ಮನೆ ಎಂಬ ಕನಸುಗಳ ಹುತ್ತ

29 Dec 2008

0 ಪ್ರತಿಕ್ರಿಯೆ

ಹೊರಗೆ ಲಾರಿಯವ ಹಾರ್ನ್‌ ಹಾಕಿದ.

’ಬಂದೆ ಮಾರಾಯಾ...’ ಎಂದು ಮನೆಯೊಳಗಿಂದ ಕೂಗು ಹಾಕಿ ಒಮ್ಮೆ ಮನೆಯನ್ನು ಸುಮ್ಮನೇ ನೋಡಿದೆ.

ಇಲ್ಲೇ ಅಲ್ಲವಾ ನಾವು, ಅಂದರೆ ರೇಖಾ ಮತ್ತು ನಾನು, ನೂರೆಂಟು ಕನಸುಗಳನ್ನು ಕಂಡಿದ್ದು. ಅದರಲ್ಲಿ ಕೆಲಸ ಬದಲಿಸುವ ಒಂದು ಕನಸು ನನಸಾಗಿತ್ತು. ಮಗಳು ಗೌರಿಗೆ ವಿಶೇಷ ಶಾಲೆ ಹುಡುಕುವ ಇನ್ನೊಂದು ಕನಸೂ ನೆರವೇರಿತ್ತು. ಉಳಿದವು ಕನಸಾಗಿಯೇ ಉಳಿದಿವೆ. ದಿನಾ ಹೊಸ ಭಾವನೆಗಳಿಗೆ ಕಾವು ಕೊಡುತ್ತಿವೆ.

ದಿಟ್ಟಿಸಿ ನೋಡಿದೆ. ಇಲ್ಲಿ ಹಾಕಿದ್ದ ದಿವಾನ್‌ ಮೇಲೆ ಕೂತು ಗೌರಿ ತನಗಿಷ್ಟವಾದ ಉದಯ ಟಿವಿಯವರ ಯು೨ ಟಿವಿ ನೋಡುತ್ತಿದ್ದುದು. ಇಲ್ಲೇ ಅಲ್ಲವಾ ಸಣ್ಣ ಮಗಳು ನಿಧಿ ಆಟವಾಡುತ್ತಿದ್ದುದು. ಈ ಚಿಕ್ಕ ಗೂಡಿನಲ್ಲಿ ಕೂತು ನಮ್ಮತ್ತ ನೋಡಿ ಕೇಕೆ ಹಾಕುತ್ತಿದ್ದುದು. ನಾವು ದಿನಾ ಮುಂಜಾನೆಯ ವಾಕ್‌ ಮುಗಿಸಿ ಇಲ್ಲೇ ಅಲ್ಲವಾ ಚಹ ಕುಡಿಯುತ್ತಿದ್ದುದು. ದೊಡ್ಡ ಬೆಡ್‌ ರೂಮ್‌ ತುಂಬ ಹುಡುಗಿಯರಿಬ್ಬರೂ ಹರವಿ ಹಾಕುತ್ತಿದ್ದ ಆಟಿಕೆ ಸಾಮಾನುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿರುತ್ತಿದ್ದವು. ಹಾಸಿಗೆ ಎಳೆದಾಡಿ ಅಸ್ತವ್ಯಸ್ತ ಮಾಡಿರುತ್ತಿದ್ದರು. ಛಕ್ಕನೇ ಯಾರಾದರೂ ಬೆಡ್‌ ರೂಮಿಗೆ ನುಗ್ಗಿದರೆ ಮುಸಿಮುಸಿ ನಗುತ್ತ ಹೊರಗೆ ಹೋಗಬೇಕು, ಹಾಗೆ ಮಾಡಿರುತ್ತಿದ್ದರು ಹಾಸಿಗೆಯನ್ನು. ಅರೆಕ್ಷಣ ಅವನ್ನೆಲ್ಲ ಮತ್ತೆ ಕಣ್ಣು ತುಂಬಿಕೊಂಡೆ.

ನನ್ನದು ಅಂತ ಮಾಡಿಕೊಂಡಿದ್ದ, ಒಂದರ್ಥದಲ್ಲಿ ಸ್ಟೋರ್‌ರೂಮ್‌ ಕೂಡಾ ಆಗಿದ್ದ ರೂಮಿನಲ್ಲಿ ಕಂಪ್ಯೂಟರ್‌ ಇಡುವ ಜಾಗವನ್ನು ತುಂಬ ಹೊತ್ತು ನೋಡಿದೆ. ಎಷ್ಟೊಂದು ಕನಸುಗಳು ಇಲ್ಲಿ ಅಕ್ಷರಗಳಾಗಿ ರೂಪುಗೊಂಡಿದ್ದವು. ಮೊದಲ ಸಲ ಹೊಸ ಕಂಪ್ಯೂಟರ್‌ ಕೊಂಡಾಗಿನ ಖುಷಿ, ಅದರ ದೂಳು ಒರೆಸುವ ಉಮೇದು, ಮೊದಲ ಸಲ ಇಂಟರ್‌ನೆಟ್‌ ಬಂದಾಗಿನ ಸಡಗರ, ರೇಖಾಳಿಗೆ ಅದರ ಸೊಗಡನ್ನು ಬಣ್ಣಿಸಿ ಹೇಳಿದ್ದು, ನನಗೆ ಖುಷಿ ಕೊಟ್ಟ ಹಲವಾರು ಬರಹಗಳನ್ನು ಇಲ್ಲಿ ಕೂತು ಬರೆದಿದ್ದು, ನನ್ನ ನಿಜವಾದ ಕ್ರಿಯಾಶೀಲತೆ ಬರವಣಿಗೆಯಲ್ಲೇ ಇರುವುದು ಎಂದು ಪದೆ ಪದೆ ಅಂದುಕೊಂಡಿದ್ದು, ಅಲ್ಲಿ ಕೂತು ಓದಿದ ಹಲವಾರು ಪುಸ್ತಕಗಳು, ಅವು ಹುಟ್ಟಿಸಿದ ಕನಸುಗಳು ಹಾಗೂ ಉದಾತ್ತ ಭಾವನೆಗಳು ಮತ್ತೆ ಕಣ್ಣ ಮುಂದೆ ಸುಳಿದವು.

ಅಡುಗೆ ಮನೆ ಖಾಲಿಖಾಲಿ. ಆಯುರ್ವೇದ ವೈದ್ಯರು ಗೌರಿಗೆ ಕಠಿಣ ಪಥ್ಯ ಹೇಳಿದಾಗ ದೀಪಾವಳಿ ಆಚರಿಸದೇ ಸುಮ್ಮನಿದ್ದುದು, ಅಪರೂಪಕ್ಕೊಮ್ಮೆ ಗೆಳೆಯರು ಬಂದಾಗ ಮಾಡಿ ಬಡಿಸಿದ ಮಿರ್ಚಿ, ಮಂಡಾಳ ಒಗ್ಗರಣೆ, ರೇಖಾ ಆಸ್ಥೆಯಿಂದ ಜೋಡಿಸಿಡುತ್ತಿದ್ದ, ಒರೆಸಿ ಸ್ವಚ್ಛವಾಗಿಡುತ್ತಿದ್ದ ಪಾತ್ರೆಗಳಿದ್ದುದು, ಮಗಳ ಭವಿಷ್ಯ ನೆನೆದು ಕಣ್ಣೀರಿಟ್ಟಿದ್ದು ಇದೇ ಅಡುಗೆ ಮನೆಯಲ್ಲಿ ಅಲ್ಲವೆ? ತನಗಿಷ್ಟವಾದ ಅಡುಗೆ ಮಾಡುತ್ತ ಮಗ್ನಳಾಗುತ್ತಿದ್ದುದು ಇಲ್ಲೇ ತಾನೆ? ಇದೇ ಕಿಟಕಿಯಿಂದ ತಾನೆ ಓನರ್‌ ಆಂಟಿ ನಿಧಿಯನ್ನು ಕರೆಯುತ್ತಿದ್ದುದು? ಆಕೆ ಓಡುತ್ತ ಹಿತ್ತಲಿಗೆ ಧಾವಿಸುತ್ತಿದ್ದುದು? ಅಡುಗೆ ಮನೆಯನ್ನು ಮತ್ತೊಮ್ಮೆ ಕಣ್ಣು ತುಂಬಿಕೊಂಡೆ.

ಈಗ ಮನೆ ಬಿಡಬೇಕು. ಇಲ್ಲೇ ಶಾಶ್ವತವಾಗಿ ಇದ್ದುಬಿಡುತ್ತೇವೇನೋ ಎಂಬಂತೆ ಮನೆ ತುಂಬ ಜೋಡಿಸಿಟ್ಟಿದ್ದ ಸಾಮಾನುಗಳನ್ನೆಲ್ಲ ಕಳೆದ ಎರಡು ದಿನಗಳಿಂದ ಪ್ಯಾಕ್‌ ಮಾಡಿದ್ದಾಗಿತ್ತು. ಒಂದೊಂದು ಸಾಮಾನನ್ನು ಪ್ಯಾಕ್‌ ಮಾಡುವಾಗಲೂ ಅದು ನಮ್ಮ ಮನೆಯೊಳಗೆ ಬಂದ ರೀತಿ, ಅವನ್ನು ನಾವು ಸ್ವಾಗತಿಸಿದ ರೀತಿ, ಬಳಸಿ ಖುಷಿಪಟ್ಟ ವಿವರಗಳೆಲ್ಲ ಮತ್ತೆ ಮತ್ತೆ ಸುಳಿದವು. ಹೊರಗೆ ನಿಂತಿರುವ ಲಾರಿಯಲ್ಲಿ ನಮ್ಮೆಲ್ಲ ಕನಸುಗಳನ್ನು ಪ್ಯಾಕ್‌ ಮಾಡಿ ಹೇರಿಯಾಗಿದೆ. ಲಾರಿಯವ ಹಾರ್ನ್‌ ಹಾಕುತ್ತಿದ್ದಾನೆ. ಕೊನೆಯ ಸಲ ಇದು ನನ್ನ ಮನೆ ಅಂತ ಅಂದುಕೊಳ್ಳುವುದು. ಲಾರಿ ಹತ್ತಿದ ಮರುಕ್ಷಣದಿಂದ ಅದು ಇನ್ಯಾರದೋ ಮನೆಯಾಗಲಿದೆ. ಮತ್ಯಾರದೋ ಕನಸುಗಳಿಗೆ ವೇದಿಕೆಯಾಗಲಿದೆ.

ಇವತ್ತು ರಾತ್ರಿಯಿಂದ ಚಂದ್ರಾ ಲೇಔಟ್‌ನ ಮನೆ ನಮ್ಮ ಪಾಲಿಗೆ ಹೊಸ ಮನೆಯಾಗಲಿದೆ. ಹಳೆಯ ಕನಸುಗಳೊಂದಿಗೆ ಹೊಸ ಕನಸುಗಳಿಗೆ ವೇದಿಕೆಯಾಗಲಿದೆ. ಗೌರಿ ವಿಶೇಷ ಶಾಲೆಗೆ ಹೋಗುತ್ತಾಳೆ. ಅದಕ್ಕೆಂದೇ ಮನೆ ಬದಲಿಸುತ್ತಿದ್ದೇವೆ. ಅದರೊಂದಿಗೆ ಬದುಕೂ ಬದಲಾಗಲಿ. ಅವಳ ಬದುಕು ಬೆಳಗಲಿ ಎಂದು ದೂಳು ತುಂಬಿದ್ದ ಖಾಲಿ ಮನೆಯೊಳಗೆ ನಿಂತು ಅರೆಕ್ಷಣ ಪ್ರಾರ್ಥಿಸಿದೆ.

ಮನೆ ನನ್ನನ್ನೇ ಮೌನವಾಗಿ ದಿಟ್ಟಿಸಿತು. ಹೊರಗೆ ಚಳಿಗಾಲದ ಇಳಿ ಸಂಜೆ. ಮನೆಯೊಳಗೆ ಮಸುಕು ಬೆಳಕು. ಲೈಟ್‌ ಹಾಕಿದೆ. ಎಲ್ಲ ರೂಮಿನ ಲೈಟ್‌ಗಳನ್ನೂ ಹಾಕಿದೆ. ಬೋಳು ಮನೆ ಆರ್ತವಾಗಿ ದಿಟ್ಟಿಸಿದಂತಾಯಿತು. ಕಳೆದ ಒಂದು ವರ್ಷದಿಂದ ಅಲ್ಲಿ ಬೆಳೆಸಿಕೊಂಡ ಭಾವನೆಗಳು, ಸಂಬಂಧಗಳು ನೆನಪಿಗೆ ಬಂದು ಗಂಟಲು ಉಬ್ಬಿತು.

'ಬರುತ್ತೇನೆ ಮಿತ್ರಾ’ ಎಂದು ಮೌನವಾಗಿ ವಿದಾಯ ಹೇಳಿ ಹಿಂತಿರುಗಿ ಕೂಡ ನೋಡದೇ ಸರ ಸರ ನಡೆದು ಲಾರಿ ಹತ್ತಿದೆ. ಡ್ರೈವರ್‌ ಗೇರ್‌ ಬದಲಿಸಿದ. ಹಿಂದೆ ಸಾಮಾನುಗಳ ಮೇಲೆ ಕೂತಿದ್ದ ಸಹಾಯಕರು ’ರೈಟ್‌’ ಹೇಳಿದರು. ಲಾರಿ ಕುಲುಕುತ್ತಾ ಹೊರಟಿತು. ನಾನು ಕಣ್ಣು ಮುಚ್ಚಿಕೊಂಡು ಸೀಟ್‌ಗೆ ಒರಗಿದೆ.

ಮನಸ್ಸಿನ ತುಂಬ ನೆನಪುಗಳದೇ ದಿಬ್ಬಣ.

- ಚಾಮರಾಜ ಸವಡಿ

ರೆಂಬೆ ಕೊಂಬೆಗಳಿಲ್ಲದ ಮರಗಳು

29 Nov 2008

3 ಪ್ರತಿಕ್ರಿಯೆ

’ನಾನು ಇಂಥವರ ಶಿಷ್ಯ ಅಥವಾ ಶಿಷ್ಯೆ’ ಎಂಬ ಮಾತನ್ನು ಆಗಾಗ ಕೇಳುತ್ತಿರುತ್ತೇವೆ. ’ಗುರುವಿಗೆ ತಕ್ಕ ಶಿಷ್ಯ/ಶಿಷ್ಯೆ’ ಎಂಬ ಮಾತೂ ಉಂಟು.

ಪಿ. ಲಂಕೇಶ್ ಅಂತಹ ಹಲವಾರು ಜನರನ್ನು ಬೆಳೆಸಿದರು. ತಮ್ಮ ಮಕ್ಕಳಿಂದ ಬರೆಸದೇ ಈಗ ತಾನೆ ತಾರುಣ್ಯಕ್ಕೆ ಕಾಲಿಡುತ್ತಿದ್ದ ಹುಡುಗ-ಹುಡುಗಿಯರಿಂದ ಬರೆಸಿ ಪತ್ರಿಕೆ ಬೆಳೆಸಿದ್ದಷ್ಟೇ ಅಲ್ಲ, ಅವರನ್ನೂ ಬೆಳೆಸಿದರು. ಲಂಕೇಶರ ಕಾಲದಲ್ಲಿ ಪ್ರವರ್ಧಮಾನಕ್ಕೆ ಬಂದ ಹಲವಾರು ಉತ್ತಮ ಬರಹಗಾರರು ಅದಕ್ಕೆ ಸಾಕ್ಷಿ. ಇಂಥದೇ ಉದಾಹರಣೆಯನ್ನು ಪತ್ರಿಕೋದ್ಯಮವೊಂದೇ ಅಲ್ಲ, ಪ್ರತಿಯೊಂದು ಕ್ಷೇತ್ರದಲ್ಲಿಯೂ ನೋಡಬಹುದು. ಪುಟ್ಟಣ್ಣ ಕಣಗಾಲ್ ಹಲವಾರು ಕಲಾವಿದ/ಕಲಾವಿದೆಯರನ್ನು ರೂಪಿಸಿದರು.

ಸದ್ಯಕ್ಕೆ ಪತ್ರಿಕೋದ್ಯಮವನ್ನಷ್ಟೇ ನೋಡುವುದಾದರೆ, ಲಂಕೇಶರ ನಂತರ ಆ ಮಾದರಿಯನ್ನು ಅನುಸರಿಸಿ ಯಶಸ್ವಿಯಾದವರು ಅಗ್ನಿ ಶ್ರೀಧರ್. ಪತ್ರಿಕೋದ್ಯಮದಲ್ಲಿ ಏನೇನೂ ಅನುಭವವಿಲ್ಲದೇ ಇದ್ದರೂ, ಅಗ್ನಿ ಶ್ರೀಧರ್ ’ಅಗ್ನಿ’ ಪತ್ರಿಕೆ ಆರಂಭಿಸಿದರು. ಹಲವಾರು ಪತ್ರಕರ್ತರನ್ನು ಹುಟ್ಟುಹಾಕಿದರು. ತಾವೂ ಬೆಳೆದರು, ಹೊಸಬರನ್ನೂ ಬೆಳೆಸಿದರು.

ಆ ಕಾಲ ಮರೆಯಾಗಿ ಹೋಯಿತೆ ಎಂದು ಹಲವಾರು ಸಾರಿ ನನಗೆ ಅನ್ನಿಸಿದೆ.

ನನ್ನ ಚಿಕ್ಕ ಅನುಭವದ ಹಿನ್ನೆಲೆಯಲ್ಲಿ ನೋಡಿದರೂ, ಈ ವೃತ್ತಿಯಲ್ಲಿ ತುಂಬ ಜನ ಪ್ರತಿಭಾವಂತರು ಇರುವುದು ನನ್ನ ಗಮನಕ್ಕೆ ಬಂದಿದೆ. ಅವರಲ್ಲಿ ಆದರ್ಶಗಳಿವೆ, ಕನಸುಗಳಿವೆ, ಪ್ರತಿಭೆಯಿದೆ. ಒಂದಿಷ್ಟು ಸಾಣೆ ಹಿಡಿಯುವ, ಪೋಷಿಸುವ ಕೆಲಸ ನಡೆದರೂ ಸೊಗಸಾಗಿ ಬರೆಯಬಲ್ಲವರು ತುಂಬ ಜನ ಸಿಗುತ್ತಾರೆ. ಅವರಿಗೆ ಒಂದಿಷ್ಟು ಮಾರ್ಗದರ್ಶನ ಬೇಕಿದೆ. ಅವರಿಗೆ ಕೈಹಿಡಿದು ಬರೆಸಬೇಕಿಲ್ಲ. ಅವರನ್ನು ಅವರ ಪಾಡಿಗೆ ಬಿಟ್ಟರೂ ಸಾಕು, ತುಂಬ ಚೆನ್ನಾಗಿ ಬರೆಯುತ್ತಾರೆ. ಹೊಸ ಹೊಳಹುಗಳನ್ನು ಹೆಕ್ಕಿ ತರುತ್ತಾರೆ. ಅಂಥವರಿಗೆ ಒಂಚೂರು ಅವಕಾಶ, ಪ್ರೋತ್ಸಾಹ ನೀಡಿದರೂ ಸಾಕು, ಇವತ್ತು ಪತ್ರಿಕೋದ್ಯಮದಲ್ಲಿ ಕಾಣುತ್ತಿರುವ ಹಲವಾರು ಸಮಸ್ಯೆಗಳು ತಮಗೆ ತಾವೆ ನಿವಾರಣೆಯಾಗುತ್ತವೆ.

ಆದರೆ, ಅಂತಹ ಕೆಲಸ ನಡೆಯುತ್ತಿಲ್ಲ.

ಅವಕಾಶ ಕೊಡಬಹುದಾದ ಹಂತದಲ್ಲಿರುವವರಿಗೆ ಇಂತಹ ಯುವ ಪ್ರತಿಭೆಗಳನ್ನು ಬೆಳೆಸಲು ಏನೋ ಅಳುಕು. ಅವರನ್ನು ಪ್ರೋತ್ಸಾಹಿಸಿದರೆ, ತಮಗಿಂತ ಮೇಲೆ ಬಂದುಬಿಡುತ್ತಾರೇನೋ ಎಂಬ ಹಿಂಜರಿಕೆ. ಹಾಗಾಗಬಾರದು ಎಂಬ ಅಸೂಯೆ. ನಾನು ಕಷ್ಟಪಟ್ಟು ಮೇಲೆ ಬಂದಿದ್ದೇನೆ. ಅವರೂ ಹಾಗೇ ಮಾಡಲಿ ಎಂಬ ದುರ್ಬುದ್ಧಿ. ಅಷ್ಟೇ ಆದರೆ, ಪರವಾಗಿಲ್ಲ. ಆದರೆ, ಬೆಳೆಯುವ ಕುಡಿಯನ್ನು ಮೊಳಕೆಯಲ್ಲೇ ಚಿವುಟುವ ನೀಚತನವೂ ಸೇರಿಕೊಂಡಿರುತ್ತದೆ. ಹೀಗಾಗಿ, ಎಷ್ಟೋ ಪ್ರತಿಭಾವಂತರು ತೆರೆಮರೆಯಲ್ಲೇ ಇದ್ದಾರೆ. ಅವರಿಗೆ ಅವಕಾಶಗಳಿಲ್ಲ.

ಹಾಗಂತ ಅವರು ಪೂರ್ತಿ ನಾಶವಾಗಿಬಿಡುತ್ತಾರೆ ಎಂದಲ್ಲ. ತಮ್ಮ ಸರದಿಗಾಗಿ ಅವರು ತುಂಬ ಕಾಯಬೇಕಾಗುತ್ತದೆ. ಸಾಕಷ್ಟು ಹೋರಾಟ ನಡೆಸಬೇಕಾಗುತ್ತದೆ. ಸಂಸ್ಥೆಗಳ ಮೇಲೆ ಸಂಸ್ಥೆಗಳನ್ನು ಬದಲಿಸಬೇಕಾಗುತ್ತದೆ. ಹಲವಾರು ರೀತಿಯ ಪ್ರಯೋಗಗಳನ್ನು ನಡೆಸಿ, ತಮ್ಮ ಪ್ರತಿಭೆ ಮುಕ್ಕಾಗದಂತೆ ಕಾಪಾಡಿಕೊಳ್ಳಬೇಕಾಗುತ್ತದೆ. ಆದರೆ, ಇಷ್ಟೆಲ್ಲ ಬೆಳವಣಿಗೆಗಳ ಮಧ್ಯೆ ಎಷ್ಟೋ ಜನ ನಿರಾಶರಾಗುತ್ತಾರೆ. ನಿರ್ಲಿಪ್ತರಾಗುತ್ತಾರೆ. ಆಸಕ್ತಿ ಕಳೆದುಕೊಂಡು ವೃತ್ತಿಯಿಂದ, ಪ್ರವೃತ್ತಿಯಿಂದ ವಿಮುಖರಾಗುತ್ತಾರೆ. ಬಹಳಷ್ಟು ಜನ ಸಿನಿಕರಾಗಿ, ವ್ಯವಸ್ಥೆ ವಿರುದ್ಧ ಆಕ್ರೋಶ ಬೆಳೆಸಿಕೊಂಡು ಕಂಟಕಪ್ರಾಯರಾಗುತ್ತಾರೆ. ಅದು ಇನ್ನಷ್ಟು ಅಪಾಯಕಾರಿ ಬೆಳವಣಿಗೆ.

ಯಾವುದೇ ಸಂಸ್ಥೆ ನೋಡಿದರೂ ಈ ಮಾತಿಗೆ ಸಾಕ್ಷ್ಯ ಸಿಗುತ್ತದೆ. ತನ್ನ ಮಕ್ಕಳನ್ನು ಬಿಟ್ಟು ಇತರರು ಬೆಳೆಯಬಾರದು ಎಂದು ಹೊರಟರು ಎಚ್.ಡಿ. ದೇವೇಗೌಡ. ಅದರಿಂದ ಪಕ್ಷ ಬೆಳೆಯಲಿಲ್ಲ. ಇದ್ದ ಅಧಿಕಾರವನ್ನೂ ಅವರು ಕಳೆದುಕೊಳ್ಳಬೇಕಾಯಿತು. ಹಲವಾರು ನಾಯಕರು ಪಕ್ಷ ಬಿಟ್ಟು ಹೋದರು. ಹಿಂದೆ ಇದೇ ಮಾದರಿಯನ್ನು ದಿ. ಪ್ರಧಾನಿ ಇಂದಿರಾ ಗಾಂಧಿ ಅನುಸರಿಸಿದ್ದರು. ಅದರ ಪರಿಣಾಮ ಏನಾಯಿತು ಎಂಬುದು ಎಲ್ಲರಿಗೂ ಸ್ಪಷ್ಟ. ಇತರರ ಸಹಜ ಅವಕಾಶಗಳನ್ನು, ಬೆಳವಣಿಗೆಯನ್ನು ತಡೆಯುವ ವ್ಯಕ್ತಿ ತನ್ನ ಬೆಳವಣಿಗೆ ಹಾಗೂ ಅವಕಾಶಗಳಿಗೇ ಕಲ್ಲು ಹಾಕಿಕೊಳ್ಳುತ್ತಾನೆ.

ಹಿಂದೊಮ್ಮೆ ಓದಿದ ವಿಷಯವೊಂದು ಇಲ್ಲಿ ನೆನಪಾಗುತ್ತಿದೆ: ನಿಕೃಷ್ಟ, ಮಹತ್ವವಲ್ಲದ ಎಂದು ನಾವು ಭಾವಿಸುವ ಜೀವಿಯೂ ತನ್ನ ಸಂತಾನ ಸೃಷ್ಟಿಸಿ ಸಾಯುತ್ತದೆ. ಒಂದು ಸಾಧಾರಣ ಬೀಜವೂ, ತನ್ನ ಬದುಕಿನ ಅವಧಿಯಲ್ಲಿ ತನ್ನಂಥ ಹಲವಾರು ಬೀಜಗಳನ್ನು ಸೃಷ್ಟಿಸುತ್ತದೆ. ಆದರೆ, ಪ್ರತಿಭಾವಂತರು, ಆಯಕಟ್ಟಿನ ಹುದ್ದೆಯಲ್ಲಿರುವವರು ಈ ನಿಕೃಷ್ಟ ಜೀವಿಗೂ ಕಡೆಯಾಗಿ ವರ್ತಿಸುವುದು ಏಕೆಂಬುದೇ ಅರ್ಥವಾಗುವುದಿಲ್ಲ. ಅದಕ್ಕೆ ಕಾರಣಗಳಿರಬಹುದು. ಆದರೆ, ಅದರಿಂದ ಯಾರಿಗೂ ಉಪಯೋಗವಿಲ್ಲ. ರೆಂಬೆ ಕೊಂಬೆಗಳು ವಿಸ್ತರಿಸುತ್ತಿದ್ದರೇ ಮರ ಬೆಳೆವುದು. ಹಾಗೆ, ಪ್ರತಿಭಾವಂತ ಬೆಳೆಯುವುದು ತನ್ನ ಜೊತೆಗಿರುವವರ ಬೆಳವಣಿಗೆಯಿಂದ ಮಾತ್ರ.

ಇಲ್ಲದಿದ್ದರೆ, ಹೈಬ್ರಿಡ್ ಬೀಜದಂತೆ ಆಗುತ್ತಾರೆ ಇಂಥ ಪ್ರತಿಭಾವಂತರು. ತಾವವು ಮಾತ್ರ ಬೆಳೆಯುತ್ತಾರೆ. ಆದರೆ, ಅವರ ಸೃಷ್ಟಿ ನಪುಂಸಕವಾಗಿ ವ್ಯರ್ಥವಾಗುತ್ತದೆ.

- ಚಾಮರಾಜ ಸವಡಿ

ಅಲಾರಾಂಗೆ ಚಳಿಗಾಲವಿಲ್ಲ.

22 Nov 2008

3 ಪ್ರತಿಕ್ರಿಯೆ

ಅದಕ್ಕೆ ಮಳೆಗಾಲವೂ ಇಲ್ಲ, ಬೇಸಿಗೆ ಕಾಲವೂ ಇಲ್ಲ. ಅದಕ್ಕೆ ಇರುವುದು ಒಂದೇ ಕಾಲ. ಅದು ಸಮಯ.

ಯಾವಾಗ ಸೆಟ್ ಮಾಡಿರುತ್ತೇವೋ, ಆ ಕಾಲಕ್ಕೆ ಸರಿಯಾಗಿ ಬಡಿದುಕೊಳ್ಳುವುದೊಂದೇ ಅದಕ್ಕೆ ಗೊತ್ತು. ಹಾಗೆ ಬಡಿದುಕೊಳ್ಳುತ್ತಾ, ನಮ್ಮನ್ನೂ ಬಡಿದು ಎಬ್ಬಿಸುತ್ತದೆ. ಅಥವಾ ಎಬ್ಬಿಸಲು ಬಡಿದಾಡುತ್ತದೆ.

ಮೋಡ ತುಂಬಿದ ಬೆಂಗಳೂರಿನ ಆಕಾಶದ ಕೆಳಗೆ, ರಸ್ತೆಗಳು ಅಂಗಾತ ಮಲಗಿ ಮೋಡವನ್ನೇ ದಿಟ್ಟಿಸಿ ನೋಡುತ್ತ ಮಲಗಿರುವ ಹೊತ್ತು ಬಡಿದುಕೊಳ್ಳುವುದೆಂದರೆ ಅದಕ್ಕೆ ತುಂಬ ಇಷ್ಟ. ಆಗ ಸಮಯ ಎಷ್ಟಾಗಿರುತ್ತದೆಂಬುದು ನನಗೆ ಗೊತ್ತು. ಆದರೂ, ಅಲಾರಾಂನ ತಲೆ (?) ಕೆಟ್ಟಿದೆ ಎಂದು ನಂಬಲು ಮನಸ್ಸು ಬಯಸುತ್ತದೆ. ಅಷ್ಟು ಬೇಗ ನಸುಕಿನ ಐದು ಗಂಟೆಯಾಯಿತೆ? ಎಂದು ನಂಬಲು ಅದು ತಯಾರಿರುವುದಿಲ್ಲ. ನಿದ್ದೆಗಟ್ಟಣಿನಲ್ಲೇ ಹುಡುಕಿ ಅಲಾರಾಂ ತಲೆಗೆ ಮೊಟಕುತ್ತೇನೆ. ಪಾಪ, ಸುಮ್ಮನಾಗುತ್ತದೆ. ಆದರೆ, ಅದರ ಎಚ್ಚರಿಕೆ ಮನಸ್ಸಿನ ಗಡಿಯಾರದೊಳಗೆ ಸೇರಿಕೊಂಡು ಟಕ್ ಟಕ್ ಅನ್ನಲು ಶುರುವಾಗಿರುತ್ತದೆ. ಅದನ್ನು ಮೊಟಕಲಾಗದು.

ಮೊದಲಿನಿಂದಲೂ ಹೀಗೇ. ಅಲಾರಾಂ ಬಡಿದುಕೊಂಡ ನಂತರ ಮತ್ತೆ ಮಲಗುವುದು ನನಗೆ ಕಷ್ಟ. ಅವತ್ತು ಮಾಡಬೇಕಾದ ಕೆಲಸಗಳ ಪಟ್ಟಿಯನ್ನು ಮನಸ್ಸು ಓದಲು ಶುರು ಮಾಡುತ್ತದೆ. ಹೊರಗೆ ಚಳಿ ಇರಲಿ, ಮಳೆ ಇರಲಿ, ಕೆಟ್ಟ ಸೆಕೆ ಇರಲಿ- ಅದರ ಪಟ್ಟಿ ಓದುವಿಕೆ ತಪ್ಪುವುದಿಲ್ಲ. ಈ ನನ್ನಗಂದು ಮನಸ್ಸು ಅಲಾರಾಂಗಿಂತ ಹೆಚ್ಚು ಕ್ರಿಯಾಶೀಲ, ಕರಾರುವಾಕ್ಕು. ಆದರೂ, ಸ್ವಲ್ಪ ಹೊತ್ತು ಸೋಮಾರಿತನ ಅನುಭವಿಸುತ್ತ ಅದರ ಪಟ್ಟಿ ಓದುವಿಕೆಯನ್ನು ನಿರಾಸಕ್ತಿಯಿಂದ ಕೇಳಿಸಿಕೊಳ್ಳುತ್ತೇನೆ. ಅರೆ, ಇದು ನಿತ್ಯದ ವರಾತ ಬಿಡು ಅಂದು ಮತ್ತೆ ಮಲಗಲು ಯತ್ನಿಸುತ್ತೇನೆ.

ಆದರೆ, ಮನಸಿನ ಟಿಕ್ ಟಿಕ್ ಶುರುವಾಗಿಬಿಟ್ಟಿರುತ್ತದೆ.

ಒಂಚೂರು ಹೊರಳಾಡುತ್ತೇನೆ. ಸುಳ್ಳು ಸುಳ್ಳೇ ಮುಸುಕೆಳೆದು, ಇನ್ನೂ ಐದಾಗಿಲ್ಲ ಅಂದುಕೊಳ್ಳುತ್ತ ಮಲಗಲು ಯತ್ನಿಸುತ್ತೇನೆ. ’ಹೊರಗೆ ಯಾವ ಪರಿ ಚಳಿ ಇದೆ. ಈ ಚಳಿಯಲ್ಲಿ ಎದ್ದು ಮಾಡುವಂಥ ಮಹತ್ಕಾರ್ಯ ಏನಿದೆ’ ಅಂದುಕೊಳ್ಳುತ್ತ ಮನಸ್ಸನ್ನು ಒಲಿಸಲು ಯತ್ನಿಸುತ್ತೇನೆ. ಬಡ್ಡಿಮಗಂದು, ಟಿಕ್ ಟಿಕ್ ನಿಲ್ಲಿಸುವುದಿಲ್ಲ.

ಇನ್ನು ಏಳದೇ ವಿಧಿಯಿಲ್ಲ.

ಆಲಸ್ಯದಿಂದ ಎದ್ದು ಹಾಸಿಗೆಯಲ್ಲೇ ಕೂಡುತ್ತೇನೆ. ’ಈಗ ನೀರು ತಣ್ಣಗಿರುತ್ತದೆ. ಕಾಲ ಮೇಲೆ ಬಿದ್ದರೆ ಮುಗೀತು, ಮಂಕಾಗುತ್ತೇನೆ’ ಎಂದೆಲ್ಲ ಹೇಳಿಕೊಂಡು ಮನಸ್ಸನ್ನು ಕಳ್ಳತನದಿಂದ ಆಲಿಸುತ್ತೇನೆ. ’ಟಿಕ್ ಟಿಕ್ ಟಿಕ್...!’ ಊಹೂಂ, ಅದು ಕೇಳಿಸಿಕೊಳ್ಳುತ್ತಿಲ್ಲ. ’ಇವತ್ತು ಮಾಡುವಂಥ ಕೆಲಸವೇನೂ ಇಲ್ಲ ಗುರೂ’ ಅನ್ನುತ್ತೇನೆ. ಆದರೂ, ’ಟಿಕ್ ಟಿಕ್ ಟಿಕ್...!’

ಉಪಯೋಗವಿಲ್ಲ. ನಾನೇ ಪಳಗಿಸಿದ ಪಶು ನನ್ನ ಮಾತು ಕೇಳುತ್ತಿಲ್ಲ. ನಿರಾಸೆಯಾಗುತ್ತದೆ. ವಿಧಿಯಿಲ್ಲದೇ ಏಳುತ್ತೇನೆ. ಹೊದಿಕೆ ಮಡಿಸಿ ದಿಂಬಿನ ಮೇಲಿಟ್ಟು, ಉಳಿದಿದ್ದನ್ನು ಹೆಂಡತಿ, ಮಕ್ಕಳು ಎದ್ದನಂತರ ಮಡಿಸಿದರಾಯಿತೆಂದು ಬಾತ್‌ರೂಮಿಗೆ ಹೊರಡುತ್ತೇನೆ.

ಅಲ್ಲಿ ನೀರು ನಿಜಕ್ಕೂ ತಣ್ಣಗಿದೆ.

’ಹೇಳಲಿಲ್ಲವಾ ನಾನು?’ ಅಂದು ಮನಸ್ಸನ್ನು ಬೈದುಕೊಳ್ಳುತ್ತೇನೆ. ’ತಣ್ಣಗಿದ್ದರೆ ಇದ್ದೀತು ಬಿಡು’ ಎಂಬ ಉತ್ತರ. ಎಲಾ ಬಡ್ಡೀಮಗನೇ ಎಂದು ಬೈದುಕೊಂಡು ಪ್ರಾತಃರ್ವಿಧಿ ಮುಗಿಸುತ್ತೇನೆ. ಮುಖ ಒರೆಸಿಕೊಳ್ಳುವಾಗ ತಾಜಾತನ ಎನ್ನುವುದು ನಿಧಾನವಾಗಿ ಆವರಿಸಿಕೊಳ್ಳತೊಡಗಿದಾಗ ಮನಸ್ಸು ಉಲ್ಲಸ. .

ಯಥಾಪ್ರಕಾರ, ಕಂಪ್ಯೂಟರ್ ಆನ್ ಮಾಡಿದಾಗ, ನೆಟ್ ಕೈಕೊಟ್ಟಿರುತ್ತದೆ. ಮತ್ತೆ ಮಲಗಲು ಇದಕ್ಕಿಂತ ಒಳ್ಳೆಯ ನೆವ ಯಾವುದಿದೆ? ಆದರೆ, ತಣ್ಣೀರಿನಲ್ಲಿ ಮುಖ ಮತ್ತೊಂದು ಶುದ್ಧ ಮಾಡಿಕೊಂಡವನಿಗೆ ಮತ್ತೆ ನಿದ್ದೆ ಹತ್ತುವುದು ಕಷ್ಟ. ಸಿದ್ಧವಾಗೇ ಇರುವ ಪುಸ್ತಕವನ್ನು ತೆಗೆದುಕೊಂಡು ಓದಲು ಶುರು ಮಾಡುತ್ತೇನೆ.

ಮನಸ್ಸು ತೆರೆದುಕೊಳ್ಳುತ್ತದೆ. ಓದುತ್ತ ತಲೆ ಅಲ್ಲಾಡಿಸುತ್ತದೆ. ಮತ್ತೆ ಮತ್ತೆ ಮನನ ಮಾಡಿಕೊಳ್ಳುತ್ತ ಸುಖಿಸುತ್ತದೆ. ಆಹಾ ಅನ್ನುತ್ತದೆ. ಛೇ ಛೇ ಎಂದು ಲೊಚಗುಡುತ್ತದೆ. ಛೀ ಎಂದು ಗೊಣಗುತ್ತದೆ. ಉಶ್ ಎಂದು ನಿಟ್ಟುಸಿರಿಡುತ್ತದೆ. ಓದುತ್ತ ಓದುತ್ತ ಅದರಲ್ಲೇ ಲೀನವಾಗಿಬಿಡುತ್ತದೆ.

ಅಷ್ಟೊತ್ತಿಗೆ ಗಂಟೆ ಆರು. ಸಣ್ಣ ಹುಲಿ ಆಕಳಿಸುತ್ತ, ನಿಧಾನವಾಗಿ ಗುರುಗುಡುತ್ತದೆ. ಆದರೆ ಹಾಸಿಗೆ ಬಿಟ್ಟು ಎದ್ದು ಬರುವುದಿಲ್ಲ. ಆರೂವರೆಗೆ, ಅದರ ಅಕ್ಕ ಗುಟುರು ಹಾಕುತ್ತದೆ. ಆಗ ಏಳುತ್ತದೆ ತಾಯಿ ಹುಲಿ. ಗುರುಗುಡುವ, ಪರ್‌ಗುಡುವ ಮರಿಹುಲಿಗಳನ್ನು ಎಬ್ಬಿಸಿ ಬಾತ್‌ರೂಮಿಗೆ ಕರೆದೊಯ್ಯುತ್ತದೆ. ಮುಚ್ಚಿದ ಬಾಗಿಲಿನ ಒಳಗೆ ಅವು ಬಿಸಿ ನೀರಲ್ಲಿ ಸುಖಿಸುವ, ಕಿರಿಚಾಡುವ ಸದ್ದುಗಳು ಕೋಣೆಯಲ್ಲಿ ಕೂತವನನ್ನು ನಿಧಾನವಾಗಿ ತಾಕುತ್ತಿರುತ್ತವೆ. ಇನ್ನೈದು ನಿಮಿಷ ಅಷ್ಟೇ, ಹುಲಿಮರಿಗಳು ನನ್ನ ಮೇಲೆ ನೆಗೆಯಲು ಎಂದು ಮನಸ್ಸು ಎಚ್ಚರಿಸುತ್ತದೆ. ಅಷ್ಟೊತ್ತಿಗೆ ಓದು ಮುಗಿಸಿ, ಪುಟ ಗುರುತು ಇಟ್ಟು ಪುಸ್ತಕ ಮುಚ್ಚುವಷ್ಟರಲ್ಲಿ ಮರಿ ಹುಲಿಗಳು ಕೋಣೆಯೊಳಗೆ ದಾಳಿ ಇಟ್ಟಾಗಿರುತ್ತದೆ.

ಅದು ಕಾಫಿ ಸಮಯ !

ಹುಲಿಮರಿಗಳು ಹಾಲು ಕುಡಿಯುತ್ತವೆ. ಕಾಫಿ-ಹಾಲಿನ ತಟ್ಟೆ ಸುತ್ತ ಪರ್‌ಗುಡುತ್ತ ಕೂತು ಹಾಲು ಹೀರುತ್ತವೆ. ನಾನು ಮತ್ತು ಈಕೆ ನಿಧಾನವಾಗಿ ಕಾಫಿ ಕುಡಿಯುತ್ತೇವೆ. ಹೊರಗೆ ಸೂರ್ಯನ ಮೊದಲ ಕಿರಣ ನೆಲ ತಾಕುತ್ತಿರುತ್ತದೆ.

ಈಗ ಹುಲಿಗಳು ವಾಕಿಂಗ್‌ಗೆ ರೆಡಿ. ಅವಕ್ಕೆ ಬೆಚ್ಚಗಿನ ಬಟ್ಟೆ ಹಾಕಿ, ಶೂ ತೊಡಿಸಿ, ಬಾಗಿಲಿಗೆ ಬೀಗ ಹಾಕಿಕೊಂಡು ರಸ್ತೆಗಿಳಿಯುತ್ತೇವೆ. ಮರಿ ಹುಲಿಯ ಕೈಯನ್ನು ತಾಯಿ ಹುಲಿ ಹಾಗೂ ಮರಿಯ ಅಕ್ಕನ ಕೈಯನ್ನು ನಾನು ಹಿಡಿದುಕೊಂಡು ಬೆಳಗಿನ ತಾಜಾತನ ಆಸ್ವಾದಿಸುತ್ತ ಹೊರಡುತ್ತೇವೆ. ದಾರಿಯಲ್ಲಿ ಬಾಗಿಲು ತೆರೆದುಕೊಂಡ ಕಿರಾಣಿ ಅಂಗಡಿಯಿಂದ ’ಕೌಸಲ್ಯಾ, ಸುಪ್ರಜಾ...’

ಮರಿಹುಲಿಗಳು ಕೇಕೆ ಹಾಕುತ್ತವೆ. ಆ ದಿನದ ಮೊದಲ ಮುಗುಳ್ನಗು ನನ್ನಲ್ಲಿ ಬಿಚ್ಚಿಕೊಳ್ಳುತ್ತದೆ.

- ಚಾಮರಾಜ ಸವಡಿ

ಚಪ್ಪಲಿ ಎಂಬ ದೊರೆಯೇ, ನಿನಗಾರು ಸರಿಯೇ...!

20 Nov 2008

3 ಪ್ರತಿಕ್ರಿಯೆ

ಚರ್ಮದ ಚಪ್ಪಲಿಗಳವು. ಕೊಂಡು ಮೂರು ತಿಂಗಳಾಗಿತ್ತು. ಬಸ್ ಹತ್ತುವಾಗ ಇಳಿಯುತ್ತಿದ್ದ ಯಾವನೋ ಪಾಪಿ ಅದರ ಮೇಲೆ ಕಾಲಿಟ್ಟಿದ್ದ. ಹತ್ತುವ ಅವಸರದಲ್ಲಿ ಕಾಲನ್ನು ಬಲವಾಗಿ ಎತ್ತಿದಾಗ ಉಂಗುಷ್ಠ ಅಲ್ಲೇ ಹರ ಹರಾ ಅಂದಿತು.

ರಿಪೇರಿ ಮಾಡಿಸೋಣ ಅಂದುಕೊಂಡರೂ, ಮನಸ್ಸಿಗೆ ಹಳಹಳಿ ತಪ್ಪಲಿಲ್ಲ. ಚಪ್ಪಲಿ ಮೇಲೆ ಕಾಲಿಟ್ಟು ಅದಕ್ಕೊಂದು ಗತಿ ಕಾಣಿಸಿದ ಪಾಪಿಗೆ ಮನದಣಿಯೇ ಶಪಿಸಿದೆ.

ಹಾಗಂತ ಚಪ್ಪಲಿ ಸರಿಯಾದೀತೆ? ಬಸ್ ಇಳಿಯುವವರೆಗೂ ಅದರದೇ ಚಿಂತೆ. ನಾನಿಳಿಯುವ ಸ್ಟಾಪ್‌ನಲ್ಲಿ ಚಪ್ಪಲಿ ದುರಸ್ತಿ ಅಂಗಡಿ ಇರಲಿ ದೇವರೇ ಎಂದು ಬೇಡಿಕೊಂಡೆ.

ಆದರೆ, ದೇವರು ತಥಾಸ್ತು ಅನ್ನಲಿಲ್ಲ. ಬಸ್ ಇಳಿದಾಗ ರಿಪೇರಿ ಅಂಗಡಿ ಇರಲಿ, ಆ ಪರಿ ಸಂದಣಿಯಲ್ಲಿ ಸರಿಯಾಗಿ ನಿಲ್ಲುವುದಕ್ಕೂ ಆಗದಂಥ ಪರಿಸ್ಥಿತಿ. ಹೇಗೋ ಕಾಲೆಳೆದುಕೊಂಡು, ಶಪಿಸಿಕೊಳ್ಳುತ್ತ ಅಲ್ಲೇ ಹತ್ತಿರದ ಯಾವುದೋ ಅಂಗಡಿ ಮುಂದೆ ನಿಂತೆ. ನನ್ನ ದುರಾದೃಷ್ಟಕ್ಕೆ ಅದು ಫ್ಯಾನ್ಸಿ ಸ್ಟೋರ್. ಅಂಗಡಿ ಮುಂದೆ ಅನುಮಾನಾಸ್ಪದವಾಗಿ ನಿಂತ ನನ್ನನ್ನು ಅನುಮಾನದಿಂದ ನೋಡುತ್ತ ಒಳ ಹೋದರು ಹುಡುಗಿಯರು. ಇದು ಸರಿಯಲ್ಲ ಅಂದುಕೊಂಡು ಮತ್ತೆ ಕಾಲೆಳೆಯುತ್ತ ಹೊರಟೆ.

ಚಪ್ಪಲಿ ದುರಸ್ತಿ ಮನಸ್ಸಿನಿಂದ ಬಿಟ್ಟು ಹೋಯಿತು. ಅರ್ಜೆಂಟಾಗಿ ಹೊಸವನ್ನು ಕೊಳ್ಳಬೇಕು. ಇವನ್ನು ಅದೇ ಡಬ್ಬದಲ್ಲಿ ಪ್ಯಾಕ್ ಮಾಡಿಸಿಕೊಂಡು, ಬಿಡುವಾದಾಗ ದುರಸ್ತಿ ಮಾಡಿಸುವುದು ಅಂದುಕೊಂಡೆ.

ಆದರೆ, ದೇವರು ಮತ್ತೆ ತಥಾಸ್ತು ಅನ್ನಲಿಲ್ಲ.

ಹತ್ತಿರದಲ್ಲೆಲ್ಲೂ ಚಪ್ಪಲಿ ಅಂಗಡಿ ಕಾಣಲಿಲ್ಲ. ರೆಡಿಮೇಡ್ ಬಟ್ಟೆಗಳ ಅಂಗಡಿಳೇ ಎಲ್ಲ ಕಡೆ. ಅಲ್ಲಲ್ಲಿ ರೆಸ್ಟುರಾಂಟ್‌ಗಳು, ಎಲೆಕ್ಟ್ರಾನಿಕ್ಸ್ ಅಂಗಡಿಗಳು ಕಂಡವು. ಇವುಗಳ ಮಧ್ಯೆ, ಕೊನೆಗೊಂದು ಡಬ್ಬಾ ಚಪ್ಪಲಿ ಅಂಗಡಿ ಸಿಕ್ಕರೂ ಸಾಕು ಎಂದು ಮನಸ್ಸು ಹಂಬಲಿಸಿತು. ಕಣ್ಣಾಡಿಸುತ್ತ, ಕಾಲೆಳೆದುಕೊಂಡು ಹೊರಟ ನನ್ನ ಸ್ಥಿತಿ ಕಂಡು ನನಗೇ ಸಿಟ್ಟು.

ದುರಾದೃಷ್ಟ ಚಪ್ಪಲಿ ರೂಪದಲ್ಲೂ ಬರುತ್ತದೆ. ಅಷ್ಟೇ ಅಲ್ಲ, ಅದು ನಿಜಕ್ಕೂ ಹೀನಾಯವಾಗಿರುತ್ತದೆ ಎಂಬುದು ಅವತ್ತು ನನ್ನ ಅನುಭವಕ್ಕೆ ಬಂದಿತು. ನಾನು ಹೊರಟ ಫುಟ್‌ಪಾತ್‌ನಲ್ಲಿ ಪಾಲಿಕೆಯವರ ದುರಸ್ತಿ ಕೆಲಸ ನಡೆದಿತ್ತು. ಫುಟ್‌ಪಾತ್ ಅನ್ನು ಅಲ್ಲಲ್ಲಿ ಅಗಿದಿದ್ದರು, ನೀರು ಮಡುಗಟ್ಟಿತ್ತು. ಸಾಮಾನ್ಯ ಸಂದರ್ಭಗಳಲ್ಲಾದರೆ ಜಿಗಿದು ದಾಟಿ ಹೋಗುತ್ತಿದ್ದೆ. ಆದರೆ, ಈಗ ನಾನು ತಾತ್ಕಾಲಿಕವಾಗಿ ಕುಂಟ. ಜಿಗಿಯಲಾರೆ. ಆದರೆ, ಜಿಗಿಯದೇ ಇರಲಾಗದು ಅನ್ನುವಂತಿದೆ ಫುಟ್‌ಪಾತ್.

ನೀರು ನಿಂತ ಕಡೆ ಬೇಗ ದಾಟದಿದ್ದರೆ, ವಾಹನಗಳು ಪಿಚಕಾರಿ ಹೊಡೆದು ಹೋಗುತ್ತವೆ. ಆಗ ಚಪ್ಪಲಿ ಜೊತೆ ಹೊಸ ಬಟ್ಟೆಯನ್ನೂ ಖರೀದಿ ಮಾಡಬೇಕಾದೀತು ಎಂಬ ಎಚ್ಚರಿಕೆಯನ್ನು ನೀಡಿ ಮನಸ್ಸು ಸುಮ್ಮನಾಯಿತು. ಸುಮ್ಮನಾಗುವುದೇನು ’ಬ್ಲ್ಯಾಂಕ್’ ಅಂತಾರಲ್ಲ, ಹಾಗಾಯಿತು. ಫುಟ್‌ಪಾತ್ ಅಗೆದ ಜಾಗದಲ್ಲಿ ಮಂಕನಂತೆ ನಿಂತೆ.

ಒಂದೆರಡು ವಾಹನಗಳು ಅಪಾಯಕಾರಿ ಅನಿಸುವಷ್ಟು ಹತ್ತಿರ ಬಂದವು. ತಕ್ಷಣ ಸರಿದು ನಿಂತೆ. ಆದರೆ, ಉಂಗುಷ್ಠ ಹರಿದ ಚಪ್ಪಲಿ ನನ್ನ ವೇಗಕ್ಕೆ ಬರಲಿಲ್ಲ. ಅದು ಅಲ್ಲೇ ಉಳಿಯಿತು. ಖಾಲಿ ಪಾದ ಕೆಸರನ್ನು ಮೆತ್ತಿಕೊಂಡು ಹಿಂದಕ್ಕೆ ಬಂತು.

ಇದು ನಿಜಕ್ಕೂ ಪಾಪಿ ದಿನ ಎಂದು ಮತ್ತೆ ಶಪಿಸಿಕೊಂಡೆ. ಕೆಸರನ್ನು ಅಲ್ಲೇ ಕಲ್ಲಿಗೆ ಒರೆಸಿ, ಇನ್ನೂ ಅಂಟುಅಂಟಾಗಿದ್ದ ಪಾದಕ್ಕೆ ಉಂಗುಷ್ಠ ಹರಿದ ಚಪ್ಪಲಿ ಸೇರಿಸಿ ಕಾಲೆಳೆಯುತ್ತ ವಿರುದ್ಧ ದಿಕ್ಕಿಗೆ ಹೊರಟೆ. ಎಲ್ಲಾದರೂ ಒಂದು ಅಂಗಡಿ ಕಾಣಲಿ ದೇವರೇ ಅಂತ ಬೇಡಿಕೊಳ್ಳುತ್ತ ಒಂದಿಷ್ಟು ಹೊತ್ತು ಅಲೆದಾಡಿದೆ.

’ಯುರೇಕಾ!’

ಮೂಲೆಯಲ್ಲೊಂದು ಡಬ್ಬಾ ಚಪ್ಪಲಿ ಅಂಗಡಿ ಇದೆ! ನಿಧಿ ಸಿಕ್ಕಷ್ಟು ಸಂತೋಷವಾಯಿತು. ಪರವಾಗಿಲ್ಲ, ಮೊದಮೊದಲು ಸತಾಯಿಸಿದರೂ ದೇವರು ಕೊನೆಗೆ ತಥಾಸ್ತು ಅನ್ನುತ್ತಾನೆ ಎಂದು ಖುಷಿಪಡುತ್ತ ಅಂಗಡಿ ಮುಂದೆ ನಿಂತೆ. ನನಗೇನು ಬೇಕು ಎಂಬುದನ್ನು ನಾನು ಬಾಯಿ ಬಿಟ್ಟು ಹೇಳಬೇಕಿರಲಿಲ್ಲ. ನನ್ನ ಕೊಳೆಯಾದ ಕಾಲು ಹಾಗೂ ಉಂಗುಷ್ಠ ಹರಿದ ಚಪ್ಪಲಿಗಳೇ ಅದನ್ನು ಮಜಬೂತಾಗಿ ಹೇಳಿದ್ದವು.

ನನ್ನ ನೋಡುತ್ತಲೇ ಅಂಗಡಿಯವ ಚಂಗನೇ ಎಗರಿ ಬಂದ. ಯಾವ ಸೈಜ್ ಸರ್ ಅಂದ. ಹೇಳಿದೆ. ಅದುವರೆಗೆ ಕೇಳಿರದ ಬ್ರಾಂಡ್‌ಗಳ ನಾಲ್ಕೈದನ್ನು ನನ್ನೆದುರು ಇಟ್ಟು, ಹಾಕಿ ನೋಡಿ ಸರ್ ಅಂದ.

ನೋಡಿದೆ. ಒಂದು ಜೊತೆ ಒಪ್ಪಿಗೆಯಾದವು. ಆದರೆ, ಏಕೋ ಬಿಗಿಯಾಗುತ್ತವೆ ಅನಿಸಿತು. ಪರವಾಗಿಲ್ಲ ಸರ್, ಒಂದೆರಡು ದಿನ ಹಾಕಿದರೆ ಸರಿಯಾಗುತ್ತವೆ. ಲೂಸ್ ಆಗಿರೋದನ್ನು ತಗೊಂಡ್ರೆ ಆಮೇಲೆ ನಡೆಯುವಾಗ ನಿಮಗಿಂತ ಮುಂಚೆ ಅವೇ ಹೋಗಿಬಿಡುತ್ತವೆ ಎಂದು ಸಮಾಧಾನವನ್ನೂ ಎಚ್ಚರಿಕೆಯನ್ನೂ ಒಮ್ಮೆಲೇ ಹೇಳಿದ ಅಂಗಡಿಯವ.

ಅವನ ಮಾತನ್ನು ಕೇಳದಿರಲು ಸಾಧ್ಯವೆ? ನನ್ನಂಥ ಎಷ್ಟೊಂದು ಅಸಹಾಯಕರನ್ನು ನೋಡಿಲ್ಲ ಆತ? ಹೀಗಾಗಿ ಬಿಗಿಯಾದ ಚಪ್ಪಲಿಗಳನ್ನೇ ಖರೀದಿಸಿದೆ. ನನ್ನ ಹಳೆಯ ಜೋಡುಗಳನ್ನು ಹೊಸಾ ಡಬ್ಬದಲ್ಲಿ ಹಾಕಿ, ಅದನ್ನು ಪ್ಲಾಸ್ಟಿಕ್ ಬ್ಯಾಗ್‌ನಲ್ಲಿ ಸೇರಿಸಿ ಕೈಗಿಟ್ಟ. ಬಿಲ್ ಕೊಟ್ಟು ಹೊರ ಬಂದೆ.

ಜಗತ್ತನ್ನೇ ಗೆದ್ದ ಸಮಾಧಾನ. ಕಾಲಲ್ಲಿ ಹೊಸ ಚಪ್ಪಲಿ ಕಚ್ಚಿಕೊಂಡು ಕೂತಿತ್ತು, ಎಂದೆಂದೂ ನಿನ್ನನು ನಾನು ಬಿಟ್ಟಿರಲಾರೆ ಎಂಬಂತೆ. ನಾನು ಕೂಡಾ, ಬಿಟ್ಟರೆ ಕೆಟ್ಟೇನು ಎಂಬಂತೆ ಬಿಗಿಯಿಂದಲೇ ಹೊರಟೆ. ಇನ್ನು ಬಸ್‌ಗೆ ಕಾಯುವುದು ವ್ಯರ್ಥ ಎಂದು ಆಟೊ ಹಿಡಿದೆ.

ಕಚೇರಿಯಲ್ಲಿ ಚಪ್ಪಲಿ ಸಾಧು ಸ್ವಭಾವದಿಂದಲೇ ಇತ್ತು. ಯಾವಾಗ, ಕೆಲಸ ಮುಗಿಸಿಕೊಂಡು ಮನೆ ಕಡೆ ಹೋಗಲು ಬಸ್‌ಸ್ಟಾಪ್‌ನತ್ತ ಹೆಜ್ಜೆ ಹಾಕತೊಡಗಿದೆನೋ, ಆಗ ತನ್ನ ಅಸಲಿ ಬುದ್ಧಿ ತೋರಿಸಿತು. ಏಕೋ ಕಾಲೊಳಗೆ ಹರಳಿನಂಥದು ಒತ್ತುತ್ತಿದೆ ಅನಿಸಿ ಕಷ್ಟಪಟ್ಟು ಬಿಡಿಸಿಕೊಂಡು ನೋಡುತ್ತೇನೆ! ಹೆಬ್ಬೆರಳಿನ ಮೇಲ್ಗಡೆ ಚರ್ಮ ಕೆಂಪಾಗಿದೆ. ಮೆಲ್ಲಗೇ ಸವರಿದರೆ ಉರಿಯತೊಡಗಿತು.

ಅರೆರೆ, ಹೊಸ ಚಪ್ಪಲಿ ಕಚ್ಚತೊಡಗಿದೆ.

ಆದರೆ, ಏನು ಮಾಡುವುದು? ಬಿಗಿ ಚಪ್ಪಲಿಯನ್ನು ಮತ್ತೆ ಹುಷಾರಾಗಿ ಕಾಲಿಗೆ ತೊಡಿಸಿಕೊಂಡೆ. ಕಾಲು ಅಳುಕಿತು. ಕಣ್ಣು ತುಳುಕಿದವು. ಯಕಃಶ್ಚಿತ್ ಕಾಲೊಳಗಿನ ವಸ್ತು ಕಣ್ಣಲ್ಲಿ ನೀರು ಬರುವಂತೆ ಮಾಡಿತಲ್ಲ ಎಂಬ ರೋಷ ಉಕ್ಕಿತು. ಆದರೆ, ಏನೂ ಮಾಡುವ ಹಾಗಿಲ್ಲ. ಕೈಯಲ್ಲಿ ಹಳೆ ಚಪ್ಪಲಿಗಳಿದ್ದ ಹೊಸ ಡಬ್ಬಾ ಬೇರೆ ಇದೆ. ನನ್ನನ್ನು ಇಂಥ ದುಃಸ್ಥಿತಿಗೆ ದೂಡಿದ ಸಿಟಿ ಬಸ್‌ನ ಪಾಪಿಗೆ ಹಿಡಿಶಾಪ ಹಾಕುತ್ತ ಹೊರಟೆ.

ಅದು ಎಂಥಾ ನಡಿಗೆ ಅಂತೀರಿ. ಆಯಕಟ್ಟಿನ ಜಾಗದಲ್ಲಿ ಕುರುವಾದವರು ನಡೆಯುವಂತೆ ಬಲೇ ಹುಷಾರಿಂದ, ಒಂಥರಾ ಗತ್ತಿನಿಂದ ನಿಧಾನವಾಗಿ ಹೊರಟೆ. ಹೆಜ್ಜೆ ಊರಿದಾಗೆಲ್ಲ, ಚಪ್ಪಲಿ ಕಚ್ಚುತ್ತಿತ್ತು. ತುಟಿ ಅವಡುಗಚ್ಚುತ್ತಿತ್ತು. ಐದೇ ನಿಮಿಷದಲ್ಲಿ ಬಸ್‌ಸ್ಟಾಪ್‌ನಲ್ಲಿ ಇರುತ್ತಿದ್ದವ ಅಂದು ಅರ್ಧ ಗಂಟೆ ತಗೊಂಡೆ. ಮನೆ ಹತ್ತಿರದ ಸ್ಟಾಪ್‌ನಲ್ಲಿ ಇಳಿದು, ಮನೆ ಸೇರುವಾಗ ಮತ್ತೆ ಅರ್ಧ ಗಂಟೆ.

ಬಂದವನೇ ಮೊದಲು ಚಪ್ಪಲಿಯನ್ನು ಕೈಹಾಕಿ ಕಿತ್ತೆಸೆದೆ. ಕಾಲು ತೊಳೆಯುವಾಗ, ತಣ್ಣೀರು ಹಾಕಿಕೊಂಡರೂ ಕೆಂಪಾದ ಜಾಗ ಭಗಭಗ ಉರಿಯಿತು. ಹಳೆಯ ಜೋಡುಗಳನ್ನು ಮೂಲೆಗೆಸೆದೆ. ಅವುಗಳ ಅವಶ್ಯಕತೆ ಇಲ್ಲ. ಕಾಲು ದುರಸ್ತಿಯಾಗುವವರೆಗೂ ಚಪ್ಪಲಿ ಪಥ್ಯ!

ಹೀಗಿರಲಾಗಿ, ಗೆಳೆಯ ಎಂಬ ಹಿತಶತ್ರುವೊಬ್ಬ ಒಂದು ಬಿಟ್ಟಿ ಸಲಹೆ ಕೊಟ್ಟ. ನಿನ್ನ ಕಾಲಿಗೆ ಬಿಗಿಯಾಗುತ್ತಿದ್ದರೆ, ನಿನಗಿಂತ ದೊಡ್ಡ ಕಾಲಿರುವವರ ಹತ್ತಿರ ಅದನ್ನು ಒಂದು ದಿನ ಸರ್ವೀಸಿಂಗ್‌ಗೆ ಬಿಡು. ಅವರು ಹಾಕಿಬಿಟ್ಟ ನಂತರ ನೀನು ಹಾಕಿಕೋ, ಸರಿಯಾಗುತ್ತೆ ಅಂದ.

ಒಳ್ಳೆ ಐಡಿಯಾ ಅನಿಸಿತು.

ಆದರೆ, ನನ್ನ ಪಾದಕ್ಕಿಂತ ದೊಡ್ಡ ಪಾದವಿರುವ ದ್ವಿಪಾದಿಯನ್ನು ಹುಡುಕುವುದು ಎಲ್ಲಿ? ನನ್ನ ದೊಡ್ಡ ಕಾಲಿನ ಗೆಳೆಯರನ್ನು ನೆನಪಿಸಿಕೊಂಡೆ. ಆದರೆ, ಅವರ ಕಾಲು ಉದ್ದ. ನನ್ನಷ್ಟೇ ಗಿಡ್ಡರಾದ, ಆದರೆ, ನನಗಿಂತ ದೊಡ್ಡ ಪಾದ ಹೊಂದಿರುವವರೇ ಸರ್ವೀಸಿಂಗ್‌ಗೆ ಉತ್ತಮ.

ಶಾರ್ಟ್‌‌ಲಿಸ್ಟ್ ಮಾಡುತ್ತ ಹೋದಂತೆ, ಮನೆ ಹತ್ತಿರ ತರಕಾರಿ ಮಾರಲು ಬರುವ ಹುಡುಗ ಒಪ್ಪಿಗೆಯಾದ. ಹೇಗಿದ್ದರೂ ಮನೆ ಮನೆ ತಿರುಗುವವ. ನಾವು ಅವನ ಹತ್ತಿರವೇ ದಿನಾ ತರಕಾರಿ ಕೊಳ್ಳೋದು. ಪುಕ್ಕಟೆ ಹಾಕಿಕೊ ಮಾರಾಯಾ ಅಂದರೆ ಇಲ್ಲವೆನ್ನಲಾರ ಅನಿಸಿದಾಗ, ಪರಿಹಾರ ಸಿಕ್ಕ ನೆಮ್ಮದಿ.

ಮರುದಿನ ಪತ್ರಿಕ ಹುಡುಗನನ್ನು ಕಾಯುವುದು ಮರೆತು ತರಕಾರಿಯವನ ವಿಚಿತ್ರ ಕೂಗಿಗೆ ಕಿವಿಗೊಟ್ಟು ನಿಂತೆ. ಪುಣ್ಯಾತ್ಮ ಎಂಟುಗಂಟೆಯಾದರೂ ಬರಲಿಲ್ಲ. ಗೇಟಿನ ಹತ್ತಿರವೇ ನಿಂತು ಪೇಪರ್ ಓದಿದೆ. ಕಾಫಿ ಕುಡಿದೆ. ಕಚೇರಿಗೆ ಅವಸರದಿಂದ ಹೊರಟವರನ್ನು ನೋಡುತ್ತ ನಿಂತೆ. ಹೆಂಡತಿಗೆ ಅಸಮಾಧಾನ. ಬಂದರೆ, ಕೂಗ್ತಾನೆ ಒಳಗೆ ಬನ್ರೀ ಎಂದು ಆವಾಜ್‌ ಹಾಕಿದಳು. ಕ್ಯಾರೆ ಅನ್ನದೇ ಗೇಟಿಗೆ ಅಂಟಿಕೊಂಡೇ ನಿಂತೆ.

ಎಂಟಾದ ನಂತರ ಪ್ರತ್ಯಕ್ಷನಾದ ಆಸಾಮಿ ಕಂಡ ಕೂಡಲೇ ಪುಳಕ! ಅವತ್ತು ಅವಶ್ಯತೆಗಿಂತ ಹೆಚ್ಚು ತರಕಾರಿ ಕೊಂಡೆ, ಹೆಚ್ಚು ಮಾತಾಡಿದೆ. ದುಡ್ಡು ಕೊಡುವಾಗ, ಚಪ್ಪಲಿ ಸರ್ವೀಸಿಂಗ್ ಮಾಡಿಕೊಡುವ ವಿನಂತಿ ಮುಂದಿಟ್ಟೆ.

ಮೊದಲು ಅವ ನನ್ನನ್ನು ಮಿಕಿಮಿಕಿ ನೋಡಿದ. ನಂತರ ಮುಗುಳ್ನಕ್ಕ. ಆಗಲಿ ಸರ್ ಕೊಡಿ ಎಂದು ಕೃಪೆಯಿಟ್ಟು ನನ್ನ ಚಪ್ಪಲಿಯೊಳಗೆ ತನ್ನ ಕಾಲಿಟ್ಟು ನನ್ನನ್ನು ಕೃತಾರ್ಥನನ್ನಾಗಿ ಮಾಡಿದ. ನಾಳೆ ವಾಪಸ್ ಬಿಡ್ತೀನಿ ಎಂದು ಹೇಳಿ ತನ್ನ ಕರ್ಣಕಠೋರ ಧ್ವನಿಯಲ್ಲಿ ತರಕಾರಿಗಳ ಹೆಸರು ಕೂಗುತ್ತ ಹೊರಟ. ನನ್ನ ಹೊಸಾ ಚಪ್ಪಲಿ ಅವನ ಕಾಲಿಗೆ ಹೇಗೆ ಕಾಣುತ್ತವೆಂಬುದನ್ನು ನೋಡುತ್ತ ಕೊಂಚ ಹೊತ್ತು ಅಲ್ಲೇ ನಿಂತಿದ್ದೆ. ಎಂಥದೋ ಸಮಾಧಾನ !

ಮರು ದಿನ ಅದೇ ರೀತಿ ಗೇಟಿಗೆ ಒರಗಿಕೊಂಡು ನಿಂತೆ. ಚಪ್ಪಲಿ ವಸೂಲು ಮಾಡಬೇಕಲ್ಲ! ಎಂಟಾಯಿತು, ಎಂಟೂವರೆಯಾಯಿತು, ಒಂಬತ್ತು. ಊಹೂಂ. ತರಕಾರಿಯವ ಕಾಣಲಿಲ್ಲ. ಅವನ ಕರ್ಣಕಠೋರ ಕೂಗು ಕೇಳಲಿಲ್ಲ. ಅರೆರೆ, ನನ್ನ ಚಪ್ಪಲಿ ಹಾರಿಸಿಕೊಂಡು ಹೋದನಾ ಬಡ್ಡೀಮಗ ಎಂದು ಮನಸ್ಸು ಕುದಿಯಿತು.

ಅವತ್ತೇಕೋ ಸಮಾಧಾನವೇ ಇಲ್ಲ. ನನಗೇಕೋ ಚಪ್ಪಲಿ ಭಾಗ್ಯವೇ ಇಲ್ಲ ಎಂಬ ಹಳಹಳಿ. ಕಚೇರಿಯಲ್ಲಿ ಕೂತಾಗಲೂ ಮನಸ್ಸು ಪಾದರಕ್ಷೆಗಳನ್ನೇ ನೆನಪಿಸಿಕೊಳ್ಳುತ್ತಿತ್ತು. ’ಯಾಕ್ರೀ ಒಂಥರಾ ಇದ್ದೀರಿ’ ಅಂದರು ಸಹೋದ್ಯೋಗಿಗಳು. ಏನು ಹೇಳಲಿ? ಮನಸ್ಸಿನ ಎದುರು ಚಪ್ಪಲಿ ಜೋಡಿ ತಾಳಗಳಂತೆ ಕುಣಿದಾಡುತ್ತ ಏಕಾಗ್ರತೆ ಕಸಿದವು.

ಅದರ ಮರುದಿನವೂ ಗೇಟಿಗೆ ಒರಗಿ ತರಕಾರಿಯವನ ಧ್ಯಾನಕ್ಕೆ ತೊಡಗಿದೆ. ಎಂಟು ಗಂಟೆಯ ಸುಮಾರು, ಬೀದಿಯ ತಿರುವಿನಲ್ಲಿ ಕರ್ಣಕಠೋರ ಕೂಗು ಕೇಳಿಸಿತು.

ಆಹಾ, ಅದೆಷ್ಟು ಸುಮಧುರವಾಗಿ ಕೇಳಿಸಿತು ನನಗೆ! ಬಂದ ನನ್ನ ಚಪ್ಪಲಿ ಸರ್ವೀಸ್‌ದಾರ ಎಂದು ಮನಸ್ಸು ಕುಣಿದಾಡಿತು. ಗೇಟು ತೆರೆದುಕೊಂಡು ಅವನಿದ್ದಲ್ಲಿಗೇ ಹೋಗಿಬಿಡಲೇ ಎಂಬ ವಿಚಾರ ಬಂದರೂ, ಮರ್ಯಾದೆಗೆ ಅಂಜಿ ತಳಮಳಿಸುತ್ತ ಸುಮ್ಮನೇ ನಿಂತೆ. ನನ್ನ ಹೆಂಡತಿಗೆ ಯಥಾಪ್ರಕಾರ ಅಸಮಾಧಾನ!

ಕೊನೆಗೂ ಬಂದ ಪುಣ್ಯಾತ್ಮ. ಕಾಲಲ್ಲಿ ನನ್ನವೇ ಚಪ್ಪಲಿಗಳು. ತರಕಾರಿ ಕೊಳ್ಳುವುದು ಮರೆತು ಚಪ್ಪಲಿ ವಿಷಯವೇ ಬಾಯಿಗೆ ಬಂತು. ಅದನ್ನು ಕೇಳಿ ಅವನ ಮುಖದಲ್ಲಿ ನಗೆ. ಕಳ್ಳ ಬಡ್ಡೀಮಗ, ನಗುತ್ತಾನೆ ಎಂದು ಮನಸ್ಸು ಕ್ರುದ್ಧವಾದರೂ ನಾನೂ ಸುಳ್ಳುಸುಳ್ಳೇ ನಕ್ಕೆ.

ಅವನು ಬಿಟ್ಟ ಚಪ್ಪಲಿಗಳಿಗೆ ನನ್ನ ಕಾಲು ಸೇರಿಸಿ, ನೆಪಕ್ಕೆ ಒಂದೆರಡು ಸೊಪ್ಪಿನ ಕಟ್ಟು ತೆಗೆದುಕೊಂಡು ದಿಗ್ವಿಜಯ ಸಾಧಿಸಿದವನಂತೆ ಒಳ ಬಂದೆ. ಕಂಪೌಂಡ್‌ನಲ್ಲೇ ನಡೆದಾಡಿ ಪರೀಕ್ಷಿಸಿದೆ. ಈಗ ಕಾಲು ಒತ್ತುತ್ತಿಲ್ಲವಾದರೂ, ಏಕೋ ಚಪ್ಪಲಿಗಳು ಕಾಲಲ್ಲಿ ನಿಲ್ಲುತ್ತಿಲ್ಲ ಅನಿಸಿತು.

ಇನ್ನೊಂದೆರಡು ಸುತ್ತು ಓಡಾಡಿ ನೋಡಿದೆ. ಹೌದು, ಚಪ್ಪಲಿಗಳು ಈಗ ಒತ್ತುತ್ತಿಲ್ಲ. ಆದರೆ, ಕಾಲಿನ ಅಂಕೆಗೂ ಸಿಕ್ಕುತ್ತಿಲ್ಲ. ಪಾದ ಮತ್ತು ಚಪ್ಪಲಿಯ ನಡುವೆ ಸಣ್ಣ ಗಾತ್ರದ ಮೊಬೈಲ್‌ ತೂರಿಸುವಷ್ಟು ಜಾಗ ಉಂಟಾಗಿದೆ!

ತರಕಾರಿಯವನ ಪಾದದ ಉದ್ದ ನನ್ನ ಪಾದದಷ್ಟೇ ಇದ್ದಿರಬಹುದು, ಆದರೆ ಗಾತ್ರ ನನಗಿಂತ ತೀರಾ ದೊಡ್ಡದಿರಬೇಕು. ಅದಕ್ಕೆಂದೇ ಚಪ್ಪಲಿ ಅವನ ಪಾದಕ್ಕೆ ರಿಶೇಪ್ ಆಗಿವೆ.

ಅರೆರೆ, ಘಾತವಾಯಿತು ಎಂದು ಮನಸ್ಸು ಹಳಹಳಿಸತೊಡಗಿತು. ಮೊದಲು ಚಪ್ಪಲಿ ನನ್ನ ಪಾದಕ್ಕಿಂತ ಚಿಕ್ಕದಿತ್ತು. ಈಗ ಅದಕ್ಕಿಂತ ದೊಡ್ಡದಾಗಿದೆ. ಇಂಥ ಅನಾಹುತಕಾರಿ ವಸ್ತುಗಳಿಗೆ ಸರ್ವೀಸಿಂಗ್ ಮಾಡಿಸುವ ಐಡಿಯಾ ಕೊಟ್ಟ ಧೂರ್ತ ಗೆಳೆಯನನ್ನು ಮನಸಾರೆ ಬೈದುಕೊಂಡೆ.

ಮರುದಿನವೂ ಗೇಟಿನ ಬಳಿ ಕಾಯ್ದು ನಿಂತೆ. ಎಂಟಾದ ನಂತರ ತರಕಾರಿಯವ ಬಂದ. ಚಪ್ಪಲಿ ಸರಿಯಾದವಾ ಸರ್ ಎಂದು ಕೇಳಿದ ಅವನಿಗೆ ನೇರ ಉತ್ತರ ಕೊಡದೇ, ಇವನ್ನು ನೀನೇ ಇಟ್ಟುಕೋ ಮಾರಾಯ, ನಾನು ಬೇರೆ ಜೊತೆ ತಗೊಂಡೆ ಅಂದೆ. ಆತ ಅಚ್ಚರಿಯಿಂದ ನೋಡುತ್ತಿದ್ದಂತೆ, ರಸ್ತೆಯ ಮಧ್ಯೆಯೇ ಚಪ್ಪಲಿ ಅವನ ಮುಂದೆ ಬಿಟ್ಟು, ಬರಿಗಾಲಲ್ಲೇ ಒಳಗೆ ಬಂದೆ. ನೋಡಿದರೆ, ನನ್ನ ಹೆಂಡತಿ ಮುಸಿಮುಸಿ ನಗುತ್ತಿದ್ದಾಳೆ.

ಏಕೋ!?

- ಚಾಮರಾಜ ಸವಡಿ

ಒಂದು ರೂಪಾಯಿ ಎಂದು ಹೀಗಳೆಯದಿರಿ

14 Nov 2008

10 ಪ್ರತಿಕ್ರಿಯೆ

ರಸ್ತೆಯಲ್ಲೇನೋ ಮಿಂಚುತ್ತದೆ.

ಅದು ಏನು ಎಂಬುದನ್ನು ಗುರುತಿಸಿದಾಗ ನಿಮ್ಮ ಕಣ್ಣುಗಳೂ ಮಿಂಚುತ್ತವೆ. ’ಅರೆ ವ್ಹಾ, ಒಂದು ರೂಪಾಯಿ!’ ಎಂದು ಮನಸ್ಸು ಅರಳುತ್ತದೆ. ಖುಷಿಯಿಂದ ನಾಣ್ಯವನ್ನು ಕೈಗೆತ್ತಿಕೊಂಡು ಪರೀಕ್ಷಿಸುತ್ತೀರಿ. ಅನುಮಾನವೇ ಇಲ್ಲ. ಅದು ಪಕ್ಕಾ ಒಂದು ರೂಪಾಯಿ.

ನೀವು ಎಷ್ಟೇ ಸಂಬಳ ಪಡೆಯುವವರಾಗಿರಿ, ಹೀಗೆ ಅನಾಯಾಸವಾಗಿ ದೊರೆತ ದುಡ್ಡು ತರುವ ಖುಷಿ ಗಳಿಕೆಯ ಖುಷಿಯನ್ನು ಮೀರಿಸುತ್ತದೆ. ಸಿಕ್ಕಿದ್ದು ಒಂದೇ ರೂಪಾಯಿಯಾದರೂ ಆ ಕ್ಷಣಗಳಲ್ಲಿ ಅದು ಕೊಡುವ ಖುಷಿಯೇ ವಿಚಿತ್ರ. ಅರೆ, ಒಂದು ರೂಪಾಯಿ ಬಗ್ಗೆ ಎಷ್ಟೊಂದು ಹೇಳ್ತಿದ್ದೀ ಎಂದು ಹೀಗಳೆಯದಿರಿ. ಅದಕ್ಕೆ ಅಪಾರ ಸಾಧ್ಯತೆಗಳಿವೆ.

ಹಳ್ಳಿಯ ಕಡೆ ಯಾವ ಅಂಗಡಿಗೇ ಹೋಗಿ, ಒಂದು ರೂಪಾಯಿಗೆ ನಿಮಗೆ ಅರ್ಧ ಕಪ್ ಚಹ ಖಂಡಿತ ಸಿಗುತ್ತದೆ. ಒಂದು ಮೆಣಸಿನಕಾಯಿ ಬಜ್ಜಿ ಗ್ಯಾರಂಟಿ. ಬೀಡಾ ಅಂಗಡಿಯಲ್ಲಿ ಒಂದು ರೂಪಾಯಿಗೆ ಸೊಗಸಾದ ತಾಂಬೂಲ (ಬೀಡಾ ಅಲ್ಲ!), ಅಥವಾ ಗುಟ್ಕಾ ಚೀಟು, ಅಥವಾ ಅಡಿಕೆ ಪುಡಿ ಚೀಟು ದೊರತೀತು. ಧೂಮಪಾನಿಗಳಾಗಿದ್ದರೆ ಎರಡು ಬೀಡಿ ಸಿಗುವುದಂತೂ ಖಾತರಿ. ಇವೇನೂ ಬೇಡ ಎಂದರೆ ಲವಂಗ, ಏಲಕ್ಕಿ ಅಥವಾ ಸೋಂಪು ಇರುವ ಪುಟ್ಟ ಚೀಟನ್ನಾದರೂ ತೆಗೆದುಕೊಳ್ಳಬಹುದು.

ಒಂದು ವೇಳೆ ನೀವು ಚಟಗಳೇ ಇಲ್ಲದ ಸಂಪನ್ನರಾಗಿದ್ದರೆ ಒಂದು ರೂಪಾಯಿಯನ್ನು ದಾರಿಯಲ್ಲಿ ಸಿಗುವ ಮುದಿ ಭಿಕ್ಷುಕಿಯ ತಟ್ಟೆಗೆ ಹಾಕಿದರೂ ಆಯಿತು. ಒಂದು ಕೃತಜ್ಞತೆಯ ದೃಷ್ಟಿ ನಿಮಗೆ ದಕ್ಕೀತು. ಒಂದು ರೂಪಾಯಿಗಿಂತ ಕಡಿಮೆ ಕಾಸು ಹಾಕೀರಿ ಜೋಕೆ. ನಿಮ್ಮ ಭಿಕ್ಷೆಯ ಜೊತೆಗೆ ಆಕೆ ನಿಮ್ಮನ್ನೂ ನಿಕೃಷ್ಟವಾಗಿ ಕಾಣುವ ಅಪಾಯವುಂಟು. ಒಂದು ವೇಳೆ ಆಕೆ ಸ್ವಾಭಿಮಾನಿಯಾಗಿದ್ದರೆ ನಿಮ್ಮ ಭಿಕ್ಷೆ ಮರಳಿ ನಿಮ್ಮ ಕೈ ಸೇರುವುದು ಖಂಡಿತ.

ಹೋಟೆಲ್-ಪಾನಂಗಡಿಗಳ ತಂಟೆಯೇ ಬೇಡ ಎಂದು ಕಿರಾಣಿ ಅಂಗಡಿ ಹೊಕ್ಕರೆ ನಿಮಗೆ ಒಂದು ರೂಪಾಯಿಯ ಅಪಾರ ಸಾಧ್ಯತೆಗಳು ಕಣ್ಣಿಗೆ ಬೀಳುತ್ತವೆ. ಹೊಕ್ಕಿದ್ದು ಚಿಕ್ಕ ಅಂಗಡಿಯಾಗಿದ್ದರೆ ಒಂದು ರೂಪಾಯಿಗೆ ನಾಲ್ಕು ಬಿಸ್ಕೀಟುಗಳ ಒಂದು ಪ್ಯಾಕ್ ಸಿಕ್ಕುತ್ತದೆ. ಇಲ್ಲದಿದ್ದರೆ ಒಂದು ಬನ್ನನ್ನಾದರೂ ತೆಗೆದುಕೊಳ್ಳಬಹುದು. ನೀವು ಆಸ್ತಿಕರಾಗಿದ್ದರೆ, ದೇವರಿಗೆ ಅರ್ಪಿಸಲೆಂದೇ ತಯಾರಾದ ಊದುಬತ್ತಿಯ ಪುಟ್ಟ ಕಟ್ಟು ಅಥವಾ ಕರ್ಪೂರ ಅಥವಾ ಹೂಬತ್ತಿಗಳಾದರೂ ಸಿಕ್ಕಾವು. ಧೂಪದ ಪುಟ್ಟ ಚೀಟಂತೂ ಖಂಡಿತ ಸಿಕ್ಕುತ್ತದೆ.

ಇವೇನೂ ಬೇಡ ಎಂದರೆ ಲೋಕಲ್ ಬ್ರ್ಯಾಂಡ್‌ನ ಎರಡು ಪುಟ್ಟ ಬೆಂಕಿಪೊಟ್ಟಣಗಳನ್ನು ಕೊಳ್ಳಬಹುದು. ಕಿವಿಯ ಗುಗ್ಗೆ ತೆಗೆಯಲು ನಾಲ್ಕು ಕಿವಿಗೊಳವೆಗಳಾದರೂ ಸಿಕ್ಕಾವು. ಒಂದು ರೂಪಾಯಿ ಕೊಟ್ಟು ಚಹಪುಡಿ ಅಥವಾ ಇನ್‌ಸ್ಟಂಟ್ ಕಾಫಿಪುಡಿ ಚೀಟನ್ನೊಯ್ದು ಬಟ್ಟಲು ತುಂಬ ಚಹ/ಕಾಫಿ ಮಾಡಿಕೊಂಡು ಕುಡಿಯಬಹುದು. ಇಲ್ಲವೆ ಬಬಲ್‌ಗಮ್ ಅಥವಾ ಮಿಂಟನ್ನಾದರೂ ಕೊಂಡು ಬಾಯಿಗೆ ಪರಿಮಳ ತಂದುಕೊಳ್ಳಬಹುದು.

ಇಲ್ಲ, ಒಂದು ರೂಪಾಯಿಯನ್ನು ಇನ್ನೂ ಭಿನ್ನವಾಗಿ ಬಳಸಬೇಕು ಎಂದೇನಾದರೂ ನೀವು ಯೋಚಿಸಿದರೆ ಒಂದು ಡಿಟರ್ಜೆಂಟ್ ಪೌಡರ್ ಚೀಟು ಖರೀದಿಸಿ, ಬಟ್ಟೆ ತೊಳೆದುಕೊಂಡು ಸೋಮಾರಿತನ ಕಡಿಮೆ ಮಾಡಿಕೊಳ್ಳಬಹುದು. ಇಲ್ಲವೇ ಒಂದು ಚೀಟು ಶ್ಯಾಂಪೂ ಕೊಂಡು ತಲೆ ಸ್ನಾನ ಮಾಡಿ ಹಗುರಾಗಬಹುದು. ಅವೆಲ್ಲ ಇವೆ ಎನ್ನುವುದಾದರೆ ಒಂದು ಚೀಟು ತೆಂಗಿನೆಣ್ಣೆ ಕೊಂಡು ಮೂರು ದಿನ ಮಜಬೂತಾಗಿ ಬಳಸಿ.

ಕಿರಾಣಿ ಅಂಗಡಿ ಬೇಡ ಎಂದಾದರೆ ಪಕ್ಕದ ತರಕಾರಿ ಅಂಗಡಿಗೆ ಬನ್ನಿ. ಕೊಂಚ ಚೌಕಾಸಿ ಮಾಡಿದರೆ ಅಥವಾ ತೀರ ಪರಿಚಯದವರಾಗಿದ್ದರೆ ಒಂದು ರೂಪಾಯಿಗೆ ಕೊತ್ತಂಬರಿ ಅಥವಾ ಕರಿಬೇವು ಅಥವಾ ಸೊಪ್ಪಿನ ಒಂದು ಸಣ್ಣ ಕಟ್ಟನ್ನು, ಮಸ್ತು ಮುಗುಳ್ನಗೆಯ ಜೊತೆ ಕೊಟ್ಟಾಳು ತರಕಾರಿ ಆಂಟಿ! ಅವೇನೂ ಬೇಡ ಎಂದರೆ ಸಾದಾ ಗಾತ್ರದ ನಿಂಬೆಹಣ್ಣಾದರೂ ಸಿಕ್ಕೀತು. ಎರಡು ದಿನಗಳಿಗಾಗುವಷ್ಟು ಹಸಿ ಮೆಣಸಿನಕಾಯಿಗಂತೂ ಮೋಸವಿಲ್ಲ. ಇಲದ್ದಿದರೆ ಒಂದು ಪುಟ್ಟ ಕ್ಯಾರೆಟ್ ಅಥವಾ ಸೌತೆ ಕಾಯಿ ಕೊಂಡು ಹಲ್ಲಿಗೆ ವ್ಯಾಯಾಮ ಮಾಡಿಕೊಳ್ಳಬಹುದು. ಒಂದು ಭರ್ಜರಿ ನುಗ್ಗೆಕಾಯಿ ಕೊಂಡು ರುಚಿಕಟ್ಟಾದ ಸಾರು ಮಾಡಿ ಉಂಡು ರಸಿಕತೆ ಹೆಚ್ಚಿಸಿಕೊಳ್ಳಬಹುದು.

ತಿನ್ನುವ ತೊಳೆಯುವ ರಗಳೆ ಬೇಡ ಎಂದಾದರೆ ಒಂದು ರೂಪಾಯಿ ಬಳಕೆಯ ಹೊಸ ಆಯಾಮಗಳು ತೆರೆದುಕೊಳ್ಳತೊಡಗುತ್ತವೆ. ಶಿವಾಜಿನಗರದಲ್ಲಿ ಸಿಟಿ ಬಸ್ ಹತ್ತಿ, ಕಂಡಕ್ಟರ್ ಕೈಗೆ ಒಂದ್ರುಪಾಯಿ ಇಟ್ಟು ಸುಮ್ಮನೇ ನಿಂತರೆ ಎಂ.ಜಿ. ರಸ್ತೆಯವರೆಗೆ ಅದು ಅವನನ್ನು ನಿಮ್ಮ ಋಣದಲ್ಲಿ ಇರಿಸುತ್ತದೆ. ಕಾಯಿನ್ ಬೂತಿಗೆ ತೂರಿಸಿ, ಮೊಬೈಲ್‌ ಅಥವಾ ಲ್ಯಾಂಡ್‌ಲೈನ್‌ ಮೂಲಕ ಮೆಚ್ಚಿದ ಜೀವಿಯೊಂದಿಗೆ ಮಾತಿನಲ್ಲೇ ಕಷ್ಟಸುಖ ಹಂಚಿಕೊಳ್ಳಬಹುದು. ಪೆಟ್ರೋಲ್ ಬಂಕ್‌ನ ಗಾಳಿಯಂತ್ರದವ ಒಂದು ರೂಪಾಯಿಗೆ ಟುಣ್ ಟುಣ್ ಎನ್ನುವ ಹಾಗೆ ನಿಮ್ಮ ವಾಹನದ ಚಕ್ರಗಳಿಗೆ ಗಾಳಿ ತುಂಬಿ ಕೊಟ್ಟಾನು. ತೂಕದ ಯಂತ್ರದ ಬಾಯಿಗೆ ಹಾಕಿದರೆ ಅದು ನಿಮ್ಮ ಶರೀರದ (ವ್ಯಕ್ತಿತ್ವದ್ದಲ್ಲ!) ತೂಕವನ್ನು ತಿಳಿಸೀತು.

ಕೆ.ಆರ್. ಮಾರ್ಕೆಟ್‌ಗೆ ಹೋದರೆ ರೂಪಾಯಿಗೊಂದು ಪೆನ್ನು ಸಿಗುತ್ತದೆ. ಹೇರ್‌ಬ್ಯಾಂಡ್ ದೊರೆಯುತ್ತದೆ. ಬೆಂಗಳೂರಿನ ಯಾವುದೇ ಝೆರಾಕ್ಸ್ ಅಂಗಡಿಗೆ ಹೋದರೂ ಒಂದು ನೆರಳಚ್ಚು ಪ್ರತಿ ಮಾಡಿಕೊಡುತ್ತಾರೆ. ಮಲ್ಲೇಶ್ವರಂನಲ್ಲಾದರೆ ಎರಡು ಪ್ರತಿ ದೊರೆತಾವು. ಇವೇನೂ ಬೇಡ ಎಂದಾದರೆ, ನ್ಯೂಸ್ ಸ್ಟಾಲ್‌ಗಳಿಗೆ ಹೋಗಿ ಲಕ್ಷಣವಾಗಿ ಒಂದು ಸಂಜೆಪತ್ರಿಕೆ ಕೊಂಡು ನಿಮ್ಮ ಜ್ಞಾನ ದಿಗಂತವನ್ನು ನಗರದ ಮಿತಿಯಾಚೆಗೆ ವಿಸ್ತರಿಸಿಕೊಳ್ಳಬಹುದು.

ಇನ್ನು ಮುಂದೆ ಒಂದು ರೂಪಾಯಿ ಎಂದರೆ ’ಛೀ, ಚಿಲ್ಲರೆ’ ಎಂಬ ಹೀಗಳಿಕೆ ಬೇಡ. ಏಕೆಂದರೆ ಅದಕ್ಕೆ ನೂರಾರು ಸಾಧ್ಯತೆಗಳಿವೆ,
ಈ ಬದುಕಿಗೆ ಇರುವಂತೆ!

- ಚಾಮರಾಜ ಸವಡಿ

ನಮ್ಮದಲ್ಲದ ಊರಿನಲ್ಲಿ ನೆಮ್ಮದಿ ಹುಡುಕುತ್ತ...

3 Nov 2008

5 ಪ್ರತಿಕ್ರಿಯೆ
ಬೆಂಗಳೂರು ವಿನಾ ಕಾರಣ ಇಷ್ಟವಾಗುತ್ತದೆ. ಒಮ್ಮೊಮ್ಮೆ ವಿನಾಕಾರಣ ಬೇಸರವನ್ನೂ ಹುಟ್ಟಿಸುತ್ತದೆ.

ದೂರದ ಊರಿನಿಂದ ರಾತ್ರಿ ಬಸ್ಸಿಗೆ ಬಂದು, ಬೆಳಿಗ್ಗೆ ಬಸ್ ನಿಲ್ದಾಣದಲ್ಲಿ ಇಳಿದಾಗ ಕಾಣುವ ಬೆಂಗಳೂರು ಮೊದಲು ಹುಟ್ಟಿಸುವುದು ದಿಗಿಲನ್ನು. ಸಿಟಿ ಬಸ್ ಹುಡುಕುವುದರೊಳಗೆ ಬಿಟ್ಟು ಬಂದ ಊರು ನೆನಪಾಗುತ್ತಿರುತ್ತದೆ. ಗೆಳೆಯನ ರೂಮು ಸೇರಿ, ತಾತ್ಕಾಲಿಕ ವಸತಿ ಕಂಡುಕೊಂಡು, ದರ್ಶಿನಿಯಲ್ಲಿ ಪಲಾವ್ ತಿನ್ನುವಾಗ ಅಮ್ಮ ನೆನಪಾಗುತ್ತಾಳೆ. ಆಕೆಯ ಕಮ್ಮನೆಯ ಅಡುಗೆ ನೆನಪಾಗುತ್ತದೆ.

ಮುಂದೆ ಕೆಲಸದ ಬೇಟೆ ಶುರು. ಹೆಜ್ಜೆ ಹೆಜ್ಜೆಗೂ ಬೆಂಗಳೂರು ತನ್ನ ಬಿಗು, ಬಿನ್ನಾಣ, ಕುರೂಪ ಮತ್ತು ಸೊಗಸನ್ನು ತೋರುತ್ತಲೇ ಸಾಗುತ್ತದೆ. ನಾಲ್ಕೈದು ಕಡೆ ’ಕೆಲಸ ಇಲ್ಲ’ ಅನ್ನಿಸಿಕೊಂಡು, ರೂಮು ಸೇರಿ, ಊಟ ಮಾಡದೇ ಅಂಗಾತವಾದಾಗ ನಿರಾಶೆ ಹುಟ್ಟಿಸುವ ನೂರೆಂಟು ನೆನಪುಗಳು. ಈಗಲೇ ಚೀಲ ತುಂಬಿಕೊಂಡು ವಾಪಸ್ ಊರಿಗೆ ಹೋಗಿಬಿಡಲೇ ಎಂಬ ಭಾವನೆ ಎದೆ ತುಂಬಿದರೂ, ಅಲ್ಲಿ ನಿರೀಕ್ಷೆಯಿಟ್ಟುಕೊಂಡು ಕಾಯುತ್ತಿರುವ ಅಪ್ಪ, ಅಮ್ಮ, ತಂಗಿ, ತಮ್ಮ ನೆನಪಾದಾಗ ಮನಸ್ಸು ನಿಡುಸುಯ್ಯುತ್ತದೆ.

ಆದರೆ ಬೆಂಗಳೂರು ಬಲು ಬೇಗ ಪರಿಚಯದ ಹುಡುಗಿಯಂತಾಗಿಬಿಡುತ್ತದೆ. ವಾರದೊಳಗೆ ಸಿಟಿ ಬಸ್‌ಗಳ ನಂಬರುಗಳು ಬಾಯಿಪಾಠವಾಗುತ್ತವೆ. ಹತ್ತು ದಿನದೊಳಗೆ ಮೊದಲ ಕೆಲಸ ಸಿಕ್ಕುಬಿಡುತ್ತದೆ. ಸಂಜೆ ಸಂಭ್ರಮದಿಂದ ಫೋನ್ ಮಾಡಿದಾಗ ಅತ್ತ ಅಪ್ಪ ಹರ್ಷ ಪಡುತ್ತಾನೆ. ಅಮ್ಮ ಸಂತಸದಿಂದ ಕಣ್ಣೀರಿಡುತ್ತಾಳೆ. ತಮ್ಮ, ತಂಗಿಯರು ಯಥಾಪ್ರಕಾರ ’ಯಾವಾಗ ಬರುತ್ತಿ? ಏನು ತರುತ್ತಿ?’ ಎಂದು ಕೇಳುತ್ತಾರೆ. ಮೊದಲ ಬಾರಿ ಬೆಂಗಳೂರು ಅಪಾರ ಭರವಸೆ ಹುಟ್ಟಿಸತೊಡಗುತ್ತದೆ.

ಕೆಲಸದ ಮೊದಲ ದಿನದ ಸಡಗರ ಏನು ಹೇಳುವುದು! ಗೆಳೆಯ ತನ್ನ ಅತ್ಯುತ್ತಮ ಅಂಗಿಯನ್ನು ಕೊಡುತ್ತಾನೆ. ಕನ್ನಡಿ ಎರಡು ನಿಮಿಷ ಹೆಚ್ಚು ಕೇಳುತ್ತದೆ. ಮೂಲೆಯ ತಿರುವಿನಲ್ಲಿ ಕೂತ ಹುಡುಗ ಎರಡೇ ರೂಪಾಯಿಗಳಿಗೆ ಪಳಪಳ ಹೊಳೆಯುವಂತೆ ಷೂಗಳನ್ನು ಉಜ್ಜಿಕೊಡುತ್ತಾನೆ. ಅವತ್ತು ಸಿಟಿ ಬಸ್‌ನ ಸಂದಣಿ ಬೇಸರ ತರುವುದಿಲ್ಲ. ಕಂಡಕ್ಟರ್ ಟಿಕೆಟ್ ಹಿಂದೆ ಬರೆದುಕೊಟ್ಟ ಚಿಲ್ಲರೆ ಕೇಳುವುದು ನೆನಪಾಗುವುದಿಲ್ಲ. ಆಫೀಸ್ ಹತ್ತಿರ ಇಳಿದವನ ಮನಸ್ಸಿನಲ್ಲಿ ಇಡೀ ಬೆಂಗಳೂರನ್ನೇ ಗೆದ್ದ ಉತ್ಸಾಹವಿರುತ್ತದೆ.

ಹೊಸ ಆಫೀಸ್. ಹೊಸ ವಾತಾವರಣ. ಗೇಟಿನಲ್ಲಿ ನಿಂತ ಸೆಕ್ಯುರಿಟಿಯವನು ಸಂದರ್ಶನಕ್ಕೆ ಬಂದಾಗ ಇದ್ದಷ್ಟು ಒರಟಾಗಿರದೇ ಮುಗುಳ್ನಗುತ್ತಾನೆ. ನೇಮಕಾತಿ ಪತ್ರವನ್ನು ಗಮನವಿಟ್ಟು ನೋಡಿದ ರಿಸೆಪ್ಷನಿಸ್ಟ್ ತುಟಿಯನ್ನು ಚೂರೇ ಚೂರು ಅರಳಿಸಿ ಬಾಸ್ ಹತ್ತಿರ ಕಳಿಸುತ್ತಾಳೆ. ಕ್ಷಣಕ್ಷಣಕ್ಕೂ ಧನ್ಯತೆ, ಅಳುಕು ಅನುಭವಿಸುತ್ತಲೇ ಕೆಲಸದ ಮೊದಲ ದಿನ ಮುಗಿಯುತ್ತದೆ. ರಾತ್ರಿ ಗೆಳೆಯನ ಮುಂದೆ ಹೊಸ ಆಫೀಸಿನ ವರ್ಣನೆ. ಅಲ್ಲಿಯ ಜನಗಳ ಬಗ್ಗೆ ವಿವರಣೆ. ಮರುದಿನ ಬೇಗ ಹೋಗಬೇಕೆನ್ನುವ ಉತ್ಸಾಹ. ರಾತ್ರಿ ನಿದ್ದೆ ಕೂಡ ಸರಿಯಾಗಿ ಬರುವುದಿಲ್ಲ. ಎಂಥದೋ ಧನ್ಯತೆ ಮನಸ್ಸನ್ನು ಎಚ್ಚರವಾಗಿಡುತ್ತದೆ.

ಕೆಲಸದ ಮೊದಲ ದಿನಗಳು ಹೀಗೇ ಕಳೆಯುತ್ತವೆ. ಕ್ರಮೇಣ ಗೆಳೆಯನ ರೂಮು ಆಫೀಸಿನಿಂದ ತುಂಬ ದೂರ ಇದೆ ಅನ್ನಿಸತೊಡಗುತ್ತದೆ. ’ಇಲ್ಲೇ ಹತ್ತಿರದಲ್ಲಿ ಒಂದು ಫಸ್ಟ್‌ಕ್ಲಾಸ್ ರೂಮಿದೆ ಸಾರ್. ಟ್ವೆಂಟಿ ಫೋರ್ ಅವರ್ಸೂ ನೀರು ಬರುತ್ತದೆ. ಓನರ್ ಕಿರಿಕಿರಿಯಿಲ್ಲ. ಬಾಡಿಗೆಯೂ ಕಡಿಮೆ...’ ಎಂದು ಆಫೀಸ್ ಹುಡುಗ ಆಮಿಷ ಹುಟ್ಟಿಸುತ್ತಾನೆ. ಮೊದಲ ಸಂಬಳ ಕೈಗೆ ಬರುವ ಹೊತ್ತಿಗೆ ಸ್ವಂತ ರೂಮು ಮಾಡಿಕೊಳ್ಳುವ ತವಕ.

ಬೆಂಗಳೂರು ಕನಸು ಹುಟ್ಟಿಸುವುದೇ ಹೀಗೆ. ಕೆಲಸವಾಯಿತು. ಸ್ವಂತ ರೂಮಾಯಿತು. ಬೆಳಿಗ್ಗೆ ರೂಮಿನಲ್ಲೇ ಬಿಸಿ ಬಿಸಿ ಕಾಫಿ ಮಾಡಿಕೊಂಡು ಪತ್ರಿಕೆ ಓದುತ್ತ ಕಾಫಿ ಕುಡಿಯುವಾಗ ಜೀವನದ ಧನ್ಯತೆ ಬೆಚ್ಚನೆಯ ಹನಿಗಳಾಗಿ ಮೈ ಮನಸ್ಸುಗಳನ್ನು ಅರಳಿಸುತ್ತದೆ. ಸ್ನಾನ ಮಾಡಿ ತಯಾರಾಗಿ, ಬಾಗಿಲಿಗೆ ಬೀಗ ಹಾಕಿಕೊಂಡು ಆಫೀಸಿಗೆ ಹೋಗುವಾಗ. ’ನಾನೂ ಏನಾದರೂ ಮಾಡಬಲ್ಲೆ’ ಎಂಬ ಆತ್ಮವಿಶ್ವಾಸ ಹಾಕುವ ಪ್ರತಿಯೊಂದು ಹೆಜ್ಜೆಯಲ್ಲೂ ಎದ್ದು ಕಾಣುತ್ತದೆ.

ದಿನಗಳೆದಂತೆ ನಾವು ಬೆಂಗಳೂರಿನ ತಾಪತ್ರಯಗಳನ್ನು ಸಹಿಸಿಕೊಳ್ಳುತ್ತ, ಅದು ನೀಡುವ ಅವಕಾಶಗಳಿಗೆ ಮುಖ ಒಡ್ಡುತ್ತ, ರಜೆಗೊಮ್ಮೆ ಮಾತ್ರ ಊರಿಗೆ ಹೋಗುತ್ತ, ಕಾಫಿ ತಡವಾದರೆ ರೇಗುತ್ತ, ನೀರು ಬಾರದಿದ್ದರೆ ಶಪಿಸುತ್ತ, ಕೇಬಲ್‌ನವನು ಏಕಾಏಕಿ ರೇಟ್ ಹೆಚ್ಚಿಸಿದಾಗ ಪ್ರತಿಭಟಿಸದೇ ಕಾಸು ಕೊಡುತ್ತ, ತಳ್ಳು ಗಾಡಿಯಲ್ಲಿ ತರಕಾರಿ ಮಾರುವವನ ಹತ್ತಿರ ಸೊಪ್ಪಿಗಾಗಿ ಚೌಕಾಸಿ ಮಾಡತೊಡಗುತ್ತೇವೆ.

ಕ್ರಮೇಣ ಬೆಂಗಳೂರಿನವರೇ ಆಗಿಬಿಡುತ್ತೇವೆ.

- ಚಾಮರಾಜ ಸವಡಿ
(ಬೆಂಗಳೂರಿನಲ್ಲಿ ಮೊದಲ ಬಾರಿ ಕೆಲಸ ಗಿಟ್ಟಿಸಿದಾಗಿನ ಬರವಣಿಗೆ. ಪ್ರಜಾವಾಣಿಯಲ್ಲಿ ಅಚ್ಚಾಗಿತ್ತು.)

ಪ್ರಶ್ನೆಗಳಿಗೆ ಉತ್ತರಿಸದ ಪಲಾಯನವಾದ

21 Oct 2008

11 ಪ್ರತಿಕ್ರಿಯೆ
ಎರಡು ರೀತಿಯ ವ್ಯಕ್ತಿಗಳು ಈ ವಾರ ಅನಾವರಣಗೊಂಡಿದ್ದಾರೆ. ಒಂದು ಎಸ್.ಎಲ್. ಭೈರಪ್ಪ. ಇನ್ನೊಂದು ನಮ್ಮ ಸೋ ಕಾಲ್ಡ್ ಬುದ್ಧಿಜೀವಿಗಳು ಮತ್ತು ಪತ್ರಕರ್ತರು.

ಎಸ್.ಎಲ್. ಭೈರಪ್ಪ ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಬರೆದ ಲೇಖನ, ಅಲ್ಲಿ ಎತ್ತಿರುವ ಪ್ರಶ್ನೆಗಳಿಗೆ ನಮ್ಮ ಪತ್ರಕರ್ತ ಬುದ್ಧಿಜೀವಿಗಳು ಉತ್ತರ ಕೊಡುವುದಾಗಿದ್ದರೆ ಈ ಲೇಖನದ ಪ್ರತಿಕ್ರಿಯೆ ಅಗತ್ಯವಿದ್ದಿಲ್ಲ. ಅಂಥದೊಂದು ಪ್ರಯತ್ನ ಕೈಬಿಟ್ಟು ಭೈರಪ್ಪನವರನ್ನೇ ಗುರಿಯಾಗಿರಿಸಿ ಬರೆಯುತ್ತ ಹೊರಡುವ ಮೂಲಕ ಇವರೆಲ್ಲ ಸಹಜವಾಗಿ ಅನಾವರಣಗೊಂಡಿದ್ದಾರೆ.

ಜೋಗಿಯವರು ಕೆಂಡಸಂಪಿಗೆ ತಾಣದಲ್ಲಿ ಬರೆದ ಅಂಕಣ ಅಂಥದೊಂದು ಬರವಣಿಗೆ. ಸುದ್ದಿಮಾತು ಬ್ಲಾಗ್‌ನಲ್ಲಿ ಬಂದಿರುವ ಲೇಖನವೂ ಇದೇ ವರ್ಗಕ್ಕೆ ಸೇರಿದಂಥದು. ಇಂತಹ ಅಭಿಪ್ರಾಯಗಳು ಹೊರಬಂದಿದ್ದು ಓದುಗರಿಗೆ ಒಳ್ಳೆಯದೇ ಆಗಿದೆ. ಒಂದೆಡೆ ಭೈರಪ್ಪನವರ ಧೋರಣೆ ಸ್ಪಷ್ಟವಾದಂತೆ, ಇನ್ನೊಂದೆಡೆ ಅವರ ಒಂದು ಕಾಲದ ಅಭಿಮಾನಿಗಳು ಹಾಗೂ ಇದ್ದಕ್ಕಿದ್ದಂತೆ ಜಾತ್ಯತೀತರಾಗಲು ಹೊರಟವರ ಧೋರಣೆಗಳೂ ಸ್ಪಷ್ಟವಾಗಿವೆ.

ಭೈರಪ್ಪ ತಮ್ಮ ಅನಿಸಿಕೆ ಹೇಳಿದ್ದಾರೆ. ಅವರ ನಿಲುವಿನ ಬಗ್ಗೆ ಪ್ರಶ್ನೆಗಳಿದ್ದರೆ ಅದನ್ನು ತಾತ್ವಿಕವಾಗಿಯೇ ಖಂಡಿಸಬೇಕಾಗುತ್ತದೆ. ಅಲ್ಲಿ ಕಾದಂಬರಿಕಾರ ಭೈರಪ್ಪನವರನ್ನು ಎಳೆದುಕೊಂಡು ಬರುವ ಅವಶ್ಯಕತೆ ಖಂಡಿತ ಇರಲಿಲ್ಲ. ಅವರ ಕಾದಂಬರಿಗಳಲ್ಲಿ ಗು(ಸು)ಪ್ತ ಉದ್ದೇಶಗಳಿದ್ದವು ಎಂಬುದನ್ನು ಕಾಲು ಶತಮಾನದ ನಂತರ ಪತ್ತೆ ಹಚ್ಚಿದ ಹೆಮ್ಮೆ ಕಾಣಬೇಕಿರಲಿಲ್ಲ. ಭೈರಪ್ಪ ತಮ್ಮ ನಿಲುವನ್ನು ಯಾವಾಗಲೂ ಅತ್ಯಂತ ಸ್ಪಷ್ಟವಾಗಿಯೇ ಹೇಳುತ್ತ ಬಂದಿದ್ದಾರೆ. ಗುಪ್ತ ಉದ್ದೇಶಗಳನ್ನಿಟ್ಟುಕೊಂಡು ದಶಕಗಳ ಕಾಲ ಯಾರಿಗೂ ಅನುಮಾನ ಬರದಂತೆ ಬರೆಯುವುದು ಸಾಧ್ಯವಿಲ್ಲ ಎಂಬುದನ್ನು ಅವರ ಇತ್ತೀಚಿನ ಟೀಕಾಕಾರರು ಗಮನಿಸಬೇಕಿತ್ತು.

ಒಬ್ಬ ಕಾದಂಬರಿಕಾರರಾಗಿ ಅಪಾರ ಸಾಧ್ಯತೆಗಳಿರುವ ವ್ಯಕ್ತಿ ಭೈರಪ್ಪ. ಅವರ ಪ್ರತಿಯೊಂದು ಕೃತಿಯೂ ಅದನ್ನು ಮತ್ತೆ ಮತ್ತೆ ಸ್ಪಷ್ಟಪಡಿಸುತ್ತದೆ. ಒಬ್ಬ ಸಾಮಾನ್ಯ ಓದುಗನಿಗೆ, ಅಥವಾ ಬಹುತೇಕ ಓದುಗರಿಗೆ ಅವರ ಬರವಣಿಗೆ ಇಷ್ಟವಾಗುವುದು ಅವರು ಕತೆ ಹೇಳುವ ರೀತಿಯಿಂದಾಗಿ. ಭಾವನೆಗಳನ್ನು ಕಟ್ಟಿಕೊಡುವ ಹದದಿಂದಾಗಿ. ಕಾದಂಬರಿಯ ಪಾತ್ರಗಳಲ್ಲಿ, ದೃಶ್ಯಗಳಲ್ಲಿ ಓದುಗ ಮುಳುಗಿಹೋಗುತ್ತಾನೆಯೇ ಹೊರತು, ಅದರಲ್ಲಿ ಗುಪ್ತ ಸಂದೇಶ ಇದೆಯಾ? ಎಂಬುದನ್ನು ನೋಡಲು ಆತ ಹೋಗುವುದಿಲ್ಲ. ಇದು ಬಹುತೇಕ ಜನರ ಅಭಿಪ್ರಾಯ. ಅವರ ಇತ್ತೀಚಿನ ಟೀಕಾಕಾರರೂ ತೀರಾ ಇತ್ತೀಚಿನವರೆಗೆ ಭೈರಪ್ಪನವರ ಬರವಣಿಗೆಯ ಅಭಿಮಾನಿಗಳೇ ಆಗಿದ್ದರು ಎಂಬುದೇ ಬರವಣಿಗೆಯ ಸತ್ವವನ್ನು ತೋರಿಸುತ್ತದೆ.

ಆದರೆ, ಇಂತಹ ಎಲ್ಲಾ ಕೃತಿಗಳ ಹಿಂದೆ ಹಿಂದು ಧರ್ಮವನ್ನು ವೈಭವೀಕರಿಸುವ ಉದ್ದೇಶವಿತ್ತು ಎಂಬುದನ್ನು ಇವರೆಲ್ಲ ಇತ್ತೀಚೆಗೆ ಪತ್ತೆ ಹಚ್ಚಿದರೆ? ಒಂದು ವೇಳೆ ಭೈರಪ್ಪನವರ ಮೂಲ ಉದ್ದೇಶವೇ ಇದಾಗಿದ್ದರೆ, ಅವರು ಅದನ್ನು ಸಾಧಿಸಲು ಸೋತಿದ್ದಾರೆ ಎಂದೇ ಹೇಳಬೇಕಾಗುತ್ತದೆ. ಏಕೆಂದರೆ, ನನ್ನಂಥ ಹಲವಾರು ಜನರು ಭೈರಪ್ಪನವರ ಕಾದಂಬರಿಗಳನ್ನು ಓದುವ ಖುಷಿಯಿಂದ ಆಸ್ವಾದಿಸಿದ್ದೇವೆ. ಅವು ನಮ್ಮಲ್ಲಿ ಯಾವತ್ತೂ ಹಿಂದು ಪರ ನಿಲುವನ್ನು ಬೆಳೆಸಲಿಲ್ಲ. ಇಡೀ ಕಾದಂಬರಿಯ ಸಾರಾಂಶ ಇದು ಎಂಬಂಥ ಸಂದೇಶ ನೀಡಲಿಲ್ಲ. ಎಷ್ಟು ಚೆನ್ನಾಗಿ ಬರೆದಿದ್ದಾರೆ ಎಂಬ ಮೆಚ್ಚುಗೆ ಬಿಟ್ಟರೆ ಯಾವುದೇ ಕೋಮು, ಧರ್ಮ ಅಥವಾ ಸಿದ್ಧಾಂತದ ಪರ ನಮ್ಮನ್ನು ಒಯ್ಯಲಿಲ್ಲ. ಬಹುಶಃ ಅವರ ಇತ್ತೀಚಿನ ಟೀಕಾಕಾರರಿಗೂ ಇಂಥದೇ ಅನುಭವ ಆಗಿದೆ. ಹಲವಾರು ಸಂದರ್ಭಗಳಲ್ಲಿ ಆ ಬಗ್ಗೆ ಅವರೇ ಮುಕ್ತವಾಗಿ ಹೇಳಿಕೊಂಡಿದ್ದಾರೆ.

ಹೀಗಿರುವಾಗ, ಭೈರಪ್ಪನವರು ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಬರೆದ ಲೇಖನ ಆಧಾರವಾಗಿಟ್ಟುಕೊಂಡು, ಅವರ ಒಟ್ಟಾರೆ ಕೃತಿಗಳ ಉದ್ದೇಶದ ಬಗ್ಗೆ ಚರ್ಚಿಸಲು ಹೊರಡುವುದು ಹಾಸ್ಯಾಸ್ಪದ. ಇಂತಹ ಪ್ರತಿಕ್ರಿಯಾ ಬರವಣಿಗೆಗಳ ಮೂಲ ಉದ್ದೇಶವನ್ನೇ ಅದು ಪ್ರಶ್ನಿಸುವಂತೆ ಮಾಡುತ್ತದೆ. ಭೈರಪ್ಪ ತಮ್ಮ ನಿಲುವನ್ನು ಅತ್ಯಂತ ಸ್ಪಷ್ಟವಾಗಿ ಹೇಳಿದ್ದಾರೆ. ಅದನ್ನು ಒಪ್ಪದಿದ್ದರೆ, ಅದನ್ನು ಅಷ್ಟೇ ಸ್ಪಷ್ಟವಾಗಿ, ತಾತ್ವಿಕವಾಗಿಯೇ ಖಂಡಿಸಬೇಕು. ಅದು ಬಿಟ್ಟು, ಅವರ ಕಾದಂಬರಿಗಳಲ್ಲೂ ಇಂಥದೇ ಉದ್ದೇಶವಿತ್ತು, ಈ ವ್ಯಕ್ತಿ ಮೊದಲಿನಿಂದಲೂ ಹೀಗೇ ಕಣ್ರೀ ಎಂದು ಹೇಳಲು ಹೊರಡುವುದು ಮೂರ್ಖತನವಾಗುತ್ತದೆ. ಇವರೆಲ್ಲ ಯಾರನ್ನೋ ಮೆಚ್ಚಿಸಲು ಯತ್ನಿಸುತ್ತಿದ್ದಾರೆ ಎಂಬ ಪ್ರಶ್ನೆ ಹುಟ್ಟಿಸುತ್ತದೆ.

ಭೈರಪ್ಪನವರ ಲೇಖನದ ಬಹಳಷ್ಟು ವಿಷಯಗಳು ಮೇಲ್ನೋಟಕ್ಕೆ ಮುಸ್ಲಿಂ-ಕ್ರಿಶ್ಚಿಯನ್ ವಿರೋಧಿಯಾಗಿಯೇ ಕಾಣುತ್ತವೆ. ಆದರೆ, ಅವರು ಎತ್ತಿರುವ ಪ್ರಶ್ನೆಗಳು ಯಾವವೂ ಹೊಸವಲ್ಲ. ಕಾಲಕಾಲಕ್ಕೆ ಇಂತಹ ಪ್ರಶ್ನೆಗಳು ಏಳುತ್ತಲೇ ಇವೆ. ಬಹಳಷ್ಟು ಜನ ಇವನ್ನು ಪ್ರಸ್ತಾಪಿಸಿದ್ದೂ ಆಗಿದೆ. ಈಗಲೂ ಅವುಗಳ ಬಗ್ಗೆ ಚರ್ಚೆಗಳು ನಡೆದೇ ಇವೆ. ಭೈರಪ್ಪನವರು ಅವನ್ನು ಕ್ರೋಡೀಕರಿಸಿದಂತೆ ಬರೆದಿದ್ದಾರೆ, ಅಷ್ಟೇ. ಈಗ ಚರ್ಚೆ ನಡೆಯಬೇಕಿರುವುದು ಭೈರಪ್ಪನವರ ನಿಲುವಿನ ಬಗ್ಗೆ ಅಲ್ಲ. ಅವರು ಎತ್ತಿರುವ ಪ್ರಶ್ನೆಗಳ ಬಗ್ಗೆ.

ಆದರೆ, ಅದೇ ನಡೆಯುತ್ತಿಲ್ಲ.

ಒಂದು ಉದಾಹರಣೆ ಮೂಲಕ ಈ ಬರಹ ಮುಗಿಸುತ್ತೇನೆ. ಇತ್ತೀಚೆಗೆ ಬೆಂಗಳೂರು ಸೇರಿದಂತೆ ದೇಶದ ಹಲವಾರು ಪ್ರಮುಖ ನಗರಗಳಲ್ಲಿ ಸರಣಿ ಬಾಂಬ್ ಸ್ಫೋಟಗಳು ನಡೆದವು. ಆಗ ನಮ್ಮ ಬಹುತೇಕ ಬುದ್ಧಿಜೀವಿಗಳು, ಇತ್ತೀಚೆಗಷ್ಟೇ ಜಾತ್ಯತೀತರಾದ ಬಹುತೇಕ ಜನ ಅದನ್ನು ಖಂಡಿಸಲಿಲ್ಲ. ಖಂಡಿಸಿದ ಕೆಲವರಲ್ಲಿ ತೀವ್ರತೆ ಕಾಣಲಿಲ್ಲ. ಇಂಥ ಬೆಳವಣಿಗೆಗಳು ಅಪಾಯಕಾರಿ ಎಂಬುದರ ಬಗ್ಗೆ ಮಾತನಾಡಲಿಲ್ಲ. ಯಾರೋ ಅವಿವೇಕಿಗಳು, ತಪ್ಪು ಸಿದ್ಧಾಂತ ನಂಬಿಕೊಂಡು ಬಾಂಬಿಡುವುದು ಆ ಧರ್ಮದ ಇತರರನ್ನು ಅನುಮಾನಕ್ಕೆ ಈಡು ಮಾಡುತ್ತವೆ ಎಂಬುದರ ಬಗ್ಗೆ ಕಳವಳ ಪಡಲಿಲ್ಲ.

ಆದರೆ, ದತ್ತ ಜಯಂತಿ ಬಂದ ಕೂಡಲೇ ಇವರೆಲ್ಲ ಮೈಕೊಡವಿ ಎದ್ದು ಕೂತರು. ವರ್ಷ ಪೂರ್ತಿ ಸುಪ್ತವಾಗುವ ಕೋಮು ಸೌಹಾರ್ದ ವೇದಿಕೆ ಹಾಗೂ ಅಂತಹ ಸಂಘಟನೆಗಳು ಎದ್ದು ಕೂತವು. ದತ್ತ ಜಯಂತಿ ಮುಗಿಯುವವರೆಗೆ ಅವರೆಲ್ಲ ಫುಲ್ ಬಿಜಿ. ಹಿಂದು ಪರ ಸಂಘಟನೆಗಳನ್ನು ಸಾರಾಸಗಟಾಗಿ ಟೀಕಿಸುತ್ತ, ಧರಣಿ-ಮುಷ್ಕರದ ಎಚ್ಚರಿಕೆ ಕೊಡುತ್ತ ಕಾಲಹರಣ ಮಾಡುವುದು ಬಿಟ್ಟರೆ ಈ ಸಂಘಟನೆಗಳು ಹಾಗೂ ಇವರ ಹಿಂದಿರುವ ಜನರಿಂದ ಸಮಾಜಕ್ಕೆ ಆದ ಒಳಿತು ಅಷ್ಟಕ್ಕಷ್ಟೇ. ದೇಶಕ್ಕೆ ಬಾಂಬಿಡುವ ಜನರನ್ನು ಟೀಕಿಸದ ಇಂಥವರ ಸಾಲಿಗೆ ಈಗ ಭೈರಪ್ಪನವರ ಇತ್ತೀಚಿನ ಟೀಕಾಕಾರರೂ ಸೇರಿಕೊಂಡಿದ್ದಾರೆ.

ತಪ್ಪು ಯಾರೇ ಮಾಡಿರಲಿ, ಅದನ್ನು ತಪ್ಪೆಂದು ಹೇಳುವ ಎದೆಗಾರಿಕೆ ಬೇಕು. ಭೈರಪ್ಪನವರ ನಿಲುವನ್ನು ಖಂಡಿಸಲು ತೋರಿದಂಥ ಉತ್ಸಾಹವನ್ನೇ ಬಾಂಬಿಡುವ ಜನರ ಬಗ್ಗೆಯೂ ತೋರಬೇಕಾಗುತ್ತದೆ. ಇಲ್ಲದಿದ್ದರೆ ಬೌದ್ಧಿಕ ಬರವಣಿಗೆಗಳೆಲ್ಲ ವ್ಯರ್ಥ ಪ್ರಲಾಪವಾಗುತ್ತವೆ.
- ಚಾಮರಾಜ ಸವಡಿ

ಗುರುದತ್ ಎಂಬ ದುರಂತ ನಾಯಕ

10 Oct 2008

1 ಪ್ರತಿಕ್ರಿಯೆ
ಆತ ದುರಂತ ನಾಯಕ. ಆತನ ಜೀವನದಲ್ಲಷ್ಟೇ ಅಲ್ಲ, ನಟಿಸಿದ ಹಾಗೂ ನಿರ್ಮಿಸಿದ ಚಿತ್ರಗಳುದ್ದಕ್ಕೂ ಈ ದುರಂತ ಪ್ರತಿಫಲಿಸಿದೆ. ಕನ್ನಡಿಗನಾಗಿ ಹುಟ್ಟಿ, ಬಂಗಾಳಿಯಾಗಿ ಬೆಳೆದು, ನಟ-ನಿರ್ದೇಶಕನಾಗಿ ಅಮರನಾದ ಗುರುದತ್ ಭಾರತೀಯ ಚಿತ್ರರಂಗ ಕಂಡ ವಿಶಿಷ್ಟ ಪ್ರತಿಭೆ. ನಿದ್ದೆ ಗುಳಿಗೆ ಸೇವಿಸಿ ಆತ ಆತ್ಮಹತ್ಯೆ ಮಾಡಿಕೊಂಡು ಇಂದಿಗೆ ೪೪ ವರ್ಷಗಳು. ಹಿಂದಿ ಚಿತ್ರರಂಗ ಎಂದೂ ಮರೆಯದ ಈ ಮಹಾನ್ ಪ್ರತಿಭೆ ಇವತ್ತಿಗೂ ದಂತಕಥೆ.

ಗುರುದತ್ ಹುಟ್ಟಿದ್ದು ಕನ್ನಡಿಗನಾಗಿ. ಶಿವಶಂಕರರಾವ್ ಪಡುಕೋಣೆ ಹಾಗೂ ವಸಂತಿ ದಂಪತಿಗಳ ಮಗನಾಗಿ ೧೯೨೫ರ ಜುಲೈ ೯ ರಂದು ಬೆಂಗಳೂರಿನಲ್ಲಿ ಜನಿಸಿದಾಗ ಆತನ ತಾಯಿಗೆ ಕೇವಲ ೧೬ ವರ್ಷದ ಪ್ರಾಯ. ಗುರುದತ್‌ನ ಮೊದಲ ಹೆಸರು ವಸಂತ ಕುಮಾರ್. ಅಪ್ಪ ಶಿವಶಂಕರ್ ದಕ್ಷಿಣ ಕನ್ನಡ ಜಿಲ್ಲೆಯ ಪಣಂಬೂರಿನಲ್ಲಿ ನೆಲೆಸಿದ್ದವರು. ಬ್ಯಾಂಕ್ ನೌಕರಿಗೆ ಹೋಗುವ ಮೊದಲು ಇಲ್ಲಿಯೇ ಶಿಕ್ಷಕರಾಗಿದ್ದ ಶಿವಶಂಕರರಾವ್ ಅವರ ಆರ್ಥಿಕ ಪರಿಸ್ಥಿತಿ ಚೆನ್ನಾಗಿರಲಿಲ್ಲ. ತಮ್ಮಂದಿರಾದ ಆತ್ಮಾರಾಮ್, ದೇವಿದಾಸ್ ಹಾಗೂ ತಂಗಿ ಲಲಿತಾ ಅವರೊಂದಿಗೆ ಕಷ್ಟಕರ ಬಾಲ್ಯ ಕಳೆದ ಗುರುದತ್, ಕ್ರಮೇಣ ಆಸಕ್ತಿ ತೋರಿದ್ದು ಸಿನಿಮಾ ಪೋಸ್ಟರ್‌ಗಳ ಚಿತ್ರಗಳನ್ನು ಬಿಡಿಸುವತ್ತ.

ಬ್ಯಾಂಕ್ ಉದ್ಯೋಗಿಯಾಗಿದ್ದ ತಂದೆಗೆ ಕೋಲ್ಕತಾದ ಭವಾನಿಪುರಕ್ಕೆ ವರ್ಗವಾಯಿತು. ಗುರುದತ್ ಪ್ರಾಥಮಿಕ ವಿದ್ಯಾಭ್ಯಾಸ ಆಗಿದ್ದು ಅಲ್ಲೇ. ಬಂಗಾಳಿ ಭಾಷೆ ಸಹಜವಾಗಿ ರೂಢಿಯಾಗಿದ್ದರಿಂದ ಆತನ ಪ್ರತಿಯೊಂದು ಕೆಲಸದಲ್ಲಿಯೂ ಬಂಗಾಳಿ ಪ್ರಭಾವ ಎದ್ದು ಕಾಣುತ್ತಿತ್ತು. ಮುಂದೆ ಹೊಟ್ಟೆಪಾಡಿಗಾಗಿ ಮುಂಬೈ ಚಿತ್ರೋದ್ಯಮಕ್ಕೆ ಬಂದಾಗ, ತನ್ನ ಹೆಸರಿನೊಂದಿಗೆ ಇದ್ದ ತಂದೆಯ ಹೆಸರು ಹಾಗೂ ಪಡುಕೋಣೆ ಎಂಬ ಅಡ್ಡಹೆಸರನ್ನು ತೆಗೆದುಹಾಕಿ, ಗುರುದತ್ ಎಂದು ಗುರುತಿಸಿಕೊಂಡರು. ಕನ್ನಡ ಹಾಗೂ ಕನ್ನಡಿಗರೊಂದಿಗೆ ಆತನ ಸಂಬಂಧ ಶಾಶ್ವತವಾಗಿ ಕಡಿದುಹೋಯಿತು.

ಆದರೆ, ಸಿನಿಮಾ ನಟ ಹಾಗೂ ನಿರ್ದೇಶಕನಾಗಿ ಗುರುದತ್ ಸಾಧಿಸಿದ್ದು ಅಪಾರ. ಕಲಾಸಕ್ತಿ ಆತನನ್ನು ಆ ಕಾಲದ ಖ್ಯಾತ ನೃತ್ಯಪಟು ಉದಯಶಂಕರ್ ಅವರ ನಾಟಕ ಶಾಲೆಯತ್ತ ಸೆಳೆಯಿತು. ಹದಿನಾರು ವರ್ಷದ ಗುರುದತ್ ಆ ಕಾಲದಲ್ಲಿಯೇ ವರ್ಷಕ್ಕೆ ೭೫ ರೂಪಾಯಿಗಳಂತೆ ಐದು ವರ್ಷದ ಶಿಷ್ಯವೇತನ ಗಳಿಸಿದ್ದ. ಆದರೆ, ಎರಡನೇ ಮಹಾಯುದ್ಧದ ಪರಿಣಾಮವಾಗಿ ನಾಟಕ ಶಾಲೆ ಮುಚ್ಚಿತು. ಕೋಲ್ಕತಾದಲ್ಲಿ ದೂರವಾಣಿ ನಿರ್ವಾಹಕನಾಗಿ, ಪುಣೆಯ ಪ್ರಭಾತ್ ಫಿಲ್ಮ್ ಕಂಪನಿಯಲ್ಲಿ ಗುತ್ತಿಗೆದಾರನಾಗಿ ಕೆಲಸ ಮಾಡಿದ ನಂತರ, ಮುಂಬೈಗೆ ತೆರಳಿದ ಗುರುದತ್ ಕೊನೆಯವರೆಗೂ ಉಳಿದಿದ್ದು, ಬೆಳೆದಿದ್ದು ಅಲ್ಲಿಯೇ. ೧೯೪೫ರಲ್ಲಿ ನಟನಾಗಿ, ಸಹ ನಿರ್ದೇಶಕನಾಗಿ ’ಲಖ್ರಾನಿ’ ಚಿತ್ರದ ಮೂಲಕ ವೃತ್ತಿ ಜೀವನ ಪ್ರಾರಂಭಿಸಿದ ಗುರುದತ್, ’ಹಮ್ ಏಕ್ ಹೈ’ ಚಿತ್ರದ ಮೂಲಕ ನೃತ್ಯ ನಿರ್ದೇಶನವನ್ನೂ ಮಾಡಿದ.

ಆದರೆ, ಅದೃಷ್ಟ ಒಲಿಯಲಿಲ್ಲ. ಮುಂದಿನ ಕೆಲ ವರ್ಷಗಳನ್ನು ಅನಾಮಧೇಯನಂತೆ ಕಳೆದ ಗುರುದತ್ ಮತ್ತೆ ಖ್ಯಾತಿಗೆ ಬಂದಿದ್ದು ’ಬಾಝಿ’ ಸಿನಿಮಾ ನಿರ್ದೇಶನದ ಮೂಲಕ. ಆ ಚಿತ್ರದಲ್ಲಿ ಬಳಸಿದ ಸಮೀಪ ದೃಶ್ಯಗಳ ಚಿತ್ರಣ ಕಲೆ ’ಗುರುದತ್ ಶಾಟ್’ ಎಂದೇ ಜನಪ್ರಿಯವಾಯಿತು. ಹಲವಾರು ಪ್ರಥಮಗಳಿಗೆ ಸಾಕ್ಷಿಯಾದ ’ಬಾಝ’ ಚಿತ್ರ ಗುರುದತ್‌ಗೆ ಮುಂದೆ ತಮ್ಮ ಪತ್ನಿಯಾಗಲಿರುವ ಗೀತಾ ಅವರನ್ನು ಪರಿಚಯಿಸಿತು. ನಂತರದ ಎರಡು ಚಿತ್ರಗಳು ವಿಫಲವಾದರೂ ’ಆರ್ ಪಾರ್’ ಚಿತ್ರ ಯಶಸ್ವಿಯಾಯಿತು. ಮುಂದೆ ಬಂದಿದ್ದೆಲ್ಲ ಹಿಟ್ ಚಿತ್ರಗಳೇ. ೧೯೫೭ರಲ್ಲಿ ತೆರೆ ಕಂಡ ’ಪ್ಯಾಸಾ’ ಹಿಂದಿ ಚಿತ್ರರಂಗದಲ್ಲಿ ಮೈಲಿಗಲ್ಲು ಎಂದೇ ಗುರುತಿಸಲ್ಪಟ್ಟಿತು. ನಿರಾಸಕ್ತ ಪ್ರಪಂಚದಿಂದ ತಿರಸ್ಕೃತನಾಗಿ, ಮನ್ನಣೆಯಿಲ್ಲದೇ ಸಾಯುವ ಕವಿಯೊಬ್ಬ, ಮರಣಾನಂತರ ಖ್ಯಾತನಾಗುವ ಕಥೆ ಹೊಂದಿದ್ದ ’ಪ್ಯಾಸಾ’ ಒಂದರ್ಥದಲ್ಲಿ ಗುರುದತ್‌ನ ಆತ್ಮಚರಿತ್ರೆಯಂತೆ.

ದುರಂತಮಯ ವೈಯಕ್ತಿಕ ಜೀವನ ಹೊಂದಿದ್ದ ಗುರುದತ್ ಆ ನೋವನ್ನು ಮರೆಯಲು ಚಿತ್ರ ನಿರ್ಮಾಣ ಹಾಗೂ ನಿರ್ದೇಶನದ ಮೊರೆ ಹೋದ. ತನ್ನ ನೋವು ಹಾಗೂ ಕನಸುಗಳನ್ನು ಚಿತ್ರಗಳ ಮೂಲಕ ಬಿಂಬಿಸಿದ. ಆತ ನಟಿಸಿದ ’ಸಾಹೀಬ್ ಬೀವಿ ಔರ್ ಗುಲಾಮ’,’ಚೌದವೀ ಕಾ ಚಾಂದ’,’ಆರ್ ಪಾರ್’, ’ಸುಹಾಗನ್’ ಇವತ್ತಿಗೂ ಸ್ಮರಣೀಯ. ಆತ ನಟಿಸಿ ನಿರ್ದೇಶಿಸಿದ ’ಕಾಗಜ್ ಕೆ ಫೂಲ್’ ಮತ್ತು ’ಪ್ಯಾಸಾ’ ಚಿತ್ರಗಳು ಇವತ್ತಿಗೂ ಹಿಂದಿ ಚಿತ್ರರಂಗದ ಮೈಲಿಗಲ್ಲುಗಳು.

ಪ್ರೇಮದ ನವಿರು ಭಾವನೆಗಳನ್ನು ಸೊಗಸಾಗಿ ಚಿತ್ರೀಕರಿಸುವ ಮೂಲಕ ಹಿಂದಿ ಸಿನಿಮಾಗಳಿಗೆ ಸೂಕ್ಷ್ಮತೆ ತಂದುಕೊಟ್ಟ ಗುರುದತ್ ತಮ್ಮ ಸಮಕಾಲೀನ ನಟ, ನಿರ್ದೇಶಕರನ್ನು ಪ್ರಭಾವಗೊಳಿಸಿದಾತ. ಅತ್ಯಂತ ಬಡತನದಿಂದ ಬಂದಿದ್ದರೂ ಹಿಂದಿ ಚಿತ್ರರಂಗದ ದಂತಕತೆಯಾದಾತ. ವೈಯಕ್ತಿಕ ಜೀವನದ ನೋವು, ವೃತ್ತಿ ಜೀವನದ ಅನಿವಾರ್ಯತೆಗಳು ತಂದುಕೊಟ್ಟ ಆಘಾತ ಮರೆಯಲಾಗದೇ ನಿದ್ರೆ ಮಾತ್ರೆ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಾಗ ಗುರುದತ್‌ಗೆ ಕೇವಲ ೩೯ ವರ್ಷ ವಯಸ್ಸು.

’ಸುಹಾನೀ ರಾತ್ ಢಲ್ ಚುಕೀ ಹೈ
ನ ಜಾನೇ ತುಮ್ ಕಬ್ ಆವೋಗೇ...’

ಎಂಬ ಆತನ ಚಿತ್ರದ ಹಾಡು ಗುರುದತ್‌ನನ್ನು, ಆತನ ಕೊಡುಗೆಯನ್ನು ಮತ್ತೆ ಮತ್ತೆ ನೆನಪಿಸುತ್ತವೆ.

- ಚಾಮರಾಜ ಸವಡಿ

ಒಂದು ಕಲಿತವನಿಗೆ ಇನ್ನೊಂದು ಸುಲಭ

2 ಪ್ರತಿಕ್ರಿಯೆ

ಒಂದು ಭಾಷೆಯನ್ನು ಚೆನ್ನಾಗಿ ಕಲಿತವನಿಗೆ ಇನ್ನೊಂದು ಭಾಷೆ ಕಲಿಯುವುದು ಕಷ್ಟವಲ್ಲ ಬಿಡಿ.

ಅನುಮಾನ ಬಂದರೆ, ನಿಮ್ಮ ಭಾಷಾ ಕಲಿಕೆ ಸಾಮರ್ಥ್ಯವನ್ನು ಒಮ್ಮೆ ನೆನಪಿಸಿಕೊಳ್ಳಿ. ಹಾಲು ಎಂಬ ಶಬ್ದದ ಅರ್ಥ ಗೊತ್ತಿದ್ದವನಿಗೆ ಮಿಲ್ಕ್ ಎಂಬ ಇಂಗ್ಲಿಷ್ ಶಬ್ದದ ಅರ್ಥ ಸಹಜವಾಗಿ ಮನದಟ್ಟಾಗುತ್ತದೆ. ದೂದ್ ಎಂಬ ಹಿಂದಿ ಶಬ್ದ ಸಹ ಸಹಜವಾಗಿ ಮನವರಿಕೆಯಾಗುತ್ತದೆ. ಯಾವಾಗ ಮಿಲ್ಕ್ ಅಥವಾ ದೂದ್ ಎಂಬ ಶಬ್ದಗಳು ಬರುತ್ತವೋ ಆಗ ಹಾಲು ಎಂಬ ಕನ್ನಡ ಶಬ್ದ ಸಹಜವಾಗಿ ಮೆದುಳಿನಲ್ಲಿ ಮಿನುಗುತ್ತ ಹೊಸ ಶಬ್ದದ ವ್ಯಾಪ್ತಿಯನ್ನು ಮನದಟ್ಟು ಮಾಡುತ್ತ ಹೋಗುತ್ತದೆ. ಈ ಪ್ರಕ್ರಿಯೆ ಎಷ್ಟು ಸಹಜವಾಗುತ್ತದೆಂದರೆ, ಮಿಲ್ಕ್ ಅಥವಾ ದೂದ್ ಶಬ್ದಗಳು ಪರಕೀಯ ಅನಿಸುವುದಿಲ್ಲ.

ಹೊಸ ಹೊಸ ಶಬ್ದಗಳ ಕಲಿಕೆ ಸುಲಭವಾಗುತ್ತ ಹೋಗುವುದು ಹೀಗೆ.

ಹೀಗಾಗಿ ಇನ್ನೊಂದು ಭಾಷೆ ನಿಧಾನವಾಗಿ ಮನಸ್ಸಿನಲ್ಲಿ ಇಳಿಯುತ್ತ ಹೋಗುತ್ತದೆ. ಪ್ರತಿಯೊಂದು ಹೊಸ ಶಬ್ದಕ್ಕೂ ಪರ್ಯಾಯವಾಗಿ ಕನ್ನಡದ ಶಬ್ದ ಮನಸ್ಸಿನಲ್ಲಿ ನಿಲ್ಲುತ್ತದೆ. ಅದರ ಅರ್ಥವನ್ನು ಹೋಲಿಸಿ ನೋಡುತ್ತದೆ. ನಿಧಾನವಾಗಿ ಅದನ್ನು ಜೀರ್ಣಿಸಿಕೊಳ್ಳುತ್ತದೆ. ಒಂಚೂರು ಆಸಕ್ತಿ ತೋರಿಸಿದರೂ ಸಾಕು, ಇನ್ನೊಂದು ಭಾಷೆಯನ್ನು ಸುಲಭವಾಗಿ ಕಲಿಯಬಹುದು. ನಮ್ಮ ಮಾತೃಭಾಷೆಗೂ ಇನ್ನೊಂದು ಭಾಷೆಗೂ ಇರುವ ಸಾಮ್ಯತೆ ಹಾಗೂ ಭಿನ್ನತೆಯನ್ನು ಗುರುತಿಸುವ ಮೂಲಕ ಅದನ್ನು ಅರ್ಥ ಮಾಡಿಕೊಳ್ಳುತ್ತೇವೆ. ಎಷ್ಟು ಸಮರ್ಥವಾಗಿ ನಮ್ಮ ಮಾತೃಭಾಷೆಯನ್ನು ನಾವು ವ್ಯಕ್ತಪಡಿಸುತ್ತೇವೆಯೋ, ಅಷ್ಟೇ ಸುಲಭವಾಗಿ ಇನ್ನೊಂದು ಭಾಷೆಯಲ್ಲಿಯೂ ಅಭಿವ್ಯಕ್ತಿ ಸಾಧ್ಯವಾಗುತ್ತದೆ.

ಪ್ರತಿಯೊಂದು ಕಲಿಕೆಯೂ ಸುಲಭವಾಗುತ್ತ ಹೋಗುವುದು ಹೀಗೆ. ಒಂದು ಮಾದರಿಯ ಬೈಕ್ ಓಡಿಸಬಲ್ಲವನಿಗೆ ಇನ್ನೊಂದು ವಿನ್ಯಾಸದ ಬೈಕ್ ಕಲಿಯುವುದು ಕಷ್ಟವಾಗುವುದಿಲ್ಲ. ಮೊದಮೊದಲು ಒಂಚೂರು ಹಿಂಜರಿಕೆ ಇದ್ದರೂ, ಕೆಲವೇ ದಿನಗಳಲ್ಲಿ ಅದು ರೂಢಿಯಾಗುತ್ತದೆ. ಯಾವುದೇ ಒಂದು ಪರಿಸರವನ್ನು ಚೆನ್ನಾಗಿ ಅರ್ಥ ಮಾಡಿಕೊಂಡ ವ್ಯಕ್ತಿ ಇನ್ನೊಂದು ಪರಿಸರವನ್ನು ಬಲುಬೇಗ ತನ್ನದಾಗಿಸಿಕೊಳ್ಳುತ್ತಾನೆ. ಒಂದು ವೃತ್ತಿಯ ಸೂಕ್ಷ್ಮವನ್ನು ಅರ್ಥ ಮಾಡಿಕೊಂಡವನಿಗೆ ಇನ್ನೊಂದು ವೃತ್ತಿಯ ಸೂಕ್ಷ್ಮಗಳು ಬೇಗ ಗೊತ್ತಾಗುತ್ತವೆ. ಬಹುಶಃ ಉಪನಿಷತ್ತಿನಲ್ಲಿ ಹೇಳಿದ್ದು ಅನಿಸುತ್ತದೆ:’ಒಂದು ಹಿಡಿ ಮಣ್ಣನ್ನು ಚೆನ್ನಾಗಿ ಅರಿಯಬಲ್ಲೆಯಾದರೆ, ಇಡೀ ಭೂಮಿಯನ್ನೇ ಸುಲಭವಾಗಿ ಅರ್ಥ ಮಾಡಿಕೊಳ್ಳಬಹುದು’. ಇದು ಎಲ್ಲ ರೀತಿಯ ಕಲಿಕೆಗಳಿಗೂ ಅನ್ವಯಿಸುತ್ತದೆ.

ಇಂಥ ಕಲಿಕೆ ಕೊಡುವ ಆತ್ಮವಿಶ್ವಾಸ ಅಪಾರ. ನಮ್ಮಲ್ಲಿ ಬಹುತೇಕ ಜನ ಓದಿದ್ದು ಕನ್ನಡದಲ್ಲಿ. ಅವರು ಯೋಚಿಸಲು ಪ್ರಾರಂಭಿಸಿದ್ದು, ಅಭಿವ್ಯಕ್ತಿ ತೋರಿದ್ದು ಕನ್ನಡದಲ್ಲಿ. ಇದ್ದಕ್ಕಿದ್ದಂತೆ ಇನ್ನೊಂದು ಭಾಷೆ ಕಲಿಯುವ, ಅದರಲ್ಲೇ ತಮ್ಮ ವಿಚಾರಗಳನ್ನು ವ್ಯಕ್ತಪಡಿಸುವ ಅನಿವಾರ್ಯತೆ ಒದಗಿದಾಗ, ಹಿನ್ನೆಲೆಯಲ್ಲಿ ಕನ್ನಡ ಇದ್ದೇ ಇರುತ್ತದೆ. ಅವರ ಕನ್ನಡ ಎಷ್ಟು ಬಲವಾಗಿರುತ್ತದೋ, ಇನ್ನೊಂದು ಭಾಷೆಯಲ್ಲಿ ಅಭಿವ್ಯಕ್ತಿಗೊಳಿಸುವುದು ಅಷ್ಟೇ ಸುಲಭವಾಗುತ್ತದೆ.

ಇದನ್ನು ಎಷ್ಟು ಬೇಕಾದರೂ ವಿಸ್ತರಿಸಬಹುದು. ಈ ಮಾದರಿಯನ್ನು ಜೀವನದ ಯಾವುದೇ ರಂಗಕ್ಕೂ ಅನ್ವಯಿಸಿ ನೋಡಬಹುದು. ಕಲಿಕಾ ಸಾಮರ್ಥ್ಯ ವಿಸ್ತಾರವಾಗಬೇಕೆಂದರೆ, ಯಾವುದೋ ಒಂದು ಮಾದರಿಯ ಬಗ್ಗೆ, ವಿಶೇಷತೆಯ ಬಗ್ಗೆ ಹೆಚ್ಚು ಗೊತ್ತಿದ್ದಷ್ಟೂ ಉತ್ತಮ. ನಮಗೆ ಕನ್ನಡ ಕಾವ್ಯದ ಬಗ್ಗೆ ಚೆನ್ನಾಗಿ ಗೊತ್ತಿದ್ದರೆ, ಆಸಕ್ತಿ ಇದ್ದರೆ, ಇನ್ನೊಂದು ಭಾಷೆಯ ಕಾವ್ಯವೂ ಸುಲಭವಾಗಿ ಗೊತ್ತಾಗುತ್ತದೆ, ಅರ್ಥವಾಗುತ್ತದೆ. ಅದೇ ರೀತಿ ಕನ್ನಡ ರಂಗಭೂಮಿಯ ಬಗ್ಗೆ ಗೊತ್ತಿದ್ದರೆ, ಬೇರೆ ಭಾಷೆಯ ರಂಗಭೂಮಿಯ ವಿಶೇಷತೆಗಳು ಸುಲಭವಾಗಿ ಗೋಚರವಾಗುತ್ತವೆ. ಸರಳವಾಗಿ ಅರ್ಥವಾಗುತ್ತವೆ. ಸಂಗೀತ, ಚಿತ್ರಕಲೆ, ತಂತ್ರಜ್ಞಾನ, ಪತ್ರಿಕೆ, ಬರವಣಿಗೆ- ಹೀಗೆ ಬಹುತೇಕ ಕ್ಷೇತ್ರಗಳು ಸುಲಭವಾಗಿ ತಿಳಿಯುತ್ತ ಹೋಗುವುದು ಹೀಗೆ.

ಆದ್ದರಿಂದ ಕನ್ನಡವನ್ನಷ್ಟೇ ಓದಿದವರು ಖಂಡಿತ ಹಿಂಜರಿಯಬೇಕಾಗಿಲ್ಲ. ನಿಮಗೆ ಕನ್ನಡ ಚೆನ್ನಾಗಿ ಗೊತ್ತಿದ್ದರೆ, ಕೊಂಚ ಆಸಕ್ತಿ ಹಾಗೂ ಶ್ರಮ ಹಾಕುವ ಮೂಲಕ ಇನ್ನೊಂದು ಭಾಷೆಯನ್ನು ಸುಲಭವಾಗಿ ಕಲಿಯಬಹುದು. ನಮ್ಮ ಸುತ್ತಮುತ್ತ ಇರುವ ಬಹುತೇಕ ಜನ ಇನ್ನೊಂದು ಭಾಷೆಯನ್ನು ಸುಲಭವಾಗಿ ಕಲಿತಿದ್ದೇ ಹೀಗೆ.

ಹೀಗಾಗಿ, ಕೀಳರಿಮೆ ಬೇಡ. ಹಿಂಜರಿಯುವ ಅವಶ್ಯಕತೆಯಿಲ್ಲ. ನಡೆಯುವುದನ್ನು ಕಲಿತವ ಕರ್ನಾಟಕದಲ್ಲೂ ನಡೆದಾಡಬಲ್ಲ, ಇಂಗ್ಲಂಡ್‌ನಲ್ಲೂ ನಡೆಯಬಲ್ಲ. ಅದೇ ರೀತಿ ಒಂದು ನುಡಿಯನ್ನು ಚೆನ್ನಾಗಿ ಕಲಿತವ ಇನ್ನೊಂದು ಭಾಷೆಯನ್ನೂ ಅಷ್ಟೇ ಚೆನ್ನಾಗಿ ನುಡಿಯಬಲ್ಲ. ಒಂಚೂರು ಆಸಕ್ತಿ ಇದ್ದರೆ ಕಲಿಕೆ ಸುಲಭವಾಗುತ್ತ ಹೋಗುತ್ತದೆ.

ಅಂಥದೊಂದು ಮನಃಸ್ಥಿತಿ ನಮ್ಮಲ್ಲಿರಬೇಕಷ್ಟೇ.

- ಚಾಮರಾಜ ಸವಡಿ


ಬದುಕೇ, ನಿನಗೊಂದು ಥ್ಯಾಂಕ್ಸ್‌

8 Oct 2008

6 ಪ್ರತಿಕ್ರಿಯೆ
ಎರಡು ದಿನ ಯೋಗಾಸನ, ವ್ಯಾಯಾಮ ಬಿಟ್ಟರೆ ಮನಸ್ಸಿಗೆ ಏನೋ ತಹತಹ. ಛೇ, ಹೀಗಾದರೆ, ಕ್ರಮೇಣ ನಾನು ಸೋಮಾರಿಯಾಗುತ್ತೇನೆ. ನಸುಕಿನಲ್ಲಿ ಏಳಲು ಆಗುವುದಿಲ್ಲ. ಆರೋಗ್ಯ ಕೆಡುತ್ತದೆ. ತಿಂದು ತಿಂದು ಡುಮ್ಮಣ್ಣನಾಗುತ್ತೇನೆ ಎಂದು ಅಂದುಕೊಂಡು, ಹೆದರಿಸಿ, ಹದ ಮೀರಿದ ದಿನಚರಿಯನ್ನು ಮತ್ತೆ ಹಳಿಗೆ ಹತ್ತಿಸುತ್ತೇನೆ. ಊಟ ಮಾಡುವಾಗಲೂ ಅಷ್ಟೇ. ಮೊದಲಿನಿಂದ ಸರಳ ಆಹಾರ ಇಷ್ಟ. ಅನಗತ್ಯವಾಗಿ ಏನನ್ನೂ ತಿನ್ನಲು ಹೋಗುವುದಿಲ್ಲ. ಒಂದೊಮ್ಮೆ ಆಸೆಪಟ್ಟು ತಿಂದೆನಾದರೂ, ದೇಹದ ಮೇಲೆ ಅದರ ಪರಿಣಾಮ ಆಗುವುದಕ್ಕೂ ಮುನ್ನ ಮನಸ್ಸಿಗೆ ಕಸಿವಿಸಿ ಶುರುವಾಗುತ್ತದೆ. ’ಛೇ ಛೇ ಇಷ್ಟೊಂದು ತಿನ್ನಬಾರದಿತ್ತು’ ಎಂದು ಅಂದುಕೊಳ್ಳುತ್ತ ಒಂದು ಮಿನಿ ಉಪವಾಸ ಮಾಡಿ ಅದನ್ನು ಸರಿದೂಗಿಸಿಕೊಳ್ಳುತ್ತೇನೆ.

ರೇಖಾ ಬೈಯುತ್ತಾಳೆ. ಯಾಕೆ ಇಷ್ಟೊಂದು ಕಟ್ಟು ಮಾಡಿಕೊಳ್ಳುತ್ತೀರಿ? ಒಂದಿಷ್ಟು ಶಿಸ್ತು ತಪ್ಪಿದರೆ ಏನು ಮಹಾ ಆಗುತ್ತದೆ? ಎನ್ನುತ್ತಾಳೆ.

ಆದರೆ, ಆಕೆ ಕೂಡ ಅಂಥದೊಂದು ಕಟ್ಟುಪಾಡನ್ನು ರೂಢಿಸಿಕೊಂಡಿದ್ದಾಳೆ. ಬಹುಶಃ ನಮ್ಮಿಬ್ಬರ ಮನಸ್ಸಿನೊಳಗೆ ಅಂಥದೊಂದು ಶಿಸ್ತು ಇಳಿದುಬಿಟ್ಟಿದೆ.

ಅದು ಅನಿವಾರ್ಯವೂ ಹೌದು. ನಾವು ಕಾಯಿಲೆ ಬೀಳಲಾರೆವು. ಅಂದರೆ, ಕಾಯಿಲೆ ಬೀಳುವಂತಿಲ್ಲ. ನೌಕರಿಯ ಹಂಗಿಗೆ ಸಿಲುಕಿ, ಊರು ತೊರೆದು ಬಂದಾಗಿನಿಂದ ಇಂಥದೊಂದು ಕಟ್ಟುಪಾಡು ನಮಗೆ ಸಹಜ ದಿನಚರಿಯಾಗಿದೆ. ಹಾಗಂತ, ಮುಂಚೆ ತೀರಾ ಅಶಿಸ್ತಿನಿಂದ ಇದ್ದೆವೆಂದೇನೂ ಅರ್ಥವಲ್ಲ. ಆದರೆ, ಗೌರಿ ಹುಟ್ಟಿದ ನಂತರ ಅಂಥದೊಂದು ಶಿಸ್ತು ಸಹಜವಾಗಿ ಬಂದಿದೆ.

ಏಕೆಂದರೆ, ನಾನು ಕಾಯಿಲೆ ಬಿದ್ದರೆ, ಕೆಲಸಕ್ಕೆ ಹೋಗಲು ಆಗುವುದಿಲ್ಲ. ನನ್ನ ನಿತ್ಯದ ಚಟುವಟಿಕೆಗಳು ಮೂಲೆ ಹಿಡಿಯುತ್ತವೆ. ಕಾಯಿಲೆ ಬಿದ್ದರೂ ಡಾಕ್ಟರ್ ಹತ್ತಿರ ನಾನೇ ಹೋಗಬೇಕು. ಏಕೆಂದರೆ, ಮಗುವನ್ನು ಕರೆದುಕೊಂಡು, ಕಾಯಿಲೆ ಬಿದ್ದ ನನ್ನನ್ನೂ ಸಂಭಾಳಿಸಲು ಆಕೆಗೆ ಕಷ್ಟ. ಎರಡನೇ ಮಗು ಹುಟ್ಟಿದ ನಂತರ, ಮನೆಯೇ ಆಕೆಯ ಕಾರ್ಯಕ್ಷೇತ್ರವಾಗಿದೆ. ಹೋದರೆ ಎಲ್ಲರೂ ಒಟ್ಟಿಗೇ ಹೋಗಬೇಕು. ಇಲ್ಲದಿದ್ದರೆ ನಾನೊಬ್ಬನೇ ಹೋಗಬೇಕು. ಅದರಲ್ಲೂ ಗೌರಿಯನ್ನು ಬಿಟ್ಟು ಹೋಗಲು ಆಗದು.

ಏಕೆಂದರೆ, ಗೌರಿ ವಿಶಿಷ್ಟಚೇತನ ಮಗು. ಆಕೆಯ ಬುದ್ಧಿ ಬೆಳವಣಿಗೆ ತೀರಾ ನಿಧಾನ.

ಬಹುಶಃ ಇದು ವಿಶಿಷ್ಟಚೇತನ ಮಕ್ಕಳನ್ನು ಹೊಂದಿದ ಎಲ್ಲಾ ಕುಟುಂಬಗಳ ದಿನಚರಿ ಎಂದು ನಾನು ಅಂದುಕೊಂಡಿದ್ದೇನೆ. ವಿಶಿಷ್ಟಚೇತನ ಮಕ್ಕಳನ್ನು ನೋಡಿಕೊಳ್ಳಲು ಒಬ್ಬರು ಬೇಕೇ ಬೇಕು. ಅದು ನಿರಂತರ ಕರ್ತವ್ಯ. ಅದರಲ್ಲಿ ಯಾಮಾರುವಂತಿಲ್ಲ. ನಿತ್ಯದ ಕೆಲಸಗಳನ್ನು ನಿರ್ಲಕ್ಷ್ಯಿಸುವಂತಿಲ್ಲ. ಗೌರಿಯನ್ನು ವಾಕಿಂಗ್ ಕರೆದುಕೊಂಡು ಹೋಗದಿರಲು ನೆಪಗಳನ್ನು ಹುಡುಕುವಂತಿಲ್ಲ. ಅವರಿಗೆ ಫಿಜಿಯೋಥೆರಪಿ ಮಾಡಿಸುವುದರಲ್ಲಿ ಲೋಪ ಮಾಡುವಂತಿಲ್ಲ. ನಾವು ಬೇಕಾದರೆ ಊಟ ಬಿಡಬಹುದು, ಟಿವಿ ನೋಡದಿರಬಹುದು. ಹರಟೆ ಕೊಚ್ಚದಿರಬಹುದು. ಅನಗತ್ಯ ಮೊಬೈಲ್ ಕರೆಗಳನ್ನು ಮಾಡದಿರಬಹುದು. ಆದರೆ, ಗೌರಿಯ ಕೆಲಸಗಳನ್ನು ನಿರ್ಲಕ್ಷ್ಯಿಸುವಂತಿಲ್ಲ.

ಹೀಗಾಗಿ, ನಾವು ಕಾಯಿಲೆ ಬೀಳಲಾರೆವು. ನಮಗೆ ಅದು ತೀರಾ ದುಬಾರಿ ಸಂಗತಿ. ನಾನು ಕಾಯಿಲೆ ಬಿದ್ದರೆ ಹೇಗೋ ನಿಭಾಯಿಸಬಹುದು. ಆದರೆ, ರೇಖಾ ಮಲಗಿಕೊಂಡರೆ ಮುಗೀತು. ಕಚೇರಿಗೆ ರಜೆ ಹಾಕುವುದು ಅನಿವಾರ್ಯ. ಪೇಪರ್ ಕೂಡಾ ನೋಡಲಾಗುವುದಿಲ್ಲ. ಎಷ್ಟೋ ಸಾರಿ ಮೊಬೈಲ್ ಬಡಿದುಕೊಳ್ಳುತ್ತಿದ್ದರೂ ಮಾತನಾಡುವುದಿರಲಿ, ಅದರ ಮುಖ ನೋಡಲೂ ಆಗುವುದಿಲ್ಲ. ಮಕ್ಕಳ ಜೊತೆಗೆ ಕಾಯಿಲೆ ಬಿದ್ದ ಹೆಂಡತಿಯನ್ನೂ ನೋಡಿಕೊಳ್ಳಬೇಕು. ಒಂದು ದಿನ ತಳ್ಳಬಹುದು. ಎರಡನೇ ದಿನ ಹೇಗೋ ನಿಭಾಯಿಸಬಹುದು. ಅದಕ್ಕಿಂತ ಹೆಚ್ಚಿಗೆ ಆಕೆ ಮಲಗಿದರೆ, ಊರಿನಿಂದ ಯಾರಾದರೂ ಒಬ್ಬರನ್ನು ಕರೆಸುವುದು ಅನಿವಾರ್ಯವಾಗುತ್ತದೆ.

ಅವರಾದರೂ ಎಷ್ಟು ಸಾರಿ ಬಂದಾರು? ಊರಿನಲ್ಲಿ ಅವರಿಗೂ ತಮ್ಮದೇ ಆದ ತಾಪತ್ರಯಗಳಿರುತ್ತವೆ. ಕಾಯಿಲೆ ಮಲಗಿದವಳ ಆರೈಕೆಗೆಂದು ಅಷ್ಟು ದೂರದಿಂದ ಹೇಗೆ ಬಂದಾರು? ನಮ್ಮದು ನಿತ್ಯದ ಗೋಳು. ಒಂದು ಸಾರಿ ಬರಬಹುದು, ಇನ್ನೊಂದು ಸಾರಿ ಬರಬಹುದು. ಅದಕ್ಕಿಂತ ಹೆಚ್ಚು ಬರಲು ಅವರಿಗೂ ಕಷ್ಟ. ಅದು ಗೊತ್ತಿದ್ದೂ ಅವರನ್ನು ಬರ ಹೇಳುವುದು ನಮಗೂ ಕಷ್ಟ.

ಹೀಗಾಗಿ, ನಾವು ಕಾಯಿಲೆ ಬೀಳದಂತೆ ನೋಡಿಕೊಳ್ಳುವುದನ್ನು ಕಲಿತಿದ್ದೇವೆ. ಮಕ್ಕಳಿಗೆ ಫಿಜಿಯೋಥೆರಪಿ ಮಾಡಿಸುವಾಗ ನಮ್ಮ ವ್ಯಾಯಾಮವೂ ಆಗುತ್ತದೆ. ಅವರಿಗೆ ವಾಕಿಂಗ್ ಮಾಡಿಸುತ್ತ ನಾವೂ ವಾಕ್ ಮಾಡಿ ಗಟ್ಟಿಯಾಗುತ್ತೇವೆ. ಅವರಿಗೆ ಕೊಡುವ ಉತ್ತಮ ಗುಣಮಟ್ಟದ ಆಹಾರ ಸೇವಿಸುತ್ತ ನಾವೂ ಉತ್ತಮವಾಗಿದ್ದೇವೆ. ಮಕ್ಕಳಿಗೆ ವರ್ಜ್ಯವಾದ ಬಹುತೇಕ ತಿನಿಸುಗಳು ನಮಗೂ ವರ್ಜ್ಯವೇ.

ಇದನ್ನು ನಾನು ತ್ಯಾಗ ಎಂದು ಕರೆಯುವುದಿಲ್ಲ. ಇದು ಒಂಥರಾ ರೂಢಿ. ಮೊದಮೊದಲು ಕಷ್ಟವಾಯಿತಾದರೂ, ಕ್ರಮೇಣ ನಾವು ಅದಕ್ಕೆ ಒಗ್ಗಿಕೊಂಡಿದ್ದೇವೆ. ನಾವು ಬೆಳೆದಷ್ಟೂ, ನಮ್ಮ ಮಕ್ಕಳು ಬೆಳೆಯುತ್ತಾರೆ ಎಂಬುದನ್ನು ಕಂಡುಕೊಂಡಿದ್ದೇವೆ. ನಾವು ಹಸನ್ಮುಖಿಯಾದಷ್ಟೂ ನಮ್ಮ ಮಕ್ಕಳು ಹಸನ್ಮುಖಿಗಳಾಗುತ್ತಾರೆ, ನಾವು ಬೆಳೆದಷ್ಟೂ ನಮ್ಮ ಮಕ್ಕಳೂ ಬೆಳೆಯುತ್ತವೆ ಎಂಬುದನ್ನು ಕಂಡುಕೊಂಡಿದ್ದೇವೆ.

ಹೀಗಾಗಿ, ನಾವು ಆರೋಗ್ಯವಾಗಿರಲು ಯತ್ನಿಸುತ್ತೇವೆ. ಹಸನ್ಮುಖಿಗಳಾಗಲು ಪ್ರಯತ್ನಿಸುತ್ತೇವೆ. ಉತ್ತಮ ಅಭ್ಯಾಸಗಳನ್ನು ರೂಢಿಸಿಕೊಂಡಿದ್ದೇವೆ. ಈ ಅನಿವಾರ್ಯತೆ, ಈ ರೂಢಿ ನಮಗೆ ಬದುಕಿನ ಹಲವಾರು ಉತ್ತಮಾಂಶಗಳನ್ನು ನೀಡಿದೆ. ನಮ್ಮನ್ನು ನಿತ್ಯ ಪ್ರಬುದ್ಧರನ್ನಾಗಿಸುತ್ತಿದೆ. ಮಾಗಿಸುತ್ತಿದೆ. ಬೆಳೆಸುತ್ತಿದೆ. ಹೊಸ ಹೊಸ ಅನುಭವಗಳಿಗೆ ಒಡ್ಡುತ್ತಿದೆ.

ಇಂಥದೊಂದು ಮನಃಸ್ಥಿತಿಯನ್ನು ನಮಗೆ ನೀಡಿದ್ದಕ್ಕಾಗಿ, ಬದುಕೇ ನಿನಗೊಂದು ಥ್ಯಾಂಕ್ಸ್.

- ಚಾಮರಾಜ ಸವಡಿ

ವಿವಾಹಿತೆಯ ಮೇಲೆ ಅತ್ಯಾಚಾರ, ನಮ್ಮ ಪ್ರತಿನಿಧಿಯಿಂದ

4 Oct 2008

2 ಪ್ರತಿಕ್ರಿಯೆ

ಪತ್ರಿಕೆ ಓದುವುದನ್ನು ಕೇಳಿದ್ದೀರಾ?

ಗೊಂದಲ ಬೇಡ, ನಾನು ಸರಿಯಾಗಿಯೇ ಕೇಳುತ್ತಿದ್ದೇನೆ. ನಾವೆಲ್ಲ ಪತ್ರಿಕೆ ಓದುತ್ತೇವೆ. ಬಹುತೇಕ, ಮನಸ್ಸಿನೊಳಗೇ ಓದುತ್ತೇವೆ. ಆದರೆ, ಹಳ್ಳಿಗಳಲ್ಲಿ ಪತ್ರಿಕೆಯನ್ನು ಗಟ್ಟಿಯಾಗಿ ಓದುವುದನ್ನು ಕೇಳಿದ್ದೀರಾ?

ಒಮ್ಮೆ ಕೇಳಬೇಕು ನೀವು. ಬಲೇ ತಮಾಷೆಯಾಗಿರುತ್ತದೆ. ಹೆಡ್ಡಿಂಗ್‌ನಿಂದ ಹಿಡಿದು, ಕೊನೆಗೆ ಅಚ್ಚಾಗಿರುವ ಏಜೆನ್ಸಿ ಹೆಸರುಗಳಿಂದ ಅಥವಾ ಬೈಲೈನ್‌ಗಳಿಂದ ಹಿಡಿದು ಪ್ರತಿಯೊಂದನ್ನೂ ಗಟ್ಟಿಯಾಗಿ ಓದುತ್ತಾರೆ ಕೆಲವರು. ಅವರು ಓದುವುದನ್ನು ಸುತ್ತಮುತ್ತ ಹತ್ತಾರು ಜನ ಗಮನವಿಟ್ಟು ಕೇಳುತ್ತಿರುತ್ತಾರೆ. ಅಲ್ಲಿ ಚರ್ಚೆಗಳು ನಡೆಯುತ್ತವೆ. ವಾದಗಳಾಗುತ್ತವೆ. ವಿವಾದಗಳೂ ಹುಟ್ಟಿಕೊಳ್ಳುತ್ತವೆ. ಸುದ್ದಿಯ ಪರ ಮತ್ತು ವಿರೋಧಿ ಗುಂಪುಗಳು ಸೃಷ್ಟಿಯಾಗಿ ಸಣ್ಣ ಜಗಳಗಳೂ ನಡೆಯುವುದುಂಟು. ಅದಕ್ಕೇ ಕೇಳಿದ್ದು, ಪತ್ರಿಕೆ ಓದುವುದನ್ನು ಕೇಳಿದ್ದೀರಾ ಎಂದು.

ಒಂದೆರಡು ತಮಾಷೆ ಪ್ರಸಂಗಗಳು ಇಲ್ಲಿ ನೆನಪಾಗುತ್ತವೆ.

ನಮ್ಮ ಕಡೆ ಸಂಯುಕ್ತ ಕರ್ನಾಟಕ ಏಕಮೇವಾದ್ವಿತೀಯ ಪತ್ರಿಕೆಯಾಗಿದ್ದ ಕಾಲವದು. ನಮ್ಮೂರಿಗೆ ಬರುತ್ತಿದ್ದ ಪತ್ರಿಕೆಗಳ ಪೈಕಿ ಸಂ.ಕ.ದ್ದೇ ಸಿಂಹಪಾಲು. ಅದು ಬೆಳಿಗ್ಗೆ ಹತ್ತಕ್ಕೆ ಬಂದರೆ, ಪ್ರಜಾವಾಣಿ ಮಧ್ಯಾಹ್ನ ಮೂರು ಗಂಟೆಗೆ ಬರುತ್ತಿತ್ತು. ಕನ್ನಡಪ್ರಭ ಬಂದರೆ ಬಂತು ಇಲ್ಲವೆಂದರೆ ಇಲ್ಲ. ಹೀಗಾಗಿ, ಸಂ.ಕ. ಬರುವುದನ್ನೇ ಕಾಯುತ್ತ ಹೋಟೆಲ್ ಪಕ್ಕದ ಬಸ್‌ಸ್ಟ್ಯಾಂಡ್‌ನಲ್ಲಿ ಜನ ಕೂತಿರುತ್ತಿದ್ದರು. ಪತ್ರಿಕೆ ಬರುವುದೊಂದೇ ತಡ, ಹೋಟೆಲ್ ಕಾಪಿ ಹಾಕಿದ ಹುಡುಗ, ಊರೊಳಗೆ ಪತ್ರಿಕೆ ಹಂಚಲು ಹೋಗುತ್ತಿದ್ದ. ಇದ್ದ ಒಂದು ಪತ್ರಿಕೆ ಅಷ್ಟೂ ಪುಟಗಳನ್ನು ಹಂಚಿಕೊಂಡು ಜನ ಓದಲು ಗುಂಪುಗುಂಪಾಗಿ ಕೂಡುತ್ತಿದ್ದರು. ಅವರ ಪೈಕಿ ಬಹುತೇಕರು ಅನಕ್ಷರಸ್ಥರು ಎಂಬುದನ್ನು ಬಿಡಿಸಿ ಹೇಳಬೇಕಿಲ್ಲ.

ಪತ್ರಿಕೆಗಳ ಸುದ್ದಿಗಳೂ ಬಲೇ ತಮಾಷೆಯಾಗಿರುತ್ತಿದ್ದವು. ಅಪರಾಧ ಸುದ್ದಿಗಳಿಗೆ ಎಲ್ಲಿಲ್ಲದ ರೋಚಕತೆ. ಪುಟಗಳು ಹಂಚಿಹೋಗಿರುತ್ತಿದ್ದುದರಿಂದ, ಮುಖ್ಯ ಸುದ್ದಿ ಯಾವುದು ಎಂಬುದು ನಗಣ್ಯವಾಗುತ್ತಿತ್ತು. ಸಿಕ್ಕ ಪುಟದಲ್ಲಿನ ಸುದ್ದಿಗಳನ್ನೇ ಒಬ್ಬ ಜೋರಾಗಿ ಓದುತ್ತ ಹೋಗುತ್ತಿದ್ದ. ಪ್ರತಿಯೊಂದು ಪ್ಯಾರಾಕ್ಕೂ ಆತ ನಿಲ್ಲಲೇಬೇಕು. ಏಕೆಂದರೆ, ಸುದ್ದಿ ಕೇಳುತ್ತಿದ್ದವರ ಕಾಮೆಂಟ್‌ಗಳಿಗೆ ಅವಕಾಶ ಬೇಕಲ್ಲ! ಆಗ (ಈಗ ಕೂಡಾ) ಸಂಯುಕ್ತ ಕರ್ನಾಟಕದ ನ್ಯೂಸ್ ಪ್ರಿಂಟ್ ಗುಣಮಟ್ಟ ಅಷ್ಟಕ್ಕಷ್ಟೇ. ಎರಡು ಕೈಗಳು ಬದಲಾಯಿಸುವುದರಲ್ಲಿ ಪತ್ರಿಕೆಯ ಅಕ್ಷರಗಳು ಮಸುಕಾಗಿ, ಹಾಳೆ ಮುದ್ದೆಯಾಗಿ ಓದುವುದು ಕಷ್ಟವಾಗಿಬಿಡುತ್ತಿತ್ತು. ಆಗ ಬಣ್ಣದ ಮುದ್ರಣ ಬಂದಿದ್ದಿಲ್ಲ. ಅಥವಾ ಸಂ.ಕ. ಅದನ್ನು ಅಳವಡಿಸಿಕೊಂಡಿರಲಿಲ್ಲ. ಚಿತ್ರಗಳೋ ಚುಕ್ಕೆಚುಕ್ಕೆಗಳ ಗುಪ್ಪೆಗಳು. ಆದರೂ, ಅದು ತರುತ್ತಿದ್ದ ಸುದ್ದಿಗಳು ರೋಚಕವಾಗಿರುತ್ತಿದ್ದವು.

ಪತ್ರಿಕೆ ಬಿಡಿಸಿಕೊಂಡು ಮೇಲಿನಿಂದ ಓದಲು ಶುರು ಮಾಡಿದರೆ ಜನ ನಿಶ್ಯಬ್ದವಾಗಿ ಕೇಳುತ್ತಿದ್ದರು. ಅದೇನೋ ಗೊತ್ತಿಲ್ಲ, ಅವತ್ತಿಗೂ ಇವತ್ತಿಗೂ ಸಂ.ಕ.ದ ಬಹುತೇಕ ಸುದ್ದಿಗಳು ’ನಮ್ಮ ಪ್ರತಿನಿಧಿಯಿಂದ’ ಎಂಬ ಒಕ್ಕಣೆಯಿಂದ ಶುರುವಾಗುತ್ತವೆ. ಹೆಡ್ಡಿಂಗ್ ಮುಗಿದ ಕೂಡಲೇ ಕಂಸದಲ್ಲಿ ’ನಮ್ಮ ಪ್ರತಿನಿಧಿಯಿಂದ’ ಎಂಬುದು ಶುರುವಾಗಬೇಕು. ಹಾಗಂದರೇನು ಎಂಬುದು ಆಗ ಗೊತ್ತಿದ್ದಿಲ್ಲ. ಅದರ ನಿಜಾರ್ಥ ತಿಳಿದಿದ್ದೇ ನಾನು ಪತ್ರಿಕೋದ್ಯಮಕ್ಕೆ ಬಂದಾಗ. ತಮ್ಮ ವರದಿಗಾರ ನೀಡಿದ ಸುದ್ದಿಗಳನ್ನೇ ಸಂ.ಕ. ನಮ್ಮ ಪ್ರತಿನಿಧಿಯಿಂದ ಎಂದು ಬಲೇ ಹೆಮ್ಮೆಯಿಂದ ಅಚ್ಚು ಹಾಕಿಕೊಳ್ಳುತ್ತಿತ್ತು. ಅದು ಈಗಲೂ ಇದೆ.

ಅವತ್ತು ಬಂದ ಸುದ್ದಿ ಯಾವುದೋ ಹಳೆಯ ಕ್ರೈಂ. ವಿವಾಹಿತೆಯ ಮೇಲೆ ಅತ್ಯಾಚಾರ ಎಸಗಿದ್ದ ಸುದ್ದಿಯದು. ಕಟ್ಟೆಯ ಮೇಲೆ ಕೂತವ ರಾಗವಾಗಿ ಓದಲು ಶುರು ಮಾಡಿದ: ವಿವಾಹಿತೆಯ ಮೇಲೆ ಅತ್ಯಾಚಾರ ನಮ್ಮ ಪ್ರತಿನಿಧಿಯಿಂದ...

ಅತ್ಯಾಚಾರ ಎಲ್ಲಾಯಿತು, ಹೇಗಾಯಿತು, ಪೊಲೀಸರು ಏನು ಹೇಳುತ್ತಾರೆ, ಇತ್ಯಾದಿ ವಿವರಗಳೆಲ್ಲ ಮುಗಿದ ನಂತರ, ಸಮಾಜ ಕೆಟ್ಟು ಹೋಗುತ್ತಿದೆ, ಕಾನೂನು ಸುವ್ಯವಸ್ಥೆ ಕುಸಿದು ಬಿದ್ದಿದೆ ಎಂಬ ಕಳವಳದೊಂದಿಗೆ ವರದಿ ಮುಕ್ತಾಯವಾಗುತ್ತಿತ್ತು. ಮುಂದಿನ ಸುದ್ದಿಗೆ ಹೋಗುವ ಮುನ್ನ, ಕಟ್ಟೆಯ ಮೇಲೆ ಕೂತವರಿಂದ ಕಾಮೆಂಟ್‌ಗಳು, ಚರ್ಚೆ, ವಾಗ್ವಾದ.

ತಾಕತ್ತಿದ್ದರೆ ಸ್ಪರ್ಧಿಸಿ, ಸಚಿವರಿಗೆ ಪಾಟೀಲ್ ಸವಾಲ್ ನಮ್ಮ ಪ್ರತಿನಿಧಿಯಿಂದ ಗದಗ ಜೂನ್ ೨೯ ಒಂದು ವೇಳೆ ...ರಿಗೆ ನಿಜವಾದ ತಾಕತ್ತಿದ್ದರೆ ಗದಗ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದು ತೋರಿಸಲಿ ಎಂದು ಹುಲಕೋಟಿ ಹುಲಿ ಕೆ.ಎಚ್. ಪಾಟೀಲ್ ಕಾಂಗ್ರೆಸ್ ಸಚಿವರಿಗೆ ಸವಾಲು ಹಾಕಿದ್ದಾರೆ. ಖಾಸಗಿ ಸಮಾರಂಭಕ್ಕೆ ಇಲ್ಲಿಗೆ ಆಗಮಿಸಿದ್ದ ಅವರು ಈ ಸವಾಲು ಒಡ್ಡಿದ್ದಾರೆ... - ಹೀಗೆ ಸುದ್ದಿಗಳು ಪುಂಖಾನುಪುಂಖವಾಗಿ ಓದಲ್ಪಡುತ್ತಿದ್ದವು. ಅಲ್ಲಿ ಕೂತ ಯಾರಿಗೂ ಅರ್ಜೆಂಟ್ ಕೆಲಸಗಳಿರುತ್ತಿದ್ದಿಲ್ಲ. ಮಧ್ಯಾಹ್ನದವರೆಗೆ ಸಮಯ ಕಳೆಯುತ್ತಿದ್ದುದೇ ಹೀಗೆ.

ಟಿವಿ ಎಂಬ ವಸ್ತುವಿನ ಅಸ್ತಿತ್ವವೇ ಇಲ್ಲದ, ಟೇಪ್ ರೆಕಾರ್ಡರ್‍ಗಳಿನ್ನೂ ಕಾಲಿಟ್ಟಿರದ ದಿನಗಳಲ್ಲಿ ಪತ್ರಿಕೆಗಳು ಹಾಗೂ ಅವುಗಳಲ್ಲಿ ಬರುತ್ತಿದ್ದ ಚಿತ್ರ-ವಿಚಿತ್ರ ಸುದ್ದಿಗಳು ಹಳ್ಳಿಗಳನ್ನು ಆವರಿಸಿಕೊಂಡಿದ್ದವು. ನನಗೆ ಓದುವ ಆಸಕ್ತಿ ಹುಟ್ಟಿದ್ದೇ ಇವುಗಳಿಂದ. ನಮ್ಮ ಹಳ್ಳಿಯ ಆಚೆ ಬೇರೆಯದೇ ಆದ ಜಗತ್ತಿದೆ ಎಂಬ ಸತ್ಯವನ್ನು ನಿತ್ಯವೂ ಬಿತ್ತರಿಸುತ್ತ, ಆ ಜಗತ್ತನ್ನೊಮ್ಮೆ ಕಾಣಬೇಕೆಂಬ ಹುಚ್ಚನ್ನು ಬಿತ್ತಿದ್ದು ಅವು.

ಇದೆಲ್ಲಾ ಏಕೆ ನೆನಪಾಯಿತೆಂದರೆ, ಇವತ್ತು ನಸುಕಿನಲ್ಲಿ ಹೋದ ಕರೆಂಟ್ ಬೇಗ ಬರಲೇ ಇಲ್ಲ. ಕಂಪ್ಯೂಟರ್ ಗೌರಮ್ಮನಂತೆ ಕೂತಿತ್ತು. ಟಿವಿ ಸತ್ತುಹೋಗಿತ್ತು. ರೇಡಿಯೋದಲ್ಲಿ ಸುದ್ದಿ ಬರುವ ಸಮಯ ಪತ್ತೆ ಹಚ್ಚುವುದೇ ಕಷ್ಟ. ಬಂದರೂ ಅವು ಸರ್ಕಾರಿ ಸುದ್ದಿಗಳು. ಏನು ಮಾಡುವುದು? ಪತ್ರಿಕೆ ಹಾಕುವ ಹುಡುಗನ ದಾರಿ ಕಾಯುತ್ತ ನಿಂತಾಗ ಹಳೆಯ ದಿನಗಳು ಕಣ್ಮುಂದೆ ಸುಳಿದವು. ಹಳ್ಳಿ, ಹೋಟಲ್, ಬಸ್‌ಸ್ಟ್ಯಾಂಡ್ ಹೆಸರಿನ ಸಣ್ಣ ಕಟ್ಟೆ, ಅಲ್ಲಿನ ಜನ, ಅವರ ಸುದ್ದಿ ದಾಹ ಎಲ್ಲಾ ನೆನಪಾಗುತ್ತ ಹೋದವು.

- ಚಾಮರಾಜ ಸವಡಿ

ಜಾತ್ಯತೀತರೆಂಬ ಕೋಮುವಾದಿಗಳು (ಭಾಗ-೨)

20 Aug 2008

0 ಪ್ರತಿಕ್ರಿಯೆ
ಭಾಗ-೨

(ಈ ಲೇಖನ ಡಿ.ಎಸ್‌. ನಾಗಭೂಷಣ ಅವರ ’ಕಾಶ್ಮೀರ ಬೆಂಕಿ: ಎಚ್ಚರವಿರಲಿ’ ಎಂಬ ಲೇಖನಕ್ಕೆ ನೀಡಿದ ಪ್ರತಿಕ್ರಿಯಾ ಲೇಖನದ ಎರಡನೇ ಭಾಗ. ಮೂಲ ಲೇಖನವನ್ನು http://sampada.net/article/10890 ದಲ್ಲಿ ನೋಡಬಹುದು. ನನ್ನ ಲೇಖನದ ಮೊದಲ ಭಾಗವನ್ನು http://sampada.net/article/10916 ನಲ್ಲಿ ನೋಡಬಹುದು)

ಅಮರನಾಥ ವಿವಾದದ ಬಗ್ಗೆ ಪ್ರಸ್ತಾಪಿಸುತ್ತ ನಾಗಭೂಷಣ ಅವರು ಹೀಗೆ ಬರೆಯುತ್ತಾರೆ: ಅಮರನಾಥದ ಗುಹಾಂತರ್ಗತ ಹಿಮಲಿಂಗವನ್ನು ಮೊದಲು ನೋಡಿ ಜಗತ್ತಿಗೆ ಪರಿಚಯಿಸಿದವ ಒಬ್ಬ ಮುಸ್ಲಿಂ ದನಗಾಹಿ. ನಂತರ, ಅಮರನಾಥ ಯಾತ್ರೆ ಪ್ರಾರಂಭವಾದಾಗ, ಯಾತ್ರಿಕರ ಕಷ್ಟಸುಖ ನೋಡಿಕೊಂಡಿದ್ದೂ ಮುಸ್ಲಿಮರೇ. ಹದಿನೈದು ವರ್ಷಗಳ ಹಿಂದೆ ನೈಸರ್ಗಿಕ ಪ್ರಕೋಪಕ್ಕೆ ಯಾತ್ರಿಗಳು ಸಿಲುಕಿದಾಗ ಅವರ ನೆರವಿಗೆ ಧಾವಿಸಿದ್ದೂ ಸ್ಥಳೀಯ ಮುಸ್ಲಿಮರೇ. ಹಾಗೆ ನೋಡಿದರೆ, ಅಮರನಾಥ ಯಾತ್ರೆಯನ್ನು ನಿರ್ವಹಿಸುವುದು ಕಾಶ್ಮೀರಿ ಮುಸ್ಲಿಮರ ಒಂದು ವಾರ್ಷಿಕ ಸಂಪ್ರದಾಯವೇ ಆಗಿಹೋಗಿದೆ. ಆದರೆ, ನೈಸರ್ಗಿಕ ಪ್ರಕೋಪದ ನಂತರ, ಜಮ್ಮು ಕಾಶ್ಮೀರದ ಆಗಿನ ಮುಖ್ಯಮಂತ್ರಿ ಫಾರೂಕ್‌ ಅಬ್ದುಲ್ಲಾ, ಯಾತ್ರೆಯ ವ್ಯವಸ್ಥಿತ ನಿರ್ವಹಣೆಗಾಗಿ ಅಮರನಾಥ ದೇವಸ್ಥಾನ ಮಂಡಳಿ ರಚಿಸಿ, ಯಾತ್ರೆ ಕಾಲದ ತಾತ್ಕಾಲಿಕ ಬಳಕೆಗಾಗಿ ೪೦ ಹೆಕ್ಟೇರ್‌ ಅರಣ್ಯ ಭೂಮಿ ಒದಗಿಸಿತು...”

ಈ ಮಾಹಿತಿ ನೀಡುವಾಗ ನಾಗಭೂಷಣ ಅವರು ಸಮಚಿತ್ತರಾಗೇ ಇದ್ದಾರೆ. ನಂತರ ಅವರಲ್ಲಿ ಜಾತ್ಯತೀತ ಭೂತ ಆವರಿಸಿಕೊಂಡಿತೆಂದು ಕಾಣುತ್ತದೆ. ಏಕೆಂದರೆ, ಇದ್ದಕ್ಕಿದ್ದಂತೆ ಅವರ ಆಕ್ರೋಶ ಜಮ್ಮು ಕಾಶ್ಮೀರದ ಹಿಂದಿನ ರಾಜ್ಯಪಾಲ ಲೆಫ್ಟಿನೆಂಟ್‌ ಜನರಲ್‌ ಎಸ್‌.ಕೆ. ಸಿನ್ಹಾ ಮೇಲೆ ತಿರುಗುತ್ತದೆ. ಅದಕ್ಕೆ ಕಾರಣ, ಅಧಿಕಾರದ ಕೊನೆಯ ದಿನಗಳಲ್ಲಿ ಅವರು ದೇವಸ್ಥಾನ ಆಡಳಿತ ಮಂಡಳಿ ಪುನರ್‌ರಚಿಸಿ ರಾಜ್ಯಪಾಲರು ಹಿಂದು ಆಗಿದ್ದರೆ, ಮಂಡಳಿಯ ಅಧ್ಯಕ್ಷತೆಯನ್ನು ಅವರೇ ವಹಿಸಬಹುದೆಂದು ’ಕೋಮು ಅಂಶ’ವನ್ನು ಸೇರಿಸಿದರಂತೆ!

ಅಲ್ಲ ಡಿಎಸ್‌ಎನ್‌ ಅವರೇ, ಹಿಂದುಗಳಿಗೆ ಸಂಬಂಧಿಸಿದ ಮಂಡಳಿಗೆ ಹಿಂದು ವ್ಯಕ್ತಿಯೊಬ್ಬ ಅಧ್ಯಕ್ಷ ಆಗುವುದರಲ್ಲಿ ತಪ್ಪೇನಿದೆ? ಅಷ್ಟಕ್ಕೂ ಜಗತ್ತಿನ ಎಲ್ಲ ಕಡೆ ನಡೆಯುತ್ತಿರುವುದು ಇದೇ ಅಲ್ಲವೆ? ಹಜ್‌ ಯಾತ್ರಾ ಕಮಿಟಿಗೆ ಎಲ್‌.ಕೆ. ಆಡ್ವಾಣಿ ಅಧ್ಯಕ್ಷರಾಗಲು ಬರುತ್ತದೆಯೆ? ಒಂದು ವೇಳೆ ಹಾಗೆ ಬರುವುದಾದರೂ, ಅದಕ್ಕೆ ಮುಸ್ಲಿಮರು ಒಪ್ಪಿಕೊಂಡಾರೆ? ಸಂಬಂಧಗಳು ಸಹಜವಾಗಿರುವಾಗ ಇಂತಹ ನಿಯಮಗಳ ಅವಶ್ಯಕತೆ ಇರುವುದಿಲ್ಲ. ಆದರೆ, ಕಾಶ್ಮೀರ ವಿವಾದ, ಅಮರನಾಥ ಯಾತ್ರಾ ಮಂಡಳಿ ರಚನೆ ಹಾಗೂ ಪುನರ್‌ರಚನೆಗಿಂತ ಸಾಕಷ್ಟು ಮುಂಚಿನದು ಎಂಬುದು ತಮ್ಮ ಗಮನದಲ್ಲಿಲ್ಲವೆ? ಅಷ್ಟಕ್ಕೂ ಲೆ.ಜ. ಸಿನ್ಹಾ ಸೇರಿಸಿರುವ ಅಂಶ, ’ಒಂದು ವೇಳೆ ರಾಜ್ಯಪಾಲ ಹಿಂದು ಆಗಿದ್ದರೆ...’ ಎಂದು ಮಾತ್ರವೇ ಹೊರತು, ಎಲ್ಲಾ ಕಾಲಕ್ಕೂ ಹಿಂದುಗಳೇ ಮಂಡಳಿಯ ಅಧ್ಯಕ್ಷರಾಗಿರಬೇಕು ಎಂದಲ್ಲವಲ್ಲ?

ಡಿಎಸ್‌ಎನ್‌ ಪ್ರಕಾರ ಲೆ.ಜ. ಸಿನ್ಹಾ ಇನ್ನೂ ಒಂದು ’ಕೋಮು’ ಅಂಶವನ್ನು ಸೇರಿಸಿದರು. ಅದರ ಪ್ರಕಾರ, ದೇವಸ್ಥಾನದ ಬಳಕೆಗೆಂದು ತಾತ್ಕಾಲಿಕವಾಗಿ ನೀಡಿದ್ದ ೪೦ ಹೆಕ್ಟೇರ್‌ ಅರಣ್ಯ ಭೂಮಿಯನ್ನು ಶಾಶ್ವತವಾಗಿ ಮಂಡಳಿಗೆ ವರ್ಗಾಯಿಸಲು ಶಿಫಾರಸು ಮಾಡಿದ್ದು.

ಈ ಅಂಶದಲ್ಲಿ ನಾಗಭೂಷಣ ಅವರಿಗೆ ಕಂಡ ಮಹಾಪರಾಧವೇನೋ! ಎಲ್ಲಿಯವರೆಗೆ ಅಮರನಾಥ ಲಿಂಗ ಇರುತ್ತದೋ, ಅಲ್ಲಿಯವರೆಗೆ ಹಿಂದುಗಳು ಅಲ್ಲಿಗೆ ಯಾತ್ರೆ ಹೋಗುವವರೇ. ಹೀಗಿರುವಾಗ ದೇವಸ್ಥಾನ ಭೂಮಿಯನ್ನು ಮಂಡಳಿಗೆ ವರ್ಗಾಯಿಸಿದರೆ ಅದರಲ್ಲಿ ತಪ್ಪೇನಿದೆ? ಈಗ ಕಾಶ್ಮೀರದ ತುಂಬ ಭಾರತೀಯ ಸೇನಾ ನೆಲೆಗಳಿಲ್ಲವೆ? ಅವುಗಳ ಸ್ಥಾಪನೆಗೆ ಭೂಮಿ ಸಿಕ್ಕಿಲ್ಲವೆ? ಪ್ರವಾಸಿ ತಾಣಗಳಿಗೆ ಭೂಮಿ ನೀಡಿಲ್ಲವೆ? ರೈಲು, ವಿದ್ಯುತ್‌, ಬಸ್‌ ನಿಲ್ದಾಣ, ಆಸ್ಪತ್ರೆಗಳು, ಮಸೀದಿಗಳಿಗೆ ಭೂಮಿ ನೀಡಿಲ್ಲವೆ? ಇವಕ್ಕೆ ಏಳದ ಆಕ್ಷೇಪಣೆ ಅದೆಲ್ಲೋ ಎತ್ತರದ ಪರ್ವತದ ತಪ್ಪಲಿನಲ್ಲಿ ಹುದುಗಿರುವ ಪ್ರದೇಶದ ಸುತ್ತಮುತ್ತಲಿನ ಕಾಡುಭೂಮಿ ನೀಡಿದಾಗ ಏಕೆ ಉದ್ಭವವಾಗುತ್ತದೆ?

ಏಕೆಂದರೆ, ಇತರ ಧರ್ಮಗಳು ಬೆಳೆಯುವುದು ಮುಸ್ಲಿಮರಿಗೆ ಇಷ್ಟವಿಲ್ಲ. ಹೀಗಾಗಿ ೧೯೪೮ರಲ್ಲಿ ಮಾಡಿಕೊಂಡ ಒಪ್ಪಂದಕ್ಕೆ ಅವರು ಅಷ್ಟು ಬಿಗಿಯಾಗಿ ಅಂಟಿಕೊಂಡಿರುವುದು. ನಮ್ಮ ಸಂವಿಧಾನಕ್ಕೇ ಆ ಪರಿಯ ತಿದ್ದುಪಡಿಗಳಾಗಿವೆ. ಹೀಗಿರುವಾಗ, ಧಾರ್ಮಿಕ ಯಾತ್ರೆಗೆ ಸಂಬಂಧಿಸಿದಂತೆ ಒಂದು ಸಣ್ಣ ತಿದ್ದುಪಡಿಯಾದರೆ ಅದರಲ್ಲಿ ತಪ್ಪೇನಿದೆ?

೧೯೪೮ರ ಒಪ್ಪಂದದ ಅನಿವಾರ್ಯತೆ ಏನಿತ್ತು ಎಂಬುದು ’ಬುದ್ಧಿಜೀವಿ’ಯಾಗಿರುವ ನಾಗಭೂಷಣ ಅವರೇ ನಿಮಗೆ ಗೊತ್ತಿಲ್ಲವೆ? ಸ್ವಾತಂತ್ರ ಬಂದ ಅರವತ್ತೊಂದು ವರ್ಷಗಳ ನಂತರವೂ ಕಾಶ್ಮೀರವನ್ನು ಒಂದು ಸ್ವಾಯತ್ತ ಸ್ಥಿತಿಯಲ್ಲಿ ಇರಿಸುವ ಅಪಾಯ ನಿಮಗೆ ತಿಳಿಯುತ್ತಿಲ್ಲವೆ? ಅದೆಂಥ ಕೋಮುವಾದ ನಿಮ್ಮನ್ನು ಆವರಿಸಿರಬಹುದು!

ಅಷ್ಟಕ್ಕೂ ಇಲ್ಲಿ ಪ್ರಸ್ತಾಪವಾಗಿರುವುದು ದೇವಸ್ಥಾನ ಆಡಳಿತ ಮಂಡಳಿಗೆ ಜಮೀನು ನೀಡುವ ವಿಷಯ. ಅದೂ ಕೇವಲ ಶಿಫಾರಸು ಮಾತ್ರ. ಲೆ.ಜ. ಸಿನ್ಹಾ ಸೂಚಿಸಿದ್ದು ೪೦ ಹೆಕ್ಟೇರ್‌ ಅರಣ್ಯ ಭೂಮಿಯ ಹಸ್ತಾಂತರ. ಅದನ್ನು ಹಸ್ತಾಂತರಿಸಲಾಗದು ಎಂದು ಹೇಳಿದ್ದರೆ ಪರವಾಗಿದ್ದಿಲ್ಲ. ಅಥವಾ ಲೀಸ್‌ (ಗುತ್ತಿಗೆ) ನೀಡಿದ್ದರೂ ಸಾಕಿತ್ತು.

ತಮ್ಮ ಗಮನಕ್ಕೆಂದು ೨೦೦೦ನೇ ಇಸ್ವಿಯಲ್ಲಿ ಜಾರಿಗೆ ಬಂದ ’ದಿ ಜಮ್ಮು ಅಂಡ್‌ ಕಾಶ್ಮೀರ್‌ ಶ್ರೀ ಅಮರನಾಥಜಿ ಶ್ರೈನ್‌ ಆಕ್ಟ್‌ ೨೦೦೦’ನಲ್ಲಿರುವ ಕೆಲವು ಅಂಶಗಳನ್ನು ಕೊಡುತ್ತಿದ್ದೇನೆ. ನೆನಪಿರಲಿ, ಈ ಕಾಯಿದೆ ಜಾರಿಗೆ ಬಂದಿದ್ದು ಎಂಟು ವರ್ಷಗಳ ಹಿಂದೆ.

ಅದರ ಪ್ರಕಾರ: There is an Act of the Jammu & Kashmir legislature, called ‘The Jammu and Kashmir Shri Amarnathji Shrine Act, 2000’. This Act which provides for the constitution of the Shrine Board, also defines the duties of the Board. Section 16 of the Act reads as under:
16. Duties of the Board
Subject to the provisions of this Act and of any bye-laws made thereunder, it shall be the duty of the Board :-
(a) to arrange for the proper performance of worship at the Holy Shrine;
(b) to provide facilities for the proper performance of worship by the pilgrims;

(c) To make arrangements for the safe custody of the funds, valuables and jewellery and for the preservation of the Board Fund;
(d) To undertake developmental activities concern the area of the Shrine and its surroundings;
(e) To make provision for the payment of suitable emoluments to the salaried staff;
(f) To make suitable arrangements for the imparting of religious instructions and general education to the pilgrims;
(g) To undertake, for the benefit of worshippers and pilgrims:
(i) the construction of buildings for their accommodation;
(ii) the construction of sanitary works;

(iii) the improvement of means of communication.
(h) To make provision of medical relief for worshippers and pilgrims;
(i) to do all such things as may be incidental and conducive to the efficient management, maintenance and administration of the Holy Shrine and the Board Funds and for the convenience of the pilgrims.

ಇದರಲ್ಲಿ ಪ್ರಸ್ತಾಪಿತಗೊಂಡ ಡಿ, ಎಫ್‌ ಮತ್ತು ಜಿ ಅಂಶಗಳನ್ನು ಪರಿಶೀಲಿಸಿ. ಲಕ್ಷಾಂತರ ಜನರು ಪಾಲ್ಗೊಳ್ಳುವ ಯಾತ್ರೆಯಲ್ಲಿ, ಅದೂ ದುರ್ಗಮ ಪ್ರದೇಶದ ಹಾಗೂ ಭಯೋತ್ಪಾದನೆ ಭೀತಿ ಇರುವ ಪ್ರದೇಶದಲ್ಲಿ ಕನಿಷ್ಟ ಸೌಲಭ್ಯಗಳಾದರೂ ಇರಬೇಕಲ್ಲವೆ? ಅದಕ್ಕೆ ಬೇಕಾದಂತೆ ಭೂಮಿಯನ್ನು ನೀಡುವುದು ಆ ರಾಜ್ಯದ ಅಥವಾ ಒಟ್ಟಾರೆ ಸರ್ಕಾರದ ಕರ್ತವ್ಯ ಅಲ್ಲವೆ? ನಿಯಮದ ಪ್ರಕಾರ, ಇದನ್ನೆಲ್ಲಾ ನೋಡಿಕೊಳ್ಳುವ ಜವಾಬ್ದಾರಿ ಅಮರನಾಥ ಮಂಡಳಿಯದು. ಸರ್ಕಾರ ಮಂಡಳಿಯ ತೀರ್ಮಾನಕ್ಕೆ ಗೌರವ ಕೊಡಬೇಕಾಗುತ್ತದೆ. ಏಕೆಂದರೆ, ಅದು ಕಾನೂನುಬದ್ಧವಾಗಿ ರಚನೆಯಾದ ಮಂಡಳಿ.

ಎಂಟು ವರ್ಷಗಳ ಹಿಂದೆಯೇ ಮಂಡಳಿ ಅಸ್ತಿತ್ವಕ್ಕೆ ಬಂದಿದೆ. ಆಗ ಎತ್ತದ ಆಕ್ಷೇಪಣೆಗಳು ಈಗೇಕೆ ಕಾಣಿಸಿಕೊಂಡವು? ಪ್ರತಿಯೊಂದು ಬೆಳವಣಿಗೆಯನ್ನೂ ಕೋಮುಕಣ್ಣಲ್ಲೇ ನೋಡುವ ಕಾಶ್ಮೀರಿ ಮುಸ್ಲಿಮರು ಆಗೇಕೆ ಸುಮ್ಮನಿದ್ದರು?

ಡಿಎಸ್‌ಎನ್‌ ಅವರೇ, ಭಾರತದಲ್ಲಿ ಧಾರ್ಮಿಕ ಚಟುವಟಿಕೆಗಳನ್ನು ಸರ್ಕಾರ ನೇರವಾಗಿ ನಡೆಸುವುದಿಲ್ಲ. ಅದಕ್ಕಾಗಿ ಸಮಿತಿಗಳು ಹಾಗೂ ಮಂಡಳಿಗಳು ರಚನೆಯಾಗಿರುತ್ತವೆ. ತಂತಮ್ಮ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಸೂಕ್ತ ನಿರ್ಧಾರಗಳನ್ನು ಕೈಗೊಳ್ಳುವ ಕಾನೂನುಬದ್ಧ ಹಕ್ಕು ಅವಕ್ಕಿರುತ್ತದೆ. ಸಂವಿಧಾನದ ಕಲಂ ೨೬ ಮತ್ತು ೨೭ ಕೂಡ ಇದೇ ಅಂಶವನ್ನು ಸ್ಪಷ್ಟಪಡಿಸುತ್ತವೆ.

Article 26ರ ಪ್ರಕಾರ:
Freedom to manage religious affairs:
Subject to public order, morality and health, every religious denomination or any section thereof shall have the right—
(a) to establish and maintain institutions for religious and charitable purposes;
(b) to manage its own affairs in matters of religion;
(c) to own and acquire movable and immovable property; and
(d) to administer such property in accordance with law.

ತನ್ನ ಧಾರ್ಮಿಕ ಚಟುವಟಿಕೆಗಳನ್ನು ನಡೆಸುವ ಹಕ್ಕು ಪ್ರತಿಯೊಂದು ಧರ್ಮಕ್ಕೂ ಇದೆ. ಅದರ ಸಲುವಾಗಿ, ತನ್ನದೇ ಆದ ಧಾರ್ಮಿಕ ಸಂಸ್ಥೆಗಳನ್ನು ಅಥವಾ ದತ್ತಿ ಸಂಸ್ಥೆಗಳನ್ನು ಹುಟ್ಟು ಹಾಕಬಹುದು, ಚರ ಮತ್ತು ಸ್ಥಿರ ಆಸ್ತಿ ಹೊಂದಬಹುದು ಹಾಗೂ ಕಾನೂನುಬದ್ಧವಾಗಿ ಈ ಆಸ್ತಿಗಳ ನಿರ್ವಹಣೆ ಮಾಡಬಹುದು. ಈಗ ಅಮರನಾಥ ಮಂಡಳಿ ಮಾಡುತ್ತಿರುವುದೂ ಇದನ್ನೇ. ಸಂವಿಧಾನಬದ್ಧವಾಗಿಯೇ ಇರುವ ಈ ಚಟುವಟಿಕೆಯಲ್ಲಿ ತಾವು ಹೇಗೆ ಕೋಮುವಾದವನ್ನು ಹೆಕ್ಕಿದಿರೋ!

ಸಂವಿಧಾನದ ಕಲಂ ೨೭ ಕೂಡ ಇದನ್ನೇ ಹೇಳುತ್ತದೆ.
Freedom as to payment of taxes for promotion of any particular religion.
No person shall be compelled to pay any taxes, the proceeds of which are specifically appropriated in payment of expenses for the promotion or maintenance of any particular religious denomination.
All faiths deserve equal respect. And the State should not discriminate between followers of different faiths. This is the meaning of Indian secularism. It enjoins on us to create proper amenities, with necessary infrastructure, at the pilgrimage centres of all communities. There can be no double standards in this matter.

ಆ ಪ್ರಕಾರ, ಧರ್ಮಗಳ ನಡುವೆ ಭೇದ ಎಣಿಸಬಾರದು. ಅದು ಭಾರತೀಯ ಜಾತ್ಯತೀತ ಧೋರಣೆಯ ಮುಖ್ಯ ಆಶಯ. ಹಜ್‌ ಯಾತ್ರೆ ನಡೆಯುತ್ತಿರುವುದೇ ಇಂತಹ ಆಶಯದ ಹಿನ್ನೆಲೆಯಲ್ಲಿ. (ಈಗ ಬಿಡಿ, ಅದಕ್ಕೂ ರಾಜಕೀಯ ಲೇಪ ಬಂದುಬಿಟ್ಟಿದೆ. ಹಜ್‌ ಯಾತ್ರೆ ಸಂಘಟಿಸಲು ತೋರುವಷ್ಟು ಉತ್ಸಾಹ ಹಾಗೂ ಕಾಳಜಿಯನ್ನು ಇತರ ಪ್ರಮುಖ ಧರ್ಮಗಳ ಆಚರಣೆಗಳಿಗೆ ನಮ್ಮ ಸರ್ಕಾರ ತೋರುತ್ತಿಲ್ಲ!) ಅಂಥದೇ ಆಶಯ ಅಮರನಾಥ ಯಾತ್ರೆಯಲ್ಲಿಯೂ ಇರಬೇಕು. ಒಂದು ವೇಳೆ ಇಲ್ಲದಿದ್ದರೆ, ಇರುವಂತೆ ನೋಡಿಕೊಳ್ಳಬೇಕು. ಅಷ್ಟಕ್ಕೂ ಹಿಂದುಗಳು ಹೋಗುತ್ತಿರುವುದು ವಿದೇಶಕ್ಕೇನೂ ಅಲ್ಲವಲ್ಲ? ತಮ್ಮದೇ ದೇಶದ ಒಂದು ಭಾಗಕ್ಕೆ ತಾನೆ? ಅಲ್ಲಿ ಕನಿಷ್ಠ ಸೌಲಭ್ಯಗಳನ್ನು ನೀಡದಿದ್ದರೆ ಹೇಗೆ? ನೀಡಲು ಮುಂದಾದರೆ, ಅದಕ್ಕೂ ಸಲ್ಲದ ಕಾರಣಗಳನ್ನು ಮುಂದೊಡ್ಡಿ ಅಡ್ಡಿಪಡಿಸಿದರೆ ಹೇಗೆ? ಇಂತಹ ಸಣ್ಣತನವನ್ನು ಪ್ರತಿಭಟಿಸಿದರೆ ಅದ್ಹೇಗೆ ತಪ್ಪಾಗುತ್ತದೆ?

ಅಮರನಾಥ ಲಿಂಗ ಇರುವ ಗುಹೆಗೆ ನೈಸರ್ಗಿಕ ಸವಾಲುಗಳನ್ನು ಎದುರಿಸಿಯೇ ಹೋಗಬೇಕು. ಈಗಿರುವ ಸೌಲಭ್ಯಗಳನ್ನು ನೋಡಿದರೆ, ಅತ್ಯಂತ ಶಕ್ತ ಯುವಕ-ಯುವತಿಯರು ಮಾತ್ರ ಯಾತ್ರೆ ಕೈಗೊಳ್ಳಬಹುದು. ಹೀಗಿರುವಾಗ, ಧಾರ್ಮಿಕ ಶ್ರದ್ಧೆಯ ಇತರ ವಯೋಮಾನದ ಜನ ಏನು ಮಾಡಬೇಕು? ಮಂಡಳಿ ರಚನೆಯಾಗಿ ಎಂಟು ವರ್ಷಗಳಾದ ನಂತರವೂ ಕನಿಷ್ಠ ಮೂಲಸೌಕರ್ಯಗಳನ್ನು ಒದಗಿಸದಿದ್ದರೆ ಹೇಗೆ? ನಿಮಗೆ ಇಂತಹ ವಿಷಯಗಳು ಏಕೆ ಹೊಳೆಯುತ್ತಿಲ್ಲ ಡಿ.ಎಸ್‌. ನಾಗಭೂಷಣ ಅವರೇ?

ಕಾಶ್ಮೀರಕ್ಕೆ ಪ್ರವಾಸಿಗಳು ಬರಲು ಎಲ್ಲ ವ್ಯವಸ್ಥೆ ಕಲ್ಪಿಸುತ್ತೀರಿ. ಅದಕ್ಕೇನೂ ವಿರೋಧವಿಲ್ಲ. ಆದರೆ, ಧಾರ್ಮಿಕ ಕ್ಷೇತ್ರಕ್ಕೆ ಅದನ್ನು ನಿರಾಕರಿಸುತ್ತಿರುವುದು ಏಕೆ?

ಏಕೆಂದರೆ, ಪ್ರವಾಸೋದ್ಯಮದಿಂದ ಹಣ ಬರುವುದು ಕಾಶ್ಮೀರಿ ಮುಸ್ಲಿಮರಿಗೆ. ಹೀಗಾಗಿ, ಅದಕ್ಕೆ ವಿರೋಧವಿಲ್ಲ. ಅಮರನಾಥ ಯಾತ್ರೆಯಿಂದಲೂ ಕಾಶ್ಮೀರಿ ಮುಸ್ಲಿಮರಿಗೆ ಆರ್ಥಿಕ ಲಾಭವಿದೆ. ಆದರೆ, ಇಲ್ಲಿ ಧಾರ್ಮಿಕ ಅಂಶವಿರುವುದರಿಂದ ಅವರು ಒಪ್ಪುತ್ತಿಲ್ಲ. ನಾಳೆ ಎಲ್ಲಾ ಹಿಂದುಗಳು ಬಂದು ಅಮರನಾಥ ಮಾರ್ಗದುದ್ದಕ್ಕು ನೆಲೆಸಿದರೆ ಹೇಗೆ ಎಂಬ ಆತಂಕ ಅವರನ್ನು ಕಾಡುತ್ತಿರಬೇಕು.

ಹಾಗಾದರೆ ಇದು ಜಾತ್ಯತೀತ ಧೋರಣೆಯಾ ಡಿಎಸ್‌ಎನ್‌.?

ನಮ್ಮ ಧರ್ಮ ಬೆಳೆಯಲಿ, ಆದರೆ, ಇತರರ ಧರ್ಮ ಬೆಳೆಯುವುದು ಬೇಡ ಎಂಬುದು ಅದ್ಹೇಗೆ ಜಾತ್ಯತೀತ ಧೋರಣೆಯಾಗುತ್ತದೆ? ಮುಸ್ಲಿಮರು ಪ್ರತಿಭಟಿಸುತ್ತಿರುವುದು ಈ ಕಾರಣಕ್ಕೆ ಅಲ್ಲವೆ? ಹೀಗಿದ್ದರೂ ಇದರಲ್ಲಿ ನಿಮಗೆ ರಾಜಕೀಯ ವಾಸನೆ ಬಡಿಯುತ್ತದೆ. ಕೋಮುವಾದದ ವಾಸನೆ ತಾಕುತ್ತದೆ. ಆದರೆ, ಈ ವಾಸನೆ ಕೇವಲ ಹಿಂದುಗಳದ್ದು ಮಾತ್ರ ಎಂಬುದು ನಿಮ್ಮ ವೈಚಾರಿಕ ಸಣ್ಣತನಕ್ಕೆ ಸಾಕ್ಷಿ. ಮುಸ್ಲಿಮರಿಂದಲೂ ಇಂಥದೇ ವಾಸನೆ ಬರುತ್ತಿರುವುದು ತಮ್ಮ ಬುದ್ಧಿಜೀವಿ ನಾಸಿಕಕ್ಕೆ ಏಕೆ ಗೊತ್ತಾಗಲಿಲ್ಲವೋ!

ಎಲ್ಲಕ್ಕೂ ಮುಖ್ಯ ಎಂದರೆ, ೧೭-೫-೨೦೦೫ರಂದು ಹೈಕೋರ್ಟ್‌‌ನ ವಿಭಾಗೀಯ ಪೀಠ ಅಮರನಾಥ ಮಂಡಳಿ ಪುನರ್‌ರಚನೆ ಕುರಿತಾದ ಎಲ್ಲ ಆಕ್ಷೇಪಣೆಗಳನ್ನೂ ತಳ್ಳಿಹಾಕಿ, ಯಾತ್ರೆ ಸುಗಮವಾಗಿ ನಡೆಯಲು ಬೇಕಾದ ಮಾನದಂಡಗಳನ್ನು ರೂಪಿಸಿದೆ. ತನ್ನ ತೀರ್ಪಿನಲ್ಲಿ ಹೈಕೋರ್ಟ್‌ “The land to be allotted by the Board would be only for the purposes of its user and would remain allotted for the duration of the yatra. The board shall also identify the sites to be allotted for the purposes of ‘Langar’, erection of detachable pre-fabricated huts and toilets etc. which would not be permanent in nature and which are liable to be removed after the yatra is over. The Board shall identify the person/agency to whom the site would be allotted so as to enable the State Government to screen the activities of such person/agency……” ಎಂದು ಸ್ಪಷ್ಟಪಡಿಸಿದೆ.

ಹೀಗಿದ್ದರೂ ಮುಸ್ಲಿಮರು ಭಯಪಡುತ್ತಿರುವುದೇಕೆ? ಜಾತ್ಯತೀತ ವಕ್ತಾರರಾದ ನಿಮ್ಮಲ್ಲಿ ಏನಂಥ ಭಯ ಹುಟ್ಟಿಕೊಂಡಿರುವುದು? ತಮ್ಮ ಧಾರ್ಮಿಕ ಕ್ಷೇತ್ರಕ್ಕೆ ಹೋಗಲು ತಾತ್ಕಾಲಿಕ ಸೌಲಭ್ಯಗಳನ್ನು ಕಲ್ಪಿಸಲೂ ಬಿಡುತ್ತಿಲ್ಲ ಎಂದ ಮೇಲೆ ಕಾಶ್ಮೀರಿ ಮುಸ್ಲಿಮರ ಬಗ್ಗೆ ದೇಶದ ಇತರ ಬಹುಸಂಖ್ಯಾತ ಜನರಲ್ಲಿ ಅದೆಂಥ ಪ್ರೀತಿ ಹುಟ್ಟೀತು? ನಾಳೆ ಇದೇ ಧೋರಣೆಯನ್ನು ಮುಸ್ಲಿಮರಿಗೆ ಸಂಬಂಧಿಸಿದ ಕ್ಷೇತ್ರಗಳಲ್ಲಿ ತೋರಿದರೆ ಹೇಗೆ? ಅದನ್ನು ವಿರೋಧಿಸುವ ನೈತಿಕತೆ ಯಾರಿಗಿದ್ದೀತು?

ನಿಮ್ಮನ್ನು ಬಿಡಿ, ನೀವು ಪ್ರತಿಯೊಂದನ್ನೂ ಕೋಮು ಕನ್ನಡಕ ಹಾಕಿಕೊಂಡೇ ನೋಡುತ್ತೀರಿ, ಬರೆಯುತ್ತೀರಿ. ನಿಮಗೆ ಇಂತಹ ಪ್ರಶ್ನೆಗಳು ಕಾಡುವುದಿಲ್ಲ. ಒಂದು ವೇಳೆ ಇತರರು ಅವನ್ನು ಕೇಳಿದರೂ ನೀವು ಉತ್ತರಿಸುವುದಿಲ್ಲ. ಏಕೆಂದರೆ, ನಿಮಗೆ ಅಂತಹ ಸಾಮಾಜಿಕ ಜವಾಬ್ದಾರಿಯೇ ಇಲ್ಲ. ಈ ಸಾಲನ್ನು ನಾನು ತುಂಬ ಯೋಚಿಸಿ ಬರೆಯುತ್ತಿದ್ದೇನೆ. ಕೇವಲ ಉಗ್ರವಾದಿಗಳಷ್ಟೇ ಅಲ್ಲ ಸಮಾಜದ ಸ್ವಾಸ್ಥ್ಯ ಕೆಡಿಸುವವರು. ನಿಮ್ಮಂಥ ತಪ್ಪು ಧೋರಣೆಯ ವ್ಯಕ್ತಿಗಳೂ ಅವರಲ್ಲಿ ಸೇರುತ್ತೀರಿ. ಏಕಪಕ್ಷೀಯ ವಿಚಾರಧಾರೆ ಹರಡಲು ಯತ್ನಿಸುತ್ತ, ಆ ಮೂಲಕ ಪ್ರಚಾರ ಪಡೆಯುತ್ತ, ಅದನ್ನೇ ಮನ್ನಣೆ ಎಂದು ಭಾವಿಸಿಕೊಂಡು ಇನ್ನಷ್ಟು ಅಪಾಯಕಾರಿಗಳಾಗುತ್ತೀರಿ.

ಸತ್ಯವನ್ನು ಒಪ್ಪಿಕೊಳ್ಳದ ನಿಮ್ಮಂಥವರಿಗೆ ಧಿಕ್ಕಾರವಿರಲಿ.

- ಚಾಮರಾಜ ಸವಡಿ

ಜಾತ್ಯತೀತರೆಂಬ ಕೋಮುವಾದಿಗಳು (ಭಾಗ-೧)

16 Aug 2008

3 ಪ್ರತಿಕ್ರಿಯೆ

(ಈ ಲೇಖನ ಡಿ.ಎಸ್‌. ನಾಗಭೂಷಣ ಅವರ ’ಕಾಶ್ಮೀರ ಬೆಂಕಿ: ಎಚ್ಚರವಿರಲಿ’ ಎಂಬ ಲೇಖನಕ್ಕೆ ಪ್ರತಿಕ್ರಿಯೆ. ಮೂಲ ಲೇಖನವನ್ನು http://sampada.net/article/10890 ದಲ್ಲಿ ನೋಡಬಹುದು)

ಸನ್ಮಾನ್ಯ ಡಿ.ಎಸ್‌. ನಾಗಭೂಷಣ ಅವರ ’ಕಾಶ್ಮೀರ ಬೆಂಕಿ: ಎಚ್ಚರವಿರಲಿ’ ಲೇಖನ ಜಾತ್ಯತೀತ ಹೆಸರಲ್ಲಿ ಹುಷಾರಾಗಿ ಹೆಣೆದ ಲೇಖನ ಎಂದು ಹೇಳಲು ಬಯಸುತ್ತೇನೆ. ಇಡೀ ವಿವಾದದಲ್ಲಿ ಮುಸ್ಲಿಮರನ್ನು ನೇರವಾಗಿ ಖಂಡಿಸದೇ, ಅವರ ಧೋರಣೆಯ ಹಿಂದಿರುವ ಧರ್ಮಾಂಧತೆಯನ್ನು ಬಯಲಿಗೆ ತಾರದೇ, ಇಡೀ ವಿವಾದದ ಹಿಂದೆ ಹಿಂದು ಧರ್ಮ ಪರ ಸಂಘಟನೆಗಳ ಹುನ್ನಾರ ಇದೆ ಎಂಬಂತೆ ಬಿಂಬಿಸಲು ಲೇಖಕರು ಯತ್ನಿಸಿದ್ದಾರೆ.

ಇದಕ್ಕೆ ಬೆಂಬಲವಾಗಿ ಸತ್ಯವನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಬಳಸಿಕೊಂಡಿದ್ದಾರೆ ನಾಗಭೂಷಣ ಅವರು.

ಅವರ ಲೇಖನದ ಈ ಸಾಲುಗಳನ್ನೇ ನೋಡಿ:

’’ಆಗಸ್ಟ್ 14ರವರೆಗೂ ತನ್ನ ಪ್ರತಿಭಟನೆಯನ್ನು ಮುಂದುವರೆಸಲು ನಿರ್ಧರಿಸಿರುವ ಜಮ್ಮು ಸಂಘರ್ಷ ಸಮಿತಿ 62ನೇ ಸ್ವಾತಂತ್ರ್ಯೋತ್ಸವಕ್ಕೆ ತನ್ನ ವಿಶಿಷ್ಟ ಕೊಡುಗೆಯನ್ನು ಸಲ್ಲಿಸಿದೆ ಎಂದೇ ಹೇಳಬೇಕು. ರಾಜ್ಯದ ಈವರೆಗಿನ ರಾಜಕಾರಣ; ಕಾಶ್ಮೀರ ಕಣಿವೆ ಮುಸ್ಲಿಮರದ್ದೂ, ಜಮ್ಮು ತಪ್ಪಲು ಹಿಂದೂಗಳದ್ದು ಎಂಬ ವಿಭಾಗೀಕರಣಕ್ಕೆ ಕಾರಣವಾಗಿರುವುದರಿಂದ ಸದ್ಯದ ಈ ಸಮಸ್ಯೆಗೆ ದಟ್ಟ ಕೋಮು ಬಣ್ಣ ಕೂಡಾ ಬಂದಿದೆ.”

ಇದು ಇವತ್ತಿನ ಬಣ್ಣವಲ್ಲ ನಾಗಭೂಷಣ ಅವರೇ. ಜಮ್ಮು ಕಾಶ್ಮೀರ ರಾಜ್ಯ ರಚನೆಯಾದಾಗಿನಿಂದ ಇರುವಂಥದ್ದು. ಇತಿಹಾಸದ ಬಗ್ಗೆ ನಿಮಗೆ ಚೆನ್ನಾಗಿ ಗೊತ್ತಿರುವುದರಿಂದ, ಮತ್ತು ತಕ್ಕಮಟ್ಟಿಗೆ ಬಹಳಷ್ಟು ಜನರೂ ಅದನ್ನು ಅರಿತುಕೊಂಡಿರುವುದರಿಂದ, ಕೋಮುಬಣ್ಣ ಇವತ್ತಿನದಲ್ಲ ಎಂಬುದನ್ನು ಮತ್ತೆ ವಿವರಿಸಬೇಕಾಗಿಲ್ಲ ಅನಿಸುತ್ತದೆ.

ನಿಮ್ಮ ಮುಂದಿನ ಸಾಲುಗಳು ಕೂಡಾ ಮುಸ್ಲಿಂ ಪರ ಸಂಘಟನೆಗಳು ಹಾಗೂ ಉಗ್ರವಾದಿಗಳ ಮೇಲಿನ ಅನುಕಂಪವನ್ನೇ ವ್ಯಕ್ತಪಡಿಸುತ್ತವೆ ”ಇದರಿಂದ ನಿರಂತರವಾಗಿ ಲಾಭ ಪಡೆಯುತ್ತಿರುವವರೆಂದರೆ, ಕಾಶ್ಮೀರದ ಪ್ರತ್ಯೇಕತಾವಾದಿ ಗುಂಪುಗಳು ಮತ್ತು ಉಗ್ರವಾದಿ ಸಂಸ್ಥೆಗಳು. ಮೊನ್ನೆ ಜಮ್ಮು ಬಂದ್ ವಿರುದ್ಧ ಶ್ರೀನಗರದಲ್ಲಿ ನಡೆದ ಮೆರವಣಿಗೆಯಲ್ಲಿ ಅನೇಕ ಉಗ್ರವಾದಿ ಗುಂಪುಗಳು ಬಹಿರಂಗವಾಗಿ ಕಾಣಿಸಿಕೊಂಡು ರಾಷ್ಟ್ರವಿರೋಧಿ ಘೋಷಣೆಗಳನ್ನು ಕೂಗತೊಡಗಿದ್ದು ಮತ್ತು ಇದನ್ನು ನಮ್ಮ ಭದ್ರತಾ ಪಡೆಗಳು ಮೂಕ ಪ್ರೇಕ್ಷಕರಾಗಿ ನೋಡುತ್ತಾ ನಿಲ್ಲುವಂತಾದದ್ದು ಇದಕ್ಕೊಂದು ಉದಾಹರಣೆ.” ಎಂದು ಹೇಳುತ್ತೀರಿ. ಅದರ ನಂತರದ ಘಟನೆಗಳನ್ನೇಕೆ ಉದಾಹರಿಸಿಲ್ಲ? ಶ್ರೀನಗರದ ಲಾಲ್‌ಚೌಕದಲ್ಲಿ ಆಗಸ್ಟ್‌ ೧೫ರಂದು ಹಾರಿಸಲಾಗಿದ್ದ ರಾಷ್ಟ್ರಧ್ವಜವನ್ನು ಮಧ್ಯಾಹ್ನ ೩.೪೫ರ ಹೊತ್ತಿಗೆ ಇಳಿಸಿದ ಮುಸ್ಲಿಂ ಸಂಘಟನೆಗಳು ಹಾಗೂ ಉಗ್ರವಾದಿಗಳು, ಅಲ್ಲಿ ತಮ್ಮ ಸಂಘಟನೆಗಳ ಧ್ವಜಗಳನ್ನು ಹಾರಿಸಿದರು. ಸಂಘಟನೆಗೆ ಸೇರಿದ ಮಹಿಳಾ ಸದಸ್ಯರು ರಾಷ್ಟ್ರಧ್ವಜ ಸುಟ್ಟರು. ನೀವು ಹೇಳಿದಂತೆ ನಮ್ಮ ಭದ್ರತಾ ಪಡೆಗಳು ಅದನ್ನು ಮೂಕಪ್ರೇಕ್ಷರಾಗಿ ನೋಡುತ್ತಾ ನಿಂತಿದ್ದರು. ಏಕೆ ಗೊತ್ತೆ? ಆಗ ಅವರು ರಂಗಕ್ಕೆ ಇಳಿದಿದ್ದರೆ ಮತ್ತೊಂದು ರಕ್ತಪಾತವಾಗುತ್ತಿತ್ತು. ಅದೂ ಸ್ವಾತಂತ್ರ ದಿನದಂದು. ಅದಕ್ಕೇ ಸುಮ್ಮನಿದ್ದರು. (ಟೈಮ್ಸ್‌ ಆಫ್‌ ಇಂಡಿಯಾ ೧೬-೮-೨೦೦೮)

ಮುಂದೆ ನೀವು ಕಾಶ್ಮೀರ ಸಮಸ್ಯೆ ಉಲ್ಬಣವಾಗಿದ್ದು ಹೇಗೆ ಎಂಬುದನ್ನು ಹೇಳುತ್ತ, ಕೇವಲ ಕೇಂದ್ರ ಸರ್ಕಾರ ಮತ್ತು ಅದು ಸ್ಥಾಪಿಸಿದ್ದ ಕೈಗೊಂಬೆ ರಾಜ್ಯ ಸರ್ಕಾರಗಳು ಇವತ್ತಿನ ಪರಿಸ್ಥಿತಿಗೆ ಕಾರಣ ಎನ್ನುತ್ತೀರಿ. ಇದಕ್ಕೆ ಸಮರ್ಥನೆಯಾಗಿ ”ಬಾಬ್ರಿ ಮಸೀದಿ ನಾಶ ಹಾಗೂ ಆಫ್ಘನಿಸ್ಥಾನ ಮತ್ತು ಇರಾಕ್‌ಗಳ ಮೇಲಿನ ಅಮೆರಿಕಾದ ಆಕ್ರಮಣಗಳ ನಂತರವಂತೂ ಈ ಸಮಸ್ಯೆಗೆ ಜಾಗತಿಕ ಆಯಾಮ ದೊರೆತು, ಪ್ರತ್ಯೇಕತಾವಾದ ಕೋಮುವಾದವಾಗಿ ಪರಿವರ್ತಿತವಾಗಿ, ಸಮಸ್ಯೆಯನ್ನು ಉಲ್ಬಣಗೊಳಿಸಿದೆ” ಎಂದು ಬರೆಯುತ್ತೀರಿ. ಅಂದರೆ, ಬಾಬ್ರಿ ಮಸೀದಿ ನಾಶ ಹಾಗೂ ಆಫ್ಘನಿಸ್ತಾನ ಮತ್ತು ಇರಾಕ್‌ ಮೇಲಿನ ಅಮೆರಿಕ ಆಕ್ರಮಣದಿಂದ ಕಾಶ್ಮೀರ ಸಮಸ್ಯೆಗೆ ಜಾಗತಿಕ ಆಯಾಮ ದೊರೆತು, ಪ್ರತ್ಯೇಕತಾವಾದ ಕೋಮುವಾದವಾಗಿ ಪರಿವರ್ತನೆಯಾಯಿತು ಎಂಬುದು ನಿಮ್ಮ ಬರಹದ ಅರ್ಥ. ಅಂದರೆ, ಮೇಲಿನ ಬೆಳವಣಿಗೆಗಳ ಮುಂಚೆ ಜಮ್ಮು ಕಾಶ್ಮೀರದಲ್ಲಿ ಕೋಮುವಾದ ಇರಲಿಲ್ಲವೆ? ಜಗತ್ತಿನ ಇಂತಹ ಸಮಸ್ಯೆಗಳ ಹಿನ್ನೆಲೆ ಅವಲೋಕಿಸಿದರೆ, ಕೋಮುವಾದವೇ ಪ್ರತ್ಯೇಕತಾವಾದವಾಗಿ ಬದಲಾಗಿದ್ದು ಸರಳವಾಗಿ ಗೋಚರಿಸುತ್ತದೆ. ನಮ್ಮ ದೇಶ ವಿಭಜನೆಯಾಗಿದ್ದೇ ಕೋಮುವಾದದಿಂದ ಎಂಬುದನ್ನು ಏಕೆ ಮರೆಯುತ್ತೀರಿ?

ನಿಮ್ಮ ಲೇಖನದ ಮುಂದಿನ ಪ್ಯಾರಾವಂತೂ ಜಾತ್ಯತೀತ ಹೆಸರಿನ ಬಹುತೇಕ ಕೋಮುವಾದಿಗಳ ದೃಷ್ಟಿಕೋನವನ್ನೇ ಪ್ರತಿಫಲಿಸುತ್ತದೆ.

”ಆದರೆ ಸ್ವಾತಂತ್ರ್ಯೋತ್ತರ ಭಾರತದ ರಾಜಕಾರಣ ರಾಷ್ಟ್ರೀಯ ಏಕತೆಯ ಹೆಸರಿನಲ್ಲಿ, ಸಂವಿಧಾನ ಪ್ರತಿಪಾದಿಸಿದ್ದ ಒಕ್ಕೂಟ ರಾಷ್ಟ್ರದ ಭಾವನೆಯ ವಿರುದ್ಧ ಆಚರಿಸಿಕೊಂಡು ಬರುತ್ತಿರುವ ಕೇಂದ್ರೀಕೃತ ಆಡಳಿತ ನೀತಿಯ ಫಲವಾಗಿ ವಿವಿಧ ರಾಜ್ಯಗಳ ಭಾಷೆ-ಸಂಸ್ಕೃತಿ ಸಂಪ್ರದಾಯಗಳು ಘಾಸಿಗೊಂಡಿರುವಂತೆ, ಇಲ್ಲೂ ಆ ಬಹು ಸಂಸ್ಕೃತಿಯ ಸಂಪ್ರದಾಯ ಘಾಸಿಗೊಂಡಿದೆ. ಸ್ಥಳೀಯ ಸಂಸ್ಕೃತಿಯ ಪರಿಮಳ ನಾಶವಾಗಿ ಈ ಮುಸ್ಲಿಂ ಬಹುಸಂಖ್ಯಾತರ ರಾಜ್ಯ, ರಾಷ್ಟ್ರೀಯತೆಯ ಅತಿಗಳಿಗೆ ಸಿಕ್ಕಿ ಕೋಮುವಾದಕ್ಕೆ ಬಲಿಯಾಗಿದೆ. ಇದರಿಂದಾಗಿ, ಭಾರತದ ಬಹು ಸಂಪ್ರದಾಯಗಳ ಸಂಸ್ಕೃತಿಗೆ ಹತ್ತಿರವಿದ್ದ ಕಾರಣದಿಂದಾಗಿ ಭಾರತದಲ್ಲಿ ಸಹಜವಾಗಿ ಒಂದಾಗಬೇಕಿದ್ದ ಈ ರಾಜ್ಯ, ಈಗ ತನ್ನ ಮುಕ್ತಿಗಾಗಿ ಪಾಕಿಸ್ತಾನದ ಕಡೆ ನೋಡುವಂತಾಗಿದೆ.” ಈ ವಾಕ್ಯಗಳನ್ನು ಬರೆಯುವುದಕ್ಕೆ ಜಾತ್ಯತೀತರೆನ್ನಿಸಿಕೊಳ್ಳುವ ಹಂಬಲ ಬಿಟ್ಟು ಬೇರೆ ಏನೂ ನನಗೆ ಕಾಣುತ್ತಿಲ್ಲ. ನಿಮ್ಮ ಪ್ರಕಾರ, ಕಾಶ್ಮೀರದ ಇವತ್ತಿನ ಸಮಸ್ಯೆಗೆ ಕೇಂದ್ರ ಸರ್ಕಾರದ ನೀತಿಯೇ ಕಾರಣವೇ ಹೊರತು, ಸ್ಥಳೀಯ ಬಹುಸಂಖ್ಯಾತ ಮುಸ್ಲಿಂ ಕಾಶ್ಮೀರಿಗಳ ಕೊಡುಗೆ ಏನೇನೂ ಇಲ್ಲ. ಇದನ್ನು ಒಪ್ಪಲು ಸಾಧ್ಯವೆ? ದೇಶ ಸ್ವಾತಂತ್ರವಾದಾಗಿನಿಂದ ಇಂದಿನವರೆಗೆ, ದೇಶದ ಮುಖ್ಯವಾಹಿನಿಯ ಚಟುವಟಿಕೆಗಳಲ್ಲಿ ಈ ಮುಸ್ಲಿಂ ಬಹುಸಂಖ್ಯಾತ ಕಾಶ್ಮೀರಿಗಳು ಎಷ್ಟರ ಮಟ್ಟಿಗೆ ಪಾಲ್ಗೊಂಡಿದ್ದಾರೆ? ಈ ದೇಶವನ್ನು ತಮ್ಮದು ಎಂಬ ಭಾವನೆಯಲ್ಲಿ ಯಾವತ್ತು ನೋಡಿದ್ದಾರೆ? ನೀವೇ ಹೇಳುವಂತೆ ಜಮ್ಮು ಕಾಶ್ಮೀರದಲ್ಲಿ ಹಿಂದು, ಮುಸ್ಲಿಂ ಮತ್ತು ಬೌದ್ಧ ಧರ್ಮೀಯರು ಬಹುಸಂಖ್ಯಾತರು. ಆದರೆ, ಇವತ್ತು ಮುಸ್ಲಿಂರ ಪ್ರಾಬಲ್ಯ ಬಿಟ್ಟರೆ ಎಷ್ಟರ ಮಟ್ಟಿಗೆ ಇತರ ಧರ್ಮೀಯರು ನೀತಿ ನಿರ್ಣಯದ ಶಕ್ತಿ ಹೊಂದಿದ್ದಾರೆ?

ಇಷ್ಟೇ ಅಲ್ಲ, ಶ್ರೀನಗರ ಹೆದ್ದಾರಿ ಬಂದ್‌ನಿಂದಾಗಿ ವ್ಯಾಪಾರ ಕಳೆದುಕೊಂಡಿರುವ ಕಾಶ್ಮೀರಿಗಳು ಅನಿವಾರ್ಯವಾಗಿ ತಮ್ಮ ಸರಕನ್ನು ಮಾರಲು ಪಾಕ್‌ ಆಕ್ರಮಿತ ಕಾಶ್ಮೀರದ ಕಡೆ ಹೊರಳಿದ್ದಾರೆ ಎಂದು ಸಹಾನುಭೂತಿ ವ್ಯಕ್ತಪಡಿಸಿದ್ದೀರಿ (ಹಾಗಾಗಿಯೇ, ಈಗ ಜಮ್ಮು ಕಡೆ ವಾಹನ ಸಂಚಾರ ಸ್ತಬ್ಧಗೊಂಡಿರುವ ಹಿನ್ನೆಲೆಯಲ್ಲಿ ಕಾಶ್ಮೀರಿ ವ್ಯಾಪಾರಿಗಳು ತಮ್ಮ ಸರಕಿನ ಉಳಿವಿಗಾಗಿ ಅದನ್ನು ಈ 'ಆಝಾದ್ ಕಾಶ್ಮೀರ'ದೆಡೆಗೆ ತಿರುಗಿಸದೆ ವಿಧಿಯಿಲ್ಲವೆಂದು ಹೇಳುತ್ತಿದ್ದಾರೆ. ಆದರೆ ಇದನ್ನು ರಾಷ್ಟ್ರ ವಿರೋಧಿ ಕ್ರಮ ಎಂದು ಕರೆದಿರುವ ಜಮ್ಮು ಸಂಘರ್ಷ ಸಮಿತಿಗೆ, ತಾನು ನಿರಂತರ ಬಂದ್ ಹೆಸರಿನಲ್ಲಿ ರಸ್ತೆ ತಡೆ ನಡೆಸುತ್ತಾ ಕಾಶ್ಮೀರಕ್ಕೆ ಆರ್ಥಿಕ ದಿಗ್ಬಂಧನ ಹೇರಿರುವುದು ಕೂಡಾ ರಾಷ್ಟ್ರ ವಿರೋಧಿ ಕ್ರಮ....) ಇದು ಯಾವ ಜಾತ್ಯತೀತ ನಿಲುವು ಸ್ವಾಮಿ?

ಲೇಖನ ಉದ್ದವಾದೀತೆಂಬ ಅಳುಕಿನಿಂದ, ಅಮರನಾಥ ಕುರಿತ ಸಂಗತಿಗಳನ್ನು ಈ ಲೇಖನದ ಎರಡನೇ ಭಾಗದಲ್ಲಿ ಬರೆಯುತ್ತೇನೆ. ಮುಸ್ಲಿಂರನ್ನು ಓಲೈಸುವುದೇ ಜಾತ್ಯತೀತ ಧೋರಣೆ ಎಂದು ನಿಮ್ಮಂಥವರು ನಂಬಿಕೊಂಡಿದ್ದೀರಿ. ಅದಕ್ಕೆ ಪುರಾವೆ ಒದಗಿಸಲು, ಸತ್ಯ ಸಂಗತಿಗಳನ್ನು ಆಯ್ದು ತಿರುಚಿ ಪ್ರಕಟಿಸುತ್ತೀರಿ. ಪ್ರತ್ಯೇಕತಾವಾದ ಹುಟ್ಟಿದ್ದೇ ಕೇಂದ್ರ ಸರ್ಕಾರದ ನೀತಿಯಿಂದ ಎನ್ನುತ್ತೀರಿ. ಆದರೆ, ಕೇಂದ್ರದ ನೀತಿ ಎಲ್ಲ ರಾಜ್ಯಗಳ ಮಟ್ಟಿಗೂ ಒಂದೇ ಇದೆ ಎಂಬುದನ್ನೇಕೆ ಮರೆಯುತ್ತೀರಿ? ರಾಷ್ಟ್ರದ ಮುಖ್ಯವಾಹಿನಿಯನ್ನು ಮೊದಲಿನಿಂದಲೂ ದ್ವೇಷಿಸುತ್ತ ಬಂದಿರುವ ಮುಸ್ಲಿಂ ಧರ್ಮಾಂಧರ ಪರ ನಿಲ್ಲುವುದು ನಿಮ್ಮಂಥ ಕೆಲ ಕೋಮುವಾದಿ ’ಜಾತ್ಯತೀತ’ರ ನಿಲುವಾಗಿದೆ. ಸರಿಯಾಗಿ ಹೇಳಬೇಕೆಂದರೆ, ಚಟವಾಗಿದೆ. ಹಾಗೆ ಮಾಡಿದರೆ ಮಾತ್ರ ನಿಮ್ಮಂಥವರಿಗೆ ಪ್ರತ್ಯೇಕ ಮನ್ನಣೆ ಸಿಗುತ್ತದೆ.

ಇದನ್ನೆಲ್ಲ ಏಕೆ ಹೇಳಿದೆನೆಂದರೆ, ಈ ಲೇಖನ ಬರೆಯುವ ಸಮಯದಲ್ಲಿ ಅಹ್ಮದಾಬಾದ್‌ನ ಇತ್ತೀಚಿನ ಬಾಂಬ್‌ ಸ್ಫೋಟಗಳ ಹಿಂದೆ ಸಿಮಿ ಕೈವಾಡ ಇದೆ ಎಂಬುದು ಪ್ರಾಥಮಿಕ ತನಿಖೆಯಿಂದ ಸಾಬೀತಾಗಿದೆ. ಅದಕ್ಕೆ ಪುರಾವೆಯಾಗಿ ಕೆಲವು ವ್ಯಕ್ತಿಗಳನ್ನು ಗುಜರಾತ್‌ ಪೊಲೀಸರು ಬಂಧಿಸಿದ್ದೂ ಆಗಿದೆ. ಇದಕ್ಕೂ ಸಾಕಷ್ಟು ಮುಂಚೆಯೇ ಸಿಮಿ ಕೈವಾಡ ಈ ಸ್ಫೋಟಗಳ ಹಿಂದಿತ್ತು ಎಂಬುದನ್ನು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಬಹಿರಂಗವಾಗಿ ಹೇಳಿದ್ದವು. ಹೀಗಿದ್ದರೂ ಕೋಮು ವಿರೋಧಿ ವೇದಿಕೆಯವರು, ನಿಮ್ಮಂಥ ಪ್ರಜ್ಞಾವಂತರು ಸ್ಫೊಟದ ಹಿಂದಿನ ಧರ್ಮಾಂಧರನ್ನು, ಅವರ ಉದ್ದೇಶಗಳನ್ನು, ಅವರು ಹಿಡಿದ ನೀಚ ಮಾರ್ಗವನ್ನು ಖಂಡಿಸಲಿಲ್ಲ. ಬಾಬಾ ಬುಡನ್‌ಗಿರಿ ವಿಷಯಕ್ಕೆ ಸಂಬಂಧಿಸಿದಂತೆ ನೀಡಿದ ಹೇಳಿಕೆಗಳು, ನಡೆದ ಮಾರ್ಗ ಹಾಗೂ ನಾಟಕೀಯತೆ ತೋರುವ ಚಟುವಟಿಕೆಗಳು ಇಂತಹ ವಿಷಯಗಳಲ್ಲಿ ಯಾವತ್ತೂ ವ್ಯಕ್ತವಾಗಿಲ್ಲ.

ಹೀಗಾಗಿ, ನಿಮ್ಮಂಥವರು ಕೋಮುವಾದ, ಧರ್ಮಾಂಧತೆ ಎಂದು ಬರೆದಾಗೆಲ್ಲ, ನೀವು ಕೂಡಾ ಕಣ್ಣಿಗೆ ಧರ್ಮಾಂಧತೆಯ ಕನ್ನಡಕ ಹಾಕಿಕೊಂಡೇ ಬರೆಯುತ್ತೀರಿ ಎಂದು ಬಲವಾಗಿ ಅನ್ನಿಸತೊಡಗುತ್ತದೆ. ಇಲ್ಲದಿದ್ದರೆ, ಕೆಟ್ಟದ್ದನ್ನು ಯಾರು ಮಾಡಿದರೇನು ಎಂದು ನೇರವಾಗಿ ಅವರ ದೋಷಗಳನ್ನೂ ಟೀಕಿಸುತ್ತಿದ್ದಿರಿ. ಖಂಡಿಸುತ್ತಿದ್ದಿರಿ. ಅಂಥದ್ದು ಆಗಿಲ್ಲ ಎಂಬ ಕಾರಣಕ್ಕೆ ನಿಮ್ಮ ಈ ಲೇಖನ, ನಿಮ್ಮಂಥವರು ನೀಡುವ ಹೇಳಿಕೆ, ಬರೆದ ಲೇಖನಗಳು, ಮಾಡಿದ ಚಳವಳಿಗಳು ಹಾಸ್ಯಾಸ್ಪದವಾಗಿ ಕಾಣುತ್ತವೆ. ಎಲ್ಲೋ ವಿದೇಶದಲ್ಲಿ ವ್ಯಂಗ್ಯಚಿತ್ರವೊಂದು ಪ್ರವಾದಿಯನ್ನು ಕುರಿತಾಗಿತ್ತು ಎಂಬ ವಿಷಯಕ್ಕೆ ಭಾಷೆ, ವಿಷಯ, ಚಿತ್ರ ಗೊತ್ತಿರದ ಮುಸ್ಲಿಮರು ಪ್ರತಿಭಟನೆ ನಡೆಸುವುದನ್ನು ನೋಡಿದರೆ ಯಾವ ಭಾವನೆ ಉಂಟಾಗುತ್ತದೋ, ಅಂಥದೇ ಭಾವನೆ ನಿಮ್ಮಂಥವರು ಅದನ್ನು ಬೆಂಬಲಿಸಿ ಬರೆದಾಗ, ಹೇಳಿಕೆ ನೀಡಿದಾಗ, ಹಾಗೂ ಹಿಂದು ದೇವತೆಗಳ ಅವಹೇಳನ ಬಹಿರಂಗವಾದಾಗಲೂ ನೋಡಿಕೊಂಡು ಸುಮ್ಮನಿದ್ದಾಗ ಆಗುತ್ತದೆ.

ತಪ್ಪು ಯಾರೇ ಮಾಡಿರಲಿ, ಅವರ ಜಾತಿ, ಹಿನ್ನೆಲೆ ನೋಡದೇ ಅದನ್ನು ತಪ್ಪು ಎಂದು ಸರಳವಾಗಿ ಹೇಳಲು ನಿಮ್ಮಂಥವರಿಗೆ ಏಕೆ ಸಾಧ್ಯವಾಗುವುದಿಲ್ಲ? ಏಕೆ ಈ ದ್ವಂದ್ವ?

- ಚಾಮರಾಜ ಸವಡಿ

ಮಧ್ಯಮದಲ್ಲೇ ಉಳಿದ ಮಾಧ್ಯಮ

13 Aug 2008

3 ಪ್ರತಿಕ್ರಿಯೆ
(ಶಶಿಕುಮಾರ್‌ ಅವರು ಸಂಪದದಲ್ಲಿ ಬರೆದಿದ್ದ ಲೇಖನಕ್ಕೆ ಪ್ರತಿಕ್ರಿಯೆ/ಪೂರಕವಾಗಿ ಇದನ್ನು ಬರೆಯುತ್ತಿದ್ದೇನೆ. ಮೂಲ ಲೇಖನವನ್ನು http://sampada.net/article/10660 ದಲ್ಲಿ ನೋಡಬಹುದು )

ಶಶಿಕುಮಾರ್‌ ಅವರು ’ಸುದ್ದಿಸೂಳೆಯ ಬೆನ್ನತ್ತಿ ಹೊರಟಿರುವ ಮಾಧ್ಯಮಗಳು’ (ಭಾಗ-೧)ರಲ್ಲಿ ಸಾಕಷ್ಟು ಮುಖ್ಯ ವಿಷಯಗಳನ್ನು ಪ್ರಸ್ತಾಪಿಸಿದ್ದಾರೆ. ಮಾಧ್ಯಮ ಹೇಗೆ ಮಧ್ಯಮ ಹಂತದಲ್ಲೇ ಉಳಿದುಬಿಟ್ಟಿದೆ ಎಂಬುದನ್ನು ವಿವರವಾಗಿಯೇ ಬರೆದಿದ್ದಾರೆ. ಅವರು ಬರೆದಿದ್ದು ಒಂದೇ ಕಂತು ಹಾಗೂ ಇತರ ಕಂತುಗಳು ಇನ್ನೂ ಬರಬೇಕಿವೆ. ಆದರೆ, ಮೊದಲನೇ ಕಂತಿನಲ್ಲಿ ಪ್ರಸ್ತಾಪವಾಗಿರುವ ವಿಷಯಗಳು ಹಾಗೂ ಧೋರಣೆ ನೋಡಿದರೆ, ಇತರ ಕಂತುಗಳು ಬರಬಹುದಾದ ರೀತಿಯನ್ನು ತಕ್ಕಮಟ್ಟಿಗೆ ಊಹಿಸಬಹುದು.

ನಾನೂ ಪತ್ರಕರ್ತ. ವೃತ್ತಿಗಷ್ಟೇ ಅಲ್ಲ, ಪ್ರವೃತ್ತಿಗೂ ಅದನ್ನೇ ನೆಚ್ಚಿಕೊಂಡವನು. ಮಾಡುತ್ತಿದ್ದ ಸರ್ಕಾರಿ ಕೆಲಸ ಬಿಟ್ಟು ಪತ್ರಕರ್ತನಾದವನು. ಆದ್ದರಿಂದ, ವೃತ್ತಿಯ ಬಗ್ಗೆ ನನಗೆ ಸಾಕಷ್ಟು ಬದ್ಧತೆ, ಆಸಕ್ತಿ ಹಾಗೂ ಪ್ರೀತಿ ಇದೆ. ಹಾಗಂತ ಅದರ ದೋಷಗಳನ್ನು ಸಮರ್ಥಿಸುವುದಿಲ್ಲ. ಸಂಸ್ಥೆಯೊಂದರಲ್ಲಿ ಕೆಲಸ ಮಾಡುವಾಗ, ತೋರಲೇಬೇಕಾದ ಅನಿವಾರ್ಯತೆಗಳನ್ನು ಹೊರತುಪಡಿಸಿ, ಅದನ್ನು ಕಟುವಾಗಿ ಟೀಕಿಸುತ್ತಲೇ ಬಂದಿದ್ದೇನೆ. ಹೀಗಾಗಿ, ಶಶಿಕುಮಾರ ಹೇಳಲು ಹೊರಟಿರುವ ವಿಷಯಗಳ ಬಗ್ಗೆ ಅಧಿಕೃತವಾಗಿ ಪ್ರತಿಕ್ರಿಯೆ ಬರೆಯುವ ಅಧಿಕಾರ ನನಗಿದೆ. ಅದಕ್ಕಿಂತ ಹೆಚ್ಚಾಗಿ, ಬರೆಯಲೇಬೇಕಾದ ಜವಾಬ್ದಾರಿಯೂ ಇದೆ.

ಮಾಧ್ಯಮ ವರ್ತಿಸುತ್ತಿರುವ ರೀತಿಯ ಬಗ್ಗೆ ನನಗೆ ಸಾಕಷ್ಟು ಆಕ್ಷೇಪಣೆಗಳಿವೆ.

ಜನಾಕರ್ಷಣೆಯೇ ಮಾಧ್ಯಮದ ಮುಖ್ಯ ಗುರಿಯಾಗಿರುವುದು ಮೊದಲನೇ ಆಕ್ಷೇಪಣೆ. ಏನಾದರೂ ಸರಿ, ಓದುಗರನ್ನು/ವೀಕ್ಷಕರನ್ನು ಸೆಳೆಯಬೇಕು ಎಂಬುದು ಇವತ್ತಿನ ಮಾಧ್ಯಮದ ಅಲಿಖಿತ ನಿಯಮ. ಬದ್ಧತೆ, ಸಾಮಾಜಿಕ ಜವಾಬ್ದಾರಿ, ವಿವೇಚನೆ ಮುಂತಾದ ವಿಷಯಗಳು ಅಥವಾ ಭಾವನೆಗಳನ್ನು ನನ್ನ ವೃತ್ತಿ ಜೀವನದಲ್ಲಿ ನಾನು ಕಂಡಿದ್ದು ಅತಿ ವಿರಳ ಎಂದೇ ಹೇಳಬಹುದು. ಒಂದು ವಿಷಯವನ್ನು ಹೇಗೆ ಪ್ರಸ್ತುತಪಡಿಸಬೇಕು ಎಂಬುದಕ್ಕಿಂತ, ಹೇಗೆ ಪ್ರಸ್ತುತಪಡಿಸಿದರೆ ಇತರರಿಗಿಂತ ಹೆಚ್ಚು ವೀಕ್ಷಕರು/ಓದುಗರನ್ನು ಅದು ಆಕರ್ಷಿಸುತ್ತದೆ ಎಂಬುದರ ಬಗ್ಗೆ ತಲೆ ಕೆಡಿಸಿಕೊಳ್ಳುವವರೇ ಹೆಚ್ಚು. ಇದೊಂದು ರೋಗದಂತೆ ಮಾಧ್ಯಮ ಕಚೇರಿಗಳನ್ನು ಆವರಿಸಿದ್ದು, ಇಂಥದೇ ರೀತಿಯಲ್ಲಿ ಸುದ್ದಿ ಬರೆಯಿರಿ ಎಂದು ತಮ್ಮ ಆಧೀನ ಪತ್ರಕರ್ತ ಸಹೋದ್ಯೋಗಿಗಳ ಮೇಲೆ ಒತ್ತಡ ಹೇರಲಾಗುತ್ತದೆ. ಪತ್ರಿಕೋದ್ಯಮ ಕೇವಲ ವೃತ್ತಿಯಾಗುತ್ತಿರುವ ಈ ದಿನಗಳಲ್ಲಿ, ಹಿರಿಯ ಪತ್ರಕರ್ತರ ಆಜ್ಞೆಯನ್ನು ಉಲ್ಲಂಘಿಸಲು ಆದೀತೆ? ಒಂದು ವೇಳೆ ಉಲ್ಲಂಘಿಸಿದರೂ, ಅವನು ಬಹುಕಾಲ ಆ ಸಂಸ್ಥೆಯಲ್ಲಿ ಇರಲಾರ. ಇರುವಂತಹ ವಾತಾವರಣವೂ ಅವನ ಪಾಲಿಗೆ ಉಳಿಯುವುದಿಲ್ಲ. ಹಲವಾರು ಪತ್ರಿಕಾ ಕಚೇರಿಗಳಲ್ಲಿ, ಟಿವಿ ಮಾಧ್ಯಮದಲ್ಲಿ ನಾನು ಕೆಲಸ ಮಾಡುವಂತಾಗಲು ಇಂತಹ ಉಲ್ಲಂಘನೆಯೂ ಒಂದು ಮುಖ್ಯ ಕಾರಣ.

ಹೀಗಿರುವಾಗ, ಸುದ್ದಿಯ ಔಚಿತ್ಯ ಹಾಗೂ ಅದನ್ನು ಪ್ರಸ್ತುತಪಡಿಸುವ ಔಚಿತ್ಯದ ಬಗ್ಗೆ ಯಾರು ಯೋಚಿಸಬೇಕು? ಯಾರು ಅದನ್ನು ಸಮದೃಷ್ಟಿಯಿಂದ ಜಾರಿಗೊಳಿಸಬೇಕೋ, ಅವರೇ ರಂಜನೀಯವಾಗಿ ಅದನ್ನು ಬಿಂಬಿಸಲು ಮುಂದಾಗಿರುವಾಗ, ತೀರ ಕೆಳ ಹಂತದಲ್ಲಿರುವ ವಿವೇಚನೆಯುಳ್ಳ ಪತ್ರಕರ್ತ ತನ್ನ ಹೃದಯದ ಮಾತನ್ನು ನಡೆಸಲು ಹೇಗೆ ಸಾಧ್ಯವಾದೀತು?

ಮಾಧ್ಯಮ ಕಚೇರಿಯಲ್ಲಿ ನಿತ್ಯ ಹಲವಾರು ರೀತಿಯ ಸುದ್ದಿಗಳು ಬರುತ್ತಿರುತ್ತವೆ. ಎಲ್ಲವನ್ನೂ ಹೃದಯಕ್ಕೆ ಹತ್ತಿರವಾಗಿ ತೆಗೆದುಕೊಂಡು ವಿಶ್ಲೇಷಿಸುವುದು ಸಾಧ್ಯವಾಗದು. ಅಲ್ಲಿ ಭಾವನೆಗಿಂತ, ಕರ್ತವ್ಯಪ್ರಜ್ಞೆಯೇ ಹೆಚ್ಚು ಕೆಲಸ ಮಾಡಬೇಕಾಗುತ್ತದೆ. ನಿಜ. ಹಾಗಂತ, ನಿರ್ಭಾವುಕರಾಗಿ ಕೆಲಸ ಮಾಡಲಾಗದು. ವೃತ್ತಿ ಪ್ರಜ್ಞೆಯೊಂದಿಗೆ ವಿವೇಚನೆಯಿಂದಲೂ ಕೆಲಸ ಮಾಡುವುದು ನಿಜವಾದ ವೃತ್ತಿಪರತೆ. ಆದರೆ, ನಮ್ಮ ಮಾಧ್ಯಮ ಸಂಸ್ಥೆಗಳಲ್ಲಿ ಆ ಬದ್ಧತೆ ತೀರಾ ವಿರಳವಾಗುತ್ತಿದೆ.

ನಾನೂ ತುಂಬ ಮಾಧ್ಯಮ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದೇನೆ. ಇಂತಹ ಬದ್ಧತೆ ಇಟ್ಟುಕೊಂಡು ಕೆಲಸ ಮಾಡಿದವರನ್ನು ನೋಡಿದ್ದು ಬಲು ಅಪರೂಪ. ಸಮದೃಷ್ಟಿ ಇರುವ ಹಿರಿಯ ಪತ್ರಕರ್ತರು ಸಾಕಷ್ಟಿದ್ದರೂ, ಮ್ಯಾನೇಜ್‌ಮೆಂಟ್‌ನ ಒತ್ತಡಗಳಿಗೆ ಸಿಲುಕಿ ಅವರ ಸಮದೃಷ್ಟಿ ಹೊರಟುಹೋಗಿದೆ. ಅವರಿಂದ ಉತ್ತಮ ಪ್ರತಿಕ್ರಿಯೆ ನಿರೀಕ್ಷಿಸಲು ಆಗದು.

ಇದಕ್ಕೆ ಪರಿಹಾರ ಎಂದರೆ, ನಮ್ಮ ನಮ್ಮ ಮಿತಿಯಲ್ಲಿ ಸುದ್ದಿಯನ್ನು ರಂಜನೀಯ ಮಾಡಲು ಹೋಗದಿರುವುದು. ಅದನ್ನು ನಾನು ವೃತ್ತಿ ಜೀವನದುದ್ದಕ್ಕೂ ಪಾಲಿಸುತ್ತ ಬಂದಿದ್ದೇನೆ. ಅದಕ್ಕಾಗಿ ಕೆಲ ಬಾರಿ ನೌಕರಿಯನ್ನೂ ಕಳೆದುಕೊಂಡಿದ್ದೇನೆ. ಆದರೂ, ನನ್ನ ಮಿತಿಯಲ್ಲಿ ಅದನ್ನು ಪಾಲಿಸುವಲ್ಲಿ ಹಿಂದೇಟು ಹಾಕಿಲ್ಲ. ಬಹಳಷ್ಟು ಸಾರಿ, ಅಂತಹ ವಿವೇಚನೆಯುಳ್ಳ ಬರವಣಿಗೆಗಾಗಿ ಹಿರಿಯ ಸಹೋದ್ಯೋಗಿಗಳಿಂದ ಬೈಸಿಕೊಂಡಾಗಿದೆ. ಬರೆದಿದ್ದನ್ನು ರಂಜನೀಯವಾಗುವಂತೆ ತಿದ್ದಿಕೊಡುವ ಅನಿವಾರ್ಯತೆಗೂ ಸಿಲುಕಿದ್ದಾಗಿದೆ. ಆದರೂ, ಮೊದಲ ಬರವಣಿಗೆ ರಂಜನೀಯವಾಗದಂತೆ ನೋಡಿಕೊಳ್ಳುವ ಪ್ರಯತ್ನ ಮಾತ್ರ ಬಿಟ್ಟಿಲ್ಲ.

ಶಶಿಕುಮಾರ್‌ ಬರೆದಂತೆ, ಮಾಧ್ಯಮಗಳು ಸುದ್ದಿಸೂಳೆಯ ಬೆನ್ನತ್ತಿ ಹೊರಟಿವೆ. ಅದರಲ್ಲಿ ಎರಡು ಮಾತಿಲ್ಲ. ಆದರೆ, ಹಾಗೆ ಬೆನ್ನು ಹತ್ತುವ ಭರದಲ್ಲಿ ಅವು ಎಲ್ಲರನ್ನೂ ಸೂಳೆಯರು ಎಂಬಂತೆ ನೋಡುತ್ತಿರುವುದು ನಿಜಕ್ಕೂ ಅಪಾಯಕಾರಿ. ಕಂಡ ಪ್ರತಿಯೊಂದು ಹೆಣ್ಣೂ ಬೆಲೆವೆಣ್ಣು ಇರಬಹುದೆ ಎಂಬ ಅನುಮಾನ ಖಂಡಿತ ಆರೋಗ್ಯಕರವಲ್ಲ. ಇದು ಇಡೀ ಸಮಾಜವನ್ನು ಹಾದಿ ತಪ್ಪಿಸುವ ಬೆಳವಣಿಗೆ. ಇದಕ್ಕೆ ಬೇಕಾದಷ್ಟು ಕಾರಣಗಳಿರಬಹುದು, ಬೇಕಾದಷ್ಟು ಅನಿವಾರ್ಯತೆಗಳಿರಬಹುದು. ಆದರೆ, ಅವ್ಯಾವೂ ಈ ದೃಷ್ಟಿಕೋನಕ್ಕೆ ಸಮರ್ಥನೆಗಳಲ್ಲ ಹಾಗೂ ಅಂತಹ ವಿವರಣೆಯನ್ನು ಒಪ್ಪುವುದು ಸಾಧ್ಯವೂ ಇಲ್ಲ.

ದುರಂತವೆಂದರೆ, ರಂಜನೀಯ ಸುದ್ದಿಗಳನ್ನು ಕೊಡದ ಮಾಧ್ಯಮಗಳು ವೀಕ್ಷಕರನ್ನು ಸೆಳೆಯುವಲ್ಲಿ, ಓದುಗರನ್ನು ಆಕರ್ಷಿಸುವಲ್ಲಿ ಹಿಂದೆ ಬೀಳುತ್ತಿವೆ. ಮಾಧ್ಯಮ ಕೂಡಾ ಒಂದು ವೃತ್ತಿ. ಅಲ್ಲಿ ಹಣ ಹಾಕಿ ಹಣ ಗಳಿಸಬೇಕಿದೆ. ಹೀಗಾಗಿ, ಹೆಚ್ಚು ಲಾಭ ಬರುವ ಸರಕನ್ನು ಮಾರಲು ಮಾಧ್ಯಮ ಸಂಸ್ಥೆಗಳು ಯತ್ನಿಸುತ್ತಿವೆ. ಇದು ತಪ್ಪಬೇಕೆಂದರೆ, ಓದುಗರಲ್ಲಿ ಹೆಚ್ಚಿನ ಜಾಗೃತಿ ಮೂಡಬೇಕು. ಜೊತೆಜೊತೆಗೆ ಮಾಧ್ಯಮಗಳಿಗೂ ಒಂದು ಮಟ್ಟದ ಅಂಕುಶ ಬೇಕೇಬೇಕು. ಎರಡೂ ಕಡೆಯಿಂದ ಈ ಕ್ರಿಯೆ ನಡೆದಾಗ ಮಾತ್ರ, ಮಾಧ್ಯಮ ಕೊಂಚ ಜವಾಬ್ದಾರಿ ಕಲಿಯಲು ಸಾಧ್ಯ. ಇಲ್ಲದಿದ್ದರೆ, ಬಲುಬೇಗ ಇಡೀ ಸಮಾಜದ ಸ್ವಾಸ್ಥ್ಯ ಕೆಟ್ಟುಹೋಗುತ್ತದೆ.

ಒಂದಂತೂ ನಿಜ. ಸಮಾಜದಲ್ಲಿ ಏನು ನಡೆಯುತ್ತಿದೆಯೋ, ಮಾಧ್ಯಮದಲ್ಲಿ ಅದೇ ಬರುತ್ತದೆ. ಸಮಾಜಕ್ಕೆ ಹೊರತಾದ ಯಾವುದನ್ನೂ ಮಾಧ್ಯಮ ನೀಡಲು ಹೋಗುವುದಿಲ್ಲ. ಸಮಾಜದಲ್ಲಿರುವ ಅನಾಚಾರ, ಕೊಳಕು, ದುಷ್ಟತನದ ಚಿತ್ರಣವೇ ಮಾಧ್ಯಮದಲ್ಲಿಯೂ ಕಾಣುತ್ತಿದೆ. ಆದರೆ, ಕೇವಲ ಈ ಚಿತ್ರಣ ಮಾತ್ರ ಕಾಣುವಂತಾಗಿರುವುದು ಅಪಾಯಕಾರಿ. ಈ ಕೊಳಚೆಯ ಹೊರತಾಗಿಯೂ ಸಮಾಜದಲ್ಲಿ ಉತ್ತಮವಾದ ವಿಷಯಗಳು ಬೇಕಾದಷ್ಟಿವೆ. ಅವನ್ನು ಪ್ರಸ್ತುತಪಡಿಸುವ ಜವಾಬ್ದಾರಿಯನ್ನು ಮಾಧ್ಯಮ ಬೆಳೆಸಿಕೊಳ್ಳಬೇಕು. ಅದೇ ರೀತಿ, ಅಂತಹ ವಿಷಯಗಳನ್ನು ಆಸ್ವಾದಿಸುವ ಅಭಿರುಚಿಯನ್ನು ಓದುಗ/ವೀಕ್ಷಕರೂ ಬೆಳೆಸಿಕೊಳ್ಳಬೇಕಿದೆ.

ಇಷ್ಟೆಲ್ಲ ಹೇಳಿದ ನಂತರವೂ, ಮಾಧ್ಯಮ ಇವತ್ತು ತುಳಿಯುತ್ತಿರುವ ಹಾದಿ ಸರಿಯಲ್ಲ ಎಂದು ಮತ್ತೆ ಒಪ್ಪಿಕೊಳ್ಳುತ್ತೇನೆ. ಇದಕ್ಕೊಂದು ಅಂಕುಶ ಇರಲಿ. ಸ್ವಯಂ ಸಂಯಮ ಸಾಧ್ಯವಿಲ್ಲ ಎಂಬುದು ಈಗಾಗಲೇ ಸಾಬೀತಾಗಿರುವುದರಿಂದ, ಕಾನೂನು ಅಂಕುಶ ಸ್ವಲ್ಪಮಟ್ಟಿಗೆ ಕೆಲಸ ಮಾಡಬಲ್ಲುದು. ಆದರೆ, ಸರ್ಕಾರಿ ಅಂಕುಶ ಅಭಿವ್ಯಕ್ತಿ ಸ್ವಾತಂತ್ರವನ್ನು ಕಿತ್ತುಕೊಳ್ಳದಿರಲಿ. ಗಾಳಿಪಟದ ಸೂತ್ರದಂತೆ, ಪಟವನ್ನು ಹಿಡಿದಿಟ್ಟಿರಲಿ. ಆದರೆ, ಅದರ ಹಾರಾಟಕ್ಕೆ ಧಕ್ಕೆ ತಾರದಿರಲಿ.

ಬಹುಶಃ ಶಶಿಕುಮಾರ್‌ ಹಾಗೂ ಅವರಂಥ ಸಾವಿರಾರು ಮಿತ್ರರ, ಸಹೃದಯಿ ಓದುಗ/ವೀಕ್ಷಕರ ಬಯಕೆಯೂ ಇದೇ ಇರಬಹುದು.
- ಚಾಮರಾಜ ಸವಡಿ

ಮತ್ತದೇ ಖಾಲಿತನ, ಬೇಸರ

7 Aug 2008

6 ಪ್ರತಿಕ್ರಿಯೆ


ಹಾಡುಗಳ ಸಿಡಿ ಇಟ್ಟಲ್ಲೇ ಇದೆ. ಒಂದೇ ಕ್ಲಿಕ್ಕಿಗೆ ಕಿಶೋರ್‌ ಹಾಡತೊಡಗುತ್ತಾನೆ. ಆದರೆ ಬೆರಳುಗಳು ಚಲಿಸುವುದಿಲ್ಲ.

ಕೈ ಚಾಚಿದರೆ ಕಗ್ಗ ಸಿಗುತ್ತದೆ. ಡಿವಿಜಿ ವೇದಾಂತ ಹೇಳುತ್ತಾರೆ. ಡಾಮ್ನಿಕ್‌ ಲ್ಯಾಪಿಯರ್‌ ಚೆಂದಗೆ ಕತೆ ಹೇಳುತ್ತಾನೆ. ತರುಣ್‌ ತೇಜ್‌ಪಾಲ್‌ ಇದ್ದಕ್ಕಿದ್ದಂತೆ ಖಾಲಿಯಾದ ಸ್ಥಿತಿ ವರ್ಣಿಸುತ್ತಾನೆ. ಭೈರಪ್ಪನವರು ಸಾರ್ಥ ಹೊರಡುತ್ತಾರೆ. ತಾವು ಖಾಲಿಯಾಗಿದ್ದೇವೆ ಎಂಬುದನ್ನು ಅನಂತಮೂರ್ತಿ ಋಜುವಾತು ಮಾಡುತ್ತಾರೆ. ಆದರೂ ಕೈ ಚಾಚುವುದಿಲ್ಲ.

ಜೇಬಲ್ಲೇ ಇದೆ ಕೀಲಿ. ಬೆರಳೊತ್ತಿದರೆ ಸ್ಕೂಟಿ ಶುರುವಾಗುತ್ತದೆ. ಎಂಟೂ ದಿಕ್ಕುಗಳಿಗೆ ಯಾತ್ರೆ ಹೊರಡಬಲ್ಲುದು. ಆದರೂ ಕೈ ಸುಮ್ಮನಿದೆ.


ಎರಡೇ ಬಟನ್ನಿಗೆ ಮೆಚ್ಚಿನ ಚಾನೆಲ್‌ ಪ್ರತ್ಯಕ್ಷವಾಗುತ್ತದೆ. ಗಂಟೆ ಒಂಬತ್ತಾಯಿತೆ? ಪ್ರೈಮ್‌ ನ್ಯೂಸ್‌ ಬರುತ್ತಿರುತ್ತವೆ. ಏಕೋ ಸುದ್ದಿಗಳು ಬೇಸರ ಹುಟ್ಟಿಸುತ್ತವೆ. ರಿಮೋಟ್‌ ಅಲ್ಲೇ ಕೂತಿದೆ. ಆಜ್ಞೆಗಾಗಿ ಕಾಯುವ ಸಾಕುನಾಯಿಯಂತೆ.


ಯಾವಾಗ ಬೇಕಾದರೂ ಮೊಳಗಬಲ್ಲ ಮೊಬೈಲ್‌ ಪಕ್ಕಕ್ಕಿದೆ, ಥೇಟ್‌ ಸಿಡಿಯಲು ಸಿದ್ಧವಾದ ಬಾಂಬ್‌ನಂತೆ. ಬೆರಳೊತ್ತಿದರೆ ಇಷ್ಟಪಡುವ ಹಲವಾರು ಮಿತ್ರರು ಅಂಕೆಗಳಾಗಿ ಕಾಯುತ್ತಿದ್ದಾರೆ. ಆದರೂ ಕೈ ಅತ್ತ ಸರಿಯುತ್ತಿಲ್ಲ.


ಹಳೆಯ ಫೊಟೊಗಳ ಆಲ್ಬಮ್ಮುಗಳಿವೆ. ಅಚ್ಚಾದ ರಾಶಿರಾಶಿ ಪತ್ರಿಕೆಗಳಿವೆ. ಅಚ್ಚಿಗೆ ಕೊಡದೇ ಹಾಗೇ ಇಟ್ಟುಕೊಂಡ ನೂರಾರು ಬರಹಗಳಿವೆ. ಕಣ್ಣು ಮುಚ್ಚಿದರೆ ಮನಸ್ಸು ಮೂವತ್ತು ವರ್ಷ ಹಿಂದಕ್ಕೂ ಹೋಗಬಲ್ಲುದು. ಎಳೆಎಳೆಯನ್ನೂ ಹೆಕ್ಕಿ ನೆನಪಿನ ಚಾದರ ನೇಯಬಲ್ಲುದು. ಯಾವುದೋ ಎಳೆ ಹಿಡಿದೆಳೆದರೆ ಹಾಡಾಗುತ್ತದೆ, ಪ್ರಬಂಧವಾಗುತ್ತದೆ, ಕತೆಯಾಗುತ್ತದೆ, ಕೊಂಚ ಶ್ರದ್ಧೆಯಿಂದ ಕೂತರೆ ಕವಿತೆಯೂ ಆಗುತ್ತದೆ. ಆದರೂ ಮನಸ್ಸು ಸುಮ್ಮನಿದೆ.


ಕಿಟಕಿಯಾಚೆಯ ಬಾಳೆ ಗಿಡವೂ ಸುಮ್ಮನಿದೆ. ಜೊತೆಗಿದ್ದು ನೆಮ್ಮದಿ ನೀಡುತ್ತಿದ್ದ ಪೆನ್ನೂ ಸುಮ್ಮನಿದೆ. ರಿಮೋಟ್‌ ಸುಮ್ಮನಿದೆ. ಗಾಡಿಯ ಇಗ್ನಿಷನ್‌ ಕೀ ಸುಮ್ಮನಿದೆ. ಮೊಬೈಲ್‌ ಅನ್ನು ನಾನೇ ಸುಮ್ಮನಾಗಿಸಿದ್ದೇನೆ. ಏಕೋ ಗದ್ದಲ ಮಾಡುವ ಮಕ್ಕಳೂ ಮಲಗಿದ್ದಾರೆ. ಮತ್ತೇನು ವಿಶೇಷ ಎನ್ನುವ ಮಡದಿಯೂ ಮಲಗಿದ್ದಾಳೆ. ಏನೂ ವಿಶೇಷ ಇಲ್ಲವೆನ್ನುವಂತೆ ಬೆಂಗಳೂರಿನ ಗದ್ದಲದ ಟ್ರಾಫಿಕ್ಕೂ ಮೌನವಾಗಿದೆ.


ಬೀಟ್‌ ಪೋಲೀಸನ ಸಿಳ್ಳೆಯೂ ಕೇಳುತ್ತಿಲ್ಲ. ಸಂಗಾತಿಗಾಗಿ ಬೊಗಳುವ ನಾಯಿಯೂ ಸುಮ್ಮನಿದೆ. ಇಷ್ಟೊತ್ತಿಗೆ ಹೋಗಬೇಕಿದ್ದ ಕರೆಂಟ್‌ ಕೂಡ ಏತಕ್ಕೋ ಕಾಯುವಂತೆ ಬೆಳಗುತ್ತಲೇ ಇದೆ. ಮೋಡ ಚೆದುರಿ ಅಚ್ಚರಿಯಿಂದ ಚಂದ್ರ ಕೂಡ ಹೊರಬಂದಿದ್ದಾನೆ.


ಮರೆಯದೇ ಗೇಟ್‌ ಬೀಗ ಹಾಕಿದ್ದೇನೆ. ಗಾಡಿ ಲಾಕ್‌ ಮಾಡಿದ್ದೇನೆ. ಚಾರ್ಜಿಂಗ್‌ ದೀಪಗಳನ್ನು ಪ್ಲಗ್ಗಿಗೆ ಸಿಕ್ಕಿಸಿದ್ದೇನೆ. ಬಾಗಿಲುಗಳನ್ನು ಭದ್ರವಾಗಿ ಮುಚ್ಚಿದ್ದೇನೆ. ನಿನ್ನೆಯ ಕೆಲಸಗಳು ಕರಾರುವಾಕ್ಕಾಗಿ ಮುಗಿದಿವೆ. ನಾಳೆ ಏನು ಮಾಡಬೇಕೆಂಬುದು ಇಂದೇ ಸ್ಪಷ್ಟವಾಗಿದೆ.


ಇವತ್ತು ಮಾಡುವುದು ಏನು?


ಮತ್ತದೇ ಬೇಸರ, ಖಾಲಿತನ, ಏಕಾಂತ !

- ಚಾಮರಾಜ ಸವಡಿ

ಕಿಟಕಿಯಾಚೆಯ ಚಿತ್ರ

0 ಪ್ರತಿಕ್ರಿಯೆ
ಸಣ್ಣಗೇ ಮಳೆ ಸುರಿಯುತ್ತಿದೆ.

ಕಂಪ್ಯೂಟರ್‌ ಇಟ್ಟಿರುವ ಕೋಣೆಯ ಕಿಟಕಿಯಾಚೆ, ಮಳೆ ಪಟ ಪಟ ಎಂದು ಬಾಳೆ ಎಲೆ ಮೇಲೆ ಬೀಳುವುದು ಕಾಣುತ್ತಿದೆ. ಪಕ್ಕದ ಕಟ್ಟಡದಲ್ಲಿರುವ ಅವಿವಾಹಿತ ಹುಡುಗರು ಯಾವಾಗಲೋ ನೆಟ್ಟಿದ್ದು. ಎಲೆ ಅಗಲಿಸಿ ಬೆಳೆಯುತ್ತಿದೆ. ಅದರ ನೆರಳಡಿ ಪುಟ್ಟ ಬಾವಿ. ಸಿಮೆಂಟ್‌ ರಿಂಗ್‌ಗಳನ್ನು ಪೇರಿಸಿ ಕಟ್ಟಿರುವ ನಗರದ ಬಾವಿ. ಅದಕ್ಕೊಂದು ಜಾಲರಿಯುಳ್ಳ ಮುಚ್ಚಳ. ಆಗೀಗ ಮುಚ್ಚಳ ತೆರೆದು, ಹಗ್ಗ ಇಳಿಬಿಟ್ಟು ನೀರೆತ್ತುತ್ತಾರೆ ಹುಡುಗರು. ಅವರು ಬಳಸಿದ ನೀರನ್ನು ಹೀರಿಕೊಂಡು ಬೆಳೆಯುತ್ತಿದೆ ಬಾಳೆ.


ಮಳೆ ಬೀಳುತ್ತಿರುವುದರಿಂದ ಹುಡುಗರಾರೂ ಕಾಣುತ್ತಿಲ್ಲ. ಬಾವಿಯ ಜಾಲರಿ ಬಾಗಿಲು ಮುಚ್ಚಿಕೊಂಡಿದೆ. ಬಾಳೆ ಗಿಡದ ಹಿಂದೆ ಮಳೆಯ ಮಂಕಿನಲ್ಲಿ ನಿಂತ ಎರಡಂತಸ್ತಿನ ಮನೆಗಳು. ಅದರಾಚೆ ಕಪ್ಪುಗಟ್ಟಿರುವ ಮೋಡ. ಮಧ್ಯಾಹ್ನದವರೆಗೆ ಬಿಸಿಲು ಚೆನ್ನಾಗಿತ್ತು. ಇದ್ದಕ್ಕಿದ್ದಂತೆ ಮೋಡಗಳು ಧಾವಿಸಿ ಬಂದವು. ನೋಡನೋಡುತ್ತಲೇ ಸಣ್ಣಗೆ ಶುರುವಾದ ಮಳೆ ಬಿಟ್ಟೇ ಇಲ್ಲ.

ಈಗ ಕಿಟಕಿಯಾಚೆಯ ಚಿತ್ರಣ ಪೂರ್ತಿ ಬದಲಾಗಿದೆ. ಬಿಸಿಲಿನಲ್ಲಿ ಮಂಕಾದಂತೆ ಕಾಣುತ್ತಿದ್ದ ಬಾಳೆಯ ಎಲೆಗಳಲ್ಲಿ ಈಗ ಹಸಿರಿನ ಹೊಸ ರಂಗು. ಎಲೆಗಳ ಮೇಲೆ ಮಳೆಯ ಮುತ್ತಿನ ಹನಿಗಳು. ತುಸು ಗಾಳಿ ಬೀಸಿದರೂ ಮುತ್ತುಗಳು ಉದುರುತ್ತವೆ. ಹೊಸ ಮುತ್ತುಗಳು ಬಂದು ಸೇರುತ್ತವೆ. ಬಾವಿಯ ಜಾಲರಿ ಮೇಲೆ ಬೀಳುವ ಹನಿಗಳು ಒಡೆದು ಅಲ್ಲೊಂದು ವಿಸ್ಮಯ ಲೋಕ ಸೃಷ್ಟಿಯಾಗಿದೆ.

ಕ್ರಮೇಣ ಮೋಡಗಳು ಚೆದುರಿದವು. ಬೆಳಕು ತೂರಿ ಬಂತು. ಬಾಳೆಗಿಡ ಮೊದಲಿಗಿಂತ ಹೆಚ್ಚು ಸ್ಪಷ್ಟವಾಗಿ ನಳನಳಿಸಿತು. ಅದರ ಎಲೆಗಳಲ್ಲೀಗ ಸಮಾಗಮದ ನಂತರದ ಹೆಣ್ಣಿನ ಸೊಗಸು. ಮಳೆಯಲ್ಲಿ ಮಿಂದು ಬಾವಿಯ ಜಾಲರಿ ಸ್ವಚ್ಛವಾಗಿದೆ. ಕಿಟಕಿಯಾಚೆಗಿನ ಚಿತ್ರ ಈಗ ಮೊದಲಿಗಿಂತ ಸ್ಪಷ್ಟ, ಸ್ಫುಟ.

ಇಡೀ ಕಿಟಕಿಯ ಚೌಕಟ್ಟೇ ಚಿತ್ರವೊಂದರ ಚೌಕಟ್ಟಿನಂತಾಗಿ, ಆಚೆಯ ದೃಶ್ಯಗಳು ಚಿತ್ರವಾಗಿವೆ. ಯಾರು ಬಿಡಿಸಿದರು ಇದನ್ನು? ಮಳೆಯೆ, ಮೋಡವೆ, ನೆಟ್ಟ ಬಾಳೆ ಗಿಡವೇ, ತಿಳಿ ಸಂಜೆಯ ಮುಂಚಿನ ರಂಗೇ? ಎಲ್ಲ ಕೈ ಜೋಡಿಸಿ ಬಿಡಿಸಿದ ಚಿತ್ರಕ್ಕೆ ಕೋಣೆಯ ಕಿಟಕಿಯ ಚೌಕಟ್ಟು. ಅದರ ಹಿಂದೆ ನಾನು. ಹಣ ನೀಡದ, ಹಣ ನೀಡಿದರೂ ಸಿಗದ ಅಪೂರ್ವ ಚಿತ್ರವೊಂದನ್ನು ನೋಡುತ್ತ ನೋಡುತ್ತ ಅದರಲ್ಲೇ ಮುಳುಗಿಹೋದೆ.

ಥ್ಯಾಂಕ್ಸ್‌ ಬದುಕೇ. ಪಕ್ಕದ ಮನೆಯಲ್ಲಿ ಒಂದಿಷ್ಟು ಜಾಗ ಉಳಿಸಿದ್ದಕ್ಕೆ, ಅಲ್ಲಿ ನೆಲೆಸಲು ಬಂದ ಹುಡುಗರಲ್ಲಿ ವೃಕ್ಷಪ್ರೀತಿ ಹುಟ್ಟಿಸಿದ್ದಕ್ಕೆ, ಆವರಣದಲ್ಲೊಂದು ಬಾವಿ ತೋಡಿಸಿದ್ದಕ್ಕೆ, ಮಧ್ಯಾಹ್ನ ಬಂದ ಅಕಾಲಿಕ ಮಳೆಗೆ, ನೆರಳು-ಬೆಳಕಿನಾಟ ಆಡಿದ ಸೂರ್ಯನಿಗೆ, ನಾನಿರುವ ಮನೆಯ ಕಿಟಕಿಗೆ,

ಹಾಗೂ ಅದರ ಮೂಲಕ ಅಪೂರ್ವ ಚಿತ್ರಣ ನೋಡಬಲ್ಲ ಮನಃಸ್ಥಿತಿಯನ್ನು ನನ್ನಲ್ಲಿ ಉಳಿಸಿದ್ದಕ್ಕೆ.

- ಚಾಮರಾಜ ಸವಡಿ

ಮುಚ್ಚಳವಿಲ್ಲದ ಪೆನ್ನು

2 Aug 2008

2 ಪ್ರತಿಕ್ರಿಯೆ
ತುಂಬ ದಿನವಾಗಿತ್ತು ಪೆನ್ನು ಹೊರ ತೆಗೆದು ಬರೆಯಲು ಕೂತು.

ಹಳೆಯ ಪೆನ್ನು. ಅಂದರೆ, ಬಳಸದೇ ತುಂಬ ದಿನವಾಗಿತ್ತು. ಮಸಿ ಒಣಗಿದೆಯೇ ಎಂಬ ಅನುಮಾನ ಕಾಡಿದರೂ, ಪಕ್ಕದಲ್ಲೇ ಇದ್ದ ಪತ್ರಿಕೆಯೊಂದರ ಜಾಹೀರಾತಿನ ಮೇಲೆ ಗೀಚಿ ನೋಡಿದೆ. ಮೊದಲೊಂದಿಷ್ಟು ಉದ್ದ ಮಸಿ ಕಾರದೇ ಎಳೆದುಕೊಂಡು ಹೋದ ಪೆನ್ನು, ನಂತರ ಚೆಂದನೆಯ ಡೊಂಕು ಗೆರೆ ಕೊರೆಯಿತು. ಪರವಾಗಿಲ್ಲ, ಬದುಕಿದೆ ಎಂದು ಪೆನ್ನನ್ನು ಕೈಲಿ ಹಿಡಿದುಕೊಂಡು ಬರೆಯಲೆಂದೇ ತಂದುಕೊಂಡಿದ್ದ ಎ-೪ ಗಾತ್ರದ ಸುರುಳಿ ಕಟ್ಟಿನ ಹಾಳೆ ಪುಸ್ತಕ ತೆರೆದೆ.

ಮನಸ್ಸು ಅರೆಕ್ಷಣ ಎಲ್ಲೋ ಸಿಕ್ಕಿ ಹಾಕಿಕೊಂಡಿತು.

ತುಂಬ ದಿನಗಳ ಹಿಂದೆ, ಅಂದರೆ, ಪತ್ರಿಕಾ ಕಚೇರಿಯಲ್ಲಿ ಕೈಬರಹದ ಬರವಣಿಗೆ ನಿಷೇಧಿಸುವುದಕ್ಕೆ ಮುಂಚೆ, ನಿತ್ಯ ಹೀಗೇ ಬರೆಯುತ್ತಿದ್ದೆ. ಆಗ ಪೆನ್ನೆತ್ತಿಕೊಂಡರೆ ವರದಿಗಳು ಸರಾಗವಾಗಿ ಹರಿಯುತ್ತಿದ್ದವು. ಬರೆದಿದ್ದನ್ನು ಓದಿ, ಒಂದಿಷ್ಟು ಕಾಗುಣಿತ ತಪ್ಪುಗಳನ್ನು ಅಲ್ಲೇ ತಿದ್ದಿ, ಫೋಟೊಗಳ ಹಿಂದೆ ವಿವರ ಹಾಗೂ ವರದಿ ಶೀರ್ಷಿಕೆ ಬರೆದು, ಕ್ಲಿಪ್‌ನಲ್ಲಿ ಬಂಧಿಸಿ, ಲಕೋಟೆಯಲ್ಲಿಟ್ಟು ಬಸ್‌ ಡ್ರೈವರ್‌ ಮೂಲಕ ಕಳಿಸುತ್ತಿದ್ದೆ. ಮರುದಿನ ಬೆಳಗಿನ ನಿದ್ದೆಗಣ್ಣಲ್ಲಿ ಬಾಗಿಲ ಮುಂದೆ ಬಿದ್ದ ಪತ್ರಿಕೆ ಎತ್ತಿಕೊಂಡಾಗ, ನಿನ್ನೆಯ ಕೈಬರಹ ವರದಿ ಅಚ್ಚುಕಟ್ಟಾಗಿ ಅಚ್ಚಾಗಿ ಬಂದಿರುತ್ತಿತ್ತು. ಓಹ್‌, ನಿದ್ದೆಗಣ್ಣಿನಲ್ಲಿಯೂ ಅಪಾರ ಸಂತಸ.

ಅದಾದ ನಂತರ, ಬದುಕು ಊರುಗಳನ್ನು ಸುತ್ತಿಸಿತು. ಹಲವಾರು ಪತ್ರಿಕಾ ಕಚೇರಿಗಳ ಮೆಟ್ಟಿಲೇರಿ ಇಳಿಸಿತು. ಆದರೆ, ಪೆನ್ನು ಯಾವತ್ತೂ ಜೇಬಿನಿಂದ ಕದಲಿರಲಿಲ್ಲ. ಇದೇ ಪೆನ್ನಿನ ಮೂಲಕ ಕೆಲಸಕ್ಕೆ ಅರ್ಜಿ ಬರೆದಿದ್ದೆ. ನೌಕರಿ ದಕ್ಕಿದ್ದಕ್ಕೆ ಧನ್ಯವಾದ ಬರೆದಿದ್ದೆ. ಮುಂದೆ ವರ್ಷಗಟ್ಟಲೇ ವರದಿ/ಲೇಖನಗಳನ್ನು ಬರೆದೆ. ರಾಜೀನಾಮೆಗಳನ್ನೂ ಬರೆದಿದ್ದೇನೆ. ಎಷ್ಟೊಂದು ಬರೆದರೂ ಪೆನ್ನು ಎಂದೂ ಬಸವಳಿಯಲಿಲ್ಲ.

ಆದರೆ, ಕಂಪ್ಯೂಟರ್‌ ಎಂಬ ಯಂತ್ರ ಬಂದ ಕೂಡಲೇ ಅದರ ಮಸಿಯೇ ಆರಿದಂತಾಯಿತು.

’ಮುಂದಿನ ತಿಂಗಳ ಒಂದನೇ ತಾರೀಖಿನಿಂದ, ಫ್ಯಾಕ್ಸ್‌ ಅಥವಾ ಕೊರಿಯರ್‌ ಮೂಲಕ ಕಳಿಸುವ ಕೈಬರಹದ ವರದಿಗಳನ್ನು ಅಚ್ಚು ಹಾಕುವುದಿಲ್ಲ. ಏನಿದ್ದರೂ ಕಂಪ್ಯೂಟರ್‌ನಲ್ಲೇ ಟೈಪ್‌ ಮಾಡಿ ಮೋಡೆಮ್‌ ಮೂಲಕ ಕಳಿಸಬೇಕು’ ಎಂಬ ಪತ್ರ ಸಂಪಾದಕರಿಂದ ಬಂದಾಗ, ನನಗಿಂತ ಪೆನ್ನಿಗೇ ಹೆಚ್ಚು ಬೇಸರವಾಗಿತ್ತು. ಮೊದಲ ಬಾರಿ ಕಂಪ್ಯೂಟರ್‌ ಮುಂದೆ ಕೂತು, ಕೀಲಿಮಣೆಗಳನ್ನು ತೊಡರುತ್ತ ಒತ್ತುವಾಗ, ಪೆನ್ನು ಅಪನಂಬಿಕೆಯಿಂದ ನೋಡಿತ್ತು.

ಮೊದಮೊದಲು ತುಂಬ ಬೇಸರವಾಗಿತ್ತು. ಆದರೆ, ದಿನಗಳು ಬಲುಬೇಗ ಬದಲಾದವು. ನೋಟ್ಸ್‌ ತೆಗೆದುಕೊಳ್ಳುವಾಗ ಹೊರತುಪಡಿಸಿ, ಇತರ ಸಮಯದಲ್ಲಿ ಜೇಬಿನಿಂದ ಇಳಿಯುವ ಅವಕಾಶ ಪೆನ್ನಿಗೆ ಬರಲೇ ಇಲ್ಲ. ಮೊದಮೊದಲು ಕಾಡಿದ್ದ ಹಳಹಳಿ ನಂತರ ರೂಢಿಯಾಯಿತು. ಕೀಬೋರ್ಡ್‌ ಸರಾಗವಾಯಿತು. ಮನಸ್ಸಿನಲ್ಲಿ ವಿಚಾರಗಳು ಮೂಡುವ ವೇಗದಲ್ಲೇ ಬೆರಳುಗಳೂ ಕೀಬೋರ್ಡ್‌ ಮೇಲೆ ಹರಿದಾಡುವುದು ರೂಢಿಯಾಗಿ, ಪೆನ್ನು ಕೇವಲ ಅಲಂಕಾರಿಕ ವಸ್ತುವಾಗಿಬಿಟ್ಟಿತು.

ಆದರೂ, ಅದರ ಸಂಗ ತೊರೆಯಲಿಲ್ಲ.

ಅದು ಜೇಬಿನಲ್ಲಿದ್ದರೆ ಎಂಥದೋ ನೆಮ್ಮದಿ. ತುಂಬ ಬೇಸರವಾದಾಗ, ಅದನ್ನು ಕೈಗೆ ತೆಗೆದುಕೊಂಡು, ಕ್ಯಾಪ್‌ ತೆರೆದು, ಬೆರಳುಗಳ ನಡುವೆ ತಿರುಗಿಸುತ್ತ ಕೂತರೆ ಎಂಥದೋ ಸಮಾಧಾನ. ವಿಚಾರಗಳು ತಾನೇ ತಾನಾಗಿ ಬರುತ್ತವೆ. ಹೊಸ ವಿಚಾರಗಳು ಮೂಡುತ್ತವೆ. ಬರೆಯಬೇಕೆಂದುಕೊಂಡಿದ್ದು ಕೈಬೆರಳಿನ ಮೂಲಕ ಇಳಿದು, ಇನ್ನೇನು ಪೆನ್ನಿನ ಮೂಲಕ ಮಸಿಯಾಗಿ ಹರಿದು ಅಕ್ಷರಗಳಾಗಿಬಿಡುತ್ತವೆ ಎನ್ನುವಂತೆ ಉಕ್ಕುತ್ತವೆ. ಆದರೆ, ಭಾವನೆ ಉಕ್ಕುತ್ತಲೇ ಪೆನ್ನು ಪಕ್ಕಕ್ಕಿಟ್ಟ ಕೈಗಳು ಕಂಪ್ಯೂಟರ್‌ ಕೀಬೋರ್ಡ್‌‌ನ ಮೇಲೆ ಹರಿದಾಡುತ್ತವೆ. ಪೆನ್ನು ಅಸಹಾಯಕತೆಯಿಂದ, ಅವಮಾನದಿಂದ ನೋಡುತ್ತಿರುವಂತೆ, ಚೆಂದನೆಯ ಅಕ್ಷರಗಳು ಮಾನಿಟರ್‌ ಮೇಲೆ ಮೂಡತೊಡಗುತ್ತವೆ. ಕ್ಯಾಪ್‌ ಇಲ್ಲದ ಬೋಳು ಪೆನ್ನನ್ನು ನಾನೂ ಮರೆತುಬಿಡುತ್ತೇನೆ.

ವರ್ಷಗಟ್ಟಲೇ ಇದು ನಡೆದುಕೊಂಡು ಬಂದಿತ್ತು.

ಇವತ್ತು ಏಕೋ ಮನಸ್ಸು ಖಾಲಿ ಖಾಲಿ. ವೀಕ್‌ ಆಫ್‌ ಇದ್ದುದರಿಂದ, ನಿತ್ಯದ ವೃತ್ತಿ ವಾತಾವರಣ ಇಲ್ಲದೇ ಬೇಸರವಾಗಿದೆಯೇನೋ ಅಂದುಕೊಂಡು ಸ್ವಲ್ಪ ಹೊತ್ತು ಸುಮ್ಮನೇ ಅದು ಇದು ಓದುತ್ತ ಕೂತೆ. ಆದರೂ ಸಮಾಧಾನವಾಗಲಿಲ್ಲ. ಕೀ ಬೋರ್ಡ್‌ ಪಕ್ಕಕ್ಕಿಟ್ಟ ಪೆನ್ನು ಕರೆದಂತಾಯಿತು. ಎತ್ತಿಕೋ ಎಂದಂತಾಯಿತು. ಎತ್ತಿಕೊಂಡೆ. ಮನಸ್ಸಿಗೆ ಹಾಯ್‌ ಅನ್ನಿಸಿತು. ಸ್ವಲ್ಪ ಹೊತ್ತು ಅದನ್ನೇ ತಿರುಗಿಸುತ್ತ ಕೂತೆ. ಭಾವನೆಗಳು ಉಕ್ಕಿದವು. ಭೋರ್ಗರೆದವು. ಪೆನ್ನನ್ನು ಪಕ್ಕಕ್ಕಿಟ್ಟು ಕಂಪ್ಯೂಟರ್‌ ಆನ್‌ ಮಾಡಿ ನೋಡುತ್ತೇನೆ:

ಪೆನ್‌ ಮುಖದಲ್ಲಿ ನೋವಿನ ಛಾಯೆ !

ಇಲ್ಲ ಮಿತ್ರ, ಇವತ್ತೇನಿದ್ದರೂ ನಿನ್ನ ಬಗ್ಗೆಯೇ ಬರೆಯುತ್ತೇನೆ ಎಂದುಕೊಂಡೆ. ಕೀ ಬೋರ್ಡ್‌ ಸಹಕರಿಸಿತು. ಬೆರಳುಗಳು ನಲಿದಾಡಿದವು. ಬರೆದಾದ ಮೇಲೆ, ತೃಪ್ತಿಯಿಂದ ಪೆನ್‌ ಕಡೆ ನೋಡಿದೆ.

ಅದರ ಮುಖದ ಮೇಲೂ ತೃಪ್ತಿಯ ಬೆಳಕು !

- ಚಾಮರಾಜ ಸವಡಿ

ಬಾರೋ ಸಾಧನಕೇರಿಗೆ...

23 Jul 2008

0 ಪ್ರತಿಕ್ರಿಯೆ

ಅದೊಂದು ಸುಂದರ ಕೆರೆ.


ಮುಂಗಾರಿಗೆ ಭರ್ತಿಯಾಗಿದೆ. ನಟ್ಟನಡುವೆ ಪುಟ್ಟ ನಡುಗಡ್ಡೆ. ಒಂದಿಷ್ಟು ಮರಗಿಡಗಳು. ಹೂ ಚಿಗುರು. ಶುಭ್ರ ಹಿಮಕ್ಕೆ ಜೀವ ಮೂಡಿದಂತಿರುವ ಕೊಕ್ಕರೆಗಳು. ಬಟ್ಟಲಂತಿರುವ ಕೆರೆಯನ್ನು ಕದಡಿ ಧಿಗ್ಗೆಂದು ಜಿಗಿದು ಬೀಳುವ ಮೀನುಗಳು. ತಿಳಿಗಾಳಿ. ಮೆಲು ಅಲೆಗಳು.

ಅದು ಧಾರವಾಡದ ಸಾಧನಕೇರಿಯ ಕೆರೆ.

ಅದರ ಎದುರೇ ಭವ್ಯ ಬೇಂದ್ರೆ ಭವನ. ಪಕ್ಕದಲ್ಲಿ ಅವರು ಬಾಳಿ ಬದುಕಿ ಸಾಧನೆಗೈದ ಮನೆ. ಸುತ್ತಲೂ ಇವತ್ತಿಗೂ ನಿಶ್ಯಬ್ದವನ್ನೇ ಹ್ದೊದಿರುವಂತಹ ವಸತಿ ಪ್ರದೇಶ. ಕೆಟ್ಟು ಹೋಗಿರುವ ರಸ್ತೆಯಲ್ಲಿ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್‌ಗಳು ತೇಕುತ್ತ ಹೋಗುವ ಸದ್ದು ಬಿಟ್ಟರೆ, ಕೇಳಿ ಬರುವ ಕಲರವ ಕೆರೆ ದಂಡೆಯಲ್ಲಿರುವ ಪ್ರಾಥಮಿಕ ಶಾಲೆಯ ಮಕ್ಕಳದ್ದು ಮಾತ್ರ.

ಧಾರವಾಡದ ಪೂರ್ವ ಬಯಲೊ ಬಯಲು

ಅಪೂರ್ವ‘ಕಲ್ಯಾಣ’ದಾಚೆಗಿದೆ ಭಾಗ್ಯನಗರಿ,

ಕರೆನಾಡು ಎರೆನಾಡು, ನಡುವೆ ಅಂದದ ಕಾಡು

ಗಂಡೆರಳೆ ಸುತ್ತಿರುವ ಹಿಂಡು ಚಿಗರಿ


ಪಡುವಣಕೆ ಇದೆ ಘಟ್ಟ, ಅಲಿ ಕಾನಿಗೆ ಪಟ್ಟ,

ಬೆಟ್ಟ ಇಳಿದರೆ ಉಳಿವೆ ಆಚೆ ಕಡಲು,

ಅಂಚು ಮಿರಿಮಿರಿ ಮಿಂಚು ಮೀನ ಮುತ್ತಿನ ಸಂಚು

ಘಟ್ಟ ತಪ್ಪಲು ಭೂಮಿತಾಯಿ-ಒಡಲು


ತಲೆಯಲ್ಲಿ ಬೆಳುಗಾವಿ, ಬಲಕೆ ಬೀಜಾಪೂರು,

ಎಡಕೆ ಕನ್ನಡ ಕರಾವಳಿಯ ತೋಳು,

ಮೈ ಎಲ್ಲ ಮೈಸೂರು ಇನ್ನೂರು ಮುನ್ನೂರು

ನೀಲಗಿರಿ ಪೀಠದಲಿ ನಮ್ಮ ಬಾಳು


(‘ನೆನವು’ ಇದೊಂದು ಅಪೂರ್ಣ ಕವಿತೆ)


ಹಾಗಂತ ಒಂದು ಕಡೆ ಬರೆದಿರುವ ಬೇಂದ್ರೆ ಅವರ ಕಾವ್ಯಕ್ಕೆ ಜೀವ ತುಂಬಿರುವುದು ಧಾರವಾಡ ಹಾಗೂ ಸಾಧನಕೇರಿ ಪ್ರದೇಶ. ಬೆಳ್ಳಂಬೆಳಿಗ್ಗೆ, ಸುರಿಯುತ್ತಿರುವ ಜಿನುಗು ಮಳೆಯಲ್ಲಿ, ಸುಮ್ಮನೇ ನಡೆಯುತ್ತ ಹೋದರೆ ಸಾಧನಕೇರಿ ದೊಡ್ಡ ಹಳ್ಳಿಯಂತೆ, ರಸ್ತೆಯ ಪಕ್ಕ ಕಟ್ಟಿ ಮರೆತು ಹೋದ ಕಟ್ಟಡಗಳ ಪ್ರದೇಶದಂತೆ ಕಾಣುತ್ತದೆ. ಕೆಟ್ಟ ರಸ್ತೆಯನ್ನು ತುಂಬಿರುವ ಹೊಂಡಗಳಲ್ಲಿ ಚಹದಂತಹ ಮಳೆ ನೀರು. ಸಾಲು ಮರಗಳಿಂದ ತೊಟ್ಟಿಕ್ಕುತ್ತಿರುವ ಹನಿಗಳು. ಮಂಜಿನ ಮಳೆಯಲ್ಲಿ ಮಸಕಾಗಿ ಕಾಣುವ ಬೆಳ್ಳಗಿನ ಬೇಂದ್ರೆಭವನ.


ಆ ಊರು ಈ ಊರು ಯಾ ಊರು ಆದರೂ

ತವರೂರು ತಮತಮಗೆ ತಾನೆ ಚಂದ,

ಕಟ್ಟಿ ಕೂಡುವುದಲ್ಲ ಬಿಚ್ಚಿ ಬಿಡುವುದು ಅಲ್ಲ

ಹೊಕ್ಕಳಿನ ಹುರಿಯಂಥ ಭಾವಬಂಧ


ಧಾರವಾಡದ ಶಿಲೆಯು ನಮ್ಮ ಶಾಲಿಗ್ರಾಮ

ಮಾವುಮಲ್ಲಿಗೆ ಚಿಗುರು ನಮ್ಮ ತುಳಸಿ

ಮುತ್ತುರುಳಬಹುದೆಂದು ದಿಕ್‌ನಾಗ ಜಡೆಯುವರೆ?

ಇಲ್ಲಿ ನಾಗರ ಖಂಡ ಸುತ್ತ ಬಳಸಿ


ಗುಪ್ತಗಾಮಿನಿ ನಮ್ಮ ಶಾಲ್ಮಲೆಯು ಸೆಲೆ

ಆಳಸಂಜೆ-ನಂಜನು ತೊಳೆಯೆ ಧುಮುಕುತಿಹಳು

ಏಕಾಂಗಿ, ನಿಃಸಂಗಿ, ಗಂಗಾವಳಿಯ ಭಂಗಿ

ಕನ್ನಡವ ಒಪ್ಪಿಡಿಯಲಮುಕುತಿಹಳು


ಹೊತ್ತೇರುತ್ತಿದ್ದಂತೆ, ಸೂರ್ಯ ಕಾಣದಿದ್ದರೂ ಮಕ್ಕಳನ್ನು ಹೊತ್ತ ಆಟೊಗಳು ಸಾಧನಕೇರಿಯ ಬೇಂದ್ರೆ ಮನೆ ಎದುರಿನ ಪ್ರಾಥಮಿಕ ಶಾಲೆಯ ಆವರಣದಲ್ಲಿ ಬಂದು ನಿಲ್ಲುತ್ತವೆ. ಜೀವಂತಿಕೆ ತುಂಬಿ ತುಳುಕುವ ಮಕ್ಕಳು ಕೂಗುತ್ತ ಕೆಳಗಿಳಿಯುತ್ತವೆ. ಎದುರು ಬೇಂದ್ರೆ ಮನೆ, ಹಿಂದೆ ಕೆರೆ, ನಡುವೆ ಇರುವ ಈ ಶಾಲೆ ಸಾವಿರಾರು ನೆನಪುಗಳನ್ನು ತುಂಬಿಕೊಂಡಿದೆ. ಇಲ್ಲಿಯೇ ಒಂದು ಕಾಲದಲ್ಲಿ ಬೇಂದ್ರೆ ಓಡಾಡಿದ್ದರು. ಕಟ್ಟೆಯ ಮೇಲೆ ಕೂತು ಕವಿತೆ ಓದಿದ್ದರು. ಅರ್ಧಮರ್ಧ ಮಟ್ಟದ ಕವಿಗಳನ್ನು ಟೀಕಿಸಿದ್ದರು. ಜಗಳ ಕಾಯ್ದಿದ್ದರು. ಪ್ರೀತಿ ತೋರಿದ್ದರು. ಬೇರೆಯವರ ಉತ್ತಮ ರಚನೆಗಳಿಗೆ ತಲೆದೂಗಿ ಮೈಮರೆತಿದ್ದರು.


ಇಲ್ಲೀಗ ಮಕ್ಕಳು ಆಡುತ್ತಿವೆ. ‘ಜೈಭಾರತ ಜನನಿಯ ತನುಜಾತೆ ಜಯಹೇ ಕರ್ನಾಟಕ ಮಾತೆ’ ಪ್ರಾರ್ಥನೆ ಕೇಳುತ್ತಿದೆ. ಕೆರೆಯ ಆಚೆ ದಡದಲ್ಲಿರುವ ಪೊಲೀಸ್ ತರಬೇತಿ ಕೇಂದ್ರ ಹಾಗೂ ಪೊಲೀಸ್ ಕೇಂದ್ರ ಕಚೇರಿಗಳಿಂದ ಉಕ್ಕಿಬರುವ ಕೊಚ್ಚೆ ನೀರು ಸದ್ದಿಲ್ಲದೇ ಕೆರೆಯ ಒಡಲನ್ನು ವಿಷಗೊಳಿಸುತ್ತಿರುವುದು ದಡದಲ್ಲಿ ಆಡುತ್ತಿರುವ ಪೋರ-ಪೋರಿಯರಿಗೆ ಗೊತ್ತಿಲ್ಲ. ಜೋರು ಮಳೆಗೆ ತುಂಬಿರುವ ಕೆರೆಗೆ ಇನ್ನು ನಾಲ್ಕು ತಿಂಗಳಲ್ಲಿ ತನ್ನೊಡಲಿನ ತುಂಬ ಕೊಳಚೆ ತುಂಬುತ್ತದೆ ಎಂಬ ಸತ್ಯ ತಿಳಿದಿದ್ದರೂ ಅದು ಮಕ್ಕಳಿಗೆ ಹೇಳುವುದಿಲ್ಲ.


ಒಬ್ಬ ಡಾ. ಎಂ.ಎಂ. ಕಲಬುರ್ಗಿ ಸರ್ ಮಾತ್ರ ಮಿಡುಕುತ್ತಾರೆ. ‘ಬಾರೋ ಸಾಧನಕೇರಿಗೆ ಪ್ರಾಧಿಕಾರ ರಚಿಸಿ ಇಡೀ ಇನ್ನೂರು ಎಕರೆ ಪ್ರದೇಶವನ್ನು ವಶಕ್ಕೆ ತೆಗೆದುಕೊಂಡು ಅಭಿವೃದ್ಧಿಪಡಿಸಬೇಕು. ಕನ್ನಡದ ಅಷ್ಟೇ ಏಕೆ, ಜಗತ್ತಿನ ಅತಿ ಶ್ರೇಷ್ಠ ಕವಿಯೊಬ್ಬನಿಗೆ ಸ್ಫೂರ್ತಿ ನೀಡಿದ ನೆಲವನ್ನು ಸಾಧ್ಯವಾದಷ್ಟೂ ಮಟ್ಟಿಗೆ ಅದಿರುವಂತೆ ಉಳಿಸುವ ಆಸೆ ಇದೆ. ಕೆರೆ ಮತ್ತು ಬೇಂದ್ರೆ ಭವನಗಳೆರಡೂ ಸರ್ಕಾರದ ಆಸ್ತಿಗಳೇ. ಉಳಿದಿದ್ದು ಸುತ್ತಲಿನ ರಸ್ತೆಗಳನ್ನು ಅಭಿವೃದ್ಧಿಪಡಿಸುವುದು. ಕೆರೆಯ ಹೂಳೆತ್ತಿಸಿ, ಕೊಚ್ಚೆ ಅಲ್ಲಿ ಬಾರದಂತೆ ತಡೆ ಒಡ್ಡಿ, ದಂಡೆಯುದ್ದಕ್ಕೂ ಕೂಡಲು ಆಸನಗಳು ಹಾಗೂ ಒಂದು ಭಾಗದಲ್ಲಿ ಸಂಗೀತ ಕಚೇರಿಗೆ ವೇದಿಕೆ ಏರ್ಪಡಿಸಬೇಕು. ಕೆರೆಯಲ್ಲಿ ದೋಣಿಗಳ್ದಿದರೆ ಜನ ಬರುತ್ತಾರೆ. ಬೇಂದ್ರೆ ಜೀವನ ಸಂದೇಶ ಸಾರುವ ವಾತಾವರಣವನ್ನು ಸೃಷ್ಟಿಸಿದರೆ, ಧಾರವಾಡ ಅಕ್ಷರ ಯಾತ್ರಾಸ್ಥಳವಾಗುತ್ತದೆ’ ಎಂದು ಹಂಬಲಿಸುತ್ತಾರೆ.


ದ.ರಾ. ಬೇಂದ್ರೆ ರಾಷ್ಟ್ರೀಯ ಟ್ರಸ್ಟ್‌ನ ಅಧ್ಯಕ್ಷರಾಗಿರುವ ಡಾ. ಎಂ.ಎಂ. ಕಲಬುರ್ಗಿ ಇಂಥದೊಂದು ಯೋಜನೆ ತಯಾರಿಸಿಕೊಂಡು ಬೆಂಗಳೂರಿಗೆ ಹಲವಾರು ಬಾರಿ ರೈಲೇರಿದ್ದಾರೆ. ಆದರೆ ಬೆಂಗಳೂರಿನ ಆಯಕಟ್ಟಿನ ಜಾಗಗಳಲ್ಲಿ ಕೂತಿರುವ ಅಧಿಕಾರಿಗಳಿಗೆ ಸೊನಾಲಿ ಬೇಂದ್ರೆ ಗೊತ್ತೇ ಹೊರತು ದ.ರಾ. ಬೇಂದ್ರೆ ಅಲ್ಲ. ಕನ್ನಡವೇ ಸರಿಯಾಗಿ ಗೊತ್ತಿರದವರಿಗೆ ಮುಗಿಲ ಮಾರಿ, ರಾಗ ರತಿ, ನೀ ಹಿಂಗ ನೋಡಬ್ಯಾಡ, ಪಾತರಗಿತ್ತಿ ಪಕ್ಕ, ಯಾರಿಗೂ ಹೇಳೋಣು ಬ್ಯಾಡ ಎಂಬ ಪದ ಸಂಜೀವಿನಿ ಗೊತ್ತಾಗುವುದಾದರೂ ಹೇಗೆ?


ಹೀಗಾಗಿ ಯೋಜನೆಗೆ ಸರ್ಕಾರದ ತರಹೇವಾರಿ ನೆವಗಳು. ಇನ್ನು ಧಾರವಾಡಿಗರಿಗೆ ಬೇಂದ್ರೆ ಬಗ್ಗೆ ಇರುವಷ್ಟೇ ಅಭಿಮಾನ ನಿಷ್ಕ್ರಿಯತೆ ಬಗ್ಗೆಯೂ ಇರುವುದರಿಂದ ಅವರೂ ಇತ್ತ ನೋಡುತ್ತಿಲ್ಲ. ‘ಇದೇ ಬೇಂದ್ರೆ ಬೇರೆಡೆ ಹುಟ್ಟಿದ್ದರೆ ರಾಷ್ಟ್ರೀಯ ಹೀರೋ ಆಗಿರುತ್ತಿದ್ದರು’ ಎಂದು ಕತೆ ಹೇಳುತ್ತ ಅವರು ಆರಾಮವಾಗಿದ್ದಾರೆ. ಇನ್ನು ಬೇಂದ್ರೆ ಅವರ ಮಗ ವಾಮನ ಬೇಂದ್ರೆ ಕಾಪಿರೈಟ್ ನೆವದಲ್ಲಿ ದ.ರಾ. ಬೇಂದ್ರೆಯವರನ್ನು ಕಟ್ಟಿಟ್ಟಿದ್ದಾರೆ. ಹೀಗಾಗಿ ಬೇಂದ್ರೆ ಗೀತೆಗಳನ್ನು ಹಾಡಿ ಕ್ಯಾಸೆಟ್-ಸಿಡಿ ಮಾಡಲು ಗಾಯಕರು ಅಳುಕುತ್ತಾರೆ.


ಆದರೂ ಸಾಧನಕೇರಿಗೆ ತನ್ನದೇ ಆದ ಕಳೆ ಇದೆ. ಕೊಳೆ ಇದೆ. ಇಲ್ಲಿಗೆ ಬರುವ ಬಹುತೇಕ ಜನರು ದತ್ತಾತ್ರೇಯ ರಾಮಚಂದ್ರ ಬೇಂದ್ರೆಯವರನ್ನು ಹುಡುಕಿಕೊಂಡು ಬರುತ್ತಾರೆ. ಆದರೆ ಅವರಿಗೆ ಎದುರಾಗುವುದು ವಾಮನ ಬೇಂದ್ರೆ. ನಿರಾಶರಾದವರಿಗೆ ಪಕ್ಕದಲ್ಲಿಯೇ ಇರುವ ಬೇಂದ್ರೆ ಭವನ ಸ್ವಲ್ಪ ಮಟ್ಟಿಗೆ ಸಂತೈಸುತ್ತದೆ. ಎದುರಿಗೆ ಇರುವ ಶಾಲೆ, ಅದರಾಚೆಗೆ ಇರುವ ಕೆರೆಗಳು ಇನ್ನಷ್ಟು ಸಂತೈಸುತ್ತವೆ. ಕೆಟ್ಟ ರಸ್ತೆ ದಾಟಿ ಕೆರೆಯ ಅಂಚಿಗೆ ನಿಂತರೆ, ಆಗ ಸಂಜೆಯಾಗಿದ್ದರೆ, ‘ಮುಗಿಲ ಮಾರಿಗೆ ರಾಗ ರತಿಯ ನಂಜು’ ಏರಿರುವುದು ಕಂಡರೂ ಕಾಣಬಹುದು.
ಈ ವಾತಾವರಣದಲ್ಲಿಯೇ ಬೇಂದ್ರೆ ಅವರ ಅದ್ಭುತ ಕೃತಿಗಳು ಸೃಷ್ಟಿಯಾಗಿವೆ. ನಾಡಿನ ಖ್ಯಾತನಾಮರನ್ನು ತನ್ನೆಡೆ ಸೆಳೆದಿವೆ. ಜಾತಿ, ಧರ್ಮ, ಪ್ರಾದೇಶಿಕ ಭಿನ್ನತೆ ಮೀರಿ ಅವರ ಗೀತೆಗಳು ನಾಡಿನುದ್ದಗಲಕ್ಕೂ ಸಂಚರಿಸಿವೆ. ಅಕ್ಷರ ಬಲ್ಲವರು, ಪಾಮರರು, ಸಾಮಾನ್ಯರು, ಸಾಧಕರು- ಹೀಗೆ ಎಲ್ಲರನ್ನೂ ಪ್ರಭಾವಿತರನ್ನಾಗಿಸಿವೆ.


ವಾಮನ ಬೇಂದ್ರೆ ಅವರ ಲಕ್ಷ್ಮಣರೇಖೆಯ ಮಿತಿಯಲ್ಲಿದ್ದರೂ ಬೇಂದ್ರೆ ಬಗ್ಗೆ ಜನರ ಕುತೂಹಲ, ಪ್ರೀತಿ ಇನ್ನೂ ತಣಿದಿಲ್ಲ. ಧಾರವಾಡದ ಎಸ್.ಡಿ.ಎಂ. ಎಂಜನಿಯರಿಂಗ್ ಕಾಲೇಜಿನ ಉತ್ಸಾಹಿಗಳು ಮುಂದಾಗಿ ಉಚಿತವಾಗಿ ಅಂತರ್ಜಾಲ ತಾಣವನ್ನು ತಯಾರಿಸಿಕೊಟ್ಟಿದ್ದಾರೆ. ಯಥಾಪ್ರಕಾರ ಅಲ್ಲಿಯೂ ಕಾಪಿರೈಟ್‌ನದೇ ಸಮಸ್ಯೆ. ಹೀಗಾಗಿ ಬೇಂದ್ರೆ ಅವರ ಸಾಹಿತ್ಯದ ಬದಲಾಗಿ ಇತರ ಒಣ ವಿವರಗಳನ್ನು ತುಂಬಬೇಕಾಗಿದ್ದರಿಂದ ವೆಬ್‌ಸೈಟ್‌ನಲ್ಲಿ ಜೀವಂತಿಕೆ ಮಾಯವಾಗಿದೆ. ಇನ್ನು ಬಹುತೇಕ ಹಳೆಯ ಕವಿ, ಲೇಖಕರ ಗ್ರಂಥಗಳು ಪಳಪಳ ಹೊಳೆಯುವ ಮರು ಮುದ್ರಣ ಕಂಡು ನಳನಳಿಸುತ್ತಿರುವಾಗ ಬೇಂದ್ರೆಯವರ ಪುಸ್ತಕಗಳು ಮಾತ್ರ ಇಪ್ಪತ್ತು ವರ್ಷಗಳ ಹಿಂದಿನ ಕೆಟ್ಟ ಮುದ್ರಣದ ಗೈಡ್‌ಗಳಂತೆ ಕಳಪೆಯಾಗಿದ್ದು, ನಾಡಿನ ಬಹುತೇಕ ಪುಸ್ತಕಾಲಯಗಳಲ್ಲಿ ಕಾಣಸಿಗದ ಪರಿಸ್ಥಿತಿಗೆ ಒಳಗಾಗಿವೆ.


ಇಷ್ಟೆಲ್ಲ ಲೋಪಗಳಿದ್ದರೂ ಬೇಂದ್ರೆ ಮತ್ತೆ ಮತ್ತೆ ಸೆಳೆಯುತ್ತಾರೆ.

ಒಲವೆಂಬ ಹೊತ್ತಿಗೆಯನೋದ ಬಯಸುತ ನೀನು

ಬೆಲೆಯೆಷ್ಟು ಎಂದು ಕೇಳುತಿಹೆ? ಹುಚ್ಚ!

ಹಗಲಿರುಳು ದುಡಿದರೂ ಹಲ ಜನುಮ ಕಳೆದರೂ

ನೀ ತೆತ್ತಲಾರೆ ಬರಿ ಅಂಚೆ ವೆಚ್ಚ

ಎಂದು ಗದರಿದಂತಾಗುತ್ತದೆ.


ಮಳೆ ಬರುವ ಕಾಲಕ್ಕಒಳಗ್ಯಾಕ ಕೂತೇವೊ

ಇಳೆಯೊಡನೆ ಜಳಕ ಮಾಡೋಣ

ನಾವೂನು, ಮೋಡಗಳ ಆಟ ನೋಡೋಣ


ಎಂದು ಕರೆದಂತಾಗುತ್ತದೆ.


ಸಾಧನಕೇರಿಯಲ್ಲಿ ಇಂತಹ ಸಾವಿರ ಕರೆಗಳಿವೆ. ಕೊರೆಗಳಿವೆ. ಹುಡುಕುವವರಿಗೆ ಅಲ್ಲಿಯ ಕಲ್ಲಕಲ್ಲಿನಲ್ಲಿಯೂ, ನೀರಿನ ಪ್ರತಿ ತೆರೆಯಲ್ಲಿಯೂ ಬೇಂದ್ರೆ ಸಿಗುತ್ತಾರೆ. ಬೆಳ್ಳಂಬೆಳಿಗ್ಗೆ ವಾಕಿಂಗ್ ಹೋಗಿ, ಕೆರೆ ದಡದಲ್ಲಿ ಅಡ್ಡಾಡಿ, ಶಾಲೆಯ ನಿಶ್ಯಬ್ದದಲ್ಲಿ ಮೌನವಾಗಿ ನಿಂತವರಿಗೆ ಬೇಂದ್ರೆ ಖಂಡಿತ ಸಿಗುತ್ತಾರೆ. ಮೌನವಾಗಿಯೇ ಮಾತಿಗಿಳಿಯುತ್ತಾರೆ. ಕನಸು ಕೆದಕುತ್ತಾರೆ. ಎದೆಯೊಳಗಿನ ಸಾವಿರ ಭಾವಗಳಿಗೆ ಹಾಡಾಗುತ್ತಾರೆ.


ತೋಟ ಮೂಡಿದೆ ನೋಡು ಕಾಡಿದ್ದ ಎಡೆಯಲ್ಲಿ

ಅಲ್ಲಿ ಮೌನದ ತಂತಿ ಮೀಟುತಿಹುದು

ಶ್ರುತಿಗು ನಿಲುಕದ ನುಡಿಯು ದನಿಗುಡುವದಾಗೀಗ

ಯಾರು ಬಲ್ಲರು? ನಾಳೆ ಮೂಡಬಹುದು


ಎಂದು ಸಂತೈಸಿದಂತಾಗುತ್ತದೆ.


ಮೂಡೀತೆ ಅಂಥದೊಂದು ಬೆಳಗು ನಮ್ಮೀ ಸಾಧನಕೇರಿಯಲ್ಲಿ? ಕನಸು ಮೊರೆವ ಸಂಗಮದಲ್ಲಿ?

- ಚಾಮರಾಜ ಸವಡಿ