Showing posts with label ಭರವಸೆ. Show all posts
Showing posts with label ಭರವಸೆ. Show all posts

ನೆನಪೆಂಬ ಶಕ್ತಿ, ಸೋಲೆಂಬ ಮಿತ್ರ...

10 Mar 2011

4 ಪ್ರತಿಕ್ರಿಯೆ
I am only one, but still I am one. I cannot do everything, but still I can do something; and because I cannot do everything, I will not refuse to do something that I can do. 

ಹೆಲೆನ್‌ ಕೆಲರ್‌ಳ ಈ ಮಾತುಗಳನ್ನು ಓದುತ್ತ ಒಬ್ಬನೇ ಕೂತಿದ್ದೇನೆ.
ಮನೆಯ ಪಕ್ಕದ ಸಾಕಿದ ನಾಯಿಗಳು ಏಕೋ ಬೊಗಳುತ್ತವೆ. ಹಗಲು ಹೊತ್ತು ಸುಮ್ಮನಿರುವ ಈ ನಾಯಿಗಳಿಗೆ ರಾತ್ರಿ ಮಾತ್ರ ಪೂರ್ತಿ ಡ್ಯೂಟಿ.

ನಾನು ಮತ್ತೆ ಹೆಲನ್‌ ಕೆಲರ್‌ಳ ಮಾತುಗಳನ್ನು ದಿಟ್ಟಿಸುತ್ತೇನೆ. ಹೊರಗೆ ನಾಯಿಗಳ ಆರ್ಭಟ. ನನ್ನ ಮನಸ್ಸಿನಲ್ಲೂ ನೂರಾರು ನಾಯಿಗಳ ಬೊಗಳುವಿಕೆ.
ಮನಸ್ಸಿನಲ್ಲಿ ಬೊಗಳುತ್ತಿರುವ ನಾಯಿಗಳನ್ನು ಒಂದೊಂದಾಗಿ ದಿಟ್ಟಿಸಿ ನೋಡುತ್ತೇನೆ. ಅವು ಕಚ್ಚುತ್ತಾವೆಂಬ ಭಯವಿಲ್ಲ. ಕಚ್ಚಬಲ್ಲ ಶಕ್ತಿ ಅವಕ್ಕಿಲ್ಲ. ಬೊಗಳುವುದೊಂದೇ ಅವು ಮಾಡಬಹುದಾದ ಕೆಲಸ. ಬೊಗಳಿ ಬೊಗಳಿ ಸುಸ್ತಾದಾಗ, ಮಾಲೀಕ ಹಾಕುವ ತಿಂಡಿಯೆಡೆಗೆ ಆಸೆಗಣ್ಣಿಂದ ದಿಟ್ಟಿಸುತ್ತ ನಿಲ್ಲುತ್ತವೆಂಬುದು ನನಗೆ ಗೊತ್ತು.
ಮನಸ್ಸಿನೊಳಗಿನ ನಾಯಿಗಳನ್ನೊಮ್ಮೆ ಮೌನವಾಗಿ ದಿಟ್ಟಿಸಿ ನೋಡುತ್ತೇನೆ. ಅವು ಸುಮ್ಮನಾಗುತ್ತವೆ.
ನನಗೆ ಮತ್ತೆ ಏಕಾಂತ.
ಆಕೆ ಅಲ್ಲೆಲ್ಲೋ ಮಗುವಿನಂತೆ ಮಗ್ಗುಲಾಗಿ ಮಲಗಿರಬೇಕು. ಆಕೆಯ ಮನಸ್ಸಿನಲ್ಲೂ ಬೊಗಳುತ್ತಿರುವ ನಾಯಿಗಳು ಸುಮ್ಮನಾಗಿರಬೇಕು. ಸುಂದರಿಯ ಕೊರಳ ವಜ್ರಾಹಾರದಂತೆ ಹೊರಗೆ ಬಾನೊಡಲಲ್ಲಿ ಕಂಗೊಳಿಸುವ ಬಿದಿಗೆ ಚಂದಿರ ಆಕೆಯ ಮನಸ್ಸಿನಲ್ಲೂ ನಗುತ್ತಿರಬಹುದು. ಅವನ ಬೆಳ್‌ನಗೆಯನ್ನು ನಾಚಿಸುವಂತೆ ಈಕೆಯೂ ನಿದ್ದೆಯಲ್ಲೇ ಮುಗುಳ್ನಕ್ಕಿರಬೇಕು. ಇಲ್ಲಿ ನನ್ನ ಜೀವ ’ಹಾ’ ಎಂದಿತು.
ಅಬ್ಬಾ ಮನಸ್ಸೇ!
ಮೆಚ್ಚಿದ ಜೀವ ಬರೀ ಮುಗುಳ್ನಗುತ್ತಿರುವಂತೇ ಭಾಸವಾಗುತ್ತದೆ. ಈ ಅಪರಾತ್ರಿಯಲ್ಲಿ ನಾನಿಲ್ಲಿ ಎದ್ದು ಕೂತಿದ್ದರೂ, ನಿದ್ದೆ ಇಲ್ಲದೇ ಮಂಕಾಗಿದ್ದರೂ, ಆಕೆ ಮಗ್ಗುಲಾಗಿ ಮಲಗಿ ಹೊಂಗನಸ ಕಾಣುತ್ತಿದ್ದಾಳೆಂದು ಊಹಿಸುತ್ತದೆ. ಜೀವ ತುಂಬಿದ, ಭಾವ ತುಂಬಿದ, ಬೆಚ್ಚನೆಯ ಜೀವದಂತಲ್ಲದೇ ಆಕೆಯನ್ನು ಬೇರೆ ಯಾವ ರೀತಿಯೂ ಊಹಿಸಿಕೊಳ್ಳದು. ಆಕೆ ಗಾಡಿ ಏರಿದರೆ, ಹುಷಾರಾಗಿ ಬಾರೇ ಹುಡುಗೀ ಅನ್ನುತ್ತದೆ. ರಭಸದಿಂದ ಗಾಡಿ ಓಡಿಸಬೇಡ. ಸುಂದರಿ ಕೂಡ ಒರಟಾಗಿ ನಡೆದುಕೊಂಡಾಳೆಂದು ರಸ್ತೆ ಬೇಸರಪಡುತ್ತದೆ ಎಂದು ಎಚ್ಚರಿಸುತ್ತದೆ. ಅವಳು ಕಳಿಸುವ ಕಿರು ಸಂದೇಶಗಳಲ್ಲಿಯೂ ನಗೆಯ ಚಿಹ್ನೆಯನ್ನೇ ಹುಡುಕುತ್ತದೆ. ಆಕೆಯ ನೋಟಕ್ಕೆ ಮಾಂತ್ರಿಕ ಶಕ್ತಿ ಕಲ್ಪಿಸುತ್ತದೆ. ಮಾತಿಗೆ ನೆಮ್ಮದಿ ಹೊಂದುತ್ತದೆ. ಜಗಳವನ್ನೂ ಆಸ್ವಾದಿಸುತ್ತದೆ. ಮುನಿಸನ್ನೂ ಇಷ್ಟಪಡುತ್ತದೆ. ನಡೆದರೂ ಚೆನ್ನ, ನುಡಿದರೂ ಚೆನ್ನ. ಏಕೆಂದರೆ, ಆಕೆ ಚಿನ್ನ.
ನನ್ನ ಮನಸ್ಸು, ಅಲ್ಲೆಲ್ಲೋ ಸದ್ದಿಲ್ಲದ ನಿದ್ದೆಯಲ್ಲಿರಬಹುದಾದ ಆಕೆಯೆಡೆಗೆ ಹೊರಳುತ್ತದೆ.
ನಾನಿಲ್ಲಿ ಒಂಟಿ.
ಷೆಲ್ಫಿನೊಳಗಿನ ಪುಸ್ತಕಗಳು, ಅವುಗಳೊಳಗೆ ಅಡಗಿರಬಹುದಾದ ಸಾವಿರ ಸಾವಿರ ಭಾವನೆಗಳು, ಸಂಗತಿಗಳು ನನ್ನನ್ನು ಸಂತೈಸುತ್ತವೆ. ಬೊಗಳುವ ನಾಯಿಗಳು ಸಂತೈಸುತ್ತವೆ. ಫುಟ್‌ಪಾತ್‌ನ ಕಲ್ಲುಗಳ ಮೇಲೆ ಕುಟ್ಟುವ ಗೂರ್ಖಾನ ಕೋಲಿನ ಶಬ್ದ ಸಂತೈಸುತ್ತದೆ. ರಾತ್ರಿ ಸಂಚಾರದಲ್ಲಿರುವ ಹೆಗ್ಗಣಗಳು ನೆಲ ಕೆದರುವ ಸದ್ದು ಸಂತೈಸುತ್ತದೆ.
ನಾನು ಕೊಂಚ ಸಮಾಧಾನ ತಂದುಕೊಳ್ಳುತ್ತೇನೆ.
ನಾನು ಒಂಟಿಯಲ್ಲ. ಏಕೆಂದರೆ, ನೆನಪುಗಳು ಜೊತೆಗಿವೆ.
ಹೆಲೆನ್‌ ಕೆಲರ್‌ಳ ಸಾಲುಗಳನ್ನು ದಿಟ್ಟಿಸುತ್ತೇನೆ: I am only one, but still I am one.
ಹೌದಲ್ಲ! ಎಂದು ಅಚ್ಚರಿಪಡುತ್ತೇನೆ. ಅವಳು ಜೊತೆಗಿರಬೇಕಿತ್ತು ಎಂದು ಮನ ಹಂಬಲಿಸುತ್ತಿದ್ದರೂ, ನಾನು ಅರ್ಧ ಅಲ್ಲ, ಒಂದು ಎಂದು ಸಂತೈಸಿಕೊಳ್ಳುತ್ತೇನೆ. ನಿಜ, I cannot do everything, but still I can do something.
ಬದುಕಿನಲ್ಲಿ ಮುರಿದುಬಿದ್ದ ಕನಸುಗಳು ನೆನಪಾಗುತ್ತವೆ. ಸೋತ ಆಸೆಗಳು ನೆನಪಾಗುತ್ತವೆ. ವಂಚಿಸಲ್ಪಟ್ಟ ಅವಕಾಶಗಳು, ನಿರಾಕರಿಸಲ್ಪಟ್ಟ ಮನ್ನಣೆಗಳು, ತಿರಸ್ಕರಿಸಲ್ಪಟ್ಟ ಘಟನೆಗಳು ಕಣ್ಮುಂದೆ ಸುಳಿಯುತ್ತವೆ. ಎಲ್ಲಾ ಅಂದುಕೊಂಡಂತೆ ಆಗಿದ್ದರೆ, ನಾನು ಏನೋ ಆಗಬಿಡುತ್ತಿದ್ದೆ ಎಂಬ, ಒಂದು ದಶಕದ ಹಿಂದೆಯೇ ಮರೆತುಬಿಟ್ಟಿದ್ದ, ಸ್ವಾನುಕಂಪದ ಭಾವ ನೆನಪಾಗುತ್ತದೆ. ಪೂರ್ಣಗೊಳ್ಳದ ಕವಿತೆಗಳಂತೆ ಬಿಡಿ ಬಿಡಿ ಸಾಲುಗಳಾಗಿ ನಿಲ್ಲುತ್ತವೆ.
ನಿಜ. ಕನಸುಗಳು ಮುರಿದುಬಿದ್ದಿವೆ. ಆದರೆ, ಹೊಸ ಕನಸುಗಳು ಮೊಳೆತಿವೆ. ಆಸೆಗಳು ಸೋತಿವೆ ನಿಜ, ಹೊಸ ಆಸೆಗಳೂ ಚಿಗುರಿವೆ. ವಂಚಿತನಾಗಿದ್ದೇನೆ ನಿಜ. ಆದರೆ, ಎಲ್ಲವನ್ನೂ ಕಳೆದುಕೊಂಡಿಲ್ಲ. ಮನ್ನಣೆ ಎಂಬುದು ಪ್ರಶಸ್ತಿ ಫಲಕಗಳಲ್ಲಿಲ್ಲ, ನೇಮಕಾತಿ ಪತ್ರಗಳಲ್ಲಿಲ್ಲ. ಅಲ್ಲೆಲ್ಲೋ ಸವಿನಿದ್ದೆಯಲ್ಲಿರಬಹುದಾದ ಜೀವ, ಮುಖ ನೋಡಿರದಿದ್ದರೂ ಮೆಚ್ಚಿದ ಜನಗಳ ಮಧ್ಯೆ ಜೀವಂತವಾಗಿದೆ. ತಿರಸ್ಕರಿಸಲ್ಪಟ್ಟಿದ್ದೇನೆ ನಿಜ. ಆದರೆ, ಹೊಸ ಜೀವ, ಭಾವಗಳು ತಬ್ಬಿಕೊಂಡಿವೆ. ಜೀವಸೆಲೆ ತುಂಬಿ ಪೊರೆಯುತ್ತಿವೆ.
ಅಂದುಕೊಂಡ ಎಲ್ಲವನ್ನೂ ಮಾಡಲಾಗಲಿಕ್ಕಿಲ್ಲ. ಹಾಗಂತ ಏನನ್ನೂ ಅಂದುಕೊಳ್ಳದೇ ಹೇಗಿರಲಿ? ಸೋಲುವುದಕ್ಕೇ ಅಳುಕಿದರೆ ಗೆಲ್ಲುವುದಾದರೂ ಯಾವತ್ತು? ಸೋಲಿನ ಮಧ್ಯೆಯೇ ಗೆಲುವು ಬರುವುದು. ನೋವಿನೊಳಗಿಂದಲೇ ನಲಿವು ಉಕ್ಕುವುದು. ಕಣ್ಣೀರಿಟ್ಟ ಕಂಗಳಿಂದಲೇ ನಗು ಅರಳಬೇಕು. ಅಲೆಯೆದ್ದ ಜಾಗದಲ್ಲೇ ಅಲೆ ನಿಲ್ಲಬೇಕು. ಚೂರಿ ಹಾಕುವ ಕೈಗಳಿರುವಂತೆ, ನೇವರಿಸುವ ಕೈಗಳೂ ಇವೆ.
ನೆಲಕ್ಕುರುಳಿದ ಮರದೊಡಲಿಂದ ಹೊಸ ಚಿಗುರು ಮೊಳೆತಂತೆ, ಮುರಿದುಬಿದ್ದ ಹಳೆ ಕನಸುಗಳ ಜಾಗದಲ್ಲಿ ಹೊಸ ಕನಸುಗಳು ಚಿಗುರಬೇಕು. ಸೋತ ಸವಾಲೆದುರಿಸಲು ಹೊಸ ಪ್ರಯತ್ನ ಮಾಡಬೇಕು. Because I cannot do everything, I will not refuse to do something that I can do.
ಹೆಲೆನ್‌ ಕೆಲರ್‌ಳ ಅಮೋಘ ಸಾಲುಗಳನ್ನು ಮತ್ತೆ ಮತ್ತೆ ಓದಿಕೊಂಡೆ.
ಆಕೆ ಅಲ್ಲೆಲ್ಲೋ ನಿದ್ದೆಯಲ್ಲಿ ಮುಗುಳ್ನಕ್ಕಿರಬೇಕು. ಇಲ್ಲಿ, ನನ್ನೊಳಗೂ ಮುಗುಳ್ನಗುವೊಂದು ಅರಳಿತು. ಆಕೆ ಏಳುವ ಸಮಯಕ್ಕೆ ನಾನಿಲ್ಲಿ ಮಲಗಲು ಹೊರಟಿದ್ದೇನೆ. ನನ್ನ ಕಣ್ರೆಪ್ಪೆಯೊಳಗೂ ಆಕೆಯನ್ನು ಮುದಗೊಳಿಸಿದ ಸವಿಗನಸುಗಳು ಅರಳಲಿ. ಬೆಳಗು ಸೂರ್ಯನ ಹೊಂಗಿರಣಗಳೊಂದಿಗೆ ಅವಳನ್ನು ತಲುಪಿ ಪುಳಕಗೊಳಿಸಲಿ.
- ಚಾಮರಾಜ ಸವಡಿ
(ಚಿತ್ರ ಕೃಪೆ: ಗಣಪತಿ ಹೆಗ್ಡೆ)

ನಿನ್ನೆ, ಇಂದು ಮತ್ತು ನಾಳೆ

28 Feb 2011

2 ಪ್ರತಿಕ್ರಿಯೆ
ನಾನಿಲ್ಲಿ ಸುಮ್ಮನೇ ನಿಂತಿದ್ದೇನೆ.

ನಿನ್ನೆದುರು ನಿನ್ನ ಬದುಕಿದೆ. ನನ್ನ ಬದುಕು ನನ್ನೆದುರು. ನಮ್ಮಿಬ್ಬರೆದುರು ನಮ್ಮ ಬದುಕಿದೆ.

ನನ್ನ ನಿನ್ನೆಗಳು ನಿನಗೆ ಮತ್ತು ನಿನ್ನ ನಿನ್ನೆಗಳು ನನಗೆ ಗೊತ್ತಿಲ್ಲ. ಇನ್ನು ನಮ್ಮಿಬ್ಬರ ನಿನ್ನೆ-ನಾಳೆಗಳ ಬಗ್ಗೆ ಇಬ್ಬರಿಗೂ ತಿಳಿದಿಲ್ಲ.

ನಾಳೆಗಳ ಬಗ್ಗೆಯೂ ನಮಗೆ ಏನೂ ಗೊತ್ತಿಲ್ಲ. ಆದರೆ, ನಾವು ಇಂದಿನ ಬಗ್ಗೆ ಖಂಡಿತವಾಗಿ ಯೋಚಿಸಬಹುದು. ಇಂದಿನ ನಮ್ಮ ಬದುಕು, ನಾಳೆಯ ನಮ್ಮ ಬದುಕಾಗುತ್ತದೆ. ಅಲ್ಲವೆ?

ನಿನ್ನ ನಿನ್ನೆಗಳನ್ನು ಬಿಟ್ಹಾಕು. ನಾನೂ ಬಿಟ್ಹಾಕಿದ್ದೇನೆ. ಅದು ಆಗಿ ಹೋದ ಬದುಕು. ಓದಿಟ್ಟ ಪುಸ್ತಕ. ನೋಡಿಯಾಗಿರುವ ಚಿತ್ರ. ಅದನ್ನು ನಾವಿಬ್ಬರೂ ಬದಲಿಸಲಾರೆವು. ಬದಲಿಸುವ ಯತ್ನವೂ ಬೇಡ.

ನಿನ್ನೆಯನ್ನು ನೆನೆದು ಇಂದು ಕಣ್ಣೀರಿಡುವುದೇಕೆ? ಅದು ನಾಳೆಗೆ ಏನನ್ನೂ ಕೊಡಲಾರದು. ಇವತ್ತಿನ ಬಗ್ಗೆ ಯೋಚಿಸು. ಇಂದಿನ ಬದುಕನ್ನು ನೀನು ಬದಲಿಸಬಲ್ಲೆ. ನಾಳೆಯನ್ನು ರೂಪಿಸಬಲ್ಲೆ. ನಾಳೆಯ ಭವಿಷ್ಯದ ಮರದ ಬೀಜವನ್ನು ಇಂದೇ ಬಿತ್ತು. ನಿನ್ನ ವಿಫಲ ಕನಸಿನ ಕಣ್ಣೀರ ಹನಿಸು. ಕನಸನ್ನು ಬೆರೆಸು. ನಿನ್ನಾಸೆಯ ನಾಳೆ ನಿನ್ನದಾದೀತು.

ಎಷ್ಟಂತ ಅಳುತ್ತೀಯಾ? ಕಣ್ಣೀರ ಹನಿಗಳು ಕುಸಿದ ಕನಸನ್ನು ಹೇಳುತ್ತವೆ. ವಿಫಲ ಯತ್ನಗಳನ್ನು ಬಣ್ಣಿಸುತ್ತವೆ, ನಿಜ. ಆದರೆ, ಅವು ನಾಳೆಗೇನೂ ಕೊಡಲಾರವು. ಅಳುವ ಕಣ್ಣುಗಳಿಗಿಂತ, ಅರಳುವ ಕಣ್ಣುಗಳು ನಾಳೆಯನ್ನು ರೂಪಿಸಬಲ್ಲವು ಎಂಬುದನ್ನು ಮರೆಯದಿರು.

ನೀನು ಎಲ್ಲವನ್ನೂ ಬಲ್ಲೆ ಎಂಬುದನ್ನು ನಾನು ಬಲ್ಲೆ. ನಿನಗೆ ಎಲ್ಲವೂ ಅರ್ಥವಾಗುತ್ತದೆ ಎಂಬುದೂ ನನಗರ್ಥವಾಗಿದೆ. ಬದುಕಿನ ತಿರುವು ದಾರಿಯುದ್ದಕೂ ಪೊರೆಯಬೇಕಿರುವುದು ನಿನ್ನ ಕಂಗಳ ದೀಪದ ಬೆಳಕು ಎಂಬುದನ್ನೂ ನೀನು ತಿಳಿದುಕೊಳ್ಳಬೇಕು. ಆ ಕಂಗಳು ಅಳದಿರಲಿ. ಆ ಬೆಳಕು ಮಸುಕಾಗದಿರಲಿ. ಒರೆಸಿಕೋ ಕಣ್ಣೀರ. ತಂದುಕೋ ಮುಗುಳ್ನಗೆಯ. ಎದೆಯಾಳದಲಿ ಮಿಣುಕುತ್ತಿರುವ ಆ ಮಿಣುಕುಬೆಳಕು ನಿನ್ನ ಕಂಗಳಿಂದಿಳಿದು ತಿರುವು ದಾರಿಯುದ್ದಗಲಕೂ ಹರಡಲಿ. ನಿನ್ನ ನಡೆ ನಿನಗೆ ನಿಚ್ಚಳವಾಗಲಿ.

ಈಚೆ ತೀರದಿ ನಿಂತು ದಾರಿ ಕಾಯುವ ಹುಚ್ಚು ಪಥಿಕ ನಾನು. ಅರ್ಧ ದಾರಿಯನ್ನು ಈಜಿ ಬರಬಲ್ಲೆ. ಇನ್ನರ್ಧ ನೀನೇ ಈಜಬೇಕು. ಈ ಎರಡು ಅರ್ಧಗಳ ನಡುವೆ ಅಲ್ಲೆಲ್ಲೋ ಸಂಗಮವಿದೆ. ಅದನ್ನು ನಾವು ಜೊತೆಯಾಗಿ ತಲುಪಬೇಕಿದೆ. ಅಲ್ಲಿಂದ ಬದುಕು ಜೊತೆಯಾಗಿ ಬೆರೆತು ಹರಿಯಬೇಕಿದೆ. ತೀರದಲ್ಲೇ ಬದುಕು ತೀರಿ ಹೋಗದಿರಲಿ. ಇಡು ಹೆಜ್ಜೆ. ಈಜು ನಿನ್ನರ್ಧ ಪಾಲಿನ ನೀರ. ಸಂಗಮದೆಡೆಗೆ ತಲುಪು. ನಾನೂ ಇಳಿದೇನು. ಈಜಿಯೇನು. ಸಂಗಮದಲಿ ಜೊತೆಯಾದೇನು. ಬಾಳ ಪೂರ್ತಿ ಜೊತೆಯಾಗಿ ಹರಿದೇನು. ಮುಂದೆಲ್ಲೋ ಕಡಲಲ್ಲಿ ಲೀನವಾಗುವವರೆಗೆ ಎದೆ ದೀಪಕ್ಕೆ ಬತ್ತಿಯಾದೇನು. ಎಣ್ಣೆಯಾದೇನು. ನಿನ್ನ ಕಂಗಳ ಬೆಳಕಾದೇನು. ಎದೆಯಾಳದಲಿ ಇಳಿದು ಹೊಸ ಕನಸಾದೇನು. ನನಸಾದೇನು.

ಇಳಿವ ಮುನ್ನ ಸಾವಿರ ಬಾರಿ ಯೋಚಿಸು. ಮಾಡುವುದಾದರೆ ಹೊಸ ತಪ್ಪ ಮಾಡು. ಇಡುವುದಾದರೆ ಮುಂದಡಿಯಿಡು. ಈಜುವುದಾದರೆ, ಕಡಲೆಡೆಗೆ ಹರಿಯುವ ನದಿಯನ್ನೀಜು. ಕಾಣುವುದಾದರೆ ಹೊಸ ಕನಸ ಕಾಣು. ಆಗ ನಿನ್ನ ಕಣ್ಣೀರು ನದಿಯಲ್ಲಿ ಒಂದಾಗಿ ಬೆರೆಯುತ್ತದೆ. ಕಡಲೆಡೆಗೆ ಕರೆದೊಯ್ಯುತ್ತದೆ.

ಇದು ಹುಸಿ ಭರವಸೆಯಲ್ಲ. ಮರುಳು ಮಾತೂ ಅಲ್ಲ. ನಿನ್ನನ್ನಳಿಸುವ ನಿನ್ನೆಗಳನ್ನ ಅಳಿಸಿಹಾಕುವ ದಾರಿಯಿದು. ತೆರೆದುಕೋ ಮನಸ. ಕರೆದುಕೋ ಕನಸ. ಎಲ್ಲಾ ನಿರಾಶೆಗಳ ನಿರಿಗೆಕಟ್ಟಿ, ಸವಾಲುಗಳ ಕಚ್ಚೆ ಕಟ್ಟಿ, ಮುಂದಡಿಯಿಡು. ಗತ ಬದುಕಿಗೆ ಕುರುಡಾಗು. ಟೀಕೆಗಳಿಗೆ ಕಿವುಡಾಗು. ಹತಾಶತೆಗೆ ಮೂಕಳಾಗು. ಹಿಂದೆ ನೋಡದೇ ಎದ್ದು ಬಂದ ಬುದ್ಧನಂತೆ, ಎದ್ದು ಬಾ. ಖಂಡಿತ ಗೆದ್ದು ಬರುವೆ.

ಇನ್ಯಾವ ಅಳುಕು? ಇನ್ಯಾವ ಯಾತನೆ? ಹೊಸ ಕನಸಿನ ನಾಳೆಗಾಗಿ ಇಂದೇ ಹೊರಡು. ಭವವ ತೊರೆವವರನ್ನು ಭಯವೂ ತೊರೆವುದು. ಹನಿಸಿದ ಕಣ್ಣೀರ ಲೆಕ್ಕ ಮರೆತು, ಕುಸಿದ ಕನಸುಗಳ ನೋವು ಮರೆತು, ಸುರಿಸಲೊಂದಿಷ್ಟು ಆನಂದಬಾಷ್ಪಗಳನ್ನು ಹುಷಾರಾಗಿ ಎತ್ತಿಕೊಂಡು ಬಾ. ಈಚೆ ತೀರದಲಿ ನಾನು ಕಾಯುತ್ತಲೇ ಇದ್ದೇನೆ. ಕಾಯುತ್ತಲೇ ಇರುತ್ತೇನೆ. ಅಲುಗುವುದಿಲ್ಲ. ಅಗಲುವುದಿಲ್ಲ. ಕನಲುವುದಿಲ್ಲ. ಕರಗುವುದಿಲ್ಲ. ಶಿಲೆಯಾದ ಶಾಪಗ್ರಸ್ತನಂತೆ ನಿಂತೇ ಇರುತ್ತೇನೆ. ಅದು ಖಂಡಿತ.

ಬರುತ್ತೀಯಲ್ಲ?

- ಚಾಮರಾಜ ಸವಡಿ

ಬಸ್‌ ಏಕ್‌ ಜರಾ, ಸಾಥ್‌ ಹೋ ತೇರಾ...

23 Jan 2009

2 ಪ್ರತಿಕ್ರಿಯೆ

ಮನಸ್ಸಿನ ತುಂಬ ಬೇಸರ, ನಿರಾಶೆ ತುಂಬಿದಾಗ ಏನು ಮಾಡಬೇಕು?

ಪ್ರತಿಯೊಬ್ಬ ಮನುಷ್ಯನನ್ನು ಕಾಡುವ ಪ್ರಶ್ನೆಯಿದು. ನಾವು ಎಂಥ ಉತ್ತಮ ಸ್ಥಿತಿಯಲ್ಲೇ ಇರಲಿ, ಯಶಸ್ವಿ ವ್ಯಕ್ತಿಗಳೇ ಆಗಿರಲಿ, ಬೇಸರ ಎಂಬುದನ್ನು ಶಾಶ್ವತವಾಗಿ ತೊಡೆದು ಹಾಕುವುದು ಸಾಧ್ಯವಿಲ್ಲ. ಅದು ಯಾವಾಗ ಬೇಕಾದರೂ ಬರಬಹುದು. ಯಾರಿಗೆ ಬೇಕಾದರೂ ಬರಬಹುದು. ಬಂದು ನಮ್ಮ ಮನಸ್ಸಿನ ನೆಮ್ಮದಿಯನ್ನು ಕಸಿದುಕೊಳ್ಳಬಹುದು. ಅರಸನಿರಲಿ, ಆಳಿರಲಿ, ಎಲ್ಲರೂ ಬೇಸರಕ್ಕೆ ಸಮಾನರೇ.

ಇನ್ನೂ ಒಂದು ದೊಡ್ಡ ರೋಗವಿದೆ. ಅದರ ಹೆಸರು ನಿರಾಶೆ. ಬೇಸರದ ಅಣ್ಣ ಇದು. ಏನೋ ಅಂದುಕೊಂಡಿರುತ್ತೇವೆ. ಆದರೆ, ಅದು ಈಡೇರುವುದಿಲ್ಲ. ಏನೋ ಪ್ರಯತ್ನ ಮಾಡುತ್ತೇವೆ. ಅದು ಯಶಸ್ವಿಯಾಗುವುದಿಲ್ಲ. ನಮ್ಮ ಅತ್ಯುತ್ತಮ ಪ್ರಯತ್ನದ ಹೊರತಾಗಿಯೂ ಗೆಲುವು ನಮಗೆ ದಕ್ಕುವುದಿಲ್ಲ.

ಆಗ, ಮಾಡಿದ್ದೆಲ್ಲ ವ್ಯರ್ಥವಾಯಿತು ಎನ್ನುತ್ತಾರೆ ಸುತ್ತಮುತ್ತಲಿನವರು. ಮಾಡುವುದೇ ವ್ಯರ್ಥ ಎನ್ನುತ್ತಾರೆ ನಿರಾಶವಾದಿಗಳು. ನಿನಗೆ ಸರಿಯಾಗಿ ಮಾಡಲು ಬರುವುದಿಲ್ಲ ಎನ್ನುತ್ತಾರೆ ಅಸೂಯಾಪರರು. ನಾವು ಇಂಥ ಜನರ ಜೊತೆಯೇ ಬದುಕುತ್ತ ಗುರಿ ತಲುಪಬೇಕು. ಎಷ್ಟೋ ಸಾರಿ ನಿರಾಶೆ ಎಂಬುದು ಅಲೆಗಳಂತೆ ಉಕ್ಕುಕ್ಕಿ ಬರುತ್ತದೆ. ನಿರಂತರವಾಗಿ ಅಪ್ಪಳಿಸುತ್ತದೆ. ಒಂದು ಕ್ಷಣ, ಈ ಅಲೆಗಳು ತೀರವನ್ನೇ ನುಂಗಿ ಹಾಕಿಬಿಡುತ್ತವೇನೋ ಎಂದು ತಲ್ಲಣ ಹುಟ್ಟಿಸುತ್ತವೆ.

ಆದರೆ, ಯಾವ ಅಲೆಯೂ ತೀರವನ್ನು ನುಂಗಿ ಹಾಕಿಲ್ಲ. ಅಲೆಗಳು ಸಾವಿರಾರು ಬರಬಹುದು. ನಿರಂತರವಾಗಿ ಅಪ್ಪಳಿಸಬಹುದು. ಆದರೆ, ಮಣ್ಣಿನ ತೀರ ಜಗ್ಗದೇ ನಿಂತಿರುತ್ತದೆ. ಒಂದಿಷ್ಟು ಕೊರೆಯಬಹುದು. ಒಂದಿಷ್ಟು ಕಸಿಯಬಹುದು. ಆದರೆ, ಪೂರ್ತಿಯಾಗಿ ಇಲ್ಲವಾಗಿಸದು. ಯಾವ ಅಲೆಗೂ ತೀರ ನಾಶ ಮಾಡುವ ಶಕ್ತಿಯಿಲ್ಲ.

ಬೇಸರ, ಸೋಲು, ನಿರಾಶೆ, ನೋವು- ಇಂಥ ಸಾವಿರಾರು ಅಲೆಗಳು ಬದುಕಿನ ಕಡಲಲ್ಲಿ ಇದ್ದೇ ಇರುತ್ತವೆ. ಪ್ರತಿಯೊಬ್ಬರ ಜೀವನದಲ್ಲಿಯೂ ಒಂದು ಸಮಯ ಬರುತ್ತದೆ. ಆಗ ಮುಟ್ಟಿದ್ದೆಲ್ಲ ಮಣ್ಣೇ. ಯಾವ ಪ್ರಯತ್ನವೂ ಕೈಗೂಡುವುದಿಲ್ಲ. ಹಾಗೆ ನೋಡಿದರೆ, ನಾವು ಅತ್ಯುತ್ತಮ ಪ್ರಯತ್ನವನ್ನೇ ಮಾಡಿರುತ್ತೇವೆ. ಆದರೆ, ಗೆಲುವು ಮಾತ್ರ ಮರೀಚಿಕೆಯೇ.

ಆಗ ನಿರಾಶೆಯಾಗುವುದು ಸಹಜ. ಇಷ್ಟು ಚೆನ್ನಾಗಿ ಪ್ರಯತ್ನಿಸಿದರೂ ಸಫಲನಾಗಲಿಲ್ಲವಲ್ಲ ಎಂದು ನೋವಾಗುತ್ತದೆ. ನನ್ನ ಪ್ರಯತ್ನದಲ್ಲಿ ದೋಷ ಎಲ್ಲಿತ್ತು ಎಂದು ಮನಸ್ಸು ಪ್ರಶ್ನಿಸುತ್ತದೆ. ಯಾವ ಉತ್ತರವೂ ಹೊಳೆಯುವುದಿಲ್ಲ. ಇದನ್ನು ಇಲ್ಲಿಗೇ ನಿಲ್ಲಿಸಬೇಕು. ಮತ್ತೆ ಪ್ರಯತ್ನಿಸುವುದರಲ್ಲಿ ಯಾವ ಅರ್ಥವೂ ಇಲ್ಲ ಎಂದು ಪದೆ ಪದೆ ಅನ್ನಿಸತೊಡಗುತ್ತದೆ. ಏನೂ ಮಾಡಬೇಕೆಂದರೂ ಮನಸ್ಸು ತೊಡಗುವುದಿಲ್ಲ. ಖುಷಿಯಿಂದ ಎದ್ದು ನಿಲ್ಲುವುದಿಲ್ಲ.

ಅಂಥ ಸಮಯದಲ್ಲಿ ನಾನು ಒಬ್ಬನೇ ಕೂಡುತ್ತೇನೆ. ಶಬ್ದ ಕಡಿಮೆ ಇರುವ, ಬೆಳಕು ಕಡಿಮೆ ಇರುವ ತಾಣ ಹುಡುಕಿ ಮೌನವಾಗಿ ಮಂಥನ ನಡೆಸುತ್ತೇನೆ. ನನ್ನ ವಿಫಲ ಪ್ರಯತ್ನಗಳ ಬಗ್ಗೆ ಯೋಚಿಸುತ್ತೇನೆ. ಇಡೀ ಚಿತ್ರಣ ಕಣ್ಣ ಮುಂದೆ ಬರುತ್ತದೆ. ಒಂದೊಂದೇ ಹಂತವನ್ನು ಎಳೆಎಳೆಯಾಗಿ ಬಿಡಿಸಿ ನೋಡುತ್ತೇನೆ. ಎಲ್ಲಿ ತಪ್ಪಾಯಿತು? ಎಂದು ಹುಡುಕುತ್ತೇನೆ. ಸಾಮಾನ್ಯವಾಗಿ ಉತ್ತರ ಸಿಕ್ಕೇ ಸಿಗುತ್ತದೆ.

ಕೆಲವು ಪ್ರಯತ್ನಗಳು ಇನ್ನಷ್ಟು ತೀವ್ರಗೊಳ್ಳಬೇಕಿರುತ್ತದೆ. ಇನ್ನು ಕೆಲವಕ್ಕೆ ಸಮಯ ಬೇಕಿರುತ್ತದೆ. ಕೆಲವೊಂದರಲ್ಲಿ ನಾನೇ ಎಡವಿರುತ್ತೇನೆ. ಎಲ್ಲ ಎಳೆಗಳನ್ನೂ ಮತ್ತೆ ಜೋಡಿಸಿದ ನಂತರ ಉತ್ತರ ಸಿದ್ಧವಾಗುತ್ತದೆ. ಮರಳಿ ಯತ್ನವ ಮಾಡಲು ಮನಸ್ಸು ಹುರುಪುಗೊಳ್ಳುತ್ತದೆ.

ಮನಸ್ಸೇ ದೊಡ್ಡ ಕಡಲು. ಅಲ್ಲಿ ನಿತ್ಯ ಅಲೆಗಳು ಎದ್ದೇ ಏಳುತ್ತವೆ. ಕೆಲವೊಂದು ಅಲೆಗಳು ಭೀಕರ. ಆದರೆ, ಎಂಥ ಅಲೆಯೇ ಆದರೂ ಅದು ಮತ್ತೆ ಕಡಲಿನಲ್ಲಿ ಲೀನವಾಗಲೇಬೇಕು.

ಸ್ವಸ್ಥ ಮನಸ್ಸು ಸೋತ ಮನಸ್ಸನ್ನು ಸಂತೈಸುತ್ತದೆ. ನಿರಾಶೆಯನ್ನು ಭರವಸೆ ಮೈದಡವುತ್ತದೆ. ವಿವೇಕ ಉದ್ರೇಕವನ್ನು ಶಮನ ಮಾಡುತ್ತದೆ. ಮನಸ್ಸೇ ಮಿತ್ರನಂತೆ ಸಂತೈಸಿ ಸ್ವಸ್ಥನನ್ನಾಗಿಸುತ್ತದೆ.

’ಹರ್‌ ತೂಫಾನ್‌ ಮೈ ಕರೂಂಗಿ ಸಾಮನಾ
ಬಸ್‌ ಏಕ್‌ ಜರಾ, ಸಾಥ್‌ ಹೋ ತೇರಾ’

ಎಂಬ ಸಿನಿಮಾ ಗೀತೆ ನೆನಪಾಗುತ್ತದೆ.

ಮನಸ್ಸು ಮತ್ತೆ ಉಲ್ಲಸಿತವಾಗುತ್ತದೆ. ಹೊಸ ಕನಸಿಗೆ, ಪ್ರಯತ್ನಕ್ಕೆ ಸಿದ್ಧವಾಗಿ ತುಡಿಯತೊಡಗುತ್ತದೆ.

- ಚಾಮರಾಜ ಸವಡಿ