ಹುಟ್ಟೂರಿನಲ್ಲಿ ಮೂಡಿದ ’ಜೀವದನಿ’

12 Jun 2010

18 ಪ್ರತಿಕ್ರಿಯೆ



ಬಹುರಾಷ್ಟ್ರೀಯ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯನ್ನು ಕೆಲಸ ಬಿಡಿಸಿ ತವರು ಜಿಲ್ಲೆಗೆ ಅಟ್ಟಿದ ಪಾಪವೇನಾದರೂ ಇದ್ದರೆ, ಅದು ನನ್ನದು. ಪುಣ್ಯವೇನಾದರೂ ಇದ್ದರೆ, ಹುಟ್ಟು ಜಿಲ್ಲೆಯಲ್ಲಿ ಬದುಕು ಕಟ್ಟಿಕೊಂಡ ಗೆಳೆಯ ಸರ್ಜಾಶಂಕರ ಹರಳಿಮಠನದು.

ಸುಮಾರು ಇಪ್ಪತ್ತು ವರ್ಷಗಳ ಪರಿಚಯ, ಸ್ನೇಹ ನಮ್ಮಿಬ್ಬರದು. ನಾನಾಗ ಏರ್‌ಫೋರ್ಸ್‌‌ನಲ್ಲಿದ್ದೆ. ಮೊಬೈಲ್‌, ಕಂಪ್ಯೂಟರ್‌ಗಳಿಲ್ಲದ ಕಾಲವದು. ನನಗೋ ಬರೆಯುವ ಹುಚ್ಚು. ಶಂಕರನಿಗೆ (ಸರ್ಜಾಶಂಕರ) ಬರೆಯುವುದರ ಜೊತೆಗೆ ಅದನ್ನು ಪ್ರಕಟಿಸುವ ಹುಚ್ಚು. ನಮ್ಮಂಥ ಹುಚ್ಚರಿಗಾಗಿಯೇ ಕೆಲ ಹವ್ಯಾಸಿ ಪ್ರಕಾಶಕರಿದ್ದರು. ಬರೆಯುವ ಆಸೆ ಇರುವ, ಆದರೆ, ಸ್ವಂತ ಪುಸ್ತಕ ಹೊರತರಲು ಆಗದ ನಮ್ಮಂಥವರ ಬರಹಗಳನ್ನು ಅವರು ಅಚ್ಚು ಹಾಕುತ್ತಿದ್ದರು. ಆಗ ಬರುತ್ತಿದ್ದ ಬಹುತೇಕ ಪುಸ್ತಕಗಳು ಕವನ ಸಂಕಲನಗಳು. ಸಹಕಾರ ತತ್ವದಡಿ ಪ್ರಕಟವಾಗಬೇಕಿತ್ತು.

ಸಹಕಾರ ತತ್ವ ಬಹು ಸುಲಭ ವಿಧಾನ. ಯುವ ಬರಹಗಾರರು ತಮ್ಮ ಒಂದು ಕವಿತೆ/ಹನಿಗವನ ಪ್ರಕಟಣೆಗೆ ಐವತ್ತು ರೂಪಾಯಿಗಳನ್ನು ನೀಡಬೇಕಿತ್ತು. ಅಂಥ ೪೦-೫೦ ಬರಹಗಾರರನ್ನು ಸಂಪರ್ಕಿಸುತ್ತಿದ್ದ ಹವ್ಯಾಸಿ ಪ್ರಕಾಶಕರು, ಚಂದಾ ಸಂಗ್ರಹಿಸಿ, ತಮ್ಮ ಕೈಯಿಂದ ಒಂದಿಷ್ಟು ಹಾಕಿ ಪುಸ್ತಕ ಹೊರತರುತ್ತಿದ್ದರು. ಆಗ ಮೊಳೆಯಚ್ಚು ಮುದ್ರಣಾಲಯಗಳೇ ಹೆಚ್ಚು. ಅಲ್ಲಿ ಮುದ್ರಣ ಖರ್ಚು ಕಡಿಮೆ ಕೂಡಾ. ಆಫ್‌ಸೆಟ್‌ ಮುದ್ರಣ ಯಂತ್ರಗಳು ಕೇವಲ ದೊಡ್ಡ ನಗರಗಳಿಗೆ ಮಾತ್ರ ಸೀಮಿತವಾಗಿದ್ದವು.

ಸರ್ಜಾಶಂಕರನ ಬರಹವನ್ನು ನಾನು ಮೊದಲು ಓದಿದ್ದು ಇಂಥ ಚಂದಾಪುಸ್ತಕವೊಂದರಲ್ಲಿ.

ಪ್ರತಿ ಬರಹಗಾರನ ವಿಳಾಸವೂ ಅದರಲ್ಲಿ ಅಚ್ಚಾಗಿರುತ್ತಿತ್ತು. ಏರ್‌ಫೋರ್ಸ್‌‌ನಲ್ಲಿದ್ದ ನಾನು ಶಂಕರನ ಬರಹ ಓದಿ, ಅಲ್ಲಿದ್ದ ವಿಳಾಸಕ್ಕೆ ಅಂಚೆ ಕಾರ್ಡ್‌ ಬರೆದೆ. ಕ್ರಮೇಣ ಪರಿಚಯ ಬೆಳೆಯಿತು. ನಾವಿಬ್ಬರೂ ಸಾಹಿತ್ಯಕ್ಕಿಂತ ಹೆಚ್ಚಾಗಿ ಪರಸ್ಪರ ಪತ್ರಗಳನ್ನು ಬರೆದಿದ್ದೇ ಜಾಸ್ತಿ.

ಇದೆಲ್ಲ ಹದಿನೈದು ಇಪ್ಪತ್ತು ವರ್ಷಗಳ ಹಿಂದಿನ ಮಾತು.

ಮುಂದೆ ನಾನು ಏರ್‌ಫೋರ್ಸ್‌ ಬಿಟ್ಟು ಬೆಂಗಳೂರಿಗೆ ಬಂದೆ. ಶಂಕರ ಆಗಲೇ ಬೆಂಗಳೂರಿನಲ್ಲಿದ್ದ. ಸಣ್ಣಪುಟ್ಟ ಕಂಪನಿಗಳಲ್ಲಿ ಕೆಲಸ ಮಾಡುತ್ತಿದ್ದ. ಒಂದೆರಡು ವರ್ಷಗಳ ನಂತರ ಬಹುರಾಷ್ಟ್ರೀಯ ಕಂಪನಿಯೊಂದಕ್ಕೆ ಸೇರಿಕೊಂಡ. ನಾನಾಗ, ‘ಹಾಯ್‌ ಬೆಂಗಳೂರ್’‌ ಸೇರಿಯಾಗಿತ್ತು.

‘ಏನಾದ್ರೂ ಮಾಡಬೇಕೆಂದಿದ್ದರೆ ನಮ್ಮೂರಲ್ಲಿ ಮಾಡಬೇಕು ಶಂಕರಾ. ಅದೇ ನಿಜವಾದ ಚಾಲೆಂಜ್‌’ ಎಂದೆ ಒಂದಿನ.

ಊರಿಗೆ ಹೋಗಿ ಏನು ಮಾಡಬೇಕೆಂಬುದು ಇಬ್ಬರಿಗೂ ಗೊತ್ತಿದ್ದಿಲ್ಲ! ಅಲ್ಲಿ ಹೋದ ನಂತರ ತಾನೇ ಗೊತ್ತಾಗುತ್ತದೆ ಎಂಬ ಉಡಾಫೆ.

ಉತ್ತಮ ಸಂಬಳ ಬರುವ ಕೆಲಸ ಬಿಡೋದು ಹೇಗೆ ಎಂಬ ಗೊಂದಲ ಶಂಕರನಿಗೆ. ವಿದೇಶಿ ಕಂಪನಿ ಚಾಕರಿಯಿಂದ ನಿನ್ಯಾವ ಕನಸುಗಳು ಈಡೇರುತ್ತವೆ ಎಂಬ ಪ್ರಶ್ನೆ ನನ್ನದು. ನನ್ನ ವರಾತ ಹೆಚ್ಚಾಯಿತೋ, ಅಥವಾ ನಿಜಕ್ಕೂ ಊರಿಗೆ ಹೋಗಬೇಕೆಂದು ಆತ ನಿರ್ಧರಿಸಿದನೋ ಗೊತ್ತಿಲ್ಲ. ಅದೊಂದಿನ, ವಾಪಸ್‌ ಶಿವಮೊಗ್ಗಕ್ಕೆ ಹೋಗ್ತೇನೆ ಎಂದು ಘೋಷಿಸಿದ ಶಂಕರ, ಬೆಂಗಳೂರು ಖಾಲಿ ಮಾಡಿದ.

ಅದಾದ ಸ್ವಲ್ಪ ದಿನಗಳಿಗೆ ‘ಹಾಯ್‌ ಬೆಂಗಳೂರ್‌’ಗೆ ಸಲಾಮ್‌ ಹೊಡೆದೂ ನಾನೂ ನನ್ನ ಜಿಲ್ಲೆ ಕೊಪ್ಪಳಕ್ಕೆ ಹೋದೆ.

ಇದ್ದ ಕೆಲಸ ಬಿಟ್ಟು, ಕೇವಲ ಕನಸುಗಳನ್ನು ಹೊತ್ತು ತಂದಿದ್ದ ನಮ್ಮನ್ನು, ನಮ್ಮ ಸ್ವಂತ ಜಿಲ್ಲೆಗಳು ಕಾಡಿಸಿದ್ದು ಅಷ್ಟಿಷ್ಟಲ್ಲ. ಬದುಕು ಕಟ್ಟಿಕೊಳ್ಳಲು ಶಂಕರ ಎಷ್ಟು ಕಷ್ಟಪಟ್ಟನೋ, ನಾನೂ ಅಷ್ಟೇ ಕಷ್ಟಪಡಬೇಕಾಯ್ತು. ಯಾಕಾದ್ರೂ ಕೆಲಸ ಬಿಟ್ಟೆವೋ ಅಂತ ಪದೆ ಪದೆ ಅನಿಸುವಷ್ಟು ಮೂಲಭೂತ ಸಮಸ್ಯೆಗಳು ಇಬ್ಬರನ್ನೂ ಕಾಡಿದವು.

ಪತ್ರಿಕೋದ್ಯಮದಲ್ಲೇ ಏನಾದ್ರೂ ಮಾಡಬೇಕು ಎಂದು ನಾನು ನಿರ್ಧರಿಸಿದ್ದೆನಾದರೂ, ಏನು ಮಾಡಬೇಕೆಂಬುದು ಸ್ಪಷ್ಟವಿದ್ದಿಲ್ಲ. ಶಂಕರನಿಗಂತೂ ಇನ್ನೂ ಗೊಂದಲ. ಬರವಣಿಗೆಯ ಹುಚ್ಚು ಸುಲಭಕ್ಕೆ ಬಿಡುವಂಥದಲ್ಲ. ಅದರಲ್ಲೂ, ಬರೆದಿದ್ದು ಅಚ್ಚಾಗಬೇಕೆಂಬ ಆಸೆ ಇದ್ದರೆ ಬಹಳ ಕಷ್ಟ.

ಈ ಹುಚ್ಚಿನ ನಡುವೆ, ಹೊಟ್ಟೆಪಾಡನ್ನು ಮರೆಯೋದಾದ್ರೂ ಹೇಗೆ? ಒಳ್ಳೆ ಸಂಬಳ ಬರುವ ಕೆಲಸ ಬಿಟ್ಟು ಬಂದಿದ್ದ ನಮ್ಮನ್ನು ಹುಚ್ಚರನ್ನು ನೋಡುವಂತೆ ನೋಡಿತು ಊರು. ಅದಕ್ಕೆ ತಕ್ಕಂತೆ ನಮ್ಮ ಹವ್ಯಾಸಗಳಿದ್ದವು. ದುಡಿದು ಬದುಕುವುದೇ ಕಷ್ಟವಾಗಿದ್ದ ದಿನಗಳಲ್ಲಿ, ಬರೆದು ಬದುಕುತ್ತೇನೆ ಎಂದು ಹೊರಟವರನ್ನು ನಮ್ಮೂರುಗಳು ಇನ್ಯಾವ ರೀತಿ ನೋಡಲು ಸಾಧ್ಯವಿತ್ತು?

ಕ್ರಮೇಣ ಬದುಕು ಚಿಗುರಿತು.

ಹಲವಾರು ಬಗೆಯ ಕೆಲಸಗಳನ್ನು ಮಾಡಿದ ನಂತರ, ನಾನು ‘ವಿಜಯ ಕರ್ನಾಟಕ’ ಸೇರಿಕೊಂಡೆ. ‘ನಿನ್ನ ಬರವಣಿಗೆ ಚೆನ್ನಾಗಿದೆ, ಸಾಪ್ತಾಹಿಕ ವಿಜಯ ನೋಡಿಕೊಳ್ಳುವಿಯಂತೆ, ಬೆಂಗಳೂರಿಗೆ ಬಾ’ ಎಂದು ಸಂಪಾದಕ ಈಶ್ವರ ದೈತೋಟ ಪರಿಪರಿಯಾಗಿ ಹೇಳಿದರೂ ಕೇಳದೇ ನಾನು ಕೊಪ್ಪಳ ಜಿಲ್ಲಾ ವರದಿಗಾರನಾಗಿಯೇ ಉಳಿದುಕೊಂಡೆ. ಶಂಕರ ನಿಧಾನವಾಗಿ ಚಳವಳಿಗಳಲ್ಲಿ ಗುರುತಿಸಿಕೊಳ್ಳತೊಡಗಿದ್ದ. ಅವನ ಬದುಕಿನ್ನೂ ಗೊಂದಲದಲ್ಲಿತ್ತು.

ಕೆಲ ವರ್ಷಗಳ ಕಾಲ ನಮ್ಮ ಸಂಪರ್ಕವೇನಿದ್ದರೂ ಪತ್ರಗಳ ಮೂಲಕ ಬದುಕಿತ್ತು.

ಮುಂದೆ ಬದುಕಿನ ಅನಿವಾರ್ಯತೆ ನನ್ನನ್ನು ಮತ್ತೆ ಬೆಂಗಳೂರಿಗೆ ಕರೆ ತಂದಿತು. ಶಂಕರ ಮಾತ್ರ ಶಿವಮೊಗ್ಗದಲ್ಲೇ ಉಳಿದ. ಚಳವಳಿಗಳ ಜೊತೆಗೆ ಪುಟ್ಟದಾಗಿ ದೇಸಿ ಸಂಸ್ಕೃತಿ ಅಂಗಡಿ ಪ್ರಾರಂಭಿಸಿದ. ಗ್ರಾಮೀಣ ಕುಶಲಕರ್ಮಿಗಳ ಉತ್ಪಾದನೆಗಳಿಗೆ ಮಾರಾಟ ವ್ಯವಸ್ಥೆ ರೂಪಿಸುವ ಪ್ರಯತ್ನದಲ್ಲಿ ತನ್ನ ಬದುಕು ರೂಪಿಸಿಕೊಂಡ. ಅವನನ್ನು ಅರ್ಥ ಮಾಡಿಕೊಳ್ಳುವ ಮಡದಿ ದಕ್ಕಿದಳು. ಆ ಹೆಣ್ಣುಮಗಳಿಗೆ ಸೂಕ್ತ ಸರ್ಕಾರಿ ಕೆಲಸವೂ ಸಿಕ್ಕಿತು. ಯಾವ ಆಮಿಷಕ್ಕೂ ಸಿಲುಕದ ಶಂಕರ ಮಾತ್ರ, ಕೊಟ್ಟ ಮಾತಿನಂತೆ ತನ್ನೂರಲ್ಲೇ ಉಳಿದ. ಬೆಳೆದ.

ಇದೆಲ್ಲ ನೆನಪಾಗಿದ್ದು, ಅವನು ಕಳಿಸಿದ ತನ್ನ ಇತ್ತೀಚಿನ ಪುಸ್ತಕ ’ಜೀವದನಿ’ಯಿಂದ. ತನ್ನ ಅಂಕಣ ಬರಹಗಳನ್ನು ಆಯ್ದು ಪ್ರಕಟಿಸಿದ ಅವನ ಮೊದಲ ಪುಸ್ತಕ ’ಬೆಚ್ಚಿ ಬೀಳಿಸಿದ ಬೆಂಗಳೂರು’ ಸಾಕಷ್ಟು ಗಮನ ಸೆಳೆದ ಕೃತಿ. ಆ ನಂತರ ಬಂದಿದ್ದು, ’ಬಾರಯ್ಯ ಬೆಳದಿಂಗಳೇ’. ಈಗ ಮೂರನೇ ಪುಸ್ತಕ ’ಜೀವದನಿ’ ಬಿಡುಗಡೆಗೆ ಸಿದ್ಧವಾಗಿದೆ. [ಜೀವದನಿ (ಅಂಕಣ ಬರಹಗಳು), ಪುಟಗಳು ೧೭೨, ಬೆಲೆ: ರೂ.೧೦೦, ಪ್ರಕಾಶನ: ಅಂತಃಕರಣ, ’ದೇಸಿ ಸಂಸ್ಕೃತಿ’, ಮೈಲಾರೇಶ್ವರ ಸಂಕೀರ್ಣ, ಬಿ.ಎಚ್‌. ರಸ್ತೆ, ಶಿವಮೊಗ್ಗ-೫೭೭ ೨೦೧, ದೂರವಾಣಿ: ೯೪೪೮೭ ೮೦೧೪೪]

ಇದೇ ಭಾನುವಾರ, ೧೩ ಜೂನ್‌ ೨೦೧೦ಕ್ಕೆ ಶಿವಮೊಗ್ಗದ ಕರ್ನಾಟಕ ಸಂಘದ ಸಭಾಂಗಣದಲ್ಲಿ ಪುಸ್ತಕದ ಬಿಡುಗಡೆಯಿದೆ. ಯಥಾಪ್ರಕಾರ, ಶಂಕರ ಫೋನ್‌ ಮಾಡಿ ಕರೆದಿದ್ದಾನೆ. ಇದು ಬರುವ ಆಸಾಮಿಯಲ್ಲ ಅಂತ ಅನ್ನಿಸಿತೋ ಏನೋ, ಬಿಡುಗಡೆಗೂ ಮುಂಚೆ ಪುಸ್ತಕದ ಪ್ರತಿಯೊಂದನ್ನು ಕಳಿಸಿದ್ದಾನೆ. ಅದರ ಬೆನ್ನುಪುಟದಲ್ಲಿರುವ ಶಂಕರನ ದೊಡ್ಡ ನಗುವಿನ ಫೋಟೊ ನೋಡುತ್ತ, ಈ ಅಪರಾತ್ರಿಯಲ್ಲಿ ನಮ್ಮ ಕಳೆದ ದಿನಗಳ ಕನಸುಗಳನ್ನು ನೆನಪಿಸಿಕೊಳ್ಳುತ್ತಾ ಕೂತಿದ್ದೇನೆ.

ಬದುಕಿನಲ್ಲಿ ಎಷ್ಟೋ ಕನಸುಗಳು ವಿಚಿತ್ರ ರೀತಿಯಲ್ಲಿ ತಿರುವು ಪಡೆಯುತ್ತ, ಮತ್ತೆ ಮತ್ತೆ ಪ್ರತ್ಯಕ್ಷವಾಗುತ್ತಿರುವ ಪರಿ ನೆನೆದು ಅಚ್ಚರಿಪಡುತ್ತಿದ್ದೇನೆ. ಬೆಂಗಳೂರಿನ ವೈಟ್‌ ಫೀಲ್ಡ್‌ನ ಅವನ ರೂಮಿನಲ್ಲಿ ಎಷ್ಟೊಂದು ಮಾತಾಡಿದ್ದೆವು. ಎಷ್ಟೊಂದು ಕನಸುಗಳನ್ನು ಹಂಚಿಕೊಂಡಿದ್ದೆವು. ಅವತ್ತಿನಿಂದ ಇವತ್ತಿನ ತನಕ, ಈ ಹದಿನೈದು ಇಪ್ಪತ್ತು ವರ್ಷಗಳಲ್ಲಿ ಶಂಕರ ಸಾಕಷ್ಟು ಮಾಗಿದ್ದಾನೆ. ಆದರೆ, ಕನಸುಗಳು ಮಾತ್ರ ತಾಜಾ ಆಗೇ ಉಳಿದಿವೆ. ಅವುಗಳ ಪೈಕಿ ಒಂದಿಷ್ಟು ನನಸಾಗಿವೆ. ಒಂದಿಷ್ಟು ಹೊಸ ಕನಸುಗಳು ಸೇರಿಕೊಂಡಿವೆ. ಶಂಕರನ ಪ್ರತಿಯೊಂದು ಸಾಹಸವೂ ನನಗೆ ಆ ದಿನಗಳನ್ನು ನೆನಪಿಸುತ್ತವೆ. ನನ್ನ ಕನಸುಗಳೂ ಮತ್ತೆ ಮತ್ತೆ ನೆನಪಾಗುತ್ತವೆ.

ಅವನನ್ನು ’ಬೆಚ್ಚಿ ಬೀಳಿಸಿದ ಬೆಂಗಳೂರು’ ನನಗೀಗ ಅನ್ನ ಹಾಕತೊಡಗಿದೆ. ಆದರೆ, ಈ ನಗರ ನನ್ನ ಕನಸುಗಳನ್ನು ಪೋಷಿಸುತ್ತದಾ? ಮತ್ತೆ ನನ್ನೂರಿಗೆ ಹಿಂತಿರುಗಿಸುತ್ತದಾ?

ಜೀವದ ಗೆಳೆಯನ ’ಜೀವನದಿ’ ಪುಸ್ತಕ ಮತ್ತೆ ಮತ್ತೆ ಆ ಪ್ರಶ್ನೆಗಳನ್ನು ಕೇಳತೊಡಗಿದೆ.

ಉತ್ತರ ಹೊಳೆಯದೇ ಮಂಕಾಗುತ್ತೇನೆ.

- ಚಾಮರಾಜ ಸವಡಿ