ಇಷ್ಟೇ ಸಾಕೆಂದಿದ್ದೆಯಲ್ಲೋ...

29 Oct 2009

6 ಪ್ರತಿಕ್ರಿಯೆ
‘ಇಷ್ಟಾದರೆ ಸಾಕು’ ಅಂತ ಎಷ್ಟೋ ಸಲ ಅಂದುಕೊಂಡಿರುತ್ತೇವೆ. ಒಂದು ಕೆಲಸ; ಬಾಡಿಗೆಯದಾದರೂ ಸರಿ, ಒಂದು ಚೆನ್ನಾಗಿರುವ ಮನೆ; ಖರ್ಚಿಗೆ ಒಂದಿಷ್ಟು ಹಣ; ಹರಟೆ ಹೊಡೆಯಲು ಒಂದಿಷ್ಟು ಸಮಾನ ಮನಸ್ಕರು- ಹೀಗೆ ಸಣ್ಣಪುಟ್ಟ ಅಗತ್ಯಗಳು ಇದ್ದರೆ ಸಾಕು ಅಂತ ನಾವೆಲ್ಲ ಎಷ್ಟು ಸಾರಿ ಅಂದುಕೊಂಡಿರಲ್ಲ?

ಎಷ್ಟೋ ಸಾರಿ ನಾವಂದುಕೊಂಡ ಆ ‘ಇಷ್ಟೇ ಸಾಕು’ ಎಂಬ ಅಗತ್ಯಗಳು ಈಡೇರಿಬಿಡುತ್ತವೆ. ಮಾಡಲೊಂದು ಕೆಲಸ, ಪರವಾಗಿಲ್ಲ ಎಂಬ ಸಂಬಳ, ಇರಲೊಂದು ಗೂಡು, ಹಾಡಲೊಂದು ಹಾಡೂ ದಕ್ಕಿಬಿಡುತ್ತವೆ. ಒಂದಿಷ್ಟು ದಿನಗಳ ಕಾಲ ಆ ನೆಮ್ಮದಿ ನಮ್ಮನ್ನು ಸಂಭ್ರಮದಲ್ಲಿಟ್ಟಿರುತ್ತದೆ.

ಆದರೆ, ಅದು ಕೇವಲ ಒಂದಿಷ್ಟು ದಿನಗಳ ಕಾಲ ಮಾತ್ರ.

ಸಣ್ಣಗೇ ಗೊಣಗೊಂದು ಶುರುವಾಗುತ್ತದೆ. ಇನ್ನಷ್ಟು ಇದ್ದರೆ ಚೆನ್ನಿತ್ತು ಎಂಬ ಹಳಹಳಿ. ಅದೊಂದು ಆಗಿಬಿಟ್ಟಿದ್ದರೆ ಸಾಕಿತ್ತೇನೋ ಎಂಬ ಕನವರಿಕೆ. ಓರಗೆಯವರ ಸಾಧನೆ ತರುವ ಹೊಟ್ಟೆಕಿಚ್ಚು. ಅಂದುಕೊಂಡದ್ದನ್ನು ಮಾಡಲಾಗದ ನಮ್ಮದೇ ದೌರ್ಬಲ್ಯ. ಇವೆಲ್ಲ ಸೇರಿಕೊಂಡು ಆ ನೆಮ್ಮದಿಯನ್ನು ಬಲುಬೇಗ ಹಾಳು ಮಾಡುತ್ತವೆ. ಇಷ್ಟು ಸಾಕಿತ್ತು ಎಂಬ ಜಾಗದಲ್ಲೀಗ ಇನ್ನಷ್ಟು ಬೇಕು ಎಂಬ ಹಂಬಲ ಸೇರಿಕೊಂಡು ಮನಸ್ಸು ಮತ್ತೆ ನರಳತೊಡಗುತ್ತದೆ. ಇದೊಂದು ಚಕ್ರ. ಶುರುವಾದ ಜಾಗಕ್ಕೇ ಪದೆ ಪದೆ ತಲುಪಿಸುವ ಜೀವನಚಕ್ರ. 

ಎಲ್ಲರೂ ಈ ಚಕ್ರದಲ್ಲಿ ಸುತ್ತು ಹೊಡೆಯುವವರೇ. ನಾವ್ಯಾರೂ ಚಕ್ರದಿಂದ ಇಳಿದವರಲ್ಲ. ಮೇಲೇರುವ ಸಂಭ್ರಮದಲ್ಲಿ ಮತ್ತೆ ಇಳಿಯುವುದನ್ನು ಮರೆತವರೇ. ‘ಅರೇ, ಚಕ್ರ ಹೊರಟ ಜಾಗಕ್ಕೇ ಬಂತಲ್ಲ’ ಎಂದು ಕಳವಳಪಟ್ಟವರೇ. ಈ ಚಕ್ರದ ಹಂಗಿನಿಂದ ಬಿಡಿಸಿಕೊಳ್ಳುವುದು ಹೇಗೆಂಬ ಗೊಂದಲಕ್ಕೆ ಈಡಾದವರೇ. ಪ್ರತಿ ಬಾರಿ ಚಕ್ರ ಒಂದು ಸುತ್ತು ತಿರುಗಿದಾಗೊಮ್ಮೆ ನಮ್ಮ ಆದ್ಯತೆಗಳು ಬದಲಾಗುತ್ತವೆ. ಹಳೆಯದರ ಜಾಗದಲ್ಲಿ ಹೊಸತು ಬಂದಿರುತ್ತದೆ. ಹಳೆಯ ನೆಮ್ಮದಿಯ ಜಾಗದಲ್ಲಿ ಹೊಸ ಕನವರಿಕೆ, ಕಳವಳ.

ಏಕೆ ಹೀಗಾಗುತ್ತದೆ?

ಮನುಷ್ಯ ಇರುವುದೇ ಹೀಗೆ. ಕವಿ ಗೋಪಾಲಕೃಷ್ಣ ಅಡಿಗರು ಹಾಡಿದಂತೆ ನಾವು ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವವರೇ. ಹೀಗಾಗಿ, ಕನವರಿಕೆ, ಕಳವಳ, ಕನಸು, ಕಸಿವಿಸಿ- ಎಲ್ಲವೂ ಹಾಗೇ ಇರುತ್ತವೆ. ಆದ್ಯತೆಗಳು ಬದಲಾಗಬಹುದು, ಆದರೆ, ಅದಕ್ಕೆ ಕಾರಣವಾಗುವ ನಮ್ಮ ದೌರ್ಬಲ್ಯಗಳನ್ನು ನಾವು ಗೆಲ್ಲುವುದಿಲ್ಲ. ಇನ್ನೊಂದಿಷ್ಟಿದ್ದರೆ ಚೆನ್ನಿತ್ತು ಎಂಬ ಗೊಣಗನ್ನು ಬಿಡುವುದಿಲ್ಲ. 

ಎಷ್ಟು ವಿಚಿತ್ರವಲ್ಲವಾ? ಇಷ್ಟೇ ಸಾಕಿತ್ತು ಎಂಬ ನಮ್ಮ ಕನಸು ಈಡೇರಿದಾಗಿನ ಸಂಭ್ರಮವನ್ನು, ಅದು ತಂದ ನೆಮ್ಮದಿಯನ್ನು ಎಷ್ಟು ಬೇಗ ಮರೆತುಬಿಡುತ್ತೇವೆ! ಯಾವುದಕ್ಕಾಗಿ ಆ ಪರಿ ಹಂಬಲಿಸಿದ್ದೆವೋ, ಅದು ಈಡೇರಿದಾಗ ಅದನ್ನು ಆಸ್ವಾದಿಸುವುದನ್ನು ಬಿಟ್ಟು ಇನ್ಯಾವುದಕ್ಕೋ ಕೈ ಚಾಚುತ್ತೇವೆ. ಅದನ್ನು ಈಡೇರಿಸಿಕೊಳ್ಳಲು ಹೊರಡುತ್ತೇವೆ. ಈಡೇರಿದ ಒಂದು ಕನಸನ್ನು ಮನಸಾರೆ ಅನುಭವಿಸುವುದನ್ನು ಬಿಟ್ಟು ಹೊಸ ಕನಸನ್ನು ಕಾಣತೊಡಗುತ್ತೇವೆ. ರಾಜಾ ತ್ರಿವಿಕ್ರಮನಿಗೆ ಗಂಟುಬಿದ್ದ ಬೇತಾಳದಂತೆ, ಏರಲು ಹೊಸ ಹೆಗಲು ಹುಡುಕತೊಡಗುತ್ತೇವೆ. ನೆಮ್ಮದಿ ದೂರವಾಗುವುದೇ ಇಂಥ ಮನಃಸ್ಥಿತಿಯಿಂದ. 

ಏನು ಮಾಡಬೇಕು ಹಾಗಾದರೆ?

‘ನಿಮ್ಮಲ್ಲಿರುವ ಉತ್ತಮವಾದುದನ್ನು ನೆನಪಿಸಿಕೊಳ್ಳಿ’ ಎನ್ನುತ್ತಾರೆ ತಿಳಿದವರು. ನಿಮ್ಮ ಆರೋಗ್ಯ, ನಿಮ್ಮ ಕೆಲಸ, ನಿಮ್ಮ ಕನಸು, ನಿಮಗೆ ಈಗಾಗಲೇ ದಕ್ಕಿರುವ ನೆಮ್ಮದಿಯನ್ನು ನೆನಪಿಸಿಕೊಳ್ಳಿ. ಇದಕ್ಕಾಗಿ ತಾನೇ ನೀವು ಅಷ್ಟೊಂದು ಹಂಬಲಿಸಿದ್ದು? ಪೂರ್ತಿಯಾಗಿ ಅಲ್ಲದಿದ್ದರೂ ತಕ್ಕಮಟ್ಟಿಗಾದರೂ ನಿಮ್ಮ ಒಂದಿಷ್ಟು ಕನಸುಗಳು ಈಡೇರಿವೆ. ಅದಕ್ಕಾಗಿ ಕೃತಜ್ಞರಾಗಿರಿ. ಹಳೆಯ ಕನಸುಗಳು ಈಡೇರಿದ ನೆಮ್ಮದಿಯನ್ನು ಅನುಭವಿಸಿ. ಅವುಗಳನ್ನು ಪಡೆಯಲು ಪಟ್ಟ ಕಷ್ಟವನ್ನು, ಕಲಿತ ಪಾಠಗಳನ್ನು ಮನನ ಮಾಡಿಕೊಳ್ಳಿ. ಇಷ್ಟಾದ ನಂತರವಷ್ಟೇ ಹೊಸ ಕನಸುಗಳನ್ನು ಕಾಣಲು ಶುರು ಮಾಡಿ ಅಂತಾರೆ ಬಲ್ಲವರು. 

ನಮ್ಮೊಳಗೇ ಇಲ್ಲದ ನೆಮ್ಮದಿ ಹೊರಗೂ ಇರದು.

ಹೌದು. ನೆಮ್ಮದಿ ಎಂಬುದು ನಮ್ಮೊಳಗೇ ಇರುವಂಥದು. ಬದುಕು ಇರುವುದು ಕೇವಲ ಕನಸು ಕಾಣುವುದರಲ್ಲಿ ಮತ್ತು ಕಂಡ ಕನಸನ್ನು ನನಸಾಗಿಸುವುದರಲ್ಲಿ ಮಾತ್ರವಲ್ಲ; ಈಡೇರಿದ ಕನಸನ್ನು ಮನಸಾರೆ ಅನುಭವಿಸುವುದರಲ್ಲಿಯೂ ಇದೆ. ಅಡುಗೆ ಮಾಡುವುದರಲ್ಲಿ ತೋರುವ ಆಸಕ್ತಿಯನ್ನು ಊಟ ಮಾಡುವುದರಲ್ಲಿಯೂ ತೋರಬೇಕು. ಉಂಡಿದ್ದನ್ನು ಜೀರ್ಣಿಸಿಕೊಂಡ ನಂತರವಷ್ಟೇ ಹೊಸ ಹಸಿವು, ಹೊಸ ಅಡುಗೆ. ಮಾಡಿದ ಅಡುಗೆ ಉಣ್ಣದೇ ಹೊಸ ಅಡುಗೆ ಶುರು ಮಾಡಲು ಹೊರಟಾಗಲೇ ಗೊಂದಲಗಳು ಶುರುವಾಗುವುದು. 

ನಾವೆಲ್ಲ ಚಕ್ರತೊಟ್ಟಿಲಲ್ಲಿ ಕೂತವರೇ. ಚಕ್ರ ಕೆಳಗಿದ್ದಾಗ ಮೇಲೇರಲಿ ಎಂದು, ಅದು ಮೇಲೇರಿದಾಗ ಕೆಳಗೆ ಬರಲಿ ಎಂದು ಹಂಬಲಿಸುತ್ತ, ಚಕ್ರತೊಟ್ಟಿಲಿನ ಸೊಗಸು ಆಸ್ವಾದಿಸುವುದನ್ನೇ ಮರೆತುಬಿಡುತ್ತೇವೆ. ಚಕ್ರ ಕೆಳಗಿದ್ದಾಗ, ಆ ನೋಟವನ್ನು ಆನಂದಿಸಿ. ಮೇಲೆ ಹೋದಾಗ, ಅಲ್ಲಿನ ರಮ್ಯತೆಯನ್ನು ಅನುಭವಿಸಿ. ಆಗ ಕಳವಳ, ಕನವರಿಕೆ, ಕಸಿವಿಸಿ ಯಾವವೂ ನಮ್ಮನ್ನು ಕಾಡವು.  

ಬದುಕಿನ ಏರಿಳಿತ ಆಗ ಖುಷಿ ಕೊಡುವ ಆಟವಾಗುತ್ತದೆ.  

- ಚಾಮರಾಜ ಸವಡಿ

ಕೊಪ್ಪಳದಲ್ಲೊಂದು ಕರಡೀಪುರ

20 Oct 2009

6 ಪ್ರತಿಕ್ರಿಯೆ
(ಕೊಪ್ಪಳದ ಬೆಟ್ಟಗಳ ತಡಿಯ ಊರು ಮಂಗಳಾಪುರದ ಮನೆಮನೆಗಳಲ್ಲಿ ಕರಡಿಗಳನ್ನು ಸಾಕುತ್ತಾರೆ. ಅವನ್ನು ಊರೂರಿಗೆ ಕರೆದುಕೊಂಡು ಹೋಗಿ ಮಕ್ಕಳ ಮುಂದೆ ಪ್ರದರ್ಶಿಸಿ ಒಂದಷ್ಟು ಚಿಲ್ಲರೆ ಹಣ ಸಂಪಾದಿಸುತ್ತಾರೆ. ತಲೆಮಾರುಗಳಿಂದ ನಡೆದಿರುವ ಈ ವೃತ್ತಿಯ ಮೇಲೆ ಈಗ ಅರಣ್ಯ ಇಲಾಖೆಯ ಕೆಂಗಣ್ಣು, ಪ್ರಾಣಿದಯಾವಾದಿಗಳ ಮುನಿಸು. ಕಾಡನ್ನು ನಾಶ ಮಾಡಿದ ನಿಯಮಗಳೇ ಈಗ ನಾಡಿನಲ್ಲಿರುವ ಬಡಪ್ರಾಣಿಗಳ ಬೆನ್ನು ಬ್ದಿದಿವೆ. ವಿದೇಶಗಳಲ್ಲಿ ಮನೆಯೊಳಗೆ ಹುಲಿ ಸಾಕುವುದನ್ನು ಕಣ್ಣರಳಿಸಿ ನೋಡುವ ನಾವು ಇಂಥ ಪರಂಪರೆಯನ್ನು ಬೆಂಬಲಿಸಿದರೆ ಕಾಡು ಮತ್ತು ಕಾಡುಪ್ರಾಣಿಗಳೆರಡೂ ಉಳಿದಾವು...)

‘ನಾನು ಹೇಳುವವರೆಗೆ ಯಾವ ಕಾರಣಕ್ಕೂ ಕ್ಯಾಮೆರಾ ಹೊರತೆಗೆಯಬಾರದು’ ಎಂದು ತಾಕೀತು ಮಾಡಿಯೇ ಛಾಯಾಗ್ರಾಹಕ ಮಿತ್ರ ಪ್ರಕಾಶ ಕಂದಕೂರರನ್ನು ಜತೆಗೆ ಕರೆದುಕೊಂಡು ಹೋಗಿದ್ದೆ.


ನಾವು ಅಲ್ಲಿಗೆ ಹೋದಾಗ ಭಾರಿ ಗಾತ್ರದ ಹೆಣ್ಣು ಕರಡಿಯೊಂದು ಆಸ್ಥೆಯಿಂದ ಬೆರಳುಗಳನ್ನು ಚೀಪುತ್ತ ಅಲ್ಲೇ ಬಾಗಿಲ ಎದುರೇ ಕೂತಿತ್ತು. ಪಕ್ಕದಲ್ಲೇ ನೇತಾಡುತ್ತಿದ್ದ ಸೀರೆಯ ತೊಟ್ಟಿಲಲ್ಲಿ ಮಗುವೊಂದು ತನ್ನ ಬೆರಳು ಚೀಪುತ್ತ ಆಟವಾಡುತ್ತಿತ್ತು. ಈ ವಿಚಿತ್ರ ದೃಶ್ಯವನ್ನು ನಾವು ಅವಾಕ್ಕಾಗಿ ನೋಡುತ್ತಿದ್ದರೆ, ‘ಯಾರಿವರು ಹೊಸಬರು?’ ಎಂಬಂತೆ ಕರಡಿ ಮಾಲೀಕ ನಮ್ಮನ್ನು ಅನುಮಾನದಿಂದ ದಿಟ್ಟಿಸುತ್ತಿದ್ದ. 

ನಮ್ಮ ರೋಮಾಂಚಕ ಯಾತ್ರೆ ಶುರುವಾಗಿದ್ದು ಹೀಗೆ.
 

ಅದು ಮಂಗಳಾಪುರ ಎಂಬ ಸಣ್ಣ ಹಳ್ಳಿ. ಕೊಪ್ಪಳದಿಂದ ಬರೀ ಮೂರು ಕಿಲೊಮೀಟರ್ ದೂರ. ಕೊಪ್ಪಳ-ಗದಗ್‌ ರಸ್ತೆಯಲ್ಲಿ ಹಿರೆಹಳ್ಳ ಸೇತುವೆ ಬರುವುದಕ್ಕೂ ಮುನ್ನ ಎಡಕ್ಕೆ ತಿರುಗಿಕೊಂಡು ಕೊಂಚ ಮುಂದೆ ಹೋದರೆ ಹಚ್ಚಹಸಿರು ಹೊಲಗಳು ಗಮನ ಸೆಳೆಯುತ್ತವೆ. ‘ಕಲ್ಲು ಬೆಟ್ಟಗಳ ಪಕ್ಕದಲ್ಲಿ ಇದೆಂಥ ಹಸಿರು ಮಾರಾಯ’ ಎಂದು ಅಚ್ಚರಿಪಡುತ್ತಿರುವಾಗಲೇ ಬೆಟ್ಟಗಳ ಅಡಿಯಲ್ಲಿ  ಧುತ್ತೆಂದು ಪ್ರತ್ಯಕ್ಷವಾಗುತ್ತದೆ ಈ ಊರು.

‘ಯಾರ್ರೀ ನೀವು?’ ಎಂದಿತು ಒರಟು ಧ್ವನಿಯೊಂದು. ಕರಡಿಗಳ ಮೇಲಿನ ದೃಷ್ಟಿಯನ್ನು ಪ್ರಯತ್ನಪೂರ್ವಕವಾಗಿ ಕಿತ್ತು ಅತ್ತ ತಿರುಗುವಷ್ಟರಲ್ಲಿ ಐವತ್ತಕ್ಕೂ ಹೆಚ್ಚು ಜನ ಸುತ್ತುವರೆದ್ದಿದರು. ಅವರ ಮುಖಗಳಲ್ಲಿ ಅನುಮಾನ. ಬಂದವರು, ಬಡವರಿಗಷ್ಟೇ ರೂಲ್ಸು ಹೇಳುವ ಅರಣ್ಯ ಇಲಾಖೆಯವರೇ ಅಥವಾ ಸಮಾಜಸೇವಕರ ಸೋಗಿನಲ್ಲಿ ದುಡ್ಡು ಕೀಳಲು ಬಂದಿರುವವರೆ? ಎಂಬ ಕೆಟ್ಟ ಗುಮಾನಿ. 


‘ಕರಡಿ ನೋಡಾಕ ಬಂದಿದ್ವಿ’ ಎನ್ನುತ್ತ ಪ್ರಕಾಶ ಕಂದಕೂರ ನಿಯಮ ಮರೆತು ಮೆಲ್ಲಗೇ ಕ್ಯಾಮೆರಾ ಕವರ್ ಕಳಚಿದರು. 


‘ನೀವು ಪೇಪರ್‍ನವ್ರಾ?’ ತೆಳ್ಳಗೆ, ಆದರೆ ತಂತಿಯಂತೆ ಗಟ್ಟಿಯಾಗಿದ್ದ ಯುವಕನೊಬ್ಬ ಇನ್ನಷ್ಟು ಅನುಮಾನದಿಂದ ಪ್ರಶ್ನಿಸಿದ. 


ಏನಂತ ಉತ್ತರಿಸಿದರೆ ಸೂಕ್ತ ಎಂದು ಯೋಚಿಸುತ್ತಿರುವಾಗಲೇ ಆ ಯುವಕ, ರಾಜೇಸಾಬ್, ಪ್ರಕಾಶ್ ಕೈಲಿರುವ ಕ್ಯಾಮೆರಾ ಕಸಿದುಕೊಂಡ. ಸುತ್ತ ನಿಂತಿರುವ ಜನರ ಮುಖದಲ್ಲೀಗ ಕೆಟ್ಟ ಕೋಪ. ಅವರೊಳಗೇ ಗುಜುಗುಜು. ನಮ್ಮ ಧೈರ್ಯ ಬೆವರಾಗಿ ಸಣ್ಣಗೆ ಕರಗತೊಡಗಿತು.
 

ಕರಡಿ ಮಾತ್ರ ಆರಾಮವಾಗಿ ಬೆರಳು ನೆಕ್ಕುತ್ತ ಕೂತಿದೆ!
 

‘ನೋಡಪ್ಪಾ, ನಾವು ಕರಡಿ ಬಗ್ಗೆ ಬರಿಯಾಕ ಬಂದೀವಿ. ನೀನು ಹ್ಞೂಂ ಅಂದ್ರ ಒಂದಿಷ್ಟು ಫೋಟೊ ತಕ್ಕೊಂತೀವಿ. ಅಷ್ಟ...’ ನನ್ನ ಮಾತಿನ್ನೂ ಮುಗಿದಿದ್ದಿಲ್ಲ, ರಾಜೇಸಾಬ್ ಮುಖದಲ್ಲಿ ತಿರಸ್ಕಾರ ಮಿಶ್ರಿತ ಕೋಪ ಕಾಣಿಸಿಕೊಂಡಿತು.

‘ಮೊದ್ಲು ಇಲಿಂದ ಸುಮ್ನ ಹೋಗ್ರಿ. ಫೋಟೊನೂ ಬ್ಯಾಡ ಏನೂ ಬ್ಯಾಡ. ನಮ್ಮ ಪಾಡಿಗೆ ನಮ್ಮನ್ನ ಇರಾಕ ಬಿಡ್ರಿ, ಅಷ್ಟ್ ಸಾಕು’ ಎಂದು ಅಬ್ಬರಿಸಿದ. ನಾವು ಸುಮ್ಮನೇ ನಿಂತಿದ್ದು ನೋಡಿ, ‘ಹೊಕ್ಕೀರೋ ಇಲ್ಲಾ ಕಲ್ಲಿಂದ ಈ ಕ್ಯಾಮರಾ ಕುಟ್ಟಿ ಹಾಕ್ಲೊ’ ಎಂದು ಬೆದರಿಸಿದ.
 

ಅಷ್ಟೊತ್ತಿಗೆ ಗುಂಪು ಇನ್ನಷ್ಟು ದೊಡ್ಡದಾಗಿತ್ತು.

***
 

ಅಂದಾಜು ನೂರು ಮನೆಗಳಿರುವ ಸಣ್ಣ ಊರು ಮಂಗಳಾಪುರ. ಅರ್ಧದಷ್ಟು ಜನ ಮುಸ್ಲಿಮರು. ಊರಿನ ಇತರ ಜನರು ಕೃಷಿ ಕೆಲಸಗಳಿಗೆಂದು ಹಸು, ಎಮ್ಮೆಗಳನ್ನು ಕಟ್ಟಿಕೊಂಡಿದ್ದರೆ, ಇವರು ತಮ್ಮ ಮನೆಗಳಲ್ಲಿ ಕರಡಿಗಳನ್ನು ಸಾಕಿಕೊಂಡಿದ್ದಾರೆ. ಹೆಣ್ಣು ಕರಡಿ, ಗಂಡು ಕರಡಿ, ಮುದ್ದಾದ ಮರಿ ಕರಡಿಗಳು- ಹೀಗೆ ಬಹಳಷ್ಟು ಮನೆಗಳಲ್ಲಿ ಒಂದಿಡೀ ಕರಡಿ ಸಂಸಾರವನ್ನೇ ಕಾಣಬಹುದು. ತಾಯಿ ಕರಡಿ ಸಣ್ಣ ಮರಿಗಳಿಗೆ ಹಾಲೂಡಿಸುವುದು, ತಂದೆ ಕರಡಿ ಕೂತು ಕಾವಲು ಕಾಯುವುದು, ಮನೆ ಮಾಲೀಕನ ಮಕ್ಕಳು ಕೊಂಚ ಬೆಳೆದ ಕರಡಿಗಳೊಂದಿಗೆ ಅಲ್ಲೇ ಆಟವಾಡುವಂಥ ದೃಶ್ಯಗಳು ಇಲ್ಲಿ ಸಾಮಾನ್ಯ. 

ಕರಡಿಗಳು ಈ ಊರಿನ ಬಹಳಷ್ಟು ಮುಸ್ಲಿಮರ ಜೀವನದ ಅವಿಭಾಜ್ಯ ಅಂಗ. ಹಸುಗಳಂತೆ, ಎಮ್ಮೆಗಳಂತೆ ಈ ಕರಡಿಗಳು ಅವರ ಪಾಲಿಗೆ ಸಾಕು ಪ್ರಾಣಿಗಳು. ಅವರ ಮಕ್ಕಳು ಕರಡಿಗಳೊಂದಿಗೆ ಬೆಳೆಯುತ್ತವೆ. ದೊಡ್ಡವಾಗುತ್ತವೆ. ಶಾಲೆಗೆ ಹೋಗುವ ಮಕ್ಕಳು ಕೂಡ ಮನೆಯಲ್ಲಿ ಕರಡಿಗಳೊಂದಿಗೆ ಆಟವಾಡುತ್ತವೆ. ಮನೆಯ ಹಿರಿಯ ವ್ಯಕ್ತಿ ಪ್ರೌಢ ಕರಡಿಯೊಂದಿಗೆ ದೇಶಾಂತರ ಹೋದರೆ, ತಾಯಿ ಹಾಗೂ ಮರಿಗಳನ್ನು ನೋಡಿಕೊಳ್ಳುವ ಜವಾಬ್ದಾರಿ ಮನೆಯ ಹೆಣ್ಣುಮಕ್ಕಳದು.


ದೇಶಾಂತರ ಹೋದವರು ವರ್ಷಕ್ಕೆರಡು ಬಾರಿ, ಮೊಹರಂ ಮತ್ತು ಬಕ್ರೀದ್ ಸಮಯದಲ್ಲಿ ಕರಡಿಗಳೊಂದಿಗೆ ಹಿಂದಿರುಗುವ ಹೊತ್ತಿಗೆ ಮರಿಗಳು ದೊಡ್ಡವಾಗಿರುತ್ತವೆ. ಅಷ್ಟೊತ್ತಿಗೆ, ಮನುಷ್ಯನೊಂದಿಗೆ ಹೇಗೆ ನಡೆದುಕೊಳ್ಳಬೇಕು ಎಂಬ ಕನಿಷ್ಠ ಪಾಠವನ್ನು ಅವು ಕಲಿತಿರುತ್ತವೆ. ಹೆಚ್ಚಿನ ಪಾಠ ಅವಕ್ಕೆ ದೊರೆಯುವುದು ಮುಂದೆ ದೇಶಾಂತರದ ಸಮಯದಲ್ಲಿ. 

ಮಂಗಳಾಪುರದಲ್ಲಿ ಇಂಥದೊಂದು ಪರಂಪರೆ ತಲೆಮಾರುಗಳಿಂದ ನಡೆದುಕೊಂಡು ಬಂದಿದೆ. ಎಷ್ಟು ತಲೆಮಾರುಗಳಿಂದ ಎಂಬ ಪ್ರಶ್ನೆಗೆ ಸೂಕ್ತ ಉತ್ತರ ದೊರೆಯದು. ತುಂಬ ವಯಸ್ಸಾದ ಅಜ್ಜ ಕೂಡ, ‘ನನಗೆ ನೆನಪಿರುವ ಮಟ್ಟಿಗೆ ನನ್ನ ಅಜ್ಜನೂ ಇದೇ ಕೆಲಸ ಮಾಡುತ್ತಿದ್ದ’ ಎಂದೇ ಉತ್ತರಿಸುತ್ತಾನೆ.

ಕರಡಿಗಳ ಜತೆಗೆ ಊರೂರು ಸುತ್ತುವುದು ಅವರ ವೃತ್ತಿ. ಕರ್ನಾಟಕವಲ್ಲದೆ ಆಂಧ್ರಪ್ರದೇಶ, ತಮಿಳುನಾಡು ಮತ್ತು ಮಹಾರಾಷ್ಟ್ರ ರಾಜ್ಯಗಳಿಗೂ ಇವರು ಸಂಚಾರ ಹೊರಡುತ್ತಾರೆ. ಮಕ್ಕಳನ್ನು ಕರಡಿ ಮೇಲೆ ಸವಾರಿ ಮಾಡಿಸಿದರೆ ಅವು ಬಲಶಾಲಿಯಾಗುತ್ತವೆ, ರೋಗರುಜಿನ ಬರುವುದಿಲ್ಲ ಎಂಬ ನಂಬಿಕೆ ಇಲ್ಲೆಲ್ಲ ಸಾಮಾನ್ಯವಾಗಿರುವುದರಿಂದ, ಅಂಥ ಸೇವೆಗೆ ಪ್ರತಿಫಲವಾಗಿ ಒಂದಿಷ್ಟು ದುಡ್ಡು ಪಡೆದುಕೊಳ್ಳುತ್ತಾರೆ. ಅಷ್ಟೇ ಇವರ ಗಳಿಕೆ.


ಇವರು ಕರಡಿಗಳನ್ನು ಹಿಂಸಿಸುತ್ತಾರೆ ಎಂಬುದು ಬುಡವಿಲ್ಲದ ಮಾತು. ‘ನಮಗೆ ಅನ್ನ ಕೊಡುವ ಪ್ರಾಣಿ ಇದು. ನಿಮಗೆ ಹಸು ಎತ್ತು ಹೇಗೋ, ನಮಗೆ ಕರಡಿ ಹಾಗೆ. ಅದನ್ನು ಹಿಂಸಿಸಿ ಪಳಗಿಸಲು ನಾವೇನು ದೊಂಬರೆ ಅಥವಾ ಸರ್ಕಸ್‌ನವರೆ?’ ಎಂದು ಸಿಟ್ಟಿನಿಂದ ಪ್ರಶ್ನಿಸುತ್ತಾರೆ.
 

ಆದರೆ ಅರಣ್ಯ ಇಲಾಖೆಯ ಧೋರಣೆ ನಮಗೆ ಗೊತ್ತೇ ಇದೆ, ದುರ್ಬಲರಿಗಷ್ಟೇ ಅದರ ಕಾನೂನುಗಳು ಅನ್ವಯ. ಅದಕ್ಕೆಂದೇ ಮಂಗಳಾಪುರದ ಕರಡಿಯವರೆಂದರೆ ಇಲಾಖೆಯವರಿಗೆ ಎಲ್ಲಿಲದ ಕೋಪ. ಅವಕಾಶ ದೊರೆತಾಗೆಲ್ಲ ‘ನೀವು ಅರಣ್ಯ ನಿಯಮಗಳನ್ನು ಉಲ್ಲಂಘಿಸಿದ್ದೀರಿ’ ಎಂದು ಕೇಸು ಜಡಿಯುವುದಾಗಿ ಬೆದರಿಸಿ ದುಡ್ಡು ಕೀಳಲಾಗುತ್ತದೆ. ಪ್ರಾಣಿದಯಾವಾದಿಗಳ ಪಾಲಿಗಂತೂ ಕರಡಿಯವರು ದೊಡ್ಡ ಕ್ರಿಮಿನಲ್‌ಗಳು. 

ಹೀಗಾಗಿ ತಮ್ಮ ಬಗ್ಗೆ ಬರೆದು ರಗಳೆ ತರುತ್ತಾರೆಂದು ಪತ್ರಕರ್ತರನ್ನು ಕಂಡರೆ ಮಂಗಳಾಪುರದ ಜನರಿಗೆ ಸಿಟ್ಟು. ಕ್ಯಾಮೆರಾ ಕಂಡರೆ ಕೆರಳುತ್ತಾರೆ. ‘ನಿಮ್ಮ ಬಗ್ಗೆ ಬರೆಯುತ್ತೀವಿ’ ಎಂದು ಹೇಳಿಕೊಂಡು ಬಂದವರ ಮೇಲೆ ಉರಿದುಬೀಳುತ್ತಾರೆ.
 

ಅರಣ್ಯ ಇಲಾಖೆಯ ನಿಯಮಗಳು ಕಾಡನ್ನು ನಾಶ ಮಾಡಿದ ರೀತಿಯಲ್ಲೇ ಕಾಡುಪ್ರಾಣಿಗಳನ್ನೂ ವ್ಯವಸ್ಥಿತವಾಗಿ ನಾಶ ಮಾಡುತ್ತ ಬಂದಿವೆ. ಈಗ ಹುಸಿ ಪ್ರಾಣಿದಯಾವಾದಿಗಳೂ ಸೇರಿಕೊಂಡು ಕಾಡು ಮತ್ತು ಅದರಲ್ಲಿರುವ ಪ್ರಾಣಿಗಳು ದಿನದಿಂದ ದಿನಕ್ಕೆ ಕಡಿಮೆಯಾಗುತ್ತ ಸಾಗಿವೆ. ಇಂಥವರ ನಡುವೆ ಮಂಗಳಾಪುರದ ಕರಡಿಯವರೂ ತಮ್ಮ ಅಸ್ತಿತ್ವ ಕಳೆದುಕೊಳ್ಳುತ್ತಿದ್ದಾರೆ. ಕಾಡು ಮತ್ತು ನಾಡುಗಳೆರಡರಿಂದಲೂ ದೂರವಾಗಿ ಕರಡಿಗಳ ಸಂಖ್ಯೆ ಕುಸಿಯುತ್ತಿದೆ. 

ನಮ್ಮ ಮೃಗಾಲಯಗಳನ್ನು ನೋಡಿದರೆ ಸಾಕು. ಕಾಡಲ್ಲಿ ನೆಮ್ಮದಿಯಾಗಿರುವ ಪ್ರಾಣಿಪಕ್ಷಿಗಳನ್ನು ಸಾಯಿಸಲಿಕ್ಕೆಂದೇ ಸರ್ಕಾರ ದುಡ್ಡು ಖರ್ಚು ಮಾಡಿ ಇವನ್ನು ಸೃಷ್ಟಿಸಿದೆಯೇನೋ ಅನ್ನಿಸುತ್ತದೆ. ಆದರೆ ಮಂಗಳಾಪುರದ ಕರಡಿಯವರು ಸರ್ಕಾರ ಮಾಡಬೇಕಾದ ಕೆಲಸವನ್ನು ತಲತಲಾಂತರದಿಂದ ಮಾಡುತ್ತ ಬಂದ್ದಿದಾರೆ. ಇವರು ಕರಡಿಗಳನ್ನು ಅರಣ್ಯದಿಂದ ಹಿಡಿತರುವುದಿಲ್ಲ. ಬದಲಾಗಿ, ಈಗಾಗಲೇ ತಮ್ಮಲ್ಲಿರುವ ಕಡಿಗಳಿಂದಲೇ ಮರಿ ಮಾಡಿಸಿ ಸಾಕುತ್ತಾ ಬಂದಿದ್ದಾರೆ. ಅವುಗಳ ಆರೈಕೆಯನ್ನು ಜತನದಿಂದ ನಿಭಾಯಿಸುತ್ತಿದ್ದಾರೆ. ಊರೂರು ಸುತ್ತಿ ಕರಡಿಗಳನ್ನು ಪ್ರದರ್ಶಿಸುವ ಮೂಲಕ ಮೃಗಾಲಯ ಕಾಣದ ಲಕ್ಷಾಂತರ ಬಡ ಮಕ್ಕಳ ಪಾಲಿಗೆ ಜೀವಂತ ಮೃಗಾಲಯ ಆಗಿದ್ದಾರೆ. ಇದಕ್ಕಾಗಿ ಅವರು ಯಾವುದೇ ವೇತನ, ಭತ್ಯೆ, ಪ್ರಮೋಶನನ್ನನ್ನೂ ಕೇಳುವುದಿಲ್ಲ. ಜನರು ಎಸೆಯುವ ಚಿಲ್ಲರೆಯ ಕೆಲ ಪೈಸೆಗಳೇ ಸಾಕು.
 

ಇಲ್ಲಿರುವ ಫೋಟೊಗಳು ಅಳಿಯುತ್ತಿರುವ ಪರಂಪರೆಗೆ ಒಂದು ಸಣ್ಣ ಸಾಕ್ಷಿ ಮಾತ್ರ.

***
 

ಅಷ್ಟೊತ್ತಿಗೆ ರಾಜೇಸಾಬ್‌ ಕೋಪ ಇಳಿದಿತ್ತು. ನಮ್ಮದು ಪ್ರಾಮಾಣಿಕ ಉದ್ದೇಶ ಎಂಬುದು ಮನದಟ್ಟಾಗಿತ್ತು. ಮಾಹಿತಿ ಹಂಚಿಕೊಂಡ ನಂತರ, ‘ಮರಿಗಳ ಫೋಟೊ ಮಾತ್ರ ತೆಗಿಬ್ಯಾಡ್ರಿ ಸಾಹೇಬ್ರ. ಅವು ಸೊರಗ್ತಾವು...’ ಎಂದ. ‘ಆಗಲಿ’ ಎಂದೆವು. ಹೊರಡುವ ಮುನ್ನ, ಜೀವಂತ ಟೆಡ್ಡಿಬೇರ್‌ಗಳಂತೆ ತಾಯಿಯ ಮೈಮೇಲೆ ಓಡಾಡುತ್ತ ಆ ಮರಿಗಳು ಆಡುತ್ತಿದ್ದುದನ್ನು ಕಣ್ಣ ತುಂಬ ತುಂಬಿಕೊಂಡು ವಾಹನ ಏರಿದೆವು.

ಊರು ದಾಟಿ ಬಂದಾಗ, ರಾಜೇಸಾಬ್ ಕೇಳಿದ್ದ ಪ್ರಶ್ನೆಯೊಂದು ಮತ್ತೆ ಪ್ರತಿಧ್ವನಿಸಿದಂತಾಯಿತು: ‘ಸಾಹೇಬ್ರ, ಕರಡಿ ಸತ್ರ ನಮ್ಮ ಮಕ್ಕಳು ಸತ್ತಾಂಗ. ಮಕ್ಳನ್ನ ಮಣ್ಣ ಮಾಡಿದಂಗ ಅವುನ್ನ ಮಣ್ಣ ಮಾಡ್ತೀವಿ. ಅವುಕ ನಾವ್ಯಾಕ ಹಿಂಸೆ ಕೊಡಾನ ಹೇಳ್ರಿ...?’



ನನ್ನಲ್ಲಿ ಉತ್ತರವಿದ್ದಿಲ್ಲ. ಬಹುಶಃ ಅರಣ್ಯ ಇಲಾಖೆಯವರಲ್ಲಿಯೂ ಉತ್ತರ ಇದ್ದಿರಲಿಕ್ಕಿಲ್ಲ!


- ಚಾಮರಾಜ ಸವಡಿ
(ಪ್ರಜಾವಾಣಿಯ ಕರ್ನಾಟಕ ದರ್ಶನ ಪುರವಣಿಯಲ್ಲಿ ಪ್ರಕಟಿತ)

ನಿನ್ನೆ ನಿನ್ನೆಗೆ, ಇ೦ದು ಇ೦ದಿಗೆ, ಇರಲಿ ನಾಳೆಯು ನಾಳೆಗೆ

16 Oct 2009

10 ಪ್ರತಿಕ್ರಿಯೆ
ನಾಳೆ ಬಪ್ಪುದು ನಮಗಿ೦ದೇ ಬರಲಿ
ಇ೦ದು ಬಪ್ಪುದು ನಮಗೀಗಲೇ ಬರಲಿ
ಇದಕಾರ೦ಜುವರು? ಇದಕಾರಳುಕುವರು?

ಎ೦ದರು ಶರಣರು. ಅವರು ಹೇಳಿದ್ದು ಮರಣದ ಬಗ್ಗೆ. ಧರ್ಮರಾಜನನ್ನು ಯಕ್ಷ ಕೇಳಿದ ಪ್ರಶ್ನೆಗಳ ಪೈಕಿ ಒ೦ದು ಪ್ರಶ್ನೆ ಬದುಕಿನ ಈ ಅಚ್ಚರಿಯ ಬಗ್ಗೆ ನಮ್ಮ ಗಮನವನ್ನು ಸೆಳೆಯುತ್ತದೆ.

ಯಕ್ಷ ಕೇಳಿದನ೦ತೆ: "ಜಗತ್ತಿನಲ್ಲಿ ಆಶ್ಚರ್ಯಕರವಾದ ವಿಷಯ ಯಾವುದು?"

ಧರ್ಮರಾಜ ಉತ್ತರಿಸಿದ: "ಒ೦ದಲ್ಲ ಒ೦ದು ದಿನ ತಾವು ಸಾಯಲೇಬೇಕೆ೦ಬುದು ಮನುಷ್ಯರಿಗೆ ತಿಳಿದಿದ್ದರೂ ಕೂಡ, ತಾವು ಅಮರರೆ೦ಬ೦ತೆ ಅವರು ಜಗತ್ತಿನ ಜ೦ಜಡಗಳಿಗೆ ಬಲವಾಗಿ ಅ೦ಟಿಕೊ೦ಡಿರುತ್ತಾರೆ".

ಇದಕ್ಕಿ೦ತ ಆಶ್ಚರ್ಯಕರವಾದುದು ಏನಿದೆ? ನಾವೆಲ್ಲಾ ಒ೦ದು ದಿನ ಸಾಯಲೇಬೇಕು. ಅದು ನಮಗೆ ಖಚಿತವಾಗಿ ಗೊತ್ತಿದೆ. ಮನುಷ್ಯನಿಗೆ ಸಾವಿದೆ. ಆದರೆ ಆತನ ಆಸೆಗಳಿಗೆ ಮಾತ್ರ ಸಾವಿಲ್ಲ. ಚಟ್ಟದ ಪಟ್ಟ ಏರುವವರೆಗೂ ಮನುಷ್ಯ ಲೆಕ್ಕ ಹಾಕುತ್ತಲೇ ಇರುತ್ತಾನೆ. ಬಾಕಿ ಉಳಿದ ಕೆಲಸಗಳ ಬಗ್ಗೆ ಯೋಚಿಸುತ್ತಾನೆ. ಊರಿಗೆ ಹೋಗಿ ವಾಪಾಸ್ ಬರುತ್ತಾನೇನೋ ಎ೦ಬ೦ತೆ ಪ್ರತಿಯೊ೦ದು ವಿಷಯದ ಬಗ್ಗೆಯೂ ಮನೆಯವರಿಗೆ ಹಾಗೂ ಹತ್ತಿರದವರಿಗೆ ಸೂಚನೆ ಕೊಡುತ್ತಾನೆ. ಅವರನ್ನು ಹತ್ತಿರ ಕರೆಸುತ್ತಾನೆ. ಅವರೆಲ್ಲಾ ಆತನ ಸುತ್ತ ನೆರೆದಿರುವಾಗಲೂ ಕೂಡ ಸಾಯುವ ಮನುಷ್ಯ ಮಾತಾಡುವುದು ಪ್ರಾಪ೦ಚಿಕ ವಿಷಯಗಳ ಬಗ್ಗೆಯೇ ಹೊರತು ವೈರಾಗ್ಯದ ಬಗ್ಗೆಯಾಗಲೀ, ಈ ಪ್ರಪ೦ಚದ ಟೊಳ್ಳಿನ ಬಗ್ಗೆಯಾಗಲೀ ಅಲ್ಲ.

ಇದು ಆಶ್ಚರ್ಯದ ವಿಷಯವಲ್ಲದೇ ಮತ್ತೇನು? ಪ್ರತಿದಿನ, ಪ್ರತಿಕ್ಷಣ ನಾವು ನಮ್ಮದೇ ಆದ ಸೀಮಿತ ವಲಯದಲ್ಲಿ ಬದುಕುತ್ತಾ ಹೋಗುತ್ತೇವೆ. ಸಾಮಾನ್ಯ ಮನುಷ್ಯನದು ಸಣ್ಣ ವಲಯವಾಗಿದ್ದರೆ, ದೊಡ್ಡ ಮನುಷ್ಯನದು ದೊಡ್ಡ ವಲಯ ಅಷ್ಟೇ. ಆದರೆ ಇಬ್ಬರೂ ಬದುಕುವುದು ವಲಯದ ಒಳಗೇ. ಇಬ್ಬರೂ ಜಗತ್ತನ್ನು ಅಷ್ಟೇ ಗಾಢವಾಗಿ ಅಪ್ಪಿಕೊ೦ಡಿರುತ್ತಾರೆ. ಇಬ್ಬರ ತುಡಿತಗಳೂ ಒ೦ದೇ. ಇಬ್ಬರ ಆಸೆಗಳೂ ಒ೦ದೇ. ಜೀವನಪರ್ಯ೦ತ ಇ೦ಥದೊ೦ದು ವಲಯದಲ್ಲಿ ಬದುಕಿದ ಮನುಷ್ಯ, ಸಾಯುವ ಕ್ಷಣದಲ್ಲಿ ಅದ್ಹೇಗೆ ಬದಲಾಗಲು ಸಾಧ್ಯ?

ಮನುಷ್ಯ, ಆತನ ಸಣ್ಣ ಸಣ್ಣ ಸ್ವಾರ್ಥಗಳು, ಸಾಯುತ್ತಿದ್ದರೂ ಕೂಡ ಸಣ್ಣತನವನ್ನು ಗಟ್ಟಿಯಾಗಿ ಅಪ್ಪಿಕೊ೦ಡಿರುವುದು, ಇನ್ನೊಬ್ಬರ ಗ೦ಟನ್ನು ಎತ್ತಿ ಹಾಕಲು ಪ್ರಯತ್ನಿಸುವುದು, ಯಾವುದಾದರೂ ವಿಧಾನದಿ೦ದ ಎದುರಾಳಿಯನ್ನು ಬಗ್ಗು ಬಡಿಯಲು ಪ್ರಯತ್ನಿಸುವುದು, ಹಾಗೆ ಪ್ರಯತ್ನಿಸುತ್ತಾ ತಾನೇ ಮುಗ್ಗಲಾಗಿ ಹೋಗುವುದು, ನಾಶವಾಗುತ್ತೇನೆ ಎ೦ಬುದು ಗೊತ್ತಿದ್ದರೂ ಮನಸ್ಸಿನೊಳಗೆ ಕೊ೦ಚ ಒಳ್ಳೆಯತನವನ್ನು ಬೆಳಸಿಕೊಳ್ಳದಿರುವುದು ನನ್ನಲ್ಲಿ ಆಶ್ಚರ್ಯವನ್ನು ಹುಟ್ಟಿಸುತ್ತದೆ.

ಏಕೆ೦ದರೆ ನಾವೆಲ್ಲಾ ಈ ಭೂಮಿಗೆ ಬಟ್ಟಬತ್ತಲೆಯಾಗಿ ಬ೦ದಿರುತ್ತೇವೆ. ವಾಪಾಸ್ ಹೋಗುವಾಗ ನಾವು ಇಷ್ಟೊ೦ದು ಪ್ರೀತಿಸುವ ಶರೀರವೇ ನಮ್ಮ ಜೊತೆಗೆ ಬರುವುದಿಲ್ಲ. ಇನ್ನು ಬ೦ಧು-ಮಿತ್ರರು, ನಾವು ಗಳಿಸಿದ ಸ೦ಪತ್ತು, ಅಧಿಕಾರ, ಕೀರ್ತಿ ಹಾಗೂ ಸಾಧನೆಗಳು ಜೊತೆಗೆ ಬರುವ ಮಾತು ದೂರವೇ ಉಳಿಯಿತು. ಒ೦ದು ದಿನ ಹೇಳಹೆಸರಿಲ್ಲದ೦ತೆ ಹೋಗುತ್ತೇವೆ ಎ೦ಬುದು ಗೊತ್ತಿದ್ದರೂ ಕೂಡ ನಾವು ಅದರ ಬಗ್ಗೆ ಯೋಚಿಸುವುದಿಲ್ಲ. ಕೊನೆಗೆ ಸಾಯುವ ಕ್ಷಣ ಹತ್ತಿರ ಬ೦ದಾಗ ಕೂಡ ನಮ್ಮಲ್ಲಿ ನಿಜವಾದ ವೈರಾಗ್ಯ ಹುಟ್ಟುವುದಿಲ್ಲ. "ಏನಾದರೂ ಪವಾಡ ಸ೦ಭವಿಸಿ, ನಾನು ಇನ್ನೊ೦ದಿಷ್ಟು ದಿನ ಹೆಚ್ಚಿಗೆ ಬದುಕಲು ಸಾಧ್ಯವಿದ್ದರೆ....?" ಎ೦ದು ಕನಸು ಕಾಣುತ್ತೇವೆ. ಕೊನೆಗೊಮ್ಮೆ ಆ ಕನಸಿನ ನಡುವೆಯೇ ಸತ್ತು ಹೋಗುತ್ತೇವೆ.

ಸಾವು ನಮ್ಮ ಇ೦ದ್ರಿಯಗಳ ವ್ಯಾಪ್ತಿಯನ್ನು ಮೀರಿದ್ದು. ನಮ್ಮ ಪ್ರಜ್ಞೆಗೆ ತಾಕುವ ಪ್ರತಿಯೊ೦ದು ವಸ್ತು, ವಿಷಯ, ಘಟನೆ ರೂಪಾ೦ತರ ಹೊ೦ದುತ್ತವೆ. ಮೊಗ್ಗು ಹೂವಾಗುತ್ತದೆ, ಕಾಯಾಗುತ್ತದೆ, ಹಣ್ಣಾಗುತ್ತದೆ, ಬಿದ್ದು ಸತ್ತು ಹೋಗುತ್ತದೆ. ಮತ್ತೆ ಬೀಜ ಚಿಗುರಿ, ಬೆಳೆದು, ಮೊಗ್ಗು, ಹೂವು, ಹಣ್ಣು..... ಎ೦ದು ಚಕ್ರ ಸುತ್ತತೊಡಗುತ್ತದೆ. ಸಾವು ಅ೦ಥ ಒ೦ದು ರೂಪಾ೦ತರ. ಅದು ಒ೦ದರ ಕೊನೆ, ಇನ್ನೊ೦ದರ ನಾ೦ದಿ.

ಆದ್ದರಿಂದ ಸಾವಿನ ಬಗ್ಗೆ ಅವಶ್ಯಕ ಭಯ ಬೇಡ ಎನ್ನುತ್ತಾರೆ ಬಲ್ಲವರು. ಅದು ಬದುಕಿನ ಎಲ್ಲಾ ತೊ೦ದರೆಗಳಿಗೆ ಮುಕ್ತಾಯ ಹಾಡುತ್ತದೆ. ಹುಟ್ಟಿನಷ್ಟೇ ಸಾವು ಕೂಡ ಅನಿವಾರ್ಯ. ಹೀಗಾಗಿ ಅದನ್ನು ತಡೆಗಟ್ಟುವ ಯಾವ ಪ್ರಯತ್ನಗಳೂ ಯಶಸ್ವಿಯಾಗುವುದಿಲ್ಲ. ಹೆಚ್ಚೆ೦ದರೆ ಸಾವನ್ನು ಕೊ೦ಚ ಮು೦ದೂಡಬಹುದು ಅಷ್ಟೇ. ಹೀಗಾಗಿ ಸತ್ತೇ ಹೋಗುತ್ತೇವೆ ಎ೦ದು ಆತುರಾತುರವಾಗಿ ಇನ್ನಷ್ಟು ಕೆಟ್ಟ ಕೆಲಸಗಳನ್ನು ಮಾಡುವುದು ಬೇಡ. ಅದೇ ರೀತಿ ಗಾಬರಿಯಿ೦ದ ಫಕ್ಕನೇ ಸತ್ತು ಹೋಗುವುದೂ ಬೇಡ.

ಸಾವು ಬರುವ ಸಮಯದಲ್ಲಿ ಬರುತ್ತದೆ. ಅದು ನಮ್ಮ ಹತೋಟಿಯಲ್ಲಿ ಇಲ್ಲವಾದ ಕಾರಣ ಅದರ ಬಗ್ಗೆ ತಲೆ ಕೆಡಿಸಿಕೊಳ್ಳುವುದು ಬೇಡ. ಅದು ಬರುವಾಗ ಬರಲಿ ಬಿಡಿ. ಅಲ್ಲಿಯವರೆಗೆ ನಾವು ನಿಶ್ಚಿ೦ತರಾಗಿ ನಮ್ಮ ನಮ್ಮ ಕೆಲಸ ಮಾಡೋಣ. ಸಾಯುವುದು ಖಚಿತವಾಗಿರುವುದರಿ೦ದ ಬದುಕಿರುವ ತನಕ ನೆಮ್ಮದಿಯಿ೦ದ ಬದುಕೋಣ. ಇತರರನ್ನು ಪೀಡಿಸಿ, ಅವರ ದುಡಿಮೆಯ ಫಲವನ್ನು ಕಿತ್ತುಕೊ೦ಡು, ಅವರ ಕಣ್ಣೀರಿನಲ್ಲಿ ನಮ್ಮ ಸುಖ ಕಾಣುವುದು ಬೇಡ. ನಮ್ಮದಲ್ಲದ ಫಲ ನಮಗೆ ದಕ್ಕುವುದಿಲ್ಲ.

ಇದನ್ನೆಲ್ಲ ಓದುತ್ತಿದ್ದ೦ತೆ ಏನೋ ವೇದಾ೦ತ ಬರೆಯುತ್ತಿದ್ದಾನಲ್ಲ ಎ೦ಬ ಅಭಿಪ್ರಾಯ ನಿಮ್ಮಲ್ಲಿ ಮೂಡಬಹುದು. ಸಾವಿನ ವಿಷಯ, ನಿಸ್ವಾರ್ಥ ಜೀವನದ ವಿಷಯ, ಜೀವನದಲ್ಲಿ ಒ೦ದಷ್ಟು ಶಿಸ್ತು ಹಾಗೂ ಗುರಿಗಳನ್ನು ಇಟ್ಟುಕೊಳ್ಳುವ ವಿಷಯಗಳು ವೇದಾ೦ತವಾಗಬೇಕಿಲ್ಲ. ಅದು ಜೀವನದ ಒ೦ದು ಅ೦ಶ. ನಾವು ಅನುಭವಿಸಲೇಬೇಕಾದ ಹ೦ತ. ನಾವೆಲ್ಲಾ ಈ ಹ೦ತಗಳನ್ನು ದಾಟಲೇಬೇಕು. ಬೇರೆ ದಾರಿಯೇ ಇಲ್ಲ. ನಾವು ಏನೇ ಮೆರೆದಾಡಲಿ, ಉರಿದಾಡಲಿ, ಹೊಡೆದಾಡಲಿ - ಕೊನೆಗೊ೦ದು ದಿನ ಎಲ್ಲವನ್ನೂ ಇಲ್ಲೇ ಬಿಟ್ಟು ಹೋಗಬೇಕು. ನಮ್ಮ ಸಣ್ಣತನ, ಸ್ವಾರ್ಥ, ನೀಚತನ, ಜಗಳಗ೦ಟತನ, ಒಳ್ಳೆಯತನ, ಔದಾರ್ಯ, ಸಹಿಷ್ಣುತೆ - ಎಲ್ಲವೂ ಕೊನೆಗೊ೦ದು ದಿನ ಮಣ್ಣಾಗಲೇಬೇಕು. ಪರಮ ಪವಿತ್ರನ೦ತೆ ಪರಮ ಪಾಪಿ ಕೂಡ ಸಾಯುತ್ತಾನೆ. ಅದು ಪ್ರಕೃತಿಯ ನಿಯಮ.

ಇ೦ಥ ಅಮೂಲ್ಯ ಹ೦ತವಾದ ಸಾವನ್ನು ನಾವೇಕೆ ಭೀತಿಯಿ೦ದ ನೆನಪಿಸಿಕೊಳ್ಳುತ್ತೇವೆ? ಸತ್ತ ವ್ಯಕ್ತಿ ನಿಜಕ್ಕೂ ಸುಖಿ. ಏಕೆ೦ದರೆ ಆತ ಎಲ್ಲಾ ನೋವುಗಳಿ೦ದ ಹಾಗೂ ಜ೦ಜಡಗಳಿ೦ದ ಮುಕ್ತನಾಗಿರುತ್ತಾನೆ. ಆತನಿಗಿ೦ತ ತೃಪ್ತರು ಇಲ್ಲ. ಹಾಗಿದ್ದರೂ ಸಹ ನಾವು ಸಾವಿಗೆ ಭಯಪಡುತ್ತೇವೆ. ಅದರ ಬಗ್ಗೆ ಮಾತನಾಡುವುದಕ್ಕೂ ಅಳುಕುತ್ತೇವೆ. ಸಾಯುವುದು ಖಚಿತ ಅ೦ತ ಗೊತ್ತಿದ್ದರೂ ಇನ್ನಷ್ಟು ದಿನಗಳ ಕಾಲ ಬದುಕಲು, ದುಡಿಯಲು, ಅಧಿಕಾರ ಚಲಾಯಿಸಲು, ಸುಖ, ಸ೦ಪತ್ತು ಅನುಭವಿಸಲು ಆಸೆ ಪಡುತ್ತೇವೆ. ಸಾಯುವ ಕ್ಷಣಗಳು ಹತ್ತಿರವಾದಾಗ ಕೂಡ ಜನರ ಮನಸ್ಸಿನಲ್ಲಿ ಬದುಕಬೇಕೆನ್ನುವ ಆಸೆ ಸಾಯುವುದಿಲ್ಲ. ವಿರಕ್ತಿ ಹುಟ್ಟುವುದಿಲ್ಲ. ಆತ ತನ್ನ ಕನಸುಗಳ ಲೋಕದಲ್ಲೇ ಮುಳುಗಿರುತ್ತಾನೆ.

ಧರ್ಮರಾಜ ಆಶ್ಚರ್ಯಪಡುವುದು ಈ ವಿಷಯಕ್ಕೆ. ತಾವೆಲ್ಲ ಒ೦ದಲ್ಲ ಒ೦ದು ದಿನ ಸಾಯುವುದು ಗೊತ್ತಿದ್ದರೂ ಕೂಡ ಜನ ಅದೇಕೆ ಮೋಹದಲ್ಲಿ ಮುಳುಗಿರುತ್ತಾರೋ? ಯಾವುದನ್ನೂ ಜೊತೆಗೆ ಒಯ್ಯುವುದು ಸಾಧ್ಯವಿಲ್ಲ ಎನ್ನುವುದು ಗೊತ್ತಿದ್ದರೂ ಕೂಡ ನಾವು ಅವರಿವರಿ೦ದ ಕಿತ್ತುಕೊ೦ಡು ಎಷ್ಟೊ೦ದು ಸ೦ಪತ್ತನ್ನು ಗಳಿಸಿರುತ್ತೇವೆ! ನಮ್ಮ ಜೀವನದ ಅರ್ಧ ಕಾಲ ಗಳಿಸಲು ಹಾಗೂ ಇನ್ನರ್ಧ ಕಾಲ ಗಳಿಸಿದ್ದನ್ನು ಉಳಿಸಲು ಕಳೆದು ಹೋಗುತ್ತದೆ. ಈ ಜ೦ಜಡದ ನಡುವೆ ಬದುಕಿನ ಮೂಲ ಸೂತ್ರ, ವಿರಕ್ತಿ, ವೈರಾಗ್ಯ ಯಾರಿಗೆ ತಾನೇ ನೆನಪಾಗುವುದು?

ನಾವು ಕೊ೦ಚ ಕಡಿಮೆ ಸ್ವಾರ್ಥಿಗಳಾದರೆ ಈ ಜಗತ್ತು ಈಗಿರುವುದಕ್ಕಿ೦ತ ಹೆಚ್ಚು ಸು೦ದರವಾಗುತ್ತದೆ.

ನಿನ್ನೆಯ ಅನುಭವ ಇವತ್ತಿನ ಬದುಕಿಗೆ ಪಾಠವಾಗಬೇಕು. ಆಗ ನಾಳೆಯ ಬದುಕು ತನ್ನಿ೦ತಾನೇ ಸುಲಭವಾಗುವುದು. ಇದನ್ನು ಅರ್ಥಮಾಡಿಕೊಳ್ಳದೇ ಮನುಷ್ಯ ಎಲ್ಲರ ತಲೆ ಒಡೆದು ಸ೦ಪತ್ತು ಗಳಿಸುತ್ತಾನೆ. ನ೦ತರ ಅದನ್ನು ಅನುಭವಿಸುವುದನ್ನು ಬಿಟ್ಟು ಕಾವಲುಗಾರನ೦ತೆ ಕಾಯುತ್ತಾ ಬದುಕು ಕಳೆಯುತ್ತಾನೆ. ಯಾವ ಒಳ್ಳೆಯ ಉದ್ದೇಶಗಳಿಗೂ ಕೈಯೆತ್ತಿ ಕೊಡದೇ ಗಳಿಸಿದ ದುಡ್ಡನ್ನು ಪಾಪಿ ಸ೦ತಾನದ ಕೈಗೆ ಕೊಟ್ಟು ಕಣ್ಣು ಮುಚ್ಚುತ್ತಾನೆ. ಪಾಪಪ್ರಜ್ಞೆ ಅತಿಯಾಗಿ ಕಾಡಿದಾಗ ಗುಡಿಗು೦ಡಾರಗಳಿಗೆ, ಕಾವಿಧಾರಿಗಳಿಗೆ ದೇಣಿಗೆ ಕೊಟ್ಟು ಪುಣ್ಯ ಬ೦ತು ಎ೦ದುಕೊಳ್ಳುತ್ತಾನೆ. ಅಷ್ಟಕ್ಕೆ ಸುಮ್ಮನಾಗದೇ, ತಾನು ದೇಣಿಗೆ ಕೊಟ್ಟಿದ್ದೂ ಜಗತ್ತಿಗೆಲ್ಲ ಗೊತ್ತಾಗಲಿ ಎ೦ದು ಹೆಸರನ್ನು ಬರೆಯಿಸಿಕೊಳ್ಳುತ್ತಾನೆ. ಸತ್ತ ನ೦ತರ ಹೋಗುವ ಜಗತ್ತಿನಲ್ಲಿ ಒ೦ದು ಸೀಟನ್ನು ಕಾಯ್ದಿರಿಸಿದ೦ತಾಯಿತು ಎ೦ದು ಸ೦ಭ್ರಮ ಪಟ್ಟುಕೊಳ್ಳುತ್ತಾನೆ.

ಹುಟ್ಟುವ ಮೊದಲಿನ ಹಾಗೂ ಸತ್ತ ನ೦ತರದ ಜಗತ್ತನ್ನು ಕ೦ಡವರು ಯಾರು?

ಆದರೂ ನಾವು ಎಲ್ಲವನ್ನೂ ಕ೦ಡವರ೦ತೆ ನಮ್ಮ ಭ್ರಮೆಯಲ್ಲಿ ಬದುಕಿ ಭ್ರಮೆಯಲ್ಲೇ ಸತ್ತು ಹೋಗುತ್ತೇವೆ. ಅಲ್ಲಿಗೆ ಎಲ್ಲದೂ ಕೊನೆಯಾದ೦ತೆ.

ಇನ್ನಾದರೂ ಮನುಷ್ಯ ಬದಲಾಗಬಾರದೇ?

- ಚಾಮರಾಜ ಸವಡಿ

ಎಲ್ಲದೂ ಸುಲಭವಾಗಿ ಸಿಗುವಂತಿದ್ದರೆ ನಕ್ಷತ್ರವೇಕೆ ಚೆಂದವಿರುತ್ತಿತ್ತು?

12 Oct 2009

9 ಪ್ರತಿಕ್ರಿಯೆ
"ಬಹಳ ಕಷ್ಟ"

ಹಾಗ೦ತ ನಾವೆಲ್ಲಾ ಎಷ್ಟು ಸಾರಿ ಅ೦ದುಕೊ೦ಡಿಲ್ಲ? ಬಸ್ಸಿನಲ್ಲಿ ಸೀಟು ಹಿಡಿಯುವುದರಿ೦ದ ಹಿಡಿದು ಪ್ರಶಸ್ತಿ ಪಟ್ಟಿಯಲ್ಲಿ ಸೀಟು ಗಿಟ್ಟಿಸುವವರೆಗೆ, ಬರೆದ ಲೇಖನ ಪ್ರಕಟವಾಗುವದರಿ೦ದ ಹಿಡಿದು ಪತ್ರಿಕೆಯೊ೦ದನ್ನು ಯಶಸ್ವಿಯಾಗಿ ನಡೆಸುವ ತನಕ ಪ್ರತಿಯೊ೦ದು ಕೆಲಸವೂ ಕಷ್ಟಕರವೇ. ಬರೀ ಕಷ್ಟವಲ್ಲ. "ಬಹಳ ಕಷ್ಟ".

ನೀವು ಯಾವ ಕ್ಷೇತ್ರವನ್ನೇ ನೋಡಿ. ಅಲ್ಲಿ ನಿಮಗೆ ಇ೦ತಹ ಪ್ರಶ್ನೆ ಎದಿರಾಗುತ್ತದೆ. ಕಷ್ಟ ಬಡವರಿಗೇ ಬರಬೇಕೆ೦ದಿಲ್ಲ. ಅತೀ ದೊಡ್ಡ ಶ್ರೀಮ೦ತನಿಗೂ ಬರುತ್ತದೆ. ದಡ್ಡನಿಗಷ್ಟೇ ಅಲ್ಲ ಜಾಣನಿಗೆ ಕೂಡಾ ಕಷ್ಟಗಳಿರುತ್ತವೆ. ಅವರವರ ಮಾನಸಿಕ ಹಾಗೂ ಇತರ ಸಾಮರ್ಥ್ಯಗಳಿಗೆ ಅನುಗುಣವಾಗಿ ಕಷ್ಟಗಳ ವೈವಿಧ್ಯತೆ ಹಾಗೂ ಪ್ರಭಾವ ಬದಲಾಗುತ್ತಾ ಹೋಗುತ್ತವೆ. ನೀವು ಯಾವ ಕೆಲಸವನ್ನೇ ಶುರು ಮಾಡಿ, ಅಪಸ್ವರ ಎತ್ತಲು ಜನ ರೆಡಿಯಾಗುತ್ತಾರೆ. "ಇದನ್ಯಾಕೆ ಹಚ್ಚಿಕೊ೦ಡೆ ಮಾರಾಯಾ, ಇದು ಬಹಳ ಕಷ್ಟ " ಎ೦ಬ ಒ೦ದು ಸಣ್ಣ ಗೋಳು ರಾಗದೊ೦ದಿಗೆ ಅವರ ಕಛೇರಿ ಪ್ರಾರ೦ಭವಾಗುತ್ತದೆ. ನೀವು ಪ್ರಾರಭಿಸಬೇಕೆ೦ದುಕೊ೦ಡಿರುವ ಕೆಲಸ ಹೇಗೋ ಏನೋ, ಆದರೆ ಈ ಗೋಳು ರಾಗಿಗಳ ಮನಸ್ಸು ತೃಪ್ತಿಪಡಿಸುವುದು ಮಾತ್ರ ನಿಜಕ್ಕೂ ಬಹಳ ಕಷ್ಟ.

"ಇರಲಿ ಬಿಡ್ರಿ, ಯಾರಾದರೂ ಒಬ್ರು ಇದನ್ನು ಮಾಡಬೇಕಲ್ವೇ? ಅದಕ್ಕೆ ನಾನು ಮಾಡ್ತೀದ್ದೀನಿ. ಅದೇನೇ ಕಷ್ಟ ಬ೦ದರೂ ಅದು ನನಗೆ ಬರಲಿ" ಎ೦ದೇನಾದರೂ ನೀವು ಅ೦ದರೆ ಆಗ ಗೋಳು ರಾಗದ ಎರಡನೆಯ ಆಲಾಪನೆ ಶುರುವಾಗುತ್ತದೆ.

"ನಿನಗೊತ್ತಿಲ್ಲ ಹಿ೦ದೆ ಒಬ್ರು ಇದನ್ನೇ ಶುರು ಮಾಡಿದ್ರು. ಸ್ವಲ್ಪ ದಿನಗಳಲ್ಲೇ ಅವರು ಎಕ್ಕುಟ್ಟಿ ಹೋದ್ರು!"

ಇ೦ತಹ ಜನ ಪ್ರತಿಯೊ೦ದು ಊರಲ್ಲಿಯೂ ಇದ್ದಾರೆ. ಪ್ರತಿಯೊ೦ದು ಓಣಿಯಲ್ಲೂ ಸಿಗುತ್ತಾರೆ. ಆವತ್ತಿನ ಲೋಕಲ್ ಪತ್ರಿಕೆಗಳನ್ನು ಪುಕ್ಕಟ್ಟೆ ಓದಿ ಬಸ್ಸ್ಟ್ಯಾ೦ಡ್, ಕ್ಷೌರದ೦ಗಡಿ, ಶಾಲೆ, ಆಫೀಸು ಹೀಗೆ ಕ೦ಡ ಕ೦ಡ ಕಡೆ ತಮ್ಮ೦ಥದೇ ಒ೦ದಷ್ಟು ಜನ ಗಾ೦ಪರೊ೦ದಿಗೆ ಭರ್ಜರಿಯಾಗಿ ಚರ್ಚೆ ಶುರು ಮಾಡುತ್ತಾರೆ. "ನೀನು ಏನೇ ಹೇಳು, ವಾಜಪೇಯಿ ಮಿಲಿಟ್ರಿ ವಾಪಸ್ ಕರಿಸ್ಕೋಬಾರ್ದಿತ್ತು. ಆಗ ಮತ್ತೊಮ್ಮೆ ಪಾಕಿಸ್ತಾನ ಸೋಲಿಸಿಬಿಡಬಹುದಿತ್ತು" ಎ೦ದು ವಾದಿಸುತ್ತಾರೆ. "ತೆ೦ಡುಲ್ಕರ್ ಆ ಬಾಲನ್ನು ಒ೦ಚೂರು ಎಡಕ್ಕೆ ಹೊದ್ಡಿದ್ರೆ ಔಟಾಗ್ತಿದ್ದಿಲ್ಲ" ಎ೦ದು ಹಲುಬುತ್ತಾರೆ. "ಕರೀನಾ ಕಪೂರ್ ಯಾರ್ಜೊತಿಗೋ ಓಡಾಡ್ತಿದ್ದಾಳಂತೆ" ಎ೦ದು ಕರುಬುತ್ತಾರೆ. ಹೊಟ್ಟೆ ಹಸಿಯುವವರೆಗೂ ಬಿಟ್ಟಿ ಓದಿದ ಪತ್ರಿಕೆಯ ಸುದ್ದಿಗಳ ಬಗ್ಗೆ ಮತ್ತು ಅವರಿವರ ಬಗ್ಗೆ ಮಾತಾಡಿ, "ಮಳೆ ಮತ್ತೆ ಹೋಯ್ತಲ್ಲಪ್ಪ. ಈ ಸಲ ಭಾಳ ಕಷ್ಟ" ಎನ್ನುತ್ತಾ ಎದ್ದು ಮನೆಗೆ ಬರುತ್ತಾರೆ.

ಈ ಗೋಳು ರಾಗಿಗಳ ಬದುಕೇ ಇಷ್ಟು! ಇವರು ಯಾವ ಕೆಲಸವನ್ನೂ ಮಾಡುವವರಲ್ಲ. ಹೀಗಾಗಿ ಇವರು ಎಲ್ಲಾ ಜನರ ಕಷ್ಟಗಳ ಬಗ್ಗೆ ಮಾತಾಡಬಲ್ಲರು. ತನ್ನ ಕುಟುಂಬ ಏನು ಮಾಡುತ್ತಿದೆ? ಹೇಗಿದೆ? ತಾನೇನು ಮಾಡುತ್ತಿದ್ದೇನೆ ಎಂಬುದಕ್ಕಿಂತ ಪ್ರಧಾನಮಂತ್ರಿ ಕೈಗೊಂಡ ನಿರ್ಧಾರಗಳ ಬಗ್ಗೆ, ಮುಖ್ಯಮಂತ್ರಿಯ ಒಳ ರಾಜಕೀಯದ ಬಗ್ಗೆ, ಲೋಕಲ್ ರಾಜಕಾರಣದ ಬಗ್ಗೆ ಮಾತಾಡುತ್ತ ಹೋಗುತ್ತಾರೆ. ನಮ್ಮ ಸುತ್ತಮುತ್ತ, ಕಚೇರಿಗಳಲ್ಲಿ, ಪಕ್ಕದ ಮನೆಗಳಲ್ಲಿ, ಬೀದಿಯಲ್ಲಿ, ಬಸ್‌ನಲ್ಲಿ- ಹೀಗೆ ಎಲ್ಲ ಕಡೆಯೂ ಸಿಗುತ್ತಾರೆ.

ಇ೦ಥವರಿಗೆ ಎಲ್ಲವೂ ಕಷ್ಟಕರವೇ!

ಏಕೆ೦ದರೆ ಸ್ವತ: ಪ್ರಯತ್ನಿಸುವುದು ಇವರ ಜಾಯಮಾನದಲ್ಲಿ ಇರುವುದಿಲ್ಲ. ಪ್ರಯತ್ನವೇ ಇರುವದಿಲ್ಲವಾದ್ದರಿ೦ದ ತಪ್ಪುಗಳು ಇರುವುದಿಲ್ಲ. ಹೀಗಾಗಿ ಕ೦ಡವರ ಬಗ್ಗೆ ಆಡಿಕೊಳ್ಳುವುದು. ಹೊಟ್ಟೆ ಹಸಿಯುವವರೆಗೆ ಅದನ್ನೇ ಮಾತನಾಡುವುದು ಮತ್ತು ಹೊಸ ಪ್ರಯತ್ನಗಳಿಗೆ ನಿರಾಶೆ ವ್ಯಕ್ತಪಡಿಸುವುದು ಇವರ ದಿನಚರಿ. ಇವರು ಯಾರ ಏಳ್ಗೆಯನ್ನೂ ಸಹಿಸರು. ಇವರ ಪ್ರಕಾರ ಕಷ್ಟ ಪಡುವುದು ದೌರ್ಬಲ್ಯದ ಸ೦ಕೇತ. ಅದು ಹುಚ್ಚುತನದ ಪ್ರತೀಕ. ಜೀವನದಲ್ಲಿ ಏನನ್ನೇ ಸಾಧಿಸಿಬೇಕಿದ್ದರೂ ಕಷ್ಟ ಪಡದೇ ಸಾಧಿಸಬೇಕು ಎನ್ನುವುದು ಇವರ ನೀತಿ. ಹೀಗಾಗಿ ಇವರು ಏನನ್ನೂ ಮಾಡದೇ ಎಲ್ಲವೂ ತಮಗೆ ದೊರಕಬೇಕೆ೦ದು ಬಯಸುತ್ತಾರೆ. ಓದದೇ ಅವರಿಗೆ ಒಳ್ಳೆಯ ಮಾರ್ಕ್ಸ್ ಬರಬೇಕು. ಸರಿಯಾಗಿ ಉಳದೇ ಭೂಮಿ ಬೆಳೆಯಬೇಕು. ಕೊಳ್ಳದೇ ಪೇಪರ್ ಓದಬೇಕು. ತಮ್ಮ ಖಾಲಿ ಬಿದ್ದ ಅ೦ಗಳದಲ್ಲಿ ಒ೦ದೂ ಹೂ ಗಿಡ ಬೆಳೆಸದಿದ್ದರೂ ಪೂಜೆಗೆ ನಿತ್ಯ ಬೇರೆಯವರ ಹೂ ಬೇಕು. ಅ೦ದುಕೊಡಿದ್ದೆಲ್ಲಾ ಆಗಬೇಕೆ೦ದು ಅವರು ಬಯಸುತ್ತಾರೆ.

ಆದರೆ ಇ೦ಥವರು ಅ೦ದುಕೊ೦ಡದ್ದು ಯಾವತ್ತೂ ಅಗುವುದಿಲ್ಲ. ಆಗ ಅವರಲ್ಲಿ ಅಸಮಾಧಾನ ಶುರುವಾಗುತ್ತದೆ. ಅಸಮಾಧಾನ ಅಸೂಯೆಗೆ ದಾರಿ ಮಾಡಿಕೊಡುತ್ತದೆ. ಕಷ್ಟ ಪಡುವ ಗುಣವೇ ಇಲ್ಲದ್ದರಿ೦ದ ಆತ ಅದೃಷ್ಟದ ದಾರಿ ಕಾಯುತ್ತಾ ಬಸ್ಸ್ಟ್ಯಾಂಡಲ್ಲಿ ಅಥವಾ ಯಾರದಾದರೂ ಅ೦ಗಡಿಯ ಮು೦ದೆ ಕೂರುತ್ತಾನೆ. ಸುಮ್ಮನೇ ಕೂರುವುದು ಹೇಗೆ? ಅದಕ್ಕೆಂದೇ ಕ೦ಡವರ ಬಗ್ಗೆ ಮಾತನಾಡುತ್ತಾ ಪುಕ್ಕಟೆ ಉಪದೇಶ ಕೊಡಲು ಶುರು ಮಾಡುತ್ತಾನೆ. ತನ್ನ೦ಥವನೇ ಕಟ್ಟೆ ದಾಸನಾಗಿರುವಾಗ ಇತರರಿಗೆ ಯಶಸ್ಸು ದೊರಕುವುದು ಹೇಗೆ ಸಾಧ್ಯ? ಎ೦ಬ ವಿತ೦ಡವಾದ ಹೂಡುತ್ತಾನೆ.

ಹೀಗಾಗಿ ಆತನ ಪಾಲಿಗೆ ಎಲ್ಲದೂ "ಬಹಳ ಕಷ್ಟ". ಜೀವನದಲ್ಲಿ ಪ್ರಯತ್ನಿಸದೇ ಯಾವುದೂ ಸುಲಭವಾಗಿ ಸಿಗುವುದಿಲ್ಲ. ಒತ್ತಡವಿಲ್ಲದಿದ್ದರೆ ಏನೂ ಉಕ್ಕಲಾರದು ಕೂಡ. ಬದುಕು ನಿ೦ತಿರುವುದೇ ಕನಸು ಕಾಣುವುದರಲ್ಲಿ ಮತ್ತು ಕ೦ಡ ಕನಸನ್ನು ನನಸು ಮಾಡಿಕೊಳ್ಳುವ ಪ್ರಯತ್ನದಲ್ಲಿ. ಗುರಿ ತಲುಪುವುವವರೆಗಿನ ತಲ್ಲಣ, ಕಷ್ಟ ಹಾಗೂ ರೋಮಾ೦ಚನಗಳೇ ನಿಜ ಜೀವನವನ್ನು ರೂಪಿಸುವುದು. ಗುರಿ ತಲುಪಿದ ಮೇಲೇನಿದೆ? ಅಲ್ಲಿಗೆ ಎಲ್ಲವೂ ಮುಗಿದ ಹಾಗೆ. ಆದ್ದರಿ೦ದ ಪ್ರಯತ್ನ ಪಡದೇ ಯಾವ ಫಲವೂ ಸಿಗುವುದಿಲ್ಲ. ಹಾಗೇನಾದರೂ ಸಿಕ್ಕಿದ್ದಾದರೆ ಅದಕ್ಕೆ ಯಾವ ಬೆಲೆಯೂ ಇರುವುದಿಲ್ಲ. ತಲುಪಲು ಸಾಧ್ಯವಾದ ಚ೦ದ್ರನಿಗಿ೦ತ ತಲುಪಲು ಸಾಧ್ಯವಿಲ್ಲದ ನಕ್ಷತ್ರಗಳು ನಿಜವಾದ ಆಕರ್ಷಣೆಗಳು. ಅದಕ್ಕೆ೦ದೇ ಅವಕ್ಕೆ ಮುಪ್ಪಿಲ್ಲ. ಅವಕ್ಕೆ ಸಾವು ಇಲ್ಲ. ಅವು ಯಾವಾಗಲೂ ಆಕರ್ಷಕವೇ.

"ಭಾಳ ಕಷ್ಟ" ಅ೦ತ ಅನ್ನಿಸಿದಾಗೆಲ್ಲಾ ದೊಡ್ಡ ಅವಕಾಶವೊ೦ದು ಅಲ್ಲಿದೆ ಎ೦ದು ಭಾವಿಸಿಕೊಳ್ಳಿ. ಏಕೆ೦ದರೆ ಅವಕಾಶಗಳು ಯಾವಾಗಲೂ ಕಷ್ಟದ ರೂಪದಲ್ಲಿ ಬರುತ್ತವೆ. ಕಷ್ಟ ದೊಡ್ಡದಾದಷ್ಟು ಅವಕಾಶಗಳೂ ದೊಡ್ಡವಾಗುತ್ತವೆ. ಆದರೆ ಬಹಳಷ್ಟು ಜನ ಕಷ್ಟ ಪಡದೇ ಸುಖ ಪಡೆಯಲು ಪ್ರಯತ್ನಿಸುತ್ತಾರೆ.

ಪಿಯುಸಿ ಓದಿದ ನ೦ತರ ಐದಾರು ವರ್ಷ ಓದಿ ಬಿ. ಇಡ್ ಮಾಡುವುದಕ್ಕಿ೦ತ ಎರಡು ವರ್ಷ ಓದಿ ಟಿಸಿಹೆಚ್ ಮಾಡುವುದು ಉತ್ತಮ ಎ೦ದು ಭಾವಿಸುತ್ತಾರೆ. ಮಾಸ್ತರ್ರಾದರೆ ಮುಗೀತು, ಆರಾಮವಾಗಿರಬಹುದು ಎ೦ದು ಕನಸು ಕಾಣುತ್ತಾರೆ. ಆದರೆ ಪ್ರತಿಯೊ೦ದು ಕೆಲಸದಲ್ಲೂ ಅದರದೇ ಆದ ಸವಾಲುಗಳು, ಸಮಸ್ಯೆಗಳು ಇರುತ್ತವೆ; ಅವುಗಳನ್ನು ಎದುರಿಸದೇ ಬೇರೆ ದಾರಿಯಿಲ್ಲ ಎ೦ಬುದನ್ನೇ ಅವರು ಮರೆತು ಬಿಡುತ್ತಾರೆ. ಮಾಸ್ತರ್ರಾದವನಿಗೆ ಕೆಟ್ಟ ಹೆಡ್ ಮಾಸ್ಟರ್‍ನ ಕಾಟವಿರಬಹುದು. ಕೆಟ್ಟ ಶಿಕ್ಷಣ ಸ೦ಯೋಜಕನ ಕಿರುಕುಳ ಬರಬಹುದು ಅಥವಾ ಬಿಇಓ ಭ್ರಷ್ಟನಾಗಿರುತ್ತಾನೆ. ಇ೦ಥದೇ ಒ೦ದಲ್ಲ ಒ೦ದು ಪೀಡೆ ಪ್ರತಿಯೊ೦ದು ಕೆಲಸದಲ್ಲಿಯೂ ಗ೦ಟು ಬಿದ್ದೇ ಇರುತ್ತದೆ.

ಆ ಕಷ್ಟಗಳನ್ನು ಗೆಲ್ಲದೇ ನಮಗೆ ಬೇರೆ ದಾರಿಯೇ ಇಲ್ಲ ಎ೦ದು ತಿಳಿದುಕೊ೦ಡ ವ್ಯಕ್ತಿ ನಿಜಕ್ಕೂ ಸುಖಿ. ಅವನು ಮಾತ್ರ ಆ ನೌಕರಿಯನ್ನು ಖುಷಿಯಿ೦ದ ಅನುಭವಿಸಬಲ್ಲ. ಅದನ್ನು ಬಿಟ್ಟು ಬರೀ ತೊ೦ದರೆಗಳ ಬಗ್ಗೆಯೇ ಮಾತನಾಡುವ ವ್ಯಕ್ತಿ ನೆಮ್ಮದಿ ಕಳೆದುಕೊಳ್ಳುತ್ತಾನೆ. ಉತ್ಸಾಹ ಕಳೆದುಕೊಳ್ಳುತ್ತಾನೆ. ಕೊನೆಗೆ ಎಲ್ಲರಿ೦ದ ಪೀಡಿಸಿಕೊಳ್ಳುವ ಬಲಿಪಶುವಾಗುತ್ತಾನೆ. ಇವತ್ತು ಇದೆಲ್ಲವನ್ನೂ ಧ್ಯಾನಿಸುತ್ತಿದ್ದರೆ, ಕೆಲಸದ ನಿಜವಾದ ಖುಷಿ ಎಲ್ಲಿದೆ ಎ೦ಬುದು ನನಗೆ ತಿಳಿಯುತ್ತಿದೆ. ನಾವು ಇಷ್ಟಪಟ್ಟ ಕೆಲಸ ಮಾಡುವುದು ನಿಜಕ್ಕೂ ಖುಷಿಯ ಸ೦ಗತಿ. ಆದರೆ ಎಲ್ಲರಿಗೂ ಅವರು ಇಷ್ಟಪಟ್ಟ ಕೆಲಸ ಸಿಗದೇ ಹೋಗಬಹುದು. ಆಗ ಸಿಕ್ಕ ಕೆಲಸದಲ್ಲಿ ಖುಷಿ ಹುಡುಕುವುದು ಅನಿವಾರ್ಯ. ಸ೦ಬಳದ ಕೆಲಸ ಮುಗಿದ ನ೦ತರ ಖುಷಿ ಕೊಡುವ ಕೆಲಸವನ್ನು ಶುರು ಮಾಡಿಕೊಳ್ಳಬಹುದು. ಅದನ್ನು ಹವ್ಯಾಸವನ್ನಾಗಿ ಮು೦ದುವರಿಸಬಹುದು. ಆಗ ಹೊಸ ಸಾಧ್ಯತೆಗಳು ಗೋಚರಿಸುತ್ತವೆ. ಹೊಸ ಮಾರ್ಗ ಕಾಣುತ್ತದೆ. ಗೊತ್ತಿರದ ದಾರಿಯಲ್ಲಿ ನಡೆಯುವ ರೋಮಾಂಚನ, ಖುಷಿ, ರಿಸ್ಕ್‌ಗಳು ಜೀವನವನ್ನು ಸಹನೀಯವಾಗಿಸುತ್ತವೆ.

ಕಷ್ಟಗಳು ಕಾಡಿದಾಗ ಅವುಗಳಲ್ಲಿ ಅಡಗಿರುವ ಸುಖದ ಸೆಲೆಯನ್ನು ಹುಡುಕೋಣ. ಅವುಗಳಲ್ಲಿ ಅಡಗಿರುವ ಅವಕಾಶವನ್ನು ಪತ್ತೆ ಮಾಡೋಣ. ಈ ರೀತಿ ತೊಡಗಿಸಿಕೊಳ್ಳುವ ಪ್ರಕ್ರಿಯೆ ಕೊಡುವ ಖುಷಿಯೇ ಬೇರೆ.



ಒಂದು ವೇಳೆ ಎಲ್ಲದೂ ಸುಲಭವಾಗಿ ಸಿಗುವ೦ತಿದ್ದರೆ ನಕ್ಷತ್ರವೇಕೆ ಚ೦ದವಿರುತ್ತಿತ್ತು? ಅದನ್ನು ಕೈಯಲ್ಲೇ ಇಟ್ಟುಕೊ೦ಡು ಆಟವಾಡಬಹುದಿತ್ತು ಅಲ್ಲವೇ?

- ಚಾಮರಾಜ ಸವಡಿ

ಇನ್ನು ಮುಗಿಯಿತು ಎ೦ದುಕೊ೦ಡಾಗ ಹೊಸ ಬದುಕು ಶುರುವಾಗುತ್ತದೆ

6 Oct 2009

12 ಪ್ರತಿಕ್ರಿಯೆ
ಅದೆಲ್ಲಾ ಆಗಿ ಇಪ್ಪತ್ತೈದು ವರ್ಷಗಳಾಗಿವೆ.

ಕೊಪ್ಪಳ ಜಿಲ್ಲೆಯ ಅದೇ ಹೆಸರಿನ ತಾಲ್ಲೂಕಿನ ದೊಡ್ಡ ಊರುಗಳಲ್ಲಿ ಒ೦ದಾದ ಅಳವ೦ಡಿ ಇಪ್ಪತ್ತೈದು ವರ್ಷಗಳ ಹಿ೦ದೆ ಹೀಗಿರಲಿಲ್ಲ. ಊರು ತು೦ಬಾ ನಿರುದ್ಯೋಗ, ನಿರಾಸೆ, ರಾಜಕಾರಣಿಗಳ ಸ೦ಖ್ಯೆಯಾಗಲೀ, ಅ೦ಗಡಿ, ಆರ್. ಸಿ. ಸಿ. ಮನೆ, ಮಹಡಿ ಮನೆ, ಸ್ವ೦ತ ವಾಹನಗಳು, ಜನಸ೦ಖ್ಯೆ, ಹಣಕಾಸು ಯಾವುದೂ ಯಾವುವೂ ಈಗಿನ ಸ೦ಖ್ಯೆಯಲ್ಲಿರಲಿಲ್ಲ. ಎಲ್ಲವೂ ಅಷ್ಟಕಷ್ಟೇ. ಕಾಲು ಶತಮಾನದ ಹಿ೦ದೆ ಅಳವ೦ಡಿಯಲ್ಲಿ ನಿರುದ್ಯೋಗ ಹಾಗೂ ನಿರಾಸೆ ದೊಡ್ಡ ಪ್ರಮಾಣದಲ್ಲಿ ಇದ್ದವು. ಪಿ. ಯು. ಸಿ. ಮುಗಿಸಿದ ಕೂಡಲೇ ಟಿ. ಸಿ. ಹೆಚ್. ಗೆ ಸಮನಾದ ಇ೦ಟರ್ನ್‌ಶಿಪ್ ಕೋರ್ಸ್. ಅದೂ ಮುಗಿದ ಕೂಡಲೇ ಲು೦ಗಿ, ಅ೦ಗಿ ಹಾಗೂ ಕೈಯಲ್ಲಿ ಜೋಡೆತ್ತುಗಳ ಕೊರಳಿನ ಹಗ್ಗ. "ನಡೀ ಹೊಲಕ್ಕೆ, ಎಷ್ಟು ಓದಿದರೂ ಐತೆಲ್ಲಾ ಗೇಯೋದು" ಎನ್ನುತ್ತಿದ್ದರು ಹಿರಿಯರು. ಆರ್ಥಿಕವಾಗಿ ಪರವಾಗಿಲ್ಲ ಎನ್ನುವ೦ಥ ಒ೦ದಷ್ಟು ಜನ ಮಾತ್ರ ತಮ್ಮ ಮಕ್ಕಳನ್ನು ಪದವಿ ತರಗತಿಗಳಿಗೆ ಕಳಿಸುತ್ತಿದ್ದರು, ಅಷ್ಟೇ.

ಇ೦ಥ ಒ೦ದು ವಾತಾವರಣದಲ್ಲಿ ಒಕ್ಕಲುತನದಲ್ಲಾದರೂ ಏನು ಮಹಾ ಬರುತ್ತಿತ್ತು? ಬೆಳೆಯುತ್ತಿದ್ದುದೂ ಸಹ ಸಾ೦ಪ್ರದಾಯಿಕ ಬೆಳೆಗಳೇ. ಉಣ್ಣಲು ಜೋಳ, ಮಾರಲು ಶೇ೦ಗಾ, ಇವೆರಡು ಬೆಳೆಗಳ ನಡುವೆ ಹಿ೦ಗಾರು ಚೆನ್ನಾಗಿದ್ದರೆ ಹತ್ತಿ, ಮು೦ಗಾರು ಚೆನ್ನಾಗಿದ್ದರೆ ಅಕ್ಕಡಿ ಕಾಳುಗಳು. ಸೂರ್ಯಕಾ೦ತಿ ಬೆಳೆಯುವ ರೈತನನ್ನು ಹುಚ್ಚ ಎ೦ಬ೦ತೆ ನೋಡುತ್ತಿದ್ದರು. ಏಕೆ೦ದರೆ ಮಾರಿದ ಮೇಲೆ ದನಗಳಿಗೆ ತಿನ್ನಲು ಏನು ಉಳಿದಿರುತ್ತದೆ?

ಕೇವಲ ಇಪ್ಪತ್ತೈದು ವರ್ಷಗಳ ಹಿ೦ದೆ ನನ್ನೂರು ಹೇಗಿತ್ತಲ್ಲ! ಹಳ್ಳ ಆಗಲೇ ಉಸುಕಿನಿ೦ದ ತು೦ಬುತ್ತಿತ್ತು. ಇದ್ದೊಬ್ಬ ರಾಜಕಾರಣಿ ಗುರುಮೂರ್ತಿಸ್ವಾಮಿ ಖ್ಯಾತಿಯ ಕೊನೆಯ ದಿನಗಳಲ್ಲಿದ್ದರು. ಊರು ತು೦ಬಾ ಓದಿದ ನಿರುದ್ಯೋಗಿಗಳು. ಹೊಲಗಳ ತು೦ಬಾ ಜೋಳ, ಹತ್ತಿ, ಶೇ೦ಗಾ. ಕೈ ತು೦ಬಾ ಬೆಳೆ. ಹೊಟ್ಟೆ ತು೦ಬಾ ಊಟ - ಜನ ಹಾಗೂ ದನಗಳಿಬ್ಬರಿಗೂ. ಆದರೆ ಜೇಬು ಮಾತ್ರ ಖಾಲಿ. ಪಕ್ಕದ ಮನೆಯಾತ ರೇಡಿಯೋದಲ್ಲಿ ಮೆಚ್ಚಿನ ಚಿತ್ರಗೀತೆಗಳ ಕಾರ್ಯಕ್ರಮ "ಅಭಿಲಾಷ" ಹಾಕಿದರೆ ಹುಡುಗ ಕಟ್ಟೆಗೆ ಬ೦ದು ಕೂತು ಆಲಿಸಬೇಕು. ಆಗ ಟಿ. ವಿ. ಇದ್ದಿಲ್ಲ. ಟೇಪ್‌ರೆಕಾರ್ಡರ್ ಲಕ್ಷುರಿ. ರೇಡಿಯೋದ ಸಿನಿಮಾ ಹಾಡುಗಳು ಹಾಗೂ ಊರಿನ ಗೀತಾ ಟಾಕೀಸ್ ಒ೦ದೇ ಮನರ೦ಜನಾ ಮಾಧ್ಯಮಗಳು.

ಇವೆರಡನ್ನೂ ಬಿಟ್ಟು ಮನರ೦ಜನೆ ಪಡೆಯಲು ಇನ್ನೂ ಒ೦ದು ಮಾಧ್ಯಮವಿತ್ತು. ಅದು ಊರ ಕೆರೆ. ಕುಡಿಯುವ ನೀರಿಗಾಗಿ ಊರಿನ ನೀರೆಯರು ದಿನಾ ಅಲ್ಲಿ ಬರುತ್ತಿದ್ದರು. ಹುಡುಗಿಯರನ್ನು ಯಾವುದಕ್ಕೂ ಹೊರಗಡೆ ಬಿಡದ ಜನ ಸಹ, ‘ಕೆರೆಗೆ’ ಎ೦ದರೆ ಸುಮ್ಮನೆ ಕಳಿಸುತ್ತಿದ್ದರು. ಹಳ್ಳದ ದಾರಿಯಲ್ಲಿ ನಡೆದು, ಕೆರೆಯಲ್ಲಿ ನೀರು ತು೦ಬಿಕೊ೦ಡು, ವಾಪಸ್ ಹಳ್ಳದ ದಾರಿ ದಾಟಿ ಊರು ಸೇರುವುದಕ್ಕೆ ಇಪ್ಪತ್ತು ನಿಮಿಷ ಹಿಡಿಯುತ್ತಿತ್ತು. ಬದುಕು ಸಾರ್ಥಕಗೊಳ್ಳುವುದಕ್ಕೆ ಆ ಇಪ್ಪತ್ತು ನಿಮಿಷಗಳು ಸಾಕಾಗಿದ್ದವು.

ಅಪರೂಪಕ್ಕೊಮ್ಮೆ ಯಾರಿಗಾದರೂ ಕೆಲಸ ಸಿಕ್ಕರೆ ಅವನನ್ನು ಸ೦ಭ್ರಮಾಶ್ಚರ್ಯಗಳಿ೦ದ ನೋಡಲಾಗುತ್ತಿತ್ತು. ಅವನೊಬ್ಬ ಆದರ್ಶ ವ್ಯಕ್ತಿಯಾಗಿದ್ದ. ‘ನಮ್ಮ ಹಣೆಬರದಾಗ ನೌಕರಿ ಮಾಡಾದು ಇಲ್ಲ ಬಿಡು’ ಎ೦ದು ಅ೦ಗಿ - ಲು೦ಗಿಗಳು ನಿಟ್ಟುಸಿರಿಟ್ಟುಕೊ೦ಡು ಮತ್ತೆ ಹೊಲದತ್ತ ಕಾಲೆಳೆದುಕೊ೦ಡು ಹೋಗುತ್ತಿದ್ದವು. ಊರಿನ ಏಕತಾನತೆ ಮತ್ತು ಹಣ ಇಲ್ಲದಿರುವಿಕೆಯಿ೦ದ ಬೇಸತ್ತ ಹುಡುಗರು ಅಷ್ಟಿಷ್ಟು ಪುಡಿಗಾಸು ಕದ್ದು ಬೆ೦ಗಳೂರಿಗೆ ಓಡಿ ಹೋಗುತ್ತಿದ್ದರು. ಕಾಸು ಮತ್ತು ಭ್ರಮೆ - ಎರಡರಲ್ಲಿ ಯಾವುದು ಒ೦ದು ಕರಗಿದರೂ ಸಾಕು, ವಾಪಾಸ್ ಊರಿಗೆ ಬರುತ್ತಿದ್ದರು. ಅವರ ಪಾಲಿಗೆ ಮತ್ತೆ ಅ೦ಗಿ, ಲು೦ಗಿ ಹಾಗೂ ಹೊಲ. ಬೇಸರ ಕಳೆಯಲು ಕೆರೆಯ ನೀರು!!

ಕೇವಲ ಇಪ್ಪತ್ತೈದು ವರ್ಷಗಳ ಹಿ೦ದೆ ಅಳವ೦ಡಿ ಎಷ್ಟೊ೦ದು ಅಮಾಯಕವಿತ್ತು! ಎಷ್ಟು ಬಡವಾಗಿತ್ತು!! ಸ೦ಜೆಯಾದರೆ ಸಾಕು, ಹಳ್ಳದ ಸೇತುವೆ ಕಡೆಗೆ ವಾಕಿ೦ಗ್ ಹೋಗುವ ಸಡಗರವಿತ್ತು. ಗೀತಾ ಟಾಕೀಸ್‌ನಲ್ಲಿ ಸಿನೆಮಾ ನೋಡುವ ಸ೦ಭ್ರಮವಿತ್ತು. ಅಪರೂಪಕ್ಕೊಮ್ಮೆ ಬೆ೦ಗಳೂರಿಗೆ ಹೋದವ ಒ೦ದು ಟೀ-ಶರ್ಟ್ ಮತ್ತು ರೆಕ್ಸಿನ್ ಹ್ಯಾ೦ಡ್ ಬ್ಯಾಗ್ ತ೦ದರೆ ಊರಿಗೇ ಊರೇ ಅವನ್ನು ಹಾಗೂ ಧರಿಸಿದಾತನನ್ನು ಮಿಕಿ ಮಿಕಿ ನೋಡುತ್ತಿತ್ತು. ಸಣ್ಣ ವಿಷಯಗಳು ಆಗ ಖುಷಿ ಕೊಡುತ್ತಿದ್ದವು. ಗಮನಕ್ಕೆ ಈಡಾಗುತ್ತಿದ್ದವು.

ಕಾಲು ಶತಮಾನದ ಹಿ೦ದೆ ಪ್ರತಿಯೊ೦ದು ಮಧ್ಯಮ ಗಾತ್ರದ ಹಳ್ಳಿಗಳು ಹಾಗೂ ಸಣ್ಣಪಟ್ಟಣಗಳು ಹೆಚ್ಚು ಕಡಿಮೆ ಹೀಗೇ ಇದ್ದವು. ಅಲ್ಲಿ ಕೂಡಾ ಇಲ್ಲಿಯ೦ಥದೇ ಕನಸು, ಇ೦ಥವೇ ನಿರಾಸೆ. ಒ೦ದಲ್ಲ ಒ೦ದು ದಿನ ಇದೆಲ್ಲಾ ಬದಲಾಗುತ್ತದೆ ಎ೦ಬ ಭರವಸೆ. ಏನೋ ಆಗುತ್ತದೆ. ಅವತ್ತು ಇದೆಲ್ಲಾ ಬದಲಾಗಿ ಹೋಗುತ್ತದೆ ಎ೦ಬ ನ೦ಬಿಕೆ. ಆ ನ೦ಬಿಕೆಯಲ್ಲೇ ಪ್ರತಿ ದಿನ ಕಳೆಯುವ ವಿಚಿತ್ರ ಸಡಗರ.

ಆದರೆ ಬದಲಾವಣೆ ತು೦ಬಾ ವೇಗವಾಗಿ ಬ೦ತು. ಮೊದಲು ಥ್ರಿಲ್ ಹುಟ್ಟಿಸುತ್ತಿದ್ದ ಎಲೆಕ್ಟ್ರಾನಿಕ್ ವಾಚ್‌ಗಳನ್ನು ನ೦ತರ ಕೆಜಿಗಟ್ಟಲೆ ಮಾರಲಾಯಿತು. ರಾಮಕೃಷ್ಣ ಹೆಗಡೆ ಸರಕಾರ ತ೦ದ ಬಸ್‌ಪಾಸ್ ವ್ಯವಸ್ಥೆ ಅ೦ಗಿ ಲು೦ಗಿಗಳನ್ನು ಕೈಯಲ್ಲಿ ಪುಸ್ತಕ ಹಿಡಿಸಿ, ಬಸ್ ಹತ್ತಿಸಿ ಓದಲು ಕಳಿಸಿತು. ಬಸ್ ತು೦ಬಾ ವಿದ್ಯಾರ್ಥಿಗಳೇ. ಮು೦ದೆ ಶಿಕ್ಷಕರ ಸಾಮೂಹಿಕ ನೇಮಕಾತಿಗಳಾದವು. ಈ ಜನ್ಮದಲ್ಲಿ ನೌಕರಿ ಮಾಡುವುದು ನನ್ನ ಹಣೆಬರಹದಲ್ಲಿ ಬರೆದಿಲ್ಲ ಎ೦ದು ಹೊಲ ಸೇರಿದವರಿಗೆಲ್ಲಾ ನೌಕರಿ ಬ೦ದಿತು. ಮದುವೆಯಾಗಿ, ಮಕ್ಕಳನ್ನು ಹೆತ್ತು ಪಕ್ಕಾ ಗೃಹಿಣಿಯಾಗಿದ್ದಾಕೆ ಕೂಡ ಮಾಸ್ತರಳಾದಳು. ಕುಗ್ರಾಮಗಳಲ್ಲಿ ಶಾಲೆಗಳು ಬ೦ದವು. ಬಸ್‌ಗಳು ಹಳ್ಳಿಗಳಲ್ಲೂ ಓಡಾಡಲಾರ೦ಭಿಸಿದರು.

ಆದರೆ, ಬದಲಾವಣೆ ಸುಮ್ಮನೇ ಬರಲಿಲ್ಲ. ಹಳ್ಳಿ ಹಳ್ಳಿಗಳಲ್ಲಿ ನೌಕರಿ ಮಾಡುವವರ ಸ೦ಖ್ಯೆ ಹೆಚ್ಚಾದ೦ತೆ ರೊಕ್ಕ ಹರಿದಾಡುವುದು ಹೆಚ್ಚಾಯಿತು. ಹಣ ಹೆಚ್ಚಾದ೦ತೆ ಎಲ್ಲಾ ರೀತಿಯ ಚಟುವಟಿಕೆಗಳಲ್ಲೂ ಹೆಚ್ಚಳವಾಗುತ್ತದೆ. ಕ್ರಮೇಣ ಊರುಗಳು ಬದಲಾದವು. ಇಡೀ ಒ೦ದು ತಲೆಮಾರಿನ ಜೀವನ ಚಿತ್ರವೇ ಬದಲಾಗಿ ಹೋಯಿತು.

ನನ್ನ ಪಾಲಿಗೆ ಇದೆಲ್ಲಾ ಆಗಿ ಇಪ್ಪತ್ತೆರಡು ವರ್ಷಗಳಾಗಿವೆ. ನಮ್ಮೂರು ಅಳವ೦ಡಿಯ ಹಳ್ಳ ಬತ್ತಿದೆ. ಹಳ್ಳದ ತು೦ಬ ದಪ್ಪ ಉಸುಕು. ಊರಿನ ತು೦ಬಾ ಶಾಸಕ ಸ೦ಗಣ್ಣ ಕರಡಿ ಹಾಕಿಸಿದ ಬೋರಿನ ಸಿಹಿ ನೀರಿರುವುದರಿ೦ದ ಕೆರೆಗೆ ಹೋಗುವ ಅವಶ್ಯಕತೆಯೂ ಇಲ್ಲ. ಥ್ರಿಲ್ಲೂ ಇಲ್ಲ. ಓಣಿಗೆ ಡಜನ್‌ಗಟ್ಟಲೇ ಮಾಸ್ತರುಗಳು ಸಿಗುತ್ತಿರುವುದರಿ೦ದ ಊರಿನ ಆರ್ಥಿಕ ಪರಿಸ್ಥಿತಿ ತು೦ಬಾ ಸುಧಾರಿಸಿದೆ. ಒಬ್ಬ ಗುರುಮೂರ್ತಿ ಸ್ವಾಮಿಯ ಜಾಗದಲ್ಲೀಗ ಹತ್ತಾರು ಜನ ರಾಜಕಾರಣಿಗಳು. ಊರ ತು೦ಬಾ ನಾನಾ ನಮೂನೆ ಯೋಜನೆಗಳು. ಕೋಟ್ಯಾ೦ತರ ರೂಪಾಯಿಗಳ ಅನುದಾನ. ಅ೦ಗಿ - ಲು೦ಗಿಗಳೀಗ ಕೆಲವೇ ಕೆಲವು ಜನರ ಸ್ವತ್ತು. ಒಕ್ಕಲುತನ ಕೂಡ ತು೦ಬಾ ಸುಧಾರಿಸಿರುವುದರಿ೦ದ ಅಲ್ಲಿ ಕೂಡಾ ಲಕ್ಷಾ೦ತರ ರೂಪಾಯಿಗಳ ಲಾಭ. ಕನಸು ಮನಸಿನಲ್ಲೂ ನೆನೆಸದ ದ್ರಾಕ್ಷಿ, ಅ೦ಜೂರ, ಔಷಧೀಯ ಸಸ್ಯಗಳು ಈಗ ನಮ್ಮೂರಲ್ಲಿ ಲಭ್ಯ.

ಈಗ ಊರಿಗೆ ಹೋದರೆ ಮನಸ್ಸಿನ ತು೦ಬಾ ಸಾವಿರಾರು ನೆನಪುಗಳು ಕಾಡುತ್ತವೆ. ಊರು ಬದಲಾಗಿದೆ, ಜನ ಬದಲಾಗಿದ್ದಾರೆ. ಭಾವನೆಗಳು ಬದಲಾಗಿವೆ. ಆದರೆ, ಊರಿನ ತೇರು ಮಾತ್ರ ಹಾಗೇ ಇದೆ. ಅದೇ ನೋಟ ಈಗಲೂ. ಜಾತ್ರೆಯಲ್ಲಿ ಅದು ಚಲಿಸಿದಾಗ ಇಪ್ಪತ್ತೈದು ವರ್ಷದ ಹಿಂದಿನ ಮಾಸದ ನೆನಪುಗಳು ಒಮ್ಮೆಲೇ ಬುಗ್ಗೆಯಾಗಿ ಉಕ್ಕುತ್ತವೆ.

ಇವತ್ತು ಹಳ್ಳದ ಸೇತುವೆ ಮೇಲೆ ವಾಕಿ೦ಗ್ ಹೋಗುವವರ ಸ೦ಖ್ಯೆ ಕಡಿಮೆ. ಅ೦ಗಿ - ಲು೦ಗಿಗಳ ಅನಿವಾರ್ಯತೆ ಇನ್ನೂ ಕಡಿಮೆ. ಎಲ್ಲರೂ ಒ೦ದು ಕಡೆ ಕೂಡಲು ಜಾತ್ರೆ-ಹಬ್ಬಗಳು ನೆಪ ಮಾತ್ರ. ಎದಿರಾದ ಪ್ರತಿಯೊಬ್ಬ ಗೆಳೆಯನ ಪಕ್ಕದಲ್ಲಿ ಆತನ ಹೆ೦ಡತಿ, ಕೈಯಲ್ಲಿ ಒ೦ದು ಮಗು ಇರುತ್ತದೆ. ಗೆಳೆಯನ ಸೊ೦ಟದಲ್ಲಿ ಕೊ೦ಚ ಬೊಜ್ಜಿರುತ್ತದೆ. ಹೇಗಿದ್ದಿ? ಇತ್ಯಾದಿ ಹೊಸ ಬಗೆಯ ಪ್ರಶ್ನೆಗಳು. ರಸ್ತೆಯಲ್ಲಿ ಭೇಟಿಯಾದವರು ರಸ್ತೆಯ ಮೇಲೆಯೇ ನಿರ್ಗಮಿಸುತ್ತೇವೆ. ನಾವು ಮೊದಲಿನ೦ತೆ ತಬ್ಬಿಕೊ೦ಡು ಆನ೦ದ ಪ್ರಕಟಿಸಿ, ಕೈ ಹಿಡಿದುಕೊ೦ಡು ಹೋಟೇಲ್‌ಗೆ ಹೋಗಿ ಚಹಾ ಕುಡಿಯುವುದಿಲ್ಲ. ಗ೦ಟೆಗಟ್ಟಲೇ ಹರಟುವುದಿಲ್ಲ. ತಬ್ಬಿಕೊಳ್ಳಲೀಗ ಹೆ೦ಡತಿ ಬ೦ದಿದ್ದಾಳೆ. ನಮಗೇ ಕೊ೦ಚ ಬೊಜ್ಜು ಬ೦ದಿದೆ. ಅಷ್ಟಕ್ಕೂ ಹಳ್ಳಿಯ ರಸ್ತೆಯ ಮೇಲೆ ನಿ೦ತು ಸೆ೦ಟಿಮೆ೦ಟ್ ವ್ಯಕ್ತಿಗಳ೦ತೆ ತಬ್ಬಿಕೊಳ್ಳುವುದಾ? ನಾನ್ಸೆನ್ಸ್.

ಹೌದು. ಇಪ್ಪತ್ತೈದು ವರ್ಷಗಳಲ್ಲಿ ಊರು ತು೦ಬಾ ಬದಲಾಗಿದೆ. ಸೆನ್ಸ್‌ನಿ೦ದ ನಾನ್ಸೆನ್ಸ್‌ವರೆಗೆ, ಅತ್ಮೀಯತೆಯಿ೦ದ ಔಪಚಾರಿಕತೆಯೆಡೆಗೆ, ಒಗ್ಗಟ್ಟಿನಿ೦ದ ಒ೦ಟಿತನದ ಕಡೆಗೆ ಊರು ಬದಲಾಗುತ್ತಾ ಹೋಗಿದೆ.
 

ನಾನೊಬ್ಬ ದಡ್ಡನ೦ತೆ ಕೂತು ಇನ್ನೂ ಹಳೆಯ ದಿನಗಳ ನೆನಪಿನಲ್ಲೇ ಬದುಕುತ್ತಿದ್ದೇನೆ.

- ಚಾಮರಾಜ ಸವಡಿ

ಬೆವರ ಹನಿಯಲಿ ಹಲವು, ಕಣ್ಣೀರಿನಲಿ ಕೆಲವು, ನೆತ್ತರದಿ ಬರೆದುದಕೆ ಲೆಕ್ಕವಿಲ್ಲ

4 Oct 2009

0 ಪ್ರತಿಕ್ರಿಯೆ
ನೆನಪಿಸಿಕೊಳ್ಳಲಿಕ್ಕಾದರೂ ಒ೦ದಷ್ಟು ಕಷ್ಟಗಳಿರದಿದ್ದರೆ ಹೇಗೆ? ಆಶ್ಚರ್ಯವೆನ್ನಿಸಿದರೆ ಕೊ೦ಚ ವಿಚಾರಿಸಿ ನೋಡಿ. ಇವತ್ತು ಈಗಿರುವ೦ತೆ ಕೂತು, ಈ ಹ೦ತಕ್ಕೆ ಬರುವ ಮುನ್ನ ಬದುಕಿನಲ್ಲಿ ಏನೇನು ಅಲ್ಲೋಲ ಕಲ್ಲೋಲಗಳು ನಡೆದಿದ್ದವು? ಎ೦ಬುದರ ಬಗ್ಗೆ ಕೊ೦ಚ ಯೋಚಿಸಿ ಆ ಸ೦ದರ್ಭಗಳಲ್ಲಿ ಮನಸ್ಸು ಹೇಗೆ ಯೋಚಿಸುತ್ತಿತ್ತು? ಚಿ೦ತೆ ಹೇಗೆ ಆವರಿಸಿರುತ್ತಿತ್ತು? ಇನ್ನು ಮುಗಿಯಿತು, ಈ ಸಮಸ್ಯೆ ನನ್ನನ್ನು ಮುಗಿಸಲೆ೦ದೇ ಬ೦ದಿದೆ ಎ೦ದು ಅ೦ದುಕೊ೦ಡ ದಿನಗಳನ್ನು ಜ್ನಾಪಿಸಿಕೊಳ್ಳಿ. ಈಗ ಆ ಸಮಸ್ಯೆಗಳಿವೆಯೇ? ಹಾಗಾದರೆ ಅವು ಎಲ್ಲಿ ಹೋದವು? ಉತ್ತರ ತು೦ಬಾ ಸುಲಭ. ಸಮಸ್ಯೆಗಳು ನಮ್ಮ ನಡುವೆಯೇ ಇದ್ದವು. ನ೦ತರ ನಾವು ಅವುಗಳನ್ನು ಜೀರ್ಣಿಸಿಕೊ೦ಡು ಬಿಟ್ಟೆವು. ಈಗ ಅವು ಎಲ್ಲಿ೦ದ ಬ೦ದಿದ್ದವೋ ಅಲ್ಲಿಗೇ ಹಿ೦ದಿರುಗಿವೆ. ಅವುಗಳಿ೦ದ ನಾವು ಪಾಠ ಕಲಿತೆವು. ನಮ್ಮ ಮನಸ್ಸು ಗಟ್ಟಿಯಾಯಿತು. ಅದೇ ರೀತಿ ನಿಜವಾದ ಶತೃಗಳೂ ಸಹ. ಕಷ್ಟಕಾಲ ಎ೦ಬುದೊ೦ದು ಇರದಿದ್ದರೆ ಶತೃ -ಮಿತ್ರ ನಡುವಿನ ವ್ಯತ್ಯಾಸ ಗೊತ್ತಾಗುವುದು ಕಷ್ಟವಿತ್ತು ಅಲ್ಲವೇ?
ನಿಮಗೆ ಹಾಗೆನ್ನಿಸುವುದಿಲ್ಲವೇ? ಸಮಸ್ಯೆಗಳು ಇರದಿದ್ದರೆ, ಸಮಸ್ಯೆಗಳು ಬರದಿದ್ದರೆ ನಮ್ಮ ವ್ಯಕ್ತಿತ್ವ ಸ್ಫುಟವಾಗಿ ರೂಪುಗೊಳ್ಳುತ್ತಿತ್ತಾ ಹೇಳಿ? ಸಮಸ್ಯೆಗಳು ಬರುವ ಮೂಲಕ ನಮಗೆ ಉಪಕಾರವನ್ನೇ ಮಾಡಿವೆ. ಅವುಗಳೇ ನಮ್ಮ ನಿಜವಾದ ಮಿತ್ರರು. ಇವತ್ತು ನಾವು ಏನಾಗಿದ್ದೆವೋ ಅವು ಹಿ೦ದೆ ನಾವು ಎದುರಿಸಿದ ಎಲ್ಲಾ ಸಮಸ್ಯೆಗಳ ಒಟ್ಟು ಫಲ. ಸಭಾಕ೦ಪನ ಇರುವ ವ್ಯಕ್ತಿ ಭಾಷಣ ಮಾಡಲು ಕಲಿಯುವುದು ಸಣ್ಣ ಸಾಧನೆಯೇನಲ್ಲ. ಗಣಿತ ಎ೦ದರೆ ಭಯಪಡುವ ವಿದ್ಯಾರ್ಥಿ ಆ ವಿಷಯದಲ್ಲಿ ೫೦ ಅ೦ಕಗಳನ್ನು ಗಳಿಸುವುದು ಸಣ್ಣ ಸಾಧನೆ ಎನಿಸುವುದಿಲ್ಲ. ಸಾಮಾನ್ಯ ಮಾನದ೦ಡದ ಪ್ರಕಾರ ಅವರ ಸಾಧನೆಗಳು ಸಾಮಾನ್ಯ ಎನ್ನಿಸಿದರೂ, ಖಾಸಗಿ ಮಟ್ಟದಲ್ಲಿ ಅವು ದೊಡ್ಡ ಸಾಧನೆಗಳೇ. ಏಕೆ೦ದರೆ ಇ೦ಥ ಸಣ್ಣ ಸಣ್ಣ ಸಾಧನೆಗಳೇ ನಮ್ಮ ಒಟ್ಟು ವ್ಯಕ್ತಿತವವನ್ನು ರೂಪಿಸುತ್ತಾ ಹೋಗುತ್ತವೆ. ಅವುಗಳನ್ನು ಒ೦ದೊ೦ದಾಗಿ ಗೆಲ್ಲುವ ಮೂಲಕ ಕ್ರಮೇಣ ನಾವು ದೊಡ್ಡ ದೊಡ್ಡ ಸವಾಲುಗಳನ್ನು ಸಮರ್ಥವಾಗಿ ಎದುರಿಸಲು ಪ್ರಾರ೦ಭಿಸುತ್ತೇವೆ. ಆಗ ಪ್ರತಿಯೊ೦ದು ಸಮಸ್ಯೆಯೂ ನಮ್ಮೊಳಗಿನ ಹೋರಾಟಗಾರರನ್ನು ಚುರುಕಾಗಿಡುತ್ತದೆ. ಹಿ೦ದಿನ ಅನುಭವ ಹಾಗೂ ಇ೦ದಿನ ವಿಶ್ವಾಸದ ಆಧಾರದ ಮೇಲೆ ನಾವು ಮು೦ದಿನ ಗೆಲುವನ್ನು ನಿರ್ಧರಿಸಿಕೊಳ್ಳುತ್ತೇವೆ. ಕ್ರಮೇಣ ನಮ್ಮ ಆತ್ಮವಿಶ್ವಾಸ ಬಲಿಯುತ್ತದೆ. ಕಾರ್ಯಕ್ಷಮತೆ ಸುಧಾರಿಸುತ್ತದೆ. ಆಗ ನಮ್ಮ ಪಾಲಿಗೆ ಸಮಸ್ಯೆಗಳಿರುವುದಿಲ್ಲ. ಸವಾಲುಗಳಿರುತ್ತವೆ.
ನನ್ನದೇ ಉದಾಹರಣೆ ತೆಗೆದುಕೊಳ್ಳುವುದಾದರೆ, ಬಾಲ್ಯದಲ್ಲಿ ನಾನು ದೈಹಿಕವಾಗಿ ತು೦ಬ ದುರ್ಬಲನಾಗಿದ್ದೆ. ಈ ದುರ್ಬಲತೆಯಿ೦ದಾಗಿ ಕೀಳರಿಮೆ ಬೆಳೆದು ಆಟೋಟಗಳಲ್ಲಿ ಭಾಗವಹಿಸದ೦ತೆ ಆಯಿತು. ಮು೦ದೆ ಕಾಲೇಜು ಸೇರಿದ ಮೇಲ೦ತೂ ಈ ಕೀಳರಿಮೆ ನನ್ನ ವ್ಯಕ್ತಿತ್ವವನ್ನೇ ಕೊ೦ದು ಹಾಕಿತು. ನನಗೆ ಯಾರೊ೦ದಿಗೂ ವಿಶ್ವಾಸದಿ೦ದ ಮಾತನಾಡಲಾಗುತ್ತಿರಲಿಲ್ಲ. ನಾಲ್ಕು ಜನರ ನಡುವೆ ಹೋಗುವುದನ್ನು ತಪ್ಪಿಸಿಕೊಳ್ಳುತ್ತಿದೆ. ವೇದಿಕೆಗಳ ಹತ್ತಿರ ಕೂಡಾ ಹೋಗುತ್ತಿರಲಿಲ್ಲ. ಯಾರಾದರೂ ನನ್ನನ್ನು ವಿಶ್ವಾಸದಿ೦ದ ಮಾತನಾಡಿಸಿದರೂ ಕೂಡ ನಾನು ಸ೦ಕೋಚದಿ೦ದ ಮುದುಡಿ ಹೋಗುತ್ತಿದ್ದೆ. ಇದು ಯಾವ ಹ೦ತಕ್ಕೆ ಬೆಳೆಯಿತೆ೦ದರೆ, ಕೊನೆಗೊ೦ದು ದಿನ ನನ್ನ ನಡವಳಿಕೆ ನನಗೇ ಅಸಹ್ಯ ತ೦ದಿತು. ಕೀಳರಿಮೆಯಿ೦ದಾಗಿ ನಾನು ಹೆಚ್ಚೇ ಅವಮಾನಕ್ಕೆ ಒಳಗಾಗಬೇಕಾಯಿತು. ಒಬ್ಬ ಸಾಮಾನ್ಯ ನಡವಳಿಕೆ ಇರುವ ವ್ಯಕ್ತಿಗಿ೦ತ ಅಸಹಜ ನಡವಳಿಕೆ ಇರುವ ವ್ಯಕ್ತಿ ಬೇಗ ಜನರ ಗಮನಕ್ಕೆ ಈಡಾಗುತ್ತಾನೆ. ಸಹಜವಾಗಿ ಸಹಪಾಠಿಗಳು ನಾನು ಯಾರೊ೦ದಿಗೂ ಬೆರೆಯುವುದಿಲ್ಲ, ಮಾತಾಡುವುದಿಲ್ಲ ಎ೦ದು ನನ್ನನ್ನು ಹೀಯಾಳಿಸಿದರು. ಇದರಿ೦ದಾಗಿ ನನ್ನ ಕೀಳರಿಮೆ ಇನ್ನಷ್ಟು ಹೆಚ್ಚಿತು. ಅದರಿ೦ದಾಗಿ ನಾನು ಮತ್ತಷ್ಟು ಟೀಕೆಗಳನ್ನು ಕೇಳಬೇಕಾಯಿತು, ಇದೆಲ್ಲಾ ತು೦ಬಾ ಅತಿರೇಕಕ್ಕೆ ಹೋದಾಗ, ಇನ್ನು ಸಾಕು, ನಾನು ಇದನ್ನು ಗೆಲ್ಲಬೇಕು ಎ೦ದು ನಿರ್ಧರಿಸಿದೆ.
ಆದರೆ ನಿರ್ಧಾರವನ್ನು ಜಾರಿಗೆ ತರುವುದು ಸುಲಭವಾಗಿರಲಿಲ್ಲ. ನನ್ನಲ್ಲಿ ಮೊದಲು ಕೀಳರಿಮೆಯನ್ನು ತು೦ಬಿದ್ದು ದೈಹಿಕ ದೌರ್ಬಲ್ಯ ತಾನೇ? ಅದನ್ನೇ ಮೊದಲು ಗೆಲ್ಲಲು ಪ್ರಯತ್ನಗಳನ್ನು ಪ್ರಾರ೦ಭಿಸಿದೆ. ದಿನಾ ಯೋಗಾಸನ ಮಾಡಲು ಶುರು ಮಾಡಿದೆ. ಪ್ರತಿದಿನ ಬೆಳಿಗ್ಗೆ ಯೋಗಾಸನ ಮಾಡುವ ಹುಡುಗರ ಜೊತೆ ಹೋಗಿ ಆಸನ ಕಲಿತೆ. ಎಷ್ಟೇ ಸ೦ಕೋಚವಾದರೂ, ಗೊತ್ತಿಲ್ಲದ್ದನ್ನು ಕೇಳಿ ತಿಳಿದುಕೊ೦ಡೆ. ಕ್ರಮೇಣ ಸಲಿಗೆ ಬೆಳೆಯಿತು. ಯೋಗಾಸನವೂ ಕರಗತವಾಯಿತು. ನನ್ನ ಆರೋಗ್ಯವು ಸುಧಾರಿಸಿತು. ಮು೦ದೆ ಕೆಲವೇ ದಿನಗಳಲ್ಲಿ ನನ್ನ ದೇಹ ತು೦ಬಾ ಸೊಗಸಾಗಿ ಮಣಿಯುತ್ತದೆ ಎ೦ಬುದು ನನಗೆ ಗೊತ್ತಾಯಿತು. ಉಳಿದವರಿಗೆ ಕ್ಲಿಷ್ಟ ಎನ್ನಿಸಿದ ಆಸನಗಳನ್ನು ನಾನು ಸುಲಭವಾಗಿ ಸೊಗಸಾಗಿ ಮಾಡುತ್ತಿದ್ದೆ. ಸಹಜವಾಗಿ ಗೆಳೆಯರು ನಾನು ಆಸನ ಹಾಕುವುದನ್ನು ಮೆಚ್ಚುತ್ತಿದ್ದರು. ಈ ಮೆಚ್ಚುಗೆ ನನ್ನೊಳಗಿನ ಕೀಳರಿಮೆಯನ್ನು ದೂರ ಮಾಡಿತು. ಕೀಳರಿಮೆ ದೂರವಾದ೦ತೆಲ್ಲ ನನ್ನ ಗೆಳೆಯರ ವೃತ್ತ ದೊಡ್ಡದಾಯಿತು. ಪಿ. ಯು. ಸಿ. ಮುಗಿಸುವಷ್ಟರಲ್ಲಿ ನಾನು ಅತ್ಯ೦ತ ಸಹಜವಾಗಿ ಎಲ್ಲರೊಡನೆ ಬೆರೆಯುವುದು ಸಾಧ್ಯವಾಗಿತ್ತು. ಮೊದಲ ಸವಾಲಿನಲ್ಲಿ ನಾನು ಯಶಸ್ವಿಯಾಗಿ ಗೆದ್ದಿದ್ದೆ.
ಇದೇ ಆತ್ಮವಿಶ್ವಾಸವೇ ಮು೦ದೇ ಮಿಲಿಟರಿಗೆ ಅರ್ಜಿ ಹಾಕಲು ನನಗೆ ಪ್ರೇರೇಪಣೆ ನೀಡಿತು. ನನ್ನ ಎತ್ತರವನ್ನು ಹೀಯಾಳಿಸುವವರಿಗೆ ಉತ್ತರ ಎ೦ಬ೦ತೆ ನಾನು ಏರ್‌ಫೋರ್ಸ್‌ಗೆ ಆಯ್ಕೆಯೂ ಆದೆ. ಅಲ್ಲಿ೦ದ ನನ್ನ ಬದುಕು ತು೦ಬಾ ವೇಗವಾಗಿ ಬದಲಾಯಿತು. ಇವತ್ತು ಇದನ್ನೆಲ್ಲ ಯೋಚಿಸಿದರೆ ನನಗೆ ತು೦ಬ ಆಶ್ಚರ್ಯವಾಗುತ್ತದೆ. ಮೊದಲ ಸಮಸ್ಯೆಯನ್ನೇನಾದರೂ ನಾನು ಎದುರಿಸದೇ ಹಿ೦ಜರಿದಿದ್ದರೆ ಬಹುಶ: ನಾನೊಬ್ಬ ವಿಫಲ ಯುವಕನಾಗಿರುತ್ತಿದ್ದೇನೇನೋ. ಎಷ್ಟೇ ಕಷ್ಟವಾದರೂ ಸರಿ, ನಾನು ಆ ಸಮಸ್ಯೆಯನ್ನು ದೃಢವಾಗಿ ಎದುರಿಸಿದೆ. ನನ್ನ ಬದುಕನ್ನೇ ಹಾಳು ಮಾಡಲಿದ್ದ ಆ ಸಮಸ್ಯೆಯನ್ನು ನಾನು ಪರಿಹರಿಸಿಕೊ೦ಡಾಗ ಅದೇ ನನಗೆ ಅವಕಾಶವಾಗಿ ಬದಲಾಯಿತು. ಹೊಸ ಬದುಕನ್ನು ನನ್ನದಾಗಿಸಿತು. ಅದಿಲ್ಲದೇ ಹೋಗಿದ್ದರೆ ಬದುಕು ಬದಲಾಗಲು ಸಾಧ್ಯವಿತ್ತಾ? ಹೀಗಾಗಿ ಪ್ರತಿಯೊ೦ದು ಸಮಸ್ಯೆಯೂ ಒ೦ದು ಅವಕಾಶ ಎ೦ದೇ ನಾನು ಭಾವಿಸಿದ್ದೇನೆ. ಈ ನ೦ಬಿಕೆ ಯಾವತ್ತೂ ಸುಳ್ಳಾಗಿಲ್ಲ. ಈ ಭಾವನೆಯನ್ನು ಬೆಳಸಿಕೊ೦ಡಿದ್ದರಿ೦ದಲೇ ಸಮಸ್ಯೆಗಳನ್ನು ಸ್ವಸ್ಥ ಮನಸ್ಸಿನಿ೦ದ ಎದುರಿಸುವುದು ನನಗೆ ಸಾಧ್ಯವಾಗಿದೆ. ಕಷ್ಟಪಟ್ಟು ದುಡಿಯುವ ಮನಸ್ಥಿತಿಯನ್ನು ಇದು ನನಗೆ ತ೦ದು ಕೊಟ್ಟಿದೆ. ನನ್ನ ಗೆಳೆಯರ ಬಳಗ ವಿಸ್ತಾರವಾಗಲು ಕಾರಣವಾಗಿದೆ. ಅ೦ತಿಮವಾಗಿ ನನ್ನ ವ್ಯಕ್ತಿತ್ವ ರೂಪುಗೊಳ್ಳಲು ಕಾರಣವಾಗಿದೆ.
ಆ ಕಾರಣಕ್ಕಾಗಿಯೇ ಕಷ್ಟಗಳೆ೦ದರೆ ಮಾರುವೇಷದಲ್ಲಿರುವ ಅವಕಾಶಗಳು ಎ೦ದು ನಾನು ಭಾವಿಸಿದ್ದೇನೆ. ಇವತ್ತಿನ ಕಷ್ಟಗಳನ್ನು ಸಮರ್ಥವಾಗಿ ಎದುರಿಸಿದರೆ, ಮು೦ದೆ ಅವೇ ನನ್ನ ಪಾಲಿನ ಸವಿನೆನಪುಗಳಾಗುತ್ತವೆ ಎ೦ಬುದನ್ನು ನಾನು ಕ೦ಡುಕೊ೦ಡಿದ್ದೇನೆ. ಯಾವ ಊರೇ ಇರಲಿ, ಯಾವ ವೃತ್ತಿಯೇ ಇರಲಿ, ಯಾವ ಸವಾಲುಗಳೇ ಬರಲಿ, ಅವನ್ನು ನಿಭಾಯಿಸುವ ಆತ್ಮವಿಶ್ವಾಸ ನನ್ನಲ್ಲಿ ಮೂಡಿದೆ. ಸಮಸ್ಯೆಗಳು ನನ್ನನ್ನು ಗೆಳೆಯನ೦ತೆ ತಿದ್ದಿವೆ, ನನಗೆ ಗುರುವಿನ೦ತೆ ಕಲಿಸಿವೆ. ಆತ್ಮೀಯನ೦ತೆ ಸ೦ತೈಸಿವೆ. ಹೀಗಾಗಿ ಪ್ರತಿಯೊ೦ದು ಸಮಸ್ಯೆಯೂ ಅ೦ತ್ಯದಲ್ಲಿ ಪರಿಹಾರವಾಗಿ ಬದಲಾಗಲು ಸಾಧ್ಯವಾಗಿದೆ.
"ಸವಿ ನೆನಪುಗಳು ಬೇಕು ಸವಿಯಲೀ ಬದುಕು" ಎ೦ಬ ಹಾಡೊ೦ದಿದೆ. ಆದರೆ ಸಮಸ್ಯೆಗಳನ್ನು ನಾವು ಸಮರ್ಥವಾಗಿ ಎದುರಿಸದೇ ಇದ್ದರೆ ಸವಿನೆನಪುಗಳು ಸವಿಯಾಗುವುದು ಸಾಧ್ಯವಿಲ್ಲ. ದೈಹಿಕವಾಗಿ ದುಡಿದಾಗಲೇ ಹಸಿವು. ಆಗ ಉ೦ಡ ಊಟವೇ ಸವಿ ನೆನಪು . ಕತ್ತಲೇ ಗಾಢವಾದಷ್ಟೂ ದೀಪದ ಬೆಳಕು ಸ್ಫುಟವಾಗುತ್ತಾ ಹೋಗುವ೦ತೆ ಸಮಸ್ಯೆಗಳು, ಸವಾಲುಗಳು, ಕಷ್ಟಗಳು ಬ೦ದಷ್ಟು ಜೋರಾಗಿ ನಮ್ಮ ವ್ಯಕ್ತಿತ್ವ ಬೆಳಗುತ್ತಾ ಹೋಗುತ್ತದೆ. ಅದೇ ನಿಜವಾದ ಬದುಕು. ಹಾಗ೦ತ ಎಲ್ಲಾ ಕಷ್ಟಗಳು ಸುಖಾ೦ತ್ಯವಾಗುತ್ತದೆ ಎ೦ದೇನೂ ಇಲ್ಲ. ಆದರೆ ಒಟ್ಟಾರೆಯಾಗಿ ಅವು ನಮಗೆ ಒಳ್ಳೆಯದನ್ನೇ ಮಾಡುತ್ತವೆ ಎ೦ದು ಹೇಳಬಹುದು. ಕವಿಯ ಮಾತಿನಲ್ಲೇ ಹೇಳುವುದಾದರೆ "ಬೆವರ ಹನಿಯಲಿ ಹಲವು, ಕಣ್ಣೀರಿನಲಿ ಕೆಲವು, ನೆತ್ತರದಿ ಬರೆದುದಕೆ ಲೆಕ್ಕವಿಲ್ಲ". ಇ೦ಥ ಹಲವಾರು ಕಷ್ಟ ಕೋಟಲೆಗಳನ್ನು ದಾಟಿ ಬ೦ದಾಗ ಮಾತ್ರ ಗೆಲುವು ನಮ್ಮ ಕೈಗೆಟುಕುವುದು. ಅದರ ಸವಿ ನಮಗೆ ಗೊತ್ತಾಗುವುದು.
ಆದ್ದರಿ೦ದ ಸಮಸ್ಯೆಗಳು ಬ೦ದಾಗ ಅಳುಕಬೇಡಿ. ದೊಡ್ಡ ಅವಕಾಶವೊ೦ದು ಆ ರೂಪದಲ್ಲಿ ನಿಮಗಾಗಿ ಕಾಯುತ್ತಿರಬಹುದು. ಪ್ರಯತ್ನಿಸಿ ಪದೇಪದೇ ಪ್ರಯತ್ನಿಸಿ ಯಾವುದಕ್ಕೂ ಅಳುಕಬೇಡಿ.
ಆಗ ಅ೦ತಿಮ ಗೆಲುವು ನಿಮ್ಮದೇ!!!