ನಿನ್ನೆ, ಇಂದು ಮತ್ತು ನಾಳೆ

28 Feb 2011

2 ಪ್ರತಿಕ್ರಿಯೆ
ನಾನಿಲ್ಲಿ ಸುಮ್ಮನೇ ನಿಂತಿದ್ದೇನೆ.

ನಿನ್ನೆದುರು ನಿನ್ನ ಬದುಕಿದೆ. ನನ್ನ ಬದುಕು ನನ್ನೆದುರು. ನಮ್ಮಿಬ್ಬರೆದುರು ನಮ್ಮ ಬದುಕಿದೆ.

ನನ್ನ ನಿನ್ನೆಗಳು ನಿನಗೆ ಮತ್ತು ನಿನ್ನ ನಿನ್ನೆಗಳು ನನಗೆ ಗೊತ್ತಿಲ್ಲ. ಇನ್ನು ನಮ್ಮಿಬ್ಬರ ನಿನ್ನೆ-ನಾಳೆಗಳ ಬಗ್ಗೆ ಇಬ್ಬರಿಗೂ ತಿಳಿದಿಲ್ಲ.

ನಾಳೆಗಳ ಬಗ್ಗೆಯೂ ನಮಗೆ ಏನೂ ಗೊತ್ತಿಲ್ಲ. ಆದರೆ, ನಾವು ಇಂದಿನ ಬಗ್ಗೆ ಖಂಡಿತವಾಗಿ ಯೋಚಿಸಬಹುದು. ಇಂದಿನ ನಮ್ಮ ಬದುಕು, ನಾಳೆಯ ನಮ್ಮ ಬದುಕಾಗುತ್ತದೆ. ಅಲ್ಲವೆ?

ನಿನ್ನ ನಿನ್ನೆಗಳನ್ನು ಬಿಟ್ಹಾಕು. ನಾನೂ ಬಿಟ್ಹಾಕಿದ್ದೇನೆ. ಅದು ಆಗಿ ಹೋದ ಬದುಕು. ಓದಿಟ್ಟ ಪುಸ್ತಕ. ನೋಡಿಯಾಗಿರುವ ಚಿತ್ರ. ಅದನ್ನು ನಾವಿಬ್ಬರೂ ಬದಲಿಸಲಾರೆವು. ಬದಲಿಸುವ ಯತ್ನವೂ ಬೇಡ.

ನಿನ್ನೆಯನ್ನು ನೆನೆದು ಇಂದು ಕಣ್ಣೀರಿಡುವುದೇಕೆ? ಅದು ನಾಳೆಗೆ ಏನನ್ನೂ ಕೊಡಲಾರದು. ಇವತ್ತಿನ ಬಗ್ಗೆ ಯೋಚಿಸು. ಇಂದಿನ ಬದುಕನ್ನು ನೀನು ಬದಲಿಸಬಲ್ಲೆ. ನಾಳೆಯನ್ನು ರೂಪಿಸಬಲ್ಲೆ. ನಾಳೆಯ ಭವಿಷ್ಯದ ಮರದ ಬೀಜವನ್ನು ಇಂದೇ ಬಿತ್ತು. ನಿನ್ನ ವಿಫಲ ಕನಸಿನ ಕಣ್ಣೀರ ಹನಿಸು. ಕನಸನ್ನು ಬೆರೆಸು. ನಿನ್ನಾಸೆಯ ನಾಳೆ ನಿನ್ನದಾದೀತು.

ಎಷ್ಟಂತ ಅಳುತ್ತೀಯಾ? ಕಣ್ಣೀರ ಹನಿಗಳು ಕುಸಿದ ಕನಸನ್ನು ಹೇಳುತ್ತವೆ. ವಿಫಲ ಯತ್ನಗಳನ್ನು ಬಣ್ಣಿಸುತ್ತವೆ, ನಿಜ. ಆದರೆ, ಅವು ನಾಳೆಗೇನೂ ಕೊಡಲಾರವು. ಅಳುವ ಕಣ್ಣುಗಳಿಗಿಂತ, ಅರಳುವ ಕಣ್ಣುಗಳು ನಾಳೆಯನ್ನು ರೂಪಿಸಬಲ್ಲವು ಎಂಬುದನ್ನು ಮರೆಯದಿರು.

ನೀನು ಎಲ್ಲವನ್ನೂ ಬಲ್ಲೆ ಎಂಬುದನ್ನು ನಾನು ಬಲ್ಲೆ. ನಿನಗೆ ಎಲ್ಲವೂ ಅರ್ಥವಾಗುತ್ತದೆ ಎಂಬುದೂ ನನಗರ್ಥವಾಗಿದೆ. ಬದುಕಿನ ತಿರುವು ದಾರಿಯುದ್ದಕೂ ಪೊರೆಯಬೇಕಿರುವುದು ನಿನ್ನ ಕಂಗಳ ದೀಪದ ಬೆಳಕು ಎಂಬುದನ್ನೂ ನೀನು ತಿಳಿದುಕೊಳ್ಳಬೇಕು. ಆ ಕಂಗಳು ಅಳದಿರಲಿ. ಆ ಬೆಳಕು ಮಸುಕಾಗದಿರಲಿ. ಒರೆಸಿಕೋ ಕಣ್ಣೀರ. ತಂದುಕೋ ಮುಗುಳ್ನಗೆಯ. ಎದೆಯಾಳದಲಿ ಮಿಣುಕುತ್ತಿರುವ ಆ ಮಿಣುಕುಬೆಳಕು ನಿನ್ನ ಕಂಗಳಿಂದಿಳಿದು ತಿರುವು ದಾರಿಯುದ್ದಗಲಕೂ ಹರಡಲಿ. ನಿನ್ನ ನಡೆ ನಿನಗೆ ನಿಚ್ಚಳವಾಗಲಿ.

ಈಚೆ ತೀರದಿ ನಿಂತು ದಾರಿ ಕಾಯುವ ಹುಚ್ಚು ಪಥಿಕ ನಾನು. ಅರ್ಧ ದಾರಿಯನ್ನು ಈಜಿ ಬರಬಲ್ಲೆ. ಇನ್ನರ್ಧ ನೀನೇ ಈಜಬೇಕು. ಈ ಎರಡು ಅರ್ಧಗಳ ನಡುವೆ ಅಲ್ಲೆಲ್ಲೋ ಸಂಗಮವಿದೆ. ಅದನ್ನು ನಾವು ಜೊತೆಯಾಗಿ ತಲುಪಬೇಕಿದೆ. ಅಲ್ಲಿಂದ ಬದುಕು ಜೊತೆಯಾಗಿ ಬೆರೆತು ಹರಿಯಬೇಕಿದೆ. ತೀರದಲ್ಲೇ ಬದುಕು ತೀರಿ ಹೋಗದಿರಲಿ. ಇಡು ಹೆಜ್ಜೆ. ಈಜು ನಿನ್ನರ್ಧ ಪಾಲಿನ ನೀರ. ಸಂಗಮದೆಡೆಗೆ ತಲುಪು. ನಾನೂ ಇಳಿದೇನು. ಈಜಿಯೇನು. ಸಂಗಮದಲಿ ಜೊತೆಯಾದೇನು. ಬಾಳ ಪೂರ್ತಿ ಜೊತೆಯಾಗಿ ಹರಿದೇನು. ಮುಂದೆಲ್ಲೋ ಕಡಲಲ್ಲಿ ಲೀನವಾಗುವವರೆಗೆ ಎದೆ ದೀಪಕ್ಕೆ ಬತ್ತಿಯಾದೇನು. ಎಣ್ಣೆಯಾದೇನು. ನಿನ್ನ ಕಂಗಳ ಬೆಳಕಾದೇನು. ಎದೆಯಾಳದಲಿ ಇಳಿದು ಹೊಸ ಕನಸಾದೇನು. ನನಸಾದೇನು.

ಇಳಿವ ಮುನ್ನ ಸಾವಿರ ಬಾರಿ ಯೋಚಿಸು. ಮಾಡುವುದಾದರೆ ಹೊಸ ತಪ್ಪ ಮಾಡು. ಇಡುವುದಾದರೆ ಮುಂದಡಿಯಿಡು. ಈಜುವುದಾದರೆ, ಕಡಲೆಡೆಗೆ ಹರಿಯುವ ನದಿಯನ್ನೀಜು. ಕಾಣುವುದಾದರೆ ಹೊಸ ಕನಸ ಕಾಣು. ಆಗ ನಿನ್ನ ಕಣ್ಣೀರು ನದಿಯಲ್ಲಿ ಒಂದಾಗಿ ಬೆರೆಯುತ್ತದೆ. ಕಡಲೆಡೆಗೆ ಕರೆದೊಯ್ಯುತ್ತದೆ.

ಇದು ಹುಸಿ ಭರವಸೆಯಲ್ಲ. ಮರುಳು ಮಾತೂ ಅಲ್ಲ. ನಿನ್ನನ್ನಳಿಸುವ ನಿನ್ನೆಗಳನ್ನ ಅಳಿಸಿಹಾಕುವ ದಾರಿಯಿದು. ತೆರೆದುಕೋ ಮನಸ. ಕರೆದುಕೋ ಕನಸ. ಎಲ್ಲಾ ನಿರಾಶೆಗಳ ನಿರಿಗೆಕಟ್ಟಿ, ಸವಾಲುಗಳ ಕಚ್ಚೆ ಕಟ್ಟಿ, ಮುಂದಡಿಯಿಡು. ಗತ ಬದುಕಿಗೆ ಕುರುಡಾಗು. ಟೀಕೆಗಳಿಗೆ ಕಿವುಡಾಗು. ಹತಾಶತೆಗೆ ಮೂಕಳಾಗು. ಹಿಂದೆ ನೋಡದೇ ಎದ್ದು ಬಂದ ಬುದ್ಧನಂತೆ, ಎದ್ದು ಬಾ. ಖಂಡಿತ ಗೆದ್ದು ಬರುವೆ.

ಇನ್ಯಾವ ಅಳುಕು? ಇನ್ಯಾವ ಯಾತನೆ? ಹೊಸ ಕನಸಿನ ನಾಳೆಗಾಗಿ ಇಂದೇ ಹೊರಡು. ಭವವ ತೊರೆವವರನ್ನು ಭಯವೂ ತೊರೆವುದು. ಹನಿಸಿದ ಕಣ್ಣೀರ ಲೆಕ್ಕ ಮರೆತು, ಕುಸಿದ ಕನಸುಗಳ ನೋವು ಮರೆತು, ಸುರಿಸಲೊಂದಿಷ್ಟು ಆನಂದಬಾಷ್ಪಗಳನ್ನು ಹುಷಾರಾಗಿ ಎತ್ತಿಕೊಂಡು ಬಾ. ಈಚೆ ತೀರದಲಿ ನಾನು ಕಾಯುತ್ತಲೇ ಇದ್ದೇನೆ. ಕಾಯುತ್ತಲೇ ಇರುತ್ತೇನೆ. ಅಲುಗುವುದಿಲ್ಲ. ಅಗಲುವುದಿಲ್ಲ. ಕನಲುವುದಿಲ್ಲ. ಕರಗುವುದಿಲ್ಲ. ಶಿಲೆಯಾದ ಶಾಪಗ್ರಸ್ತನಂತೆ ನಿಂತೇ ಇರುತ್ತೇನೆ. ಅದು ಖಂಡಿತ.

ಬರುತ್ತೀಯಲ್ಲ?

- ಚಾಮರಾಜ ಸವಡಿ

ಕಳೆದುಹೋಗಬೇಕು...

26 Feb 2011

2 ಪ್ರತಿಕ್ರಿಯೆ
If I loved you less, I might be able to talk about it more?


ಹಾಗಂತ ಬರೆದುಕೊಂಡು ತುಂಬ ದಿನಗಳಾದವು. ಈ ನಡುವೆ ಗಂಭೀರವಾಗಿ ಏನೇ ಮಾಡಲು ಹೋದರೂ ಅದನ್ನು ಪೂರ್ತಿಗೊಳಿಸಲಾಗದೇ ಒದ್ದಾಡುವಂತಾಗುತ್ತಿದೆ. ಸುಮ್ಮನೇ ಪುಸ್ತಕದ ಷೆಲ್ಫ್ ದಿಟ್ಟಿಸುವುದು, ಅದರೊಳಗಿಂದ ಯಾವುದಾದರೂ ಪುಸ್ತಕ ಹೊರತೆಗೆಯುವುದು, ಒಂದಿಷ್ಟು ಪುಟಗಳನ್ನು ತಿರುವಿಹಾಕುವುದು, ಕೆಲ ಸಾಲುಗಳ ಓದು, ಇನ್ನು ಕೆಲ ಸಾಲುಗಳ ಮನನ-

ಅಷ್ಟೊತ್ತಿಗೆ ಮನಸ್ಸು ಎಲ್ಲೋ ಕಳೆದುಹೋಗಿರುತ್ತದೆ.

ಮಧ್ಯವಯಸ್ಕನ ಗೊಂದಲ ಶುರುವಾಯ್ತಾ ಅಂತ ಆಗೀಗ ಅನಿಸುತ್ತಿರುವುದು ನಿಜವಾದರೂ, ಅದನ್ನು ಒಪ್ಪಿಕೊಳ್ಳುವುದು ಮನಸ್ಸಿಗೆ ಕಷ್ಟ. ಛೇ ಇರಲಾರದು ಎಂದು ಸಮಾಧಾನ ಹೇಳಿಕೊಂಡರೂ, ಗೊಂದಲ ಹಾಗೇ ಇರುತ್ತದೆ. ನಿರ್ದಿಷ್ಟವಾಗಿ ಏನನ್ನೂ ಮಾಡಲು ಆಗುತ್ತಿಲ್ಲ. ಹಾಗಂತ ಸುಮ್ಮನೇ ಕೂಡಲೂ ಆಗುತ್ತಿಲ್ಲ.

ಮೋಡ ದಟ್ಟೈಸಿದೆ, ಗಾಳಿ ತಂಪಾಗಿದೆ. ನೆಲವೂ ಕಾದಿದೆ. ಬೇಂದ್ರೆಯವರ ನೀ ಹೀಂಗ ನೋಡಬ್ಯಾಡ ನನ್ನ ಕವಿತೆಯ ಸಾಲುಗಳು ನೆನಪಾಗುತ್ತವೆ. 

‘ನಿನ್ನ ಕಣ್ಣಿನಲಿ ಕಾಲೂರಿ ನದಿಯು, ನಡನಡುವೆ ಹುಚ್ಚು ನಗಿ ಯಾಕ?

ಹನಿ ಒಡೆಯಲಿಕ್ಕೆ ಬಂದಂಥ ಮೋಡ, ತಡೆದ್ಹಾಂಗ ಗಾಳಿಯ ನೆವಕ...’

ಹನಿ ಒಡೆಯಲೆಂದು ಮನಸ್ಸು ಹಂಬಲಿಸುತ್ತದೆ. ಒಳಗಿನದೆಲ್ಲ ಯಾವುದೋ ನೆಪವೊಡ್ಡಿಕೊಂಡು ಹೊರಗುಕ್ಕಲಿ, ಹರಿದು ಹಗುರವಾಗಲಿ ಅಂತ ಒರಲುತ್ತದೆ. 

ಆದರೆ, ಊಹೂಂ, ಹನಿ ಒಡೆಯುತ್ತಿಲ್ಲ. ಮೋಡ ಹಾಗೇ ಬಿಗಿದುಕೊಂಡಿದೆ. 

ಬರೆದು ಹಗುರಾಗಬೇಕೆಂದು ಹಂಬಲಿಸಿದ್ದಾಯ್ತು. ಆದರೆ, ಮನಸ್ಸನ್ನು ತೀವ್ರವಾಗಿ ಕಾಡುವಂಥ ಭಾವನೆಗಳನ್ನು ತಕ್ಷಣಕ್ಕೆ ಬರೆಯುವುದು ಕಷ್ಟಕರ. ತೀವ್ರತರ ಭಾವನೆಗಳು ಹದಗೊಳ್ಳಬೇಕು, ಕೊಂಚ ತಣಿಯಬೇಕು, ಕೊಂಚ ಇಂಗಬೇಕು. ಅಷ್ಟೊತ್ತಿಗೆ, ಹನಿ ಒಡೆಯಬೇಕಾದ ಘಳಿಗೆ ಬಂದು, ಧೋ ಎಂದು ಸಾಲುಗಳು ಉಕ್ಕತೊಡಗುತ್ತವೆ.

ಅದೊಂಥರಾ ನಾರ್ಮಲ್ ಹೆರಿಗೆ.

ಆದರೆ, ಅದೇ ಸಾಧ್ಯವಾಗುತ್ತಿಲ್ಲ ಎಂಬುದು ಸದ್ಯದ ಸಮಸ್ಯೆ. ಅರ್ಜೆಂಟಾಗಿ ಮನಸ್ಸನ್ನು ಬಿಗಿದಿಟ್ಟಿರುವ ಒತ್ತಡ ಹೊರಬೀಳಬೇಕು. ಅತ್ತೋ, ಬರೆದೋ ಹಗುರಾಗಬೇಕು. ಗಂಡಸಾಗಿ ಅಳೋದಾ? ಎಂಬ ಯಾವ ಸೆಂಟಿಮೆಂಟನ್ನೂ ಇಟ್ಟುಕೊಂಡವನಲ್ಲ ನಾನು. ಅಷ್ಟಕ್ಕೂ ಅಳಬೇಕೆನ್ನುವುದು ಯಾವ ದುಃಖಕ್ಕೂ ಅಲ್ಲ.

ಏಕೆಂದರೆ, ಅಳು ಬರಲು ದುಃಖವೇ ಆಗಬೇಕೆಂದೇನೂ ಇಲ್ಲ.

ವಿಪರೀತ ಸೆಂಟಿಮೆಂಟಾದರೂ ಕಣ್ಣೀರು ಉಕ್ಕುತ್ತದೆ. ತೀವ್ರ ಖುಷಿಯಾದಾಗಲೂ. ನನಗೆ ದುಃಖಕ್ಕಿಂತ ಇಂಥ ಸಂದರ್ಭಗಳಲ್ಲಿ ಕಣ್ಣೀರು ಸುರಿದಿದ್ದೇ ಹೆಚ್ಚು.

ಈ ಸಲ ಅದ್ಯಾವುದೂ ಇಲ್ಲ. 

ಮತ್ಯಾಕೆ ಗಂಟು ಬಿತ್ತೀ ದುಗುಡ ಎಂದು ಖಿನ್ನವಾಗುತ್ತಿದೆ ಮನಸ್ಸು. ಕಾಣದ ತೀರಕ್ಕೆ ಹಂಬಲಿಸಿದೆ ಮನ ಎಂಬ ಕವಿವಾಣಿ ನಿಜವಾಗುವ ಮನಸ್ಸು ಹತ್ತಿರ ಬಂತೆ ಅಂತ ಅಂದುಕೊಳ್ಳುತ್ತೇನೆ. ಕಾಣದ ತೀರವನ್ನು ಪದೆ ಪದೆ ಹುಡುಕಿಕೊಂಡು ಹೋದ, ಬದುಕು ಕಟ್ಟಿಕೊಂಡವನು ನಾನು ಎಂದು ಸಮಾಧಾನ ತಂದುಕೊಳ್ಳುತ್ತೇನೆ. 

ಆದರೂ, ದುಗುಡ. 

ವಿಪರೀತ ಸೆಂಟಿಮೆಂಟ್ ಆಗುವುದೇ ದೊಡ್ಡ ಸಮಸ್ಯೆ ಅಂತ ಪದೆ ಪದೆ ಅಂದುಕೊಂಡರೂ, ದುಗುಡ ಶಮನವಾಗುತ್ತಿಲ್ಲ. ಈ ದುಗುಡದಾಳದಿಂದಲೇ ನೆಮ್ಮದಿ ಉಕ್ಕಲಿ ಎಂದು ಹಂಬಲಿಸುವುದೂ ನಿಂತಿಲ್ಲ. ಮನೋವಿಜ್ಞಾನಿಗಳು ಹೇಳುವ ಕೆಮಿಕಲ್ ಇಂಬ್ಯಾಲೆನ್ಸ್ ಇರಬಹುದೇ ಎಂದು ಸಣ್ಣ ಸಂಶಯ. 

ಅದೇನೇ ಇದ್ದರೂ, ಉಕ್ಕಿದ ಸಾಗರ, ಉಕ್ಕಿದಲ್ಲೇ ಶಮನವಾಗಬೇಕು. ಅದು ಮತ್ತೆಲ್ಲಿ ಹೋದೀತು? ಎದ್ದ ಕಡೆಯೇ ಅಲೆ ನಿಲ್ಲಬೇಕು, ಅಳು ನಿಲ್ಲಬೇಕು. ಮುದುಡಿದ ಕಡೆಯೇ ಬದುಕು ಅರಳಬೇಕು. ಅದು ನಿಯಮ.

ಹಾಗಂದುಕೊಂಡು ಮತ್ತೆ ಪುಸ್ತಕಗಳ ಮೊರೆ ಹೋಗುತ್ತೇನೆ. Our sweetest songs are those, which tell our saddest thoughts ಎಂಬ ಪಿ.ಬಿ. ಷೆಲ್ಲಿ ಮಹಾನುಭಾವನ ಕವಿವಾಣಿ ಕಣ್ಣಿಗೆ ಬೀಳುತ್ತದೆ.

ಅರೆ, ಹೌದಲ್ಲವೆ? ಎಂದು ಮನಸ್ಸು ಕೊಂಚ ಅರಳಿತು. 

ಅಳುವ ಮನಸು ಅರಳುವ ಪರಿಯೇ ವಿಚಿತ್ರ. ಇದ್ದಕ್ಕಿದ್ದಂತೆ ದುಗುಡ ಕರಗುವ ಛಾಯೆ. ಮೋಡ ಹನಿ ಒಡೆದ ಅನುಭವ. ದಟ್ಟೈಸಿದ ಎಲ್ಲವೂ ಕರಗತೊಡಗಿದ ಭಾವ. ವಿಚಿತ್ರ ನೆಮ್ಮದಿ ಅಲೆಅಲೆಯಾಗಿ ಆವರಿಸಿದಂತೆ, ಯಾವ ಮದಿರೆಯೂ ನೀಡದ ನೆಮ್ಮದಿಯನ್ನು ನೀಡಿದಂತೆ, ಅದ್ಭುತ ಕವಿತೆಯೊಂದನ್ನು ಓದಿದ ತೃಪ್ತಿಯಂತೆ, ಮನಸ್ಸು ಹಂತಹಂತವಾಗಿ ತಣಿಯತೊಡಗಿತು.

ಅಷ್ಟೇ-

ಅದೆಲ್ಲಿ ಅಡಗಿದ್ದವೋ ಕಣ್ಣೀರು ಉಕ್ಕತೊಡಗಿದವು. ರಾತ್ರಿಯ ನೀರವ ಮೌನದಲ್ಲಿ, ದನಿ ಕೂಡ ಹೊರಬರಲು ಆಸ್ಪದ ನೀಡದಂತೆ ಕಣ್ಣೀರು ಇಳಿದವು. ಜೊತೆಗೆ, ದಟ್ಟ ದುಗುಡ. ಮುಂದೈದು ನಿಮಿಷದಲ್ಲಿ ಅಬ್ಬರಿಸುತ್ತಿದ್ದ ಕಡಲು ಪ್ರಶಾಂತವಾಗಿ, ಕವಿದ ಕಾರ್ಮೋಡ ಕರಗಿ, ಅಪರಾತ್ರಿಯ ಕಾಳವದಲ್ಲಿ ನಕ್ಷತ್ರಗಳು ಸುಮ್ಸುಮ್ಮನೇ ನಕ್ಕವು.

ನಾನೂ ನಕ್ಕೆ. ನನ್ನನ್ನೇ ನೋಡಿಕೊಂಡು. 

- ಚಾಮರಾಜ ಸವಡಿ

ಆತ್ಮದಷ್ಟು ಹತ್ತಿರ, ಆಕಾಶದಷ್ಟು ದೂರ

18 Feb 2011

0 ಪ್ರತಿಕ್ರಿಯೆ
ಇಷ್ಟೇ ಸಾಕೆಂದಿದ್ದೆಯಲ್ಲೋ...

ಹಾಗಂತ ಎಷ್ಟೋ ಸಾರಿ ಅಂದುಕೊಳ್ಳುತ್ತೇನೆ: ಇಷ್ಟಾದರೆ ಸಾಕು. ಹನಿ ಪ್ರೀತಿ, ಒಂದು ಸಾಂತ್ವನದ ಮಾತು, ಜೊತೆಗಿದ್ದೇನೆ ಎಂಬ ಭಾವ, ಖರ್ಚಿಗೊಂದಿಷ್ಟು ಹಣ, ಮಾಡಲೊಂದು ಆಸಕ್ತಿದಾಯಕ ಕೆಲಸ, ಒಂದು ಸಾಂಗತ್ಯ, ಒಂದು ನೆನಪು, ಒಂದು ಕನಸು- ಇಷ್ಟಾದರೆ ಸಾಕು, ಮತ್ತೇನೂ ಬೇಡ ಅಂತ ಎಷ್ಟೋ ಸಲ ಅಂದುಕೊಳ್ಳುತ್ತೇನೆ.

ಹಾಗೆ ಅಂದುಕೊಂಡಿದ್ದು ದಕ್ಕಿದ ಕೂಡಲೇ ಹೊಸ ಕನಸುಗಳು ಮೊಳೆಯುತ್ತವೆ. ಅವಿಷ್ಟಾದರೆ ಸಾಕೆಂಬ ಹೊಸ ಆಸೆ.

ಸನ್ಯಾಸಿಯ ಲಂಗೋಟಿ ಕತೆಯಂಥ ಸರಪಳಿ ಇದು. ಬಿಟ್ಟೆನೆಂದರೂ ಬಿಡದ ಮಾಯೆ. ಬದುಕೆಂಬ ಮಾಯೆಯ ಚಕ್ರ ಬಿಟ್ಟೂಬಿಡದೇ ಸುತ್ತುತ್ತಲೇ ಇರುತ್ತದೆ. ಅದರ ಜೊತಗೆ ನಾವೂ ಸುತ್ತುತ್ತಾ ಹೋಗುತ್ತೇವೆ.

ಹೀಗಾಗಿ, ಪದೆ ಪದೆ ಶುರು ಮಾಡಿದ ಸ್ಥಳಕ್ಕೇ ಬಂದು ತಲುಪಬೇಕಾಗುತ್ತದೆ. ಮತ್ತೆ ಕತೆ ಹೊಸದಾಗಿ ಶುರು.

ಈಗ ಅಂಥ ಮತ್ತೊಂದು ಸುತ್ತಿನ ಹತ್ತಿರ ಬಂದು ನಿಂತಿದ್ದೇನೆ.

ಬದುಕಿನ ಚಕ್ರ ಈಗ ಮತ್ತೊಂದು ಸುತ್ತಿಗೆ ಸಿದ್ಧವಾಗಬೇಕು. ಅನುಭವದ ಬಲ ಜೊತೆಗಿದ್ದರೂ ಕೂಡ, ಎಂದಿನಂತೆ ಹೊಸತನ ತರುವ ತಾಜಾ ಅಳುಕು ಆತ್ಮವಿಶ್ವಾಸವನ್ನು ಕುಗ್ಗಿಸುತ್ತಿದೆ. ವಿಚಿತ್ರ ಗೊಂದಲ. ಈ ಸುತ್ತು ನನಗೆ ಬೇಕಿತ್ತಾ ಎಂಬ ಹಳೇ ಪ್ರಶ್ನೆ. ಅಪರಿಚಿತ ಊರಲ್ಲಿ ರಾತ್ರಿಯ ಕೊನೇ ಬಸ್‌ ತಪ್ಪಿಸಿಕೊಂಡ ಪ್ರಯಾಣಿಕನಿಗಿರುವಂಥ ವಿಚಿತ್ರ ಗೊಂದಲ, ತಳಮಳ. ರಾತ್ರಿ ಕಳೆದರೆ ಸಾಕು, ನಸುಕಿನಲ್ಲಿ ಮೊದಲ ಬಸ್‌ ಹೊರಡುತ್ತದೆ ಎಂದು ಗೊತ್ತಿದ್ದರೂ ಸುಮ್ಮಸುಮ್ಮನೇ ಬಸ್‌ಸ್ಟ್ಯಾಂಡ್‌ ಇಡೀ ಓಡಾಡುವಂತಹ ಭಾವ. ಇನ್ನೊಂದು ಬಸ್‌ ಬರಬಹುದು ಎಂಬ ವಿಚಿತ್ರ ಭರವಸೆ. ರಾತ್ರಿಯೇ ಊರು ತಲುಪಬಿಡಬಹುದು ಎಂಬ ಕನಸು.

ಆದರೆ, ತಪ್ಪಿಸಿಕೊಂಡ ಬಸ್‌ ಮತ್ತೆ ಬರುವುದಿಲ್ಲ. ಅದರ ಬದಲಾಗಿ ಇನ್ಯಾವುದೋ ವಾಹನವೂ ಬರುವುದಿಲ್ಲ. ಬದುಕಿನಲ್ಲಿ ಆಕಸ್ಮಿಕಗಳು ಅದೃಷ್ಟವಾಗುವುದು ತುಂಬಾ ಅಪರೂಪ. ಅಂತಹ ಕನಸು ಕಾಣದಿರು ಮರುಳೇ ಅಂದುಕೊಳ್ಳುತ್ತ ಬದಲಾಗಲೇಬೇಕಾದ ಪರಿಸ್ಥಿತಿಗೆ ಹೊಂದಿಕೊಳ್ಳುವ ಪ್ರಯತ್ನ ಮಾಡುತ್ತಿದ್ದೇನೆ.

ಆ ದಿನ ಮತ್ತೆ ಮತ್ತೆ ನೆನಪಾಗುತ್ತಿದೆ. ರಾತ್ರಿಯಿಡೀ ಅರಳಿದ ಹೂವೊಂದಕ್ಕೆ ಬೆಳಿಗ್ಗೆ ಗಂಧ ಸೇರಿಕೊಂಡಂತೆ, ಮತ್ತದೇ ರಸ್ತೆಯಲ್ಲಿ ಜೊತೆಯಾಗಿ ನಡೆದಂತೆ, ಮಾತಾಡಿಕೊಂಡಂತೆ, ಮೊಗೆದಷ್ಟೂ ಉಕ್ಕುವ ನೆನಪುಗಳನ್ನು ಮತ್ತೆ ಮತ್ತೆ ಆಸ್ವಾದಿಸಿದಂತೆ- ವಿಚಿತ್ರ ಹಳವಂಡಗಳು. ತೀರಾ ಆಕಸ್ಮಿಕವಾಗಿ ಶುರುವಾದ ಸುನೀತ ಭಾವವೊಂದು ಮೆಲು ಹಾಡಾದ ಆ ಪರಿಯನ್ನು ಹೇಳುವುದು ಹೇಗೆ? ಹೇಳದಿರುವುದು ಹೇಗೆ? ಇಷ್ಟೇ ಸಾಕು ಅಂತ ಅದೆಷ್ಟೋ ಸಲ ಅಂದುಕೊಂಡರೂ, ಊಹೂಂ, ಇಷ್ಟೇ ಸಾಕಾಗುವುದಿಲ್ಲ ಎಂಬುದು ಬಲು ಬೇಗ ಗೊತ್ತಾದಾಗ, ಆವರಿಸಿದ್ದು ಮತ್ತದೇ ಖಿನ್ನತೆ. ಮತ್ತದೇ ಗೊಂದಲ.

ಪ್ರತಿಯೊಂದು ಗೊಂದಲವೂ, ಪ್ರತಿಯೊಂದು ಖಿನ್ನತಾ ಘಳಿಗೆಯೂ ಕೆಲಸದ ಮೇಲೆ ಪರಿಣಾಮ ಬೀರುತ್ತದೆಂಬುದು ಗೊತ್ತಿದ್ದರೂ, ಆಸೆಬುರುಕ ಕುಡುಕನಂತೆ, ಖಿನ್ನತೆಯನ್ನು ಮೊಗೆಮೊಗೆದು ಕುಡಿಯುತ್ತಿದ್ದೇನೆ. ಮತ್ತಷ್ಟು ತೀವ್ರ ಖಿನ್ನತೆಗೆ ಈಡಾಗುತ್ತಿದ್ದೇನೆ. ಪ್ರತಿಯೊಂದು ಅತಿರೇಕದಾಚೆಗೆ ಅದರ ಅಂತ್ಯ ಇರುವಂತೆ, ಉಕ್ಕಿಬರುವ ಈ ಖಿನ್ನತೆಯ ಪರಮೋಚ್ಚ ಸ್ಥಿತಿ ತಲುಪಿಬಿಡಬೇಕೆಂಬ ಹಠಕ್ಕೆ ಬಿದ್ದಿದ್ದೇನೆ. ಕಂಪ್ಯೂಟರ್‌ ಮುಂದೆ ಗಂಟೆಗಟ್ಟಲೇ ಮೌನವಾಗಿ ಕೂಡುತ್ತೇನೆ. ಷೆಲ್ಫಿನಲ್ಲಿರುವ ಇಷ್ಟಪಟ್ಟ ಹಲವಾರು ಪುಸ್ತಕಗಳನ್ನು ಸುಮ್‌ಸುಮ್ಮನೇ ತಿರುವಿ ಹಾಕುತ್ತೇನೆ. ಅಲ್ಲಲ್ಲಿ ಸಾಲುಗಳು ಮಿಂಚುತ್ತವೆ. ಗಾಢಾಂಧಕಾರ ತುಂಬಿದ ಅರಣ್ಯದೊಳಗಿನ ಮಿಂಚುಹುಳುಗಳಂತೆ, ಅವು ಮಿಣುಕಿ ಮರೆಯಾಗುತ್ತವೆ. ಊಹೂಂ, ಇವ್ಯಾವೂ ಮನದ ಕತ್ತಲನ್ನು ಹೊಡೆದೋಡಿಸುವಷ್ಟು, ನೆಮ್ಮದಿಯ ಬೆಳಕನ್ನು ತರಬಲ್ಲಷ್ಟು ಶಕ್ತಿಶಾಲಿಯಲ್ಲ ಎಂದು ನಿಡುಸುಯ್ಯುತ್ತೇನೆ. ಈ ಅಂಧಕಾರವನ್ನು ಆ ನಗೆಮಿಂಚು ಮಾತ್ರ ದೂರ ಮಾಡಬಲ್ಲದು ಎಂದು ಮತ್ತೆ ಮನಸ್ಸು ಆಸೆಪಡುತ್ತದೆ.

ರಾತ್ರಿಗೂ ಹಗಲಿಗೂ ನಡುವಿನ ವ್ಯತ್ಯಾಸವೇ ಅಳಿದುಹೋದಂತಾಗಿರುವ ಈ ಘಳಿಗೆಗಳ ಆಚೆಗೆ ಭರವಸೆಯ ಬದುಕಿದೆ. ಅದನ್ನು ತಲುಪಬೇಕೆಂಬ ಉತ್ಕಟ ಆಸೆಯ ಜೊತೆಗೆ, ಹೇಗೆ ತಲುಪುವುದೆಂಬುದು ಗೊತ್ತಿಲ್ಲದ ಗೊಂದಲ. ವೃತ್ತಿ-ಪ್ರವೃತ್ತಿಗಳ ನಡುವಿನ ಘರ್ಷಣೆಯ ನಡುವೆ, ಹಾಗೇ ಉಳಿದಹೋದ ನೂರಾರು ಕನಸುಗಳು, ಸಾವಿರಾರು ಸುನೀತ ಭಾವನೆಗಳು. ಅರೆತೆರೆದ ಪುಸ್ತಕದೊಳಗಿನ ಸಾವಿರಾರು ಭಾವನೆಗಳಂತೆ, ಘಟನೆಗಳಂತೆ, ಅಕ್ಷರಗಳಂತೆ, ಆಹ್ವಾನದಂತೆ ಇಷ್ಟೇ ಸಾಕೆಂದಿದ್ದ ಕನಸು ಕ್ಷಣಕ್ಷಣಕ್ಕೂ ಸೆಳೆಯುತ್ತದೆ. ಮನಸ್ಸು ಮತ್ತದೇ ದಾರಿಗುಂಟ ಯಾತ್ರೆ ಹೊರಡುತ್ತದೆ.

ಕೆಲವೊಂದು ಭಾವನೆಗಳೇ ಹಾಗೆ. ಅವು ಮನಸ್ಸೊಳಗೆ ಮಾಗುತ್ತಲೇ ಹೋಗುತ್ತವೆ. ಅರಳುತ್ತಲೇ ಇರುತ್ತವೆ. ಯಾವೊಂದು ಶಕ್ತಿಗೂ ಈ ವಿಕಸನವನ್ನು ತಡೆಯಲಾಗದು. ಈ ಕನಸನ್ನು ಕಮರಿಸಲಾಗದು. ಚೆಲ್ಲವರಿದು ಹಬ್ಬುತ್ತ, ಹರಡುತ್ತ, ಹೊಸ ಕನಸುಗಳಿಗೆ ಜೀವ ಕೊಡುತ್ತ, ಹೊಸ ಸಾಧ್ಯತೆಗಳಿಗೆ ತೆರೆದುಕೊಳ್ಳುತ್ತ ಇವು ನಿರಂತರವಾಗಿ ಪ್ರೇರಣೆ ನೀಡುತ್ತ ಹೋಗುತ್ತವೆ. ಮೂಕನ ಮನದಾಳದಂತೆ, ಹೇಳಲಾಗದು, ಹೇಳದಿರಲಾಗದು. ತನ್ನದೇ ರೀತಿಯಲ್ಲಿ ವ್ಯಕ್ತವಾಗುತ್ತ, ಅವ್ಯಕ್ತವಾಗುತ್ತಲೇ ಅರ್ಥಪೂರ್ಣವಾಗುತ್ತ, ಗೊತ್ತಾಯ್ತಾ ಎಂದು ಪ್ರಶ್ನಿಸುತ್ತ, ಗೊತ್ತಿಲ್ಲದೇ ಇದ್ದೀತೆ ಎಂಬ ಭಾವ ಹೊತ್ತು ನಿಲ್ಲುವ ಈ ಭಾವನೆಗಳ ತೀವ್ರತೆ ಅನುಭವಿಸುವುದು ಕಷ್ಟ. ಅನುಭವಿಸದಿರೆ ಬದುಕು ವ್ಯರ್ಥ.

ಬಹುಶಃ ಬದುಕು ಮತ್ತೊಂದು ಪ್ರಮುಖ ತಿರುವಿನಲ್ಲಿ ಬಂದು ನಿಂತಂತಿದೆ. ಇದು ನನ್ನನ್ನು ಮತ್ತೆ ಒಕ್ಕಲೆಬ್ಬಿಸುತ್ತದೋ, ದಿಕ್ಕುಗೆಡಿಸುತ್ತದೋ, ದಿಕ್ಕುಗಾಣಿಸುತ್ತದೋ ಗೊತ್ತಿಲ್ಲ. ಅಲೆಮಾರಿ ಜಂಗಮನಂತೆ, ಮತ್ತೊಂದು ಊರಿನತ್ತ ನನ್ನ ಬದುಕು ಮುಖ ಮಾಡುತ್ತಿದೆ. ಇಲ್ಲಿಯದೆಲ್ಲವನ್ನೂ ಇಲ್ಲಿಯೇ ಬಿಟ್ಟು, ಇನ್ನೆಲ್ಲೋ ಹೊರಟ ನನಗೆ, ನನ್ನೊಳಗೆ ಮಾಗುತ್ತಿರುವ, ಅರಳುತ್ತಿರುವ, ಬೆಳೆಯುತ್ತಿರುವ ಕನಸೊಂದನ್ನು, ಪ್ರೇರಣೆಯೊಂದನ್ನು ಮಾತ್ರ ಬಿಡಲಾಗುತ್ತಿಲ್ಲ. ಬಿಟ್ಟರೆ ಬದುಕಲಾಗುವುದಿಲ್ಲ.

ದೂರ ಹೊರಟವನದೊಂದೇ ಬೇಡಿಕೆ: ನಾ ಹೋಗಬಹುದಾದ ದೂರಕ್ಕೂ ಆ ಪರಿಮಳ ಬರುವಂತಾಗಲಿ. ಆ ಕನಸು ಬೆನ್ಹತ್ತಲಿ. ಅದು ನೆಟ್ಟ ಕನಸಿನ ಬೀಜ ಮನದೊಳಗೆ ಮರವಾಗಿ, ಮರದೊಳಗೆ ಫಲವಾಗಿ, ಫಲದೊಳಗೆ ನನಸಾಗಲಿ. ಆ ನನಸನ್ನು, ಆ ದೂರದಿಂದಲೇ ಆಸ್ವಾದಿಸುವಂತಾಗಲಿ. ಮೊದಲು ಇಷ್ಟೇ ಸಾಕೆಂದಿದ್ದೆನಾದರೂ, ಊಹೂಂ, ಇಷ್ಟು ಸಾಕಾಗುವುದಿಲ್ಲ ಎಂಬ ಇವತ್ತಿನ ನಿರಾಶೆ, ಮುಂದೊಂದಿನ ಸಂತಸವಾಗಲಿ. ನೆಮ್ಮದಿಯಾಗಲಿ. ಅಸಾಧ್ಯ ಕನಸುಗಳನ್ನು ಮತ್ತೆ ಮತ್ತೆ ಕಾಣುವ ಹುಚ್ಚಿಗೆ ಕಿಚ್ಚಾಗಲಿ. ಮತ್ಯಾವತ್ತೋ ನಾನು ಹೊರಟಲ್ಲಿಗೇ ತಲುಪಿದಾಗ, ಆ ಕನಸು ಮಾಗಿರಲಿ, ನನ್ನ ಕಂಡು ಮುಗುಳ್ನಗಲಿ. ಮಂಜುಕವಿದ ಮುಂಜಾವಿನ ಸೂರ್ಯನಂತೆ ಬೆಚ್ಚಗೇ ಬೆಳಗಲಿ, ನನ್ನೊಳಗಿನ ಶಾಶ್ವತ ಮಂಕನ್ನು ಕಳೆಯಲಿ.

ನಿನಗಿದೆಲ್ಲ ಅರ್ಥವಾಯಿತಾ? ಅರ್ಥವಾಗದೇ ಇದ್ದೀತಾ!

- ಚಾಮರಾಜ ಸವಡಿ

ಕಾಡುವ ಧಾರವಾಡದ ನೆನಪು

13 Feb 2011

2 ಪ್ರತಿಕ್ರಿಯೆ
ಇವತ್ತೇಕೋ ಧಾರವಾಡ ತುಂಬ ನೆನಪಾಗುತ್ತಿದೆ.

ಹಲವಾರು ಕಾರಣಗಳಿಂದಾಗಿ ನೆನಪಿನ ಶಾಶ್ವತ ಭಾಗವಾಗಿರುವ ಧಾರವಾಡವನ್ನು ನಾನು ಮೊದಲ ಬಾರಿ ನೋಡಿದ್ದು ೧೯೮೬ರಲ್ಲಿ. ಪಿಯುಸಿ ಸೈನ್ಸ್‌ನಲ್ಲಿ ನಾನು ಡಿಬಾರಾದ ವರ್ಷ ಅದು. ಖಿನ್ನತೆ ತಾಳಲಾರದೇ ಊರು ಬಿಟ್ಟು ಹೋಗಲು ನಿರ್ಧರಿಸಿದ್ದ ಹಾಗೂ ಹೊರಟೇ ಹೋಗಿದ್ದ ವರ್ಷವದು.

ಪಿಯುಸಿಯಲ್ಲಿ ಏಕೆ ಮತ್ತು ಹೇಗೆ ಡಿಬಾರಾದೆ ಎಂಬುದನ್ನು ಬರೆದರೆ ಅದೇ ದೊಡ್ಡ ಕತೆಯಾಗುವುದರಿಂದ ಸದ್ಯಕ್ಕೆ ಬೇಡ. ಆ ವರ್ಷದ ಬೇಸಿಗೆ ರಜೆಗಳು ಮುಗಿದು ಎಂದಿನಂತೆ ಕಾಲೇಜುಗಳು ಶುರುವಾಗಿದ್ದವು. ಆಗ ಧಾರವಾಡ ಜಿಲ್ಲೆಗೆ ಸೇರಿದ್ದ, ಈಗ ಗದಗ್ ಜಿಲ್ಲೆಯಲ್ಲಿರುವ ರೋಣ ತಾಲ್ಲೂಕಿನ ನರೇಗಲ್ ಪಟ್ಟಣದ ಸೆರಗಿನಲ್ಲಿರುವ ಪುಟ್ಟ ಹಳ್ಳಿ ಕೋಡಿಕೊಪ್ಪದಲ್ಲಿ ನಾನು ರೂಮು ಮಾಡಿಕೊಂಡಿದ್ದೆ. ಏಳಡಿ ಉದ್ದ ಹಾಗೂ ಐದಡಿ ಅಗಲವಿದ್ದ ಪುಟ್ಟ ರೂಮಿನಲ್ಲಿ, ನನ್ನ ಸಹಪಾಠಿಯೊಬ್ಬನೊಂದಿಗೆ ವಾಸವಾಗಿದ್ದೆ. ಅವನ ಬಿ.ಎಸ್ಸಿ. ತರಗತಿಗಳು ಬೆಳಿಗ್ಗೆ ೭ಕ್ಕೇ ಶುರುವಾಗುತ್ತಿದ್ದರಿಂದ, ನಾನು ಕಣ್ಣು ಬಿಡುವಷ್ಟರಲ್ಲಿ ಅವ ಕಾಲೇಜಿಗೆ ಹೋಗಿಯಾಗಿರುತ್ತಿತ್ತು.

ಡಿಬಾರಾಗಿದ್ದರಿಂದ ಒಂದು ವರ್ಷದವರೆಗೆ ಪರೀಕ್ಷೆ ಬರೆಯುವಂತಿರಲಿಲ್ಲ. ತರಗತಿಗಳಿಗೂ ಹೋಗುವಂತಿರಲಿಲ್ಲ. ಅವು ಬಿರು ಮಳೆಯ ದಿನಗಳು. ಬಾಗಿಲು ತೆರೆದರೆ ಹೊರಗೆ ಜಡಿ ಮಳೆ. ಮಂಕಾದ ಆಗಸ. ಅದಕ್ಕಿಂತ ಮಂಕಾದ ಮನಸ್ಸು.

ಕಾಲೇಜಿಗೆ ಹೋಗುವಂತಿರಲಿಲ್ಲ. ಕಳೆದ ವರ್ಷ ಚೆನ್ನಾಗಿ ಓದಿದ್ದೆನಾದ್ದರಿಂದ ಹಾಗೂ ಪರೀಕ್ಷೆಗಿನ್ನೂ ಒಂದು ವರ್ಷ ಬಾಕಿ ಇದ್ದುದರಿಂದ, ಪುಸ್ತಕದ ಮುಖ ನೋಡಲು ಮನಸ್ಸಾಗುತ್ತಿರಲಿಲ್ಲ. ಮನೆ ಮಾಲೀಕ ಸಂಜೆ ೬ರಿಂದ ಬೆಳಗಿನ ೬ರವರೆಗೆ ಮಾತ್ರ ವಿದ್ಯುತ್ ಸಂಪರ್ಕ ಕೊಡುತ್ತಿದ್ದುದರಿಂದ, ಮಳೆಗಾಲದ ಬೆಳಗಿನ ಸಮಯ ರೂಮಿನಲ್ಲಿ ಕತ್ತಲು ತುಂಬಿರುತ್ತಿತ್ತು. ಆ ಅರೆಗತ್ತಲಿನ ಮಂಕು ವಾತಾವರಣದಲ್ಲಿ ಪಿಳಿಪಿಳಿ ಕಣ್ಬಿಡುತ್ತಾ ಗತಕಾಲವನ್ನು ನೆನಪಿಸಿಕೊಂಡು ಕೂಡುತ್ತಿದ್ದೆ.

ನಿಜಕ್ಕೂ ಕೆಟ್ಟ ದಿನಗಳವು.

ಮನಸ್ಸು ಬಿಚ್ಚಿ ಮಾತಾಡಬಲ್ಲಂಥ ಒಬ್ಬನೇ ಒಬ್ಬ ಗೆಳೆಯನಿಲ್ಲದ, ಜೇಬಿನಲ್ಲಿ ಹಣವಿಲ್ಲದ, ಮಾಡಲು ಕೆಲಸವಿಲ್ಲದ, ಓದಲು ಆಸಕ್ತಿಯಿಲ್ಲದ ದರಿದ್ರ ದಿನಗಳವು. ಹಾಗೆ ನೋಡಿದರೆ ನಾನು ಶ್ರದ್ಧಾವಂತ ವಿದ್ಯಾರ್ಥಿ. ಈಗಲೂ ನನ್ನದು ಅದೇ ಮನಃಸ್ಥಿತಿ. ಕಾಲೇಜು, ಟ್ಯೂಶನ್, ಅರ್ಧ ಗಂಟೆಯ ಸಾಧಾರಣ ಅಡುಗೆ ಬಿಟ್ಟರೆ ನನ್ನ ಬಹುತೇಕ ಸಮಯ ಪುಸ್ತಕಗಳೊಂದಿಗೇ ಇರುತ್ತಿತ್ತು. ಈಗ ಅವೆಲ್ಲ ಚಟುವಟಿಕೆಗಳು ಇಲ್ಲವಾಗಿ, ಚಿಂತೆ ಮಾಡುವುದೊಂದೇ ಪೂರ್ಣಾವಧಿ ಕೆಲಸವಾಗಿತ್ತು.

ಹೊರಗೆ ಬಿರುಮಳೆ. ಒಳಗೆ ನೆನಪಿನ ಹೊಳೆ.

ಎರಡೇ ವಾರಗಳಲ್ಲಿ ಸಾಕುಸಾಕಾಗಿ ಹೋಯಿತು. ಓಡುವ ಕುದುರೆಯ ಕಾಲು ಮುರಿಯುವುದಕ್ಕಿಂತ ಕೆಟ್ಟದ್ದು ಇನ್ನೇನಿರುತ್ತದೆ? ಒಂದೆಡೆ ಪುಸ್ತಕಗಳನ್ನು ಕಂಡರಾಗದ ಮನಃಸ್ಥಿತಿ. ಇನ್ನೊಂದೆಡೆ ಪೈಸೆ ಪೈಸೆಯನ್ನೂ ಲೆಕ್ಕ ಹಾಕಿ ಬಳಸಬೇಕಾದ ದುಃಸ್ಥಿತಿ. ಹೊರಗೆ ಹೋಗಲಾಗದ, ಒಳಗೂ ಇರಲಾಗದ ಪರಿಸ್ಥಿತಿ ನನ್ನನ್ನು ಹಿಂಡಿಹಾಕಿತು. ಇನ್ನು ಹೀಗೆ ಇದ್ದರೆ ಸತ್ತೇ ಹೋಗುತ್ತೇನೆ ಎಂದು ತೀವ್ರವಾಗಿ ಅನ್ನಿಸಿದಾಗ, ಓಡಿ ಹೋಗಲು ನಿರ್ಧರಿಸಿದೆ.

ಬಹುಶಃ ಪ್ರತಿಯೊಬ್ಬ ವ್ಯಕ್ತಿಯೂ ಬದುಕಿನ ಒಂದಲ್ಲ ಒಂದು ಹಂತದಲ್ಲಿ ಇಂಥದೊಂದು ಮನಃಸ್ಥಿತಿಗೆ ಬರುತ್ತಾನೆ ಅನಿಸುತ್ತದೆ. ಈಗಿರುವ ಬದುಕು ಹಿಂಡತೊಡಗಿದಂತೆ, ಕಾಣದ ಜಗತ್ತು ಕರೆಯತೊಡಗುತ್ತದೆ. ದುರಸ್ತಿಯಾಗದ ಈಗಿನ ಬದುಕಿಗಿಂತ, ಏನೂ ಗೊತ್ತಿರದ ಬದುಕಿನೆಡೆಗೆ ಮನಸ್ಸು ತುಡಿಯತೊಡಗುತ್ತದೆ. ಕಾಣದ ಜಗತ್ತಿನ ವಿಚಿತ್ರ ಆಕರ್ಷಣೆ ಸೆಳೆಯತೊಡಗುತ್ತದೆ. ಅಲ್ಲಿ ಪರಿಸ್ಥಿತಿ ಈಗಿನದಕ್ಕಿಂತ ನಿಕೃಷ್ಟವಾಗಿರಲಾರದು ಎಂಬ ಅನಿಸಿಕೆ ಬಲಗೊಳ್ಳುತ್ತ ಹೋದಂತೆ, ಎದ್ದು ಹೋಗಬೇಕೆನ್ನುವ ಉತ್ಕಟತೆ ಉಕ್ಕತೊಡಗುತ್ತದೆ.

ಬಿರು ಮಳೆಯ ೧೯೮೬ರ ದಿನಗಳು ಅಂಥದೊಂದು ಬಯಕೆಯನ್ನು ನನ್ನೊಳಗೆ ಬಲಗೊಳಿಸುತ್ತ ಹೋದವು.

ಅವತ್ತೊಂದಿನ ಮನಸ್ಸು ತುಂಬಾ ಬಳಲಿತ್ತು. ಊಟ ಮಾಡಲೂ ಮನಸ್ಸಾಗಲಿಲ್ಲ. ಬೆಳಿಗ್ಗೆಯಿಂದ ಸುಮ್ಮನೇ ಕೂತವನಲ್ಲಿ ಸಾವಿರಾರು ವಿಚಾರಗಳು ಉಕ್ಕುತ್ತಿದ್ದವು. ಪರಿಸ್ಥಿತಿ ಬದಲಾಗದೇ ಇದ್ದಾಗ, ನಾನಾದರೂ ಬದಲಾಗಬೇಕು ಎಂದು ನಿರ್ಧರಿಸಿದೆ. ಮಧ್ಯಾಹ್ನದ ಹೊತ್ತಿಗೆ ಮನಸ್ಸು ದೃಢವಾಯಿತು. ಒಂದು ಚೀಲದಲ್ಲಿ ಒಂದು ಜೊತೆ ಉಡುಪು, ಟವೆಲ್, ಒಂದು ತಂಬಿಗೆ, ಒಂದು ನೋಟ್‌ಬುಕ್ ಇಟ್ಟುಕೊಂಡು, ಟ್ರಂಕಿನಲ್ಲಿದ್ದ ಚಿಲ್ಲರೆ ಕಾಸನ್ನೆಲ್ಲ ಜೇಬೊಳಗೆ ತುಂಬಿಕೊಂಡು ರೂಮಿಗೆ ಬಾಗಿಲು ಜಡಿದು ೧ ಕಿಮೀ ದೂರವಿದ್ದ ನರೇಗಲ್‌ನ ಬಸ್‌ಸ್ಟ್ಯಾಂಡ್‌ನತ್ತ ಹೊರಟುಬಿಟ್ಟೆ.

ಗದಗ್‌ನತ್ತ ಹೊರಟ ಬಸ್ಸೇರಿದಾಗ ಆಗಸ ಮತ್ತೆ ಮಂಕಾಗಿತ್ತು.

ಗದಗ್ ಬಸ್‌ನಿಲ್ದಾಣದಲ್ಲಿ ಇಳಿದಾಗಲೂ ಎತ್ತ ಹೋಗಬೇಕೆಂಬುದು ಸ್ಪಷ್ಟವಾಗಿರಲಿಲ್ಲ. ಚಿತ್ರದುರ್ಗದ ಹತ್ತಿರ ಅಲ್ಲೆಲ್ಲೋ ಮಲ್ಲಾಡಿಹಳ್ಳಿಯಲ್ಲಿ ಸ್ವಾಮಿಗಳೊಬ್ಬರು ಯೋಗಾಸನ ಕಲಿಸುತ್ತಾರೆ ಎಂಬುದನ್ನು ಎಲ್ಲಿಯೋ ಓದಿದ್ದು ನೆನಪಾಯ್ತು. ಅಲ್ಲಿಗೆ ಹೋಗಬೇಕೆಂದು ಆ ಕ್ಷಣಕ್ಕೆ ನಿರ್ಧರಿಸಿಬಿಟ್ಟೆ. ಯಾರನ್ನೋ ವಿಚಾರಿಸಿದಾಗ, ಹುಬ್ಬಳ್ಳಿಗೆ ಹೋದರೆ, ಚಿತ್ರದುರ್ಗಕ್ಕೆ ಸಾಕಷ್ಟು ಬಸ್‌ಗಳು ಸಿಗುತ್ತವೆ ಎಂಬ ಉತ್ತರ ಸಿಕ್ಕಿತು. ಸರಿ ಹುಬ್ಬಳ್ಳಿ ಬಸ್ಸೇರಿದೆ.

ಅದೇ ಮೊದಲ ಬಾರಿಗೆ ನಾನು ಹುಬ್ಬಳ್ಳಿಯತ್ತ ಹೊರಟಿದ್ದೆ. ಹುಟ್ಟಿದಾಗಿನಿಂದ ಗದಗ್ ಬಿಟ್ಟು ಬೇರೆ ದೊಡ್ಡ ಊರನ್ನೇ ನೋಡಿರಲಿಲ್ಲ ನಾನು!

ಕೌತುಕದಿಂದ ಬಸ್ ಹೊರಗೆ ದಿಟ್ಟಿಸುತ್ತ, ಹುಬ್ಬಳ್ಳಿಯೆಂಬ ನಗರವನ್ನು ತಲುಪಿದಾಗ ಸಂಜೆ ಕತ್ತಲು. ಆದರೆ, ಬಸ್ಸು ನಿಲ್ದಾಣದತ್ತ ಹೋಗಲಿಲ್ಲ. ಅವತ್ತು ಯಾವುದೋ ಕಾರಣಕ್ಕೆ ಹುಬ್ಬಳ್ಳಿಯಲ್ಲಿ ಬಂದ್ ಆಚರಿಸಲಾಗುತ್ತಿತ್ತು. ಹೀಗಾಗಿ, ನಾನಿದ್ದ ಬಸ್ ಮುಖ್ಯರಸ್ತೆಯಲ್ಲೇ ನಿಂತುಬಿಟ್ಟಿತು.

ನಾನು ಫಜೀತಿಯಲ್ಲಿ ಸಿಲುಕಿದ್ದೆ.

ನಾನು ನೋಡುತ್ತಿದ್ದ ಮೊದಲನೇ ದೊಡ್ಡ ಊರದು. ಅಪರಿಚಿತ ಊರು. ಮಳೆಗಾಲದ ಸಂಜೆ ಬೇರೆ. ಕೈಯಲ್ಲಿ ಸಾಕಷ್ಟು ದುಡ್ಡು ಬೇರೆ ಇಲ್ಲ. ಇಂಥದ್ದರಲ್ಲಿ ಬಸ್ಸಿಲ್ಲದ ಪರಿಸ್ಥಿತಿ. ಏನು ಮಾಡಬೇಕೆಂಬುದೇ ತೋಚದಂತಾಗಿ ಮಂಕನಂತೆ ರಸ್ತೆಯಲ್ಲಿ ನಿಂತುಬಿಟ್ಟೆ.

ಆದರೆ, ನಾನೊಬ್ಬನೇ ಇದ್ದಿಲ್ಲ. ನೂರಾರು ಜನ ನನ್ನ ಹಾಗೆ ರಸ್ತೆಯ ಬದಿ ನಿಂತಿದ್ದರು. ಎಲ್ಲೆಲ್ಲೋ ಹೋಗಬೇಕಾದವರೆಲ್ಲ, ಅಲ್ಲಲ್ಲೇ ಚದುರಿಹೋಗಿದ್ದರು. ಬಂದ್‌ಗೆ ಕಾರಣರಾದವರನ್ನು ಶಪಿಸುತ್ತ, ರಸ್ತೆಯಲ್ಲಿ ಹೊರಟ ಪ್ರತಿಯೊಂದು ವಾಹನಕ್ಕೂ ಕೈ ಮಾಡುತ್ತ, ಅದು ನಿಂತಾಗ ಓಡಿ ಹೋಗಿ, ಅದೆಲ್ಲಿಗೆ ಹೋಗುತ್ತದೆ ಎಂದು ವಿಚಾರಿಸುತ್ತ, ಹಾಗೆ ನಿಂತ ಪ್ರತಿಯೊಂದು ವಾಹನದಲ್ಲೂ ಒಂದಿಷ್ಟು ಜನ ಹತ್ತುತ್ತ- ಒಟ್ಟಿನಲ್ಲಿ ಅಲ್ಲೊಂದು ಗೊಂದಲಪುರವೇ ನಿರ್ಮಾಣವಾಗಿತ್ತು.

ಗೊಂದಲ ಈಗ ನನ್ನೊಳಗೆ ಮಾತ್ರವಲ್ಲ, ನನ್ನ ಹೊರಗೂ ದೊಡ್ಡ ಪ್ರಮಾಣದಲ್ಲಿತ್ತು.

ಅಷ್ಟೊತ್ತಿಗೆ ಒಂದು ಆಟೊ ಬಂತು. ನನ್ನ ಸುತ್ತಮುತ್ತ ಇದ್ದವರು ಎಂದಿನಂತೆ ಅದರತ್ತ ಓಡಿ ಹೋಗಿ, ಎಲ್ಲಿಗೆ ಹೊರಟಿದೆ ಎಂದು ವಿಚಾರಿಸಿದರು. ನೋಡನೋಡುತ್ತಲೇ ಮೂವರು ಆಟೊ ಏರಿ ಕೂತೇಬಿಟ್ಟರು. ಆಟೊ ಚಾಲಕ ಧಾರವಾಡ, ಧಾರವಾಡ ಎಂದು ಕೂಗಿದ.

ಅದನ್ನು ಕೇಳುತ್ತಲೇ, ನಾನು ಧಾರವಾಡಕ್ಕೆ ಹೋಗಬೇಕು ಅಂತ ದಿಢೀರನೇ ನಿರ್ಧರಿಸಿಬಿಟ್ಟೆ.

ಅದಕ್ಕೆ ಕಾರಣ, ನನ್ನ ದೊಡ್ಡಣ್ಣ ಧಾರವಾಡ ವಿಶ್ವವಿದ್ಯಾಲಯದಲ್ಲಿ ಓದುತ್ತಿದ್ದುದು. ಇವತ್ತು ಆತನ ರೂಮಿನಲ್ಲಿದ್ದು, ಬೆಳಿಗ್ಗೆ ಚಿತ್ರದುರ್ಗಕ್ಕೆ ಬಸ್ ಹಿಡಿದರಾಯ್ತು ಎಂದು ಯೋಚಿಸಿ, ಆಟೋ ಚಾಲಕನ ಹತ್ತಿರ ಚಾರ್ಜೆಷ್ಟು ಎಂದು ಕೇಳಿದೆ. ತೆಳ್ಳಗೇ ಕುಳ್ಳಗೇ ಇದ್ದ ನನ್ನನ್ನು ಹೈಸ್ಕೂಲ್ ಹುಡುಗ ಎಂದು ಯೋಚಿಸಿದನೋ, ನನ್ನ ಕಂದಿದ ಮುಖ ಕಂಡು ಮರುಕಗೊಂಡನೋ ಅಥವಾ ನನ್ನ ಅದೃಷ್ಟವೋ ಗೊತ್ತಿಲ್ಲ, ಐದು ರೂಪಾಯಿ ಕೊಡು ಸಾಕು ಎಂದ.

ನೆನಪಿಸಿಕೊಂಡರೆ ಇವತ್ತೂ ನಂಬಲು ಕಷ್ಟವಾಗುತ್ತದೆ. ಬಂದ್, ಮಳೆಗಾಲ, ಮೂರೂ ಸಂಜೆ ಒಟ್ಟೊಟ್ಟಿಗೇ ಒಕ್ಕರಿಸಿದ ಆ ದಿನದಲ್ಲಿ, ಅದೆಲ್ಲೋ ಹುಬ್ಬಳ್ಳಿಯ ಹೆದ್ದಾರಿಯ ಮಧ್ಯದಿಂದ ಧಾರವಾಡದ ಬಸ್ ನಿಲ್ದಾಣದವರೆಗೆ ನನ್ನನ್ನು ಕರೆದೊಯ್ಯಲು ಆಟೊ ಚಾಲಕ ತೆಗೆದುಕೊಂಡಿದ್ದು ಕೇವಲ ಐದು ರೂಪಾಯಿ ಮಾತ್ರ.

ಆಗ ಧಾರವಾಡ ಮತ್ತು ಹುಬ್ಬಳ್ಳಿ ನಡುವೆ ಎಷ್ಟು ದೂರ ಎಂಬುದು ಕೂಡ ನನಗೆ ಗೊತ್ತಿರಲಿಲ್ಲ. ಐದಾರು ಕಿಮೀ ಇರಬಹುದೇನೋ ಅಂತ ಅಂದುಕೊಂಡವನಿಗೆ ಮೈಲಿಗಲ್ಲು ನೋಡಿದಾಗ, ಎದೆ ಧಸಕ್ಕೆಂದಿತು.

ಧಾರವಾಡ ಇಪ್ಪತ್ಮೂರು ಕಿಮೀ ದೂರವಿತ್ತು. ಹೆಚ್ಚು ಕಡಿಮೆ ಕೊಪ್ಪಳದಿಂದ ನನ್ನೂರು ಅಳವಂಡಿಯವರೆಗಿನ ಅಂತರ!

ಡ್ರೈವರ್ ಹೇಳಿದ್ದು ಐದೇ ರೂಪಾಯಿಯಾ? ಎಂದು ನನಗೇ ಗೊಂದಲವಾಯಿತು. ಮತ್ತೊಮ್ಮೆ ಕೇಳಿ ಖಚಿತಪಡಿಸಿಕೊಂಡೆ. ಆತ ಕೇಳಿದ್ದು ಐದೇ ರೂಪಾಯಿ.

ಅತಿ ವಿರಳವಾಗಿ ಸಂಚರಿಸುತ್ತಿದ್ದ ಹೆದ್ದಾರಿಯಲ್ಲಿ ಹೊರಟ ಆಟೊ ಒಂದೊಂದೇ ಮೈಲುಗಲ್ಲನ್ನು ದಾಟಿದಾಗಲೂ ನನ್ನ ಮನಸ್ಸು, ನಿಜಕ್ಕೂ ಐದೇ ರೂಪಾಯಿಯಾ ಎಂದು ಪ್ರಶ್ನಿಸಿಕೊಳ್ಳುತ್ತಿತ್ತು. ಕೊನೆಗೆ ಕತ್ತಲಾಗಿ, ದೀಪಗಳೂ ಇಲ್ಲದ ಕಾರ್ಗತ್ತಲು ಕವಿದಾಗ, ಅಲ್ಲಲ್ಲಿ ದೀಪಗಳಿದ್ದ ಊರಿನ ಛಾಯೆ ಗೋಚರಿಸಿತು. ದಟ್ಟ ಮರಗಳಿದ್ದ, ಸಣ್ಣಗೇ ಹನಿಯುತ್ತಿದ್ದ ಆ ಊರೇ ಧಾರವಾಡ ಎಂದು ಗೊತ್ತಾದಾಗ ನನ್ನ ಮನಸ್ಸಿನಲ್ಲಿ ಎಂಥದೋ ರೋಮಾಂಚನ.

ಧಾರವಾಡದ ರಸ್ತೆಗಳೂ ಬಹುತೇಕ ನಿರ್ಜನವಾಗಿದ್ದವು. ಅಲ್ಲಿಯೂ ಬಂದ್ ಇತ್ತಂತೆ.

ಕೊನೆಗೂ ಜಿಗಿ ಜಿಗಿ ಮಳೆಯಲ್ಲಿ ಬಸ್ ನಿಲ್ದಾಣದ ಹತ್ತಿರ ಬಂದಾಗ, ಕಂಡಿದ್ದು ಪೊಲೀಸ್ ವಾಹನಗಳು ಮಾತ್ರ. ಬಂದ್‌ನಿಂದಾಗಿ ಸಿಟಿ ಬಸ್‌ನ ಸಂಚಾರ ಬಹುತೇಕ ಸ್ಥಗಿತಗೊಂಡಿತ್ತು. ಆಟೊ ಇಳಿದು, ಐದು ರೂಪಾಯಿ ಕೊಟ್ಟು ಚಾಲಕನ ಮುಖ ನೋಡಿದೆ. ಆತ ತರಾತುರಿಯಿಂದ ಹಣವನ್ನು ಜೇಬಿಗಿಳಿಸುತ್ತ ಆಟೊ ಏರಿ ಹೊರಟುಹೋದ. ನಾನು ಅನಾಥನಂತೆ ಧಾರವಾಡದ ಬಸ್ ನಿಲ್ದಾಣದ ಎದುರು ನಿಂತಿದ್ದೆ.

ಧಾರವಾಡ ಎಂದಾಗ ಈಗಲೂ ನನಗೆ ನೆನಪಾಗುವುದು ನನ್ನ ಮೊದಲ ಭೇಟಿಯ ದಿನ. ಮುಂದೆ ಪ್ರಜಾವಾಣಿ ವರದಿಗಾರನಾಗಿ ಧಾರವಾಡಕ್ಕೆ ಹೋದೆ. ಎರಡೂವರೆ ವರ್ಷ ಕೆಲಸ ಮಾಡಿದೆ. ನನ್ನ ವೃತ್ತಿ ಜೀವನದ ಅತ್ಯುತ್ತಮ ದಿನಗಳವು. ನೂರಾರು ವಿಶೇಷ ವರದಿಗಳನ್ನು, ಲೇಖನಗಳನ್ನು ಅಲ್ಲಿಂದ ಬರೆದಿದ್ದೇನೆ. ನನ್ನ ಬದುಕಿಗೆ ಹೊಸತನ ತಂದುಕೊಟ್ಟ ಊರದು. ಆ ಊರಿನೊಂದಿಗೆ ಸಾವಿರಾರು ನೆನಪುಗಳು ಬೆರೆತುಕೊಂಡಿವೆ.

ಇವತ್ತೇಕೋ ಈ ಊರು ಇನ್ನಿಲ್ಲದಂತೆ ನೆನಪಾಗತೊಡಗಿದೆ. ಅದರ ಬಗ್ಗೆ ಬರೆಯಹೊರಟವನು ಮತ್ತೇನನ್ನೋ ಬರೆದುಬಿಟ್ಟೆ. ಅಷ್ಟಕ್ಕೂ, ಧಾರವಾಡ ಎಂದ ಕೂಡಲೇ ನನ್ನ ನೆನಪಿಗೆ ಬರುವುದು ಮೊದಲ ಭೇಟಿಯೇ. ಹೀಗಾಗಿ ಅದರ ಬಗ್ಗೆ ಬರೆಯದೇ ಇರಲಾಗಲಿಲ್ಲ.

ಕಾಡುವ ನೆನಪುಗಳ ಬಗ್ಗೆ ಮತ್ತೆಂದಾದರೂ ಬರೆದುಕೊಳ್ಳುತ್ತೇನೆ. ಅಲ್ಲಿಯವರೆಗೆ ಅವು ಮಾಗುತ್ತಿರಲಿ. ಧಾರವಾಡದ ಜಿಟಿಜಿಟಿ ಮಳೆಗೆ, ಕುಳಿರ್ಗಾಳಿಗೆ, ಸಣ್ಣ ಚಳಿಗೆ ತಾಗದಂತೆ ಎದೆಯೊಳಗೆ ಬೆಚ್ಚಗಿರಲಿ.

- ಚಾಮರಾಜ ಸವಡಿ

ಆತ್ಮದಷ್ಟು ಹತ್ತಿರ, ಆಕಾಶದಷ್ಟು ದೂರ

6 Feb 2011

3 ಪ್ರತಿಕ್ರಿಯೆ
ನಾವೇಕೆ ಬರೆಯುತ್ತೇವೆ ಎಂಬುದು ಹಳೇ ಪ್ರಶ್ನೆ. ಉತ್ತರಿಸಲು ತಡವರಿಸುವಂಥ ಪ್ರಶ್ನೆ. ಹೀಗಾಗಿ ಎಷ್ಟೋ ಸಲ ಕೇಳಿಕೊಂಡಿದ್ದೇನೆ: ಈ ಬ್ಲಾಗ್ ಬರೆಯುವುದು ಏತಕ್ಕಾಗಿ?

ಮುದ್ರಣ ಮಾಧ್ಯಮದಿಂದ ದೃಶ್ಯ ಮಾಧ್ಯಮಕ್ಕೆ ವಲಸೆ ಬಂದಾಗೆಲ್ಲ ಇಂಥದೊಂದು ಅನಿವಾರ್ಯತೆ ಕಾಡಿದೆ. ನನ್ನ ಬರವಣಿಗೆಗೆ ವೇದಿಕೆ ಸೃಷ್ಟಿಸಿಕೊಳ್ಳುವ ಅನಿವಾರ್ಯತೆಯಿಂದಾಗಿ ಈ ಬ್ಲಾಗ್ ಶುರು ಮಾಡಿದೆ.

ಆದರೆ, ಕೆಲವೇ ವರ್ಷಗಳ ಹಿಂದೆ ಇಂಥ ಸೌಲಭ್ಯವಿದ್ದಿಲ್ಲ. ಬಿಟ್ಟು ಬಂದ ಪತ್ರಿಕೆಗಳವರು ನನ್ನ ಬರಹಗಳನ್ನು ಹಾಕುತ್ತಿದ್ದಿಲ್ಲ. ಅದಕ್ಕೆ ಕಾರಣಗಳು ಹಲವಾರು. ಹಾಕುವುದಿಲ್ಲ ಎಂದು ಗೊತ್ತಾದಾಗ, ಅನಿವಾರ್ಯವಾಗಿ ನೋಟ್‌ಬುಕ್‌ನಲ್ಲಿ ಬರೆದಿಟ್ಟುಕೊಳ್ಳುತ್ತಿದ್ದೆ. ಅವನ್ನು ಒಬ್ಬನೇ ಓದಿ ಖುಷಿಪಡುತ್ತಿದ್ದೆ. ನನ್ನ ಎಷ್ಟೋ ಬರವಣಿಗೆಗಳು ಈಗಲೂ ಹಾಗೇ ಉಳಿದಿವೆ. ಒಂಥರಾ ಖಾಸಗಿ ಗುಟ್ಟುಗಳಂತೆ.

ಇನ್ನು ಬರಹಕ್ಕೆ ಸಂಬಂಧಿಸಿದಂತೆ ನಾನು ಕೆಲವೊಂದು ನಿಯಮಗಳನ್ನು ಹಾಕಿಕೊಂಡಿದ್ದೇನೆ. ಅವು ಕೇವಲ ನನಗಾಗಿ ಮಾಡಿಕೊಂಡಂಥವು.

ಬಿಟ್ಟು ಬಂದ ಸಂಸ್ಥೆಯ ವಿರುದ್ಧ ನಾನು ಬರೆಯುವುದಿಲ್ಲ. ಅಲ್ಲಿಯ ಒಳಜಗಳಗಳು, ಜನಗಳು, ಘಟನೆಗಳ ಬಗ್ಗೆ ಋಣಾತ್ಮಕವಾಗಿ ಬರೆಯಬಾರದು ಎಂಬುದು ಅಂಥದೊಂದು ನಿಯಮ. ಇಲ್ಲಿನ್ನು ಇರಲು ಸಾಧ್ಯವೇ ಇಲ್ಲ ಎಂದು ಅನಿಸಿದಾಗ ಸಂಸ್ಥೆಯೊಂದನ್ನು ಬಿಟ್ಟು ಹೊರಡುವುದು ಅನಿವಾರ್ಯ. ಹೀಗಿದ್ದರೂ, ಬಿಟ್ಟು ಬಂದ ಸಂಸ್ಥೆಯ ವಿರುದ್ಧ, ಅಲ್ಲಿದ್ದ ವ್ಯಕ್ತಿಗಳ ವಿರುದ್ಧ ಬರೆಯಬಾರದು ಎಂಬ ನಿಯಮವನ್ನು ನಾನು ಪಾಲಿಸಿಕೊಂಡು ಬಂದಿದ್ದೇನೆ.

ಹಾಗೆಯೇ ನನ್ನ ಏರ್‌ಫೋರ್ಸ್ ದಿನಗಳ ಬಗ್ಗೆ. ಈ ಕುರಿತು ಇದುವರೆಗೆ ನಾನು ಏನನ್ನೂ ಬರೆಯಲು ಹೋಗಿಲ್ಲ. ಬಹುಶಃ ಬರೆಯಲಾರೆ. ಹಾಗೆ ನೋಡಿದರೆ ಅದು ನಾನು ಸೇರಿದ್ದ ಮೊದಲ ಕೆಲಸ. ಮೊದಲ ತಲ್ಲಣ. ಮೊದಲ ವೃತ್ತಿ ರೋಮಾಂಚನವೂ ಹೌದು. ಹೀಗಿದ್ದರೂ,  ಆ ವೃತ್ತಿಯ ಬಗ್ಗೆ ನಾನು ಬರೆಯಲಾರೆ. ನನ್ನ ಪಾಲಿಗೆ ಅದೊಂದು ಮುಚ್ಚಿದ ಪುಸ್ತಕ.

ನಾನು ಕೆಲಸ ಮಾಡಿದ ಬಹುತೇಕ ಸಂಸ್ಥೆಗಳು, ಮಾಡಿದ ತರಹೇವಾರಿ ಕೆಲಸಗಳ ಬಗ್ಗೆ ನಾನು ಬರೆದಿಲ್ಲ. ಸದ್ಯಕ್ಕಂತೂ ಬರೆಯುವುದಿಲ್ಲ. ಇನ್ನು ಜೊತೆಗೆ ಕೆಲಸ ಮಾಡಿದ ವ್ಯಕ್ತಿಗಳ ಬಗ್ಗೆ ಕೂಡ ಇಂಥದೇ ಅಲಿಖಿತ ನಿಯಮವೊಂದನ್ನು ಪಾಲಿಸಿಕೊಂಡು ಬರುತ್ತಿದ್ದೇನೆ. ತೀರಾ ಬರೆಯಬೇಕಾದಾಗ, ಒಂದೆರಡು ಒಳ್ಳೆಯ ಮಾತು ಬರೆಯುವುದನ್ನು ಬಿಟ್ಟರೆ, ಕೆಟ್ಟದ್ದನ್ನು ಬರೆದಿದ್ದು ಬಲು ಅಪರೂಪ.

ಖಿನ್ನತೆ ತೀವ್ರವಾಗಿ ಕಾಡಿದಾಗ, ನನ್ನ ಬದುಕಿನ ಹಲವಾರು ವಿವಿಧ ಘಟ್ಟಗಳು ಕಣ್ಮುಂದೆ ಬರುತ್ತವೆ. ಕೆಲಸ ಮಾಡಿದ ಸಂಸ್ಥೆಗಳು, ಅಲ್ಲಿನ ವ್ಯಕ್ತಿಗಳು, ಘಟನೆಗಳು ಕಣ್ಮುಂದೆ ತೇಲುತ್ತವೆ. ಮನಸ್ಸು ಅರಳಿಸಿದ, ಮುದುಡಿಸಿದ ಘಟನೆಗಳು ನೆನಪಾಗುತ್ತವೆ. ಆದರೆ, ಅವು ಕೇವಲ ನೆನಪಿಗೆ ಮತ್ತು ಖಾಸಗಿ ಮನನಕ್ಕೆ ಮಾತ್ರ ಸೀಮಿತ. ಅವನ್ನು ನಾನು ಬರೆಯಲಾರೆ. ಕನಿಷ್ಟ, ಈಗಿನ ಪರಿಸ್ಥಿತಿಯಲ್ಲಿ ಬರೆಯಲಾರೆ. ಮುಂದ್ಯಾವತ್ತೋ ಅಧಿಕೃತವಾಗಿ ವೃತ್ತಿ ಬದುಕಿನಿಂದ ಹೊರಬಂದು, ನನ್ನಿಷ್ಟದಂತೆ ಬದುಕುವಾಗ ಬರೆದೇನು. ಅಲ್ಲಿಯವರೆಗೆ, ಆ ನೆನಪುಗಳು ಖಾಸಗಿ ಸಂಚಾರಕ್ಕೆ ಮಾತ್ರ ಸೀಮಿತ.

ಏಕೆ ಬರೆಯಬಾರದು? ಅಂತ ಅದೆಷ್ಟೋ ಸಲ ಕೇಳಿಕೊಂಡಿದ್ದೇನೆ. ಖಚಿತ ಉತ್ತರ ಸಿಕ್ಕಿಲ್ಲ. ಬಹುಶಃ ಸಿಗಲಿಕ್ಕಿಲ್ಲ. ಸಂಸ್ಥೆಯೊಂದನ್ನು ಬಿಟ್ಟು ಬಂದ ವ್ಯಕ್ತಿಗೆ ಹೇಳಲು ಸಾಕಷ್ಟು ವಿಷಯಗಳಿರುತ್ತವೆ. ಹೇಳಿಕೊಳ್ಳಬೇಕಾದ ಒತ್ತಡವಿರುತ್ತದೆ. ಹೇಳಿ ದಕ್ಕಿಸಿಕೊಳ್ಳುವ ಸ್ವಾತಂತ್ರ್ಯವೂ ಇರುತ್ತದೆ. ಅದು ನನಗೂ ಗೊತ್ತು. ಆದರೂ, ಹೇಳಬಾರದು ಎಂಬ ನಿಯಮವನ್ನು ನಾನು ಪಾಲಿಸಿಕೊಂಡು ಬರುತ್ತಿರುವುದೇತಕ್ಕೆ ಎಂಬ ಪ್ರಶ್ನೆಗೆ ಮಾತ್ರ ಉತ್ತರ ಇದುವರೆಗೆ ಸಿಕ್ಕಿಲ್ಲ.
 
*****

ಆತ್ಮದಷ್ಟು ಹತ್ತಿರ, ಆಕಾಶದಷ್ಟು ದೂರ ಎಂಬ ಸಾಲು ಏಕೋ ಇವತ್ತು ಪದೆ ಪದೆ ಕಾಡತೊಡಗಿದೆ. ಜೀವನದಲ್ಲಿ ನಾವೆಲ್ಲ ಏತಕ್ಕೋ ಹಂಬಲಿಸುತ್ತೇವೆ. ಕೈಗೆಟಕುವಷ್ಟು ಹತ್ತಿರದಲ್ಲಿದೆ ಎಂದಾಗಲಂತೂ ಅದು ವಿಚಿತ್ರ ಆಶಾಭಾವ ಹುಟ್ಟಿಸುತ್ತದೆ. ಬದುಕಿಗೆ ಹೊಸ ಭರವಸೆ ತುಂಬುತ್ತದೆ. ಜೀವನದ ಅತಿ ದೊಡ್ಡ ಖಾಲಿತನ ಇನ್ನು ತುಂಬಿತು ಎಂಬ ನೆಮ್ಮದಿಗೆ ಕಾರಣವಾಗುತ್ತದೆ.

ಆದರೆ, ನೋಡನೋಡುತ್ತಿದ್ದಂತೆ, ಒಂದು ಘಟ್ಟದಲ್ಲಿ ಆ ಭರವಸೆ ಕರಗತೊಡಗುತ್ತದೆ. ನೆಚ್ಚಿಕೊಂಡ, ಪ್ರೀತಿಸಿದ್ದ ಆ ವ್ಯಕ್ತಿ, ವೃತ್ತಿ, ಸಂಸ್ಥೆಯ ಮಿತಿ ತಳಮಳ ತರತೊಡಗುತ್ತದೆ. ಅಷ್ಟೊಂದು ಹಚ್ಚಿಕೊಂಡಿದ್ದ, ಅಷ್ಟೊಂದು ನೆಚ್ಚಿಕೊಂಡಿದ್ದ ಅದು ಇನ್ನು ನನ್ನ ಪಾಲಿಗಿಲ್ಲ ಎಂಬ ಭಾವ ತೀವ್ರ ನೋವುಂಟು ಮಾಡುತ್ತದೆ.

ಹಾಗಂತ ಆ ವ್ಯಕ್ತಿ, ಸಂಸ್ಥೆ ಅಥವಾ ಭಾವನೆ ನಮ್ಮಿಂದ ದೂರವಾಗಿರುವುದಿಲ್ಲ. ಆದರೆ, ಮಾನಸಿಕವಾಗಿ ಅಂತರವೊಂದು ಸೃಷ್ಟಿಯಾಗಿರುತ್ತದೆ. ಆ ಅಂತರ ಕ್ರಮೇಣ ಬೆಳೆಯುತ್ತ ಹೋಗುತ್ತದೆ. ಒಳಹರಿವಿಲ್ಲದೇ ಕ್ರಮೇಣ ಭಾವನೆ ಸೊರಗುತ್ತದೆ. ಕನಸು ಕರಗುತ್ತದೆ.

ಅಂಥದೊಂದು ವಿಚಿತ್ರ ಸಂಘರ್ಷದಲ್ಲಿ ನಾನೀಗ ಸಿಲುಕಿದ್ದೇನೆ.

ಇದರಿಂದ ಹೊರಬರಬೇಕು. ಆದರೆ, ಹೇಗಂತ ಗೊತ್ತಾಗುತ್ತಿಲ್ಲ. ಇಷ್ಟು ದಿನಗಳವರೆಗೆ, ಅಡಿಗಡಿಗೂ ಕೈಹಿಡಿದು ಜೊತೆಗೆ ಬರುತ್ತಿದ್ದ ಮಗುವೊಂದು, ಇದ್ದಕ್ಕಿದ್ದಂತೆ ಕೈ ಕೊಸರಿ ಮುಂದೆ ಓಡಿದಂಥ ಭಾವನೆಯದು. ಅರೆರೆ, ನನ್ನ ಮಗು ನನ್ನಾಸರೆಯ ಹಂಗಿಲ್ಲದೇ ನಡೆಯುವುಷ್ಟು ದೊಡ್ಡದಾಯಿತು ಎಂಬ ಸಂತಸದ ಜೊತೆಗೆ, ಮುಗ್ಧತೆ ಉಕ್ಕಿಸುತ್ತಿದ್ದ ಆ ಕಂದನ ಮುದ್ದು ಪ್ರೀತಿ ಇನ್ನಿಲ್ಲ ಎಂಬ ವಾಸ್ತವ ನೋವುಕ್ಕಿಸುತ್ತದೆ. ಮನಸ್ಸು ಒಳಗಣ್ಣಾಗುತ್ತದೆ.

ಬದುಕಿನ ರೀತಿಯೇ ಹೀಗೆ. ಯಾವುದೋ ತಿರುವಿನಲ್ಲಿ ಬದುಕು ದಿಢೀರನೇ ಬದಲಾಗುತ್ತದೆ. ಆ ಕ್ಷಣದ ಅಯೋಮಯ, ಕಕ್ಕಾವಿಕ್ಕಿತನ ಅರಗಿಸಿಕೊಂಡು ಮುಂದಡಿ ಇಡುವವರೆಗೆ ಬರೀ ಗೊಂದಲ. ಬಹುಶಃ ಮುಂದೆಯೂ ಈ ಗೊಂದಲ ಆಗಾಗ ಕಾಡುತ್ತಲೇ ಇರುತ್ತದೆ. ಊರಾಚೆ ಬಿಟ್ಟುಬಂದ ಬೆಕ್ಕು, ಅದ್ಯಾವ ಜಾವದಲ್ಲೋ ಹಾಸಿಗೆ ಹತ್ತಿರ ಬಂದು ಒರಲುವಂತೆ, ನೆನಪುಗಳು ಮತ್ತೆ ಮತ್ತೆ ಉಕ್ಕುತ್ತಲೇ ಇರುತ್ತವೆ. ಮತ್ತೆಂದಿಗೂ ಆ ದಿನಗಳನ್ನು ನಾವು ಬದುಕಲಾರೆವು. ಆ ವ್ಯಕ್ತಿಗಳೊಂದಿಗೆ ಇರಲಾರೆವು. ಮತ್ತೆಂದಿಗೂ ಹಿಂದಿರುಗದ ಸೊಗಸದು.

ಅಂಥದೊಂದು ಗೊಂದಲದಲ್ಲಿ ಮುಳುಗಿಕೊಂಡು ಇದನ್ನು ಬರೆದಿದ್ದೇನೆ. ಕರಗಿಹೋದ ಪೆಪ್ಪರ್‌ಮಿಂಟ್‌ನ ಸವಿ ಬಾಯಲ್ಲಿ ಉಳಿದಿರುವಂತೆ, ಆ ನೆನಪುಗಳು ಹಾಗೇ ಉಳಿದುಬಿಟ್ಟಿವೆ. ಇದುವರೆಗೆ ಸವಿದಿದ್ದು ಭಾಗ್ಯವೆನಲೇ, ಇನ್ನಷ್ಟು ಸವಿಯಬೇಕಿತ್ತೆಂದು ಕೊರಗಲೇ?-

ಬರೀ ಗೊಂದಲ!

- ಚಾಮರಾಜ ಸವಡಿ