ಎಲ್ಲೆಡೆ ಹರಡಲಿ ಅಕ್ಕಿ ಉತ್ಸವ

31 Mar 2010

0 ಪ್ರತಿಕ್ರಿಯೆ

ಚಿತ್ರಾ ಪ್ರಸನ್ನ ಅವರು ಕಳಿಸಿದ ಈ ಮೇಲ್‌ ಇದು:

Swadeshi Rice Utsav
@
Gandhi Bhavan, Kumara Krupa Road, Sheshadripuram, Bangalore
On
4th April 2010 (10:30am to 5:00pm)

Fellow Citizens & Consumers:

A Swadeshi rice utsav is organized to benefit the large number of nutrition hungry rice consumers in and around Bangalore. This rice utsav brings to you several traditional and rare rice varieties which you may discover for the first time. Some amongst it are proven to be beneficial for the current generation medical challenge like Diabetes and other lifestyle related medical challenges.

You will also discover rice varieties which are grown using organic farming practices through which hazardous fertilizers or pesticides are avoided in the process of farming.
All these varieties of rice are brought to you at very affordable prices and straight from the farmer.

Come along with your family and friends to celebrate this festival and be a part of consumer revolution who are conscious of rice nutrition and rich Indian rice tradition.

This festival is brought to you by Sahaja Samrudha (a farmers group practicing organic farming techniques), YORA (Year of Rice Action 2009-10) and Thanal (a public interest research, advocacy, education and Action Trust from Kerala)

ಇಂಥ ಉತ್ಸವಗಳು ಅಲ್ಲಲ್ಲಿ ನಡೆಯುತ್ತಿದ್ದರೂ, ಮೊದಲ ಬಾರಿ ದೊಡ್ಡ ಮಟ್ಟದ ಪ್ರಚಾರ ದೊರೆಯುತ್ತಿದೆ. ಇದು ನಿಜಕ್ಕೂ ಸ್ವಾಗತಾರ್ಹ.

ಸಾವಯವ/ನೈಸರ್ಗಿಕ ಕೃಷಿ ಹೆಸರಿನಲ್ಲಿ ಅನೇಕ ಜನ ಕಡಿಮೆ ದರದಲ್ಲಿ ಬೆಳೆದ ಕೃಷಿ ಉತ್ಪನ್ನಗಳನ್ನು ದುಬಾರಿ ಬೆಲೆಗೆ ಮಾರುವ ದಾರಿ ಕಂಡುಕೊಂಡರು. ಹೀಗಾಗಿ, ಇಂಥ ಉತ್ಸವಗಳು ಬಹಳಷ್ಟು ಕಡೆ ನಿರೀಕ್ಷಿಸಿದ ಯಶಸ್ಸು ಗಳಿಸಲಿಲ್ಲ. ಸಾವಯವ/ನೈಸರ್ಗಿಕ ವಿಧಾನದಲ್ಲಿ ಉತ್ಪಾದನಾ ಖರ್ಚು ಕಡಿಮೆಯಾಗುತ್ತದೆ ಎಂಬ ವಾದ ನಿಜವೇ ಆದರೆ, ಉತ್ಪಾದನೆಗಳಿಗೆ ಹೆಚ್ಚು ಬೆಲೆ ಏಕೆ ನಿಗದಿಪಡಿಸಲಾಯ್ತು? ಎಂಬ ಪ್ರಶ್ನೆಗೆ ಇದುವರೆಗೆ ಸಮಾಧಾನಕರ ಉತ್ತರ ಸಿಕ್ಕಿಲ್ಲ. ಅದೂ ಮಾರುಕಟ್ಟೆಯ ತಂತ್ರವಾಗಿರುವುದರಿಂದ, ನೈಸರ್ಗಿಕ ಉತ್ಪಾದನೆಗಳು ದುಬಾರಿ ಎಂಬ ಹಣೆಪಟ್ಟಿ ಅಂಟಿಸಿಕೊಂಡು ಜನರಿಂದ ದೂರವಾದವು.

ಅಕ್ಕಿ ಉತ್ಸವ ಇಂಥ ಅನೈತಿಕ ಅತಿರೇಕಗಳನ್ನು ನಿವಾರಿಸುವಂತಾಗಲಿ. ಉತ್ಪಾದನೆ ವೆಚ್ಚ ಕಡಿಮೆಗೊಳಿಸುವ, ಅನ್ನ ಬೆಳೆದವರಿಗೆ ಸರಿಯಾದ ಬೆಲೆ ತಂದುಕೊಡುವ ವೇದಿಕೆಯಾಗಿ ಮಾರ್ಪಡಲಿ.

- ಚಾಮರಾಜ ಸವಡಿ

ಅದೇ ಪ್ರಹಸನ, ಮತ್ತದೇ ದುರಂತ

29 Mar 2010

1 ಪ್ರತಿಕ್ರಿಯೆ
ಬಿಬಿಎಂಪಿ ಚುನಾವಣೆ ಮುಗಿದಿದೆ. ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯಾಗಿ, ವಾರ್ಡ್‌‌ಗಳ ಪುನರ್ವಿಂಗಡಣೆಯಾಗಿ ೧೦೦ರಷ್ಟಿದ್ದ ವಾರ್ಡ್‌‌ಗಳ ಸಂಖ್ಯೆ ೧೯೮ಕ್ಕೆ ಏರಿದ ನಂತರ ನಡೆದ ಚುನಾವಣೆ ಎಂಬ ಹೆಗ್ಗಳಿಕೆ ಹೊರತುಪಡಿಸಿದರೆ, ಹಿಂದಿನ ಚುನಾವಣೆಗೂ ಈಗ ನಡೆದಿದ್ದಕ್ಕೂ ಏನೂ ವ್ಯತ್ಯಾಸವಿಲ್ಲ. 

ಅವೇ ವಿಷಯಗಳು, ಅವೇ ಪ್ರಹಸನಗಳು ಈ ಸಲವೂ ನಡೆದವು. ಮತದಾರನ ನಿರ್ಲಕ್ಷ್ಯವೂ ಅದೇ ತೆರನಾಗಿತ್ತು. ಚುನಾವಣಾ ಆಯೋಗ ಏನೇ ಬಿಗಿ ಕ್ರಮಗಳನ್ನು ಕೈಗೊಂಡರೂ, ಅಭ್ಯರ್ಥಿಗಳು ಬಹಿರಂಗವಾಗಿಯೇ ಅವನ್ನು ಉಲ್ಲಂಘಿಸಿದರು. ಐದು ಲಕ್ಷಕ್ಕಿಂತ ಹೆಚ್ಚು ಖರ್ಚು ಮಾಡುವಂತಿಲ್ಲ ಎಂಬ ಆಯೋಗದ ಕಟ್ಟುಪಾಡನ್ನು ಬಹುತೇಕ ಅಭ್ಯರ್ಥಿಗಳು ಉಲ್ಲಂಘಿಸಿದ್ದು ಮೇಲ್ನೋಟಕ್ಕೆ ಸ್ಪಷ್ಟವಾಗಿದ್ದರೂ, ಆಯೋಗ ಏನೂ ಮಾಡಲು ಆಗಿಲ್ಲ. ಜಾರಿಗೊಳಿಸದ ನಿಯಮಗಳ ಹಣೆಬರಹ ಏನಾಗುತ್ತದೆ ಎಂಬುದಕ್ಕೆ ಮತ್ತೊಂದು ತಾಜಾ ಉದಾಹರಣೆ ದಕ್ಕಿದಂತಾಯಿತು, ಅಷ್ಟೇ.
 

ಮತದಾರ ಏಕೆ ನಿರ್ಲಕ್ಷ್ಯ ತೋರುತ್ತಾನೆ? ಎಂಬ ಹಳೆಯ ಪ್ರಶ್ನೆ ಮತ್ತೆ ಮತ್ತೆ ಕಾಡಿದೆ. ಪ್ರಾಥಮಿಕ ಅಂದಾಜಿನ ಪ್ರಕಾರ, ಶೇ. ೪೦ರಷ್ಟು ಮತದಾನವಾಗಿದೆ. ಅಂದರೆ, ಅರ್ಧಕ್ಕಿಂತ ಹೆಚ್ಚು ಮತದಾರರು ಮತಗಟ್ಟೆಗೆ ಬರಲಿಲ್ಲ. ಬಂದ ಎಷ್ಟೋ ಜನರ ಹೆಸರುಗಳೇ ಮತಪಟ್ಟಿಯಲ್ಲಿ ಇದ್ದಿಲ್ಲ. ಮತದಾನ ಮೂಲಭೂತ ಹಕ್ಕು ಎನ್ನುವುದಾದರೆ, ಒಬ್ಬ ವ್ಯಕ್ತಿ ತನ್ನ ಗುರುತನ್ನು ಸಾಬೀತುಪಡಿಸುವಂಥ ದಾಖಲೆಗಳನ್ನು ಹೊಂದಿದ್ದರೂ, ಮತದಾನ ಹಕ್ಕಿನಿಂದ ವಂಚಿತನಾಗುವುದನ್ನು ಚುನಾವಣಾ ಆಯೋಗ ಹೇಗೆ ವಿವರಿಸುತ್ತದೋ ಗೊತ್ತಿಲ್ಲ. ಆದರೆ, ಹಳೆಯ ಸಮಸ್ಯೆಗೆ ಈಗಿನ ವ್ಯವಸ್ಥೆ ಉತ್ತರ ಕೊಡಲು ವಿಫಲವಾಗಿದೆ ಎಂಬುದು ಮಾತ್ರ ಸ್ಪಷ್ಟ.
 

ಮತದಾನ ಮಾಡಲು ಜನ ಏಕೆ ನಿರ್ಲಕ್ಷ್ಯ ತೋರುತ್ತಾರೆ ಎಂಬುದಕ್ಕೆ ಹಲವಾರು ಕಾರಣಗಳಿವೆ. ಮತಪಟ್ಟಿಯಲ್ಲಿ ಹೆಸರಿಲ್ಲ ಎಂಬುದು ಒಂದು ಸಣ್ಣ ಅಂಶ ಮಾತ್ರ. ಒಟ್ಟು ಪ್ರಕ್ರಿಯೆ ಬಗ್ಗೆ ತಮಗಿರುವ ಅಸಮಾಧಾನವನ್ನು ಜನ ವ್ಯಕ್ತಪಡಿಸುವುದು ಹೀಗೆ. ಕಣದಲ್ಲಿರುವ ಅಭ್ಯರ್ಥಿಗಳ ಬಗ್ಗೆ ಅಸಮಾಧಾನ ಇದ್ದಾಗ, ಆರ್ಥಿಕ ಮಿತಿಯಲ್ಲಿ ಯೋಗ್ಯ ಅಭ್ಯರ್ಥಿಯೊಬ್ಬ ಸ್ಪರ್ಧಿಸಲು ಸಾಧ್ಯವಾಗದ ವಾತಾವರಣ ಇರುವಾಗ, ಮತದಾನ ಪ್ರಕ್ರಿಯೆ ಪ್ರಹಸನವಾಗುತ್ತದೆ ಎಂಬುದಕ್ಕೆ ಬಿಬಿಎಂಪಿ ಚುನಾವಣೆ ಮತ್ತೊಮ್ಮೆ ಸಾಕ್ಷ್ಯ ಒದಗಿಸಿದಂತಾಗಿದೆ. ಫಲಿತಾಂಶ ಬಂದಾಗ, ಯಾರೇ ಗೆಲ್ಲಲಿ, ಅವರಿಗೆ ವಾರ್ಡ್‌‌ನ ಅರ್ಧದಷ್ಟು ಜನರ ಮನ್ನಣೆ ಇಲ್ಲ ಎಂಬ ಅಂಶವೇ ಆಘಾತಕಾರಿ. ಹಾಗಿದ್ದ ಮೇಲೆ ಇದು ಜನಮತ ಹೇಗಾಗುತ್ತದೆ?
 

ಹಣಬಲ ಅಥವಾ ರಾಜಕೀಯ ನಂಟಿರುವ ವ್ಯಕ್ತಿಗಳು ಮಾತ್ರ ಚುನಾವಣೆ ಎದುರಿಸುವ ವಾತಾವರಣ ಇರುವವರೆಗೆ, ಮತದಾನದ ಬಗ್ಗೆ ಜನರ ನಿರ್ಲಕ್ಷ್ಯವೂ ಹೀಗೇ ಮುಂದುವರಿಯುತ್ತದೆ. ತಮಗೆ ಉತ್ತಮ ಎನಿಸುವ ಅಭ್ಯರ್ಥಿ ಕಣದಲ್ಲಿ ಇಲ್ಲದಿದ್ದರೆ ಜನರಾದರೂ ಏನು ಮಾಡಬೇಕು? ಸಹಜವಾಗಿ ಅವರು ಮತಗಟ್ಟೆಯಿಂದ ದೂರ ಉಳಿಯುತ್ತಾರೆ. ಇಡೀ ಚುನಾವಣೆ ಎಂಬುದು ಪ್ರಹಸನವಾಗುತ್ತದೆ. ಈಗ ಆಗಿರುವುದೇ ಅದು.
 

ಸಮಾಜದ ಪ್ರತಿಯೊಂದು ಬೆಳವಣಿಗೆಯೂ ರಾಜಕಾರಣದ ಮೂಲಕವೇ ಬರಬೇಕು ಎಂಬ ಪರಿಸ್ಥಿತಿ ಇಂಥ ಪ್ರಹಸನಗಳನ್ನು ಸೃಷ್ಟಿಸುತ್ತದೆ. ತಂತಮ್ಮ ವೃತ್ತಿಯಲ್ಲಿ ಉತ್ತಮವಾಗಿ ಕೆಲಸ ಮಾಡುವವರು ನಿರ್ಲಕ್ಷ್ಯಕ್ಕೆ ಒಳಗಾಗುತ್ತಾರೆ. ಅವರ ಪರಿಣಿತಿಯನ್ನು, ಅನುಭವವನ್ನು ಸಮಾಜದ ಒಟ್ಟು ಅಭಿವೃದ್ಧಿಗೆ ಬಳಸಲು ಆಗದ ವಾತಾವರಣ ಸೃಷ್ಟಿಯಾಗುತ್ತದೆ. ರಾಜಕೀಯ ಹಾಗೂ ಇತರ ಕ್ಷೇತ್ರಗಳ ನಡುವಿನ ಅಂತರ ಹೆಚ್ಚುತ್ತಾ ಹೋಗುತ್ತದೆ. ಇಷ್ಟೊಂದು ಕಷ್ಟಪಟ್ಟು, ಹಣ ಖರ್ಚು ಮಾಡಿದರೆ ಮಾತ್ರ ಗೆಲ್ಲುವ ಸಾಧ್ಯತೆ ಎಂಬ ವಾಸ್ತವ ಇತರ ರಂಗದ ಪ್ರತಿಭಾವಂತರನ್ನು ರಾಜಕೀಯ ಕ್ಷೇತ್ರದಿಂದ ದೂರ ಇರಿಸುತ್ತದೆ. ಅಂಥ ಜನರನ್ನು ಶಾಸಕಾಂಗದೊಳಗೆ ತರಲೆಂದೇ ಮೇಲ್ಮನೆ, ರಾಜ್ಯಸಭೆಗಳು ಇವೆಯಾದರೂ, ಅವು ಕೂಡಾ ಕಲಬೆರಕೆಯಾಗಿದ್ದರಿಂದ, ರಾಜಕಾರಣವೇ ಬೇರೆ, ಇತರ ಕ್ಷೇತ್ರಗಳೇ ಬೇರೆ ಎನ್ನುವಂಥ ವಾತಾವರಣ ಸೃಷ್ಟಿಯಾಗಿದೆ. ಸ್ಥಳೀಯ ಸಂಸ್ಥೆಗಳಲ್ಲಾದರೂ ಮೂಲಭೂತ ಬದಲಾವಣೆಗಳಾಗದಿದ್ದರೆ, ಬರುವ ವರ್ಷಗಳಲ್ಲಿ ಈ ಅಂತರ ಇನ್ನಷ್ಟು ಹೆಚ್ಚುತ್ತದೆ. ಇತರ ರಂಗದ ಪ್ರತಿಭಾವಂತರ ಅನುಭವವನ್ನು ಬಳಸಿಕೊಳ್ಳಲಾಗದ ಸ್ಥಿತಿ ನಿಜಕ್ಕೂ ಅಪಾಯಕಾರಿ. ಬದಲಾವಣೆ ಸಾಧ್ಯವಾಗಿಸಬಲ್ಲ ವ್ಯಕ್ತಿಗಳೇ ದೂರ ಉಳಿಯುವಂತಾದರೆ, ಪ್ರಗತಿ ಸಾಧ್ಯವಾಗುವುದಾದರೂ ಹೇಗೆ?
 

ಎಲ್ಲವೂ ಮುಕ್ತಗೊಳ್ಳುತ್ತಿರುವ ಇಂದಿನ ದಿನಗಳಲ್ಲಿ ರಾಜಕೀಯ ಕ್ಷೇತ್ರವೂ ಇತರ ರಂಗದ ಪ್ರತಿಭಾವಂತರಿಗೆ ತೆರೆದುಕೊಳ್ಳಬಹುದಿತ್ತು. ಸ್ಥಳೀಯ ಸಂಸ್ಥೆಗಳ ಚುನಾವಣೆಯಾದರೂ ಅದಕ್ಕೆ ವೇದಿಕೆಯಾಗಬಹುದಿತ್ತು. ಆದರೆ, ಹಾಗಾಗುತ್ತಿಲ್ಲ ಎಂಬುದಕ್ಕೆ ನೀರಸವಾಗಿ ಮುಗಿದ ಬಿಬಿಎಂಪಿ ಚುನಾವಣೆ ಜ್ವಲಂತ ಸಾಕ್ಷಿ.

- ಚಾಮರಾಜ ಸವಡಿ

ಒಂದಿಷ್ಟು ಚುಟುಕಗಳು-1

28 Mar 2010

4 ಪ್ರತಿಕ್ರಿಯೆ

ಬುದ್ಧಿವಂತನಲ್ಲಿ 
ಭಾವನೆಗಳ ಪಸೆಯಿಲ್ಲ
ತಲೆ ಏರಿ ಕೂತರೆ
ಹೃದಯಕ್ಕೆ ಇಳಿಯುವುದೇ ಇಲ್ಲ

*****

ಬೆಳಿಗ್ಗೆ ಬೇಗ ಏಳಬೇಕು
ಅಂತ ಮಲಗಿದರೆ
ಕನಸಿನ ತುಂಬ
ಅಲಾರಾಂ ಮೊಳಗುವ ಸದ್ದು

*****

ಎಲ್ಲಿಂದಲೋ ಬಂದವರು
ಏಕೆ ಇಷ್ಟವಾಗುತ್ತಾರೋ...

*****

ಹುಚ್ಚನಂತೆ ಬದುಕುತ್ತಿದ್ದಾಗ
ಜೀವನವೆಷ್ಟು ಚಂದವಿತ್ತು!

*****

ಕಣ್ಣೀರ ಹನಿಗಳ ಲೆಕ್ಕವಿಟ್ಟೆಯಾ ಗೆಳೆಯಾ?
ಹಾಗಾದರೆ, ನೀನು ಕವಿಯಲ್ಲ, ಪ್ರೇಮಿಯೂ ಅಲ್ಲ

- ಚಾಮರಾಜ ಸವಡಿ