ಅನು ದಿನ, ನಿನ್ನ ನೆನೆದು ನೆನೆದು, ಮನವೂ ನಿನ್ನಲೇ ನಿಲ್ಲಲಿ...

18 Dec 2010

5 ಪ್ರತಿಕ್ರಿಯೆ
ಏಕೋ ಗೊತ್ತಿಲ್ಲ, ಮನಸ್ಸಿನ ತುಂಬ ಮಂಕು.

ಗೋಳು ಬರೆಯಬಾರದು ಅಂತ ದಿನಗಳನ್ನು ತಳ್ಳಿದ್ದಾಯ್ತು. ಮತ್ತದೇ ಬೇಸರವನ್ನು ಊರಿಗೆಲ್ಲ ಹಂಚೋದು ಸರಿಯಲ್ಲ ಅಂತ ಸುಮ್ಮನಿದ್ದಾಯ್ತು. ಆದರೆ, ಹಸಿ ನೆಲ ಹೊಕ್ಕ ಬೀಜದಂತೆ, ಬೇಸರ ಪಲ್ಲವಿಸಿ ಬೆಳೆಯುತ್ತಿದೆ. ಮತ್ತೆ ಅಲೆಮಾರಿಯಾಗುವ ಹುಚ್ಚು ಕನಸು ಮೈ ತುಂಬ.

ನನಗೆ ಗೊತ್ತು: ತುಂಬ ಜನರಿಗೆ ಇತರರ ದುಃಖಗಳ ಬಗ್ಗೆ, ನೋವಿನ ಬಗ್ಗೆ, ಅವರ ವ್ಯಥೆಯ ಬಗ್ಗೆ ಆಸಕ್ತಿ ಇರುವುದಿಲ್ಲ. ಇದ್ದರೂ ಅದು ಕೇವಲ ಕೆಲವೊಂದು ವಿಶೇಷ ಅನ್ನಬಹುದಾದ ಸಂದರ್ಭಗಳ ಬಗ್ಗೆ ಮಾತ್ರ. ನಗೆಯ ಹಿಂದೆ ಮರುಳಾದ ಮಗುವಿನಂತೆ ಈ ಜಗತ್ತು. ದುಃಖ ಅದಕ್ಕೆ ಬೇಡ. ವ್ಯಥೆ ಅದಕ್ಕೆ ಇಷ್ಟವಿಲ್ಲ. ಹೀಗಾಗಿ, ನೋವು ಹಂಚುವುದನ್ನು ನಾನು ಆದಷ್ಟು ದೂರ ತಳ್ಳುತ್ತೇನೆ.

ಆದರೆ, ಈ ಸಾರಿ ನೋವನ್ನು ಹಂಚಿಕೊಳ್ಳುತ್ತಿಲ್ಲ. ಅದನ್ನು ಹಂಚಿಕೊಳ್ಳುವುದರಲ್ಲಿ ನನಗೆ ನಂಬಿಕೆಯೂ ಇಲ್ಲ. ಇದು ನನ್ನ ದಾಖಲೆಗಾಗಿ ಮಾತ್ರ ಬರೆದುಕೊಂಡಿರುವಂಥದು. ಬ್ಲಾಗ್ ಬಿಟ್ಟರೆ ಬೇರೆ ಸಾರ್ವಜನಿಕ ಅಭಿವ್ಯಕ್ತಿ ಇಲ್ಲದ್ದರಿಂದ, ಇದನ್ನು ಇಲ್ಲಿ ಹಾಕುತ್ತಿದ್ದೇನೆ. ಇದರಾಚೆ ಓದುವ ಇಚ್ಛೆ ಇಲ್ಲದವರು, ಇಲ್ಲಿಗೇ ಮುಗಿಸಬಹುದು.

*****
ಹಿಂದೆಲ್ಲ ಒಮ್ಮೊಮ್ಮೆ ಹೀಗಾಗುತ್ತಿತ್ತು. ಇದ್ದಕ್ಕಿದ್ದಂತೆ ಮನಸ್ಸು ಮಂಕಾಗುತ್ತಿತ್ತು. ಇರುವುದೆಲ್ಲವನ್ನೂ ಬಿಟ್ಟು ದೂರ ಹೋಗುವ ಹುಚ್ಚು ಹಂಬಲ. ಇದಕ್ಕೆ ಯಾವುದೇ ಘಟನೆಯಾಗಲಿ, ಸಮಸ್ಯೆಯಾಗಲಿ, ಸಂದರ್ಭವಾಗಲಿ ಪ್ರೇರಣೆ ಆಗಿರುವುದಿಲ್ಲ. ಅದ್ಹೇಗೆ ಹುಟ್ಟುತ್ತದೋ, ಅದೆಲ್ಲಿಂದ ಒಕ್ಕರಿಸುತ್ತದೋ ಒಂದೂ ತಿಳಿಯುವುದಿಲ್ಲ. ಇರುವುದನ್ನೆಲ್ಲ ಹೀಗೇ, ಇದ್ದಕ್ಕಿದ್ದಂತೆ ಬಿಟ್ಟು ದೂರ ಹೋಗಿಬಿಡಬೇಕು. ಒಂದಷ್ಟು ದಿನ ಮಾತು ಮರೆತು ಬದುಕಬೇಕು. ಗಡಿಯಾರದ ಮುಖ ನೋಡದೇ, ಮನುಷ್ಯರ ಮುಖಗಳನ್ನು ಮರೆಮಾಚಿ, ಮಾನವ ನಿರ್ಮಿತ ವಸ್ತುಗಳಾಚೆ, ಜಗತ್ತಿನಾಚೆ ಹೋಗಿ ಇದ್ದುಬಿಡಬೇಕೆಂಬ ಹುಚ್ಚು ಹಂಬಲ. ಕಾಡುವ ಪ್ರಶ್ನೆಗಳಿಗೆ ಆ ಮೌನದಲ್ಲಿ ಉತ್ತರ ಸಿಕ್ಕೀತೆಂಬ ಆಸೆ. ಪುಸ್ತಕಗಳ ಹಂಗಿಲ್ಲದ, ಇಂಟರ್‌ನೆಟ್‌ನ ಜಾಲವಿಲ್ಲದ, ಯಾರೂ ಮಾತಾಡಿಸದ, ಯಾರಿಗೂ ಉತ್ತರ ಹೇಳಬೇಕಾದ ಅನಿವಾರ್ಯತೆ ಇರದ ಶುದ್ಧ, ನೀರವ ಜಗತ್ತಿನೊಳಗೆ ಹೋಗಿಬಿಡಬೇಕು. ನನ್ನ ಪಾಡಿಗೆ ನಾನು ಇದ್ದುಬಿಡಬೇಕು. ನೆನಪುಗಳನ್ನು ಬಿಟ್ಟು, ಕನಸುಗಳನ್ನು ಬಿಸುಟು ಒಬ್ಬನೇ ಹೋಗಿಬಿಡಬೇಕೆಂಬ ಹುಚ್ಚು ಆಸೆ.

ಕಳೆದ ಕಾಲು ಶತಮಾನದಿಂದ ಇಂಥದೊಂದು ಆಸೆ ಆಗಾಗ ಬರುತ್ತಿರುತ್ತದೆ. ತುಂಬ ಸಾರಿ ಪ್ರಶ್ನಿಸಿಕೊಂಡಿದ್ದೇನೆ: ಇಂಥದೊಂದು ಹುಚ್ಚು ಯಾಕೆ ಬರುತ್ತದೆ ಅಂತ. ಉತ್ತರ ಸಿಕ್ಕಿಲ್ಲ. ಒಮ್ಮೆ ಹೋಗಿ ನೋಡು, ಉತ್ತರ ಸಿಕ್ಕರೂ ಸಿಗಬಹುದು ಎನ್ನುತ್ತದೆ ಒಳಮನಸ್ಸು. ನಂಗೊತ್ತು, ನನ್ನ ಒಳಮನಸ್ಸು ನನ್ನನ್ನು ಇದುವರೆಗೆ ವಂಚಿಸಿಲ್ಲ, ಸುಳ್ಳು ಹೇಳಿಲ್ಲ, ಏನನ್ನೂ ಮರೆಮಾಚಿಲ್ಲ. ನನ್ನೊಬ್ಬನ ಕಿವಿಯಲ್ಲಿ, ಸದ್ದಿಲ್ಲದ ಶಬ್ದಗಳನ್ನು ಉಸುರುತ್ತ ನನ್ನನ್ನು ಪೊರೆಯುತ್ತಿರುತ್ತದೆ. ಅದರ ಮಾತನ್ನು ಉಲ್ಲಂಘಿಸಿದಾಗೆಲ್ಲ ಪೆಟ್ಟು ತಿಂದಿದ್ದೇನೆ. ನನ್ನತನ ಮರೆತಿದ್ದೇನೆ. ಕೆಲವೊಂದು ಶಾಶ್ವತ ನೋವಿನ ಘಟನೆಗಳಿಗೆ ಕಾರಣನಾಗಿದ್ದೇನೆ.

ಒಳಮನಸ್ಸು ಹಾಗೆ ಹೇಳಿದಾಗೆಲ್ಲ, ಯಾಕೆ ಒಮ್ಮೆ ಪ್ರಯತ್ನಿಸಬಾರದು ಅಂತ ಅನೇಕ ಸಲ ಅಂದುಕೊಂಡಿದ್ದೇನೆ. ಒಂದಿಷ್ಟು ದಿನ ಹಾಗೆ ಹೋಗಿಬಿಡಬೇಕು. ನನ್ನ ಪಾಡಿಗೆ ನಾನು. ಪುಸ್ತಕ, ಮೊಬೈಲ್, ಪೆನ್ನು, ಗಡಿಯಾರದ ಹಂಗಿಲ್ಲದಂತೆ. ಕನಿಷ್ಟ ಮಟ್ಟದ ಉಡುಪು ಮಾತ್ರ ತೆಗೆದುಕೊಂಡು ಹೋಗಬೇಕು. ಒಂದು ವೇಳೆ ಅವೂ ಕಳೆದುಹೋದರೆ ಬೇಸರ ಪಟ್ಟುಕೊಳ್ಳಬಾರದಷ್ಟು ಕನಿಷ್ಟ ವಸ್ತುಗಳನ್ನು ಒಯ್ಯಬೇಕು. ಊಟವಿಲ್ಲದೇ ವಾರವೋ, ಹತ್ತು ದಿನವೋ ಇವತ್ತಿಗೂ ಆರಾಮವಾಗಿ ಕಳೆಯಬಲ್ಲೆ ನಾನು. ಹೀಗಾಗಿ, ಊಟ ಸಿಗುತ್ತದೋ ಇಲ್ಲವೋ ಎಂಬ ಚಿಂತೆ ಖಂಡಿತ ಕಾಡದು.

ಹಾಗೆ ಸದ್ದಿಲ್ಲದೇ ಎದ್ದು ಹೀಗಿ, ದಿವ್ಯ ಮೌನದೊಳಗೆ ಕಳೆದುಹೋಗಬೇಕೆಂಬ ಕನಸು ಎಷ್ಟು ಬಲವಾಗಿ ಕಾಡುತ್ತದೆ ಎಂದರೆ, ನಿದ್ದೆ ಬರದು, ಹಸಿವೆ ಆಗದು, ಮಹತ್ವಾಕಾಂಕ್ಷೆಗಳು ಕಾಡವು. ಮಹಾನ್ ವ್ಯಾಮೋಹಿಗಳೇ ಇಂಥ ನಿರಾಸಕ್ತಿ ಹೊಂದಬಲ್ಲರು ಎಂಬುದನ್ನು ಎಲ್ಲೋ ಓದಿದ್ದೂ ನನ್ನ ಆಸೆಗೆ ಇಂಬು ಕೊಡುತ್ತಿದೆ. ಏಕೆಂದರೆ, ಏನೇ ಬಯಸಲಿ, ಅದನ್ನು ನಾನು ತುಂಬ ಉತ್ಕಟವಾಗಿ ಬಯಸುತ್ತೇನೆ. ಇಲ್ಲದಿದ್ದರೆ, ಪರಮ ನಿರಾಸಕ್ತಿ. ಅಪಾರ ತುಡಿತ ಅಥವಾ ಕಡು ನಿರಾಸಕ್ತಿಗಳೆರಡೂ ಅದ್ಹೇಗೆ ಒಟ್ಟೊಟ್ಟಿಗೇ ನೆಲೆಸಿವೆ ಅಂತ ನನಗೇ ಅಚ್ಚರಿಯಾಗುತ್ತದೆ. ಯಾವುದಕ್ಕೆ ಒಮ್ಮೆ ಅಪಾರವಾಗಿ ಹಂಬಲಿಸಿರುತ್ತೇನೋ, ಒಂದು ಹಂತದ ನಂತರ ಅದರ ಬಗ್ಗೆ ತೀವ್ರ ನಿರ್ಲಿಪ್ತತೆ ಬೆಳೆದುಬಿಡುತ್ತದೆ. ಈ ಮಾನಸಿಕ ಪಲ್ಲಟ ಅರಿಯದೇ ಹತ್ತಿರದವರು ತೀವ್ರ ಗೊಂದಲಗೊಳ್ಳುತ್ತಾರೆ. ನನ್ನ ಮನಃಸ್ಥಿತಿಯ ಬಗ್ಗೆ ಕಳವಳಪಡುತ್ತಾರೆ. ನನ್ನ ಹಿತಶತ್ರುಗಳಿಗೆ ಟೀಕಿಸಲು ಇದೇ ಸುಲಭ ಅಸ್ತ್ರವೂ ಹೌದು.

ಆದರೆ, ನನಗೆ ಮಾತ್ರ ಸದಾ ಗೊಂದಲ. ಏಕೆ ಹೀಗಾಗುತ್ತದೋ ಗೊತ್ತಿಲ್ಲ. ಆದರೆ, ಇದರಿಂದ ನನಗೆ ಅಂಥ ಕೆಡುಕೇನೂ ಆಗಿಲ್ಲ. ಗೊಂದಲವಿದ್ದರೆ ಅದು ನನ್ನೊಳಗೇ ಇರುತ್ತದೆ. ಆಗೆಲ್ಲ ಅಂತರ್ಮುಖಿಯಾಗಿಬಿಡುತ್ತೇನೆ. ಮಾತು ಹಿಡಿಸುವುದಿಲ್ಲ. ನನ್ನ ಪಾಡಿಗೆ ನಾನಿದ್ದುಬಿಡುತ್ತೇನೆ. ಮೂಡ್ ಸ್ವಿಂಗ್ ಅಂದರೆ ಇದೇನಾ ಅಂತ ಅಚ್ಚರಿಯಾಗುತ್ತದೆ. 


ಏಕೋ ಡಲ್ಲಾಗಿದ್ದೀಯಲ್ಲ? ಅಂತಾರೆ ಮನೆಯವರು, ಮಿತ್ರರು. ಏನು ಹೇಳುವುದು? ಉತ್ತರ ಗೊತ್ತಿದ್ದರೆ ತಾನೆ? ಇಂಥ ಸಂದರ್ಭಗಳು ಇನ್ಯಾವುದೋ ಗೊಂದಲಗಳಿಗೆ ಕಾರಣವಾಗಿ, ಒಟ್ಟಾರೆ ಪರಿಸ್ಥಿತಿಯೇ ಹದಗೆಟ್ಟು ಹೋಗಿದ್ದೂ ಇದೆ. ಅದು ನನ್ನನ್ನು ಇನ್ನಷ್ಟು ಆಳಕ್ಕೆ ನೂಕುತ್ತದೆ. ಮತ್ತಷ್ಟು ಅಂತರ್ಮುಖಿಯಾಗಿಸುತ್ತದೆ.

ಇದೊಂದು ಸಮಸ್ಯೆಯೇ ಹೊರತು ದೈವಿಕ ಗುಣವೇನಲ್ಲ ಅಂತ ನನಗೆ ತೀವ್ರವಾಗಿ ಅನಿಸಿದ್ದು, ಈಗ ಹದಿನೈದು ವರ್ಷಗಳಿಂದ. ಅಲ್ಲಿಯವರೆಗೆ ಇದೊಂದು ಸಿದ್ಧಪುರುಷನ ಮನಃಸ್ಥಿತಿ ಅಂತ ಅಂದುಕೊಂಡು ಬಹಳ ಹೆಮ್ಮೆಪಡುತ್ತಿದ್ದೆ. ಆದರೆ, ಏರ್‌ಫೋರ್ಸ್‌ನಿಂದ ನಾಗರಿಕ ಜೀವನಕ್ಕೆ ಹಿಂತಿರುಗಿದ ಮೇಲೆ ಈ ಮನಃಸ್ಥಿತಿ ನನ್ನನ್ನು ಇನ್ನಿಲ್ಲದ ಕಷ್ಟಗಳಿಗೆ ನೂಕಿತು. ಬಹುಶಃ ನನ್ನನ್ನು ಕಾಡುವ ಖಿನ್ನತೆಗೆ ಇದೂ ಒಂದು ಮುಖ್ಯ ಕಾರಣವೇನೋ.

ಕ್ರಮೇಣ ಪರಿಸ್ಥಿತಿ ಬಿಗಡಾಯಿಸಿತು. ಒಂಟಿಯಾಗಿ ಇರಬಯಸುವ ವ್ಯಕ್ತಿಯನ್ನು ಜಗತ್ತು ನೋಡುವ ರೀತಿಯೇ ಬೇರೆ. ಅಂಥವನು ಯಾರಿಗೂ ಬೇಡವಾದ ವ್ಯಕ್ತಿ. ಏಕೆಂದರೆ, ಅವನು ಯಾರೊಂದಿಗೂ ಬೆರೆಯುವುದಿಲ್ಲ. ಅವನಿಂದ ಜಗತ್ತಿಗೆ ಯಾವುದೇ ಲಾಭವಿಲ್ಲ. ಜಗತ್ತಿನ ಓಟದ ಗತಿಗೆ ಅವ ಸ್ಪಂದಿಸಲಾರ. ಜಗತ್ತಿನ ಕೊಡುಗೆಗಳನ್ನು ಸ್ವೀಕರಿಸಲಾರ. ಅನುಭವಿಸಲಾರ. ಅದಕ್ಕೆ ತನ್ನ ಕೊಡುಗೆ ಸೇರಿಸಲಾರ. ಅಂಥವನನ್ನು ಜಗತ್ತು ಆದರಿಸೀತಾದರೂ ಹೇಗೆ?

ಕ್ರಮೇಣ ನಾಗರಿಕ ಸಮಾಜ ನನ್ನನ್ನು ತಿರಸ್ಕರಿಸಿತು. ಅದು ತಿರಸ್ಕರಿಸಿದಷ್ಟೂ ನಾನು ಅಂತರ್ಮುಖಿಯಾದೆ. ನನ್ನೊಳಗೇ ನಾನು ಇರತೊಡಗಿದೆ. ಬರೆಯುವ ಹುಚ್ಚೊಂದು ಇಲ್ಲದಿದ್ದರೆ, ಈ ಜಗತ್ತಿನ ಪಾಲಿಗೆ ನಾನು ಇಷ್ಟೊತ್ತಿಗೆ ಕಳೆದುಹೋಗಿರುತ್ತಿದ್ದೆ.


ಮುಂದೆ ಪತ್ರಿಕೋದ್ಯಮ ಸೆಳೆಯಿತು. ಪೂರ್ವಾನುಭವ ಇಲ್ಲದ, ಸಾಂಪ್ರದಾಯಿಕ ಶಿಕ್ಷಣ ಪಡೆಯದ ನನ್ನಂಥವನಿಗೆ ಪತ್ರಿಕೋದ್ಯಮದಲ್ಲಿ ನೌಕರಿ ಸಿಗುತ್ತದೆ ಅಂತ ಖಂಡಿತ ಅಂದುಕೊಂಡಿರಲಿಲ್ಲ. ಬರೆಯುವ ಹುಚ್ಚು, ಬರೆದಿದ್ದನ್ನು ತಿದ್ದುವ ಹುಚ್ಚುಗಳೆರಡೂ ನೌಕರಿ ಕೊಡಿಸಿದವು. ಕೊನೆಗೂ ದಡ ಸೇರಿದ ಅಂದುಕೊಂಡೆ.

ಆದರೆ, ಮತ್ತೆ ನಿರಾಶೆ. ಸಂಸ್ಥೆಯಿಂದ ಸಂಸ್ಥೆಗೆ ಜಿಗಿತ. ಇನ್ನಿಲ್ಲಿ ಇರಲು ಆಗದು ಅಂತ ಅನಿಸಿದಾಗೆಲ್ಲ ಕೊಡು ರಾಜೀನಾಮೆ, ಪಡೆ ನಿರುದ್ಯೋಗ ಎಂಬ ಸ್ಥಿತಿ. ಪ್ರಮುಖ ಮಾಧ್ಯಮ ಸಂಸ್ಥೆಗಳಲ್ಲಿ ಸರ್ವೀಸ್‌ ಮಾಡಿದ ನಂತರ, ಸಂಸ್ಥೆಗಳ ಹಂಗೇ ಬೇಡ ಅಂತ ಆಗಾಗ ಒಂದೆರಡು ವರ್ಷ ಕಡ್ಡಾಯ ರಜೆಯನ್ನೂ ಅನುಭವಿಸಿದ್ದಾಯ್ತು. ಬದುಕು ಹೇಗೋ ಸಾಗುತ್ತದೆ ಎಂಬುದು ಪಕ್ಕಾ ಆದ ನಂತರ, ನಿರುದ್ಯೋಗದ ತೀವ್ರತೆಯೂ ತಾಕದಂತಾಯ್ತು. 

ಆಗ ಮತ್ತೆ ಎದ್ದು ನಿಂತಿತು- ಇರುವುದೆಲ್ಲವ ಬಿಟ್ಟು ದೂರ ಹೋಗುವ ತುಡಿತ. 

ಏರ್‌ಫೋರ್ಸ್‌‌ನ ನೀರವ ಸಂಜೆ, ರಾತ್ರಿಯ ದಿನಗಳು ಮತ್ತೆ ಮತ್ತೆ ನೆನಪಾಗುತ್ತವೆ. ಅರೆ ಮರುಭೂಮಿಯ ಬೋಳು ದಿಣ್ಣೆಗಳ ಪ್ರಶಾಂತ ಮೌನ, ಎರಡೂ ಕೈ ಚಾಚಿದರೂ, ಅದರಾಚೆ ಹಿಗ್ಗುವಷ್ಟು ದೊಡ್ಡದಾಗಿ ಕಾಣುವ ಸಂಜೆ ಸೂರ್ಯ, ವಿರಳ ಹಕ್ಕಿಗಳು, ಅತಿ ವಿರಳ ಜನವಸತಿ, ಮೈಲುಗಟ್ಟಲೇ ಬೋಳು ಬಿದ್ದ ನೆಲ, ಅದರಾಚೆ ತಣ್ಣಗೇ ಇರುವ ಪಾಕಿಸ್ತಾನದ ಗಡಿ, ಒಂಟೆಗಳು, ಕಡುಕಪ್ಪು ಗಡಿ ಹೆದ್ದಾರಿ, ಸಿಂಧಿ ಹಸುಗಳು, ಗುಜರಾತಿ ಗೌಳಿಗರು, ಅಪರೂಪಕ್ಕೊಮ್ಮೆ ಕೇಳಿ ಬರುವ ಮನಕಲಕುವ ತಂತಿ ವಾದ್ಯ, ಅಪರೂಪಕ್ಕೊಮ್ಮೆ ಭರ‍್ರೋ ಎಂದು ಓಡುವ ಬಸ್‌ಗಳು, ಟ್ರಕ್‌ಗಳು, ಯಾರೋ ನಡೆದು ಹೋದ ಮಂಕು ಕಾಲ್ದಾರಿ, ನನ್ನ ಸ್ಪೋರ್ಟ್ಸ್‌ ಶೂಗಳ ಗುರುತು, ಸೂರ್ಯ ಮುಳುಗುತ್ತಿದ್ದಂತೆ ಮೆದುವಾಗಿ ಬೀಸತೊಡಗುವ ತಂಗಾಳಿ, ಹುಟ್ಟೂರು ಅಳವಂಡಿಯ ಸಾವಿರ ಸಾವಿರ ನೆನಪುಗಳು, ಅಷ್ಟೇ ಪ್ರಮಾಣದ ನಿರಾಶೆಗಳು, ಮೊಗೆದಷ್ಟೂ ಜಿನುಗುವ ಒಡನಾಡಿ ಖಿನ್ನತೆ-   

ನೆನಪುಗಳ ಮೆರವಣಿಗೆಗೆ ಕೊನೆಯೆಲ್ಲಿ?  

ಇತ್ತೀಚೆಗೆ ಅವೆಲ್ಲ ಮತ್ತೆ ಮತ್ತೆ ನೆನಪಾಗುತ್ತಿವೆ. ಬದುಕು ಸವಿಯುವ ಸಮಯದಲ್ಲೇ ಶುರುವಾಗುತ್ತದಾ ವಾನಪ್ರಸ್ಥಾಶ್ರಮದ ಹಂಬಲ? 

ನಿದ್ರೆ ದೂರವಾಗಿ, ಹಸಿವು ಇಂಗಿ ಹೋಗಿ, ಕನಸುಗಳು ಮುರುಟುವ ಸಮಯ ಹತ್ತಿರ ಬಂದಿತೆ? ಅಂತ ಕಳವಳಪಡುತ್ತೇನೆ. ಯಾರದೋ ಕನಸಿಗೆ ಕೈ ಹಾಕಿದೆನಾ ಎಂಬ ಅಪರಾಧಿ ಭಾವ. ಪಡೆಯುವುದಕ್ಕೆ ಮುನ್ನವೇ ಕಳೆದುಕೊಂಡ ಕನಸುಗಳು ಮತ್ತೆ ಮತ್ತೆ ಮೊಳೆಯುತ್ತವೆ. ಮತ್ತೆ ಮತ್ತೆ ಸಾಯುತ್ತವೆ. ಖಿನ್ನತೆಯ ಪಳೆಯುಳಿಕೆಗಳನ್ನು ಬಿಟ್ಟು ಇಲ್ಲವಾಗುತ್ತವೆ. 

ಮನಸ್ಸು ದೂರ ಹೋಗಬಯಸುತ್ತದೆ. 

ನಿತ್ಯದ ಶಬ್ದಗಳಾಚೆ, ವಾಸನೆಗಳಾಚೆ, ಭಾವನೆಗಳಾಚೆ, ವಿದ್ಯುತ್ತಿಲ್ಲದ ಶುದ್ಧ ಕತ್ತಲಿನ ಕಡೆಗೆ, ಮಾಲಿನ್ಯವಿಲ್ಲದ ಮೆದು ತಂಗಾಳಿಯತ್ತ, ದೃಷ್ಟಿ ಹರಿಸಿದಷ್ಟೂ ದೂರಕ್ಕೆ ಇರುವ ಮಹಾಮೌನದ ಕಡೆಗೆ ಮನಸ್ಸು ಮತ್ತೆ ಮತ್ತೆ ಹರಿಯುತ್ತದೆ. ಒಂದೊಂದೇ ಬಂಧನಗಳನ್ನು ಕಡಿದುಕೊಳ್ಳಬೇಕು. ಒಂದೊಂದೇ ತಂತುಗಳನ್ನು ಹರಿಯಬೇಕು. ಕೊರಳಪ್ಪಿ ಮಲಗಿದ್ದ ಮಗುವಿನ ಮೆದುಕೈಗಳನ್ನು ಹುಷಾರಾಗಿ ಪಕ್ಕಕ್ಕೆ ಸರಿಸುವಂತೆ, ಉಕ್ಕಿ ಬರುವ ಸುನೀತ ಭಾವನೆಗಳನ್ನು ಹುಷಾರಾಗಿ ತಳ್ಳಿ ಎದ್ದು ಹೋಗಬೇಕು. ಹೆಜ್ಜೆಗಳ ಸದ್ದಾಗದಂತೆ, ನಿಟ್ಟುಸಿರು ಬಿರುಗಾಳಿಯಾಗದಂತೆ, ಎಲ್ಲಾ ತರಂಗಗಳನ್ನು ಅಲ್ಲಲ್ಲೇ ನಿಲಿಸಿ, ಮೌನವಾಗಿ ದೂರವಾಗಬೇಕು. 

ರಾತ್ರಿ ತುಂಬ ಹೊತ್ತು ಕೂತು ಯೋಚಿಸುತ್ತೇನೆ. ಮನುಷ್ಯ ಸಂಬಂಧಗಳ ವಿಚಿತ್ರ ತಂತುಗಳು ಮತ್ತೆ ಮತ್ತೆ ಕೆಣಕುತ್ತವೆ. ವ್ಯಕ್ತಿಯೊಬ್ಬನ ಪಾತ್ರ ಪ್ರಪಂಚ ಅಚ್ಚರಿ ಹುಟ್ಟಿಸುತ್ತದೆ. ನಾನು ಯಾರಿಗೋ ಮಗ, ಮೊಮ್ಮಗ, ಗಂಡ, ತಂದೆ, ಅಣ್ಣ, ತಮ್ಮ, ಗೆಳೆಯ, ಶತ್ರು, ಸಹೋದ್ಯೋಗಿ, ಗ್ರಾಹಕ, ತಪ್ಪಿತಸ್ಥ, ಪ್ರೀತಿಪಾತ್ರ, ಸ್ಪರ್ಧಿ, ಅನಾಮಧೇಯ, ಹಿರಿಯ, ಕಿರಿಯ, ಸಮವಯಸ್ಕ, ಸಮಾನ ಮನಸ್ಕ, ನಿರ್ದಯಿ, ದಯಾಮಯಿ, ನಿರುಪಯೋಗಿ, ಮಾದರಿ-  

ಪಟ್ಟಿ ವಿಸ್ತರಿಸುತ್ತಲೇ ಹೋಗುತ್ತದೆ. 

ಇವೆಲ್ಲ ಸಂಬಂಧಗಳನ್ನು, ಇದ್ದಕ್ಕಿದ್ದಂತೆ, ಈಗಿಂದೀಗಲೇ, ಇನ್ನಿಲ್ಲದಂತೆ ಕತ್ತರಿಸಿ ಎಲ್ಲಿಗೆ ಹೋಗಬೇಕು? ಎಲ್ಲೋ ಹೋಗಬೇಕೆಂಬ ತುಡಿತವೇ ಮತ್ತೊಂದು ಬಂಧನವಲ್ಲವೆ? ಅಲ್ಲಿ ಇನ್ಯಾರಿಗೋ ನಾನು ಇನ್ನೇನೋ ಆಗುತ್ತೇನೆ. ಏನೋ ಪಡೆಯಬೇಕೆಂದು ಹೋದವ ಇನ್ನೇನನ್ನೋ ಪಡೆಯಬೇಕಾದೀತು. ಹುಡುಕುತ್ತ ಹೋಗಲು, ನಾನು ಕಳೆದುಕೊಂಡಿದ್ದಾದರೂ ಏನು? ಎಲ್ಲಿ ಕಳೆದುಕೊಂಡೆ? 

ಡಿಜಿಟಲ್‌ ಗಡಿಯಾರದಲ್ಲಿ ಅಂಕೆಗಳು ಸದ್ದಿಲ್ಲದೇ ಬದಲಾಗುತ್ತವೆ. ಹೊರಗೆಲ್ಲೋ ದೂರ ಗೂರ್ಖಾನ ಸೀಟಿ ಸದ್ದು. ಅಲ್ಲೆಲ್ಲೂ ವರ್ತುಲ ರಸ್ತೆಯಲ್ಲಿ ಹಾಲಿನ ವ್ಯಾನು ಹೋಗುತ್ತಿರಬೇಕು. ಕಿರಿಯ ಮಗಳು ನಿದ್ದೆಯಲ್ಲೇ ಮುಲುಕುತ್ತಾಳೆ. ನಿದ್ದೆಯಲ್ಲೇ ತಾಯಿಯ ಮಮತೆಯ ಕೈ ಅವಳನ್ನು ಸಂತೈಸಿರಬೇಕು, ಸದ್ದು ನಿಲ್ಲುತ್ತದೆ. ಕೀಲಿಮಣೆಯಿಂದ ಕೈ ತೆಗೆದವ ಶಬ್ದ ನಿಶ್ಯಬ್ದವಾಗುವ ಪರಿ ನೆನೆಯುತ್ತ ಅಚ್ಚರಿಪಡುತ್ತೇನೆ.

ಮನಸೇ ಮನಸಿನ ಮನಸಾ ನಿಲ್ಲಿಸುವುದು ಎಂಬ ಶಿಶುನಾಳ ಶರೀಫಜ್ಜನ ಮಾತು ಮತ್ತೆ ಕೆಣಕುತ್ತದೆ. ಮನಸೆಂಬ ನಿತ್ಯ ಹರಿವ ನೀರಿಗೆ ನಿಲುಗಡೆಯಾದರೂ ಎಲ್ಲಿದೆ ಅಜ್ಜಾ? ಎಂದು ಮೌನವಾಗಿ ಕೇಳುತ್ತೇನೆ. ‘ಹೊರಗಿರುವ ಪರಿ ಎಲ್ಲಾ ಅಡಗಿಹುದೇ ಒಳಗೆ. ಹುಡುಕಿದರೆ ಕೀಲಿ ಕೈ ಸಿಗದೇ ಎದೆಯೊಳಗೆ...’ ಎಂಬ ಭಾವಗೀತೆ ನೆನಪಾಗುತ್ತದೆ. ಎಲ್ಲಿ ಹುಡುಕಲಿ? ಏನಂತ ಕೇಳಲಿ? ಮಾತಿಲ್ಲದೇ ಎಲ್ಲ ತಿಳಿಸುವ ಜಾಣೆಯಂತೆ ಈ ಮನಸು ಎಂದು ಬೈದುಕೊಂಡು ಸುಮ್ಮನಾಗುತ್ತೇನೆ. 

ಬರೆದ ಬಿಡಿಗನಸುಗಳನ್ನೆಲ್ಲ ಒಮ್ಮೆ ಓದಿ, ಕಂಪ್ಯೂಟರ್‌ ಆಫ್‌ ಮಾಡಿ, ಕ್ಷಣ ಕಾಲ ಮೌನವಾಗಿ ರೂಮನ್ನು ದಿಟ್ಟಿಸುತ್ತೇನೆ. ಸಾಲಾಗಿ ಕೂತ ಪುಸ್ತಕಗಳು, ಓದಿಸಿಕೊಳ್ಳಲು ಸಿದ್ಧವಾದ ಪತ್ರಿಕೆಗಳು, ಬರೆಯಲು ಸಿದ್ಧವಾದ ಪೆನ್ನುಗಳು, ಮಾತನಾಡೆಂದು ಆಹ್ವಾನಿಸುವ ಫೋನ್‌ ಮೌನವಾಗಿ ಕರೆಯುತ್ತವೆ. ಇನ್ನೆರಡು ತಾಸು ಕಳೆದರೆ ಗಂಟೆ ಐದಾಗಿರುತ್ತದೆ. ಮೆದುವಾಗಿ ನಡುಗಿಸುವ ಡಿಸೆಂಬರ್‌ ಚಳಿಯಲ್ಲಿ ಬೆಳಗಿನ ಮೊದಲ ಚಟುವಟಿಕೆಗಳ ಸದ್ದು ಕೇಳುವ ಸಮಯ ಅದು. ಈಗ ಮಲಗಿದರೆ ನಿದ್ದೆಯೂ ಬರದು, ಎದ್ದು ಕೂಡುವ ಮನಸ್ಸೂ ಬಾರದು ಅಂತ ಮಲಗುವ ವಿಚಾರ ಕೈ ಬಿಡುತ್ತೇನೆ.  

ಸದ್ದಾಗದಂತೆ ಬಾಗಿಲು ತೆರೆದು ಮಲಗಿದ್ದ ಮಕ್ಕಳನ್ನು ದಿಟ್ಟಿಸುತ್ತೇನೆ. ನಾನು ಬಂದೆನೆಂಬುದನ್ನು ಅದ್ಹೇಗೆ ಅರ್ಥ ಮಾಡಿಕೊಂಡಿತೋ ಏನೋ, ಸಣ್ಣವಳು ಮುಲುಗುತ್ತಾಳೆ. ಹತ್ತಿರ ಹೋಗಿ ಮೈದಡವುತ್ತೇನೆ. ನಿದ್ದೆಯಲ್ಲೇ ಬೆರಳ್ಹಿಡಿದುಕೊಂಡು ಹಾಗೇ ನಿದ್ದೆಗೆ ಜಾರುತ್ತಾಳೆ.  

ನನ್ನನ್ನು ದೂರ ಹೋಗದಂತೆ ಕಾಪಿಟ್ಟಿದ್ದು ಇಂಥ ಎಳೆ ಕೈಗಳಾ? ಅಥವಾ  ಸುನೀತ ಭಾವಗಳಾ? 

ಯೋಚಿಸುತ್ತ ಕೂತವನನ್ನು ಐದು ಗಂಟೆಗೆ ಮೊಬೈಲ್ ಅಲಾರಾಂ ಎಚ್ಚರಿಸುತ್ತದೆ. ಮಗಳಿಂದ ಕೈ ಬಿಡಿಸಿಕೊಂಡು, ಪ್ರಾತಃರ್ವಿಧಿಗಳತ್ತ ಗಮನ ಹರಿಸುತ್ತೇನೆ. ಐದೂವರೆಗೆ ಕಚೇರಿ ಕ್ಯಾಬ್‌ ಮನೆ ಮುಂದೆ ಬಂದು ನಿಂತ ಸದ್ದು. ಹುಷಾರಾಗಿ ಬಾಗಿಲು ಮುಚ್ಚಿ, ಕಿರ್‌ ಎನ್ನುವ ಗೇಟನ್ನು ಮೆಲ್ಲಗೇ ತೆರೆದು ವಾಹನ ಸೇರಿಕೊಳ್ಳುತ್ತೇನೆ.

ಅಲ್ಲಿ ಡ್ರೈವರ್‌ನ ನಿದ್ದೆಗಣ್ಣಿನ ಮುಗುಳ್ನಗು ಸ್ವಾಗತಿಸುತ್ತದೆ. 

ನಿನ್ನೆ ನಿದ್ದೆ ಆಗಲಿಲ್ವಾ? ಎಂದು ವಿಚಾರಿಸುತ್ತೇನೆ. ‘ಇಲ್ಲ ಸಾರ್‌. ರಾತ್ರಿಯೆಲ್ಲ ಬರೀ ಕ್ರೈಮ್‌ ಸುದ್ದಿಗಳೇ. ಒಂದು ಮರ್ಡರು, ಎರಡು ಕಳ್ಳತನ...’ ಆತ ವರದಿ ಒಪ್ಪಿಸುತ್ತ ಗಾಡಿ ಶುರು ಮಾಡುತ್ತಾನೆ. ನಿಮ್ಮ ನಿದ್ದೆಯಾಯ್ತಾ? ಎಂದು ಪ್ರಶ್ನಿಸುತ್ತಾನೆ.

ಇಲ್ಲ ಮಾರಾಯಾ ಎನ್ನುತ್ತೇನೆ. ಆದರೆ, ಮನಸ್ಸು ಯೋಚಿಸತೊಡಗುತ್ತದೆ: ನಾನೆಷ್ಟು ಮರ್ಡರ್‌ ಮಾಡಿದೆ? ಕಳ್ಳತನಗಳೆಷ್ಟು? 

ಗೊಂದಲಗೊಳ್ಳತೊಡಗಿದಾಗ ಚಂದ್ರಾಲೇಔಟ್‌ ಕಡೆಯಿಂದ ಪೂರ್ವದ ತಂಗಾಳಿ  ಮೆದುವಾಗಿ ತಾಕುತ್ತದೆ. ಕ್ಯಾಬ್‌ ಅತ್ತ ಕಡೆಗೇ ಶರವೇಗದಿಂದ ಧಾವಿಸುತ್ತದೆ. ಎಫ್‌.ಎಂ.ನಲ್ಲಿ ಮೆದು ಭಕ್ತಿಗೀತೆ. ‘ಅನು ದಿನ, ನಿನ್ನ ನೆನೆದು ನೆನೆದು, ಮನವೂ ನಿನ್ನಲಿ ನಿಲ್ಲಲಿ...’ 

ಅರೆ ಕ್ಷಣ ಕಣ್ಮುಚ್ಚುತ್ತೇನೆ. ಸುನೀತ ಭಾವವೊಂದು ತಂಗಾಳಿ ಜೊತೆಜೊತೆಗೆ ಆವರಿಸತೊಡಗುತ್ತದೆ. ಮನದೊಳಗೊಂದು ಪ್ರಶ್ನೆ ಎದ್ದು ನಿಲ್ಲುತ್ತದೆ: 

ನನ್ನನ್ನು ದೂರ ಹೋಗದಂತೆ ತಡೆದಿದ್ದು ಇದೇನಾ?   

- ಚಾಮರಾಜ ಸವಡಿ

ಅರ್ಥವಾಯಿತೆ?... ಅರ್ಥವಾಗದಿದ್ದೀತೆ?

21 Nov 2010

6 ಪ್ರತಿಕ್ರಿಯೆ
ಮಾತು ಮರೆತ ಕ್ಷಣ
ನಿನ್ನದೇ ನೆನಪು
ಅಲ್ಲೆಲ್ಲೋ ನೀನು
ಮೂಕವಾಗಿದ್ದೀ ಅಂತ

ದುಃಖ ಉಕ್ಕಿರಬೇಕು ಅಲ್ಲಿ
ನನ್ನ ಕಣ್ಣುಗಳು ಉಕ್ಕಿದವಿಲ್ಲಿ
ಹಿತ ನನಗೆ
ನಿನ್ನ ದುಃಖ ನನ್ನದಾಯಿತು ಅಂತ

ಕನಸಲ್ಲಿ ನಕ್ಕೆಯೇನೋ
ಇಲ್ಲಿ ಹೃದಯ ಹೂವಾಯಿತು
ನಿದ್ದೆಯಾಳದಲ್ಲೆಲ್ಲೋ
ನೆಮ್ಮದಿಯ ಹೊರಳು

ನಾನು ನಾನಾಗಿಲ್ಲ
ನೀನಾಗಿದ್ದೇನೆ
ನೀನು ನೀನಾಗಿಲ್ಲ
ನಾನಾಗಿದ್ದೀ

ಹೆಚ್ಚೇನ ಹೇಳಲಿ?
ಅಲ್ಲಿಯ ಕಿಚ್ಚು
ಇಲ್ಲಿ ಧಗಿಸುತ್ತದೆ
ಅಲ್ಲಿಯ ಕಣ್ಣೀರು
ಇಲ್ಲಿ ಹನಿಯುತ್ತದೆ
ಅಲ್ಲಿಯ ಖುಷಿಗೆ
ಇಲ್ಲಿ ಉಕ್ಕುತ್ತದೆ

ಅಲ್ಲಿಗೂ ಇಲ್ಲಿಗೂ
ಏನದು ನಂಟು
ಮಾಯೆಯೋ ಮಮತೆಯೋ
ಎಲ್ಲ ಮೀರಿದ
ಪ್ರೀತಿಯ ಒರತೆಯೋ

ಇದು
ಅಕ್ಷರ ಮೀರಿದ ಭಾವ

ಅರ್ಥವಾಯಿತೆ?
ಅರ್ಥವಾಗದಿದ್ದೀತೆ?

- ಚಾಮರಾಜ ಸವಡಿ

ಕೂಗಾಟ ಅಸಮರ್ಥತೆಯ ಸಂಕೇತ

4 Nov 2010

9 ಪ್ರತಿಕ್ರಿಯೆ
ಇಂಗ್ಲಿಷ್‌ನಲ್ಲಿ ಒಂದು ಮಾತಿದೆ: Bad carpenter quarrels with tools ಅಂತ. ಅಂದರೆ, ಕೆಲಸ ಬಾರದ ಬಡಗಿ ಉಪಕರಣಗಳೊಂದಿಗೆ ಗುದ್ದಾಡುತ್ತಾನೆ ಅಂತ. ಇದರರ್ಥ ಇಷ್ಟೇ: ವಿಷಯವೊಂದು ಅಥವಾ ಮಾಡುವ ವಿಧಾನ ಗೊತ್ತಿರದಿದ್ದಾಗ ಮನುಷ್ಯ ಹತಾಶನಾಗುತ್ತಾನೆ. ಉದ್ರಿಕ್ತನಾಗುತ್ತಾನೆ. ಷಂಡ ಸಿಟ್ಟು ಆವರಿಸಿಕೊಂಡು ಮಂಡೆ ಬಿಸಿಯಾಗುತ್ತದೆ. ಆಗ ತನಗಿಂತ ಚಿಕ್ಕವರ ಮೇಲೆ, ಕೆಳಗಿನವರ ಮೇಲೆ ಕೂಗಾಡಲು ಶುರು ಮಾಡುತ್ತಾನೆ.

ನಿಮಗೆ ಅನುಮಾನವಿದ್ದರೆ, ನಿಮ್ಮ ಸುತ್ತಮುತ್ತಲಿನ ವಾತಾವರಣವನ್ನೊಮ್ಮೆ ಸೂಕ್ಷ್ಮವಾಗಿ ಪರಿಶೀಲಿಸಿ. ನಿಮಗಿಂತ ಮೇಲಿನ ಅಧಿಕಾರಿ ಅಥವಾ ಹಿರಿಯ ವ್ಯಕ್ತಿಗೆ ಆಗಾಗ ಕೂಗಾಡುವ ಚಟ ಇದೆ ಎಂದರೆ, ಅದು ಅವನ ಅಸಮರ್ಥತೆಯ ಸಂಕೇತವಷ್ಟೇ. ತನಗೊಪ್ಪಿಸಿದ ಕೆಲಸ ಅವನಿಗೆ ಸರಿಯಾಗಿ ಗೊತ್ತಿರುವುದಿಲ್ಲ ಅಥವಾ ಅದನ್ನು ಸರಿಯಾಗಿ ಜಾರಿಗೊಳಿಸಲು ಆತ ಅಸಮರ್ಥನಾಗಿರುತ್ತಾನೆ.
 

ಯಾವುದೇ ಕಚೇರಿಗೆ ಹೋಗಿ ನೋಡಿದರೂ ಇಂಥ ಕೂಗುಮಾರಿಗಳು ಸಿಕ್ಕೇ ಸಿಗುತ್ತಾರೆ. ತಮಗಿಂತ ಕಿರಿಯರಾದವರ ಮೇಲೆ ಹರಿಹಾಯುವುದೇ ಅವರ ಫುಲ್‌ ಟೈಂ ಕೆಲಸ. ಹೀಗೆ ಕೂಗಾಡುವುದೇ ಸೀನಿಯಾರಿಟಿಯ ಮುಖ್ಯ ಲಕ್ಷಣ ಅಂತ ಕೆಲವರು ಅವರು ಅಂದುಕೊಂಡಿರುತ್ತಾರೆ. ಕೂಗಾಡದಿದ್ದರೆ ಕೆಲಸವಾಗುವುದಿಲ್ಲ ಎಂಬ ಭ್ರಮೆಯೂ ಅವರಿಗಿರುತ್ತದೆ. ತಾನೊಬ್ಬನೇ ಬುದ್ಧಿವಂತ, ಇತರರೆಲ್ಲ ದಡ್ಡರು ಎಂಬ ತನ್ನ ಭ್ರಮೆಯಿಂದಾಗಿ ಕೂಗಾಟ ಶುರುವಾಗಿದೆ ಎಂಬುದನ್ನೇ ಅವರು ಮರೆತಿರುತ್ತಾರೆ. ಕ್ರಮೇಣ ಕೂಗಾಟವೇ ಚಟವಾಗಿ, ಫುಲ್‌ಟೈಂ ಡ್ಯೂಟಿಯಾಗಿ ಬದಲಾಗುತ್ತದೆ. ಕಚೇರಿಗೆ ಬಂದ ಕೂಡಲೇ ಶುರುವಾಗುವ ಕೂಗು ರೋಗ ಮನೆಗೆ ಹೋದ ನಂತರವೂ ಮುಂದುವರಿಯುತ್ತದೆ.
 

ಇವರೆಲ್ಲ ನಿಜಕ್ಕೂ ಅತೃಪ್ತ ಆತ್ಮಗಳು. ಅವರಿಗೆ ಸ್ವಂತ ಬುದ್ಧಿ ಇರುವುದು ಕಡಿಮೆ. ಇರುವ ಅಲ್ಪ ಬುದ್ಧಿಯನ್ನು ಸರಿಯಾಗಿ ಬಳಸಿಕೊಳ್ಳುವ ದಾರಿ ಗೊತ್ತಿರುವ ಸಂಭವ ಇನ್ನೂ ಕಡಿಮೆ. ಇದೊಂಥರಾ ಅತ್ತೆ ಮನಃಸ್ಥಿತಿ. ಸೊಸೆಯನ್ನು ನೋಡಿದ ಕೂಡಲೇ ಹೇಗೆ ಅತ್ತೆಯ ನಾಲಿಗೆ ಕಡಿಯತೊಡಗುತ್ತದೋ ಹಾಗೆ ತಮಗಿಂತ ಕಿರಿಯರನ್ನು ನೋಡಿದ ತಕ್ಷಣ ಇವರ ನಾಲಿಗೆ ಕಡಿಯತೊಡಗುತ್ತದೆ. ಸಣ್ಣ ಸಣ್ಣ ವಿಷಯಗಳಿಗೂ ದೊಡ್ಡ ದನಿಯಲ್ಲಿ ಕೂಗಾಡುತ್ತ, ಆ ಮೂಲಕ ತಮ್ಮ ಅಸಮರ್ಥತೆಯನ್ನು ಮುಚ್ಚಿಹಾಕಲು, ಅಧಿಕಾರ ಸ್ಥಾಪಿಸಲು ಮುಂದಾಗುತ್ತಾರೆ.
 

ಇಂಥವರನ್ನು ನೋಡಿದಾಗ ಮರುಕ ಎನಿಸುತ್ತದೆ. ಕೂಗಾಡುವುದಕ್ಕೂ ಮುನ್ನ, ಈ ವಿಷಯವನ್ನು ಸರಳವಾಗಿ ಪರಿಹರಿಸುವುದು ಹೇಗೆ ಎಂದು ಒಮ್ಮೆ ಯೋಚಿಸಿದರೂ ಸಾಕು, ಕೂಗಾಟ ತನಗೆ ತಾನೇ ಬಂದಾಗುತ್ತದೆ. ತನಗೆ ಗೊತ್ತಿರುವುದನ್ನು ಇತರರಿಗೆ ಕಲಿಸುವ, ಇತರರಿಗೆ ಗೊತ್ತಿರುವುದನ್ನು ತಾನು ಕಲಿಯುವ ವಿವೇಚನೆ ಮೂಡುತ್ತದೆ. ಸಮೃದ್ಧ ಮನಸ್ಸಿನ ಸಂಕೇತ ಅದು. ಅದಿಲ್ಲದಿದ್ದರೆ, ಬರೀ ಕೂಗಾಟ, ಹಾರಾಟ, ಚೀರಾಟ. ಖಾಲಿ ಡಬ್ಬ ಹೆಚ್ಚು ಶಬ್ದ ಮಾಡುವಂತೆ, ಟೊಳ್ಳು ಪ್ರತಿಭೆಗಳು ಕೂಗಾಡೋದೇ ಹೆಚ್ಚು.

ತಲೆ ಸರಿಯಾಗಿ ಕೆಲಸ ಮಾಡುತ್ತಿದ್ದರೆ ಅಲ್ಲಿ ಬಾಯಿಗೇನು ಕೆಲಸ?
 

- ಚಾಮರಾಜ ಸವಡಿ

ಮೌನ ಸಾಂಗತ್ಯ

3 Nov 2010

6 ಪ್ರತಿಕ್ರಿಯೆ
ತಾನು ಬೀಸಿಯೇ ಇಲ್ಲ ಎಂಬಂತೆ
ಗಾಳಿ ಸುಮ್ಮನಾಯಿತು

ತಾನು ಉಕ್ಕಿಯೇ ಇಲ್ಲ ಎಂಬಂತೆ
ಕಡಲು ಸುಮ್ಮನಾಯಿತು

ಆದರೆ,
ಬೋರಲು ಬಿದ್ದ ತೆಂಗಿನ ಮರಕ್ಕೆ
ಹಾಗೆ ಅಂದುಕೊಳ್ಳಲು ಆಗಲಿಲ್ಲ

ನನ್ನ ಸ್ಥಿತಿಯೂ ಅದೇ

ಪ್ರೀತಿಸಿಯೇ ಇಲ್ಲ ಎಂದು ಹೇಗೆ ಹೇಳಲಿ?

- ಚಾಮರಾಜ ಸವಡಿ

ಕರ್ನಾಟಕ ಏಕೀಕರಣ

1 Nov 2010

2 ಪ್ರತಿಕ್ರಿಯೆ

ಮೂವತ್ತು ಜಿಲ್ಲೆಗಳು, ೧೭೫ ತಾಲ್ಲೂಕುಗಳು, ೨೭,೦೨೮ ಕಂದಾಯ ಗ್ರಾಮಗಳು, ಆರು ಕೋಟಿ ಜನ, ,೯೧,೧೯೧ ಚದರ ಕಿಮೀ ವಿಸ್ತೀರ್ಣ, ಒಂದು ರಾಜ್ಯ-

ಅದು ಕರ್ನಾಟಕ.

ಇವತ್ತು ಯಾವುದನ್ನು ನಾವು ವಿಶಾಲ ಕರ್ನಾಟಕ, ಅಖಂಡ ಕರ್ನಾಟಕ ಎಂದು ಕರೆಯುತ್ತೇವೆಯೋ ಅದು ಐದೂವರೆ ದಶಕಗಳ ಹಿಂದೆ ಸುಮಾರು ೨೦ ವಿವಿಧ ಪ್ರಾಂತ್ಯಗಳಲ್ಲಿ ಹರಿದು ಹಂಚಿಹೋಗಿತ್ತು. ಕರ್ನಾಟಕ ಎಂಬುದು ಅಸ್ತಿತ್ವದಲ್ಲೇ ಇರಲಿಲ್ಲ ಎಂದರೆ ಅಚ್ಚರಿಯಾಗುತ್ತಿದೆಯೆ?

ಕನ್ನಡ ಮಾತನಾಡುವ ಜನರೆಲ್ಲ ಒಂದೇ ಪ್ರದೇಶಕ್ಕೆ ಸೇರಬೇಕೆಂಬ ಕನಸು ಮೊಳೆತಾಗ ಪರಿಸ್ಥಿತಿ ಹೇಗಿತ್ತೆಂದರೆ, ನಮ್ಮಲ್ಲಿ ಸ್ವಂತಿಕೆ ಎಂಬುದೇ ಇರಲಿಲ್ಲ. ಇದು ನಮ್ಮ ನೆಲ ಎಂದು ಹೇಳಿಕೊಳ್ಳಲು ಮೈಸೂರು ಸಂಸ್ಥಾನ ಹೊರತುಪಡಿಸಿ ಬೇರೆ ನಿರ್ದಿಷ್ಟ ಪ್ರದೇಶವೇ ಇದ್ದಿಲ್ಲ. ಉಳಿದ ಪ್ರಾಂತ್ಯಗಳ ಆಡಳಿತದಲ್ಲಿ ಕನ್ನಡ, ಕನ್ನಡಿಗರಿಗೆ ಪ್ರಾಧಾನ್ಯತೆ ಇದ್ದಿಲ್ಲ. ಭಾಷೆ ಅಷ್ಟೇ ಅಲ್ಲ, ಪ್ರಾದೇಶಿಕ ಪ್ರಗತಿಯಲ್ಲಿ ಕೂಡ ಅಸಮಾನತೆ ಇತ್ತು. ಕನ್ನಡಿಗರು ಪರಕೀಯರಂತೆ ಜೀವನ ನಡೆಸುವ ಅಸಹನೀಯ ಪರಿಸ್ಥಿತಿ ಇತ್ತು.

ಪ್ರಾತಃಸ್ಮರಣೀಯರು

ಈ ಸಂದರ್ಭದಲ್ಲಿ ಕನ್ನಡದ ಪರವಾಗಿ ಕೆಲಸ ಮಾಡಿದ ಕೆಲ ಮಹನೀಯರನ್ನು ನೆನೆಯಲೇಬೇಕು. ಸರ್ ವಾಲ್ಟರ್ ಎಲಿಯಟ್, ಸರ್ ಥಾಮಸ್ ಮನ್ರೋ, ಜಾನ್ ಎ. ಡನ್‌ಲಪ್, ಗ್ರೀನ್ ಹಿಲ್, ಆರ್. ಗ್ರಾಂಟ್, ಡಬ್ಲ್ಯು.ಎ. ರಸೆಲ್, ಜೆ.ಎಫ್. ಫ್ಲೀಟ್‌ರಂತಹ ಬ್ರಿಟಿಷ್ ಅಧಿಕಾರಿಗಳು ಕನ್ನಡ ಕಟ್ಟುವ ಕೆಲಸ ಮಾಡಿದರು. ಅವರಿಗೆ ಕೈ ಜೋಡಿಸಿದ್ದು ಡೆಪ್ಯುಟಿ ಚೆನ್ನಬಸಪ್ಪನವರಂತಹ ಕನ್ನಡಿಗ ಅಧಿಕಾರಿ. ಜೊತೆಗೆ, ರಾ.ಹ. ದೇಶಪಾಂಡೆ, ರೊದ್ದ ಶ್ರೀನಿವಾಸರಾವ್, ಆಲೂರು ವೆಂಕಟರಾವ್ ಮುಂತಾದ ಹಿರಿಯರು ಕನ್ನಡ ಮಾತನಾಡುವ ಜನರೆಲ್ಲರನ್ನೂ ಹೊಂದಿರುವ ಒಂದು ಪ್ರಾಂತ್ಯ ರಚನೆಯಾಗಬೇಕೆಂದು ಕನಸು ಕಂಡರು.

ಕರ್ನಾಟಕ ಏಕೀಕರಣದ ಕನಸು ಮೊಳೆತಿದ್ದು ಹೀಗೆ. ಜೊತೆಗೆ, ಇಂಥದೊಂದು ಕನಸು ಮೊಳೆಯಲು ಕೆಲ ಐತಿಹಾಸಿಕ ಘಟನೆಗಳೂ ಕಾರಣವಾಗಿವೆ.

೧೯೦೫ರ ಆಗಸ್ಟ್ ೧೬ರಂದು ಆಗಿನ ಬ್ರಿಟಿಷ್ ಸರ್ಕಾರ ಬಂಗಾಳ ರಾಜ್ಯದ ವಿಭಜನೆಗೆ ಮುಂದಾಯಿತು. ಇದನ್ನು ಪ್ರತಿಭಟಿಸಿದ ಬಂಗಾಳಿಗಳು ವಂಗಭಂಗಎಂದು ದೊಡ್ಡ ಚಳವಳಿಯನ್ನೇ ರೂಪಿಸಿದರು. ಹೋರಾಟ ತೀವ್ರಗೊಂಡಾಗ, ಮಣಿದ ಬ್ರಿಟಿಷ್ ಸರ್ಕಾರ ೧೯೧೨ರಲ್ಲಿ ಬಂಗಾಳವನ್ನು ಪುನಃ ಒಂದು ಮಾಡಿತು. ಕನ್ನಡಿಗರನ್ನು ಒಂದೆಡೆ ಸೇರಿಸುವ ಕೆಲ ಪ್ರಾತಃಸ್ಮರಣೀಯರಿಗೆ ಈ ಘಟನೆ ದೊಡ್ಡ ಪ್ರೇರಣೆಯಾಯಿತು.

ಕರ್ನಾಟಕ ವಿದ್ಯಾವರ್ಧಕ ಸಂಘ

ಮುಂದೆ ಕ್ರಮೇಣ, ಕರ್ನಾಟಕ ಏಕೀಕರಣಕ್ಕೆ ಈ ನಾಯಕರು ಆಗ್ರಹಿಸತೊಡಗಿದರು. ಕರ್ನಾಟಕ ರೂಪುಗೊಳ್ಳಲು ಕಾರಣರಾದವರ ಪೈಕಿ ಒಬ್ಬರಾದ ರಾ.ಹ. ದೇಶಪಾಂಡೆ ಹಾಗೂ ಕೆಲವು ಸಮಾನ ಮನಸ್ಕರು ಒಂದೆಡೆ ಸೇರಿದರು. ಕನ್ನಡ ಭಾಷೆಯ ದುಃಸ್ಥಿತಿ ದೂರ ಮಾಡಲೆಂದು ೨೦-೭-೧೮೯೦ರಲ್ಲೇ ಕರ್ನಾಟಕ ವಿದ್ಯಾವರ್ಧಕ ಸಂಘವನ್ನು ಧಾರವಾಡದಲ್ಲಿ ಸ್ಥಾಪಿಸಿದ್ದರು.

ಕನ್ನಡದಲ್ಲಿ ಶಿಕ್ಷಣ ಪ್ರಸಾರಕ್ಕೆ ಪ್ರೋತ್ಸಾಹ, ಪ್ರಾಚೀನ ಕನ್ನಡ ಕೃತಿಗಳ ಸಂಪಾದನೆ ಮತ್ತು ಪ್ರಕಟಣೆ, ಕನ್ನಡದಲ್ಲಿ ಸ್ವತಂತ್ರ ಕೃತಿಗಳ ರಚನೆ, ಉತ್ತಮ ಮತ್ತು ಉಪಯುಕ್ತ ಕೃತಿಗಳ ಅನುವಾದ ಮತ್ತು ಪ್ರಕಟಣೆಗೆ ಪ್ರೋತ್ಸಾಹ, ಗ್ರಂಥ ಭಂಡಾರಗಳ ಸ್ಥಾಪನೆ ಮತ್ತು ನಿರ್ವಹಣೆಗೆ ನೆರವು ನೀಡುವುದು ಸಂಸ್ಥೆಯ ಮೂಲ ಉದ್ದೇಶವಾಗಿತ್ತು.

ಈ ಉದ್ದೇಶಗಳನ್ನು ಸಾಧಿಸುವುದರ ಜೊತೆಗೆ ಸಂಘ ೧೮೯೬ರಲ್ಲಿ ವಾಗ್ಭೂಷಣಎಂಬ ಮಾಸಪತ್ರಿಕೆ ಆರಂಭಿಸಿತು. ಆ ಮೂಲಕ ವಿವಿಧ ಲೇಖಕರ ಪ್ರಬುದ್ಧ ಲೇಖನಗಳನ್ನು ಪ್ರಕಟಿಸಿ, ಚಿಂತನೆಗಳ ವಿನಿಮಯಕ್ಕೆ ನೆರವಾಯಿತು. ಲೇಖಕರನ್ನು ಬೆಳೆಸಿದ ಸಂಘ, ಕನ್ನಡ ಗ್ರಂಥಗಳ ಭಾಷೆಯಲ್ಲಿ ಏಕರೂಪತೆ ಇರಬೇಕೆಂಬ ಕಾರಣದಿಂದ ೧೯೦೭ರ ಜೂನ್ ತಿಂಗಳ ಮೊದಲ ವಾರದಲ್ಲಿ ಧಾರವಾಡದಲ್ಲಿ ಅಖಿಲ ಕರ್ನಾಟಕ ಗ್ರಂಥಕರ್ತರ ಮೊದಲ ಸಮ್ಮೇಳನವನ್ನು ಯಶಸ್ವಿಯಾಗಿ ನಡೆಸಿತು.

ಕನ್ನಡ ಸಾಹಿತ್ಯ ಪರಿಷತ್ತು

ಎರಡನೆಯ ಸಮ್ಮೇಳನವನ್ನು ಮೈಸೂರು ಸರ್ಕಾರದ ಶಿಕ್ಷಣ ಇಲಾಖೆ ಬೆಂಗಳೂರಿನಲ್ಲಿ ನಡೆಸಬೇಕಾಗಿತ್ತು. ಅದು ಸಾಧ್ಯವಾಗಲಿಲ್ಲ. ಮೂರನೆಯ ಸಮ್ಮೇಳನವನ್ನಾದರೂ ಬೆಂಗಳೂರಿನಲ್ಲಿ ನಡೆಸಬೇಕು ಎಂಬ ಪ್ರಯತ್ನದ ಫಲವಾಗಿ ೧೯೧೫ರಲ್ಲಿ ಸ್ಥಾಪನೆಯಾದದ್ದು ಕರ್ನಾಟಕ ಸಾಹಿತ್ಯ ಪರಿಷತ್ತು. ನಂತರ ಇದು ಕನ್ನಡ ಸಾಹಿತ್ಯ ಪರಿಷತ್ತು ಎಂದು ಹೆಸರು ಬದಲಾಯಿಸಿಕೊಂಡಿತು. ಸಾಹಿತ್ಯ ಸಮ್ಮೇಳನಗಳ ಸಂದರ್ಭದಲ್ಲಿ ಕರ್ನಾಟಕ ಏಕೀಕರಣದ ಪರವಾಗಿ ದನಿ ಎತ್ತುವ ಮೂಲಕ ಏಕೀಕರಣದ ಬೇಡಿಕೆಗೆ ಪರಿಷತ್ತು ವೇದಿಕೆ ಕಲ್ಪಿಸಿತು.

ಕರ್ನಾಟಕ ಕುಲ ಪುರೋಹಿತ

ಎಲ್ಲರಿಗಿಂತ ಪ್ರಮುಖ ಸ್ಥಾನದಲ್ಲಿ ನಿಲ್ಲುವ ವ್ಯಕ್ತಿ ಎಂದರೆ ಆಲೂರು ವೆಂಕಟರಾಯರು. ಕರ್ನಾಟಕ ಏಕೀಕರಣದ ಬಗ್ಗೆ ಕನಸು ಕಂಡಿದ್ದಲ್ಲದೇ ಅದರ ಸಾಕಾರಕ್ಕೆ ದುಡಿದ ಹಿರಿಯ ಜೀವ ಇದು. ಆದ್ದರಿಂದಲೇ ಅವರು ಕರ್ನಾಟಕ ಕುಲ ಪುರೋಹಿತಎನಿಸಿಕೊಂಡರು. ಕರ್ನಾಟಕದ ಗತವೈಭವಗ್ರಂಥ ರಚಿಸಿದ ಆಲೂರು ವೆಂಕಟರಾಯರು, ’ಕರ್ನಾಟಕ ಹೊರಗಟ್ಟದ ಹೊರತು ನಾನು ಕರ್ನಾಟಕವನ್ನು ಬಿಡುವುದಿಲ್ಲಎಂಬ ಪ್ರತಿಜ್ಞೆ ಮಾಡಿದ್ದರು. ಕರ್ನಾಟಕ ಏಕೀಕರಣದ ಪರವಾಗಿ ನಿರಂತರ ಹೋರಾಟ ನಡೆಸಿದ ಮಹಾನ್ ವ್ಯಕ್ತಿ ಇವರು.

ಆಲೂರು ವೆಂಕಟರಾಯರು, ಗದಿಗೆಯ್ಯ ಹೊನ್ನಾಪುರಮಠ ಮತ್ತು ಕಡಪಾ ರಾಘವೇಂದ್ರರಾಯರು ಸೇರಿ ೧೯೧೬ರಲ್ಲಿ ಸ್ಥಾಪಿಸಿದ ಕರ್ನಾಟಕ ಸಭೆಕರ್ನಾಟಕ ಏಕೀಕರಣದ ಬೇಡಿಕೆಗೆ ಇಂಬು ಕೊಟ್ಟಿತು. ರಾಜಕೀಯ ಬೆಂಬಲವನ್ನೂ ಪಡೆದಿದ್ದ ಕರ್ನಾಟಕ ಸಭೆಯ ಏಕೀಕರಣದ ವಿಷಯದಲ್ಲಿ ಹಲವಾರು ಹೋರಾಟಗಳನ್ನು ನಡೆಸಿತು. ಇದರ ಪ್ರೇರಣೆಯಿಂದ ನಾಡಹಬ್ಬಗಳು ನಡೆದವು. ಸಕ್ಕರಿ ಬಾಳಾಚಾರ್ಯ, ಡಾ. ಯು. ರಾಮರಾವ್, ಮುದವೀಡು ಕೃಷ್ಣರಾವ್, ಕಡಪಾ ರಾಘವೇಂದ್ರ ರಾವ್, ಮಂಗಳವೇಡೆ ಶ್ರೀನಿವಾಸರಾವ್ ಮುಂತಾದ ಹಿರಿಯರು ಸಭೆಯ ಜೊತೆ ಗುರುತಿಸಿಕೊಂಡಿದ್ದರು.

೧೯೧೮ರಲ್ಲೇ ಭಾರತದಲ್ಲಿ ಭಾಷಾವಾರು ಪ್ರಾಂತ ರಚನೆಯ ಸಂಬಂಧ ಮಾಂಟೆಗ್ಯೂ-ಚೆಲ್ಮ್ಸ್‌ಫರ್ಡ್ ಸಮಿತಿ ನೇಮಕಗೊಂಡಿತ್ತು. ಆ ಸಮಿತಿಯು ದೇಶವನ್ನು ಭಾಷಾವಾರು ಪ್ರಾಂತ್ಯಗಳನ್ನಾಗಿ ವಿಭಾಗಿಸುವುದು ಅಗತ್ಯ ಎಂದು ಶಿಫಾರಸು ಮಾಡಿತು. ಇದನ್ನು ಆಗಿನ ಬ್ರಿಟಿಷ್ ಸರ್ಕಾರ ಕೂಡ ಒಪ್ಪಿಕೊಂಡಿತ್ತು.
 
೧೯೨೦ರಲ್ಲಿ ಮಹಾರಾಷ್ಟ್ರದ ನಾಗಪುರದಲ್ಲಿ ನಡೆದ ಕಾಂಗ್ರೆಸ್ ಮಹಾಧಿವೇಶನ ಏಕೀಕರಣದ ನಿಟ್ಟಿನಲ್ಲಿ ಒಂದು ಮಹತ್ವದ ವೇದಿಕೆ. ಕರ್ನಾಟಕ ಪ್ರತಿನಿಧಿಗಳ ಒತ್ತಡಕ್ಕೆ ಮಣಿದು, ಬ್ರಿಟಿಷ್ ಆಳ್ವಿಕೆಗೆ ಸೇರಿದ್ದ ಕನ್ನಡ ಭಾಷಿಕ ಪ್ರದೇಶಗಳನ್ನು ಕರ್ನಾಟಕ ಕಾಂಗ್ರೆಸ್ ಸಮಿತಿಯ ವ್ಯಾಪ್ತಿಗೆ ಸೇರಿಸಲಾಯಿತು. ಆಗ ತಲೆ ಎತ್ತಿದ್ದು ಬಳ್ಳಾರಿ ಜಿಲ್ಲೆಯನ್ನು ಯಾವ ಪ್ರದೇಶಕ್ಕೆ ಸೇರಿಸಬೇಕೆಂಬುದು. ಈ ಸಮಸ್ಯೆ ನಿವಾರಿಸಲು ನೇಮಿಸಲ್ಪಟ್ಟ ಕೇಳ್ಕರ್ ಅವರ ವರದಿಯ ಪ್ರಕಾರ, ಆಲೂರು, ಆದವಾನಿ ಮತ್ತು ರಾಯದುರ್ಗ ತಾಲ್ಲೂಕುಗಳನ್ನು ಹೊರತುಪಡಿಸಿ, ಉಳಿದ ಬಳ್ಳಾರಿ ಜಿಲ್ಲೆಯು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ವ್ಯಾಪ್ತಿಗೆ ಸೇರಿತು.

ಏಕೀಕರಣಕ್ಕೆ ವೇದಿಕೆಯಾದ ಬೆಳಗಾವಿ ಅಧಿವೇಶನ

೧೯೨೪ರಲ್ಲಿ ಬೆಳಗಾವಿಯಲ್ಲಿ ಮಹಾತ್ಮಾ ಗಾಂಧಿ ಅವರ ಅಧ್ಯಕ್ಷತೆಯಲ್ಲಿ ನಡೆದ ರಾಷ್ಟ್ರೀಯ ಕಾಂಗ್ರೆಸ್‌ನ ಮಹಾಧಿವೇಶನದ ಸಂದರ್ಭದಲ್ಲಿ ಕರ್ನಾಟಕ ಏಕೀಕರಣಕ್ಕೆ ವಿಶೇಷ ಚಾಲನೆ ದೊರೆಯಿತು. ಕರ್ನಾಟಕ ಸಭೆಯ ಮೊದಲ ಪರಿಷತ್ತು ಬೆಳಗಾವಿಯಲ್ಲಿ ೨೫-೧೨-೧೯೨೪ರಂದು, ಸರ್ ಸಿದ್ದಪ್ಪ ಕಂಬಳಿಯವರ ಅಧ್ಯಕ್ಷತೆಯಲ್ಲಿ ನಡೆಯಿತು. ಆ ಸಂದರ್ಭದಲ್ಲಿ ಹುಯಿಲಗೋಳ ನಾರಾಯಣರಾಯರು ರಚಿಸಿದಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡುಗೀತೆಯನ್ನು ಮೊದಲ ಬಾರಿಗೆ ಹಾಡಲಾಯಿತು.

ಮದ್ರಾಸ್ ಮತ್ತು ಮುಂಬಯಿ ಆಧಿಪತ್ಯದ ವಿಧಾನ ಸಭೆಗಳಲ್ಲೂ ಕರ್ನಾಟಕ ಏಕೀಕರಣದ ವಿಷಯ ಪ್ರಸ್ತಾಪಿತಗೊಂಡಿತು. ಮದ್ರಾಸ್ ವಿಧಾನ ಸಭೆಯಲ್ಲಿ ಎ. ರಂಗನಾಥ ಮೊದಲಿಯಾರ್, ಜೆ.ಎ. ಸಲ್ಡಾನ, ಎ.ಬಿ. ಶೆಟ್ಟಿ, ಡಾ. ನಾಗನಗೌಡ ಮುಂತಾದ ಸದಸ್ಯರು ಕರ್ನಾಟಕ ಏಕೀಕರಣವನ್ನು ಬೆಂಬಲಿಸಿದರೂ ಸರ್ಕಾರ ಅದನ್ನು ತಿರಸ್ಕರಿಸಿತು. ಮುಂಬಯಿ ವಿಧಾನ ಸಭೆಯಲ್ಲಿ ೧೯೧೯ರಲ್ಲಿ ವಿ.ಎನ್. ಜೋಗ್ ಕರ್ನಾಟಕ ಪ್ರಾಂತ ರಚನೆಗೆ ಕೋರಿ ಠರಾವು ಮಂಡಿಸಿದ್ದರು. ಆದರೆ, ಅದು ತಿರಸ್ಕೃತವಾಯಿತು. ೧೯೨೬ರಲ್ಲಿ ಸರ್ ಸಿದ್ದಪ್ಪ ಕಂಬಳಿ ಪುನಃ ಕರ್ನಾಟಕ ಪ್ರಾಂತ ರಚನೆಗೆ ಠರಾವು ಮಂಡಿಸಿದರಾದರೂ, ಏಕೀಕರಣಕ್ಕೆ ಕನ್ನಡಿಗರ ಬೆಂಬಲವಿಲ್ಲ ಎಂಬ ಕಾರಣ ನೀಡಿ ಸರ್ಕಾರ ಠರಾವನ್ನು ತಿರಸ್ಕರಿಸಿತು.

ಕೊನೆಗೆ ಮುಹೂರ್ತ ಕೂಡಿ ಬಂದಿದ್ದು ೧೯೩೮ರ ಮೇ ತಿಂಗಳ ಮೊದಲ ವಾರ. ಆಗ ನಡೆದ ಮುಂಬಯಿ ಶಾಸನ ಸಭೆ ಕರ್ನಾಟಕ ಏಕೀಕರಣ ಗೊತ್ತುವಳಿಯನ್ನು ಸ್ವೀಕರಿಸಿತು. ಚರ್ಚೆಯಲ್ಲಿ ಪಾಲ್ಗೊಂಡಿದ್ದ ಬಿ.ಜಿ. ಖೇರ್, ಸರ್ ಸಿದ್ದಪ್ಪ ಕಂಬಳಿ, ವಿ.ಎನ್. ಜೋಗ್ ಗೊತ್ತುವಳಿಯನ್ನು ಅನುಮೋದಿಸಿದರು. ಆದರೆ, ಎರಡನೇ ಜಾಗತಿಕ ಯುದ್ಧ ಪ್ರಾರಂಭವಾಗಿದ್ದರಿಂದ ಭಾಷಾವಾರು ಪ್ರಾಂತ ರಚನೆ ಆಗಲಿಲ್ಲ.

ಸಮಗ್ರ ಕರ್ನಾಟಕದ ಕನಸು

೨೫-೧೨-೧೯೪೪ರಂದು ಧಾರವಾಡದಲ್ಲಿ ೯ನೆಯ ಕರ್ನಾಟಕ ಏಕೀಕರಣ ಪರಿಷತ್ತು ಸಮಾವೇಶದಲ್ಲಿ ಸ್ವಾಗತಾಧ್ಯಕ್ಷರಾಗಿದ್ದ ಎಸ್.ಎಸ್. ಮಳೀಮಠ್, ಕರ್ನಾಟಕ ಏಕೀಕರಣವೆಂದರೆ, ಬ್ರಿಟಿಷ್ ಕರ್ನಾಟಕ ಪ್ರಾಂತಗಳಷ್ಟೇ ಅಲ್ಲ, ಸಂಸ್ಥಾನಗಳೂ ಸೇರಿದಂತೆ ಸಮಗ್ರ ಕರ್ನಾಟಕದ ಏಕೀಕರಣ ಎಂದು ಸಾರಿದರು.

೩೧-೮-೧೯೪೬ರಂದು ದಾವಣಗೆರೆಯಲ್ಲಿ ನಡೆದ ಕರ್ನಾಟಕಸ್ಥರ ಮಹಾಸಭೆಯಲ್ಲಿ ಅಧ್ಯಕ್ಷತೆ ವಹಿಸಿದ್ದ ಮುಂಬಯಿ ಆಧಿಪತ್ಯದ ಕೃಷಿ ಮಂತ್ರಿ ಎಂ.ಪಿ. ಪಾಟೀಲರು ಭಾರತಕ್ಕೆ ಸ್ವಾತಂತ್ರ್ಯವು ಹೇಗೋ ಹಾಗೆ ಕರ್ನಾಟಕಕ್ಕೆ ಸ್ವಾಯತ್ತತೆಎಂದು ಘೋಷಿಸಿದರು. ಕರ್ನಾಟಕ ಏಕೀಕರಣಕ್ಕೆ ಕೆಲವು ಸಂಸ್ಥಾನಿಕರು ಅಡ್ಡಿಯಾಗಿದ್ದಾರೆ ಎಂಬ ಅಭಿಪ್ರಾಯದ ಹಿನ್ನೆಲೆಯಲ್ಲಿ ಬಳ್ಳಾರಿಯ ಕೋ. ಚೆನ್ನಬಸಪ್ಪ ಸಾಧ್ಯವಾದರೆ ಮೈಸೂರನ್ನು ಒಳಗೊಂಡು, ಅಗತ್ಯವಾದರೆ ಅದನ್ನು ಬಿಟ್ಟು ಕರ್ನಾಟಕ ಏಕೀಕರಣವಾಗಬೇಕುಎಂಬ ಗೊತ್ತುವಳಿ ಮಂಡಿಸಿದರು.

ಆದರೆ, ಕೆಂಗಲ್ ಹನುಮಂತಯ್ಯನವರು ಮೈಸೂರನ್ನು ಒಳಗೊಂಡು ಕರ್ನಾಟಕ ರಾಜ್ಯ ನಿರ್ಮಾಣವಾಗಬೇಕುಎಂದು ಗೊತ್ತುವಳಿಗೆ ತಿದ್ದುಪಡಿ ತಂದರು. ಗೊತ್ತುವಳಿಯನ್ನು ಜಾರಿಗೆ ತರಲು ಎಂ.ಪಿ. ಪಾಟೀಲ, ಎಸ್. ನಿಜಲಿಂಗಪ್ಪ ಮತ್ತು ಕೆ.ಬಿ. ಜಿನರಾಜ ಹೆಗ್ಗಡೆ ಅವರಿದ್ದ ಸಮಿತಿ ರಚನೆಯಾಯಿತು.

ಸ್ವತಂತ್ರ ರಾಜ್ಯದತ್ತ...

ಮುಂಬಯಿ ಶಾಸನ ಸಭೆಯಲ್ಲಿ ೧-೪-೧೯೪೭ರಂದು ರೋಣದ ಅಂದಾನಪ್ಪ ದೊಡ್ಡಮೇಟಿ ಅವರು ಪ್ರತ್ಯೇಕ ಕರ್ನಾಟಕ ಪ್ರಾಂತ್ಯ ರಚನೆಗೆ ಒತ್ತಾಯಿಸಿ ಖಾಸಗಿ ಗೊತ್ತುವಳಿ ಮಂಡಿಸಿದರು. ಕೆಲವು ತಿದ್ದುಪಡಿಗಳೊಂದಿಗೆ ಗೊತ್ತುವಳಿಯು ೬೦ ಮತಗಳನ್ನು ಪಡೆದು ಸ್ವೀಕೃತವಾಯಿತು. ವಿರುದ್ಧ ಬಂದದ್ದು ಕೇವಲ ಆರು ಮತಗಳು. ಮದ್ರಾಸ್ ಶಾಸನ ಸಭೆಯಲ್ಲಿಯೂ ಡಾ. ಪಿ. ಸುಬ್ಬರಾಯನ್ ಭಾಷಾವಾರು ಪ್ರಾಂತ್ಯ ರಚನೆಯ ಸಂಬಂಧ ಮಂಡಿಸಿದ ಗೊತ್ತುವಳಿ ಸ್ವೀಕೃತವಾಯಿತು.

ಸ್ವತಂತ್ರ ಭಾರತದ ಸಂವಿಧಾನದ ರಚನೆಗೆ ಸೇರಿದ್ದ ಘಟನಾ ಸಮಿತಿಯ ಮೇಲೂ ಭಾಷಾವಾರು ಪ್ರಾಂತ್ಯ ರಚನೆಗೆ ಒತ್ತಡ ಹೆಚ್ಚಿತು. ಅಂದಿನ ಘಟನಾ ಸಮಿತಿಯ ಸಭೆಯಲ್ಲೇ ಭಾಷಾವಾರು ಪ್ರಾಂತ್ಯ ರಚನೆ ಕುರಿತು ವರದಿ ಸಿದ್ಧಪಡಿಸಲು ಉಪ ಸಮಿತಿಯೊಂದರ ರಚನೆಯಾಯಿತು.

೧೯೪೭ರ ಆಗಸ್ಟ್ ೧೫ರಂದು ಭಾರತ ಸ್ವತಂತ್ರವಾಯಿತು. ಆದರೆ, ಭಾರತ ಒಕ್ಕೂಟದ ಜೊತೆ ಮೈಸೂರು ಸಂಸ್ಥಾನ ಸೇರ್ಪಡೆಯಾಗಿದ್ದು ೧೯೪೭ರ ಅಕ್ಟೋಬರ್ ೨೪ರಂದು. ಹೈದರಾಬಾದ್ ಕರ್ನಾಟಕದ ಸೇರ್ಪಡೆ ೧೯೪೮ರ ಸೆಪ್ಟೆಂಬರ್ ೧೭ರಂದು.

ಜೂನ್ ೧೭ರಂದೇ ೧೯೪೮ರಂದೇ ಭಾಷಾವಾರು ಪ್ರಾಂತ್ಯ ರಚನೆಗೆ ಸಂಬಂಧಿಸಿದಂತೆ ವರದಿ ನೀಡಲು, ಅಲಹಾಬಾದ್ ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ಎಸ್.ಕೆ. ಧರ್ ಅಧ್ಯಕ್ಷತೆಯಲ್ಲಿ ಆಯೋಗ ನೇಮಿಸಿತ್ತು. ಆದರೆ, ವರದಿ ಭಾಷಾವಾರು ಪ್ರಾಂತ್ಯ ರಚನೆ ವಿರುದ್ಧವಾಗಿ ಬಂತು.

ಕರ್ನಾಟಕ ಏಕೀಕರಣ ಪರಿಷತ್ತು

ನ್ಯಾಯಮೂರ್ತಿ ಧರ್ ಆಯೋಗದ ವರದಿಯನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಬೇಕಾದ ಸಮಿತಿಯಲ್ಲಿದ್ದ ಜವಹರಲಾಲ್ ನೆಹರು, ಸರ್ದಾರ್ ವಲ್ಲಭಭಾಯಿ ಪಟೇಲ್ ಮತ್ತು ಪಟ್ಟಾಭಿರಾಮಯ್ಯ ಕೂಡಾ ಆಯೋಗದ ಶಿಫಾರಸುಗಳನ್ನೇ ಎತ್ತಿ ಹಿಡಿಯಿತು. ಇದನ್ನು ಖಂಡಿಸಿ ರಾಜ್ಯದ ಎಲ್ಲೆಡೆ ಸಭೆ, ಸಮಾರಂಭ ಮತ್ತು ಸಮ್ಮೇಳನಗಳು ನಡೆದವು. ಕಾಂಗ್ರೆಸ್ ನಾಯಕರಿಂದ ಕರ್ನಾಟಕ ಏಕೀಕರಣ ಸಾಧ್ಯವಾಗದು ಎಂಬ ಅಭಿಪ್ರಾಯದಿಂದ ಪಕ್ಷೇತರ ಕರ್ನಾಟಕ ಏಕೀಕರಣ ಪರಿಷತ್ತು ಸ್ಥಾಪಿತವಾಗಿ, ಏಕೀಕರಣಕ್ಕೆ ಹೊಸ ತಿರುವು ಬಂದಿತು.

ಈ ಮಧ್ಯೆ ಆಂಧ್ರ ಪ್ರಾಂತ ರಚನೆಗೆ ಒತ್ತಾಯಿಸಿ, ೧೯೫೧ರ ಆಗಸ್ಟ್‌ನಲ್ಲಿ ಪೊಟ್ಟಿ ಶ್ರೀರಾಮುಲು ತಿರುಪತಿಯಲ್ಲಿ ೩೭ ದಿನಗಳ ಉಪವಾಸ ಮಾಡಿದರು. ನಂತರ ಎರಡನೆಯ ಬಾರಿಗೆ ಆಮರಣಾಂತ ಉಪವಾಸಕ್ಕೆ ಕೈಹಾಕಿದ ಪೊಟ್ಟಿ ಶ್ರೀರಾಮುಲು, ೫೮ ದಿನಗಳ ಉಪವಾಸ ಮಾಡಿ ನಿಧನರಾದರು. ಇದರಿಂದ ಎಚ್ಚೆತ್ತ ಲೋಕಸಭೆ, ಮದರಾಸ್ ನಗರವನ್ನು ಬಿಟ್ಟು ಆಂಧ್ರ ಪ್ರಾಂತ ರಚನೆಗೆ ನಿರ್ಧರಿಸಿತು. ಬಳ್ಳಾರಿ ತಾಲ್ಲೂಕಿನ ಬಗ್ಗೆ ಸ್ಪಷ್ಟ ಅಭಿಪ್ರಾಯ ಸಲ್ಲಿಸುವಂತೆ ರಾಷ್ಟ್ರಪತಿಗಳು ಹೈದರಾಬಾದ್‌ನ ಮುಖ್ಯ ನ್ಯಾಯಾಧೀಶ ಎಲ್.ಎಸ್. ಮಿಶ್ರಾ ಅವರಿಗೆ ಜವಾಬ್ದಾರಿ ಕೊಟ್ಟಿತು.

ಆಂಧ್ರಕ್ಕಿಂತ ಕರ್ನಾಟಕದ ಪರ ೯೦ ಮನವಿಗಳು ಹೆಚ್ಚಾಗಿ ಬಂದವು. ಜೊತೆಗೆ, ಕೊನೆಯ ಘಳಿಗೆಯಲ್ಲಿ ಕರ್ನಾಟಕದ ಖ್ಯಾತ ಇತಿಹಾಸ ತಜ್ಞ ಆರ್.ಎಸ್. ಪಂಚಮುಖಿ ಅವರ ಅಭಿಪ್ರಾಯವೂ ರಾಜ್ಯದ ಪರವಾಗಿಯೇ ಬಂದಿದ್ದರಿಂದ, ಬಳ್ಳಾರಿ ತಾಲ್ಲೂಕನ್ನು ಕರ್ನಾಟಕಕ್ಕೇ ಸೇರಿಸಲು ಮಿಶ್ರಾ ಶಿಫಾರಸು ಮಾಡಿದರು.

ಹುಬ್ಬಳ್ಳಿ ಗೋಲಿಬಾರ್

ಈ ಸಂದರ್ಭದಲ್ಲೇ, ಹುಬ್ಬಳ್ಳಿಯ ಸಮೀಪದ ಅದರಗುಂಚಿಯಲ್ಲಿ, ಶಂಕರಗೌಡ ಪಾಟೀಲರು ೨೮-೩-೧೯೫೩ರಂದು ಕರ್ನಾಟಕ ಏಕೀಕರಣಕ್ಕೆ ಆಗ್ರಹಿಸಿ ಆಮರಣಾಂತ ಉಪವಾಸ ಸತ್ಯಾಗ್ರಹ ಆರಂಭಿಸಿದರು. ೧೯-೪-೧೯೫೩ರಂದು ಹುಬ್ಬಳ್ಳಿಯಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಕಾರ್ಯಕಾರಿ ಸಮಿತಿಯ ಸಭೆ ನಡೆಯಲಿದ್ದ ವಿಷಯ ತಿಳಿದ ಕರ್ನಾಟಕ ಏಕೀಕರಣ ಕಾರ್ಯಕರ್ತರು ಬೆಳಗಿನಿಂದಲೇ ಗುಳಕವ್ವನ ಕಟ್ಟೆ ಮೈದಾನದಲ್ಲಿ ಗುಂಪುಗೂಡಿದರು. ಕಾಂಗ್ರೆಸ್ ನಾಯಕರಿಂದ ರಾಜೀನಾಮೆ ಪಡೆಯುವುದೇ ಅವರ ಉದ್ದೇಶವಾಗಿತ್ತು. ಪುರಸಭಾ ಭವನಕ್ಕೆ ಕಾಂಗ್ರೆಸ್ ನಾಯಕರು ಬರುತ್ತಿದ್ದಂತೆಯೇ ಅವರಿಗೆ ಅರಿಶಿನ ಹಚ್ಚಿ, ಕುಂಕುಮವಿಟ್ಟು, ಬಳೆ ತೊಡಿಸಿ ರಾಜೀನಾಮೆಗೆ ಒತ್ತಾಯಿಸುತ್ತಿದ್ದರು.

ಮೊದಮೊದಲು ಶಾಂತಿಯುತವಾಗಿದ್ದ ಪ್ರತಿಭಟನೆ ಕ್ರಮೇಣ ಉಗ್ರವಾಯಿತು. ಗುದ್ಲೆಪ್ಪ ಹಳ್ಳಿಕೇರಿ ಅವರ ಜೀಪಿಗೆ ಬೆಂಕಿ ಹಚ್ಚಿದರು. ಪೊಲೀಸರ ನಿಯಂತ್ರಣ ತಪ್ಪಿದಾಗ ಲಾಠೀ ಚಾರ್ಜ್ ಅಲ್ಲದೆ, ಗೋಲೀಬಾರ್ ಕೂಡಾ ಮಾಡಲಾಯಿತು. ಗಲಭೆಗೆ ಕಾರಣಕರ್ತರೆಂದು ಬಂಧಿತರಾದವರ ವಿಚಾರಣೆ ನಡೆಯಿತು. ಆಗ ಸ್ಥಾನಬದ್ಧತಾ ಕಾನೂನಿನ ಅಡಿಯಲ್ಲಿ ಬಂಧಿತರಾಗಿದ್ದವರ ಪರ ವಾದಿಸಿದವರು ಮಾಜಿ ಮುಖ್ಯಮಂತ್ರಿ ದಿ. ಎಸ್.ಆರ್. ಬೊಮ್ಮಾಯಿ.

ಏಕೀಕರಣಕ್ಕೆ ಹೆಚ್ಚಿದ ಒತ್ತಡ

ಹುಬ್ಬಳ್ಳಿ ಗಲಭೆಯ ನಂತರ, ಮಿಶ್ರಾ ವರದಿ ಸ್ವೀಕೃತವಾಗಿ ಆಂಧ್ರ ಪ್ರದೇಶದ ರಚನೆ ಖಚಿತವಾಯಿತು. ಕಾಂಗ್ರೆಸ್ ನಾಯಕರನ್ನೇ ನಂಬಿ ಕೂತರೆ ಕರ್ನಾಟಕ ಏಕೀಕರಣ ಸಾಧ್ಯವಿಲ್ಲ ಎಂಬ ಅಭಿಪ್ರಾಯವಿದ್ದ ಕಾಂಗ್ರೆಸ್ಸೇತರ ಪಕ್ಷದ ಕೆಲವು ಮುಖಂಡರು ೨೮-೫-೧೯೫೩ರಂದು ದಾವಣಗೆರೆಯಲ್ಲಿ ಸಭೆ ಸೇರಿ, ’ಕರ್ನಾಟಕ ರಾಜ್ಯ ನಿರ್ಮಾಣ ಮಾಡುವುದು ಕನ್ನಡಿಗರ ಜನ್ಮಸಿದ್ಧ ಹಕ್ಕುಎಂಬ ಘೋಷಣೆಯೊಂದಿಗೆ, ಮಾಜಿ ಸಂಸದ ದಿ. ಅಳವಂಡಿ ಶಿವಮೂರ್ತಿ ಸ್ವಾಮಿ ಮತ್ತು ಕೆ.ಆರ್. ಕಾರಂತರ ನೇತೃತ್ವದಲ್ಲಿ ಅಖಂಡ ಕರ್ನಾಟಕ ರಾಜ್ಯ ನಿರ್ಮಾಣ ಪರಿಷತ್ತುಎಂಬ ಸಂಸ್ಥೆಯನ್ನು ಹುಟ್ಟುಹಾಕಿದರು. ಏಕೀಕರಣ ಹೋರಾಟಕ್ಕೆ ಜನಾಂದೋಲನದ ಸ್ವರೂಪ ನೀಡುವಲ್ಲಿ ಪರಿಷತ್ತು ಯಶ್ವಸಿಯಾಯಿತು. ೧೯೫೩ರ ಅಕ್ಟೋಬರ್ ಒಂದರಂದು ಆಂಧ್ರ ಪ್ರದೇಶ ರಚನೆಯಾದ ಸಂದರ್ಭದಲ್ಲೇ ಬಳ್ಳಾರಿ ಜಿಲ್ಲೆ ಮೈಸೂರು ಸಂಸ್ಥಾನದಲ್ಲಿ ವಿಲೀನಗೊಂಡಿತು.

ಕರ್ನಾಟಕ ಏಕೀಕರಣಕ್ಕಾಗಿ ಜನಾಂದೋಲನ ಹೆಚ್ಚಿದಾಗ, ಕೇಂದ್ರ ಸರ್ಕಾರ ೨೯-೧೨-೧೯೫೩ರಂದು ರಚಿಸಿದ್ದ ಫಜಲ್ ಆಲಿ ನೇತೃತ್ವದ ರಾಜ್ಯ ಪುನರ್ವಿಂಗಡಣಾ ಆಯೋಗ ಕರ್ನಾಟಕ ರಾಜ್ಯ ರಚನೆಯ ಅಗತ್ಯತೆಯನ್ನು ಎತ್ತಿ ಹಿಡಿಯಿತು. ಅದರ ಕರಡು ವರದಿಯಲ್ಲಿ ಇಡಿಯಾಗಿ ಬಳ್ಳಾರಿ ಜಿಲ್ಲೆಯನ್ನು ಆಂಧ್ರಕ್ಕೆ ಸೇರಿಸಲು ಶಿಫಾರಸು ಮಾಡಿತ್ತು. ಅದನ್ನು ವಿರೋಧಿಸಿ, ಬಳ್ಳಾರಿ ಜಿಲ್ಲೆಯಾದ್ಯಂತ ತುಂಗಭದ್ರಾ ನದಿ ನೀರು ಹೋರಾಟ ನಡೆಯಿತು. ರಾಜ್ಯ ಪುನರ್ವಿಂಗಡಣಾ ಆಯೋಗವು ಹಿಂದಿನ ವರದಿಗಳನ್ನು ಪರಿಶೀಲಿಸಿ, ಬಂದ ಸಾವಿರಗಟ್ಟಲೆ ಮನವಿಗಳ ಅಧ್ಯಯನ ಮಾಡಿ, ಕೇಂದ್ರ ಸರ್ಕಾರಕ್ಕೆ ೧೯೫೫ರ ಅಕ್ಟೋಬರ್ ೧೦ರಂದು ತನ್ನ ವರದಿಯನ್ನು ಸಲ್ಲಿಸಿತು.

ರಾಜ್ಯ ಪುನರ್ವಿಂಗಡಣಾ ಆಯೋಗದ ವರದಿಯ ಬಗ್ಗೆ ಸಂಸತ್ತು ೧೯೫೬ರ ಜನವರಿ ೧೯ರಂದು ಚರ್ಚಿಸಿ, ೧೯೫೬ರ ಮಾರ್ಚ್ ೧೯ರಂದು ವಿಧೇಯಕ ಪ್ರಕಟಿಸಿತು. ಅದರ ಪ್ರಕಾರ ೧೯೫೬ರ ನವೆಂಬರ್ ೧ರಂದು ಕರ್ನಾಟಕ (ಆಗ ಮೈಸೂರು) ರಾಜ್ಯ ಅಸ್ತಿತ್ವಕ್ಕೆ ಬರಲಿತ್ತು. ಆಗ ಈ ಪ್ರದೇಶಗಳು ಹೊಸ ರಾಜ್ಯದಲ್ಲಿ ಸೇರ್ಪಡೆಯಾಗಬೇಕಿತ್ತು:

೧. ಇಡಿಯಾಗಿ ಮೈಸೂರು ರಾಜ್ಯ.
೨. ಮುಂಬಯಿ ರಾಜ್ಯದ ಬಿಜಾಪುರ, ಧಾರವಾಡ, ಉತ್ತರ ಕನ್ನಡ ಮತ್ತು ಬೆಳಗಾವಿ (ಚಾಂದಘಡ ತಾಲ್ಲೂಕನ್ನು ಬಿಟ್ಟು) ಜಿಲ್ಲೆಗಳು.
೩. ಹೈದರಾಬಾದ್ ರಾಜ್ಯದ ಗುಲಬರ್ಗಾ ಜಿಲ್ಲೆ (ಕೊಡಂಗಲ್ ಮತ್ತು ತಾಂಡೂರು ತಾಲ್ಲೂಕುಗಳನ್ನು ಬಿಟ್ಟು), ರಾಯಚೂರು ಜಿಲ್ಲೆ (ಆಲಂಪುರ ಮತ್ತು ಗದ್ವಾಲ್ ತಾಲ್ಲೂಕುಗಳನ್ನು ಬಿಟ್ಟು) ಮತ್ತು ಬೀದರ್ ಜಿಲ್ಲೆಯ ಬೀದರ್, ಭಾಲ್ಕಿ, ಔರಾದ್ (ಸಂತಪುರ) ಮತ್ತು ಹುಮನಾಬಾದ್ ತಾಲ್ಲೂಕುಗಳು.
೪. ಮದ್ರಾಸ್ ರಾಜ್ಯದ ದಕ್ಷಿಣ ಕನ್ನಡ ಜಿಲ್ಲೆ (ಕಾಸರಗೋಡು ತಾಲ್ಲೂಕು ಮತ್ತು ಅಮೀನ್ ದ್ವೀಪಗಳನ್ನು ಬಿಟ್ಟು) ಮತ್ತು ಕೊಯಮತ್ತೂರು ಜಿಲ್ಲೆಯ ಕೊಳ್ಳೇಗಾಲ ತಾಲ್ಲೂಕು.
೫. ಕೊಡಗು ರಾಜ್ಯ.

ಈಡೇರಿದ ಕನಸು

ವಿಜಯನಗರ ಕಾಲದವರೆಗೂ ದೊಡ್ಡ ಸಾಮ್ರಾಜ್ಯವಾಗಿದ್ದ ಕರುನಾಡು ಟಿಪ್ಪು ಸುಲ್ತಾನ್‌ನ ಮರಣದ ನಂತರ ಬ್ರಿಟಿಷರ ಒಡೆದು ಆಳುವ ನೀತಿಯಿಂದ ಹಲವಾರು ಪ್ರಾಂತ್ಯಗಳಾಗಿ ವಿಭಜನೆಯಾಗಿ ವಿವಿಧ ಭಾಷೆಗಳ ಪ್ರಾಂತ್ಯಗಳಲ್ಲಿ ಇಲ್ಲವಾಗಿತ್ತು. ಈಗ ಕನ್ನಡಿಗರನ್ನೊಳಗೊಂಡ ಪ್ರತ್ಯೇಕ ರಾಜ್ಯ ಅಸ್ತಿತ್ವಕ್ಕೆ ಬರುತ್ತದೆಂಬ ಸಂತಸದ ಜೊತೆಗೆ, ಇದಕ್ಕಾಗಿ ಹೋರಾಡಿದ ಹಿರಿಯ ಜೀವಗಳು ಹಂಬಲಿಸಿದಂತೆ, ಪೂರ್ತಿ ಏಕೀಕರಣ ಸಾಧ್ಯವಾಗಲಿಲ್ಲ.

ಏಕೆಂದರೆ, ಕಾಸರಗೋಡು ಕೈಬಿಟ್ಟಿತ್ತು. ಅಕ್ಕಲಕೋಟೆ, ಸೊಲ್ಲಾಪುರಗಳು ಹೊರಗೇ ಉಳಿದಿದ್ದವು. ನೀಲಗಿರಿ ಕೂಡಾ ದಕ್ಕಲಿಲ್ಲ. ಏಕೀಕರಣದ ನಂತರವೂ ಪ್ರಾಚೀನ ಕಾಲದಿಂದ ಇದ್ದ ಕರ್ನಾಟಕ ಎಂಬ ಹೆಸರಿನ ಬದಲಾಗಿ ಮೈಸೂರು ರಾಜ್ಯವೆಂದು ಕರೆಯಲ್ಪಟ್ಟಿತು. ಕೊನೆಗೂ, ಸಾಕಷ್ಟು ಒತ್ತಡದ ನಂತರ, ೧೯೭೩ ನವೆಂಬರ್ ೧ರಂದು ರಾಜ್ಯಕ್ಕೆ ಕರ್ನಾಟಕ ಎಂದು ಪುನರ್ ನಾಮಕರಣ ಮಾಡಲಾಯಿತು.

ಏನೇ ಆದರೂ, ಬೇರೆ ಬೇರೆ ಪ್ರಾಂತಗಳಲ್ಲಿ ಹಂಚಿಹೋಗಿದ್ದ ಕನ್ನಡಿಗರು ೧೯೫೬ರ ನವೆಂಬರ್ ೧ರಂದು ಒಂದೇ ರಾಜ್ಯದ ಆಡಳಿತ ವ್ಯಾಪ್ತಿಗೆ ಬಂದಿದ್ದು ಒಂದು ಐತಿಹಾಸಿಕ ಹೋರಾಟದ ಫಲ. ಎರಡು ಸಾವಿರ ವರ್ಷಗಳ ಇತಿಹಾಸ ಹೊಂದಿರುವ ಕರ್ನಾಟಕ ಶತಮಾನಗಳ ಸಂಕೋಲೆ ಕಳೆದುಕೊಂಡು ಎಲ್ಲ ರೀತಿಯಿಂದ ಒಂದಾಯಿತು. ಏಕೀಕರಣದ ಕನಸು ಈಡೇರುವ ಮೂಲಕ, ಕನ್ನಡಿಗರ ಭಾವನಾತ್ಮಕವಾಗಿಯೂ ಒಂದಾದರು. ಸಾಂಸ್ಕೃತಿಕ ಐಕ್ಯತೆಗೂ ಇಂಬು ದೊರೆಯಿತು.

ಇಂಥದೊಂದು ಕನಸನ್ನು ನನಸು ಮಾಡಲು ಹೋರಾಡಿದ ಎಲ್ಲರ ತ್ಯಾಗ ಮತ್ತು ಬಲಿದಾನದ ಫಲ ಈ ನಮ್ಮ ಹೆಮ್ಮೆಯ ಕರ್ನಾಟಕ. ಆ ಸ್ಫೂರ್ತಿ ಅಳಿಯದಿರಲಿ. ಸಮೃದ್ಧ ಹಾಗೂ ಸ್ವಾವಲಂಬಿ ಕರ್ನಾಟಕ ಬೇಗ ಮೈದಾಳಲಿ.

ಸಿರಿಗನ್ನಡಂಗೆಲ್ಗೆ !

- ಚಾಮರಾಜ ಸವಡಿ