Showing posts with label ರಾಜಕೀಯ. Show all posts
Showing posts with label ರಾಜಕೀಯ. Show all posts

ಶಾಸಕರ ರಾಜೀನಾಮೆ ರಾಜಕೀಯ

14 Jul 2008

0 ಪ್ರತಿಕ್ರಿಯೆ
(ರಾಜ್ಯ ರಾಜಕೀಯ ನಿರ್ಲಜ್ಜ ಘಟ್ಟದಲ್ಲಿದೆ. ಹಣ ಇದ್ದವರು ಏನು ಬೇಕಾದರೂ ಮಾಡಬಹುದು ಎಂಬ ವಾತಾವರಣ ಉಂಟಾಗಿದೆ. ಅಧಿಕಾರ ಹಿಡಿಯುವುದೇ ಪರಮ ಉದ್ದೇಶವಾದರೆ ಏನಾಗುತ್ತದೆ ಎಂಬುದಕ್ಕೆ ಕರ್ನಾಟಕದಲ್ಲಿ ಶನಿವಾರದಿಂದ ನಡೆದಿರುವ ಘಟನೆಗಳೇ ಸಾಕ್ಷಿ. ಶಾಸಕರ ರಾಜೀನಾಮೆ ಹಾಗೂ ಬಿಜೆಪಿ ಸೇರ್ಪಡೆ ಹಿಂದಿರುವ ಹುನ್ನಾರ ಕುರಿತು ಈ ಬರಹ)

ಬಹುಶಃ ೨೦೦೮ನೇ ವರ್ಷ ರಾಜ್ಯ ರಾಜಕೀಯದಲ್ಲಿ ಹಲವಾರು ಕಾರಣಗಳಿಂದಾಗಿ ನೆನಪಿನಲ್ಲಿರುತ್ತದೆ.

ಇತ್ತೀಚನ ವರ್ಷಗಳಲ್ಲಿ ಕಂಡ ಅತ್ಯಂತ ನಿರ್ಲಜ್ಜ ರಾಜಕಾರಣವನ್ನು ಜೆಡಿಎಸ್‌ನ ಎಚ್‌.ಡಿ. ದೇವೇಗೌಡ ಪ್ರದರ್ಶಿಸಿದ ಪರಿಣಾಮ ಬಹುಮತ ಸಾಬೀತು ಮಾಡಲು ಹೋಗಿದ್ದ ಮುಖ್ಯಮಂತ್ರಿಯೊಬ್ಬರು ರಾಜೀನಾಮೆ ಸಲ್ಲಿಸಿ ಹಿಂತಿರುಗಿದರು. ರಾಷ್ಟ್ರಪತಿ ಆಡಳಿತ ಬಂದಿತು. ಅಧಿಕಾರಿಗಳದೇ ಸಾಮ್ರಾಜ್ಯ. ಪರಿಣಾಮ, ರಸಗೊಬ್ಬರದಂಥ ಬೇಡಿಕೆಯನ್ನು ಸರಿಯಾಗಿ ಸಲ್ಲಿಸದೇ ಮುಂಗಾರು ಗೊಂದಲಕ್ಕೆ ಕಾರಣವಾಯಿತು.

ಇನ್ನೊಂದೆಡೆ ಚುನಾವಣಾ ಆಯೋಗ ಅತ್ಯಂತ ಜವಾಬ್ದಾರಿಯುತವಾಗಿ, ಸಮರ್ಥವಾಗಿ ಕೆಲಸ ಮಾಡಿ, ಕ್ಷೇತ್ರ ಪುನರ್‌ವಿಂಗಡಣೆ ನಂತರವೂ ದಾಖಲೆ ಸಮಯದಲ್ಲಿ ಚುನಾವಣೆ ನಡೆಸಲು ಮುಂದಾಯಿತು. ವಿರೋಧದ ನಡುವೆಯೂ ಗದ್ದಲ ಗೊಂದಲಗಳಿಲ್ಲದೇ ಚುನಾವಣೆ ಮುಗಿಸಿತು. ಜೆಡಿಎಸ್‌ನ ಪಾಪದ ಫಲವೆಂಬಂತೆ ಬಿಜೆಪಿ ಸರಳ ಬಹುಮತಕ್ಕೆ ಹತ್ತಿರ ಬಂದು, ಜೆಡಿಎಸ್‌ ಹೀನಾಯವಾಗಿ ಮೂರನೇ ಸ್ಥಾನಕ್ಕೆ ಇಳಿಯಿತು.

ಇದು ಒಂದು ಪ್ರಮುಖ ಘಟ್ಟ.

ಅಧಿಕಾರಕ್ಕೆ ಬರಬೇಕೆಂದರೆ ಪಕ್ಷೇತರರ ಮರ್ಜಿಯಲ್ಲೇ ಇರಬೇಕೆನ್ನುವ ಕಹಿ ವಾಸ್ತವ ಒಪ್ಪಿಕೊಳ್ಳಲು ಹುಮ್ಮಸ್ಸಿನಲ್ಲಿರುವ ಬಿಜೆಪಿ ನಾಯಕರು ಸಿದ್ಧರಿದ್ದಿಲ್ಲ. ಹೀಗಾಗಿ, ಶಾಸಕರ ಖರೀದಿಗೆ ಮುಂದಾದರು. ಸಚಿವ ಸ್ಥಾನದ ಆಮಿಷ ಒಡ್ಡಿ ಪಕ್ಷೇತರರ ಬೆಂಬಲ ಪಡೆದುಕೊಂಡು ಸರ್ಕಾರ ರಚಿಸಲಾಯಿತು. ಆದರೆ, ಇದು ಶಾಶ್ವತ ಪರಿಹಾರವಲ್ಲ ಎಂಬ ಅರಿವು ಬಿಜೆಪಿ ನಾಯಕರಲ್ಲಿ ಇದ್ದೇ ಇತ್ತು.
ಯಥಾಪ್ರಕಾರ, ಸರ್ಕಾರ ಅಸ್ತಿತ್ವಕ್ಕೆ ಬರಲು ಕಾರಣರಾದ ಬಳ್ಳಾರಿ ಗಣಿ ದೊರೆಗಳಾದ ಜನಾರ್ದನ ರೆಡ್ಡಿ ಮತ್ತು ಶ್ರೀರಾಮುಲು ಈ ಸಮಸ್ಯೆ ಪರಿಹರಿಸಲು ಮುಂದಾದರು. ಮೊದಲು ಜೆಡಿಎಸ್‌ ಒಡೆಯುವ ತಂತ್ರ ಹೆಣೆಯಲಾಯಿತು. ಆದರೆ, ಅದು ಸುಲಭ ಸಾಧ್ಯವಲ್ಲ ಎಂಬುದು ಗೊತ್ತಾಯಿತು. ಆಗ ರೂಪಿಸಿದ್ದೇ ರಾಜೀನಾಮೆ ಕೊಟ್ಟು ಹೊರಬರುವ ತಂತ್ರ.

ಈ ಕಾರ್ಯಾಚರಣೆಯ ಕೆಲ ವಿಶೇಷತೆಗಳು ಹೀಗಿವೆ:

- ಶಾಸಕನೊಬ್ಬ ತನ್ನ ಸದಸ್ಯತ್ವ ಅವಧಿಯಲ್ಲಿ ಇನ್ನೊಂದು ಪಕ್ಷಕ್ಕೆ ಬೆಂಬಲ ಕೊಡುವುದಾಗಲಿ, ಸೇರಿಕೊಳ್ಳಲಾಗಲಿ ಬರುವುದಿಲ್ಲ. ಹಾಗೆ ಮಾಡಿದರೆ, ಪಕ್ಷಾಂತರ ನಿಷೇಧ ಕಾಯ್ದೆಯಡಿ ಅವನ ಸದಸ್ಯತ್ವ ರದ್ದಾಗುತ್ತದೆ.

- ಆದರೆ, ರಾಜೀನಾಮೆ ನೀಡಿ ಹೊರ ಬಂದರೆ ಆತ ಸ್ವತಂತ್ರ. ಸಾಮಾನ್ಯವಾಗಿ ಈ ಕ್ರಮ ಕೈಗೊಳ್ಳಲು ಶಾಸಕರು ಸಿದ್ಧರಿರುವುದಿಲ್ಲ. ಏಕೆಂದರೆ, ಆಗ ಉಪಚುನಾವಣೆ ನಡೆಯಬೇಕಾಗುತ್ತದೆ. ಒಂದು ಸಾರಿ ಗೆಲ್ಲಲಿಕ್ಕೇ ಸಾಕಷ್ಟು ಕಷ್ಟಪಟ್ಟಿರುತ್ತಾರೆ. ಹೀಗಾಗಿ ಈ ಸವಾಲು ತೆಗೆದುಕೊಳ್ಳಲು ಹೆದರುತ್ತಾರೆ.

- ಗಣಿ ದೊರೆಗಳು ಗಮನ ಕೊಟ್ಟಿದ್ದೇ ಈ ಅಂಶದತ್ತ. ಒಂದು ಮೂಲದ ಪ್ರಕಾರ, ಚುನಾವಣೆಯಲ್ಲಿ ಖರ್ಚಾದ ಹಣವನ್ನು ಹೊಂದಿಸುವ, ಹೆಚ್ಚುವರಿಯಾಗಿ ಹಣ ಕೊಡುವ, ಮತ್ತೆ ಚುನಾವಣೆ ಎದುರಿಸುವ ಎಲ್ಲ ಖರ್ಚನ್ನೂ ನೋಡಿಕೊಳ್ಳುವ ಹಾಗೂ ಗೆದ್ದ ನಂತರ ’ಸೂಕ್ತ’ ಸ್ಥಾನ ಕಲ್ಪಿಸುವ ಭರವಸೆಯನ್ನು ಕೆಲ ಶಾಸಕರಿಗೆ ನೀಡಲಾಯಿತು.

- ಶಾಸಕರು ಈ ಆಮಿಷಕ್ಕೆ ಮಣಿದರು. ಏಕೆಂದರೆ, ಪ್ರತಿ ಪಕ್ಷದಲ್ಲಿ ಇನ್ನೈದು ವರ್ಷ ಕೂತರೂ ಅವರಿಗೆ ಚುನಾವಣೆಯಲ್ಲಿ ಮಾಡಿರುವ ಖರ್ಚು ಹಿಂತಿರುಗುವ ಭರವಸೆ ಇಲ್ಲ. ಅದರ ಬದಲು ರಾಜೀನಾಮೆ ನೀಡಿದರೆ, ಖರ್ಚು ಮಾಡಿದ ಹತ್ತು ಪಟ್ಟು ಹಣ ಬರುತ್ತದೆ. ಇನ್ನೊಮ್ಮೆ ಉಚಿತವಾಗಿ ಗೆದ್ದು ಬರುವ ಅವಕಾಶವೂ ಸಿಗುತ್ತದೆ.

- ಗಣಿ ದೊರೆಗಳು ಇನ್ನೊಂದು ತಂತ್ರ ಹೆಣೆದರು. ರಾಜ್ಯದ ದೊಡ್ಡ ಕೋಮಿನಲ್ಲಿ ಒಂದಾಗಿರುವ ವಾಲ್ಮೀಕಿ ಸಮಾಜದ ಶಾಸಕರನ್ನು ಬಿಜೆಪಿಗೆ ಸೆಳೆಯುವ ಜವಾಬ್ದಾರಿಯನ್ನು ಸಚಿವ ಶ್ರೀರಾಮುಲು ಹೊತ್ತುಕೊಂಡರು. ಈ ತಂತ್ರ ಫಲ ನೀಡಿತು. ವಾಲ್ಮೀಕಿ ಜನಾಂಗದ ಶಾಸಕರಾದ ಬಾಲಚಂದ್ರ ಜಾರಕಿಹೊಳಿ ಹಾಗೂ ಶಿವಾನಂದ ನಾಯಕ್‌ ಜೆಡಿಎಸ್‌ಗೆ ರಾಜೀನಾಮೆ ನೀಡಿ ಬಿಜೆಪಿ ಸೇರಿಕೊಂಡರು. ಗಣಿ ದೊರೆಗಳ ವ್ಯಾಪಾರದಲ್ಲಿ ಮುಖ್ಯ ಪಾತ್ರಧಾರನಾಗಿರುವ ಕಾರವಾರದ ಕಾಂಗ್ರೆಸ್‌ ಶಾಸಕ ಆನಂದ ಆಸ್ನೋಟಿಕರ್‌ ಕೂಡ ಬಿಜೆಪಿಗೆ ಬಂದರು. ಕಾಂಗ್ರೆಸ್‌ನ ಸಂಸದ ಆರ್‌.ಎಲ್‌. ಜಾಲಪ್ಪ, ಪಕ್ಷದಲ್ಲಿ ತಮ್ಮನ್ನು ಕಡೆಗಣಿಸಿದ್ದರ ಬಗ್ಗೆ ಹೊಂದಿದ್ದ ಅಸಮಾಧಾನದ ಅಂಗವಾಗಿ ಅವರ ಮಗ ಶಾಸಕ ನರಸಿಂಹಸ್ವಾಮಿ ರಾಜೀನಾಮೆ ನೀಡಿ ಬಿಜೆಪಿ ಸೇರಿದರು.

- ಬರಲಿರುವ ದಿನಗಳಲ್ಲಿ ಕಾಂಗ್ರೆಸ್‌ ಹಾಗೂ ಜೆಡಿಎಸ್‌ನ ಇನ್ನೂ ಐದಾರು ಶಾಸಕರು ರಾಜೀನಾಮೆ ನೀಡಿ ಬಿಜೆಪಿ ಸೇರಲಿದ್ದಾರೆ. ಸುಮಾರು ಎಂಟ್ಹತ್ತು ಶಾಸಕರಿಂದ ರಾಜೀನಾಮೆ ಕೊಡಿಸಿ ಉಪಚುನಾವಣೆ ನಡೆಸುವುದಕ್ಕೆ ವೇದಿಕೆ ಸಿದ್ಧಪಡಿಸಲಾಗುತ್ತದೆ. ತಮ್ಮದೇ ಸರ್ಕಾರ ಅಸ್ತಿತ್ವದಲ್ಲಿರುವುದರಿಂದ, ಗಣಿ ದೊರೆಗಳ ಕಾರ್ಯಾಚರಣೆ ನಡೆಯುವುದರಿಂದ ಹತ್ತರಲ್ಲಿ ನಾಲ್ಕೈದು ಸ್ಥಾನಗಳನ್ನು ಬಿಜೆಪಿ ಗೆದ್ದರೂ ಸಾಕು, ಮುಂದಿನ ಐದು ವರ್ಷಗಳವರೆಗೆ ಸರ್ಕಾರ ಅಬಾಧಿತ.
ಇದು ಬಿಜೆಪಿ ಲೆಕ್ಕಾಚಾರ.

ಆ ಪ್ರಕಾರ, ರಾಜೀನಾಮೆ ಪ್ರಹಸನ ಪ್ರಾರಂಭವಾಗಿದೆ. ನಾವು-ನೀವು ಮೂಕ ಪ್ರೇಕ್ಷಕರಂತೆ ನೋಡುತ್ತ ಕೂತಿದ್ದೇವೆ.


ನಮ್ಮೊಳಗಿನ ಮತದಾರ ಜಾಗೃತನಾಗುವುದು ಯಾವಾಗ?

- ಚಾಮರಾಜ ಸವಡಿ

(೬, ಜುಲೈ ೨೦೦೮)

ಜನರಿಗೆ ಬೇಡವಾದ ಬಡಾಯಿದಾಸ

0 ಪ್ರತಿಕ್ರಿಯೆ
ವಾಟಾಳ್‌ ನಾಗರಾಜ್‌ ಮತ್ತೊಮ್ಮೆ ಹೀನಾಯ ಸೋಲು ಕಂಡಿದ್ದಾರೆ.

ಈ ವ್ಯಕ್ತಿಯ ಬಗ್ಗೆ ಒಂದಾನೊಂದು ಸಮಯದಲ್ಲಿ ಗೌರವವಿತ್ತು. ಅವರ ಚಳುವಳಿಗಳು, ಘೋಷಣೆಗಳು ರೋಮಾಂಚನ ಹುಟ್ಟಿಸುತ್ತಿದ್ದವು. ಆಗ ನಾನಿನ್ನೂ ಹೈಸ್ಕೂಲಲ್ಲಿ ಓದುತ್ತಿದ್ದೆ. ಪತ್ರಿಕೆಯಲ್ಲಿ ತಗ್ಗು ಬಿದ್ದಿರುವ ಕೆನ್ನೆಯ, ಉಬ್ಬುಹಲ್ಲುಗಳ ವ್ಯಕ್ತಿಯ ಘೋಷಣೆಗಳನ್ನು ಓದಿ ಮೈ ನವಿರೇಳುತ್ತಿತ್ತು. ಮುಂದೆ ಕಾಲೇಜಿಗೆ ಬಂದಾಗ ಆ ಅಭಿಮಾನ ಇನ್ನಷ್ಟು ಜಾಗೃತವಾಯಿತು. ವಾಟಾಳ್‌ ನಾಗರಾಜ್‌ ಹುಟ್ಟಿದ್ದೇ ಕನ್ನಡ ಮತ್ತು ಕರ್ನಾಟಕದ ಹಿತರಕ್ಷಣೆಗೆ ಅಂತ ಮಾತಾಡಿಕೊಳ್ಳುತ್ತಿದ್ದೆವು.

ಮುಂದೆ ಆ ಭಾವನೆ ಕುಸಿಯತೊಡಗಿತು. ಬೇರೆ ಬೇರೆ ವೃತ್ತಿಗಳಲ್ಲಿ ಏಳೆಂಟು ವರ್ಷ ಸರ್ವೀಸ್‌ ಮಾಡಿ, ಕೊನೆಗೆ ಪತ್ರಿಕೋದ್ಯಮಕ್ಕೆ ಬಂದಾಗ, ವಾಟಾಳ್‌ ಅಸಲಿಯತ್ತು ಸ್ಪಷ್ಟವಾಗಿ ಕಾಣಿಸತೊಡಗಿತು. ಪತ್ರಿಕೋದ್ಯಮದಲ್ಲಿ ಎರಡು ರೀತಿಯ ದುರಂತಗಳಿರುತ್ತವೆ. ಕೆಲವೊಂದು ವಿಷಯಗಳ ಬಗ್ಗೆ ತುಂಬ ಸ್ಪಷ್ಟವಾದ ಮಾಹಿತಿ ಇರುತ್ತದೆ. ಆದರೆ, ಅದನ್ನು ಬರೆಯಲು ಅಥವಾ ಪ್ರಸಾರ ಮಾಡಲು ಆಗುವುದಿಲ್ಲ. ಏಕೆಂದರೆ, ಬೇಕಾದ ಸಾಕ್ಷ್ಯಾಧಾರ ಸಿಗುವುದಿಲ್ಲ. ಅಂತಹ ಮಾಹಿತಿಗಳು, ನಮ್ಮ ನಮ್ಮ ಖಾಸಗಿ ಮಾತುಕತೆಯಲ್ಲಿಯೇ ಉಳಿದುಬಿಡುತ್ತವೆ. ಇನ್ನೊಂದಿಷ್ಟು ವಿಷಯಗಳಿರುತ್ತವೆ. ಅದರ ಬಗ್ಗೆ ಅನಗತ್ಯವಾಗಿ ಬರೆಯುವ, ವಿಸ್ತರಿಸುವ, ವೈಭವೀಕರಿಸುವ ಮನಸ್ಸಿರುವುದಿಲ್ಲ. ಉದಾಹರಣೆಗೆ ಹೇಳುವುದಾದರೆ, ಉಡುಪಿ ಶಾಸಕ ಪದ್ಮಪ್ರಿಯ ಅವರ ಸಾವು.

ಆದರೆ, ಮಾಧ್ಯಮದ ಸ್ಪರ್ಧೆಯಲ್ಲಿ ವೈಯಕ್ತಿಕ ಅನಿಸಿಕೆಗಳು ವೈಯಕ್ತಿಕವಾಗಿಯೇ ಉಳಿದುಬಿಡುತ್ತವೆ. ಇನ್ನೊಂದು ಚಾನೆಲ್‌ನವರು ಕೊಡುತ್ತಾರೆ ಎಂದು ನಾವು, ಅವರೆಲ್ಲಿ ಕೊಟ್ಟುಬಿಡುತ್ತಾರೋ ಎಂದು ಅವರು ಆತುರಾತುರವಾಗಿ ಸುದ್ದಿ ಪ್ರಸಾರವಾಗುತ್ತದೆ. ಅದೊಂಥರಾ ಸುಳಿಯಲ್ಲಿ ಸಿಕ್ಕ ಬಡ ದೋಣಿಯ ರೀತಿ.

ಆದರೆ, ನಿರ್ಧಾರ ತೆಗೆದುಕೊಳ್ಳುವ ಸ್ಥಾನದಲ್ಲಿರುವ ವ್ಯಕ್ತಿ ಸಂಯಮ ವಹಿಸಿದರೆ, ಕೆರಳಿಸುವ ಹಾಗೂ ವೈಭವೀಕರಿಸುವ ಸುದ್ದಿಗಳಿಗೆ ಖಂಡಿತ ಕತ್ತರಿ ಹಾಕಬಹುದು. ಪೂರ್ತಿ ನಿವಾರಿಸಲಾಗದಿದ್ದರೂ, ಅದರ ತೀವ್ರತೆಯನ್ನು ಖಂಡಿತ ಕಡಿಮೆ ಮಾಡಬಹುದು. ಆದರೆ, ಅಂತಹ ವಿವೇಕ ಇರುವವರ ಸಂಖ್ಯೆ ತುಂಬ ಕಡಿಮೆ. ವೈಭವೀಕರಿಸುವುದೇ ಮಾಧ್ಯಮದ ಮೂಲ ಉದ್ದೇಶ ಎಂಬಂತೆ ಬಹುತೇಕ ಜನ ವರ್ತಿಸುತ್ತಿರುವಾಗ, ಇಂತಹ ವಿವೇಕವಂತರು ಕಣ್ಣಿಗೆ ಬೀಳುವುದೂ ಕಡಿಮೆ.

ಇಂತಹ ಪರಿಸ್ಥಿತಿಯಲ್ಲಿ, ಕತ್ತೆ, ಎಮ್ಮೆ ಹತ್ತಿ ಪೋಸು ಕೊಡುವ, ಖಾಲಿ ಬಿಂದಿಗೆ ಪ್ರದರ್ಶಿಸಿ ಫೋಟೊಕ್ಕೆ ಹಲ್ಲು ತೋರಿಸುವ ವಾಟಾಳ್‌ ನಾಗರಾಜ್ ಅವರ ಬಾಲಿಶ ಪ್ರದರ್ಶನಗಳಿಗೆ ಮಾಧ್ಯಮ ಏಕೆ ಅಷ್ಟೊಂದು ಆದ್ಯತೆ ನೀಡುತ್ತದೆ? ನಾನು ಕೆಲಸ ಮಾಡಿದ ಬಹುತೇಕ ಸುದ್ದಿ ಸಂಸ್ಥೆಗಳಲ್ಲಿ ಸಂಬಂಧಿಸಿದ ಹಿರಿಯರಿಗೆ ಈ ವ್ಯಕ್ತಿಗೆ ಏಕೆ ಅನಗತ್ಯ ಆದ್ಯತೆ ಎಂದು ಕೇಳಿದ್ದೇನೆ. ನನ್ನ ಮಟ್ಟದಲ್ಲಿ ವಿರೋಧಿಸಿದ್ದೇನೆ. ಆ ವ್ಯಕ್ತಿಯದು ಬೂಟಾಟಿಕೆ ಮಾತ್ರ. ಏಕೆ ಪ್ರಚಾರ ಕೊಟ್ಟು ಓದುಗರ ದಾರಿ ತಪ್ಪಿಸುತ್ತೀರಿ ಎಂದು ವಾದಿಸಿದ್ದೇನೆ. ಆದರೆ, ಹಿರಿಯ ಪತ್ರಕರ್ತರಿಗೆ ವಾಟಾಳ್ ಬಗ್ಗೆ ಎಂಥದೋ ಭಯ. ಪ್ರಚಾರ ಸಿಗದಿದ್ದರೆ, ಆ ವ್ಯಕ್ತಿ ಕಚೇರಿಗೇ ಬಂದು ಗದ್ದಲ ಮಾಡಿಯಾನು ಎಂಬ ಆತಂಕ. ಹೋಗಲಿ ಬಿಡಿ, ಒಂದು ಫೊಟೊ, ಕ್ಯಾಪ್ಷನ್‌ ಹಾಕಿ ಕೈತೊಳೆದುಕೊಳ್ಳೋಣ ಎಂದು ಹೇಳುವುದು ಸಾಮಾನ್ಯ.

ಕನ್ನಡಕ್ಕಾಗಿ ಮಾಡಿದ ಕೆಲಸಕ್ಕಿಂತ, ಹೀಗೆ ಫೊಟೊ ಮೇಲೆ ಫೊಟೊಗಳು ಬಂದು ವಾಟಾಳ್‌ ಕನ್ನಡ ಹೋರಾಟಗಾರ ಎಂಬ ಹೆಸರನ್ನು ಸಂಪಾದಿಸಿದರು. ಪ್ರಾರಂಭದಲ್ಲಿ ಅವರು ಕನ್ನಡಕ್ಕಾಗಿ ಮಾಡಿದ ಹೋರಾಟ ಕುರಿತು ನನಗೆ ಅಪಾರ ಗೌರವವಿದೆ. ಆದರೆ, ಅದು ತುಂಬ ದಿನ ಉಳಿಯದೇ, ನಕಲಿ ಶ್ಯಾಮನಂತೆ ವರ್ತಿಸತೊಡಗಿದ್ದರ ಬಗ್ಗೆ ಅಷ್ಟೇ ತಿರಸ್ಕಾರವಿದೆ.

ಈಗ ಜನ ಕೂಡ ಅವರ ಅಸಲಿಯತ್ತು ಅರ್ಥ ಮಾಡಿಕೊಂಡಂತೆ ಕಾಣುತ್ತಿದೆ. ಅದಕ್ಕೆಂದೇ ವಿಧಾನಸಭೆ ಹಾಗೂ ವಿಧಾನ ಪರಿಷತ್ತಿನ ಚುನಾವಣೆಗಳಲ್ಲಿ ಠೇವಣಿ ಕಳೆದುಕೊಳ್ಳುವಂತೆ ಮರ್ಯಾದೆ ಮಾಡಿದ್ದಾರೆ. ಇನ್ನಾದರೂ ಬಡಾಯಿದಾಸ ಮಾತಿಗಿಂತ ಹೆಚ್ಚಾಗಿ ಕೃತಿಯ ಮೂಲಕ ಕನ್ನಡ ಸೇವೆ ಮಾಡುವಂತಾಗಲಿ. ಚಿಲ್ಲರೆ ತಂತ್ರಗಳ ಮೂಲಕ ಪ್ರಚಾರ ಗಿಟ್ಟಿಸುವ ಕೀಳು ಹವ್ಯಾಸ ಬಿಟ್ಟು, ಗಂಭೀರವಾಗಿ ಕನ್ನಡ ಬೆಳೆಸುವ ಕೆಲಸ ಮಾಡಲಿ.

- ಚಾಮರಾಜ ಸವಡಿ

ಹಾವೇರಿಯಲ್ಲಿ ನಡೆದಿದ್ದು ಏನು?

15 Jun 2008

3 ಪ್ರತಿಕ್ರಿಯೆ

ಮುಂಗಾರು ಮಳೆ ಬರುವುದಕ್ಕೆ ಮುನ್ನವೇ ಹಾವೇರಿ ಹಾಗೂ ಅದಕ್ಕೂ ಮುನ್ನ ಧಾರವಾಡದಲ್ಲಿ ರಸಗೊಬ್ಬರದ ಹೆಸರಿನಲ್ಲಿ ದೊಂಬಿ ಮತ್ತು ಹಿಂಸಾಕೃತ್ಯಗಳು ನಡೆದವು. ಆದರೆ, ರಾಜ್ಯದ ಯಾವುದೇ ಭಾಗದಲ್ಲಿ, ಅದರಲ್ಲೂ ಕೃಷಿಯಲ್ಲಿ ಅತಿ ಹೆಚ್ಚು ಪ್ರಮಾಣದಲ್ಲಿ ತೊಡಗಿಕೊಂಡಿರುವ ಜಿಲ್ಲೆಗಳಲ್ಲಿ ಇಂತಹ ಘಟನೆಗಳು ನಡೆಯದಿರುವುದು ಹಲವಾರು ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ. ಇಲ್ಲಿ ಕೊಂಚ ವಿಶ್ಲೇಷಣೆ ಅಗತ್ಯ.

ಮೊದಲನೆಯದು ಬದಲಾದ ರಾಜ್ಯ ರಾಜಕಾರಣ. ರಾಷ್ಟ್ರಪತಿ ಆಡಳಿತ ಜಾರಿಯಾಗುವುದಕ್ಕೆ ಕಾರಣವಾದ ಘಟನೆಗಳೇ ಇವತ್ತಿನ ದೊಂಬಿ ಪರಿಸ್ಥಿತಿಯಲ್ಲೂ ಮುಂದುವರೆದಿವೆ. ಯಾರಿಗೂ ಬಿಜೆಪಿ ಸರಳ ಬಹುಮತಕ್ಕೆ ಹತ್ತಿರ ಬರುತ್ತದೆ ಎಂಬ ನಂಬಿಕೆ ಇರಲಿಲ್ಲ. ಹೆಚ್ಚೆಂದರೆ, ಅದು ಕಳೆದ ಚುನಾವಣೆಗಿಂತ ಒಂದ್ಹತ್ತು ಹೆಚ್ಚು ಸ್ಥಾನಗಳನ್ನು ಪಡೆಯಬಹುದು ಎಂದು ಮಾತ್ರ ಊಹಿಸಿದ್ದರು. ರಾಷ್ಟ್ರಪತಿ ಆಡಳಿತಕ್ಕೂ ಪೂರ್ವದಲ್ಲಿ, ವಿಶ್ವಾಸಮತ ಸಾಬೀತು ಮಾಡಲು ಕರೆಯಲಾಗಿದ್ದ ಅಧಿವೇಶನದಲ್ಲಿ ದಿಢೀರ್‌ ಮುಖಭಂಗ ಅನುಭವಿಸಿದ ಬಿ.ಎಸ್‌. ಯಡಿಯೂರಪ್ಪನವರು ಅಸಹಾಯಕ ಸ್ಥಿತಿಯಲ್ಲಿ ರಾಜೀನಾಮೆ ನೀಡಬೇಕಾಗಿ ಬಂದುದು ಜನರಲ್ಲಿ ಅನುಕಂಪ ಮೂಡಿಸಿತು. ಊಟಕ್ಕೆ ಮನೆಯವರೆಗೆ ಕರೆದು, ಎಲೆ ಮುಂದೆ ಕೂತವರನ್ನು ಎಬ್ಬಿಸಿ ಕಳಿಸಿದರೆ ನೋಡಿದವರಿಗೆ ಏನನ್ನಿಸುತ್ತದೋ, ಅಂಥದೇ ಭಾವನೆ ಮತದಾರರಲ್ಲಿ ಉಂಟಾಯಿತು.

ಅಧಿಕಾರ ನೀಡಿದ ಜೆಡಿಎಸ್‌

ಹೀಗಾಗಿ ಮತದಾರನ ಒಲವು ಬಿಜೆಪಿ ಕಡೆ ತಿರುಗಿತು. ಇವತ್ತಿನ ದಿನಗಳವರೆಗೂ ಬಹುತೇಕ ಜನರಿಗೆ ಬಿಜೆಪಿ ಎಂದರೆ ಯಡಿಯೂರಪ್ಪ ಎಂಬ ಭಾವನೆಯಿದೆ. ಹೀಗಾಗಿ ಯಡಿಯೂರಪ್ಪನವರ ಮೇಲಿನ ಅನುಕಂಪ ಬಿಜೆಪಿಗೆ ಲಾಭದಾಯಕವಾಯಿತು. ನಿರೀಕ್ಷೆ ಇರದ ಕ್ಷೇತ್ರಗಳಲ್ಲಿಯೂ ಬಿಜೆಪಿ ಜಯಭೇರಿ ಬಾರಿಸಲು ಯಡಿಯೂರಪ್ಪನವರ ಮೇಲೆ ವ್ಯಕ್ತವಾದ ಅನುಕಂಪವೇ ಕಾರಣ.
ಆದರೆ, ಇತರ ರಾಜಕೀಯ ಪಕ್ಷಗಳು ಜನರ ಈ ಮನೋಭಾವನೆಯನ್ನು ಸರಿಯಾಗಿ ಗುರುತಿಸಿರಲಿಲ್ಲ. ಏಕೆಂದರೆ, ಬಿಜೆಪಿಗೆ ಗ್ರಾಮೀಣ ಪ್ರದೇಶದಲ್ಲಿ ಬೇರುಗಳಿಲ್ಲ. ಅದೇನಿದ್ದರೂ ನಗರ ಪ್ರದೇಶದಲ್ಲಿ ಮಾತ್ರ ಅಸ್ತಿತ್ವದಲ್ಲಿರುವ ಪಕ್ಷ ಎಂಬ ಭಾವನೆ ಅವರಲ್ಲಿತ್ತು. ಹೀಗಾಗಿ, ಚುನಾವಣೆಯನ್ನು ಅವು ಆತ್ಮವಿಶ್ವಾಸದಿಂದಲೇ ಎದುರಿಸಿದವು. ರಾಷ್ಟ್ರಪತಿ ಆಡಳಿತಕ್ಕೂ ಮುನ್ನ ವ್ಯಕ್ತವಾಗಿದ್ದ ಅನುಕಂಪ, ನಾಲ್ಕೈದು ತಿಂಗಳಲ್ಲಿ ಕರಗಿರುತ್ತದೆ ಎಂದು ಅವು ಅಂದುಕೊಂಡಿದ್ದವು. ಒಬ್ಬ ಯಡಿಯೂರಪ್ಪನವರಿಗೆ ಅನ್ಯಾಯವಾದರೆ, ಇಡೀ ಪಕ್ಷಕ್ಕೆ ಅದು ಹೇಗೆ ಲಾಭವಾಗುತ್ತದೆ ಎಂಬ ಪ್ರಶ್ನೆ ಅವರಲ್ಲಿತ್ತು.

ಆದರೆ, ಮತದಾರ ಇವರೆಲ್ಲರ ಲೆಕ್ಕಾಚಾರಗಳನ್ನು ತಲೆಕೆಳಗಾಗಿಸಿಬಿಟ್ಟ. ಯಡಿಯೂರಪ್ಪನವರ ಮೇಲಿನ ಅನುಕಂಪ ಬಿಜೆಪಿ ಬೆಂಬಲಿಸುವಂತೆ ಮಾಡಿತು. ಹಾಗೆ ನೋಡಿದರೆ, ಈ ಸಲದ ಚುನಾವಣೆಯಲ್ಲಿ ಬಿಜೆಪಿಗೆ ದೊರೆತ ಗೆಲುವು ಅಪರೂಪದ್ದು. ಏಕೆಂದರೆ, ಸ್ವಂತ ಸಾಮರ್ಥ್ಯದ ಮೇಲೆ ಸರ್ಕಾರ ರಚಿಸಲಾಗದೇ ಹಳೆಯ ಪಕ್ಷ ಕಾಂಗ್ರೆಸ್‌ ಏದುಸಿರು ಬಿಡುತ್ತಿತ್ತು. ತಮಗೆ ಸರಳ ಬಹುಮತ ಬರುವುದಿಲ್ಲ ಎಂದು ಸ್ವತಃ ಜೆಡಿಎಸ್‌ನ ಎಚ್‌.ಡಿ. ದೇವೇಗೌಡರೇ ಬಹಿರಂಗವಾಗಿ ಹೇಳಿಯಾಗಿತ್ತು. ಸಮ್ಮಿಶ್ರ ಸರ್ಕಾರ ಬರುವುದೇ ಖಂಡಿತ ಎಂದು ಅವರೆಲ್ಲ ಭಾವಿಸಿದ್ದರು.
ಇನ್ನೊಂದೆಡೆ, ಬಿಜೆಪಿಯ ತತ್ವ ಮತ್ತು ಸಿದ್ಧಾಂತವನ್ನು ಬೆಂಬಲಿಸದ ಮುಸ್ಲಿಂ ಮತ್ತು ಕ್ರಿಶ್ಚಿಯನ್‌ ಮತದಾರರು ಬಿಜೆಪಿಗೆ ಮತ ಹಾಕಿರುವುದಿಲ್ಲ. ಹೀಗಿದ್ದರೂ ಬಿಜೆಪಿ ಸರಳ ಬಹುಮತಕ್ಕೆ ೩ ಸ್ಥಾನ ಹತ್ತಿರಕ್ಕೆ ಬಂದಿತು. ಅಂದರೆ, ಗಳಿಸಿದ ೧೧೦ ಸ್ಥಾನಗಳು ಸ್ವಂತ ಶಕ್ತಿಯಿಂದಲೇ. ಧಾರ್ಮಿಕ ಅಲ್ಪಸಂಖ್ಯಾತರ ಮತಗಳಿಲ್ಲದೇ ಬಂದಿವೆ ಎಂದೇ ಲೆಕ್ಕ. ಚುನಾವಣೆಯಲ್ಲಿ ಜಾತಿ ಹಾಗೂ ಅಲ್ಪಸಂಖ್ಯಾತರ ನಿರ್ಣಾಯಕ ಪಾತ್ರ ನೋಡಿದರೆ, ಬಿಜೆಪಿ ಕಳೆದ ಚುನಾವಣೆಗಿಂತ ೩೦ಕ್ಕೂ ಅಧಿಕ ಸ್ಥಾನಗಳನ್ನು ಗಳಿಸಿದ್ದು ನಿಜಕ್ಕೂ ಅಪರೂಪ. ಈ ಯಶಸ್ಸಿಗೆ ಮುಖ್ಯ ಕಾರಣಕರ್ತ ಎಂದರೆ ಯಡಿಯೂರಪ್ಪ.

ಏಕೆಂದರೆ, ಬಿಜೆಪಿಯನ್ನು ಮತದಾರ ಗುರುತಿಸಿದ್ದು ಯಡಿಯೂರಪ್ಪನವರ ಮೂಲಕ. ಅವರಿಗಾದ ಅನ್ಯಾಯ ಬಿಜೆಪಿಗಾದ ಅನ್ಯಾಯ ಎಂದೇ ಭಾವಿಸಿದ. ಬಿಜೆಪಿಯನ್ನು ಬೆಂಬಲಿಸುವ ಮೂಲಕ ಮಾತ್ರ ಯಡಿಯೂರಪ್ಪನವರಿಗೆ ಆದ ಅನ್ಯಾಯ ಸರಿಪಡಿಸಲು ಸಾಧ್ಯ ಎಂದು ಭಾವಿಸಿದ. ಆ ಪಕ್ಷ ಅಧಿಕಾರ ಹಿಡಿಯಲು ಇಂಥದೊಂದು ಮನಃಸ್ಥಿತಿ ಸಹಕಾರಿಯಾಯಿತು. ಚುನಾವಣೆಯಲ್ಲಿ ಸಹ ಯಡಿಯೂರಪ್ಪನವರೇ ಪ್ರಮುಖ ಪ್ರಚಾರಕ. ಕಾಂಗ್ರೆಸ್‌ನಲ್ಲಿ ಸೋನಿಯಾ ಗಾಂಧಿ, ರಾಹುಲ್‌ ಗಾಂಧಿ, ಪ್ರಧಾನಮಂತ್ರಿ ಮನಮೋಹನ್‌ ಸಿಂಗ್‌ರಂಥ ಪ್ರಮುಖರೇ ಪ್ರಚಾರ ನಡೆಸಿದರೂ ಅವರು ಜನರನ್ನು ಸೆಳೆಯುವಲ್ಲಿ ವಿಫಲರಾದರು. ಜೆಡಿಎಸ್‌ನಲ್ಲಿ ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ, ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿಯವರೂ ಜನರನ್ನು ಆಕರ್ಷಿಸುವಲ್ಲಿ ಯಶಸ್ಸು ಕಾಣಲಿಲ್ಲ. ಆದರೆ, ಯಡಿಯೂರಪ್ಪನವರು ನಡೆಸಿದ್ದು ಮಾತ್ರ ಸ್ವಂತ ಬಲದ ಚುನಾವಣೆ ಪ್ರಚಾರ.

ಹೈಕಮಾಂಡ್‌ ಬೆಂಬಲ

ಬಿಜೆಪಿ ಹೈಕಮಾಂಡ್‌ ಈ ಎಲ್ಲ ಅಂಶಗಳನ್ನು ಸ್ಪಷ್ಟವಾಗಿ ಗುರುತಿಸಿದೆ. ಅದಕ್ಕೆಂದೇ ಯಡಿಯೂರಪ್ಪನವರಿಗೆ ಪೂರ್ಣ ಸ್ವಾತಂತ್ರವನ್ನು ಅದು ನೀಡಿತ್ತು. ಈ ಕಾರಣಕ್ಕಾಗಿಯೇ ಟಿಕೆಟ್‌ ಹಂಚಿಕೆಯಲ್ಲಿ ಯಡಿಯೂರಪ್ಪನವರ ಪ್ರಭಾವ ಎದ್ದು ಕಾಣುತ್ತಿತ್ತು. ಪಕ್ಷ ಅಧಿಕಾರಕ್ಕೆ ಬಂದು, ಸಂಪುಟ ರಚಿಸುವಾಗಲೂ ಯಾರನ್ನು ಆರಿಸಬೇಕೆಂಬ ತೀರ್ಮಾನವನ್ನು ಯಡಿಯೂರಪ್ಪನವರಿಗೇ ಬಿಡಲಾಗಿತ್ತು. ಬಿಜೆಪಿಯನ್ನು ಅಧಿಕಾರಕ್ಕೆ ತಂದವರು ಅವರು. ಸರ್ಕಾರ ನಡೆಸಲು ಯಾರನ್ನು ಆರಿಸಬೇಕೆಂಬುದನ್ನೂ ಅವರೇ ನಿರ್ಧರಿಸಲಿ ಎಂಬುದು ಹೈಕಮಾಂಡ್‌ನ ಇಂಗಿತ.

ಟಿಕೆಟ್‌ ಹಂಚಿಕೆಯಲ್ಲಿ ತೋರಿದ ಜಾಣ್ಮೆಯನ್ನೇ ಯಡಿಯೂರಪ್ಪನವರು ಸಚಿವ ಸಂಪುಟ ರಚನೆ ಮತ್ತು ಖಾತೆ ಹಂಚಿಕೆಯಲ್ಲಿಯೂ ತೋರಿದ್ದಾರೆ. ಪಕ್ಷೇತರರ ಬೆಂಬಲ ಅನಿವಾರ್ಯ ಎಂಬುದನ್ನು ಅರಿತು ಅವರಿಗೆಲ್ಲ ಸಂಪುಟ ದರ್ಜೆ ಸ್ಥಾನ ನೀಡಿದ್ದಾರೆ. ಆದರೆ, ಪ್ರಮುಖ ಖಾತೆಗಳು ಪಕ್ಷದ ಸದಸ್ಯರನ್ನು ಬಿಟ್ಟು ಹೋಗದಂತೆ ನೋಡಿಕೊಂಡಿದ್ದಾರೆ. ಮುಂದೆಂದಾದರೂ ಜೆಡಿಎಸ್‌ ವಿಭಜನೆಯಾಗಿ, ಅದರ ಸದಸ್ಯರು ಬಿಜೆಪಿ ಬೆಂಬಲಿಸುವುದಾದರೂ, ಅವರು ಸಂಪುಟದಲ್ಲಿ ಪ್ರಾತಿನಿಧ್ಯ ಕೇಳದ ರೀತಿ ಒಂದೇ ಸಲಕ್ಕೆ ೨೯ ಜನರನ್ನು ಸಚಿವರನ್ನಾಗಿಸುವ ಮೂಲಕ ಭವಿಷ್ಯದ ಅಪಾಯವನ್ನು ನಿವಾರಿಸಿಕೊಂಡಿದ್ದಾರೆ. ಹಾಗಂತ ತಮ್ಮ ವಿರೋಧಿಗಳನ್ನು ತೃಪ್ತಪಡಿಸಲೂ ಅವರು ಮರೆತಿಲ್ಲ. ಅನಂತ ಕುಮಾರ್‌ ಬಣಕ್ಕೆ ಮೂರು ಸಚಿವ ಸ್ಥಾನ ನೀಡಿದ್ದಾರೆ. ಶೆಟ್ಟರ್‌ ಅವರನ್ನು ಸ್ಪೀಕರ್‌ ಹುದ್ದೆಯಲ್ಲಿ ಕೂರಿಸಿದ್ದಾರೆ. ತಮ್ಮ ವಿರೋಧಿಗಳಾದ ಮುಖ್ಯಮಂತ್ರಿ ಚಂದ್ರು ಅವರನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರನ್ನಾಗಿ ಮಾಡಿದ್ದಾರೆ. ಸುತ್ತಲೂ ವಿರೋಧಿಗಳನ್ನು ಹೊಂದಿರುವ ಹಾಗೂ ಹಗ್ಗದ ನಡಿಗೆಯ ರೀತಿಯಲ್ಲಿಯೇ ಎಲ್ಲರನ್ನೂ ಓಲೈಸಿಕೊಂಡು ಅವಧಿ ಪೂರ್ತಿಗೊಳಿಸುವ ಅನಿವಾರ್ಯತೆಯಲ್ಲಿರುವ ಯಡಿಯೂರಪ್ಪನವರ ಈ ಜಾಣ್ಮೆಯಿಂದ ಪ್ರತಿ ಪಕ್ಷಗಳು ಹಾಗೂ ಅವರ ಇತರ ವಿರೋಧಿಗಳು ಕಂಗೆಟ್ಟಿರುವುದು ಸುಳ್ಳಲ್ಲ.

ರಸಗೊಬ್ಬರದ ಹೆಸರಲ್ಲಿ ವಿವಾದ

ಹೀಗಾಗಿ, ಒಂದು ವಾರ ಹಳೆಯದಾದ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ರಸಗೊಬ್ಬರ ಕೊರತೆಯನ್ನು ಅಸ್ತ್ರವಾಗಿ ಬಳಸಿಕೊಳ್ಳಲಾಯಿತು. ಎಲ್ಲರೂ ಬಲ್ಲ ಸರಳ ಸತ್ಯವೇನೆಂದರೆ, ಗೊಬ್ಬರದಂಥ ವಸ್ತುವಿನ ಕೊರತೆ ವಾರ ಅಥವಾ ತಿಂಗಳಲ್ಲಿ ಉಂಟಾಗುವಂಥದ್ದಲ್ಲ. ಕನಿಷ್ಠ ಮೂರು ತಿಂಗಳು ಮುಂಚಿತವಾಗಿ, ಬೇಡಿಕೆಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಬೇಕಾಗುತ್ತದೆ. ಇದನ್ನೆಲ್ಲ ನಿಭಾಯಿಸಲೆಂದೇ ಹಲವಾರು ಇಲಾಖೆಗಳಿವೆ.

ಆದರೆ, ಮೂರು ತಿಂಗಳ ಹಿಂದೆ ರಾಜ್ಯದಲ್ಲಿ ಚುನಾಯಿತ ಸರ್ಕಾರವೇ ಇರಲಿಲ್ಲವಲ್ಲ? ಆ ಸಮಯದಲ್ಲಿ ಅಧಿಕಾರದಲ್ಲಿದ್ದುದು ರಾಜ್ಯಪಾಲರಾದ ರಾಮೇಶ್ವರ ಠಾಕೂರ್‌. ರಾಷ್ಟ್ರಪತಿಗಳ ಆಡಳಿತದಲ್ಲಿ ರಾಜ್ಯಪಾಲರೇ ಮುಖ್ಯಮಂತ್ರಿ ಇದ್ದಂತೆ. ಹಿರಿಯ ಅಧಿಕಾರಿಗಳು ಸಚಿವರಿದ್ದಂತೆ. ಬರಲಿರುವ ಮುಂಗಾರು ಹಂಗಾಮಿನ ಬಿತ್ತನೆಗೆ ಬೇಕಾದ ಪ್ರಮಾಣದ ರಸಗೊಬ್ಬರ ಹಾಗೂ ಬಿತ್ತನೆ ಬೀಜ ತರಿಸುವ ಕೆಲಸವನ್ನು ಅವರೇಕೆ ಮಾಡಲಿಲ್ಲ? ಬೀಜ ಹಾಗೂ ರಸಗೊಬ್ಬರದ ಬೇಡಿಕೆ ಅನಿರೀಕ್ಷಿತವಾಗಿ ಹುಟ್ಟಿದ್ದೇನಲ್ಲ. ಪ್ರತಿ ವರ್ಷ ಇದೇ ಸಮಯದಲ್ಲಿ ತಾನೆ ಬಿತ್ತನೆ ನಡೆಯುವುದು? ಹಾಗಿದ್ದರೂ, ರಾಜ್ಯಪಾಲರು ಇತ್ತ ಗಮನ ಹರಿಸಲಿಲ್ಲ. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಸಮಯದಲ್ಲೂ ರೈತರ ಅಸಮಾಧಾನ ಕಾಣಲಿಲ್ಲ. ಆದರೆ, ಯಾವಾಗ ಬಿ.ಎಸ್‌. ಯಡಿಯೂರಪ್ಪನವರು ಹಸಿರು ಶಾಲು ಹೊದ್ದುಕೊಂಡು ರೈತ ಮತ್ತು ಸತ್ಯದ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರೋ, ಕೆಲವರಲ್ಲಿ ತಳಮಳ ಶುರುವಾಯಿತು. ಸಂಪುಟ ರಚನೆ ಹಾಗೂ ಖಾತೆ ಹಂಚಿಕೆಗಳ ಜಾಣ್ಮೆ ಕಂಡು ಅದು ಇನ್ನಷ್ಟು ಹೆಚ್ಚಾಯಿತು.

ಹೀಗಾಗಿ, ಧಾರವಾಡ ಹಾಗೂ ಹಾವೇರಿಗಳು ರಸಗೊಬ್ಬರದ ಕಾರಣ ಹೊತ್ತಿ ಉರಿದವು. ರಸಗೊಬ್ಬರ ಕೊರತೆಯ ಅಸಲಿ ಕಾರಣಗಳನ್ನು ವಿವರಿಸುವ ಜವಾಬ್ದಾರಿಯನ್ನು ಜನನಾಯಕರು ನಿರ್ವಹಿಸದೇ ಉರಿಯುವ ಬೆಂಕಿಗೆ ತುಪ್ಪ ಸುರಿದಂತೆ ವರ್ತಿಸಿದರು. ಬಿಜೆಪಿ ಸರ್ಕಾರವೇ ಕೊರತೆಗೆ ಕಾರಣ ಎಂದು ಬಹಿರಂಗವಾಗಿ ದೂರಿ ರೈತರನ್ನು ರೊಚ್ಚಿಗೆಬ್ಬಿಸಿದರು.

ಕೊರತೆಗೆ ಕಾರಣಗಳು

ಆದರೆ, ರಸಗೊಬ್ಬರ ಹಲವಾರು ಕಾರಣಗಳಿವೆ.

ರಸಗೊಬ್ಬರ ತಯಾರಿಕೆಗೆ ದೊಡ್ಡ ಪ್ರಮಾಣದಲ್ಲಿ ಬೇಕಾದ ರಂಜಕಾಮ್ಲ (ಫಾಸ್ಫರಿಕ್ ಆಸಿಡ್‌)ದ ಆಮದು ಸುಂಕವನ್ನು ಕೇಂದ್ರ ಸರ್ಕಾರ ಹೆಚ್ಚಿಸಿದೆ. ಅಲ್ಲದೇ, ಖಾಸಗಿ ರಸಗೊಬ್ಬರ ತಯಾರಕರಿಗೆ ನೀಡಬೇಕಾದ ಸಹಾಯಧನ ಮೊತ್ತವನ್ನು ಕಳೆದ ಹತ್ತು ವರ್ಷಗಳಿಂದ ನೀಡಿಲ್ಲ. ಒಂದೆಡೆ ಕಚ್ಚಾ ವಸ್ತುವಿಗೆ ಹೆಚ್ಚಿಸಿದ ತೆರಿಗೆ, ಇನ್ನೊಂದೆಡೆ ಕಳೆದ ಹತ್ತು ವರ್ಷಗಳ ಸಹಾಯಧನ ಬಾರದಿರುವುದು ಖಾಸಗಿ ಉತ್ಪಾದಕರನ್ನು ಕಂಗೆಡಿಸಿತು. ಪರಿಣಾಮ, ರಸಗೊಬ್ಬರ ಉತ್ಪಾದನೆ ಕುಂಠಿತವಾಯಿತು. ಇದರಿಂದ ರಾಷ್ಟ್ರೀಯ ಮಟ್ಟದಲ್ಲಿ ರಸಗೊಬ್ಬರದ ಉತ್ಪಾದನೆ ಮೇಲೆ ಹೊಡೆತ ಬಿತ್ತು.

ಕರ್ನಾಟಕದಲ್ಲಿ ರಾಷ್ಟ್ರಪತಿ ಆಡಳಿತ ಜಾರಿಯಿದ್ದ ಸಮಯದಲ್ಲಿ, ರಾಜ್ಯಕ್ಕೆ ಬೇಕಾದ ಪ್ರಮಾಣದ ರಸಗೊಬ್ಬರಕ್ಕೆ ಬೇಡಿಕೆ ಸಲ್ಲಿಸುವ ಕೆಲಸವನ್ನು ಅಧಿಕಾರಿಗಳು ಸರಿಯಾಗಿ ಮಾಡಲಿಲ್ಲ. ಬಿಜೆಪಿ ಅಧಿಕಾರಕ್ಕೆ ಬರುವುದನ್ನು ನಿರೀಕ್ಷಿಸದಿದ್ದ ಶಕ್ತಿಗಳು ರಸಗೊಬ್ಬರ ಕೊರತೆಯನ್ನು ಸಮಸ್ಯೆ ಎಂಬಂತೆ ಬಿಂಬಿಸುತ್ತ ಹೋದವು. ರಾಜ್ಯದ ಇತರೆಡೆ ಕಂಡು ಬರದ ಹಿಂಸಾಚಾರ ಕೇವಲ ಹಾವೇರಿ ಮತ್ತು ಧಾರವಾಡದಲ್ಲಿ ಕಂಡು ಬಂದಿತು. ಕೊರತೆ ಇದೆ ಎಂದೇ ಆಗಿದ್ದರೆ ಅದನ್ನು ತುಂಬಿಕೊಳ್ಳಲು ಹೆಚ್ಚುವರಿ ರಸಗೊಬ್ಬರ ತರಿಸುವುದು ಕಷ್ಟವಾಗಿರಲಿಲ್ಲ. ಆದರೆ, ರಸಗೊಬ್ಬರವನ್ನು ಕೊಡುವುದೇ ಇಲ್ಲ ಎಂಬಂತೆ ಸಮಸ್ಯೆಯನ್ನು ಬಿಂಬಿಸುವ ಮೂಲಕ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರಕ್ಕೆ ಮುಜುಗರ ಉಂಟು ಮಾಡುವ ಕೆಲಸ ಯೋಜನಾಬದ್ಧವಾಗಿ ನಡೆಯಿತು.

ಇಲ್ಲಿ ಇನ್ನೂ ಒಂದು ಅಂಶವನ್ನು ಗಮನಿಸಬಹುದು. ಚುನಾವಣೆ ಸಮಯದಲ್ಲಿ, ತಾವು ಗುಜರಾತ್‌ ಮುಖ್ಯಮಂತ್ರಿ ನರೇಂದ್ರ ಮೋದಿ ಅವರ ಮಾದರಿಯನ್ನು ಕರ್ನಾಟಕದಲ್ಲಿ ಅನುಸರಿಸುವುದಾಗಿ ಯಡಿಯೂರಪ್ಪ ಹೇಳಿದ್ದರು. ಇಡೀ ದೇಶದಲ್ಲಿ ಅಭಿವೃದ್ಧಿಗೆ ಹೆಸರಾದ ರಾಜ್ಯ ಗುಜರಾತ್‌. ಅದರ ಆರ್ಥಿಕ ವೃದ್ಧಿ ದರ ಇತರ ರಾಜ್ಯಗಳನ್ನು ಮೀರಿಸುವಂತಿದೆ. ಇಡೀ ದೇಶದಲ್ಲಿ ಅತ್ಯಧಿಕ ಪ್ರಮಾಣದ ವಿದೇಶಿ ಬಂಡವಾಳವನ್ನು ಆ ರಾಜ್ಯ ಆಕರ್ಷಿಸುತ್ತಿದೆ. ನರೇಂದ್ರ ಮೋದಿ ಮುಖ್ಯಮಂತ್ರಿಯಾದ ನಂತರ, ಗುಜರಾತ್‌ನ ಪ್ರಗತಿ ದರ ಏರುಗತಿಯಲ್ಲಿದೆ. ಯಡಿಯೂರಪ್ಪನವರು ಈ ಮಾದರಿಯನ್ನು ಕರ್ನಾಟಕದಲ್ಲಿ ತರುವ ಇಂಗಿತ ವ್ಯಕ್ತಪಡಿಸಿದ್ದರು. ಹೇಗೆ ಗುಜರಾತ್‌ನಲ್ಲಿ ನರೇಂದ್ರ ಮೋದಿಯವರಿಗೆ ಪಕ್ಷದ ಹೈಕಮಾಂಡ್‌ನಿಂದ ಪೂರ್ಣ ಸ್ವಾತಂತ್ರ ಸಿಕ್ಕಿತ್ತೋ ಅಂಥದೇ ಸ್ವಾತಂತ್ರ ಕರ್ನಾಟಕದಲ್ಲಿ ಬಿ.ಎಸ್‌. ಯಡಿಯೂರಪ್ಪನವರಿಗೆ ಸಿಕ್ಕಿದೆ.

ಇವೆಲ್ಲ ಬೆಳವಣಿಗೆಗಳನ್ನು ಸಹಿಸದ ಕುತಂತ್ರ ಮನೋಭಾವದ ಜನ ಗೊಬ್ಬರದ ಹೆಸರಿನಲ್ಲಿ ಶಾಂತಿ ಕದಡಲು, ಸರ್ಕಾರಕ್ಕೆ ಮುಜುಗರ ಉಂಟು ಮಾಡಲು ಯತ್ನಿಸಿದರು. ನಿಜವಾದ ಕಾರಣಗಳನ್ನು ಮುಚ್ಚಿಡುವ ಮೂಲಕ ಜನರನ್ನು ರೊಚ್ಚಿಗೆಬ್ಬಿಸಿದರು. ಪರಿಣಾಮ, ಮುಗ್ಧ ರೈತ ಬಲಿಯಾದ. ಹತ್ತಾರು ಜನ ಗಾಯಗೊಂಡರು. ಲಕ್ಷಾಂತರ ರೈತರ ಮನಸ್ಸು ಮುರಿಯಿತು.

ಕೀಳು ರಾಜಕೀಯ ಮಾಡುವುದನ್ನು ಬಿಟ್ಟು ನಮ್ಮ ರಾಜಕಾರಣಿಗಳು ಪ್ರಬುದ್ಧತೆ ತೋರಬೇಕಿದೆ. ಅಭಿವೃದ್ಧಿಗಾಗಿ ಆಡಳಿತ ಪಕ್ಷವನ್ನು ಒತ್ತಾಯಿಸಲಿ. ಸರ್ಕಾರವನ್ನು ಇಕ್ಕಟ್ಟಿನಲ್ಲಿ ಸಿಕ್ಕಿಸುವುದಕ್ಕಿಂತ, ಜನರಿಗೆ ಅನುಕೂಲಕರವಾಗುವ ನೀತಿಗಳ ಜಾರಿಗೆ ಒತ್ತು ಕೊಡಲಿ. ಇಲ್ಲದಿದ್ದರೆ, ರಾಜಕೀಯ ಎನ್ನುವುದು ಇನ್ನಷ್ಟು ಅಸಹ್ಯಕರ ವಿಷಯ ಅನ್ನಿಸಿಕೊಳ್ಳುತ್ತದೆ.
- ಚಾಮರಾಜ ಸವಡಿ

ಕರ್ನಾಟಕ ಚುನಾವಣೆ-ಎರಡು ಹಂತಗಳು

18 May 2008

0 ಪ್ರತಿಕ್ರಿಯೆ

ಕರ್ನಾಟಕ ಚುನಾವಣೆ ಹೊಸದೊಂದು ಹೊಸ್ತಿಲು ತಲುಪಿದೆ.

ಎಲ್ಲ ಲೆಕ್ಕಾಚಾರಗಳು ಬಹುತೇಕ ಸರಿಯಾದರೆ, ಬಿಜೆಪಿ ಸರಳ ಬಹುಮತದ ಹತ್ತಿರ ಬರಲಿದೆ. ಎಲ್ಲ ವಾದ-ವಿವಾದಗಳನ್ನು ಮೀರಿ ಪ್ರಥಮ ಬಿಜೆಪಿ ಸರ್ಕಾರ (ಈ ಹಿಂದೆ ಆಗಿದ್ದು ಸಮ್ಮಿಶ್ರ ಸರ್ಕಾರ) ರಾಜ್ಯದಲ್ಲಿ ಅಸ್ತಿತ್ವಕ್ಕೆ ಬರುವ ಲಕ್ಷಣಗಳು ಸ್ಪಷ್ಟ.

ಮೊದಲ ಹಂತದ ಚುನಾವಣೆಯಲ್ಲಿ ೮೯ ಸ್ಥಾನಗಳಿಗೆ ಚುನಾವಣೆ ನಡೆಯಿತು. ಸಮೀಕ್ಷೆಗಳ ಪ್ರಕಾರ ಬಿಜೆಪಿ ಸುಮಾರು ೩೯ ಸ್ಥಾನಗಳನ್ನು ಗಳಿಸಲಿದೆ. ಅಂದರೆ, ಜೆಡಿಎಸ್‌ ಪ್ರಬಲವಾಗಿರುವ ಹಳೆಯ ಮೈಸೂರು ವಿಭಾಗದಲ್ಲಿ ಅದು ಮುಂದಿದೆ ಎಂದಾಯಿತು. ಎರಡನೇ ಹಂತದಲ್ಲಿ ನಡೆದ ಹತ್ತು ಜಿಲ್ಲೆಗಳ ೬೬ ಕ್ಷೇತ್ರಗಳ ಚುನಾವಣೆಯಲ್ಲಿ ಅದು ಕನಿಷ್ಠ ೩೫ ಸ್ಥಾನಗಳನ್ನು ಗಳಿಸಲಿದೆ. ಅಂದರೆ, ಚುನಾವಣೆ ಮುಗಿದಿರುವ ೧೫೫ ಕ್ಷೇತ್ರಗಳಲ್ಲಿ ಬಿಜೆಪಿ ಗಳಿಸಬಹುದಾದ ಸ್ಥಾನಗಳು ೭೦ಕ್ಕೂ ಅಧಿಕ. ಮೂರನೇ ಹಂತದ ಚುನಾವಣೆಯಲ್ಲಿ ೬೯ ಸ್ಥಾನಗಳಿಗೆ ನಡೆಯಲಿರುವ ಸ್ಪರ್ಧೆಯಲ್ಲಿಯೂ ಇದೇ ಪ್ರಮಾಣದ ಮೇಲುಗೈ ಸಾಧಿಸುವ ಲಕ್ಷಣಗಳು ಸ್ಪಷ್ಟವಾಗಿವೆ.

ಅಂದರೆ, ಕರ್ನಾಟಕ ವಿಧಾನಸಭೆಯ ಒಟ್ಟು ೨೨೪ ಸ್ಥಾನಗಳ ಪೈಕಿ ಬಿಜೆಪಿ ೧೦೦ರಿಂದ ೧೧೦ ಸ್ಥಾನಗಳನ್ನು ಪಡೆಯುವ ಸಾಧ್ಯತೆಗಳಿವೆ. ಸರಳ ಬಹುಮತಕ್ಕೆ ೧೧೩ ಸ್ಥಾನಗಳು ಸಾಕು. ತನ್ನ ಹಾಗೂ ಇತರ ಪಕ್ಷದ ಬಂಡಾಯ ಅಭ್ಯರ್ಥಿಗಳು ಹಾಗೂ ಪಕ್ಷೇತರರನ್ನು ತನ್ನೆಡೆಗೆ ಸೆಳೆಯುವುದು ಬಿಜೆಪಿಗೆ ಕಷ್ಟವಾಗದು. ಆಗ ಸರಳ ಬಹುಮತಕ್ಕೆ ಇರುವ ಕೊರತೆ ಸರಳವಾಗಿಯೇ ನಿವಾರಣೆಯಾಗುತ್ತದೆ.

ಇವೆಲ್ಲ ಲಕ್ಷಣಗಳನ್ನು ನೋಡಿದರೆ, ರಾಜ್ಯಕ್ಕೆ ಈ ಬಾರಿ ಅತಂತ್ರ ವಿಧಾನಸಭೆ ಬೆದರಿಕೆ ಕಾಡುವುದಿಲ್ಲ. ಸ್ಪಷ್ಟ ಬಹುಮತ ಇಲ್ಲದಿದ್ದರೂ ಸರಳ ಬಹುಮತಕ್ಕೆ ಮೋಸವಿಲ್ಲ. ಬಿ.ಎಸ್‌. ಯಡಿಯೂರಪ್ಪನವರನ್ನು ಮುಖ್ಯಮಂತ್ರಿ ಎಂದು ಬಿಂಬಿಸಿರುವುದರಿಂದ, ಆ ಗೊಂದಲವೂ ನಿವಾರಣೆಯಾಗಿದೆ. ರಾಜಕೀಯ ಪಂಡಿತರ ಲೆಕ್ಕಾಚಾರ, ಭವಿಷ್ಯ, ಊಹಾಪೋಹಗಳನ್ನು ಮೀರಿ ಮತದಾರ ಬಿಜೆಪಿ ಪರ ನಿಂತಿದ್ದಾನೆ.

ಇದು ಇವತ್ತಿನ ಪರಿಸ್ಥಿತಿ.

ಮಾಧ್ಯಮದ ಮೇಲೆ ಆರೋಪ

ಹಲವಾರು ಪ್ರಶ್ನೆಗಳಿಗೆ ಇಲ್ಲಿ ಉತ್ತರ ಅಗತ್ಯ. ಮೊದಲನೆಯದು, ಮಾಧ್ಯಮಗಳು ಬಿಜೆಪಿ ಪರ ನಿಂತವು ಎಂಬ ಆರೋಪದ ಬಗ್ಗೆ:

ಪತ್ರಿಕೆಗಳು ಹಾಗೂ ಪತ್ರಕರ್ತರು ಒಂದು ಪಕ್ಷ ಅಥವಾ ನಾಯಕನ ಪರ ನಿಲ್ಲುವುದು ಮೊದಲಿನಿಂದಲೂ ನಡೆದೇ ಇದೆ. ಆದರೆ, ಬಿಜೆಪಿಗೆ ’ಇದು ನಮ್ಮ ಪತ್ರಿಕೆ’ ಎಂಬ ಭಾವನೆ ಹುಟ್ಟಿಸಿದ ಪತ್ರಿಕೆಗಳು ಸದ್ಯಕ್ಕೆ ಯಾವೂ ಇಲ್ಲ. ಸಂಯುಕ್ತ ಕರ್ನಾಟಕ ಕಾಂಗ್ರೆಸ್‌ ಪರ. ಅದು ಬಹಿರಂಗವಾಗಿಯೇ ಕಂಡು ಬರುವಂಥದ್ದು. ಸ್ವಲ್ಪ ಮಟ್ಟಿಗೆ ವಿಜಯ ಕರ್ನಾಟಕ ಬಿಜೆಪಿ ಪರ ನಿಂತಿರುವುದೂ ಹೌದು. ಪ್ರಜಾವಾಣಿ ಇದ್ದುದರಲ್ಲಿಯೇ ನಿರ್ಲಿಪ್ತ. ಕುಮಾರಸ್ವಾಮಿ ಮುಖ್ಯಮಂತ್ರಿಯಾದ ನಂತರ, ಕನ್ನಡಪ್ರಭ ಕೊಂಚ ಮಟ್ಟಿಗೆ ಜೆಡಿಎಸ್‌ ಪರ ವಾಲಿದ್ದು ಸ್ವಯಂಗೋಚರ.

ಆದರೆ, ಯಾವ ಪತ್ರಿಕೆಯೂ ಬಿಜೆಪಿ ಪರ ಬಹಿರಂಗ ಪ್ರಚಾರ ನಡೆಸಿಲ್ಲ. ಅದೇ ರೀತಿ ದೃಶ್ಯ ಮಾಧ್ಯಮಗಳೂ ಪಕ್ಷ ನಿಷ್ಠೆ ವ್ಯಕ್ತಪಡಿಸಿಲ್ಲ. ಅಂಥದೊಂದು ಒಳ ಒಪ್ಪಂದ ಆದ ಹಾಗೂ ಕಂಡಿಲ್ಲ. ಚುನಾವಣೆ ಹತ್ತಿರ ಬಂದಾಗ, ಎಲ್ಲ ಪತ್ರಿಕೆ ಹಾಗೂ ದೃಶ್ಯ ಮಾಧ್ಯಮಗಳು ಸಾರ್ವತ್ರಿಕ ಗೊಂದಲವನ್ನೇ ಬಿಂಬಿಸಿದವು. ಈ ಸಾರಿಯೂ ಅತಂತ್ರ ವಿಧಾನಸಭೆಯೇ ಬರಬಹುದು ಎಂದು ಅನುಮಾನ ವ್ಯಕ್ತಪಡಿಸಿದವು. ಬಿಜೆಪಿಗೆ ಸಹಾನುಭೂತಿ ವ್ಯಕ್ತವಾಗುತ್ತದಾದರೂ, ಅದು ಸರಳ ಬಹುಮತ ಗಳಿಸಿ ಕೊಡಲಾರದು ಎಂದೇ ಹೇಳಿದ್ದವು.

ಈ ನಿಟ್ಟಿನಲ್ಲಿ ಪತ್ರಿಕೆ ಹಾಗೂ ಟಿವಿ ಮಾಧ್ಯಮಗಳು ವಾಸ್ತವವನ್ನೇ ಬಿಂಬಿಸುತ್ತ ಬಂದಿವೆ. ಅಲ್ಲಲ್ಲಿ ಪಕ್ಷ ನಿಷ್ಠೆ ಹಾಗೂ ನಾಯಕ ನಿಷ್ಠೆ ಕಂಡಿದೆಯಾದರೂ ಅದು ಮತದಾರರನ್ನು ಪ್ರಭಾವಗೊಳಿಸುವ ಮಟ್ಟಿಗಂತೂ ಇದ್ದಿಲ್ಲ. ಇವತ್ತಿನ ಪರಿಸ್ಥಿತಿಯಲ್ಲಿ ಅಂಥದ್ದೊಂದು ಪ್ರಭಾವ ಬೀರಬಲ್ಲ ಮಾಧ್ಯಮವೂ ಇಲ್ಲ. ಪತ್ರಿಕೆಗಳ ಸಂಖ್ಯೆ, ಚಾನೆಲ್‌ಗಳ ಸಂಖ್ಯೆ ಹೆಚ್ಚಾದಂತೆ, ಪಕ್ಷ ನಿಷ್ಠೆ ಹರಿದು ಹಂಚಿಹೋಗಿದೆ. ಒಂದು ವೇಳೆ ಯಾವುದೇ ಪತ್ರಿಕೆ ಅಥವಾ ಚಾನೆಲ್‌ ಬಯಸಿದರೂ, ಅಂಥದೊಂದು ಪ್ರಭಾವ ವಲಯವನ್ನು ಸೃಷ್ಟಿಸಲಾರದು. ಇದು ಮಾಧ್ಯಮದ ಮಿತಿ.

ಒಬ್ಬ ಪತ್ರಕರ್ತನಾಗಿ ನಾನು ಮಾಧ್ಯಮಗಳ ಪರ ಮಾತನಾಡುತ್ತಿಲ್ಲ. ವಾಸ್ತವ ಏನಿದೆ ಎಂಬುದನ್ನು ಹೇಳುತ್ತಿದ್ದೇನೆ. ರಂಜನೀಯ ವರದಿಗಳು, ವಿಶೇಷ ವರದಿಗಳು ಹಾಗೂ ಸಂವಾದ ಕಾರ್ಯಕ್ರಮಗಳ ಹೊರತಾಗಿಯೂ ಮತದಾರ ತನಗನಿಸಿದ್ದನ್ನು ಮಾಡಬಲ್ಲ ಎಂಬುದಕ್ಕೆ ಚುನಾವಣೆ ಸಾಕ್ಷಿ. ಅಂತಿಮವಾಗಿ, ಒಂದು ಚುನಾವಣೆಯನ್ನು ಗೆಲ್ಲಿಸುವುದು ಆಯಾ ಪಕ್ಷದ ನಿಷ್ಠಾವಂತ ಕಾರ್ಯಕರ್ತನೇ ಹೊರತು, ವರದಿಗಾರರೂ ಅಲ್ಲ, ಮಾಧ್ಯಮವೂ ಅಲ್ಲ, ಪಕ್ಷದ ನಾಯಕನೂ ಅಲ್ಲ. ಕಾರ್ಯಕರ್ತ ಪ್ರೇರಿತನಾಗಿದ್ದರೆ, ಆತ ಮಾಡಬಹುದಾದ ಅಪೂರ್ವ ಕೆಲಸವನ್ನು ಮಾಧ್ಯಮಗಳು ಮಾಡಲಾರವು. ಅದು ಸತ್ಯ.

ಈ ಚುನಾವಣೆ ಇಂತಹ ಹಲವಾರು ವಾಸ್ತವ ಸಂಗತಿಗಳನ್ನು ಬಯಲಿಗೆ ತಂದಿದೆ.

ಜೆಡಿಎಸ್‌ನ ಅಧೋಗತಿ

ಎರಡನೆಯದು ಜೆಡಿಎಸ್‌ನ ಸ್ಥಿತಿ.

ಆ ಪಕ್ಷ ತಾನು ಆಡಿದ್ದೇ ಆಟ ಎಂದು ಭಾವಿಸಿಕೊಂಡಿತ್ತು. ಜೆಡಿಎಸ್‌ನವರು ಅದಕ್ಕೆ ತಕ್ಕಂತೆ ನಡೆದೂಕೊಂಡಿದ್ದೂ ಆಯಿತು. ಪಕ್ಷವನ್ನು ಸ್ವಂತ ಆಸ್ತಿ ಎಂಬಂತೆ ನಡೆದುಕೊಂಡ ಎಚ್‌.ಡಿ. ದೇವೇಗೌಡರ ಮಾತೇ ಅಲ್ಲಿ ಅಂತಿಮ. ಉಳಿದವರು ಅದನ್ನು ಒಪ್ಪಬೇಕು ಇಲ್ಲವೆ ಹೊರನಡೆಯಬೇಕು ಎಂಬಂಥ ವಾತಾವರಣ ನಿರ್ಮಾಣವಾಗಿದೆ. ಅನಿವಾರ್ಯ ಸಂದರ್ಭಗಳಲ್ಲಿ ಅದೆಲ್ಲ ನಡೆಯಬಹುದು. ಆದರೆ, ಚುನಾವಣೆ ಎಂಬುದು ಎಲ್ಲ ಅನಿವಾರ್ಯತೆಗಳನ್ನು ಹೋಗಲಾಡಿಸುವಂಥ ಸಮಯ.

ಹೀಗಾಗಿ, ಚುನಾವಣೆ ಘೋಷಣೆಯಾದಂತೆ, ಜೆಡಿಎಸ್‌ನ ಭ್ರಮೆಗಳು ಒಂದೊಂದಾಗಿ ಕರಗತೊಡಗಿದವು. ಅದರ ಹಿರಿಯ ನಾಯಕರು ಪಕ್ಷ ತೊರೆದು ಹೋದರು. ಅದೇ ರೀತಿ, ಟಿಕೆಟ್‌ ಸಿಕ್ಕಿಲ್ಲ ಎಂಬ ಕಾರಣಕ್ಕೆ ಇತರ ಪಕ್ಷಗಳ ನಾಯಕರು ಜೆಡಿಎಸ್‌ ಕಡೆ ಬಂದರು. ತಮ್ಮ ಜೊತೆಗೆ ಚುನಾವಣೆ ಗೆಲ್ಲಬಲ್ಲ ಪ್ರಭಾವವೂ ಬರುತ್ತದೆ ಎಂದು ವಲಸೆ ನಾಯಕರು ಭ್ರಮೆ ಇಟ್ಟುಕೊಂಡಿದ್ದರು. ಅದು ನಡೆಯುವುದಿಲ್ಲ ಎಂಬುದನ್ನು ಪ್ರಾಥಮಿಕ ಸಮೀಕ್ಷೆ ಈಗ ಸ್ಪಷ್ಟಪಡಿಸಿದೆ.

ಅದಕ್ಕೇ ಇರಬೇಕು, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಮಾಧ್ಯಮಗಳ ವಿರುದ್ಧ ಹೇಳಿಕೆ ನೀಡಿದ್ದು. ಬಿಜೆಪಿ ಜೊತೆ ಯಾವ್ಯಾವ ಪತ್ರಕರ್ತರು ಒಪ್ಪಂದ ಮಾಡಿಕೊಂಡಿದ್ದಾರೆ, ಎಷ್ಟು ಹಣ ಪಡೆದಿದ್ದಾರೆ ಎಂಬುದನ್ನು ಪಾರ್ಟಿ ಏರ್ಪಡಿಸಿ ವಿವರಿಸುತ್ತೇನೆ ಎಂದಿದ್ದಾರೆ. ಒಂದು ವೇಳೆ ಸಮೀಕ್ಷಾ ವರದಿ ಜೆಡಿಎಸ್‌ ಮುನ್ನಡೆ ಸೂಚಿಸಿದ್ದರೆ, ಕುಮಾರಸ್ವಾಮಿ ಇಂಥ ಮಾತನ್ನು ಹೇಳುತ್ತಿರಲಿಲ್ಲ. ಇದು ಸೋಲುವವನ ಹತಾಶ ಕೂಗಾಗುತ್ತದೆಯೇ ಹೊರತು ಸತ್ಯವಾಗದು.

ಮಾಧ್ಯಮಗಳು ವರದಿ ಮಾಡಿದ್ದು ಜೆಡಿಎಸ್‌ನ ಅನಾಚಾರವನ್ನು. ವಚನಭ್ರಷ್ಟತೆಯನ್ನು. ಎಡಬಿಡಂಗಿತನವನ್ನು. ಏಕವ್ಯಕ್ತಿ ಸಿದ್ಧಾಂತವನ್ನು. ಕುಟುಂಬ ರಾಜಕಾರಣವನ್ನು. ಅದೇ ರೀತಿ, ಮಾಧ್ಯಮಗಳು ಬಿಜೆಪಿಯ ಬಂಡವಾಳವನ್ನೂ ಬಯಲಿಗಿಟ್ಟಿವೆ. ಮುಖ್ಯಮಂತ್ರಿಯಾಗಬೇಕು ಎಂಬ ಒಂದೇ ತಪನೆಯಿಂದ ಇಡೀ ಪಕ್ಷವನ್ನೇ ಅಡ ಇಡಲು ಮುಂದಾಗಿದ್ದ ಯಡಿಯೂರಪ್ಪನವರ ಕ್ರಮವನ್ನು ಕಟುವಾಗಿ ಟೀಕಿಸಿವೆ. ಒಬ್ಬ ಶೋಭಾ ಕರಂದ್ಲಾಜೆಗಾಗಿ ಅವರು ಬಡಿದಾಡಿದ ಬಡಿವಾರವನ್ನು ಬಯಲು ಮಾಡಿವೆ. ಅದೇ ರೀತಿ, ಕಾಂಗ್ರೆಸ್‌ನ ಸೋಮಾರಿತನವನ್ನು, ಯಾವತ್ತೂ ಜನರೊಂದಿಗೆ ಬೆರೆಯದ ಮಾಜಿ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಅವರ ಡಂಬಾಚಾರವನ್ನು, ದೂರದೃಷ್ಟಿಯೇ ಇಲ್ಲದ ಧರಂ ಸಿಂಗ್‌ ಹಾಗೂ ಮಲ್ಲಿಕಾರ್ಜುನ ಖರ್ಗೆಯವರನ್ನೂ ಟೀಕಿಸಿವೆ.

ಅಷ್ಟೇ ಏಕೆ? ಸಜ್ಜನ, ಸಂಸ್ಕಾರವಂತ ಎಂದೆಲ್ಲ ’ಅಪವಾದ’ ಹೊತ್ತಿರುವ ಮಾಜಿ ಉಪಮುಖ್ಯಮಂತ್ರಿ ಎಂ.ಪಿ. ಪ್ರಕಾಶ್‌ ಅವರ ಸೈದ್ಧಾಂತಿಕ ದಿವಾಳಿತನವನ್ನೂ ಮಾಧ್ಯಮಗಳು ಬಯಲಿಗಟ್ಟಿವೆ. ಬಿಜೆಪಿ ಅಥವಾ ಕಾಂಗ್ರೆಸ್‌ನಲ್ಲಿ, ಯಾರೊಬ್ಬರು ಕರೆದರೂ ಹೋಗುತ್ತೇನೆ ಎಂಬ ಹೇಳಿಕೆ ನೀಡಿದ್ದ ಪ್ರಕಾಶ್‌ ಅವರಲ್ಲಿ ಯಾವ ಆದರ್ಶಗಳಿವೆ? ಸ್ವಂತ ಜಿಲ್ಲೆ ಬಳ್ಳಾರಿಯಲ್ಲಿ ಅವರು ಏಕೆ ವಿಫಲರಾಗುತ್ತ ಬಂದಿದ್ದಾರೆ? ತಾವು ಸಚಿವರಾಗಿದ್ದ ಅವಧಿಯಲ್ಲಿ ಪ್ರಕಾಶ್‌ ಮಾಡಿರುವ ಸಾಧನೆಗಳಾದರೂ ಏನು? ಅವಕಾಶವಾದಿತನವನ್ನು ದೇವೇಗೌಡರು ಬಹಿರಂಗವಾಗಿ ಮಾಡುತ್ತ ಬಂದಿದ್ದರೆ, ಎಂ.ಪಿ. ಪ್ರಕಾಶ್‌ ಅದನ್ನೇ ಸಂಸ್ಕಾರದ ಸೋಗಿನಲ್ಲಿ ಮಾಡುತ್ತ ಬಂದಿದ್ದಾರೆ. ಇಬ್ಬರಿಗೂ ಅಂತಹ ವ್ಯತ್ಯಾಸವೇನಿಲ್ಲ.

ಈ ಸಲದ ಚುನಾವಣೆ ಇಂತಹ ಎಲ್ಲರ ಢೋಂಗಿತನವನ್ನು ಬಯಲಿಗೆ ಎಳೆದಿದೆ. ಎಲ್ಲ ಪಕ್ಷಗಳೂ ಅಷ್ಟೇ ಕೆಟ್ಟಿವೆ ಎಂಬುದನ್ನು ಸ್ಪಷ್ಟಪಡಿಸಿವೆ.

ಜನಾದೇಶ ಬಿಜೆಪಿ ಪರ ಅಲ್ಲ

ಮೂರನೆಯದಾಗಿ, ಬಿಜೆಪಿಗೆ ಬಹುಮತ ಬರುತ್ತದಾದರೆ, ಆ ಪಕ್ಷ ಚೆನ್ನಾಗಿದೆ ಎಂಬ ಕಾರಣಕ್ಕಂತೂ ಖಂಡಿತ ಅಲ್ಲ. ಅದಕ್ಕೂ ಒಂದು ಅವಕಾಶ ಕೊಟ್ಟು ನೋಡೋಣ ಎಂಬ ಪ್ರಯೋಗಶೀಲತೆಯಿಂದ. ಅಧಿಕಾರ ಎಂದರೆ ಯಡಿಯೂರಪ್ಪನವರಿಗೆ ಎಷ್ಟು ಪ್ರೀತಿ ಎಂಬುದನ್ನು ಮತದಾರ ಬಲ್ಲ. ಅದಕ್ಕಾಗಿ, ಅವರು ಎಷ್ಟು ಬಾಗಬೇಕೋ ಅಷ್ಟೂ ಬಾಗಿದ್ದಾರೆ, ಜಾಡಿಸಿ ಒದ್ದ ಮೇಲೂ ಮತ್ತೆ ಮತ್ತೆ ಬಾಗಿದ್ದಾರೆ. ಇನ್ನು ಕೆಲಸವಾಗದು ಎಂದು ಸ್ಪಷ್ಟವಾದ ಮೇಲಷ್ಟೇ ಅವರು ಎದ್ದು ಚುನಾವಣೆಗೆ ಸಜ್ಜಾಗಿದ್ದು. ಅವರಿಂದಲೂ ಜನರಿಗೆ ಹೆಚ್ಚಿನ ನಿರೀಕ್ಷೆಗಳೇನಿಲ್ಲ. ಆದರೆ, ಅತಂತ್ರ ವಿಧಾನಸಭೆ ಬಂದರೆ, ಹೆಚ್ಚಿನ ಕಷ್ಟ ನಮಗೇ ಎಂಬ ಅರಿವಿನಿಂದಾಗಿ, ಇದುವರೆಗೆ ಅಧಿಕಾರಕ್ಕೆ ಬಂದಿರದ ಪಕ್ಷಕ್ಕೊಂದು ಅವಕಾಶ ಕೊಟ್ಟು ನೋಡೋಣ ಎಂದು ಬಿಜೆಪಿ ಬೆಂಬಲಿಸಿದ್ದಾರೆ. ಅಷ್ಟೇ.

ಹೀಗಾಗಿ, ಇದು ಯಾವ ಪಕ್ಷದ ವಿಜಯವೂ ಅಲ್ಲ. ಈ ಜನಾದೇಶ ಶಾಶ್ವತವೂ ಅಲ್ಲ. ಒಂದು ವೇಳೆ ಹಿಂದೆಯೇ ಲೋಕಸಭಾ ಚುನಾವಣೆಗಳು ಬಂದರೆ, ಆಗ ಲೆಕ್ಕಾಚಾರ ಖಂಡಿತ ಬದಲಾಗುತ್ತದೆ. ಗೆದ್ದ ಪಕ್ಷ, ಇದು ತನ್ನ ಸ್ವಂತ ವಿಜಯ ಎಂದು ಬೀಗುವಂತಿಲ್ಲ. ಸೋತ ಪಕ್ಷಗಳು, ಇದು ನಮ್ಮ ಸೋಲು ಎಂದು ನಿರಾಶರಾಗಬೇಕಿಲ್ಲ. ಇದು ಇವತ್ತಿನ ಸಂದರ್ಭಕ್ಕೆ ಮಾತ್ರ ನೀಡಲಾದ ಜನಾದೇಶ.

ಮತದಾರನ ಎಚ್ಚರಿಕೆ

ಇದರ ಜೊತೆಗೆ, ಈ ಸಲದ ಚುನಾವಣೆ ಹಲವಾರು ಸಂದೇಶಗಳನ್ನೂ ರವಾನಿಸಿದೆ.

  • ಅಧಿಕಾರದ ಹಪಾಹಪಿಯ ಬಹಿರಂಗ ಪ್ರದರ್ಶನ ಮತದಾರನಿಗೆ ಇಷ್ಟವಾಗುವುದಿಲ್ಲ. ರಾಜಕೀಯ ಪಕ್ಷಗಳಿಗೆ ಅಧಿಕಾರವೇ ಪರಮಧ್ಯೇಯ ಎಂದಾದರೆ, ನಮ್ಮಗಳ ಬಗ್ಗೆ ತಲೆ ಕೆಡಿಸಿಕೊಳ್ಳುವವರು ಯಾರು? ಎಂಬ ಪ್ರಶ್ನೆ ಅವರಲ್ಲಿ ಏಳುತ್ತದೆ. ಆಗ, ಪಕ್ಷ ಪ್ರೀತಿ ಹೊರಟುಹೋಗಿ, ಮತದಾರ ಕೂಡ ರಾಜಕೀಯ ನೇತಾರರಂತೆ ವ್ಯವಹಾರ ಬುದ್ಧಿ ಬೆಳೆಸಿಕೊಳ್ಳುತ್ತಾನೆ. ಆಗ ರಾಜಕೀಯ ಪಕ್ಷಗಳಿಗೆ ಆತನನ್ನು ವಂಚಿಸುವುದು, ಸುಳ್ಳು ಭರವಸೆ ಕೊಟ್ಟು ನಂಬಿಸುವುದು ಕಷ್ಟವಾಗುತ್ತದೆ. ಈ ಸಲ ಆಗಿರುವುದೇ ಅದು.
  • ಚುನಾವಣಾ ಆಯೋಗದ ಬಿಗಿ ಕ್ರಮದಿಂದಾಗಿ, ಮತದಾರನ ಮೇಲೆ ’ವಾತ್ಸಲ್ಯ’ ತೋರಿಸುವುದು ರಾಜಕೀಯ ಪಕ್ಷಗಳಿಗೆ ಸಾಧ್ಯವಾಗಿಲ್ಲ. ಆದರೆ, ತುಂಬ ಜನ ಮತದಾರರು ಇದನ್ನು ಅರ್ಥ ಮಾಡಿಕೊಂಡಿಲ್ಲ. ಬೇಕಂತಲೇ ರಾಜಕೀಯ ಪಕ್ಷಗಳು ನಮ್ಮನ್ನು ನಿರ್ಲಕ್ಷ್ಯಸಿವೆ. ಅಧಿಕಾರದಲ್ಲಿ ಇದ್ದಾಗಂತೂ ಸರಿಯಾಗಿ ಕೆಲಸ ಮಾಡಿಲ್ಲ. ಚುನಾವಣೆ ಸಮಯದಲ್ಲಾದರೂ ಕೈಬಿಚ್ಚಿ ಕೊಡಲು ಏನು ರೋಗ ಎಂದು ಭಾವಿಸಿದ್ದಾರೆ. ಹೀಗಾಗಿ, ಮತದಾನ ಮಾಡುವ ಉತ್ಸಾಹ ಕಡಿಮೆಯಾಗಿದೆ. ಚುನಾವಣೆಯಿಂದ ಚುನಾವಣೆಗೆ ಆಯೋಗದ ಹಿಡಿತ ಬಿಗಿಯಾಗುತ್ತ ಹೋಗುತ್ತಿದ್ದು, ಆಮಿಷ ಒಡ್ಡಿ ಮತದಾರರನ್ನು ಸೆಳೆಯುವುದು ರಾಜಕೀಯ ಪಕ್ಷಗಳಿಗೆ ಸಾಧ್ಯವಾಗದು. ಹೀಗಾಗಿ, ಕೆಲಸಗಳ ಮೂಲಕವೇ ಆತನನ್ನು ಹಿಡಿದಿಟ್ಟುಕೊಳ್ಳುವ ಅನಿವಾರ್ಯತೆ ಉಂಟಾಗಿದೆ.
  • ಯಾವ ಪಕ್ಷಕ್ಕೂ ಮತದಾರ ನಿಷ್ಠೆ ವ್ಯಕ್ತಪಡಿಸಿಲ್ಲ. ಎಲ್ಲ ಪಕ್ಷಗಳ ಬಗ್ಗೆಯೂ ಆತನಿಗೆ ಒಂದೇ ತೆರನಾದ ನಿರ್ಲಕ್ಷ್ಯ ಅಥವಾ ತಿರಸ್ಕಾರ. ಎಲ್ಲರೂ ತಂತಮ್ಮ ಹಿತವನ್ನಷ್ಟೇ ನೋಡಿಕೊಳ್ಳುವವರು ಎಂಬ ತಾತ್ಸಾರ. ಹೀಗಾಗಿ, ಜನಪರ ಕೆಲಸಗಳ ಮೂಲಕ ಮಾತ್ರ, ಜನರ ವಿಶ್ವಾಸ ಉಳಿಸಿಕೊಳ್ಳಬಹುದೇ ಹೊರತು ಭಾಷಣ ಅಥವಾ ಪತ್ರಿಕಾ ಹೇಳಿಕೆಗಳಿಂದ ಸಾಧ್ಯವಿಲ್ಲ.
  • ರಾಜ್ಯದ ಬಹುತೇಕ ಕ್ಷೇತ್ರಗಳಲ್ಲಿ ಮತದಾರ ಜಾಗೃತನಾಗಿದ್ದಾನೆ. ಅದರಲ್ಲೂ ಮೊದಲ ಬಾರಿ ಮತದಾನ ಮಾಡುತ್ತಿರುವವರು ನಿಜಕ್ಕೂ ಜಾಗೃತ ಮತದಾರರು. ತಮ್ಮ ಕ್ಷೇತ್ರದ ಅಭಿವೃದ್ಧಿ ಏಕೆ ಆಗಿಲ್ಲ? ಎಂಬ ಪ್ರಶ್ನೆಗಳು ಈಗ ಹುಟ್ಟಿಕೊಂಡಿವೆ. ಅಧಿಕಾರದಲ್ಲಿದ್ದಾಗ ನೀವೇನು ಮಾಡಿದಿರಿ? ಎಂಬ ಪ್ರಶ್ನೆಗಳು ಕೇಳಿ ಬರತೊಡಗಿವೆ. ಆರಿಸಿ ತಂದರೆ ಏನು ಮಾಡಬಲ್ಲಿರಿ? ಎಂಬ ವಿಚಾರಣೆ ಶುರುವಾಗಿದೆ. ಇದು ಹೊಸ ಬೆಳವಣಿಗೆ. ಬಹುಶಃ ಮಾಧ್ಯಮಗಳ ವಿಸ್ತರಣೆಯಿಂದ ಮೂಡಿರುವ ಅರಿವಿದು.
  • ಎಲ್ಲಕ್ಕಿಂತ ಮುಖ್ಯ: ಮಾಧ್ಯಮಗಳನ್ನು ಮತದಾರ ಪೂರ್ತಿಯಾಗಿ ನಂಬದಿರುವುದು. ಪತ್ರಿಕೆಗಳು ಹಾಗೂ ಟಿವಿಗಳಿಂದ ಆತ ತನಗೆ ಬೇಕಾದ ಮಾಹಿತಿಯನ್ನು ಪಡೆಯುತ್ತಾನೆಯೇ ಹೊರತು, ಅವು ಹೇರುವ ಅಭಿಪ್ರಾಯಗಳನ್ನಲ್ಲ. ’ಮಾಧ್ಯಮಗಳಲ್ಲಿ ಕೆಲಸ ಮಾಡುವವರೂ ಮನುಷ್ಯರು ತಾನೆ? ಅವರು ಆಮಿಷಕ್ಕೆ ಒಳಗಾಗಿಲ್ಲ ಎಂಬುದಕ್ಕೆ ಏನು ಗ್ಯಾರಂಟಿ?’ ಎಂಬ ಅಭಿಪ್ರಾಯಗಳೂ ಬಹಳಷ್ಟು ಕಡೆ ಕೇಳಿ ಬಂದಿವೆ. ನೀವು ಪತ್ರಕರ್ತರು ದುಡ್ಡು ಕೊಟ್ಟವರ ಪರ ಬರೆಯುತ್ತೀರಿ ಎಂದು ಜನ ಆರೋಪಿಸುತ್ತಿದ್ದುದನ್ನು ಬಹಳ ಸಾರಿ ನಾನೇ ಕೇಳಿದ್ದೇನೆ. ಅದು ಸತ್ಯವೂ ಹೌದು. ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಪತ್ರಿಕಾಗೋಷ್ಠಿಗಳು ರಂಗಾದಷ್ಟು ಬೇರೆ ಯಾವ ಅವಧಿಯಲ್ಲೂ ಆಗಲಿಲ್ಲ. ಪತ್ರಕರ್ತನ ನಿಷ್ಠೆ ಈ ಪರಿ ಖರೀದಿಯಾದ ಉದಾಹರಣೆಗಳು ಹಿಂದೆ ಯಾವತ್ತೂ ಸಿಗಲಿಕ್ಕಿಲ್ಲ.

ಆದರೆ, ಮತದಾರ ರಾಜಕೀಯ ಪಕ್ಷಗಳು, ಮಾಧ್ಯಮಗಳು ಹಾಗೂ ಭವಿಷ್ಯವಾದಿಗಳ ಲೆಕ್ಕಾಚಾರವನ್ನು ಒಂದೇ ಹೊಡೆತಕ್ಕೆ ತಲೆ ಕೆಳಗಾಗಿಸಿದ್ದಾನೆ. ಹೀಗಾಗಿ, ಈ ಸಲದ ಚುನಾವಣೆಯ ಗೆಲುವು ಆತನದೇ.

- ಚಾಮರಾಜ ಸವಡಿ

http://chamarajsavadi.blogspot.com