ಹುಟ್ಟಿದ ದಿನವೇ ಗೊತ್ತಿರದವನಿಗೆ ಅದೆಂಥ ಭವಿಷ್ಯವಿದ್ದೀತು?

27 Sept 2010

11 ಪ್ರತಿಕ್ರಿಯೆ
ಕೊಪ್ಪಳ ಜಿಲ್ಲೆ ಅಳವಂಡಿಯ ಮಣ್ಣಿನ ಛಾವಣಿ ಮನೆಯಲ್ಲಿ ಸಹಜ ಹೆರಿಗೆಯಲ್ಲಿ ಹುಟ್ಟಿದ ನಾಲ್ಕನೇ ಮಗು ನಾನು.

ಮೊದಲ ಮೂರು ಮಕ್ಕಳು ಗಂಡಾಗಿದ್ದರಿಂದ ನನ್ನ ಅಪ್ಪ-ಅವ್ವ ಹೆಣ್ಣುಮಗುವನ್ನು ನಿರೀಕ್ಷಿಸುತ್ತಿದ್ದರು. ಆದರೆ, ಹುಟ್ಟಿದ್ದು ಮತ್ತೊಂದು ಗಂಡು.

ಅಪ್ಪನಿಗೆ ನಿರಾಶೆಯಾಗಿರಬೇಕು. ಹೀಗಾಗಿ, ಅವರು ನನ್ನ ಜನ್ಮದಿನ, ಸಮಯ ಇತ್ಯಾದಿ ಕನಿಷ್ಟ ಮಾಹಿತಿಯನ್ನು ಬರೆದಿಡುವ ಗೋಜಿಗೇ ಹೋಗಲಿಲ್ಲ.

ಬಹುಶಃ ಅವ್ವನಿಗೂ ನಿರಾಶೆಯಾಗಿರಬೇಕು. ಆದರೆ, ಅದನ್ನು ತೋರಿಸಿಕೊಳ್ಳಲಾದೀತೆ? ಹಸಿ ಬಾಣಂತಿ ಬೇರೆ. ಮನೆ ಕೆಲಸ ನೋಡಿಕೊಳ್ಳಲು, ಬಾಣಂತನ ಮಾಡಲು ಮನೆಯಲ್ಲಿ ಇನ್ನೊಂದು ಹೆಣ್ಣುಜೀವವಿಲ್ಲ. ಹೇಗೋ ಒಂದು ವಾರ ಅವರಿವರು ಬಂದು ಕೆಲಸ ಮಾಡಿಕೊಟ್ಟು ಹೋಗುತ್ತಿದ್ದರು. ನಂತರ, ಅವ್ವನೇ ನನ್ನ ಮೂರು ಅಣ್ಣಂದಿರ ಜೊತೆಗೆ, ಅಪ್ಪನಿಗೂ ಅಡುಗೆ ಮಾಡಬೇಕಿತ್ತು.

ಹೀಗಾಗಿ, ಅವ್ವನಿಗೂ ನನ್ನ ಜನ್ಮದಿನ ಬರೆದಿಡಲು ಆಗಲಿಲ್ಲ. ಅಪ್ಪ ಬರೆದಿಟ್ಟಿರಬಹುದು ಎಂದು ಅವ್ವ ಸುಮ್ಮನಾಗಿರಬೇಕು.

ಕಾಲ ಹೀಗೇ ಉರುಳಿರಬೇಕು. ಓದುವುದರಲ್ಲಿ ಸಾಕಷ್ಟು ಆಸಕ್ತಿ ಹೊಂದಿರುವ ಕಾರಣಕ್ಕಾಗಿಯೋ, ಅಥವಾ ಅಪ್ಪ ಪ್ರಾಥಮಿಕ ಶಾಲಾ ಶಿಕ್ಷಕರಾಗಿದ್ದ ಕಾರಣಕ್ಕೋ, ನನ್ನ ಬಾಲ್ಯ ಮನೆಯಲ್ಲಿ ಅರ್ಧ, ಶಾಲೆಯಲ್ಲಿ ಅರ್ಧ ಎಂದು ಹಂಚಿಹೋಗಿತ್ತು. ಆಗ ನರ್ಸರಿಯಾಗಲಿ ಕೆಜಿಗಳಾಗಲಿ ಇರಲಿಲ್ಲ. ಬೆರಳೆಣಿಕೆಯಷ್ಟು ಕೆಜಿ ತೂಕವಿದ್ದ ನನ್ನನ್ನು ಐದನೇ ವಯಸ್ಸಿಗೇ ಮೊದಲನೇ ವರ್ಗದಲ್ಲಿ ಸೇರಿಸಿಬಿಟ್ಟರು ಅಪ್ಪ. ಆರು ವರ್ಷ ತುಂಬುವವರೆಗೆ ಮೊದಲನೇ ತರಗತಿಗೆ ಸೇರಿಸಲು ಬರುತ್ತಿರಲಿಲ್ಲವಾದ್ದರಿಂದ, ನನ್ನ ಜನ್ಮದಿನಾಂಕವನ್ನು ಆರು ವರ್ಷಕ್ಕೆ ಹೊಂದಿಕೆಯಾಗುವಂತೆ ಬದಲಿಸಿಬಿಟ್ಟರು.

ಹೀಗಾಗಿ, ನನ್ನ ಖಚಿತ ಜನ್ಮದಿನಾಂಕ ನನಗೆ ಗೊತ್ತೇ ಇಲ್ಲ.

ಇದೆಲ್ಲ ಆಗಿ ನಲವತ್ತು ವರ್ಷಗಳೇ ಆಗಿರುವುದರಿಂದ ಮನೆಯವರೂ ಮರೆತುಬಿಟ್ಟಿದ್ದಾರೆ. ಶಾಲೆಯ ದಾಖಲೆಗಳಲ್ಲಿದ್ದ ಜನ್ಮದಿನಾಂಕವೇ ಖಾಯಂ ಆಗಿ ಉಳಿದುಬಿಟ್ಟಿದೆ.

ಇದೆಲ್ಲ ನೆನಪಾಗಿದ್ದು ಮೊನ್ನೆ ಸೆಪ್ಟೆಂಬರ್‌ ೨೫ಕ್ಕೆ.

ಎಂದಿನಂತೆ ಅವತ್ತೂ ಕಂಪ್ಯೂಟರ್‌ ಮುಂದೆ ಕೂತೇ ಮಧ್ಯರಾತ್ರಿ ಕಳೆದಿದ್ದೆ. ಸಾಮಾಜಿಕ ತಾಣಗಳಲ್ಲಿ ನನ್ನ ಜನ್ಮದಿನಾಂಕ ಪತ್ತೆ ಹಚ್ಚಿದ್ದ ಅಂತರ್ಜಾಲ ಮಿತ್ರರು ಹುಟ್ಟುಹಬ್ಬದ ಶುಭಾಶಯಗಳನ್ನು ಕಳಿಸತೊಡಗಿದ್ದರು. ಅವನ್ನು ನೋಡಿದ ನಂತರವೇ, ನನ್ನ ಜನ್ಮದಿನಾಂಕದ ಎಡವಟ್ಟು ನನಗೆ ಮತ್ತೆ ನೆನಪಾಗಿದ್ದು.

ಮೊದಲಿನಿಂದಲೂ ಹುಟ್ಟುಹಬ್ಬವನ್ನು ಆಚರಿಸದ ಪುಣ್ಯಾತ್ಮ ನಾನು. ನಮ್ಮ ಹುಟ್ಟುಹಬ್ಬವನ್ನು ಇತರರು ಆಚರಿಸಿದರೇ ಚೆನ್ನ ಎಂಬ ಅಭಿಪ್ರಾಯ ಬೇರೆ. ಹೀಗಾಗಿ, ನನ್ನ ಜನ್ಮದಿನಾಂಕ, ಅಂದರೆ, ಸರಕಾರಿ ದಾಖಲೆಗಳಲ್ಲಿರುವ ದಿನಾಂಕ ನೆನಪಾಗುವುದೇ ಅಪರೂಪ. ಹೀಗೇ, ಯಾರಾದರೂ ಶುಭಾಶಯ ಕೋರಿದರೆ, ಅರೆ ಹೌದಲ್ಲ, ಆಗಲೇ ಮತ್ತೊಂದು ವರ್ಷ ಉರುಳಿತಲ್ಲ ಎಂದು ಅಚ್ಚರಿಯಾಗುತ್ತದೆ.

ಜೊತೆಗೆ, ನಮ್ಮ ಅಸಲಿ ಜನ್ಮದಿನಾಂಕ ಯಾವುದಿರಬಹುದು ಎಂಬ ಪ್ರಾಥಮಿಕ ಜಿಜ್ಞಾಸೆಯೂ ಕಾಡುತ್ತದೆ.

ಬಸವ ಜಯಂತಿ ಮುಗಿದು ಇಷ್ಟು ದಿನಗಳ ನಂತರ, ಯಾವುದೋ ಹುಣ್ಣಿಮೆ ಕಳೆದು ಇಷ್ಟು ದಿನಗಳ ನಂತರ ನೀನು ಹುಟ್ಟಿದ್ದು ಎಂದು ಅವ್ವ ಆಗಾಗ ಹೇಳುತ್ತಾಳೆ. ನನಗೆ ಅದೆಲ್ಲ ತಲೆಗೆ ಹೋಗುವುದಿಲ್ಲ. ’ಸರಿ, ಯಾವುದೋ ಒಂದಿನ ಹುಟ್ಟಿದ್ದೇನೆ. ಏನೀಗ?’ ಎಂದು ನಾನೂ ಸುಮ್ಮನಾಗುತ್ತೇನೆ. ಹುಟ್ಟುಹಬ್ಬದ ನೆಪದಲ್ಲಿ ಶುಭಾಶಯ ಕೋರಿದವರಿಗೆ ಒಣ ಮುಗುಳ್ನಗೆ ಕೊಟ್ಟು ಅದನ್ನು ಮರೆತುಬಿಡುತ್ತೇನೆ. ಎಷ್ಟೋ ಸಾರಿ ಹುಟ್ಟುಹಬ್ಬದ ದಿನವೇ ಸ್ನಾನ ಇತ್ಯಾದಿ ಪ್ರಾಥಮಿಕ ಕರ್ಮಗಳನ್ನೂ ಮಾಡದೇ ಕೆಲಸದಲ್ಲಿ ತಲ್ಲೀನನಾದ ಭೂಪ ನಾನು.

ಹೀಗಾಗಿ, ಜನ್ಮದಿನ ನನ್ನ ಅಂತರಂಗ ತಾಕದ ದಿನವಾಗಿ ಕಳೆದುಹೋಗುತ್ತದೆ.

ನನ್ನ ಜನ್ಮದಿನ ಹೋಗಲಿ, ಹತ್ತಿರದವರಿಗೆ ಸಂಬಂಧಿಸಿದ ವಿಶೇಷ ದಿನಗಳ ನೆನಪೂ ನನಗಿದ್ದುದು ಅಪರೂಪ. ಒಂದು ಸಾರಿಯಂತೂ ಹೆಂಡತಿಯ ಜನ್ಮದಿನವನ್ನೇ ಮರೆತು ಇಡೀ ದಿನ ಯಾವ್ಯಾವುದೋ ಕೆಲಸಗಳಲ್ಲಿ ಮಗ್ನನಾಗಿಬಿಟ್ಟಿದ್ದೆ. ಅವತ್ತು ಮನೆ ಸೇರಿದ್ದೂ ತಡವಾಗಿ. ಮಕ್ಕಳು ಎದ್ದಾರೆಂದು ಕಳ್ಳನಂತೆ ಬಟ್ಟೆ ಬದಲಿಸಿ, ಕೈಕಾಲು ಮುಖ ತೊಳೆದು, ಅಡುಗೆ ಮನೆಗೆ ಬೆಕ್ಕಿನಂತೆ ಹೊಕ್ಕು, ನೈಟ್‌ ಬಲ್ಬಿನ ಮಂಕು ಬೆಳಕಲ್ಲಿ ತಟ್ಟೆಗೆ ಬಡಿಸಿಕೊಂಡು ತಿನ್ನುತ್ತಿದ್ದವನನ್ನು ದುರುಗುಟ್ಟಿ ನೋಡಿದ್ದಳು ಮಡದಿ. ಯಾಕೆ ಹಾಗೆ ನೋಡ್ತಿದ್ದೀ ಎಂಬ ಮೂಕಪ್ರಶ್ನೆ ನನ್ನದು. ತಿನ್ನುತ್ತಿದ್ದ ಐಟಂಗಳಲ್ಲಿ ಸಿಹಿ ತಿನಿಸು ಇದ್ದುದನ್ನೂ ಗಮನಿಸದೇ ತಿಂದ ನನ್ನನ್ನು ಆಕೆ ಇನ್ಯಾವ ರೀತಿ ನೋಡಲು ಸಾಧ್ಯ? ಕೊನೆಗೂ, ಅವತ್ತಿನ ಆಕೆಯ ಮುನಿಸಿನ ಹಿನ್ನೆಲೆ ಅರ್ಥವಾಗಿ, ಆಕೆಗೆ ಬರಿಗೈಯ ಜನ್ಮದಿನ ಶುಭಾಶಯ ಕೋರುವಾಗ ರಾತ್ರಿ ೨ ಗಂಟೆಯಾಗಿತ್ತು. ಆ ಅಪರಾತ್ರಿಯಲ್ಲಿ ಗಿಫ್ಟ್‌ ಎಲ್ಲಿಂದ ತರಲಿ? ಮದುವೆಯಾಗಿ ಎಂಟು ವರ್ಷಗಳು ದಾಟಿರುವಾಗ, ಮುನಿಸಿಕೊಂಡ ಮಡದಿಗೆ ದಾಂಪತ್ಯದ ಗಿಫ್ಟೂ ಅಷ್ಟಾಗಿ ರುಚಿಸದು. ಛೇ, ಎಂಥ ಕೆಲಸವಾಯ್ತು ಎಂದು ಹಳಹಳಿಸುತ್ತ ಕೂತವನಿಗೆ ನಿದ್ದೆ ಬಂದಿದ್ದು ಬೆಳಗಿನ ಜಾವಕ್ಕೇ.

ನನ್ನ ಈ ಪರಿ ಅಮೋಘ ನೆನಪಿನ ಶಕ್ತಿ ಅನೇಕ ಸಂದರ್ಭಗಳಲ್ಲಿ ನನ್ನನ್ನು ಪೇಚಿಗೆ ಸಿಕ್ಕಿಸಿದೆ. ಎಷ್ಟೋ ಸಾರಿ ನನ್ನ ಅಣ್ಣಂದಿರ, ತಂಗಿಯ, ಅವರೆಲ್ಲರ ಮಕ್ಕಳ ಜನ್ಮದಿನಗಳು ಸಹ ನನ್ನನ್ನು ಇಕ್ಕಟ್ಟಿಗೆ ಸಿಕ್ಕಿಸಿವೆ. ‘ಮಾಮಾ/ಕಾಕಾ, ಇವತ್ತು ನನ್ನ ಬರ್ತ್‌‌ಡೇ. ವಿಶ್‌ ಮಾಡು’ ಎಂದು ಅವರೇ ಫೋನ್‌ ಮಾಡಿ, ನನ್ನ ಮರ್ಯಾದೆಯನ್ನು ಹರಾಜು ಹಾಕಿದ್ದಾರೆ.

ಹೀಗಿದ್ದರೂ, ನನ್ನ ಮಕ್ಕಳ ಜನ್ಮದಿನ ಮಾತ್ರ ಚೆನ್ನಾಗಿ ನೆನಪಿನಲ್ಲಿರುತ್ತದೆ. ಏಕೆಂದರೆ, ಮಕ್ಕಳ ಜನ್ಮದಿನ ಬರುವುದಕ್ಕೆ ಹದಿನೈದು ದಿನದಿಂದಲೇ ’ಇಂಥ ದಿನ ಮಗಳ ಬರ್ತ್‌‌ಡೇ’ ಎಂದು ಮಡದಿ ಇಂಜಕ್ಷನ್‌ನಂತೆ ನನ್ನ ಮೆದುಳಿಗೆ ಚುಚ್ಚುತ್ತಿರುತ್ತಾಳೆ. ನೆವ ಹೇಳುವುದರಲ್ಲಿ ವರ್ಲ್ಡ್‌ ಫೇಮಸ್‌ ಆಗಿರುವ ನನ್ನನ್ನು ಮುಲಾಜಿಲ್ಲದೇ ಬಟ್ಟೆ ಅಂಗಡಿಗೆ ಕರೆದುಕೊಂಡು ಹೋಗಿ, ಮಕ್ಕಳಿಗೆ ಬಟ್ಟೆ ಆರಿಸುತ್ತಾಳೆ. ಅವರು ಬೇಡುವ ವಸ್ತುಗಳನ್ನು ಖರೀದಿಸಲು ಕಾಸುಸನ್ನದ್ಧನಾಗಿರುವಂತೆ ನನಗೆ ಪದೆ ಪದೆ ಆದೇಶ ಮಾಡುತ್ತಿರುತ್ತಾಳೆ.

ಹೀಗಾಗಿ, ಮಕ್ಕಳ ಜನ್ಮದಿನಾಂಕಗಳು ನೆನಪಿನಲ್ಲಿರುತ್ತವೆ. ಇಲ್ಲದಿದ್ದರೆ, ನನ್ನ ಮಕ್ಕಳು ಕೂಡ, ’ಅಪ್ಪಾ, ಇವತ್ತು ನನ್ನ ಬರ್ತ್‌‌ಡೇ, ವಿಶ್‌ ಮಾಡು’ ಎಂದು ನೆನಪಿಸುವ ಸಂದರ್ಭ ಬರುತ್ತಿತ್ತೇನೋ.

ಸದ್ಯ, ನನ್ನ ಜನ್ಮದಿನಾಂಕವನ್ನು ನೆನಪಿನಲ್ಲಿಟ್ಟುಕೊಳ್ಳುವ ಅನಿವಾರ್ಯತೆ ಇಲ್ಲ. ಅದು ನನ್ನ ಖಾಸಾ ದಿನವಾಗಿದ್ದರಿಂದ, ಅದನ್ನು ಮರೆಯುವ, ಆಚರಿಸದಿರುವ ವಿಶಿಷ್ಟ ಹಕ್ಕು ನನಗಿದೆ. ಅವತ್ತು ಸ್ನಾನ ಮಾಡಿದರೂ ನಡೆಯುತ್ತದೆ, ಬಿಟ್ಟರೂ ಓಕೆ. ಹೊಸ ಬಟ್ಟೆ ತರಲೇಬೇಕೆಂಬ ಕಟ್ಟುಪಾಡೂ ಇಲ್ಲ. ಹೆಂಡತಿ ಮನೆಯಲ್ಲೇ ಸಿಹಿ ಮಾಡುವುದರಿಂದ, ಅದನ್ನೂ ಕೊಂಡು ತರುವ ಕಷ್ಟದಿಂದ ಮುಕ್ತನಾಗಿದ್ದೇನೆ. ಆದರೆ, ಊಟ ಮಾಡುವಾಗ ಮಾತ್ರ, ಸಿಹಿ ತಿಂಡಿ ನೋಡಿ, ‘ಏನೇ ವಿಶೇಷ?’ ಎಂದು ತಪ್ಪಿ ಪ್ರಶ್ನೆ ಮಾಡಿ, ಫಜೀತಿಗೆ ಸಿಲುಕುವುದು ಮಾತ್ರ ಆಗಾಗ ನಡೆಯುತ್ತಲೇ ಇರುತ್ತದೆ.

ಜನ್ಮದಿನಾಂಕ ಗೊತ್ತಿಲ್ಲದಿರುವುದರ ಲಾಭಗಳೂ ಮಜವಾಗಿವೆ. ಆಗೀಗ ಕಟ್ಟಿಗೆ ಬಿದ್ದು, ದೇವಸ್ಥಾನಗಳಿಗೆ ಹೋದಾಗ, ಜನ್ಮನಕ್ಷತ್ರ ಕೇಳಿದ ಅರ್ಚಕರಿಗೆ ನನ್ನ ಹೆಸರಷ್ಟೇ ಹೇಳಿ ದೇವರತ್ತ ಮುಖ ತಿರುಗಿಸುತ್ತೇನೆ. ದಿನಾಂಕವೇ ಗೊತ್ತಿರದವನಿಗೆ ನಕ್ಷತ್ರಗಳ ಗೊಡವೆ ಏಕೆ?

ಅಂಥ ಮತ್ತೊಂದು ಜನ್ಮದಿನ ಸದ್ದಿಲ್ಲದೇ ಬಂದು ಹೋಗಿದೆ. ವಯಸ್ಸಿನ ಲೆಕ್ಕಕ್ಕೆ ಮತ್ತೊಂದು ವರ್ಷ ಸೇರ್ಪಡೆಯಾಗಿದೆ. ಮನೆಯವರು ತಾವು ತಾವೇ ಮಾಡಿಕೊಂಡ ಸಡಗರ, ಊಟ, ಶುಭಾಶಯಗಳೆಲ್ಲ ರಾತ್ರಿಯಾದಂತೆ ಕರಗಿ, ಗಡಿಯಾರದ ಟಿಕ್‌ಟಿಕ್‌ ಸದ್ದಿನಲ್ಲಿ ನಿದ್ದೆಗೆ ಜಾರುತ್ತವೆ. ಎಲ್ಲರೂ ಮಲಗಿರುವುದು ಖಚಿತವಾದಾಗ ಒಬ್ಬನೇ ಎದ್ದು ಕಂಪ್ಯೂಟರ್‌ ಮುಂದೆ ಕೂಡುತ್ತೇನೆ. ಯಾವ್ಯಾವುದೋ ಪುಸ್ತಕಗಳನ್ನು ತೆರೆಯುತ್ತೇನೆ. ಓದುತ್ತ, ಗುರುತು ಹಾಕಿಕೊಳ್ಳುತ್ತ, ತೀವ್ರವಾಗಿ ಕಾಡಿದ್ದನ್ನು ಬರೆಯುತ್ತ ಮುಳುಗಿಹೋಗುತ್ತೇನೆ.

ನನಗೆ ಜನ್ನದಿನಾಂಕವಿಲ್ಲ, ಜನ್ಮನಾಮವಿಲ್ಲ, ಹುಟ್ಟಿದ ಸಮಯ ಗೊತ್ತಿಲ್ಲ. ಹೀಗಾಗಿ, ಜನ್ಮನಕ್ಷತ್ರವಿಲ್ಲ, ರಾಶಿ ಗೊತ್ತಿಲ್ಲ. ಇವ್ಯಾವೂ ಇರದ್ದರಿಂದ ನನಗೆ ಭವಿಷ್ಯವೇ ಇಲ್ಲ.

ಏನಿದ್ದರೂ ಕೇವಲ ಭೂತ ಕಾಲ ಹಾಗೂ ವರ್ತಮಾನ ಮಾತ್ರ. ಬದುಕಲು ಅಷ್ಟು ಸಾಕು ಎಂದುಕೊಂಡು ಸುಮ್ಮನಾಗುತ್ತೇನೆ.

- ಚಾಮರಾಜ ಸವಡಿ

ಮರೆತುಹೋದವರ ನೆನಪಿನಲ್ಲಿ

16 Sept 2010

11 ಪ್ರತಿಕ್ರಿಯೆ
ಸುಮಾರು ೧೯೦ ವರ್ಷಗಳ ಹಿಂದಿನ ಸಮಯ.

ಉತ್ತರ ಕರ್ನಾಟಕದ ಬೆಳಗಾವಿ ಜಿಲ್ಲೆಯ ಬೈಲಹೊಂಗಲದ ಒಂದು ದೊಡ್ಡ ಬಂಗಲೆ ಅದು. ಹೆಣ್ಣುಮಗಳೊಬ್ಬಳು ಕೂತಿದ್ದಾಳೆ. ಜಂಗಮ ವೇಷದಲ್ಲಿದ್ದ ವ್ಯಕ್ತಿಯೊಬ್ಬ ನಿಂತಿದ್ದಾನೆ. ಕೂತ ಹೆಣ್ಣುಮಗಳನ್ನು ಉದ್ದೇಶಿಸಿ-


‘ತಾಯೆ, ನಿಮ್ಮ ಪಾದದಾಣೆ. ಪ್ರಮಾಣ ಮಾಡುತ್ತೇನೆ ಕೇಳಿ. ಈ ಕೆಂಪುಮೂತಿ ಆಂಗ್ಲರು ನಿಮ್ಮಿಂದ ಮೋಸದಿಂದ ಕಿತ್ತುಕೊಂಡಿರುವ ಕಿತ್ತೂರು ಸಂಸ್ಥಾನವನ್ನು ಮತ್ತೆ ಗೆದ್ದು ತಂದು ನಿಮ್ಮ ಪಾದಕ್ಕೆ ಅರ್ಪಿಸುತ್ತೇನೆ. ಹಾಗೊಂದು ವೇಳೆ ಅದು ಆಗದೇ ಹೋದರೆ, ನನ್ನ ಸೋತ ಮುಖವನ್ನು ಮತ್ತೆಂದೂ ನಿಮಗೆ ತೋರಿಸುವುದಿಲ್ಲ. ಏಕೆಂದರೆ, ನಾನು ಆಗ ರಣರಂಗದಲ್ಲೇ ಜೀವ ತೆತ್ತಿರುತ್ತೇನೆ’-


ಬೈಲಹೊಂಗಲದಲ್ಲಿ ಗೃಹಬಂಧನದಲ್ಲಿದ್ದ ಕಿತ್ತೂರು ರಾಣಿ ಚೆನ್ನಮ್ಮನ ಎದುರು ನಿಂತು ಮಾಡು ಇಲ್ಲವೇ ಮಡಿ ಎಂಬಂತಹ ಪ್ರಮಾಣ ಮಾಡಿದ ಆ ವ್ಯಕ್ತಿ ಅಪ್ಪಟ ಹಾಗೂ ಅಪ್ರತಿಮ ಸ್ವಾತಂತ್ರ್ಯಪ್ರೇಮಿ. ಕ್ರಾಂತಿಯ ಕಿಡಿ. ಸ್ವಾತಂತ್ರ್ಯದ ಮಿಂಚು. ದೇಶಾಭಿಮಾನದ ಪ್ರತೀಕ. 
ಆತನ ಹೆಸರು ವೀರ ಸಂಗೊಳ್ಳಿ ರಾಯಣ್ಣ.
 

ಇಂತಹ ಒಬ್ಬ ಮಹಾ ಸ್ವಾಮಿನಿಷ್ಠ, ಮಹಾ ದೇಶಭಕ್ತ, ಅಪ್ರತಿಮ ವೀರ, ಮುತ್ಸದ್ದಿ ಹೋರಾಟಗಾರನೊಬ್ಬ ಸುಮಾರು ಇನ್ನೂರು ವರ್ಷಗಳ ಹಿಂದೆ ನಮ್ಮ ಈ ಕನ್ನಡ ನೆಲದಲ್ಲಿ ಹುಟ್ಟಿದ್ದ. ಬದುಕಿ ಬಾಳಿದ್ದ. ಬ್ರಿಟಿಷರ ದುರಾಡಳಿತದ ವಿರುದ್ಧ ಹೋರಾಡಿದ್ದ. ಹಾಗೆ ಹೋರಾಡುತ್ತಲೇ ದೇಶಕ್ಕಾಗಿ, ತಾನು ನೆಚ್ಚಿಕೊಂಡ ಸ್ವಾತಂತ್ರ್ಯದ ತತ್ವಗಳಿಗಾಗಿ, ಸಮಾನತೆಗಾಗಿ ತನ್ನ ಪ್ರಾಣವನ್ನೇ ತೆತ್ತ. ಹುತಾತ್ಮನಾದ. ಈ ಸಂಗತಿಯೇ ಮೈ ನವಿರೇಳಿಸುವಂಥದು.
 

ಬ್ರಿಟಿಷರ ಕೈವಶವಾಗಿದ್ದ ಕಿತ್ತೂರು ಪ್ರಾಂತ್ಯವನ್ನು ಮತ್ತೆ ಸ್ವತಂತ್ರಗೊಳಿಸುವುದರಿಂದ ವೈಯಕ್ತಿಕವಾಗಿ ರಾಯಣ್ಣನಿಗೆ ಯಾವುದೇ ಲಾಭವಿರಲಿಲ್ಲ. ರಾಜನಾಗಿ ಸಿಂಹಾಸನವೇರುವ, ಮಂತ್ರಿಯಾಗಿ ಅಧಿಕಾರ ನಡೆಸುವ ಆಸೆಯಾಗಲಿ, ಅವಕಾಶವಾಗಲಿ ಅವತ್ತಿನ ಪರಿಸ್ಥಿತಿಯಲ್ಲಿ ಕಿಂಚಿತ್ತೂ ಇರಲಿಲ್ಲ. ರಾಣಿ ಚೆನ್ನಮ್ಮನ ಬಂಧನವಾದಾಗ, ಅವಳ ಜೊತೆಯಲ್ಲಿ ಬಂಧಿಸಲ್ಪಟ್ಟ ಹಲವಾರು ಸಾಮಾನ್ಯ ಸೈನಿಕರ ಪೈಕಿ ರಾಯಣ್ಣನೂ ಒಬ್ಬನಾಗಿದ್ದ. ರಾಣಿಯನ್ನು ಹೊರತುಪಡಿಸಿ, ಕ್ಷಮಾದಾನ ಪಡೆದು ಬಿಡುಗಡೆ ಹೊಂದಿದ ಗುಂಪಿನಲ್ಲಿ ಆತನೂ ಸೇರಿದ್ದ.
 

ಆದರೆ, ಬಂಧಮುಕ್ತನಾದ ಮೇಲೆ ಎಲ್ಲರಂತೆಯೇ ಆತ ಊರಿಗೆ ಹೋಗಿ ತನ್ನ ಮಾಮೂಲಿ ವೃತ್ತಿಯಲ್ಲಿ ಮುಂದುವರಿಯಲಿಲ್ಲ. ಬದಲಾಗಿ, ತನ್ನ ಮುದ್ದಿನ ಮಡದಿ ಹಾಗೂ ಮಗುವನ್ನು ತೊರೆದ. ಜನ್ಮಕೊಟ್ಟ ತಂದೆತಾಯಿಗಳಿಂದ ದೂರನಾದ. ನಿದ್ರೆ, ಆಹಾರವನ್ನು ಲೆಕ್ಕಿಸದೇ ಕಿತ್ತೂರು ಸಂಸ್ಥಾನವನ್ನು ಸ್ವತಂತ್ರಗೊಳಿಸುವುದಕ್ಕೆ ತನ್ನ ಜೀವನವನ್ನು ಮುಡಿಪಾಗಿಟ್ಟ. ಹಗಲು-ರಾತ್ರಿ ಅಲೆದ. ಕಾಡುಮೇಡು ಸುತ್ತಿ, ಸಾವಿರಾರು ಸಮಾನ ಮನಸ್ಕರ ಪಡೆ ಕಟ್ಟಿದ.
ಕುಟಿಲ ನೀತಿ, ರಾಜಕೀಯ ಚತುರತೆ, ಯುದ್ಧಗಾರಿಕೆ ತಂತ್ರ, ಹಣಬಲ, ಜನಬಲದಿಂದ, ಸರ್ವರೀತಿಯಲ್ಲೂ ಸನ್ನದ್ಧವಾಗಿದ್ದ ಆಂಗ್ಲರ ಸೈನ್ಯವನ್ನು ಆತ ತತ್ತರಿಸುವಂತೆ ಮಾಡಿದ.


ಎಂತೆಂಥ ರಾಜ-ಮಹಾರಾಜರುಗಳನ್ನೆಲ್ಲ ಹುರಿದು ಮುಕ್ಕಿದ್ದ, ನೀರು ಕುಡಿಸಿದ್ದ, ಜಯ ತಮ್ಮದೇ ಎಂಬ ವಾತಾವರಣ ನಿರ್ಮಿಸಿದ್ದ ಬ್ರಿಟಿಷರ ವಿರುದ್ಧ ನಿರ್ಣಾಯಕ ಹೋರಾಟ ನಡೆಸಿದ. ಅದು ಯಶಸ್ವಿಯಾಗಿ ನಡೆಯತ್ತಿದ್ದಾಗ, ಹಿತವಂಚಕರ ಮಸಲತ್ತಿನಿಂದಾಗಿ ೧೮೩೦ರ ಏಪ್ರಿಲ್ ೮ನೇ ತಾರೀಖಿನಂದು ಬೆಳಿಗ್ಗೆ ೧೦ ಗಂಟೆಗೆ ರಾಯಣ್ಣ ಸಿಕ್ಕಿಬಿದ್ದ.
 

ಬಂಧನದಲ್ಲಿದ್ದರೂ ಆತನಲ್ಲಿ ಅಳುಕಿರಲಿಲ್ಲ. ಗುರಿ ಹಾಗೂ ದಾರಿಗಳೆರಡೂ ನಿಚ್ಚಳವಾಗಿದ್ದಾಗ ಯಾವ ಭಯವೂ ಇರುವುದಿಲ್ಲ. ಹೀಗಾಗಿ, ಕಂಪನಿ ಸರಕಾರ ನಡೆಸಿದ ವಿಚಾರಣೆಯನ್ನು ಧೈರ್ಯದಿಂದಲೇ ಎದುರಿಸಿದ. ಏಕಪಕ್ಷೀಯವಾಗಿ ನಡೆದ ವಿಚಾರಣೆಯಲ್ಲಿ ಕೂಡ ಯಾವ ಅಂಜಿಕೆ-ಅಳುಕು ಇಲ್ಲದೇ ತಾನು ನಡೆಸಿದ ಹೋರಾಟವನ್ನೆಲ್ಲ ಹೆಮ್ಮೆಯಿಂದಲೇ ಒಪ್ಪಿಕೊಂಡ. ‘ನಾನು ಯಾವ ತಪ್ಪನ್ನೂ ಮಾಡಿಲ್ಲ. ತಾಯ್ನಾಡಿನ ಸ್ವಾತಂತ್ರ್ಯಕ್ಕಾಗಿ ನಡೆಸಿದ ನನ್ನೆಲ್ಲ ಹೋರಾಟಗಳು ನ್ಯಾಯಸಮ್ಮತವಾಗಿಯೇ ಇವೆ’ ಎಂದು ವಾದಿಸಿದ.
 

ಆದರೆ, ದೇಶಪ್ರೇಮವನ್ನು ದೇಶದ್ರೋಹವೆಂದು ಭಾವಿಸಿದ್ದ ಆಂಗ್ಲರು ರಾಯಣ್ಣನ ವಾದಕ್ಕೆ ಮನ್ನಣೆ ಕೊಡಲಿಲ್ಲ. ಅವರ ನ್ಯಾಯದ ತಕ್ಕಡಿ ಯಾವಾಗಲೂ ಅವರತ್ತಲೇ ವಾಲುತ್ತಿತ್ತು. ವಿಚಾರಣೆಯ ನೆಪದಲ್ಲಿ ಕೆಲ ದಿನಗಳನ್ನು ಕಳೆದ ಬ್ರಿಟಿಷರು, ಕೊನೆಗೊಂದು ದಿನ ರಾಯಣ್ಣನಿಗೆ ವಿಧಿಸಿದ್ದು ಗಲ್ಲು ಶಿಕ್ಷೆ.
 

ಆಗಲೂ ರಾಯಣ್ಣ ಧೃತಿಗೆಡಲಿಲ್ಲ. ಅಂಜಲಿಲ್ಲ. ಅಳಲಿಲ್ಲ. ಎದೆ ಸೆಟೆದು ನಿಂತ. ಕೊನೆಯವರೆಗೂ ತಾನು ಮಾಡಿದ್ದು ತಪ್ಪೆಂದು ಒಪ್ಪಿಕೊಳ್ಳಲಿಲ್ಲ.
 

ರಾಯಣ್ಣನ ಆ ವೀರತನ ಬ್ರಿಟಿಷರನ್ನು ಕಂಗೆಡಿಸಿತ್ತು. ಹೀಗೇ ಬಿಟ್ಟರೆ, ಇನ್ನಷ್ಟು ಜನ ರಾಯಣ್ಣರು ಹುಟ್ಟಿಕೊಳ್ಳುತ್ತಾರೆ ಎಂಬ ಅಳುಕಿತ್ತು. ರಾಯಣ್ಣನಂಥ ಹೋರಾಟಗಾರರು ಮೂಡಿಸಿದ ದೇಶಪ್ರೇಮದ ವಾತಾವರಣವನ್ನು ಇಲ್ಲವಾಗಿಸುವ ತುರ್ತಿತ್ತು. ಸಮರ್ಥ ನಾಯಕತ್ವವಿಲ್ಲದ ಲಕ್ಷಾಂತರ ಜನರಿಗೆ ರಾಯಣ್ಣ ನೀಡಿದ ಪ್ರೇರಣೆಯನ್ನು ಅಳಿಸಿಹಾಕಬೇಕಿತ್ತು.
 

ಹೀಗಾಗಿ, ಗಲ್ಲು ಶಿಕ್ಷೆ ಕಾಯಮ್ಮಾಯಿತು. ಕೊನೆಯದಾಗಿ ನಿನ್ನ ಆಸೆ ಏನೆಂದು ರಾಯಣ್ಣನನ್ನು ಕೇಳಿದಾಗ, ಆತ ನುಡಿದ ಮಾತುಗಳು ರೋಮಾಂಚನಗೊಳಿಸುವಂಥವು. ‘ನಂದಗಡದ ಸುತ್ತಮುತ್ತಲಿನ ಪ್ರದೇಶದ ಜನರು ನನಗೆ ಬಹಳ ಸಹಾಯ ಮಾಡಿದ್ದಾರೆ. ಆದ್ದರಿಂದ, ಆ ಊರಿನ ಸರಹದ್ದಿನಲ್ಲಿ, ಆ ಜನರ ಮುಂದೆಯೇ ನನ್ನನ್ನು ಗಲ್ಲಿಗೇರಿಸಿ’ ಎಂದು ಕೇಳಿಕೊಂಡ. 
 

ಆ ಪ್ರಕಾರ, ರಾಯಣ್ಣನನ್ನು ೧೮೩೧ ಜನವರಿ ೨೬ರಂದು ಬೆಳಗಾವಿ ಜಿಲ್ಲೆ ಖಾನಾಪುರ ತಾಲ್ಲೂಕಿನ ನಂದಗಡದಲ್ಲಿ ಗಲ್ಲಿಗೇರಿಸಲಾಯ್ತು.
 

ಆತನ ಇಚ್ಛೆಯ ಪ್ರಕಾರ, ರಾಯಣ್ಣನ ಮಿತ್ರರು ಆತನ ಸಮಾಧಿಯ ಮೇಲೆ ಆಲದ ಗಿಡವೊಂದನ್ನು ನೆಟ್ಟರು. ರಾಯಣ್ಣನ ಕೀರ್ತಿಯಂತೆ ಆ ಆಲದ ಗಿಡ ಹೆಮ್ಮರವಾಗಿ ಬೆಳೆಯಿತು. ಇತಿಹಾಸದ ಪುಟದಲ್ಲಿ ಶಾಶ್ವತ ಸ್ಥಾನ ಗಿಟ್ಟಿಸಿತು. ಜನರ ಪಾಲಿಗೆ ಧಾರ್ಮಿಕ ಕ್ಷೇತ್ರವಾಯ್ತು.
 

ಇಂದಿಗೂ ಕೂಡಾ, ಮಕ್ಕಳಾಗದ ಅವೆಷ್ಟೋ ದಂಪತಿಗಳು ನಂದಗಡಕ್ಕೆ ಹೋಗುತ್ತಾರೆ. ರಾಯಣ್ಣನ ಸಮಾಧಿಯ ಮೇಲೆ ಬೆಳೆದು ನಿಂತಿರುವ ಆಲದ ಮರಕ್ಕೆ ತೊಟ್ಟಿಲು ಕಟ್ಟಿ, ’ರಾಯಣ್ಣ, ನಮಗೆ ನಿನ್ನಂತಹ ಒಬ್ಬ ವೀರ ಮಗನನ್ನು ಕರುಣಿಸು’ ಎಂದು ಹರಕೆ ಹೊತ್ತುಕೊಳ್ಳುತ್ತಾರೆ. ಆ ಮಾರ್ಗದಲ್ಲಿ ಸಂಚರಿಸುವ ಪ್ರತಿಯೊಬ್ಬರೂ ರಾಯಣ್ಣನ ಸಮಾಧಿಗೆ ಗೌರವಪೂರ್ವಕವಾಗಿ ನಮಸ್ಕರಿಸುತ್ತಾರೆ. ಅವರ ಪಾಲಿಗೆ ಅದೊಂದು ಧಾರ್ಮಿಕ ಸ್ಥಳ. ಪ್ರೇರಣಾ ಸ್ಥಳ. ಎಲ್ಲ ಧರ್ಮಗಳನ್ನು, ಜಾತಿಗಳನ್ನು, ವರ್ಗಗಳನ್ನು ಮೀರಿದ ಪುಣ್ಯಕ್ಷೇತ್ರ.
 

ಅಷ್ಟೇ ಅಲ್ಲ. ಪ್ರತಿವರ್ಷ ಜನವರಿಯಲ್ಲಿ, ದವನದ ಹುಣ್ಣಿಮಿಗೆ ಮೂರು ದಿನ ಮುಂಚೆ ಅಲ್ಲಿ ದೊಡ್ಡ ಪ್ರಮಾಣದಲ್ಲಿ ಜಾತ್ರೆ ನಡೆಯುತ್ತದೆ. ಅದು ರಾಯಣ್ಣನ ಜಾತ್ರೆ ಎಂದೇ ಜನಜನಿತ. ಆ ಸಂದರ್ಭದಲ್ಲಿ ಸಾರ್ವಜನಿಕ ಅನ್ನಸಂತರ್ಪಣೆ ಆಗುತ್ತದೆ. ಪುರಾಣ ಪ್ರವಚನಗಳೂ ನಡೆಯುತ್ತವೆ. ಕೊನೆಯ ದಿನದಂದು, ಚಕ್ಕಡಿಯ ಮೇಲೆ ರಾಯಣ್ಣನ ಮೂರ್ತಿ ಹಾಗೂ ಅವನು ಗರಡಿಮನೆಯಲ್ಲಿ ತಿರುವಿದ ಲೋಡುಗಳು ಹಾಗೂ ಡಾಲೂಗಳನ್ನು ಇಟ್ಟು ಊರವರೆಲ್ಲ ವಿಜೃಂಭಣೆಯಿಂದ ಮೆರವಣಿಗೆ ಮಾಡುತ್ತಾರೆ.
 

ಇತ್ತೀಚೆಗೆ ಸರಕಾರದಿಂದ ಎರಡು ಎಕರೆ ಜಮೀನು ಪಡೆದು ಒಂದು ಸುಂದರವಾದ ತೋಟವನ್ನು ನಿರ್ಮಿಸಲಾಗಿದ್ದು, ಅದಕ್ಕೆ ರಾಯಣ್ಣನ ತೋಟವೆಂದೇ ಹೆಸರಿಟ್ಟಿದ್ದಾರೆ.
 

ದೇಶಕ್ಕಾಗಿ, ತಾನು ನಂಬಿದ ತತ್ವಗಳಿಗಾಗಿ, ಸ್ವಾತಂತ್ರ್ಯದ ಉಸಿರಿಗಾಗಿ ಹಂಬಲಿಸಿ, ಹೋರಾಡಿ, ಮಡಿದ ಒಬ್ಬ ಯೋಧನಿಗೆ ಇದಕ್ಕಿಂತ ಇನ್ನೇನು ಬೇಕು? ನಮ್ಮೆಲ್ಲರಲ್ಲಿ ಸ್ಫೂರ್ತಿ ತುಂಬಲು ಆತನ ತ್ಯಾಗ-ಬಲಿದಾನದ ಈ ಹೋರಾಟಕಥೆಯೇ ಸಾಕು.

- ಚಾಮರಾಜ ಸವಡಿ

(ಶೀಘ್ರದಲ್ಲಿ ಬಿಡುಗಡೆಯಾಗಲಿರುವ  ನನ್ನ ‘ಸ್ವಾತಂತ್ರ‍್ಯದ ಕಿಡಿ ಸಂಗೊಳ್ಳಿ ರಾಯಣ್ಣ’ ಪುಸ್ತಕದ ಆಯ್ದ ಭಾಗ)

(ಚಿತ್ರ ಕೃಪೆ: ಅಂತರ್ಜಾಲ)

ನನಸಾದ ಹಾಗೆ ಒಂದಿಷ್ಟು ಕನಸು

9 Sept 2010

2 ಪ್ರತಿಕ್ರಿಯೆ
ಇದು ಇಲ್ಲಿಗೇ ಮುಗಿಯಲಿ ಅಂತ ಬಯಸುತ್ತದೆ ಮನಸ್ಸು

ಅದು ಮುಗಿಯುವುದಿಲ್ಲ
ಹೊಸ ಮೊಳಕೆಯೊಂದಿಗೆ ಚಿಗಿಯುತ್ತದೆ

ಇದು ಶುರುವಾಗಲಿ ಅಂತ ಆಶಿಸುತ್ತೇನೆ

ಅದು ಶುರುವಾಗುವುದಿಲ್ಲ
ಹಳೆಯ ತಪ್ಪುಗಳಂತೆ ಮತ್ತೆ ನೆಲಕ್ಕೆ ಬೀಳುತ್ತದೆ

ರಾತ್ರಿಯ ಕಾವಳ ಮೌನದಲ್ಲಿ ಮತ್ತೆ ಮತ್ತೆ ಯೋಚಿಸುತ್ತೇನೆ

ಕನಸು ಕಂಡಿದ್ದು ತಪ್ಪಲ್ಲ
ನನಸು ಮಾಡಲು ಹವಣಿಸಿದ್ದು ತಪ್ಪಲ್ಲ

ಆದರೂ, ಕನಸು ನನಸಾಗಲಿಲ್ಲ

ರಾತ್ರಿ ಮುಗಿದು ಬೆಳಗಾಗುತ್ತದೆ
ಮಲಗೆದ್ದ ಹಕ್ಕಿಗಳು ಹಾಡುತ್ತವೆ
ರಾತ್ರಿಯಿಡೀ ಎದ್ದಿದ್ದ ಗೂರ್ಖಾ, ಗೂಬೆ ಮಲಗುತ್ತವೆ

ನನಗೆ ಪೂರ್ತಿ ಎಚ್ಚರವೂ ಇಲ್ಲದ ಮಂಪರು
ಕಂಡಿದ್ದು ಕನಸೋ, ಕಾಣುತ್ತಿರುವುದು ನನಸೋ

ಗೊಂದಲದ ಮೇಲೆ ಗೊಂದಲ

ಎಲ್ಲ ನೆನಪುಗಳನ್ನು ಹೂತು ಹಾಕುವಂತೆ
ಒಂದು ಬಿಸಿ ಬಿಸಿ ಕಾಫಿ, ಇವತ್ತಿನ ತಾಜಾ ಪೇಪರ್‌

ಎಲ್ಲಾ ಪುಟಗಳಲ್ಲಿ ಆದರ್ಶದ ಮೊಳಗು
ವಾಸ್ತವದ ಅಳುಕು, ಹಿತಾಸಕ್ತಿಯ ಸುದ್ದಿಗಳು

ನಂಬುವುದಿಲ್ಲ ಅಂತ ಗೊತ್ತಿದ್ದರೂ
ಮೊಳದುದ್ದಕ್ಕೆ ಅಚ್ಚಾದ ಅಂಕಣಗಳು

ನನಗೆ ಮತ್ತೆ ಗೊಂದಲವಾಗುತ್ತದೆ:
ಇದೆಲ್ಲ ಕನಸೋ, ನನಸೋ?

- ಚಾಮರಾಜ ಸವಡಿ