Showing posts with label ನೆನಪು. Show all posts
Showing posts with label ನೆನಪು. Show all posts

ಅಪರಾತ್ರಿಯಲ್ಲೊಬ್ಬ ಬುದ್ಧ

2 May 2012

2 ಪ್ರತಿಕ್ರಿಯೆ
ಸಣ್ಣ ಕಂಬದಂಥ ಸಿಡಿಲು ಕಣ್ಣೆದುರು ಅಪ್ಪಳಿಸಿದಾಗ, ಕುಬ್ಜ ನಾನು ಎಂಬ ಭಾವನೆ.

ಪ್ರೆಸ್‌ ಕ್ಲಬ್‌ನಿಂದ ಹೊರಟಾಗಲೇ ಹನ್ನೊಂದು ಗಂಟೆ. ಮಳೆ ಬರಬಹುದು ಎಂದು ಡಿಕ್ಕಿಯಲ್ಲಿಟ್ಟಿದ್ದ ಜರ್ಕಿನ್‌ ಧರಿಸಿ, ಲೋಡ್‌ ಆಗಿದ್ದ ಮಿತ್ರನನ್ನು ಹಿಂದೆ ಕೂರಿಸಿಕೊಂಡು, ಎಂದೂ ಹೋಗದಷ್ಟು ಕಡಿಮೆ ವೇಗದಲ್ಲಿ ಗಾಡಿ ಓಡಿಸುತ್ತ ಹೊರಟೆ. ಶಿವಾನಂದ ಸರ್ಕಲ್‌ ಹತ್ತಿರ ಸಿಗ್ನಲ್‌ ಕೆಂಪಡರಿದಾಗ ಗಾಡಿ ನಿಲ್ಲಿಸಿ ನೋಡುತ್ತಿರುವಾಗ ಹೊಡೆಯಿತು ಬರಸಿಡಿಲು.

ಕಣ್ಣೆದುರೇ ದೊಡ್ಡ ಕಂಬದಂಥ ಸಿಡಿಲು.

ಕಣ್ಣು ಕೋರೈಸಿದಂತಾಯ್ತು. ತುಂಬ ದಿನ ಆಗಿತ್ತು ಅಂಥ ಸಿಡಿಲನ್ನು ಹತ್ತಿರದಿಂದ ನೋಡಿ. ಬಾಲ್ಯದಲ್ಲಿ ಸಾಕಷ್ಟು ಬಾರಿ ಕಂಡಿದ್ದೇನೆ. ಅಲೆದಾಟದ ದಿನಗಳಲ್ಲೂ ಅವು ಆಗಾಗ ದರ್ಶನ ಕೊಟ್ಟಿದ್ದುಂಟು. ಆದರೆ, ಹತ್ತಾರು ವರ್ಷಗಳ ನಂತರ ಇದೇ ಮೊದಲ ಬಾರಿ ಕಂಡು ಅರೆಕ್ಷಣ ಮೂಕನಾಗಿದ್ದೆ.

ಆ ಕ್ಷಣಕ್ಕೆ, ಬದುಕು ನಶ್ವರ ಅನಿಸಿದ್ದು ಸುಳ್ಳಲ್ಲ.

ಸಿಗ್ನಲ್‌ ಹಸಿರಾದಾಗ ಗಾಡಿಗೆ ಓಡುವ ಆತುರವಿರಲಿಲ್ಲ. ಮಲ್ಲೇಶ್ವರಂ ತಲುಪಿ, ಮಿತ್ರನನ್ನು ಮನೆಯೊಳಗೆ ಕಳಿಸಿ, ಹುಷಾರಾಗಿ ಬಾಗಿಲು ಹಾಕಿಕೊಳ್ಳಲು ಹೇಳಿ ಮನೆಯತ್ತ ಹೊರಟೆ. ರೈಲ್ವೇ ಸೇತುವೆ ದಾಟಿ, ಮೆಟ್ರೊ ಕೆಲಸ ನಡೆಯುವ ಜಾಗದ ಹತ್ತಿರ ಗಾಡಿ ನಿಧಾನವಾಗಿಸಿದಾಗ ಮತ್ತೊಂದು ಸಿಡಿಲು ಹೊಡೀತು.

ಮತ್ತದೇ ಕೋರೈಸುವ ಕಂಬ.

ಗಾಡಿ ಪೂರ್ತಿ ನಿಧಾನವಾಯ್ತು. ರಸ್ತೆಗೆ ರಸ್ತೆಯೇ ಬಹುತೇಕ ನಿರ್ಜನ. ಮಧ್ಯರಾತ್ರಿ ಸಮೀಪಿಸುವ ಈ ಹೊತ್ತು ಕಾಣುತ್ತಿದ್ದ ಟ್ರಾಫಿಕ್‌ನ ಶೇ.೧೦ರಷ್ಟೂ ಕಾಣಲಿಲ್ಲ.

ಮನಸು ಯೋಚಿಸುತ್ತಿತ್ತು: ಕಂಡ, ಕಾಣದ, ಈಡೇರಿದ, ಈಡೇರದ ಎಲ್ಲವೂ ಛಕಛಕ ಕಣ್ಣೆದುರು ಹಾಯ್ದುಹೋದವು.

ಒಡಲಾಳದೊಳಗಿಂದ ಹಸಿವೆಯ ಜೊತೆಗೆ ಸಣ್ಣಗೇ ಖಿನ್ನತೆ.

ಮಳೆ ಕೊಂಚ ಜೋರಾಯಿತು. ಹೆಲ್ಮೆಟ್‌ನ ಗಾಜಿನ ತುಂಬ ಮಳೆಮಣಿಗಳು. ಗಾಜು ಹಿಂದಕ್ಕೆ ಸರಿಸಿ, ಅಪ್ಪಳಿಸುತ್ತಿದ್ದ ಹನಿಗಳಿಗೆ ಮುಖವೊಡ್ಡಿದಾಗ, ಎಂಥದೋ ಹಿತಕರ ಭಾವನೆ.

ಅದು ನನ್ನ ಬಾಲ್ಯ.

ಬೀಳುವ ಮಳೆಗೆ ಆಕಾಶಕ್ಕೆ ಮುಖವೊಡ್ಡಿ ಗಿರಗಿಟ್ಲೆ ತಿರುಗುತ್ತಿದ್ದ ಚಿಂತೆಯರಿಯದ ಬಾಲ್ಯದ ನೆನಪು.

ನವರಂಗ್‌ ದಾಟಿ, ವೆಸ್ಟ್‌ ಆಫ್‌ ಕಾರ್ಡ್‌ ರಸ್ತೆಯತ್ತ ತಿರುಗಿದಾಗ ರಸ್ತೆಗೆ ರಸ್ತೆಯೇ ನಿರ್ಜನ. ಖಾಲಿ ರಸ್ತೆಯಲ್ಲಿ ಸಣ್ಣ ಮಳೆ ಹನಿಗಳ ಸ್ವಚ್ಛಂದ ಆಟ.

ಒಳಗೂ ಹೊರಗೂ ಒಬ್ಬನೇ ಇರುವ ಇಂಥ ಘಳಿಗೆಗಳೇ ಈ ಅಸಹನೀಯ ರಾತ್ರಿಯನ್ನು ಆಹ್ಲಾದಕರವಾಗಿಸೋದು.

ಅಷ್ಟೊತ್ತಿಗೆ ಖಿನ್ನತೆ ನಿಧಾನವಾಗಿ ಏರುತ್ತಿತ್ತು. ಜೀವನ ನಶ್ವರ ಎಂಬ ಭಾವ ಬಲವಾಗತೊಡಗಿದಂತೆ ವಿಜಯನಗರದ ಖಾಲಿ ರಸ್ತೆಯಲ್ಲಿದ್ದೆ. ಅಲ್ಲಿಂದ ಹತ್ತು ನಿಮಿಷಕ್ಕೆ ಮನೆ ತಲುಪಿ, ಹುಷಾರಾಗಿ ಬಾಗಿಲು ತೆರೆದು, ಕತ್ತಲೆಯಲ್ಲಿ ಸದ್ದಾಗದಂತೆ ಒಂದಿಷ್ಟು ತಿಂದು, ಒಡಲ ಹಸಿವು ತೀರಿಸಿಕೊಂಡೆ.

ಮನದ ಖಾಲಿತನ ವಿಜೃಂಭಿಸತೊಡಗಿತ್ತು.

ರೂಮು ಹೊಕ್ಕು ಕಂಪ್ಯೂಟರ್‌ ಆನ್‌ ಮಾಡುವ ಹೊತ್ತಿಗೆ ಹೊರಗೆ ಮಳೆ ಬಲಿಯುತ್ತಿತ್ತು. ಗುಡುಗು-ಸಿಡಿಲುಗಳ ಅಬ್ಬರವೂ.

ಮನಸ್ಸು ಖಾಲಿ ಖಾಲಿ.

ಅರ್ನೆಸ್ಟ್‌ ಹೆಮಿಂಗ್ವೆನ ಓಲ್ಡ್‌ ಮ್ಯಾನ್‌ ಅಂಡ್‌ ದಿ ಸೀ (Old Man And The Sea) ಕಾದಂಬರಿಯ ಮುದುಕ ಮೀನುಗಾರನ ಭಾವನೆಗಳು ನೆನಪಾಗುತ್ತವೆ. ಬಲೆಗೆ ಬಿದ್ದ ದೊಡ್ಡ ಮೀನಿನೊಂದಿಗೆ, ಅದನ್ನು ನಿಯಂತ್ರಿಸಲು ಹೆಣಗಾಡುತ್ತ, ಸ್ವಗತದಂತೆ ಮೀನಿನೊಂದಿಗೆ ಮಾತಿಗಿಳಿಯುವ ಆ ಭಾವನೆಗಳು ನನ್ನನ್ನು ಸದಾ ಕಾಡುವ ನೆನಪುಗಳು. ಮನಸ್ಸು ಖಿನ್ನವಾದಾಗೆಲ್ಲ, how are you fish? ಎಂದು ಪ್ರಶ್ನಿಸಿಕೊಳ್ಳುತ್ತೇನೆ. ಮನಸ್ಸು ಕೂಡ ಆ ಮುದುಕನ ಬಲೆಗೆ ಬಿದ್ದ ಮೀನಿನಂತೆ. ವಾಪಸ್‌ ಉತ್ತರಿಸಲ್ಲ.

ನನ್ನ ಮನಸ್ಸೂ ಎಲ್ಲೋ ಕಳೆದುಹೋಗಿದೆ.

*****

ಸುಮ್ಮನೇ ಕವಿತೆ ಗೀಚುತ್ತೇನೆ. ಪದಗಳನ್ನು ಬದಲಿಸುತ್ತೇನೆ. ಪ್ಯಾರಾ ಹಿಂದೆಮುಂದೆ ಮಾಡುತ್ತೇನೆ.

ಊಹೂಂ, ಭಾವನೆಗಳು ಸಾಲುಗಳಾಗುವುದಿಲ್ಲ. ನೋವು ಶಬ್ದಗಳಾಗುವುದಿಲ್ಲ.

ಅರ್ಧ ಓದಿಟ್ಟ ಪುಸ್ತಕ ಎತ್ತಿಕೊಳ್ಳುತ್ತೇನೆ. ಮನಸ್ಸು ನಿಲ್ಲುವುದಿಲ್ಲ.

ಲೈಟಾರಿಸಿಕೊಂಡು, ಮಾನಿಟರ್‌ ಆಫ್‌ ಮಾಡಿ, ಗಂವೆನ್ನುವ ಕತ್ತಲೆಯಲ್ಲಿ ಫ್ಯಾನ್‌ ಶಬ್ದ ಕೇಳುತ್ತ ಸುಮ್ಮನೇ ಕೂಡುತ್ತೇನೆ.

ಊಹೂಂ, ಮನಸ್ಸು ಸುಮ್ಮನಾಗುವುದಿಲ್ಲ.

ವಿನಂತಿಸುತ್ತೇನೆ, ಆರ್ತನಾಗಿ ಬೇಡಿಕೊಳ್ಳುತ್ತೇನೆ. ಸಿಟ್ಟು ಮಾಡಿಕೊಳ್ಳುತ್ತೇನೆ.

ರಚ್ಚೆ ಹಿಡಿದ ಮಗುವಿನಂಥದು ಅದು.

ಕಾಡುವ ಆ ದಿವ್ಯ ಭಾವವನ್ನೇ ಧೇನಿಸುತ್ತ ಕೂತಾಗ ಮಾತ್ರ ಕೊಂಚ ಶಾಂತವಾಗುತ್ತದೆ.

ನಿದ್ದೆ ದೂರವಾದರೂ ಪರವಾಗಿಲ್ಲ, ನೆಮ್ಮದಿ ಹತ್ತಿರವಿರಲಿ ಎಂದು ಸುಮ್ಮನಾಗುತ್ತೇನೆ.

ಮಳೆ ಯಾವಾಗ ನಿಂತಿತ್ತೋ. ದೂರದಲ್ಲಿ ಗೂರ್ಖಾ ಸೀಟಿ ಊದುವ, ಕೋಲನ್ನು ಫುಟ್‌ಪಾತ್‌ನ ಕಲ್ಲಿಗೆ ಕುಟ್ಟುವ ಸದ್ದು.

ಅರೆ, ಈ ಗೂರ್ಖಾನ ಹೆಂಡತಿಯ ಭಾವನೆಗಳೇನಿರಬಹುದು ಎಂದು ಯೋಚಿಸತೊಡಗುತ್ತದೆ ಮನಸ್ಸು.

ಇದ್ದಕ್ಕಿದ್ದಂತೆ ಕಸಿವಿಸಿ. ಯಾರದೋ ತಟ್ಟೆಯ ಅನ್ನ ಕಸಿದ ಭಾವ.

ನಮ್ಮ ನೆಮ್ಮದಿಗಳ ಹಿಂದೆ ಯಾರದೋ ನಿದ್ದೆಗೆಟ್ಟ ರಾತ್ರಿ ಇರುತ್ತದೆ, ಶ್ರಮವಿರುತ್ತದೆ. ಇಲ್ಲಿ ಕತ್ತಲೆಯಲ್ಲಿ ಹಾಯಾಗಿ ಕೂತವನ ನೆಮ್ಮದಿಗೆ ಆ ಗೂರ್ಖಾನ ನಿದ್ದೆಗೇಡಿ ರಾತ್ರಿಯ ದುಡಿಮೆ ಕಾರಣ ಎಂಬ ಭಾವ ಹುಟ್ಟಿ ಮನಸ್ಸು ದ್ರವಿಸಿದಂತಾಯ್ತು. ಕಾಣದ ಗೂರ್ಖಾನ ಕುಟುಂಬದ ಚಿತ್ರಣ ಮನಸ್ಸನ್ನು ಆರ್ದ್ರ ಮಾಡಿಬಿಟ್ಟಿತು.

ಸದ್ದಿಲ್ಲದೇ ಕಂಪ್ಯೂಟರ್‌ ಆಫ್‌ ಮಾಡಿ, ರೂಮಿನ ಕದವಿಕ್ಕಿ, ಮಲಗಿದ್ದ ಮನೆಯ ಜೀವಿಗಳನ್ನು ಅಕ್ಕರೆಯಿಂದ ದಿಟ್ಟಿಸಿದೆ.

ನಾನೂ ಒಂಥರಾ ಗೂರ್ಖಾನೇ. ಮತ್ತಿದು ನನ್ನ ಕುಟುಂಬ ಎಂಬ ಭಾವ ಉಕ್ಕಿತು.

ಮನಸ್ಸನ್ನು ಕುಟ್ಟುತ್ತಿದ್ದ ಮೆದು ಭಾವವನ್ನೇ ಧೇನಿಸುತ್ತ ಹಾಸಿಗೆ ಮೇಲೆ ಉರುಳಿಕೊಂಡೆ. ಇವತ್ತು ನಿದ್ದೆ ಬರಬಹುದು.

ಬರದೇ ಇರಲೂಬಹುದು!

- ಚಾಮರಾಜ ಸವಡಿ

ಒಳಗಡಲು ಉಕ್ಕಿದಾಗೆಲ್ಲ ಆ ದಿವ್ಯ ನೆನಪು

29 Apr 2012

2 ಪ್ರತಿಕ್ರಿಯೆ
ಇನ್ನು ಆಡಲು ಮಾತುಗಳಿಲ್ಲ ಅಂತಾದಾಗ, ಅಷ್ಟು ದೂರ ನಂಜೊತೆ ಬರ್ತೀಯಾ? ಅಂತ ಕೇಳಿದೆ.

ಧ್ವನಿಯಲ್ಲಿ ದೈನ್ಯತೆಯಿತ್ತು. ಇನ್ನಿದು ಮುಗಿಯಿತು ಎಂದಾಗ, ಇನ್ನೆಂದೂ ಇದು ಕೊನರುವುದಿಲ್ಲ ಎಂಬುದು ಗಟ್ಟಿಯಾದಾಗ, ಉಳಿಯುವ ಕೊನೆಯ ಭಾವವದು.

ಆಕೆಗೆ ಏನನ್ನಿಸಿತೋ, ಸುಮ್ಮನೇ ಎದ್ದಳು.

ನಾವು ಮೌನವಾಗಿ ಹೊರಟೆವು. ನಂಗೆ ಗೊತ್ತಿತ್ತು, ಇದು ನಾವು ಜೊತೆಯಾಗಿ ಇಡುತ್ತಿರುವ ಕೊನೆಯ ಹೆಜ್ಜೆ ಎಂದು.

ಆಕೆ ತಲೆ ತಗ್ಗಿಸಿಕೊಂಡು, ಕೈಗಳನ್ನು ಕಟ್ಟಿಕೊಂಡು, ಮೌನವಾಗಿ ಹೆಜ್ಜೆ ಹಾಕುತ್ತಿದ್ದಳು.

ಅಷ್ಟು ದೂರದಲ್ಲಿ ರಸ್ತೆ ಹೊರಳಿಕೊಂಡಿತ್ತು. ಜೋರು ಹೆಜ್ಜೆಯಿಟ್ಟರೆ ಎರಡು ನಿಮಿಷದ ದಾರಿ.

ಅಲ್ಲಿಗೆ ತಲುಪಿದರೆ, ಹಿಂದಿರುಗಬೇಕಾಗುತ್ತೆ.

ಆಗ, ಆಕೆ ಹೋಗಿಬಿಡುತ್ತಾಳೆ, ಒಂದೂ ಮಾತಾಡದೇ.

ನಾನೂ ಮೌನವಾಗಿ ಹೆಜ್ಜೆ ಹಾಕುತ್ತಿದ್ದೆ. ಸಾಗರವೊಂದು ಎದೆಯೊಳಗೆ ಭೋರ್ಗರೆದು ಅಪ್ಪಳಿಸುವ ಶಬ್ದ ಇಷ್ಟು ಹತ್ತಿರದಲ್ಲಿದ್ದೂ ದೂರವಿರುವ ಆಕೆಗೆ ಕೇಳಿಸಿತಾದರೂ ಹೇಗೆ?

ನಾನು ಹೆಜ್ಜೆಗಳನ್ನು ಎಣಿಸುತ್ತಿದ್ದೆನಾ? ಇನ್ನೇನು ಆ ತಿರುವು ಬಂದೇಬಿಟ್ಟಿತು ಎಂದು ಅಳುಕುತ್ತಿದ್ದೆನಾ?

ಒಂದೂ ತಿಳಿಯಲಿಲ್ಲ. ಸಾವಿನೆಡೆಗೆ ಹೊರಟವನಂತೆ, ಬದುಕಿನ ಕೊನೆಯ ಹೆಜ್ಜೆಗಳಿವು ಎಂಬಂತೆ ನಡೆಯುತ್ತಿದ್ದೆ.

ಮಾತಾಡಬಾರದೆಂಬಂತೆ ಆಕೆ ಗಂಭೀರಳಾಗಿದ್ದಳು. ಏನು ಮಾತಾಡುವುದಿನ್ನು ಎಂದು ನಾನು ಮೌನವಾಗಿದ್ದೆ.

ಒಳಗೆ ಮೇರೆಯುಕ್ಕುವ ಅಳಲ ಕಡಲು.

ತಿರುವು ಹತ್ತಿರವಾಗುತ್ತಿತ್ತು.

ಏಕೋ ನನ್ನ ಹೆಜ್ಜೆಗಳು ಸೋಲುತ್ತಿದ್ದವು. ಇನ್ನು ಕೆಲ ಹೆಜ್ಜೆಗಳನ್ನಿಟ್ಟರೆ, ತಿರುವು ಬಂದುಬಿಡುತ್ತಿತ್ತು.

ಥಟ್ಟನೇ ನಿಂತೆ. ಆಕೆಯೂ ನಿಂತಳು. ಅವಳ ಮುಖದಲ್ಲಿ ಪ್ರಶ್ನೆ.

‘ಥ್ಯಾಂಕ್ಸ್‌ ಜೊತೆಗೆ ಬಂದಿದ್ದಕ್ಕೆ’ ಎಂದೆ.

ಆಕೆಯ ಮುಖದಲ್ಲಿ ಅದೇ ಪ್ರಶ್ನೆ.

’ಆ ತಿರುವು ಮುಟ್ಟಲು ಕೆಲ ಹೆಜ್ಜೆಗಳೇ ಸಾಕು. ಅವನ್ನೂ ಕ್ರಮಿಸಿಬಿಟ್ಟರೆ ಜೀವನದುದ್ದಕ್ಕೂ ನನಗೆ ಮತ್ತೆ ನಿನ್ನ ಜೊತೆ ಸಿಗಲ್ಲ. ಈ ಸವಿ ನೆನಪಲ್ಲಿ, ನಾನು ಹೀಗೇ, ಆ ತಿರುವನ್ನೇ ಧೇನಿಸುತ್ತ ಇದ್ದುಬಿಡುತ್ತೇನೆ. ಇನ್ನು ಕೆಲ ಹೆಜ್ಜೆಗಳನ್ನಿಟ್ಟಿದ್ದರೆ... ಎಂಬ ದಿವ್ಯ ಊಹೆಯಲ್ಲಿ ಬದುಕನ್ನು ಸಾಗಿಸುತ್ತೇನೆ. ಕೊನೆಯಾಗುವ ಈ ಹಂತದಲ್ಲಿ, ಈ ಸವಿ ನೆನಪಾದರೂ ಜೊತೆಗಿರಲಿ ಬಿಡು...’

ಎಷ್ಟೋ ಹೊತ್ತು ಆಕೆ ಸುಮ್ಮನೇ ನಿಂತಿದ್ದಳು. ನಂತರ ನಿಧಾನವಾಗಿ, ಬಲು ನಿಧಾನವಾಗಿ, ಕಾಲೆಳೆಯುತ್ತ, ಬಂದ ದಾರಿಯತ್ತ ತಿರುಗಿ ಹೊರಟಳು.

ನಾನು ಮಾತ್ರ ಅಲ್ಲಿಯೇ ನಿಂತಿದ್ದೆ, ಅದೇ ಕೊನೆಯ ಗಮ್ಯ ಎಂಬಂತೆ.

*****

ಒಡಲೊಳಗಿನ ಅಳಲ ಕಡಲು ಭೋರ್ಗರೆದಾಗೆಲ್ಲ, ಮತ್ತೆ ಆ ತಿರುವಿನತ್ತ ಹೋಗುತ್ತೇನೆ.

ಜೊತೆಯಾಗಿ ನಡೆದ ನೆನಪು ಅಲ್ಲೆಲ್ಲ.

ಕೆಲ ಹೊತ್ತು ಅಲ್ಲಿ ಕೂಡುತ್ತೇನೆ, ಒಬ್ಬನೇ, ಸುಮ್ಮನೇ. ಅದು ದಿವ್ಯ ಮೌನಾನುಸಂಧಾನ.

ಒಳಗಡಲು ಶಾಂತವಾದಾಗ ಮೌನವಾಗಿ ಎದ್ದು ಬರುತ್ತೇನೆ.

ಅವಳಿಲ್ಲದ ಬದುಕೀಗ, ಅವಳ ನೆನಪಿನಲ್ಲಿ ಸಾಗುತ್ತಿದೆ ಹೀಗೇ.

*****

ಥ್ಯಾಂಕ್ಸ್‌ ಕಣೇ, ನೆಮ್ಮದಿಯ ಗಮ್ಯವೊಂದನ್ನು ಕೊಟ್ಟುಹೋಗಿದ್ದಕ್ಕೆ!

- ಚಾಮರಾಜ ಸವಡಿ

ನಾಳೆ ಏಳಲಿಕ್ಕಾದರೂ ರಾತ್ರಿ ಮಲಗಬೇಕು

21 Mar 2012

0 ಪ್ರತಿಕ್ರಿಯೆ

ಅಲ್ಲಿಂದ ಹೊರಟಾಗಲೇ ಮಧ್ಯರಾತ್ರಿ. 
ಗುಡ್‌ ಮಾರ್ನಿಂಗ್‌ ಹೇಳಬೇಕೋ, ಗುಡ್‌ನೈಟ್‌ ಇನ್ನೂ ಉಳಿದಿದೆಯೋ ಎಂಬ ಗೊಂದಲ. ರಸ್ತೆಗಳು ಅಗಲಕ್ಕೆ ಮೈಚಾಚಿ ಮಲಗಿದ್ದವು. ಆಗೊಂದು, ಈಗೊಂದು ವಾಹನ, ಬೆಳಕಿನಲ್ಲಿ ರಸ್ತೆಯ ತಗ್ಗು, ಉಬ್ಬುಗಳನ್ನು ಹುಡುಕಿಕೊಂಡು ತಂತಮ್ಮ ಗುರಿಯೆಡೆಗೆ ಹೊರಟಿದ್ದವು. ಎಲ್ಲಿಗೆ ಹೋಗಬೇಕು ನಾನು?
ಗಾಡಿಯ ಮೇಲೆ ಕೂತು ಕತ್ತೆತ್ತಿ ನೋಡಿದೆ. ನಕ್ಷತ್ರಗಳು ತಬ್ಬಲಿಯಂತೆ ಮಂಕಾಗಿ ದಿಟ್ಟಿಸಿದವು. ಅವಕ್ಕೂ ಬೇಸರವಾಗಿದೆಯಾ? ತಲೆ ಕೊಡವಿದೆ. ಬೇಸರಪಡಲು, ಮನಸ್ಸು ಮುದುಡಲು, ಖಿನ್ನವಾಗಲು ಅವೇನು ಪ್ರೀತಿಸಿವೆಯಾ ಎಂದು ಸುಮ್ಮನೇ ಹೊರಟೆ. ಅಗಲ ರಸ್ತೆಯಲ್ಲಿ, ಅಪರಾತ್ರಿಯಲ್ಲಿ, ಒಂಟಿ ಪಯಣ. ಮನೆ ದೂರ. 
ಹಳೆಯ ಹಾಡುಗಳು ಜೊತೆಯಾದವು. ಗಾಡಿ ತನ್ನ ಪಾಡಿಗೆ ಓಡುತ್ತಿತ್ತು. ನಾನು ಸುಮ್ಮನೇ ಹ್ಯಾಂಡಲ್‌ ಹಿಡಿದುಕೊಂಡಿದ್ದೆ. ಸಿಗ್ನಲ್‌ಗಳೆಲ್ಲ ಹಳದಿ ಮಿಣುಕುಗಳಾಗಿ, ನೀನು ಆರಾಮವಾಗಿ ಹೋಗಬಹುದು ಎನ್ನುತ್ತಿದ್ದವು. ಸರ್ಕಲ್‌ ಹತ್ತಿರವಾದಾಗೆಲ್ಲ, ವೇಗ ತಗ್ಗಿಸಿ, ಆಕಡೆ, ಈಕಡೆ ನೋಡಿ, ಮತ್ತೆ ವೇಗ ಹೆಚ್ಚಿಸಿಕೊಂಡು, ಅಷ್ಟರಲ್ಲಿ ಮತ್ತೊಂದು ಸಿಗ್ನಲ್‌ ಹತ್ತಿರವಾಗಿ, ಮನಸ್ಸಿನಲ್ಲಿ ಮೊರೆಯುತ್ತಿದ್ದ ಹಾಡಿನ ಜಾಗದಲ್ಲಿ ಬೇರೆ ಹಾಡು. 
ಮೇಲೆ ಮಾತ್ರ ಅವೇ ದೀನ ನಕ್ಷತ್ರಗಳು. ಒಳಗೆ ಮಂಕು ಭಾವ.
*****
ಮೊದಲೆಲ್ಲ ಇಷ್ಟು ತಡವಾಗಿ ಹೋಗುತ್ತಿರಲಿಲ್ಲ. ನನ್ನಷ್ಟೇ ಖಿನ್ನರಾದ ಕೆಲವರು ಬೇರೆ ಬೇರೆ ಕಾರಣಗಳಿಗಾಗಿ ಜೊತೆಯಾಗಿ, ಅವರ ನೋವುಗಳಿಗೆ ನಾನು ಕಿವಿಯಾಗತೊಡಗಿದಾಗಿನಿಂದ ಹೀಗೆ ತಡವಾಗುತ್ತಿದೆ. ಇಲ್ಲದಿದ್ದರೆ ಕಚೇರಿ ಬಿಟ್ಟರೆ ಮನೆ, ಮನೆ ಬಿಟ್ಟರೆ ಕಚೇರಿ ಎಂಬ ಟೈಂ ಟೇಬಲ್‌ನವ ನಾನು. ಅವರ ಜೊತೆ ಹರಟುತ್ತಿದ್ದರೂ, ಮನಸ್ಸು ಎಲ್ಲೋ ಯಾತ್ರೆ ಹೊರಟಿರುತ್ತದೆ. ಕಾರಣವಿಲ್ಲದೇ ನಕ್ಷತ್ರಗಳನ್ನು ದಿಟ್ಟಿಸುತ್ತದೆ. ಅವಕ್ಕೂ ಖಿನ್ನತೆಯಾ ಎಂದು ಪ್ರಶ್ನಿಸಿಕೊಳ್ಳುತ್ತದೆ. ಛೇ, ಇರಲಿಕ್ಕಿಲ್ಲ ಎಂದು ಸುಮ್ಮನಾಗುತ್ತದೆ. ಮತ್ತೆ ಹರಟೆ, ಮತ್ತೆ ಯಾತ್ರೆ, ಮತ್ತೆ ಗೊಂದಲ.
ಕೊನೆಗೂ ಜೊತೆಗಿರುವ ಗೆಳೆಯನನ್ನು ಮನೆ ಮುಟ್ಟಿಸಿ, ಅಲ್ಲೊಂಚೂರು ಹರಟೆ ಹೊಡೆದು, ಕಟ್ಟೆಯ ಮೇಲೆ, ಅಂಗಡಿಯ ಮುಂದಿನ ಅಗಲ ಫುಟ್‌ಪಾತ್‌ ಮೇಲೆ ಮಲಗಿದವರು ಮುಸುಕು ಸರಿಸಿ, ನಮ್ಮನ್ನೊಮ್ಮೆ ನಿದ್ದೆ ಕೆಟ್ಟ ಕಣ್ಣಲ್ಲಿ ಕೆಕ್ಕರಿಸಿ ನೋಡಿದಾಗ, ಸರಿ ನಾಳೆ ಸಿಕ್ತೀನಿ ಎನ್ನುತ್ತಾ ಮತ್ತೆ ಗಾಡಿ ಏರುತ್ತೇನೆ. ಮುಂದಿನ ಎಂಟೊಂಬತ್ತು ಕಿಮೀ ನನಗೆ ನಾನೇ. 
ಆಗ ಎಲ್ಲಾ ಸಿಗ್ನಲ್ಲುಗಳೂ ಮುಕ್ತ. ಪ್ರತಿಯೊಂದು ಸರ್ಕಲ್‌ನ ಮೂಲೆಯಲ್ಲೂ ಕೆಲವು ಆಟೊಗಳ ಸಾಲು, ಅವುಗಳ ಮುಂದೆ ಹರಟೆ ಹೊಡೆಯುವ ಆಟೊ ಚಾಲಕರು. ಅಪರೂಪಕ್ಕೊಮ್ಮೆ ಪೊಲೀಸರ ಗಸ್ತು ವಾಹನ. ಹಗಲುಹೊತ್ತು ಗಿಜಿಗುಡುವ ರಸ್ತೆಗಳೆಲ್ಲ ದಿನದ ದುಡಿಮೆಯ ನಂತರ ನಿಟ್ಟುಸಿರಿಡುತ್ತ ವಿಶ್ರಾಂತಿಯಲ್ಲಿರುತ್ತವೆ. ಬೀದಿ ದೀಪಗಳಿಗೆ ಬುದ್ಧನ ಪ್ರಶಾಂತತೆ. ಅಲ್ಲಲ್ಲಿ ತೆರೆದುಕೊಂಡ ದೊಡ್ಡ ಆಸ್ಪತ್ರೆಗಳು ಹಾಗೂ ನರ್ಸಿಂಗ್‌ ಹೋಮ್‌ಗಳ ಬಾಗಿಲ ಮುಂದೆ ನಿಂತ ಆಂಬುಲೆನ್ಸ್‌ಗಳು, ಅವಸರದಿಂದ ಆಚೀಚೆ ಓಡಾಡುವ ರೋಗಿಗಳ ಸಂಬಂಧಿಗಳನ್ನು ಬಿಟ್ಟರೆ, ಇಡೀ ಊರಿಗೆ ದೊಡ್ಡ ನಿದ್ದೆ. 
ಹೊಟ್ಟೆ ಸಣ್ಣಗೆ ಚುರುಗುಡುತ್ತದೆ. ಪರವಾಗಿಲ್ಲ, ಹಸಿವೆಯಾಗುತ್ತಿದೆ ಎಂದು ಖುಷಿ. ಬೇರೆ ಸಮಯದಲ್ಲಾದರೆ ಮುಕ್ಕಾಲು ಗಂಟೆ ಹಿಡಿಯುವ ಪಯಣ, ಅಪರಾತ್ರಿಯಲ್ಲಿ ಕೇವಲ ಇಪ್ಪತ್ತು ನಿಮಿಷಕ್ಕೆಲ್ಲ ಮುಗಿಯುತ್ತದೆ. ಆದರೆ, ಇಪ್ಪತ್ತು ನಿಮಿಷ ಅಗಾಧ ಕಾಲವೇನೋ ಎಂಬಂತೆ ಮನಸ್ಸು ಮಂಕುಮಂಕು. 
ಅದು ದಿನದ ಸುಸ್ತಲ್ಲ. ಸಣ್ಣಗೇ ಚುರುಗುಡುವ ಹಸಿವೆಯಿಂದಲೂ ಅಲ್ಲ. ಎಷ್ಟೇ ದಣಿದಿದ್ದರೂ, ರಾತ್ರಿ ಓದಿನ ಕೋಣೆ ಹೊಕ್ಕು, ಅರ್ಧ ಗಂಟೆಯಾದರೂ ಒಂಟಿಯಾಗಿ ಕೂಡದಿದ್ದರೆ, ಅವತ್ತಿನ ದಿನ ಮುಗಿಯುವುದಿಲ್ಲ. ಸಿಗ್ನಲ್‌ಗಳ ಮೇಲೆ ಸಿಗ್ನಲ್‌ ದಾಟಿ, ಅಗಲ ಒಂಟಿ ರಸ್ತೆಗಳನ್ನು ನುಂಗಿಕೊಂಡು ಮನೆಗೆ ಹತ್ತಿರವಾಗುವ ಹೊತ್ತಿಗೆ ಎಂಥದೋ ಸುಸ್ತು. 
*****
ಓದುವ ಕೋಣೆ ಕಾಯುತ್ತಿರುತ್ತದೆ. ಇಡೀ ದಿನ ಹೊರಗೆ ಹೋಗಿದ್ದೆಯಲ್ಲ ಮಿತ್ರಾ, ಹೇಗಿತ್ತು ನಿನ್ನ ದಿನ ಎಂದು ಪ್ರಶ್ನಿಸುತ್ತದೆ. ಅದಕ್ಕೇ ಉತ್ತರ ಗೊತ್ತಿರುವುದರಿಂದ ನಾನು ಏನೂ ಹೇಳುವುದಿಲ್ಲ. ಬಾಗಿಲು ಮುಚ್ಚಿ, ಕಂಪ್ಯೂಟರ್‌ ತೆರೆದು, ಅದರ ಪಾಡಿಗೆ ಅದನ್ನು ಬಿಟ್ಟು ಸುಮ್ಮನೇ ಕೂಡುತ್ತೇನೆ. ಒಂದೇ ಗತಿಯಲ್ಲಿ ತಿರುಗುವ ಫ್ಯಾನ್‌, ಅಲ್ಲೆಲ್ಲೋ ಕೋಲಿನಿಂದ ಫುಟ್‌ಪಾತ್‌ನ ಕಲ್ಲುಗಳನ್ನು ಕುಟ್ಟುತ್ತ ಗೂರ್ಖಾ ಸಿಳ್ಳೆ ಹೊಡೆಯುವ ಸದ್ದು, ಫ್ಯಾನಿನ ಗಾಳಿಗೆ ಸಣ್ಣಗೇ ಅಲುಗುವ ಹಾಳೆಗಳನ್ನು ದಿಟ್ಟಿಸುತ್ತೇನೆ. ದೊಡ್ಡದೊಂದು ಖಾಲಿತನ ಒಳಗೆ. ಅದನ್ನು ತುಂಬುವುದು ಹೇಗೆ?
ಮರೆಯಬೇಕೆಂದಾಗಲೇ ಎಲ್ಲ ನೆನಪಾಗತೊಡಗುತ್ತವೆ. 
ಎಲ್ಲಾ ಎಂದರೆ, ಎಲ್ಲವೂ. ಸ್ಪಷ್ಟ ಚಿತ್ರಗಳಂತೆ, ಸಜೀವವಾಗಿ ನೆನಪಾಗುತ್ತವೆ. ಭಾಷೆ ಗೊತ್ತಿಲ್ಲದ ಸಿನಿಮಾ ನೋಡುವಂತೆ, ಸುಮ್ಮನೇ ಆ ಚಿತ್ರಗಳನ್ನು ನೋಡುತ್ತ ಹೋಗುತ್ತೇನೆ. 
ಹಿಂದಕ್ಕೆ, ಹಿಂದಕ್ಕೆ ಹೋಗುತ್ತದೆ ನೆನಪು. ಗುಜರಾತ್‌ನ ಕಚ್ಛ್‌ ರಣಭೂಮಿಯಲ್ಲಿ ಕಳೆದ ವರ್ಷಗಳು ನೆನಪಾಗುತ್ತವೆ. ಅಲ್ಲೂ ಹೀಗೇ. ವರ್ಷಗಟ್ಟಲೇ ರಾತ್ರಿಗಳನ್ನು ಒಂಟಿಯಾಗಿ ಒಂಟಿ ರಸ್ತೆಗಳಲ್ಲಿ ತಿರುಗುತ್ತ ಕಳೆದಿದ್ದೆ. ಎದೆ ತುಂಬ ಪುಟಿಯುವ ಕನಸುಗಳು. ಸಾವಿರಾರು ನವಿರು ಭಾವನೆಗಳು. 
ಆದರೆ, ಅಲ್ಲಿ ನಕ್ಷತ್ರಗಳು ಉಜ್ವಲವಾಗಿರುತ್ತಿದ್ದವು. ಮರುಭೂಮಿಯಲ್ಲೆಲ್ಲೋ ಒಂಟಿಯಾಗಿದ್ದ ಸೇನಾ ಠಾಣ್ಯದಲ್ಲಿ, ಬೆರಳೆಣಿಕೆಯಷ್ಟಿದ್ದ ಬೀದಿದೀಪಗಳನ್ನು ನಾಚಿಸುವಂತೆ ಪಳಪಳ ಹೊಳೆಯುತ್ತಿದ್ದವು. ಅವುಗಳನ್ನು ಮತ್ತೆ ಮತ್ತೆ ನೋಡುತ್ತ ನಾನು ಗೆಲುವಾಗಲು ಯತ್ನಿಸುತ್ತಿದ್ದೆ. ಅಲ್ಲೂ ಹೀಗೇ ಅಪರಾತ್ರಿಯ ತಿರುಗಾಟ. ಸೇನಾ ಠಾಣ್ಯದ ತಂತಿ ಸುತ್ತಿದ್ದ ಆವರಣದಲ್ಲಿ ಒಂಟಿ ಹುಡುಕಾಟ. 
ಅವತ್ತಿಗೂ ಇವತ್ತಿಗೂ ನಡುವೆ ಇಪ್ಪತ್ತೈದು ವರ್ಷಗಳೇ ಕಳೆದುಹೋಗಿವೆ. ಆದರೆ, ಅದೇ ಒಂಟಿತನ, ಅದೇ ಅಪರಾತ್ರಿ, ಅದೇ ಒಂಟಿ ಅಲೆದಾಟ. ವ್ಯತ್ಯಾಸ ಇಷ್ಟೇ: ಅವತ್ತು ಉಜ್ವಲವಾಗಿದ್ದ ನಕ್ಷತ್ರಗಳು ಈ ನಗರದ ಬೀದಿದೀಪದ ಪ್ರಖರತೆಯಲ್ಲಿ ಮಂಕಾಗಿವೆ.
ಎಷ್ಟು ವಿಚಿತ್ರ! 
ಆ ಉಜ್ವಲ ನಕ್ಷತ್ರಗಳು ಕೊಂಚವಾದರೂ ಭರವಸೆ ಹುಟ್ಟಿಸುತ್ತಿದ್ದವು. ಆದರೆ, ಈ ಬೀದಿ ದೀಪಗಳ ಪ್ರಖರತೆ ಮನಸ್ಸನ್ನು ಇನ್ನಷ್ಟು ಮಂಕಾಗಿಸುತ್ತಿದೆ. 
ಅಗಲ ರಸ್ತೆಗಳಲ್ಲಿ ಒಂಟಿಯಾಗಿ ಓಡಾಡುತ್ತ, ಓದುವ ಕೋಣೆಯಲ್ಲಿ ಒಂಟಿಯಾಗಿ ಕೂತುಕೊಂಡೇ ನಿನ್ನೆ ಕಳೆದು ಇಂದು ಬಂದಿರುತ್ತದೆ. ನಾನು ನಿನ್ನೆಗೂ ಸೇರಿಲ್ಲ, ಇಂದಿಗೂ ಹೊಂದಿಕೊಂಡಿಲ್ಲ. ನಡುವೆ ಎಲ್ಲೋ ಕಳೆದುಹೋಗಿದ್ದೇನೆಂದು ಅನಿಸತೊಡಗುತ್ತದೆ.
ಮರೆತಂತಿರುವ ಹಾಡುಗಳು ನೆನಪಾಗುತ್ತವೆ. ಭಾವನೆಗಳು ನೆನಪಾಗುತ್ತವೆ. ಕನಸುಗಳು ಕರೆಯುತ್ತವೆ. ಅಪರಾತ್ರಿಯ ನೀರವತೆಯಲ್ಲಿ, ನನಗೆ ಮಾತ್ರ ಕೇಳಿಸುವಂತೆ ಹಾಡುತ್ತವೆ, ಕಾಡುತ್ತವೆ. 
ನಿನ್ನೆಯೂ ಹೀಗೇ ಕೂತಿದ್ದೆ. ಮೊನ್ನೆಯೂ. ಅದರ ಹಿಂದಿನ ದಿನವೂ... ವರ್ಷಗಟ್ಟಲೇ ಹೀಗೆ ಕೂತಿದ್ದೇನೆ. ಕೆಲವು ಪ್ರಶ್ನೆಗಳಿಗೆ ಉತ್ತರ ಸಿಕ್ಕಿವೆ. ಆದರೆ, ಅವನ್ನು ನಾನು ಒಪ್ಪಿಕೊಂಡಿಲ್ಲ. ಕೆಲ ಪ್ರಶ್ನೆಗಳು ಹೊಸದಾಗಿ ಮೂಡಿವೆ. ಅವಕ್ಕೆ ಉತ್ತರ ಸಿಕ್ಕಿಲ್ಲ. ಈ ಪ್ರಶ್ನೋತ್ತರಗಳ ಭರಾಟೆಯಲ್ಲಿ ಮೂಡಿರಬಹುದಾದ ಕೊಂಚ ವಿವೇಕವನ್ನು ಅನುಭವ ಎಂದುಕೊಂಡಿದ್ದೇನೆ. ಆದರೆ, ಅದಕ್ಕೂ ನನಗೆ ನಿದ್ದೆಯನ್ನು, ಅಪ್ಪಟ ಹಸಿವನ್ನು, ಕೊಂಚ ನೆಮ್ಮದಿಯನ್ನು ಮೂಡಿಸಲು ಆಗಿಲ್ಲ.
*****
ರಾತ್ರಿ ತನ್ನ ಪಾಡಿಗೆ ತಾನು ಸರಿಯುತ್ತ ಹೋಗುತ್ತದೆ. ಗಡಿಯಾರಕ್ಕೆ ಅವಸರವಿಲ್ಲದ ಒಂದೇ ಗತಿ. ನಾಳೆ ಏಳಲಿಕ್ಕಾದರೂ ಈಗ ಮಲಗಬೇಕು. ನನ್ನ ಕನಸುಗಳು ನನಗಿರಲಿ. ಮಲಗಿಕೊಂಡ ಯಾರ ಕನಸನ್ನೂ ಅವು ಕಾಡದಿರಲಿ. ಸುಖನಿದ್ದೆ ನಂತರದ ಅವರ ಬೆಳಗಿನಲ್ಲೊಂದು ಹೊಂಬೆಳಕು ಮೂಡಲೆಂದು ಅಂದುಕೊಳ್ಳುತ್ತೇನೆ.
ಕಂಪ್ಯೂಟರ್‌ ಆರಿಸಿ, ದೀಪದ ಕತ್ತು ಹಿಸುಕಿ, ಮಂಕು ಬೆಳಕಲ್ಲಿ ಹಾಸಿಗೆಯ ನನ್ನ ಜಾಗ ಹುಡುಕಿಕೊಳ್ಳುತ್ತೇನೆ. ಕಣ್ಣು ಮುಚ್ಚಿಕೊಂಡು ನಿದ್ದೆಗಾಗಿ ಒಂದು ಸದ್ದಿಲ್ಲದ ಪ್ರಾರ್ಥನೆ ಸಲ್ಲಿಸುತ್ತೇನೆ.
ಎಲ್ಲರಿಗೂ ಶುಭರಾತ್ರಿ. 
- ಚಾಮರಾಜ ಸವಡಿ

ಮರೆಯಬೇಕಿದೆ ಎಲ್ಲಾ...

3 Oct 2011

3 ಪ್ರತಿಕ್ರಿಯೆ
ಎಲ್ಲಾ ಮರೆಯಬೇಕಿದೆ
ಹಾಗಂತ ಪದೆ ಪದೆ ನೆನಪಿಸಿಕೊಳ್ಳುತ್ತಿದ್ದೇನೆ

ಅಲಾರಾಂ ಅದುಮಿದ್ದೇನೆ
ಕರೆಗಂಟೆ ಕಿತ್ತಿದ್ದೇನೆ
ಗೇಟಿಗೆ ಹಾಕಿದ್ದ ಪತ್ರದ ಡಬ್ಬವನ್ನೂ ಬಿಚ್ಚಿಟ್ಟಾಗಿದೆ
ಯಾರೂ ಬರಬೇಡಿ
ನಾನು ಒಳಗಿಲ್ಲ

ಮುಚ್ಚಿದ ಬಾಗಿಲೊಳಗಿನ ಮನೆಯಲ್ಲಿ
ಬೆಳಕಿಲ್ಲ; ದೀಪ ಹಾಕುವಂತಿಲ್ಲ
ಫ್ಯಾನು, ಫೋನು, ಕುಕ್ಕರ್
ಊಹೂಂ
ನಲ್ಲಿ ತಿರುಗಿಸುವಂತಿಲ್ಲ,
ಹಾಡು ಗುನುಗುವಂತಿಲ್ಲ
ಒಳಗಿದ್ದೇನೆಂಬುದು ಹೊರಹೋಗುವಂತಿಲ್ಲ

ಸದ್ದೇ ಮಾಡದೇ ಕೂತರೂ
ಸೊಳ್ಳೆಗಳು ಮಾತಾಡಿಸುತ್ತವೆ
ಬಾಗಿಲು ಮುಚ್ಚಿದ್ದರೂ
ನೆನಪ ಕಿಟಕಿಗಳು ತೆರೆದುಕೊಳ್ಳುತ್ತವೆ
ಬೇಡವೆಂದ ಬೆಳಕು, ಶಬ್ದ
ಒಳ ಬಂದು ‘ಏನೀಗ?’ ಎಂಬಂತೆ
ಕೆಣಕುತ್ತವೆ, ಕೆರಳಿಸುತ್ತವೆ

ದುರುಗುಟ್ಟಿ ನೋಡಿದರೂ ಬೆದರುವುದಿಲ್ಲ
ಹೋಗಾಚೆ ಎಂದು ಒರಲಿದರೂ ಕೇಳುವುದಿಲ್ಲ
ಮರೆತ ಹಾಡುಗಳನ್ನು ನೆನಪಿಸಿ,
ಒರೆಸಿಹಾಕಿದ ಚಿತ್ರಗಳನ್ನು
ಎಲ್ಲೆಡೆ ಹರವುತ್ತವೆ; ಮನಸ ಕದಡುತ್ತವೆ

ಎಲ್ಲ ಮರೆಯಬೇಕೆಂದರೂ
ಎಲ್ಲಾ ನೆನಪಾಗುತ್ತದೆ
ಆ ಮಾತು, ಧ್ವನಿ, ಸಂದೇಶ, ಕನಸು
ಕವನ, ಕದನ, ಕಾಮನೆ, ಭಾವನೆ
ಒಂದೇ ಎರಡೇ
ಲೆಕ್ಕದ ಬೆಂಬತ್ತಿ, ಸೋತು ಸೋತು
ಮತ್ತೆ ಸುಮ್ಮನೇ ಕೂಡುತ್ತೇನೆ

ಬಾಗಿಲ ಮೇಲೆ ಬೆರಳಾಡಿಸಿದ ಸದ್ದು...
 

ಅದನ್ನೇ ಕಾಯುತ್ತಿದ್ದವನಂತೆ ಎದ್ದು
ಬಾಗಿಲು ತೆರೆದರೆ;

ಅವಳಿಲ್ಲ!

ಮರೆಯಬೇಕೆಂಬ, ಮರೆತ ಸಂಕಲ್ಪ
ಮತ್ತೆ ನೆನಪಾಗುತ್ತದೆ

- ಚಾಮರಾಜ ಸವಡಿ

ಗುಳೆ ಹೋದವರ ಹಿಂದೆ ಹೊರಟಿದೆ ಮನಸು...

22 May 2011

4 ಪ್ರತಿಕ್ರಿಯೆ
(ಈ ಬರಹ ನವೆಂಬರ್‌ ೨೦೦೯ರಲ್ಲಿ ಬರೆದಿದ್ದು. http://chamarajsavadi.blogspot.com/2009/11/blog-post.html ಇದನ್ನು ಮತ್ತೊಮ್ಮೆ ನಿಮ್ಮ ಮುಂದೆ ತರಲು ಸಂಪಾದಕೀಯ ಬ್ಲಾಗ್‌ನ  ‘ಹಾನಗಲ್‌ ಪ್ರಭಾಕರನ ಪೂರ್ತಿ ವಿವರ, ಶಾಂತವ್ವಳ ನೋವಿನ ಕಥೆ...’ ಎಂಬ ಬರಹ ಕಾರಣ. http://sampadakeeya.blogspot.com/2011/05/blog-post_9662.html ಹೀಗಾಗಿ, ಈ ಬರಹವನ್ನು ಸಂಪಾದಕೀಯ ಬ್ಲಾಗ್‌ಗೆ ಅರ್ಪಿಸುತ್ತಿದ್ದೇನೆ...)

ಹಲವು ವರ್ಷಗಳ ಹಿ೦ದಿನ ಘಟನೆ.

ಆಗ ನಾನು ಬೆ೦ಗಳೂರಿನ ಎಲ್ಲಾ ನ೦ಟನ್ನು ಕಡಿದುಕೊ೦ಡು, ಇನ್ನು ಮು೦ದೆ ನಮ್ಮೂರಲ್ಲೇ ಏನಾದರೂ ಮಾಡಬೇಕೆ೦ದು ಕೊಪ್ಪಳಕ್ಕೆ ಬ೦ದು ಪೂರ್ಣಪ್ರಮಾಣದ ನಿರುದ್ಯೋಗಿಯಾಗಿದ್ದೆ. ನನ್ನ ಬ೦ಡವಾಳವೇನಿದ್ದರೂ ತಲೆಯಲ್ಲಿತ್ತೇ ಹೊರತು ಜೇಬಿನಲ್ಲಿರಲಿಲ್ಲ. ಸಹಜವಾಗಿ ಕೊಪ್ಪಳ ನನ್ನನ್ನು ತಿರಸ್ಕರಿಸಿತು. ಯಾರಾದರೂ ಸರಿ, ದುಡ್ಡಿಲ್ಲದಿದ್ದರೆ ಅವನು ತಿರಸ್ಕಾರಕ್ಕೇ ಯೋಗ್ಯ. ಜಗತ್ತಿಗೆ ಸುಲಭವಾಗಿ ಅರ್ಥವಾಗುವ ಭಾಷೆಗಳೆ೦ದರೆ ಎರಡೇ- ಒ೦ದು ಹಣ, ಇನ್ನೊ೦ದು ಬೆದರಿಕೆ. ನನ್ನ ಹತ್ತಿರ ಎರಡೂ ಇಲ್ಲದಿದ್ದರಿ೦ದ ಪತ್ರಿಕೆಯೊ೦ದನ್ನು ಪ್ರಾರ೦ಭಿಸಬೇಕೆನ್ನುವ ನನ್ನ ಆಸೆಗೆ ಯಾವ ಬೆ೦ಬಲವೂ ಸಿಗಲಿಲ್ಲ. ಯಾರಾದರೂ ಬ೦ಡವಾಳಶಾಹಿಗಳು ಮು೦ದೆ ಬ೦ದರೆ, ಅಚ್ಚುಕಟ್ಟಾದ ದಿನಪತ್ರಿಕೆಯೊ೦ದನ್ನು ರೂಪಿಸಿಕೊಟ್ಟೇನೆ೦ದು ನಾನು ಹ೦ಬಲಿಸುತ್ತಿದ್ದೆ. ಆದರೆ ದುಡ್ಡು ಹಾಕುವ ಹ೦ಬಲ ಮಾತ್ರ ಕೊಪ್ಪಳದ ಯಾವ ಬ೦ಡವಾಳಗಾರನಲ್ಲೂ ಇರಲಿಲ್ಲ. ಅ೦ಥವರ ಪರಿಚಯ ಕೂಡಾ ನನಗಿರಲಿಲ್ಲ. 

ಹಾಗಿದ್ದರೂ ನನ್ನಲ್ಲೊ೦ದು ಆತ್ಮವಿಶ್ವಾಸವಿತ್ತು. ಏನಾದರೂ ಮಾಡಿ ಕೊಪ್ಪಳದಲ್ಲಿ ಪತ್ರಿಕೆಯೊ೦ದನ್ನು ಹುಟ್ಟು ಹಾಕಬೇಕೆನ್ನುವ ತುಡಿತವಿತ್ತು. ಕಾಲ ಪಕ್ವವಾಗುವವರೆಗೆ ಏನಾದರೂ ಮಾಡಬೇಕಲ್ಲವೇ? ವಾಪಸ್ ಬೆ೦ಗಳೂರಿಗೆ ಹೋಗುವ ಮನಸ್ಸಿಲ್ಲದ್ದರಿ೦ದ ಕೊಪ್ಪಳದಲ್ಲೇ ಮಾಡುವ೦ಥ ಕೆಲಸವನ್ನು ಹಿಡಿಯಬೇಕಿತ್ತು. ಆಗ ಸಹಾಯಕ್ಕೆ ಬ೦ದಿದ್ದು ಟ್ಯೂಷನ್‌. 

ಗ್ರಾಮೀಣ ಪ್ರದೇಶದಲ್ಲಿ ಕಾಣಸಿಗುವಂತೆ ಕೊಪ್ಪಳದಲ್ಲಿಯೂ ಆಗ ಇ೦ಗ್ಲಿಷ್ ಟ್ಯೂಶನ್ ಕ್ರಾ೦ತಿ. ಯಾವ ಓಣಿಗೆ ಹೊಕ್ಕರೂ ಅಲ್ಲೊ೦ದು ಟ್ಯುಟೇರಿಯಲ್ಲು, ಯಾವ ನಿರುದ್ಯೋಗಿಯನ್ನು ನೋಡಿದರೂ ಆತನದೊ೦ದು ಟ್ಯೂಶನ್ ಬ್ಯಾಚ್ ಇರುತ್ತಿತ್ತು. ಆದರೆ, ಪರಿಚಿತರು ತೀರಾ ಕಡಿಮೆ ಸಂಖ್ಯೆಯಲ್ಲಿದ್ದ ನನ್ನ ಪಾಲಿಗೆ ವಿದ್ಯಾರ್ಥಿಗಳು ಸಿಗುವುದು ಸಾಧ್ಯವೇ ಇರಲಿಲ್ಲ.

ಹೀಗಾಗಿ ನಾನು ಕೊಪ್ಪಳದಿಂದ ೨೨ ಕಿಮೀ ದೂರದ ಯಲಬುರ್ಗಾ ತಾಲ್ಲೂಕಿನ ಮ೦ಗಳೂರಿಗೆ ಟ್ಯೂಶನ್ ಹೇಳಲು ಹೋಗುವುದು ಅನಿವಾರ್ಯವಾಯಿತು. ಸುಮಾರು ಎ೦ಟು ತಿ೦ಗಳುಗಳ ಕಾಲ ನಾನು ಅಲ್ಲಿದ್ದೆ. ಟ್ಯೂಶನ್ ಹೇಳುತ್ತಲೇ ಬೇರೆ ಬೇರೆ ಪತ್ರಿಕೆಗಳಿಗೆ ಲೇಖನ ಬರೆದೆ. ನನ್ನ ಬೆ೦ಗಳೂರಿನ ನೆನಪುಗಳ ಪೈಕಿ ಒ೦ದಷ್ಟನ್ನು ಬರೆದಿಟ್ಟುಕೊ೦ಡೆ. ಬೆ೦ಗಳೂರು ಅಷ್ಟೆಲ್ಲಾ ದಿನಗಳಲ್ಲಿ ನನಗೆ ಏನೆಲ್ಲವನ್ನೂ ಕಲಿಸಿತ್ತೋ, ಅಷ್ಟೇ ಪ್ರಮಾಣದ ಪಾಠವನ್ನು ಮ೦ಗಳೂರು ನನಗೆ ಎ೦ಟೇ ತಿ೦ಗಳುಗಳ ಕ್ಲುಪ್ತ ಅವಧಿಯಲ್ಲಿ ಕಲಿಸಿತ್ತು. 

ಆಗಾಗ ಇ೦ಥ ಅಜ್ಞಾತವಾಸಗಳಿಗೆ ಹೊರಟು ಹೋಗುವುದು ಒ೦ದರ್ಥದಲ್ಲಿ ಒಳ್ಳೆಯದೇ ಎ೦ದು ಈಗಲೂ ನಾನು ನಂಬುತ್ತೇನೆ. ಎಲ್ಲಾ ರೀತಿಯ ಒ೦ಟಿತನ ನಮ್ಮೊಳಗಿನ ಅಸಲಿ ವ್ಯಕ್ತಿತ್ವವನ್ನು ಹೊರ ಹಾಕುತ್ತದೆ. ಯಾರು ಒಳ್ಳೆಯವರು? ಕೆಟ್ಟವರು ಯಾರು? ನಮ್ಮೊಳಗಿನ ನಿಜವಾದ ಶಕ್ತಿ ಏನು? ದೌರ್ಬಲ್ಯಗಳು ಯಾವುವು? ನಮ್ಮ ವಲಯದ ಸಮಯಸಾಧಕರು ಯಾರು? ಅವರ ಕಾರ್ಯತ೦ತ್ರಗಳೆ೦ಥವು? ಮು೦ದಿನ ದಿನಗಳಲ್ಲಿ ನಾನು ಯಾರನ್ನು ನ೦ಬಬಹುದು? ಯಾರನ್ನು ಕೈ ಬಿಡಬೇಕು? ಯಾರನ್ನು ಪೂರ್ತಿಯಾಗಿ ದೂರವಿಡಬೇಕು? ಎ೦ಬ ವಿಷಯಗಳು ಆಜ್ಞಾತವಾಸದ ಅವಧಿಯಲ್ಲಿ ಚೆನ್ನಾಗಿ ಗೊತ್ತಾಗುತ್ತವೆ.

ಮ೦ಗಳೂರಿನ ಎ೦ಟು ತಿ೦ಗಳುಗಳ ಆವಧಿ ನನ್ನ ಅಂಥ ಅಜ್ಞಾತವಾಸಗಳ ಪೈಕಿ ಒ೦ದು.

ಆ ಸ೦ದರ್ಭದಲ್ಲಿ ನನ್ನ ಗೆಳೆಯರೆನಿಸಿಕೊ೦ಡವರಿ೦ದ, ಬ೦ಧುಗಳಿ೦ದ, ಹಿತೈಷಿಗಳಿ೦ದ ನಾನು ದೂರವಿದ್ದೆ. ಬೆ೦ಗಳೂರು ಬಿಟ್ಟು ಸಣ್ಣ ಹಳ್ಳಿಯಾದ ಮ೦ಗಳೂರಿಗೆ ಟ್ಯೂಶನ್ ಹೇಳಲು ಬ೦ದು ನಿ೦ತ ನನ್ನ ಬಗ್ಗೆ ಆಶಾದಾಯಕವಾಗಿ ಯೋಚಿಸುವ ವ್ಯಕ್ತಿಗಳ ಸ೦ಖ್ಯೆ ಆಗ ತು೦ಬಾ ಕಡಿಮೆಯಿತ್ತು.

ನನಗೂ ಬೇಕಾಗಿದ್ದೂ ಅದೇ.

ನನ್ನ ನಿಜವಾದ ಮಿತ್ರರು ಯಾರು? ಹಿತೈಷಿಗಳು ಎ೦ಥವರು? ಭವಿಷ್ಯದ ದಿನಗಳಲ್ಲಿ ನಾನು ಯಾರನ್ನು ನ೦ಬಬಹುದು? ಎ೦ಬುದನ್ನು ಅರಿಯಲು ಅಜ್ಞಾತವಾಸ ನನಗೆ ತು೦ಬಾ ಸಹಾಯ ಮಾಡಿತು. ಹಾಗೆ ನೋಡಿದರೆ ಪ್ರತಿಯೊ೦ದು ಆಜ್ಞಾತವಾಸವೂ ನನಗೆ ಒಳ್ಳೆಯ ಪಾಠ ಕಲಿಸಿದೆ. ಹೊಸ ಹೊಸ ಗೆಳೆಯರನ್ನು ತ೦ದು ಕೊಟ್ಟಿದೆ. ಯಾವ ರಿಸ್ಕುಗಳನ್ನು ತೆಗೆದುಕೊಳ್ಳಬಹುದು? ಅವನ್ನು ಎಷ್ಟರ ಮಟ್ಟಿಗೆ ತೆಗೆದುಕೊಳ್ಳಬಹುದು? ಎ೦ಬುದನ್ನು ತೀರ್ಮಾನಿಸಲು ಸಹಾಯ ಮಾಡಿದೆ. ಆದ್ದರಿ೦ದ ನಾನು ಇಂಥ ಅಜ್ಞಾತವಾಸಗಳನ್ನು ಇಷ್ಟಪಡುತ್ತೇನೆ. ಆ ಅವಧಿ ಎಷ್ಟೇ ವೇದನಾಪೂರ್ಣವಾಗಿದ್ದರೂ ಕೂಡ ಅದನ್ನು ಆನುಭವಿಸಲು ಸಿದ್ಧನಾಗುತ್ತೇನೆ. 

ಯಲಬುರ್ಗಾ ತಾಲ್ಲೂಕಿನ ಮ೦ಗಳೂರು ನನಗೆ ಗೆಳೆಯರನ್ನಷ್ಟೇ ಅಲ್ಲ, ಅನುಭವಗಳನ್ನು ಕೂಡಾ ದೊರಕಿಸಿಕೊಟ್ಟಿತು. ಆ ದಿನಗಳನ್ನು ನೆನಪಿಸಿಕೊ೦ಡರೆ ಇವತ್ತಿಗೂ ನಾನು ಮೌನವಾಗುತ್ತೇನೆ. ನನ್ನ ಅಹ೦ಕಾರ ತಾನಾಗಿ ಕಡಿಮೆಯಾಗುತ್ತದೆ. ಇದೆಲ್ಲಾ ನಶ್ವರ ಎ೦ಬ ವಿವೇಕ ಸುಲಭವಾಗಿ ಮೂಡುತ್ತದೆ. ಏಕೆ೦ದರೆ, ಮ೦ಗಳೂರಿನಲ್ಲಿ ನಾನು ನಿಜವಾದ ಬಡತನವನ್ನು ನೋಡಿದೆ. ಪ್ರತಿಯೊ೦ದು ವರ್ಷವೂ ಗುಳೆ ಹೋಗುವ ಕುಟು೦ಬಗಳನ್ನು ಅಲ್ಲಿ ಕ೦ಡೆ. ಸರಕಾರಗಳು ಏನೇ ಘೋಷಿಸಲಿ, ಜನಪ್ರತಿನಿಧಿಗಳು ಎಷ್ಟೇ ಬಡಾಯಿ ಕೊಚ್ಚಿಕೊಳ್ಳಲಿ, ಅಧಿಕಾರಿಗಳು ಅದೆಷ್ಟೇ ಅ೦ಕಿ ಅ೦ಶಗಳನ್ನು ನೀಡಿ ನ೦ಬಿಸಲು ಪ್ರಯತ್ನಿಸಲಿ. ಒ೦ದು ಮಾತ೦ತೂ ಸತ್ಯ- 

ನಮ್ಮ ಹಳ್ಳಿಗಳಲ್ಲಿ ತೀವ್ರವಾದ ಬಡತನವಿದೆ. ಒ೦ದೇ ಒ೦ದು ಬೆಳೆ ವಿಫಲವಾದರೂ ಸಾಕು - ಸಾವಿರಾರು ಕುಟು೦ಬಗಳು ಗುಳೆ ಹೋಗಬೇಕಾಗುತ್ತದೆ. 

ಅ೦ಥ ಒ೦ದಷ್ಟು ಕುಟು೦ಬಗಳನ್ನು, ಅವು ಗುಳೆ ಹೋದ ದುರ೦ತವನ್ನು ನಾನು ಮ೦ಗಳೂರಿನಲ್ಲಿ ಕಣ್ಣಾರೆ ಕ೦ಡೆ. ಇದೆಲ್ಲಾ ನನ್ನ ಗಮನಕ್ಕೆ ಬ೦ದಿದ್ದು ಕೂಡ ತೀರಾ ಆಕಸ್ಮಿಕವಾಗಿ. 

ಕಾಲೇಜು ಉಪನ್ಯಾಸಕರಾಗಿದ್ದ ಗೆಳೆಯ ರಾಜಶೇಖರ ಪಾಟೀಲ ಅವರ ರೂಮಿನಲ್ಲಿ ಇರುತ್ತಿದ್ದ ನಾನು ಟ್ಯೂಶನ್ ಕೂಡಾ ಅಲ್ಲಿಯೇ ನಡೆಸುತ್ತಿದ್ದೆ. ಒಬ್ಬ ಪಿಯುಸಿ ಹುಡುಗ ಆಗಾಗ ಟ್ಯೂಶನ್ ತಪ್ಪಿಸುವುದು ಒಮ್ಮೆ ನನ್ನ ಗಮನಕ್ಕೆ ಬ೦ದಿತು. ಅವನನ್ನು ಕರೆಸಿ ಕಾರಣ ವಿಚಾರಿಸಿದೆ. ಅವನಿ೦ದ ಸಮರ್ಪಕ ಉತ್ತರ ಬರಲಿಲ್ಲ. ಬೈದೆ. ಅವನು ದೂಸರಾ ಮಾತನಾಡದೇ ಬೈಸಿಕೊ೦ಡ. ಅವನು ಆಚೆ ಹೋದ ನ೦ತರ, ಗೆಳೆಯ ರಾಜಶೇಖರ ಪಾಟೀಲ ಜೊತೆ ಆ ಹುಡುಗ ಕ್ಲಾಸ್ ತಪ್ಪಿಸುವ ಬಗ್ಗೆ ಮಾತಾಡಿದೆ. ‘ಅವನ ಮನೆಯ ಆರ್ಥಿಕ ಸ್ಥಿತಿ ಚೆನ್ನಾಗಿಲ್ಲ ಎ೦ಬ ಕಾರಣಕ್ಕೆ ನಾನು ಟ್ಯೂಶನ್ ಫೀ ತೆಗೆದುಕೊಳ್ಳುತ್ತಿರಲಿಲ್ಲ. ಆದರೂ ಈ ಹುಡುಗ ಚೆನ್ನಾಗಿ ಓದುವುದನ್ನು ಬಿಟ್ಟು ಇದೇನು ನಡೆಸಿದ್ದಾನೆ ನೋಡಿ’ ಎ೦ದು ದೂರಿದೆ. 

ಒ೦ದು ಕ್ಷಣ ರಾಜಶೇಖರ ಪಾಟೀಲ್ ಮಾತಾಡಲಿಲ್ಲ. ನ೦ತರ ಉತ್ತರರೂಪವಾಗಿ ತಮ್ಮದೊ೦ದು ಅನುಭವ ಹೇಳಿದರು. 

ಆ ಹುಡುಗ ಹತ್ತನೆಯ ತರಗತಿಯಲ್ಲಿ ಓದುತ್ತಿದ್ದಾಗ ನಡೆದ ಘಟನೆಯಿದು. 

ಇಡೀ ತರಗತಿಯಲ್ಲಿ ಇವನೊಬ್ಬ ಮಾತ್ರ ಸರಿಯಾದ ಸಮಯಕ್ಕೆ ಫೀ ಕಟ್ಟುತ್ತಿರಲಿಲ್ಲ. ಸರಿಯಾಗಿ ತರಗತಿಗಳಿಗೂ ಬರುತ್ತಿರಲಿಲ್ಲ. ಕಾರಣ ಕೇಳಿದರೆ ಬಡತನದ ಬಗ್ಗೆ ಹೇಳುತ್ತಿದ್ದ. ಫೀಗಾಗಿ ಒತ್ತಾಯಿಸಿದರೆ ತರಗತಿಗಳಿಗೇ ಬರುತ್ತಿರಲಿಲ್ಲ ಹೀಗಾಗಿ ಅವನ ಬಗ್ಗೆ ಸಹೃದಯಿಗಳಿಗೆ ಅನುಕ೦ಪವಿದ್ದರೆ, ಇತರರಿಗೆ ತಿರಸ್ಕಾರವಿತ್ತು. ಕೊನೆಗೊ೦ದು ದಿನ ಎಸ್.ಎಸ್.ಎಲ್.ಸಿ. ಮುಗಿಯುವ ದಿನ ಬಂದಿತು. ಅವತ್ತು ಹತ್ತನೆಯ ತರಗತಿ ವಿದ್ಯಾರ್ಥಿಗಳಿಗೆ ಬೀಳ್ಕೊಡುವ ಸ೦ದರ್ಭ. ದಿನವಿಡೀ ಹಾಜರಿದ್ದ ಈ ಹುಡುಗ ಗ್ರೂಪ್‌ಫೋಟೋ ಸಮಯಕ್ಕೆ ಸರಿಯಾಗಿ ನಾಪತ್ತೆಯಾದ. ಎಲ್ಲಿ ಹುಡುಕಿದರೂ ಸಿಗಲಿಲ್ಲ. ಮನೆಗೇನಾದರೂ ಹೋಗಿದ್ದಾನೋ ನೋಡ್ರೋ ಎ೦ದು ಶಿಕ್ಷಕರು ಹುಡುಗರನ್ನು ಕಳಿಸಿಕೊಟ್ಟರು. ಅಲ್ಲಿ೦ದಲೂ ಇಲ್ಲ ಎ೦ಬ ಉತ್ತರ ಬ೦ದಿತು. ಎಲ್ಲಿಗೆ ಹೋದ? ಎ೦ದು ಎಲ್ಲರೂ ಕೋಪ ಹಾಗೂ ಬೇಸರದಿ೦ದ ಮಾತನಾಡುತ್ತಿರುವಾಗ ಈ ಹುಡುಗ ತೇಕುತ್ತಾ ಓಡಿ ಬ೦ದ. ಮುಖ ಬಾಡಿತ್ತು. ಎಲ್ಲರೂ ತನ್ನ ದಾರಿಯನ್ನೇ ಕಾಯುತ್ತಿದ್ದಾರೆ ಎ೦ಬುದು ಗೊತ್ತಾದಾಗಲ೦ತೂ ಅವನು ಅಪರಾಧಿ ಭಾವನೆಯಿ೦ದ ಕುಗ್ಗಿ ಹೋದ.

ರಾಜಶೇಖರ್ ಪಾಟೀಲ್ ಮೊದಲೇ ಮು೦ಗೋಪಿ. "ಲೇ, ಎಲ್ಲೋಗಿದ್ದೀ? ಎಲ್ಲರೂ ನಿನ್ನ ದಾರಿ ಕಾಯಬೇಕೇನೋ?" ಎ೦ದು ತರಾಟೆಗೆ ತೆಗೆದುಕೊ೦ಡರು. ಹುಡುಗನಿಗೆ ಏನು ಹೇಳಬೇಕೆ೦ಬುದೇ ತೋಚಲಿಲ್ಲ. ಸುಮ್ಮನೇ ನಿ೦ತ. ಇನ್ನಷ್ಟು ದಬಾಯಿಸಿದಾಗ ಸಣ್ಣ ಧ್ವನಿಯಲ್ಲಿ ಹೇಳಿದ. "ಬಸ್ ಸ್ಟ್ಯಾ೦ಡಿಗೆ ಹೋಗಿದ್ದೀನ್ರಿ ಸಾರ್. ನಮ್ಮವ್ವ ಮತ್ತು ತಮ್ಮ ಗುಳೆ ಹೊ೦ಟಿದ್ರೀ. ಅವ್ರು ಮತ್ತ ಯಾವಾಗ ಬರ್ತಾರೋ ಗೊತ್ತಿಲ್ಲ.... ಅದಕ್ಕ ಲೇಟಾತ್ರೀ...". 

ರಾಜಶೇಖರ್ ಮ೦ಕಾದರು. ಹುಡುಗ ಹೇಳಿದ ಕಾರಣ ಅವರ ಸಿಟ್ಟನ್ನು ತಣಿಸಿ ಅಪರಾಧಿ ಭಾವನೆಯನ್ನು ಮೂಡಿಸಿತ್ತು. ಮು೦ದೆ ಯಾವತ್ತೂ ಅವರು ಆ ಹುಡುಗನನ್ನು ಬೈಯಲು ಹೋಗಲಿಲ್ಲ. 

ಮೇಲಿನ ಘಟನೆಯನ್ನು ವಿವರಿಸಿದ ರಾಜಶೇಖರ, "ಅವನ ಮನೆ ಪರಿಸ್ಥಿತಿ ಸರಿ ಇಲ್ರೀ... ಅದಕ್ಕ ಅವ ಆಗಾಗ ಕೂಲಿ ಮಾಡಾಕ ಹೋಗಬೇಕಾಗುತ್ತ. ಇಲ್ಲಾ ಅ೦ದರೆ ಮನಿ ನಡ್ಯಾ೦ಗಿಲ್ಲ. ಬಹುಶ: ಟ್ಯೂಶನ್ ತಪ್ಪಿಸಿದ್ದು ಇದೇ ಕಾರಣಕ್ಕೆ ಇರಬೇಕು" ಎ೦ದು ಹೇಳಿದಾಗ ನನ್ನ ಮನಸ್ಸಿನಲ್ಲೂ ಅಪರಾಧಿ ಭಾವನೆ. 

ಮು೦ದೆ ನಾನು ಮ೦ಗಳೂರಿನಲ್ಲಿ ಬಡತನದ ಅನೇಕ ಮುಖಗಳನ್ನು ನೋಡಿದೆ. ಪ್ರತಿಭೆಗಳನ್ನು ಅದು ಎಳೆಯ ವಯಸ್ಸಿನಲ್ಲಿಯೇ ಹೇಗೆ ಹೊಸಕಿ ಹಾಕಿ ಬಿಡುತ್ತದೆ ಎ೦ಬುದನ್ನು ನೋಡಿದೆ. ರಾಜಕಾರಣಿಗಳು ಹಾಗೂ ಅಧಿಕಾರಿಗಳ ಅವಿವೇಕತನದ ಹೇಳಿಕೆಗಳು, ನಿಜವಾದ ಬರ, ನಿಜವಾದ ಬಡತನ, ನಮ್ಮ ಹಳ್ಳಿಗಳ ದುಃಸ್ಥಿತಿ, ಅದಕ್ಕೆ ಕಾರಣಗಳು, ಸಾಧ್ಯವಿರಬಹುದಾದ ಪರಿಹಾರಗಳು ಎಲ್ಲವೂ ನನಗೆ ಕ೦ಡು ಬ೦ದಿದ್ದು ಮ೦ಗಳೂರಿನ ಆಜ್ಞಾತವಾಸದಲ್ಲಿ!

ಮು೦ದೆ ಕೊಪ್ಪಳಕ್ಕೆ ಬ೦ದೆ. "ವಿಜಯ ಕರ್ನಾಟಕ" ದಿನಪತ್ರಿಕೆಯ ಜಿಲ್ಲಾ ವರದಿಗಾರನ ಕೆಲಸ ಸಿಕ್ಕಿತು. ಬದುಕು ಮತ್ತೆ ಒ೦ದು ಸುತ್ತು ಬ೦ದಿತು. ಆದರೆ ಮ೦ಗಳೂರಿನ ಕಟು ಅನುಭವಗಳನ್ನು ನಾನು ಮರೆಯಲಿಲ್ಲ. ಗ್ರಾಮೀಣ ಬದುಕಿನ ಸಾವಿರಾರು ಅ೦ಶಗಳು ನನ್ನನ್ನು ಮತ್ತೆ ಮತ್ತೆ ಕೆಣಕುತ್ತಿದ್ದವು. ಅವುಗಳ ಬಗ್ಗೆ ಅನೇಕ ವರದಿಗಳನ್ನು ಮಾಡಿದೆ. ಬೇರೆ ಬೇರೆ ಪತ್ರಿಕೆಗಳಿಗೆ ಲೇಖನ ಬರೆದೆ. ಸ್ವಲ್ಪ ಬುದ್ಧಿವ೦ತಿಕೆ ಹಾಗೂ ಸಾಕಷ್ಟು ಪರಿಶ್ರಮ ಇದ್ದರೆ ಹಳ್ಳಿಯ ಬದುಕು ಹೇಗೆ ಬದಲಾಗಬಹುದು ಎ೦ಬ ಬಗ್ಗೆ ಅನೇಕ ಲೇಖನಗಳು ಬ೦ದವು.


ಅದು ಬಿಡಿ. ಇವತ್ತಿಗೂ ಬೇಸಿಗೆ ದಿನಗಳಲ್ಲಿ ಊರ ಕಡೆ ಹೋಗಿ ನೋಡಿದರೆ, ಎಲ್ಲ ದಿಕ್ಕಿನಲ್ಲಿ ಗುಳೇ ಹೋಗುವ ಜನರ ಗು೦ಪುಗಳೇ ಕಾಣುತ್ತವೆ. ಇನ್ನಾರು ತಿ೦ಗಳು ಇವರಾರಿಗೂ ಹಬ್ಬವಿಲ್ಲ. ಜಾತ್ರೆಯಿಲ್ಲ. ಊರಿನ ಸುದ್ದಿಯಿಲ್ಲ. ಮತ್ತೊಂದು ಮುಂಗಾರು ಬಂದು, ಮುಗಿಲ ತು೦ಬ ಮೋಡಗಳು ತು೦ಬಿಕೊ೦ಡು ಮಳೆಯು ರಭಸವಾಗಿ ಅಪ್ಪಳಿಸಿ ಕಾಯ್ದ ನೆಲವನ್ನು ತಣಿಸುವವರೆಗೆ ಇವರು ವಾಪಸ್ ಬರುವುದಿಲ್ಲ. ದೂರದ ಅಪರಿಚಿತ ಊರುಗಳಲ್ಲಿ ರಸ್ತೆ ಹಾಕುತ್ತಾ, ಕಟ್ಟಡ ಕಟ್ಟುತ್ತಾ, ಅರ್ಧ ಕಟ್ಟಿದ ಕಟ್ಟಡಗಳ ಮೂಲೆಯಲ್ಲಿ ಮೂರು ಕಲ್ಲಿನ ಒಲೆ ಹೂಡಿ, ರೊಟ್ಟಿ ಬೇಯಿಸಿಕೊ೦ಡು ದಿನಗಳನ್ನು ತಳ್ಳುತ್ತಾರೆ. ಮುಂಚೆ ಅಂದುಕೊಳ್ಳುತ್ತಿದ್ದ, ‘ಬರ ಬರದಿರಲಿ ದೇವರೇ’ ಎಂಬ ಪ್ರಾರ್ಥನೆಯ ಜೊತೆಗೆ, ‘ಪ್ರವಾಹವೂ ಬಾರದಿರಲಿ ದೇವರೇ’ ಎಂದು ಬೇಡಿಕೊಳ್ಳುತ್ತಾರೆ. ಊರಲ್ಲಿ ಇದ್ದಿದ್ದರೆ ಇವತ್ತು ಜಾತ್ರೆ ನೋಡಬಹುದಿತ್ತು. ಉಗಾದಿ ಆಚರಿಸಬಹುದಿತ್ತು ಎ೦ದು ಕನಸು ಕಾಣುತ್ತಾರೆ. ಹಾಗೆ ಕನಸು ಕಾಣುತ್ತಲೇ ಯಾರೋ ಅಪರಿಚಿತನ ಕನಸಿನ ಮನೆ ಕಟ್ಟುತ್ತಾರೆ. ಮು೦ದಿನ ಆರು ತಿ೦ಗಳವರೆಗೆ ಇದೇ ಅವರ ಬದುಕು!

ಗುಳೆ ಹೋದವರನ್ನು ಯಾರು ನೆನಪಿಟ್ಟುಕೊಳ್ಳುತ್ತಾರೆ? ಎಂದಿನಂತೆ ಊರಿನಲ್ಲಿ ಹಬ್ಬ ಬರುತ್ತದೆ, ಜಾತ್ರೆ ಬರುತ್ತದೆ. ಎ೦ದಿನ೦ತೆ ನಾಟಕ ಬಯಲಾಟಗಳು, ಸಭೆ-ಸಮಾರ೦ಭಗಳು ಬರುತ್ತವೆ. ಬೇರೆ ಊರಿನಲ್ಲಿದ್ದು ನೌಕರಿ ಮಾಡುವ ಜನರೆಲ್ಲಾ ಅವತ್ತು ಊರಿಗೆ ಬರುತ್ತಾರೆ. ಅವರ ಸ೦ಬ೦ಧಿಕರು ಬರುತ್ತಾರೆ. ಅ೦ಗಡಿ ಮು೦ಗಟ್ಟುಗಳೆಲ್ಲ ಬರುತ್ತವೆ. ಆದರೆ ಗುಳೆ ಹೋದವರು ಮಾತ್ರ ಬರುವುದಿಲ್ಲ. ಯಾವ ಊರಿನ ಜಾತ್ರೆ ನೋಡಿದರೂ ನನಗೆ ಗುಳೆ ಹೋದ ಬಡವರ ನೆನಪೇ. ದೂರದ ಅಪರಿಚಿತ ಊರುಗಳಲ್ಲಿ ಅವರು ದುಡಿಯುತ್ತಿರುವ ಚಿತ್ರಗಳೇ ಕಣ್ಣ ಮು೦ದೆ, 

ಆಗೆಲ್ಲ ನನಗೆ, "ದೇಶ ಪ್ರಗತಿಯತ್ತ ಧಾವಿಸುತ್ತಿದೆ" ಎ೦ದು ಸರಕಾರ ನೀಡುವ ಸುಳ್ಳು ಜಾಹೀರಾತುಗಳು ನೆನಪಾಗುತ್ತವೆ. ಮಾಹಿತಿ ಹಾಗೂ ಸ೦ಪರ್ಕ ಕ್ರಾ೦ತಿ ಸಾಧ್ಯವಾಗಿರುವ ಈ ದಿನಗಳಲ್ಲಿ ಕೂಡಾ ಹಳ್ಳಿಯ ಜನರಿಗೆ ಹಳ್ಳಿಯಲ್ಲೇ ಕೆಲಸ ದೊರೆಯುವ೦ತೆ ಮಾಡಲು ಏಕೆ ಸಾಧ್ಯವಾಗುತ್ತಿಲ್ಲ? ಎ೦ಬ ಪ್ರಶ್ನೆ ಎದ್ದು ನಿಲ್ಲುತ್ತದೆ. 


ಆದರೆ ಉತ್ತರ ಮಾತ್ರ ಸಿಗುವುದಿಲ್ಲ. ಮನಸ್ಸು ಗುಳೆ ಹೋದವರ ಹಿ೦ದೆಯೇ ಗುಳೆ ಹೊರಡುತ್ತದೆ. ನರಳುತ್ತದೆ. ನಿಟ್ಟುಸಿರಿಡುತ್ತದೆ. 

ಏಕೆಂದರೆ, ನಾನೂ ಕೂಡ ಅವರ ಹಾಗೇ ಗುಳೆ ಬಂದವ! ಇವತ್ತಿಗೂ ವಾಪಸ್‌ ಊರಿಗೆ ಹೋಗುವ ಕನಸು ಕಾಣುತ್ತಿರುವವ. 

(ಅವತ್ತು ಟ್ಯೂಷನ್‌ ತಪ್ಪಿಸುತ್ತಿದ್ದ ಹುಡುಗ ಈಗ ಹೈಸ್ಕೂಲ್‌ ಟೀಚರಾಗಿದ್ದಾನೆ. ನೇಮಕಾತಿ ಪತ್ರ ಬಂದಾಗ ಎಲ್ಲೆಲ್ಲೋ ಹುಡುಕಿ ನನ್ನ ನಂಬರ್‌ ಪತ್ತೆ ಮಾಡಿ ಫೋನ್‌ ಮಾಡಿ ಸಂತಸ ಹಂಚಿಕೊಂಡಿದ್ದ. ಅವನ ಫೋನ್‌ ಬಂದ ಆ ದಿನಗಳಲ್ದಾಗಲೇ ನಾನು ಮತ್ತೆ ನಿರುದ್ಯೋಗಿಯಾಗಿದ್ದೆ. ನಾಲ್ವರ ಕುಟುಂಬದ ಜವಾಬ್ದಾರಿಯಿಂದ ಮಾನಸಿಕವಾಗಿ ಕುಗ್ಗಿಹೋಗಿದ್ದೆ. ಆದರೆ, ಅವನ ಫೋನ್‌ ನನ್ನನ್ನು ಮತ್ತೆ ಬಡಿದೆಬ್ಬಿಸಿತು. ನಾವು ಹಚ್ಚಿದ ದೀಪಗಳು ಎಲ್ಲೋ ಬೆಳಗುತ್ತಿವೆ ಎಂಬ ಖುಷಿ ಹೊಸ ಉತ್ಸಾಹ ತುಂಬಿತ್ತು. ಸಂಪಾದಕೀಯದ ಬರಹ ಮತ್ತೆ ಈ ನೆನಪನ್ನು ಉಕ್ಕಿಸಿದೆ. ಜೊತೆಗೆ ಖುಷಿಯನ್ನೂ... ಥ್ಯಾಂಕ್ಸ್‌ ಸಂಪಾದಕೀಯವೇ....)

- ಚಾಮರಾಜ ಸವಡಿ

ರಸ್ತೆ ನೆರಳಲ್ಲಿ ಮಲಗಿದ ಮಕ್ಕಳು ಮತ್ತು ನೆನಪುಗಳು...

9 May 2011

4 ಪ್ರತಿಕ್ರಿಯೆ
ನಾನು ಅಪ್ಪನಾಗಿ ಒಂಬತ್ತು ವರ್ಷಗಳಾದವು. ಅವತ್ತಿನಿಂದ ಅವ್ವ ಅಗಾಗ ತುಂಬ ನೆನಪಾಗುತ್ತಿರುತ್ತಾಳೆ.

ಆಗೆಲ್ಲ ಊರಿಗೆ ಫೋನ್ ಮಾಡುತ್ತೇನೆ. ಸುಮ್ಮನೇ ಹರಟುತ್ತೇನೆ. ಮಾತು ಬಾರದ, ಬಹುಶಃ ಎಂದಿಗೂ ಅರ್ಥಪೂರ್ಣವೆನಿಸುವ ರೀತಿ ಮಾತನಾಡಲು ಆಗದ ದೊಡ್ಡ ಮಗಳ ಕೈಗೆ ಫೋನ್ ಕೊಟ್ಟು, ಅವಳ ಕಿವಿಗೆ ಹಿಡಿಯುತ್ತೇನೆ. ಆ ಕಡೆಯಿಂದ ಅವ್ವನ ಧ್ವನಿ ಕೇಳುತ್ತಲೇ ಮಗಳು ಗೌರಿ ‘ಅಬುವಾ’ ಎಂದು ಕೂಗುತ್ತಾಳೆ. ಅವಳ ಭಾಷೆಯಲ್ಲಿ, ಅದಕ್ಕೆ ಅಜ್ಜಿ ಎಂಬರ್ಥ. ಅವ್ವ ಖುಷಿಯಾಗಿ, ನನ್ನ ಮಗಳಿಗಷ್ಟೇ ಅರ್ಥವಾಗುವ ರೀತಿ ಮಾತನಾಡುತ್ತಾ ಹೋಗುತ್ತಾಳೆ. ಈ ಕಡೆಯಿಂದ ಇವಳು, ಏಯ್, ಏಯ್, ಹ್ಹೂಂ ಎಂದೆಲ್ಲಾ ಕೂಗುತ್ತಿರುತ್ತಾಳೆ. 

ನಾನು ಮೂಕನಂತೆ ನೋಡುತ್ತಿರುತ್ತೇನೆ. ನನಗೆ ಇಬ್ಬರ ಭಾವನೆಗಳೂ ಅರ್ಥವಾಗುತ್ತವೆ. 

ಒಂದು ಹಂತದಲ್ಲಿ ಮಗಳು ಫೋನನ್ನು ನನ್ನ ಕೈಗಿತ್ತು ತನ್ನ ಜಗತ್ತಿಗೆ ಸರಿದುಹೋಗುತ್ತಾಳೆ. ಈಗ ತಾನೆ ಮೊದಲ ಬಾರಿ ಮನೆ ಬಿಟ್ಟು ಬಂದಿದ್ದೇನೋ ಎಂಬಂಥ ಕಾಳಜಿಯ ಮಾತುಗಳು ಆ ಕಡೆಯಿಂದ. ಊಟ ಆಯ್ತಾ? ಸರಿಯಾಗಿ ಊಟ ಮಾಡು. ಮಧ್ಯಾಹ್ನ ಏಕೆ ಊಟ ಬಿಟ್ಟಿದ್ದೀ? ವಯಸ್ಸಿನಲ್ಲಿ ಚೆನ್ನಾಗಿ ಉಣಬೇಕು. ಏನಪ್ಪಾ ನೀನು! ಓದೋವಾಗ ಸರಿಯಾಗಿ ಉಣ್ಣುವ ಯೋಗ ಇರಲಿಲ್ಲ. ಈಗ ಏಕೆ ಹೊಟ್ಟೆ ಕಟ್ಟುತ್ತೀ? ಎಂಬ ಥೇಟ್ ತಾಯಿಯ ಕರುಳು. ಕೆಲಸದ ಬಗ್ಗೆ, ನನ್ನ ನಿರಂತರ ಕೆಲಸ ಬದಲಿಸುವಿಕೆ ಬಗ್ಗೆ ಆಕೆಯ ಕಾಳಜಿ. ಹಿತ್ತಿಲಲ್ಲಿ ಬೆಳೆಸಿರುವ ಗಿಡಬಳ್ಳಿಗಳು, ಧಗೆಯುಕ್ಕಿಸುವ ಬೇಸಿಗೆ ಬಿಸಿಲು, ನೆಂಟರು, ಪರಿಚಯದವರ ಮದುವೆಗಳು, ಇಹಯಾತ್ರೆ ಮುಗಿಸಿದವರ ವಿವರಗಳು ರವಾನೆಯಾಗುತ್ತವೆ. ಸುಮ್ಮನೇ ಹೂಂಗುಟ್ಟುತ್ತ ಹೋಗುತ್ತೇನೆ. ಆಕೆ ಹೇಳುವ ಎಷ್ಟೋ ವಿವರಗಳು ನನ್ನ ಮನಸ್ಸಿಗೆ ಬಲು ಮಸುಕು.

ಏಕೆಂದರೆ, ೧೯೮೪ರಲ್ಲಿ ಹತ್ತನೇ ತರಗತಿ ಮುಗಿಸಿ ಊರು ಬಿಟ್ಟವ ಇನ್ನೂ ಅಲೆಮಾರಿಯಂತೆ ಸುತ್ತುತ್ತಲೇ ಇದ್ದೇನೆ. ಆಗ ನಮ್ಮೂರಲ್ಲಿ ಟಿವಿ ಕೂಡ ಬಂದಿರಲಿಲ್ಲ. ಫೋನು ಲಕ್ಷುರಿ. ೧೫ ಪೈಸೆಯ ಅಂಚೆ ಕಾರ್ಡ್ ಹಾಗೂ ಸದಾ ಕೆಟ್ಟ ಸುದ್ದಿಗಳನ್ನೇ ತರುತ್ತಿದ್ದ ಟೆಲಿಗ್ರಾಮ್ ಆಗ ಬಲು ಫೇಮಸ್! ಸಂಯುಕ್ತ ಕರ್ನಾಟಕ ಬೆಳಿಗ್ಗೆ ೧೦ಕ್ಕೆಲ್ಲಾ ಬಂದರೆ, ಪ್ರಜಾವಾಣಿ ಮರುದಿನ ಮಧ್ಯಾಹ್ನ ಬರುತ್ತಿತ್ತು. ಅಂಥ ಕಾಲದಲ್ಲಿ ಊರು ಬಿಟ್ಟವನಿಗೆ ಇಹಲೋಕದ ಯಾತ್ರೆ ಮುಗಿಸಿದವರ ಹಾಗೂ ಅವರ ಕರುಳುಬಳ್ಳಿಗಳ ಮುಖಗಳ ನೆನಪಾದರೂ ಹೇಗೆ ಉಳಿದೀತು?

ಅವ್ವನಿಗೆ ಫೋನಿಡುವ ಮನಸ್ಸಿರುವುದಿಲ್ಲ. ಅಷ್ಟೊತ್ತಿಗೆ ನನಗೆ ಸಣ್ಣಗೇ ಊರಿನ ಗೀಳು ಶುರುವಾಗಿರುತ್ತದೆ. ಒಂದಲ್ಲ ಒಂದಿನ ಈ ಜಂಜಡಗಳನ್ನೆಲ್ಲ ಕೈಬಿಟ್ಟು ವಾಪಸ್ ಊರಿಗೆ ಹೋಗಬೇಕೆನ್ನುವ ಆಸೆಯನ್ನು ಇವತ್ತಿಗೂ ಜೀವಂತವಾಗಿಟ್ಟುಕೊಂಡಿರುವುದರಿಂದ, ನನ್ನ ಬಾಲ್ಯ ಸಣ್ಣಗೇ ಕಾಡತೊಡಗುತ್ತದೆ. ಕನ್ನಡ ಬಿಟ್ಟು ಬೇರೆ ಯಾವ ಭಾಷೆಯೂ ಗೊತ್ತಿರದ, ಊರಿನಿಂದ ೬೦ ಕಿಮೀ ದೂರ ಓಡಾಡಿರದ ಅಪ್ಪಟ ೧೬ ವರ್ಷಗಳನ್ನು ಅಲ್ಲಿ ಕಳೆದಿದ್ದೇನೆ. ಸಕ್ಕರೆ, ಅಕ್ಕಿಯಂಥ ಇವತ್ತಿನ ಅತಿ ಸಾಮಾನ್ಯ ದಿನಸಿಯನ್ನು ಅತ್ಯಂತ ಉಳ್ಳವರು ಮಾತ್ರ ನಿತ್ಯ ಬಳಸುತ್ತಿದ್ದಂಥ ಕಾಲವದು. ಅಂಥದೊಂದು ಊರಿನ ನೆನಪು ಇವತ್ತಿಗೂ ನನ್ನ ನಿತ್ಯ ಕನಸುಗಳಲ್ಲಿ ಒಂದು 

ಅವ್ವನೊಂದಿಗೆ ಮಾತನಾಡಿ ಫೋನಿಟ್ಟ ನಂತರ ನಾನು ಕೊಂಚ ಮಂಕಾಗುತ್ತೇನೆ. ನನಗೆ ಅವ್ವನೆಂದರೆ ನನ್ನೂರು. ನನ್ನೂರೆಂದರೆ ನನ್ನ ಬಾಲ್ಯ. ನನ್ನ ಬಾಲ್ಯವೆಂದರೆ ನನ್ನ ಅಪಾರ ಏಕಾಂಗಿತನ ಹಾಗೂ ಅಪ್ಪಟ ಕನಸುಗಳು. ಹತ್ತನೇ ತರಗತಿ ಮುಗಿಸಿ ಊರು ಬಿಟ್ಟವ ಮುಂದೆ ಅರ್ಧ ದೇಶ ಸುತ್ತಾಡಿದೆ. ತರಹೇವಾರಿ ಕೆಲಸ ಮಾಡಿದೆ. ಬದುಕು ನಾನಾ ರೀತಿಯ ಪೆಟ್ಟುಗಳನ್ನು ಕೊಟ್ಟು ನನ್ನನ್ನು ತಿದ್ದಿತು. ಕೆಲವೊಂದು ಪೆಟ್ಟುಗಳನ್ನು ನಾನೇ ಕೊಟ್ಟುಕೊಂಡು ತಿದ್ದಿಕೊಂಡೆ. ಎಲ್ಲಾ ಪ್ರಯೋಗಗಳ ಫಲವಾಗಿ, ಪರವಾಗಿಲ್ಲ, ಈಗ ನೆಮ್ಮದಿಯಿಂದ ಉಸಿರಾಡಬಹುದು ಎಂಬ ದಿನಗಳು ಬಂದಾಗೆಲ್ಲ ನನ್ನೂರಿನ ನೆನಪು, ಅವ್ವನ ಪ್ರೀತಿ ನನ್ನನ್ನು ಮತ್ತೆ ಮತ್ತೆ ಕಾಡಿದೆ.

ಎಲ್ಲಕ್ಕಿಂತ ತೀವ್ರವಾಗಿ ಈ ನೆನಪುಗಳು ಉಕ್ಕತೊಡಗಿದ್ದುದು ನಾನು ತಂದೆಯಾದ ನಂತರದಿಂದ. ಮೊದಲ ಮಗಳು ವಿಶಿಷ್ಟಚೇತನೆಯಾಗಿದ್ದರಿಂದ, ಒಂಬತ್ತು ವರ್ಷಗಳಾಗಿದ್ದರೂ ಆಕೆ ನಮಗಿನ್ನೂ ಪುಟ್ಟ ಮಗುವೇ. ಅದೊಂದು ಮುಗಿಯದ ಬಾಲ್ಯ. ನಾವು ನಿತ್ಯ ನವ ತಂದೆತಾಯಿಗಳು. ಪ್ರತಿ ದಿನ ನನಗೆ ಅವ್ವ ನೆನಪಾಗುತ್ತಾಳೆ. ಆರು ಮಕ್ಕಳನ್ನು ಆ ಬಡತನದಲ್ಲಿ ಆಕೆ ಹೇಗೆ ಸಲಹಿದಳು ಎಂದು ನಿತ್ಯ ಅಚ್ಚರಿಪಡುತ್ತೇನೆ. ನಾನು ಮೊದಲ ಬಾರಿ ಕ್ಯಾಡಬರೀಸ್‌ನಂಥ ಚಾಕೊಲೇಟ್ ತಿಂದಿದ್ದೇ ಮೊದಲ ಮಗಳು ಹುಟ್ಟಿದ ನಂತರ ಎಂಬುದನ್ನು ನೆನೆದಾಗ, ಅವ್ವ ಮಾಡಿದ ತ್ಯಾಗ ನಿತ್ಯ ಕಣ್ಮುಂದೆ ಬರುತ್ತಲೇ ಇರುತ್ತದೆ. 

ತೀರಾ ಖಾಸಗಿ ಎನಿಸುವಂಥ ನೆನಪುಗಳವು. ಅಂಥ ಸಾವಿರ ಸಾವಿರ ನೋಟಗಳನ್ನು ನಾನು ಓಡಾಡಿದ ಊರುಗಳಲ್ಲೆಲ್ಲ ನೋಡಿದ್ದೇನೆ, ನೋಡುತ್ತಿದ್ದೇನೆ. ಸಣ್ಣ ನೆರಳಲ್ಲಿ ಎಳೆಮಕ್ಕಳನ್ನು ಮಲಗಿಸಿ ಕೆಲಸ ಮಾಡುವ ತಾಯಂದಿರ ನೋಟಗಳು ನನ್ನನ್ನು ಮಂಕಾಗಿಸುತ್ತವೆ. ಮಾಧ್ಯಮಿಕ ಶಾಲೆಯಲ್ಲಿ ಓದುತ್ತಿದ್ದಾಗ, ನನ್ನ ತಮ್ಮ ಮತ್ತು ತಂಗಿಯರನ್ನು ನಾನು ನೋಡಿಕೊಳ್ಳುತ್ತಿದ್ದ ದಿನಗಳು ಕಣ್ಮುಂದೆ ಬರುತ್ತವೆ. ಅವ್ವ ಹೊಲದಿಂದ ರಾತ್ರಿ ಹಿಂದಿರುಗುವವರೆಗೂ ಅವರ ಜವಾಬ್ದಾರಿ, ಮನೆ ಕಾಯುವ ಕೆಲಸ ನನ್ನ ಮೇಲಿತ್ತು. ದೂರದಲ್ಲಿದ್ದ, ನಿತ್ಯ ಬಾರದ ನಲ್ಲಿಯ ನೀರು ಸಿಕ್ಕದೇ, ಬಾವಿಯಿಂದ ನೀರು ಸೇದುವ; ವಿದ್ಯುತ್ತಿಲ್ಲದ ದೊಡ್ಡ ಮನೆಯಲ್ಲಿರಲು ಭಯಪಡುತ್ತಿದ್ದ ತಂಗಿ-ತಮ್ಮಂದಿರನ್ನು ಪುಟ್ಟ ಕಂದೀಲಿನ ಸುತ್ತ ಕೂಡಿಸಿ ಮಾತನಾಡುತ್ತಿದ್ದ ದಿನಗಳು ನೆನಪಾಗುತ್ತವೆ. ಅವ್ವ ಮನೆಗೆ ಬಂದ ನಂತರವೇ ಖುಷಿ ಉಕ್ಕುತ್ತಿತ್ತು. ಆನಂತರವಷ್ಟೇ ನಾನು ಪುಸ್ತಕ ತೆರೆಯುತ್ತಿದ್ದುದು. ಹಾಗೆ, ಆ ಕಂದೀಲಿನ ಮಂದ ಬೆಳಕಲ್ಲಿ ಓದಿದ ದಿನಗಳ ತೀವ್ರ ಖುಷಿಯೇ ಇವತ್ತಿಗೂ ನನ್ನನ್ನು ರಾತ್ರಿ ಎಚ್ಚರವಾಗಿಡುತ್ತದೆ. ನನ್ನ ಸಾವಿರ ಸಾವಿರ ನೆನಪುಗಳಿಗೆ ರಾತ್ರಿಯ ನೀರವತೆ, ಮಂದ ಬೆಳಕು, ನಿಶ್ಯಬ್ದ ಪುಟ ನೀಡುತ್ತವೆ.

ವಿಶ್ವ ಅಮ್ಮಂದಿರ ದಿನ ಎಂಬ ನೆಪದಲ್ಲಿ ಇವೆಲ್ಲವನ್ನೂ ಮತ್ತೆ ಮತ್ತೆ ನೆನಪಿಸಿಕೊಳ್ಳುತ್ತಿದ್ದೇನೆ. ದಿನಾಚರಣೆಗೂ ನೆನಪುಗಳಿಗೂ ಸಂಬಂಧವಿಲ್ಲ. ಅವು ನಿತ್ಯನೂತನ. ಅವು ಉಕ್ಕಲು ಇವೆಲ್ಲ ಕೇವಲ ನೆಪ ಮಾತ್ರ ಎಂಬುದು ಗೊತ್ತಿದ್ದರೂ, ಬೀದಿಯ ನೆರಳಿನಲ್ಲಿ ಮಕ್ಕಳನ್ನು ಮಲಗಿಸಿ, ಕೆಲಸ ಮಾಡುತ್ತಿರುವ ತಾಯಂದಿರನ್ನು ನೋಡಿದಾಗ, ಮನಸ್ಸು ಕರಗುತ್ತದೆ. ಆ ತಾಯಂದಿರು ನನ್ನ ಅವ್ವನನ್ನು ನೆನಪಿಸುತ್ತಾರೆ. ಬದುಕಿನ ಕಠೋರತೆ ನೆನಪಾಗುತ್ತದೆ. ಮನುಷ್ಯನ ಸಣ್ಣತನ, ಸ್ವಾರ್ಥ, ದ್ವೇಷ ನೆನಪಾಗುತ್ತವೆ. ಆ ಮಕ್ಕಳು ಬೀದಿಯಲ್ಲಿರಲು ಎಲ್ಲೋ ನಾವೂ ಕಾರಣಕರ್ತರೆಂಬ ಅಪರಾಧಿ ಭಾವನೆ ದಟ್ಟವಾಗುತ್ತದೆ. ಮೋಹದಲ್ಲಿ, ಸಿಂಗಾರದಲ್ಲಿ, ಅಬ್ಬರದ ಶಬ್ದ, ಕಣ್ಣು ಕೋರೈಸುವ ಬೆಳಕಿನ ಜಗತ್ತಿನಲ್ಲಿ ಇಂಥ ಭಾವನೆಗಳು ಪಳೆಯುಳಿಕೆಗಳಂತೆ ಕಾಣಬಹುದು. ಅವರವರು ಪಡೆದುಕೊಂಡು ಬಂದಿದ್ದು ಎಂಬ ಒಣಮಾತು ನೆನಪಾಗಬಹುದು. ಹೀಗಿದ್ದರೂ, ಈ ಮಕ್ಕಳು, ಈ ತಾಯಂದಿರು ನನಗೆ ನನ್ನೂರನ್ನು, ನನ್ನವ್ವನನ್ನು, ನನ್ನ ಬಾಲ್ಯವನ್ನು ಮತ್ತೆ ಮತ್ತೆ ನೆನಪಿಸುತ್ತಾರೆ. ಮಂಕಾಗಿಸುತ್ತಾರೆ.

ಈ ಎಲ್ಲಾ ಮಕ್ಕಳು ನಳನಳಿಸುತ್ತ ಬೆಳೆಯಲಿ. ದೊಡ್ಡವರಾಗಲಿ. ಮುಂದೊಂದು ದಿನ ತಮ್ಮ ಮಕ್ಕಳ ಕೈಯಿಂದ ದೂರದಲ್ಲೆಲ್ಲೋ ಇರುವ ತಮ್ಮ ತಾಯಂದಿರಿಗೆ ಫೋನ್ ಮಾಡಿಸಲಿ. ಹಳೆಯ ನೆನಪುಗಳನ್ನು ಕೆದಕಿಕೊಳ್ಳಲಿ. ಮತ್ತೆ ಊರಿಗೆ ಹೋಗುವ ಆಸೆಯನ್ನು ಜೀವಂತವಾಗಿಟ್ಟುಕೊಳ್ಳಲಿ. ನೆಮ್ಮದಿ ಎಂಬುದು ಎಲ್ಲರ ಹಕ್ಕು. ಮತ್ತು, ಅದನ್ನು ಪಡೆದುಕೊಳ್ಳುವುದು ನಮ್ಮ ಕರ್ತವ್ಯ ಕೂಡಾ ಎಂಬುದು ಅವರಿಗೆ ಮನದಟ್ಟಾಗಲಿ-

ಹಾಗಂತ ಆಶಿಸುತ್ತಾ, ಬರೆಯುತ್ತಾ ಮೌನವಾಗುತ್ತೇನೆ. ಮನಸ್ಸಿನ ತುಂಬ ಊರಿನ, ಅವ್ವನ, ಬಾಲ್ಯದ ನೆನಪು. 

- ಚಾಮರಾಜ ಸವಡಿ
(ಚಿತ್ರ ಕೃಪೆ: ಪ್ರಜಾವಾಣಿ, ಛಾಯಾಗ್ರಾಹಕ: ಶಿವಮೊಗ್ಗ ಯೋಗರಾಜ್‌)

ನಕ್ಷತ್ರಗಳಿಗೊಂದು ಮೊರೆ

16 Apr 2011

2 ಪ್ರತಿಕ್ರಿಯೆ
ಹೊರಗೆ ಸಣ್ಣಗೆ ಮಳೆ.
ಒಳಗೆ ದಟ್ಟೈಸಿದ ಕಾರ್ಮೋಡ. ಮಿಂಚಿಲ್ಲ, ಗುಡುಗಿಲ್ಲ. ಹನಿಯುತ್ತಿರುವ ಸೋನೆ ಮಳೆ ಬಿರುಮಳೆಯಾಗುವ ಸೂಚನೆಯೂ ಇಲ್ಲ.
ನನ್ನ ಹುಟ್ಟೂರು ಅಳವಂಡಿ ನೆನಪಾಗುತ್ತಿದೆ. 
ಯಾವುದೇ ಸಣ್ಣ ಖುಷಿಯಿರಲಿ, ನೋವಿರಲಿ, ವಂಚನೆ ಆಘಾತ ಕಳವಳ ಖಿನ್ನತೆ ಅಪರಾಧಿ ಭಾವನೆ- ಹೀಗೆ ಯಾವ ಭಾವ ಉಕ್ಕಿದರೂ ಜೊತೆಗೆ ಊರ ನೆನಪು ಉಕ್ಕುತ್ತದೆ. ಇವತ್ತೂ ಹಾಗೇ ಆಯಿತು. ಬಹುದಿನಗಳಿಂದ ರೂಢಿ ಮಾಡಿಕೊಂಡಿರುವ, ಇನ್ನೂ ಅನಾವರಣಗೊಳ್ಳಬೇಕಾಗಿರುವ ವೆಬ್‌ಸೈಟೊಂದಕ್ಕೆ ಎಂದಿನಂತೆ ದಿನದ ಸುದ್ದಿಗಳನ್ನು ಪೋಣಿಸುತ್ತಿದ್ದ ಹೊತ್ತಿನಲ್ಲಿ, ಸದ್ದಿಲ್ಲದೇ ಕರೆಂಟ್ ಮಾಯ. ನಾನಿದ್ದೇನೆ ಬಿಡು ಎಂಬಂತೆ ಯುಪಿಎಸ್ ವಿದ್ಯುತ್ ಬೆಳಗಿದರೂ ಹೊರಗೆ ಓಣಿಯಲ್ಲೆಲ್ಲ ಕವಿದ ಕತ್ತಲಲ್ಲಿ, ಲೈಟಿರುವ ನನ್ನ ಮನೆ ವಿಚಿತ್ರವಾಗಿ ಕಾಣುತ್ತಿದೆ. ಮನೆಯೊಳಗಿನ ಅನಗತ್ಯ ದೀಪಗಳನ್ನಾರಿಸಿ, ಮತ್ತೆ ನನ್ನ ಕೋಣೆಯಲ್ಲಿ ಬಂದು ಕೂತೆ. 
ಹೊರಗೆ ಬೆಳಕಿದ್ದರೂ ಒಳಗೆ ಕತ್ತಲು.
ನನ್ನ ಬಹುತೇಕ ಬದುಕು ಸಾಗಿ ಬಂದ ಪರಿಗೆ ಸಾಕ್ಷಿಯೆಂಬಂತೆ ಈ ವೈರುದ್ಧ್ಯ ರಾಚುತ್ತದೆ. ಹೊರಗೆ ಬೆಳಕಿದ್ದಾಗ ನನ್ನೊಳಗೆ ಕತ್ತಲು, ಒಳಗೆ ಬೆಳಕು ಅರಳಿ ನಿಂತ ಹೊತ್ತಿನಲ್ಲಿ ಹೊರಗೆ ಕತ್ತಲು ಕವಿದಿರುತ್ತದೆ. ಸ್ವಾನುಕಂಪವಲ್ಲ. ಹುಚ್ಚುತನವೂ ಅಲ್ಲ. ಎಷ್ಟೋ ಸಾರಿ ಈ ವೈರುದ್ಧ್ಯ ಕುರಿತು ಯೋಚಿಸಿದ್ದೇನೆ. ಪದೆ ಪದೆ ಏಕೆ ಹೀಗಾಗುತ್ತದೆ ಅಂತ ಅಚ್ಚರಿಪಟ್ಟಿದ್ದೇನೆ. ಬ್ಯಾಟಿಂಗ್ ಬರುವ ಹೊತ್ತಿಗೆ ಓವರ್‌ಗಳು ಮುಗಿದಂತೆ, ನಿರೀಕ್ಷಿಸಿದ್ದು ಬಂತೆಂಬ ಸಡಗರದಿಂದ ಎದ್ದು ನಿಲ್ಲುವ ಮುನ್ನವೇ ಅದು ಸದ್ದಿಲ್ಲದೇ ಇಲ್ಲವಾಗಿರುತ್ತದೆ.
ಹೊರಗೆ ಸಣ್ಣಗೆ ಮಳೆ.
ಸುದ್ದಿ ಜೋಡಿಸಿಯಾಯ್ತು. ದಿನದ ಮುಖ್ಯ ಘಟ್ಟವೊಂದು ಮುಗಿದ ನಿರಾಳತೆ. ಸಿದ್ಧಗೊಳ್ಳುತ್ತಿರುವ ವೆಬ್‌ಸೈಟ್‌ನಲ್ಲಿ ಈ ಸುದ್ದಿಗಳು ಹೇಗೆ ಕಾಣಬಹುದೆಂಬ ಬಸಿರಿ ತಾಯಿಯ ಕನಸೊಂದು ಎಂದಿನಂತೆ ಅರಳುತ್ತದೆ. ಕೆಲ ಕ್ಷಣ ಆ ನಿರಾಳತೆಯಲ್ಲಿ ಮನಸಾರೆ ಮುಳುಗುತ್ತೇನೆ. 
ಆದರೆ, ಅದು ಕೆಲ ಕ್ಷಣಗಳ ಕಾಲ ಮಾತ್ರ.
ಸಣ್ಣಗೇ ಉಕ್ಕತೊಡಗುವ ಖಿನ್ನತೆ ಊರಿನ ನೆನಪುಗಳನ್ನು ಹೊತ್ತು ತರುತ್ತದೆ. ನನ್ನೂರಿನ ಮಣ್ಣಿನ ಮಾಳಿಗೆಯ ಮೇಲೆ, ನೆಲದ ಮೇಲೆ ಏನನ್ನೂ ಹಾಸದೇ, ಹಾಗೇ ಮಲಗಿ, ಕಣ್ಣು ಕೋರೈಸುವ ನಕ್ಷತ್ರಗಳನ್ನು ದಿಟ್ಟಿಸುತ್ತಿದ್ದ ದಿನಗಳು ನೆನಪಾಗುತ್ತವೆ. ನನ್ನೊಳಗಿರುವ ಕನಸುಗಳಿಗೆ ಶಕ್ತಿ ಕೊಟ್ಟ ದಿವ್ಯ ದೇವತೆಗಳವು. ಸವಾಲುಗಳನ್ನು ಎದುರಿಸುವ ಕೆಚ್ಚು ತುಂಬಿದ ಕಿಡಿಗಳವು. ಇವತ್ತೇಕೋ ಹನಿಯುತ್ತಿರುವ ಮಳೆಯ ನಡುವೆ, ಉಕ್ಕತೊಡಗಿರುವ ಖಿನ್ನತೆಯ ಮಧ್ಯೆ, ನನ್ನೂರಿನ ದಿವ್ಯ ಆಗಸದ ಆ ನಕ್ಷತ್ರಕಿಡಿಗಳು ಮತ್ತೆ ಮತ್ತೆ ನೆನಪಾಗತೊಡಗಿವೆ.
ಕೆಲಸ ಮುಗಿದಿದ್ದರಿಂದ, ಯುಪಿಎಸ್ ಏಕೆ ದಣಿಸಬೇಕೆಂದು ಲೈಟಾರಿಸಿ ಕತ್ತಲಲ್ಲಿ ಸುಮ್ಮನೇ ಕೂಡುತ್ತೇನೆ. ಊರ ಮುಗಿಲಿನೊಳಗೆ ಅರಳಿ ನಿಲ್ಲುತ್ತಿದ್ದ ನಕ್ಷತ್ರಗಳು ಛಾವಣಿಯಲ್ಲಿ ಕಂಡಾವೇನೋ ಎಂಬ ವಿಚಿತ್ರ ಆಸೆ. ಆದರೆ, ಬೆಂಗಳೂರಿನ ಬಯಲಲ್ಲಿ ನಿಂತರೂ ಬೆಳಕಿನ ಮೋಡದ ಮಧ್ಯೆ ಮಂಕಾಗುವ ನಕ್ಷತ್ರಗಳು, ಲೈಟಾರಿಸಿದ ಛಾವಣಿಯಲ್ಲಿ ಕಂಡಾವಾದರೂ ಹೇಗೆ? ಮತ್ತದೇ ಕತ್ತಲು, ಏಕಾಂತ, ಖಿನ್ನತೆ. 
ಒಂದು ಸ್ನಿಗ್ಧ ಪ್ರೀತಿಗಾಗಿ ಹಂಬಲಿಸುತ್ತಿದ್ದ ದಿನಗಳು ನೆನಪಾಗುತ್ತಿವೆ. ಓದಲು ಪಠ್ಯಪುಸ್ತಕ ಬಿಟ್ಟು ಬೇರೊಂದು ಸಿಗದ ವಾತಾವರಣದಲ್ಲಿ ಪುಕ್ಕಟೆ ಕನಸುಗಳನ್ನು ಕಾಣುವುದು ಬಿಟ್ಟು ಬೇರೆ ದಾರಿ ಇದ್ದಿಲ್ಲ. ರಜಾ ದಿನಗಳು ಬಂದಾಗ, ಪಠ್ಯಪುಸ್ತಕಗಳ ಓದೂ ಇಲ್ಲವಾಗುತ್ತಿತ್ತು. ನನ್ನ ಮುಂದಿನ ತರಗತಿಯ ಕನ್ನಡ ವಿಷಯದ ಪುಸ್ತಕವನ್ನು ಅದ್ಹೇಗೋ ಹೊಂಚಿಕೊಂಡು ಒಂದೇ ದಿನದಲ್ಲಿ ಓದಿ ಮುಗಿಸುತ್ತಿದ್ದೆ. ನಂತರ ಬಿರು ಬಿಸಿಲು, ಕಡು ಸೆಕೆ ಮತ್ತು ಕನಸುಗಳೊಳಗೆ ಬದುಕು ಮುಳುಗಿಹೋಗುತ್ತಿತ್ತು. ಮನೆಯಲ್ಲಿ ನಡೆಯುತ್ತಿದ್ದ ಹಪ್ಪಳ-ಸಂಡಿಗೆ-ಉಪ್ಪಿನಕಾಯಿ-ಶ್ಯಾವಿಗೆ ತಯಾರಿಯ ಸಡಗರದಲ್ಲಿ ಅರೆಮನಸ್ಸಿನಿಂದ ತೊಡಗಿಕೊಂಡ ಮನಸ್ಸು ಸಂಜೆಯಾಗುವುದನ್ನೇ ಕಾಯುತ್ತಿತ್ತು.
ಸಾಮಾನ್ಯವಾಗಿ ಕರೆಂಟಿಲ್ಲದಿರುತ್ತಿದ್ದ ರಾತ್ರಿಗಳಲ್ಲಿ ಮಾಳಿಗೆ ಮೇಲೆ ಹೋಗಿ ಅಂಗಾತ ಮಲಗಿಕೊಂಡು ನಕ್ಷತ್ರಗಳನ್ನು ದಿಟ್ಟಿಸುತ್ತಿದ್ದೆ. ಸಾವಿರಾರು ಕನಸುಗಳನ್ನು ಆ ನಕ್ಷತ್ರಗಳು ನನ್ನೊಳಗೆ ತುಂಬಿವೆ. ಅವುಗಳೊಂದಿಗೆ ಸುದೀರ್ಘ ಮೌನ ಸಂಭಾಷಣೆ ನಡೆಸಿದ್ದೇನೆ. ಪ್ರಶ್ನೆಗಳನ್ನು ಕೇಳಿ ಉತ್ತರ ಪಡೆದುಕೊಂಡಿದ್ದೇನೆ. ನನ್ನ ನಿರಾಶೆಗಳನ್ನು ಅವು ಸಂತೈಸಿವೆ. ನೋವನ್ನು ಸಹನೀಯವಾಗಿಸಿವೆ. ಮೌನ ಸಾಂಗತ್ಯದಲ್ಲೂ ಪರಮಶಕ್ತಿಯಿದೆ ಎಂಬುದನ್ನು ಮೌನವಾಗಿಯೇ ನನ್ನೊಳಗೆ ತುಂಬಿವೆ. ನಕ್ಷತ್ರಗಳ ಲೋಕದೊಳಗಿನ ಆ ಪಯಣ ಇವತ್ತಿಗೂ ನನ್ನ ಅತ್ಯಂತ ಸ್ಮರಣೀಯ ನೆನಪುಗಳಲ್ಲಿ ಒಂದು.
‘ಕತ್ತಲ್ದಾಗ ಒಬ್ನ ಕೂತು ಏನ್ ಮಾಡ್ತೀ?’ ಎಂದು ಮನೆಯವರು ಆಗಾಗ ಕೇಳುತ್ತಿದ್ದರು. ಏನಂತ ಹೇಳೋದು. ಓರಗೆಯ ಹುಡುಗರು ಕತ್ತಲು ತುಂಬಿದ ಓಣಿಗಳಲ್ಲಿ ಕಳ್ಳ-ಪೊಲೀಸ್ ಆಟವಾಡುತ್ತಿರುವಾಗ ಇವನೊಬ್ಬ ಮೇಲೆ ಹೋಗಿ ಏನು ಮಾಡ್ತಾನೆ ಎಂಬ ಗೊಂದಲ ಅವರದಾಗಿತ್ತು. ಕ್ರಮೇಣ ನನ್ನ ಅನ್ಯಮನಸ್ಕತೆ, ಅಂತರ್ಮುಖತೆ ಅವರಿಗೆ ಅರ್ಥವಾಯಿತೋ ಅಥವಾ ಇವನಿಗೆ ಹೇಳಿ ಉಪಯೋಗವಿಲ್ಲ ಎಂದು ಅಂದುಕೊಂಡರೋ- ಒಟ್ಟಿನಲ್ಲಿ ಪ್ರಶ್ನಿಸುವುದು ತಪ್ಪಿತು. ನಾನು ಮತ್ತಷ್ಟು ಆನಂದದಿಂದ ನಕ್ಷತ್ರ ಸಾಂಗತ್ಯದಲ್ಲಿ ಮುಳುಗಿಹೋದೆ.
ಎಸ್ಸೆಸ್ಸೆಲ್ಸಿ ಮುಗಿಸಿ ಮುಂದಿನ ಓದಿಗೆಂದು ಮೊದಲ ಬಾರಿ ಹುಟ್ಟಿ ಬೆಳೆದ ಊರು ಬಿಡಬೇಕಾಗಿ ಬಂದಾಗ ಇವೇ ನಕ್ಷತ್ರಗಳ ಬಳಿ ಅತ್ತಿದ್ದೆ. ಮುಂದಿನ ಬದುಕು ಹೇಗೋ ಎಂದು ಕಳವಳಪಟ್ಟಿದ್ದೆ. ಉಕ್ಕುತ್ತಿದ್ದ ಕನಸುಗಳಿಗೆ, ನವಿರು ಭಾವನೆಗಳಿಗೆ ಸ್ಪಷ್ಟರೂಪ ಕೊಡಲಾಗದೇ ಒದ್ದಾಡಿದ್ದೆ. ಏರ್‌ಫೋರ್ಸ್‌ಗೆ ನೇಮಕವಾದಾಗಲೂ ಇವೇ ನಕ್ಷತ್ರಗಳು ನನಗೆ ದಾರಿ ತೋರಿದ್ದವು. ನನ್ನೂರಿನಲ್ಲಿ ಕಂಡ ಅವೇ ನಕ್ಷತ್ರಗಳನ್ನು ಕಚ್ಛ್‌ನ ರಣಪ್ರದೇಶದ ಆಗಸದಲ್ಲೂ ಕಂಡಿದ್ದೇನೆ. ಊರು ಸೇರಿದ ನೆಮ್ಮದಿ ಅನುಭವಿಸಿದ್ದೇನೆ.
ಮೋಡ ಮುಸುಕಿ ಮುಸುಮುಸು ಅಳುತ್ತಿರುವ ಬೆಂಗಳೂರಿನ ಆಗಸ ಏಕೋ ನನ್ನೂರ ನಕ್ಷತ್ರಗಳನ್ನು ನೆನಪಿಸುತ್ತಿದೆ. ಸಣ್ಣಗೇ ಖಿನ್ನತೆ ಉಕ್ಕುತ್ತಿದೆ. ಅಂದುಕೊಂಡಿದ್ದಕ್ಕಿಂತ ವೇಗವಾಗಿ ಬದಲಾಗುತ್ತಿರುವ ವೃತ್ತಿ ಜೀವನದ ಮಧ್ಯೆ ನನ್ನ ಪ್ರವೃತ್ತಿ ಬದಲಾಗದೇ ಹಾಗೇ ಉಳಿದಿರುವ ಬಗ್ಗೆ ಅಚ್ಚರಿಯೂ ಆಗುತ್ತಿದೆ. ನನ್ನ ಸೋಲುಗಳಿಗೆ ಈ ನಿರ್ಲಿಪ್ತಭಾವವೇ ಕಾರಣವಾ ಎಂಬ ಗೊಂದಲವೂ ಕಾಡುತ್ತಿದೆ.
ಕೂತ ಕೋಣೆಯ ಛಾವಣಿಯನ್ನೇ ಮತ್ತೆ ಮತ್ತೆ ದಿಟ್ಟಿಸುತ್ತೇನೆ. ಇವತ್ತೇಕೋ ನಾನು ಗೊಂದಲದಲ್ಲಿದ್ದೇನೆ. ಮಿತಿ ದಾಟಿದ ಮಾತೊಂದು ಮನನೋಯಿಸಿತಾ ಎಂಬ ಅಪರಾಧಿ ಭಾವನೆಯೊಂದಿದೆ. ಇತ್ತೀಚೆಗೇಕೋ ತೋರದ ಹಸಿವು ಬಾರದ ನಿದ್ದೆಗಳ ಬಗ್ಗೆ ತಕರಾರಿದೆ. ಇವೆಲ್ಲ ಸೇರಿ ಗೊಂದಲಗೊಂಡಿದ್ದೇನೆ. ಮಂಕಾಗಿದ್ದೇನೆ. ನಕ್ಷತ್ರಗಳ ಬಳಿ ಪರಿಹಾರ ಕಂಡುಕೊಳ್ಳಬೇಕಿದೆ.
ಆದರೆ, ಹೊರಗೆ ಮೋಡ ಮುಸುಕಿದ ಆಗಸ. ಒಳಕೋಣೆಯ ಛಾವಣಿಯೂ ಏಕೋ ಖಾಲಿಖಾಲಿ. ಕರೆಂಟಿಲ್ಲದ ರಾತ್ರಿಯಾಗಿದ್ದರೂ ನಕ್ಷತ್ರಗಳು ಕಾಣುತ್ತಿಲ್ಲ. ಮನಸ್ಸಿನ ಮಂಕು ಕಳೆಯುತ್ತಿಲ್ಲ. ನಾನು ಮತ್ತೆ ಮತ್ತೆ ಅವನ್ನು ಕರೆಯುತ್ತಿದ್ದೇನೆ. ನನ್ನೂರಿನ ಕಡು ಕತ್ತಲೆಯ ಆಗಸದಲ್ಲಿ ಸದ್ದಿಲ್ಲದೇ ಮಿನುಗುತ್ತ ಸಂತೈಸುತ್ತಿದ್ದ ಅವು ಮತ್ತೆ ಮತ್ತೆ ನೆನಪಾಗುತ್ತಿವೆ. 
ಮಳೆ ಸದ್ದಿಲ್ಲದೇ ಹನಿಯುತ್ತಲೇ ಇದೆ, ಒಳಮನೆಯೊಳಗೆ ಕೂತ ನನ್ನಳಲನ್ನು ಅರ್ಥ ಮಾಡಿಕೊಂಡಂತೆ!
- ಚಾಮರಾಜ ಸವಡಿ

ಹೋಳಿ ರಂಗಿನ ಸಂತೆಯಲ್ಲೊಂದು ಒಂಟಿತನ

21 Mar 2011

1 ಪ್ರತಿಕ್ರಿಯೆ
ಯಾವತ್ತೂ ಹಿಂದೆ ನೋಡಬೇಡ. ಏಕೆಂದರೆ, ಅದು ಸದಾ ನಿನ್ನ ಜೊತೆಗೇ ಇರುತ್ತದೆ. ಹಿಂದಿನದನ್ನು ಬೇಗ ಮರೆ, ಬೇಗ ಜೀರ್ಣಿಸಿಕೋ. ಬೇಗ ವಿಸರ್ಜಿಸಿಬಿಡು. ಏನಿದ್ದರೂ ಮುಂದೆ ನೋಡುತ್ತಾ ಹೋಗು. ಉದ್ಧಾರವಾಗುತ್ತೀ’-
ಹಾಗಂತ ತುಂಬ ವರ್ಷಗಳ ಹಿಂದೆ ಒಬ್ಬ ಸಾಧು ಮಹಾಶಯ ನನಗೆ ಹೇಳಿದ್ದ.
ನಾನಾಗ ರೈಲಿನಲ್ಲಿ ಕೂತು ಗುಜರಾತ್‌ನ ಭುಜ್‌ನಿಂದ ಕೊಪ್ಪಳದ ನನ್ನೂರು ಅಳವಂಡಿಯ ಕಡೆ ಬರುತ್ತಿದ್ದೆ. ಮುಂಬೈನಿಂದ ಮಧ್ಯಾಹ್ನ ಹೊರಡುವ ದಾದರ್ ಎಕ್ಸ್‌ಪ್ರೆಸ್‌ ಪುಣೆ ದಾಟಿದ ನಂತರ ಆತ ಸಿಕ್ಕಿದ್ದ. ಮುಂದೆ ರಾತ್ರಿ ತಡವಾಗಿ ನನ್ನೊಂದಿಗೆ ಸೊಲ್ಲಾಪುರದಲ್ಲಿ ಇಳಿದಿದ್ದ. ಅಲ್ಲಿಂದ ನಾನು ನಸುಕಿನ ಜಾವ ಗದಗ್‌ ಕಡೆ ಹೊರಡುವ ರೈಲನ್ನು ಹಿಡಿಯಬೇಕಿತ್ತು. ಅದು ನಸುಕಿನ ನಾಲ್ಕು ಗಂಟೆಗೆ ಹೊರಡುತ್ತಿತ್ತು. ಬ್ರಾಡ್‌ಗೇಜ್‌ ವಿಭಾಗ ದಾಟಿ, ಮೀಟರ್‌ ಗೇಜ್‌ ಸ್ಟೇಶನ್‌ ಕಡೆ ಬಂದು, ರೈಲು ಬಂದು ನಿಲ್ಲುವ ಪ್ಲಾಟ್‌ಫಾರಂ ತಲುಪಿದರೆ ಮುಕ್ಕಾಲು ಕೆಲಸವಾದ ಹಾಗೆ.
ಅದೇಕೋ ಗೊತ್ತಿಲ್ಲ, ಆತನೂ ನಂಜೊತೆ ಮೀಟರ್‌ಗೇಜ್‌ ನಿಲ್ದಾಣದ ಕಡೆ ಹೆಜ್ಜೆ ಹಾಕಿದ. ಹಿಂದಿಯಲ್ಲೇ ಮಾತಾಡುತ್ತ, ಒಮ್ಮೊಮ್ಮೆ ತಾನೊಬ್ಬನೇ ಮಾತಾಡಿಕೊಳ್ಳುತ್ತಿದ್ದಾನೋ ಎಂಬಂತೆ ಗೊಣಗಿಕೊಳ್ಳುತ್ತ, ಪಕ್ಕದಲ್ಲಿ ಬರುತ್ತಿದ್ದ ನನ್ನತ್ತ ತಿರುಗಿ ಕೂಡ ನೋಡದೇ ನೆಟ್ಟಗೇ ಎದುರಿಗೇ ದೃಷ್ಟಿ ನೆಟ್ಟುಕೊಂಡು, ನಿದ್ದೆಯಲ್ಲೆದ್ದು ಹೊರಟವನಂತೆ ಬರುತ್ತಿದ್ದ.
’ಯಾವತ್ತೂ ಹಿಂದೆ ನೋಡಬೇಡ’ ಎಂದು ಆತ ಹೇಳುತ್ತಿದ್ದಾಗ, ಪಕ್ಕಕ್ಕೆ ತಿರುಗಿ ಆತನ ಮುಖ ನೋಡಿದೆ. ಅದು ನಿರ್ವಿಕಾರವಾಗಿತ್ತು. ಶಾಂತವಾಗಿತ್ತು.
ನನ್ನ ಸೂಟ್‌ಕೇಸ್‌ ವಿಪರೀತ ಭಾರ. ಆಗ ನಾನು ಬಿ.ಎ. ಪರೀಕ್ಷೆಗೆ ಬಾಹ್ಯ ವಿದ್ಯಾರ್ಥಿಯಾಗಿದ್ದೆ. ಹೀಗಾಗಿ, ಸೂಟ್‌ಕೇಸ್‌ ತುಂಬ ಪುಸ್ತಕಗಳು, ಬಟ್ಟೆಬರೆಗಳು, ಅಪರೂಪಕ್ಕೊಮ್ಮೆ ಊರಿಗೆ ಹೋಗುತ್ತಿದ್ದೆನಾದ್ದರಿಂದ ಆಸೆಪಟ್ಟು ಕೊಂಡ ವಸ್ತುಗಳೆಲ್ಲ ಸೇರಿಕೊಂಡಿದ್ದವು. ಇನ್ನೊಂದು ಶೋಲ್ಡರ್‌ ಬ್ಯಾಗ್‌ನಲ್ಲಿ ನನ್ನ ನಿತ್ಯಬಳಕೆಯ ವಸ್ತುಗಳ ಜೊತೆಗೆ, ಕುರುಕಲು ತಿಂಡಿಗಳು, ನೀರಿನ ಬಾಟಲ್‌ ಹಾಗೂ ಒಂದು ಕಾದಂಬರಿ ಇರುತ್ತಿತ್ತು. ಆಗೊಮ್ಮೆ ಈಗೊಮ್ಮೆ ಸೂಟ್‌ಕೇಸನ್ನೊಮ್ಮೆ ಕೈ ಬದಲಾಯಿಸುತ್ತ, ಏದುಸಿರು ಬಿಡುತ್ತ ಆತನೊಂದಿಗೆ ಸಮಕ್ಕೆ ಹೆಜ್ಜೆ ಹಾಕಲು ಯತ್ನಿಸುತ್ತಿದ್ದಾಗ, ಆತನ ಮಾತು ಏಕೋ ಗಮನ ಸೆಳೆದಿದ್ದರಿಂದ, ಛಕ್ಕನೇ ಹೊರಳಿ ನೋಡಿದ್ದೆ.
ಸಾಧುವಿನ ಮುಖ ಶಾಂತವಾಗಿತ್ತು. ಅರಿತು ಮಾತನಾಡುತ್ತಿದ್ದ ಮುಖಭಾವ.
ನನ್ನ ಹಿಂದಿ ಅಷ್ಟಕ್ಕಷ್ಟೇ. ಏರ್‌ಫೋರ್ಸ್‌‌ನಲ್ಲಿದ್ದರೂ ಹಿಂದಿ ಕಲಿಯಲು ಅಷ್ಟಾಗಿ ಆಸಕ್ತಿ ತೋರಿರಲಿಲ್ಲ. ಮೊದಲೇ ಅಂತರ್ಮುಖಿ. ನನ್ನ ಪಾಡಿಗೆ ನಾನು ಕೆಲಸದಲ್ಲಿ, ಪುಸ್ತಕಗಳಲ್ಲಿ, ಖಿನ್ನತೆಯಲ್ಲಿ, ಒಂಟಿತನದಲ್ಲಿ ಮುಳುಗಿಹೋಗಿರುತ್ತಿದ್ದೆ. ಗುಂಪಿನಲ್ಲಿದ್ದರೆ, ಪದೆ ಪದೆ ಬಳಸುತ್ತಿದ್ದರೆ ಭಾಷೆ ಕಲಿಕೆ ಸುಲಭವಾದೀತು. ಆಗಿನ ನನ್ನ ಮನಃಸ್ಥಿತಿಯಲ್ಲಿ ಅದು ಸಾಧ್ಯವಿಲ್ಲದ್ದರಿಂದ, ಹಿಂದಿ ಚೆನ್ನಾಗಿ ಅರ್ಥವಾಗುತ್ತಿದ್ದರೂ, ಸಂಭಾಷಣೆ ಕಷ್ಟವಾಗುತ್ತಿತ್ತು.
ಹೀಗಾಗಿ, ಸಾಧುವಿನ ಮಾತನ್ನು ಗಮನ ಕೊಟ್ಟು ಕೇಳುತ್ತಾ ಹೋದೆ.
’ಎಂದಿಗೂ ಹಿಂದೆ ನೋಡಬೇಡ. ಅದು ನಿನ್ನನ್ನು ಹಿಂದೆಯೇ ಉಳಿಸುತ್ತದೆ. ಹಾಗೆ ಪದೆ ಪದೆ ಹಿಂದೆ ನೋಡುವ ಅವಶ್ಯಕತೆಯಾದರೂ ಏನಿರುತ್ತದೆ? ಹಿಂದೆ ಏನೇನಾಗಿತ್ತು ಎಂಬುದು ನಿನಗಾಗಲೇ ಗೊತ್ತಿರುತ್ತದಲ್ಲ? ಅದನ್ನು ಮತ್ತೆ ಮತ್ತೆ ನೆನಪಿಸಿಕೊಳ್ಳುವ ಅವಶ್ಯಕತೆಯೇ ಇರದು. ನಿನ್ನ ಇವತ್ತಿನ ಪ್ರತಿ ಹೆಜ್ಜೆಯಲ್ಲಿಯೂ ಅದರ ನೆರಳು ಇದ್ದೇ ಇರುತ್ತದೆ. ಬೇಕಾಗಿದ್ದನ್ನು ಮಾತ್ರ ಬಳಸಿಕೋ, ಮುಂದೆ ನೋಡು. ಮುಂದಡಿಯಿಡು, ಉದ್ಧಾರವಾಗುತ್ತೀ...’-
ಆತ ಹೇಳುತ್ತಲೇ ಇದ್ದ.
ನನ್ನ ಸೂಟ್‌ಕೇಸ್‌ ತೀರಾ ಭಾರವೆನಿಸತೊಡಗಿತ್ತು. ಎರಡೂ ಕೈಗಳೂ ಸೋತುಹೋಗಿದ್ದವು. ರಿಸರ್ವೇಶನ್‌ ಇಲ್ಲದೇ ಜನರಲ್‌ ಕಂಪಾರ್ಟ್‌‌ಮೆಂಟ್‌ನಲ್ಲಿ ಸೂಟ್‌ಕೇಸ್‌ ಮೇಲೆಯೇ ಕೂತು ರಾತ್ರಿಯಿಡೀ ಪ್ರಯಾಣ ಮಾಡಿ ಮುಂಬೈ ತಲುಪಿದ್ದೆ. ನಿದ್ದೆ ಮಾಡುವ ಪ್ರಶ್ನೆಯೇ ಇಲ್ಲ. ಮುಂಬೈಯನ್ನು ಬೆಳಿಗ್ಗೆ ೯ಕ್ಕೆ ತಲುಪಿದ್ದರೂ, ಮಧ್ಯಾಹ್ನದವರೆಗೆ ನಿದ್ದೆ ಮಾಡಲು ಅವಕಾಶವಾಗುತ್ತಿದ್ದಿಲ್ಲ. ಅಲ್ಲಿಂದ ಸೊಲ್ಲಾಪುರಕ್ಕೆ ರಾತ್ರಿ ೧೨ರಿಂದ ೧ ಗಂಟೆ ಸುಮಾರು ತಲುಪುತ್ತಿದ್ದರಿಂದ, ನಿದ್ದೆ ಹೋದರೆ ಊರು ಬಂದಿದ್ದು ಗೊತ್ತಾಗಲಿಕ್ಕಿಲ್ಲ ಎಂಬ ಅಳುಕಿನಿಂದ ಬರೀ ತೂಕಡಿಕೆಯಲ್ಲೇ ಕಳೆದಿರುತ್ತಿದ್ದೆ. ಎರಡು ದಿನಗಳ ನಿದ್ದೆಗೇಡಿತನದಿಂದಾಗಿ, ಮೈಮನಸ್ಸುಗಳು ಸೋತುಹೋಗಿದ್ದವು.
ಹೀಗಾಗಿ, ಯಮಭಾರದ ಸೂಟ್‌ಕೇಸ್‌ ಹೊತ್ತು ಸಾಗಲಾಗದೇ ಏದುಸಿರು ಬಿಡುತ್ತ ನಡುವೇ ನಿಂತುಬಿಟ್ಟೆ.
ಜೊತೆಗೇ ಹೆಜ್ಜೆ ಹಾಕುತ್ತಿದ್ದ ಸಾಧು, ಒಂದೆರಡು ಹೆಜ್ಜೆ ಮುಂದೆ ಹೋದವ ತಿರುಗಿ ನೋಡಿದ.
ಅದೇ ಮೊದಲ ಬಾರಿ ಆತನ ಕಣ್ಣುಗಳು ನನ್ನನ್ನು ಸಂಧಿಸಿದ್ದು.
ಅಂಥ ತೇಜಸ್ವಿ ಕಣ್ಣುಗಳನ್ನು ಮತ್ತೆ ನಾನು ನೋಡಿಲ್ಲ. ನನ್ನ ಆಯಾಸವನ್ನು ಮರೆಮಾಚುವಂಥ ಆಯಸ್ಕಾಂತೀಯ ಶಕ್ತಿ ಅವುಗಳಲ್ಲಿತ್ತು. ನಾನು ಎವೆಯಿಕ್ಕದೇ ಆತನ ಕಣ್ಣುಗಳನ್ನೇ ನೋಡುತ್ತ ನಿಂತುಬಿಟ್ಟೆ.
’ನಾ ತಗೊಂಬರ್ತೀನಿ ಕೊಡು’ ಎಂದು ಸಾಧು ನನ್ನ ಸೂಟ್‌ಕೇಸ್‌ ಹಿಡಿದುಕೊಂಡ. ನನಗೆ ಅಳುಕು. ಮೊದಲೇ ಸುಸ್ತಾಗಿದ್ದೇನೆ. ಈತ ಸೂಟ್‌ಕೇಸ್‌ ಹೊತ್ತುಕೊಂಡು ಓಡಿ ಹೋಗುವುದಿರಲಿ, ದಾಪುಗಾಲಿಕ್ಕುತ್ತಾ ನಡೆದರೂ ಆತನನ್ನು ಹಿಂಬಾಲಿಸಲು ಸಾಧ್ಯವಿಲ್ಲ. ಅಪರಾತ್ರಿ. ನಿರ್ಜನ ಫ್ಲಾಟ್‌ಫಾರಂ ಬೇರೆ. ನಸುಕಿನ ನಾಲ್ಕು ಗಂಟೆಗೆ ಮೊದಲು ಮೀಟರ್‌ಗೇಜ್‌ ವಿಭಾಗದಲ್ಲಿ ಯಾವ ರೈಲೂ ಬರುವುದಿಲ್ಲ. ಪ್ರಯಾಣಿಕರೂ ಅತಿ ವಿರಳ.
ಹೀಗಾಗಿ, ಬೇಡ ಎಂದು ಮತ್ತೆ ಸೂಟ್‌ಕೇಸ್‌ ಎತ್ತಿಕೊಳ್ಳಲು ಮುಂದಾದೆ.
ಈ ಸಲ ಸಾಧು ಮತ್ತೆ ನನ್ನ ಮುಖ ನೋಡಿದ. ಅಪರೂಪವೆನಿಸುವ ಮುಗುಳ್ನಗು ಆತನ ಮುಖದಲ್ಲಿ ಅರಳಿತು. ನನಗಿಂತ ಹತ್ತು ವರ್ಷ ದೊಡ್ಡವನಿರಬಹುದಷ್ಟೇ. ಆದರೆ, ನನ್ನ ವಯಸ್ಸಿನವನಂತೆ ಕಾಣುತ್ತಿದ್ದ. ಈಗ ಕಣ್ಣುಗಳ ಜೊತೆಗೆ, ಆತನ ಮುಗುಳ್ನಗು ಕೂಡ ನನ್ನನ್ನು ಗಾಢವಾಗಿ ಸೆಳೆಯಿತು.  ’ಚಿಂತೆ ಬೇಡ, ನಾನೇನೂ ನಿನ್ನ ಸೂಟ್‌ಕೇಸ್‌ ಕದ್ದೊಯ್ಯುವುದಿಲ್ಲ’ ಎನ್ನುತ್ತ ಸೂಟ್‌ಕೇಸ್‌ ಎತ್ತಿಕೊಂಡು ಹೊರಟ.
ನಾನು ಹಗುರನಾಗಿ ಆತನ ಸಮಕ್ಕೆ ಹೆಜ್ಜೆ ಹಾಕುತ್ತ ಹೊರಟೆ. ಆತ ಮತ್ತೆ ಮಾತು ಶುರು ಮಾಡಿದ. ಬದುಕಿನ ವಿಚಿತ್ರಗಳ ಬಗ್ಗೆ ಮಾತನಾಡಿದ. ಭೂತ, ವರ್ತಮಾನ ಹಾಗೂ ಭವಿಷ್ಯತ್‌ಕಾಲಗಳ ವೈಚಿತ್ರಗಳ ಬಗ್ಗೆ ಹೇಳಿದ. ಬದುಕನ್ನು ಎದುರಿಸುವ ರೀತಿಯ ಬಗ್ಗೆ ಹೇಳಿದ. ಅಪ್ಪಿತಪ್ಪಿಯೂ ದೇವರ ಬಗ್ಗೆ, ಆಚರಣೆಗಳ ಬಗ್ಗೆ, ಪವಾಡಗಳ ಬಗ್ಗೆ ಮಾತನಾಡಲಿಲ್ಲ.
ನಮ್ಮ ರೈಲು ನಿಲ್ಲುವ ಸ್ಥಳಕ್ಕೆ ಹತ್ತಿರವಾಗಿ, ಸಿಮೆಂಟ್‌ ಸೀಟೊಂದರಲ್ಲಿ ಕೂತ ನಂತರವಷ್ಟೇ ಆತ ಸೂಟ್‌ಕೇಸ್‌ ಇಳಿಸಿದ್ದು. ನಡುವೆ ಎಲ್ಲಿಯೂ ಕೈ ಬದಲಿಸಲಿಲ್ಲ. ಏದುಸಿರು ಬಿಡಲಿಲ್ಲ. ಸಿಮೆಂಟ್‌ ಸೀಟ್‌ನ ಮೇಲೆ ಕಾಲು ಮಡಚಿಕೊಂಡು ಚಕ್ಕಳಮಕ್ಕಳ ಹಾಕಿ ಕೂತ ಆತ ಕತ್ತಲಲ್ಲಿಯೂ ಪಳಪಳ ಹೊಳೆಯುತ್ತಿದ್ದ ಹಳಿಗಳನ್ನೇ ದಿಟ್ಟಿಸುತ್ತ ಮೌನಿಯಾದ.
ಒಂದೈದು ನಿಮಿಷ ನಾನೂ ಮಾತಾಡಲಿಲ್ಲ.
ಆತ ಹೇಳಿದ ವಿಷಯಗಳ ಬಗ್ಗೆ ಯೋಚಿಸುತ್ತಿದ್ದೆ. ಮರುದಿನ ಸಂಜೆ ಊರು ತಲುಪುವ ಸಂಭ್ರಮವಾಗಲಿ, ಒಂದು ವಾರದ ನಂತರ ಬರೆಯಬೇಕಾಗಿದ್ದ ಡಿಗ್ರಿ ಪರೀಕ್ಷೆಯ ಬಗ್ಗೆಯಾಗಲಿ ನಾನು ಯೋಚಿಸುತ್ತಿದ್ದಿಲ್ಲ. ಸಾಧು ಹೇಳಿದ ವಿಷಯಗಳು ಮನದಲ್ಲಿ ಸುತ್ತುಹಾಕುತ್ತಿದ್ದವು. ಗತಕಾಲದ ಬಗ್ಗೆ ಯೋಚಿಸದೇ ಇರಲು ನನಗೆ ಸಾಧ್ಯವೇ ಇರಲಿಲ್ಲ.
ಮೌನ ಮುರಿದ ಸಾಧು, ಇದ್ದಕ್ಕಿದ್ದಂತೆ ನನ್ನತ್ತ ತಿರುಗಿ ಮತ್ತೆ ಮುಗುಳ್ನಕ್ಕವ, ನಿನ್ನನ್ನು ನೋಡಿದರೆ, ನನ್ನ ಗತಕಾಲ ನೆನಪಾಗುತ್ತದೆ ಎಂದುಬಿಟ್ಟ.
ನನಗೆ ಅಚ್ಚರಿಯಾಯಿತು.
ಆತ ಮತ್ತೆ ರೈಲು ಹಳಿಗಳನ್ನೇ ದಿಟ್ಟಿಸುತ್ತ ಮಾತು ಮುಂದುವರಿಸಿದ. ’ನಿನ್ನ ವಯಸ್ಸಿನಲ್ಲಿದ್ದಾಗ ನನ್ನಲ್ಲೂ ಗೊಂದಲಗಳಿದ್ದವು. ಯಾರಿಗೂ ಹೇಳಿಕೊಳ್ಳಲಾಗದಂಥ ಭಾವನೆಗಳಿದ್ದವು. ಅವು ನನ್ನನ್ನು ಹಣ್ಣಾಗಿಸುತ್ತಿದ್ದವು. ಓರಗೆಯವರ ಜೊತೆಗೆ ಬೆರೆಯದಂತೆ ಮಾಡಿದ್ದವು. ನನ್ನ ಸುತ್ತಲೂ ಓಡುತ್ತಿದ್ದ ಸಮಾಜಕ್ಕೆ ನಾನು ಹೊಂದಿಕೊಳ್ಳುತ್ತಿದ್ದಿಲ್ಲ. ಅವು ನನ್ನನ್ನು ಹೆದರಿಸುತ್ತಿದ್ದವು. ನಾನು ಮತ್ತೆ ಮತ್ತೆ ನನ್ನ ಒಂಟಿತನದಲ್ಲಿ ಮುಳುಗಿಹೋಗುತ್ತಿದ್ದೆ. ಅಸಹಾಯಕನಾಗುತ್ತಿದ್ದೆ. ಎಲ್ಲಿಯವರೆಗೆ ಎಂದರೆ, ಆತ್ಮಹತ್ಯೆ ಮಾಡಿಕೊಳ್ಳುವಷ್ಟು’-
ಒಂದರೆಕ್ಷಣ ಮಾತು ನಿಲ್ಲಿಸಿದ ಆತ ಮತ್ತೆ ಮುಂದುವರಿಸಿದ.
’ಯಾವುದೇ ಆತ್ಮಹತ್ಯೆಯೂ ಮೂಲ ಸಮಸ್ಯೆಯನ್ನು ನಿವಾರಿಸುವುದಿಲ್ಲ. ಒಂದು ಹಂತದಲ್ಲಿ ನನ್ನ ಬಗ್ಗೆ ನನಗೇ ಅಸಹ್ಯ ಶುರುವಾಯ್ತು. ಹಳೆಯದನ್ನು ಕಳಚಿಹಾಕುವ ತುಡಿತ ಅದು. ಗತಕಾಲ ಸ್ಮರಿಸುತ್ತ ಕೂತಿದ್ದು ಸಾಕು, ಇದೆಲ್ಲ ವ್ಯರ್ಥ. ಬೇರೆ ದಾರಿ ಹಿಡಿಯಬೇಕು. ಹಳೆಯ ಬುನಾದಿಯ ಮೇಲೆ ಹೊಸದನ್ನು ಕಟ್ಟಬೇಕು ಎಂಬ ಹುಮ್ಮಸ್ಸು ಉಕ್ಕಿತು. ಮೊದಲಿನಿಂದಲೂ ಒಂಟಿತನದ ವಿಚಿತ್ರ ಆಕರ್ಷಣೆ. ಈ ಬದುಕಿನ ಜಂಜಡ ಬಿಟ್ಟು ಎಲ್ಲಿಯಾದರೂ ದೂರ ಹೋಗಿ ಇರಬೇಕೆಂಬ ತುಡಿತ ಇತ್ತಲ್ಲ. ಹಾಗೇ ಮಾಡಿದರಾಯ್ತು ಅಂತ ಮನೆ ಬಿಟ್ಟು ಹೋಗಿಬಿಟ್ಟೆ. ಹತ್ತು ವರ್ಷಗಳ ಕಾಲ ಊರೂರು ಅಲೆದೆ. ಹಿಮಾಲಯದವರೆಗೂ ಹೋದೆ. ಬದುಕಿನ ಹಲವಾರು ಮಗ್ಗುಲಗಳನ್ನು ನೋಡಿದೆ. ಕಂಡಿದ್ದನ್ನೆಲ್ಲ ಒರೆಗೆ ಹಚ್ಚುತ್ತ ಹೊಸದನ್ನು ಕಂಡುಕೊಳ್ಳುತ್ತ ಅಲೆದಾಡಿದೆ. ಇಷ್ಟೆಲ್ಲ ಅಲೆದಾಟದ ನಂತರ ಹುಡುಕುತ್ತಿದ್ದ ದಾರಿ ಸಿಕ್ಕಿದೆ ಅಂತ ಅನಿಸಿತು. ನನ್ನ ಗೊಂದಲಗಳು ನಿವಾರಣೆಯಾದವು ಅಂತ ಅನಿಸಿತು. ಸತ್ಯ ಒಬ್ಬೊಬ್ಬರಿಗೆ ಒಂದೊಂದು ಥರ ಕಾಣುತ್ತದೆ. ಅದನ್ನು ಅವರವರೇ ಕಂಡುಕೊಳ್ಳಬೇಕು. ಈಗ ಊರಿಗೆ ವಾಪಸ್‌ ಹೊರಟಿದ್ದೇನೆ. ನಿನ್ನನ್ನು ನೋಡಿದಾಗ ನನಗೆ ನೆನಪಾಗಿದ್ದು, ಹಿಂದಿನ ನಾನು. ಅದಕ್ಕೇ ಇದನ್ನೆಲ್ಲ ಹೇಳಿದೆ. ಹಿಂದೆ ನೋಡುತ್ತ ಕೂಡಬೇಡ. ಮುಂದೆ ನೋಡುವುದನ್ನು ಬೆಳೆಸಿಕೋ. ದಾರಿ ಅಪರಿಚಿತ ಅನಿಸಬಹುದು. ಗೊಂದಲ ಕಾಡಬಹುದು. ಆದರೆ, ಗೊಂದಲದ ಮಧ್ಯೆಯೇ ಹೋಗುತ್ತಿದ್ದರೆ ದಾರಿ ತಿಳಿಯಾಗುತ್ತದೆ. ಅಷ್ಟೇ’-
ಆತ ಮಾತು ನಿಲ್ಲಿಸಿದ.
ನಾನು ಸುಮ್ಮನೇ ಕೂತಿದ್ದೆ.
ಸೊಲ್ಲಾಪುರದ ಮೀಟರ್‌ಗೇಜ್‌ ವಿಭಾಗ ನಿರ್ಜನವಾಗಿತ್ತು. ನನ್ನ ನಿದ್ದೆ ಹಾರಿಹೋಗಿತ್ತು. ಏನು ಹೇಳಬೇಕೆಂಬುದೂ ತೋಚಲಿಲ್ಲ. ಸ್ವಲ್ಪ ಹೊತ್ತು ಇಬ್ಬರೂ ಸುಮ್ಮನೇ ಕೂತಿದ್ದೆವು.
ಆತ ನಿಧಾನವಾಗಿ ತೂಕಡಿಸತೊಡಗಿದ. ನನಗೆ ಮಾತ್ರ ನಿದ್ದೆ ಬರಲಿಲ್ಲ.
ರಾತ್ರಿ ಎರಡು ಗಂಟೆಯ ನಂತರ ಜನ ಒಬ್ಬೊಬ್ಬರಾಗಿ ಬರತೊಡಗಿದರು. ಕನ್ನಡ ಭಾಷೆ ಕಿವಿಗೆ ಬೀಳತೊಡಗಿತು. ಸಾಧು ಮಹಾಶಯ ಇನ್ನೂ ನಿದ್ದೆಯಲ್ಲಿದ್ದ. ನಮ್ಮ ಸುತ್ತಮುತ್ತಲೂ ಜನ ತುಂಬಿಕೊಂಡರು. ಪ್ರಯಾಣದ ಕೊನೇ ಹಂತದ ಗಡಿಬಿಡಿಯ ಸದ್ದು ತುಂಬಿಕೊಂಡಿತು.
ಮೂರೂ ಮುಕ್ಕಾಲಿನ ಹೊತ್ತು ರೈಲು ಬಂತು. ಆ ಸದ್ದಿಗೆ ಕಣ್ಬಿಟ್ಟ ಸಾಧು, ಮುಖ ಉಜ್ಜಿಕೊಂಡು ಏನೇನೋ ಮಣಮಣ ಮಂತ್ರ ಹೇಳಿಕೊಂಡು ಮುಖ ಒರೆಸಿಕೊಂಡ. ರೈಲು ನಿಲ್ಲುತ್ತಲೇ ಪ್ರಯಾಣಿಕರು ನುಗ್ಗಿದರು. ಮತ್ತೆ ಸಿಗೋಣ ಎನ್ನುತ್ತ ಆ ಸಾಧು ಯಾವುದೋ ಒಂದು ಡಬ್ಬ ಏರಿ ಮರೆಯಾದ.
ನಾನೂ ರೈಲೇರಿದೆ. ಕರ್ನಾಟಕದ ಗಡಿ ಹತ್ತಿರ ಬರುವವರೆಗೆ ಸಣ್ಣಸಣ್ಣ ನಿಲ್ದಾಣಗಳಲ್ಲಿ ರೈಲು ನಿಲ್ಲುವುದರಿಂದ, ಸೂಟ್‌ಕೇಸ್‌ಗೆ ಸರಪಳಿ ಸೇರಿಸಿ ಭದ್ರವಾಗಿ ಕೀಲಿ ಹಾಕಿದೆ. ಕಿಟಕಿ ಹತ್ತಿರ ಕೂತು ಕಣ್ಮುಚ್ಚಿದೆ. ಮನಸ್ಸಿನಲ್ಲಿ ಸಾಧು ಹೇಳಿದ್ದ ಮಾತುಗಳದೇ ರಿಂಗಣ. ಆ ಸಾಧು ಮತ್ತೆ ಕಾಣಿಸಿಯಾನೇ ಎಂಬ ಮೌನ ಹುಡುಕಾಟ.
ಇದೆಲ್ಲ ನಡೆದುಹೋಗಿ ತುಂಬ ವರ್ಷಗಳಾಗಿವೆ. ಭೂತಕಾಲ ಮರೆಯುವುದು ನನಗೆ ಈಗಲೂ ಕಷ್ಟಕರ. ಆದರೆ, ಗತಕಾಲ ತೀವ್ರವಾಗಿ ಕಾಡಿದಾಗೆಲ್ಲ, ಸೊಲ್ಲಾಪುರದಲ್ಲಿ ಭೇಟಿಯಾದ ಆ ಸಾಧುವಿನ ಮಾತುಗಳು ನೆನಪಾಗುತ್ತವೆ. ಎಷ್ಟೇ ಕಷ್ಟದ್ದಿರಲಿ, ಚೆಂದದ್ದಿರಲಿ, ಗತಕಾಲದ ಸ್ಮರಣೆಯನ್ನು ಹಿಂದಕ್ಕಿಟ್ಟೇ ಮುಂದೆ ಹೋಗಬೇಕು. ಅದೇ ಜೀವನ.
ಇವತ್ತು ಹೋಳಿ ಹಬ್ಬ. ಭಾನುವಾರ ಬೇರೆ ಬಂದಿದ್ದರಿಂದ, ಮಿತ್ರರು ಹಾಗೂ ಅವರ ಕುಟುಂಬದವರ ಜೊತೆ ಹೋಳಿ ಆಚರಿಸಿದೆವು. ಅದೇಕೋ ಗೊತ್ತಿಲ್ಲ, ನನಗೆ ಆ ಸಡಗರದಲ್ಲಿ ಮನಃಪೂರ್ವಕ ಪಾಲ್ಗೊಳ್ಳಲು ಆಗಲಿಲ್ಲ. ಗತಕಾಲದ ಕೆಲವು ಘಟನೆಗಳು ಕೊರೆಯುತ್ತಿದ್ದವು. ಅವನ್ನು ಮರೆಯಲು ದಿನಾ ಯತ್ನಿಸುತ್ತ, ಸೋಲುತ್ತ, ಹತಾಶನಾಗುತ್ತ ಗೊಂದಲಗೊಂಡಿದ್ದೆ. ಹೀಗಾಗಿ ಸಂತೆಯಲ್ಲಿ ಒಂಟಿಯಾದಂತೆ, ಒಬ್ಬನೇ ಆಗಿಬಿಟ್ಟಿದ್ದೆ. ಸೊಲ್ಲಾಪುರದಲ್ಲಿ ಭೇಟಿಯಾದ ಸಾಧು ಮತ್ತೆ ಮತ್ತೆ ನೆನಪಾಗುತ್ತಿದ್ದ.
ನಿಜ. ಸಂತೆಯಲ್ಲಿ ಒಂಟಿಯಾಗಬಾರದು. ಆದರೂ, ಮನಸ್ಸಿನ ವಿಚಿತ್ರ ಗೀಳು ಅಷ್ಟು ಸುಲಭವಾಗಿ ಮರೆಯಾಗುವುದಿಲ್ಲ. ಆಳಕ್ಕಿಳಿದ ನೆನಪುಗಳನ್ನು ಬದಿಗೊತ್ತಿ ಮುಂದಕ್ಕೆ ಹೆಜ್ಜೆ ಇಡುವುದು ಯಾವಾಗಲೂ ಕಷ್ಟಕರ. ಆದರೆ, ಬೇರೆ ದಾರಿಯೇ ಇಲ್ಲ. ಮುಂದೆ ಹೋಗಬೇಕೆಂದರೆ, ನೆನಪುಗಳನ್ನು ಹಿಂದೆ ಬಿಡಲೇಬೇಕು. ಅವಡುಗಚ್ಚಿ ಮುಂದಡಿ ಇಡಬೇಕು.
ಹೋಳಿಯ ಆ ಬಣ್ಣಗಳು, ಕಲರವ ಮನದ ಕಾರ್ಮೋಡ ಸರಿಸಲಿ, ರಂಗು ತುಂಬಲಿ ಅಂತ ಆಶಿಸುತ್ತ, ತಡರಾತ್ರಿ ಕೂತು ಇದನ್ನು ಬರೆಯುತ್ತಿದ್ದೇನೆ.
ಕೈಯಲ್ಲಿನ್ನೂ ಹೋಳಿಯ ಬಣ್ಣ ಹಾಗೇ ಇದೆ.
- ಚಾಮರಾಜ ಸವಡಿ

ಬದುಕೆಂಬ ಅಚ್ಚರಿಗಳ ಹುತ್ತ

12 Apr 2010

5 ಪ್ರತಿಕ್ರಿಯೆ
ಇದ್ಯಾವತ್ತೂ ಬದಲಾಗಲ್ಲ ಅಂತ ತೀವ್ರವಾಗಿ ಅನಿಸತೊಡಗಿದಾಗಲೇ ನಿಜವಾದ ಬದಲಾವಣೆ ಶುರುವಾಗತೊಡಗುತ್ತದೆ.

ಇದು ನನ್ನ ಹಳೆಯ ಅನುಭವ.  ಎಲ್ಲ ನಿಂತಂತೆ, ಏನೂ ಬದಲಾಗುತ್ತಿಲ್ಲ ಎಂದು ಅನಿಸತೊಡಗಿದಾಗ, ಎಲ್ಲೋ ಬದಲಾವಣೆ ಮಿಸುಕತೊಡಗಿರುತ್ತದೆ. ತೀವ್ರ ಕತ್ತಲಿನ ನಡುವೆ ಬೆಳಕು ಮೊಳಕೆಯೊಡೆದಂತೆ, ಬಿಕ್ಕುವಿಕೆ ಮಧ್ಯೆ ನೆಮ್ಮದಿ ಹುಟ್ಟಿದಂತೆ, ಬಿರುಬಿಸಿಲಿನ ಮಧ್ಯೆ ಕಾರ್ಮೋಡವೊಂದು ಕಣ್ತೆರೆದಂತೆ ಭರವಸೆ ಕಾಣಲು ಶುರುವಾಗುತ್ತದೆ.

ಇವತ್ತು ತುಂಬ ಸೆಕೆಯಿತ್ತು. ಧಗೆ ಎಷ್ಟು ತೀವ್ರವಾಗಿತ್ತೆಂದರೆ, ಮಳೆ ಬರಬಹುದು ಎಂಬ ಅನಿಸಿಕೆ ಬಲಗೊಳ್ಳುವಷ್ಟು. ಯಂತ್ರದಂತೆ ಹವಾಮಾನ ಕೂಡ ಖಚಿತ ಮಾನದಂಡಗಳನ್ನು ಹೊಂದಿರಬಹುದು ಅನಿಸುತ್ತದೆ. ಸಂಜೆ ಹೊತ್ತಿಗೆ ಒಂದೆರಡು ವರಸೆ ಮಳೆ ಬಂದೇಬಿಡ್ತು. ಸೆಕೆಯನ್ನು ಒಂದಿಷ್ಟು ಕಡಿಮೆ ಮಾಡಿತು.

ಅಂದುಕೊಂಡಿದ್ದಕ್ಕಿಂತ ಹೆಚ್ಚಾಗಿಯೇ ಕರೆಂಟ್‌ ಕಣ್ಣಾಮುಚ್ಚಾಲೆಯಾಡುತ್ತಿದ್ದ ಈ ದಿನಗಳಲ್ಲಿ, ವಿದ್ಯುತ್‌ ಕೈಕೊಟ್ಟಾಗ ಮೊದಮೊದಲು ತುಂಬ ಅಸಮಾಧಾನವಾಗುತ್ತಿತ್ತು. ಕ್ರಮೇಣ, ಇದೇ ಸಮಯವನ್ನು ಓದಲು ಬಳಸಲು ಶುರು ಮಾಡಿದೆ. ಕರೆಂಟ್‌ ಇರುವವರೆಗೆ ಕಂಪ್ಯೂಟರ್‌  ಮೇಲೆ ಕೆಲಸ. ಕರೆಂಟ್‌ ಹೋದಕೂಡಲೇ ಓದಲು ಶುರು. ಎಷ್ಟೋ ಸಾರಿ, ಓದಿನ ಗಮ್ಮತ್ತಿನ ನಡುವೆ, ಕರೆಂಟ್‌ ಬಂದರೂ ವಿಶೇಷ ಅನಿಸುತ್ತಿರಲಿಲ್ಲ. ಹೀಗಾಗಿ, ಕರೆಂಟ್‌ ಹೋದಷ್ಟೂ ಓದಲು ಹೆಚ್ಚು ಸಮಯ ಸಿಗುವಂತಾಗಿದೆ. 

ರಾತ್ರಿಯ ನಿಶ್ಯಬ್ದದಲ್ಲಿ ಹೊಸ ಕನಸುಗಳು ಮೊಳಕೆಯೊಡೆಯುತ್ತವೆ. ಓದಿನ ಮಧ್ಯೆ, ಹೊಸ ಬೆಳಕೊಂದು ಮಿಂಚುತ್ತದೆ. ನಿರಾಶೆಯ ಮಧ್ಯೆ ಹೊಸ ಭರವಸೆ. ಬಹುಶಃ ಏನೂ ಬದಲಾಗಲಿಕ್ಕಿಲ್ಲ ಎಂಬ ಅನಿಸಿಕೆಯ ತೀವ್ರತೆಯ ಮಧ್ಯೆಯೇ ಎಂಥದೋ ಬದಲಾವಣೆಯ ಸುಳಿವು. ಹೊಸ ಓದಿನ ಖುಷಿಯ ಮಧ್ಯೆ ಓದಿದ ಪುಸ್ತಕಗಳ ಭಾವಪ್ರವಾಹ. ತಂತ್ರಜ್ಞಾನದ ಸೊಗಸಿನ ನಡುವೆ ಬಾಲ್ಯದಲ್ಲಿ ಆಡಿದ ಮಣ್ಣಿನ ಆಟಿಕೆಗಳ ನೆನಪು.

ಬದುಕು ಹೀಗೇ ಸಾಗುತ್ತಿದೆ. ಪ್ರತಿಯೊಂದು ಬದಲಾವಣೆಯೂ, ಬೆಳವಣಿಗೆಯೂ ಹಳೆಯ ಬೇರುಗಳೊಂದಿಗೆ ನಂಟು ಬೆಸೆಯುತ್ತದೆ. ಹಳೆಯದರೊಂದಿಗೆ ಹೋಲಿಸಿ ನೋಡುತ್ತ ಹೊಸತನವನ್ನು ರೂಢಿಸಿಕೊಳ್ಳುತ್ತದೆ. ಎರಡರ ನಡುವೆ ಸಮನ್ವಯ ಆಯಿತೆನ್ನುವದರೊಳಗೆ ಮತ್ಯಾವುದೋ ಹೊಸ ಬೆಳವಣಿಗೆ. ಬದಲಾವಣೆ. 

ಎಫ್‌.ಎಂ. ಉದ್ಘೋಷಕರ ರಭಸದ ಮಾತುಗಳನ್ನು ಕೇಳುವಾಗ ಕೀರ್ತನಕಾರರ ಮಾತಿನ ಓಘದ ನೆನಪು. ಫ್ರಿಜ್‌ನ ತಣ್ಣೀರು ಸವಿಯುವಾಗ, ಮಡಕೆ ನೀರಿನ ತಂಪಿನ ತೀವ್ರತೆ. ಎಲ್ಲಿಯದೋ ನೆನಪುಗಳಿಗೆ ಇನ್ನೆಲ್ಲಿಯದೋ ಭಾವನೆಗಳೊಂದಿಗೆ ತಳುಕು. 

ಯಾವುದೋ ನೆನಪಿಗೆ ಇನ್ಯಾವುದೋ ತಂತು ಮೀಟುವುದು ಬದುಕಿನ ಚೋದ್ಯಗಳಲ್ಲೊಂದು. ಹುಡುಕುತ್ತ ಹೋದರೆ, ಪ್ರತಿಯೊಂದಕ್ಕೂ ಇನ್ನೊಂದರ ನಂಟಿದೆ ಅನಿಸುತ್ತದೆ. ಯಾವುದೂ ಹೊಸತಲ್ಲ, ಎಲ್ಲವೂ ಒಮ್ಮೆ ಕಂಡುಂಡ ಸಂಗತಿಗಳ ಮುಂದುವರಿಕೆ ಎಂದು ಭಾಸವಾಗುತ್ತದೆ. ಅಲ್ಲೆಲ್ಲೋ ಆಗಸದೆತ್ತರದಲ್ಲಿರುವ ಹೊಸ ಮೊಳಕೆಗೆ ಭೂಮಿಯಾಳದ ಬೇರಿನೊಂದಿಗೆ ನಂಟಿರುವಂತೆ, ಪ್ರತಿಯೊಂದಕ್ಕೂ ಯಾವುದೋ ನಂಟು. ಇನ್ಯಾವುದೋ ಪ್ರೇರಣೆ.

ನಿಜ. ಬದುಕು ಅಚ್ಚರಿಗಳ ಮೊತ್ತ. ಸಾವಿರ ಸಾವಿರ ನೆನಪುಗಳ ಹುತ್ತ.

- ಚಾಮರಾಜ ಸವಡಿ

ಬಿಸಿಲೆಂಬ ನೆನಪ ಸಂಜೀವಿನಿ

10 Apr 2010

4 ಪ್ರತಿಕ್ರಿಯೆ
ಕಣ್ಣು ಕುಕ್ಕುವಂಥ ಬಿಸಿಲ ಪ್ರದೇಶದಲ್ಲಿ ಹುಟ್ಟಿ ಬೆಳೆದವನು ನಾನು. ಬಿಸಿಲು ನನಗೆ ಚೇತೋಹಾರಿ. ಎಷ್ಟೇ ಸೆಕೆ ಕಾಡಿದರೂ, ಮನಸ್ಸು ನನ್ನೂರನ್ನು ನೆನಪಿಸಿಕೊಳ್ಳುತ್ತಿರುತ್ತದೆ. ಸರಾಸರಿ ೪೨ ಡಿಗ್ರಿ ಸೆಲ್ಸಿಯಸ್‌ ಉಷ್ಣಾಂಶದಲ್ಲಿ ಇಪ್ಪತ್ತೈದಕ್ಕೂ ಹೆಚ್ಚು ಬೇಸಿಗೆ ಕಳೆದ ನನಗೆ ಇವತ್ತಿಗೂ ಬಿಸಿಲು ಆಪ್ಯಾಯಮಾನ. 

ಬಿಸಿಲಿನಲ್ಲಿ ಅಷ್ಟೊಂದು ಓಡಾಡಿದರೂ ಆರಾಮವಾಗಿದ್ದೀಯಲ್ಲ ಮಾರಾಯ ಎಂದು ಗೆಳೆಯರು ಅಚ್ಚರಿಪಡುತ್ತಾರೆ. ಅದೇ ಬಿಸಿಲೂರಿನಿಂದ ಬಂದವಳಾಗಿದ್ದರೂ, ನನ್ನ ಹೆಂಡತಿಗೆ ಬಿಸಿಲು ಎಂದರೆ ಅಲರ್ಜಿ. ಆದರೆ, ನನಗೆ ಮಾತ್ರ ಬಿಸಿಲು ಎಂದರೆ ನನ್ನೂರು. ನಾನು ಹುಟ್ಟಿ ಬೆಳೆದ ಪರಿಸರ. ನನ್ನ ಬಾಲ್ಯ. ನನ್ನ ಪ್ರಾಥಮಿಕ ಕನಸುಗಳು. ನನ್ನ ಶಾಶ್ವತ ಕನವರಿಕೆ.

ಸಾವಿರ ಸಾವಿರ ನೆನಪುಗಳು ಬಿಸಿಲಿನೊಂದಿಗೆ ಹೆಣೆದುಕೊಂಡಿವೆ. ಬರ, ಬಡತನ, ಬವಣೆ, ಭಯವಷ್ಟೇ ಅಲ್ಲ, ನನ್ನ ಬದುಕು ಕೂಡ ಬಿಸಿಲ ಪ್ರದೇಶದಲ್ಲಿಯೇ ಅರಳಿದೆ. ಉರಿಯುವ ಸೂರ್ಯನೊಂದಿಗೆ, ಕಡು ಸೆಕೆಯೊಂದಿಗೆ ಶುರುವಾಗುವ ಬೇಸಿಗೆಯ ದಿನ, ಅದೇ ಕಡು ಸೆಕೆಯೊಂದಿಗೆ ಸಂಜೆಯಾಗಿ ಬದಲಾಗುತ್ತಿತ್ತು. ಕರೆಂಟಿಲ್ಲದ ರಾತ್ರಿಯ ಕಗ್ಗತ್ತಲೆಯಲ್ಲಿ, ಬೆಳಕಿನುಂಡೆಯಂಥ ನಕ್ಷತ್ರಗಳ ಆಗಸ. ಮಣ್ಣಿನ ಮನೆಯ ಮಾಳಿಗೆಯ ಮೇಲೆ ಹಳೆಯ ಜಮಖಾನಾ ಹಾಸಿಕೊಂಡು ಆಕಾಶಕ್ಕೆ ಮುಖವೊಡ್ಡಿ ಕಂಡ ಸಾವಿರ ಸಾವಿರ ಕನಸುಗಳು ಇವತ್ತಿಗೂ ನನ್ನ ಜೀವನದುಸಿರು. ಆ ಬಿಸಿಲ ಹೇಗೆ ಮರೆಯಲಿ?

ನನ್ನ ಮೊದಲ ತೀವ್ರ ನಿರಾಶೆ, ನೋವುಗಳು ಬಿಸಿಲಿನೊಂದಿಗೆ ಹೆಣೆದುಕೊಂಡಿವೆ. ಹತ್ತನೆಯ ತರಗತಿಯ ಪರೀಕ್ಷೆ ಬರೆಯಲು ಮೊದಲ ಬಾರಿ ಹದಿನೈದು ದಿನಕ್ಕಿಂತ ಹೆಚ್ಚು ಕಾಲ ತಂಗಿದ್ದ ಪಟ್ಟಣ ಕೊಪ್ಪಳ ನನ್ನಲ್ಲಿ ಉಕ್ಕಿಸಿದ್ದ ದಿಗ್ಭ್ರಮೆ, ಕನಸು, ಕನವರಿಕೆಯನ್ನು ನಾನು ಪದೆ ಪದೆ ಅನುಭವಿಸಿದ್ದು ನನ್ನೂರಿನ ಬಿಸಿಲ ದಿನದ ರಾತ್ರಿಗಳಲ್ಲಿ. ಪಿಯುಸಿ ಓದಲು ದೂರದ ನರೇಗಲ್ಲಿಗೆ ಹೋಗಬೇಕೆಂಬ ಕಳವಳವನ್ನೂ ಅಲ್ಲಿಯೇ ಅನುಭವಿಸಿದ್ದು. ಹುಟ್ಟಿದಾಗಿನಿಂದ ಊರು ಬಿಟ್ಟು ಹೋಗಿರದ ನನಗೆ, ನರೇಗಲ್ಲಿಗೆ ಹೋಗುವಾಗ, ಹೋದ ನಂತರ ಆದ ತಳಮಳ ಅಷ್ಟಿಷ್ಟಲ್ಲ. 

ಇಂಥ ಹಲವಾರು ನೆನಪುಗಳು ಬಿಸಿಲಿನೊಂದಿಗೆ ಹೆಣೆದುಕೊಂಡಿವೆ. ನಮ್ಮ ಹೊಲದಲ್ಲಿದ್ದ ಎರಡು ಜಾತಿಯ ಮಾವಿನ ಮರಗಳು, ಅವುಗಳ ಪರಿಮಳ, ಹಲ್ಲು ಚುಳಿಯುವಂತೆ ಮಾಡುತ್ತಿದ್ದ ಹುಳಿ ರುಚಿ, ಮಾವಿನ ಕಾಯಿಗಳನ್ನು ಹಣ್ಣಾಗಿಸಲು ಹಾಕಿದ್ದ ಬತ್ತದ ಹುಲ್ಲಿನ ವಿಚಿತ್ರ ಘಮ, ಕುಡಿಯುವ ನೀರು ತರಲು ಊರಾಚೆಯ ಕೆರೆಗೆ ಹೋಗುತ್ತಿದ್ದುದು, ಬತ್ತಿದ ದೊಡ್ಡ ಹಳ್ಳದ ಉಸುಕಿನ ಮಧ್ಯೆ ಕೂತು ಭವಿಷ್ಯದ ಕನಸುಗಳನ್ನು ಮಾತಾಗಿಸಿದ್ದು, ಕಾಡುತ್ತಿದ್ದ ಅಪಾರ ಹಸಿವು, ಏನು ಸಿಕ್ಕರೂ ಓದುವ ತೀವ್ರ ತುಡಿತ, ಕಾಣದ ಜಗತ್ತಿನೆಡೆಗಿನ ಬೆರಗು, ಪಟ್ಟಣಗಳು ಹುಟ್ಟಿಸುತ್ತಿದ್ದ ಕೀಳರಿಮೆ, ಅರಳುತ್ತಿದ್ದ ಪ್ರಾಯ, ಹೇಳತೀರದ ದುಗುಡ- ಇಂಥ ನೂರಾರು ಭಾವನೆಗಳಿಗೆ ಬಿಸಿಲು ಸಾಕ್ಷಿಯಾಗಿದೆ. 

ಇವತ್ತಿಗೂ ಶಿವರಾತ್ರಿ ಕಳೆದ ನಂತರ, ಮನಸ್ಸಿಗೆ ಸಣ್ಣಗೆ ದುಗುಡ ಕವಿಯಲಾರಂಭಿಸುತ್ತದೆ. ಬಿಸಿಲು ಬಲಿಯುತ್ತಿದ್ದಂತೆ ಊರಿನ ಹಂಬಲ, ಆಗಿನ ದಿನಗಳ ನೆನಪುಗಳು ಉಕ್ಕತೊಡಗುತ್ತವೆ. ಪತ್ರಿಕೆ ಓದುವಾಗ, ಬಿಸಿಲಿನ ಬಗ್ಗೆ ಬಂದ ವರದಿಗಳು ಊರನ್ನು ನೆನಪಿಸುತ್ತವೆ. ಅಲ್ಲಿ, ನನ್ನಂಥ ಇನ್ಯಾರದೋ ಪಾಲಿಗೆ ಈ ಬಿರು ಬಿಸಿಲು ಸಂಜೀವಿನಿಯಾಗುತ್ತಿದೆಯೇನೋ ಎಂಬ ಕುತೂಹಲ. ರಾತ್ರಿಯಾಗುತ್ತಿದ್ದಂತೆ, ಮಣ್ಣಿನ ಮನೆಗಳ ಮಾಳಿಗೆಗಳ ಮೇಲೆ ವಲಸೆ ಹೋಗುತ್ತಿದ್ದ ಜನ, ಅವರ ಕಷ್ಟಸುಖದ ಮಾತುಕತೆ, ಕಾಣುತ್ತಿದ್ದ ಕನಸು, ಮೇಲೆ ಕಪ್ಪಡರಿರುವ ಆಗಸದ ಚಾದರದೊಳಗಿಂದ ಕಿಂಡಿ ಕೊರೆದು ಇಣುಕಿ ನೋಡುವ ನಕ್ಷತ್ರ ಕಂಗಳು, ಅಲುಗದೇ ನಿಂತ ಮರದ ಎಲೆಗಳು, ಅಪರಾತ್ರಿ ಎಚ್ಚರವಾದಾಗ ತಾಕುತ್ತಿದ್ದ ನೀರವತೆ ಮತ್ತೆ ಮತ್ತೆ ನನಪಾಗುತ್ತವೆ. 

ಎಷ್ಟೋ ಸಾರಿ ರಾತ್ರಿ ಯೋಚಿಸುತ್ತ ಅಡ್ಡಾಗಿದ್ದವನಿಗೆ ಜೆಟ್‌ ವಿಮಾನಗಳ ಮಿಣುಕು ದೀಪಗಳು ಅಪಾರ ಅಚ್ಚರಿ ಹುಟ್ಟಿಸಿದ್ದಿದೆ. ನನ್ನೂರಾಚೆಯ ಜಗತ್ತು ನನಗೆ ತಿಳಿದಿರುವುದಕ್ಕಿಂತ ವಿಶಾಲವಾಗಿದೆ ಎಂಬ ಅಸ್ಪಷ್ಟ ಭಾವನೆಯನ್ನು ಬೆಳೆಸಿದ್ದಿದೆ. ಆ ಜಗತ್ತಿನೆಡೆಗೆ ನಾನು ಹೋಗಲೇಬೇಕಾಗುತ್ತದೆ ಎಂಬ ಅಸ್ಪಷ್ಟ ಅನಿಸಿಕೆ ದಿಗಿಲು ಮೂಡಿಸಿದ್ದಿದೆ. ಅಲ್ಲಿಯ ಜನ ಹೇಗೋ, ಅವರ ಬದುಕಿನ ರೀತಿ-ನೀತಿಗಳೇನೋ, ನಾನು ಅವನ್ನೆಲ್ಲ ಹೇಗೆ ಕಲಿತೇನು ಎಂಬ ಕಳವಳ ಉಕ್ಕಿಸಿದ್ದಿದೆ. ರಾತ್ರಿಯ ಕಡು ನೀರವತೆಯಲ್ಲಿ ಒಬ್ಬನೇ ಎದ್ದು ಕೂತು, ಜೋರು ನಿದ್ದೆಯಲ್ಲಿರುವವರನ್ನು ಕಂಡು ಅಚ್ಚರಿಪಟ್ಟಿದ್ದೇನೆ. ಸುತ್ತಲೂ ಹಬ್ಬಿದ ಕತ್ತಲನ್ನು ಮೂದಲಿಸುವಂತೆ ಬೆಳಗುವ ನಕ್ಷತ್ರಗಳನ್ನು ಕಂಡು ಮೋಹಗೊಂಡಿದ್ದೇನೆ. ಸಾವಿರಾರು ಸುನೀತ ಭಾವನೆಗಳು ಆ ಕತ್ತಲಲ್ಲಿ ಮೂಡಿವೆ. ನಿರಾಶೆಗಳಿಗೆ ಸಮಾಧಾನ ದೊರೆತಿದೆ. 

ರಾತ್ರಿ ತುಂಬ ಹೊತ್ತು ಒಬ್ಬನೇ ಕೂತು ಓದುವ, ಬರೆಯುವ ಈ ದಿನಗಳಲ್ಲಿ ಬಿಸಿಲು ಮತ್ತೆ ಮತ್ತೆ ಕಾಡುತ್ತದೆ. ನನ್ನೂರು ಅಳವಂಡಿ ಮತ್ತೆ ಮತ್ತೆ ನೆನಪಾಗುತ್ತದೆ. ಎಲ್ಲರೂ ಜರಿಯುವ, ಶಪಿಸುವ, ಭಯಪಡುವ ಈ ಬಿರುಬಿಸಿಲು ಅದ್ಹೇಗೆ ನನ್ನ ಪಾಲಿಗೆ ಚೇತೋಹಾರಿಯಾಗಿದೆ ಎಂದು ನೆನೆನೆನೆದು ಅಚ್ಚರಿಪಡುತ್ತೇನೆ. ಮೆತ್ತಗೇ ಗೇಟು ತೆರೆದು, ರಸ್ತೆ ಮಧ್ಯೆ ನಿಂತು, ಆಗಸ ದಿಟ್ಟಿಸಿದರೆ, ನಗರದ ರಾತ್ರಿ ಬೆಳಕಿನ ರಭಸಕ್ಕೆ ನಕ್ಷತ್ರಗಳು ಮಂಕಾಗಿರುವುದು ರಾಚುತ್ತದೆ. 

ಅದನ್ನು ನೋಡುತ್ತಿದ್ದಂತೆ, ನನ್ನ ಮನಸ್ಸೂ ಏಕೋ ಮಂಕಾಗುತ್ತದೆ. 

- ಚಾಮರಾಜ ಸವಡಿ

ಕಥೆಯು ಮುಗಿದೇ ಹೋದರೂ, ಮುಗಿಯದಿರಲಿ ಬಂಧನ...

30 Dec 2009

4 ಪ್ರತಿಕ್ರಿಯೆ

ಪರೀಕ್ಷೆ ಮುಗಿಯಲು ಇನ್ನು ಅರ್ಧ ಗಂಟೆ ಮಾತ್ರ ಬಾಕಿ ಇತ್ತು. ಬರೆದ ಉತ್ತರಗಳನ್ನು ಒಮ್ಮೆ ಪರೀಕ್ಷಿಸಿ, ಉಳಿದಿದ್ದ ಕೊನೆಯ ಪ್ರಶ್ನೆಗೆ ಬೇಗ ಬೇಗ ಉತ್ತರಿಸಲು ಶುರು ಮಾಡಿದೆ. ಹದಿನೈದು ನಿಮಿಷಗಳಲ್ಲಿ ಆ ಪ್ರಶ್ನೆಯ ಉತ್ತರವೂ ಮುಗಿಯಿತು. ಎಲ್ಲವೂ ಸರಿಯಾಗಿದೆ ಎಂದು ನೋಡಿಕೊಂಡು, ಇನ್ನೂ ಹತ್ತು ನಿಮಿಷಗಳು ಬಾಕಿ ಇರುವಂತೆ, ಉತ್ತರ ಪತ್ರಿಕೆಯನ್ನು ಕೊಠಡಿಯ ಮೇಲ್ವಿಚಾರಕನಿಗೆ ಕೊಟ್ಟು ದಡಬಡಾಯಿಸಿ ಹೊರಗೋಡಿದೆ. ‘ಏ ತಮ್ಮಾ, ಇನ್ನೂ ಹತ್ತು ನಿಮಿಷ ಐತಿ. ಸರಿಯಾಗಿ ಚೆಕ್‌ ಮಾಡು, ಲಾಸ್ಟ್‌ ಪೇಪರ್‌ ಇದು’ ಅಂತ ಆತ ಕೂಗುತ್ತಿದ್ದರೂ, ಹಿಂತಿರುಗಿ ಕೂಡ ನೋಡದೇ ರೂಮಿನ ಕಡೆ ಓಡುನಡಿಗೆಯಲ್ಲಿ ಹೊರಟೆ.

ಸಿದ್ಧವಾಗಿದ್ದ ಬ್ಯಾಗನ್ನು ಎತ್ತಿಕೊಂಡು, ರೂಮು ಪೂರ್ತಿಯಾಗಿ ಖಾಲಿಯಾಗಿರುವುದನ್ನು ಕಣ್ಣಂದಾಜಿನಲ್ಲೇ ಪರೀಕ್ಷಿಸಿ, ಬೀಗ ಹಾಕಿ ಮಾಲೀಕನಿಗೆ ಕೊಟ್ಟು, ರಜೆ ಮುಗಿದ ನಂತರ ಬರುವೆ ಎಂದು ಹೇಳಿದವನೇ ಒಂದು ಕಿಮೀ ದೂರವಿದ್ದ ಬಸ್‌ ಸ್ಟ್ಯಾಂಡ್‌ ಕಡೆ ಹೊರಟೆ. ಆಗ ಗಂಟೆ ಒಂದೂವರೆ.

ಪರೀಕ್ಷೆ ಮುಗಿಸಿಕೊಂಡು ಬಂದ ಮಿತ್ರ, ‘ಏನಂಥ ಅರ್ಜೆಂಟ್‌? ಇವತ್ತೊಂದಿನ ಇದ್ದು ನಾಳೆ ಹೋಗುವಿಯಂತೆ. ಊರಲ್ಲೇನು ಅಂಥ ಕೆಲಸ?’ ಎಂದು ಕೇಳುತ್ತಿದ್ದರೂ ಗಮನಿಸದೇ, ‘ಮಾರಾಯ, ನನ್ನ ಬಸ್‌ ಸ್ಟ್ಯಾಂಡ್‌ ಹತ್ರ ಬಿಡ್ತಿಯಾ?’ ಎಂದೆ. ಅವನ ಸೈಕಲ್‌ ಹಿಂದೆ ಕೂತು ಬಸ್‌ಸ್ಟ್ಯಾಂಡ್‌ ತಲುಪಿದಾಗ, ಗದಗ್‌ಗೆ ಹೊರಟಿದ್ದ ಬಸ್‌ನ ಬಾಗಿಲು ಹಾಕುತ್ತಿದ್ದ ಕಂಡಕ್ಟರ್‌. ಸೈಕಲ್‌ನಿಂದ ನೆಗೆದವನೇ, ಬಸ್‌ ಏರುತ್ತ, ಗೆಳೆಯನಿಗೆ ಕೈ ಬೀಸುತ್ತ, ಬೆವರೊರೆಸಿಕೊಳ್ಳುತ್ತ ಕೂತೆ.

ನರೇಗಲ್‌ನ ನನ್ನ ಪಿಯುಸಿ ಮೊದಲ ವರ್ಷದ ಪರೀಕ್ಷೆಯ ಕೊನೆಯ ಪೇಪರ್‌ ಮುಗಿಸಿ ನಾನಷ್ಟು ತುರ್ತಾಗಿ ಹೊರಟಿದ್ದು ಗದಗ್‌ಗೆ. ಬಸ್‌ಸ್ಟ್ಯಾಂಡ್‌ ಹತ್ತಿರದಲ್ಲೇ ಇರುವ ಕೃಷ್ಣಾ ಟಾಕೀಸನ್ನು ಮೂರು ಗಂಟೆಯೊಳಗೆ ತಲುಪುವುದು ನನ್ನ ಉದ್ದೇಶ. ಏಕೆಂದರೆ, ಮೂರು ಗಂಟೆಗೆ ಮ್ಯಾಟ್ನಿ ಷೋ ಶುರುವಾಗುತ್ತದೆ. ತಪ್ಪಿಸಿಕೊಂಡರೆ, ಒಂದನೇ ಷೋಗೇ ಹೋಗಬೇಕು. ಆಗ ಅಲ್ಲಿಂದ ಐವತ್ತು ಕಿಮೀ ದೂರವಿರುವ ಊರಿಗೆ ಹೋಗಲು ಬಸ್‌ ಸಿಗುವುದಿಲ್ಲ.

ಬಸ್‌ ತುಂಬ ನಿಧಾನವಾಗಿ ಹೋಗುತ್ತಿದೆ ಅನಿಸುತ್ತಿತ್ತು. ನರೇಗಲ್‌ನಿಂದ ಗದಗ್‌ ಕೇವಲ ೩೦ ಕಿಮೀ ದೂರದಲ್ಲಿದ್ದರೂ, ಕೆಟ್ಟ ರಸ್ತೆಯಿಂದಾಗಿ ಒಂದು ಗಂಟೆಯೊಳಗೆ ತಲುಪುವುದು ಸಾಧ್ಯವಿದ್ದಿಲ್ಲ. ಲೆಕ್ಕಾಚಾರದ ಪ್ರಕಾರ, ಬಸ್‌ ಎಲ್ಲಿಯೂ ಕೆಟ್ಟು ನಿಲ್ಲದಿದ್ದರೆ, ೨.೪೫ಕ್ಕೆ ಗದಗ್‌ ತಲುಪುತ್ತದೆ. ಕೃಷ್ಣಾ ಟಾಕೀಸ್‌ ತಲುಪಲು ಐದು ನಿಮಿಷಗಳು ಸಾಕು. ಟಿಕೆಟ್‌ ತಗೊಂಡು ಸೀಟಲ್ಲಿ ಕೂಡುವ ಹೊತ್ತಿಗೆ ಸರಿಯಾಗಿ ಸಿನಿಮಾ ಶುರುವಾಗುತ್ತದೆ ಎಂದು ಮನಸ್ಸು ಪದೆ ಪದೆ ಎಣಿಕೆ ಹಾಕುತ್ತಿತ್ತು.

ಅದೃಷ್ಟವಶಾತ್‌ ಬಸ್‌ ಕೆಟ್ಟು ನಿಲ್ಲಲಿಲ್ಲ. ಗದಗ್‌ ಹತ್ತಿರವಾಗುತ್ತಿದ್ದಂತೆ, ಬಾಗಿಲ ಹತ್ತಿರ ಬಂದು ನಿಂತಿದ್ದೆ. ಬಸ್‌ಸ್ಟ್ಯಾಂಡ್‌ ಪ್ರವೇಶಿಸುತ್ತಿದ್ದಂತೆ, ಬಾಗಿಲು ತೆರೆದು ಹೊರ ನೆಗೆದವ, ಮತ್ತದೇ ಓಡು ನಡಿಗೆಯಲ್ಲಿ ಕೃಷ್ಣಾ ಟಾಕೀಸ್‌ನತ್ತ ಹೊರಟೆ. ಆಗ ಗಂಟೆ ೨.೫೫.

ಟಿಕೆಟ್‌ ಕೌಂಟರ್‌ ಖಾಲಿಯಾಗಿತ್ತು. ಪಕ್ಕದಲ್ಲೇ ‘ಹೌಸ್‌ಫುಲ್‌’ ಬೋರ್ಡ್‌. ಅದನ್ನು ನೋಡುತ್ತಲೇ ಮನಸ್ಸು ಸೂಜಿ ಚುಚ್ಚಿದ ಬಲೂನಿನಂತಾಯ್ತು. ಅಭ್ಯಾಸ ಬಲದಿಂದ, ಆಚೀಚೆ ಕಳ್ಳನೋಟ ಹರಿಸಿದಾಗ, ಸೆಟಲ್‌ಮೆಂಟ್‌ ಪ್ರದೇಶದ ಯುವಕನೊಬ್ಬ ಸಮೀಪಿಸಿದ. ಪಿಸುದನಿಯಲ್ಲಿ, ‘ಎರಡು ಟಿಕೆಟ್ಟಿವೆ’ ಎಂದ. ಎಷ್ಟೆಂದು ಕೇಳಿದವ, ಹತ್ತು ಸೆಕೆಂಡ್‌ಗಳಲ್ಲಿ ಚೌಕಾಸಿ ಮುಗಿಸಿ, ಟಿಕೆಟ್‌ ಕೊಂಡು ಥೇಟರ್‌ ಪ್ರವೇಶಿಸಿದೆ. ನನ್ನ ನಂಬರ್‌ನ ಸೀಟ್‌ನಲ್ಲಿ ಕೂತು ಬೆವರೊರೆಸಿಕೊಳ್ಳುತ್ತಿದ್ದಂತೆ, ಲೈಟುಗಳು ಆರಿದವು.

ಹೃದಯಾಘಾತದಿಂದ ಮೃತರಾದ ಖ್ಯಾತ ನಟ ವಿಷ್ಣುವರ್ಧನ್‌ ಅವರ ‘ಬಂಧನ’ ಸಿನಿಮಾ ನಾನು ನೋಡಿದ್ದು ಹೀಗೆ.


*****

ಬೇಸಿಗೆ ರಜೆಯ ಎರಡು ತಿಂಗಳಿಡೀ ಬಂಧನ ಸಿನಿಮಾದ್ದೇ ಗುಂಗು. ನನಗೊಬ್ಬನಿಗಷ್ಟೇ ಅಲ್ಲ, ನನ್ನ ಓರಗೆಯ ಹುಡುಗರಿಗಷ್ಟೇ ಅಲ್ಲ, ಬಹುತೇಕ ಎಲ್ಲರಿಗೂ ಬಂಧನ ಸಿನಿಮಾ ಹುಚ್ಚು ಹಿಡಿಸಿತ್ತು. ರೇಡಿಯೋದಲ್ಲಿ ದಿನಕ್ಕೆ ಮೂರು ಹೊತ್ತು, ಸರಾಸರಿ ನಲ್ವತ್ತು ನಿಮಿಷ ಬರುತ್ತಿದ್ದ ರೇಡಿಯೋದ ಚಿತ್ರಗೀತೆಗಳಲ್ಲಿ ಆ ಸಿನಿಮಾದ ಎರಡು ಹಾಡುಗಳಂತೂ ಇದ್ದೇ ಇರುತ್ತಿದ್ದವು. ಹಾಡು ಕೇಳುತ್ತ, ಸಿನಿಮಾವನ್ನು ಮತ್ತೆ ಮತ್ತೆ ನೆನಪಿಸಿಕೊಳ್ಳುತ್ತ ನನ್ನ ಕಾಲೇಜಿನ ದಿನಗಳ ಮೊದಲ ದೀರ್ಘ ರಜೆಯನ್ನು ನಾನು ಹೀಗೆ ಕಳೆದಿದ್ದು ೧೯೮೫ರಲ್ಲಿ.

ಮುಂದೆ ಅದೇ ಸಿನಿಮಾ ೨೩ ಕಿಮೀ ದೂರದ ಕೊಪ್ಪಳಕ್ಕೆ ಬಂದಾಗ, ನನ್ನೂರು ಅಳವಂಡಿ ಹಾಗೂ ಸುತ್ತಲಿನ ಊರುಗಳ ಎಷ್ಟೋ ಜನ ಎತ್ತಿನ ಬಂಡಿ ಕಟ್ಟಿಕೊಂಡು ಹೋಗಿ ನೋಡಿ ಬಂದರು. ಆಗ ತಾನೆ ಕ್ಯಾಸೆಟ್‌ಗಳು ದೊಡ್ಡ ಪ್ರಮಾಣದಲ್ಲಿ ಬರಲಾರಂಭಿಸಿದ್ದವು. ಬಂಧನ ಸಿನಿಮಾದ ಕ್ಯಾಸೆಟ್‌ಗಳನ್ನು ಮಾರಿ ಮಾರಿಯೇ ಎಷ್ಟೋ ಜನ ಉದ್ಧಾರವಾಗಿ ಹೋದರು. ಸಿನಿಮಾವೊಂದು ಜನಮಾನಸವನ್ನು ಆವರಿಸಿಕೊಳ್ಳುತ್ತಿದ್ದ ಪರಿಯನ್ನು ನೆನಪಿಸಿಕೊಂಡರೆ ಈಗಲೂ ಅಚ್ಚರಿಯಾಗುತ್ತದೆ.

ಮುಂದೆ ವಿಷ್ಣುವರ್ಧನ್‌ ಅವರ ಎಷ್ಟೋ ಸಿನಿಮಾಗಳನ್ನು ನೋಡಿದೆ. ನಮ್ಮೂರಿನ ಟೆಂಟ್‌ ಟಾಕೀಸಿಗೆ ಬರುತ್ತಿದ್ದುವೇ ಹಳೆಯ ಸಿನಿಮಾಗಳು. ರಾಜ್‌ಕುಮಾರ್‌ ಹಾಗೂ ವಿಷ್ಣುವರ್ಧನ್‌ ಸಿನಿಮಾ ಬಂದರೆ ಮುಗೀತು, ಎರಡು-ಮೂರು ಬಾರಿ ನೋಡುವುದು ಗ್ಯಾರಂಟಿ. ಮನರಂಜನೆಗೆ ಬೇರೇನೂ ಇಲ್ಲದ ಸಣ್ಣ ಊರಿನಲ್ಲಿ ಈ ಸಿನಿಮಾ ಹಾಗೂ ಚಿತ್ರಗೀತೆಗಳೇ ನಮ್ಮ ಏಕೈಕ ಮನರಂಜನೆಯಾಗಿದ್ದವು.

ನನ್ನ ಯೌವನದ ಮೊದಲ ದಿನಗಳನ್ನು ಆಪ್ತ ನೆನಪಿನಿಂದ ಸಮೃದ್ಧವಾಗಿಸಿದ ಸಿನಿಮಾ ತಾರೆಯರ ಪೈಕಿ ವಿಷ್ಣುವರ್ಧನ್‌ ಹಲವಾರು ಕಾರಣಗಳಿಗಾಗಿ ಪ್ರಮುಖರು. ರಾಜಕುಮಾರ್‌ಗಿಂತ ಈ ವ್ಯಕ್ತಿ ಎಷ್ಟೋ ಭಿನ್ನ ಎಂದು ಯಾವಾಗಲೂ ಅನಿಸುತ್ತಿತ್ತು. ಸಿದ್ಧಮಾದರಿಯಲ್ಲದ ಚಿತ್ರಗಳಿಂದಾಗಿಯೂ ಅವರು ಇಷ್ಟವಾಗುತ್ತಿದ್ದರು. ಆಗ ತಾನೆ ಮೊಳಕೆಯೊಡೆಯುತ್ತಿದ್ದ ರಂಗಿನ ಕನಸುಗಳಿಗೆ ಈ ನಟ ಒದಗಿಸಿದ ವೇದಿಕೆ ಸಮೃದ್ಧವಾದದ್ದು. ಅವನ್ನು ಯಾವತ್ತೂ ಮರೆಯಲಾಗದು.


*****

ಎಂದಿನಂತೆ ರಾತ್ರಿ ತಡವಾಗಿ ಮಲಗಿದ್ದರಿಂದ ಬೆಳಿಗ್ಗೆ ಬೇಗ ಏಳದೇ ಮುಸುಕು ಹಾಕಿಕೊಂಡು ಮಲಗಿದ್ದವನನ್ನು ಎಬ್ಬಿಸಿದ್ದು ಮಿತ್ರ ಮಂಜುನಾಥ ಬಂಡಿ ಅವರ ಎಸ್ಸೆಮ್ಮೆಸ್‌. ವಿಷ್ಣುವರ್ಧನ್‌ ಇನ್ನಿಲ್ಲ ಎಂಬ ಎರಡಕ್ಷರದ ಸಂದೇಶ ಓದಿದ ಕೂಡಲೇ ನಿದ್ದೆ ಹಾರಿಹೋಗಿ, ಇನ್ನೊಂಥರದ ಮಂಕು ಆವರಿಸಿಬಿಟ್ಟಿತು. ಟಿವಿ ಹಾಕಿದರೆ, ಪುಂಖಾನುಪುಂಖವಾಗಿ ವಿವರಗಳು ಬರತೊಡಗಿದವು. ಹೃದಯಾಘಾತದಿಂದ ತಕ್ಷಣ ಸಾವನ್ನಪ್ಪಿದ ವಿಷ್ಣು, ಎಲ್ಲ ಬಂಧನಗಳಿಂದ ಮುಕ್ತರಾಗಿದ್ದರು.

ರಾಜ್‌ ಕುಟುಂಬದ ದಬ್ಬಾಳಿಕೆ ಸಹಿಸಿಯೂ ಈ ಪರಿಯ ಎತ್ತರಕ್ಕೆ ಬೆಳೆದಿದ್ದೊಂದೇ ಅಲ್ಲ, ಇಳಿವಯಸ್ಸಿನಲ್ಲಿಯೂ ಸೊಗಸಾಗಿ ನಟಿಸುತ್ತಿದ್ದುದು ವಿಷ್ಣು ಸಾಧನೆ. ಎಲ್ಲಿಯೂ ಬಾಯ್ಬಿಡದಂತೆ ಸಹ ಕಲಾವಿದರಿಗೆ ನೆರವಾಗುತ್ತಿದ್ದುದು ಅಪರೂಪದ ಹೃದಯವಂತಿಕೆ. ವಿವಾದಗಳಿಂದ ದೂರ ನಿಲ್ಲುತ್ತಿದ್ದ ವಿನಯ, ತಮಗೆ ಕಿರುಕುಳ ನೀಡಿದವರ ಬಗ್ಗೆ ಎಲ್ಲಿಯೂ ಪ್ರಸ್ತಾಪ ಮಾಡದ ಸಜ್ಜನಿಕೆ, ಬೇಸರವಾದರೆ ಮೌನವಾಗಿ ತಮ್ಮ ಪಾಡಿಗೆ ತಾವಿರುತ್ತಿದ್ದ ನಿರ್ಲಿಪ್ತತೆ- ಇವೆಲ್ಲ ಕಾರಣಗಳಿಗೂ ವಿಷ್ಣು ಇಷ್ಟವಾಗುತ್ತಾರೆ.

ಈಗ ಅವೆಲ್ಲ ಬರೀ ನೆನಪು ಮಾತ್ರ. ಸಿನಿಮಾ ಮುಗಿದಿದೆ. ಥೇಟರ್‌ ಖಾಲಿಯಾಗಿದೆ. ಉಳಿದಿದ್ದು ಸವಿ ಸವಿ ನೆನಪುಗಳು ಮಾತ್ರ. ಆದರೆ, ಈ ದುಃಖದ ಸಂದರ್ಭದಲ್ಲಿ, ಆ ನೆನಪುಗಳೂ ವಿಷಾದ ಒಸರಿಸತೊಡಗಿವೆ. ‘ಕಥೆಯು ಮುಗಿದೇ ಹೋದರೂ, ಮುಗಿಯದಿರಲಿ ಬಂಧನ...’ ಅಂತ ಮನಸ್ಸು ಒರಲತೊಡಗಿದೆ.

- ಚಾಮರಾಜ ಸವಡಿ

ಇನ್ನು ಮುಗಿಯಿತು ಎ೦ದುಕೊ೦ಡಾಗ ಹೊಸ ಬದುಕು ಶುರುವಾಗುತ್ತದೆ

6 Oct 2009

12 ಪ್ರತಿಕ್ರಿಯೆ
ಅದೆಲ್ಲಾ ಆಗಿ ಇಪ್ಪತ್ತೈದು ವರ್ಷಗಳಾಗಿವೆ.

ಕೊಪ್ಪಳ ಜಿಲ್ಲೆಯ ಅದೇ ಹೆಸರಿನ ತಾಲ್ಲೂಕಿನ ದೊಡ್ಡ ಊರುಗಳಲ್ಲಿ ಒ೦ದಾದ ಅಳವ೦ಡಿ ಇಪ್ಪತ್ತೈದು ವರ್ಷಗಳ ಹಿ೦ದೆ ಹೀಗಿರಲಿಲ್ಲ. ಊರು ತು೦ಬಾ ನಿರುದ್ಯೋಗ, ನಿರಾಸೆ, ರಾಜಕಾರಣಿಗಳ ಸ೦ಖ್ಯೆಯಾಗಲೀ, ಅ೦ಗಡಿ, ಆರ್. ಸಿ. ಸಿ. ಮನೆ, ಮಹಡಿ ಮನೆ, ಸ್ವ೦ತ ವಾಹನಗಳು, ಜನಸ೦ಖ್ಯೆ, ಹಣಕಾಸು ಯಾವುದೂ ಯಾವುವೂ ಈಗಿನ ಸ೦ಖ್ಯೆಯಲ್ಲಿರಲಿಲ್ಲ. ಎಲ್ಲವೂ ಅಷ್ಟಕಷ್ಟೇ. ಕಾಲು ಶತಮಾನದ ಹಿ೦ದೆ ಅಳವ೦ಡಿಯಲ್ಲಿ ನಿರುದ್ಯೋಗ ಹಾಗೂ ನಿರಾಸೆ ದೊಡ್ಡ ಪ್ರಮಾಣದಲ್ಲಿ ಇದ್ದವು. ಪಿ. ಯು. ಸಿ. ಮುಗಿಸಿದ ಕೂಡಲೇ ಟಿ. ಸಿ. ಹೆಚ್. ಗೆ ಸಮನಾದ ಇ೦ಟರ್ನ್‌ಶಿಪ್ ಕೋರ್ಸ್. ಅದೂ ಮುಗಿದ ಕೂಡಲೇ ಲು೦ಗಿ, ಅ೦ಗಿ ಹಾಗೂ ಕೈಯಲ್ಲಿ ಜೋಡೆತ್ತುಗಳ ಕೊರಳಿನ ಹಗ್ಗ. "ನಡೀ ಹೊಲಕ್ಕೆ, ಎಷ್ಟು ಓದಿದರೂ ಐತೆಲ್ಲಾ ಗೇಯೋದು" ಎನ್ನುತ್ತಿದ್ದರು ಹಿರಿಯರು. ಆರ್ಥಿಕವಾಗಿ ಪರವಾಗಿಲ್ಲ ಎನ್ನುವ೦ಥ ಒ೦ದಷ್ಟು ಜನ ಮಾತ್ರ ತಮ್ಮ ಮಕ್ಕಳನ್ನು ಪದವಿ ತರಗತಿಗಳಿಗೆ ಕಳಿಸುತ್ತಿದ್ದರು, ಅಷ್ಟೇ.

ಇ೦ಥ ಒ೦ದು ವಾತಾವರಣದಲ್ಲಿ ಒಕ್ಕಲುತನದಲ್ಲಾದರೂ ಏನು ಮಹಾ ಬರುತ್ತಿತ್ತು? ಬೆಳೆಯುತ್ತಿದ್ದುದೂ ಸಹ ಸಾ೦ಪ್ರದಾಯಿಕ ಬೆಳೆಗಳೇ. ಉಣ್ಣಲು ಜೋಳ, ಮಾರಲು ಶೇ೦ಗಾ, ಇವೆರಡು ಬೆಳೆಗಳ ನಡುವೆ ಹಿ೦ಗಾರು ಚೆನ್ನಾಗಿದ್ದರೆ ಹತ್ತಿ, ಮು೦ಗಾರು ಚೆನ್ನಾಗಿದ್ದರೆ ಅಕ್ಕಡಿ ಕಾಳುಗಳು. ಸೂರ್ಯಕಾ೦ತಿ ಬೆಳೆಯುವ ರೈತನನ್ನು ಹುಚ್ಚ ಎ೦ಬ೦ತೆ ನೋಡುತ್ತಿದ್ದರು. ಏಕೆ೦ದರೆ ಮಾರಿದ ಮೇಲೆ ದನಗಳಿಗೆ ತಿನ್ನಲು ಏನು ಉಳಿದಿರುತ್ತದೆ?

ಕೇವಲ ಇಪ್ಪತ್ತೈದು ವರ್ಷಗಳ ಹಿ೦ದೆ ನನ್ನೂರು ಹೇಗಿತ್ತಲ್ಲ! ಹಳ್ಳ ಆಗಲೇ ಉಸುಕಿನಿ೦ದ ತು೦ಬುತ್ತಿತ್ತು. ಇದ್ದೊಬ್ಬ ರಾಜಕಾರಣಿ ಗುರುಮೂರ್ತಿಸ್ವಾಮಿ ಖ್ಯಾತಿಯ ಕೊನೆಯ ದಿನಗಳಲ್ಲಿದ್ದರು. ಊರು ತು೦ಬಾ ಓದಿದ ನಿರುದ್ಯೋಗಿಗಳು. ಹೊಲಗಳ ತು೦ಬಾ ಜೋಳ, ಹತ್ತಿ, ಶೇ೦ಗಾ. ಕೈ ತು೦ಬಾ ಬೆಳೆ. ಹೊಟ್ಟೆ ತು೦ಬಾ ಊಟ - ಜನ ಹಾಗೂ ದನಗಳಿಬ್ಬರಿಗೂ. ಆದರೆ ಜೇಬು ಮಾತ್ರ ಖಾಲಿ. ಪಕ್ಕದ ಮನೆಯಾತ ರೇಡಿಯೋದಲ್ಲಿ ಮೆಚ್ಚಿನ ಚಿತ್ರಗೀತೆಗಳ ಕಾರ್ಯಕ್ರಮ "ಅಭಿಲಾಷ" ಹಾಕಿದರೆ ಹುಡುಗ ಕಟ್ಟೆಗೆ ಬ೦ದು ಕೂತು ಆಲಿಸಬೇಕು. ಆಗ ಟಿ. ವಿ. ಇದ್ದಿಲ್ಲ. ಟೇಪ್‌ರೆಕಾರ್ಡರ್ ಲಕ್ಷುರಿ. ರೇಡಿಯೋದ ಸಿನಿಮಾ ಹಾಡುಗಳು ಹಾಗೂ ಊರಿನ ಗೀತಾ ಟಾಕೀಸ್ ಒ೦ದೇ ಮನರ೦ಜನಾ ಮಾಧ್ಯಮಗಳು.

ಇವೆರಡನ್ನೂ ಬಿಟ್ಟು ಮನರ೦ಜನೆ ಪಡೆಯಲು ಇನ್ನೂ ಒ೦ದು ಮಾಧ್ಯಮವಿತ್ತು. ಅದು ಊರ ಕೆರೆ. ಕುಡಿಯುವ ನೀರಿಗಾಗಿ ಊರಿನ ನೀರೆಯರು ದಿನಾ ಅಲ್ಲಿ ಬರುತ್ತಿದ್ದರು. ಹುಡುಗಿಯರನ್ನು ಯಾವುದಕ್ಕೂ ಹೊರಗಡೆ ಬಿಡದ ಜನ ಸಹ, ‘ಕೆರೆಗೆ’ ಎ೦ದರೆ ಸುಮ್ಮನೆ ಕಳಿಸುತ್ತಿದ್ದರು. ಹಳ್ಳದ ದಾರಿಯಲ್ಲಿ ನಡೆದು, ಕೆರೆಯಲ್ಲಿ ನೀರು ತು೦ಬಿಕೊ೦ಡು, ವಾಪಸ್ ಹಳ್ಳದ ದಾರಿ ದಾಟಿ ಊರು ಸೇರುವುದಕ್ಕೆ ಇಪ್ಪತ್ತು ನಿಮಿಷ ಹಿಡಿಯುತ್ತಿತ್ತು. ಬದುಕು ಸಾರ್ಥಕಗೊಳ್ಳುವುದಕ್ಕೆ ಆ ಇಪ್ಪತ್ತು ನಿಮಿಷಗಳು ಸಾಕಾಗಿದ್ದವು.

ಅಪರೂಪಕ್ಕೊಮ್ಮೆ ಯಾರಿಗಾದರೂ ಕೆಲಸ ಸಿಕ್ಕರೆ ಅವನನ್ನು ಸ೦ಭ್ರಮಾಶ್ಚರ್ಯಗಳಿ೦ದ ನೋಡಲಾಗುತ್ತಿತ್ತು. ಅವನೊಬ್ಬ ಆದರ್ಶ ವ್ಯಕ್ತಿಯಾಗಿದ್ದ. ‘ನಮ್ಮ ಹಣೆಬರದಾಗ ನೌಕರಿ ಮಾಡಾದು ಇಲ್ಲ ಬಿಡು’ ಎ೦ದು ಅ೦ಗಿ - ಲು೦ಗಿಗಳು ನಿಟ್ಟುಸಿರಿಟ್ಟುಕೊ೦ಡು ಮತ್ತೆ ಹೊಲದತ್ತ ಕಾಲೆಳೆದುಕೊ೦ಡು ಹೋಗುತ್ತಿದ್ದವು. ಊರಿನ ಏಕತಾನತೆ ಮತ್ತು ಹಣ ಇಲ್ಲದಿರುವಿಕೆಯಿ೦ದ ಬೇಸತ್ತ ಹುಡುಗರು ಅಷ್ಟಿಷ್ಟು ಪುಡಿಗಾಸು ಕದ್ದು ಬೆ೦ಗಳೂರಿಗೆ ಓಡಿ ಹೋಗುತ್ತಿದ್ದರು. ಕಾಸು ಮತ್ತು ಭ್ರಮೆ - ಎರಡರಲ್ಲಿ ಯಾವುದು ಒ೦ದು ಕರಗಿದರೂ ಸಾಕು, ವಾಪಾಸ್ ಊರಿಗೆ ಬರುತ್ತಿದ್ದರು. ಅವರ ಪಾಲಿಗೆ ಮತ್ತೆ ಅ೦ಗಿ, ಲು೦ಗಿ ಹಾಗೂ ಹೊಲ. ಬೇಸರ ಕಳೆಯಲು ಕೆರೆಯ ನೀರು!!

ಕೇವಲ ಇಪ್ಪತ್ತೈದು ವರ್ಷಗಳ ಹಿ೦ದೆ ಅಳವ೦ಡಿ ಎಷ್ಟೊ೦ದು ಅಮಾಯಕವಿತ್ತು! ಎಷ್ಟು ಬಡವಾಗಿತ್ತು!! ಸ೦ಜೆಯಾದರೆ ಸಾಕು, ಹಳ್ಳದ ಸೇತುವೆ ಕಡೆಗೆ ವಾಕಿ೦ಗ್ ಹೋಗುವ ಸಡಗರವಿತ್ತು. ಗೀತಾ ಟಾಕೀಸ್‌ನಲ್ಲಿ ಸಿನೆಮಾ ನೋಡುವ ಸ೦ಭ್ರಮವಿತ್ತು. ಅಪರೂಪಕ್ಕೊಮ್ಮೆ ಬೆ೦ಗಳೂರಿಗೆ ಹೋದವ ಒ೦ದು ಟೀ-ಶರ್ಟ್ ಮತ್ತು ರೆಕ್ಸಿನ್ ಹ್ಯಾ೦ಡ್ ಬ್ಯಾಗ್ ತ೦ದರೆ ಊರಿಗೇ ಊರೇ ಅವನ್ನು ಹಾಗೂ ಧರಿಸಿದಾತನನ್ನು ಮಿಕಿ ಮಿಕಿ ನೋಡುತ್ತಿತ್ತು. ಸಣ್ಣ ವಿಷಯಗಳು ಆಗ ಖುಷಿ ಕೊಡುತ್ತಿದ್ದವು. ಗಮನಕ್ಕೆ ಈಡಾಗುತ್ತಿದ್ದವು.

ಕಾಲು ಶತಮಾನದ ಹಿ೦ದೆ ಪ್ರತಿಯೊ೦ದು ಮಧ್ಯಮ ಗಾತ್ರದ ಹಳ್ಳಿಗಳು ಹಾಗೂ ಸಣ್ಣಪಟ್ಟಣಗಳು ಹೆಚ್ಚು ಕಡಿಮೆ ಹೀಗೇ ಇದ್ದವು. ಅಲ್ಲಿ ಕೂಡಾ ಇಲ್ಲಿಯ೦ಥದೇ ಕನಸು, ಇ೦ಥವೇ ನಿರಾಸೆ. ಒ೦ದಲ್ಲ ಒ೦ದು ದಿನ ಇದೆಲ್ಲಾ ಬದಲಾಗುತ್ತದೆ ಎ೦ಬ ಭರವಸೆ. ಏನೋ ಆಗುತ್ತದೆ. ಅವತ್ತು ಇದೆಲ್ಲಾ ಬದಲಾಗಿ ಹೋಗುತ್ತದೆ ಎ೦ಬ ನ೦ಬಿಕೆ. ಆ ನ೦ಬಿಕೆಯಲ್ಲೇ ಪ್ರತಿ ದಿನ ಕಳೆಯುವ ವಿಚಿತ್ರ ಸಡಗರ.

ಆದರೆ ಬದಲಾವಣೆ ತು೦ಬಾ ವೇಗವಾಗಿ ಬ೦ತು. ಮೊದಲು ಥ್ರಿಲ್ ಹುಟ್ಟಿಸುತ್ತಿದ್ದ ಎಲೆಕ್ಟ್ರಾನಿಕ್ ವಾಚ್‌ಗಳನ್ನು ನ೦ತರ ಕೆಜಿಗಟ್ಟಲೆ ಮಾರಲಾಯಿತು. ರಾಮಕೃಷ್ಣ ಹೆಗಡೆ ಸರಕಾರ ತ೦ದ ಬಸ್‌ಪಾಸ್ ವ್ಯವಸ್ಥೆ ಅ೦ಗಿ ಲು೦ಗಿಗಳನ್ನು ಕೈಯಲ್ಲಿ ಪುಸ್ತಕ ಹಿಡಿಸಿ, ಬಸ್ ಹತ್ತಿಸಿ ಓದಲು ಕಳಿಸಿತು. ಬಸ್ ತು೦ಬಾ ವಿದ್ಯಾರ್ಥಿಗಳೇ. ಮು೦ದೆ ಶಿಕ್ಷಕರ ಸಾಮೂಹಿಕ ನೇಮಕಾತಿಗಳಾದವು. ಈ ಜನ್ಮದಲ್ಲಿ ನೌಕರಿ ಮಾಡುವುದು ನನ್ನ ಹಣೆಬರಹದಲ್ಲಿ ಬರೆದಿಲ್ಲ ಎ೦ದು ಹೊಲ ಸೇರಿದವರಿಗೆಲ್ಲಾ ನೌಕರಿ ಬ೦ದಿತು. ಮದುವೆಯಾಗಿ, ಮಕ್ಕಳನ್ನು ಹೆತ್ತು ಪಕ್ಕಾ ಗೃಹಿಣಿಯಾಗಿದ್ದಾಕೆ ಕೂಡ ಮಾಸ್ತರಳಾದಳು. ಕುಗ್ರಾಮಗಳಲ್ಲಿ ಶಾಲೆಗಳು ಬ೦ದವು. ಬಸ್‌ಗಳು ಹಳ್ಳಿಗಳಲ್ಲೂ ಓಡಾಡಲಾರ೦ಭಿಸಿದರು.

ಆದರೆ, ಬದಲಾವಣೆ ಸುಮ್ಮನೇ ಬರಲಿಲ್ಲ. ಹಳ್ಳಿ ಹಳ್ಳಿಗಳಲ್ಲಿ ನೌಕರಿ ಮಾಡುವವರ ಸ೦ಖ್ಯೆ ಹೆಚ್ಚಾದ೦ತೆ ರೊಕ್ಕ ಹರಿದಾಡುವುದು ಹೆಚ್ಚಾಯಿತು. ಹಣ ಹೆಚ್ಚಾದ೦ತೆ ಎಲ್ಲಾ ರೀತಿಯ ಚಟುವಟಿಕೆಗಳಲ್ಲೂ ಹೆಚ್ಚಳವಾಗುತ್ತದೆ. ಕ್ರಮೇಣ ಊರುಗಳು ಬದಲಾದವು. ಇಡೀ ಒ೦ದು ತಲೆಮಾರಿನ ಜೀವನ ಚಿತ್ರವೇ ಬದಲಾಗಿ ಹೋಯಿತು.

ನನ್ನ ಪಾಲಿಗೆ ಇದೆಲ್ಲಾ ಆಗಿ ಇಪ್ಪತ್ತೆರಡು ವರ್ಷಗಳಾಗಿವೆ. ನಮ್ಮೂರು ಅಳವ೦ಡಿಯ ಹಳ್ಳ ಬತ್ತಿದೆ. ಹಳ್ಳದ ತು೦ಬ ದಪ್ಪ ಉಸುಕು. ಊರಿನ ತು೦ಬಾ ಶಾಸಕ ಸ೦ಗಣ್ಣ ಕರಡಿ ಹಾಕಿಸಿದ ಬೋರಿನ ಸಿಹಿ ನೀರಿರುವುದರಿ೦ದ ಕೆರೆಗೆ ಹೋಗುವ ಅವಶ್ಯಕತೆಯೂ ಇಲ್ಲ. ಥ್ರಿಲ್ಲೂ ಇಲ್ಲ. ಓಣಿಗೆ ಡಜನ್‌ಗಟ್ಟಲೇ ಮಾಸ್ತರುಗಳು ಸಿಗುತ್ತಿರುವುದರಿ೦ದ ಊರಿನ ಆರ್ಥಿಕ ಪರಿಸ್ಥಿತಿ ತು೦ಬಾ ಸುಧಾರಿಸಿದೆ. ಒಬ್ಬ ಗುರುಮೂರ್ತಿ ಸ್ವಾಮಿಯ ಜಾಗದಲ್ಲೀಗ ಹತ್ತಾರು ಜನ ರಾಜಕಾರಣಿಗಳು. ಊರ ತು೦ಬಾ ನಾನಾ ನಮೂನೆ ಯೋಜನೆಗಳು. ಕೋಟ್ಯಾ೦ತರ ರೂಪಾಯಿಗಳ ಅನುದಾನ. ಅ೦ಗಿ - ಲು೦ಗಿಗಳೀಗ ಕೆಲವೇ ಕೆಲವು ಜನರ ಸ್ವತ್ತು. ಒಕ್ಕಲುತನ ಕೂಡ ತು೦ಬಾ ಸುಧಾರಿಸಿರುವುದರಿ೦ದ ಅಲ್ಲಿ ಕೂಡಾ ಲಕ್ಷಾ೦ತರ ರೂಪಾಯಿಗಳ ಲಾಭ. ಕನಸು ಮನಸಿನಲ್ಲೂ ನೆನೆಸದ ದ್ರಾಕ್ಷಿ, ಅ೦ಜೂರ, ಔಷಧೀಯ ಸಸ್ಯಗಳು ಈಗ ನಮ್ಮೂರಲ್ಲಿ ಲಭ್ಯ.

ಈಗ ಊರಿಗೆ ಹೋದರೆ ಮನಸ್ಸಿನ ತು೦ಬಾ ಸಾವಿರಾರು ನೆನಪುಗಳು ಕಾಡುತ್ತವೆ. ಊರು ಬದಲಾಗಿದೆ, ಜನ ಬದಲಾಗಿದ್ದಾರೆ. ಭಾವನೆಗಳು ಬದಲಾಗಿವೆ. ಆದರೆ, ಊರಿನ ತೇರು ಮಾತ್ರ ಹಾಗೇ ಇದೆ. ಅದೇ ನೋಟ ಈಗಲೂ. ಜಾತ್ರೆಯಲ್ಲಿ ಅದು ಚಲಿಸಿದಾಗ ಇಪ್ಪತ್ತೈದು ವರ್ಷದ ಹಿಂದಿನ ಮಾಸದ ನೆನಪುಗಳು ಒಮ್ಮೆಲೇ ಬುಗ್ಗೆಯಾಗಿ ಉಕ್ಕುತ್ತವೆ.

ಇವತ್ತು ಹಳ್ಳದ ಸೇತುವೆ ಮೇಲೆ ವಾಕಿ೦ಗ್ ಹೋಗುವವರ ಸ೦ಖ್ಯೆ ಕಡಿಮೆ. ಅ೦ಗಿ - ಲು೦ಗಿಗಳ ಅನಿವಾರ್ಯತೆ ಇನ್ನೂ ಕಡಿಮೆ. ಎಲ್ಲರೂ ಒ೦ದು ಕಡೆ ಕೂಡಲು ಜಾತ್ರೆ-ಹಬ್ಬಗಳು ನೆಪ ಮಾತ್ರ. ಎದಿರಾದ ಪ್ರತಿಯೊಬ್ಬ ಗೆಳೆಯನ ಪಕ್ಕದಲ್ಲಿ ಆತನ ಹೆ೦ಡತಿ, ಕೈಯಲ್ಲಿ ಒ೦ದು ಮಗು ಇರುತ್ತದೆ. ಗೆಳೆಯನ ಸೊ೦ಟದಲ್ಲಿ ಕೊ೦ಚ ಬೊಜ್ಜಿರುತ್ತದೆ. ಹೇಗಿದ್ದಿ? ಇತ್ಯಾದಿ ಹೊಸ ಬಗೆಯ ಪ್ರಶ್ನೆಗಳು. ರಸ್ತೆಯಲ್ಲಿ ಭೇಟಿಯಾದವರು ರಸ್ತೆಯ ಮೇಲೆಯೇ ನಿರ್ಗಮಿಸುತ್ತೇವೆ. ನಾವು ಮೊದಲಿನ೦ತೆ ತಬ್ಬಿಕೊ೦ಡು ಆನ೦ದ ಪ್ರಕಟಿಸಿ, ಕೈ ಹಿಡಿದುಕೊ೦ಡು ಹೋಟೇಲ್‌ಗೆ ಹೋಗಿ ಚಹಾ ಕುಡಿಯುವುದಿಲ್ಲ. ಗ೦ಟೆಗಟ್ಟಲೇ ಹರಟುವುದಿಲ್ಲ. ತಬ್ಬಿಕೊಳ್ಳಲೀಗ ಹೆ೦ಡತಿ ಬ೦ದಿದ್ದಾಳೆ. ನಮಗೇ ಕೊ೦ಚ ಬೊಜ್ಜು ಬ೦ದಿದೆ. ಅಷ್ಟಕ್ಕೂ ಹಳ್ಳಿಯ ರಸ್ತೆಯ ಮೇಲೆ ನಿ೦ತು ಸೆ೦ಟಿಮೆ೦ಟ್ ವ್ಯಕ್ತಿಗಳ೦ತೆ ತಬ್ಬಿಕೊಳ್ಳುವುದಾ? ನಾನ್ಸೆನ್ಸ್.

ಹೌದು. ಇಪ್ಪತ್ತೈದು ವರ್ಷಗಳಲ್ಲಿ ಊರು ತು೦ಬಾ ಬದಲಾಗಿದೆ. ಸೆನ್ಸ್‌ನಿ೦ದ ನಾನ್ಸೆನ್ಸ್‌ವರೆಗೆ, ಅತ್ಮೀಯತೆಯಿ೦ದ ಔಪಚಾರಿಕತೆಯೆಡೆಗೆ, ಒಗ್ಗಟ್ಟಿನಿ೦ದ ಒ೦ಟಿತನದ ಕಡೆಗೆ ಊರು ಬದಲಾಗುತ್ತಾ ಹೋಗಿದೆ.
 

ನಾನೊಬ್ಬ ದಡ್ಡನ೦ತೆ ಕೂತು ಇನ್ನೂ ಹಳೆಯ ದಿನಗಳ ನೆನಪಿನಲ್ಲೇ ಬದುಕುತ್ತಿದ್ದೇನೆ.

- ಚಾಮರಾಜ ಸವಡಿ

ಮತ್ತೆ ಕಿತ್ತು ಜೋಡಿಸುವ ಮಜಾ...

26 Sept 2009

1 ಪ್ರತಿಕ್ರಿಯೆ
ಇವತ್ತು ಓದುವ ಕೊಠಡಿ ತಕ್ಕ ಮಟ್ಟಿಗೆ ಸಿದ್ಧವಾಯಿತು. ಬೆಳಿಗ್ಗೆ ಡಬ್ಬಿಗಳನ್ನೆಲ್ಲ ಖಾಲಿ ಮಾಡಿ ಕಂಪ್ಯೂಟರಿನ ವಿವಿಧ ಭಾಗಗಳನ್ನು ಜೋಡಿಸಿಕೊಂಡೆ.

ವರ್ಷಕ್ಕೊಮ್ಮೆ ಮನೆ ಹಾಗೂ ನೌಕರಿ ಬದಲಿಸುವ ಜಾಯಮಾನದ ವ್ಯಕ್ತಿ ನಾನು. ಹೀಗಾಗಿ, ಮನೆ ಬದಲಾದಾಗೆಲ್ಲ ಕಂಪ್ಯೂಟರ್ ಬಿಚ್ಚಿ ಜೋಡಿಸುವುದು ಅನಿವಾರ್ಯ. ಎಷ್ಟೋ ಸಾರಿ ಒಂದೇ ಮನೆಯಲ್ಲೇ ಕನಿಷ್ಠ ಎರಡೆರಡು ಬಾರಿ ಕಂಪ್ಯೂಟರಿನ ಜಾಗ ಬದಲಿಸಿದ್ದೇನೆ. ಮೊದಮೊದಲು ಅಷ್ಟೊಂದು ವೈರುಗಳು ಗೋಜಲುಗೋಜಲಾಗಿ ಹೆಣೆದುಕೊಂಡಿದ್ದನ್ನು ಗಾಬರಿಯಿಂದ ನೋಡುತ್ತ ನಿಂತುಬಿಟ್ಟಿದ್ದೆ. ಕಂಪ್ಯೂಟರ್ ತಜ್ಞರನ್ನೇ ಕರೆಸಿ ಬಿಚ್ಚಿಸಬೇಕಾಗುತ್ತದೆ ಎಂದು ಬೇಸರಪಟ್ಟುಕೊಂಡಿದ್ದೆ. ಆದರೂ, ಒಂದು ಸಾರಿ ಪ್ರಯತ್ನಿಸಿ ನೋಡಿಬಿಡೋಣ. ಬಾರದಿದ್ದರೆ, ಗೊತ್ತಿರುವವರನ್ನು ಕರೆಸುವುದು ಇದ್ದೇ ಇದೆಯಲ್ಲ ಎಂದು ಕೈ ಹಾಕಿದ್ದೆ.

ಆದರೆ, ಕೈಯೇ ಓಡುತ್ತಿಲ್ಲ. ಅಪರಿಚಿತ ಸರ್ಕ್ಯೂಟ್ ಬಿಚ್ಚುತ್ತಿರುವ ವಿದ್ಯಾರ್ಥಿಯ ಥರ ಭೀತಿ. ಮೊದಲು ಸಿಪಿಯು ವೈರುಗಳನ್ನು ಬಿಚ್ಚಿಟ್ಟೆ. ನಂತರ ಸಂಬಂಧಿಸಿದ ಭಾಗಗಳ ಜೋಡಣೆ ತೆಗೆದುಹಾಕುತ್ತ, ಯಾವ್ಯಾವ ವೈರು ಎಲ್ಲೆಲ್ಲಿ ಜೋಡಣೆಯಾಗಿದೆ ಎಂಬುದನ್ನು ಎರಡೆರಡು ಸಾರಿ ನೋಡಿಕೊಂಡಿದ್ದೆ. ಆದರೆ, ಬಿಚ್ಚಿ ಅವನ್ನು ಪ್ಯಾಕ್ ಮಾಡಿಟ್ಟಾಗ, ಬೋಳು ಮೈಯನ ಸಿಪಿಯು ನೋಡಿ ದಿಗಿಲಾಗಿತ್ತು. ನಮನಮೂನೆಯ ಚುಚ್ಚುಗುಂಡಿಗಳಿಗೆ ಯಾವ್ಯಾವ ವೈರುಗಳು ಸೇರುತ್ತವೋ ಏನೋ, ಒಂದು ವೇಳೆ ತಪ್ಪು ವೈರು ಸೇರಿಸಿ ಕಂಪ್ಯೂಟರ್ ಢಂ ಅಂದರೆ ಹೇಗೆ ಅಂತ ತುಂಬ ದಿಗಿಲಾಗಿತ್ತು.

ಈಗ ಎಲ್ಲಾ ಕಿತ್ತಾಗಿದೆ. ಚಿಂತಿಸಿ ಉಪಯೋಗವಿಲ್ಲ. ಮತ್ತೆ ಜೋಡಿಸುವಾಗ ಯೋಚಿಸಿದರಾಯ್ತು ಎಂಬ ಸಮಾಧಾನ ಹೇಳಿಕೊಂಡಿದ್ದೆನಾದರೂ, ಮನಸ್ಸಿನಲ್ಲಿ ಅದೇ ವಿಷಯ ಕೊರೆಯುತ್ತಿತ್ತು. ಮನೆ ಬದಲಿಸಿ, ಗೃಹಮಂತ್ರಿಯ ಆದ್ಯತೆಯ ಪ್ರಕಾರ, ಸಾಮಾನುಗಳನ್ನೆಲ್ಲ ಜೋಡಿಸಿಟ್ಟಾಗ, ಕೊನೆಗೆ ಉಳಿದಿದ್ದು ನನ್ನ ಓದುವ ಕೊಠಡಿ ಸಿದ್ಧಪಡಿಸುವುದು. ಅದು ನನ್ನದೇ ಜವಾಬ್ದಾರಿಯಾಗಿದ್ದರಿಂದ, ಎಲ್ಲರೂ ಮಲಗಿದಾಗ, ಕಳ್ಳನಂತೆ ಒಂದೊಂದೇ ಡಬ್ಬ ತೆರೆಯುತ್ತ ಸಾಮಾನುಗಳನ್ನು ಜೋಡಿಸಿಟ್ಟುಕೊಳ್ಳುತ್ತಿದ್ದೆ. ಕಂಪ್ಯೂಟರಿಗೆ ಸಂಬಂಧಿಸಿದ ಡಬ್ಬಗಳನ್ನು ನೋಡಿದಾಗ, ಮತ್ತದೇ ಅಳುಕು ಹುಟ್ಟುತ್ತಿದ್ದರಿಂದ, ಅವನ್ನೆಲ್ಲ ನಂತರ ಜೋಡಿಸಿದರಾಯ್ತು ಎಂದು ಒಂದೆಡೆ ಇಟ್ಟುಬಿಟ್ಟಿದ್ದೆ.

ಇವತ್ತು ಅದೆಲ್ಲ ನೆನಪಾಗುತ್ತಿದೆ.

ಡಬ್ಬಗಳನ್ನು ಒಂದೊಂದಾಗಿ ತೆರೆದು, ಕಂಪ್ಯೂಟರಿನ ವಿವಿಧ ಭಾಗಗಳನ್ನು ಟೇಬಲ್‌ ಮೇಲಿಟ್ಟುಕೊಂಡೆ. ದಾರ ಸುತ್ತಿದಂತೆ ಸುತ್ತಿಟ್ಟಿದ್ದ ವೈರುಗಳ ಚೀಲ ತೆರೆದು, ಹಾವಾಡಿಗನಂತೆ ಅವನ್ನೆಲ್ಲ ಹೊರತೆಗೆದೆ. ಎಲ್ಲ ನಮೂನೆಯ, ಗಾತ್ರದ, ಬಣ್ಣದ ವೈರುಗಳವು. ಜನುಮಜನುಮದ ಪ್ರೇಮಿಗಳಂತೆ, ತಳುಕುಹಾಕಿಕೊಂಡಿದ್ದ ಅವನ್ನೆಲ್ಲ ಬಲವಂತದಿಂದ ಒಂದೊಂದಾಗಿ ಬಿಡಿಸಿ, ಕಂಪ್ಯೂಟರಿನ ಸಂಬಂಧಿಸಿದ ಭಾಗಗಳಿಗೆ ಜೋಡಿಸಿದೆ. ಎಲ್ಲ ಮುಗಿದು, ಯುಪಿಎಸ್‌ನ ಪ್ಲಗ್ ಕೈಗೆತ್ತಿಕೊಂಡು ಕನೆಕ್ಷನ್ ಕೊಡಲೆಂದು ನೋಡುತ್ತೇನೆ-

ಗೋಡೆಯ ಮೇಲೆ ಒಂದೇ ಒಂದು ಸಾಕೆಟ್ ಇಲ್ಲ!

ಇದ್ದುದು ಒಂದು ಸ್ವಿಚ್‌ ಮಾತ್ರ. ತುಂಬ ನಿರಾಸೆಯಾಯ್ತು. ಶತಾಯಗತಾಯ ಇವತ್ತು ಕಂಪ್ಯೂಟರ್ ಜೋಡಿಸಿ ಏನಾದರೂ ಬರೆದೇ ಸಿದ್ಧ ಎಂಬ ಹುಮ್ಮಸ್ಸಿನಿಂದ ಕೆಲಸ ಶುರು ಮಾಡಿದವನಿಗೆ ಕರೆಂಟಿಗೇ ದಿಕ್ಕಿಲ್ಲದಂತಾಗಿತ್ತು. ಹತ್ತಿರದಲ್ಲಿ ಎಲ್ಲಾದರೂ ಮೂರು ಪಿನ್ನಿನ ಸಾಕೆಟ್ ಇದೆಯಾ ಎಂದು ಹುಡುಕಿದರೆ, ಒಂದೂ ಸಿಗಲಿಲ್ಲ. ಎಕ್ಸ್ಟೆನ್ಷನ್ ಜಂಕ್ಷನ್ ಬಾಕ್ಸ್ ತರದೇ ದಾರಿಯೇ ಇಲ್ಲದಾದಾಗ, ಪ್ಯಾಂಟೇರಿಸಿಕೊಂಡು ವಿದ್ಯುತ್ ಉಪಕರಣಗಳ ಅಂಗಡಿ ಹುಡುಕಿಕೊಂಡು ಹೊರಟೆ.

'ಇದು ಬ್ರ್ಯಾಂಡೆಡ್ ಜಂಕ್ಷನ್ ಬಾಕ್ಸ್' ಎಂದು ಅಂಗಡಿಯವ ಪದೆ ಪದೆ ಭರವಸೆ ಕೊಡುತ್ತಿದ್ದರೂ, ಅವನು ಕೊಡಲೆತ್ತಿಸುತ್ತಿದ್ದ ಬಾಕ್ಸನ್ನು ಅತ್ಯಂತ ಅನುಮಾನದಿಂದ ನೋಡುತ್ತ, ಪರಿಶೀಲಿಸುತ್ತ, ಅನುಮಾನ ಇದ್ದರೂ ಅನಿವಾರ್ಯತೆ ಅದಕ್ಕಿಂತ ಹೆಚ್ಚಾಗಿದ್ದರಿಂದ, ಇದ್ದುದರಲ್ಲೇ ಉತ್ತಮ ಎಂದು ಕಾಣುತ್ತಿದ್ದ ಜಂಕ್ಷನ್‌ ಬಾಕ್ಸ್ ಎತ್ತಿಕೊಂಡು ಬಂದೆ. ಅಡುಗೆ ಮನೆಯಲ್ಲಿದ್ದ ಸಾಕೆಟ್‌ಗೆ ಅದನ್ನು ಜೋಡಿಸಿ, ಯುಪಿಎಸ್‌ಗೆ ಸಂಪರ್ಕ ಕೊಟ್ಟು, ಕೊನೆಗೂ ಕಂಪ್ಯೂಟರ್ ಆನ್‌ ಮಾಡಿದಾಗ ಪ್ರತ್ಯಕ್ಷವಾಯ್ತಲ್ಲ 'ಉಬುಂಟು'! ಹಳೆಯ ಗೆಳೆಯನೊಬ್ಬ ಮನೆಗೆ ಬಂದಂಥ ಸಂತಸ.
ಅವಶ್ಯಕತೆ ಎಷ್ಟೊಂದು ವಿಷಯಗಳನ್ನು ಕಲಿಸುತ್ತದೆ ಎಂದು ನೆನಪಿಸಿಕೊಂಡರೆ ಆಶ್ಚರ್ಯವಾಗುತ್ತದೆ. ಈಗ ಕಂಪ್ಯೂಟರ್ ವೈರುಗಳನ್ನು ಬಿಚ್ಚಿ ಜೋಡಿಸುವುದು ರೂಢಿಯಾಗಿಬಿಟ್ಟಿದೆ. ನೌಕರಿ ಹಾಗೂ ಮನೆ ಬದಲಿಸುವುದು ನನ್ನ ಜಾಯಮಾನದ ಒಂದು ಭಾಗವೇ ಆಗಿರುವಾಗ, ಯಕಃಶ್ಚಿತ್ ಕಂಪ್ಯೂಟರ್ ಜೋಡಣೆ ಕಲಿಯದೇ ಇರಲಾದೀತೆ?

- ಚಾಮರಾಜ ಸವಡಿ

ಮಳೆ ಎಂದರೆ ಬಾಲ್ಯದ ನೆನಪು ಕಣಾ...

18 Aug 2009

0 ಪ್ರತಿಕ್ರಿಯೆ
ಮುಂಗಾರು ಶುರುವಾಗಿದೆ. ಜೊತೆಗೆ, ನೆನಪುಗಳ ಮಳೆಯೂ.

ಮೊದಲ ಹನಿಗೆ ಬಾಲ್ಯ ನೆನಪಾಗಿದೆ. ಮುಂಗಾರಿನ ಮಳೆಗೆ ಮುಖವೊಡ್ಡಿ ನಿಲ್ಲುತ್ತಿದ್ದ ದಿನಗಳು ಕಣ್ಮುಂದೆ ಬರುತ್ತಿವೆ. ಹಳ್ಳಿಯ ದೂಳು ತುಂಬಿದ ರಸ್ತೆಗಳಲ್ಲಿ ಟಪಟಪ ಬೀಳುತ್ತಿದ್ದ ನೀರ ಹನಿಗಳು, ಅವು ಎಬ್ಬಿಸುತ್ತಿದ್ದ ದೂಳಿನ ಪರದೆ, ಮೂಗಿಗೆ ಅಡರುತ್ತಿದ್ದ ಮಣ್ಣಿನ ಕಮ್ಮನೆ ವಾಸನೆ ಎಲ್ಲವೂ ನಿನ್ನೆ ತಾನೆ ಕಂಡು ಅನುಭವಿಸಿದ ಸುಂದರ ಕನಸೆಂಬಂತೆ ಭಾಸವಾಗುತ್ತಿದೆ.

ಆ ಮಣ್ಣಿನ ವಾಸನೆ ಎಲ್ಲಿ ಹೋಯಿತು? (ಪೂರ್ತಿ ಬರಹ ಇಲ್ಲಿದೆ http://kannada.indiawaterportal.org/b/chamarajsavadi/%E0%B2%AE%E0%B2%B3%... )

ನಿಮಗೂ ಹೀಗೆ ಅನಿಸಿರಬಹುದಲ್ಲವೆ?

- ಚಾಮರಾಜ ಸವಡಿ

ಎಂಟು ವರ್ಷಗಳ ಹಿಂದೆ...

0 ಪ್ರತಿಕ್ರಿಯೆ
(ಏಳು ವರ್ಷಗಳ ಹಿಂದಿನ ಬದುಕಿನ ಚಿತ್ರಣ ಇದು. ಕೊಪ್ಪಳದಲ್ಲಿದ್ದ ಅವತ್ತಿನ ದಿನಗಳಿಗೂ, ಬೆಂಗಳೂರಿನ ಇವತ್ತಿನ ದಿನಗಳಿಗೂ ಮೂಲತಃ ಹೆಚ್ಚಿನ ವ್ಯತ್ಯಾಸವೇನಿಲ್ಲ. ಆದರೂ, ಬದುಕು ತುಂಬ ಬದಲಾಗಿದೆ. ಬದಲಾಗುತ್ತಲೇ ಇದೆ...)

ಮೊಬೈಲ್‌ನಲ್ಲಿಯೇ ಇರುವ ಅಲಾರಾಮ್ ಐದಾಗಿದ್ದನ್ನು "ಟೀಂಯ್ ಟಿ ಟೀ ಟೀ೦ಯ್ ಟಿ.. ಟೀ..." ಎ೦ದು ಧ್ವನಿ ಮಾಡುವ ಮೂಲಕ ಸೂಚಿಸುತ್ತದೆ.

ನಾನು ಏಳುತ್ತೇನೆ. ಏಳಲೇಬೇಕು. ಬರೀ ಇವತ್ತೊ೦ದೇ ದಿನವಲ್ಲ. ಕಳೆದ ಇಪ್ಪತ್ತೈದು ವರ್ಷಗಳಿ೦ದ ಹೀಗೆ ಏಳುತ್ತಲೇ ಬ೦ದಿದ್ದೇನೆ. ಒಮ್ಮೊಮ್ಮೆ ನಸುಕಿನ ನಾಲ್ಕು ಗ೦ಟೆ, ಹಿ೦ದಿನ ದಿನ ಲೇಟಾಗಿದ್ದರೆ ಐದು, ಆಫೀಸಿನಲ್ಲಿ ಉಳಿಯುವ ರಾತ್ರಿಯಾಗಿದ್ದರೆ ಕೊ೦ಚ ಲೇಟಾಗಿ- ಒಟ್ಟಿನಲ್ಲಿ ಬೆಳಿಗ್ಗೆ ಏಳಲೇಬೇಕು.

ಹೊರಗೆ ಇನ್ನೂ ಕತ್ತಲಿರುತ್ತದೆ. ಏಳು ತಿ೦ಗಳಿನ ಮಗಳು ಗೌರಿ ಎರಡೂ ಕೈಯನ್ನು ಅಗಲವಾಗಿ ಚಾಚಿಕೊ೦ಡು "ಎತ್ತಿಕೋ" ಎನ್ನುವ೦ತೆ ಮಲಗಿರುತ್ತಾಳೆ. ಸಣ್ಣ ಮೂಗಿನ ಬಿರಿದ ಹೊರಳೆಯ ಮೂಲಕ ಬೆಳಗಿನ ಶುದ್ಧ ಹವೆ ಇಷ್ಟಿಷ್ಟೇ ಒಳಗೆ ಹೊರಗೆ ಓಡಾಡುತ್ತದೆ. ಗೋಲುಗಲ್ಲಗಳ ಮೇಲಿ೦ದ ರಾತ್ರಿ ದೀಪದ ಮ೦ದ ಬೆಳಕಿನ ಮ೦ದ ಪ್ರತಿಫಲನ. ಹೆ೦ಡತಿ ರೇಖಾ ಕೂಡಾ ಅಷ್ಟೇ. ತಾಯಿ - ಮಗಳು ನಿದ್ದೆಯಲ್ಲಿ ಸಹ ಪರಸ್ಪರ ಮುಖ ಮಾಡಿಕೊ೦ಡೇ ಮಲಗುತ್ತಾರೆ. ಮಗು ಅತ್ತರೆ ಚವ್ಟಿ ತಟ್ಟಲು ರೆಡಿಯಾಗಿರುವ ಒ೦ದು ಕೈ, ತಲೆಯ ಪಕ್ಕ ಇನ್ನೊ೦ದು, ಮಗಳಿಗಿ೦ತ ನಿಡಿದಾದ ಉಸಿರಾಟ.

ರಾತ್ರಿ ಯಾವ ಹೊತ್ತಿನಲ್ಲಿ ಗೌರಿ ಎದ್ದಿರುತ್ತಿದ್ದಳೋ ಏನೋ, ನಿದ್ದೆಯಲ್ಲಿದ್ದ ನನಗೆ ಗೊತ್ತಾಗುವ ಸ೦ಭವ ಕಡಿಮೆ. ಗೊತ್ತಾದರೂ ಸಹ, ಆ ಸರಿ ರಾತ್ರಿಯಲ್ಲಿ ಹಸಿವಿನಿ೦ದ ಅಳುವ ಮಗಳಿಗೆ ನಾನು ಏನಾದರೂ ಸಮಾಧಾನ ಮಾಡುವ ಸ೦ಭವ ಇನ್ನೂ ಕಡಿಮೆ. ಹೀಗಾಗಿ ರೇಖಾ ನಿದ್ದೆಗೆಟ್ಟಿರುತ್ತಾಳಾದ್ದರಿ೦ದ ಬೆಳ್ಳ೦ಬೆಳ್ಳಿಗೆ ಏಳಬೇಕಾದ ಅನಿವಾರ್ಯತೆ ಆಕೆಗಿಲ್ಲ. ಮಗಳಿಗ೦ತೂ ಮೊದಲೇ ಇಲ್ಲ.

ಆದರೆ ನನಗಿದೆ. ನನ್ನ ಸ್ವಂತ ಪತ್ರಿಕೆ ಎ೦ಬ ಮಗು ಇನ್ನೂ ಬೆಳೆಯಬೇಕು. ಹೀಗಾಗಿ ಬೆಳಿಗ್ಗೆ ಬೇಗ ಏಳಲೇಬೇಕು. ಹೆ೦ಡತಿ ಮತ್ತು ಮಗಳ ಅಮಾಯಕ ಮುಖಗಳನ್ನೊಮ್ಮೆ ನೋಡಿದವನೇ ಛಕ್ಕೆ೦ದು ಏಳುತ್ತೇನೆ. ಎರಡು ಲೋಟ ನೀರು ಕುಡಿದ ಕೂಡಲೇ ಕಾಲು ತಾವಾಗಿಯೇ ಶೌಚಾಲಯದತ್ತ ಕರೆದೊಯ್ಯುತ್ತವೆ. ಬಾಗಿಲು ತೆರೆದು ಹೊರಗೆ ಬ೦ದರೆ, ಮಸುಕು ಬೆಳಕು ಸುತ್ತಲೂ ಹರಡಿಕೊ೦ಡ ಅಪೂರ್ವ ದೃಶ್ಯ ಕಣ್ಣಿಗೆ ಬೀಳುತ್ತದೆ.

ಕೊಪ್ಪಳದ ಬಿ. ಟಿ. ಪಾಟೀಲ ನಗರದ ಈ ಪ್ರದೇಶ ಮುಖ್ಯ ರಸ್ತೆಯಿ೦ದ ಒಳಗಿದೆ. ಹೀಗಾಗಿ ವಾಹನಗಳ ಗದ್ದಲವಿಲ್ಲ. ನಸುಕಿನ ರೈಲೊ೦ದು ಬುಸುಗುಡುತ್ತಾ ಹೋಗಿಬಿಟ್ಟರೆ ಮುಗೀತು. ದೂರದ ಮನೆಯ ಅಲಾರಾಮ್ ಸದ್ದನ್ನು ಹಾಸಿಗೆಯೊಳಗೆ ಇದ್ದುಕೊ೦ಡೇ ಕೇಳಿಸಿಕೊಳ್ಳಬಹುದು. ಅ೦ಥದೊ೦ದು ಪ್ರಶಾ೦ತವಾದ ಪ್ರದೇಶದಲ್ಲಿ ನಸುಕಿನ ಮ೦ದ ಬೆಳಕು ವಿಚಿತ್ರ ಕಾ೦ತಿಯನ್ನು ಕೊಡುತ್ತದೆ. ಆ ಸೌ೦ದರ್ಯವನ್ನು ಮೆಚ್ಚುತ್ತಲೇ ನನ್ನ ಬೆಳಗಿನ ಕರ್ಮಗಳು ಮುಗಿಯುತ್ತವೆ.

ಎಷ್ಟೇ ಬೇಕೆನಿಸಿದರೂ ಬೆಳಗಿನ ಸುಪ್ರಭಾತದ ಕ್ಯಾಸೆಟ್ ಮಾತ್ರ ಹಾಕುವುದಿಲ್ಲ. ಆ ಸದ್ದು ಮಗಳನ್ನು ಎಬ್ಬಿಸಿಬಿಡುತ್ತದೆ. ಸ್ನಾನವಾದ ನ೦ತರ ಅವತ್ತಿನ ದಿನಪತ್ರಿಕೆಗಳ ಮೇಲೆ ಒ೦ದಷ್ಟು ಕಣ್ಣು ಹರಿಸುತ್ತೇನೆ. ಹದಿನೈದು ನಿಮಿಷಗಳ ನ೦ತರ, ಸರಸರ ಬಟ್ಟೆ ಹಾಕಿಕೊಳ್ಳುತ್ತೇನೆ. ಬ್ಯಾಗನ್ನು ಸಿದ್ಧಪಡಿಸಿಕೊಳ್ಳುತ್ತೇನೆ. ದಾರಿಯಲ್ಲಿ ಓದಲೊ೦ದು ಪುಸ್ತಕ, ಒಯ್ಯಲೇಬೇಕಾದ ಒ೦ದಷ್ಟು ದಾಖಲೆಗಳು, ಡೈರಿ... ಬ್ಯಾಗು ಸೇರುತ್ತವೆ.

ಅಷ್ಟೊತ್ತಿಗೆ ರೇಖಾ ಎದ್ದಿರುತ್ತಾಳೆ. ನಾನು ಬೇಡ ಎ೦ದಿದ್ದರೂ ಪ್ರತಿದಿನದ೦ತೆ ಚಹಾ ಹಾಗೂ ಬ್ರೆಡ್ ತರುತ್ತಾಳೆ. ನನಗೊ೦ದು ಕಪ್ ಮತ್ತು ತನಗೊ೦ದು ಕಪ್... ನಡುವೆ ಬ್ರೆಡ್‌ನ ಹೋಳುಗಳು. ನಾನು ಮೌನವಾಗಿ ಬ್ರೆಡ್ ಚಹಾ ಸೇವಿಸುತ್ತೇನೆ. ಆಕೆ ಸಹಾ. "ಯಾವೂರಿಗೆ?" ಎನ್ನುತ್ತಾಳೆ. ನಾನು ಹೇಳುತ್ತೇನೆ. ಆಕೆಯದು ಮೌನ ಸಮ್ಮತಿ. ಆಕೆಯ ಮನಸ್ಸಿನಲ್ಲೇನಿದೆ? ಎನ್ನುವುದು ನನಗೆ ಗೊತ್ತು. ಅದು ನನಗೆ ಗೊತ್ತೆನ್ನುವುದು ಆಕೆಗೆ ಗೊತ್ತು. ಹೀಗಾಗಿ ಇಬ್ಬರೂ ಆ ಬಗ್ಗೆ ಮೌನವಾಗಿ ಮಾತಾಡಿಕೊಳ್ಳುತ್ತೇವೆ. "ಸ೦ಜೆ ಜಲ್ದಿ ಬರ್ರಿ" ಎ೦ದು ಬೀಳ್ಕೊಡುತ್ತಾಳೆ.

ಡಕೋಟಾ ಎಕ್ಸ್‌ಪ್ರೆಸ್‌ನ೦ತಿರುವ ನನ್ನ ಲೂನಾ ಹತ್ತುವುದರೊ೦ದಿಗೆ ಬೆಳಕು ಬಿಚ್ಚಿಕೊಳ್ಳುತ್ತದೆ. ಬಿ. ಟಿ. ಪಾಟೀಲ ನಗರದ ನಿರ್ಜನ ರಸ್ತೆಗಳನ್ನು ಹಾಯ್ದು, ಸುಪ್ರಭಾತದ ರಾಗಗಳನ್ನು ಕೇಳುತ್ತಾ, ಊದುಬತ್ತಿಯ ಸುವಾಸನೆಯನ್ನು ಆಘ್ರಾಣಿಸುತ್ತಾ ಬರುವಾಗ ಅಲ್ಲೊ೦ದು ಇಲ್ಲೊ೦ದು ರ೦ಗೋಲಿ ಹಾಕಿದ ಮನೆಗಳು ಕಾಣಿಸುತ್ತವೆ. ಹಾಲಿನ ಹುಡುಗರು, ಪೇಪರ್ ಹಾಕುವ ಹುಡುಗರು ಸ್ವೆಟರ್ ಹಾಗೂ ಮಫ್ಲರ್‌ಗಳಲ್ಲಿ ಇಡೀ ದೇಹವನ್ನೇ ಹುದುಗಿಸಿಕೊ೦ಡು ಭಯೋತ್ಪಾದಕರ೦ತೆ ಕಾಣುತ್ತಿರುತ್ತಾರೆ. ಅಲ್ಲಲ್ಲಿ ಹೂ ಮಾರುವವರು ಮತ್ತು ಅವರ ಕೈಯಲ್ಲಿರುವ ಸು೦ದರ ಹೂವಿನ ಬುಟ್ಟಿ, ಬೆನ್ನ ಹಿ೦ದೆ ಚ೦ದನೆಯ ಸೂರ್ಯನ ಹೊ೦ಗಿರಣ.

ಡಕೋಟಾ ಎಕ್ಸ್‌ಪ್ರೆಸ್ ಮುಖ್ಯ ರಸ್ತೆಗೆ ಬ೦ದರೂ ವಾತಾವರಣ ಹೆಚ್ಚೇನೂ ಬದಲಾಗುವುದಿಲ್ಲ. ಒ೦ದಷ್ಟು ವಾಹನಗಳನ್ನು ಬಿಟ್ಟರೆ ರಾಷ್ಟ್ರೀಯ ಹೆದ್ದಾರಿ ೬೩ ಹೆಚ್ಚು ಕಡಿಮೆ ನಿರ್ಜನ. ಜಿಲ್ಲಾ ಪ೦ಚಾಯತ್ ಮು೦ದಿನಿ೦ದ ಹಾಯ್ದು ಡಿ. ಸಿ. ಆಫೀಸ್ ಸರ್ಕಲ್ ಹತ್ತಿರ ಬ೦ದಾಗ ಟ್ರಾಫಿಕ್ಸ್‌ನ ಹಳದಿ ಲೈಟು ಕಣ್ಣು ಹೊಡೆಯುತ್ತದೆ. ಅದರ ಹಿ೦ದೆ ಗರ್ಲ್ಸ್ ಕಾಲೇಜಿನತ್ತ ಹೊರಟ ನೂರಾರು ಹುಡುಗಿಯರು. ಮಲ್ಲಿಗೆ ದ೦ಡೆಯಿ೦ದ ಈಗ ಮಲ್ಲಿಗೆ ಮುಡಿದ ಹುಡುಗಿಯರತ್ತ ದೃಷ್ಟಿಗೆ ಬಡ್ತಿ. ಕಿಲಕಿಲ ಎ೦ದು ವಿನಾ ಕಾರಣ ನಗುತ್ತಾ ವಯ್ಯಾರದಿ೦ದ ಸಾಗಿರುವ ನೂರಾರು ಹುಡುಗಿಯರು ನನಗೆ ಹಕ್ಕಿಗಳನ್ನು ನೆನಪಿಸುತ್ತಾರೆ. ಅದೇ ಸ್ನಿಗ್ಧ ಸೌ೦ದರ್ಯ, ಅ೦ಥದೇ ಸ್ವಚ್ಛ೦ದತೆ ಹಾಗೂ ಅದೇ ಕಲರವ.

ಡಿ. ಸಿ. ಆಫೀಸ್ ಸರ್ಕಲ್‌ನಿ೦ದ ಹಿಡಿದು ಬಸ್‌ಸ್ಟ್ಯಾ೦ಡ್‌ವರೆಗೆ ಓತಪ್ರೋತವಾಗಿ ಹುಡುಗಿಯರ ಕಲರವವೇ ಕಲರವ. ಅ೦ಥ ಬೆಳ್ಳ೦ಬೆಳಿಗ್ಗೆಯೂ ಹಕ್ಕಿಗಳ ವೀಕ್ಷಣೆಗೆ೦ದು ಬೆಳಗಿನ ನಿದ್ದೆ ತ್ಯಾಗ ಮಾಡಿ ಬ೦ದ ಅವಿವಾಹಿತ ಯುವಕರ ಆಸೆಯ ಕ೦ಗಳು ರಸ್ತೆ ಪಕ್ಕದ ಹೋಟೇಲಿನ ಕಿಟಕಿಗಳಿ೦ದ ಮಿ೦ಚುತ್ತವೆ. ನಾನು ಮುಗುಳ್ನಗುತ್ತೇನೆ.

ಬಸ್‌ಸ್ಟ್ಯಾ೦ಡ್ ಬರುತ್ತದೆ. ಡಕೋಟಾ ಎಕ್ಸ್‌ಪ್ರೆಸ್‌ನ್ನು ಪಾರ್ಕಿ೦ಗ್‌ನಲ್ಲಿ ನಿಲ್ಲಿಸಿ, ಬುಕ್ ಸ್ಟಾಲ್‌ಗೆ ಹೋಗುತ್ತೇನೆ. ಅಷ್ಟರಲ್ಲಾಗಲೇ ಅ೦ಗಡಿ ಬಿಸಿಬಿಸಿ ಸುದ್ದಿಗಳುಳ್ಳ ಪತ್ರಿಕೆಗಳಿ೦ದ ಶೃ೦ಗಾರಗೊ೦ಡಿರುತ್ತದೆ. ಸುತ್ತಲಿನ ಯಾವ ನಗರಗಳ ಬಸ್ಸ್‌ಸ್ಟ್ಯಾಂಡ್‌ನಲ್ಲೂ ಇಷ್ಟೊ೦ದು ಸಮೃದ್ಧವಾದ ಪುಸ್ತಕದ೦ಗಡಿ ಇಲ್ಲ ಎಂದು ಅಂಗಡಿಯವನ ಶ್ರದ್ಧೆಯನ್ನು ಮೆಚ್ಚುತ್ತಾ ನನಗೆ ಬೇಕಾದ ಪತ್ರಿಕೆಗಳನ್ನು ಕೊಳ್ಳುತ್ತೇನೆ. ಬಸ್ ರೆಡಿಯಾಗಿ ನಿ೦ತಿರುತ್ತದೆ. ಗದಗ್‌ ಅಥವಾ ಗ೦ಗಾವತಿ. ಯಾವ ಊರಿಗೆ ಹೋಗಬೇಕೆ೦ಬುದು ಮೊದಲೇ ನಿರ್ಧಾರವಾಗಿರುವುದರಿಂದ ಸೀದಾ ಆ ಬಸ್ ಹತ್ತುತ್ತೇನೆ.

ಬೆಳಗ್ಗಿನ ಸುವಾಸನೆ ಬಸ್ಸಿನೊಳಗೂ. ಡ್ರೈವರ್ ಶಿಸ್ತಾಗಿ ಪೂಜೆ ಮಾಡಿ ಒ೦ದು ಮೊಳ ಹೂವನ್ನು ಡ್ರೈವಿ೦ಗ್ ಸೀಟಿನ ಎದುರಿನ ಫೋಟೋಗೆ ಹಾಕಿರುತ್ತಾನೆ. ಘಮ ಘಮ ಸುವಾಸನೆಯ ಊದು ಬತ್ತಿ ಹಚ್ಚಿರುತ್ತಾನೆ. ಸ್ವಚ್ಛ ಸೀಟುಗಳು ತಾಜಾ ಮುಖಗಳು. ಎಡಗಡೆ ಕಿಟಕಿಯ ಸೀಟು ಹಿಡಿದು ಕೂಡುತ್ತೇನೆ. ಅಷ್ಟೊತ್ತಿಗೆ ಕೊಪ್ಪಳ ಗುಡ್ಡದ ಬತೇರಿಗಳು ಸೂರ್ಯನ ಬೆಳಕಲ್ಲಿ ಲಕಲಕಿಸುತ್ತಿರುತ್ತದೆ.

ಡ್ರೈವರ್ ಬ೦ದು ಸೀಟಿನಲ್ಲಿ ಕೂತು ಸ್ಟೇರಿ೦ಗ್ ವೀಲ್‌ಗೆ ಕೈ ಜೋಡಿಸಿ ನಮಸ್ಕಾರ ಮಾಡಿ ಗಾಡಿ ಶುರು ಮಾಡುತ್ತಾನೆ. ಒ೦ದೇ ಅದುಮಿಕೆಗೆ ಗಾಡಿ ಶುರು. ಎಂಜಿನ್‌ನ ಮ೦ದ ಗುರುಗುಡುವಿಕೆ ಎಂಥದೋ ಭರವಸೆ ತರುತ್ತದೆ. ಮೊಬೈಲ್ ಹೊರ ತೆಗೆದು ಸೇರಬೇಕಾದ ಊರಿನಲ್ಲಿ ಸುದ್ದಿಯೊ೦ದಿಗೆ ಕಾಯ್ದು ಕುಳಿತಿರುವ ವ್ಯಕ್ತಿಯ ನ೦ಬರ್‌ಗೆ ಡಯಲ್ ಮಾಡಿ; "ನಾನು ಕೊಪ್ಪಳ ಬಿಡುತ್ತಿದ್ದೇನೆ" ಎಂದು ತಿಳಿಸುತ್ತೇನೆ.

ಕ೦ಡಕ್ಟರ್ ಸೂಚನೆ ಕೊಟ್ಟ ಕೂಡಲೇ ಬಸ್ ನಿಧಾನವಾಗಿ ಹೊರಡುತ್ತದೆ. ಅಲ್ಲಾಡುತ್ತಾ ಬಸ್‌ಸ್ಟ್ಯಾ೦ಡ್‌ನ ಪ್ರವೇಶ ದ್ವಾರಗಳ ರಸ್ತೆ ತಡೆ ದಾಟಿ ಹೆದ್ದಾರಿ ಪ್ರವೇಶಿಸುತ್ತಿದ್ದ೦ತೆ ಗಾಲಿಗಳಿಗೆ ಹದಿನಾರರ ಬಾಲೆಯ ಚುರುಕುತನ. ಭರ್ರ್‌ರ್ರ್‌ರ್ರ್..... ಎ೦ದು ಗಾಳಿಯನ್ನು ಕತ್ತರಿಸುತ್ತಾ ಒ೦ದೇ ಒ೦ದು ಬಾರಿ ಕೂಡಾ ಹಾರ್ನ್ ಬಾರಿಸದೇ ಬಸ್ಸು ಶರವೇಗದಲ್ಲಿ ಊರನ್ನು ದಾಟುತ್ತದೆ. ಕೊಪ್ಪಳದ ಕೋಟೆ ನನ್ನ ಬೆನ್ನಿಗೆ ನಿ೦ತು ಟಾಟಾ ಹೇಳುತ್ತದೆ. ಸರಕಾರೀ ಕಟ್ಟಡಗಳು, ಚಹದ೦ಗಡಿಗಳು, ಹೋಟೇಲ್‌ಗಳು, ಮುಚ್ಚಿದ ಬಾಗಿಲಿನ ಅ೦ಗಡಿ ಮುಗ್ಗಟ್ಟುಗಳನ್ನು ದಾಟಿ, ಬೆಳಗಿನ ವಾಕಿ೦ಗ್ ಮುಗಿಸಿ ಮನೆಯತ್ತ ಹೊರ ಆರೋಗ್ಯದಾಹಿಗಳನ್ನು ದಾಟಿ, ಕೊಪ್ಪಳದ ಕಮಾನುಗಳನ್ನು ದಾಟುತ್ತದೆ ಬಸ್ಸು. ಕಮಾನು ದಾಟಿತೆ೦ದರೆ ಕೊಪ್ಪಳ ನಗರದ ಸರಹದ್ದು ಮಗಿಯಿತೆ೦ದೇ ಲೆಕ್ಕ.

ಇದ್ದಕ್ಕಿದ್ದ೦ತೆ ಸೊಗಸಾದ ಸುವಾಸನೆಯ ಬೆಳಗಿನ ಅತ್ಯ೦ತ ತಾಜಾ ಗಾಳಿ ಭಸ್ಸೆ೦ದು ಬಸ್ಸಿನೊಳಗೆ ನುಗ್ಗಿ ಪುಳಕಗೊಳಿಸುತ್ತದೆ. ಹೊರಗೆ ಲಕಲಕ ಹೊಳೆವ ಹಸಿರು ಹೊಲಗಳು, ಕಡು ಹಸಿರ ಗಿಡಗಳು. ದಿಗ೦ತದಲ್ಲಿ ಮೋಹಕ ಮುಸುಕು.

ನನಗೆ ಬೇ೦ದ್ರೆಯವರ ಕವಿತೆಯೊ೦ದು ನೆನಪಾಗುತ್ತದೆ. ‘ಬ೦ಗಾರ ನೀರ ಕಡಲಾಚೆಗೀಚೆಗಿದು ನೀಲ ನೀಲ ತೀರ...’. ಬಸ್ಸು ಖುಷಿಯಿ೦ದ ಮು೦ದುಮು೦ದಕ್ಕೆ ಧಾವಿಸುತ್ತದೆ.

ನನ್ನ ದಿನವೊ೦ದು ಅದ್ಭುತವಾಗಿ ಪ್ರಾರ೦ಭವಾಗುತ್ತದೆ!

- ಚಾಮರಾಜ ಸವಡಿ