ಗೋಲದೊಳಗೆ ತಿರುಗುತ್ತಾ ತಿರುಗುತ್ತಾ...

21 May 2012

1 ಪ್ರತಿಕ್ರಿಯೆ
ನಾನು ಮತ್ತೆ ಮತ್ತೆ ಮೊಬೈಲ್‌ನ ಪುಟ್ಟ ಪರದೆಯನ್ನು ದಿಟ್ಟಿಸಿದೆ.

ಅಲ್ಲಿ ನೀನಿದ್ದಿಲ್ಲ.

ನಿರಾಶೆಯಾಯಿತು. ಅದು ಹಾಗೇ ಬಿಡು, ಆಗಾಗ ಎನ್ನುವುದಕ್ಕಿಂತ ಬಹುತೇಕ ಸಮಯದಲ್ಲಿ ಅದು ಹಾಗೇ.

ನಿರಾಶೆ. ಯಾವುದೇ ಹೊಸ ಭರವಸೆ ಮೂಡಿಸದ ಮಾಮೂಲಿ ಭಾವ ಎನ್ನುವಷ್ಟರಮಟ್ಟಿಗೆ ಅದು ರೂಢಿಯಾಗಿಹೋಗಿದೆ. ಮೊಬೈಲ್ ಮುಖವನ್ನು ಆಗಾಗ ದಿಟ್ಟಿಸುವುದು, ಅದರಲ್ಲಿ ಹೊಸದೇನಾದರೂ ಮೂಡಿದೆಯೋ ಎಂದು ಪರೀಕ್ಷಿಸುವುದು, ಇಲ್ಲವೆಂದಾಗ, ಚಿಕ್ಕದೊಂದು ನಿರಾಶೆ ಅನುಭವಿಸುವುದು, ಮತ್ತೆ ಮೊಬೈಲ್ ಮುಚ್ಚಿ, ಕೆಲಸದತ್ತ ಗಮನ ಹರಿಸುವುದು ಬದುಕಿನ ಭಾಗವಾಗೇ ಹೋಗಿದೆ.

ಎಷ್ಟು ದಿನದಿಂದ ಇದು ಹೀಗೆ ಎಂದು ಯೋಚಿಸುವುದೂ ಉಂಟು. ಆಗೆಲ್ಲ ತಲೆ ಕೊಡವಿ ಸುಮ್ಮನಾಗುತ್ತೇನೆ. 

ಹಳೆಯದನ್ನು ನೆನಪಿಸಿಕೊಳ್ಳುತ್ತ ಕೂಡುವುದರಲ್ಲಿ ಅರ್ಥವಿಲ್ಲ ಎಂಬುದನ್ನು ನಿನಗಿಂತ ಇಷ್ಟೊಂದು ಪರಿಣಾಮಕಾರಿಯಾಗಿ ಬೇರ‍್ಯಾರೂ ನನಗೆ ಮನದಟ್ಟು ಮಾಡಿಸಿಲ್ಲ. ಈಗ ನಾನು ಮುಳುಗಿರುವ ಆಳ ನೋಡಿದರೆ, ಬಹುಶಃ ಮತ್ಯಾರೂ ಆ ಸ್ಥಾನವನ್ನು ಕದಿಯಲು ಸಾಧ್ಯವೂ ಇಲ್ಲ.

ಹೀಗಾಗಿ, ಮೊಬೈಲ್ ಪರದೆಯನ್ನು ದಿಟ್ಟಿಸುವುದರ ಹಿಂದಿನ ಭಾವನೆಗಳೇ ಬೇರೆ. 

ನಿನ್ನನ್ನು ಬಿಟ್ಟು ಮತ್ಯಾರೂ ಅದರಲ್ಲಿ ಸಂತೋಷ ಉಕ್ಕಿಸಲಾರರು. 

ಮತ್ತು, ದುಃಖವನ್ನೂ ಸಹ.

ಗಾಡಿ ಓಡಿಸುವಾಗ, ಸಿಗ್ನಲ್‌ನಲ್ಲಿ ಮತ್ತೆ ಮೊಬೈಲ್ ಮುಖ ದಿಟ್ಟಿಸುತ್ತೇನೆ. ಖಾಲಿ ಪರದೆ ಅಣಕಿಸುತ್ತದೆ. ಮೊಬೈಲ್ ಮುಚ್ಚಿ ಸುಮ್ಮನೇ ರಸ್ತೆ ದಿಟ್ಟಿಸುತ್ತೇನೆ. ಎದುರಿಗೆ ನಿಂತಿರುವ ಗಾಡಿಯ ನಂಬರ್ ಪ್ಲೇಟ್‌ಗಳೊಮ್ಮೆ ಅವಲೋಕಿಸುತ್ತೇನೆ. ಅಲ್ಲಿರುವ ನಂಬರ್‌ಗಳನ್ನು ಕೂಡಿಸಿದರೆ ಬರುವ ಸಂಖ್ಯೆಯನ್ನು ಲೆಕ್ಕ ಹಾಕುತ್ತೇನೆ. ಒಂದಕ್ಕಿಂತ ಒಂದು ನಂಬರ್‌ಗಳು ಅಧ್ವಾನವಾಗಿರುತ್ತವೆ. 

ಅಷ್ಟೊತ್ತಿಗೆ ಸಿಗ್ನಲ್ ಹಸಿರಾಗುತ್ತದೆ. 

ಮತ್ತೆ ಓಟ ಶುರು. ಎಲ್ಲಿಗೆ ಓಡುತ್ತಿದ್ದಾರೋ ಇವರೆಲ್ಲ ದಿಕ್ಕೆಟ್ಟವರಂತೆ ಎಂದು ಬೈದುಕೊಳ್ಳುತ್ತಲೇ ನಾನೂ ಓಟದಲ್ಲಿ ಸೇರಿಕೊಳ್ಳುತ್ತೇನೆ. ಬಹುಶಃ ಅವರೂ ನನ್ನಂತೆ ಯೋಚಿಸುತ್ತಿರಬಹುದು. 

ಕಚೇರಿಗೆ ಹೋದಾಗ, ಮೊಬೈಲ್ ಜಾಗವನ್ನು ಮೇಲ್ ಆವರಿಸುತ್ತದೆ.

ನಿನ್ನ ಹೆಸರಿನ ಮುಂದೆ ದೀಪವೇನಾದರೂ ಬೆಳಗುತ್ತಿದೆಯಾ ಎಂದು ದಿಟ್ಟಿಸುತ್ತೇನೆ.

ದೀಪ ಕಂಡರೆ ಹೇಳತೀರದ ಖುಷಿ. ನಂಗೊತ್ತು ನೀನು ಚಾಟ್‌ಗೆ ಬರಲ್ಲ ಅಂತ. ಆದರೂ ಖುಷಿ. ಬಲೂನು ಮಾರುವವನನ್ನು ಕಂಡ ಮಗುವಿನಂತೆ. 

ಬಲೂನು ಸಿಗುತ್ತೋ ಇಲ್ಲವೋ ಎಂಬುದು ಗೊತ್ತಿರದಿದ್ದರೂ, ಬಲೂನು ಕಂಡ ಅಮಾಯಕ ಖುಷಿಯದು. 

ಆಗಾಗ ಮೇಲ್‌ನ ದೀಪ ನೋಡುತ್ತ ಕೆಲಸ ಮಾಡುತ್ತ ಕೂಡುತ್ತೇನೆ. ಮೀಟಿಂಗ್‌ಗಳಿಗೆ ಎದ್ದು ಹೋಗುವಾಗ, ಲಾಗೌಟ್ ಆದರೂ, ವಾಪಸ್ ಬಂದಾಗ ಮತ್ತೆ ಲಾಗಿನ್ ಆಗಿ ದೀಪ ನಿಟ್ಟಿಸುತ್ತೇನೆ. 

ಎಷ್ಟೋ ಸಾರಿ ದೀಪ ಇರಲ್ಲ.

ಮನಸ್ಸು ಮುದುಡುತ್ತದೆ. 

ಇವೆಲ್ಲ ಅರ್ಥವಿಲ್ಲದ ಭಾವಾತಿರೇಕಗಳು ಅಂತ ನನ್ನನ್ನು ನಾನೇ ಬೈದುಕೊಳ್ಳುತ್ತ ಮತ್ತೆ ಕೆಲಸದಲ್ಲಿ ಮಗ್ನನಾಗುತ್ತೇನೆ. ಒಂದಿಷ್ಟು ಕೆಟ್ಟ ಅನುವಾದಗಳು ಬರುತ್ತವೆ. ಅವಕ್ಕೆ ಜೀವ ತುಂಬಿ, ಅನುವಾದಿಸಿ, ಮತ್ಯಾರದೋ ಕೆಟ್ಟ ಬರವಣಿಗೆಯನ್ನು ಒಪ್ಪವಾಗಿ ಎಡಿಟ್ ಮಾಡಿ, ಅವಕ್ಕೆ ತಕ್ಕುದಾದ ಚಿತ್ರಗಳನ್ನು ಹುಡುಕಿ, ಪುಟ ವಿನ್ಯಾಸಕರಿಗೆ ಕಳಿಸಿಕೊಟ್ಟು, ಈ ಮಧ್ಯೆ ಮತ್ತೆ ಮತ್ತೆ ದೀಪ ದಿಟ್ಟಿಸುತ್ತಾ-

ಎಷ್ಟೋ ಸಾರಿ ಅಂದುಕೊಳ್ಳುತ್ತೇನೆ: ಈ ಮೂರ್ಖತನವನ್ನು ಬಿಟ್ಟು ಗಂಭೀರವಾಗಿ ಏನನ್ನಾದರೂ ಮಾಡಬೇಕು.

ಹಾಗೆ ತಿಂಗಳುಗಟ್ಟಲೇ ಅಂದುಕೊಂಡಾಗ ಹುಟ್ಟಿದ್ದು ಈ ನಿರ್ಧಾರ.

ಇನ್ಮೇಲೆ ಮೇಲ್‌ನ ದೀಪ ದಿಟ್ಟಿಸುವುದಿಲ್ಲ. ಪದೆ ಪದೆ ಮೊಬೈಲ್‌ನ ಪರದೆಯಲ್ಲಿ ನಿನ್ನ ಸಂದೇಶ ಹುಡುಕುವುದಿಲ್ಲ. 

ಹಾಗಂದುಕೊಂಡ ಮೊದಲೆರಡು ದಿನ ವಿಪರೀತ ಖಿನ್ನತೆ. ತವಕ ಹುಟ್ಟಿಸುತ್ತಿದ್ದ ಇವೆರಡು ಸಣ್ಣ ಖುಷಿಗಳು ಒಮ್ಮೆಲೇ ಇಲ್ಲವಾದವು. ಮನಸ್ಸು ಖಾಲಿ. 

ಆ ಜಾಗವನ್ನು ತುಂಬಲು ಏನಾದರೂ ಬರೆಯಲು ಶುರು ಮಾಡಿದೆ. ಬರೆದು ಮಾಡುವುದಾದರೂ ಏನು ಅಂತ ಅವನ್ನೆಲ್ಲ ಡಿಲೀಟ್ ಮಾಡಿದೆ.

ಆಗ ಮನಸ್ಸು ಇನ್ನಷ್ಟು ಖಾಲಿಯಾಯ್ತು. ಅದರ ಜಾಗದಲ್ಲಿ ಸಿಡುಕು, ಮಂಕುತನ.

ಕಳೆದುಹೋದವನಂತೆ ಕೂಡುವುದು ರೂಢಿಯಾಯ್ತು. ಗೆಳೆಯರು ಹುಬ್ಬೇರಿಸಿ ನೋಡಿ ಕ್ರಮೇಣ ಸುಮ್ಮನಾದರು. 

ಕೆಲವೊಮ್ಮೆ ನೀನು ಫೋನ್ ಮಾಡುತ್ತೀ. ನಂಗೊತ್ತು, ಅದು ವೃತ್ತಿಪರ ವಿಷಯಕ್ಕೆ ಸಂಬಂಧಿಸಿದ್ದು ಅಂತ. 

ಮತ್ತೇನು ವಿಷಯ ಅನ್ನುತ್ತೀ. ಏನಿಲ್ಲ ಅಂತೀನಿ. ನೀನು ಅದೂ ಇದು ಮಾತಾಡುತ್ತೀ. ನನ್ನ ಗಮನ ಇರಲ್ಲ. ಮತ್ತೇನು ಸಮಾಚಾರ ಅನ್ನುತ್ತೀ. ಏನಿಲ್ಲ ಅಂತೀನಿ. ಏಕೋ ನೀವು ಮೂಡಿಯಾಗ್ತಿದ್ದೀರಾ ಅನ್ನುತ್ತೀ. ಹಾಗೇನಿಲ್ಲ ಅಂತೀನಿ. ಸ್ವಲ್ಪ ಹೊತ್ತು ನೀನು ಸುಮ್ಮನಾಗ್ತೀ. ನಾನು ಸುಮ್ಮನೇ ಇರ್ತೀನಿ. ಸರಿ ಹಾಗಾದ್ರೆ ಅಂತ ಫೋನಿಡ್ತೀ. ನನ್ನ ಮನಸ್ಸು ಪೂರ್ತಿ ಖಾಲಿ.

ಏನಿದೆಲ್ಲ? ಏಕಿದೆಲ್ಲ? ಕಬ್ಬಿಣದ ಪಟ್ಟಿಯ ಗೋಲದಲ್ಲಿ ಸರ್ಕಸ್‌ನವ ಬೈಕ್ ಓಡಿಸುತ್ತಾ ಅಲ್ಲೇ ತಿರುಗುವಂತೆ ಈ ಪ್ರಶ್ನೆಗಳು ಮತ್ತೆ ಮತ್ತೆ ರೊಂಯ್‌ಗುಟ್ಟುತ್ತ ಮನಸ್ಸಲ್ಲಿ ಸುತ್ತುತ್ತವೆ. ಗೋಲದೊಳಗಿನ ಬೈಕ್‌ನವ ಹೇಗೆ ಎಲ್ಲೂ ಹೋಗದೇ ಅಲ್ಲೇ ಸುತ್ತುತ್ತಾನೋ, ಹಾಗೆ ಈ ಪ್ರಶ್ನೆಗಳೂ ಉತ್ತರವಿಲ್ಲದೇ ಸುತ್ತುತ್ತಲೇ ಹೋಗುತ್ತವೆ. ಸುತ್ತಿ ಸುತ್ತಿ ಸುಸ್ತಾಗ್ತವೆ.

ನಿನಗೂ ಹೀಗೆಲ್ಲ ಅನಿಸುತ್ತಾ? ನೀನು ಆಗಾಗ ಮೊಬೈಲ್‌ನ ಪರದೆ ನೋಡಿ ನಿರಾಶಳಾಗ್ತೀಯಾ? ಮೇಲ್‌ನ ದೀಪ ನೋಡ್ತಿರ್ತಿಯಾ? ಕರೆಯೊಂದು ಬರುತ್ತೆ ಅಂತ ಕಾಯ್ತಿರ್ತಿಯಾ? ನಿಂಗೂ ಇದೆಲ್ಲ ಏಕೆ? ಏನು? ಎಂಬೆಲ್ಲ ಪ್ರಶ್ನೆಗಳು ಕಾಡುತ್ವಾ?

ಇಂಥ ಪ್ರಶ್ನೆಗಳು ನಿನ್ನನ್ನು ಕಾಡದಿದ್ರೇ ಒಳ್ಳೆಯದು. 

ಕಾಡಿದ್ರೆ, ನೀನು ನನ್ನ ಹಾಗೇ ಆಗಿಬಿಡ್ತೀ. ಹಾಗಾಗದಿರಲಿ.

ನೀನು ನೀನೇ ಆಗಿರು.

ನಾನು ನಾನೇ ಆಗಿರ್ತೀನಿ. 

ಗೋಲದೊಳಗೆ ತಿರುಗುತ್ತಾ ತಿರುಗುತ್ತಾ...

- ಚಾಮರಾಜ ಸವಡಿ

ಆ ರಾತ್ರಿ ಹಾಗೆ...

13 May 2012

1 ಪ್ರತಿಕ್ರಿಯೆ
ಮೌನವಾಗಬೇಕು
ಕಿವಿಗೊಡಬೇಕು, ಮಾತಾಗಬಾರದು
ಸುಮ್ಮನೇ ನೋಡಬೇಕು
ಹೀರಿಕೊಂಡು ಸುಮ್ಮನಿರಬೇಕು
ಬೆಳೆಯಬೇಕು ಒಳಗೊಳಗೇ

ಉಕ್ಕುವ ಕಡಲಿಂದ ಸದ್ದು ಬರಬಾರದು
ಹೃದಯ ನಿಟ್ಟುಸಿರಿಡಬಾರದು
ಮುರಿದು ಬೀಳುವ ಸದ್ದಿರಲಿ
ಕಣ್ಣೀರೂ ಶಬ್ದವಾಗಬಾರದು

ಮೌನಕ್ಕೆ ಮಾತುಂಟು
ಥೇಟ್ ಹೃದಯದಂತೆ
ಕೊರಳುಬ್ಬಿ ಸುಮ್ಮನಾದಾಗ
ಎದೆಯಾಳದ್ದೇ ಮಾತು

ಹಾಗಂತ ಸುಮ್ಮನೇ ಕೂತಿದ್ದೇನೆ

ಮಾತು ಮೌನವಾಗಿದೆ
ಮೌನ ಮಾತಾಡುತ್ತಿದೆ
ಕೇಳಿಸಿಕೊಳ್ಳುವ ಕಿವಿಗಳ ಜಾಗದಲ್ಲಿ
ಹೃದಯ ಬಂದು ಕೂತಿದೆ

ಮೌನವಾಗಿ ಉಕ್ಕುವ ಕಡಲು
ಸದ್ದಿಲ್ಲದೇ ಮುರಿದುಬೀಳುವ ಕನಸು
ಆ ಕಾರ್ಗತ್ತಲ ರಾತ್ರಿಯಲಿ
ಗಡಿಯಾರಕ್ಕೂ ಮುನಿಸು

ಇದಿರೋದೇ ಹೀಗೆ
ಇದಿರಬೇಕಾಗಿದ್ದೂ ಹೀಗೇ
ಮಾತಿನಂಥ ಮೌನ
ಮೌನದಂಥ ಮಾತು
ಕನಸುನನಸುಗಳ ಕಲಸುಮೇಲೋಗರದಲ್ಲಿ
ನೆನಪೇ ಮರೆವು
ಮರೆವೇ ನೆನಪು

ಅದೇ ಬದುಕು
ಮತ್ತದೇ ಮರಣ

- ಚಾಮರಾಜ ಸವಡಿ

ಅಪರಾತ್ರಿಯಲ್ಲೊಬ್ಬ ಬುದ್ಧ

2 May 2012

2 ಪ್ರತಿಕ್ರಿಯೆ
ಸಣ್ಣ ಕಂಬದಂಥ ಸಿಡಿಲು ಕಣ್ಣೆದುರು ಅಪ್ಪಳಿಸಿದಾಗ, ಕುಬ್ಜ ನಾನು ಎಂಬ ಭಾವನೆ.

ಪ್ರೆಸ್‌ ಕ್ಲಬ್‌ನಿಂದ ಹೊರಟಾಗಲೇ ಹನ್ನೊಂದು ಗಂಟೆ. ಮಳೆ ಬರಬಹುದು ಎಂದು ಡಿಕ್ಕಿಯಲ್ಲಿಟ್ಟಿದ್ದ ಜರ್ಕಿನ್‌ ಧರಿಸಿ, ಲೋಡ್‌ ಆಗಿದ್ದ ಮಿತ್ರನನ್ನು ಹಿಂದೆ ಕೂರಿಸಿಕೊಂಡು, ಎಂದೂ ಹೋಗದಷ್ಟು ಕಡಿಮೆ ವೇಗದಲ್ಲಿ ಗಾಡಿ ಓಡಿಸುತ್ತ ಹೊರಟೆ. ಶಿವಾನಂದ ಸರ್ಕಲ್‌ ಹತ್ತಿರ ಸಿಗ್ನಲ್‌ ಕೆಂಪಡರಿದಾಗ ಗಾಡಿ ನಿಲ್ಲಿಸಿ ನೋಡುತ್ತಿರುವಾಗ ಹೊಡೆಯಿತು ಬರಸಿಡಿಲು.

ಕಣ್ಣೆದುರೇ ದೊಡ್ಡ ಕಂಬದಂಥ ಸಿಡಿಲು.

ಕಣ್ಣು ಕೋರೈಸಿದಂತಾಯ್ತು. ತುಂಬ ದಿನ ಆಗಿತ್ತು ಅಂಥ ಸಿಡಿಲನ್ನು ಹತ್ತಿರದಿಂದ ನೋಡಿ. ಬಾಲ್ಯದಲ್ಲಿ ಸಾಕಷ್ಟು ಬಾರಿ ಕಂಡಿದ್ದೇನೆ. ಅಲೆದಾಟದ ದಿನಗಳಲ್ಲೂ ಅವು ಆಗಾಗ ದರ್ಶನ ಕೊಟ್ಟಿದ್ದುಂಟು. ಆದರೆ, ಹತ್ತಾರು ವರ್ಷಗಳ ನಂತರ ಇದೇ ಮೊದಲ ಬಾರಿ ಕಂಡು ಅರೆಕ್ಷಣ ಮೂಕನಾಗಿದ್ದೆ.

ಆ ಕ್ಷಣಕ್ಕೆ, ಬದುಕು ನಶ್ವರ ಅನಿಸಿದ್ದು ಸುಳ್ಳಲ್ಲ.

ಸಿಗ್ನಲ್‌ ಹಸಿರಾದಾಗ ಗಾಡಿಗೆ ಓಡುವ ಆತುರವಿರಲಿಲ್ಲ. ಮಲ್ಲೇಶ್ವರಂ ತಲುಪಿ, ಮಿತ್ರನನ್ನು ಮನೆಯೊಳಗೆ ಕಳಿಸಿ, ಹುಷಾರಾಗಿ ಬಾಗಿಲು ಹಾಕಿಕೊಳ್ಳಲು ಹೇಳಿ ಮನೆಯತ್ತ ಹೊರಟೆ. ರೈಲ್ವೇ ಸೇತುವೆ ದಾಟಿ, ಮೆಟ್ರೊ ಕೆಲಸ ನಡೆಯುವ ಜಾಗದ ಹತ್ತಿರ ಗಾಡಿ ನಿಧಾನವಾಗಿಸಿದಾಗ ಮತ್ತೊಂದು ಸಿಡಿಲು ಹೊಡೀತು.

ಮತ್ತದೇ ಕೋರೈಸುವ ಕಂಬ.

ಗಾಡಿ ಪೂರ್ತಿ ನಿಧಾನವಾಯ್ತು. ರಸ್ತೆಗೆ ರಸ್ತೆಯೇ ಬಹುತೇಕ ನಿರ್ಜನ. ಮಧ್ಯರಾತ್ರಿ ಸಮೀಪಿಸುವ ಈ ಹೊತ್ತು ಕಾಣುತ್ತಿದ್ದ ಟ್ರಾಫಿಕ್‌ನ ಶೇ.೧೦ರಷ್ಟೂ ಕಾಣಲಿಲ್ಲ.

ಮನಸು ಯೋಚಿಸುತ್ತಿತ್ತು: ಕಂಡ, ಕಾಣದ, ಈಡೇರಿದ, ಈಡೇರದ ಎಲ್ಲವೂ ಛಕಛಕ ಕಣ್ಣೆದುರು ಹಾಯ್ದುಹೋದವು.

ಒಡಲಾಳದೊಳಗಿಂದ ಹಸಿವೆಯ ಜೊತೆಗೆ ಸಣ್ಣಗೇ ಖಿನ್ನತೆ.

ಮಳೆ ಕೊಂಚ ಜೋರಾಯಿತು. ಹೆಲ್ಮೆಟ್‌ನ ಗಾಜಿನ ತುಂಬ ಮಳೆಮಣಿಗಳು. ಗಾಜು ಹಿಂದಕ್ಕೆ ಸರಿಸಿ, ಅಪ್ಪಳಿಸುತ್ತಿದ್ದ ಹನಿಗಳಿಗೆ ಮುಖವೊಡ್ಡಿದಾಗ, ಎಂಥದೋ ಹಿತಕರ ಭಾವನೆ.

ಅದು ನನ್ನ ಬಾಲ್ಯ.

ಬೀಳುವ ಮಳೆಗೆ ಆಕಾಶಕ್ಕೆ ಮುಖವೊಡ್ಡಿ ಗಿರಗಿಟ್ಲೆ ತಿರುಗುತ್ತಿದ್ದ ಚಿಂತೆಯರಿಯದ ಬಾಲ್ಯದ ನೆನಪು.

ನವರಂಗ್‌ ದಾಟಿ, ವೆಸ್ಟ್‌ ಆಫ್‌ ಕಾರ್ಡ್‌ ರಸ್ತೆಯತ್ತ ತಿರುಗಿದಾಗ ರಸ್ತೆಗೆ ರಸ್ತೆಯೇ ನಿರ್ಜನ. ಖಾಲಿ ರಸ್ತೆಯಲ್ಲಿ ಸಣ್ಣ ಮಳೆ ಹನಿಗಳ ಸ್ವಚ್ಛಂದ ಆಟ.

ಒಳಗೂ ಹೊರಗೂ ಒಬ್ಬನೇ ಇರುವ ಇಂಥ ಘಳಿಗೆಗಳೇ ಈ ಅಸಹನೀಯ ರಾತ್ರಿಯನ್ನು ಆಹ್ಲಾದಕರವಾಗಿಸೋದು.

ಅಷ್ಟೊತ್ತಿಗೆ ಖಿನ್ನತೆ ನಿಧಾನವಾಗಿ ಏರುತ್ತಿತ್ತು. ಜೀವನ ನಶ್ವರ ಎಂಬ ಭಾವ ಬಲವಾಗತೊಡಗಿದಂತೆ ವಿಜಯನಗರದ ಖಾಲಿ ರಸ್ತೆಯಲ್ಲಿದ್ದೆ. ಅಲ್ಲಿಂದ ಹತ್ತು ನಿಮಿಷಕ್ಕೆ ಮನೆ ತಲುಪಿ, ಹುಷಾರಾಗಿ ಬಾಗಿಲು ತೆರೆದು, ಕತ್ತಲೆಯಲ್ಲಿ ಸದ್ದಾಗದಂತೆ ಒಂದಿಷ್ಟು ತಿಂದು, ಒಡಲ ಹಸಿವು ತೀರಿಸಿಕೊಂಡೆ.

ಮನದ ಖಾಲಿತನ ವಿಜೃಂಭಿಸತೊಡಗಿತ್ತು.

ರೂಮು ಹೊಕ್ಕು ಕಂಪ್ಯೂಟರ್‌ ಆನ್‌ ಮಾಡುವ ಹೊತ್ತಿಗೆ ಹೊರಗೆ ಮಳೆ ಬಲಿಯುತ್ತಿತ್ತು. ಗುಡುಗು-ಸಿಡಿಲುಗಳ ಅಬ್ಬರವೂ.

ಮನಸ್ಸು ಖಾಲಿ ಖಾಲಿ.

ಅರ್ನೆಸ್ಟ್‌ ಹೆಮಿಂಗ್ವೆನ ಓಲ್ಡ್‌ ಮ್ಯಾನ್‌ ಅಂಡ್‌ ದಿ ಸೀ (Old Man And The Sea) ಕಾದಂಬರಿಯ ಮುದುಕ ಮೀನುಗಾರನ ಭಾವನೆಗಳು ನೆನಪಾಗುತ್ತವೆ. ಬಲೆಗೆ ಬಿದ್ದ ದೊಡ್ಡ ಮೀನಿನೊಂದಿಗೆ, ಅದನ್ನು ನಿಯಂತ್ರಿಸಲು ಹೆಣಗಾಡುತ್ತ, ಸ್ವಗತದಂತೆ ಮೀನಿನೊಂದಿಗೆ ಮಾತಿಗಿಳಿಯುವ ಆ ಭಾವನೆಗಳು ನನ್ನನ್ನು ಸದಾ ಕಾಡುವ ನೆನಪುಗಳು. ಮನಸ್ಸು ಖಿನ್ನವಾದಾಗೆಲ್ಲ, how are you fish? ಎಂದು ಪ್ರಶ್ನಿಸಿಕೊಳ್ಳುತ್ತೇನೆ. ಮನಸ್ಸು ಕೂಡ ಆ ಮುದುಕನ ಬಲೆಗೆ ಬಿದ್ದ ಮೀನಿನಂತೆ. ವಾಪಸ್‌ ಉತ್ತರಿಸಲ್ಲ.

ನನ್ನ ಮನಸ್ಸೂ ಎಲ್ಲೋ ಕಳೆದುಹೋಗಿದೆ.

*****

ಸುಮ್ಮನೇ ಕವಿತೆ ಗೀಚುತ್ತೇನೆ. ಪದಗಳನ್ನು ಬದಲಿಸುತ್ತೇನೆ. ಪ್ಯಾರಾ ಹಿಂದೆಮುಂದೆ ಮಾಡುತ್ತೇನೆ.

ಊಹೂಂ, ಭಾವನೆಗಳು ಸಾಲುಗಳಾಗುವುದಿಲ್ಲ. ನೋವು ಶಬ್ದಗಳಾಗುವುದಿಲ್ಲ.

ಅರ್ಧ ಓದಿಟ್ಟ ಪುಸ್ತಕ ಎತ್ತಿಕೊಳ್ಳುತ್ತೇನೆ. ಮನಸ್ಸು ನಿಲ್ಲುವುದಿಲ್ಲ.

ಲೈಟಾರಿಸಿಕೊಂಡು, ಮಾನಿಟರ್‌ ಆಫ್‌ ಮಾಡಿ, ಗಂವೆನ್ನುವ ಕತ್ತಲೆಯಲ್ಲಿ ಫ್ಯಾನ್‌ ಶಬ್ದ ಕೇಳುತ್ತ ಸುಮ್ಮನೇ ಕೂಡುತ್ತೇನೆ.

ಊಹೂಂ, ಮನಸ್ಸು ಸುಮ್ಮನಾಗುವುದಿಲ್ಲ.

ವಿನಂತಿಸುತ್ತೇನೆ, ಆರ್ತನಾಗಿ ಬೇಡಿಕೊಳ್ಳುತ್ತೇನೆ. ಸಿಟ್ಟು ಮಾಡಿಕೊಳ್ಳುತ್ತೇನೆ.

ರಚ್ಚೆ ಹಿಡಿದ ಮಗುವಿನಂಥದು ಅದು.

ಕಾಡುವ ಆ ದಿವ್ಯ ಭಾವವನ್ನೇ ಧೇನಿಸುತ್ತ ಕೂತಾಗ ಮಾತ್ರ ಕೊಂಚ ಶಾಂತವಾಗುತ್ತದೆ.

ನಿದ್ದೆ ದೂರವಾದರೂ ಪರವಾಗಿಲ್ಲ, ನೆಮ್ಮದಿ ಹತ್ತಿರವಿರಲಿ ಎಂದು ಸುಮ್ಮನಾಗುತ್ತೇನೆ.

ಮಳೆ ಯಾವಾಗ ನಿಂತಿತ್ತೋ. ದೂರದಲ್ಲಿ ಗೂರ್ಖಾ ಸೀಟಿ ಊದುವ, ಕೋಲನ್ನು ಫುಟ್‌ಪಾತ್‌ನ ಕಲ್ಲಿಗೆ ಕುಟ್ಟುವ ಸದ್ದು.

ಅರೆ, ಈ ಗೂರ್ಖಾನ ಹೆಂಡತಿಯ ಭಾವನೆಗಳೇನಿರಬಹುದು ಎಂದು ಯೋಚಿಸತೊಡಗುತ್ತದೆ ಮನಸ್ಸು.

ಇದ್ದಕ್ಕಿದ್ದಂತೆ ಕಸಿವಿಸಿ. ಯಾರದೋ ತಟ್ಟೆಯ ಅನ್ನ ಕಸಿದ ಭಾವ.

ನಮ್ಮ ನೆಮ್ಮದಿಗಳ ಹಿಂದೆ ಯಾರದೋ ನಿದ್ದೆಗೆಟ್ಟ ರಾತ್ರಿ ಇರುತ್ತದೆ, ಶ್ರಮವಿರುತ್ತದೆ. ಇಲ್ಲಿ ಕತ್ತಲೆಯಲ್ಲಿ ಹಾಯಾಗಿ ಕೂತವನ ನೆಮ್ಮದಿಗೆ ಆ ಗೂರ್ಖಾನ ನಿದ್ದೆಗೇಡಿ ರಾತ್ರಿಯ ದುಡಿಮೆ ಕಾರಣ ಎಂಬ ಭಾವ ಹುಟ್ಟಿ ಮನಸ್ಸು ದ್ರವಿಸಿದಂತಾಯ್ತು. ಕಾಣದ ಗೂರ್ಖಾನ ಕುಟುಂಬದ ಚಿತ್ರಣ ಮನಸ್ಸನ್ನು ಆರ್ದ್ರ ಮಾಡಿಬಿಟ್ಟಿತು.

ಸದ್ದಿಲ್ಲದೇ ಕಂಪ್ಯೂಟರ್‌ ಆಫ್‌ ಮಾಡಿ, ರೂಮಿನ ಕದವಿಕ್ಕಿ, ಮಲಗಿದ್ದ ಮನೆಯ ಜೀವಿಗಳನ್ನು ಅಕ್ಕರೆಯಿಂದ ದಿಟ್ಟಿಸಿದೆ.

ನಾನೂ ಒಂಥರಾ ಗೂರ್ಖಾನೇ. ಮತ್ತಿದು ನನ್ನ ಕುಟುಂಬ ಎಂಬ ಭಾವ ಉಕ್ಕಿತು.

ಮನಸ್ಸನ್ನು ಕುಟ್ಟುತ್ತಿದ್ದ ಮೆದು ಭಾವವನ್ನೇ ಧೇನಿಸುತ್ತ ಹಾಸಿಗೆ ಮೇಲೆ ಉರುಳಿಕೊಂಡೆ. ಇವತ್ತು ನಿದ್ದೆ ಬರಬಹುದು.

ಬರದೇ ಇರಲೂಬಹುದು!

- ಚಾಮರಾಜ ಸವಡಿ