ಪ್ರಶ್ನೆಗಳಿಗೆ ಉತ್ತರಿಸದ ಪಲಾಯನವಾದ

21 Oct 2008

11 ಪ್ರತಿಕ್ರಿಯೆ
ಎರಡು ರೀತಿಯ ವ್ಯಕ್ತಿಗಳು ಈ ವಾರ ಅನಾವರಣಗೊಂಡಿದ್ದಾರೆ. ಒಂದು ಎಸ್.ಎಲ್. ಭೈರಪ್ಪ. ಇನ್ನೊಂದು ನಮ್ಮ ಸೋ ಕಾಲ್ಡ್ ಬುದ್ಧಿಜೀವಿಗಳು ಮತ್ತು ಪತ್ರಕರ್ತರು.

ಎಸ್.ಎಲ್. ಭೈರಪ್ಪ ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಬರೆದ ಲೇಖನ, ಅಲ್ಲಿ ಎತ್ತಿರುವ ಪ್ರಶ್ನೆಗಳಿಗೆ ನಮ್ಮ ಪತ್ರಕರ್ತ ಬುದ್ಧಿಜೀವಿಗಳು ಉತ್ತರ ಕೊಡುವುದಾಗಿದ್ದರೆ ಈ ಲೇಖನದ ಪ್ರತಿಕ್ರಿಯೆ ಅಗತ್ಯವಿದ್ದಿಲ್ಲ. ಅಂಥದೊಂದು ಪ್ರಯತ್ನ ಕೈಬಿಟ್ಟು ಭೈರಪ್ಪನವರನ್ನೇ ಗುರಿಯಾಗಿರಿಸಿ ಬರೆಯುತ್ತ ಹೊರಡುವ ಮೂಲಕ ಇವರೆಲ್ಲ ಸಹಜವಾಗಿ ಅನಾವರಣಗೊಂಡಿದ್ದಾರೆ.

ಜೋಗಿಯವರು ಕೆಂಡಸಂಪಿಗೆ ತಾಣದಲ್ಲಿ ಬರೆದ ಅಂಕಣ ಅಂಥದೊಂದು ಬರವಣಿಗೆ. ಸುದ್ದಿಮಾತು ಬ್ಲಾಗ್‌ನಲ್ಲಿ ಬಂದಿರುವ ಲೇಖನವೂ ಇದೇ ವರ್ಗಕ್ಕೆ ಸೇರಿದಂಥದು. ಇಂತಹ ಅಭಿಪ್ರಾಯಗಳು ಹೊರಬಂದಿದ್ದು ಓದುಗರಿಗೆ ಒಳ್ಳೆಯದೇ ಆಗಿದೆ. ಒಂದೆಡೆ ಭೈರಪ್ಪನವರ ಧೋರಣೆ ಸ್ಪಷ್ಟವಾದಂತೆ, ಇನ್ನೊಂದೆಡೆ ಅವರ ಒಂದು ಕಾಲದ ಅಭಿಮಾನಿಗಳು ಹಾಗೂ ಇದ್ದಕ್ಕಿದ್ದಂತೆ ಜಾತ್ಯತೀತರಾಗಲು ಹೊರಟವರ ಧೋರಣೆಗಳೂ ಸ್ಪಷ್ಟವಾಗಿವೆ.

ಭೈರಪ್ಪ ತಮ್ಮ ಅನಿಸಿಕೆ ಹೇಳಿದ್ದಾರೆ. ಅವರ ನಿಲುವಿನ ಬಗ್ಗೆ ಪ್ರಶ್ನೆಗಳಿದ್ದರೆ ಅದನ್ನು ತಾತ್ವಿಕವಾಗಿಯೇ ಖಂಡಿಸಬೇಕಾಗುತ್ತದೆ. ಅಲ್ಲಿ ಕಾದಂಬರಿಕಾರ ಭೈರಪ್ಪನವರನ್ನು ಎಳೆದುಕೊಂಡು ಬರುವ ಅವಶ್ಯಕತೆ ಖಂಡಿತ ಇರಲಿಲ್ಲ. ಅವರ ಕಾದಂಬರಿಗಳಲ್ಲಿ ಗು(ಸು)ಪ್ತ ಉದ್ದೇಶಗಳಿದ್ದವು ಎಂಬುದನ್ನು ಕಾಲು ಶತಮಾನದ ನಂತರ ಪತ್ತೆ ಹಚ್ಚಿದ ಹೆಮ್ಮೆ ಕಾಣಬೇಕಿರಲಿಲ್ಲ. ಭೈರಪ್ಪ ತಮ್ಮ ನಿಲುವನ್ನು ಯಾವಾಗಲೂ ಅತ್ಯಂತ ಸ್ಪಷ್ಟವಾಗಿಯೇ ಹೇಳುತ್ತ ಬಂದಿದ್ದಾರೆ. ಗುಪ್ತ ಉದ್ದೇಶಗಳನ್ನಿಟ್ಟುಕೊಂಡು ದಶಕಗಳ ಕಾಲ ಯಾರಿಗೂ ಅನುಮಾನ ಬರದಂತೆ ಬರೆಯುವುದು ಸಾಧ್ಯವಿಲ್ಲ ಎಂಬುದನ್ನು ಅವರ ಇತ್ತೀಚಿನ ಟೀಕಾಕಾರರು ಗಮನಿಸಬೇಕಿತ್ತು.

ಒಬ್ಬ ಕಾದಂಬರಿಕಾರರಾಗಿ ಅಪಾರ ಸಾಧ್ಯತೆಗಳಿರುವ ವ್ಯಕ್ತಿ ಭೈರಪ್ಪ. ಅವರ ಪ್ರತಿಯೊಂದು ಕೃತಿಯೂ ಅದನ್ನು ಮತ್ತೆ ಮತ್ತೆ ಸ್ಪಷ್ಟಪಡಿಸುತ್ತದೆ. ಒಬ್ಬ ಸಾಮಾನ್ಯ ಓದುಗನಿಗೆ, ಅಥವಾ ಬಹುತೇಕ ಓದುಗರಿಗೆ ಅವರ ಬರವಣಿಗೆ ಇಷ್ಟವಾಗುವುದು ಅವರು ಕತೆ ಹೇಳುವ ರೀತಿಯಿಂದಾಗಿ. ಭಾವನೆಗಳನ್ನು ಕಟ್ಟಿಕೊಡುವ ಹದದಿಂದಾಗಿ. ಕಾದಂಬರಿಯ ಪಾತ್ರಗಳಲ್ಲಿ, ದೃಶ್ಯಗಳಲ್ಲಿ ಓದುಗ ಮುಳುಗಿಹೋಗುತ್ತಾನೆಯೇ ಹೊರತು, ಅದರಲ್ಲಿ ಗುಪ್ತ ಸಂದೇಶ ಇದೆಯಾ? ಎಂಬುದನ್ನು ನೋಡಲು ಆತ ಹೋಗುವುದಿಲ್ಲ. ಇದು ಬಹುತೇಕ ಜನರ ಅಭಿಪ್ರಾಯ. ಅವರ ಇತ್ತೀಚಿನ ಟೀಕಾಕಾರರೂ ತೀರಾ ಇತ್ತೀಚಿನವರೆಗೆ ಭೈರಪ್ಪನವರ ಬರವಣಿಗೆಯ ಅಭಿಮಾನಿಗಳೇ ಆಗಿದ್ದರು ಎಂಬುದೇ ಬರವಣಿಗೆಯ ಸತ್ವವನ್ನು ತೋರಿಸುತ್ತದೆ.

ಆದರೆ, ಇಂತಹ ಎಲ್ಲಾ ಕೃತಿಗಳ ಹಿಂದೆ ಹಿಂದು ಧರ್ಮವನ್ನು ವೈಭವೀಕರಿಸುವ ಉದ್ದೇಶವಿತ್ತು ಎಂಬುದನ್ನು ಇವರೆಲ್ಲ ಇತ್ತೀಚೆಗೆ ಪತ್ತೆ ಹಚ್ಚಿದರೆ? ಒಂದು ವೇಳೆ ಭೈರಪ್ಪನವರ ಮೂಲ ಉದ್ದೇಶವೇ ಇದಾಗಿದ್ದರೆ, ಅವರು ಅದನ್ನು ಸಾಧಿಸಲು ಸೋತಿದ್ದಾರೆ ಎಂದೇ ಹೇಳಬೇಕಾಗುತ್ತದೆ. ಏಕೆಂದರೆ, ನನ್ನಂಥ ಹಲವಾರು ಜನರು ಭೈರಪ್ಪನವರ ಕಾದಂಬರಿಗಳನ್ನು ಓದುವ ಖುಷಿಯಿಂದ ಆಸ್ವಾದಿಸಿದ್ದೇವೆ. ಅವು ನಮ್ಮಲ್ಲಿ ಯಾವತ್ತೂ ಹಿಂದು ಪರ ನಿಲುವನ್ನು ಬೆಳೆಸಲಿಲ್ಲ. ಇಡೀ ಕಾದಂಬರಿಯ ಸಾರಾಂಶ ಇದು ಎಂಬಂಥ ಸಂದೇಶ ನೀಡಲಿಲ್ಲ. ಎಷ್ಟು ಚೆನ್ನಾಗಿ ಬರೆದಿದ್ದಾರೆ ಎಂಬ ಮೆಚ್ಚುಗೆ ಬಿಟ್ಟರೆ ಯಾವುದೇ ಕೋಮು, ಧರ್ಮ ಅಥವಾ ಸಿದ್ಧಾಂತದ ಪರ ನಮ್ಮನ್ನು ಒಯ್ಯಲಿಲ್ಲ. ಬಹುಶಃ ಅವರ ಇತ್ತೀಚಿನ ಟೀಕಾಕಾರರಿಗೂ ಇಂಥದೇ ಅನುಭವ ಆಗಿದೆ. ಹಲವಾರು ಸಂದರ್ಭಗಳಲ್ಲಿ ಆ ಬಗ್ಗೆ ಅವರೇ ಮುಕ್ತವಾಗಿ ಹೇಳಿಕೊಂಡಿದ್ದಾರೆ.

ಹೀಗಿರುವಾಗ, ಭೈರಪ್ಪನವರು ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಬರೆದ ಲೇಖನ ಆಧಾರವಾಗಿಟ್ಟುಕೊಂಡು, ಅವರ ಒಟ್ಟಾರೆ ಕೃತಿಗಳ ಉದ್ದೇಶದ ಬಗ್ಗೆ ಚರ್ಚಿಸಲು ಹೊರಡುವುದು ಹಾಸ್ಯಾಸ್ಪದ. ಇಂತಹ ಪ್ರತಿಕ್ರಿಯಾ ಬರವಣಿಗೆಗಳ ಮೂಲ ಉದ್ದೇಶವನ್ನೇ ಅದು ಪ್ರಶ್ನಿಸುವಂತೆ ಮಾಡುತ್ತದೆ. ಭೈರಪ್ಪ ತಮ್ಮ ನಿಲುವನ್ನು ಅತ್ಯಂತ ಸ್ಪಷ್ಟವಾಗಿ ಹೇಳಿದ್ದಾರೆ. ಅದನ್ನು ಒಪ್ಪದಿದ್ದರೆ, ಅದನ್ನು ಅಷ್ಟೇ ಸ್ಪಷ್ಟವಾಗಿ, ತಾತ್ವಿಕವಾಗಿಯೇ ಖಂಡಿಸಬೇಕು. ಅದು ಬಿಟ್ಟು, ಅವರ ಕಾದಂಬರಿಗಳಲ್ಲೂ ಇಂಥದೇ ಉದ್ದೇಶವಿತ್ತು, ಈ ವ್ಯಕ್ತಿ ಮೊದಲಿನಿಂದಲೂ ಹೀಗೇ ಕಣ್ರೀ ಎಂದು ಹೇಳಲು ಹೊರಡುವುದು ಮೂರ್ಖತನವಾಗುತ್ತದೆ. ಇವರೆಲ್ಲ ಯಾರನ್ನೋ ಮೆಚ್ಚಿಸಲು ಯತ್ನಿಸುತ್ತಿದ್ದಾರೆ ಎಂಬ ಪ್ರಶ್ನೆ ಹುಟ್ಟಿಸುತ್ತದೆ.

ಭೈರಪ್ಪನವರ ಲೇಖನದ ಬಹಳಷ್ಟು ವಿಷಯಗಳು ಮೇಲ್ನೋಟಕ್ಕೆ ಮುಸ್ಲಿಂ-ಕ್ರಿಶ್ಚಿಯನ್ ವಿರೋಧಿಯಾಗಿಯೇ ಕಾಣುತ್ತವೆ. ಆದರೆ, ಅವರು ಎತ್ತಿರುವ ಪ್ರಶ್ನೆಗಳು ಯಾವವೂ ಹೊಸವಲ್ಲ. ಕಾಲಕಾಲಕ್ಕೆ ಇಂತಹ ಪ್ರಶ್ನೆಗಳು ಏಳುತ್ತಲೇ ಇವೆ. ಬಹಳಷ್ಟು ಜನ ಇವನ್ನು ಪ್ರಸ್ತಾಪಿಸಿದ್ದೂ ಆಗಿದೆ. ಈಗಲೂ ಅವುಗಳ ಬಗ್ಗೆ ಚರ್ಚೆಗಳು ನಡೆದೇ ಇವೆ. ಭೈರಪ್ಪನವರು ಅವನ್ನು ಕ್ರೋಡೀಕರಿಸಿದಂತೆ ಬರೆದಿದ್ದಾರೆ, ಅಷ್ಟೇ. ಈಗ ಚರ್ಚೆ ನಡೆಯಬೇಕಿರುವುದು ಭೈರಪ್ಪನವರ ನಿಲುವಿನ ಬಗ್ಗೆ ಅಲ್ಲ. ಅವರು ಎತ್ತಿರುವ ಪ್ರಶ್ನೆಗಳ ಬಗ್ಗೆ.

ಆದರೆ, ಅದೇ ನಡೆಯುತ್ತಿಲ್ಲ.

ಒಂದು ಉದಾಹರಣೆ ಮೂಲಕ ಈ ಬರಹ ಮುಗಿಸುತ್ತೇನೆ. ಇತ್ತೀಚೆಗೆ ಬೆಂಗಳೂರು ಸೇರಿದಂತೆ ದೇಶದ ಹಲವಾರು ಪ್ರಮುಖ ನಗರಗಳಲ್ಲಿ ಸರಣಿ ಬಾಂಬ್ ಸ್ಫೋಟಗಳು ನಡೆದವು. ಆಗ ನಮ್ಮ ಬಹುತೇಕ ಬುದ್ಧಿಜೀವಿಗಳು, ಇತ್ತೀಚೆಗಷ್ಟೇ ಜಾತ್ಯತೀತರಾದ ಬಹುತೇಕ ಜನ ಅದನ್ನು ಖಂಡಿಸಲಿಲ್ಲ. ಖಂಡಿಸಿದ ಕೆಲವರಲ್ಲಿ ತೀವ್ರತೆ ಕಾಣಲಿಲ್ಲ. ಇಂಥ ಬೆಳವಣಿಗೆಗಳು ಅಪಾಯಕಾರಿ ಎಂಬುದರ ಬಗ್ಗೆ ಮಾತನಾಡಲಿಲ್ಲ. ಯಾರೋ ಅವಿವೇಕಿಗಳು, ತಪ್ಪು ಸಿದ್ಧಾಂತ ನಂಬಿಕೊಂಡು ಬಾಂಬಿಡುವುದು ಆ ಧರ್ಮದ ಇತರರನ್ನು ಅನುಮಾನಕ್ಕೆ ಈಡು ಮಾಡುತ್ತವೆ ಎಂಬುದರ ಬಗ್ಗೆ ಕಳವಳ ಪಡಲಿಲ್ಲ.

ಆದರೆ, ದತ್ತ ಜಯಂತಿ ಬಂದ ಕೂಡಲೇ ಇವರೆಲ್ಲ ಮೈಕೊಡವಿ ಎದ್ದು ಕೂತರು. ವರ್ಷ ಪೂರ್ತಿ ಸುಪ್ತವಾಗುವ ಕೋಮು ಸೌಹಾರ್ದ ವೇದಿಕೆ ಹಾಗೂ ಅಂತಹ ಸಂಘಟನೆಗಳು ಎದ್ದು ಕೂತವು. ದತ್ತ ಜಯಂತಿ ಮುಗಿಯುವವರೆಗೆ ಅವರೆಲ್ಲ ಫುಲ್ ಬಿಜಿ. ಹಿಂದು ಪರ ಸಂಘಟನೆಗಳನ್ನು ಸಾರಾಸಗಟಾಗಿ ಟೀಕಿಸುತ್ತ, ಧರಣಿ-ಮುಷ್ಕರದ ಎಚ್ಚರಿಕೆ ಕೊಡುತ್ತ ಕಾಲಹರಣ ಮಾಡುವುದು ಬಿಟ್ಟರೆ ಈ ಸಂಘಟನೆಗಳು ಹಾಗೂ ಇವರ ಹಿಂದಿರುವ ಜನರಿಂದ ಸಮಾಜಕ್ಕೆ ಆದ ಒಳಿತು ಅಷ್ಟಕ್ಕಷ್ಟೇ. ದೇಶಕ್ಕೆ ಬಾಂಬಿಡುವ ಜನರನ್ನು ಟೀಕಿಸದ ಇಂಥವರ ಸಾಲಿಗೆ ಈಗ ಭೈರಪ್ಪನವರ ಇತ್ತೀಚಿನ ಟೀಕಾಕಾರರೂ ಸೇರಿಕೊಂಡಿದ್ದಾರೆ.

ತಪ್ಪು ಯಾರೇ ಮಾಡಿರಲಿ, ಅದನ್ನು ತಪ್ಪೆಂದು ಹೇಳುವ ಎದೆಗಾರಿಕೆ ಬೇಕು. ಭೈರಪ್ಪನವರ ನಿಲುವನ್ನು ಖಂಡಿಸಲು ತೋರಿದಂಥ ಉತ್ಸಾಹವನ್ನೇ ಬಾಂಬಿಡುವ ಜನರ ಬಗ್ಗೆಯೂ ತೋರಬೇಕಾಗುತ್ತದೆ. ಇಲ್ಲದಿದ್ದರೆ ಬೌದ್ಧಿಕ ಬರವಣಿಗೆಗಳೆಲ್ಲ ವ್ಯರ್ಥ ಪ್ರಲಾಪವಾಗುತ್ತವೆ.
- ಚಾಮರಾಜ ಸವಡಿ

ಗುರುದತ್ ಎಂಬ ದುರಂತ ನಾಯಕ

10 Oct 2008

1 ಪ್ರತಿಕ್ರಿಯೆ
ಆತ ದುರಂತ ನಾಯಕ. ಆತನ ಜೀವನದಲ್ಲಷ್ಟೇ ಅಲ್ಲ, ನಟಿಸಿದ ಹಾಗೂ ನಿರ್ಮಿಸಿದ ಚಿತ್ರಗಳುದ್ದಕ್ಕೂ ಈ ದುರಂತ ಪ್ರತಿಫಲಿಸಿದೆ. ಕನ್ನಡಿಗನಾಗಿ ಹುಟ್ಟಿ, ಬಂಗಾಳಿಯಾಗಿ ಬೆಳೆದು, ನಟ-ನಿರ್ದೇಶಕನಾಗಿ ಅಮರನಾದ ಗುರುದತ್ ಭಾರತೀಯ ಚಿತ್ರರಂಗ ಕಂಡ ವಿಶಿಷ್ಟ ಪ್ರತಿಭೆ. ನಿದ್ದೆ ಗುಳಿಗೆ ಸೇವಿಸಿ ಆತ ಆತ್ಮಹತ್ಯೆ ಮಾಡಿಕೊಂಡು ಇಂದಿಗೆ ೪೪ ವರ್ಷಗಳು. ಹಿಂದಿ ಚಿತ್ರರಂಗ ಎಂದೂ ಮರೆಯದ ಈ ಮಹಾನ್ ಪ್ರತಿಭೆ ಇವತ್ತಿಗೂ ದಂತಕಥೆ.

ಗುರುದತ್ ಹುಟ್ಟಿದ್ದು ಕನ್ನಡಿಗನಾಗಿ. ಶಿವಶಂಕರರಾವ್ ಪಡುಕೋಣೆ ಹಾಗೂ ವಸಂತಿ ದಂಪತಿಗಳ ಮಗನಾಗಿ ೧೯೨೫ರ ಜುಲೈ ೯ ರಂದು ಬೆಂಗಳೂರಿನಲ್ಲಿ ಜನಿಸಿದಾಗ ಆತನ ತಾಯಿಗೆ ಕೇವಲ ೧೬ ವರ್ಷದ ಪ್ರಾಯ. ಗುರುದತ್‌ನ ಮೊದಲ ಹೆಸರು ವಸಂತ ಕುಮಾರ್. ಅಪ್ಪ ಶಿವಶಂಕರ್ ದಕ್ಷಿಣ ಕನ್ನಡ ಜಿಲ್ಲೆಯ ಪಣಂಬೂರಿನಲ್ಲಿ ನೆಲೆಸಿದ್ದವರು. ಬ್ಯಾಂಕ್ ನೌಕರಿಗೆ ಹೋಗುವ ಮೊದಲು ಇಲ್ಲಿಯೇ ಶಿಕ್ಷಕರಾಗಿದ್ದ ಶಿವಶಂಕರರಾವ್ ಅವರ ಆರ್ಥಿಕ ಪರಿಸ್ಥಿತಿ ಚೆನ್ನಾಗಿರಲಿಲ್ಲ. ತಮ್ಮಂದಿರಾದ ಆತ್ಮಾರಾಮ್, ದೇವಿದಾಸ್ ಹಾಗೂ ತಂಗಿ ಲಲಿತಾ ಅವರೊಂದಿಗೆ ಕಷ್ಟಕರ ಬಾಲ್ಯ ಕಳೆದ ಗುರುದತ್, ಕ್ರಮೇಣ ಆಸಕ್ತಿ ತೋರಿದ್ದು ಸಿನಿಮಾ ಪೋಸ್ಟರ್‌ಗಳ ಚಿತ್ರಗಳನ್ನು ಬಿಡಿಸುವತ್ತ.

ಬ್ಯಾಂಕ್ ಉದ್ಯೋಗಿಯಾಗಿದ್ದ ತಂದೆಗೆ ಕೋಲ್ಕತಾದ ಭವಾನಿಪುರಕ್ಕೆ ವರ್ಗವಾಯಿತು. ಗುರುದತ್ ಪ್ರಾಥಮಿಕ ವಿದ್ಯಾಭ್ಯಾಸ ಆಗಿದ್ದು ಅಲ್ಲೇ. ಬಂಗಾಳಿ ಭಾಷೆ ಸಹಜವಾಗಿ ರೂಢಿಯಾಗಿದ್ದರಿಂದ ಆತನ ಪ್ರತಿಯೊಂದು ಕೆಲಸದಲ್ಲಿಯೂ ಬಂಗಾಳಿ ಪ್ರಭಾವ ಎದ್ದು ಕಾಣುತ್ತಿತ್ತು. ಮುಂದೆ ಹೊಟ್ಟೆಪಾಡಿಗಾಗಿ ಮುಂಬೈ ಚಿತ್ರೋದ್ಯಮಕ್ಕೆ ಬಂದಾಗ, ತನ್ನ ಹೆಸರಿನೊಂದಿಗೆ ಇದ್ದ ತಂದೆಯ ಹೆಸರು ಹಾಗೂ ಪಡುಕೋಣೆ ಎಂಬ ಅಡ್ಡಹೆಸರನ್ನು ತೆಗೆದುಹಾಕಿ, ಗುರುದತ್ ಎಂದು ಗುರುತಿಸಿಕೊಂಡರು. ಕನ್ನಡ ಹಾಗೂ ಕನ್ನಡಿಗರೊಂದಿಗೆ ಆತನ ಸಂಬಂಧ ಶಾಶ್ವತವಾಗಿ ಕಡಿದುಹೋಯಿತು.

ಆದರೆ, ಸಿನಿಮಾ ನಟ ಹಾಗೂ ನಿರ್ದೇಶಕನಾಗಿ ಗುರುದತ್ ಸಾಧಿಸಿದ್ದು ಅಪಾರ. ಕಲಾಸಕ್ತಿ ಆತನನ್ನು ಆ ಕಾಲದ ಖ್ಯಾತ ನೃತ್ಯಪಟು ಉದಯಶಂಕರ್ ಅವರ ನಾಟಕ ಶಾಲೆಯತ್ತ ಸೆಳೆಯಿತು. ಹದಿನಾರು ವರ್ಷದ ಗುರುದತ್ ಆ ಕಾಲದಲ್ಲಿಯೇ ವರ್ಷಕ್ಕೆ ೭೫ ರೂಪಾಯಿಗಳಂತೆ ಐದು ವರ್ಷದ ಶಿಷ್ಯವೇತನ ಗಳಿಸಿದ್ದ. ಆದರೆ, ಎರಡನೇ ಮಹಾಯುದ್ಧದ ಪರಿಣಾಮವಾಗಿ ನಾಟಕ ಶಾಲೆ ಮುಚ್ಚಿತು. ಕೋಲ್ಕತಾದಲ್ಲಿ ದೂರವಾಣಿ ನಿರ್ವಾಹಕನಾಗಿ, ಪುಣೆಯ ಪ್ರಭಾತ್ ಫಿಲ್ಮ್ ಕಂಪನಿಯಲ್ಲಿ ಗುತ್ತಿಗೆದಾರನಾಗಿ ಕೆಲಸ ಮಾಡಿದ ನಂತರ, ಮುಂಬೈಗೆ ತೆರಳಿದ ಗುರುದತ್ ಕೊನೆಯವರೆಗೂ ಉಳಿದಿದ್ದು, ಬೆಳೆದಿದ್ದು ಅಲ್ಲಿಯೇ. ೧೯೪೫ರಲ್ಲಿ ನಟನಾಗಿ, ಸಹ ನಿರ್ದೇಶಕನಾಗಿ ’ಲಖ್ರಾನಿ’ ಚಿತ್ರದ ಮೂಲಕ ವೃತ್ತಿ ಜೀವನ ಪ್ರಾರಂಭಿಸಿದ ಗುರುದತ್, ’ಹಮ್ ಏಕ್ ಹೈ’ ಚಿತ್ರದ ಮೂಲಕ ನೃತ್ಯ ನಿರ್ದೇಶನವನ್ನೂ ಮಾಡಿದ.

ಆದರೆ, ಅದೃಷ್ಟ ಒಲಿಯಲಿಲ್ಲ. ಮುಂದಿನ ಕೆಲ ವರ್ಷಗಳನ್ನು ಅನಾಮಧೇಯನಂತೆ ಕಳೆದ ಗುರುದತ್ ಮತ್ತೆ ಖ್ಯಾತಿಗೆ ಬಂದಿದ್ದು ’ಬಾಝಿ’ ಸಿನಿಮಾ ನಿರ್ದೇಶನದ ಮೂಲಕ. ಆ ಚಿತ್ರದಲ್ಲಿ ಬಳಸಿದ ಸಮೀಪ ದೃಶ್ಯಗಳ ಚಿತ್ರಣ ಕಲೆ ’ಗುರುದತ್ ಶಾಟ್’ ಎಂದೇ ಜನಪ್ರಿಯವಾಯಿತು. ಹಲವಾರು ಪ್ರಥಮಗಳಿಗೆ ಸಾಕ್ಷಿಯಾದ ’ಬಾಝ’ ಚಿತ್ರ ಗುರುದತ್‌ಗೆ ಮುಂದೆ ತಮ್ಮ ಪತ್ನಿಯಾಗಲಿರುವ ಗೀತಾ ಅವರನ್ನು ಪರಿಚಯಿಸಿತು. ನಂತರದ ಎರಡು ಚಿತ್ರಗಳು ವಿಫಲವಾದರೂ ’ಆರ್ ಪಾರ್’ ಚಿತ್ರ ಯಶಸ್ವಿಯಾಯಿತು. ಮುಂದೆ ಬಂದಿದ್ದೆಲ್ಲ ಹಿಟ್ ಚಿತ್ರಗಳೇ. ೧೯೫೭ರಲ್ಲಿ ತೆರೆ ಕಂಡ ’ಪ್ಯಾಸಾ’ ಹಿಂದಿ ಚಿತ್ರರಂಗದಲ್ಲಿ ಮೈಲಿಗಲ್ಲು ಎಂದೇ ಗುರುತಿಸಲ್ಪಟ್ಟಿತು. ನಿರಾಸಕ್ತ ಪ್ರಪಂಚದಿಂದ ತಿರಸ್ಕೃತನಾಗಿ, ಮನ್ನಣೆಯಿಲ್ಲದೇ ಸಾಯುವ ಕವಿಯೊಬ್ಬ, ಮರಣಾನಂತರ ಖ್ಯಾತನಾಗುವ ಕಥೆ ಹೊಂದಿದ್ದ ’ಪ್ಯಾಸಾ’ ಒಂದರ್ಥದಲ್ಲಿ ಗುರುದತ್‌ನ ಆತ್ಮಚರಿತ್ರೆಯಂತೆ.

ದುರಂತಮಯ ವೈಯಕ್ತಿಕ ಜೀವನ ಹೊಂದಿದ್ದ ಗುರುದತ್ ಆ ನೋವನ್ನು ಮರೆಯಲು ಚಿತ್ರ ನಿರ್ಮಾಣ ಹಾಗೂ ನಿರ್ದೇಶನದ ಮೊರೆ ಹೋದ. ತನ್ನ ನೋವು ಹಾಗೂ ಕನಸುಗಳನ್ನು ಚಿತ್ರಗಳ ಮೂಲಕ ಬಿಂಬಿಸಿದ. ಆತ ನಟಿಸಿದ ’ಸಾಹೀಬ್ ಬೀವಿ ಔರ್ ಗುಲಾಮ’,’ಚೌದವೀ ಕಾ ಚಾಂದ’,’ಆರ್ ಪಾರ್’, ’ಸುಹಾಗನ್’ ಇವತ್ತಿಗೂ ಸ್ಮರಣೀಯ. ಆತ ನಟಿಸಿ ನಿರ್ದೇಶಿಸಿದ ’ಕಾಗಜ್ ಕೆ ಫೂಲ್’ ಮತ್ತು ’ಪ್ಯಾಸಾ’ ಚಿತ್ರಗಳು ಇವತ್ತಿಗೂ ಹಿಂದಿ ಚಿತ್ರರಂಗದ ಮೈಲಿಗಲ್ಲುಗಳು.

ಪ್ರೇಮದ ನವಿರು ಭಾವನೆಗಳನ್ನು ಸೊಗಸಾಗಿ ಚಿತ್ರೀಕರಿಸುವ ಮೂಲಕ ಹಿಂದಿ ಸಿನಿಮಾಗಳಿಗೆ ಸೂಕ್ಷ್ಮತೆ ತಂದುಕೊಟ್ಟ ಗುರುದತ್ ತಮ್ಮ ಸಮಕಾಲೀನ ನಟ, ನಿರ್ದೇಶಕರನ್ನು ಪ್ರಭಾವಗೊಳಿಸಿದಾತ. ಅತ್ಯಂತ ಬಡತನದಿಂದ ಬಂದಿದ್ದರೂ ಹಿಂದಿ ಚಿತ್ರರಂಗದ ದಂತಕತೆಯಾದಾತ. ವೈಯಕ್ತಿಕ ಜೀವನದ ನೋವು, ವೃತ್ತಿ ಜೀವನದ ಅನಿವಾರ್ಯತೆಗಳು ತಂದುಕೊಟ್ಟ ಆಘಾತ ಮರೆಯಲಾಗದೇ ನಿದ್ರೆ ಮಾತ್ರೆ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಾಗ ಗುರುದತ್‌ಗೆ ಕೇವಲ ೩೯ ವರ್ಷ ವಯಸ್ಸು.

’ಸುಹಾನೀ ರಾತ್ ಢಲ್ ಚುಕೀ ಹೈ
ನ ಜಾನೇ ತುಮ್ ಕಬ್ ಆವೋಗೇ...’

ಎಂಬ ಆತನ ಚಿತ್ರದ ಹಾಡು ಗುರುದತ್‌ನನ್ನು, ಆತನ ಕೊಡುಗೆಯನ್ನು ಮತ್ತೆ ಮತ್ತೆ ನೆನಪಿಸುತ್ತವೆ.

- ಚಾಮರಾಜ ಸವಡಿ

ಒಂದು ಕಲಿತವನಿಗೆ ಇನ್ನೊಂದು ಸುಲಭ

2 ಪ್ರತಿಕ್ರಿಯೆ

ಒಂದು ಭಾಷೆಯನ್ನು ಚೆನ್ನಾಗಿ ಕಲಿತವನಿಗೆ ಇನ್ನೊಂದು ಭಾಷೆ ಕಲಿಯುವುದು ಕಷ್ಟವಲ್ಲ ಬಿಡಿ.

ಅನುಮಾನ ಬಂದರೆ, ನಿಮ್ಮ ಭಾಷಾ ಕಲಿಕೆ ಸಾಮರ್ಥ್ಯವನ್ನು ಒಮ್ಮೆ ನೆನಪಿಸಿಕೊಳ್ಳಿ. ಹಾಲು ಎಂಬ ಶಬ್ದದ ಅರ್ಥ ಗೊತ್ತಿದ್ದವನಿಗೆ ಮಿಲ್ಕ್ ಎಂಬ ಇಂಗ್ಲಿಷ್ ಶಬ್ದದ ಅರ್ಥ ಸಹಜವಾಗಿ ಮನದಟ್ಟಾಗುತ್ತದೆ. ದೂದ್ ಎಂಬ ಹಿಂದಿ ಶಬ್ದ ಸಹ ಸಹಜವಾಗಿ ಮನವರಿಕೆಯಾಗುತ್ತದೆ. ಯಾವಾಗ ಮಿಲ್ಕ್ ಅಥವಾ ದೂದ್ ಎಂಬ ಶಬ್ದಗಳು ಬರುತ್ತವೋ ಆಗ ಹಾಲು ಎಂಬ ಕನ್ನಡ ಶಬ್ದ ಸಹಜವಾಗಿ ಮೆದುಳಿನಲ್ಲಿ ಮಿನುಗುತ್ತ ಹೊಸ ಶಬ್ದದ ವ್ಯಾಪ್ತಿಯನ್ನು ಮನದಟ್ಟು ಮಾಡುತ್ತ ಹೋಗುತ್ತದೆ. ಈ ಪ್ರಕ್ರಿಯೆ ಎಷ್ಟು ಸಹಜವಾಗುತ್ತದೆಂದರೆ, ಮಿಲ್ಕ್ ಅಥವಾ ದೂದ್ ಶಬ್ದಗಳು ಪರಕೀಯ ಅನಿಸುವುದಿಲ್ಲ.

ಹೊಸ ಹೊಸ ಶಬ್ದಗಳ ಕಲಿಕೆ ಸುಲಭವಾಗುತ್ತ ಹೋಗುವುದು ಹೀಗೆ.

ಹೀಗಾಗಿ ಇನ್ನೊಂದು ಭಾಷೆ ನಿಧಾನವಾಗಿ ಮನಸ್ಸಿನಲ್ಲಿ ಇಳಿಯುತ್ತ ಹೋಗುತ್ತದೆ. ಪ್ರತಿಯೊಂದು ಹೊಸ ಶಬ್ದಕ್ಕೂ ಪರ್ಯಾಯವಾಗಿ ಕನ್ನಡದ ಶಬ್ದ ಮನಸ್ಸಿನಲ್ಲಿ ನಿಲ್ಲುತ್ತದೆ. ಅದರ ಅರ್ಥವನ್ನು ಹೋಲಿಸಿ ನೋಡುತ್ತದೆ. ನಿಧಾನವಾಗಿ ಅದನ್ನು ಜೀರ್ಣಿಸಿಕೊಳ್ಳುತ್ತದೆ. ಒಂಚೂರು ಆಸಕ್ತಿ ತೋರಿಸಿದರೂ ಸಾಕು, ಇನ್ನೊಂದು ಭಾಷೆಯನ್ನು ಸುಲಭವಾಗಿ ಕಲಿಯಬಹುದು. ನಮ್ಮ ಮಾತೃಭಾಷೆಗೂ ಇನ್ನೊಂದು ಭಾಷೆಗೂ ಇರುವ ಸಾಮ್ಯತೆ ಹಾಗೂ ಭಿನ್ನತೆಯನ್ನು ಗುರುತಿಸುವ ಮೂಲಕ ಅದನ್ನು ಅರ್ಥ ಮಾಡಿಕೊಳ್ಳುತ್ತೇವೆ. ಎಷ್ಟು ಸಮರ್ಥವಾಗಿ ನಮ್ಮ ಮಾತೃಭಾಷೆಯನ್ನು ನಾವು ವ್ಯಕ್ತಪಡಿಸುತ್ತೇವೆಯೋ, ಅಷ್ಟೇ ಸುಲಭವಾಗಿ ಇನ್ನೊಂದು ಭಾಷೆಯಲ್ಲಿಯೂ ಅಭಿವ್ಯಕ್ತಿ ಸಾಧ್ಯವಾಗುತ್ತದೆ.

ಪ್ರತಿಯೊಂದು ಕಲಿಕೆಯೂ ಸುಲಭವಾಗುತ್ತ ಹೋಗುವುದು ಹೀಗೆ. ಒಂದು ಮಾದರಿಯ ಬೈಕ್ ಓಡಿಸಬಲ್ಲವನಿಗೆ ಇನ್ನೊಂದು ವಿನ್ಯಾಸದ ಬೈಕ್ ಕಲಿಯುವುದು ಕಷ್ಟವಾಗುವುದಿಲ್ಲ. ಮೊದಮೊದಲು ಒಂಚೂರು ಹಿಂಜರಿಕೆ ಇದ್ದರೂ, ಕೆಲವೇ ದಿನಗಳಲ್ಲಿ ಅದು ರೂಢಿಯಾಗುತ್ತದೆ. ಯಾವುದೇ ಒಂದು ಪರಿಸರವನ್ನು ಚೆನ್ನಾಗಿ ಅರ್ಥ ಮಾಡಿಕೊಂಡ ವ್ಯಕ್ತಿ ಇನ್ನೊಂದು ಪರಿಸರವನ್ನು ಬಲುಬೇಗ ತನ್ನದಾಗಿಸಿಕೊಳ್ಳುತ್ತಾನೆ. ಒಂದು ವೃತ್ತಿಯ ಸೂಕ್ಷ್ಮವನ್ನು ಅರ್ಥ ಮಾಡಿಕೊಂಡವನಿಗೆ ಇನ್ನೊಂದು ವೃತ್ತಿಯ ಸೂಕ್ಷ್ಮಗಳು ಬೇಗ ಗೊತ್ತಾಗುತ್ತವೆ. ಬಹುಶಃ ಉಪನಿಷತ್ತಿನಲ್ಲಿ ಹೇಳಿದ್ದು ಅನಿಸುತ್ತದೆ:’ಒಂದು ಹಿಡಿ ಮಣ್ಣನ್ನು ಚೆನ್ನಾಗಿ ಅರಿಯಬಲ್ಲೆಯಾದರೆ, ಇಡೀ ಭೂಮಿಯನ್ನೇ ಸುಲಭವಾಗಿ ಅರ್ಥ ಮಾಡಿಕೊಳ್ಳಬಹುದು’. ಇದು ಎಲ್ಲ ರೀತಿಯ ಕಲಿಕೆಗಳಿಗೂ ಅನ್ವಯಿಸುತ್ತದೆ.

ಇಂಥ ಕಲಿಕೆ ಕೊಡುವ ಆತ್ಮವಿಶ್ವಾಸ ಅಪಾರ. ನಮ್ಮಲ್ಲಿ ಬಹುತೇಕ ಜನ ಓದಿದ್ದು ಕನ್ನಡದಲ್ಲಿ. ಅವರು ಯೋಚಿಸಲು ಪ್ರಾರಂಭಿಸಿದ್ದು, ಅಭಿವ್ಯಕ್ತಿ ತೋರಿದ್ದು ಕನ್ನಡದಲ್ಲಿ. ಇದ್ದಕ್ಕಿದ್ದಂತೆ ಇನ್ನೊಂದು ಭಾಷೆ ಕಲಿಯುವ, ಅದರಲ್ಲೇ ತಮ್ಮ ವಿಚಾರಗಳನ್ನು ವ್ಯಕ್ತಪಡಿಸುವ ಅನಿವಾರ್ಯತೆ ಒದಗಿದಾಗ, ಹಿನ್ನೆಲೆಯಲ್ಲಿ ಕನ್ನಡ ಇದ್ದೇ ಇರುತ್ತದೆ. ಅವರ ಕನ್ನಡ ಎಷ್ಟು ಬಲವಾಗಿರುತ್ತದೋ, ಇನ್ನೊಂದು ಭಾಷೆಯಲ್ಲಿ ಅಭಿವ್ಯಕ್ತಿಗೊಳಿಸುವುದು ಅಷ್ಟೇ ಸುಲಭವಾಗುತ್ತದೆ.

ಇದನ್ನು ಎಷ್ಟು ಬೇಕಾದರೂ ವಿಸ್ತರಿಸಬಹುದು. ಈ ಮಾದರಿಯನ್ನು ಜೀವನದ ಯಾವುದೇ ರಂಗಕ್ಕೂ ಅನ್ವಯಿಸಿ ನೋಡಬಹುದು. ಕಲಿಕಾ ಸಾಮರ್ಥ್ಯ ವಿಸ್ತಾರವಾಗಬೇಕೆಂದರೆ, ಯಾವುದೋ ಒಂದು ಮಾದರಿಯ ಬಗ್ಗೆ, ವಿಶೇಷತೆಯ ಬಗ್ಗೆ ಹೆಚ್ಚು ಗೊತ್ತಿದ್ದಷ್ಟೂ ಉತ್ತಮ. ನಮಗೆ ಕನ್ನಡ ಕಾವ್ಯದ ಬಗ್ಗೆ ಚೆನ್ನಾಗಿ ಗೊತ್ತಿದ್ದರೆ, ಆಸಕ್ತಿ ಇದ್ದರೆ, ಇನ್ನೊಂದು ಭಾಷೆಯ ಕಾವ್ಯವೂ ಸುಲಭವಾಗಿ ಗೊತ್ತಾಗುತ್ತದೆ, ಅರ್ಥವಾಗುತ್ತದೆ. ಅದೇ ರೀತಿ ಕನ್ನಡ ರಂಗಭೂಮಿಯ ಬಗ್ಗೆ ಗೊತ್ತಿದ್ದರೆ, ಬೇರೆ ಭಾಷೆಯ ರಂಗಭೂಮಿಯ ವಿಶೇಷತೆಗಳು ಸುಲಭವಾಗಿ ಗೋಚರವಾಗುತ್ತವೆ. ಸರಳವಾಗಿ ಅರ್ಥವಾಗುತ್ತವೆ. ಸಂಗೀತ, ಚಿತ್ರಕಲೆ, ತಂತ್ರಜ್ಞಾನ, ಪತ್ರಿಕೆ, ಬರವಣಿಗೆ- ಹೀಗೆ ಬಹುತೇಕ ಕ್ಷೇತ್ರಗಳು ಸುಲಭವಾಗಿ ತಿಳಿಯುತ್ತ ಹೋಗುವುದು ಹೀಗೆ.

ಆದ್ದರಿಂದ ಕನ್ನಡವನ್ನಷ್ಟೇ ಓದಿದವರು ಖಂಡಿತ ಹಿಂಜರಿಯಬೇಕಾಗಿಲ್ಲ. ನಿಮಗೆ ಕನ್ನಡ ಚೆನ್ನಾಗಿ ಗೊತ್ತಿದ್ದರೆ, ಕೊಂಚ ಆಸಕ್ತಿ ಹಾಗೂ ಶ್ರಮ ಹಾಕುವ ಮೂಲಕ ಇನ್ನೊಂದು ಭಾಷೆಯನ್ನು ಸುಲಭವಾಗಿ ಕಲಿಯಬಹುದು. ನಮ್ಮ ಸುತ್ತಮುತ್ತ ಇರುವ ಬಹುತೇಕ ಜನ ಇನ್ನೊಂದು ಭಾಷೆಯನ್ನು ಸುಲಭವಾಗಿ ಕಲಿತಿದ್ದೇ ಹೀಗೆ.

ಹೀಗಾಗಿ, ಕೀಳರಿಮೆ ಬೇಡ. ಹಿಂಜರಿಯುವ ಅವಶ್ಯಕತೆಯಿಲ್ಲ. ನಡೆಯುವುದನ್ನು ಕಲಿತವ ಕರ್ನಾಟಕದಲ್ಲೂ ನಡೆದಾಡಬಲ್ಲ, ಇಂಗ್ಲಂಡ್‌ನಲ್ಲೂ ನಡೆಯಬಲ್ಲ. ಅದೇ ರೀತಿ ಒಂದು ನುಡಿಯನ್ನು ಚೆನ್ನಾಗಿ ಕಲಿತವ ಇನ್ನೊಂದು ಭಾಷೆಯನ್ನೂ ಅಷ್ಟೇ ಚೆನ್ನಾಗಿ ನುಡಿಯಬಲ್ಲ. ಒಂಚೂರು ಆಸಕ್ತಿ ಇದ್ದರೆ ಕಲಿಕೆ ಸುಲಭವಾಗುತ್ತ ಹೋಗುತ್ತದೆ.

ಅಂಥದೊಂದು ಮನಃಸ್ಥಿತಿ ನಮ್ಮಲ್ಲಿರಬೇಕಷ್ಟೇ.

- ಚಾಮರಾಜ ಸವಡಿ


ಬದುಕೇ, ನಿನಗೊಂದು ಥ್ಯಾಂಕ್ಸ್‌

8 Oct 2008

6 ಪ್ರತಿಕ್ರಿಯೆ
ಎರಡು ದಿನ ಯೋಗಾಸನ, ವ್ಯಾಯಾಮ ಬಿಟ್ಟರೆ ಮನಸ್ಸಿಗೆ ಏನೋ ತಹತಹ. ಛೇ, ಹೀಗಾದರೆ, ಕ್ರಮೇಣ ನಾನು ಸೋಮಾರಿಯಾಗುತ್ತೇನೆ. ನಸುಕಿನಲ್ಲಿ ಏಳಲು ಆಗುವುದಿಲ್ಲ. ಆರೋಗ್ಯ ಕೆಡುತ್ತದೆ. ತಿಂದು ತಿಂದು ಡುಮ್ಮಣ್ಣನಾಗುತ್ತೇನೆ ಎಂದು ಅಂದುಕೊಂಡು, ಹೆದರಿಸಿ, ಹದ ಮೀರಿದ ದಿನಚರಿಯನ್ನು ಮತ್ತೆ ಹಳಿಗೆ ಹತ್ತಿಸುತ್ತೇನೆ. ಊಟ ಮಾಡುವಾಗಲೂ ಅಷ್ಟೇ. ಮೊದಲಿನಿಂದ ಸರಳ ಆಹಾರ ಇಷ್ಟ. ಅನಗತ್ಯವಾಗಿ ಏನನ್ನೂ ತಿನ್ನಲು ಹೋಗುವುದಿಲ್ಲ. ಒಂದೊಮ್ಮೆ ಆಸೆಪಟ್ಟು ತಿಂದೆನಾದರೂ, ದೇಹದ ಮೇಲೆ ಅದರ ಪರಿಣಾಮ ಆಗುವುದಕ್ಕೂ ಮುನ್ನ ಮನಸ್ಸಿಗೆ ಕಸಿವಿಸಿ ಶುರುವಾಗುತ್ತದೆ. ’ಛೇ ಛೇ ಇಷ್ಟೊಂದು ತಿನ್ನಬಾರದಿತ್ತು’ ಎಂದು ಅಂದುಕೊಳ್ಳುತ್ತ ಒಂದು ಮಿನಿ ಉಪವಾಸ ಮಾಡಿ ಅದನ್ನು ಸರಿದೂಗಿಸಿಕೊಳ್ಳುತ್ತೇನೆ.

ರೇಖಾ ಬೈಯುತ್ತಾಳೆ. ಯಾಕೆ ಇಷ್ಟೊಂದು ಕಟ್ಟು ಮಾಡಿಕೊಳ್ಳುತ್ತೀರಿ? ಒಂದಿಷ್ಟು ಶಿಸ್ತು ತಪ್ಪಿದರೆ ಏನು ಮಹಾ ಆಗುತ್ತದೆ? ಎನ್ನುತ್ತಾಳೆ.

ಆದರೆ, ಆಕೆ ಕೂಡ ಅಂಥದೊಂದು ಕಟ್ಟುಪಾಡನ್ನು ರೂಢಿಸಿಕೊಂಡಿದ್ದಾಳೆ. ಬಹುಶಃ ನಮ್ಮಿಬ್ಬರ ಮನಸ್ಸಿನೊಳಗೆ ಅಂಥದೊಂದು ಶಿಸ್ತು ಇಳಿದುಬಿಟ್ಟಿದೆ.

ಅದು ಅನಿವಾರ್ಯವೂ ಹೌದು. ನಾವು ಕಾಯಿಲೆ ಬೀಳಲಾರೆವು. ಅಂದರೆ, ಕಾಯಿಲೆ ಬೀಳುವಂತಿಲ್ಲ. ನೌಕರಿಯ ಹಂಗಿಗೆ ಸಿಲುಕಿ, ಊರು ತೊರೆದು ಬಂದಾಗಿನಿಂದ ಇಂಥದೊಂದು ಕಟ್ಟುಪಾಡು ನಮಗೆ ಸಹಜ ದಿನಚರಿಯಾಗಿದೆ. ಹಾಗಂತ, ಮುಂಚೆ ತೀರಾ ಅಶಿಸ್ತಿನಿಂದ ಇದ್ದೆವೆಂದೇನೂ ಅರ್ಥವಲ್ಲ. ಆದರೆ, ಗೌರಿ ಹುಟ್ಟಿದ ನಂತರ ಅಂಥದೊಂದು ಶಿಸ್ತು ಸಹಜವಾಗಿ ಬಂದಿದೆ.

ಏಕೆಂದರೆ, ನಾನು ಕಾಯಿಲೆ ಬಿದ್ದರೆ, ಕೆಲಸಕ್ಕೆ ಹೋಗಲು ಆಗುವುದಿಲ್ಲ. ನನ್ನ ನಿತ್ಯದ ಚಟುವಟಿಕೆಗಳು ಮೂಲೆ ಹಿಡಿಯುತ್ತವೆ. ಕಾಯಿಲೆ ಬಿದ್ದರೂ ಡಾಕ್ಟರ್ ಹತ್ತಿರ ನಾನೇ ಹೋಗಬೇಕು. ಏಕೆಂದರೆ, ಮಗುವನ್ನು ಕರೆದುಕೊಂಡು, ಕಾಯಿಲೆ ಬಿದ್ದ ನನ್ನನ್ನೂ ಸಂಭಾಳಿಸಲು ಆಕೆಗೆ ಕಷ್ಟ. ಎರಡನೇ ಮಗು ಹುಟ್ಟಿದ ನಂತರ, ಮನೆಯೇ ಆಕೆಯ ಕಾರ್ಯಕ್ಷೇತ್ರವಾಗಿದೆ. ಹೋದರೆ ಎಲ್ಲರೂ ಒಟ್ಟಿಗೇ ಹೋಗಬೇಕು. ಇಲ್ಲದಿದ್ದರೆ ನಾನೊಬ್ಬನೇ ಹೋಗಬೇಕು. ಅದರಲ್ಲೂ ಗೌರಿಯನ್ನು ಬಿಟ್ಟು ಹೋಗಲು ಆಗದು.

ಏಕೆಂದರೆ, ಗೌರಿ ವಿಶಿಷ್ಟಚೇತನ ಮಗು. ಆಕೆಯ ಬುದ್ಧಿ ಬೆಳವಣಿಗೆ ತೀರಾ ನಿಧಾನ.

ಬಹುಶಃ ಇದು ವಿಶಿಷ್ಟಚೇತನ ಮಕ್ಕಳನ್ನು ಹೊಂದಿದ ಎಲ್ಲಾ ಕುಟುಂಬಗಳ ದಿನಚರಿ ಎಂದು ನಾನು ಅಂದುಕೊಂಡಿದ್ದೇನೆ. ವಿಶಿಷ್ಟಚೇತನ ಮಕ್ಕಳನ್ನು ನೋಡಿಕೊಳ್ಳಲು ಒಬ್ಬರು ಬೇಕೇ ಬೇಕು. ಅದು ನಿರಂತರ ಕರ್ತವ್ಯ. ಅದರಲ್ಲಿ ಯಾಮಾರುವಂತಿಲ್ಲ. ನಿತ್ಯದ ಕೆಲಸಗಳನ್ನು ನಿರ್ಲಕ್ಷ್ಯಿಸುವಂತಿಲ್ಲ. ಗೌರಿಯನ್ನು ವಾಕಿಂಗ್ ಕರೆದುಕೊಂಡು ಹೋಗದಿರಲು ನೆಪಗಳನ್ನು ಹುಡುಕುವಂತಿಲ್ಲ. ಅವರಿಗೆ ಫಿಜಿಯೋಥೆರಪಿ ಮಾಡಿಸುವುದರಲ್ಲಿ ಲೋಪ ಮಾಡುವಂತಿಲ್ಲ. ನಾವು ಬೇಕಾದರೆ ಊಟ ಬಿಡಬಹುದು, ಟಿವಿ ನೋಡದಿರಬಹುದು. ಹರಟೆ ಕೊಚ್ಚದಿರಬಹುದು. ಅನಗತ್ಯ ಮೊಬೈಲ್ ಕರೆಗಳನ್ನು ಮಾಡದಿರಬಹುದು. ಆದರೆ, ಗೌರಿಯ ಕೆಲಸಗಳನ್ನು ನಿರ್ಲಕ್ಷ್ಯಿಸುವಂತಿಲ್ಲ.

ಹೀಗಾಗಿ, ನಾವು ಕಾಯಿಲೆ ಬೀಳಲಾರೆವು. ನಮಗೆ ಅದು ತೀರಾ ದುಬಾರಿ ಸಂಗತಿ. ನಾನು ಕಾಯಿಲೆ ಬಿದ್ದರೆ ಹೇಗೋ ನಿಭಾಯಿಸಬಹುದು. ಆದರೆ, ರೇಖಾ ಮಲಗಿಕೊಂಡರೆ ಮುಗೀತು. ಕಚೇರಿಗೆ ರಜೆ ಹಾಕುವುದು ಅನಿವಾರ್ಯ. ಪೇಪರ್ ಕೂಡಾ ನೋಡಲಾಗುವುದಿಲ್ಲ. ಎಷ್ಟೋ ಸಾರಿ ಮೊಬೈಲ್ ಬಡಿದುಕೊಳ್ಳುತ್ತಿದ್ದರೂ ಮಾತನಾಡುವುದಿರಲಿ, ಅದರ ಮುಖ ನೋಡಲೂ ಆಗುವುದಿಲ್ಲ. ಮಕ್ಕಳ ಜೊತೆಗೆ ಕಾಯಿಲೆ ಬಿದ್ದ ಹೆಂಡತಿಯನ್ನೂ ನೋಡಿಕೊಳ್ಳಬೇಕು. ಒಂದು ದಿನ ತಳ್ಳಬಹುದು. ಎರಡನೇ ದಿನ ಹೇಗೋ ನಿಭಾಯಿಸಬಹುದು. ಅದಕ್ಕಿಂತ ಹೆಚ್ಚಿಗೆ ಆಕೆ ಮಲಗಿದರೆ, ಊರಿನಿಂದ ಯಾರಾದರೂ ಒಬ್ಬರನ್ನು ಕರೆಸುವುದು ಅನಿವಾರ್ಯವಾಗುತ್ತದೆ.

ಅವರಾದರೂ ಎಷ್ಟು ಸಾರಿ ಬಂದಾರು? ಊರಿನಲ್ಲಿ ಅವರಿಗೂ ತಮ್ಮದೇ ಆದ ತಾಪತ್ರಯಗಳಿರುತ್ತವೆ. ಕಾಯಿಲೆ ಮಲಗಿದವಳ ಆರೈಕೆಗೆಂದು ಅಷ್ಟು ದೂರದಿಂದ ಹೇಗೆ ಬಂದಾರು? ನಮ್ಮದು ನಿತ್ಯದ ಗೋಳು. ಒಂದು ಸಾರಿ ಬರಬಹುದು, ಇನ್ನೊಂದು ಸಾರಿ ಬರಬಹುದು. ಅದಕ್ಕಿಂತ ಹೆಚ್ಚು ಬರಲು ಅವರಿಗೂ ಕಷ್ಟ. ಅದು ಗೊತ್ತಿದ್ದೂ ಅವರನ್ನು ಬರ ಹೇಳುವುದು ನಮಗೂ ಕಷ್ಟ.

ಹೀಗಾಗಿ, ನಾವು ಕಾಯಿಲೆ ಬೀಳದಂತೆ ನೋಡಿಕೊಳ್ಳುವುದನ್ನು ಕಲಿತಿದ್ದೇವೆ. ಮಕ್ಕಳಿಗೆ ಫಿಜಿಯೋಥೆರಪಿ ಮಾಡಿಸುವಾಗ ನಮ್ಮ ವ್ಯಾಯಾಮವೂ ಆಗುತ್ತದೆ. ಅವರಿಗೆ ವಾಕಿಂಗ್ ಮಾಡಿಸುತ್ತ ನಾವೂ ವಾಕ್ ಮಾಡಿ ಗಟ್ಟಿಯಾಗುತ್ತೇವೆ. ಅವರಿಗೆ ಕೊಡುವ ಉತ್ತಮ ಗುಣಮಟ್ಟದ ಆಹಾರ ಸೇವಿಸುತ್ತ ನಾವೂ ಉತ್ತಮವಾಗಿದ್ದೇವೆ. ಮಕ್ಕಳಿಗೆ ವರ್ಜ್ಯವಾದ ಬಹುತೇಕ ತಿನಿಸುಗಳು ನಮಗೂ ವರ್ಜ್ಯವೇ.

ಇದನ್ನು ನಾನು ತ್ಯಾಗ ಎಂದು ಕರೆಯುವುದಿಲ್ಲ. ಇದು ಒಂಥರಾ ರೂಢಿ. ಮೊದಮೊದಲು ಕಷ್ಟವಾಯಿತಾದರೂ, ಕ್ರಮೇಣ ನಾವು ಅದಕ್ಕೆ ಒಗ್ಗಿಕೊಂಡಿದ್ದೇವೆ. ನಾವು ಬೆಳೆದಷ್ಟೂ, ನಮ್ಮ ಮಕ್ಕಳು ಬೆಳೆಯುತ್ತಾರೆ ಎಂಬುದನ್ನು ಕಂಡುಕೊಂಡಿದ್ದೇವೆ. ನಾವು ಹಸನ್ಮುಖಿಯಾದಷ್ಟೂ ನಮ್ಮ ಮಕ್ಕಳು ಹಸನ್ಮುಖಿಗಳಾಗುತ್ತಾರೆ, ನಾವು ಬೆಳೆದಷ್ಟೂ ನಮ್ಮ ಮಕ್ಕಳೂ ಬೆಳೆಯುತ್ತವೆ ಎಂಬುದನ್ನು ಕಂಡುಕೊಂಡಿದ್ದೇವೆ.

ಹೀಗಾಗಿ, ನಾವು ಆರೋಗ್ಯವಾಗಿರಲು ಯತ್ನಿಸುತ್ತೇವೆ. ಹಸನ್ಮುಖಿಗಳಾಗಲು ಪ್ರಯತ್ನಿಸುತ್ತೇವೆ. ಉತ್ತಮ ಅಭ್ಯಾಸಗಳನ್ನು ರೂಢಿಸಿಕೊಂಡಿದ್ದೇವೆ. ಈ ಅನಿವಾರ್ಯತೆ, ಈ ರೂಢಿ ನಮಗೆ ಬದುಕಿನ ಹಲವಾರು ಉತ್ತಮಾಂಶಗಳನ್ನು ನೀಡಿದೆ. ನಮ್ಮನ್ನು ನಿತ್ಯ ಪ್ರಬುದ್ಧರನ್ನಾಗಿಸುತ್ತಿದೆ. ಮಾಗಿಸುತ್ತಿದೆ. ಬೆಳೆಸುತ್ತಿದೆ. ಹೊಸ ಹೊಸ ಅನುಭವಗಳಿಗೆ ಒಡ್ಡುತ್ತಿದೆ.

ಇಂಥದೊಂದು ಮನಃಸ್ಥಿತಿಯನ್ನು ನಮಗೆ ನೀಡಿದ್ದಕ್ಕಾಗಿ, ಬದುಕೇ ನಿನಗೊಂದು ಥ್ಯಾಂಕ್ಸ್.

- ಚಾಮರಾಜ ಸವಡಿ

ವಿವಾಹಿತೆಯ ಮೇಲೆ ಅತ್ಯಾಚಾರ, ನಮ್ಮ ಪ್ರತಿನಿಧಿಯಿಂದ

4 Oct 2008

2 ಪ್ರತಿಕ್ರಿಯೆ

ಪತ್ರಿಕೆ ಓದುವುದನ್ನು ಕೇಳಿದ್ದೀರಾ?

ಗೊಂದಲ ಬೇಡ, ನಾನು ಸರಿಯಾಗಿಯೇ ಕೇಳುತ್ತಿದ್ದೇನೆ. ನಾವೆಲ್ಲ ಪತ್ರಿಕೆ ಓದುತ್ತೇವೆ. ಬಹುತೇಕ, ಮನಸ್ಸಿನೊಳಗೇ ಓದುತ್ತೇವೆ. ಆದರೆ, ಹಳ್ಳಿಗಳಲ್ಲಿ ಪತ್ರಿಕೆಯನ್ನು ಗಟ್ಟಿಯಾಗಿ ಓದುವುದನ್ನು ಕೇಳಿದ್ದೀರಾ?

ಒಮ್ಮೆ ಕೇಳಬೇಕು ನೀವು. ಬಲೇ ತಮಾಷೆಯಾಗಿರುತ್ತದೆ. ಹೆಡ್ಡಿಂಗ್‌ನಿಂದ ಹಿಡಿದು, ಕೊನೆಗೆ ಅಚ್ಚಾಗಿರುವ ಏಜೆನ್ಸಿ ಹೆಸರುಗಳಿಂದ ಅಥವಾ ಬೈಲೈನ್‌ಗಳಿಂದ ಹಿಡಿದು ಪ್ರತಿಯೊಂದನ್ನೂ ಗಟ್ಟಿಯಾಗಿ ಓದುತ್ತಾರೆ ಕೆಲವರು. ಅವರು ಓದುವುದನ್ನು ಸುತ್ತಮುತ್ತ ಹತ್ತಾರು ಜನ ಗಮನವಿಟ್ಟು ಕೇಳುತ್ತಿರುತ್ತಾರೆ. ಅಲ್ಲಿ ಚರ್ಚೆಗಳು ನಡೆಯುತ್ತವೆ. ವಾದಗಳಾಗುತ್ತವೆ. ವಿವಾದಗಳೂ ಹುಟ್ಟಿಕೊಳ್ಳುತ್ತವೆ. ಸುದ್ದಿಯ ಪರ ಮತ್ತು ವಿರೋಧಿ ಗುಂಪುಗಳು ಸೃಷ್ಟಿಯಾಗಿ ಸಣ್ಣ ಜಗಳಗಳೂ ನಡೆಯುವುದುಂಟು. ಅದಕ್ಕೇ ಕೇಳಿದ್ದು, ಪತ್ರಿಕೆ ಓದುವುದನ್ನು ಕೇಳಿದ್ದೀರಾ ಎಂದು.

ಒಂದೆರಡು ತಮಾಷೆ ಪ್ರಸಂಗಗಳು ಇಲ್ಲಿ ನೆನಪಾಗುತ್ತವೆ.

ನಮ್ಮ ಕಡೆ ಸಂಯುಕ್ತ ಕರ್ನಾಟಕ ಏಕಮೇವಾದ್ವಿತೀಯ ಪತ್ರಿಕೆಯಾಗಿದ್ದ ಕಾಲವದು. ನಮ್ಮೂರಿಗೆ ಬರುತ್ತಿದ್ದ ಪತ್ರಿಕೆಗಳ ಪೈಕಿ ಸಂ.ಕ.ದ್ದೇ ಸಿಂಹಪಾಲು. ಅದು ಬೆಳಿಗ್ಗೆ ಹತ್ತಕ್ಕೆ ಬಂದರೆ, ಪ್ರಜಾವಾಣಿ ಮಧ್ಯಾಹ್ನ ಮೂರು ಗಂಟೆಗೆ ಬರುತ್ತಿತ್ತು. ಕನ್ನಡಪ್ರಭ ಬಂದರೆ ಬಂತು ಇಲ್ಲವೆಂದರೆ ಇಲ್ಲ. ಹೀಗಾಗಿ, ಸಂ.ಕ. ಬರುವುದನ್ನೇ ಕಾಯುತ್ತ ಹೋಟೆಲ್ ಪಕ್ಕದ ಬಸ್‌ಸ್ಟ್ಯಾಂಡ್‌ನಲ್ಲಿ ಜನ ಕೂತಿರುತ್ತಿದ್ದರು. ಪತ್ರಿಕೆ ಬರುವುದೊಂದೇ ತಡ, ಹೋಟೆಲ್ ಕಾಪಿ ಹಾಕಿದ ಹುಡುಗ, ಊರೊಳಗೆ ಪತ್ರಿಕೆ ಹಂಚಲು ಹೋಗುತ್ತಿದ್ದ. ಇದ್ದ ಒಂದು ಪತ್ರಿಕೆ ಅಷ್ಟೂ ಪುಟಗಳನ್ನು ಹಂಚಿಕೊಂಡು ಜನ ಓದಲು ಗುಂಪುಗುಂಪಾಗಿ ಕೂಡುತ್ತಿದ್ದರು. ಅವರ ಪೈಕಿ ಬಹುತೇಕರು ಅನಕ್ಷರಸ್ಥರು ಎಂಬುದನ್ನು ಬಿಡಿಸಿ ಹೇಳಬೇಕಿಲ್ಲ.

ಪತ್ರಿಕೆಗಳ ಸುದ್ದಿಗಳೂ ಬಲೇ ತಮಾಷೆಯಾಗಿರುತ್ತಿದ್ದವು. ಅಪರಾಧ ಸುದ್ದಿಗಳಿಗೆ ಎಲ್ಲಿಲ್ಲದ ರೋಚಕತೆ. ಪುಟಗಳು ಹಂಚಿಹೋಗಿರುತ್ತಿದ್ದುದರಿಂದ, ಮುಖ್ಯ ಸುದ್ದಿ ಯಾವುದು ಎಂಬುದು ನಗಣ್ಯವಾಗುತ್ತಿತ್ತು. ಸಿಕ್ಕ ಪುಟದಲ್ಲಿನ ಸುದ್ದಿಗಳನ್ನೇ ಒಬ್ಬ ಜೋರಾಗಿ ಓದುತ್ತ ಹೋಗುತ್ತಿದ್ದ. ಪ್ರತಿಯೊಂದು ಪ್ಯಾರಾಕ್ಕೂ ಆತ ನಿಲ್ಲಲೇಬೇಕು. ಏಕೆಂದರೆ, ಸುದ್ದಿ ಕೇಳುತ್ತಿದ್ದವರ ಕಾಮೆಂಟ್‌ಗಳಿಗೆ ಅವಕಾಶ ಬೇಕಲ್ಲ! ಆಗ (ಈಗ ಕೂಡಾ) ಸಂಯುಕ್ತ ಕರ್ನಾಟಕದ ನ್ಯೂಸ್ ಪ್ರಿಂಟ್ ಗುಣಮಟ್ಟ ಅಷ್ಟಕ್ಕಷ್ಟೇ. ಎರಡು ಕೈಗಳು ಬದಲಾಯಿಸುವುದರಲ್ಲಿ ಪತ್ರಿಕೆಯ ಅಕ್ಷರಗಳು ಮಸುಕಾಗಿ, ಹಾಳೆ ಮುದ್ದೆಯಾಗಿ ಓದುವುದು ಕಷ್ಟವಾಗಿಬಿಡುತ್ತಿತ್ತು. ಆಗ ಬಣ್ಣದ ಮುದ್ರಣ ಬಂದಿದ್ದಿಲ್ಲ. ಅಥವಾ ಸಂ.ಕ. ಅದನ್ನು ಅಳವಡಿಸಿಕೊಂಡಿರಲಿಲ್ಲ. ಚಿತ್ರಗಳೋ ಚುಕ್ಕೆಚುಕ್ಕೆಗಳ ಗುಪ್ಪೆಗಳು. ಆದರೂ, ಅದು ತರುತ್ತಿದ್ದ ಸುದ್ದಿಗಳು ರೋಚಕವಾಗಿರುತ್ತಿದ್ದವು.

ಪತ್ರಿಕೆ ಬಿಡಿಸಿಕೊಂಡು ಮೇಲಿನಿಂದ ಓದಲು ಶುರು ಮಾಡಿದರೆ ಜನ ನಿಶ್ಯಬ್ದವಾಗಿ ಕೇಳುತ್ತಿದ್ದರು. ಅದೇನೋ ಗೊತ್ತಿಲ್ಲ, ಅವತ್ತಿಗೂ ಇವತ್ತಿಗೂ ಸಂ.ಕ.ದ ಬಹುತೇಕ ಸುದ್ದಿಗಳು ’ನಮ್ಮ ಪ್ರತಿನಿಧಿಯಿಂದ’ ಎಂಬ ಒಕ್ಕಣೆಯಿಂದ ಶುರುವಾಗುತ್ತವೆ. ಹೆಡ್ಡಿಂಗ್ ಮುಗಿದ ಕೂಡಲೇ ಕಂಸದಲ್ಲಿ ’ನಮ್ಮ ಪ್ರತಿನಿಧಿಯಿಂದ’ ಎಂಬುದು ಶುರುವಾಗಬೇಕು. ಹಾಗಂದರೇನು ಎಂಬುದು ಆಗ ಗೊತ್ತಿದ್ದಿಲ್ಲ. ಅದರ ನಿಜಾರ್ಥ ತಿಳಿದಿದ್ದೇ ನಾನು ಪತ್ರಿಕೋದ್ಯಮಕ್ಕೆ ಬಂದಾಗ. ತಮ್ಮ ವರದಿಗಾರ ನೀಡಿದ ಸುದ್ದಿಗಳನ್ನೇ ಸಂ.ಕ. ನಮ್ಮ ಪ್ರತಿನಿಧಿಯಿಂದ ಎಂದು ಬಲೇ ಹೆಮ್ಮೆಯಿಂದ ಅಚ್ಚು ಹಾಕಿಕೊಳ್ಳುತ್ತಿತ್ತು. ಅದು ಈಗಲೂ ಇದೆ.

ಅವತ್ತು ಬಂದ ಸುದ್ದಿ ಯಾವುದೋ ಹಳೆಯ ಕ್ರೈಂ. ವಿವಾಹಿತೆಯ ಮೇಲೆ ಅತ್ಯಾಚಾರ ಎಸಗಿದ್ದ ಸುದ್ದಿಯದು. ಕಟ್ಟೆಯ ಮೇಲೆ ಕೂತವ ರಾಗವಾಗಿ ಓದಲು ಶುರು ಮಾಡಿದ: ವಿವಾಹಿತೆಯ ಮೇಲೆ ಅತ್ಯಾಚಾರ ನಮ್ಮ ಪ್ರತಿನಿಧಿಯಿಂದ...

ಅತ್ಯಾಚಾರ ಎಲ್ಲಾಯಿತು, ಹೇಗಾಯಿತು, ಪೊಲೀಸರು ಏನು ಹೇಳುತ್ತಾರೆ, ಇತ್ಯಾದಿ ವಿವರಗಳೆಲ್ಲ ಮುಗಿದ ನಂತರ, ಸಮಾಜ ಕೆಟ್ಟು ಹೋಗುತ್ತಿದೆ, ಕಾನೂನು ಸುವ್ಯವಸ್ಥೆ ಕುಸಿದು ಬಿದ್ದಿದೆ ಎಂಬ ಕಳವಳದೊಂದಿಗೆ ವರದಿ ಮುಕ್ತಾಯವಾಗುತ್ತಿತ್ತು. ಮುಂದಿನ ಸುದ್ದಿಗೆ ಹೋಗುವ ಮುನ್ನ, ಕಟ್ಟೆಯ ಮೇಲೆ ಕೂತವರಿಂದ ಕಾಮೆಂಟ್‌ಗಳು, ಚರ್ಚೆ, ವಾಗ್ವಾದ.

ತಾಕತ್ತಿದ್ದರೆ ಸ್ಪರ್ಧಿಸಿ, ಸಚಿವರಿಗೆ ಪಾಟೀಲ್ ಸವಾಲ್ ನಮ್ಮ ಪ್ರತಿನಿಧಿಯಿಂದ ಗದಗ ಜೂನ್ ೨೯ ಒಂದು ವೇಳೆ ...ರಿಗೆ ನಿಜವಾದ ತಾಕತ್ತಿದ್ದರೆ ಗದಗ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದು ತೋರಿಸಲಿ ಎಂದು ಹುಲಕೋಟಿ ಹುಲಿ ಕೆ.ಎಚ್. ಪಾಟೀಲ್ ಕಾಂಗ್ರೆಸ್ ಸಚಿವರಿಗೆ ಸವಾಲು ಹಾಕಿದ್ದಾರೆ. ಖಾಸಗಿ ಸಮಾರಂಭಕ್ಕೆ ಇಲ್ಲಿಗೆ ಆಗಮಿಸಿದ್ದ ಅವರು ಈ ಸವಾಲು ಒಡ್ಡಿದ್ದಾರೆ... - ಹೀಗೆ ಸುದ್ದಿಗಳು ಪುಂಖಾನುಪುಂಖವಾಗಿ ಓದಲ್ಪಡುತ್ತಿದ್ದವು. ಅಲ್ಲಿ ಕೂತ ಯಾರಿಗೂ ಅರ್ಜೆಂಟ್ ಕೆಲಸಗಳಿರುತ್ತಿದ್ದಿಲ್ಲ. ಮಧ್ಯಾಹ್ನದವರೆಗೆ ಸಮಯ ಕಳೆಯುತ್ತಿದ್ದುದೇ ಹೀಗೆ.

ಟಿವಿ ಎಂಬ ವಸ್ತುವಿನ ಅಸ್ತಿತ್ವವೇ ಇಲ್ಲದ, ಟೇಪ್ ರೆಕಾರ್ಡರ್‍ಗಳಿನ್ನೂ ಕಾಲಿಟ್ಟಿರದ ದಿನಗಳಲ್ಲಿ ಪತ್ರಿಕೆಗಳು ಹಾಗೂ ಅವುಗಳಲ್ಲಿ ಬರುತ್ತಿದ್ದ ಚಿತ್ರ-ವಿಚಿತ್ರ ಸುದ್ದಿಗಳು ಹಳ್ಳಿಗಳನ್ನು ಆವರಿಸಿಕೊಂಡಿದ್ದವು. ನನಗೆ ಓದುವ ಆಸಕ್ತಿ ಹುಟ್ಟಿದ್ದೇ ಇವುಗಳಿಂದ. ನಮ್ಮ ಹಳ್ಳಿಯ ಆಚೆ ಬೇರೆಯದೇ ಆದ ಜಗತ್ತಿದೆ ಎಂಬ ಸತ್ಯವನ್ನು ನಿತ್ಯವೂ ಬಿತ್ತರಿಸುತ್ತ, ಆ ಜಗತ್ತನ್ನೊಮ್ಮೆ ಕಾಣಬೇಕೆಂಬ ಹುಚ್ಚನ್ನು ಬಿತ್ತಿದ್ದು ಅವು.

ಇದೆಲ್ಲಾ ಏಕೆ ನೆನಪಾಯಿತೆಂದರೆ, ಇವತ್ತು ನಸುಕಿನಲ್ಲಿ ಹೋದ ಕರೆಂಟ್ ಬೇಗ ಬರಲೇ ಇಲ್ಲ. ಕಂಪ್ಯೂಟರ್ ಗೌರಮ್ಮನಂತೆ ಕೂತಿತ್ತು. ಟಿವಿ ಸತ್ತುಹೋಗಿತ್ತು. ರೇಡಿಯೋದಲ್ಲಿ ಸುದ್ದಿ ಬರುವ ಸಮಯ ಪತ್ತೆ ಹಚ್ಚುವುದೇ ಕಷ್ಟ. ಬಂದರೂ ಅವು ಸರ್ಕಾರಿ ಸುದ್ದಿಗಳು. ಏನು ಮಾಡುವುದು? ಪತ್ರಿಕೆ ಹಾಕುವ ಹುಡುಗನ ದಾರಿ ಕಾಯುತ್ತ ನಿಂತಾಗ ಹಳೆಯ ದಿನಗಳು ಕಣ್ಮುಂದೆ ಸುಳಿದವು. ಹಳ್ಳಿ, ಹೋಟಲ್, ಬಸ್‌ಸ್ಟ್ಯಾಂಡ್ ಹೆಸರಿನ ಸಣ್ಣ ಕಟ್ಟೆ, ಅಲ್ಲಿನ ಜನ, ಅವರ ಸುದ್ದಿ ದಾಹ ಎಲ್ಲಾ ನೆನಪಾಗುತ್ತ ಹೋದವು.

- ಚಾಮರಾಜ ಸವಡಿ