಾ ಅಂಗಡಿಯಲ್ಲಿ ಒಂದು ರೂಪಾಯಿಗೆ ಸೊಗಸಾದ ತಾಂಬೂಲ (ಬೀಡಾ ಅಲ್ಲ!), ಅಥವಾ ಗುಟ್ಕಾ ಚೀಟು, ಅಥವಾ ಅಡಿಕೆ ಪುಡಿ ಚೀಟು ದೊರತೀತು. ಧೂಮಪಾನಿಗಳಾಗಿದ್ದರೆ ಎರಡು ಬೀಡಿ ಸಿಗುವುದಂತೂ ಖಾತರಿ. ಇವೇನೂ ಬೇಡ ಎಂದರೆ ಲವಂಗ, ಏಲಕ್ಕಿ ಅಥವಾ ಸೋಂಪು ಇರುವ ಪುಟ್ಟ ಚೀಟನ್ನಾದರೂ ತೆಗೆದುಕೊಳ್ಳಬಹುದು.

ಒಂದು ವೇಳೆ ನೀವು ಚಟಗಳೇ ಇಲ್ಲದ ಸಂಪನ್ನರಾಗಿದ್ದರೆ ಒಂದು ರೂಪಾಯಿಯನ್ನು ದಾರಿಯಲ್ಲಿ ಸಿಗುವ ಮುದಿ ಭಿಕ್ಷುಕಿಯ ತಟ್ಟೆಗೆ ಹಾಕಿದರೂ ಆಯಿತು. ಒಂದು ಕೃತಜ್ಞತೆಯ ದೃಷ್ಟಿ ನಿಮಗೆ ದಕ್ಕೀತು. ಒಂದು ರೂಪಾಯಿಗಿಂತ ಕಡಿಮೆ ಕಾಸು ಹಾಕೀರಿ ಜೋಕೆ. ನಿಮ್ಮ ಭಿಕ್ಷೆಯ ಜೊತೆಗೆ ಆಕೆ ನಿಮ್ಮನ್ನೂ ನಿಕೃಷ್ಟವಾಗಿ ಕಾಣುವ ಅಪಾಯವುಂಟು. ಒಂದು ವೇಳೆ ಆಕೆ ಸ್ವಾಭಿಮಾನಿಯಾಗಿದ್ದರೆ ನಿಮ್ಮ ಭಿಕ್ಷೆ ಮರಳಿ ನಿಮ್ಮ ಕೈ ಸೇರುವುದು ಖಂಡಿತ.

ಹೋಟೆಲ್-ಪಾನಂಗಡಿಗಳ ತಂಟೆಯೇ ಬೇಡ ಎಂದು ಕಿರಾಣಿ ಅಂಗಡಿ ಹೊಕ್ಕರೆ ನಿಮಗೆ ಒಂದು ರೂಪಾಯಿಯ ಅಪಾರ ಸಾಧ್ಯತೆಗಳು ಕಣ್ಣಿಗೆ ಬೀಳುತ್ತವೆ. ಹೊಕ್ಕಿದ್ದು ಚಿಕ್ಕ ಅಂಗಡಿಯಾಗಿದ್ದರೆ ಒಂದು ರೂಪಾಯಿಗೆ ನಾಲ್ಕು ಬಿಸ್ಕೀಟುಗಳ ಒಂದು ಪ್ಯಾಕ್ ಸಿಕ್ಕುತ್ತದೆ. ಇಲ್ಲದಿದ್ದರೆ ಒಂದು ಬನ್ನನ್ನಾದರೂ ತೆಗೆದುಕೊಳ್ಳಬಹುದು. ನೀವು ಆಸ್ತಿಕರಾಗಿದ್ದರೆ, ದೇವರಿಗೆ ಅರ್ಪಿಸಲೆಂದೇ ತಯಾರಾದ ಊದುಬತ್ತಿಯ ಪುಟ್ಟ ಕಟ್ಟು ಅಥವಾ ಕರ್ಪೂರ ಅಥವಾ ಹೂಬತ್ತಿಗಳಾದರೂ ಸಿಕ್ಕಾವು. ಧೂಪದ ಪುಟ್ಟ ಚೀಟಂತೂ ಖಂಡಿತ ಸಿಕ್ಕುತ್ತದೆ.

ಇವೇನೂ ಬೇಡ ಎಂದರೆ ಲೋಕಲ್ ಬ್ರ್ಯಾಂಡ್‌ನ ಎರಡು ಪುಟ್ಟ ಬೆಂಕಿಪೊಟ್ಟಣಗಳನ್ನು ಕೊಳ್ಳಬಹುದು. ಕಿವಿಯ ಗುಗ್ಗೆ ತೆಗೆಯಲು ನಾಲ್ಕು ಕಿವಿಗೊಳವೆಗಳಾದರೂ ಸಿಕ್ಕಾವು. ಒಂದು ರೂಪಾಯಿ ಕೊಟ್ಟು ಚಹಪುಡಿ ಅಥವಾ ಇನ್‌ಸ್ಟಂಟ್ ಕಾಫಿಪುಡಿ ಚೀಟನ್ನೊಯ್ದು ಬಟ್ಟಲು ತುಂಬ ಚಹ/ಕಾಫಿ ಮಾಡಿಕೊಂಡು ಕುಡಿಯಬಹುದು. ಇಲ್ಲವೆ ಬಬಲ್‌ಗಮ್ ಅಥವಾ ಮಿಂಟನ್ನಾದರೂ ಕೊಂಡು ಬಾಯಿಗೆ ಪರಿಮಳ ತಂದುಕೊಳ್ಳಬಹುದು.

ಇಲ್ಲ, ಒಂದು ರೂಪಾಯಿಯನ್ನು ಇನ್ನೂ ಭಿನ್ನವಾಗಿ ಬಳಸಬೇಕು ಎಂದೇನಾದರೂ ನೀವು ಯೋಚಿಸಿದರೆ ಒಂದು ಡಿಟರ್ಜೆಂಟ್ ಪೌಡರ್ ಚೀಟು ಖರೀದಿಸಿ, ಬಟ್ಟೆ ತೊಳೆದುಕೊಂಡು ಸೋಮಾರಿತನ ಕಡಿಮೆ ಮಾಡಿಕೊಳ್ಳಬಹುದು. ಇಲ್ಲವೇ ಒಂದು ಚೀಟು ಶ್ಯಾಂಪೂ ಕೊಂಡು ತಲೆ ಸ್ನಾನ ಮಾಡಿ ಹಗುರಾಗಬಹುದು. ಅವೆಲ್ಲ ಇವೆ ಎನ್ನುವುದಾದರೆ ಒಂದು ಚೀಟು ತೆಂಗಿನೆಣ್ಣೆ ಕೊಂಡು ಮೂರು ದಿನ ಮಜಬೂತಾಗಿ ಬಳಸಿ.

ಕಿರಾಣಿ ಅಂಗಡಿ ಬೇಡ ಎಂದಾದರೆ ಪಕ್ಕದ ತರಕಾರಿ ಅಂಗಡಿಗೆ ಬನ್ನಿ. ಕೊಂಚ ಚೌಕಾಸಿ ಮಾಡಿದರೆ ಅಥವಾ ತೀರ ಪರಿಚಯದವರಾಗಿದ್ದರೆ ಒಂದು ರೂಪಾಯಿಗೆ ಕೊತ್ತಂಬರಿ ಅಥವಾ ಕರಿಬೇವು ಅಥವಾ ಸೊಪ್ಪಿನ ಒಂದು ಸಣ್ಣ ಕಟ್ಟನ್ನು, ಮಸ್ತು ಮುಗುಳ್ನಗೆಯ ಜೊತೆ ಕೊಟ್ಟಾಳು ತರಕಾರಿ ಆಂಟಿ! ಅವೇನೂ ಬೇಡ ಎಂದರೆ ಸಾದಾ ಗಾತ್ರದ ನಿಂಬೆಹಣ್ಣಾದರೂ ಸಿಕ್ಕೀತು. ಎರಡು ದಿನಗಳಿಗಾಗುವಷ್ಟು ಹಸಿ ಮೆಣಸಿನಕಾಯಿಗಂತೂ ಮೋಸವಿಲ್ಲ. ಇಲದ್ದಿದರೆ ಒಂದು ಪುಟ್ಟ ಕ್ಯಾರೆಟ್ ಅಥವಾ ಸೌತೆ ಕಾಯಿ ಕೊಂಡು ಹಲ್ಲಿಗೆ ವ್ಯಾಯಾಮ ಮಾಡಿಕೊಳ್ಳಬಹುದು. ಒಂದು ಭರ್ಜರಿ ನುಗ್ಗೆಕಾಯಿ ಕೊಂಡು ರುಚಿಕಟ್ಟಾದ ಸಾರು ಮಾಡಿ ಉಂಡು ರಸಿಕತೆ ಹೆಚ್ಚಿಸಿಕೊಳ್ಳಬಹುದು.

ತಿನ್ನುವ ತೊಳೆಯುವ ರಗಳೆ ಬೇಡ ಎಂದಾದರೆ ಒಂದು ರೂಪಾಯಿ ಬಳಕೆಯ ಹೊಸ ಆಯಾಮಗಳು ತೆರೆದುಕೊಳ್ಳತೊಡಗುತ್ತವೆ. ಶಿವಾಜಿನಗರದಲ್ಲಿ ಸಿಟಿ ಬಸ್ ಹತ್ತಿ, ಕಂಡಕ್ಟರ್ ಕೈಗೆ ಒಂದ್ರುಪಾಯಿ ಇಟ್ಟು ಸುಮ್ಮನೇ ನಿಂತರೆ ಎಂ.ಜಿ. ರಸ್ತೆಯವರೆಗೆ ಅದು ಅವನನ್ನು ನಿಮ್ಮ ಋಣದಲ್ಲಿ ಇರಿಸುತ್ತದೆ. ಕಾಯಿನ್ ಬೂತಿಗೆ ತೂರಿಸಿ, ಮೊಬೈಲ್‌ ಅಥವಾ ಲ್ಯಾಂಡ್‌ಲೈನ್‌ ಮೂಲಕ ಮೆಚ್ಚಿದ ಜೀವಿಯೊಂದಿಗೆ ಮಾತಿನಲ್ಲೇ ಕಷ್ಟಸುಖ ಹಂಚಿಕೊಳ್ಳಬಹುದು. ಪೆಟ್ರೋಲ್ ಬಂಕ್‌ನ ಗಾಳಿಯಂತ್ರದವ ಒಂದು ರೂಪಾಯಿಗೆ ಟುಣ್ ಟುಣ್ ಎನ್ನುವ ಹಾಗೆ ನಿಮ್ಮ ವಾಹನದ ಚಕ್ರಗಳಿಗೆ ಗಾಳಿ ತುಂಬಿ ಕೊಟ್ಟಾನು. ತೂಕದ ಯಂತ್ರದ ಬಾಯಿಗೆ ಹಾಕಿದರೆ ಅದು ನಿಮ್ಮ ಶರೀರದ (ವ್ಯಕ್ತಿತ್ವದ್ದಲ್ಲ!) ತೂಕವನ್ನು ತಿಳಿಸೀತು.

ಕೆ.ಆರ್. ಮಾರ್ಕೆಟ್‌ಗೆ ಹೋದರೆ ರೂಪಾಯಿಗೊಂದು ಪೆನ್ನು ಸಿಗುತ್ತದೆ. ಹೇರ್‌ಬ್ಯಾಂಡ್ ದೊರೆಯುತ್ತದೆ. ಬೆಂಗಳೂರಿನ ಯಾವುದೇ ಝೆರಾಕ್ಸ್ ಅಂಗಡಿಗೆ ಹೋದರೂ ಒಂದು ನೆರಳಚ್ಚು ಪ್ರತಿ ಮಾಡಿಕೊಡುತ್ತಾರೆ. ಮಲ್ಲೇಶ್ವರಂನಲ್ಲಾದರೆ ಎರಡು ಪ್ರತಿ ದೊರೆತಾವು. ಇವೇನೂ ಬೇಡ ಎಂದಾದರೆ, ನ್ಯೂಸ್ ಸ್ಟಾಲ್‌ಗಳಿಗೆ ಹೋಗಿ ಲಕ್ಷಣವಾಗಿ ಒಂದು ಸಂಜೆಪತ್ರಿಕೆ ಕೊಂಡು ನಿಮ್ಮ ಜ್ಞಾನ ದಿಗಂತವನ್ನು ನಗರದ ಮಿತಿಯಾಚೆಗೆ ವಿಸ್ತರಿಸಿಕೊಳ್ಳಬಹುದು.

ಇನ್ನು ಮುಂದೆ ಒಂದು ರೂಪಾಯಿ ಎಂದರೆ ’ಛೀ, ಚಿಲ್ಲರೆ’ ಎಂಬ ಹೀಗಳಿಕೆ ಬೇಡ. ಏಕೆಂದರೆ ಅದಕ್ಕೆ ನೂರಾರು ಸಾಧ್ಯತೆಗಳಿವೆ,
ಈ ಬದುಕಿಗೆ ಇರುವಂತೆ!

- ಚಾಮರಾಜ ಸವಡಿ

ನಮ್ಮದಲ್ಲದ ಊರಿನಲ್ಲಿ ನೆಮ್ಮದಿ ಹುಡುಕುತ್ತ...

3 Nov 2008

5 ಪ್ರತಿಕ್ರಿಯೆ
ಬೆಂಗಳೂರು ವಿನಾ ಕಾರಣ ಇಷ್ಟವಾಗುತ್ತದೆ. ಒಮ್ಮೊಮ್ಮೆ ವಿನಾಕಾರಣ ಬೇಸರವನ್ನೂ ಹುಟ್ಟಿಸುತ್ತದೆ.

ದೂರದ ಊರಿನಿಂದ ರಾತ್ರಿ ಬಸ್ಸಿಗೆ ಬಂದು, ಬೆಳಿಗ್ಗೆ ಬಸ್ ನಿಲ್ದಾಣದಲ್ಲಿ ಇಳಿದಾಗ ಕಾಣುವ ಬೆಂಗಳೂರು ಮೊದಲು ಹುಟ್ಟಿಸುವುದು ದಿಗಿಲನ್ನು. ಸಿಟಿ ಬಸ್ ಹುಡುಕುವುದರೊಳಗೆ ಬಿಟ್ಟು ಬಂದ ಊರು ನೆನಪಾಗುತ್ತಿರುತ್ತದೆ. ಗೆಳೆಯನ ರೂಮು ಸೇರಿ, ತಾತ್ಕಾಲಿಕ ವಸತಿ ಕಂಡುಕೊಂಡು, ದರ್ಶಿನಿಯಲ್ಲಿ ಪಲಾವ್ ತಿನ್ನುವಾಗ ಅಮ್ಮ ನೆನಪಾಗುತ್ತಾಳೆ. ಆಕೆಯ ಕಮ್ಮನೆಯ ಅಡುಗೆ ನೆನಪಾಗುತ್ತದೆ.

ಮುಂದೆ ಕೆಲಸದ ಬೇಟೆ ಶುರು. ಹೆಜ್ಜೆ ಹೆಜ್ಜೆಗೂ ಬೆಂಗಳೂರು ತನ್ನ ಬಿಗು, ಬಿನ್ನಾಣ, ಕುರೂಪ ಮತ್ತು ಸೊಗಸನ್ನು ತೋರುತ್ತಲೇ ಸಾಗುತ್ತದೆ. ನಾಲ್ಕೈದು ಕಡೆ ’ಕೆಲಸ ಇಲ್ಲ’ ಅನ್ನಿಸಿಕೊಂಡು, ರೂಮು ಸೇರಿ, ಊಟ ಮಾಡದೇ ಅಂಗಾತವಾದಾಗ ನಿರಾಶೆ ಹುಟ್ಟಿಸುವ ನೂರೆಂಟು ನೆನಪುಗಳು. ಈಗಲೇ ಚೀಲ ತುಂಬಿಕೊಂಡು ವಾಪಸ್ ಊರಿಗೆ ಹೋಗಿಬಿಡಲೇ ಎಂಬ ಭಾವನೆ ಎದೆ ತುಂಬಿದರೂ, ಅಲ್ಲಿ ನಿರೀಕ್ಷೆಯಿಟ್ಟುಕೊಂಡು ಕಾಯುತ್ತಿರುವ ಅಪ್ಪ, ಅಮ್ಮ, ತಂಗಿ, ತಮ್ಮ ನೆನಪಾದಾಗ ಮನಸ್ಸು ನಿಡುಸುಯ್ಯುತ್ತದೆ.

ಆದರೆ ಬೆಂಗಳೂರು ಬಲು ಬೇಗ ಪರಿಚಯದ ಹುಡುಗಿಯಂತಾಗಿಬಿಡುತ್ತದೆ. ವಾರದೊಳಗೆ ಸಿಟಿ ಬಸ್‌ಗಳ ನಂಬರುಗಳು ಬಾಯಿಪಾಠವಾಗುತ್ತವೆ. ಹತ್ತು ದಿನದೊಳಗೆ ಮೊದಲ ಕೆಲಸ ಸಿಕ್ಕುಬಿಡುತ್ತದೆ. ಸಂಜೆ ಸಂಭ್ರಮದಿಂದ ಫೋನ್ ಮಾಡಿದಾಗ ಅತ್ತ ಅಪ್ಪ ಹರ್ಷ ಪಡುತ್ತಾನೆ. ಅಮ್ಮ ಸಂತಸದಿಂದ ಕಣ್ಣೀರಿಡುತ್ತಾಳೆ. ತಮ್ಮ, ತಂಗಿಯರು ಯಥಾಪ್ರಕಾರ ’ಯಾವಾಗ ಬರುತ್ತಿ? ಏನು ತರುತ್ತಿ?’ ಎಂದು ಕೇಳುತ್ತಾರೆ. ಮೊದಲ ಬಾರಿ ಬೆಂಗಳೂರು ಅಪಾರ ಭರವಸೆ ಹುಟ್ಟಿಸತೊಡಗುತ್ತದೆ.

ಕೆಲಸದ ಮೊದಲ ದಿನದ ಸಡಗರ ಏನು ಹೇಳುವುದು! ಗೆಳೆಯ ತನ್ನ ಅತ್ಯುತ್ತಮ ಅಂಗಿಯನ್ನು ಕೊಡುತ್ತಾನೆ. ಕನ್ನಡಿ ಎರಡು ನಿಮಿಷ ಹೆಚ್ಚು ಕೇಳುತ್ತದೆ. ಮೂಲೆಯ ತಿರುವಿನಲ್ಲಿ ಕೂತ ಹುಡುಗ ಎರಡೇ ರೂಪಾಯಿಗಳಿಗೆ ಪಳಪಳ ಹೊಳೆಯುವಂತೆ ಷೂಗಳನ್ನು ಉಜ್ಜಿಕೊಡುತ್ತಾನೆ. ಅವತ್ತು ಸಿಟಿ ಬಸ್‌ನ ಸಂದಣಿ ಬೇಸರ ತರುವುದಿಲ್ಲ. ಕಂಡಕ್ಟರ್ ಟಿಕೆಟ್ ಹಿಂದೆ ಬರೆದುಕೊಟ್ಟ ಚಿಲ್ಲರೆ ಕೇಳುವುದು ನೆನಪಾಗುವುದಿಲ್ಲ. ಆಫೀಸ್ ಹತ್ತಿರ ಇಳಿದವನ ಮನಸ್ಸಿನಲ್ಲಿ ಇಡೀ ಬೆಂಗಳೂರನ್ನೇ ಗೆದ್ದ ಉತ್ಸಾಹವಿರುತ್ತದೆ.

ಹೊಸ ಆಫೀಸ್. ಹೊಸ ವಾತಾವರಣ. ಗೇಟಿನಲ್ಲಿ ನಿಂತ ಸೆಕ್ಯುರಿಟಿಯವನು ಸಂದರ್ಶನಕ್ಕೆ ಬಂದಾಗ ಇದ್ದಷ್ಟು ಒರಟಾಗಿರದೇ ಮುಗುಳ್ನಗುತ್ತಾನೆ. ನೇಮಕಾತಿ ಪತ್ರವನ್ನು ಗಮನವಿಟ್ಟು ನೋಡಿದ ರಿಸೆಪ್ಷನಿಸ್ಟ್ ತುಟಿಯನ್ನು ಚೂರೇ ಚೂರು ಅರಳಿಸಿ ಬಾಸ್ ಹತ್ತಿರ ಕಳಿಸುತ್ತಾಳೆ. ಕ್ಷಣಕ್ಷಣಕ್ಕೂ ಧನ್ಯತೆ, ಅಳುಕು ಅನುಭವಿಸುತ್ತಲೇ ಕೆಲಸದ ಮೊದಲ ದಿನ ಮುಗಿಯುತ್ತದೆ. ರಾತ್ರಿ ಗೆಳೆಯನ ಮುಂದೆ ಹೊಸ ಆಫೀಸಿನ ವರ್ಣನೆ. ಅಲ್ಲಿಯ ಜನಗಳ ಬಗ್ಗೆ ವಿವರಣೆ. ಮರುದಿನ ಬೇಗ ಹೋಗಬೇಕೆನ್ನುವ ಉತ್ಸಾಹ. ರಾತ್ರಿ ನಿದ್ದೆ ಕೂಡ ಸರಿಯಾಗಿ ಬರುವುದಿಲ್ಲ. ಎಂಥದೋ ಧನ್ಯತೆ ಮನಸ್ಸನ್ನು ಎಚ್ಚರವಾಗಿಡುತ್ತದೆ.

ಕೆಲಸದ ಮೊದಲ ದಿನಗಳು ಹೀಗೇ ಕಳೆಯುತ್ತವೆ. ಕ್ರಮೇಣ ಗೆಳೆಯನ ರೂಮು ಆಫೀಸಿನಿಂದ ತುಂಬ ದೂರ ಇದೆ ಅನ್ನಿಸತೊಡಗುತ್ತದೆ. ’ಇಲ್ಲೇ ಹತ್ತಿರದಲ್ಲಿ ಒಂದು ಫಸ್ಟ್‌ಕ್ಲಾಸ್ ರೂಮಿದೆ ಸಾರ್. ಟ್ವೆಂಟಿ ಫೋರ್ ಅವರ್ಸೂ ನೀರು ಬರುತ್ತದೆ. ಓನರ್ ಕಿರಿಕಿರಿಯಿಲ್ಲ. ಬಾಡಿಗೆಯೂ ಕಡಿಮೆ...’ ಎಂದು ಆಫೀಸ್ ಹುಡುಗ ಆಮಿಷ ಹುಟ್ಟಿಸುತ್ತಾನೆ. ಮೊದಲ ಸಂಬಳ ಕೈಗೆ ಬರುವ ಹೊತ್ತಿಗೆ ಸ್ವಂತ ರೂಮು ಮಾಡಿಕೊಳ್ಳುವ ತವಕ.

ಬೆಂಗಳೂರು ಕನಸು ಹುಟ್ಟಿಸುವುದೇ ಹೀಗೆ. ಕೆಲಸವಾಯಿತು. ಸ್ವಂತ ರೂಮಾಯಿತು. ಬೆಳಿಗ್ಗೆ ರೂಮಿನಲ್ಲೇ ಬಿಸಿ ಬಿಸಿ ಕಾಫಿ ಮಾಡಿಕೊಂಡು ಪತ್ರಿಕೆ ಓದುತ್ತ ಕಾಫಿ ಕುಡಿಯುವಾಗ ಜೀವನದ ಧನ್ಯತೆ ಬೆಚ್ಚನೆಯ ಹನಿಗಳಾಗಿ ಮೈ ಮನಸ್ಸುಗಳನ್ನು ಅರಳಿಸುತ್ತದೆ. ಸ್ನಾನ ಮಾಡಿ ತಯಾರಾಗಿ, ಬಾಗಿಲಿಗೆ ಬೀಗ ಹಾಕಿಕೊಂಡು ಆಫೀಸಿಗೆ ಹೋಗುವಾಗ. ’ನಾನೂ ಏನಾದರೂ ಮಾಡಬಲ್ಲೆ’ ಎಂಬ ಆತ್ಮವಿಶ್ವಾಸ ಹಾಕುವ ಪ್ರತಿಯೊಂದು ಹೆಜ್ಜೆಯಲ್ಲೂ ಎದ್ದು ಕಾಣುತ್ತದೆ.

ದಿನಗಳೆದಂತೆ ನಾವು ಬೆಂಗಳೂರಿನ ತಾಪತ್ರಯಗಳನ್ನು ಸಹಿಸಿಕೊಳ್ಳುತ್ತ, ಅದು ನೀಡುವ ಅವಕಾಶಗಳಿಗೆ ಮುಖ ಒಡ್ಡುತ್ತ, ರಜೆಗೊಮ್ಮೆ ಮಾತ್ರ ಊರಿಗೆ ಹೋಗುತ್ತ, ಕಾಫಿ ತಡವಾದರೆ ರೇಗುತ್ತ, ನೀರು ಬಾರದಿದ್ದರೆ ಶಪಿಸುತ್ತ, ಕೇಬಲ್‌ನವನು ಏಕಾಏಕಿ ರೇಟ್ ಹೆಚ್ಚಿಸಿದಾಗ ಪ್ರತಿಭಟಿಸದೇ ಕಾಸು ಕೊಡುತ್ತ, ತಳ್ಳು ಗಾಡಿಯಲ್ಲಿ ತರಕಾರಿ ಮಾರುವವನ ಹತ್ತಿರ ಸೊಪ್ಪಿಗಾಗಿ ಚೌಕಾಸಿ ಮಾಡತೊಡಗುತ್ತೇವೆ.

ಕ್ರಮೇಣ ಬೆಂಗಳೂರಿನವರೇ ಆಗಿಬಿಡುತ್ತೇವೆ.

- ಚಾಮರಾಜ ಸವಡಿ
(ಬೆಂಗಳೂರಿನಲ್ಲಿ ಮೊದಲ ಬಾರಿ ಕೆಲಸ ಗಿಟ್ಟಿಸಿದಾಗಿನ ಬರವಣಿಗೆ. ಪ್ರಜಾವಾಣಿಯಲ್ಲಿ ಅಚ್ಚಾಗಿತ್ತು.)