ಏಕೆ ಇಷ್ಟವಾಗುತ್ತಾರೋ...

10 Dec 2011

1 ಪ್ರತಿಕ್ರಿಯೆ
ಬೆಳಿಗ್ಗೆ ಬೇಗ ಏಳಬೇಕು
ಅಂತ ಮಲಗಿದಾಗ
ಕನಸಿನ ತುಂಬ
ಅಲಾರಾಂ ಮೊಳಗುವ ಸದ್ದು

***
 
ಚೆಂದದ ಕವಿತೆ
ಬರೆಯಲು ಕೂತರೆ
ಪೆನ್ನು ಮಂಕಾಗುತ್ತದೆ
ಕವಿತೆ ನಗುತ್ತದೆ
 
***
 
ಒಂದೇ ಒಂದು ಕನಸಿತ್ತು
ಅದು ನನಸಾಗಲೇ ಇಲ್ಲ

ಈಗಲೂ ನನ್ನ ಬಳಿ ಉಳಿದಿದ್ದು
ಆ ಕನಸೊಂದೇ
 
***
ಇಬ್ಬರು ಮಕ್ಕಳು
ಒಂದು ಕವಿತೆ

ಅದೂ ಮಗುವೇ!
 
***
 
ಕನಸಿಗೂ ಒಂದು ಮನಸಿದೆ
ಅದು ಕೈಗೆ ಸಿಗದಂತಿದೆ
 
***
 
ಕಣ್ಣೀರ ಹನಿಗಳ ಲೆಕ್ಕವಿಟ್ಟೆಯಾ?
ನೀನು ಕವಿಯೂ ಅಲ್ಲ, ಪ್ರೇಮಿಯೂ ಅಲ್ಲ
 
***
 
ಎಲ್ಲಿಂದಲೋ ಬಂದವರು
ಏಕೆ ಇಷ್ಟವಾಗುತ್ತಾರೋ!
 
***

- ಚಾಮರಾಜ ಸವಡಿ

ಮರೆಯಬೇಕಿದೆ ಎಲ್ಲಾ...

3 Oct 2011

3 ಪ್ರತಿಕ್ರಿಯೆ
ಎಲ್ಲಾ ಮರೆಯಬೇಕಿದೆ
ಹಾಗಂತ ಪದೆ ಪದೆ ನೆನಪಿಸಿಕೊಳ್ಳುತ್ತಿದ್ದೇನೆ

ಅಲಾರಾಂ ಅದುಮಿದ್ದೇನೆ
ಕರೆಗಂಟೆ ಕಿತ್ತಿದ್ದೇನೆ
ಗೇಟಿಗೆ ಹಾಕಿದ್ದ ಪತ್ರದ ಡಬ್ಬವನ್ನೂ ಬಿಚ್ಚಿಟ್ಟಾಗಿದೆ
ಯಾರೂ ಬರಬೇಡಿ
ನಾನು ಒಳಗಿಲ್ಲ

ಮುಚ್ಚಿದ ಬಾಗಿಲೊಳಗಿನ ಮನೆಯಲ್ಲಿ
ಬೆಳಕಿಲ್ಲ; ದೀಪ ಹಾಕುವಂತಿಲ್ಲ
ಫ್ಯಾನು, ಫೋನು, ಕುಕ್ಕರ್
ಊಹೂಂ
ನಲ್ಲಿ ತಿರುಗಿಸುವಂತಿಲ್ಲ,
ಹಾಡು ಗುನುಗುವಂತಿಲ್ಲ
ಒಳಗಿದ್ದೇನೆಂಬುದು ಹೊರಹೋಗುವಂತಿಲ್ಲ

ಸದ್ದೇ ಮಾಡದೇ ಕೂತರೂ
ಸೊಳ್ಳೆಗಳು ಮಾತಾಡಿಸುತ್ತವೆ
ಬಾಗಿಲು ಮುಚ್ಚಿದ್ದರೂ
ನೆನಪ ಕಿಟಕಿಗಳು ತೆರೆದುಕೊಳ್ಳುತ್ತವೆ
ಬೇಡವೆಂದ ಬೆಳಕು, ಶಬ್ದ
ಒಳ ಬಂದು ‘ಏನೀಗ?’ ಎಂಬಂತೆ
ಕೆಣಕುತ್ತವೆ, ಕೆರಳಿಸುತ್ತವೆ

ದುರುಗುಟ್ಟಿ ನೋಡಿದರೂ ಬೆದರುವುದಿಲ್ಲ
ಹೋಗಾಚೆ ಎಂದು ಒರಲಿದರೂ ಕೇಳುವುದಿಲ್ಲ
ಮರೆತ ಹಾಡುಗಳನ್ನು ನೆನಪಿಸಿ,
ಒರೆಸಿಹಾಕಿದ ಚಿತ್ರಗಳನ್ನು
ಎಲ್ಲೆಡೆ ಹರವುತ್ತವೆ; ಮನಸ ಕದಡುತ್ತವೆ

ಎಲ್ಲ ಮರೆಯಬೇಕೆಂದರೂ
ಎಲ್ಲಾ ನೆನಪಾಗುತ್ತದೆ
ಆ ಮಾತು, ಧ್ವನಿ, ಸಂದೇಶ, ಕನಸು
ಕವನ, ಕದನ, ಕಾಮನೆ, ಭಾವನೆ
ಒಂದೇ ಎರಡೇ
ಲೆಕ್ಕದ ಬೆಂಬತ್ತಿ, ಸೋತು ಸೋತು
ಮತ್ತೆ ಸುಮ್ಮನೇ ಕೂಡುತ್ತೇನೆ

ಬಾಗಿಲ ಮೇಲೆ ಬೆರಳಾಡಿಸಿದ ಸದ್ದು...
 

ಅದನ್ನೇ ಕಾಯುತ್ತಿದ್ದವನಂತೆ ಎದ್ದು
ಬಾಗಿಲು ತೆರೆದರೆ;

ಅವಳಿಲ್ಲ!

ಮರೆಯಬೇಕೆಂಬ, ಮರೆತ ಸಂಕಲ್ಪ
ಮತ್ತೆ ನೆನಪಾಗುತ್ತದೆ

- ಚಾಮರಾಜ ಸವಡಿ

ಒಂದು ಕನಸು ಹುಡುಕುತ್ತಾ...

21 Sept 2011

4 ಪ್ರತಿಕ್ರಿಯೆ
ಮಗುವೊಂದು ಮಲಗುತ್ತಿತ್ತು.

ಪಕ್ಕದಲ್ಲಿ ಮಲಗಿಕೊಂಡು ಮಗುವಿನ ಮಾತುಗಳನ್ನು ಕೇಳುತ್ತಿದ್ದ ಆತ. ಶಾಲೆಯಲ್ಲಿ ಆಕೆಯ ಮಿಸ್‌ ಹೇಳಿದ್ದು, ಸಹಪಾಠಿಗಳ ಬಟ್ಟೆ, ಊಟದ ಡಬ್ಬ, ತರಹೇವಾರಿ ಚಿತ್ರಗಳಿರುವ ಆಕೆಯ ಶಾಲೆಯ ಕೊಠಡಿ, ಮಿಸ್‌ ಹೇಳಿಕೊಟ್ಟಿದ್ದ ಡ್ರಿಲ್‌ ಎಲ್ಲವನ್ನೂ ಗಿಣಿಪಾಠ ಒಪ್ಪಿಸುತ್ತಿದ್ದ ಮಗು, ನಿನಗೆ ಡ್ರಿಲ್‌ ಬರುತ್ತಾ ಅಪ್ಪ? ಎಂದಳು.

ಈತ ಇಲ್ಲವೆಂದ.

ಆಕೆ ತಕ್ಷಣ ಎದ್ದು ನಿಂತು, ಸಾವಧಾನ್‌, ವಿಶ್ರಾಮ್‌ ತೋರಿಸಿದಳು. ಒಂದೆರಡು ಎಕ್ಸರ್‌ಸೈಜ್‌ಗಳ ಪ್ರದರ್ಶನವೂ ನಡೆಯಿತು. ನೀನು ಮಾಡು ನೋಡೋಣ ಎಂದು ಸವಾಲೆಸೆದಳು. ಇವನಿಗೆ ಆಗಲೇ ಅರ್ಧ ನಿದ್ದೆ. ನಾಳೆ ಬೆಳಿಗ್ಗೆ ನೀನೇ ಹೇಳಿಕೊಡುವೆಯಂತೆ ಎಂದ. ಮಗಳು ಮತ್ತೆ ಮಲಗಿದಳು. ಮತ್ತೆ ಮಾತು.

ಹೊರಗೆ ಸಣ್ಣಗೇ ಶುರುವಾಗಿದ್ದ ಮಳೆ ಜೋರಾಯಿತು. ಅರೆತೆರೆದಿದ್ದ ಕಿಟಕಿಯ ಮೂಲಕ ತಣ್ಣನೆಯ ಗಾಳಿ ಒಳ ನುಗ್ಗಿದಾಗ ಫ್ಯಾನ್‌ ಆಫ್‌ ಮಾಡಿದ್ದಾಯ್ತು. ಅಪ್ಪಾ ನನಗೆ ಚಳಿ ಎಂದಳು ಮಗಳು. ಈತ ಬೆಚ್ಚಗೆ ಹೊದಿಕೆ ಹೊದಿಸಿದ. ಸರಿ, ಈಗ ರಗ್ ಹೊತ್ಕೊಂಡಿದ್ದೀನಿ. ನಾಳೆ ಸ್ಕೂಲಿಗೆ ಹೋಗುವಾಗ ಚಳಿ ಆದರೆ ಏನು ಮಾಡಲಿ? ಎಂದಿತು ಮಗು.

ನಾಳೆ ನಿಂಗೆ ಸ್ವೆಟರ್‌ ಕೊಡಿಸ್ತೀನಿ ಎಂದು ಈತ ಭರವಸೆ ಕೊಟ್ಟ. 

ಈಗ ಮಾತು ಸ್ವೆಟರ್‌ ಕಡೆ ತಿರುಗಿತು. ಎಂಥ ಬಣ್ಣದ ಸ್ವೆಟರ್‌ ತನಗಿಷ್ಟ? ತನ್ನ ಗೆಳತಿಯರು ಎಂತೆಂಥ ಬಣ್ಣದ ಸ್ವೆಟರ್‌ ಇಟ್ಟುಕೊಂಡಿದ್ದಾರೆ ಎಂದೆಲ್ಲ ಮಾತಾಡಿದ ಮಗು, ಸ್ವೆಟರ್‌ ತರೋವಾಗ ನನ್ನನ್ನೂ ಕರ‍್ಕೊಂಡು ಹೋಗ್ತೀಯಾ? ಎಂದಿತು. ಏಕೆ ಎಂದ ಈತ. ನನಗಿಷ್ಟವಾದ ಬಣ್ಣದ ಸ್ವೆಟರ್‌ ನಾನೇ ಆರಿಸಬೇಕಲ್ವಾ? ಎಂದು ಕೇಳಿತು ಮಗು. ಈತ ಹೂಂ ಅಂದ.

ನಂಗೆ ಚಳಿಯಾದ್ರೆ ಸ್ವೆಟರ್‌ ಹಾಕ್ಕೊಂಡು ಮಲ್ಕೋಬಹುದು ಎಂದು ಅದಕ್ಕೆ ರೋಮಾಂಚನ. ನಿಜ್ವಾಗ್ಲೂ ನಂಗೆ ಸ್ವೆಟರ್‌ ಕೊಡಿಸ್ತೀಯಾ ಅಪ್ಪ? ಎಂದು ಮತ್ತೆ ಕೇಳಿ ಖಚಿತಪಡಿಸಿಕೊಂಡಿತು. ಮರುದಿನ ಸ್ವೆಟರ್‌ ಖರೀದಿ ಮಾಡುವ ಬಗ್ಗೆಯೇ ಮಾತಾಡುತ್ತ ಹಾಗೇ ನಿದ್ದೆಗೆ ಜಾರಿತು. 

ಈತನಿಗೆ ನಿದ್ದೆ ಬರಲಿಲ್ಲ. ಹಾಗಂತ ಪೂರ್ತಿ ಎಚ್ಚರದಲ್ಲೂ ಇರಲಿಲ್ಲ. 

ಹೊರಗೆ ಜೋರು ಮಳೆ. ಇತ್ತ ಮಗುವಿಗೆ ಜೋರು ನಿದ್ರೆ. 

ಬೀಸಿದ ತಣ್ಣನೆಯ ಗಾಳಿಗೆ ಮಂಪರು ಹಾರಿಹೋಗಿ ಎಚ್ಚರವಾಯಿತು. ಎದ್ದು ಕಿಟಕಿಯ ಹತ್ತಿರ ಬಂದು ಮಳೆ ನೋಡುತ್ತ ನಿಂತ. ಮುಂಗಾರಿನ ಕೊನೆಯ ಮಳೆ ಇದು ಎಂಬಂತೆ ಆಗಸ ಸೋರುತ್ತಿತ್ತು. 

ಬೀದಿ ದೀಪದ ಮೇಲೆ ನೀರಿನ ಹನಿಗಳು ಬಿದ್ದು  ಸಿಡಿಯುತ್ತಿದ್ದ ದೃಶ್ಯ ಗಮನ ಸೆಳೆಯಿತು. ಡಾಂಬರು ರಸ್ತೆಯುದ್ದಕ್ಕೂ ತರಹೇವಾರಿ ವಿನ್ಯಾಸದ ಹರಿಯುವ ನೀರು. ಅವಸರಕ್ಕೆ ಬಿದ್ದಂತೆ ಸರಿದು ಹೋಗುತ್ತಿದ್ದ ನೀರಿಗೆ ಹಳದಿ ಬೀದಿ ದೀಪದ ಚಿತ್ತಾರ. ನಿಲ್ಲುವುದಿಲ್ಲವೇನೋ ಎಂಬಂತೆ ಒಂದೇ ರೀತಿ ಬೀಳುತ್ತಿದ್ದ ಮಳೆ ಸಂಮೋಹನ ಮಾಡುವಂತಿತ್ತು. ಗುಡುಗಿಲ್ಲ, ಮಿಂಚಿಲ್ಲ, ಸಿಡಿಲುಗಳಿಲ್ಲ. ಕೇವಲ ಶುದ್ಧ ಜೋರು ಮಳೆ. ಸೈನಿಕರಂತೆ ಒಂದೇ ರೀತಿ ಕಾಣುವ ಮಳೆಯ ಹಳದಿ ಎಳೆಗಳು. ಹರಿಯುವ ನೀರಿನ ಮೇಲ್ಮೈಗೆ ಅಪ್ಪಳಿಸಿದಾಗ ಆಗುತ್ತಿದ್ದ ಸೊಗಸಾದ ಕುಳಿಗಳು. ಅವುಗಳ ಒಡಲಿಂದ ಪಕ್ಕಕ್ಕೆ ಛಲ್ಲನೇ ಸಿಡಿಯುವ ಮರಿ ಹನಿಗಳು. ರಸ್ತೆಯುದ್ದಗಲಕ್ಕೂ ಮಳೆ ಹನಿಗಳು ಹರಿಯುವ ನೀರಿನ ಮೇಲೆ ಮೂಡಿಸುತ್ತಿದ್ದ ಸಾವಿರಾರು ನೀರ ಕುಳಿಗಳು. 

ಈತ ಮಂತ್ರಮುಗ್ಧನಂತೆ ಅವನ್ನೇ ನೋಡುತ್ತ ನಿಂತ. 

ರಾತ್ರಿಯ ನೀರವತೆಯ ಜಾಗದಲ್ಲೀಗ ಧಾರಾಕಾರವಾಗಿ ಬೀಳುತ್ತಿದ್ದ ಮಳೆಯ ಶಬ್ದ. ಕಿವಿಗೆ ಹಿತವಾಗಿಸುವ, ಕಣ್ಣಿಗೆ ತಂಪೆನಿಸುವ ಚೇತೋಹಾರಿ ದೃಶ್ಯ. ಎದುರಿಗೆ ಕಾಣುತ್ತಿದ್ದ ಮನೆಗಳ ಕಿಟಕಿಗಳಿಂದ ಬೆಳಕು ಬರುತ್ತಿಲ್ಲ. ಎಲ್ಲಾ ಮಲಗಿರಬೇಕು. ಅಥವಾ ಮಲಗಿದ್ದುಕೊಂಡೇ ಮಳೆಯ ಗಾನ ಕೇಳುತ್ತಿರಬೇಕು. ಅಥವಾ ಮಳೆ ಗಾನ ಕೇಳುತ್ತ ಮಲಗುತ್ತಿರಬೇಕು.

ನಾನೂ ಮಲಗಬೇಕು ಎಂದುಕೊಂಡ. ಮಳೆ ನಿಲ್ಲುವ ಮುನ್ನವೇ, ಅದರ ವಿಶಿಷ್ಟ ಗಾನ ಕೇಳುತ್ತ ನಿದ್ದೆಗೆ ಜಾರಬೇಕು. ಸ್ವೆಟರ್‌ ಕನಸು ಕಾಣುತ್ತ ಮಲಗಿದ ಮಗಳಂತೆ, ನಾನೂ ಚೆಂದನೆಯ ಕನಸು ಕಾಣುತ್ತ ಮಲಗಬೇಕೆಂದುಕೊಳ್ಳುತ್ತ ವಾಪಸ್ ಬಂದ. 


ತಕ್ಷಣ ನಿದ್ರೆ ಬರಲಿಲ್ಲ. ಮಳೆಯ ಸದ್ದು ಹಾಗೇ ಇತ್ತು. ಮುಚ್ಚಿದ ಕಣ್ರೆಪ್ಪೆಯ ಒಳಗೆಲ್ಲ ಮಳೆಯ ಹನಿಗಳು ಉಂಟು ಮಾಡುತ್ತಿದ್ದ ಸಾವಿರ ಸಾವಿರ ನೀರಕುಳಿಗಳು. ಏನು ಕನಸು ಕಾಣಲಿ ಎಂದು ಯೋಚಿಸಿದ. 

ಆಕೆ ನೆನಪಾದಳು. ಆಕೆಯ ಸ್ನಿಗ್ಧ ಮುಖ ಕಣ್ಮುಂದೆ ಬಂದಿತು. ಮಿನುಗುವ ನಕ್ಷತ್ರದಂಥವಳು ಎಂದು ಮತ್ತೆ ಮತ್ತೆ ಅಂದುಕೊಂಡ. ಆಕೆಯ ಮುಂದೆ ಹಾಗೆ ಕರೆದರೆ ‘ಹುಚ್ಚ’ ಎಂಬಂತೆ ನೋಡಿಯಾಳು ಎಂಬುದು ಅರಿವಾಗಿ, ಮುಚ್ಚಿದ ಕಣ್ಣೊಳಗೇ ಸುಮ್ಮನಾದ. ಆಕೆಯೂ ಮಳೆ ನೋಡುತ್ತಿರಬಹುದೇ ಎಂಬ ಪ್ರಶ್ನೆ ಹುಟ್ಟಿತು. ಮಳೆಯ ಕುಳಿಗಳನ್ನು, ಹಳದಿ ಎಳೆಗಳನ್ನು, ಒಂದೇ ರೀತಿ ಬೀಳುತ್ತಿರುವ ಹಿತಕರ ಶಬ್ದವನ್ನು ಅನುಭವಿಸುತ್ತಿರಬಹುದೇ? 

ಇದ್ದಕ್ಕಿದ್ದಂತೆ ಮಗಳು ಕನವರಿಸಿದಳು. ಅಸ್ಪಷ್ಟ ಶಬ್ದಗಳು. ಬಹುಶಃ ಸ್ವೆಟರ್‌ ಕನಸು ಕಾಣುತ್ತಿರಬಹುದು ಅಂತ ಅಂದುಕೊಂಡ. ಪಕ್ಕಕ್ಕೆ ತಿರುಗಿ, ತಲೆ ನೇವರಿಸಿ, ತಾನು ಪಕ್ಕದಲ್ಲೇ ಇದ್ದೇನೆ ಎಂಬುದನ್ನು ಮನವರಿಕೆ ಮಾಡಿಕೊಟ್ಟ. ಆತುಕೊಂಡು ಮಲಗಿದ ಮಗು ಕನವರಿಕೆ ನಿಲ್ಲಿಸಿ ಮತ್ತೆ ಆಳ ನಿದ್ದೆಗೆ ಜಾರಿತು.

ಇವನಿಗೂ ಮಂಪರು. ಕನಸು ಕಾಣಬೇಕೆಂಬುದೂ ಮರೆತು ಹೋಗಿ ನಿಧಾನವಾಗಿ ನಿದ್ದೆಗೆ ಜಾರತೊಡಗಿದ. ಧಾರಾಕಾರವಾಗಿ ಬೀಳುತ್ತಿದ್ದ ಮಳೆಯ ಸದ್ದು, ಸಣ್ಣಗೇ ನುಗ್ಗುತ್ತಿದ್ದ ತಂಗಾಳಿ, ದಿನದ ಆಯಾಸ ಎಲ್ಲ ಸೇರಿ ನಿದ್ದೆ ಕವಿಯತೊಡಗಿತು. 

*****

ಬಹುಶಃ ದೆಹಲಿಯಿಂದ ಹಿಂತಿರುವಾಗ ಇರಬೇಕು. 

ಆಗಲೂ ಇಂಥದೇ ಒಂದು ರಾತ್ರಿ. ಮಳೆ ಬೀಳುತ್ತಿದ್ದಿಲ್ಲ ಎಂಬುದನ್ನು ಬಿಟ್ಟರೆ, ಮಳೆಯ ಸದ್ದಿನ ಜಾಗದಲ್ಲಿ ರೈಲು ಚಲಿಸುವ ವಿಶಿಷ್ಟ ಶಬ್ದ. ಏಕೋ ನಿದ್ದೆ ಬರಲಿಲ್ಲ ಎಂದು ರಾತ್ರಿ ಯಾವುದೋ ಜಾವ ಬರ್ಥ್‌‌ನಿಂದ ಕೆಳಗಿಳಿದಿದ್ದ. ಡಬ್ಬಿಯೊಳಗೆ ಎಲ್ಲೆಡೆ ಹರಡಿಕೊಂಡಿದ್ದ ಮಂಕು ನೀಲಿ ಬೆಳಕಲ್ಲಿ, ಮಲಗಿದ್ದ ಜನರೆಲ್ಲ ಶವಗಳಂತೆ, ಇಡೀ ರೈಲು ಚಲಿಸುವ ಶವಾಗಾರದಂತೆ ಭಾಸವಾಗಿ ಇದ್ದಕ್ಕಿದ್ದಂತೆ ಗಾಬರಿಯಾಗಿದ್ದ. ಹೇಗ್ಹೇಗೋ ಮಲಗಿದ್ದ ಜನರು ಥೇಟ್‌ ಶವಗಳಂತೆ ಕಾಣುತ್ತಿದ್ದರು. ಕೆಲವರ ಕಾಲುಗಳು ಸೀಟ್‌ನಿಂದ ಹೊರಗೆ ಬಂದಿದ್ದು, ಚಲಿಸುವ ರೈಲಿನ ಲಯಕ್ಕನುಗುಣವಾಗಿ ಅಲುಗುತ್ತಿದ್ದವು. 

ಇಳಿದವ ಹಾಗೇ ಕಕ್ಕಾವಿಕ್ಕಿಯಾಗಿ ನಿಂತುಬಿಟ್ಟಿದ್ದ. ಕಾಣುತ್ತಿರುವುದು ಕನಸೋ ಅಥವಾ ವಾಸ್ತವವೋ ಅರಿಯದೇ ದಿಗ್ಭ್ರಮೆಗೊಂಡಿದ್ದ. ಮಂಪರು ತಿಳಿಯಾದಂತೆ ತಾನಿರುವುದು ರೈಲಿನಲ್ಲಿ ಎಂಬುದು ಅರಿವಾಗಿತ್ತು. ಸಧ್ಯ... ಎಂದುಕೊಳ್ಳುತ್ತ ಟಾಯ್ಲೆಟ್‌ಗೆ ಹೋಗಿ ವಾಪಸ್‌ ಬಂದು ಮತ್ತೆ ಬರ್ಥ್‌ ಏರಿದ. 

ನಿದ್ದೆ ಬರಲಿಲ್ಲ. 

ಚಲಿಸುವ ಶವಾಗಾರ ಎಂಬ ಕಲ್ಪನೆ ಕೂತುಬಿಟ್ಟಿತ್ತು. ಬಹುಶಃ ಇಡೀ ಡಬ್ಬಿಯಲ್ಲಿ ನಾನೊಬ್ಬನೇ ಎಚ್ಚರಿರಬಹುದು. ಈ ರೈಲು ಈಗ ಎತ್ತ ಹೋಗುತ್ತಿದೆಯೋ. ಒಂದು ವೇಳೆ ರೈಲು ಎಲ್ಲಿಯೋ ಒಂದೆಡೆ ನಿಂತು, ಮಲಗಿದ ಈ ಜನರೆಲ್ಲ ಶವವಾಗಿದ್ದರೆ, ಆಗ ಯಾರೂ ಇಳಿಯುವುದೇ ಇಲ್ಲವಲ್ಲ ಎಂದು ಕಲ್ಪಿಸಿಕೊಂಡ. ಖುಷ್ವಂತ್‌ ಸಿಂಗ್‌ ಬರೆದ ಟ್ರೇನ್‌ ಟು ಪಾಕಿಸ್ತಾನ ಕಾದಂಬರಿ ನೆನಪಾಯ್ತು. ಅದರಲ್ಲಿಯೂ ಹೀಗೇ ಆಗುತ್ತದೆ. ಇದ್ದದ್ದನ್ನೆಲ್ಲ ಹಿಂದೆ ಬಿಟ್ಟು ಹೊಸ ದೇಶಕ್ಕೆ ಗುಳೆ ಹೊರಟವರಿದ್ದ ರೈಲನ್ನು ಮಧ್ಯೆಯೇ ತಡೆದ ದುಷ್ಕರ್ಮಿಗಳು ಎಲ್ಲರನ್ನೂ ಸಾಯಿಸಿ ಶವಗಳಿದ್ದ ರೈಲನ್ನಷ್ಟೇ ಮುಂದೆ ಹೋಗಲು ಬಿಡುತ್ತಾರೆ. ನಿಲ್ದಾಣ ಬಂದರೂ ಯಾರೂ ಇಳಿಯುವುದಿಲ್ಲ.

ಏಕೋ ಈ ಕಲ್ಪನೆ ಕೆಟ್ಟದ್ದಾಯ್ತು ಎಂದು ಅನ್ನಿಸಿತು. 

ನಿದ್ದೆ ಬರುವುದಿಲ್ಲ ಎಂಬುದು ಖಾತರಿಯಾದಾಗ, ಸುಮ್ಮನೇ ಕಣ್ತೆರೆದುಕೊಂಡೇ ಮಲಗಿದ. ಯಾವ್ಯಾವ ಊರಿನ ಜನರೋ, ಎಲ್ಲೆಲ್ಲಿ ಹೊರಟಿದ್ದಾರೋ, ಏನೇನು ಕನಸು ಕಾಣುತ್ತಿದ್ದಾರೋ. ಇಂಥ ಸಾವಿರಾರು ಜನರನ್ನು ಪ್ರತಿ ದಿನ ಹೊತ್ತೊಯ್ಯುವ ರೈಲು ನಿಜಕ್ಕೂ ವಿಚಿತ್ರ ಅನಿಸಿತು. ನಿಲ್ದಾಣ ಬಂದಂತೆ, ಕೆಲವರು ಇಳಿಯುತ್ತಾರೆ; ಕೆಲವರು ಹತ್ತುತ್ತಾರೆ. ರೈಲು ಹೋಗುತ್ತಲೇ ಇರುತ್ತದೆ. ಇದೆಂದಿಗೂ ನಿಲ್ಲದ ಕ್ರಿಯೆ. ನಾನೂ ಒಂದು ಸ್ಟೇಶನ್‌ನಲ್ಲಿ ಇಳಿಯುತ್ತೇನೆ. ಅಲ್ಲಿಂದ ಮನೆಯತ್ತ ಹೊರಡುತ್ತೇನೆ. ಬಹುಶಃ ಎಲ್ಲರೂ ಹೀಗೇ ಮಾಡುತ್ತಾರೆ. ಎಲ್ಲರೂ ಮನೆ ಸೇರುವ ಕನಸಿನಲ್ಲೇ ನಿದ್ದೆ ಹೋಗಿದ್ದಾರೇನೋ ಅಂತ ಅಂದುಕೊಂಡ. 

ರೈಲು ಹಳಿ ಬದಲಿಸಿದ ಶಬ್ದವಾಯಿತು. 

ಯಾವುದೋ ಸ್ಟೇಶನ್‌ ಬರುತ್ತಿದೆ ಎಂದು ಮಲಗಿದ್ದವ ಎದ್ದು ಕೂತ. ಚಹ ಮಾರುವವನು ಬಂದರೆ ಒಂದು ಕಪ್‌ ತೆಗೆದುಕೊಳ್ಳಬೇಕು. ಹೇಗಿದ್ದರೂ ನಿದ್ದೆ ಬರುವುದಿಲ್ಲ. ಚಹ ಕುಡಿದು ಇನ್ನಷ್ಟು ಫ್ರೆಶ್‌ ಆಗಿ ಯೋಚಿಸಬಹುದು ಎಂದು ಉತ್ಸಾಹಗೊಂಡ. 

ರೈಲೇನೋ ನಿಂತಿತು. ಆದರೆ, ಅಪರಾತ್ರಿಯಲ್ಲಿ ಚಹ ಮಾರುವ ಒಬ್ಬನೂ ಕಾಣಲಿಲ್ಲ. ಅವನಂತೆ ನಿದ್ದೆಗೇಡಿಗಳಾಗಿದ್ದ ಅಲ್ಲೊಬ್ಬರು ಇಲ್ಲೊಬ್ಬರು ಇಳಿದು ದಿಕ್ಕೆಟ್ಟವರಂತೆ ಡಬ್ಬಿಯ ಹತ್ತಿರವೇ ನಿಂತಿದ್ದರು. ಯಾವುದೋ ಒಂದು ಸ್ಟೇಶನ್‌ ಅದು. ನೋಡಲು ದೊಡ್ಡದಾಗೇ ಇದ್ದರೂ ಜನ ಕಾಣಲಿಲ್ಲ. 

ಸಿಳ್ಳೆ ಹೊಡೆದು ಸೂಚನೆ ಕೂಡ ನೀಡದೇ ರೈಲು ನಿಧಾನವಾಗಿ ಚಲಿಸತೊಡಗಿದ್ದನ್ನು ಕಂಡು ಲಗುಬಗೆಯಿಂದ ಏರಿ ನಿಂತ. ಸ್ಟೇಶನ್‌ ದಾಟುವವರೆಗೂ ಬಾಗಿಲ ಹತ್ತಿರ ನಿಂತವ, ಮತ್ತೆ ಬೋಲ್ಟ್‌ ಬಿಗಿದು ತನ್ನ ಬರ್ಥ್‌ ಏರಿ ಮಲಗಿದ. ಮತ್ತೆ ರೈಲಿನ ಗಾನ ಶುರುವಾಯ್ತು. ಅದುವರೆಗೆ ಸ್ತಬ್ದವಾಗಿದ್ದ ಹೊರಚಾಚಿದ ಕಾಲುಗಳು ಮತ್ತೆ ಲಯಬದ್ಧವಾಗಿ ಅಲುಗತೊಡಗಿದವು.

*****

ಧಕ್ಕನೇ ಎಚ್ಚರವಾಯಿತು.

ಎಲ್ಲಿದ್ದೇನೆ ಎಂಬುದು ತಿಳಿಯಾಗಲು ಕೊಂಚ ಸಮಯವೇ ಬೇಕಾಯಿತು. ಮೈ ಬೆವೆತುಹೋಗಿತ್ತು. ಹೊರಗೆ ಮಳೆ ನಿಂತಿದ್ದರಿಂದ, ಕೋಣೆಯೊಳಗೆ ಒಂಥರಾ ಧಗೆ. ಹೊದ್ದುಕೊಂಡಿದ್ದ ರಗ್‌ ಒದ್ದಿದ್ದ ಮಗಳು, ಒಂದು ಕೈಯಿಂದ ಕತ್ತು ಬಳಸಿಕೊಂಡು ಮಲಗಿದ್ದಳು. 

ಓಹ್‌... ಎಂದುಕೊಂಡ. ತಿಳಿಯಾಗುತ್ತಿದ್ದ ಮನಸು ಆಗ ತಾನೆ ಕಂಡಿದ್ದ ಕನಸಿನ ವಿವರಗಳನ್ನು ಹೆಕ್ಕುತ್ತಿತ್ತು. ನಾನೀಗ ಮನೆಯಲ್ಲಿದ್ದೇನೆ. ಶವದ ರೈಲು ಕೇವಲ ಕನಸು ಎಂಬುದು ಮನವರಿಕೆಯಾದಾಗ ನೆಮ್ಮದಿ ಮೂಡಿತು. ಎದ್ದು ಫ್ಯಾನ್ ಹಾಕಿದ. ತಂಗಾಳಿ ಕೋಣೆ ಸುತ್ತತೊಡಗಿದಾಗ ನಿದ್ದೆ ಪೂರ್ತಿ ಹರಿದುಹೋಗಿ ಸುಮ್ಮನೇ ಕೂತ.

ಬದುಕು ಎಷ್ಟು ವಿಚಿತ್ರ. ನಿತ್ಯ ಒಂದಿಷ್ಟು ಕನಸುಗಳು ಬೀಳುತ್ತವೆ. ಕೆಲವೊಂದು ನನಸಾಗದೇ ಕಾಡುತ್ತವೆ. ಕೆಲವೊಂದು ಕನಸಾಗಿದ್ದರೂ ಕಾಡುತ್ತವೆ. 

ಮಗಳು ಮತ್ತೆ ಕನವರಿಸಿದಳು. ತಾನು ಪಕ್ಕದಲ್ಲೇ ಇದ್ದೇನೆ ಎಂಬುದನ್ನು ಆಕೆಗೆ ಮನವರಿಕೆ ಮಾಡಿಕೊಟ್ಟ ಆತ, ಮಗಳ ಕನಸು ಏನಿರಬಹುದು ಎಂದು ಯೋಚಿಸಿದ. 

ಸ್ವೆಟರ್‌ ನೆನಪಾಯ್ತು. 

‘ಆಯ್ತು ಪುಟ್ಟಾ, ನಾಳೆ ನಿನಗೆ ಖಂಡಿತ ಸ್ವೆಟರ್‌ ಕೊಡಿಸ್ತೀನಿ’ ಎಂದು ಗಟ್ಟಿಯಾಗಿ ಹೇಳಿದ. ಆತನ ಮಾತು ಕೇಳಿತೇನೋ ಎಂಬಂತೆ, ಮಲಗಿದ್ದ ಮಗು, ನಿದ್ದೆಯಲ್ಲೇ ಆತನ ಕೈಯನ್ನು ಬಿಗಿಯಾಗಿ ಹಿಡಿದುಕೊಂಡಿತು.

ಮನಸ್ಸು ತಿಳಿಯಾದಂತಾಗಿ ಮೆಲ್ಲಗೇ ಆತ ಒರಗಿಕೊಂಡ. ಏನೊಂದು ಪ್ರಯತ್ನವೂ ಇಲ್ಲದೇ ಕೆಲ ಹೊತ್ತಿನಲ್ಲೇ ಗಾಢ ನಿದ್ದೆ ಆವರಿಸಿತು. 

ಕನಸುಗಳೇ ಇಲ್ಲದ ಮಾಯಾ ನಿದ್ದೆ!

- ಚಾಮರಾಜ ಸವಡಿ 

ವಿಸ್ತಾರ ಜಗತ್ತಿನಲ್ಲಿ ವಸ್ತಾರೆ ಚೌಕಟ್ಟು...

30 May 2011

0 ಪ್ರತಿಕ್ರಿಯೆ

ನಾಗರಾಜ ವಸ್ತಾರೆ ಭಾನುವಾರದ ವಿಜಯ ಕರ್ನಾಟಕ ದಿನಪತ್ರಿಕೆಯ ಲವ್‌ಲವಿಕೆ ಪುರವಣಿಯಲ್ಲಿ ಬರೆದಿರುವ ಲೇಖನ ‘ಒಂದು ಮಿಡಿತ, ಒಂದು ಹೃದಯ...’ಕ್ಕೆ ನನ್ನ ವೈಯಕ್ತಿಕ ಪ್ರತಿಕ್ರಿಯೆ ಇದು.

ಇದನ್ನು ಲೇಖನ ಎನ್ನಲು ನನ್ನದೇ ಆದ ಆಕ್ಷೇಪಗಳಿವೆ. ಇದು ಲೇಖನವೋ, ವೈಯಕ್ತಿಕ ಅನಿಸಿಕೆಯೋ, ಪ್ರಬಂಧವೋ, ಅಥವಾ ಕತೆಯಾಗಲು ಹೊರಟ ವ್ಯಥೆಯೋ ಎನಿಸುತ್ತದೆ. ಅಂತ್ಯದಲ್ಲಿ ಲೇಖಕರು ಹೇಳಿರುವ ಎರಡು ಪ್ಯಾರಾದ ಸೂಕ್ಷ್ಮತೆಯನ್ನು ಇಡೀ ಲೇಖನದುದ್ದಕ್ಕೂ ಬಳಸಿದ್ದರೆ ಅದಕ್ಕೊಂದು ಮರ್ಯಾದೆಯ ಆಯಾಮವಾದರೂ ದಕ್ಕುತ್ತಿತ್ತು. ಆದರೆ ಹಾಗಾಗಿಲ್ಲ ಎಂಬುದೇ ಬೇಸರದ ಸಂಗತಿ. ಲವ್‌ಲವಿಕೆ ಎಂಬ ಮುದ್ದಾದ ಹೆಸರಿನ ಪುರವಣಿಗೆ ಈ ಬರಹ ತಕ್ಕುದಲ್ಲ ಎನಿಸುತ್ತದೆ.


 




ವಸ್ತಾರೆಯವರು ಹೇಳಹೊರಟಿದ್ದಾದರೂ ಏನು? ಅದೇ ಪುರವಣಿಯ ಮುಖ್ಯ ಲೇಖನವಾಗಿ ಪ್ರಕಟವಾದ ‘ಪತಿ, ಪತ್ನಿ ಮತ್ತು ಆಕೆ’ ಎಂಬ ಲೇಖನದ ಅಡಿ ಪ್ಯಾರಾದಂತೆ ಬಂದಿರುವ ಈ ಬರಹ, ಆ ಸ್ಥಾನಕ್ಕೂ ಯೋಗ್ಯವಲ್ಲ. ಮುಖ್ಯ ಲೇಖನಕ್ಕೆ ವ್ಯತಿರಿಕ್ತ ಎನಿಸುವಂತೆ ಭಾವನೆ ಹುಟ್ಟಿಸುವ ಬರಹ ಇದು. ಗಂಡು ಹೆಣ್ಣಿನ ಸಂಬಂಧ ಆಯಾ ಕಾಲಮಾನಕ್ಕೆ ತಕ್ಕಂತೆ ಬದಲಾಗುತ್ತ ಹೋಗುವಂಥದ್ದಾದರೂ, ಕೆಲ ಅಂಶಗಳು ಎಂದಿಗೂ ಬದಲಾಗದಂಥವು. ಆ ಅಂಶಗಳ ಬಗ್ಗೆ ವಸ್ತಾರೆ ಇನ್ನಷ್ಟು ನವಿರಾಗಿ, ಗೇಲಿ ಧ್ವನಿ ಇಲ್ಲದೇ ಹೇಳಬಹುದಿತ್ತು. ಮುಖ್ಯ ಲೇಖನದ ಧ್ವನಿ ನೋಡಿದರೆ, ಅದು ಅವಶ್ಯವೂ ಆಗಿತ್ತು. 

ಆದರೆ, ಅಂಥ ಸೂಕ್ಷ್ಮತೆಯೇನೂ ಇಲ್ಲದ ವಸ್ತಾರೆ ಬರಹ ಪೇಲವವಾಗಿ, ಗೇಲಿ ಮಾತಿನಲ್ಲೇ ಉಳಿದುಕೊಂಡಿದೆ. ವಸ್ತಾರೆಯವರಿಂದ ಇಂಥ ಬರಹವನ್ನು ಖಂಡಿತ ನಿರೀಕ್ಷಿಸಿರಲಿಲ್ಲ. 

ಸಂಬಂಧಗಳು ಅಷ್ಟು ಸುಲಭವಾಗಿ ವ್ಯಾಖ್ಯೆಯ ಚೌಕಟ್ಟಿಗೆ ಸಿಲುಕುವಂಥವಲ್ಲ. ಒಂದು ವೇಳೆ ಅವನ್ನು ಚೌಕಟ್ಟಿನೊಳಗೆ ಕಟ್ಟಿಹಾಕಲು ಹೊರಟರೆ, ಅವು ಸಂಬಂಧವಾಗಿ ಉಳಿಯುವುದಿಲ್ಲ. ಸಂಬಂಧ ಎಂಬುದು ವ್ಯಾಕರಣ ಅಲ್ಲ. ಅದು, ಬದುಕಿನಂಥದು. ಸದಾ ವಿಸ್ತರಿಸುವಂಥದು. ವಿಸ್ತರಿಸುತ್ತಿದ್ದರೂ, ಕೆಲ ಮೂಲ ಅಂಶಗಳನ್ನು ಕಾಪಾಡಿಕೊಂಡು ಬರುವಂಥದು. ದಟ್ಟ ಅರಣ್ಯದಂಥ ಸಂಕೀರ್ಣತೆ ಅದರದು. ಕೇವಲ ಗೇಲಿಯಂಥ ಭಾವನೆ ಇಟ್ಟುಕೊಂಡು ಸಂಬಂಧವನ್ನು ವಿಶ್ಲೇಷಿಸಲು ಹೊರಟರೆ ವಸ್ತಾರೆಯಂಥವರ ಬರಹಗಳೇ ಬರುತ್ತವೆ.

ಹೀಗಾಗಿ, ‘ಪತಿ, ಪತ್ನಿ ಮತ್ತು ಆಕೆ’ ಎಂಬುದು, ‘ಪತಿ, ಪತ್ನಿ ಮತ್ತು ಅವನು’ ಎಂದೂ ಆಗಬಹುದು. ಆದರೆ, ಇಂಥ ವಿಷಯಗಳಲ್ಲಿ ‘ಆಕೆ’ ಎಂಬ ಪದ ಕೊಡುವ ರೋಚಕತೆಯನ್ನು ‘ಅವನು’ ಎಂಬುದು ಕೊಡಲಾರದು ಎಂದು ತುಂಬ ಜನ ಭಾವಿಸಿರುವಂತಿದೆ. ಹೀಗಾಗಿ, ಇಂಥ ಬರಹಗಳು ಪದೆ ಪದೆ ‘ಆಕೆ’ಯ ಸುತ್ತಲೇ ಗಿರಕಿ ಹೊಡೆಯುತ್ತವೆಯೇ ಹೊರತು, ಅದರಾಚೆಗೆ ಇಣುಕಿ ನೋಡುವ ಕುತೂಹಲವನ್ನೂ ವಸ್ತಾರೆಯಂಥವರಲ್ಲಿ ಹುಟ್ಟಿಸುವುದಿಲ್ಲ.

ಪ್ರತಿಯೊಂದು ಭಾವನೆಗೂ, ಸಂಬಂಧಕ್ಕೂ, ಚೌಕಟ್ಟು ಹಾಕುವ ದೃಷ್ಟಿಕೋನ ಇರುವವರೆಗೆ ಇಂಥ ವಿಷಯಗಳ ಬರವಣಿಗೆಗೆ ಜೀವ ಬರುವುದಿಲ್ಲ. ಸಾಮಾನ್ಯ ಜನರ ಅಭಿಪ್ರಾಯಗಳನ್ನೇ ಹಸಿಹಸಿಯಾಗಿ ಹೇಳುವುದು ವರದಿಗಾರಿಕೆಯಾಗಬಹುದೇ ಹೊರತು ಖಂಡಿತ ಪುರವಣಿ ಬರಹವಾಗದು. ಸಂಬಂಧಗಳ ವಿಶ್ಲೇಷಣೆಗೆ ಮನಃಶಾಸ್ತ್ರಜ್ಞರೇ ಆಗಬೇಕಿಲ್ಲ. ನಾವು ಕಂಡುಂಡ ಬದುಕೇ ಅದಕ್ಕೆ ಸಾಕಷ್ಟು ಸಾಮಾಗ್ರಿಗಳನ್ನು ಒದಗಿಸಬಲ್ಲುದು. ದೊರಕಿದ ಅನುಭವ, ಮಾಹಿತಿಯನ್ನೇ ಅಚ್ಚುಕಟ್ಟಾಗಿ ಕಟ್ಟಿಕೊಟ್ಟರೆ ಉತ್ತಮ ಬರಹ ಖಂಡಿತ ದಕ್ಕುತ್ತದೆ. ಅಂಥದೊಂದು ಪ್ರಯತ್ನ ಮಾಡುವ ಮನಃಸ್ಥಿತಿ ವಸ್ತಾರೆಯವರ ಬರಹದಲ್ಲಿ ಕಾಣಲಿಲ್ಲ.

ಅದು ಕಾಣಬೇಕಿತ್ತು ಎಂಬುದು ನನ್ನಂಥವರ ಅನಿಸಿಕೆ. 

- ಚಾಮರಾಜ ಸವಡಿ

ಗುಳೆ ಹೋದವರ ಹಿಂದೆ ಹೊರಟಿದೆ ಮನಸು...

22 May 2011

4 ಪ್ರತಿಕ್ರಿಯೆ
(ಈ ಬರಹ ನವೆಂಬರ್‌ ೨೦೦೯ರಲ್ಲಿ ಬರೆದಿದ್ದು. http://chamarajsavadi.blogspot.com/2009/11/blog-post.html ಇದನ್ನು ಮತ್ತೊಮ್ಮೆ ನಿಮ್ಮ ಮುಂದೆ ತರಲು ಸಂಪಾದಕೀಯ ಬ್ಲಾಗ್‌ನ  ‘ಹಾನಗಲ್‌ ಪ್ರಭಾಕರನ ಪೂರ್ತಿ ವಿವರ, ಶಾಂತವ್ವಳ ನೋವಿನ ಕಥೆ...’ ಎಂಬ ಬರಹ ಕಾರಣ. http://sampadakeeya.blogspot.com/2011/05/blog-post_9662.html ಹೀಗಾಗಿ, ಈ ಬರಹವನ್ನು ಸಂಪಾದಕೀಯ ಬ್ಲಾಗ್‌ಗೆ ಅರ್ಪಿಸುತ್ತಿದ್ದೇನೆ...)

ಹಲವು ವರ್ಷಗಳ ಹಿ೦ದಿನ ಘಟನೆ.

ಆಗ ನಾನು ಬೆ೦ಗಳೂರಿನ ಎಲ್ಲಾ ನ೦ಟನ್ನು ಕಡಿದುಕೊ೦ಡು, ಇನ್ನು ಮು೦ದೆ ನಮ್ಮೂರಲ್ಲೇ ಏನಾದರೂ ಮಾಡಬೇಕೆ೦ದು ಕೊಪ್ಪಳಕ್ಕೆ ಬ೦ದು ಪೂರ್ಣಪ್ರಮಾಣದ ನಿರುದ್ಯೋಗಿಯಾಗಿದ್ದೆ. ನನ್ನ ಬ೦ಡವಾಳವೇನಿದ್ದರೂ ತಲೆಯಲ್ಲಿತ್ತೇ ಹೊರತು ಜೇಬಿನಲ್ಲಿರಲಿಲ್ಲ. ಸಹಜವಾಗಿ ಕೊಪ್ಪಳ ನನ್ನನ್ನು ತಿರಸ್ಕರಿಸಿತು. ಯಾರಾದರೂ ಸರಿ, ದುಡ್ಡಿಲ್ಲದಿದ್ದರೆ ಅವನು ತಿರಸ್ಕಾರಕ್ಕೇ ಯೋಗ್ಯ. ಜಗತ್ತಿಗೆ ಸುಲಭವಾಗಿ ಅರ್ಥವಾಗುವ ಭಾಷೆಗಳೆ೦ದರೆ ಎರಡೇ- ಒ೦ದು ಹಣ, ಇನ್ನೊ೦ದು ಬೆದರಿಕೆ. ನನ್ನ ಹತ್ತಿರ ಎರಡೂ ಇಲ್ಲದಿದ್ದರಿ೦ದ ಪತ್ರಿಕೆಯೊ೦ದನ್ನು ಪ್ರಾರ೦ಭಿಸಬೇಕೆನ್ನುವ ನನ್ನ ಆಸೆಗೆ ಯಾವ ಬೆ೦ಬಲವೂ ಸಿಗಲಿಲ್ಲ. ಯಾರಾದರೂ ಬ೦ಡವಾಳಶಾಹಿಗಳು ಮು೦ದೆ ಬ೦ದರೆ, ಅಚ್ಚುಕಟ್ಟಾದ ದಿನಪತ್ರಿಕೆಯೊ೦ದನ್ನು ರೂಪಿಸಿಕೊಟ್ಟೇನೆ೦ದು ನಾನು ಹ೦ಬಲಿಸುತ್ತಿದ್ದೆ. ಆದರೆ ದುಡ್ಡು ಹಾಕುವ ಹ೦ಬಲ ಮಾತ್ರ ಕೊಪ್ಪಳದ ಯಾವ ಬ೦ಡವಾಳಗಾರನಲ್ಲೂ ಇರಲಿಲ್ಲ. ಅ೦ಥವರ ಪರಿಚಯ ಕೂಡಾ ನನಗಿರಲಿಲ್ಲ. 

ಹಾಗಿದ್ದರೂ ನನ್ನಲ್ಲೊ೦ದು ಆತ್ಮವಿಶ್ವಾಸವಿತ್ತು. ಏನಾದರೂ ಮಾಡಿ ಕೊಪ್ಪಳದಲ್ಲಿ ಪತ್ರಿಕೆಯೊ೦ದನ್ನು ಹುಟ್ಟು ಹಾಕಬೇಕೆನ್ನುವ ತುಡಿತವಿತ್ತು. ಕಾಲ ಪಕ್ವವಾಗುವವರೆಗೆ ಏನಾದರೂ ಮಾಡಬೇಕಲ್ಲವೇ? ವಾಪಸ್ ಬೆ೦ಗಳೂರಿಗೆ ಹೋಗುವ ಮನಸ್ಸಿಲ್ಲದ್ದರಿ೦ದ ಕೊಪ್ಪಳದಲ್ಲೇ ಮಾಡುವ೦ಥ ಕೆಲಸವನ್ನು ಹಿಡಿಯಬೇಕಿತ್ತು. ಆಗ ಸಹಾಯಕ್ಕೆ ಬ೦ದಿದ್ದು ಟ್ಯೂಷನ್‌. 

ಗ್ರಾಮೀಣ ಪ್ರದೇಶದಲ್ಲಿ ಕಾಣಸಿಗುವಂತೆ ಕೊಪ್ಪಳದಲ್ಲಿಯೂ ಆಗ ಇ೦ಗ್ಲಿಷ್ ಟ್ಯೂಶನ್ ಕ್ರಾ೦ತಿ. ಯಾವ ಓಣಿಗೆ ಹೊಕ್ಕರೂ ಅಲ್ಲೊ೦ದು ಟ್ಯುಟೇರಿಯಲ್ಲು, ಯಾವ ನಿರುದ್ಯೋಗಿಯನ್ನು ನೋಡಿದರೂ ಆತನದೊ೦ದು ಟ್ಯೂಶನ್ ಬ್ಯಾಚ್ ಇರುತ್ತಿತ್ತು. ಆದರೆ, ಪರಿಚಿತರು ತೀರಾ ಕಡಿಮೆ ಸಂಖ್ಯೆಯಲ್ಲಿದ್ದ ನನ್ನ ಪಾಲಿಗೆ ವಿದ್ಯಾರ್ಥಿಗಳು ಸಿಗುವುದು ಸಾಧ್ಯವೇ ಇರಲಿಲ್ಲ.

ಹೀಗಾಗಿ ನಾನು ಕೊಪ್ಪಳದಿಂದ ೨೨ ಕಿಮೀ ದೂರದ ಯಲಬುರ್ಗಾ ತಾಲ್ಲೂಕಿನ ಮ೦ಗಳೂರಿಗೆ ಟ್ಯೂಶನ್ ಹೇಳಲು ಹೋಗುವುದು ಅನಿವಾರ್ಯವಾಯಿತು. ಸುಮಾರು ಎ೦ಟು ತಿ೦ಗಳುಗಳ ಕಾಲ ನಾನು ಅಲ್ಲಿದ್ದೆ. ಟ್ಯೂಶನ್ ಹೇಳುತ್ತಲೇ ಬೇರೆ ಬೇರೆ ಪತ್ರಿಕೆಗಳಿಗೆ ಲೇಖನ ಬರೆದೆ. ನನ್ನ ಬೆ೦ಗಳೂರಿನ ನೆನಪುಗಳ ಪೈಕಿ ಒ೦ದಷ್ಟನ್ನು ಬರೆದಿಟ್ಟುಕೊ೦ಡೆ. ಬೆ೦ಗಳೂರು ಅಷ್ಟೆಲ್ಲಾ ದಿನಗಳಲ್ಲಿ ನನಗೆ ಏನೆಲ್ಲವನ್ನೂ ಕಲಿಸಿತ್ತೋ, ಅಷ್ಟೇ ಪ್ರಮಾಣದ ಪಾಠವನ್ನು ಮ೦ಗಳೂರು ನನಗೆ ಎ೦ಟೇ ತಿ೦ಗಳುಗಳ ಕ್ಲುಪ್ತ ಅವಧಿಯಲ್ಲಿ ಕಲಿಸಿತ್ತು. 

ಆಗಾಗ ಇ೦ಥ ಅಜ್ಞಾತವಾಸಗಳಿಗೆ ಹೊರಟು ಹೋಗುವುದು ಒ೦ದರ್ಥದಲ್ಲಿ ಒಳ್ಳೆಯದೇ ಎ೦ದು ಈಗಲೂ ನಾನು ನಂಬುತ್ತೇನೆ. ಎಲ್ಲಾ ರೀತಿಯ ಒ೦ಟಿತನ ನಮ್ಮೊಳಗಿನ ಅಸಲಿ ವ್ಯಕ್ತಿತ್ವವನ್ನು ಹೊರ ಹಾಕುತ್ತದೆ. ಯಾರು ಒಳ್ಳೆಯವರು? ಕೆಟ್ಟವರು ಯಾರು? ನಮ್ಮೊಳಗಿನ ನಿಜವಾದ ಶಕ್ತಿ ಏನು? ದೌರ್ಬಲ್ಯಗಳು ಯಾವುವು? ನಮ್ಮ ವಲಯದ ಸಮಯಸಾಧಕರು ಯಾರು? ಅವರ ಕಾರ್ಯತ೦ತ್ರಗಳೆ೦ಥವು? ಮು೦ದಿನ ದಿನಗಳಲ್ಲಿ ನಾನು ಯಾರನ್ನು ನ೦ಬಬಹುದು? ಯಾರನ್ನು ಕೈ ಬಿಡಬೇಕು? ಯಾರನ್ನು ಪೂರ್ತಿಯಾಗಿ ದೂರವಿಡಬೇಕು? ಎ೦ಬ ವಿಷಯಗಳು ಆಜ್ಞಾತವಾಸದ ಅವಧಿಯಲ್ಲಿ ಚೆನ್ನಾಗಿ ಗೊತ್ತಾಗುತ್ತವೆ.

ಮ೦ಗಳೂರಿನ ಎ೦ಟು ತಿ೦ಗಳುಗಳ ಆವಧಿ ನನ್ನ ಅಂಥ ಅಜ್ಞಾತವಾಸಗಳ ಪೈಕಿ ಒ೦ದು.

ಆ ಸ೦ದರ್ಭದಲ್ಲಿ ನನ್ನ ಗೆಳೆಯರೆನಿಸಿಕೊ೦ಡವರಿ೦ದ, ಬ೦ಧುಗಳಿ೦ದ, ಹಿತೈಷಿಗಳಿ೦ದ ನಾನು ದೂರವಿದ್ದೆ. ಬೆ೦ಗಳೂರು ಬಿಟ್ಟು ಸಣ್ಣ ಹಳ್ಳಿಯಾದ ಮ೦ಗಳೂರಿಗೆ ಟ್ಯೂಶನ್ ಹೇಳಲು ಬ೦ದು ನಿ೦ತ ನನ್ನ ಬಗ್ಗೆ ಆಶಾದಾಯಕವಾಗಿ ಯೋಚಿಸುವ ವ್ಯಕ್ತಿಗಳ ಸ೦ಖ್ಯೆ ಆಗ ತು೦ಬಾ ಕಡಿಮೆಯಿತ್ತು.

ನನಗೂ ಬೇಕಾಗಿದ್ದೂ ಅದೇ.

ನನ್ನ ನಿಜವಾದ ಮಿತ್ರರು ಯಾರು? ಹಿತೈಷಿಗಳು ಎ೦ಥವರು? ಭವಿಷ್ಯದ ದಿನಗಳಲ್ಲಿ ನಾನು ಯಾರನ್ನು ನ೦ಬಬಹುದು? ಎ೦ಬುದನ್ನು ಅರಿಯಲು ಅಜ್ಞಾತವಾಸ ನನಗೆ ತು೦ಬಾ ಸಹಾಯ ಮಾಡಿತು. ಹಾಗೆ ನೋಡಿದರೆ ಪ್ರತಿಯೊ೦ದು ಆಜ್ಞಾತವಾಸವೂ ನನಗೆ ಒಳ್ಳೆಯ ಪಾಠ ಕಲಿಸಿದೆ. ಹೊಸ ಹೊಸ ಗೆಳೆಯರನ್ನು ತ೦ದು ಕೊಟ್ಟಿದೆ. ಯಾವ ರಿಸ್ಕುಗಳನ್ನು ತೆಗೆದುಕೊಳ್ಳಬಹುದು? ಅವನ್ನು ಎಷ್ಟರ ಮಟ್ಟಿಗೆ ತೆಗೆದುಕೊಳ್ಳಬಹುದು? ಎ೦ಬುದನ್ನು ತೀರ್ಮಾನಿಸಲು ಸಹಾಯ ಮಾಡಿದೆ. ಆದ್ದರಿ೦ದ ನಾನು ಇಂಥ ಅಜ್ಞಾತವಾಸಗಳನ್ನು ಇಷ್ಟಪಡುತ್ತೇನೆ. ಆ ಅವಧಿ ಎಷ್ಟೇ ವೇದನಾಪೂರ್ಣವಾಗಿದ್ದರೂ ಕೂಡ ಅದನ್ನು ಆನುಭವಿಸಲು ಸಿದ್ಧನಾಗುತ್ತೇನೆ. 

ಯಲಬುರ್ಗಾ ತಾಲ್ಲೂಕಿನ ಮ೦ಗಳೂರು ನನಗೆ ಗೆಳೆಯರನ್ನಷ್ಟೇ ಅಲ್ಲ, ಅನುಭವಗಳನ್ನು ಕೂಡಾ ದೊರಕಿಸಿಕೊಟ್ಟಿತು. ಆ ದಿನಗಳನ್ನು ನೆನಪಿಸಿಕೊ೦ಡರೆ ಇವತ್ತಿಗೂ ನಾನು ಮೌನವಾಗುತ್ತೇನೆ. ನನ್ನ ಅಹ೦ಕಾರ ತಾನಾಗಿ ಕಡಿಮೆಯಾಗುತ್ತದೆ. ಇದೆಲ್ಲಾ ನಶ್ವರ ಎ೦ಬ ವಿವೇಕ ಸುಲಭವಾಗಿ ಮೂಡುತ್ತದೆ. ಏಕೆ೦ದರೆ, ಮ೦ಗಳೂರಿನಲ್ಲಿ ನಾನು ನಿಜವಾದ ಬಡತನವನ್ನು ನೋಡಿದೆ. ಪ್ರತಿಯೊ೦ದು ವರ್ಷವೂ ಗುಳೆ ಹೋಗುವ ಕುಟು೦ಬಗಳನ್ನು ಅಲ್ಲಿ ಕ೦ಡೆ. ಸರಕಾರಗಳು ಏನೇ ಘೋಷಿಸಲಿ, ಜನಪ್ರತಿನಿಧಿಗಳು ಎಷ್ಟೇ ಬಡಾಯಿ ಕೊಚ್ಚಿಕೊಳ್ಳಲಿ, ಅಧಿಕಾರಿಗಳು ಅದೆಷ್ಟೇ ಅ೦ಕಿ ಅ೦ಶಗಳನ್ನು ನೀಡಿ ನ೦ಬಿಸಲು ಪ್ರಯತ್ನಿಸಲಿ. ಒ೦ದು ಮಾತ೦ತೂ ಸತ್ಯ- 

ನಮ್ಮ ಹಳ್ಳಿಗಳಲ್ಲಿ ತೀವ್ರವಾದ ಬಡತನವಿದೆ. ಒ೦ದೇ ಒ೦ದು ಬೆಳೆ ವಿಫಲವಾದರೂ ಸಾಕು - ಸಾವಿರಾರು ಕುಟು೦ಬಗಳು ಗುಳೆ ಹೋಗಬೇಕಾಗುತ್ತದೆ. 

ಅ೦ಥ ಒ೦ದಷ್ಟು ಕುಟು೦ಬಗಳನ್ನು, ಅವು ಗುಳೆ ಹೋದ ದುರ೦ತವನ್ನು ನಾನು ಮ೦ಗಳೂರಿನಲ್ಲಿ ಕಣ್ಣಾರೆ ಕ೦ಡೆ. ಇದೆಲ್ಲಾ ನನ್ನ ಗಮನಕ್ಕೆ ಬ೦ದಿದ್ದು ಕೂಡ ತೀರಾ ಆಕಸ್ಮಿಕವಾಗಿ. 

ಕಾಲೇಜು ಉಪನ್ಯಾಸಕರಾಗಿದ್ದ ಗೆಳೆಯ ರಾಜಶೇಖರ ಪಾಟೀಲ ಅವರ ರೂಮಿನಲ್ಲಿ ಇರುತ್ತಿದ್ದ ನಾನು ಟ್ಯೂಶನ್ ಕೂಡಾ ಅಲ್ಲಿಯೇ ನಡೆಸುತ್ತಿದ್ದೆ. ಒಬ್ಬ ಪಿಯುಸಿ ಹುಡುಗ ಆಗಾಗ ಟ್ಯೂಶನ್ ತಪ್ಪಿಸುವುದು ಒಮ್ಮೆ ನನ್ನ ಗಮನಕ್ಕೆ ಬ೦ದಿತು. ಅವನನ್ನು ಕರೆಸಿ ಕಾರಣ ವಿಚಾರಿಸಿದೆ. ಅವನಿ೦ದ ಸಮರ್ಪಕ ಉತ್ತರ ಬರಲಿಲ್ಲ. ಬೈದೆ. ಅವನು ದೂಸರಾ ಮಾತನಾಡದೇ ಬೈಸಿಕೊ೦ಡ. ಅವನು ಆಚೆ ಹೋದ ನ೦ತರ, ಗೆಳೆಯ ರಾಜಶೇಖರ ಪಾಟೀಲ ಜೊತೆ ಆ ಹುಡುಗ ಕ್ಲಾಸ್ ತಪ್ಪಿಸುವ ಬಗ್ಗೆ ಮಾತಾಡಿದೆ. ‘ಅವನ ಮನೆಯ ಆರ್ಥಿಕ ಸ್ಥಿತಿ ಚೆನ್ನಾಗಿಲ್ಲ ಎ೦ಬ ಕಾರಣಕ್ಕೆ ನಾನು ಟ್ಯೂಶನ್ ಫೀ ತೆಗೆದುಕೊಳ್ಳುತ್ತಿರಲಿಲ್ಲ. ಆದರೂ ಈ ಹುಡುಗ ಚೆನ್ನಾಗಿ ಓದುವುದನ್ನು ಬಿಟ್ಟು ಇದೇನು ನಡೆಸಿದ್ದಾನೆ ನೋಡಿ’ ಎ೦ದು ದೂರಿದೆ. 

ಒ೦ದು ಕ್ಷಣ ರಾಜಶೇಖರ ಪಾಟೀಲ್ ಮಾತಾಡಲಿಲ್ಲ. ನ೦ತರ ಉತ್ತರರೂಪವಾಗಿ ತಮ್ಮದೊ೦ದು ಅನುಭವ ಹೇಳಿದರು. 

ಆ ಹುಡುಗ ಹತ್ತನೆಯ ತರಗತಿಯಲ್ಲಿ ಓದುತ್ತಿದ್ದಾಗ ನಡೆದ ಘಟನೆಯಿದು. 

ಇಡೀ ತರಗತಿಯಲ್ಲಿ ಇವನೊಬ್ಬ ಮಾತ್ರ ಸರಿಯಾದ ಸಮಯಕ್ಕೆ ಫೀ ಕಟ್ಟುತ್ತಿರಲಿಲ್ಲ. ಸರಿಯಾಗಿ ತರಗತಿಗಳಿಗೂ ಬರುತ್ತಿರಲಿಲ್ಲ. ಕಾರಣ ಕೇಳಿದರೆ ಬಡತನದ ಬಗ್ಗೆ ಹೇಳುತ್ತಿದ್ದ. ಫೀಗಾಗಿ ಒತ್ತಾಯಿಸಿದರೆ ತರಗತಿಗಳಿಗೇ ಬರುತ್ತಿರಲಿಲ್ಲ ಹೀಗಾಗಿ ಅವನ ಬಗ್ಗೆ ಸಹೃದಯಿಗಳಿಗೆ ಅನುಕ೦ಪವಿದ್ದರೆ, ಇತರರಿಗೆ ತಿರಸ್ಕಾರವಿತ್ತು. ಕೊನೆಗೊ೦ದು ದಿನ ಎಸ್.ಎಸ್.ಎಲ್.ಸಿ. ಮುಗಿಯುವ ದಿನ ಬಂದಿತು. ಅವತ್ತು ಹತ್ತನೆಯ ತರಗತಿ ವಿದ್ಯಾರ್ಥಿಗಳಿಗೆ ಬೀಳ್ಕೊಡುವ ಸ೦ದರ್ಭ. ದಿನವಿಡೀ ಹಾಜರಿದ್ದ ಈ ಹುಡುಗ ಗ್ರೂಪ್‌ಫೋಟೋ ಸಮಯಕ್ಕೆ ಸರಿಯಾಗಿ ನಾಪತ್ತೆಯಾದ. ಎಲ್ಲಿ ಹುಡುಕಿದರೂ ಸಿಗಲಿಲ್ಲ. ಮನೆಗೇನಾದರೂ ಹೋಗಿದ್ದಾನೋ ನೋಡ್ರೋ ಎ೦ದು ಶಿಕ್ಷಕರು ಹುಡುಗರನ್ನು ಕಳಿಸಿಕೊಟ್ಟರು. ಅಲ್ಲಿ೦ದಲೂ ಇಲ್ಲ ಎ೦ಬ ಉತ್ತರ ಬ೦ದಿತು. ಎಲ್ಲಿಗೆ ಹೋದ? ಎ೦ದು ಎಲ್ಲರೂ ಕೋಪ ಹಾಗೂ ಬೇಸರದಿ೦ದ ಮಾತನಾಡುತ್ತಿರುವಾಗ ಈ ಹುಡುಗ ತೇಕುತ್ತಾ ಓಡಿ ಬ೦ದ. ಮುಖ ಬಾಡಿತ್ತು. ಎಲ್ಲರೂ ತನ್ನ ದಾರಿಯನ್ನೇ ಕಾಯುತ್ತಿದ್ದಾರೆ ಎ೦ಬುದು ಗೊತ್ತಾದಾಗಲ೦ತೂ ಅವನು ಅಪರಾಧಿ ಭಾವನೆಯಿ೦ದ ಕುಗ್ಗಿ ಹೋದ.

ರಾಜಶೇಖರ್ ಪಾಟೀಲ್ ಮೊದಲೇ ಮು೦ಗೋಪಿ. "ಲೇ, ಎಲ್ಲೋಗಿದ್ದೀ? ಎಲ್ಲರೂ ನಿನ್ನ ದಾರಿ ಕಾಯಬೇಕೇನೋ?" ಎ೦ದು ತರಾಟೆಗೆ ತೆಗೆದುಕೊ೦ಡರು. ಹುಡುಗನಿಗೆ ಏನು ಹೇಳಬೇಕೆ೦ಬುದೇ ತೋಚಲಿಲ್ಲ. ಸುಮ್ಮನೇ ನಿ೦ತ. ಇನ್ನಷ್ಟು ದಬಾಯಿಸಿದಾಗ ಸಣ್ಣ ಧ್ವನಿಯಲ್ಲಿ ಹೇಳಿದ. "ಬಸ್ ಸ್ಟ್ಯಾ೦ಡಿಗೆ ಹೋಗಿದ್ದೀನ್ರಿ ಸಾರ್. ನಮ್ಮವ್ವ ಮತ್ತು ತಮ್ಮ ಗುಳೆ ಹೊ೦ಟಿದ್ರೀ. ಅವ್ರು ಮತ್ತ ಯಾವಾಗ ಬರ್ತಾರೋ ಗೊತ್ತಿಲ್ಲ.... ಅದಕ್ಕ ಲೇಟಾತ್ರೀ...". 

ರಾಜಶೇಖರ್ ಮ೦ಕಾದರು. ಹುಡುಗ ಹೇಳಿದ ಕಾರಣ ಅವರ ಸಿಟ್ಟನ್ನು ತಣಿಸಿ ಅಪರಾಧಿ ಭಾವನೆಯನ್ನು ಮೂಡಿಸಿತ್ತು. ಮು೦ದೆ ಯಾವತ್ತೂ ಅವರು ಆ ಹುಡುಗನನ್ನು ಬೈಯಲು ಹೋಗಲಿಲ್ಲ. 

ಮೇಲಿನ ಘಟನೆಯನ್ನು ವಿವರಿಸಿದ ರಾಜಶೇಖರ, "ಅವನ ಮನೆ ಪರಿಸ್ಥಿತಿ ಸರಿ ಇಲ್ರೀ... ಅದಕ್ಕ ಅವ ಆಗಾಗ ಕೂಲಿ ಮಾಡಾಕ ಹೋಗಬೇಕಾಗುತ್ತ. ಇಲ್ಲಾ ಅ೦ದರೆ ಮನಿ ನಡ್ಯಾ೦ಗಿಲ್ಲ. ಬಹುಶ: ಟ್ಯೂಶನ್ ತಪ್ಪಿಸಿದ್ದು ಇದೇ ಕಾರಣಕ್ಕೆ ಇರಬೇಕು" ಎ೦ದು ಹೇಳಿದಾಗ ನನ್ನ ಮನಸ್ಸಿನಲ್ಲೂ ಅಪರಾಧಿ ಭಾವನೆ. 

ಮು೦ದೆ ನಾನು ಮ೦ಗಳೂರಿನಲ್ಲಿ ಬಡತನದ ಅನೇಕ ಮುಖಗಳನ್ನು ನೋಡಿದೆ. ಪ್ರತಿಭೆಗಳನ್ನು ಅದು ಎಳೆಯ ವಯಸ್ಸಿನಲ್ಲಿಯೇ ಹೇಗೆ ಹೊಸಕಿ ಹಾಕಿ ಬಿಡುತ್ತದೆ ಎ೦ಬುದನ್ನು ನೋಡಿದೆ. ರಾಜಕಾರಣಿಗಳು ಹಾಗೂ ಅಧಿಕಾರಿಗಳ ಅವಿವೇಕತನದ ಹೇಳಿಕೆಗಳು, ನಿಜವಾದ ಬರ, ನಿಜವಾದ ಬಡತನ, ನಮ್ಮ ಹಳ್ಳಿಗಳ ದುಃಸ್ಥಿತಿ, ಅದಕ್ಕೆ ಕಾರಣಗಳು, ಸಾಧ್ಯವಿರಬಹುದಾದ ಪರಿಹಾರಗಳು ಎಲ್ಲವೂ ನನಗೆ ಕ೦ಡು ಬ೦ದಿದ್ದು ಮ೦ಗಳೂರಿನ ಆಜ್ಞಾತವಾಸದಲ್ಲಿ!

ಮು೦ದೆ ಕೊಪ್ಪಳಕ್ಕೆ ಬ೦ದೆ. "ವಿಜಯ ಕರ್ನಾಟಕ" ದಿನಪತ್ರಿಕೆಯ ಜಿಲ್ಲಾ ವರದಿಗಾರನ ಕೆಲಸ ಸಿಕ್ಕಿತು. ಬದುಕು ಮತ್ತೆ ಒ೦ದು ಸುತ್ತು ಬ೦ದಿತು. ಆದರೆ ಮ೦ಗಳೂರಿನ ಕಟು ಅನುಭವಗಳನ್ನು ನಾನು ಮರೆಯಲಿಲ್ಲ. ಗ್ರಾಮೀಣ ಬದುಕಿನ ಸಾವಿರಾರು ಅ೦ಶಗಳು ನನ್ನನ್ನು ಮತ್ತೆ ಮತ್ತೆ ಕೆಣಕುತ್ತಿದ್ದವು. ಅವುಗಳ ಬಗ್ಗೆ ಅನೇಕ ವರದಿಗಳನ್ನು ಮಾಡಿದೆ. ಬೇರೆ ಬೇರೆ ಪತ್ರಿಕೆಗಳಿಗೆ ಲೇಖನ ಬರೆದೆ. ಸ್ವಲ್ಪ ಬುದ್ಧಿವ೦ತಿಕೆ ಹಾಗೂ ಸಾಕಷ್ಟು ಪರಿಶ್ರಮ ಇದ್ದರೆ ಹಳ್ಳಿಯ ಬದುಕು ಹೇಗೆ ಬದಲಾಗಬಹುದು ಎ೦ಬ ಬಗ್ಗೆ ಅನೇಕ ಲೇಖನಗಳು ಬ೦ದವು.


ಅದು ಬಿಡಿ. ಇವತ್ತಿಗೂ ಬೇಸಿಗೆ ದಿನಗಳಲ್ಲಿ ಊರ ಕಡೆ ಹೋಗಿ ನೋಡಿದರೆ, ಎಲ್ಲ ದಿಕ್ಕಿನಲ್ಲಿ ಗುಳೇ ಹೋಗುವ ಜನರ ಗು೦ಪುಗಳೇ ಕಾಣುತ್ತವೆ. ಇನ್ನಾರು ತಿ೦ಗಳು ಇವರಾರಿಗೂ ಹಬ್ಬವಿಲ್ಲ. ಜಾತ್ರೆಯಿಲ್ಲ. ಊರಿನ ಸುದ್ದಿಯಿಲ್ಲ. ಮತ್ತೊಂದು ಮುಂಗಾರು ಬಂದು, ಮುಗಿಲ ತು೦ಬ ಮೋಡಗಳು ತು೦ಬಿಕೊ೦ಡು ಮಳೆಯು ರಭಸವಾಗಿ ಅಪ್ಪಳಿಸಿ ಕಾಯ್ದ ನೆಲವನ್ನು ತಣಿಸುವವರೆಗೆ ಇವರು ವಾಪಸ್ ಬರುವುದಿಲ್ಲ. ದೂರದ ಅಪರಿಚಿತ ಊರುಗಳಲ್ಲಿ ರಸ್ತೆ ಹಾಕುತ್ತಾ, ಕಟ್ಟಡ ಕಟ್ಟುತ್ತಾ, ಅರ್ಧ ಕಟ್ಟಿದ ಕಟ್ಟಡಗಳ ಮೂಲೆಯಲ್ಲಿ ಮೂರು ಕಲ್ಲಿನ ಒಲೆ ಹೂಡಿ, ರೊಟ್ಟಿ ಬೇಯಿಸಿಕೊ೦ಡು ದಿನಗಳನ್ನು ತಳ್ಳುತ್ತಾರೆ. ಮುಂಚೆ ಅಂದುಕೊಳ್ಳುತ್ತಿದ್ದ, ‘ಬರ ಬರದಿರಲಿ ದೇವರೇ’ ಎಂಬ ಪ್ರಾರ್ಥನೆಯ ಜೊತೆಗೆ, ‘ಪ್ರವಾಹವೂ ಬಾರದಿರಲಿ ದೇವರೇ’ ಎಂದು ಬೇಡಿಕೊಳ್ಳುತ್ತಾರೆ. ಊರಲ್ಲಿ ಇದ್ದಿದ್ದರೆ ಇವತ್ತು ಜಾತ್ರೆ ನೋಡಬಹುದಿತ್ತು. ಉಗಾದಿ ಆಚರಿಸಬಹುದಿತ್ತು ಎ೦ದು ಕನಸು ಕಾಣುತ್ತಾರೆ. ಹಾಗೆ ಕನಸು ಕಾಣುತ್ತಲೇ ಯಾರೋ ಅಪರಿಚಿತನ ಕನಸಿನ ಮನೆ ಕಟ್ಟುತ್ತಾರೆ. ಮು೦ದಿನ ಆರು ತಿ೦ಗಳವರೆಗೆ ಇದೇ ಅವರ ಬದುಕು!

ಗುಳೆ ಹೋದವರನ್ನು ಯಾರು ನೆನಪಿಟ್ಟುಕೊಳ್ಳುತ್ತಾರೆ? ಎಂದಿನಂತೆ ಊರಿನಲ್ಲಿ ಹಬ್ಬ ಬರುತ್ತದೆ, ಜಾತ್ರೆ ಬರುತ್ತದೆ. ಎ೦ದಿನ೦ತೆ ನಾಟಕ ಬಯಲಾಟಗಳು, ಸಭೆ-ಸಮಾರ೦ಭಗಳು ಬರುತ್ತವೆ. ಬೇರೆ ಊರಿನಲ್ಲಿದ್ದು ನೌಕರಿ ಮಾಡುವ ಜನರೆಲ್ಲಾ ಅವತ್ತು ಊರಿಗೆ ಬರುತ್ತಾರೆ. ಅವರ ಸ೦ಬ೦ಧಿಕರು ಬರುತ್ತಾರೆ. ಅ೦ಗಡಿ ಮು೦ಗಟ್ಟುಗಳೆಲ್ಲ ಬರುತ್ತವೆ. ಆದರೆ ಗುಳೆ ಹೋದವರು ಮಾತ್ರ ಬರುವುದಿಲ್ಲ. ಯಾವ ಊರಿನ ಜಾತ್ರೆ ನೋಡಿದರೂ ನನಗೆ ಗುಳೆ ಹೋದ ಬಡವರ ನೆನಪೇ. ದೂರದ ಅಪರಿಚಿತ ಊರುಗಳಲ್ಲಿ ಅವರು ದುಡಿಯುತ್ತಿರುವ ಚಿತ್ರಗಳೇ ಕಣ್ಣ ಮು೦ದೆ, 

ಆಗೆಲ್ಲ ನನಗೆ, "ದೇಶ ಪ್ರಗತಿಯತ್ತ ಧಾವಿಸುತ್ತಿದೆ" ಎ೦ದು ಸರಕಾರ ನೀಡುವ ಸುಳ್ಳು ಜಾಹೀರಾತುಗಳು ನೆನಪಾಗುತ್ತವೆ. ಮಾಹಿತಿ ಹಾಗೂ ಸ೦ಪರ್ಕ ಕ್ರಾ೦ತಿ ಸಾಧ್ಯವಾಗಿರುವ ಈ ದಿನಗಳಲ್ಲಿ ಕೂಡಾ ಹಳ್ಳಿಯ ಜನರಿಗೆ ಹಳ್ಳಿಯಲ್ಲೇ ಕೆಲಸ ದೊರೆಯುವ೦ತೆ ಮಾಡಲು ಏಕೆ ಸಾಧ್ಯವಾಗುತ್ತಿಲ್ಲ? ಎ೦ಬ ಪ್ರಶ್ನೆ ಎದ್ದು ನಿಲ್ಲುತ್ತದೆ. 


ಆದರೆ ಉತ್ತರ ಮಾತ್ರ ಸಿಗುವುದಿಲ್ಲ. ಮನಸ್ಸು ಗುಳೆ ಹೋದವರ ಹಿ೦ದೆಯೇ ಗುಳೆ ಹೊರಡುತ್ತದೆ. ನರಳುತ್ತದೆ. ನಿಟ್ಟುಸಿರಿಡುತ್ತದೆ. 

ಏಕೆಂದರೆ, ನಾನೂ ಕೂಡ ಅವರ ಹಾಗೇ ಗುಳೆ ಬಂದವ! ಇವತ್ತಿಗೂ ವಾಪಸ್‌ ಊರಿಗೆ ಹೋಗುವ ಕನಸು ಕಾಣುತ್ತಿರುವವ. 

(ಅವತ್ತು ಟ್ಯೂಷನ್‌ ತಪ್ಪಿಸುತ್ತಿದ್ದ ಹುಡುಗ ಈಗ ಹೈಸ್ಕೂಲ್‌ ಟೀಚರಾಗಿದ್ದಾನೆ. ನೇಮಕಾತಿ ಪತ್ರ ಬಂದಾಗ ಎಲ್ಲೆಲ್ಲೋ ಹುಡುಕಿ ನನ್ನ ನಂಬರ್‌ ಪತ್ತೆ ಮಾಡಿ ಫೋನ್‌ ಮಾಡಿ ಸಂತಸ ಹಂಚಿಕೊಂಡಿದ್ದ. ಅವನ ಫೋನ್‌ ಬಂದ ಆ ದಿನಗಳಲ್ದಾಗಲೇ ನಾನು ಮತ್ತೆ ನಿರುದ್ಯೋಗಿಯಾಗಿದ್ದೆ. ನಾಲ್ವರ ಕುಟುಂಬದ ಜವಾಬ್ದಾರಿಯಿಂದ ಮಾನಸಿಕವಾಗಿ ಕುಗ್ಗಿಹೋಗಿದ್ದೆ. ಆದರೆ, ಅವನ ಫೋನ್‌ ನನ್ನನ್ನು ಮತ್ತೆ ಬಡಿದೆಬ್ಬಿಸಿತು. ನಾವು ಹಚ್ಚಿದ ದೀಪಗಳು ಎಲ್ಲೋ ಬೆಳಗುತ್ತಿವೆ ಎಂಬ ಖುಷಿ ಹೊಸ ಉತ್ಸಾಹ ತುಂಬಿತ್ತು. ಸಂಪಾದಕೀಯದ ಬರಹ ಮತ್ತೆ ಈ ನೆನಪನ್ನು ಉಕ್ಕಿಸಿದೆ. ಜೊತೆಗೆ ಖುಷಿಯನ್ನೂ... ಥ್ಯಾಂಕ್ಸ್‌ ಸಂಪಾದಕೀಯವೇ....)

- ಚಾಮರಾಜ ಸವಡಿ

ರಸ್ತೆ ನೆರಳಲ್ಲಿ ಮಲಗಿದ ಮಕ್ಕಳು ಮತ್ತು ನೆನಪುಗಳು...

9 May 2011

4 ಪ್ರತಿಕ್ರಿಯೆ
ನಾನು ಅಪ್ಪನಾಗಿ ಒಂಬತ್ತು ವರ್ಷಗಳಾದವು. ಅವತ್ತಿನಿಂದ ಅವ್ವ ಅಗಾಗ ತುಂಬ ನೆನಪಾಗುತ್ತಿರುತ್ತಾಳೆ.

ಆಗೆಲ್ಲ ಊರಿಗೆ ಫೋನ್ ಮಾಡುತ್ತೇನೆ. ಸುಮ್ಮನೇ ಹರಟುತ್ತೇನೆ. ಮಾತು ಬಾರದ, ಬಹುಶಃ ಎಂದಿಗೂ ಅರ್ಥಪೂರ್ಣವೆನಿಸುವ ರೀತಿ ಮಾತನಾಡಲು ಆಗದ ದೊಡ್ಡ ಮಗಳ ಕೈಗೆ ಫೋನ್ ಕೊಟ್ಟು, ಅವಳ ಕಿವಿಗೆ ಹಿಡಿಯುತ್ತೇನೆ. ಆ ಕಡೆಯಿಂದ ಅವ್ವನ ಧ್ವನಿ ಕೇಳುತ್ತಲೇ ಮಗಳು ಗೌರಿ ‘ಅಬುವಾ’ ಎಂದು ಕೂಗುತ್ತಾಳೆ. ಅವಳ ಭಾಷೆಯಲ್ಲಿ, ಅದಕ್ಕೆ ಅಜ್ಜಿ ಎಂಬರ್ಥ. ಅವ್ವ ಖುಷಿಯಾಗಿ, ನನ್ನ ಮಗಳಿಗಷ್ಟೇ ಅರ್ಥವಾಗುವ ರೀತಿ ಮಾತನಾಡುತ್ತಾ ಹೋಗುತ್ತಾಳೆ. ಈ ಕಡೆಯಿಂದ ಇವಳು, ಏಯ್, ಏಯ್, ಹ್ಹೂಂ ಎಂದೆಲ್ಲಾ ಕೂಗುತ್ತಿರುತ್ತಾಳೆ. 

ನಾನು ಮೂಕನಂತೆ ನೋಡುತ್ತಿರುತ್ತೇನೆ. ನನಗೆ ಇಬ್ಬರ ಭಾವನೆಗಳೂ ಅರ್ಥವಾಗುತ್ತವೆ. 

ಒಂದು ಹಂತದಲ್ಲಿ ಮಗಳು ಫೋನನ್ನು ನನ್ನ ಕೈಗಿತ್ತು ತನ್ನ ಜಗತ್ತಿಗೆ ಸರಿದುಹೋಗುತ್ತಾಳೆ. ಈಗ ತಾನೆ ಮೊದಲ ಬಾರಿ ಮನೆ ಬಿಟ್ಟು ಬಂದಿದ್ದೇನೋ ಎಂಬಂಥ ಕಾಳಜಿಯ ಮಾತುಗಳು ಆ ಕಡೆಯಿಂದ. ಊಟ ಆಯ್ತಾ? ಸರಿಯಾಗಿ ಊಟ ಮಾಡು. ಮಧ್ಯಾಹ್ನ ಏಕೆ ಊಟ ಬಿಟ್ಟಿದ್ದೀ? ವಯಸ್ಸಿನಲ್ಲಿ ಚೆನ್ನಾಗಿ ಉಣಬೇಕು. ಏನಪ್ಪಾ ನೀನು! ಓದೋವಾಗ ಸರಿಯಾಗಿ ಉಣ್ಣುವ ಯೋಗ ಇರಲಿಲ್ಲ. ಈಗ ಏಕೆ ಹೊಟ್ಟೆ ಕಟ್ಟುತ್ತೀ? ಎಂಬ ಥೇಟ್ ತಾಯಿಯ ಕರುಳು. ಕೆಲಸದ ಬಗ್ಗೆ, ನನ್ನ ನಿರಂತರ ಕೆಲಸ ಬದಲಿಸುವಿಕೆ ಬಗ್ಗೆ ಆಕೆಯ ಕಾಳಜಿ. ಹಿತ್ತಿಲಲ್ಲಿ ಬೆಳೆಸಿರುವ ಗಿಡಬಳ್ಳಿಗಳು, ಧಗೆಯುಕ್ಕಿಸುವ ಬೇಸಿಗೆ ಬಿಸಿಲು, ನೆಂಟರು, ಪರಿಚಯದವರ ಮದುವೆಗಳು, ಇಹಯಾತ್ರೆ ಮುಗಿಸಿದವರ ವಿವರಗಳು ರವಾನೆಯಾಗುತ್ತವೆ. ಸುಮ್ಮನೇ ಹೂಂಗುಟ್ಟುತ್ತ ಹೋಗುತ್ತೇನೆ. ಆಕೆ ಹೇಳುವ ಎಷ್ಟೋ ವಿವರಗಳು ನನ್ನ ಮನಸ್ಸಿಗೆ ಬಲು ಮಸುಕು.

ಏಕೆಂದರೆ, ೧೯೮೪ರಲ್ಲಿ ಹತ್ತನೇ ತರಗತಿ ಮುಗಿಸಿ ಊರು ಬಿಟ್ಟವ ಇನ್ನೂ ಅಲೆಮಾರಿಯಂತೆ ಸುತ್ತುತ್ತಲೇ ಇದ್ದೇನೆ. ಆಗ ನಮ್ಮೂರಲ್ಲಿ ಟಿವಿ ಕೂಡ ಬಂದಿರಲಿಲ್ಲ. ಫೋನು ಲಕ್ಷುರಿ. ೧೫ ಪೈಸೆಯ ಅಂಚೆ ಕಾರ್ಡ್ ಹಾಗೂ ಸದಾ ಕೆಟ್ಟ ಸುದ್ದಿಗಳನ್ನೇ ತರುತ್ತಿದ್ದ ಟೆಲಿಗ್ರಾಮ್ ಆಗ ಬಲು ಫೇಮಸ್! ಸಂಯುಕ್ತ ಕರ್ನಾಟಕ ಬೆಳಿಗ್ಗೆ ೧೦ಕ್ಕೆಲ್ಲಾ ಬಂದರೆ, ಪ್ರಜಾವಾಣಿ ಮರುದಿನ ಮಧ್ಯಾಹ್ನ ಬರುತ್ತಿತ್ತು. ಅಂಥ ಕಾಲದಲ್ಲಿ ಊರು ಬಿಟ್ಟವನಿಗೆ ಇಹಲೋಕದ ಯಾತ್ರೆ ಮುಗಿಸಿದವರ ಹಾಗೂ ಅವರ ಕರುಳುಬಳ್ಳಿಗಳ ಮುಖಗಳ ನೆನಪಾದರೂ ಹೇಗೆ ಉಳಿದೀತು?

ಅವ್ವನಿಗೆ ಫೋನಿಡುವ ಮನಸ್ಸಿರುವುದಿಲ್ಲ. ಅಷ್ಟೊತ್ತಿಗೆ ನನಗೆ ಸಣ್ಣಗೇ ಊರಿನ ಗೀಳು ಶುರುವಾಗಿರುತ್ತದೆ. ಒಂದಲ್ಲ ಒಂದಿನ ಈ ಜಂಜಡಗಳನ್ನೆಲ್ಲ ಕೈಬಿಟ್ಟು ವಾಪಸ್ ಊರಿಗೆ ಹೋಗಬೇಕೆನ್ನುವ ಆಸೆಯನ್ನು ಇವತ್ತಿಗೂ ಜೀವಂತವಾಗಿಟ್ಟುಕೊಂಡಿರುವುದರಿಂದ, ನನ್ನ ಬಾಲ್ಯ ಸಣ್ಣಗೇ ಕಾಡತೊಡಗುತ್ತದೆ. ಕನ್ನಡ ಬಿಟ್ಟು ಬೇರೆ ಯಾವ ಭಾಷೆಯೂ ಗೊತ್ತಿರದ, ಊರಿನಿಂದ ೬೦ ಕಿಮೀ ದೂರ ಓಡಾಡಿರದ ಅಪ್ಪಟ ೧೬ ವರ್ಷಗಳನ್ನು ಅಲ್ಲಿ ಕಳೆದಿದ್ದೇನೆ. ಸಕ್ಕರೆ, ಅಕ್ಕಿಯಂಥ ಇವತ್ತಿನ ಅತಿ ಸಾಮಾನ್ಯ ದಿನಸಿಯನ್ನು ಅತ್ಯಂತ ಉಳ್ಳವರು ಮಾತ್ರ ನಿತ್ಯ ಬಳಸುತ್ತಿದ್ದಂಥ ಕಾಲವದು. ಅಂಥದೊಂದು ಊರಿನ ನೆನಪು ಇವತ್ತಿಗೂ ನನ್ನ ನಿತ್ಯ ಕನಸುಗಳಲ್ಲಿ ಒಂದು 

ಅವ್ವನೊಂದಿಗೆ ಮಾತನಾಡಿ ಫೋನಿಟ್ಟ ನಂತರ ನಾನು ಕೊಂಚ ಮಂಕಾಗುತ್ತೇನೆ. ನನಗೆ ಅವ್ವನೆಂದರೆ ನನ್ನೂರು. ನನ್ನೂರೆಂದರೆ ನನ್ನ ಬಾಲ್ಯ. ನನ್ನ ಬಾಲ್ಯವೆಂದರೆ ನನ್ನ ಅಪಾರ ಏಕಾಂಗಿತನ ಹಾಗೂ ಅಪ್ಪಟ ಕನಸುಗಳು. ಹತ್ತನೇ ತರಗತಿ ಮುಗಿಸಿ ಊರು ಬಿಟ್ಟವ ಮುಂದೆ ಅರ್ಧ ದೇಶ ಸುತ್ತಾಡಿದೆ. ತರಹೇವಾರಿ ಕೆಲಸ ಮಾಡಿದೆ. ಬದುಕು ನಾನಾ ರೀತಿಯ ಪೆಟ್ಟುಗಳನ್ನು ಕೊಟ್ಟು ನನ್ನನ್ನು ತಿದ್ದಿತು. ಕೆಲವೊಂದು ಪೆಟ್ಟುಗಳನ್ನು ನಾನೇ ಕೊಟ್ಟುಕೊಂಡು ತಿದ್ದಿಕೊಂಡೆ. ಎಲ್ಲಾ ಪ್ರಯೋಗಗಳ ಫಲವಾಗಿ, ಪರವಾಗಿಲ್ಲ, ಈಗ ನೆಮ್ಮದಿಯಿಂದ ಉಸಿರಾಡಬಹುದು ಎಂಬ ದಿನಗಳು ಬಂದಾಗೆಲ್ಲ ನನ್ನೂರಿನ ನೆನಪು, ಅವ್ವನ ಪ್ರೀತಿ ನನ್ನನ್ನು ಮತ್ತೆ ಮತ್ತೆ ಕಾಡಿದೆ.

ಎಲ್ಲಕ್ಕಿಂತ ತೀವ್ರವಾಗಿ ಈ ನೆನಪುಗಳು ಉಕ್ಕತೊಡಗಿದ್ದುದು ನಾನು ತಂದೆಯಾದ ನಂತರದಿಂದ. ಮೊದಲ ಮಗಳು ವಿಶಿಷ್ಟಚೇತನೆಯಾಗಿದ್ದರಿಂದ, ಒಂಬತ್ತು ವರ್ಷಗಳಾಗಿದ್ದರೂ ಆಕೆ ನಮಗಿನ್ನೂ ಪುಟ್ಟ ಮಗುವೇ. ಅದೊಂದು ಮುಗಿಯದ ಬಾಲ್ಯ. ನಾವು ನಿತ್ಯ ನವ ತಂದೆತಾಯಿಗಳು. ಪ್ರತಿ ದಿನ ನನಗೆ ಅವ್ವ ನೆನಪಾಗುತ್ತಾಳೆ. ಆರು ಮಕ್ಕಳನ್ನು ಆ ಬಡತನದಲ್ಲಿ ಆಕೆ ಹೇಗೆ ಸಲಹಿದಳು ಎಂದು ನಿತ್ಯ ಅಚ್ಚರಿಪಡುತ್ತೇನೆ. ನಾನು ಮೊದಲ ಬಾರಿ ಕ್ಯಾಡಬರೀಸ್‌ನಂಥ ಚಾಕೊಲೇಟ್ ತಿಂದಿದ್ದೇ ಮೊದಲ ಮಗಳು ಹುಟ್ಟಿದ ನಂತರ ಎಂಬುದನ್ನು ನೆನೆದಾಗ, ಅವ್ವ ಮಾಡಿದ ತ್ಯಾಗ ನಿತ್ಯ ಕಣ್ಮುಂದೆ ಬರುತ್ತಲೇ ಇರುತ್ತದೆ. 

ತೀರಾ ಖಾಸಗಿ ಎನಿಸುವಂಥ ನೆನಪುಗಳವು. ಅಂಥ ಸಾವಿರ ಸಾವಿರ ನೋಟಗಳನ್ನು ನಾನು ಓಡಾಡಿದ ಊರುಗಳಲ್ಲೆಲ್ಲ ನೋಡಿದ್ದೇನೆ, ನೋಡುತ್ತಿದ್ದೇನೆ. ಸಣ್ಣ ನೆರಳಲ್ಲಿ ಎಳೆಮಕ್ಕಳನ್ನು ಮಲಗಿಸಿ ಕೆಲಸ ಮಾಡುವ ತಾಯಂದಿರ ನೋಟಗಳು ನನ್ನನ್ನು ಮಂಕಾಗಿಸುತ್ತವೆ. ಮಾಧ್ಯಮಿಕ ಶಾಲೆಯಲ್ಲಿ ಓದುತ್ತಿದ್ದಾಗ, ನನ್ನ ತಮ್ಮ ಮತ್ತು ತಂಗಿಯರನ್ನು ನಾನು ನೋಡಿಕೊಳ್ಳುತ್ತಿದ್ದ ದಿನಗಳು ಕಣ್ಮುಂದೆ ಬರುತ್ತವೆ. ಅವ್ವ ಹೊಲದಿಂದ ರಾತ್ರಿ ಹಿಂದಿರುಗುವವರೆಗೂ ಅವರ ಜವಾಬ್ದಾರಿ, ಮನೆ ಕಾಯುವ ಕೆಲಸ ನನ್ನ ಮೇಲಿತ್ತು. ದೂರದಲ್ಲಿದ್ದ, ನಿತ್ಯ ಬಾರದ ನಲ್ಲಿಯ ನೀರು ಸಿಕ್ಕದೇ, ಬಾವಿಯಿಂದ ನೀರು ಸೇದುವ; ವಿದ್ಯುತ್ತಿಲ್ಲದ ದೊಡ್ಡ ಮನೆಯಲ್ಲಿರಲು ಭಯಪಡುತ್ತಿದ್ದ ತಂಗಿ-ತಮ್ಮಂದಿರನ್ನು ಪುಟ್ಟ ಕಂದೀಲಿನ ಸುತ್ತ ಕೂಡಿಸಿ ಮಾತನಾಡುತ್ತಿದ್ದ ದಿನಗಳು ನೆನಪಾಗುತ್ತವೆ. ಅವ್ವ ಮನೆಗೆ ಬಂದ ನಂತರವೇ ಖುಷಿ ಉಕ್ಕುತ್ತಿತ್ತು. ಆನಂತರವಷ್ಟೇ ನಾನು ಪುಸ್ತಕ ತೆರೆಯುತ್ತಿದ್ದುದು. ಹಾಗೆ, ಆ ಕಂದೀಲಿನ ಮಂದ ಬೆಳಕಲ್ಲಿ ಓದಿದ ದಿನಗಳ ತೀವ್ರ ಖುಷಿಯೇ ಇವತ್ತಿಗೂ ನನ್ನನ್ನು ರಾತ್ರಿ ಎಚ್ಚರವಾಗಿಡುತ್ತದೆ. ನನ್ನ ಸಾವಿರ ಸಾವಿರ ನೆನಪುಗಳಿಗೆ ರಾತ್ರಿಯ ನೀರವತೆ, ಮಂದ ಬೆಳಕು, ನಿಶ್ಯಬ್ದ ಪುಟ ನೀಡುತ್ತವೆ.

ವಿಶ್ವ ಅಮ್ಮಂದಿರ ದಿನ ಎಂಬ ನೆಪದಲ್ಲಿ ಇವೆಲ್ಲವನ್ನೂ ಮತ್ತೆ ಮತ್ತೆ ನೆನಪಿಸಿಕೊಳ್ಳುತ್ತಿದ್ದೇನೆ. ದಿನಾಚರಣೆಗೂ ನೆನಪುಗಳಿಗೂ ಸಂಬಂಧವಿಲ್ಲ. ಅವು ನಿತ್ಯನೂತನ. ಅವು ಉಕ್ಕಲು ಇವೆಲ್ಲ ಕೇವಲ ನೆಪ ಮಾತ್ರ ಎಂಬುದು ಗೊತ್ತಿದ್ದರೂ, ಬೀದಿಯ ನೆರಳಿನಲ್ಲಿ ಮಕ್ಕಳನ್ನು ಮಲಗಿಸಿ, ಕೆಲಸ ಮಾಡುತ್ತಿರುವ ತಾಯಂದಿರನ್ನು ನೋಡಿದಾಗ, ಮನಸ್ಸು ಕರಗುತ್ತದೆ. ಆ ತಾಯಂದಿರು ನನ್ನ ಅವ್ವನನ್ನು ನೆನಪಿಸುತ್ತಾರೆ. ಬದುಕಿನ ಕಠೋರತೆ ನೆನಪಾಗುತ್ತದೆ. ಮನುಷ್ಯನ ಸಣ್ಣತನ, ಸ್ವಾರ್ಥ, ದ್ವೇಷ ನೆನಪಾಗುತ್ತವೆ. ಆ ಮಕ್ಕಳು ಬೀದಿಯಲ್ಲಿರಲು ಎಲ್ಲೋ ನಾವೂ ಕಾರಣಕರ್ತರೆಂಬ ಅಪರಾಧಿ ಭಾವನೆ ದಟ್ಟವಾಗುತ್ತದೆ. ಮೋಹದಲ್ಲಿ, ಸಿಂಗಾರದಲ್ಲಿ, ಅಬ್ಬರದ ಶಬ್ದ, ಕಣ್ಣು ಕೋರೈಸುವ ಬೆಳಕಿನ ಜಗತ್ತಿನಲ್ಲಿ ಇಂಥ ಭಾವನೆಗಳು ಪಳೆಯುಳಿಕೆಗಳಂತೆ ಕಾಣಬಹುದು. ಅವರವರು ಪಡೆದುಕೊಂಡು ಬಂದಿದ್ದು ಎಂಬ ಒಣಮಾತು ನೆನಪಾಗಬಹುದು. ಹೀಗಿದ್ದರೂ, ಈ ಮಕ್ಕಳು, ಈ ತಾಯಂದಿರು ನನಗೆ ನನ್ನೂರನ್ನು, ನನ್ನವ್ವನನ್ನು, ನನ್ನ ಬಾಲ್ಯವನ್ನು ಮತ್ತೆ ಮತ್ತೆ ನೆನಪಿಸುತ್ತಾರೆ. ಮಂಕಾಗಿಸುತ್ತಾರೆ.

ಈ ಎಲ್ಲಾ ಮಕ್ಕಳು ನಳನಳಿಸುತ್ತ ಬೆಳೆಯಲಿ. ದೊಡ್ಡವರಾಗಲಿ. ಮುಂದೊಂದು ದಿನ ತಮ್ಮ ಮಕ್ಕಳ ಕೈಯಿಂದ ದೂರದಲ್ಲೆಲ್ಲೋ ಇರುವ ತಮ್ಮ ತಾಯಂದಿರಿಗೆ ಫೋನ್ ಮಾಡಿಸಲಿ. ಹಳೆಯ ನೆನಪುಗಳನ್ನು ಕೆದಕಿಕೊಳ್ಳಲಿ. ಮತ್ತೆ ಊರಿಗೆ ಹೋಗುವ ಆಸೆಯನ್ನು ಜೀವಂತವಾಗಿಟ್ಟುಕೊಳ್ಳಲಿ. ನೆಮ್ಮದಿ ಎಂಬುದು ಎಲ್ಲರ ಹಕ್ಕು. ಮತ್ತು, ಅದನ್ನು ಪಡೆದುಕೊಳ್ಳುವುದು ನಮ್ಮ ಕರ್ತವ್ಯ ಕೂಡಾ ಎಂಬುದು ಅವರಿಗೆ ಮನದಟ್ಟಾಗಲಿ-

ಹಾಗಂತ ಆಶಿಸುತ್ತಾ, ಬರೆಯುತ್ತಾ ಮೌನವಾಗುತ್ತೇನೆ. ಮನಸ್ಸಿನ ತುಂಬ ಊರಿನ, ಅವ್ವನ, ಬಾಲ್ಯದ ನೆನಪು. 

- ಚಾಮರಾಜ ಸವಡಿ
(ಚಿತ್ರ ಕೃಪೆ: ಪ್ರಜಾವಾಣಿ, ಛಾಯಾಗ್ರಾಹಕ: ಶಿವಮೊಗ್ಗ ಯೋಗರಾಜ್‌)

ಬೃಹತ್‌ ಬ್ರಹ್ಮಾಂಡ ಎಂಬ ಬೊಗಳೆ!

22 Apr 2011

3 ಪ್ರತಿಕ್ರಿಯೆ
(ಝೀ ಕನ್ನಡ ವಾಹಿನಿ ನಡೆಸಿಕೊಡುವ ಬೃಹತ್‌ ಬ್ರಹ್ಮಾಂಡ ಎಂಬ ಬೊಗಳೆ ಕಾರ್ಯಕ್ರಮದ ವಿರುದ್ಧ ಸಂಪಾದಕೀಯ ಬ್ಲಾಗ್‌ http://sampadakeeya.blogspot.com/2011/04/blog-post_21.html#comments ಹಮ್ಮಿಕೊಂಡಿರುವ ಅಭಿಯಾನಕ್ಕೆ ನನ್ನ ವೈಯಕ್ತಿಕ ಬೆಂಬಲ ಈ ಪೋಸ್ಟ್. ಓದಿದವರು ಸಂಪಾದಕೀಯದ ಈ ಸಮಾಜಮುಖಿ ಕಾರ್ಯಕ್ರಮಕ್ಕೆ ಬೆಂಬಲ ಸೂಚಿಸಬೇಕೆಂದು ಮನವಿ ಮಾಡಿಕೊಳ್ಳುತ್ತಿದ್ದೇನೆ. ಸಂಪಾದಕೀಯದಲ್ಲಿ ಪ್ರಕಟವಾದ ಲೇಖನವನ್ನು, ಸಂಪಾದಕೀಯದ ಅನುಮತಿ ಕೋರುತ್ತ ಇಲ್ಲಿ ಯಥಾವತ್ತಾಗಿ ಪ್ರಕಟಿಸುತ್ತಿದ್ದೇನೆ. - ಚಾಮರಾಜ ಸವಡಿ)


ಜೀ ಕನ್ನಡ ವಾಹಿನಿ ಮುಖ್ಯಸ್ಥರಿಗೊಂದು ಬಹಿರಂಗ ಆಗ್ರಹ ಪತ್ರ

ಮಾನ್ಯರೆ, 
ಈ ಪತ್ರವನ್ನು ಅತ್ಯಂತ ನೋವು, ವಿಷಾದ, ಕಳವಳದಿಂದ ನಿಮಗೆ ಬರೆಯುತ್ತಿದ್ದೇವೆ. ಪತ್ರ ಓದಿದ ನಂತರವಾದರೂ ನೀವು ನಮ್ಮ ಭಾವನೆಗಳಿಗೆ ಸ್ಪಂದಿಸುತ್ತೀರೆಂಬ ನಂಬಿಕೆ ಇದೆ. ಲಕ್ಷ-ಕೋಟಿ ಜನರನ್ನು ತಲುಪುವ ಮೀಡಿಯಾಗಳು ಸಾಮಾಜಿಕ ಹೊಣೆಗಾರಿಕೆಯನ್ನು ನಿಭಾಯಿಸಬೇಕು. ಇದು ಕಾನೂನಿನ ಪರಿಭಾಷೆಗಳಿಗೆ ಮಾತ್ರ ಒಳಪಡುವ ವಿಷಯ ಎಂದು ಯಾರೂ ಭಾವಿಸಬೇಕಾಗಿಲ್ಲ, ಕಾನೂನನ್ನೂ ಮೀರಿದ ನೈತಿಕತೆ, ಮಾನವೀಯತೆಯ ಹೊಣೆಗಾರಿಕೆಯನ್ನೂ ಒಪ್ಪಿ ಅನುಸರಿಸಬೇಕಾಗುತ್ತದೆ. ತಾವು ಇಡೀ ಪತ್ರವನ್ನು ಓದಿ, ಸೂಕ್ತ, ಅತ್ಯಗತ್ಯ, ಸಕಾಲಿಕ ನಿರ್ಧಾರಕ್ಕೆ ಬರುವಿರೆಂಬ ನಂಬುಗೆ ನಮಗಿದೆ.


ನಮ್ಮ ತಕರಾರು, ಸಿಟ್ಟು, ಆತಂಕ ಇರುವುದು ನಿಮ್ಮ ವಾಹಿನಿಯಲ್ಲಿ ಪ್ರತಿನಿತ್ಯ ಬೆಳಿಗ್ಗೆ ೯ ಗಂಟೆಗೆ ಪ್ರಸಾರವಾಗುವ ಬೃಹತ್ ಬ್ರಹ್ಮಾಂಡ ಎಂಬ ಜ್ಯೋತಿಷ್ಯ ಸಂಬಂಧಿ ಕಾರ್ಯಕ್ರಮದ ಕುರಿತು. ಈ ಕಾರ್ಯಕ್ರಮವನ್ನು ನಡೆಸಿಕೊಡುವವರು ಶ್ರೀ ನರೇಂದ್ರ ಬಾಬು ಶರ್ಮ ಎಂಬುವವರು. ಇವರು ನಿಮ್ಮ ಚಾನಲ್‌ನಲ್ಲಿ ಕಾರ್ಯಕ್ರಮ ನಡೆಸಿಕೊಡುವುದಕ್ಕೆ ಮುನ್ನ ಸುವರ್ಣ ವಾಹಿನಿಯಲ್ಲಿ ಭವ್ಯ ಬ್ರಹ್ಮಾಂಡ ಎಂಬ ಹೆಸರಿನಲ್ಲಿ, ಅದಕ್ಕೂ ಮುನ್ನ ಕಸ್ತೂರಿ ವಾಹಿನಿಯಲ್ಲಿ ಬ್ರಹ್ಮಾಂಡ ಎಂಬ ಹೆಸರಿನಲ್ಲಿ ಇದೇ ಸ್ವರೂಪದ ಕಾರ್ಯಕ್ರಮಗಳನ್ನು ನಡೆಸಿಕೊಡುತ್ತಿದ್ದರು. ಬಹಳಷ್ಟು ಜನರಿಗೆ ಗೊತ್ತಿರುವ ಪ್ರಕಾರ ತೀರಾ ಇತ್ತೀಚಿನವರೆಗೆ ನರೇಂದ್ರ ಶರ್ಮ ಅವರು ಕನ್ನಡ ಸಿನಿಮಾಗಳಲ್ಲಿ ಜೂನಿಯರ್ ಆರ್ಟಿಸ್ಟ್ ಆಗಿದ್ದವರು.


ನರೇಂದ್ರ ಶರ್ಮ ಅವರು ಕಸ್ತೂರಿ ವಾಹಿನಿ ಹಾಗು ಸುವರ್ಣ ವಾಹಿನಿಗಳಲ್ಲಿ ಬ್ರಹ್ಮಾಂಡ ನಡೆಸುತ್ತಿದ್ದಾಗಲೇ ಅವರು ಬಳಸುವ ಭಾಷೆ, ಹೇಳುವ ಹಸಿಹಸಿ ಸುಳ್ಳುಗಳು ಮಾನವಂತರ, ಪ್ರಜ್ಞಾವಂತರ ಆಕ್ರೋಶಕ್ಕೆ ಕಾರಣವಾಗಿತ್ತು. ಮಹಿಳೆಯರನ್ನು ವಿನಾಕಾರಣ ನಿಂದಿಸುವುದು-ಅವಹೇಳನ ಮಾಡುವುದು, ಕೆಳಜಾತಿಯ ಜನರನ್ನು ಗುರಿಪಡಿಸಿ ತಿರಸ್ಕಾರದಿಂದ ಮಾತನಾಡಿ ಅಪಮಾನಿಸುವುದು, ಜ್ಯೋತಿಷ್ಯದ ಹೆಸರಿನಲ್ಲಿ ಸುಳ್ಳುಗಳ ಕಂತೆ ಕಟ್ಟಿ ಜನರನ್ನು ಬೆದರಿಸುವುದು ಇವರು ಹಿಂದಿನಿಂದ ಮಾಡಿಕೊಂಡು ಬಂದಿರುವ ಕೆಲಸ. ಅದನ್ನು ಅವರು ನಿಮ್ಮ ಜೀ ವಾಹಿನಿಯಲ್ಲೂ ಮಾಡುತ್ತಿದ್ದಾರೆ ಹಾಗು ಅದು ಈಗ ಅತಿರೇಕಕ್ಕೆ ತಲುಪಿದೆ.


ನಿಮ್ಮ ಜೀ ವಾಹಿನಿಯ ವೇದಿಕೆಯನ್ನು ಬಳಸಿಕೊಂಡು ನರೇಂದ್ರ ಶರ್ಮ ಏನೇನು ಮಾತನಾಡಿದ್ದಾರೆ ಎಂಬುದಕ್ಕೆ ಕೆಲವು ಸ್ಯಾಂಪಲ್‌ಗಳನ್ನು ಇಲ್ಲಿ ಒದಗಿಸುತ್ತಿದ್ದೇವೆ. ದಯವಿಟ್ಟು ಗಮನವಿಟ್ಟು ಓದಬೇಕಾಗಿ ವಿನಂತಿ.

೧. ನಾನು ಜಗನ್ಮಾತೆಯ ಪುತ್ರ. ಆಕೆ ಮೇ.೧೨ರಂದು ಭೂಮಿಗೆ ಬರುತ್ತಿದ್ದಾಳೆ. ಬಂದವಳು ಭೂಮಿಯನ್ನು ನಾಶಪಡಿಸುತ್ತಾಳೆ. ನಾನು ಇದನ್ನು ಘೋಷಿಸಿರುವುದರಿಂದ, ಜಗನ್ಮಾತೆ ನನ್ನ ಮಾತು ಉಳಿಸುವ ದೃಷ್ಟಿಯಿಂದಲಾದರೂ ಪ್ರಳಯ ನಡೆಸುತ್ತಾಳೆ.

೨. ಕರ್ನಾಟಕದ ಯಾವ ದೇವಸ್ಥಾನಗಳಲ್ಲೂ ದೇವರಿಲ್ಲ. ಕರ್ನಾಟಕದಲ್ಲಿ ಸಾಧು ಸಂತರು ಮಾತ್ರ ಇದ್ದಾರೆ. ದೇವರು ಇರುವುದೆಲ್ಲ ತಮಿಳುನಾಡಿನಲ್ಲಿ. ಅಲ್ಲಿನ ಧರ್ಮಕ್ಷೇತ್ರಗಳಲ್ಲಿ. ಹಾಗಾಗಿ ನಾನು ತಮಿಳುನಾಡಿನ ದೇವಸ್ಥಾನಗಳಿಗೆ ಹೋಗುವಂತೆ ಭಕ್ತರಿಗೆ ಹೇಳುತ್ತೇನೆ.

೩. ಹೆಣ್ಣು ಮಕ್ಕಳು ನೈಟಿ ತೊಡಬಾರದು. ಸಲ್ವಾರ್ ಕಮೀಜ್ ಹಾಕಿದರೆ ಗರ್ಭಕೋಶದ ಕ್ಯಾನ್ಸರ್ ಬರುತ್ತೆ. ರಾತ್ರಿ ಗಂಡನ ಜತೆ ಮಲಗಿ ಬೆಳಿಗ್ಗೆ ಎದ್ದ ಕೂಡಲೇ ಅಡುಗೆ ಮನೆಗೆ ಹೋಗಬಾರದು. ಹೆಣ್ಣು ಮಕ್ಕಳು ಮನೆಯಲ್ಲಿ ಇದ್ದರೆ ಲಕ್ಷಣ. ಅಗಲವಾದ ಬಿಂದಿ ಇಟ್ಟುಕೊಳ್ಳಬೇಕು. ಇಲ್ಲವಾದಲ್ಲಿ ಬೂಬಮ್ಮಗಳ ಹಾಗೆ ಕಾಣುತ್ತೀರಿ. (ಬೂಬಮ್ಮ ಎಂದರೆ ಮುಸ್ಲಿಂ ಹೆಂಗಸು)

೪. ಬೆಳಿಗ್ಗೆ ಎದ್ದ ಕೂಡಲೇ ಪೊರಕೆಯನ್ನು, ಹಜಾಮರ ಮುಖವನ್ನು ನೋಡಬಾರದು. ನೋಡಿದರೆ ಕೆಟ್ಟದಾಗುತ್ತದೆ.

೫. ಇಡೀ ಜಗತ್ತು ಮುಳುಗಿ ಹೋಗುತ್ತದೆ, ಬೆಳಗಾವಿಯ ಒಂದು ಹಳ್ಳಿ ಮಾತ್ರ ಉಳಿದುಕೊಳ್ಳುತ್ತದೆ. ಪಾಪಿಗಳು ಮಾಡಿದ ತಪ್ಪಿಗಾಗಿ ಪಾಪಿಗಳಲ್ಲದವರೂ ನಾಶವಾಗುತ್ತಾರೆ.

೬. ಹಾವು ಎಂದರೆ ದೇವರು. ಜಪಾನ್ ದೇಶದವರು ಹಾವು ತಿನ್ನುತ್ತಾರೆ, ಅದಕ್ಕೆ ಸುನಾಮಿ ಬಂದಿದ್ದು.

ಇವು ಕೆಲವು ಸ್ಯಾಂಪಲ್‌ಗಳು ಮಾತ್ರ. ಈತನ ಇನ್ನಷ್ಟು ಭಯಾನಕ ಉಪದೇಶಗಳ ಕುರಿತು ಈ ಹಿಂದೆ ಇದೇ ಬ್ಲಾಗ್ ನಲ್ಲಿ ಪ್ರಸ್ತಾಪಿಸಿದ್ದೇವೆ. ಒಮ್ಮೆ ಓದಿ ನೋಡಲು ವಿನಂತಿ.  ಈ ಬಗೆಯ ದುರ್ಬೋಧನೆಗಳನ್ನು ನೀಚಾತಿನೀಚರಷ್ಟೆ ಸಮರ್ಥಿಸಿಕೊಳ್ಳಬಹುದು. ಹೀಗಾಗಿ ನೀವು ಇವುಗಳನ್ನೆಲ್ಲ ಒಪ್ಪಲಾರಿರಿ ಎಂದು ನಮ್ಮ ನಂಬಿಕೆ. ನರೇಂದ್ರ ಶರ್ಮ ಬಳಸುವ ಭಾಷೆ ಎಷ್ಟು ಕೊಳಕಾಗಿದೆಯೆಂದರೆ ಆತ ಪದೇಪದೇ ಮುಂಡೇವು, ಮುಂಡೆ (ಗಂಡ ಸತ್ತ ಹೆಂಗಸು), ಕಳ್ ನನ್ ಮಕ್ಕಳು, ಗೂಬೆ, ಗುಗ್ಗು, ದರಿದ್ರದವು.. ಇತ್ಯಾದಿ ಪದಗಳನ್ನೇ ಬಳಸುತ್ತಾರೆ. ವೇದೋಪನಿಷತ್ತುಗಳನ್ನು ಓದಿದ ವ್ಯಕ್ತಿ ಇಷ್ಟು ಅಸಭ್ಯವಾದ ಭಾಷೆಯಲ್ಲಿ ಸಾರ್ವಜನಿಕವಾಗಿ ಮಾತನಾಡಲು ಸಾಧ್ಯವೇ?

ಕಪಟ ಜ್ಯೋತಿಷಿಗಳು ಹರಡುವ ಮೂಢನಂಬಿಕೆಗಳ ಕುರಿತು ಸ್ವಾಮಿ ವಿವೇಕಾನಂದರು ಹೀಗೆ ಹೇಳಿದ್ದರು:
 ಜ್ಯೋತಿಷ್ಯ ಮುಂತಾದುವನ್ನು ಹೇಳಿ ಉದರಪೋಷಣೆ ಮಾಡಿಕೊಳ್ಳುವವರ ಹತ್ತಿರ ಸಂಬಂಧವನ್ನು ಇಟ್ಟುಕೊಳ್ಳಕೂಡದು ಎನ್ನುವನು ಬುದ್ಧ. ಅವನಿಗೆ ಇದರ ರಹಸ್ಯ ಚೆನ್ನಾಗಿ ಗೊತ್ತಾಗಿರಬೇಕು. ತಾರೆಯೊಂದು ನನ್ನ ಜೀವನದ ಮೇಲೆ ತನ್ನ ಪ್ರಭಾವವನ್ನು ಬೀರಿ ವ್ಯಥೆಯನ್ನು ತಂದರೆ ನನ್ನ ಜೀವನ ಕುರುಡು ಕಾಸಿಗೂ ಯೋಗ್ಯವಲ್ಲ. ಜ್ಯೋತಿಷ್ಯ ಮುಂತಾದ ರಹಸ್ಯಗಳನ್ನೆಲ್ಲಾ ನೆಚ್ಚುವುದು ದೌರ್ಬಲ್ಯದ ಚಿಹ್ನೆ. ಈ ಸ್ವಭಾವ ನಿಮ್ಮ ಮನಸ್ಸಿನಲ್ಲಿ ಬಲವಾಗುತ್ತಿದ್ದರೆ ನೀವು ಒಬ್ಬ ವೈದ್ಯನನ್ನು ನೋಡಿ; ಒಳ್ಳೆಯ ಆಹಾರ ಮತ್ತು ವಿಶ್ರಾಂತಿಯನ್ನು ತೆಗೆದುಕೊಳ್ಳಿ..... ಜ್ಯೋತಿಷ್ಯ ಮುಂತಾದವುಗಳಲ್ಲೆಲ್ಲಾ ಸ್ವಲ್ಪ ಸತ್ಯಾಂಶವಿದ್ದರೂ ಅದನ್ನು ನಾವು ನಿರ್ಲಕ್ಷ್ಯದಿಂದ ನೋಡಬೇಕು..... ಮೂಢಭಾವನೆಗಳು ನಾಯಿಕೊಡೆಯಂತೆ ನಮ್ಮ ದೇಶದಲ್ಲಿ ಹಬ್ಬುತ್ತಿವೆ. ವಿಚಾರ ಮಾಡದ ಸ್ತ್ರೀಯರು ಇನ್ನೂ ಸ್ವಾತಂತ್ರ್ಯಕ್ಕೆ ಹೋರಾಡುತ್ತಿರುವರು. ಒಬ್ಬ ಹಣಕ್ಕಾಗಿ ಮತ್ತೊಬ್ಬರನ್ನು ಮೋಸ ಮಾಡಿದರೆ ಅವನನ್ನು ಮೋಸಗಾರ ಎನ್ನುವಿರಿ. ಇತರರನ್ನು ಅಧ್ಯಾತ್ಮಿಕ ದೃಷ್ಟಿಯಿಂದ ಪಾಪಿಗಳು ಎಂದು ಮೋಸಗೊಳಿಸುವವರು ಎಂತಹ ಪಾಪಿಗಳಿರಬೇಕು? ಇದು ಪರಮಪಾತಕ. ಸತ್ಯ ನಿಮ್ಮನ್ನು ಧೀರರನ್ನಾಗಿ ಮಾಡಬೇಕು; ಮೌಢ್ಯತೆಯಿಂದ ಪಾರಾಗುವಂತೆ ಮಾಡಬೇಕು. ಇದೇ ಸತ್ಯದ ಪರೀಕ್ಷೆ.... ಬೇಕಾದರೆ ತಾರೆಗಳನ್ನು ನಿಮ್ಮ ಬೊಗಸೆಯಿಂದ ಎತ್ತಿ ನುಂಗಿಹಾಕಬಹುದು. ನಿಮ್ಮ ನೈಜಸ್ವಭಾವ ಅಂತಹುದು. ಧೀರರಾಗಿ, ಎಲ್ಲಾ ವಿಧದ ಮೂಢನಂಬಿಕೆಗಳಿಂದ ಪಾರಾಗಿ, ಮುಕ್ತರಾಗಿ.
ಇವತ್ತು ನಿಮ್ಮ ಚಾನಲ್ ಮೂಲಕ ನರೇಂದ್ರ ಶರ್ಮ ಅವರು ಇಡೀ ಕರ್ನಾಟಕವನ್ನು ಮೌಢ್ಯದಲ್ಲಿ ಮುಳುಗಿಸಲು ಯತ್ನಿಸುತ್ತಿದ್ದಾರೆ. ಅಮೆರಿಕದ ಕೆಲವು ಸ್ವತಂತ್ರ ಕ್ರಿಶ್ಚಿಯನ್ ಗುಂಪುಗಳು ಹರಡುತ್ತಿರುವ ಪ್ರಳಯದ ಥಿಯರಿಗಳನ್ನೇ (http://www.coffetoday.com/the-doomsday-is-on-may-21-2011/907618/
http://www.allvoices.com/contributed-news/8599025-worlds-doomsday-fixed-for-6-pm-on-21st-may-2011)  ಕದ್ದು ತಂದು, ಅವುಗಳನ್ನು ಜಗನ್ಮಾತೆಯ ಹೆಸರಿನಲ್ಲಿ ಬದಲಾಯಿಸಿ, ಈ ವರ್ಷವೇ ಪ್ರಳಯವಾಗುತ್ತದೆ ಎಂದು ಭೀತಿ ಸೃಷ್ಟಿಸುತ್ತಿದ್ದಾರೆ. ಪ್ರಳಯವನ್ನು ತಪ್ಪಿಸಲು ಸಾಧ್ಯವಿರುವುದು ನನಗೆ ಮಾತ್ರ, ಹೀಗಾಗಿ ನಾನು ಹೇಳಿದಂತೆ ಕೇಳಿ ಎಂದು ಜನರನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಳ್ಳಲು ಯತ್ನಿಸುತ್ತಿದ್ದಾರೆ.

ಹಿಂದೆ ಕಸ್ತೂರಿ ವಾಹಿನಿಯಲ್ಲಿದ್ದಾಗ ಸಹ ಲೋಕ ಕಲ್ಯಾಣ, ಇತ್ಯಾದಿ ಬೊಗಳೆ  ಮಾತುಗಳನ್ನು ಹೇಳಿ ಅರಮನೆ ಮೈದಾನದಲ್ಲಿ ದೊಡ್ಡ ಯಾಗವೊಂದನ್ನು ನಡೆಸಿದ ನರೇಂದ್ರ ಶರ್ಮ ಅವರು ಇದಕ್ಕಾಗಿ ಕೋಟ್ಯಂತರ ರೂಪಾಯಿ ಹಣವನ್ನು ಮುಗ್ಧ, ಅಮಾಯಕ ಜನಸಾಮಾನ್ಯರಿಂದ ಪಡೆದಿದ್ದರು. ಎಷ್ಟು ಹಣ ಪಡೆದಿದ್ದೀರಿ, ಸ್ವಲ್ಪ ಲೆಕ್ಕ ಕೊಡಿ ಎಂದು ಪತ್ರಕರ್ತರು ಪತ್ರಿಕಾಗೋಷ್ಠಿಯೊಂದರಲ್ಲಿ ಕೇಳಿದಾಗ ನರೇಂದ್ರ ಶರ್ಮ ಗೋಷ್ಠಿಯನ್ನೇ ನಿಲ್ಲಿಸಿ ಹೊರಟುಹೋಗಿದ್ದರು. ನರೇಂದ್ರ ಶರ್ಮ ಅವರು ಸಾರ್ವಜನಿಕರ ದೇಣಿಗೆ ಪಡೆಯಲೆಂದೇ ಎರಡು ಟ್ರಸ್ಟ್‌ಗಳನ್ನು ರಚಿಸಿಕೊಂಡಿದ್ದಾರೆ. ಈ ಟ್ರಸ್ಟ್‌ಗಳಿಗೂ ನಿಮ್ಮ ಚಾನಲ್‌ಗಳಿಗೂ ಯಾವ ಸಂಬಂಧವಿರುವುದಿಲ್ಲ. ಪ್ರಚಾರಕ್ಕೆ ನಿಮ್ಮ ಚಾನಲ್‌ಗಳು, ಹಣ ವಸೂಲಿಗೆ ಪ್ರತ್ಯೇಕ ವ್ಯವಸ್ಥೆ ಕಲ್ಪಿಸುವ ಟ್ರಸ್ಟ್‌ಗಳು! ಈ ದುರ್ ವ್ಯವಹಾರ ನಿಲ್ಲಿಸಲು ನೀವು ಹೇಳಿದರೆ, ಅವರು ಚಾನಲ್ ಬದಲಾಯಿಸುತ್ತಾರೆ.  ಬ್ರಹ್ಮಾಂಡ, ಭವ್ಯ ಬ್ರಹ್ಮಾಂಡ, ಬೃಹತ್ ಬ್ರಹ್ಮಾಂಡ ಆಯಿತು, ಇನ್ನು ಸೂಪರ್ ಬ್ರಹ್ಮಾಂಡ ಸೃಷ್ಟಿಯಾಗಬಹುದು ಅಷ್ಟೆ.

ಇಂಥ ಕಾರ್ಯಕ್ರಮ ಬೇಕೆ ಎಂದು ನೀವು ಯೋಚಿಸಲೇಬೇಕಾದ ಸಮಯವಿದು. ನಿಜ, ಈ ಕಾರ್ಯಕ್ರಮದಿಂದ ನಿಮಗೆ ಟಿಆರ್‌ಪಿ ಹೆಚ್ಚಾಗಿರಬಹುದು. ಆದರೆ ಜನ ಹೆಚ್ಚು ನೋಡುತ್ತಾರೆ ಎಂಬ ಕಾರಣಕ್ಕೆ ಅದು ಶ್ರೇಷ್ಠವಾದ ಕಾರ್ಯಕ್ರಮ ಎಂದು ಭಾವಿಸುವುದು ಮೂರ್ಖತನ. ಬೀದಿಯಲ್ಲಿ ಒಬ್ಬ ಹುಚ್ಚ ವಿಚಿತ್ರವಾಗಿ ಮಾತನಾಡುತ್ತ, ಬಟ್ಟೆ ಬಿಚ್ಚಿಕೊಂಡು ಓಡಾಡುತ್ತಿದ್ದರೆ ಆತನನ್ನು ಎಲ್ಲರೂ ನೋಡುತ್ತಾರೆ. ಮಾಮೂಲಿಯಂತೆ ಓಡಾಡುವ ನಮ್ಮ, ನಿಮ್ಮನ್ನು ಯಾರೂ ಗಮನಿಸುವುದಿಲ್ಲ. ಎಲ್ಲರೂ ನೋಡುತ್ತಾರೆ ಅನ್ನುವ ಕಾರಣಕ್ಕೆ ಬೆತ್ತಲೆ ಹುಚ್ಚನನ್ನು ಪ್ರೋತ್ಸಾಹಿಸುವುದು ಸರಿಯೇ? ಬೆತ್ತಲೆ ಓಡಾಡುವ ಹುಚ್ಚನಿಗೆ ಬಟ್ಟೆ ಕೊಡಿಸಿ, ಯಾವುದಾದರೂ ಆಸ್ಪತ್ರೆಗೆ ಸೇರಿಸುವ ಕೆಲಸ ಮಾಡಬೇಕೇ ಹೊರತು, ಹುಚ್ಚನೇ ಶ್ರೇಷ್ಠ ಎಂದು ಭಾವಿಸಬೇಕಾಗಿಲ್ಲ. ಒಬ್ಬ ಹುಚ್ಚನನ್ನು ಸಹಿಸಿಕೊಂಡ ಪರಿಣಾಮ ಈಗ ಬೀದಿ ತುಂಬ ಹುಚ್ಚರು ಸೇರಿಬಿಡುತ್ತಾರೆ. ಆ ಅಪಾಯವನ್ನೂ ನಾವು ಎದುರಿಸುತ್ತಿದ್ದೇವೆ.

ಇದೆಲ್ಲವನ್ನೂ ಗಮನಿಸಿ ತಾವು ದಯಮಾಡಿ ನರೇಂದ್ರ ಶರ್ಮ ಅವರ ಬ್ರಹತ್ ಬ್ರಹ್ಮಾಂಡ ಕಾರ್ಯಕ್ರಮವನ್ನು ಈಗಿಂದೀಗಲೇ ಸ್ಥಗಿತಗೊಳಿಸಬೇಕು ಎಂದು ಆಗ್ರಹಿಸುತ್ತೇವೆ. ಈ ಕಾರ್ಯಕ್ರಮ ಅನೈತಿಕ, ಅಪ್ರಜಾಸತ್ತಾತ್ಮಕ, ಮಾನವ ವಿರೋಧಿಯಾಗಿದೆ.

ಇದನ್ನು ನಾವು ನಿಮ್ಮ ಬೇಡಿಕೆ ಎಂದು ಹೇಳುತ್ತಿಲ್ಲ, ಆಗ್ರಹ ಎಂದೇ ಹೇಳುತ್ತಿದ್ದೇವೆ. ಯಾಕೆಂದರೆ ಇದು ಕಾನೂನು ಪ್ರಕಾರವೂ ಅಪರಾಧ. ನೀವು ಹಾಗು ನರೇಂದ್ರ ಶರ್ಮ ಸರ್ಕಾರ ರಚಿಸಿರುವ ನಿಯಮಾವಳಿಗಳನ್ನು ಗಾಳಿಗೆ ತೂರಿರುವುದು ಸ್ಪಷ್ಟ.

ನಿಮಗೆ ಚೆನ್ನಾಗಿ ಗೊತ್ತಿದೆ. ಭಾರತ ಸರ್ಕಾರದ ವಾರ್ತಾ ಮತ್ತು ಪ್ರಸಾರ ಇಲಾಖೆ ಸಿದ್ಧಪಡಿಸಿರುವ ಮಾರ್ಗಸೂಚಿಗಳನ್ನು ನೀವು ತಪ್ಪದೇ ಪಾಲಿಸಬೇಕು. ಮಾರ್ಗಸೂಚಿಗಳನ್ನು ಅಲಕ್ಷ್ಯ ಮಾಡಿದ ಎಂಟಿವಿ, ಟಿವಿ೫ ಮುಂತಾದ ಚಾನಲ್‌ಗಳನ್ನು ಶಿಕ್ಷಿಸಲಾಗಿರುವ ಉದಾಹರಣೆಗಳೂ ನಮ್ಮ ಮುಂದಿವೆ. ಟಿವಿಗಳಲ್ಲಿ ಪ್ರಸಾರವಾಗುವ ಕಾರ್ಯಕ್ರಮಗಳು ಒಟ್ಟು ೧೩ ವಿವಿಧ ಕಾಯ್ದೆಗಳ ವ್ಯಾಪ್ತಿಗೆ ಒಳಪಡುತ್ತವೆ. ಹೀಗಾಗಿ ತಮಗೆ ಕಾನೂನಿನ ಹೊಣೆಗಾರಿಕೆಯೂ ಇದೆ. ಅವುಗಳನ್ನು ನಿಮಗೆ ನೆನಪಿಸಲು ಯತ್ನಿಸುತ್ತೇವೆ.

ಕಾಯ್ದೆಗಳು ಹೀಗಿವೆ.

1. Cable Television Network (Regulation) Act, 1995 and Certification Rules there under.
2. Drugs and Cosmetics Act, 1940.
3. Emblems and Names (Prevention of Improper Use) Act, 1950.
4. Drugs (Control) Act 1950.
5. Drugs and Magic Remedies (Objectionable Advertisements) Act, 1954.
6. Prevention of Food & Adulteration Act, 1954.
7. Prize Competitions Act, 1955.
8. Indecent Representation of Women (Prohibition) Act, 1986.
9. Trade and Merchandise Marks, Act 1999.
10. Copyright Act, 1957.
11. Cigarette and other Tobacco Products Act 2003.
12. Consumer Protection Act, 1986.
13. The Prevention of Cruelty to Animals Act, 1960

ಪ್ರಸಾರ ವೇಳೆ ಕಾನೂನು ಉಲ್ಲಂಘನೆಯನ್ನು ಮೂರು ಹಂತದಲ್ಲಿ ವಿಚಾರಣೆಗೆ ಒಳಪಡಿಸಬಹುದು. ಮೂರನೆ ಹಂತದಲ್ಲಿ ಸರಕಾರ ನೇಮಿಸಿದ ಸಮಿತಿ ಚಾನೆಲ್ ಮುಖ್ಯಸ್ಥ ತಪ್ಪಿತಸ್ಥ ಎಂದು ಕಂಡುಬಂದರೆ, ಪ್ರಸ್ತುತ ಕಾರ್ಯಕ್ರಮವನ್ನು ಪ್ರಸರಣ ಮಾಡದಂತೆ ನಿರ್ದೇಶಿಸಬಹುದು, ಕ್ಷಮಾಪಣೆಯನ್ನು ಬಿತ್ತರಿಸುವಂತೆ ಹೇಳಬಹುದು ಹಾಗೂ ದಂಡ ವಿದಿಸಬಹುದು. ಈ ಪ್ರಕ್ರಿಯೆಗೆ ದೂರು ದಾಖಲಿಸುವುದು ಮುಖ್ಯ.ಮಾರ್ಗಸೂಚಿ ಸ್ಪಷ್ಟ ಮಾತುಗಳಲ್ಲಿ ಕಾರ್ಯಕ್ರಮಗಳಲ್ಲಿ ಅವಹೇಳನಕಾರಿ ಭಾಷೆ, ಜಾತಿ ನಿಂದನೆ, ಮೂಢನಂಬಿಕೆ ವೈಭವೀಕರಣ ಹಾಗೂ ಜನರನ್ನು ದಿಕ್ಕುತಪ್ಪಿಸುವುದನ್ನು ಖಂಡಿಸುತ್ತದೆ.

ಕಂಟೆಂಟ್ ಸರ್ಟಿಫಿಕೇಷನ್ ನಿಯಮಾವಳಿ ೨೦೦೮ ಪ್ರಕಾರ ಯಾವುದೇ ನಿರ್ದಿಷ್ಟ ಜಾತಿ, ಕೋಮು ಅಥವಾ ನಂಬಿಕೆ ವಿರುದ್ಧ ಮಾತನಾಡುವುದು ಅಪರಾಧ. ಜೊತೆಗೆ ಯಾವುದೇ ಒಂದು ಆಚರಣೆಯನ್ನು ಶ್ರೇಷ್ಠ ಅಥವಾ ಕನಿಷ್ಟ ಎಂದು ಬಿಂಬಿಸುವಂತಿಲ್ಲ. ಹಾಗೆಯೇ ಲಿಂಗ ಅಸಮಾನತೆಯನ್ನು ಹೇಳುವಂತಿಲ್ಲ.

ನಿಮ್ಮ ಬೃಹತ್ ಬ್ರಹ್ಮಾಂಡ ಕಾರ್ಯಕ್ರಮ ಈ ಎಲ್ಲ ಕಾಯ್ದೆಗಳನ್ನು ಉಲ್ಲಂಘಿಸಿರುವುದು ಸ್ಪಷ್ಟ. ಈ ಕಾರ್ಯಕ್ರಮ ಸ್ತ್ರೀಯರನ್ನು ಕೆಟ್ಟದಾಗಿ ಚಿತ್ರಿಸುತ್ತದೆ. ಹಜಾಮರನ್ನು ನೋಡಬಾರದು ಎನ್ನುವ ಮೂಲಕ ಅಸ್ಪೃಶ್ಯತೆಯನ್ನು ಪ್ರಚಾರ ಮಾಡುತ್ತಿದೆ. ಜನರಲ್ಲಿ ಪ್ರಳಯದ ಭೀತಿಯನ್ನು ಸೃಷ್ಟಿಸುತ್ತಿದೆ. ಮಾಂಸಾಹಾರಿಗಳನ್ನು ಈತ ಕೀಳಾಗಿ ನಿಂದಿಸುವ ಮೂಲಕ ಜನಾಂಗೀಯ ನಿಂದನೆಯನ್ನು ಈ ಕಾರ್ಯಕ್ರಮ ಪೋಷಿಸುತ್ತಿದೆ.

ಭಾರತದ ಸಂವಿಧಾನವು ಜನರಲ್ಲಿ ವೈಜ್ಞಾನಿಕ ಮನೋಭಾವ ಹೆಚ್ಚಾಗಬೇಕು ಎನ್ನುತ್ತದೆ. ಆಧುನಿಕ ಕಾಲಘಟ್ಟದಲ್ಲಿ ನಾವು ಇನ್ನೂ ಕಂದಾಚಾರಗಳ ನರಕದಲ್ಲೇ ಕೊಳೆಯುತ್ತಿದ್ದೇವೆ. ಈ ಕೆಟ್ಟ ಬೆಳವಣಿಗೆಯನ್ನು ಟಿವಿ ಚಾನಲ್‌ಗಳು ನಿರಂತರವಾಗಿ ಪೋಷಿಸುತ್ತಿವೆ. ಈ ನಿಟ್ಟಿನಲ್ಲಿ ನಿಮ್ಮ ಚಾನಲ್ ಸೇರಿದಂತೆ ಎಲ್ಲ ಚಾನಲ್‌ಗಳು ಟಿಆರ್‌ಪಿ ಆಸೆಗೆ ಬಲಿಬೀಳದೆ ಕಾಲದ ಅಗತ್ಯಕ್ಕೆ ತಕ್ಕಂಥ, ಮನುಷ್ಯರನ್ನು ಎಲ್ಲ ಮೌಢ್ಯಗಳಿಂದ ಬಿಡುಗಡೆಗೊಳಿಸುವ ಕಾರ್ಯಕ್ರಮಗಳನ್ನು ಪ್ರಸಾರ ಮಾಡುವ ಅಗತ್ಯವಿದೆ.

ಈ ಕಾರ್ಯಕ್ರಮವನ್ನು ಕೂಡಲೇ ನಿಲ್ಲಿಸಬೇಕೆಂದು ಮತ್ತೊಮ್ಮೆ ಆಗ್ರಹಪಡಿಸುತ್ತೇವೆ. ಒಂದು ವೇಳೆ ನಿಲ್ಲಿಸದೇ ಹೋದಲ್ಲಿ ಸಂಬಂಧಪಟ್ಟ ಪ್ರಾಧಿಕಾರಗಳಿಗೆ ದೂರು ಸಲ್ಲಿಸುವುದೂ ಸೇರಿದಂತೆ, ಪ್ರಜಾಸತ್ತಾತ್ಮಕ ಹೋರಾಟಗಳನ್ನು ನಡೆಸಬೇಕಾಗುತ್ತದೆ ಎಂದು ತಿಳಿಸಲು ವಿಷಾದಿಸುತ್ತೇವೆ.

ಧನ್ಯವಾದಗಳು.

ಓದುಗರಿಗೊಂದು ಮನವಿ: ದಯಮಾಡಿ ಈ ಪತ್ರದ ಧಾಟಿಯ ಪತ್ರಗಳನ್ನು ಅಥವಾ ಇದೇ ಪತ್ರವನ್ನು ನಿಮ್ಮ ಐಡಿಗಳಿಂದ  ಈ feedbackzeekannada@zeenetwork.com  ಇಮೇಲ್ ಅಥವಾ ಜೀ ಕನ್ನಡ, ನಂ.೩೯, ಯುನೈಟೆಡ್ ಮ್ಯಾನ್ಷನ್, ಮೂರನೇ ಮಹಡಿ, ಮಹಾತ್ಮಗಾಂಧಿ ರಸ್ತೆ, ಬೆಂಗಳೂರು-೧ ಈ ವಿಳಾಸಕ್ಕೆ ಅಂಚೆ ಮೂಲಕ ಕಳುಹಿಸಬೇಕಾಗಿ ವಿನಂತಿ. ಸಾಧ್ಯವಾಗುವುದಾದರೆ ಈ ಅಭಿಯಾನವನ್ನು ಬೆಂಬಲಿಸುವ ಬ್ಲಾಗರ್‌ಗಳು ಈ ಪತ್ರವನ್ನು ಯಥಾವತ್ತಾಗಿ ತಮ್ಮ ಬ್ಲಾಗ್‌ಗಳಲ್ಲಿ ಪ್ರಕಟಿಸಬೇಕೆಂದು ಕೋರುತ್ತೇವೆ. ಹಾಗೆಯೇ ಇದನ್ನು ಫೇಸ್‌ಬುಕ್ ಹಾಗು ಇತರ ಸೋಷಿಯಲ್ ನೆಟ್‌ವರ್ಕ್‌ಗಳಲ್ಲಿ ಶೇರ್ ಮಾಡಲು ವಿನಂತಿಸುತ್ತೇವೆ.

ನಕ್ಷತ್ರಗಳಿಗೊಂದು ಮೊರೆ

16 Apr 2011

2 ಪ್ರತಿಕ್ರಿಯೆ
ಹೊರಗೆ ಸಣ್ಣಗೆ ಮಳೆ.
ಒಳಗೆ ದಟ್ಟೈಸಿದ ಕಾರ್ಮೋಡ. ಮಿಂಚಿಲ್ಲ, ಗುಡುಗಿಲ್ಲ. ಹನಿಯುತ್ತಿರುವ ಸೋನೆ ಮಳೆ ಬಿರುಮಳೆಯಾಗುವ ಸೂಚನೆಯೂ ಇಲ್ಲ.
ನನ್ನ ಹುಟ್ಟೂರು ಅಳವಂಡಿ ನೆನಪಾಗುತ್ತಿದೆ. 
ಯಾವುದೇ ಸಣ್ಣ ಖುಷಿಯಿರಲಿ, ನೋವಿರಲಿ, ವಂಚನೆ ಆಘಾತ ಕಳವಳ ಖಿನ್ನತೆ ಅಪರಾಧಿ ಭಾವನೆ- ಹೀಗೆ ಯಾವ ಭಾವ ಉಕ್ಕಿದರೂ ಜೊತೆಗೆ ಊರ ನೆನಪು ಉಕ್ಕುತ್ತದೆ. ಇವತ್ತೂ ಹಾಗೇ ಆಯಿತು. ಬಹುದಿನಗಳಿಂದ ರೂಢಿ ಮಾಡಿಕೊಂಡಿರುವ, ಇನ್ನೂ ಅನಾವರಣಗೊಳ್ಳಬೇಕಾಗಿರುವ ವೆಬ್‌ಸೈಟೊಂದಕ್ಕೆ ಎಂದಿನಂತೆ ದಿನದ ಸುದ್ದಿಗಳನ್ನು ಪೋಣಿಸುತ್ತಿದ್ದ ಹೊತ್ತಿನಲ್ಲಿ, ಸದ್ದಿಲ್ಲದೇ ಕರೆಂಟ್ ಮಾಯ. ನಾನಿದ್ದೇನೆ ಬಿಡು ಎಂಬಂತೆ ಯುಪಿಎಸ್ ವಿದ್ಯುತ್ ಬೆಳಗಿದರೂ ಹೊರಗೆ ಓಣಿಯಲ್ಲೆಲ್ಲ ಕವಿದ ಕತ್ತಲಲ್ಲಿ, ಲೈಟಿರುವ ನನ್ನ ಮನೆ ವಿಚಿತ್ರವಾಗಿ ಕಾಣುತ್ತಿದೆ. ಮನೆಯೊಳಗಿನ ಅನಗತ್ಯ ದೀಪಗಳನ್ನಾರಿಸಿ, ಮತ್ತೆ ನನ್ನ ಕೋಣೆಯಲ್ಲಿ ಬಂದು ಕೂತೆ. 
ಹೊರಗೆ ಬೆಳಕಿದ್ದರೂ ಒಳಗೆ ಕತ್ತಲು.
ನನ್ನ ಬಹುತೇಕ ಬದುಕು ಸಾಗಿ ಬಂದ ಪರಿಗೆ ಸಾಕ್ಷಿಯೆಂಬಂತೆ ಈ ವೈರುದ್ಧ್ಯ ರಾಚುತ್ತದೆ. ಹೊರಗೆ ಬೆಳಕಿದ್ದಾಗ ನನ್ನೊಳಗೆ ಕತ್ತಲು, ಒಳಗೆ ಬೆಳಕು ಅರಳಿ ನಿಂತ ಹೊತ್ತಿನಲ್ಲಿ ಹೊರಗೆ ಕತ್ತಲು ಕವಿದಿರುತ್ತದೆ. ಸ್ವಾನುಕಂಪವಲ್ಲ. ಹುಚ್ಚುತನವೂ ಅಲ್ಲ. ಎಷ್ಟೋ ಸಾರಿ ಈ ವೈರುದ್ಧ್ಯ ಕುರಿತು ಯೋಚಿಸಿದ್ದೇನೆ. ಪದೆ ಪದೆ ಏಕೆ ಹೀಗಾಗುತ್ತದೆ ಅಂತ ಅಚ್ಚರಿಪಟ್ಟಿದ್ದೇನೆ. ಬ್ಯಾಟಿಂಗ್ ಬರುವ ಹೊತ್ತಿಗೆ ಓವರ್‌ಗಳು ಮುಗಿದಂತೆ, ನಿರೀಕ್ಷಿಸಿದ್ದು ಬಂತೆಂಬ ಸಡಗರದಿಂದ ಎದ್ದು ನಿಲ್ಲುವ ಮುನ್ನವೇ ಅದು ಸದ್ದಿಲ್ಲದೇ ಇಲ್ಲವಾಗಿರುತ್ತದೆ.
ಹೊರಗೆ ಸಣ್ಣಗೆ ಮಳೆ.
ಸುದ್ದಿ ಜೋಡಿಸಿಯಾಯ್ತು. ದಿನದ ಮುಖ್ಯ ಘಟ್ಟವೊಂದು ಮುಗಿದ ನಿರಾಳತೆ. ಸಿದ್ಧಗೊಳ್ಳುತ್ತಿರುವ ವೆಬ್‌ಸೈಟ್‌ನಲ್ಲಿ ಈ ಸುದ್ದಿಗಳು ಹೇಗೆ ಕಾಣಬಹುದೆಂಬ ಬಸಿರಿ ತಾಯಿಯ ಕನಸೊಂದು ಎಂದಿನಂತೆ ಅರಳುತ್ತದೆ. ಕೆಲ ಕ್ಷಣ ಆ ನಿರಾಳತೆಯಲ್ಲಿ ಮನಸಾರೆ ಮುಳುಗುತ್ತೇನೆ. 
ಆದರೆ, ಅದು ಕೆಲ ಕ್ಷಣಗಳ ಕಾಲ ಮಾತ್ರ.
ಸಣ್ಣಗೇ ಉಕ್ಕತೊಡಗುವ ಖಿನ್ನತೆ ಊರಿನ ನೆನಪುಗಳನ್ನು ಹೊತ್ತು ತರುತ್ತದೆ. ನನ್ನೂರಿನ ಮಣ್ಣಿನ ಮಾಳಿಗೆಯ ಮೇಲೆ, ನೆಲದ ಮೇಲೆ ಏನನ್ನೂ ಹಾಸದೇ, ಹಾಗೇ ಮಲಗಿ, ಕಣ್ಣು ಕೋರೈಸುವ ನಕ್ಷತ್ರಗಳನ್ನು ದಿಟ್ಟಿಸುತ್ತಿದ್ದ ದಿನಗಳು ನೆನಪಾಗುತ್ತವೆ. ನನ್ನೊಳಗಿರುವ ಕನಸುಗಳಿಗೆ ಶಕ್ತಿ ಕೊಟ್ಟ ದಿವ್ಯ ದೇವತೆಗಳವು. ಸವಾಲುಗಳನ್ನು ಎದುರಿಸುವ ಕೆಚ್ಚು ತುಂಬಿದ ಕಿಡಿಗಳವು. ಇವತ್ತೇಕೋ ಹನಿಯುತ್ತಿರುವ ಮಳೆಯ ನಡುವೆ, ಉಕ್ಕತೊಡಗಿರುವ ಖಿನ್ನತೆಯ ಮಧ್ಯೆ, ನನ್ನೂರಿನ ದಿವ್ಯ ಆಗಸದ ಆ ನಕ್ಷತ್ರಕಿಡಿಗಳು ಮತ್ತೆ ಮತ್ತೆ ನೆನಪಾಗತೊಡಗಿವೆ.
ಕೆಲಸ ಮುಗಿದಿದ್ದರಿಂದ, ಯುಪಿಎಸ್ ಏಕೆ ದಣಿಸಬೇಕೆಂದು ಲೈಟಾರಿಸಿ ಕತ್ತಲಲ್ಲಿ ಸುಮ್ಮನೇ ಕೂಡುತ್ತೇನೆ. ಊರ ಮುಗಿಲಿನೊಳಗೆ ಅರಳಿ ನಿಲ್ಲುತ್ತಿದ್ದ ನಕ್ಷತ್ರಗಳು ಛಾವಣಿಯಲ್ಲಿ ಕಂಡಾವೇನೋ ಎಂಬ ವಿಚಿತ್ರ ಆಸೆ. ಆದರೆ, ಬೆಂಗಳೂರಿನ ಬಯಲಲ್ಲಿ ನಿಂತರೂ ಬೆಳಕಿನ ಮೋಡದ ಮಧ್ಯೆ ಮಂಕಾಗುವ ನಕ್ಷತ್ರಗಳು, ಲೈಟಾರಿಸಿದ ಛಾವಣಿಯಲ್ಲಿ ಕಂಡಾವಾದರೂ ಹೇಗೆ? ಮತ್ತದೇ ಕತ್ತಲು, ಏಕಾಂತ, ಖಿನ್ನತೆ. 
ಒಂದು ಸ್ನಿಗ್ಧ ಪ್ರೀತಿಗಾಗಿ ಹಂಬಲಿಸುತ್ತಿದ್ದ ದಿನಗಳು ನೆನಪಾಗುತ್ತಿವೆ. ಓದಲು ಪಠ್ಯಪುಸ್ತಕ ಬಿಟ್ಟು ಬೇರೊಂದು ಸಿಗದ ವಾತಾವರಣದಲ್ಲಿ ಪುಕ್ಕಟೆ ಕನಸುಗಳನ್ನು ಕಾಣುವುದು ಬಿಟ್ಟು ಬೇರೆ ದಾರಿ ಇದ್ದಿಲ್ಲ. ರಜಾ ದಿನಗಳು ಬಂದಾಗ, ಪಠ್ಯಪುಸ್ತಕಗಳ ಓದೂ ಇಲ್ಲವಾಗುತ್ತಿತ್ತು. ನನ್ನ ಮುಂದಿನ ತರಗತಿಯ ಕನ್ನಡ ವಿಷಯದ ಪುಸ್ತಕವನ್ನು ಅದ್ಹೇಗೋ ಹೊಂಚಿಕೊಂಡು ಒಂದೇ ದಿನದಲ್ಲಿ ಓದಿ ಮುಗಿಸುತ್ತಿದ್ದೆ. ನಂತರ ಬಿರು ಬಿಸಿಲು, ಕಡು ಸೆಕೆ ಮತ್ತು ಕನಸುಗಳೊಳಗೆ ಬದುಕು ಮುಳುಗಿಹೋಗುತ್ತಿತ್ತು. ಮನೆಯಲ್ಲಿ ನಡೆಯುತ್ತಿದ್ದ ಹಪ್ಪಳ-ಸಂಡಿಗೆ-ಉಪ್ಪಿನಕಾಯಿ-ಶ್ಯಾವಿಗೆ ತಯಾರಿಯ ಸಡಗರದಲ್ಲಿ ಅರೆಮನಸ್ಸಿನಿಂದ ತೊಡಗಿಕೊಂಡ ಮನಸ್ಸು ಸಂಜೆಯಾಗುವುದನ್ನೇ ಕಾಯುತ್ತಿತ್ತು.
ಸಾಮಾನ್ಯವಾಗಿ ಕರೆಂಟಿಲ್ಲದಿರುತ್ತಿದ್ದ ರಾತ್ರಿಗಳಲ್ಲಿ ಮಾಳಿಗೆ ಮೇಲೆ ಹೋಗಿ ಅಂಗಾತ ಮಲಗಿಕೊಂಡು ನಕ್ಷತ್ರಗಳನ್ನು ದಿಟ್ಟಿಸುತ್ತಿದ್ದೆ. ಸಾವಿರಾರು ಕನಸುಗಳನ್ನು ಆ ನಕ್ಷತ್ರಗಳು ನನ್ನೊಳಗೆ ತುಂಬಿವೆ. ಅವುಗಳೊಂದಿಗೆ ಸುದೀರ್ಘ ಮೌನ ಸಂಭಾಷಣೆ ನಡೆಸಿದ್ದೇನೆ. ಪ್ರಶ್ನೆಗಳನ್ನು ಕೇಳಿ ಉತ್ತರ ಪಡೆದುಕೊಂಡಿದ್ದೇನೆ. ನನ್ನ ನಿರಾಶೆಗಳನ್ನು ಅವು ಸಂತೈಸಿವೆ. ನೋವನ್ನು ಸಹನೀಯವಾಗಿಸಿವೆ. ಮೌನ ಸಾಂಗತ್ಯದಲ್ಲೂ ಪರಮಶಕ್ತಿಯಿದೆ ಎಂಬುದನ್ನು ಮೌನವಾಗಿಯೇ ನನ್ನೊಳಗೆ ತುಂಬಿವೆ. ನಕ್ಷತ್ರಗಳ ಲೋಕದೊಳಗಿನ ಆ ಪಯಣ ಇವತ್ತಿಗೂ ನನ್ನ ಅತ್ಯಂತ ಸ್ಮರಣೀಯ ನೆನಪುಗಳಲ್ಲಿ ಒಂದು.
‘ಕತ್ತಲ್ದಾಗ ಒಬ್ನ ಕೂತು ಏನ್ ಮಾಡ್ತೀ?’ ಎಂದು ಮನೆಯವರು ಆಗಾಗ ಕೇಳುತ್ತಿದ್ದರು. ಏನಂತ ಹೇಳೋದು. ಓರಗೆಯ ಹುಡುಗರು ಕತ್ತಲು ತುಂಬಿದ ಓಣಿಗಳಲ್ಲಿ ಕಳ್ಳ-ಪೊಲೀಸ್ ಆಟವಾಡುತ್ತಿರುವಾಗ ಇವನೊಬ್ಬ ಮೇಲೆ ಹೋಗಿ ಏನು ಮಾಡ್ತಾನೆ ಎಂಬ ಗೊಂದಲ ಅವರದಾಗಿತ್ತು. ಕ್ರಮೇಣ ನನ್ನ ಅನ್ಯಮನಸ್ಕತೆ, ಅಂತರ್ಮುಖತೆ ಅವರಿಗೆ ಅರ್ಥವಾಯಿತೋ ಅಥವಾ ಇವನಿಗೆ ಹೇಳಿ ಉಪಯೋಗವಿಲ್ಲ ಎಂದು ಅಂದುಕೊಂಡರೋ- ಒಟ್ಟಿನಲ್ಲಿ ಪ್ರಶ್ನಿಸುವುದು ತಪ್ಪಿತು. ನಾನು ಮತ್ತಷ್ಟು ಆನಂದದಿಂದ ನಕ್ಷತ್ರ ಸಾಂಗತ್ಯದಲ್ಲಿ ಮುಳುಗಿಹೋದೆ.
ಎಸ್ಸೆಸ್ಸೆಲ್ಸಿ ಮುಗಿಸಿ ಮುಂದಿನ ಓದಿಗೆಂದು ಮೊದಲ ಬಾರಿ ಹುಟ್ಟಿ ಬೆಳೆದ ಊರು ಬಿಡಬೇಕಾಗಿ ಬಂದಾಗ ಇವೇ ನಕ್ಷತ್ರಗಳ ಬಳಿ ಅತ್ತಿದ್ದೆ. ಮುಂದಿನ ಬದುಕು ಹೇಗೋ ಎಂದು ಕಳವಳಪಟ್ಟಿದ್ದೆ. ಉಕ್ಕುತ್ತಿದ್ದ ಕನಸುಗಳಿಗೆ, ನವಿರು ಭಾವನೆಗಳಿಗೆ ಸ್ಪಷ್ಟರೂಪ ಕೊಡಲಾಗದೇ ಒದ್ದಾಡಿದ್ದೆ. ಏರ್‌ಫೋರ್ಸ್‌ಗೆ ನೇಮಕವಾದಾಗಲೂ ಇವೇ ನಕ್ಷತ್ರಗಳು ನನಗೆ ದಾರಿ ತೋರಿದ್ದವು. ನನ್ನೂರಿನಲ್ಲಿ ಕಂಡ ಅವೇ ನಕ್ಷತ್ರಗಳನ್ನು ಕಚ್ಛ್‌ನ ರಣಪ್ರದೇಶದ ಆಗಸದಲ್ಲೂ ಕಂಡಿದ್ದೇನೆ. ಊರು ಸೇರಿದ ನೆಮ್ಮದಿ ಅನುಭವಿಸಿದ್ದೇನೆ.
ಮೋಡ ಮುಸುಕಿ ಮುಸುಮುಸು ಅಳುತ್ತಿರುವ ಬೆಂಗಳೂರಿನ ಆಗಸ ಏಕೋ ನನ್ನೂರ ನಕ್ಷತ್ರಗಳನ್ನು ನೆನಪಿಸುತ್ತಿದೆ. ಸಣ್ಣಗೇ ಖಿನ್ನತೆ ಉಕ್ಕುತ್ತಿದೆ. ಅಂದುಕೊಂಡಿದ್ದಕ್ಕಿಂತ ವೇಗವಾಗಿ ಬದಲಾಗುತ್ತಿರುವ ವೃತ್ತಿ ಜೀವನದ ಮಧ್ಯೆ ನನ್ನ ಪ್ರವೃತ್ತಿ ಬದಲಾಗದೇ ಹಾಗೇ ಉಳಿದಿರುವ ಬಗ್ಗೆ ಅಚ್ಚರಿಯೂ ಆಗುತ್ತಿದೆ. ನನ್ನ ಸೋಲುಗಳಿಗೆ ಈ ನಿರ್ಲಿಪ್ತಭಾವವೇ ಕಾರಣವಾ ಎಂಬ ಗೊಂದಲವೂ ಕಾಡುತ್ತಿದೆ.
ಕೂತ ಕೋಣೆಯ ಛಾವಣಿಯನ್ನೇ ಮತ್ತೆ ಮತ್ತೆ ದಿಟ್ಟಿಸುತ್ತೇನೆ. ಇವತ್ತೇಕೋ ನಾನು ಗೊಂದಲದಲ್ಲಿದ್ದೇನೆ. ಮಿತಿ ದಾಟಿದ ಮಾತೊಂದು ಮನನೋಯಿಸಿತಾ ಎಂಬ ಅಪರಾಧಿ ಭಾವನೆಯೊಂದಿದೆ. ಇತ್ತೀಚೆಗೇಕೋ ತೋರದ ಹಸಿವು ಬಾರದ ನಿದ್ದೆಗಳ ಬಗ್ಗೆ ತಕರಾರಿದೆ. ಇವೆಲ್ಲ ಸೇರಿ ಗೊಂದಲಗೊಂಡಿದ್ದೇನೆ. ಮಂಕಾಗಿದ್ದೇನೆ. ನಕ್ಷತ್ರಗಳ ಬಳಿ ಪರಿಹಾರ ಕಂಡುಕೊಳ್ಳಬೇಕಿದೆ.
ಆದರೆ, ಹೊರಗೆ ಮೋಡ ಮುಸುಕಿದ ಆಗಸ. ಒಳಕೋಣೆಯ ಛಾವಣಿಯೂ ಏಕೋ ಖಾಲಿಖಾಲಿ. ಕರೆಂಟಿಲ್ಲದ ರಾತ್ರಿಯಾಗಿದ್ದರೂ ನಕ್ಷತ್ರಗಳು ಕಾಣುತ್ತಿಲ್ಲ. ಮನಸ್ಸಿನ ಮಂಕು ಕಳೆಯುತ್ತಿಲ್ಲ. ನಾನು ಮತ್ತೆ ಮತ್ತೆ ಅವನ್ನು ಕರೆಯುತ್ತಿದ್ದೇನೆ. ನನ್ನೂರಿನ ಕಡು ಕತ್ತಲೆಯ ಆಗಸದಲ್ಲಿ ಸದ್ದಿಲ್ಲದೇ ಮಿನುಗುತ್ತ ಸಂತೈಸುತ್ತಿದ್ದ ಅವು ಮತ್ತೆ ಮತ್ತೆ ನೆನಪಾಗುತ್ತಿವೆ. 
ಮಳೆ ಸದ್ದಿಲ್ಲದೇ ಹನಿಯುತ್ತಲೇ ಇದೆ, ಒಳಮನೆಯೊಳಗೆ ಕೂತ ನನ್ನಳಲನ್ನು ಅರ್ಥ ಮಾಡಿಕೊಂಡಂತೆ!
- ಚಾಮರಾಜ ಸವಡಿ