ಕಥೆಯು ಮುಗಿದೇ ಹೋದರೂ, ಮುಗಿಯದಿರಲಿ ಬಂಧನ...

30 Dec 2009

4 ಪ್ರತಿಕ್ರಿಯೆ

ಪರೀಕ್ಷೆ ಮುಗಿಯಲು ಇನ್ನು ಅರ್ಧ ಗಂಟೆ ಮಾತ್ರ ಬಾಕಿ ಇತ್ತು. ಬರೆದ ಉತ್ತರಗಳನ್ನು ಒಮ್ಮೆ ಪರೀಕ್ಷಿಸಿ, ಉಳಿದಿದ್ದ ಕೊನೆಯ ಪ್ರಶ್ನೆಗೆ ಬೇಗ ಬೇಗ ಉತ್ತರಿಸಲು ಶುರು ಮಾಡಿದೆ. ಹದಿನೈದು ನಿಮಿಷಗಳಲ್ಲಿ ಆ ಪ್ರಶ್ನೆಯ ಉತ್ತರವೂ ಮುಗಿಯಿತು. ಎಲ್ಲವೂ ಸರಿಯಾಗಿದೆ ಎಂದು ನೋಡಿಕೊಂಡು, ಇನ್ನೂ ಹತ್ತು ನಿಮಿಷಗಳು ಬಾಕಿ ಇರುವಂತೆ, ಉತ್ತರ ಪತ್ರಿಕೆಯನ್ನು ಕೊಠಡಿಯ ಮೇಲ್ವಿಚಾರಕನಿಗೆ ಕೊಟ್ಟು ದಡಬಡಾಯಿಸಿ ಹೊರಗೋಡಿದೆ. ‘ಏ ತಮ್ಮಾ, ಇನ್ನೂ ಹತ್ತು ನಿಮಿಷ ಐತಿ. ಸರಿಯಾಗಿ ಚೆಕ್‌ ಮಾಡು, ಲಾಸ್ಟ್‌ ಪೇಪರ್‌ ಇದು’ ಅಂತ ಆತ ಕೂಗುತ್ತಿದ್ದರೂ, ಹಿಂತಿರುಗಿ ಕೂಡ ನೋಡದೇ ರೂಮಿನ ಕಡೆ ಓಡುನಡಿಗೆಯಲ್ಲಿ ಹೊರಟೆ.

ಸಿದ್ಧವಾಗಿದ್ದ ಬ್ಯಾಗನ್ನು ಎತ್ತಿಕೊಂಡು, ರೂಮು ಪೂರ್ತಿಯಾಗಿ ಖಾಲಿಯಾಗಿರುವುದನ್ನು ಕಣ್ಣಂದಾಜಿನಲ್ಲೇ ಪರೀಕ್ಷಿಸಿ, ಬೀಗ ಹಾಕಿ ಮಾಲೀಕನಿಗೆ ಕೊಟ್ಟು, ರಜೆ ಮುಗಿದ ನಂತರ ಬರುವೆ ಎಂದು ಹೇಳಿದವನೇ ಒಂದು ಕಿಮೀ ದೂರವಿದ್ದ ಬಸ್‌ ಸ್ಟ್ಯಾಂಡ್‌ ಕಡೆ ಹೊರಟೆ. ಆಗ ಗಂಟೆ ಒಂದೂವರೆ.

ಪರೀಕ್ಷೆ ಮುಗಿಸಿಕೊಂಡು ಬಂದ ಮಿತ್ರ, ‘ಏನಂಥ ಅರ್ಜೆಂಟ್‌? ಇವತ್ತೊಂದಿನ ಇದ್ದು ನಾಳೆ ಹೋಗುವಿಯಂತೆ. ಊರಲ್ಲೇನು ಅಂಥ ಕೆಲಸ?’ ಎಂದು ಕೇಳುತ್ತಿದ್ದರೂ ಗಮನಿಸದೇ, ‘ಮಾರಾಯ, ನನ್ನ ಬಸ್‌ ಸ್ಟ್ಯಾಂಡ್‌ ಹತ್ರ ಬಿಡ್ತಿಯಾ?’ ಎಂದೆ. ಅವನ ಸೈಕಲ್‌ ಹಿಂದೆ ಕೂತು ಬಸ್‌ಸ್ಟ್ಯಾಂಡ್‌ ತಲುಪಿದಾಗ, ಗದಗ್‌ಗೆ ಹೊರಟಿದ್ದ ಬಸ್‌ನ ಬಾಗಿಲು ಹಾಕುತ್ತಿದ್ದ ಕಂಡಕ್ಟರ್‌. ಸೈಕಲ್‌ನಿಂದ ನೆಗೆದವನೇ, ಬಸ್‌ ಏರುತ್ತ, ಗೆಳೆಯನಿಗೆ ಕೈ ಬೀಸುತ್ತ, ಬೆವರೊರೆಸಿಕೊಳ್ಳುತ್ತ ಕೂತೆ.

ನರೇಗಲ್‌ನ ನನ್ನ ಪಿಯುಸಿ ಮೊದಲ ವರ್ಷದ ಪರೀಕ್ಷೆಯ ಕೊನೆಯ ಪೇಪರ್‌ ಮುಗಿಸಿ ನಾನಷ್ಟು ತುರ್ತಾಗಿ ಹೊರಟಿದ್ದು ಗದಗ್‌ಗೆ. ಬಸ್‌ಸ್ಟ್ಯಾಂಡ್‌ ಹತ್ತಿರದಲ್ಲೇ ಇರುವ ಕೃಷ್ಣಾ ಟಾಕೀಸನ್ನು ಮೂರು ಗಂಟೆಯೊಳಗೆ ತಲುಪುವುದು ನನ್ನ ಉದ್ದೇಶ. ಏಕೆಂದರೆ, ಮೂರು ಗಂಟೆಗೆ ಮ್ಯಾಟ್ನಿ ಷೋ ಶುರುವಾಗುತ್ತದೆ. ತಪ್ಪಿಸಿಕೊಂಡರೆ, ಒಂದನೇ ಷೋಗೇ ಹೋಗಬೇಕು. ಆಗ ಅಲ್ಲಿಂದ ಐವತ್ತು ಕಿಮೀ ದೂರವಿರುವ ಊರಿಗೆ ಹೋಗಲು ಬಸ್‌ ಸಿಗುವುದಿಲ್ಲ.

ಬಸ್‌ ತುಂಬ ನಿಧಾನವಾಗಿ ಹೋಗುತ್ತಿದೆ ಅನಿಸುತ್ತಿತ್ತು. ನರೇಗಲ್‌ನಿಂದ ಗದಗ್‌ ಕೇವಲ ೩೦ ಕಿಮೀ ದೂರದಲ್ಲಿದ್ದರೂ, ಕೆಟ್ಟ ರಸ್ತೆಯಿಂದಾಗಿ ಒಂದು ಗಂಟೆಯೊಳಗೆ ತಲುಪುವುದು ಸಾಧ್ಯವಿದ್ದಿಲ್ಲ. ಲೆಕ್ಕಾಚಾರದ ಪ್ರಕಾರ, ಬಸ್‌ ಎಲ್ಲಿಯೂ ಕೆಟ್ಟು ನಿಲ್ಲದಿದ್ದರೆ, ೨.೪೫ಕ್ಕೆ ಗದಗ್‌ ತಲುಪುತ್ತದೆ. ಕೃಷ್ಣಾ ಟಾಕೀಸ್‌ ತಲುಪಲು ಐದು ನಿಮಿಷಗಳು ಸಾಕು. ಟಿಕೆಟ್‌ ತಗೊಂಡು ಸೀಟಲ್ಲಿ ಕೂಡುವ ಹೊತ್ತಿಗೆ ಸರಿಯಾಗಿ ಸಿನಿಮಾ ಶುರುವಾಗುತ್ತದೆ ಎಂದು ಮನಸ್ಸು ಪದೆ ಪದೆ ಎಣಿಕೆ ಹಾಕುತ್ತಿತ್ತು.

ಅದೃಷ್ಟವಶಾತ್‌ ಬಸ್‌ ಕೆಟ್ಟು ನಿಲ್ಲಲಿಲ್ಲ. ಗದಗ್‌ ಹತ್ತಿರವಾಗುತ್ತಿದ್ದಂತೆ, ಬಾಗಿಲ ಹತ್ತಿರ ಬಂದು ನಿಂತಿದ್ದೆ. ಬಸ್‌ಸ್ಟ್ಯಾಂಡ್‌ ಪ್ರವೇಶಿಸುತ್ತಿದ್ದಂತೆ, ಬಾಗಿಲು ತೆರೆದು ಹೊರ ನೆಗೆದವ, ಮತ್ತದೇ ಓಡು ನಡಿಗೆಯಲ್ಲಿ ಕೃಷ್ಣಾ ಟಾಕೀಸ್‌ನತ್ತ ಹೊರಟೆ. ಆಗ ಗಂಟೆ ೨.೫೫.

ಟಿಕೆಟ್‌ ಕೌಂಟರ್‌ ಖಾಲಿಯಾಗಿತ್ತು. ಪಕ್ಕದಲ್ಲೇ ‘ಹೌಸ್‌ಫುಲ್‌’ ಬೋರ್ಡ್‌. ಅದನ್ನು ನೋಡುತ್ತಲೇ ಮನಸ್ಸು ಸೂಜಿ ಚುಚ್ಚಿದ ಬಲೂನಿನಂತಾಯ್ತು. ಅಭ್ಯಾಸ ಬಲದಿಂದ, ಆಚೀಚೆ ಕಳ್ಳನೋಟ ಹರಿಸಿದಾಗ, ಸೆಟಲ್‌ಮೆಂಟ್‌ ಪ್ರದೇಶದ ಯುವಕನೊಬ್ಬ ಸಮೀಪಿಸಿದ. ಪಿಸುದನಿಯಲ್ಲಿ, ‘ಎರಡು ಟಿಕೆಟ್ಟಿವೆ’ ಎಂದ. ಎಷ್ಟೆಂದು ಕೇಳಿದವ, ಹತ್ತು ಸೆಕೆಂಡ್‌ಗಳಲ್ಲಿ ಚೌಕಾಸಿ ಮುಗಿಸಿ, ಟಿಕೆಟ್‌ ಕೊಂಡು ಥೇಟರ್‌ ಪ್ರವೇಶಿಸಿದೆ. ನನ್ನ ನಂಬರ್‌ನ ಸೀಟ್‌ನಲ್ಲಿ ಕೂತು ಬೆವರೊರೆಸಿಕೊಳ್ಳುತ್ತಿದ್ದಂತೆ, ಲೈಟುಗಳು ಆರಿದವು.

ಹೃದಯಾಘಾತದಿಂದ ಮೃತರಾದ ಖ್ಯಾತ ನಟ ವಿಷ್ಣುವರ್ಧನ್‌ ಅವರ ‘ಬಂಧನ’ ಸಿನಿಮಾ ನಾನು ನೋಡಿದ್ದು ಹೀಗೆ.


*****

ಬೇಸಿಗೆ ರಜೆಯ ಎರಡು ತಿಂಗಳಿಡೀ ಬಂಧನ ಸಿನಿಮಾದ್ದೇ ಗುಂಗು. ನನಗೊಬ್ಬನಿಗಷ್ಟೇ ಅಲ್ಲ, ನನ್ನ ಓರಗೆಯ ಹುಡುಗರಿಗಷ್ಟೇ ಅಲ್ಲ, ಬಹುತೇಕ ಎಲ್ಲರಿಗೂ ಬಂಧನ ಸಿನಿಮಾ ಹುಚ್ಚು ಹಿಡಿಸಿತ್ತು. ರೇಡಿಯೋದಲ್ಲಿ ದಿನಕ್ಕೆ ಮೂರು ಹೊತ್ತು, ಸರಾಸರಿ ನಲ್ವತ್ತು ನಿಮಿಷ ಬರುತ್ತಿದ್ದ ರೇಡಿಯೋದ ಚಿತ್ರಗೀತೆಗಳಲ್ಲಿ ಆ ಸಿನಿಮಾದ ಎರಡು ಹಾಡುಗಳಂತೂ ಇದ್ದೇ ಇರುತ್ತಿದ್ದವು. ಹಾಡು ಕೇಳುತ್ತ, ಸಿನಿಮಾವನ್ನು ಮತ್ತೆ ಮತ್ತೆ ನೆನಪಿಸಿಕೊಳ್ಳುತ್ತ ನನ್ನ ಕಾಲೇಜಿನ ದಿನಗಳ ಮೊದಲ ದೀರ್ಘ ರಜೆಯನ್ನು ನಾನು ಹೀಗೆ ಕಳೆದಿದ್ದು ೧೯೮೫ರಲ್ಲಿ.

ಮುಂದೆ ಅದೇ ಸಿನಿಮಾ ೨೩ ಕಿಮೀ ದೂರದ ಕೊಪ್ಪಳಕ್ಕೆ ಬಂದಾಗ, ನನ್ನೂರು ಅಳವಂಡಿ ಹಾಗೂ ಸುತ್ತಲಿನ ಊರುಗಳ ಎಷ್ಟೋ ಜನ ಎತ್ತಿನ ಬಂಡಿ ಕಟ್ಟಿಕೊಂಡು ಹೋಗಿ ನೋಡಿ ಬಂದರು. ಆಗ ತಾನೆ ಕ್ಯಾಸೆಟ್‌ಗಳು ದೊಡ್ಡ ಪ್ರಮಾಣದಲ್ಲಿ ಬರಲಾರಂಭಿಸಿದ್ದವು. ಬಂಧನ ಸಿನಿಮಾದ ಕ್ಯಾಸೆಟ್‌ಗಳನ್ನು ಮಾರಿ ಮಾರಿಯೇ ಎಷ್ಟೋ ಜನ ಉದ್ಧಾರವಾಗಿ ಹೋದರು. ಸಿನಿಮಾವೊಂದು ಜನಮಾನಸವನ್ನು ಆವರಿಸಿಕೊಳ್ಳುತ್ತಿದ್ದ ಪರಿಯನ್ನು ನೆನಪಿಸಿಕೊಂಡರೆ ಈಗಲೂ ಅಚ್ಚರಿಯಾಗುತ್ತದೆ.

ಮುಂದೆ ವಿಷ್ಣುವರ್ಧನ್‌ ಅವರ ಎಷ್ಟೋ ಸಿನಿಮಾಗಳನ್ನು ನೋಡಿದೆ. ನಮ್ಮೂರಿನ ಟೆಂಟ್‌ ಟಾಕೀಸಿಗೆ ಬರುತ್ತಿದ್ದುವೇ ಹಳೆಯ ಸಿನಿಮಾಗಳು. ರಾಜ್‌ಕುಮಾರ್‌ ಹಾಗೂ ವಿಷ್ಣುವರ್ಧನ್‌ ಸಿನಿಮಾ ಬಂದರೆ ಮುಗೀತು, ಎರಡು-ಮೂರು ಬಾರಿ ನೋಡುವುದು ಗ್ಯಾರಂಟಿ. ಮನರಂಜನೆಗೆ ಬೇರೇನೂ ಇಲ್ಲದ ಸಣ್ಣ ಊರಿನಲ್ಲಿ ಈ ಸಿನಿಮಾ ಹಾಗೂ ಚಿತ್ರಗೀತೆಗಳೇ ನಮ್ಮ ಏಕೈಕ ಮನರಂಜನೆಯಾಗಿದ್ದವು.

ನನ್ನ ಯೌವನದ ಮೊದಲ ದಿನಗಳನ್ನು ಆಪ್ತ ನೆನಪಿನಿಂದ ಸಮೃದ್ಧವಾಗಿಸಿದ ಸಿನಿಮಾ ತಾರೆಯರ ಪೈಕಿ ವಿಷ್ಣುವರ್ಧನ್‌ ಹಲವಾರು ಕಾರಣಗಳಿಗಾಗಿ ಪ್ರಮುಖರು. ರಾಜಕುಮಾರ್‌ಗಿಂತ ಈ ವ್ಯಕ್ತಿ ಎಷ್ಟೋ ಭಿನ್ನ ಎಂದು ಯಾವಾಗಲೂ ಅನಿಸುತ್ತಿತ್ತು. ಸಿದ್ಧಮಾದರಿಯಲ್ಲದ ಚಿತ್ರಗಳಿಂದಾಗಿಯೂ ಅವರು ಇಷ್ಟವಾಗುತ್ತಿದ್ದರು. ಆಗ ತಾನೆ ಮೊಳಕೆಯೊಡೆಯುತ್ತಿದ್ದ ರಂಗಿನ ಕನಸುಗಳಿಗೆ ಈ ನಟ ಒದಗಿಸಿದ ವೇದಿಕೆ ಸಮೃದ್ಧವಾದದ್ದು. ಅವನ್ನು ಯಾವತ್ತೂ ಮರೆಯಲಾಗದು.


*****

ಎಂದಿನಂತೆ ರಾತ್ರಿ ತಡವಾಗಿ ಮಲಗಿದ್ದರಿಂದ ಬೆಳಿಗ್ಗೆ ಬೇಗ ಏಳದೇ ಮುಸುಕು ಹಾಕಿಕೊಂಡು ಮಲಗಿದ್ದವನನ್ನು ಎಬ್ಬಿಸಿದ್ದು ಮಿತ್ರ ಮಂಜುನಾಥ ಬಂಡಿ ಅವರ ಎಸ್ಸೆಮ್ಮೆಸ್‌. ವಿಷ್ಣುವರ್ಧನ್‌ ಇನ್ನಿಲ್ಲ ಎಂಬ ಎರಡಕ್ಷರದ ಸಂದೇಶ ಓದಿದ ಕೂಡಲೇ ನಿದ್ದೆ ಹಾರಿಹೋಗಿ, ಇನ್ನೊಂಥರದ ಮಂಕು ಆವರಿಸಿಬಿಟ್ಟಿತು. ಟಿವಿ ಹಾಕಿದರೆ, ಪುಂಖಾನುಪುಂಖವಾಗಿ ವಿವರಗಳು ಬರತೊಡಗಿದವು. ಹೃದಯಾಘಾತದಿಂದ ತಕ್ಷಣ ಸಾವನ್ನಪ್ಪಿದ ವಿಷ್ಣು, ಎಲ್ಲ ಬಂಧನಗಳಿಂದ ಮುಕ್ತರಾಗಿದ್ದರು.

ರಾಜ್‌ ಕುಟುಂಬದ ದಬ್ಬಾಳಿಕೆ ಸಹಿಸಿಯೂ ಈ ಪರಿಯ ಎತ್ತರಕ್ಕೆ ಬೆಳೆದಿದ್ದೊಂದೇ ಅಲ್ಲ, ಇಳಿವಯಸ್ಸಿನಲ್ಲಿಯೂ ಸೊಗಸಾಗಿ ನಟಿಸುತ್ತಿದ್ದುದು ವಿಷ್ಣು ಸಾಧನೆ. ಎಲ್ಲಿಯೂ ಬಾಯ್ಬಿಡದಂತೆ ಸಹ ಕಲಾವಿದರಿಗೆ ನೆರವಾಗುತ್ತಿದ್ದುದು ಅಪರೂಪದ ಹೃದಯವಂತಿಕೆ. ವಿವಾದಗಳಿಂದ ದೂರ ನಿಲ್ಲುತ್ತಿದ್ದ ವಿನಯ, ತಮಗೆ ಕಿರುಕುಳ ನೀಡಿದವರ ಬಗ್ಗೆ ಎಲ್ಲಿಯೂ ಪ್ರಸ್ತಾಪ ಮಾಡದ ಸಜ್ಜನಿಕೆ, ಬೇಸರವಾದರೆ ಮೌನವಾಗಿ ತಮ್ಮ ಪಾಡಿಗೆ ತಾವಿರುತ್ತಿದ್ದ ನಿರ್ಲಿಪ್ತತೆ- ಇವೆಲ್ಲ ಕಾರಣಗಳಿಗೂ ವಿಷ್ಣು ಇಷ್ಟವಾಗುತ್ತಾರೆ.

ಈಗ ಅವೆಲ್ಲ ಬರೀ ನೆನಪು ಮಾತ್ರ. ಸಿನಿಮಾ ಮುಗಿದಿದೆ. ಥೇಟರ್‌ ಖಾಲಿಯಾಗಿದೆ. ಉಳಿದಿದ್ದು ಸವಿ ಸವಿ ನೆನಪುಗಳು ಮಾತ್ರ. ಆದರೆ, ಈ ದುಃಖದ ಸಂದರ್ಭದಲ್ಲಿ, ಆ ನೆನಪುಗಳೂ ವಿಷಾದ ಒಸರಿಸತೊಡಗಿವೆ. ‘ಕಥೆಯು ಮುಗಿದೇ ಹೋದರೂ, ಮುಗಿಯದಿರಲಿ ಬಂಧನ...’ ಅಂತ ಮನಸ್ಸು ಒರಲತೊಡಗಿದೆ.

- ಚಾಮರಾಜ ಸವಡಿ

ಸುನೀತ ನೆನಪುಗಳಲ್ಲಿ ಅಶ್ವಥ್‌ ಜೀವಂತ

29 Dec 2009

0 ಪ್ರತಿಕ್ರಿಯೆ

ಹಾಡಿನ ಮೋಡಿಯಲ್ಲಿ ನಾಡನ್ನೆಲ್ಲ ಸಿಲುಕಿಸಿದ್ದ ಸುಗಮ ಸಂಗೀತದ ದಿಗ್ಗಜ ಸಿ. ಅಶ್ವಥ್‌ ಮೃತರಾಗಿದ್ದಾರೆಯೆ?

ಮಾಧ್ಯಮ ವಲಯದಲ್ಲಿ ಇಂಥದೊಂದು ಸುದ್ದಿ ಇವತ್ತು ತೀವ್ರವಾಗಿ ಕೇಳಿಬರತೊಡಗಿದೆ. ತೀವ್ರ ಅನಾರೋಗ್ಯದ ಹಿನ್ನೆಲೆಯಲ್ಲಿ ಅಶ್ವಥ್‌ ಅವರನ್ನು ಬೆಂಗಳೂರಿನ ಯಶವಂತಪುರದ ಕೊಲಂಬಿಯಾ ಏಷ್ಯ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಪಿತ್ತಜನಕಾಂಗ ಹಾಗೂ ಮೂತ್ರಜನಕಾಂಗದ ಸಮಸ್ಯೆಯಿಂದ ಅವರು ತೀವ್ರವಾಗಿ ಬಳಲುತ್ತಿದ್ದರು. ಮೂರು ದಿನಗಳ ಹಿಂದೆಯೇ ಅವರ ಮೆದುಳು ಕೆಲಸ ಮಾಡುವುದನ್ನು ನಿಲ್ಲಿಸಿತ್ತು ಎಂಬ ವದಂತಿ ಇದೆ. 

ಆದರೆ, ಮಂಗಳವಾರ ಅವರ ೭೦ನೇ ಜನ್ಮದಿನದ ಕಾರ್ಯಕ್ರಮ ದೊಡ್ಡ ಪ್ರಮಾಣದಲ್ಲಿ ಏರ್ಪಾಟಾಗಿರುವುದರಿಂದ, ಕೊಮಾದಲ್ಲಿದ್ದ ಗಾಯಕನ ದೇಹಸ್ಥಿತಿಯ ಬಗ್ಗೆ ಮಾಹಿತಿ ನೀಡುವುದು ಬೇಡ ಎಂದು ಸಂಬಂಧಿಸಿದವರು ನಿರ್ಧರಿಸಿದ್ದಾಗಿ ಕೇಳಿಬರುತ್ತಿದೆ. ಈ ಕುರಿತು ಮಾಧ್ಯಮ ಮಿತ್ರರಲ್ಲೇ ತೀವ್ರ ಭಿನ್ನಾಭಿಪ್ರಾಯವೂ ಇದೆ. ಹಲವಾರು ಪತ್ರಿಕೆ ಹಾಗೂ ದೃಶ್ಯಮಾಧ್ಯಮದ ಹಿರಿಯರು, ಈ ಸುದ್ದಿಯನ್ನು ಅಧಿಕೃತ ಪ್ರಕಟಣೆ ಬರುವವರೆಗೆ ಪ್ರಸಾರ ಮಾಡುವುದು ಬೇಡ ಎಂದು ತೀರ್ಮಾನಿಸಿದ್ದಾಗಿಯೂ ಹೇಳಲಾಗಿದೆ.

ಈ ಎಲ್ಲ ವದಂತಿಗಳು ಸುಳ್ಳಾಗಲಿ. ಅಶ್ವಥ್‌ ಮತ್ತೆ ’ರೇ ರೇ ರೇ ರಾ...’ ಎಂದು ಹಾಡುತ್ತ ಆಸ್ಪತ್ರೆಯಿಂದ ಎದ್ದು ಬರಲಿ ಅಂತ ಹಾರೈಸುವೆ.

- ಚಾಮರಾಜ ಸವಡಿ
(ಚಿತ್ರ ಕೃಪೆ: http://www.kamat.org)

ಸಿಲ್ಲಿ ಕನಸುಗಳೆಂಬ ಸಣ್ಣ ಸೇತುವೆಗಳು

17 Dec 2009

3 ಪ್ರತಿಕ್ರಿಯೆ
ಒಮ್ಮೊಮ್ಮೆ ನೆನಪಿಸಿಕೊಂಡರೆ ಅಚ್ಚರಿಯಾಗುತ್ತದೆ: ನಾವೆಲ್ಲ ಎಂತೆಂಥ ಅನಾಹುತಕಾರಿ ಘಟ್ಟಗಳನ್ನು ದಾಟಿ ಬಂದಿರುತ್ತೇವಲ್ವೆ?

ಬಾಲ್ಯದಲ್ಲಿ ಚಿತ್ರವಿಚಿತ್ರ ಆಸೆಗಳಿರುತ್ತವೆ. ಅವತ್ತಿನ ಮಟ್ಟಿಗೆ ಅವೇ ದೊಡ್ಡವು. ಬಲು ಪಸಂದಾಗಿರುವಂಥವು. ಚಿಕ್ಕವನಿದ್ದಾಗ, ನಮ್ಮೂರಿನ ಹಿಟ್ಟಿನ ಗಿರಣಿಗೆ ನಿಯಮಿತವಾಗಿ ಹೋಗುತ್ತಿದ್ದೆ, ಜೋಳ ಬೀಸಿಕೊಂಡು ಬರಲು. ಅದೇ ಮುಖ್ಯ ಆಹಾರ ನಮಗೆ. ತೀರಾ ಕುಳ್ಳನಾಗಿದ್ದ ನನಗೆ, ಎತ್ತರದಲ್ಲಿದ್ದ ಹಿಟ್ಟು ಬೀಸುವ ಯಂತ್ರದ ಬಾಯಿಗೆ ಜೋಳದ ಬುಟ್ಟಿ ಎತ್ತಿ ಸುರುವಲು ಆಗುತ್ತಿರಲಿಲ್ಲ. ಗಿರಣಿಯ ಕೆಲಸಗಾರ, ನನ್ನ ತಲೆ ಮೇಲಿನ ಬುಟ್ಟಿ ಎತ್ತಿ, ಜೋಳ ಸುರುವಿ ಬುಟ್ಟಿಯನ್ನು ವಾಪಸ್‌ ಕೊಡುತ್ತಿದ್ದ. ಆಗ ಕೆಲ ಗಾಲಿಗಳನ್ನು ತಿರುವಿದ ಕೂಡಲೇ ಯಂತ್ರದ ಸದ್ದು ಬದಲಾಗಿ, ಇದ್ದಕ್ಕಿದ್ದಂತೆ ಹಿಟ್ಟು ಬುಟ್ಟಿಯಲ್ಲಿ ಬೀಳಲು ಶುರುವಾಗುತ್ತಿತ್ತು.

ನನಗೆ ಅದು ಬಹಳ ಕೌತುಕದ ಸಂಗತಿಯಾಗಿತ್ತು. ಯಂತ್ರದ ಬಾಯಿಂದ ಜೋಳ ಅದರ ಹೊಟ್ಟೆಗೆ ಹೇಗೆ ಹೋಗುತ್ತದೆ ಎಂಬುದನ್ನು ನೋಡುವ ಆಸೆ ನನ್ನದು. ಆದರೆ, ಗಿರಣಿಯವ ನನ್ನನ್ನು ಬಿಡುತ್ತಿರಲಿಲ್ಲ. ಅಲ್ಲದೇ, ಜೋಳ ಮುಗಿಯುತ್ತ ಬಂತು ಎಂಬುದು ಅವನಿಗೆ ಹೇಗೆ ಗೊತ್ತಾಗುತ್ತದೆ ಎಂಬುದನ್ನು ತಿಳಿಯುವ ಕುತೂಹಲವೂ ಸಾಕಷ್ಟಿತ್ತು. ಎಷ್ಟೇ ಪ್ರಯತ್ನಿಸಿದರೂ, ಆತ ಹೇಳುತ್ತಿರಲಿಲ್ಲ. ’ಅದಕ್ಕೆಲ್ಲ ತಲೆ ಬೇಕಾಗುತ್ತದೆ’ ಎಂದು ತನ್ನ ತಲೆ ಮುಟ್ಟಿ ನಗುತ್ತಿದ್ದ.

ಆಗ ನನ್ನ ದೊಡ್ಡ ಕನಸೆಂದರೆ, ಗಿರಣಿಯಲ್ಲಿ ಹಿಟ್ಟು ಬೀಸುವ ಕೆಲಸ ಮಾಡಬೇಕೆಂಬುದು. ದೊಡ್ಡವನಾದಾಗ, ಹಿಟ್ಟು ಬೀಸುವ ಕೆಲಸ ಮಾಡಬೇಕು. ಆಗ, ನನ್ನಂಥ ಚಿಕ್ಕಮಕ್ಕಳಿಗೆ ಗಿರಣಿ ಕೆಲಸ ಮಾಡುವುದನ್ನು ತೋರಿಸಿ ಅವರ ಅಚ್ಚರಿ ಗಮನಿಸಬೇಕೆಂಬ ವಿಚಿತ್ರ ಆಸೆ ಹುಟ್ಟಿತ್ತು. ನಾನು ಹೈಸ್ಕೂಲು ಮುಗಿಸುವವರೆಗೂ ಈ ಆಸೆ ಇತ್ತೆಂಬುದನ್ನು ಇವತ್ತು ನೆನೆದರೆ ನಗು ಬರುತ್ತದೆ.

ಮುಂದೆ ಇಂಥ ಹಲವಾರು ಆಸೆಗಳು ಹುಟ್ಟಿಕೊಂಡವು. ನಮ್ಮೂರಿನಲ್ಲಿದ್ದ ಟೆಂಟ್‌ ಸಿನಿಮಾ ಥೇಟರ್‌ನ ಗೇಟ್‌ಕೀಪರ್‌ ಆಗಬೇಕೆಂಬುದು ಅಂಥ ಕನಸುಗಳಲ್ಲಿ ಒಂದು. ಆಗ ದಿನಾ ಸಿನಿಮಾ ನೋಡಬಹುದು. ಅದಕ್ಕಾಗಿ ಕಾಸು ಕೊಡಬೇಕಿಲ್ಲ. ಅಷ್ಟೇ ಅಲ್ಲ, ಸಿನಿಮಾ ಯಾವಾಗ ಬದಲಾಗುತ್ತದೆ, ಹೊಸ ಸಿನಿಮಾ ಯಾವುದೆಂಬುದು ತಕ್ಷಣ ಗೊತ್ತಾಗುತ್ತದೆ ಎಂಬ ರೋಮಾಂಚನ. ಗೇಟ್‌ಕೀಪರ್‌ಗಳು ನನಗೆ ಗಂಧರ್ವ ಲೋಕದ ದ್ವಾರಪಾಲಕರಂತೆ ಕಾಣುತ್ತಿದ್ದರು. ಅವರೊಂದಿಗೆ ಗೆಳೆತನ ಬೆಳೆಸಿಕೊಳ್ಳಬೇಕೆಂದು ಎಷ್ಟೋ ಸಾರಿ ಆಸೆ ಪಟ್ಟಿದ್ದೆ. ಆದರೆ, ನನ್ನಂಥ ಚಿಕ್ಕಹುಡುಗರೊಂದಿಗೆ ಅವರು ಯಾವತ್ತೂ ಸಲಿಗೆಯಿಂದ ಇರುತ್ತಿರಲಿಲ್ಲ ಎಂಬುದೇ ಆಗ ನನಗೆ ವಿಷಾದದ ಹಾಗೂ ದಿನಗಟ್ಟಲೇ ಕಾಡಿದ ಚಿಂತೆಯ ವಿಷಯವಾಗಿತ್ತು.

ಒಂದೊಂದು ಕಾಲಘಟ್ಟದಲ್ಲೂ ನನ್ನ ಆಸೆಯ ರೀತಿಗಳು ಬದಲಾಗುತ್ತ ಹೋಗಿವೆ. ಕಾಲೇಜು ಪ್ರವೇಶಿಸಿದಾಗ, ಇಡೀ ತರಗತಿಯಲ್ಲಷ್ಟೇ ಏಕೆ, ಇಡೀ ಕಾಲೇಜಿನಲ್ಲಿ ನಾನೊಬ್ಬನೇ ಕುಳ್ಳ ವಿದ್ಯಾರ್ಥಿಯಾಗಿದ್ದೆ. ನನ್ನ ಸಹಪಾಠಿ ಹುಡುಗಿಯರೆಲ್ಲ ನನಗಿಂತ ಸಾಕಷ್ಟು ಎತ್ತರವಿದ್ದವರೇ. ಅವರು ಯಾವತ್ತೂ ನನ್ನನ್ನು ಸಹಪಾಠಿಯಂತೆ ಕಾಣಲಿಲ್ಲ. ತಮ್ಮ ಓಣಿಯ ಯಾರದೋ ಮನೆಯ ಪುಟ್ಟ ಹುಡುಗನಂತೆ ನನ್ನೊಂದಿಗೆ ವರ್ತಿಸುತ್ತಿದ್ದರು. ಆಗೆಲ್ಲ ಸಾಕಷ್ಟು ಸಿಟ್ಟು ಬರುತ್ತಿತ್ತು. ನಾನೂ ಎತ್ತರ ಬೆಳೆಯಬೇಕು ಎಂದು ಪದೆ ಪದೆ ಕನಸು ಕಾಣುತ್ತಿದ್ದೆ. ಬೆಳ್ಳಂಬೆಳಿಗ್ಗೆ ಎದ್ದು, ಕಾಲೇಜು ಮೈದಾನ ಹಾಗೂ ಸುತ್ತಮುತ್ತಲಿನ ಮರಗಿಡಗಳ ಕೈಗೆಟಕುವ ಕೊಂಬೆಗಳಿಗೆ ಜೋತು ಬೀಳುತ್ತಿದ್ದೆ. ಹಾಗೆ ಜೋತುಬೀಳುತ್ತಿದ್ದರೆ ಎತ್ತರವಾಗುತ್ತಾರೆ ಎಂದು ನನ್ನ ಗೆಳೆಯರು ಹೇಳಿದ್ದನ್ನು ನಂಬಿದ್ದೆ. ಅದರಿಂದ ಎತ್ತರವೇನೂ ಹೆಚ್ಚಾಗಲಿಲ್ಲ. ಆದರೆ, ಆರೋಗ್ಯಪ್ರಜ್ಞೆ ಚೆನ್ನಾಗಿ ಬೆಳೆಯಿತು. ಮುಂದೆ ನಾನು ಯೋಗಾಸನ ಕಲಿಯಲು ಈ ಪ್ರಯತ್ನ ತುಂಬ ನೆರವಾಯ್ತು.

ಯೋಗಾಸನ ಕಲಿತಿದ್ದು, ಹಿಪ್ನಾಟಿಸಂ ಕಲಿತಿದ್ದು, ಮುಂದೆ ಏರ್‌ಫೋರ್ಸ್‌ ಸೇರಲು ಬಾಲ್ಯ ಮತ್ತು ಕಾಲೇಜಿನ ದಿನಗಳ ಕನಸುಗಳ ಇಂಥ ಪ್ರೇರಣೆಗಳು ಅಪಾರ. ನಿತ್ಯದ ಊಟಕ್ಕೆ ಪರದಾಡಬೇಕಿದ್ದ ಕಾಲೇಜಿನ ದಿನಗಳು ನನ್ನಲ್ಲಿ ಅದೆಷ್ಟು ಅಸಹನೆ ಮೂಡಿಸಿದ್ದವೆಂದರೆ, ಮೊದಲ ಅವಕಾಶಕ್ಕೆ ಏರ್‌ಮನ್‌ ಕೆಲಸ ಸಿಕ್ಕಾಗ, ಎರಡನೇ ವಿಚಾರ ಕೂಡ ಮಾಡದೇ ಮಿಲಿಟರಿ ಸೇರಿಕೊಂಡಿದ್ದೆ. ಆದರೆ, ದುರದೃಷ್ಟ ಅಲ್ಲಿಯೂ ಒಕ್ಕರಿಸಿತ್ತು. ಇಡೀ ತಂಡದಲ್ಲಿ ನಾನೊಬ್ಬನೇ ಕುಳ್ಳ. ದೈಹಿಕ ಪರೀಕ್ಷೆಯಲ್ಲಿ ನನ್ನ ಎತ್ತರವನ್ನು ಮೂರು ಸಲ ಪರೀಕ್ಷಿಸಿದ್ದಾಯ್ತು. ಕೊನೆಗೂ ಕನಿಷ್ಟ ಮಟ್ಟಕ್ಕಿಂತ ಕೇವಲ ಎರಡು ಸೆಂ.ಮೀ. ಎತ್ತರವಿದ್ದುದನ್ನು ದೃಢಪಡಿಸಿಕೊಂಡ ನಂತರವೇ ನನ್ನ ನೇಮಕಾತಿ ಖಚಿತವಾಯ್ತು.

ಸಾಕಷ್ಟು ಎತ್ತರ ಬೆಳೆಯಲಿಲ್ಲ ಎಂಬ ಕೀಳರಿಮೆ ನನ್ನನ್ನು ಕಾಲು ಶತಮಾನ ಕಾಡಿದೆ. ಅದೇ ರೀತಿ ಒಂಚೂರು ದಪ್ಪವಾಗಬೇಕೆಂಬ ಬಯಕೆ ದಶಕಗಳ ಕಾಲ ಜೊತೆಗಿತ್ತು. ತಂತ್ರಜ್ಞಾನ ಕಲಿಯಬೇಕೆಂಬ ಹಂಬಲ, ಇಂಗ್ಲಿಷ್‌ ಓದಿ ಅರ್ಥ ಮಾಡಿಕೊಳ್ಳಬೇಕೆಂಬ ಆಸೆ ಹುಟ್ಟಿದ್ದೇ ಹೀಗೆ. ನಾನು ಪತ್ರಿಕೋದ್ಯಮ ಪ್ರವೇಶಿಸಿದ್ದೂ ಇಂಥದೇ ಒಂದು ಬೆಂಬಿಡದ ಬಯಕೆಯಿಂದಾಗಿ.

ಬರೆಯುತ್ತ ಹೋದರೆ, ಒಂದೊಂದು ಪ್ರಯೋಗದ ಬಗ್ಗೆಯೇ ಪುಟಗಟ್ಟಲೇ ಬರೆಯಬಹುದು. ಮುಂದೆಂದಾದರೂ ಅದನ್ನು ಬರೆದೇನು. ಮುಂದೆಂದೋ ನಕ್ಕುಬಿಡಬಹುದಾದಂಥ ಆಸೆಗಳು ಪ್ರತಿಯೊಬ್ಬ ವ್ಯಕ್ತಿಯನ್ನು ಹೀಗೇ ಕಾಡಿರಬಹುದು ಅಂತ ಅನಿಸುತ್ತದೆ. ಅವತ್ತಿನ ನನ್ನನ್ನು ಇವತ್ತಿನ ದಿನಕ್ಕೆ ಹೋಲಿಸಿದಾಗ, ಇತರರಿಗಿರಲಿ, ನನಗೇ ಸಾಕಷ್ಟು ಅಚ್ಚರಿ ಉಂಟಾಗುತ್ತದೆ. ಎಷ್ಟೊಂದು ದೂರವನ್ನು ಕ್ರಮಿಸಿ ಬಂದೆನೆಲ್ಲ ಎಂದು ಒಮ್ಮೊಮ್ಮೆ ದಿಗಿಲೂ ಆಗುತ್ತದೆ.

ಒಂದೇ ಎರಡೇ, ಇಂಥ ನೂರಾರು ಪ್ರಯೋಗಗಳನ್ನು ಮಾಡಿದ್ದೇನೆ. ಸಾಕಷ್ಟು ಸಾರಿ ದುಬಾರಿ ಬೆಲೆಯನ್ನೂ ಕೊಟ್ಟಿದ್ದೇನೆ. ವರ್ಷಕ್ಕೊಂದರಂತೆ ನೌಕರಿಗಳನ್ನು ಬದಲಿಸಿದ್ದೇನೆ. ಮನೆಗಳನ್ನು ಬದಲಿಸಿದ್ದೇನೆ. ಎಲ್ಲವೂ ಬದಲಾಯ್ತು ಎಂದು ಅನಿಸಿ, ಒಬ್ಬನೇ ಕೂತು ಯೋಚಿಸಿ ನೋಡಿದಾಗ, ನಾನು ಏನೇನೂ ಬದಲಾಗಿಲ್ಲ ಎಂದು ಮತ್ತೆ ಮತ್ತೆ ಅನ್ನಿಸಿದೆ.

ಏಕೆಂದರೆ, ಮಾಡಿದ ತಪ್ಪುಗಳು ಪ್ರಯೋಗನಿರತನಾದಾಗ ಆಗಿದ್ದೇ ಹೊರತು ಉದ್ದೇಶಪೂರ್ವಕವಲ್ಲ. ಮಾಡಿದ ಪ್ರತಿಯೊಂದು ತಪ್ಪಿನಿಂದಲೂ ಪಾಠ ಕಲಿತಿದ್ದೇನೆ. ಕಲಿಯಲು ಯತ್ನಿಸುತ್ತಿದ್ದೇನೆ. ಇವತ್ತು ಏನಾದರೂ ಒಂಚೂರು ವಿವೇಚನೆ, ಅನುಭವ, ಜೀವನಪ್ರೀತಿ ನನ್ನಲ್ಲಿ ಕಂಡು ಬಂದರೆ, ಅವತ್ತಿನ ’ಸಿಲ್ಲಿ’ ಕನಸುಗಳೇ ಅದಕ್ಕೆ ಕಾರಣ ಅಂತ ಮಾತ್ರ ಹೇಳಬಲ್ಲೆ.

ಹೀಗಾಗಿ, ಹೊಸ ತಪ್ಪುಗಳನ್ನು ಮಾಡಲು ಇಷ್ಟಪಡುತ್ತೇನೆ ಮತ್ತು ಅವನ್ನು ಎಂದಿನ ಉತ್ಸಾಹದಿಂದ ಮಾಡುತ್ತಲೇ ಇದ್ದೇನೆ.

- ಚಾಮರಾಜ ಸವಡಿ

ವಸುಧೈವ ಕುಟುಂಬಕಂ (ಭಾಗ-೨)

15 Dec 2009

8 ಪ್ರತಿಕ್ರಿಯೆ


ಲಗ್ನಪತ್ರವನ್ನೊಮ್ಮೆ ನೀವು ನೋಡಬೇಕು. ಅದರ ತುಂಬ ಜೋಡಿಗಳ ಹೆಸರೋ ಹೆಸರು. ಹಾಗಿದ್ದರೂ ಆ ಸಲ ಮದುವೆಯಾಗುತ್ತಿರುವವರ ಸಂಖ್ಯೆ ಕಡಿಮೆ ಇತ್ತು. ಕೇವಲ ಒಂಬತ್ತು ಜೋಡಿಯ ಮದುವೆ. ಅತಿ ಹೆಚ್ಚು ಎಂದರೆ ೨೦ ಜೋಡಿಯ ವಿವಾಹ ಒಮ್ಮೆ ನಡೆದಿತ್ತಂತೆ.

ಅಲ್ಲಿ ಹೋಗಿ ನೋಡಿದರೆ ಸಾಮೂಹಿಕ ಮದುವೆ ನಡೆಯುತ್ತಿದೆಯೇನೋ ಎಂಬಂಥ ವಾತಾವರಣ. ಉದ್ದವಾಗಿ ನಿರ್ಮಿಸಿದ ವೇದಿಕೆಯಲ್ಲಿ ಒಂಬತ್ತು ಮತ್ತು ಒಂಬತ್ತು- ಒಟ್ಟು ೧೮ ನವವಿವಾಹಿತರು ಸಾಲಾಗಿ ಕೂತಿದ್ದರು. ಅಡ್ಡ ಬೇರೆ ಜನ ಬಾರದಂತೆ, ಅಷ್ಟೂ ಜನರ ಫೋಟೊವನ್ನು ಒಂದೇ ಫ್ರೇಮಿನಲ್ಲಿ ತೆಗೆಯುವುದು ಹೇಗೆಂಬ ಪೇಚಾಟ ನಮ್ಮ ಛಾಯಾಗ್ರಾಹಕ ಕೇದಾರನಾಥ ಅವರದು. ಹಾಗೂ ಹೀಗೂ ಯತ್ನಿಸಿ, ಅಡ್ಡ ಬರುತ್ತಿದ್ದವರನ್ನು ಒಂದೆಡೆ ಸರಿಸಿ ಫೋಟೊ ತೆಗೆಯುವ ಹೊತ್ತಿಗೆ ಸಾಕಾಯಿತು.

ಮದುವೆಗೆ ಬಂದವರ ಪೈಕಿ ಮುಕ್ಕಾಲು ಜನ ಮನೆಯವರೇ. ಎಲ್ಲರೂ ಬಳಗವೇ. ಎಲ್ಲರೂ ಎಲ್ಲರಿಗೂ ಪರಿಚಿತರೇ. ಅಪರಿಚಿತರೆಂದರೆ ನಮ್ಮಂಥವರು ಮಾತ್ರ. ಅಕ್ಷತೆ ಹಾಕಿದ ಪ್ರತಿಯೊಬ್ಬರಿಗೂ ಪ್ರತಿಯೊಂದು ಜೋಡಿಯಿಂದ ಪರಿಚಿತ ಮುಗುಳ್ನಗೆ. ಕೈಹಿಡಿದು ಕುಶಲ ವಿಚಾರಣೆ. ದೂರದಲ್ಲಿ ನಿಂತ ಭೀಮಣ್ಣ ನರಸಿಂಗನವರ ಮುಖದ್ಲಲಿ ಧನ್ಯತೆ. ಈ ಒಂಬತ್ತು ಜೋಡಿಯಿಂದ ಮತ್ತೆ ಬದುಕು ಕುಡಿಯೊಡೆಯುತ್ತದೆ. ಬಳಗ ಬೆಳೆಯುತ್ತದೆ. ಜಾನಪದ ಹಾಡಿನಲ್ಲಿ ಮುಗುದೆಯೊಬ್ಬಳು ’ಕರಕಿಯ ಕುಡಿ ಹಂಗ, ಹಬ್ಬಲಿ ಅವರ ರಸಬಳ್ಳಿ’ ಎಂದು ಹಾಡಿದಂತೆ ಲೋಕೂರಿನ ಈ ಅವಿಭಕ್ತ ಕುಟುಂಬ ಚಲ್ಲವರಿದು ಹಬ್ಬುತ್ತ ಹೋಗುತ್ತದೆ.

’ವಸುಧೈವ ಕುಟುಂಬಕಂ’ ಎಂಬ ಸಂದೇಶವನ್ನು ಸದ್ದಿಲ್ಲದೇ ಸಾರುತ್ತದೆ.
 

ಇದು ಒಂದು ಮನೆಯ ಕಥೆ

ನರಸಿಂಗನವರ ಕುಟುಂಬದ ಮೂಲ ಮನೆ ದೊಡ್ಡದು. ನೂರು ಮನೆಗಳಿರಬಹುದಾದ ಈ ಊರಿನಲ್ಲಿ ಇವರಿಗೆ ಒಟ್ಟು ಎಂಟು ಮನೆಗಳಿವೆ. ದೊಡ್ಡ ಮನೆ ಎಂಬುದು ೩೩ ಅಂಕಣಗಳುಳ್ಳ, ೨೨ ಕೋಣೆಗಳುಳ್ಳ, ೪,೦೩೦ ಚದರಡಿ ವಿಸ್ತಾರದ ದೊಡ್ಡ ಬಂಗಲೆ. ಆದರೆ ಇಲ್ಲಿ ವಾಸಿಸುವವರ ಸಂಖ್ಯೆ ಕಡಿಮೆ. ಊಟ, ಮಕ್ಕಳು ಹಾಗೂ ಹೆಣ್ಣುಮಕ್ಕಳ ವಾಸಕ್ಕಾಗಿ ಇದನ್ನು ಬಳಸಲಾಗುತ್ತಿದೆ. ಕುಟುಂಬದ ಬಳಕೆಯಲ್ಲಿ ಇದು ಊಟದ ಮನೆ. ಇನ್ನಿತರ ಮನೆಗಳ ಪೈಕಿ ಒಂದರಲ್ಲಿ ಹಾಲಿನ ಡೈರಿಯಿದೆ, ಇನ್ನೊಂದರಲ್ಲಿ ಹಿಟ್ಟಿನ ಗಿರಣಿ, ಮತ್ತೊಂದರಲ್ಲಿ ಉಗ್ರಾಣ... ಪಟ್ಟಿ ಹೀಗೇ ಬೆಳೆಯುತ್ತದೆ. 

ಮಕ್ಕಳು, ವೃದ್ಧರು ಹಾಗೂ ಹುಡುಗ-ಹುಡುಗಿಯರು ಮೊದಲ ಅಂತಸ್ತಿನಲ್ಲಿರುವ ಸಿನಿಮಾ ಥೇಟರ್ ಮಾದರಿಯ ದೊಡ್ಡ ಹಾಲ್‌ನಲ್ಲಿ ಮಲಗುತ್ತಾರೆ. ದಂಪತಿಗಳಿಗಾಗಿ ಹಾಲ್‌ನ ಎರಡೂ ಕಡೆ ವಸತಿಗೃಹಗಳಲ್ಲಿ ಇರುವಂತೆ ಎದುರುಬದರು ಕೋಣೆಗಳಿವೆ. ಉಳಿದಂತೆ ಕೆಲಸದ ಮೇಲಿರುವವರು ಬಾಕಿ ಏಳು ಮನೆಗಳಲ್ಲಿ ತಂತಮ್ಮ ಪಾಳಿ ಇರುವ ಕಡೆ ಮಲಗುತ್ತಾರೆ.
 

ತೊಟ್ಟಿಲುಗಳೆಲ್ಲ ಕೆಳ ಅಂತಸ್ತಿನಲ್ಲಿ. ಬಾಣಂತಿಯರ ಕೋಣೆಗಳೂ ಅಲ್ಲಿಯೇ. ಉಳಿದಂತೆ ಸ್ನಾನದ ಮನೆ, ಊಟದ ಮನೆಗಳು ಕೆಳಗಿವೆ. ಕೆಳ ಅಂತಸ್ತಿನಲ್ಲಿ ಏನಿಲ್ಲವೆಂದರೂ ಏಳೆಂಟು ತೊಟ್ಟಿಲುಗಳಿವೆ. ಮಗು ದೊಡ್ಡದಾದಂತೆ ತೊಟ್ಟಿಲನ್ನು ಒಂದೆಡೆ ಕಂಬಕ್ಕೆ ಬಿಗಿದು ಕಟ್ಟುತ್ತಾರೆ. ಆದರೆ ಯಾವತ್ತೂ ಅದನ್ನು ಬಿಚ್ಚಿ ಇಡುವುದಿಲ್ಲ. ಏಕೆಂದರೆ ಒಬ್ಬರಲ್ಲ ಒಬ್ಬರು ಗರ್ಭಿಣಿಯರಾಗಿರುವಾಗ ಅದನ್ನು ತುಂಬ ದಿನ ಹಾಗೆ ಇಡುವ ಪ್ರಮೇಯವೇ ಒದಗುವುದಿಲ್ಲ!

ಹೆಗ್ಗಡೆ ಮೆಚ್ಚುಗೆ
 

ಲೋಕೂರಿನ ಅವಿಭಕ್ತ ಕುಟುಂಬದ ಬಗ್ಗೆ ಸ್ಥಳೀಯ ಪತ್ರಿಕೆಗಳ ನಂತರ, ದೊಡ್ಡ ಮಟ್ಟದಲ್ಲಿ ಮೊದಲು ಸುದ್ದಿ ಮಾಡಿದ್ದು ‘ದಿ ಹಿಂದು’ ಆಂಗ್ಲ ಪತ್ರಿಕೆ. ಇದನ್ನು ನೋಡಿದ ಬಿಬಿಸಿ ತಂಡ ಗಿರೀಶ ಕಾರ್ನಾಡ್ ಅವರನ್ನು ಸಂಪರ್ಕಿಸಿ, ಸ್ಥಳೀಯ ಸಹಕಾರಕ್ಕೆ ಕೋರಿತು. ಎಲ್ಲ ವ್ಯವಸ್ಥೆಯಾದ ನಂತರ ಬಿಬಿಸಿಯ ದೊಡ್ಡ ತಂಡ ಲೋಕೂರಿಗೆ ಬಂದು ೧೮ ದಿನಗಳ ಕಾಲ ಚಿತ್ರೀಕರಣ ನಡೆಸಿತು.

ನಂತರ ನಡೆದಿದ್ದು ಇತಿಹಾಸ.
 

ಬಿಬಿಸಿ ಸಾಕ್ಷ್ಯಚಿತ್ರ ನೋಡಿದ ನಂತರ ಜಪಾನ್ ಹಾಗೂ ಕೊರಿಯಾ ದೇಶಗಳಿಂದಲೂ ಬಂದ ಟಿವಿ ತಂಡಗಳು ವಿಸ್ತೃತ ಚಿತ್ರೀಕರಣ ನಡೆಸಿ ಲೋಕೂರು ಅವಿಭಕ್ತ ಕುಟುಂಬದ ಕತೆಯನ್ನು ಇಡೀ ಜಗತ್ತಿಗೆ ಸಾರಿ ಹೇಳಿದವು.

ಒಮ್ಮೆ ಈ ಕಡೆ ಬಂದಾಗ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ತಮ್ಮ ಕುಟುಂಬದೊಂದಿಗೆ ಲೋಕೂರಿಗೆ ಭೇಟಿ ನೀಡಿ ಒಂದಿಡೀ ಹಗಲನ್ನು ನರಸಿಂಗನವರ ಕುಟುಂಬದ ಜತೆಗೆ ಕಳೆದರು. ಸಹಬಾಳ್ವೆ ಬೋಧಿಸಿದ ಜೈನ ತೀರ್ಥಂಕರರ ಮಾದರಿಯನ್ನು ಸಾಕಾರ ಮಾಡಿರುವ ಕುಟುಂಬವನ್ನು ಕೊಂಡಾಡಿದರು. ನರಸಿಂಗನವರ ಕುಟುಂಬಕ್ಕೆ ಅದೊಂದು ಮರೆಯಲಾಗದ ದಿನ.
 

ಎಲ್ಲರ ಹೆಸರು ನೆನಪಿಲ್ಲ!
 

ನರಸಿಂಗನವರ ಕುಟುಂಬದ ಹಿರಿಯ ಭೀಮಣ್ಣನವರಿಗೆ ಕುಟುಂಬದ ಹಿರಿಯ ಸದಸ್ಯರನ್ನು ಬಿಟ್ಟರೆ ಮಕ್ಕಳೆಲ್ಲರ ಹೆಸರುಗಳು ನೆನಪಿಲ್ಲ. 
ಅದು ಸಾಧ್ಯವೂ ಇಲ್ಲ. ‘ಸಣ್ಣ ಮಕ್ಕಳ ಹೆಸರು ನೆನಪಿಡುವುದು ಕಷ್ಟ. ಹೆಸರಿಡಿದು ಕರೆಯಬೇಕಾದಾಗ ಅವರವರ ತಾಯಂದಿರನ್ನು ಕೇಳುತ್ತೇನೆ. ಇಲ್ಲದ್ದಿದರೆ ಏ ಪುಟ್ಟ, ಏ ಪುಟ್ಟಿ, ಏ ತಮ್ಮಾ ಎಂದು ಮಾತಾಡಿಸುತ್ತೇನೆ. ಮನೆಯ ನೂರಾರು ಜನರ ಹೆಸರನ್ನು ನೆನಪಿಡುವುದಾದರೂ ಹೇಗೆ?’ ಎಂದು ತಲೆ ಕೊಡವುತ್ತಾರೆ ಅವರು.

ಆದರೆ, ಇವು ತಮ್ಮ ಮನೆ ಮಕ್ಕಳು, ಇವು ಬೇರೆಯವರವು ಎಂಬುದು ಅವರಿಗೆ ಗೊತ್ತಾಗುತ್ತದೆ. ಅಲ್ಲದೇ, ಈ ಮಗುವಿನ ತಂದೆ ಇಂಥವರು, ತಾಯಿ ಇಂಥವರು ಎಂಬುದೂ ಗೊತ್ತಾಗುತ್ತದೆ. ಮನೆಯಲ್ಲಿರುವ ಎಲ್ಲರಿಗೂ ಮನೆಯ ಸದಸ್ಯರಾರು, ಹೊರಗಿನವರಾರು ಎಂಬುದು ಚೆನ್ನಾಗಿ ಗೊತ್ತಿದೆ.

ಸ್ವಂತ ಡೇರಿ, ಹಿಟ್ಟಿನ ಗಿರಣಿ!
 

ನರಸಿಂಗನವರ ಕುಟುಂಬದ ಬಳಕೆಗೆಂದೇ ಹಿಟ್ಟಿನ ಗಿರಣಿಯೊಂದನ್ನು ಹಾಕಲಾಗಿದೆ. ಕುಟುಂಬದ ಬಳಕೆಗೆಂದೇ ಸ್ವಂತ ಡೇರಿ ಇದೆ. ನಾವು ನೋಡಿದಾಗ ಅಲ್ಲಿ ೪೦ರಿಂದ ೪೫ ಹಸು-ಎಮ್ಮೆಗಳಿದ್ದವು. ‘ಮೊದಲು ಎಂಬತ್ತಕ್ಕೂ ಹೆಚ್ಚು ದನಕರುಗಳ್ಳಿದ್ದವು. ಆದರೆ ಮೂರು ವರ್ಷ ಸತತ ಕಾಡಿದ ಬರಗಾಲದಲ್ಲಿ ಮೇವಿನ ಸಮಸ್ಯೆ ಬಂದು ಅರ್ಧದಷ್ಟು ದನಕರುಗಳನ್ನು ಮಾರಿಬಿಟ್ಟೆ. ದಿನಕ್ಕೆ ೩೦ರಿಂದ ೪೦ ಲೀಟರ್ ಹಾಲು ಬೇಕಾಗುತ್ತದೆ. ಹೀಗಾಗಿ ಡೇರಿ ಇಡುವುದು ಅನಿವಾರ್ಯ’ ಎನ್ನುತ್ತಾರೆ ಭೀಮಣ್ಣ.
ಮನೆಯ ಸದಸ್ಯರಲ್ಲಿ ಅರ್ಧಕ್ಕರ್ಧ ಜನ ಚಹ-ಕಾಫಿ ಕುಡಿಯುವುದಿಲ್ಲ. ಹೀಗಾಗಿ ಇಷ್ಟು ಮಾತ್ರದ ಹಾಲು ಸಾಕು. ಮನೆ ತುಂಬ ಇರುವ ಚಿಕ್ಕ ಮಕ್ಕಳಿಗೆಂದೇ ಅರ್ಧಕ್ಕಿಂತ ಹೆಚ್ಚು ಹಾಲು ಬಳಕೆಯಾಗುತ್ತದೆ. ಉಳಿದಂತೆ ದಿನಸಿ ಸಾಮಾನುಗಳನ್ನಷ್ಟೇ ಹೊರಗಿನಿಂದ ಖರೀದಿ ಮಾಡಲಾಗುತ್ತದೆ. ಮಳೆಗಾಲ ಬಿಟ್ಟರೆ, ಉಳಿದ ದಿನಗಳ್ಲಲಿ ತರಕಾರಿಯೂ ಹೊರಗಿನಿಂದ ಬರುತ್ತದೆ. ಎಷ್ಟೇ ಕಡಿಮೆ ಬಳಸಿದರೂ ಮನೆಯ ವಿದ್ಯುತ್ ಬಿಲ್ ತಿಂಗಳಿಗೆ ರೂ.೧೦,೦೦೦ದಿಂದ ೧೨,೦೦೦ ಬರುತ್ತದೆ.

ಹಳ್ಳಿಯಾಗಿದ್ದರಿಂದ ಕರೆಂಟ್ ಇಲ್ಲದಿರುವುದೇ ಹೆಚ್ಚು. ಕತ್ತಲ್ಲಲಿ ರೊಟ್ಟಿ ಸುಡುವ ಫಜೀತಿ ನೋಡಲಾಗದೇ ಧಾರವಾಡದ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ಉಚಿತವಾಗಿ ಸೋಲಾರ್ ಲೈಟಿಂಗ್ ವ್ಯವಸ್ಥೆ ಮಾಡಿಕೊಟ್ಟಿದೆ. ಬಿಬಿಸಿಯವರು ಸಾಕ್ಷ್ಯಚಿತ್ರ ಮಾಡಿದ ನಂತರ ಟಿವಿ ಒಂದನ್ನು ಉಡುಗೊರೆಯಾಗಿ ಕೊಟ್ಟಿದ್ದಾರೆ. ಹಾಲ್ ಮಧ್ಯೆ ಇರುವ ಟಿವಿಯಲ್ಲಿ ಕನ್ನಡ ಸಿನಿಮಾ ನೋಡಲು ಮನೆ ಮಂದಿ ಕೂತರೆ ಟಾಕೀಸ್‌ಗಳು ನಾಚಬೇಕು.


ವ್ಯಾಪಾರವೂ ಆಗುತ್ತದೆ ಹಾಗೂ ಮನೆ ಬಳಕೆಗೂ ಆಗುತ್ತದೆ ಎಂದು ಮೊದಲು ಕಿರಾಣಿ (ದಿನಸಿ) ಅಂಗಡಿಯೊಂದನ್ನು ತೆರೆಯಲಾಗಿತ್ತು. ಆದರೆ ಸದಾ ಮನೆಯಲ್ಲಿರುವ ಮೂವತ್ತಕ್ಕೂ ಹೆಚ್ಚು ಮಕ್ಕಳು ಅಂಗಡಿಯಲ್ಲಿದ್ದ ಸಿಹಿ ತಿನಿಸು, ಪೆಪ್ಪರ್‌ಮಿಂಟ್, ಬೆಲ್ಲ, ಹುರಿಗಡಲೆ ಇತ್ಯಾದಿ ಸುಲಭ ಖಾದ್ಯ ವಸ್ತುಗಳನ್ನು ಎರಡೇ ದಿನಗಳಲ್ಲಿ ಖಾಲಿ ಮಾಡಿದ್ದರಿಂದ, ಅಂಗಡಿಯನ್ನು ಮುಚ್ಚಲಾಯಿತು.


ನಿತ್ಯದ ದಾಸೋಹಕ್ಕೆ ಸಾಮಾನು ಸರಬರಾಜು ಮಾಡುವ ಕೆಲಸವನ್ನು ಒಬ್ಬನಿಗೆ ವಿಧಿಸಲಾಗಿದೆ. ಆತನ ಕೆಲಸ ಏನೆಂದರೆ, ಬೆಳಿಗ್ಗೆ ಉಗ್ರಾಣದಿಂದ ರೊಟ್ಟಿಗೆ ಹಿಟ್ಟು, ಉಪ್ಪು, ಸೌದೆ ವ್ಯವಸ್ಥೆ, ಚಹ-ಕಾಫಿ-ಸಕ್ಕರೆ ಎತ್ತಿಡುವುದು, ಅವತ್ತಿನ ಅಕ್ಕಿ, ಗೋದಿ, ಬೇಳೆ ಕಾಳು, ತರಕಾರಿ, ತುಪ್ಪ ಇತ್ಯಾದಿ ವಸ್ತುಗಳನ್ನು ಅಗತ್ಯಕ್ಕೆ ತಕ್ಕ ಪ್ರಮಾಣದಲ್ಲಿ ನೀಡುವುದು; ಕೊರತೆಯಾದ ವಸ್ತುಗಳ ಯಾದಿ ತಯಾರಿಸಿ, ಹಿರಿಯರಿಗೆ ತೋರಿಸಿ ಖರೀದಿ ಮಾಡುವುದು, ಇತ್ಯಾದಿ. ಹೀಗಾಗಿ ಅಡುಗೆಗೆ ಯಾವ ಸಾಮಾನುಗಳ ಕೊರತೆಯೂ ಕಾಡುವುದಿಲ್ಲ. 


ಅಡುಗೆ ಮಾಡಲು ಪಾಳಿ
 

ಇಲ್ಲಿ ನಿತ್ಯ ೧,೨೦೦ಕ್ಕೂ ಹೆಚ್ಚು ರೊಟ್ಟಿಗಳನ್ನು ಮಾಡಲಾಗುತ್ತದೆ. ಹಬ್ಬ ಅಥವಾ ಮದುವೆ ಬಂದರೆ ಈ ಸಂಖ್ಯೆ ಇನ್ನೂ ಹೆಚ್ಚು. ಕುಟುಂಬದ ಸದಸ್ಯರ ಪೈಕಿ ಅರ್ಧದಷ್ಟು ಹೆಣ್ಣುಮಕ್ಕಳೇ ಇರುವುದರಿಂದ ಅಡುಗೆ ಮಾಡಲು ಪಾಳಿ ರೂಪಿಸಲಾಗಿದೆ. ಬೆಳಿಗ್ಗೆ ೪ ಗಂಟೆಗೆ ಮೊದಲ ಪಾಳಿ ಹೆಣ್ಣುಮಕ್ಕಳು ಎದ್ದು ಕೆಲಸಕ್ಕೆ ತೊಡಗುತ್ತಾರೆ. ೫ ಗಂಟೆಯಿಂದ ರೊಟ್ಟಿ ಬಡಿಯಲು ಶುರು ಮಾಡಿದರೆ, ನೀವು ನಂಬುತ್ತೀರೋ ಇಲ್ಲವೋ, ರಾತ್ರಿ ೧೧ರವರೆಗೆ ರೊಟ್ಟಿ ಬಡಿಯುವ ಸಪ್ಪಳ ನಿಲ್ಲುವುದೇ ಇಲ್ಲ.

ಮೊದಲ ಪಾಳಿಯಲ್ಲಿ ನಾಲ್ಕು ಜನ ಹೆಣ್ಣುಮಕ್ಕಳು. ಇವರ ಪೈಕಿ ಇಬ್ಬರು ಊಟಕ್ಕೆ ಅಥವಾ ಬೇರೆ ಕೆಲಸಗಳಿಗೆ ಎದ್ದರೆ ಇನ್ನಿಬ್ಬರು ರೊಟ್ಟಿ ಬಡಿಯುವದನ್ನು ಮುಂದುವರೆಸುತ್ತಾರೆ. ಒಂದು ಕಡೆ ರೊಟ್ಟಿ ಬೇಯುತ್ತಿದ್ದರೆ, ಹೊರಗೆ ಪಡಸಾಲೆಯಲ್ಲಿ ತಮಗೆ ಅನುಕೂಲವಾದ ಸಮಯದಲ್ಲಿ ಊಟ ಮಾಡಲು ಬಂದು ಹೋಗುವವರು ಇದ್ದೇ ಇರುತ್ತಾರೆ. ಯಾರೂ ಇಲ್ಲ ಎಂದಾಗ ಮಾತ್ರ ರೊಟ್ಟಿ ಬಡಿಯುವವರಿಗೆ ಬಿಡುವು. 


ಬೆಳಗಿನ ಪಾಳಿ ಮಧ್ಯಾಹ್ನ ೪ಕ್ಕೆ ಮುಗಿದರೆ ಎರಡನೇ ಪಾಳಿ ರಾತ್ರಿ ೧೧ಕ್ಕೆ ಮುಕ್ತಾಯವಾಗುತ್ತದೆ. ಪ್ರತಿ ವಾರ ಪಾಳಿ ಸಮಯ ಬದಲಾಗುತ್ತದೆ. ರೊಟ್ಟಿ ಬಡಿಯುವುದನ್ನು ಬಿಟ್ಟರೆ, ಚಿಕ್ಕ ಮಕ್ಕಳ ಕೆಲಸ ಮಾಡುವುದು, ನೀರು ಕಾಯಿಸುವುದು, ಬಟ್ಟೆ ತೊಳೆಯುವುದು, ಶಾಲೆಗೆ ಹೋಗುವ ಮಕ್ಕಳನ್ನು ಸಿದ್ಧಗೊಳಿಸುವುದು- ಹೀಗೆ ತರಹೇವಾರಿ ಕೆಲಸಗಳಿರುತ್ತವೆ.
 

ಊಟಕ್ಕೆ ಯಾವ ನಿಗದಿತ ಸಮಯವೂ ಇಲ್ಲ. ಎಲ್ಲರೂ ತಮ್ಮ ಕೆಲಸಗಳ ಮಧ್ಯೆ ಬಿಡುವು ಮಾಡಿಕೊಂಡು ಬಂದು ಊಟ ಮಾಡಿ ಹೋಗುತ್ತಾರೆ. ಬೇರೆ ಯಾವ ಸಮಯದಲ್ಲಿ ಸಿಗದಿದ್ದರೂ  ಊಟದ ಸಮಯದಲ್ಲಿ ಮನೆಯ ಸದಸ್ಯರು ಬಂದೇ ಬರುತ್ತಾರೆ. ಹೋಟೆಲ್‌ಗೆ ಹೋಗುವ ಚಟ ಯಾರಲ್ಲೂ ಇಲ್ಲದಿರುವುದರಿಂದ ಊಟಕ್ಕೆ ಬರುವುದು ಗ್ಯಾರಂಟಿ.
 


ಮನೆ ತುಂಬ ಸಮಾನತೆ
 

ಜೈನ ಸಮಾಜದಲ್ಲಿ ಮಹಿಳೆಯರಿಗೆ ತುಂಬ ಗೌರವ.
 

ಆ ಪರಂಪರೆ ಲೋಕೂರಿನ ನರಸಿಂಗನವರ ಮನೆಯಲ್ಲಿಯೂ ಇದೆ. ಇಲ್ಲಿ ಮಹಿಳೆ ಕೆಲಸ ಮಾಡುವ ಯಂತ್ರವಲ್ಲ. ಆಕೆ ಹೊರಗೆ ಹೋಗಿ ದುಡಿಯುವ ಸಂದರ್ಭ ಬಂದಿಲ್ಲ ಎಂಬ ಕಾರಣಕ್ಕೆ ಮನೆಯಲ್ಲಿಯೇ ಉಳಿದಿದ್ದಾಳೆ. ಓದುತ್ತೇನೆಂದ ೨೦-೨೨ ಹುಡುಗ-ಹುಡುಗಿಯರಿಗೆಂದೇ ಧಾರವಾಡದ ಮಾಳಮಡ್ಡಿಯಲ್ಲಿ ದೊಡ್ಡ ಮನೆ ಮಾಡಲಾಗಿದೆ. ಮನೆ ನೋಡಿಕೊಳ್ಳಲು ಇಬ್ಬರು ಹಿರಿಯ ಹೆಣ್ಣುಮಕ್ಕಳನ್ನು ಅಲ್ಲಿಗೆ ಕಳಿಸಲಾಗಿದೆ.

ಲೋಕೂರಿನ ಮನೆಯಲ್ಲಿ ಸ್ನಾನ ಮಾಡಿದ ನಂತರ ಎಲ್ಲ ಗಂಡಸರೂ ತಮ್ಮ ಒಳ ಉಡುಪುಗಳನ್ನು ತಾವೇ ತೊಳೆದುಕೊಳ್ಳುತ್ತಾರೆ. ಅಷ್ಟರಮಟ್ಟಿಗೆ ಮನೆಯ ಹೆಣ್ಣುಮಕ್ಕಳಿಗೆ ಕೆಲಸ ಕಡಿಮೆಯಾಗುತ್ತದೆ ಎಂಬ ಭಾವನೆ ಅವರದು. ಪ್ರತಿಯೊಬ್ಬರೂ ಸಾಧ್ಯವಾದಷ್ಟೂ ತಂತಮ್ಮ ಕೆಲಸಗಳನ್ನು ತಾವೇ ಮಾಡುವುದರಿಂದ ಹೆಣ್ಣುಮಕ್ಕಳು ನಿರಾಳ.


ಯಾವೊಬ್ಬ ತಾಯಿಯೂ ಇದು ತನ್ನ ಮಗು, ಅದು ಪರರದು ಎಂಬ ಭೇದ ಮಾಡುವುದಿಲ್ಲ. ಹಾಲೂಡಿಸುವ ಹಂತ ದಾಟಿದ ನಂತರ ಮಗು ಎಲ್ಲರಿಗೂ ಸೇರಿದ್ದು. ಶಾಲೆಗೆ ಹೋಗುವ ಹೆಣ್ಣುಮಕ್ಕಳು ತಮ್ಮ ತಾಯಿಯ ಕೈಯಿಂದಲೇ ಜಡೆ ಹಾಕಿಸಿಕೊಳ್ಳಬೇಕು ಎಂಬ ನಿಯಮ ಇಲ್ಲ. ಯಾರು ಖಾಲಿ ಇರುತ್ತಾರೋ ಅವರ ಮುಂದೆ ಹೋಗಿ ಮಗು ಕೂಡುತ್ತದೆ. ಹೀಗಾಗಿ ಹೆಣ್ಣುಮಕ್ಕಳಲ್ಲಿ ಒಗ್ಗಟ್ಟು ಬೆಳೆದಿದೆ. ಕಷ್ಟ ಮತ್ತು ಸುಖವನ್ನು ಒಟ್ಟಿಗೇ ಹಂಚಿಕೊಳ್ಳುವುದನ್ನು ಕಲಿಸಿದೆ. 


ಜವಳಿ ಖರೀದಿ!
 

ವರ್ಷಕ್ಕೆ ಎರಡು ಮೂರು ಸಂದರ್ಭಗಳಲ್ಲಿ ಮನೆ ಮಂದಿಗೆಲ್ಲ ಹೊಸ ಬಟ್ಟೆ ಖರೀದಿಸಲಾಗುತ್ತದೆ. ಆ ಸಂಭ್ರಮ ನೋಡಲು ಎರಡು ಕಣ್ಣು ಸಾಲವು. ಅತ್ಯಂತ ಸಾಧಾರಣ ಬಟ್ಟೆ ಖರೀದಿಸಿದರೂ, ಒಂದು ಸಲದ ಖರೀದಿ ಮೌಲ್ಯ ರೂ.೪೦,೦೦೦ಕ್ಕಿಂತ ಕಡಿಮೆಯಾಗುವುದಿಲ್ಲ. 

ಮದುವೆ ಜವಳಿ ಖರೀದಿ ಇನ್ನೂ ಸಂಭ್ರಮದ್ದು. ಏನಿಲ್ಲವೆಂದರೂ ರೂ.೨ರಿಂದ ೨.೫ ಲಕ್ಷ ಜವಳಿ ಖರೀದಿಯಾಗುತ್ತದೆ. ಅದನ್ನು ಟ್ರಾಕ್ಟರ್ ಅಥವಾ ಟ್ರ್ಯಾಕ್ಸ್ ಮೂಲಕ ಹೇರಿಕೊಂಡು ಬರಲಾಗುತ್ತದೆ. ಬಟ್ಟೆ ಹೊಲಿಯುವವರಿಗಂತೂ ತಿಂಗಳಗಟ್ಟಲೆ ಬಿಡುವಿಲ್ಲದ ಕೆಲಸ.

ಮದುವೆಯಲ್ಲಿ ಖರ್ಚು ಐದಾರುಪಟ್ಟು ಹೆಚ್ಚಾಗುತ್ತದೆ. ಬೆಲ್ಲ ಹಾಕಿದ ಉಂಡಿ ಮಾಡಿಸಿದರೆ, ಮನೆಯ ಜನರಿಗೇ ಸಾವಿರಾರು ಉಂಡಿ ಬೇಕಾಗುತ್ತವೆ. ಕ್ವಿಂಟಾಲ್‌ಗಟ್ಟಲೇ ಅನ್ನ, ಕಡಾಯಿಗಟ್ಟಲೇ ಸಾರು ಮನೆ ಮಂದಿಗೇ ಬೇಕು. ಇದರ ಜತೆಗೆ ಮದುವೆಗೆ ಬಂದ ನೆಂಟರು, ಊರ ಜನರು ಸೇರಿದರೆ ಅದೊಂದು ಜಾತ್ರೆ. ಆದರೂ ಯಾವ ವಸ್ತುವಿಗೂ ಕೊರತೆಯಾಗುವುದಿಲ್ಲ. ಒಬ್ಬರಲ್ಲಿಯೂ ಅಸಮಾಧಾನ ತೋರುವುದಿಲ್ಲ. 


ನೂರು ಮತ, ಒಬ್ಬ ತಾ.ಪಂ. ಸದಸ್ಯ!
 

ನರಸಿಂಗನವರ ಮನೆಯಲ್ಲಿಯೇ ಕನಿಷ್ಠ ನೂರು ಮತಗಳಿವೆ. ಹೀಗಾಗಿ ಚುನಾವಣೆ ಬಂತೆಂದರೆ ಈ ಮನೆಗೆ ಆಗಮಿಸದ ಅಭ್ಯರ್ಥಿಯೇ ಇಲ್ಲ. ಅವರಿವರಿಗೆ ಓಟು ಹಾಕುವುದೇಕೆ ಎಂಬ ವಿಚಾರ ಬಂದಾಗ ಕುಟುಂಬದ ಸದಸ್ಯನೊಬ್ಬ ಚುನಾವಣೆಗೆ ನಿಲ್ಲಲು ಮುಂದಾದ. ಟಿಕೆಟ್ ಕೊಡಲು ರಾಜಕೀಯ ಪಕ್ಷಗಳ ನಡುವೆಯೇ ಸ್ಪರ್ಧೆ ನಡೆಯಿತು. ಕೊನೆಗೂ ಗೆದ್ದಿದ್ದು ಜೆಡಿಎಸ್. ಆ ಪಕ್ಷದ ಟಿಕೆಟ್ ಪಡೆದ ನರಸಿಂಗನವರ್ ಕುಟುಂಬದ ಮಂಜುನಾಥ ತಾಲ್ಲೂಕು ಪಂಚಾಯತಿ ಸ್ಪರ್ಧೆಗೆ ನಿಂತ. ಅನಾಯಾಸವಾಗಿ ಆರಿಸಿಯೂ ಬಂದ.

ಇಡೀ ಮನೆ ಮಂದಿಯ ಸಾಮಾನ್ಯ ಕಾಯಿಲೆಗಳಿಗೆಂದೇ ಚಿಕ್ಕ ಔಷಧ ಭಂಡಾರ ಮನೆಯಲ್ಲಿದೆ. ಕಾಯಿಲೆ ಕೊಂಚ ಉಲ್ಬಣಿಸಿದರೆ ನೋಡಲು ಕುಟುಂಬ ವೈದ್ಯ ಹುಬ್ಬಳ್ಳಿಯ ಡಾ. ಆರ್.ಬಿ. ಪಾಟೀಲ ಇದಾರೆ.


ನರಸಿಂಗನವರ್ ಕುಟುಂಬ ಕುಸ್ತಿಪಟುಗಳಿಗೆ ಹೆಸರುವಾಸಿ. ಮನೆಯ ಸಾಮಾನುಗಳು, ಯಂತ್ರಗಳು ದುರಸ್ತಿಗೆ ಬಂದರೆ ಇರಲಿ ಎಂದು ಕುಟುಂಬದ ಸದಸ್ಯ ದೇವೇಂದ್ರನಿಗೆ ತರಬೇತಿ ಕೊಡಿಸಲಾಗಿದೆ. ಟ್ರಾಕ್ಟರ್, ಟ್ರ್ಯಾಕ್ಸ್, ಹಿಟ್ಟಿನ ಗಿರಣಿ- ಇತ್ಯಾದಿ ವಾಹನಗಳು ಹಾಗೂ ಯಂತ್ರಗಳ ದುರಸ್ತಿ ಈತನ ಕೆಲಸ. ಸರ್ಕಾರಿ ಕೆಲಸ ನೋಡಿಕೊಳ್ಳಲು ತಾ.ಪಂ. ಸದಸ್ಯ ಮಂಜುನಾಥ, ಕೃಷಿ ನೋಡಿಕೊಳ್ಳಲು ಪದ್ಮಣ್ಣ, ಮನೆ ವ್ಯವಹಾರ ನಿಭಾಯಿಸಲು ಮಹಾವೀರ, ಡೇರಿ ನೋಡಿಕೊಳ್ಳಲು ಧರ್ಮೇಂದ್ರ ಇದ್ದಾರೆ. ಇವರೆಲ್ಲರ ಮೇಲೆ ಭೀಮಣ್ಣನವರ ಉಸ್ತುವಾರಿ ಇದೆ.
 

ಕರ್ಮ ದೂರಾದವು...
 

ನರಸಿಂಗನವರ್ ಅವರ ಅವಿಭಕ್ತ ಕುಟುಂಬ ಒಂದು ಪ್ರೇಕ್ಷಣೀಯ ಸ್ಥಳವೇ ಸರಿ. ಪ್ರತಿ ವಾರ ಒಬ್ಬಿಬ್ಬರು ಪ್ರವಾಸಿಗರು ಇದ್ದೇ ಇರುತ್ತಾರೆ. ಒಮ್ಮೊಮ್ಮೆ ದೂರದ ಊರುಗಳ ಶಾಲೆಯಿಂದ ಮಕ್ಕಳು ಪ್ರವಾಸ ಬರುವುದೂ ಉಂಟು. ಆಗೆಲ್ಲ ಮಕ್ಕಳ ಊಟ ಈ ಮನೆಯಲ್ಲಿಯೇ. ಜಗಳವಾಡಿ ದೂರಾದ ದಂಪತಿಗಳು, ಬೇರೆ ಮನೆ ಮಾಡಬೇಕೆಂದು ಮೊಂಡು ಕೂತ ಎಳೆಯ ದಂಪತಿಗಳನ್ನು ಕರೆದುಕೊಂಡು ಹಿರಿಯರು ಈ ಮನೆಗೆ ಬರುವುದೂ ಉಂಟು. ಯಾರೇ ಬಂದರೂ ಮನೆಯವರಿಗೆ ಬೇಸರವಿಲ್ಲ. ಅವರು ಕೇಳುವ ಪ್ರಶ್ನೆಗಳಿಗೆ ಸಮಾಧಾನದಿಂದಲೇ ಉತ್ತರ ಕೊಡುತ್ತಾರೆ.
ಬಂದವರೂ ಅಷ್ಟೇ, ತೆರಳುವಾಗ, ‘ನಿಮ್ಮ ಮನೆಗೆ ಬಂದು ನಮ್ಮ ಕರ್ಮ ದೂರಾದವು. ದೇವರು ನಿಮ್ಮನ್ನು ಹೀಗೇ ಚೆನ್ನಾಗಿಟ್ಟಿರಲಿ’ ಎಂದು ಹರಸುತ್ತಾರೆ. ಅದೇ ನಮ್ಮ ಪಾಲಿಗೆ ದೊಡ್ಡ ಆಶೀರ್ವಾದ ಎನ್ನುತ್ತಾರೆ ಭೀಮಣ್ಣ. 


ಆಸಕ್ತರು ‘ಭೀಮಣ್ಣ ನರಸಿಂಗನವರ್, ಅಂಚೆ: ಲೋಕೂರು, ತಾ/ಜಿ. ಧಾರವಾಡ’ ಇಲ್ಲಿಗೆ ಅಥವಾ ಮಂಜುನಾಥ ಅವರನ್ನು ದೂರವಾಣಿ: ೯೩೪೩೧ ೦೯೫೨೭ ಮೂಲಕ ಸಂಪರ್ಕಿಸಬಹುದು. 

ಕುಟುಂಬಗಳ ಮಾತು ಹಾಗಿರಲಿ, ರಾಜ್ಯ-ದೇಶಗಳೇ ತುಂಡಾಗಿಹೋಗುತ್ತಿರುವ ಈ ದಿನಗಳಲ್ಲಿ
ಲೋಕೂರಿನ  ಈ ಅವಿಭಕ್ತ ಕುಟುಂಬ ಅಚ್ಚರಿ ಹುಟ್ಟಿಸುವ ತಾಣ. ಈ ಮನೆಯನ್ನು ನೋಡುತ್ತಿದ್ದಂತೆ ‘ವಸುಧೈವ ಕುಟುಂಬಕಮ್‌’ ಎಂಬ ಮಾತಿನ ಅರ್ಥ ತನಗೆ ತಾನೇ ಹೊಳೆಯುತ್ತದೆ. ಮನಸ್ಸು ತುಂಬಿ ಬರುತ್ತದೆ. 



- ಚಾಮರಾಜ ಸವಡಿ
(ಚಿತ್ರಗಳು: ಬಿ.ಎಂ. ಕೇದಾರನಾಥ್‌)

ಅಪರೂಪದ ವಸುಧೈವ ಕುಟುಂಬಕಂ!

7 Dec 2009

13 ಪ್ರತಿಕ್ರಿಯೆ
ಮನೆಯೊಳಗೇ ಊರು ತುಂಬಿಕೊಂಡ ಅಚ್ಚರಿ ಇದು. ಧಾರವಾಡದ ಹತ್ತಿರ ಇರುವ ಲೋಕೂರು ಒಂದು ಚಿಕ್ಕ ಊರು. ಇಲ್ಲಿರುವ ಮನೆಗಳಲ್ಲಿಯೇ ಅತ್ಯಂತ ದೊಡ್ಡ ಮನೆಯಲ್ಲಿ ರಾಜ್ಯಕ್ಕೇ ದೊಡ್ಡದೆನ್ನಬಹುದಾದ ಕುಟುಂಬವೊಂದು ಕಳೆದ ನಾಲ್ಕುನೂರು ವರ್ಷಗಳಿಂದ ಒಟ್ಟಿಗೇ ವಾಸಿಸುತ್ತಿದೆ. ಕಟ್ಟಿದಾಗಿನಿಂದ ಜೈನರ ಈ ಮನೆ ವಿಭಜನೆಗೊಂಡಿಲ್ಲ. ನೌಕರಿಗಾಗಿ ದೂರ ಹೋದವರು ನಿವೃತ್ತರಾದ ನಂತರ ಮತ್ತೆ ಮನೆ ಸೇರಿದ್ದಾರೆ. ಎಲ್ಲರೂ ಒಟ್ಟಿಗೇ ದುಡಿಯುತ್ತಾರೆ. ಒಂದೇ ಕಡೆ ಉಣ್ಣುತ್ತಾರೆ. ಜಗಳವಿಲ್ಲ. ಆಸ್ತಿ ಹೋರಾಟ ಇಲ್ಲ. ೧೮೦ಕ್ಕೂ ಹೆಚ್ಚು ಜನ ಒಂದೇ ಕಡೆ ಇರುತ್ತ, ಮದುವೆಯಂಥ ಸಂದರ್ಭದಲ್ಲಿ ದೂರ ಹೋದವರೆಲ್ಲ ಬಂದಾಗ ೩೦೦ಕ್ಕೂ ಹೆಚ್ಚು ಜನ ಒಟ್ಟಿಗೇ ಸೇರಿ ಸಮಾರಂಭ ಮಾಡುತ್ತ ’ವಸುಧೈವ ಕುಟುಂಬಕಂ’ ಎಂಬ ಮಾತಿಗೆ ಸಾಕ್ಷಿಯಾಗುತ್ತ ಬಂದಿದ್ದಾರೆ... 




'ಬನ್ನಿ' ಎಂದರು ಯಜಮಾನರು.

ಒಳಗೆ ಮಕ್ಕಳು ಆಡುತ್ತಿದ್ದವು. ಫಕ್ಕನೇ ’ಶಾಲೆ ಇರಬಹುದಾ’ ಅನ್ನಿಸಿತು. ಆದರೆ, ಒಳಗೆಲ್ಲೋ ರೊಟ್ಟಿ ಬಡಿಯುತ್ತಿದ್ದ ಸದ್ದು. ಜೋಳದ ರೊಟ್ಟಿ ಬೇಯುತ್ತಿದ್ದ ಕಮ್ಮನೆ ಪರಿಮಳ. ಎಲ್ಲೋ ಮಗುವೊಂದು ಬಿಕ್ಕಿದಂತೆ, ಹೆಣ್ಣು ಧ್ವನಿಯೊಂದು ಅದನ್ನು ಮಮತೆಯಿಂದ ಸಂತೈಸಿದಂತೆ ಕೇಳಿ ಬಂದಾಗ, ಹೌದು, ಇದು ಮನೆಯೇ ಅನ್ನಿಸಿತು.

ಛಾಯಾಗ್ರಾಹಕ ಮಿತ್ರ ಕೇದಾರನಾಥ ಅವಾಕ್ಕಾಗಿ ನಿಂತಿದ್ದರು.

ಮತ್ತೊಮ್ಮೆ, ’ಬನ್ನಿ’ ಎಂದರು ಯಜಮಾನರು. ಅವರಿಗೆ ೯೦ ವರ್ಷ ವಯಸ್ಸು. ಹೆಸರು ತಮ್ಮಣ್ಣ ಜಿನ್ನಪ್ಪ ನರಸಿಂಗನವರ.

ಅವರಿಗೆ ವಯಸ್ಸಾಗಿರುವುದರಿಂದ ತಮಗಿಂತ ಐದು ವರ್ಷ ಚಿಕ್ಕವರಾಗಿರುವ ತಮ್ಮ ಭೀಮಣ್ಣ ನರಸಿಂಗನವರ ಅವರಿಗೆ ಮನೆಯ ಉಸ್ತುವಾರಿ ವಹಿಸಿಕೊಟ್ಟಿದ್ದಾರೆ. ಮನೆಯ ಅತಿ ಚಿಕ್ಕ ಸದಸ್ಯನಿಗೆ ಇನ್ನೂ ನಾಮಕರಣವಾಗಬೇಕಿದೆ. ತೊಟ್ಟಿಲು ನಿಲ್ಲದ ಮನೆಯಲ್ಲಿ ಸಣ್ಣವರ ಸ್ಥಾನ ಬದಲಾಗುತ್ತಲೇ ಇರುತ್ತದೆ.

ಇದು ಧಾರವಾಡದಿಂದ ೨೦ ಕಿಮೀ ದೂರದಲ್ಲಿರುವ ಲೋಕೂರು ಎಂಬ ಗ್ರಾಮದ ಅವಿಭಕ್ತ ಕುಟುಂಬದ ಕತೆ.


ಕುಟುಂಬದಲ್ಲಿರುವ ಹಾಲಿ ಸದಸ್ಯರ ಸಂಖ್ಯೆ ೧೮೦. ಪ್ರತಿ ತಿಂಗಳು-ಎರಡು ತಿಂಗಳಿಗೆ ಈ ಸಂಖ್ಯೆ ಹೆಚ್ಚುತ್ತದೆಯೇ ಹೊರತು ಕಡಿಮೆಯಾಗದು. ಈ ಅವಧಿಯಲ್ಲಿ ಗರ್ಭಿಣಿಯರ ಪೈಕಿ ಒಬ್ಬರಲ್ಲ ಒಬ್ಬರು ಹೆರುತ್ತಾರೆ. ದೊಡ್ಡ ಮನೆ ತುಂಬ ಕಟ್ಟಿರುವ ಹತ್ತಕ್ಕೂ ಹೆಚ್ಚು ತೂಗು ತೊಟ್ಟಿಲುಗಳಲ್ಲಿ ಅರ್ಧಕ್ಕೂ ಹೆಚ್ಚು ಆಡುತ್ತಲೇ ಇರುತ್ತವೆ. ಬಾಣಂತಿಯನ್ನು ಬೆಚ್ಚಗಿಡಲೆಂದು ಮನೆಯ ಮುಂದೆ ನಿತ್ಯ ಬೆಳಿಗ್ಗೆ ಮತ್ತು ಸಂಜೆ ಹಚ್ಚಿಡುವ ಬೆರಣಿ ಬೆಂಕಿ ಹೊಗೆಯಾಡುವುದನ್ನು ನಿಲ್ಲಿಸುವುದಿಲ್ಲ.

ನಿತ್ಯ ೧೮೦ ಜನರು ಒಂದೇ ಕಡೆ ಉಣ್ಣುತ್ತ, ವಿವಿಧೆಡೆ ಮಲಗುತ್ತ, ಊರ ಸುತ್ತ ಹಬ್ಬಿರುವ ಹೊಲಗಳಲ್ಲಿ ಕೆಲಸ ಮಾಡುತ್ತ, ಯಾವ ಜಗಳ, ಕಿರಿಕಿರಿ ಇಲ್ಲದೇ ನೆಮ್ಮದಿಯಿಂದ ಬದುಕುತ್ತ ಇದ್ದಾರೆ ಎಂದರೆ ನಾಗರಿಕ ಪ್ರಪಂಚಕ್ಕೆ ನಂಬಲು ಕಷ್ಟವಾಗುತ್ತದೆ. ಅಲ್ಲವೆ?

ಆದರೆ ನರಸಿಂಗನವರ ಕುಟುಂಬಕ್ಕೆ ಇದು ನೀರು ಕುಡಿದಷ್ಟು ಸುಲಭ.

’ನಮಗ ನೆನಪಿರಾಗಿಂದ ನಾವೆಲ್ಲ ಹಿಂಗ ಅದೀವ್ರಿ. ಒಬ್ಬೊಬ್ರ ಇದ್ದು ರೂಢಿನಾ ಇಲ್ಲ. ನಮಗ ಸುತ್ತ ಕಡೆ ಜನ ಇರಬೇಕು. ಮಕ್ಳುಮರಿ ಆಡ್ತಿರಬೇಕು, ಆಗ ಮಾತ್ರ ಸಮಾಧಾನ’ ಎನ್ನುತ್ತಾರೆ ದೊಡ್ಡ ಕುಟುಂಬದ ಉಸ್ತುವಾರಿ ನೋಡಿಕೊಳ್ಳುವ ಭೀಮಣ್ಣ ನರಸಿಂಗನವರ.

’ನಾವಷ್ಟ ಅಲ್ಲ, ನಮ್ಮ ಮನಿಗೆ ಹೊರಗ್ನಿಂದ ಬರೋ ಸೊಸೆಯಂದ್ರೂ ಹಿಂಗ ಹೇಳ್ತಾರ. ಮೊದಮೊದ್ಲು ಅವರಿಗೆ ಕಷ್ಟ ಅನಿಸಿದ್ರೂ ಸ್ವಲ್ಪ ದಿನದಾಗ ಎಲ್ರೂ ಹೊಂದಿಕೊಂಡುಬಿಡ್ತಾರ. ಒಬ್ರ ಇರಾಕ ಅವ್ರಿಗೂ ಬ್ಯಾಸರ ಆಗಾಕ ಶುರು ಆಗುತ್ತ. ಮನ್ಯಾಗ ಇರೋ ಎಲ್ರೂ ಹಿಂಗ...’ ಅನ್ನುತ್ತಾರೆ ಅವರು.

ಅದು ಸತ್ಯವೂ ಹೌದು. ನರಸಿಂಗನವರ ಮನೆಯಲ್ಲಿ ನೂರಾರು ಜನರಿದ್ದರೂ ಅದು ಗುಂಪು ಅನ್ನಿಸುವುದಿಲ್ಲ. ಜಂಗುಳಿ ಎಂಬ ಭಾವನೆ ಬರುವುದಿಲ್ಲ. ಅಳುವ ಮಕ್ಕಳು ಅಲ್ಲಿ ಯಾರಿಗೂ ಕಿರಿಕಿರಿ ಅಲ್ಲ. ಆಡುವ ಮಕ್ಕಳ ಸದ್ದು ಗಲಾಟೆ ಅನ್ನಿಸುವುದಿಲ್ಲ. ತೊಟ್ಟಿಲಲ್ಲಿ ಮಲಗಲು ಮಕ್ಕಳು ಇರುವಂತೆ ತೂಗುವ ಕೈಗಳೂ ಅಲ್ಲಿವೆ. ಯಾರು ಯಾರಿಗೂ ಭಾರ ಅಲ್ಲ.

ಏಕೆಂದರೆ ಪ್ರತಿಯೊಬ್ಬರೂ ತಂತಮ್ಮ ಕೆಲಸಗಳನ್ನು ಅಚ್ಚುಕಟ್ಟಾಗಿ ಮಾಡುತ್ತ ಹೋಗುತ್ತಾರೆ. ತಮ್ಮ ಪಾತ್ರವನ್ನು ಚೆನ್ನಾಗಿ ನಿಭಾಯಿಸುತ್ತ ಹೋಗುತ್ತಾರೆ. ಒಬ್ಬ ಕಾಯಿಲೆ ಮಲಗಿದ ಎಂದರೆ ಅವನ ಕೆಲಸವನ್ನು ಇತರರು ಹಂಚಿಕೊಳ್ಳುತ್ತಾರೆ. ಮಲಗಿದವನ ಯೋಗಕ್ಷೇಮ ನೋಡಿಕೊಳ್ಳಲು ಇತರರು ಸಿದ್ಧರಾಗುತ್ತಾರೆ. ಹೀಗಾಗಿ ಎಲ್ಲರಿಗೂ ನೆಮ್ಮದಿ. ತಮಗೇನೇ ಆದರೂ ಇತರರು ಇರುತ್ತಾರೆ ಎಂಬ ಸಮಾಧಾನ. ಖಾಲಿತನವಿಲ್ಲ. ಬೇಸರ ಎನ್ನುವ ಪ್ರಶ್ನೆ ಇಲ್ಲ, ಏಕಾಂಗಿತನ ಕಾಡುವುದಿಲ್ಲ. ಸುತ್ತ ಮುತ್ತ ಜನ ಇದ್ದೇ ಇರುತ್ತಾರೆ. ಆಸರಕ್ಕೆ ಬೇಸರಕ್ಕೆ ಕೈ ಚಾಚುತ್ತಾರೆ.

ಹೀಗಾಗಿ ಇದೊಂದು ಅಪರೂಪದ ಕುಟುಂಬ. ಮಾದರಿ ಕುಟುಂಬ.

ಮೂಲ ಮಹಾರಾಷ್ಟ್ರ

’ಮಹಾರಾಷ್ಟ್ರ ರಾಜ್ಯದ ಮೀರಜ್, ಕೊಲ್ಲಾಪುರ, ಸಾಂಗಲಿ ನಡುವೆ  ಇರುವ ಹಾತಕಲ್ ಅಂಗಡಾ ಎಂಬ ಪ್ರದೇಶದಲ್ಲಿದ್ದ ಜೈನ ಕುಟುಂಬ ನಮ್ಮದು. ಅಲ್ಲಿಯ ನರಸೋಬಾ ದೇವಸ್ಥಾನದ ಅರ್ಚಕರಾಗಿದ್ದ ನಮ್ಮ ಹಿರೀಕರ ಪೈಕಿ ಮೂವರು ಹಿರಿಯರು ಯಾವುದೋ ಕಾರಣಕ್ಕಾಗಿ ೧೬ನೇ ಶತಮಾನದಲ್ಲಿ ತಮ್ಮ ಮೂಲಸ್ಥಳ ಬಿಟ್ಟು ದೇಶಾಂತರ ಹೊರಟು ಇಲ್ಲಿಗೆ ಬಂದರು. ಇವರ ಪೈಕಿ ನರಸಿಂಗಪ್ಪ ಎಂಬ ಪೈಲ್ವಾನ್ ಲೋಕೂರಿನ ದುರ್ಗಾದೇವಿ ದೇವಸ್ಥಾನದಲ್ಲಿ ರಾತ್ರಿ ಮಲಗಿದ್ದ. ಆತನಿಗೆ ಇಲ್ಲಿಯೇ ಉಳಿಯಬೇಕೆಂಬ ಪ್ರೇರಣೆಯಾಯಿತು.

’ತನ್ನಲ್ಲಿದ್ದ ಹಣದಿಂದ ದೇವಸ್ಥಾನದ ಹತ್ತಿರದ ಪ್ರದೇಶವನ್ನು ಖರೀದಿಸಿ, ಅಲ್ಲೊಂದು ಸಣ್ಣ ಮನೆ ಕಟ್ಟಿದ. ಮದುವೆಯಾದ. ಆತನಿಗೆ ಏಳು ಮಕ್ಕಳಾದವು. ಅಲ್ಲಿಂದ ಶುರುವಾದ ಸಂತಾನವೃಕ್ಷ ಹಬ್ಬುತ್ತಲೇ ಇದೆ. ಆತನಿಂದಾಗಿ ನಮ್ಮ ಕುಟುಂಬಕ್ಕೆ ನರಸಿಂಗನವರ ಎಂಬ ಅಡ್ಡ ಹೆಸರು ಬಂದಿತು’ ಎಂದು ಕುಟುಂಬದ ಕತೆ ಪ್ರಾರಂಭಿಸುತ್ತಾರೆ ಭೀಮಣ್ಣ ನರಸಿಂಗನವರ.

’ಈಗ ನಾವು ಕೂತಿರುವುದು ಆತ ಖರೀದಿಸಿದ ಜಾಗದಲ್ಲಿ ಕಟ್ಟಿಸಿದ ಮನೆಯಲ್ಲಿ. ಕ್ರಮೇಣ ಸಂಸಾರ ಬೆಳೆಯಿತು. ಮನೆ ದೊಡ್ಡದಾಗುತ್ತ ಹೋಯಿತು. ದೂರದ ಊರಿನಿಂದ ನೆಲೆ ಹುಡುಕಿಕೊಂಡು ಬಂದವರು ನಾವು. ಮಕ್ಕಳೆಲ್ಲ ಬೇರೆ ಹೋದರೆ ಆಸ್ತಿ ಮೂರಾಬಟ್ಟೆಯಾಗಿ, ಯಾರಿಗೂ ತುಂಡು ನೆಲವೂ ದೊರೆಯುವುದಿಲ್ಲ ಎಂಬ ವಿವೇಕ ಮೊದಲಿನಿಂದಲೇ ಇತ್ತು. ಹೀಗಾಗಿ ಮದುವೆಯಾದ ಹೆಣ್ಣುಮಕ್ಕಳು ಹೊರಹೋಗಿದ್ದು ಬಿಟ್ಟರೆ ಯಾವೊಂದು ಗಂಡು ಕುಡಿಯೂ ಇಲ್ಲಿಂದ ಹೊರಹೋಗಿಲ್ಲ. ಹಾಗೆ ಹೋದ ಒಂದಿಬ್ಬರೂ ಹಿಂದೆಯೇ ವಾಪಸ್ಸಾಗಿದ್ದಾರೆ. ಹೀಗಾಗಿ ನಾಲ್ಕು ಶತಮಾನಗಳಿಂದ ನಮ್ಮದು ಅವಿಭಕ್ತ ಕುಟುಂಬವೇ’ ಎನ್ನುತ್ತಾರೆ ಅವರು.

ಅದು ಸತ್ಯವೂ ಹೌದು. ಒಬ್ಬ ನರಸಿಂಗಪ್ಪನಿಂದ ಪ್ರಾರಂಭವಾದ ಕುಟುಂಬದ ಸದಸ್ಯರ ಸಂಖ್ಯೆ ಬರ, ರೋಗ-ರುಜಿನ, ಸಾವು-ನೋವು, ಯುದ್ಧ, ಬಡತನ ಎಲ್ಲವನ್ನೂ ಎದುರಿಸುತ್ತ ಈ ನಾಲ್ಕುನೂರು ಚಿಲ್ಲರೆ ವರ್ಷಗಳಲ್ಲಿ ೩೦೦ ದಾಟಿದೆ. ಎಲ್ಲರೂ ಒಟ್ಟಾಗಿ ದುಡಿಯುವ ಕಾರಣ ಆದಾಯದ ಪ್ರಮಾಣದಲ್ಲಿಯೂ ಹೆಚ್ಚಳವಾಗುತ್ತ ನಡೆದಿದೆ. ಕೈಯಲ್ಲಿ ಸ್ವಲ್ಪ ದುಡ್ಡಿಟ್ಟುಕೊಂಡು ಬಂದಿದ್ದ ಒಬ್ಬ ವ್ಯಕ್ತಿಯ ಸಂತಾನ ಹಾಗೂ ಆಸ್ತಿ ಈ ಪರಿ ಬೆಳೆಯಲು ಕಾರಣ ಒಗ್ಗಟ್ಟೇ ಹೊರತು ಬೇರೇನೂ ಅಲ್ಲ.

ಒಗ್ಗಟ್ಟಿನಿಂದಾಗಿ ಪ್ರಗತಿ

’ಒಂದು ವೇಳೆ ಊರಲ್ಲಿರೋ ನಾವು ೧೮೦ ಮಂದಿ ಬ್ಯಾರೆ ಆದ್ರ ಎಲ್ರೂ ಬಡವರಾಗೇ ಬದುಕಬೇಕಾಗುತ್ತ’ ಎಂದು ಎಚ್ಚರಿಸುತ್ತಾರೆ ಭೀಮಣ್ಣ. ’ಏಕೆಂದರೆ ನಮ್ಮ ಹತ್ತಿರ ಈಗ ೨೭೦ ಎಕರೆ ಭೂಮಿ ಇದೆ. ಇದರ ಪೈಕಿ ೮ ಎಕರೆಯಲ್ಲಿ ಭತ್ತ ಬೆಳೆಯಲಾಗುತ್ತದೆ. ನೀರಾವರಿ ಭೂಮಿಯ ಪ್ರಮಾಣ ಕೇವಲ ೩೩ ಎಕರೆ ಮಾತ್ರ. ನೂರೆಂಬತ್ತು ಜನರ ಪೈಕಿ ೬ ಜನ ಮಾತ್ರ ಸರ್ಕಾರಿ ನೌಕರಿಯಲ್ಲಿದ್ದಾರೆ. ಖರ್ಚು ತೆಗೆದರೆ ಅವರ ಬಾಕಿ ಆದಾಯವೂ ಇಲ್ಲಿಗೇ ಬರುತ್ತದೆ. ಒಂದು ವೇಳೆ ಎಲ್ಲರೂ ಬೇರೆ ಆದರೆ ಒಬ್ಬರಿಗೆ ಒಂದು ಎಕರೆ ಭೂಮಿಯೂ ಬರುವುದಿಲ್ಲ. ಆಗ ಜೀವನ ನಡೆಯೋದು ಹೇಗೆ?’ ಎಂದು ಅವರು ಪ್ರಶ್ನಿಸುತ್ತಾರೆ.

ಇವರ ಖರ್ಚು ಕೂಡ ಆದಾಯಕ್ಕೆ ತಕ್ಕ ಹಾಗೆ ಇದೆ. ದಿನಕ್ಕೆ ೫೦ರಿಂದ ೬೦ ಕೆಜಿ ಜೋಳ, ೧೫ರಿಂದ ೨೦ ಕೆಜಿ ಗೋದಿ ಖರ್ಚಾಗುತ್ತದೆ. ನಿತ್ಯ ೩೦ರಿಂದ ೪೦ ಲೀಟರ್ ಹಾಲು ಬೇಕು. ಹಬ್ಬ ಬಂದರೆ ದಿನಕ್ಕೆ ಒಂದು ಕ್ವಿಂಟಲ್ ಜೋಳ ಖರ್ಚಾಗುತ್ತದೆ. ಕುಟುಂಬದಲ್ಲಿ ಯಾರೂ ಹೋಟೆಲ್‌ಗೆ ಹೋಗುವುದಿಲ್ಲ. ರೊಟ್ಟಿಪ್ರಿಯರಾಗಿದ್ದರಿಂದ ಅನ್ನದ ಅವಲಂಬನೆ ಕಡಿಮೆ.

ಮದುವೆ... ಮದುವೆ...

ಇಂಥ ಬೃಹತ್ ಕುಟುಂಬದಲ್ಲಿ ನಿತ್ಯದ ಅಡುಗೆಯೇ ಮದುವೆ ಅಡುಗೆ ಮೀರಿಸುವಾಗ, ಇನ್ನು ನಿಜವಾದ ಮದುವೆ ನಡೆದರೆ ಹೇಗಿರುತ್ತದೆ?

ಇಂಥದೊಂದು ಅವಕಾಶಕ್ಕಾಗಿ ಮೂರು ತಿಂಗಳಿಂದ ಕಾಯ್ದುಕೊಂಡಿದ್ದ ನಮಗೆ ನಿರಾಶೆಯಾಗಲಿಲ್ಲ. ’ಮೇ ೧ರಂದು ನಮ್ಮ ಮನೆಯಲ್ಲಿ ಮದುವೆ ನೀವು ಬರಬೇಕು’ ಎಂಬ ಆಮಂತ್ರಣ ಅದೊಂದಿನ ನರಸಿಂಗನವರ ಕುಟುಂಬದಿಂದ ಬಂದಿತು.


(ಮುಂದಿನ ಭಾಗದಲ್ಲಿ ಮುಕ್ತಾಯ)
 

- ಚಾಮರಾಜ ಸವಡಿ
(ಚಿತ್ರಗಳು:
ಬಿ.ಎಂ. ಕೇದಾರನಾಥ. ಹೆಚ್ಚಿನ ಚಿತ್ರಗಳನ್ನು ವೀಕ್ಷಿಸಿ http://picasaweb.google.com/chamarajs/Lokur# )

ಅಲ್ಲಿ ಬಯಲು ಮುಗಿದಿತ್ತು, ಆಲಯ ಕರೆದಿತ್ತು...

4 Dec 2009

2 ಪ್ರತಿಕ್ರಿಯೆ

ಅಲ್ಲಿ ಬಯಲು ಮುಗಿದಿತ್ತು. ದಟ್ಟಡವಿ ನಿಂತಿತ್ತು. ಸುರಿಯುತ್ತಿರುವ ಸೋನೆಮಳೆ ಒಮ್ಮೊಮ್ಮೆ ಬಿರುಮಳೆಯಾಗುತ್ತ, ಮತ್ತೆ ಸೋನೆಗೆ ತಿರುಗುತ್ತ ಕಾಡಿನ ನಿಗೂಢತೆಗೆ ಮೆರುಗು ನೀಡಿತ್ತು. ನಾವು ಹೊರಟಿದ್ದು ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ದಟ್ಟ ಕಾನನದತ್ತ. ಮೈಲುಗಟ್ಟಲೇ ಹಬ್ಬಿರುವ ಮಹಾ ಮಲೆನಾಡಿನ ಒಡಲಿಗೆ. ಕುವೆಂಪು ಬಣ್ಣಿಸಿದ ಮಲೆಗಳ ನಿಗೂಢತೆಗೆ. ಪೂರ್ಣಚಂದ್ರ ತೇಜಸ್ವಿ ಹಂಬಲಿಸಿ ಹಿಂತಿರುಗಿದ ಕಾನನಕ್ಕೆ. ಬಿಜಿಎಲ್‌ ಸ್ವಾಮಿ ಬಣ್ಣಿಸಿದ ಮಾತ ಮೂದಲಿಸುವ ಮಹಾರಣ್ಯದೆಡೆಗೆ. ಜೋಗದ ನಾಡಿಗೆ. ಶ್ರೀಗಂಧದ ಬೀಡಿಗೆ...
 

ಶಿವಮೊಗ್ಗ ಎಂಬುದು ಪಶ್ಚಿಮಘಟ್ಟದ ಹೆಬ್ಬಾಗಿಲು. ಮಳೆ ಎಂಬುದು ಇಲ್ಲಿ ಮನೆಮಗಳು. ಹಸಿರೆಂಬುದು ಜೀವನದ ಉಸಿರು. ಎಷ್ಟೇ ಸುರಿದರೂ ಮಳೆ ಇಲ್ಲಿ ಪ್ರವಾಹವಾಗುವುದಿಲ್ಲ. ಮನೆ ಮಗಳು ಮುಗುಳ್ನಕ್ಕಂತೆ, ಮಳೆ ಇಲ್ಲಿಯ ಜನಕ್ಕೆ ಪುಳಕ. ಅರಣ್ಯಕ್ಕೆ ಅಭ್ಯಂಜನದ ಜಳಕ. ಮಳೆಗೆ ಕಾಡು ಉಕ್ಕುತ್ತದೆ. ಹಸಿರು ಚಿಮ್ಮುತ್ತದೆ. ನೆಲ-ಮುಗಿಲಿಗೆ ಸೇತುವೆ ಕಲ್ಪಿಸುತ್ತ ಬದುಕನ್ನು ಧನ್ಯವಾಗಿಸುತ್ತದೆ...

ಕಾಡಿನ ರೋಚಕತೆಯನ್ನು ತಮ್ಮ 'ಕಲ್ಕಿ' ಕವನದಲ್ಲಿ ಕುವೆಂಪು ಬಣ್ಣಿಸಿದ್ದು ಹೀಗೆ:


ನಿದ್ದೆಯ ಲೋಕದಿ ಕನಸಿನ ಬೀದಿ
ತಿರುಗಿದೆ ತೊಳಲಿದೆ ತಪ್ಪಿದೆ ಹಾದಿ!
ಮುಂದೆ ಕಾಣಿಸಿತೊಂದು ಅರಣ್ಯ
ಅನಂತವಾದುದು ವನವಿಸ್ತೀರ್ಣ
ಹೆಮ್ಮರಗಳು ಕಿಕ್ಕಿರಿದುವು ಅಲ್ಲಿ
ಬಿಡುವಿಲ್ಲದೆ ಹೆಣೆದಿದ್ದವು ಬಳ್ಳಿ... 

ಅರಣ್ಯದ ಒಳ ಹೊಕ್ಕಂತೆ ನಾಗರಿಕತೆ ಹಿಂದಾಗುತ್ತದೆ. ಮೊಬೈಲ್‌ ಸಿಗ್ನಲ್‌ಗಳು ಮುದುರಿಕೊಂಡು ಮಾತು ಮೂಕವಾಗುತ್ತದೆ. ಮುಂದೆ ಎಲ್ಲಾ ಅರಣ್ಯದ್ದೇ ಮಾತು. ಅದರದ್ದೇ ಕಾರುಬಾರು. ಬಿಸಿಲನ್ನು ಬಿಡಲಾರೆ ಎಂಬಂತೆ ಸಣ್ಣಗೆ ಸುರಿಯುವ ಜಡಿಮಳೆಗೆ ಮರಗಿಡಗಳು ಪ್ರೀತಿಯಿಂದ ಒಡ್ಡಿಕೊಂಡಿವೆ. ಹನಿಹನಿಯನ್ನೂ ಆಸ್ವಾದಿಸುತ್ತವೆ. ಅಲ್ಲಿ ಕೇಳಿಬರುವುದು ಮಳೆ ಬೀಳುವ ಮೃದು ಸದ್ದು, ಅಷ್ಟೇ.

ಬಿದ್ದ ಹನಿಹನಿಯನ್ನೂ ತರಗಲೆಗಳಿಂದ ಸಮೃದ್ಧವಾಗಿರುವ ಮಣ್ಣು ಹೀರಿಕೊಳ್ಳುತ್ತದೆ. ಅಂಥ ಜೀವದಾಯಕ ನೆಲದಲ್ಲಿ ಬಿದ್ದ ಪ್ರತಿಯೊಂದು ಬೀಜವೂ ಮೊಳಕೆಯೊಡೆಯುತ್ತದೆ. ಸೂರ್ಯನನ್ನು ಹುಡುಕುತ್ತ ಮೇಲೇಳುತ್ತವೆ. ಅರಣ್ಯಕ್ಕೆ ಅರಣ್ಯವೇ ಹಸಿರುಕ್ಕುವಂತೆ ಬೆಳೆಯುತ್ತವೆ. ಪ್ರತಿಯೊಂದು ಮರಗಿಡಕ್ಕೂ ಆಕಾಶವೇ ದಿಕ್ಕು. ಮೇಲೆ ಏನೋ ಇದೆ ಎಂಬಂತೆ ಮುಗಿಲಿಗೆ ಮುಖವೊಡ್ಡಿ ಏರುತ್ತ ಹೋಗುತ್ತವೆ. ಗಗನಕ್ಕೆ ಮುತ್ತಿಡುವ ಮತ್ತಿನಲ್ಲಿ ಸೊಕ್ಕಿ ಮೇಲೇಳುತ್ತವೆ. 

ಎಲ್ಲಾ ಇರುವ ಈ ಮಹಾರಣ್ಯದಲ್ಲಿ ಸೂರ್ಯನ ಬೆಳಕಿಗೆ ಮಾತ್ರ ಅಭಾವ. ಇಲ್ಲಿನ ಎಲ್ಲ ಜೀವಿಗಳಿಗೆ, ಅಮ್ಮನ ಸೆರಗಿನಡಿ ಮಲಗಿರುವ ಕಂದನಂಥ ಭಾವ. ಹಸಿಯ ಒಡಲಲ್ಲಿ ಜೀವದಾಯಕ ಬಿಸಿ. ಜೀವ ಸೃಷ್ಟಿಯಾಗುವಂಥ ಅರೆಗತ್ತಲು. ಕಾಡಿನ ಇಂಥ ನಸುಗತ್ತಲಿನಲ್ಲಿ ನಿಗೂಢ ಲೋಕವೊಂದು ತೆರೆದುಕೊಳ್ಳುತ್ತದೆ. ಮನುಷ್ಯ ನಿರ್ಮಿಸಿದ ದಾರಿ ಮಾಯವಾಗಿ, ಕಾಡಿನ ದಾರಿ ಬಿಚ್ಚಿಕೊಳ್ಳುತ್ತದೆ. ಹನಿಯಿಕ್ಕುವ ಮರಗಳ ನಡುವೆ, ಮಂತ್ರಮುಗ್ಧರಾದವರಂತೆ ಹೊರಟಾಗ, ಇದ್ದಕ್ಕಿದ್ದಂತೆ ಕಾಡಿನ ಮಧ್ಯೆ ಆಲಯವೊಂದು ಧುತ್ತೆಂದು ಎದುರಾಗುತ್ತದೆ...


ಅದು ಹೊಸಗುಂದದ ಉಮಾ ಮಹೇಶ್ವರ ದೇವಳ. 
ಒಂದು ಸಾವಿರ ವರ್ಷಗಳ ಇತಿಹಾಸವನ್ನು ಒಡಲಲ್ಲಿಟ್ಟುಕೊಂಡ ಊರು ಹೊಸಗುಂದ. ಒಂದಾನೊಂದು ಕಾಲದಲ್ಲಿ ನಾಡಾಗಿದ್ದ ಇಲ್ಲೀಗ ದಟ್ಟ ಕಾಡಿದೆ. ಹನ್ನೊಂದನೇ ಶತಮಾನದಲ್ಲಿ ಇದನ್ನು ಹುಂಚ ಮೂಲದ ಸಾಂತರು ಆಳಿದ್ದರು. ಸುಮಾರು ಮುನ್ನೂರು ವರ್ಷಗಳ ಕಾಲ ವೈಭವದಿಂದ ಮೆರೆದ ಹೊಸಗುಂದ ನಂತರ ಯಾವುದೋ ಕಾರಣಕ್ಕೆ ಅಳಿದುಹೋಯಿತು.

ಕ್ರಮೇಣ ನಾಡನ್ನು ಕಾಡು ಆವರಿಸಿತು. ಜನರಿಲ್ಲದ ಕಡೆ ನೆಲೆಯೂರಿ ನಿಂತ ಕಾಡು ಕ್ರಮೇಣ ಊರಿನ ಕೇಂದ್ರ ಬಿಂದು ಶ್ರೀ ಉಮಾ ಮಹೇಶ್ವರಿ ದೇವಸ್ಥಾನ ಹಾಗೂ ಸುತ್ತಲಿನ ದೇವಳಗಳನ್ನು ತನ್ನ ಒಡಲಲ್ಲಿ ಸೇರಿಸಿಕೊಂಡಿತು. ದೇಗುಲದ ಒಡಲಲ್ಲಿ ಮರಗಳು ಬೆಳೆದು ನಿಂತವು. ಅದರ ಗೋಪುರದ ಎತ್ತರಕ್ಕೂ ಏರಿದವು. ನಾಡಿನಿಂದ ಕಾಡಿನ ಪಾಲಾದ ಉಮಾ ಮಹೇಶ್ವರನಿಗೆ ಮರಗಿಡಗಳ ಪೂಜೆ ಶುರುವಾಯ್ತು. ಒಂದಲ್ಲ ಎರಡಲ್ಲ, ಸುಮಾರು ಆರುನೂರು ವರ್ಷಗಳ ಕಾಲ, ಅರಣ್ಯಪಾಲಾದ ಉಮಾ ಮಹೇಶ್ವರ.

ಮನುಷ್ಯ ಕಾಲಿಡದ ಕಾಡಾಗಿದ್ದರಿಂದ ಸಸ್ಯಪ್ರಭೇದಗಳು ಹೆಚ್ಚಿದವು. ಮರಗಿಡಗಳು ಸೊಕ್ಕಿ ಬೆಳೆದವು. ಕ್ರಮೇಣ ದೇಗುಲದ ಗೋಡೆ, ತೊಲೆಗಳನ್ನು ಸೀಳಿಕೊಂಡು ಹರಡಿದವು. ಅಲ್ಲೊಂದು ರಾಜವಂಶ ಆಳಿತ್ತು, ದೇಗುಲ ಸಮುಚ್ಚಯವಿತ್ತು ಎಂಬುದನ್ನೇ ಮುಚ್ಚಿಹಾಕುವಂತೆ ಕಾಡು ಬೆಳೆಯಿತು. ಮನುಷ್ಯನ ಹಸ್ತಕ್ಷೇಪ ಇಲ್ಲದಿದ್ದರೆ, ಪ್ರಕೃತಿ ಏನು ಮಾಡಬಲ್ಲುದು ಎಂಬುದಕ್ಕೆ ಸಾಕ್ಷಿಯೆಂಬಂತೆ ಹಬ್ಬಿತು. ದೇಗುಲದ ವ್ಯಾಪ್ತಿ ದಾಟಿ, ಸುತ್ತಲಿನ ಪ್ರದೇಶಗಳನ್ನು ಆವರಿಸುತ್ತ ಬೆಳೆದ ಕಾಡು ಸುಮಾರು ಆರುನೂರು ಎಕರೆ ವಿಸ್ತಾರವಾಯ್ತು. ಸೊಕ್ಕಿ ಹರಡಿದ ಕಾಡಿನ ನಡುವೆ ಉಮಾ ಮಹೇಶ್ವರ ದೀರ್ಘ ವನವಾಸಕ್ಕೆ ಈಡಾದ.

ನೈಸರ್ಗಿಕ ಉತ್ಪನ್ನಗಳ ಉದ್ಯಮ ಹೊಂದಿರುವ ’ಫಲದ’ ಸಂಸ್ಥೆಯ ಮುಖ್ಯಸ್ಥ ಸಿಎಂಎನ್‌ ಶಾಸ್ತ್ರಿಯವರು ಒಮ್ಮೆ ಕಾಡಿನಲ್ಲಿ ಸುತ್ತಾಡುತ್ತಿದ್ದಾಗ ಅಲ್ಲಲ್ಲಿ ದೇಗುಲದ ಅವಶೇಷಗಳು ಇರುವುದನ್ನು ಕಂಡರು. ಇದಕ್ಕೂ ಮುನ್ನ ಚಾರಣಿಗರು ಹಾಗೂ ಪ್ರಾಚೀನ ದೇಗುಲಗಳ ಬಗ್ಗೆ ಆಸಕ್ತಿ ಇರುವವರನ್ನು ಬಿಟ್ಟರೆ, ಈ ದಟ್ಟ ಕಾಡಿನ ಮಧ್ಯೆ ದೇವಾಲಯಗಳಿವೆ ಎಂಬುದು ಹೊರಜಗತ್ತಿಗೆ ಅಷ್ಟಾಗಿ ಗೊತ್ತಿದ್ದಿಲ್ಲ. ಕುತೂಹಲಗೊಂಡ ಶಾಸ್ತ್ರಿಯವರು ಅವುಗಳ ಜೀರ್ಣೋದ್ಧಾರಕ್ಕೆ ಮುಂದಾದರು. ಶ್ರೀ ಉಮಾ ಮಹೇಶ್ವರ ಸೇವಾ ಟ್ರಸ್ಟ್‌ ಸ್ಥಾಪನೆಯಾಯಿತು. ಪ್ರಾಚ್ಯವಸ್ತು ಇಲಾಖೆ ಜೊತೆಗೆ ಇಂಥ ದೇಗುಲಗಳ ಜೀರ್ಣೋದ್ಧಾರ ಕೆಲಸದಲ್ಲಿ ಪರಿಣಿತಿ ಹೊಂದಿರುವ ಶ್ರೀ ಧರ್ಮಸ್ಥಳ ಧರ್ಮೋತ್ಥಾನ ಟ್ರಸ್ಟ್‌ ಕೂಡ ಕೈಜೋಡಿಸಿತು. ೨೦೦೧ರಲ್ಲಿ ಜೀರ್ಣೋದ್ಧಾರ ಕೆಲಸ ಶುರುವಾಯ್ತು.

ಆದರೆ, ಜೀರ್ಣೋದ್ಧಾರ ಸುಲಭವಾಗಿದ್ದಿಲ್ಲ. ದೇಗುಲದ ತಳಪಾಯ ಮಣ್ಣಿನೊಳಗೆ ಹೂತು ಹೋಗಿ ಬಿರುಕು ಬಿಟ್ಟಿತ್ತು. ದಕ್ಷಿಣದ ಗೋಡೆಯ ಕಡೆ ದೊಡ್ಡ ಮರವೊ೦ದು ಬೆಳೆದಿದ್ದರಿಂದ ಇಡೀ ದೇವಸ್ಥಾನ ಶಿಥಿಲಗೊಂಡಿತ್ತು. ದೊಡ್ಡ ದೊಡ್ಡ ಕಲ್ಲಿನ ತೊಲೆಗಳು, ಹಾಸುಗಳು ಹಲವಾರು ತುಂಡುಗಳಾಗಿದ್ದವು. ಗರ್ಭಗುಡಿಯಲ್ಲಿದ್ದ ಶಿವಲಿಂಗ ಮಾಯವಾಗಿತ್ತು. ನಿಧಿಯ ಆಸೆಯಲ್ಲಿ ದೇವಸ್ಥಾನದ ಹಲವಾರು ಭಾಗಗಳನ್ನು ಅಗೆದು ಹಾಕಲಾಗಿತ್ತು.

ಈ ಪರಿ ದುಃಸ್ಥಿತಿಯಲ್ಲಿದ್ದ ದೇಗುಲವನ್ನು ಮೂಲಸ್ಥಿತಿಗೆ ತರುವಲ್ಲಿ ಸಿಎಂಎನ್‌ ಶಾಸ್ತ್ರಿ ನೇತೃತ್ವದ ಶ್ರೀ ಉಮಾ ಮಹೇಶ್ವರ ಟ್ರಸ್ಟ್‌ ಅಳವಡಿಸಿಕೊಂಡ ಕ್ರಮಗಳು ನಿಜಕ್ಕೂ ವಿಶಿಷ್ಟ. ಜೀರ್ಣೋದ್ಧಾರದ ಮೊದಲ ಹಂತವಾಗಿ ಹಳೆ ದೇಗುಲವನ್ನು ಹಂತಹಂತವಾಗಿ ಬಿಚ್ಚಲಾಯ್ತು. ಬಿಚ್ಚಿದ ಪ್ರತಿಯೊ೦ದು ಭಾಗಕ್ಕೂ ಗುರುತಿನ ಸಂಖ್ಯೆ ಕೊಡಲಾಯ್ತು. ಹೊರಗಿನ ವಸ್ತುಗಳನ್ನು ಸೇರಿಸದೇ, ಇದ್ದ ಅವಶೇಷಗಳನ್ನು ಬಳಸಿಕೊಂಡೇ ಇಡೀ ದೇವಾಯಲವನ್ನು ಪುನರ್‌ನಿರ್ಮಿಸುವ ಮಹತ್ವಾಕಾಂಕ್ಷಿ ಯೋಜನೆಯನ್ನು ಧರ್ಮಸ್ಥಳದ ಧರ್ಮೋತ್ಥಾನ ಟ್ರಸ್ಟ್‌ ಮುಂದಿಟ್ಟಿತು.

ಈಗ ದೇವಸ್ಥಾನದ ಅರ್ಧಕ್ಕೂ ಹೆಚ್ಚು ಭಾಗ ಪುನರ್‌ ನಿರ್ಮಾಣವಾಗಿದೆ. ಇದಕ್ಕಾಗಿ ಹೊರಗಿನ ವಸ್ತುಗಳನ್ನು ಬಳಸಿದ್ದು ಬಲು ಅಪರೂಪ. ಕಬ್ಬಿಣದ ಸರಳುಗಳನ್ನು ಸೇರಿಸಿ ಮುರಿದುಹೋಗಿದ್ದ ಕಲ್ಲಿನ ತೊಲೆಗಳನ್ನು ಮೂಲರೂಪಕ್ಕೆ ತರಲಾಗಿದೆ. ’ಒಂದು ಮಳೆ ಬಂದರೆ ಸಾಕು, ಈ ಜೋಡಣೆ ಮೂಲ ಕಲ್ಲಿನ ಬಣ್ಣಕ್ಕೇ ತಿರುಗುತ್ತದೆ. ಇಡೀ ರಚನೆಯನ್ನೇ ಪೂರ್ತಿಯಾಗಿ ಕಳಚಿ, ಅವೇ ವಸ್ತುಗಳನ್ನು ಬಳಸಿ ಪುನರ್‌ರೂಪಿಸಿದ ಉದಾಹರಣೆ ಬಹುಶಃ ಅಪರೂಪ’ ಎನ್ನುತ್ತಾರೆ ನಿರ್ಮಾಣದ ಉಸ್ತುವಾರಿ ನೋಡಿಕೊಳ್ಳುತ್ತಿರುವ ಧರ್ಮಸ್ಥಳ ಟ್ರಸ್ಟ್‌ನ ಎಂಜನಿಯರ್‌ ರಾಘವೇಂದ್ರ.

ಸುತ್ತಲಿನ ಪ್ರದೇಶಲ್ಲಿ ದೊರೆತ ಶಿಲಾಲೇಖಗಳಲ್ಲಿರುವ ಮಾಹಿತಿಯ ಪ್ರಕಾರ, ದೇವಳದ ನಿರ್ಮಾಣ ಕಾಲ ಸುಮಾರು ಕ್ರಿ.ಶ. ೧೦೦೦ದಿಂದ ೧೧೦೦. ಆದರೆ, ಇದನ್ನು ನಿರ್ಮಿಸಿದವರಾರು ಎಂಬ ಬಗ್ಗೆ ನಿಖರ ಮಾಹಿತಿ ಇನ್ನೂ ಲಭ್ಯವಾಗಿಲ್ಲ. ಚಾಲುಕ್ಯ ಶೈಲಿಯ ಈ ದೇವಾಲಯ ಸೊಗಸಾದ ಕೆತ್ತನೆಗಳನ್ನು ಒಳಗೊಂಡಿದೆ. ಸಾಕಷ್ಟು ಮಿಥುನ ಶಿಲ್ಪಗಳೂ ಇಲ್ಲಿವೆ. ಮುಖಮಂಟಪದಲ್ಲಿ ೨೦ ನಯವಾದ ಆಕರ್ಷಕ ಕೆತ್ತನೆಯುಳ್ಳ ಕಂಬಗಳಿವೆ. ಜೀರ್ಣೋದ್ಧಾರ ಶುರುವಾದ ನಂತರ ಉಮಾಮಹೇಶ್ವರ ದೇವಸ್ಥಾನ ಕ್ರಮೇಣ ತನ್ನ ಮೊದಲಿನ ವೈಭವ ಪಡೆದುಕೊಳ್ಳತೊಡಗಿತು.

ಜನ ಮನಸ್ಸು ಮಾಡಿದರೆ ಯಾವೊಂದು ಕೆಲಸವೂ ಕಷ್ಟವಲ್ಲ ಎಂಬುದಕ್ಕೆ ಹೊಸಗುಂದವೇ ಸಾಕ್ಷಿ. ಅತ್ತ ದೇಗುಲ ಮೇಲೇಳುತ್ತಿದ್ದಂತೆ, ಇತ್ತ ಇಡೀ ಊರಿನಲ್ಲಿ ಈಗ ಪ್ರಗತಿಯ ಗಾಳಿ. ದೇಗುಲ ಜೀರ್ಣೋದ್ಧಾರವಾದರೆ ಸಾಲದು, ತಾವು ಕೂಡ ಅಭಿವೃದ್ಧಿ ಹೊಂದಬೇಕೆಂಬ ಹಂಬಲ. ತಮ್ಮೂರಿನ ವಿಶಿಷ್ಟ ಸಂಸ್ಕೃತಿ ಮೂಡಿಸಿದ ಹುಮ್ಮಸ್ಸು ಅವರನ್ನು ಹೊಸ ಬದುಕಿನತ್ತ ತಿರುಗಿಸಿದೆ.

ಈಗ ದೇಗುಲದ ಸುತ್ತಲಿನ ಸುಮಾರು ೫೦೦ ಎಕರೆ ಅರಣ್ಯಪ್ರದೇಶವನ್ನು ದೇವರ ಕಾಡೆಂದು ಘೋಷಿಸಲು ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ. ದಾಖಲೆಗಳ ಪ್ರಕಾರ ಇಲ್ಲಿರುವುದು ಕಂದಾಯ ಜಮೀನು. ಅಂದರೆ, ಮುಂಚೆ ಇಲ್ಲಿ ಈ ಪರಿ ಕಾಡು ಇದ್ದಿಲ್ಲ! ನೂರಾರು ವರ್ಷಗಳ ಕಾಲ ಯಾರ ವಾಸವೂ ಇಲ್ಲದ್ದರಿಂದ ಇಲ್ಲಿ ದಟ್ಟ ಕಾಡು ನಿರ್ಮಾಣವಾಗಿದೆ! ಕುವೆಂಪು ವಿಶ್ವವಿದ್ಯಾಲಯದ ಸಸ್ಯ ವಿಜ್ಞಾನ ವಿಭಾಗದ ತಂಡ ಇಲ್ಲಿಯ ಜೀವವೈಧ್ಯತೆಯ ಸಮಗ್ರ ಅಧ್ಯಯನ ಮತ್ತು ದಾಖಲೀಕರಣ ಕೆಲಸ ನಡೆಸಿದೆ. ಸುಮಾರು 350 ಜಾತಿಯ ಗಿಡಮರಗಳನ್ನು ಗುರುತಿಸಿದ ತಂಡ, ಇಲ್ಲಿನ ಹೆಚ್ಚಿನ ಮರಗಳ ಪ್ರಾಯ ಸುಮಾರು 300-500 ವರ್ಷಗಳೆ೦ದು ಅ೦ದಾಜು ಮಾಡಿದೆ. ಇಲ್ಲಿನ ಒ೦ದು ಜಾತಿಯ ಮಾವಿನ ಮರವಂತೂ 650 ವರ್ಷ ಹಳೆಯದು!

ಈ ಎಲ್ಲ ಬೆಳವಣಿಗೆಗಳಿಂದ ಖುಷಿಯಾಗಿರುವ ಹೊಸಗುಂದ ಸುತ್ತಮುತ್ತಲಿನ ಜನತೆಗೆ ದೇವರಕಾಡನ್ನು ಉಳಿಸಿಕೊಳ್ಳಲು ಮುಂದಾಗಿದ್ದಾರೆ. ಇದು ಪರಿಸರ ಪ್ರೇಮಿಗಳ ಮತ್ತು ವಿದ್ಯಾರ್ಥಿಗಳ ಸ೦ಶೋಧನೆಯ ತಾಣವಾಗಲಿ ಎಂಬುದು ಅವರ ಆಶಯ. ಇಲ್ಲಿನ ಜೀವವೈವಿಧ್ಯವನ್ನು ಇನ್ನಷ್ಟು ಸಮೃದ್ಧಗೊಳಿಸಬೇಕೆಂಬುದು ಅವರ ಕನಸು. ನಶಿಸಿಹೋಗುತ್ತಿರುವ ಹಾಗೂ ನಾಶವಾಗಿರುವ ಸಸ್ಯಸ೦ಕುಲಗಳನ್ನು ಇಲ್ಲಿ ಬೆಳೆಸಲು ಮುಂದಾಗಿರುವ ಅವರು, ಪ್ರತಿ ವರ್ಷ 108 ಜಾತಿಯ ಸಸ್ಯಗಳನ್ನು ಹಾಗೂ ಪ್ರತಿಯೊಂದು ಸಸ್ಯದ 108 ಗಿಡಗಳನ್ನು ನೆಡಲು ಯೋಜನೆ ರೂಪಿಸಿದ್ದಾರೆ. ಈಗ ಯೋಜನೆ ಮೂರನೇ ವರ್ಷಕ್ಕೆ ಕಾಲಿಟ್ಟಿದೆ. ೧೨ ಸಾವಿರಕ್ಕೂ ಹೆಚ್ಚು ಸಸ್ಯ ಪ್ರಭೇದಗಳು ದೇವರಕಾಡಿನಲ್ಲಿ ಬೆಳೆಯತೊಡಗಿವೆ.
ಕಾಡಿನ ಪ್ರೀತಿ ಜನರಿಗೆ ನೀರಿನ ಮಹತ್ವ ಮನಗಾಣಿಸಿದೆ. ಹೊಸಗುಂದ ಮತ್ತು ಸುತ್ತಲ ಪರಿಸರದಲ್ಲಿ ದಟ್ಟ ಕಾಡು ಇದ್ದರೂ ಕೂಡ ಬೇಸಿಗೆಯ ದಿನಗಳಲ್ಲಿ ಕುಡಿಯುವ ನೀರಿಗೂ ಕೂಡಾ ಪರದಾಡಬೇಕಾದ ಪರಿಸ್ಥಿತಿ ಇತ್ತು. ಇದಕ್ಕೆ ಪರಿಹಾರ ಕಂಡುಕೊಳ್ಳಲು ಮೂರು ವರ್ಷಗಳ ಹಿಂದೆ ಮಳೆ ನೀರು ಸಂಗ್ರಹ ಯೋಜನೆ ರೂಪಿಸಲಾಯ್ತು. ಇಂಗುಗುಂಡಿಗಳನ್ನು ದೊಡ್ಡ ಸಂಖ್ಯೆಯಲ್ಲಿ ನಿರ್ಮಿಸಲಾಯ್ತು. ಅದರ ಪರಿಣಾಮ: ಡಿಸೆ೦ಬರ್‍-ಜನವರಿ ತಿಂಗಳಲ್ಲಿಯೇ ಬತ್ತಿ ಹೋಗುತ್ತಿದ್ದ ದೇವಾಲಯದ ಪುಷ್ಕರಣಿಯಲ್ಲಿ ಈಗ ಮಳೆಗಾಲದವರೆಗೂ ನೀರು ನಿಲ್ಲತೊಡಗಿದೆ. ಸುತ್ತಮುತ್ತಲಿನ ಕೆರೆಕಟ್ಟೆಗಳಲ್ಲಿಯೂ ನೀರು ಸಮೃದ್ಧ. ರೈತರ ಗಮನ ಈಗ ನೈಸರ್ಗಿಕ ಕೃಷಿಯ ಕಡೆ ಹೊರಳಿದ್ದು ರಾಸಾಯನಿಕ ವಿಷವನ್ನು ಭೂಮಿಗೆ ಉಣಿಸದಿರಲು ನಿರ್ಧರಿಸಿದ್ದಾರೆ. ಪರಂಪರೆ ಅನುಸರಿಸುವುದರಲ್ಲಿಯೇ ನೆಮ್ಮದಿಯಿದೆ ಎಂಬುದನ್ನು ಮನಗಾಣತೊಡಗಿದ್ದಾರೆ.

ಹೊಸಗುಂದ ಈಗ ಮಾದರಿ ಗ್ರಾಮ. ಅಲ್ಲೀಗ ಎಲ್ಲವೂ ಇದೆ. ಪರಂಪರೆಯ ಬೇರುಗಳಿವೆ. ದಟ್ಟ ಕಾಡಿದೆ. ಪ್ರಕೃತಿಯ ಭಾಗವಾದರೆ ಮಾತ್ರ ಪ್ರಗತಿ ಎಂಬ ತಿಳಿವಳಿಕೆಯಿದೆ. ಬೀಳುವ ಪ್ರತಿಯೊಂದು ಮಳೆಹನಿಯನ್ನು ಆಸ್ವಾದಿಸುವ, ಅದನ್ನು ಇಂಗಿಸುವ, ಪ್ರಕೃತಿಯೊಂದಿಗೆ ಒಂದಾಗಿ ಬಾಳುವ ಜೀವನ ಪ್ರೀತಿ ಇದೆ. ಆರು ನೂರು ವರ್ಷಗಳ ಕಾಲ ಅರಣ್ಯದಲ್ಲಿ ಮುಚ್ಚಿಹೋಗಿದ್ದ ದೇಗುಲದ ಜೊತೆಗೆ ಜನರ ಬದುಕೂ ಈಗ ಅರಳತೊಡಗಿದೆ. ಹೊಸ ರೀತಿಯ ಪ್ರಗತಿಯ ಕಂಪು ಎಲ್ಲೆಡೆ ಪಸರಿಸತೊಡಗಿದೆ.

- ಚಾಮರಾಜ ಸವಡಿ

(ಚಿತ್ರ ಕೃಪೆ:  http://sumstrust.blogspot.com)

ಎದ್ದೇಳು ಮಂಜುನಾಥ, ಬೆಳಗಾಯಿತು...

3 Dec 2009

6 ಪ್ರತಿಕ್ರಿಯೆ
ಇತ್ತೀಚೆಗೆ ರಾತ್ರಿ ತಡವಾಗಿ ಮಲಗೋದು ಶುರುವಾಗಿಬಿಟ್ಟಿದೆ. ಅದು ಇದು ಓದುತ್ತ, ಬರೆಯಲೇಬೇಕಾಗಿದ್ದನ್ನು ಬರೆಯುತ್ತ ಕೂತವನಿಗೆ ನಿದ್ದೆ ಬರುತ್ತಿದೆ ಅನ್ನಿಸಿದಾಗ ರಾತ್ರಿ ಒಂದೋ-ಎರಡೋ ಗಂಟೆಯಾಗಿರುತ್ತದೆ. ಹೀಗಾಗಿ ಬೆಳಿಗ್ಗೆ ಏಳುವಾಗ ಏಳಾಗಿರುತ್ತದೆ.

ಮೊನ್ನೆ ಬೆಳಿಗ್ಗೆ ಕ್ಲೈಂಟ್‌ ಒಬ್ಬರ ಕೆಲಸಕ್ಕೆಂದು ಬೇಗ ಏಳಬೇಕಾಯ್ತು. ಹಾಗೆ ನೋಡಿದರೆ ಏಳಲು ಮನಸ್ಸಿರಲಿಲ್ಲ. ಅರೆ ಮನಸ್ಸಿನಿಂದಲೇ ಎದ್ದು, ಬೆಳಗಿನ ಎಲ್ಲ ವಿಧಿಗಳನ್ನು ವಿಧ್ಯುಕ್ತವಾಗಿ ಮುಗಿಸಿ, ಬಾಗಿಲು ತೆರೆದು ಈಚೆ ಬಂದರೆ, ಹೊರಗೆ ಮಜವಾದ ಚಳಿ.

ರಸ್ತೆಗಳು ಸ್ವಚ್ಛವಾಗಿದ್ದವು. ಜನ ಮತ್ತು ವಾಹನಗಳಿಲ್ಲದ್ದರಿಂದ ನನಗೆ ಹಾಗನ್ನಿಸಿತೋ! ಗಾಳಿ ಕೂಡ ನಡುಕ ಹುಟ್ಟಿಸುವಷ್ಟು ಹಿತವಾಗಿತ್ತು. ನಾಗರಬಾವಿಯಿಂದ ಬಸವೇಶ್ವರನಗರದ ಆ ತುದಿಗೆ ಹೋಗಲು ಬೆಳಗಿನ ಸಮಯದಲ್ಲಿ ಹದಿನೈದು ನಿಮಿಷಗಳು ಸಾಕು. ಆದರೆ, ಇಷ್ಟು ಸಣ್ಣ ಅವಧಿ ಎಷ್ಟೊಂದು ವಿಶೇಷತೆಗಳನ್ನು ಪರಿಚಯಿಸಿತೆಂದರೆ, ‘ಛೇ ಇನ್ಮೇಲೆ ಬೇಗ ಏಳಬೇಕು’ ಅಂತ ಪದೆ ಪದೆ ಅನ್ನಿಸಿತು.

ಕಾಲೇಜಿಗೆ, ಬೆಳಗಿನ ಪಾಳಿಯ ಕೆಲಸಕ್ಕೆ ಹೋಗುವವರೆಲ್ಲ ಆರು ಗಂಟೆಗೆಲ್ಲ ಬಸ್‌ ಸ್ಟಾಪ್‌ಗಳಲ್ಲಿ ಹಾಜರು. ಎಲ್ಲರೂ ತಾಜಾ ಗಾಳಿಯಷ್ಟೇ ಫ್ರೆಶ್‌. ಪೇಪರ್‌ ಹಾಗೂ ಹಾಲು ಹಾಕುವ ಹುಡುಗರಷ್ಟೇ ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಓಡಾಡುತ್ತಿದ್ದುದನ್ನು ಬಿಟ್ಟರೆ, ಉಳಿದವರೆಲ್ಲ ಚಳಿಗಾಲದ ಶುರುವಿನ ದಿನಗಳ ಸೊಗಸನ್ನು ಅನುಭವಿಸಲೆಂದೇ ಅಷ್ಟೊತ್ತಿಗೇ ಎದ್ದು ಬಂದಂತಿದ್ದರು. ಫುಟ್‌ಪಾತ್‌ ಅಗಲವಾಗಿರುವ ಕಡೆ ದಿನಪತ್ರಿಕೆಗಳ ವಿಂಗಡಣೆ ನಡೆದಿತ್ತು. ಇದ್ದಕ್ಕಿದ್ದಂತೆ ‘ಛಾಯಾಕನ್ನಡಿ’ ಬ್ಲಾಗ್‌ ಬರೆಯುವ ಶಿವು ನೆನಪಾದರು. ಮಳೆ ಬರಲಿ, ಬಿಡಲಿ. ಚಳಿ ಇರಲಿ, ಇಲ್ಲದಿರಲಿ. ಪಾಪ, ನಸುಕಿನಲ್ಲೇ ಎದ್ದು, ನಮ್ಮ ಬೆಳಗಿನ ಕಾಫಿ ಹೊತ್ತಿಗೆ ಪತ್ರಿಕೆ ತಲುಪಿಸುವ ಕಾಯಕ ಅವರು ಹೇಗೆ ಮಾಡ್ತಾರಪ್ಪ ಅಂತ ಅನ್ನಿಸಿತು. ಮನಸ್ಸಿನಲ್ಲೇ ಅವರಿಗೆ, ಅವರ ವೃತ್ತಿ ಬಾಂಧವರಿಗೆ ಸಲಾಮ್‌ ಹೊಡೆದು ಮುಂದಕ್ಕೆ ಹೋದೆ.

ತರಕಾರಿ ಮಾರುವವರು ಒಬ್ಬೊಬ್ಬರಾಗಿ ಕೂಗಲು ಆರಂಭಿಸಿದ್ದರು. ಬೆಳಿಗ್ಗೆಯೇ ಶುರುವಾದ ಬಸ್‌ಗಳಲ್ಲಿ ದಟ್ಟಣೆ ಇರಲಿಲ್ಲ. ಸಿಗ್ನಲ್‌ಗಳು ಹಳದಿ ದೀಪಗಳನ್ನು ಮಿನುಗಿಸುತ್ತ, ‘ಹೋಗಿ ಬನ್ನಿ’ ಎಂದು ಹೇಳುತ್ತಿದ್ದವು. ಮರಗಳು ದಟ್ಟವಾಗಿರುವ ಕಡೆ ಹಕ್ಕಿಗಳ ಚಿಲಿಪಿಲಿ ಬಿಟ್ಟರೆ ಮತ್ತೆ ಕಿವಿಗೆ ಬಿದ್ದಿದ್ದು ಎಫ್‌.ಎಂ. ರೇಡಿಯೋದ ಬಾನುಲಿಗಳೇ.

ಅಶ್ವಥ್ವ ವೃಕ್ಷಗಳಿರುವೆಡೆ ಮರ ಸುತ್ತುವ ಆಸ್ತಿಕ ಮಹಿಳೆಯರು. ಅವರ ಪೈಕಿ ಹುಡುಗಿಯರೇ ಹೆಚ್ಚು. ದೇವಸ್ಥಾನಗಳು ಬಾಗಿಲು ತೆರೆದುಕೊಂಡಿದ್ದವು. ಹೂ, ಹಣ್ಣು, ತೆಂಗಿನಕಾಯಿ, ಊದುಬತ್ತಿ ಮಾರುವವರ ಗುಂಪು ಹೊರಗೆ. ಸಣ್ಣ ಸಣ್ಣ ದರ್ಶಿನಿಗಳಲ್ಲಿ ಬಿಸಿ ಬಿಸಿ ಇಡ್ಲಿ-ಸಾಂಬಾರಿನ ಘಮ. ಬೇಗ ಎದ್ದಿದ್ದೆನಾದ್ದರಿಂದ ಸಣ್ಣಗೆ ಹಸಿವು ಕೆರಳಿದಂತಾಯ್ತು.

ಅಂಥ ಬೆಳ್ಳಂಬೆಳಿಗ್ಗೆಯೂ ಅಲ್ಲಲ್ಲಿ ಸಣ್ಣ ಸಣ್ಣ ಬಾರ್‌ಗಳು ಬಿಸಿನೆಸ್‌ ಶುರು ಮಾಡಿದ್ದವು. ಅಲ್ಲಿ ಕೂಡ ಕೇಳಿಬಂದಿದ್ದು ಸುಪ್ರಭಾತವೇ. ‘ಎದ್ದೇಳು ಮಂಜುನಾಥ...’ ಎಂಬ ಸೊಗಸಾದ ಹಾಡು. ಬಹುಶಃ ಹಾಡು ಕೇಳಿದ ಕುಡುಕರು ಬೇಗ ಎದ್ದು ಬರಲಿ ಅಂತ ಇರಬೇಕು. ದಣಿದು ಕುಡಿಯುವ ಮಜಾ ಒಂದು ರೀತಿಯದಾದರೆ, ಫ್ರೆಶ್ಶಾಗಿ ಕುಡಿಯುವ ಮಜಾ ಇನ್ನೊಂದು ರೀತಿಯೇನೋ. ಅದಕ್ಕೆಂದೇ ಅಷ್ಟೊತ್ತಿಗೆ ಕುಡುಕರೂ ಹಾಜರಾಗಿದ್ದರು. ಬೋಣಿ ಚೆನ್ನಾಗಿರಬೇಕು. ಬಾರ್‌ ಮಾಲೀಕನ ಮುಖದಲ್ಲಿ ಭರ್ಜರಿ ಲವಲವಿಕೆ.

ಹೌಸಿಂಗ್‌ ಬೋರ್ಡ್‌ ಕಾಲೋನಿ ದಾಟಿ ಬಸವೇಶ್ವರ ನಗರದ ಕಡೆ ತಿರುಗಿಕೊಂಡಾಗ ರಭಸದಿಂದ ವಾಕಿಂಗ್‌ ಮಾಡುತ್ತಿದ್ದ ಒಂದಿಷ್ಟು ಜನ ಧಡೂತಿ ಆಂಟಿಯರು, ಚೂಟಿ ಅಂಕಲ್‌ಗಳು ಕಾಣಿಸಿದರು. ಕಿವಿಯಲ್ಲಿ ಇಯರ್‌ಫೋನ್‌ ಹಾಕಿಕೊಂಡವರೇ ಬಹಳಷ್ಟು. ಹಾಡು ಕೇಳುತ್ತ, ವಾಕ್‌ ಮಾಡುತ್ತ ಮಸ್ತ್‌ ಮಜಾ ಮಾಡ್ತಿದ್ರು. ನಕ್ಕು ಮುಂದೆ ಹೋದೆ.

ಪವಿತ್ರ ಪ್ಯಾರಡೈಸ್‌ ಎಂಬ ಖ್ಯಾತ ಹೋಟೆಲ್‌ ದಾಟಿ ಎಂಟನೇ ಮುಖ್ಯರಸ್ತೆಯ ಒಳ ಹೊಕ್ಕಾಗ, ಬೆಂಗಳೂರಿನ ಈ ಭಾಗ ಇನ್ನೂ ನಿದ್ದೆಯಲ್ಲಿದೆ ಅನ್ನಿಸಿತು. ಅಗಲ ರಸ್ತೆಯಲ್ಲಿ ವಿರಳ ಜನ-ವಾಹನ ಸಂಚಾರ. ಸುತ್ತಲೂ ಇರುವ ವಿವಿಧ ಪಾರ್ಕ್‌‌ಗಳ ಮರಗಿಡಗಳು ಉಸಿರಾಡಿದ ಗಾಳಿ ತಾಜಾ ಇದ್ದರೂ, ಇಲ್ಲಿ ಚಳಿ ಕೊಂಚ ಹೆಚ್ಚೇ ಇದೆ ಅನಿಸಿತು. ಕ್ಲೈಂಟ್‌ ಮನೆ ಹತ್ತಿರವಾಗುತ್ತಿದ್ದಂತೆ, ಟೈಮ್‌ ನೋಡಿಕೊಂಡೆ. ಮನೆ ಬಿಟ್ಟು ಕೇವಲ ಹದಿನೈದು ನಿಮಿಷಗಳಾಗಿದ್ದವು.

ಬೇರೆ ಸಮಯದಲ್ಲಾಗಿದ್ದರೆ, ಇದೇ ದೂರ ಕ್ರಮಿಸಲು ಏನಿಲ್ಲವೆಂದರೂ ಅರ್ಧ ಗಂಟೆ ಬೇಕಾಗುತ್ತಿತ್ತು. ಟ್ರಾಫಿಕ್‌ ಶಪಿಸುತ್ತ ವಾಹನ ಓಡಿಸುವಾಗ, ಸುತ್ತಮುತ್ತಲಿನ ಅಚ್ಚರಿಗಳತ್ತ ಗಮನ ಹರಿಯುವುದಾದರೂ ಹೇಗೆ? ಬೆಳ್ಳಂಬೆಳಿಗ್ಗೆಯ ಈ ಹದಿನೈದು ನಿಮಿಷಗಳಿಗೆ ಅದೆಂಥ ಮಾಂತ್ರಿಕ ಸ್ಪರ್ಶ ಇದೆಯಲ್ಲ ಅನಿಸಿ ಅಚ್ಚರಿಯಾಯ್ತು.

ಕ್ಲೈಂಟ್‌ ಮನೆಯಲ್ಲಿ ಬಿಸಿ ಬಿಸಿ ಕಾಫಿ, ಬಿಸಿ ಬಿಸಿ ದಿನಪತ್ರಿಕೆಗಳು ಕಾಯ್ದಿದ್ದವು. ಹಾಯಾಗಿ ಕಾಫಿ ಕುಡಿಯುತ್ತ, ಪೇಪರ್‌ ಓದುವಾಗ, ಮತ್ತೆ ಮತ್ತೆ ಅಂದುಕೊಂಡೆ- ಇನ್ಮೇಲೆ ಬೆಳಿಗ್ಗೆ ಬೇಗ ಏಳಬೇಕು!

ಏಳ್ತೀನಾ?

- ಚಾಮರಾಜ ಸವಡಿ

ಅವತ್ತಿನಿಂದ ನಾವು ಪ್ರಬುದ್ಧರಾಗತೊಡಗಿದೆವು...

25 Nov 2009

10 ಪ್ರತಿಕ್ರಿಯೆ
ಏಪ್ರಿಲ್‌ಗೆ ಏಳು ವರ್ಷಗಳಾದವು.

ಕಳೆದ ಏಳು ವರ್ಷಗಳಲ್ಲಿ ಬದುಕು ನಮ್ಮನ್ನು ಅವಶ್ಯಕತೆಗಿಂತ ಹೆಚ್ಚು ಪ್ರಬುದ್ಧರನ್ನಾಗಿಸಿದೆ. ಮಾಗಿಸಿದೆ. ಪೀಡಿಸಿದೆ. ಎಂದೂ ಮರೆಯದ ಪಾಠಗಳನ್ನು ಕಲಿಸಿದೆ.

ಇವೆಲ್ಲಕ್ಕಿಂತ ಹೆಚ್ಚಿನ ಪಾಠಗಳನ್ನು ನಮ್ಮ ಏಳು ವರ್ಷದ ಮಗಳು ಗೌರಿ ಕಲಿಸಿದ್ದಾಳೆ. ಇನ್ನೂ ಕಲಿಸುತ್ತಲೇ ಇದ್ದಾಳೆ.
ವ್ಯತ್ಯಾಸ ಇಷ್ಟೇ: ಮೊದಮೊದಲು ಆ ಪಾಠಗಳನ್ನು ಬಹಳ ಕಷ್ಟಪಟ್ಟು ಕಲಿಯುತ್ತಿದ್ದೆವು. ಕಣ್ಣೀರಿಡುತ್ತ ಕಲಿಯುತ್ತಿದ್ದೆವು. ವೃತ್ತಿಯ ಸವಾಲುಗಳೇನೇ ಇರಲಿ, ಅವು ನಮ್ಮ ಕೈಯೊಳಗೆ ಇರುವಂಥವು. ಅವನ್ನು ಸಮರ್ಥವಾಗಿ ಎದುರಿಸಬಲ್ಲೆವು. ಆದರೆ ಕೆಲವು ಸವಾಲುಗಳು ನಮ್ಮ ವ್ಯಾಪ್ತಿಯಾಚೆಗೂ ಇರುತ್ತವೆ ಎಂಬ ಮಹಾಪಾಠವನ್ನು ಮಾತು ಬಾರದ, ಇದುವರೆಗೂ ಮಾತನ್ನು ಆಡದ ಮಗಳು ಕಲಿಸುವಾಗ ಅದನ್ನು ಜೀರ್ಣಿಸಿಕೊಳ್ಳಲು ನಿಜಕ್ಕೂ ತುಂಬ ಕಷ್ಟಪಟ್ಟೆವು.

ಅವು ನಿಜಕ್ಕೂ ಯಾತನಾಮಯ ದಿನಗಳು.

ಆ ದಿನಗಳಲ್ಲಿ ಆಕೆ ಪೂರ್ತಿ ಕಣ್ಣರಳಿಸಿ ನಮ್ಮನ್ನು ನೋಡುತ್ತಿರಲಿಲ್ಲ. ‘ನಾಲ್ಕು ತಿಂಗಳ ಮಗು ಹಾಗೆ ನೋಡಬೇಕಂತ ಏನು ಅರ್ಜೆಂಟಿದೆ?’ ಎಂದು ಕೇಳಿದವರು ಕೊಪ್ಪಳದ ಮಕ್ಕಳ ಡಾಕ್ಟರ್.

‘ಇಲ್ಲ, ಆಕೆ ಎಲ್ಲ ಮಕ್ಕಳಂತಿಲ್ಲ. ಕಣ್ರೆಪ್ಪೆಗಳು ನಿದ್ರೆಯಿಂದ ಜೋಲುವಂತಿವೆ. ಜೊಲ್ಲು ನಿಲ್ಲುತ್ತಿಲ್ಲ. ಕುಡಿದ ಹಾಲು ಸುಲಭವಾಗಿ ಹೊರಬಂದುಬಿಡುತ್ತದೆ. ಗೋಣು ನಿಂತಿಲ್ಲ...’- ನಮ್ಮ ದೂರುಗಳ ಪಟ್ಟಿ ದೊಡ್ಡದಿತ್ತು.

ಆದರೆ, ಕೇಳಿಸಿಕೊಳ್ಳುವ ವ್ಯವಧಾನ ಅವರಿಗೆ ಇರಲಿಲ್ಲ. ಅವರೊಬ್ಬರೇ ಅಲ್ಲ, ಕಳೆದ ಏಳು ವರ್ಷಗಳಲ್ಲಿ ನಾವು ಕಂಡ ಬಹಳಷ್ಟು ವೈದ್ಯರಲ್ಲಿ ಈ ಅಗತ್ಯ ಗುಣ ಕಂಡುಬರಲಿಲ್ಲ. ‘ಮಗು ಚಿಕ್ಕದು. ಆರು ತಿಂಗಳು ತುಂಬಿದಾಗ ಎಲ್ಲ  ಸರಿಹೋಗುತ್ತದೆ’ ಎಂದು ಅವರು ಮಾತು ಮುಗಿಸಿದರು.

ನನ್ನ ಮನದಲ್ಲಿ ನೂರಾರು ಪ್ರಶ್ನೆಗಳ್ದಿದವು. ಆದರೆ, ಯಾರನ್ನು ಕೇಳಬೇಕು? ಆದರೂ ಒಂದು ಭರವಸೆಯಿತ್ತು. ಮಗು ಚಿಕ್ಕದಿದೆ. ಇನ್ನೆರಡು ತಿಂಗಳು ಹೋಗಲಿ, ಪರಿಸ್ಥಿತಿ ಸುಧಾರಿಸಬಹುದು ಎಂಬ ಮಾತು ಮನದಲ್ಲಿ ಕೂತಿತು.

ಆ ಎರಡು ತಿಂಗಳುಗಳೂ ಕಳೆದು ಹೋದವು. ಆದರೆ ಮಗುವಿನಲ್ಲಿ ನಾವು ಗುರುತಿಸಿದ್ದ ದೋಷಗಳು ಮಾತ್ರ ಕಳೆದು ಹೋಗಲಿಲ್ಲ. ವೈದ್ಯರು ಮತ್ತೆರಡು ತಿಂಗಳಿನ ಭರವಸೆ ನೀಡಿದರು.

ಮಗಳು ಗೌರಿಯ ಕತ್ತು ಸ್ಥಿರವಾಗಿದ್ದು ಹುಟ್ಟಿದ ಆರು ತಿಂಗಳಿನ ನಂತರ. ಆಗಲೂ ಆಕೆ ನಮ್ಮ ಮುಖ ನೋಡುತ್ತಿರಲಿಲ್ಲ. ತನ್ನ ಪಾಡಿಗೆ ತಾನು ಖುಷಿಯಾಗಿ ಕೈಕಾಲು ಆಡಿಸುತ್ತ ಇರುತ್ತಿದ್ದಳು. ಯಾವಾಗಾದರೊಮ್ಮೆ ಬಹಳ ಕಷ್ಟಪಟ್ಟು ಬೋರಲು ಬೀಳುತ್ತಿದ್ದಳು. ಆದರೆ, ಮತ್ತೆ ಬೆನ್ನ ಮೇಲೆ ಹೊರಳಲು ಆಗುತ್ತಿರಲ್ಲಿಲ.

‘ಮಗು ಕೊಂಚ ದಪ್ಪ ಇರುವುದರಿಂದ ಹೀಗಾಗುತ್ತದೆ’ ಎಂಬ ಇನ್ನೂ ಒಂದು ಭರವಸೆ ವೈದ್ಯರಿಂದ ಬಂದಿತು. ಹತ್ತಿರದ ಸಂಬಂಧಿಗಳೂ ಇದನ್ನು ಒಪ್ಪಿದರು. ನನಗೆ ಏನೋ ಅನುಮಾನ.

ಆ ಎರಡು ತಿಂಗಳುಗಳೂ ಗತಿಸಿದವು. ಆದರೆ ಪರಿಸ್ಥಿತಿ ಹಾಗೇ ಇತ್ತು. ಮಗು ದೈಹಿಕವಾಗಿ ಬೆಳೆದಿತ್ತು. ಬೋರಲು ಬೀಳುವ ಪ್ರಮಾಣ ಜಾಸ್ತಿಯಾಗಿದ್ದು ಬಿಟ್ಟರೆ ಅದು ಒಂದು ತಿಂಗಳಿನ ಮಗುವಿನಂತೆ. ಮುಖ ಮಾತ್ರ ತಿಳಿಯಾಗಿತ್ತು. ಮಾನಸಿಕ ವೈಕಲ್ಯದ ಯಾವೊಂದು ಸುಳಿವೂ ಅಲ್ಲಿರಲಿಲ್ಲ.

ಗೌರಿಗೆ ಎಂಟು ತಿಂಗಳಾದ ನಂತರವೂ ಕೊಪ್ಪಳದ ವೈದ್ಯರ ಭರವಸೆಯ ಮಾತುಗಳನ್ನು ನಂಬುವುದು ಕಷ್ಟವೆನಿಸತೊಡಗಿ ಪಕ್ಕದ ನಗರ ಹೊಸಪೇಟೆಗೆ ಹೋದೆವು. ಅಲ್ಲಿಯ ವೈದ್ಯರು ಮಗುವನ್ನು ಕೊಂಚ ಹೆಚ್ಚೇ ಪರೀಕ್ಷಿಸಿ ನೋಡಿದರು. ತಲೆಯ ಗಾತ್ರ ಅಳೆದರು. ದೈಹಿಕ ಚಟುವಟಿಕೆಗಳ ಮಾಹಿತಿ ಕೇಳಿ ಗುರುತು ಹಾಕಿಕೊಂಡರು. ಯಾವುದಕ್ಕೂ ಇರಲಿ ಎಂದು ನೇತ್ರ ತಜ್ಞರ ಹತ್ತಿರ ಕಳಿಸಿದರು. ಪಾಪ, ಅವರು ಕೂಡ ಸಮಾಧಾನದಿಂದಲೇ ವಿವರವಾಗಿ ಪರೀಕ್ಷಿಸಿ ಘೋಷಿಸಿದರು:

‘ಈಕಿ ಕಣ್ಣು ನಾರ್ಮಲ್ ಅದಾವ...!’

ಮುಳುಗುವವರ ಕೈಗೆ ಹುಲ್ಲು ಕಡ್ಡಿ ಸಿಕ್ಕಿತ್ತು.

ಆದರೆ, ಹೊಸಪೇಟೆ ಡಾಕ್ಟರರ ವರದಿ ಆ ಸಣ್ಣ ಕಡ್ಡಿಯನ್ನೂ ಉಳಿಸಲಿಲ್ಲ. ‘ಈಕೆಯ ಬೆಳವಣಿಗೆ ನಿಧಾನವಾಗಿದೆ. ಮೆದುಳು ಪೂರ್ತಿ ವಿಕಾಸವಾಗಿಲ್ಲ. ನೀವು ದೊಡ್ಡ ಡಾಕ್ಟರರಿಗೆ ತೋರಿಸಿ’ ಎಂದಾಗ ನಾವಿಟ್ಟ ಕಣ್ಣೀರಿನ ನೆನಪು ಇವತ್ತಿಗೂ ಕಣ್ಣೀರು ತರಿಸುತ್ತದೆ.

ಮಗು ಮಾತ್ರ ಹಾಗೇ ಇತ್ತು. ಕುಡಿಸಿದ ಹಾಲು ಅನಾಯಾಸವಾಗಿ ಹೊರಬರುತ್ತಿತ್ತು. ಕಂಕುಳಕ್ಕೆ ಕೈಹಾಕಿ ನೆಲದ ಮೇಲೆ ನಿಲ್ಲಿಸಹೋದರೆ ಸಹಜವಾಗಿ ಕಾಣುತ್ತಿದ್ದ ಕಾಲುಗಳು ಜೋಲುತ್ತಿದ್ದವು. ದೃಷ್ಟಿ ಸ್ಥಿರವಾಗಿರುತ್ತಿದ್ದಿಲ್ಲ. ಆದರೆ, ದೋಷ ಕಾಲಿನದಾಗಲಿ, ಕಣ್ಣಿನದಾಗಲಿ ಆಗಿರಲಿಲ್ಲ. ಈ ಅಂಗಗಳನ್ನು ಬೆಂಬಲಿಸಬೇಕಾದ ಮೆದುಳಿನದಾಗಿತ್ತು.

ಇನ್ನೊಬ್ಬ ಡಾಕ್ಟರಿಗೆ ತೋರಿಸಿ ನೋಡೋಣ ಎಂದು ಹೊಸಪೇಟೆಯಿಂದ ಧಾರವಾಡಕ್ಕೆ ಹೋದೆವು. ಇದ್ದುದರಲ್ಲಿಯೇ  ಕೊಂಚ ಹೆಸರು ಪಡೆದಿದ್ದ ಇನ್ನೊಬ್ಬ ಮಕ್ಕಳ ಡಾಕ್ಟರಿಗೆ ತೋರಿಸಿದೆವು. ಮೊದಲ ಬಾರಿ ಗೌರಿಯ ಮೆದುಳನ್ನು ಸ್ಕ್ಯಾನ್ ಮಾಡಲಾಯಿತು. ಚಿತ್ರಗಳು ಸ್ಪಷ್ಟವಾಗಿದ್ದವು. ಗೌರಿಯ ಮೆದುಳಿನ ಕೆಲವು ಭಾಗಗಳು ವಿಕಾಸವಾಗಿರಲಿಲ್ಲ.

ಡಾಕ್ಟರು ಇನ್ನೊಂದಿಷ್ಟು ದುಬಾರಿ ಪರೀಕ್ಷೆಗಳನ್ನು ನಡೆಸಲು ಶಿಫಾರಸು ಮಾಡಿದರು. ’ಔಷಧಿ ನೀಡುತ್ತೇವೆ. ಆದರೆ, ಗುಣವಾಗುವ ಬಗ್ಗೆ ಖಾತರಿ ನೀಡಲಾರೆವು. ಕಾಯ್ದು ನೋಡಬೇಕು’ ಎಂಬ ಹೇಳಿಕೆ ಬಂದಿತು.

ಮಗು ಕರೆದುಕೊಂಡು ವಾಪಸ್ ಕೊಪ್ಪಳಕ್ಕೆ ಬಂದೆವು. ಹಲವಾರು ಕನಸುಗಳನ್ನು ಬಿತ್ತಿದ, ಪೋಷಿಸಿದ ಊರು ಮೊದಲ ಬಾರಿ ದಿಗಿಲು ಉಕ್ಕಿಸಿತ್ತು.

‘ಬೆಂಗಳೂರಿಗೆ ಹೋಗಿ. ನಿಮ್ಹಾನ್ಸ್‌ನ್ಲಲಿ ತೋರಿಸಿ, ಆರಾಮ ಆಗಬಹುದು’ ಎಂಬ ಸಲಹೆ ಬಂದಾಗ ಊರು ಬಿಡದೆ ಬೇರೆ ದಾರಿ ಇರಲಿಲ್ಲ. ನಮ್ಮೂರಲ್ಲೇ ನೆಲೆಯಾಗಬೇಕು ಎಂದು ಹಂಬಲಿಸಿ ಹಲವಾರು ಉತ್ತಮ ಕೆಲಸಗಳನ್ನು ಹಾಗೂ ಅವಕಾಶಗಳನ್ನು ಕೈಬಿಟ್ಟು ಬಂದಿದ್ದ ನಾನು ಮತ್ತೆ ಊರು ಬಿಡಬೇಕಾಯಿತು.

ಇದ್ದ ಕೆಲಸ ಬಿಟ್ಟು, ಕೈಯಲ್ಲಿ ಬೇರೆ ಕೆಲಸ ಕೂಡ ಇಲ್ಲದೇ ಬೆಂಗಳೂರಿಗೆ ಬಂದೆ. ಆಸ್ಪತ್ರೆಗೆ ತೋರಿಸಬೇಕೆಂದರೆ ಹಣದ ಮುಗ್ಗಟ್ಟು. ಕೆಲ ಕಾಲ ಗೆಳೆಯರು ಪೋಷಿಸಿದರು. ಬೇರೆ ಬೇರೆ ಪತ್ರಿಕೆಗಳಿಗೆ ಬರೆಯುತ್ತ, ದೊರೆತ ಅಲ್ಪ ಹಣವನ್ನು ಬಾಡಿಗೆ, ರೇಶನ್ ಎಂದು ಖರ್ಚು ಮಾಡುತ್ತ ಏಳೆಂಟು ತಿಂಗಳು ನೂಕಿಯಾಯಿತು. ಪ್ರಜಾವಾಣಿಯಲ್ಲಿ ಕೆಲಸ ಸಿಕ್ಕಾಗ, ಕೊನೆಗೂ ವೃತ್ತಿಯಲ್ಲಿ ನೆಲೆ ನಿಂತಾಯಿತು ಎಂಬ ಸಮಾಧಾನದಿಂದ ನಿಮ್ಹಾನ್ಸ್‌ಗೆ ಹೋದೆವು.

ಅಲ್ಲಿ ಮತ್ತೆ ಪರೀಕ್ಷೆಗಳು. ಅವೇ ಪ್ರಶ್ನೆಗಳು. ಅವೇ ಉತ್ತರಗಳು. ಆನುವಂಶೀಯತೆಯ ದೋಷ ಇಲ್ಲ, ಮಗು ಹುಟ್ಟಿದ ಕೂಡಲೇ ಸರಿಯಾಗಿ ಅತ್ತಿದೆ, ಮಗುವನ್ನು ಕೆಳಗೆ ಬೀಳಿಸಿಲ್ಲ, ಮೂರ್ಛೆ ರೋಗ ಇಲ್ಲ, ದೈಹಿಕ ನ್ಯೂನತೆಗಳಿಲ್ಲ, ...ಇಲ್ಲ, ...ಇಲ್ಲ. ಆದರೂ ಮಗು ನಾರ್ಮಲ್ ಇಲ್ಲ.

‘ಕೆಲವೊಂದು ಮಕ್ಕಳು ಹೀಗಿರುತ್ತಾರೆ. ಇದಕ್ಕೆ ಇಂಗ್ಲಿಷ್ ಪದ್ಧತಿಯಲ್ಲಿ ಯಾವುದೇ ಔಷಧಿ ಇಲ್ಲ. ಆಯುರ್ವೇದ ಪದ್ಧತಿಯಲ್ಲಿ ಔಷಧಿ ನೀಡುವುದಾಗಿ ಕೇಳಿದ್ದೇವೆ. ಬೇಕಾದರೆ ಪ್ರಯತ್ನಿಸಿ. ಆದರೆ, ಏನೇ ಮಾಡಿದರೂ ನೀವು ಆಕೆಗೆ ನಿಯಮಿತವಾಗಿ ಫಿಜಿಯೋ ಥೆರಪಿ ಮಾಡಿಸಬೇಕು. ನಿತ್ಯ ಮಗುವಿನೊಂದಿಗೆ ಸಹಜವಾಗಿ ಮಾತನಾಡುತ್ತ ಹೋಗಿ. ನಿರಂತರವಾಗಿ ಆಕೆಯ ಸಂಪರ್ಕದಲ್ಲಿರಿ. ತನಗೆ ಸಂಬಂಧಿಸಿದ ಪ್ರತಿಯೊಂದು ವಸ್ತುವಿನ ಸ್ಪರ್ಶ, ವಾಸನೆ ಹಾಗೂ ಸಾಂಗತ್ಯವನ್ನು ಆಕೆ ಅನುಭವಿಸಲಿ. ಎಲ್ಲಕ್ಕಿಂತ ಮೊದಲು ನೀವು ಧೈರ್ಯ ತಂದುಕೊಳ್ಳಬೇಕು. ನೀವು ಎಷ್ಟು ಸಮಾಧಾನಿತರಾಗುತ್ತೀರೋ, ಪ್ರಬುದ್ಧರಾಗಿ ವರ್ತಿಸುತ್ತೀರೋ, ನಿಮ್ಮ ಮಗು ಅಷ್ಟರ ಮಟ್ಟಿಗೆ ಬೆಳೆಯಲು ಸಾಧ್ಯ. ಒಳ್ಳೆಯದಾಗಲಿ’ ಎಂದರು ನಿಮ್ಹಾನ್ಸ್‌ನ ಕರುಣಾಮಯಿ ವೈದ್ಯರು.

ಕಳೆದ ಏಳು ವರ್ಷಗಳಿಂದ ಅಂಥದೊಂದು ಪ್ರಯತ್ನ ನಡೆಸುತ್ತ, ಧೈರ್ಯ ತಂದುಕೊಳ್ಳುತ್ತ, ಸಮಾಧಾನಿತರಾಗಿ ಇರಲು ಯತ್ನಿಸುತ್ತ, ಪ್ರಬುದ್ಧತೆ ಗಳಿಸುವ ದಿಕ್ಕಿನಲ್ಲಿ ಬದುಕು ಸಾಗಿದೆ. ನಾವು ಬೆಳೆದಷ್ಟೂ ನಮ್ಮ ಮಗು ಬೆಳೆಯುತ್ತದೆ. ಹೀಗಾಗಿ ನಾವು ಪ್ರಬುದ್ಧರಾಗಲೇ ಬೇಕಿದೆ. ಸಾಮಾನ್ಯ ಬದುಕು ನೀಡುವುದಕ್ಕಿಂತ ಹೆಚ್ಚಿನ ಪಾಠವನ್ನು ನಮ್ಮ ‘ಅಸಾಮಾನ್ಯ’ ಮಗಳು ಕಲಿಸಿದ್ದಾಳೆ, ಕಲಿಸುತ್ತಿದ್ದಾಳೆ.

ಪ್ರಬುದ್ಧತೆಯತ್ತ ನಮ್ಮನ್ನು ಕರೆದೊಯ್ಯುತ್ತಿದ್ದಾಳೆ.


- ಚಾಮರಾಜ ಸವಡಿ
(ಮಯೂರ ಮಾಸಿಕದ ’ಗುಬ್ಬಚ್ಚಿ ಗೂಡು ವಿಭಾಗ’ದಲ್ಲಿ ಪ್ರಕಟಿತ ಬರಹ)

ಸತ್ಯ ಹೇಳುವುದು ಕಷ್ಟ, ಹೇಳದಿರುವುದು ಇನ್ನೂ ಕಷ್ಟ

18 Nov 2009

6 ಪ್ರತಿಕ್ರಿಯೆ

ಹಲವಾರು ಬಾರಿ ಹಾಗನ್ನಿಸಿದೆ.

ಸತ್ಯ ಏನೆಂಬುದು ಗೊತ್ತಿರುತ್ತದೆ. ಆದರೆ, ಹೇಳಲಾಗುವುದಿಲ್ಲ. ಭಂಡತನದಿಂದ ತನ್ನ ನಿರ್ಣಯವನ್ನು ಜಾರಿಗೊಳಿಸುವ ವ್ಯಕ್ತಿ ತಪ್ಪು ಮಾಡುತ್ತಿದ್ದಾನೆ ಎಂದು ತಿಳಿದಿದ್ದರೂ, ಅದನ್ನು ಹೇಳಲಾಗುವುದಿಲ್ಲ.

ಏಕೆ ಹಾಗಾಗುತ್ತದೆ?

ನಾನು ಸತ್ಯ ಹೇಳಿದರೆ ನಮ್ಮ ಇದ್ದಬದ್ದ ಸಂಬಂಧ ಅಲ್ಲಿಗೇ ಮುಕ್ತಾಯವಾಗುತ್ತದೆ ಎಂಬುದು ನನಗೆ ಗೊತ್ತು. ಅದು ವೃತ್ತಿಪರ ಆಗಿರಬಹುದು ಅಥವಾ ವೈಯಕ್ತಿಕವಾಗಿರಬಹುದು- ಒಟ್ಟಿನಲ್ಲಿ ನಮ್ಮ ಸಂಬಂಧ ಅಂತ್ಯಗೊಳ್ಳುತ್ತದೆ.

ತುಂಬ ಸಾರಿ ನೋಡಿದ್ದೇನೆ: ಸಾಮಾನ್ಯವಾಗಿ ದಡ್ಡರು ಉನ್ನತ ಸ್ಥಾನದಲ್ಲಿ ಕೂತಿರುತ್ತಾರೆ. ಪ್ರತಿಭಾವಂತರನ್ನು ಕಂಡರೆ ಅವರಿಗೆ ಅಸೂಯೆ, ಕೀಳರಿಮೆ. ಅದನ್ನು ಹೋಗಲಾಡಿಸಲು ಗತ್ತು ನಟಿಸುತ್ತಾರೆ. ತಮಗೆ ಎಲ್ಲದೂ ಗೊತ್ತಿದೆ ಎಂಬ ಮುಖವಾಡ ತೊಡುತ್ತಾರೆ. ಅದೇ ಹೊತ್ತಿಗೆ, ತನ್ನ ಹುಳುಕು ಯಾರಿಗಾದರೂ ಗೊತ್ತಾದರೆ ಹೇಗೆ ಎಂಬ ಅಳುಕೂ ಅವರನ್ನು ಕಾಡುತ್ತಿರುತ್ತದೆ. ಹೀಗಾಗಿ, ಕೆಲಸ ಗೊತ್ತಿರುವವರನ್ನು ಕಂಡರೆ ಭಯ. ಅವರನ್ನು ಕಾಡಲು ಶುರು ಮಾಡುತ್ತಾರೆ. ಅವರು ಮಾಡಿದ್ದೆಲ್ಲ ತಪ್ಪು ಎನ್ನುತ್ತಾರೆ. ಬೆಳೆಯಲು ಸಾಧ್ಯವಿರುವ ಬಾಗಿಲುಗಳನ್ನೆಲ್ಲ ಮುಚ್ಚುತ್ತಾರೆ. ತಾವಿಲ್ಲದಾಗ ಬಾಗಿಲು ತೆಗೆದುಕೊಂಡು ಬಂದರೆ? ಎಂಬ ಅಳುಕಿನಿಂದಾಗಿ, ಹೊರಗೇ ಕಾವಲು ನಿಲ್ಲುತ್ತಾರೆ.

ಇದು ನಿಜಕ್ಕೂ ದುರ್ಭರ ಪರಿಸ್ಥಿತಿ. ಅವಕಾಶ ನಿರಾಕರಿಸಲ್ಪಟ್ಟ ವ್ಯಕ್ತಿಯೂ ಬೆಳೆಯುವುದಿಲ್ಲ, ಆತನ ಕಾವಲಿಗೆ ನಿಂತವನೂ ಬೆಳೆಯಲಾರ. ಇಂಥ ಪರಿಸ್ಥಿತಿ ಉಂಟಾದಾಗ, ಇಬ್ಬರು ವ್ಯಕ್ತಿಗಳು ಮಾತ್ರವಲ್ಲ, ಸಂಸ್ಥೆ ಕೂಡ ಹಾಳಾಗುತ್ತದೆ. ಆಗ ಏನು ಮಾಡಬೇಕು?

ಮೌನವಾಗಿ ಇದ್ದುಬಿ
ಡಿ. ಗತ್ತು ತೋರಿಸುವವನಿಗೇ ಮೊದಲ ಬ್ಯಾಟಿಂಗ್ ಭಾಗ್ಯ ದಕ್ಕಲಿ. ಅವನದೇ ಮಾತು ನಡೆಯಲಿ. ತನ್ನ ಗತ್ತು ಮತ್ತು ಶಕ್ತಿ ಪ್ರದರ್ಶನದ ಅತಿರೇಕದಲ್ಲಿ ಆತನ ದೌರ್ಬಲ್ಯ ಬಲು ಬೇಗ ಬಯಲಾಗುತ್ತ ಹೋಗುತ್ತದೆ.

ನಾನು ಮೌನವಾಗಿದ್ದುಕೊಂಡು ಓದು-ಬರೆಹ ಮುಂದುವರೆಸಿಕೊಂಡು ಹೋಗುತ್ತೇನೆ. ಅದೊಂಥರಾ ವನವಾಸದ ಸುಖ. ಏನೋ ಶಾಂತಿ, ನೆಮ್ಮದಿ ತರುವ ಮೌನ. ಅಧ್ಯಯನದಲ್ಲಿ ಮುಳುಗಿದಂತೆ, ಅತ್ತ ಗತ್ತು ಯಾವತ್ತೋ ಕರಗಿರುತ್ತದೆ. ಹುಳುಕು ಹೊರಬಿದ್ದಿರುತ್ತದೆ. ಒಮ್ಮೊಮ್ಮೆ ವರ್ಷಗಟ್ಟಲೇ ಕಾಯಬೇಕಾಗಬಹುದು.

ಅಷ್ಟೊಂದು ಸಮಾಧಾನ/ಅನಿವಾರ್ಯತೆ ನನಗಿದ್ದರೆ ಕಾಯುತ್ತೇನೆ. ಇಲ್ಲದಿದ್ದರೆ, ಎದ್ದು ಹೋಗುತ್ತೇನೆ.

ಏಕೆಂದರೆ, ಬದುಕಿನಲ್ಲಿ ಮುಚ್ಚಿದ ಬಾಗಿಲುಗಳಿಗಿಂತ ತೆರೆದ ಬಾಗಿಲುಗಳೇ ಹೆಚ್ಚು. ಅದು ನನ್ನ ನಂಬಿಕೆಯಷ್ಟೇ ಅಲ್ಲ, ಅನುಭವವೂ ಹೌದು.

- ಚಾಮರಾಜ ಸವಡಿ

ಲವ್‌ಜಿಹಾದ್‌ಎಂಬ ಹಳೇ ಯುದ್ಧ

7 Nov 2009

6 ಪ್ರತಿಕ್ರಿಯೆ
ನಾನಾಗ ಧಾರವಾಡದಲ್ಲಿ ಪ್ರಜಾವಾಣಿ ವರದಿಗಾರನಾಗಿ ಕೆಲಸ ಮಾಡುತ್ತಿದ್ದೆ. ಆಗ ಎಂದರೆ, ೨೦೦೬ರಲ್ಲಿ ಒಂದು ಪ್ರಕರಣ ನಡೆಯಿತು. ಜಂಗಮ ಸಮುದಾಯಕ್ಕೆ ಸೇರಿದ ಯುವತಿಯೊಬ್ಬಳು ಇದ್ದಕ್ಕಿದ್ದಂತೆ ನಾಪತ್ತೆಯಾದಳು. ಧಾರವಾಡ ಸಣ್ಣ ನಗರವಾಗಿದ್ದರಿಂದ, ಪೊಲೀಸರಿಗೆ ದೂರು ಹೋಗುವ ಮುನ್ನವೇ ಪತ್ರಕರ್ತರಿಗೆ ವಿಷಯ ಗೊತ್ತಾಗಿತ್ತು. ಪ್ರೇಮ ಪ್ರಕರಣಗಳು ಸಾಮಾನ್ಯವಾಗಿದ್ದರಿಂದ, ಈ ಕುರಿತು ನಾವ್ಯಾರು ತಲೆ ಕೆಡಿಸಿಕೊಳ್ಳಲಿಲ್ಲ.
 

ಆದರೆ, ಒಂದೆರಡು ದಿನಗಳಲ್ಲಿ ಬೆಳವಣಿಗೆಗಳು ತೀವ್ರಗೊಂಡವು. ನಾಪತ್ತೆಯಾಗಿದ್ದ ಹುಡುಗಿ ಮುಸ್ಲಿಂ ಯುವಕನೊಂದಿಗೆ ಓಡಿಹೋಗಿದ್ದಳು. ಈಕೆ ಬಿ.ಬಿ.ಎ. ಅಂತಿಮ ವರ್ಷದಲ್ಲಿ ಓದುತ್ತಿದ್ದ ಹುಡುಗಿ. ಆತ, ಗ್ಯಾರೇಜೊಂದರಲ್ಲಿ ಕೆಲಸ ಮಾಡುತ್ತಿದ್ದ ಮೆಕ್ಯಾನಿಕ್‌. ಹುಡುಗಿಯ ತಂದೆ ಮಿಲಿಟರಿಯಲ್ಲಿ ಕೆಲಸ ಮಾಡುತ್ತಿದ್ದುದರಿಂದ, ಅವರಿಗೆ ರಜೆ ಸಿಗುವುದು ವರ್ಷದಲ್ಲಿ ಒಂದೆರಡು ಸಲ ಮಾತ್ರ. ಹೀಗಾಗಿ, ಮನೆ ನೋಡಿಕೊಳ್ಳುವ ಜವಾಬ್ದಾರಿ ಹುಡುಗಿಯ ತಂದೆ ಮತ್ತು ಅವರ ಸೋದರರ ಮೇಲಿತ್ತು.
 

ಸಹಜವಾಗಿ ಹುಡುಗಿಯ ತಾಯಿ ಕಂಗಾಲಾಗಿದ್ದರು. ಗಂಡ ಬೇರೆ ದೂರದಲ್ಲಿದ್ದಾರೆ. ಹುಡುಗಿ ಮುಸ್ಲಿಂ ಯುವಕನೊಂದಿಗೆ ಓಡಿ ಹೋಗಿದ್ದು ಖಚಿತವಾಗಿತ್ತು. ಅತ್ತ ಗಂಡನಿಗೆ ತಕ್ಷಣ ಬರುವಂತೆ ಸುದ್ದಿ ಕಳಿಸಿದ ಆಕೆ, ಮೈದುನರ ಮೂಲಕ ಹುಡುಗನ ಮನೆಯವರೊಂದಿಗೆ ಮಾತುಕತೆಗೆ ಕೂತರು. ‘ಹುಡುಗ ಎಲ್ಲಿದ್ದಾನೆ ಎಂಬುದು ನಿಮಗೆ ಗೊತ್ತಿರುತ್ತದೆ. ನಮ್ಮದು ಮರ್ಯಾದಸ್ತರ ಕುಟುಂಬ. ಹುಡುಗಿ ಹೀಗೆ ಓಡಿಹೋಗಿದ್ದು ಗೊತ್ತಾದರೆ ತಲೆ ಎತ್ತಿಕೊಂಡು ಓಡಾಡುವುದು ಕಷ್ಟವಾಗುತ್ತದೆ...’ ಎಂದು ಕಣ್ಣೀರಿಟ್ಟರು. ಮೈದುನರು, ಹುಡುಗನ ಕೈಕಾಲು ಮುರಿಯುವ ಬೆದರಿಕೆ ಹಾಕಿದರು.
 

ಆದರೆ, ಹುಡುಗನ ಮನೆಯವರು ಮಾತ್ರ ನಿರುಮ್ಮಳವಾಗಿದ್ದರು.
 

‘ಹುಡುಗಿಯನ್ನು ಹದ್ದುಬಸ್ತಿನಲ್ಲಿಟ್ಟುಕೊಳ್ಳಬೇಕಾದ ಜವಾಬ್ದಾರಿ ನಿಮ್ಮದು. ನಮ್ಮ ಹುಡುಗನ ಮೇಲೇಕೆ ಗೂಬೆ ಕೂರಿಸುತ್ತೀರಿ? ಹುಡುಗ ಎಲ್ಲಿದ್ದಾನೋ ನಮಗೆ ಗೊತ್ತಿಲ್ಲ’ ಎಂದು ಕೈತೊಳೆದುಕೊಂಡರು. ಅಚ್ಚರಿಯ ಸಂಗತಿ ಎಂದರೆ, ತಮ್ಮ ಹುಡುಗ ನಾಪತ್ತೆಯಾಗಿದ್ದಾನೆ ಎಂದು ಅವರು ದೂರನ್ನೂ ದಾಖಲಿಸಿರಲಿಲ್ಲ.
 

ಇದು ಪಕ್ಕಾ ಪ್ರೇಮ ಪ್ರಕರಣ ಎಂದು ಎಲ್ಲರೂ ಭಾವಿಸಿದರು. ಪೊಲೀಸರೂ ಸಹ.
 

ಆದರೆ, ಯಾವಾಗ ಹುಡುಗಿಯ ತಂದೆ ಧಾವಿಸಿ ಬಂದರೋ ಪ್ರಕರಣಕ್ಕೆ ಬಿಸಿ ಮುಟ್ಟಿತು. ಆ ಅಸಹಾಯಕ ತಂದೆ ಜಿಲ್ಲಾ ಪೊಲೀಸ್‌ವರಿಷ್ಠಾಧಿಕಾರಿಯವರನ್ನು ಕಂಡು ಕಣ್ಣೀರಿಟ್ಟರು. ಅಧಿಕೃತವಾಗಿ ದೂರು ದಾಖಲಿಸದೇ ಹುಡುಗನ ಮೇಲೆ ಕ್ರಮ ಕೈಗೊಳ್ಳುವುದು ಕಷ್ಟ ಎಂದು ಎಸ್ಪಿ ತಿಳಿಸಿದಾಗ, ದೂರು ದಾಖಲಾಯ್ತು. ಈ ವಿಷಯ ವರದಿ ಮಾಡಬೇಡಿ ಎಂದು ಪತ್ರಕರ್ತರಿಗೂ ವಿನಂತಿಸಿಕೊಳ್ಳಲಾಯ್ತು.
 

ಆದರೆ, ಪ್ರಕರಣದ ಬಗ್ಗೆ ಕುತೂಹಲಿಗಳಾಗಿದ್ದ ನಾವು ನಿತ್ಯ ಪೊಲೀಸ್‌ಠಾಣೆಗೆ ಹೋಗಿ ಬೆಳವಣಿಗೆಗಳನ್ನು ಗಮನಿಸುತ್ತಿದ್ದೆವು. ದೂರು ದಾಖಲಾದ ಒಂದೆರಡು ದಿನಗಳಲ್ಲಿ ಪೊಲೀಸ್‌ ತಂಡವೊಂದು ಬೆಳಗಾವಿಗೆ ತೆರಳಿ, ಅಲ್ಲಿ ವಸತಿಗೃಹದಲ್ಲಿದ್ದ ಹುಡುಗ-ಹುಡುಗಿಯನ್ನು ಕರೆತಂದಿತು. ದೂರು ಈಗ ಅಧಿಕೃತವಾಗಿ ದಾಖಲಾಯ್ತು. ಹುಡುಗ ಜೈಲಿಗೆ, ಹುಡುಗಿ ತನ್ನ ಪೋಷಕರ ಮನೆಗೆ ತೆರಳಿದಳು.
 

ಈ ಹಂತದಲ್ಲಿ, ಸುದ್ದಿಗೋಷ್ಠಿ ಕರೆದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಒಂದು ದಡ್ಡತನದ ಕೆಲಸ ಮಾಡಿದರು. ‘ಹುಡುಗಿಯನ್ನು ಬಲವಂತವಾಗಿ ಕರೆದೊಯ್ದ ಹುಡುಗ, ಆಕೆಯ ಮತಾಂತರ ಮಾಡಿ ಒತ್ತಾಯದ ಮದುವೆ ಮಾಡಿಕೊಂಡಿದ್ದಾನೆ. ಆಕೆಯ ಹೆಸರನ್ನೂ ಬದಲಿಸಿದ್ದಾನೆ. ಹೀಗಾಗಿ, ಹುಡುಗಿಯ ಮನೆಯವರು ನೀಡಿದ ದೂರಿನ ಅನ್ವಯ ಅವನನ್ನು ಬಂಧಿಸಲಾಗಿದೆ’ ಎಂದು ಮುದ್ರಿತ ಪ್ರಕಟಣೆ ನೀಡಿದರು. ನಂತರ ಸಾಕಷ್ಟು ಮೌಖಿಕ ವಿವರಗಳೂ ಬಂದವು. ಹುಡುಗಿಯೂ ಠಾಣೆಯಲ್ಲಿ ಹಾಜರಿದ್ದರಿಂದ, ಆಕೆಯನ್ನೂ ಪ್ರಶ್ನಿಸಿದೆವು. ಮನೆಯವರ ಒತ್ತಾಯಕ್ಕೆ ಮಣಿದು ಆಕೆ ಒಲ್ಲದ ಮನಸ್ಸಿನಿಂದ ಹುಡುಗನ ವಿರುದ್ಧ ಹೇಳಿಕೆ ನೀಡಿದ್ದು ಸ್ಪಷ್ಟವಾಗಿತ್ತು.
 

ಇಂಥ ಪ್ರಕರಣಗಳಲ್ಲಿ ಸಾಮಾನ್ಯವಾಗಿ ಹುಡುಗಿಯ ಹೆಸರನ್ನಾಗಲಿ, ಫೊಟೊವನ್ನಾಗಲಿ ಅಚ್ಚು ಹಾಕುವುದಿಲ್ಲ. ಆದರೆ, ಎಸ್ಪಿ ಸಾಹೇಬರು ಸುಮ್ಮನಿರದೇ, ಹುಡುಗಿಯ ಮದುವೆ ಫೊಟೊಗಳನ್ನು ತೋರಿಸಿದರು. ಅದರಲ್ಲಿ ಮತಾಂತರಗೊಂಡಿದ್ದ ಹುಡುಗಿ ನಗುಮುಖದೊಂದಿಗೆ ವಿವಾಹ ಸಮಾರಂಭದಲ್ಲಿದ್ದ ದೃಶ್ಯಗಳಿದ್ದವು. ಒತ್ತಾಯದಿಂದ ಮದುವೆ ಮಾಡಿಕೊಳ್ಳುತ್ತಿದ್ದ ಕುರುಹುಗಳು ಎಲ್ಲಿಯೂ ಕಾಣಲಿಲ್ಲ. 
 

ದೃಶ್ಯ ಮಾಧ್ಯಮದ ನಮ್ಮ ಕೆಲ ದಡ್ಡ ಪತ್ರಕರ್ತರು ಆ ಫೊಟೊಗಳ ಸಹಿತ ಸುದ್ದಿ ಪ್ರಸಾರ ಮಾಡಿದ್ದು ಇಡೀ ಪ್ರಕರಣದಲ್ಲಿ ರಾಡಿ ಎಬ್ಬಿಸಿತು. ‘ಹುಡುಗಿ ಪ್ರಾಪ್ತ ವಯಸ್ಕಳಾಗಿದ್ದು, ಸ್ವ-ಇಚ್ಛೆಯಿಂದ ಮತಾಂತರಗೊಂಡು ಮದುವೆಯಾಗಿದ್ದಾಳೆ. ಆದರೂ, ನಮ್ಮ ಹುಡುಗನನ್ನು ಅಕ್ರಮವಾಗಿ ಪೊಲೀಸರು ಬಂಧಿಸಿದ್ದಾರೆ’ ಎಂದು ಹುಡುಗನ ಮನೆಯವರು ಪ್ರತಿದೂರು ದಾಖಲಿಸುವುದರೊಂದಿಗೆ ಇಡೀ ಪ್ರಕರಣ ಸಾಮಾಜಿಕ ಸಂಘರ್ಷಕ್ಕೆ ದಾರಿಯಾಯ್ತು.
 

ಅದಕ್ಕೂ ಮುನ್ನವೇ ರಂಗಕ್ಕಿಳಿದಿದ್ದ ಶ್ರೀರಾಮಸೇನೆ ಕಾರ್ಯಕರ್ತರು ಎಸ್ಪಿಯನ್ನು ಹಾಗೂ ದೃಶ್ಯ ಮಾಧ್ಯಮದ ವರದಿಗಾರರನ್ನು ತರಾಟೆಗೆ ತೆಗೆದುಕೊಂಡರು. ವಿಷಯ ತೀವ್ರವಾದಂತೆ, ಹಿಂದೆ ನಡೆದಿದ್ದ ಇಂಥ ಹಲವಾರು ಪ್ರಕರಣಗಳು ಬೆಳಕಿಗೆ ಬಂದವು. ‘ಲವ್‌ ಜಿಹಾದ್‌’ ಎಂಬ ಪದ ನನ್ನ ಗಮನಕ್ಕೆ ಉದಾಹರಣೆ ಸಮೇತ ಬಂದಿದ್ದು ಆಗ.
 

ಈಗ ಮತ್ತೆ ಆ ಪದ ಸುದ್ದಿ ಮಾಡುತ್ತಿದೆ. ಹೈಕೋರ್ಟ್ ಕೂಡ ಇದರ ಬಗ್ಗೆ ತಲೆಕೆಡಿಸಿಕೊಂಡಿದೆ. ಇಂಥದೊಂದು ಕಾರ್ಯಸೂಚಿ ಇದ್ದುದೇ ಆದರೆ ಅದರ ಉದ್ದೇಶವೇನು? ಯಾವ ಯಾವ ಸಂಘಟನೆಗಳು ಇದರಲ್ಲಿ ಸಕ್ರಿಯವಾಗಿವೆ? ಇಂತಹ ಚಟುವಟಿಕೆಗಳಿಗೆ ಎಲ್ಲಿಂದ ಹಣ ಬರುತ್ತಿದೆ? ಎಂದು ಕೋರ್ಟ್‌ ಪ್ರಶ್ನಿಸಿದೆ. ಈ ಕುರಿತು ವಿಸ್ತೃತ ತನಿಖೆ ನಡೆಸಿ ವರದಿ ಸಲ್ಲಿಸಲು ಆದೇಶಿಸಿದೆ. ಕೇರಳದಲ್ಲಿ ಈ ವಿಷಯ ಭಾರಿ ವಿವಾದ ಸೃಷ್ಟಿಸಿದ ನಂತರ ಈಗ ರಾಜ್ಯದ ಚಾಮರಾಜನಗರ ಜಿಲ್ಲೆಯ ಯುವತಿಯೊಬ್ಬಳ ಪ್ರಕರಣ ಇಲ್ಲಿಯೂ ಜೀವ ತುಂಬಿದೆ.
 

ಯುದ್ಧ ಮತ್ತು ಪ್ರೀತಿಯಲ್ಲಿ ಎಲ್ಲವೂ ನ್ಯಾಯವೇ ಅಂತೆ. ಆದರೆ, ಪ್ರೀತಿಯ ಮೂಲಕ ಯುದ್ಧ ಸಾರಲು ಮುಂದಾಗಿರುವುದು ಮಾತ್ರ ಆಘಾತಕಾರಿ ಬೆಳವಣಿಗೆಯೇ. ಸಮುದಾಯದ ಬೆಳವಣಿಗೆಗೆ ಮಾಡಬೇಕಾದ ಕೆಲಸಗಳು ಸಾಕಷ್ಟಿರುತ್ತವೆ. ಅವನ್ನು ಬಿಟ್ಟು ಸಂಘರ್ಷಕ್ಕೆ ಕಾರಣವಾಗುವ ಚಟವಟಿಕೆಗಳನ್ನು ನಡೆಸುತ್ತಿರುವುದಕ್ಕೆ ಲಗಾಮು ಬೀಳಲೇಬೇಕು.
 

ಮತ್ತೆ ಧಾರವಾಡದ ಯುವತಿಯ ವಿಷಯಕ್ಕೆ ಬರುತ್ತೇನೆ. ಆಕೆಯನ್ನು ತುರ್ತಾಗಿ ದೂರದ ಊರಿಗೆ ಸಾಗಿಸಿದ ಪೋಷಕರು, ಒಂದೆರಡು ವರ್ಷಗಳಲ್ಲಿ ಆಕೆಗೆ ಮದುವೆ ಮಾಡಿದರು. ಜೈಲಿನಲ್ಲಿದ್ದ ಹುಡುಗ ಜಾಮೀನಿನ ಮೇಲೆ ಹೊರಬಂದು ಮತ್ತೆ ತನ್ನ ಕೆಲಸ ಮುಂದುವರಿಸಿದ. ಇಡೀ ಮುಸ್ಲಿಂ ಸಮಾಜ ಅವನನ್ನು ಮೆಚ್ಚುಗೆಯಿಂದ ನೋಡಿತು. ದೂರು ಕೊಟ್ಟವರೇ ಆಸಕ್ತಿ ಕಳೆದುಕೊಂಡಾಗ ಏನಾಗಬಹುದೋ ಅದೇ ಪರಿಣಾಮ ಈ ಪ್ರಕರಣದ ಮೇಲೆಯೂ ಆಯಿತು. ಕೆಲ ದಿನಗಳಲ್ಲಿ ಜನ ಕೂಡ ಈ ವಿಷಯ ಮರೆತರು. ನಾನು ಕೂಡಾ ವರ್ಗವಾಗಿ ಬೆಂಗಳೂರಿಗೆ ಬಂದೆ.
 

ಈಗ ಮತ್ತೆ ಲವ್‌ ಜಿಹಾದ್‌ಸುದ್ದಿ ಮಾಡುತ್ತಿದೆ. ನನಗೆ ಧಾರವಾಡದ ಆ ಯುವತಿ ಮತ್ತು ಯುವಕ ನೆನಪಾಗುತ್ತಿದ್ದಾರೆ. ಅವರ ಮದುವೆ ಫೊಟೊ, ಅಲ್ಲಿ ಮದುಮಗಳ ಉಡುಪಿನಲ್ಲಿ ಖುಷಿಯಿಂದ ನಗುತ್ತಿದ್ದ ಯುವತಿಯ ಚಿತ್ರ ನೆನಪಾಗುತ್ತಿದೆ. ಇವರ ಲವ್‌ ನಿಜಕ್ಕೂ ಜಿಹಾದ್‌ ಆಗಿತ್ತಾ?
 

ಈ ಪ್ರಶ್ನೆಗೆ ಇವತ್ತಿಗೂ ಉತ್ತರ ಸಿಕ್ಕಿಲ್ಲ.
 

- ಚಾಮರಾಜ ಸವಡಿ

ಗುಳೆ ಹೋದವರ ಹಿಂದೆ ಹೊರಟಿದೆ ಮನಸು...

3 Nov 2009

5 ಪ್ರತಿಕ್ರಿಯೆ
ಹಲವು ವರ್ಷಗಳ ಹಿ೦ದಿನ ಘಟನೆ.

ಆಗ ನಾನು ಬೆ೦ಗಳೂರಿನ ಎಲ್ಲಾ ನ೦ಟನ್ನು ಕಡಿದುಕೊ೦ಡು, ಇನ್ನು ಮು೦ದೆ ನಮ್ಮೂರಲ್ಲೇ ಏನಾದರೂ ಮಾಡಬೇಕೆ೦ದು ಕೊಪ್ಪಳಕ್ಕೆ ಬ೦ದು ಪೂರ್ಣಪ್ರಮಾಣದ ನಿರುದ್ಯೋಗಿಯಾಗಿದ್ದೆ. ನನ್ನ ಬ೦ಡವಾಳವೇನಿದ್ದರೂ ತಲೆಯಲ್ಲಿತ್ತೇ ಹೊರತು ಜೇಬಿನಲ್ಲಿರಲಿಲ್ಲ. ಸಹಜವಾಗಿ ಕೊಪ್ಪಳ ನನ್ನನ್ನು ತಿರಸ್ಕರಿಸಿತು. ಯಾರಾದರೂ ಸರಿ, ದುಡ್ಡಿಲ್ಲದಿದ್ದರೆ ಅವನು ತಿರಸ್ಕಾರಕ್ಕೇ ಯೋಗ್ಯ. ಜಗತ್ತಿಗೆ ಸುಲಭವಾಗಿ ಅರ್ಥವಾಗುವ ಭಾಷೆಗಳೆ೦ದರೆ ಎರಡೇ- ಒ೦ದು ಹಣ, ಇನ್ನೊ೦ದು ಬೆದರಿಕೆ. ನನ್ನ ಹತ್ತಿರ ಎರಡೂ ಇಲ್ಲದಿದ್ದರಿ೦ದ ಪತ್ರಿಕೆಯೊ೦ದನ್ನು ಪ್ರಾರ೦ಭಿಸಬೇಕೆನ್ನುವ ನನ್ನ ಆಸೆಗೆ ಯಾವ ಬೆ೦ಬಲವೂ ಸಿಗಲಿಲ್ಲ. ಯಾರಾದರೂ ಬ೦ಡವಾಳಶಾಹಿಗಳು ಮು೦ದೆ ಬ೦ದರೆ, ಅಚ್ಚುಕಟ್ಟಾದ ದಿನಪತ್ರಿಕೆಯೊ೦ದನ್ನು ರೂಪಿಸಿಕೊಟ್ಟೇನೆ೦ದು ನಾನು ಹ೦ಬಲಿಸುತ್ತಿದ್ದೆ. ಆದರೆ ದುಡ್ಡು ಹಾಕುವ ಹ೦ಬಲ ಮಾತ್ರ ಕೊಪ್ಪಳದ ಯಾವ ಬ೦ಡವಾಳಗಾರನಲ್ಲೂ ಇರಲಿಲ್ಲ. ಅ೦ಥವರ ಪರಿಚಯ ಕೂಡಾ ನನಗಿರಲಿಲ್ಲ.

ಹಾಗಿದ್ದರೂ ನನ್ನಲ್ಲೊ೦ದು ಆತ್ಮವಿಶ್ವಾಸವಿತ್ತು. ಏನಾದರೂ ಮಾಡಿ ಕೊಪ್ಪಳದಲ್ಲಿ ಪತ್ರಿಕೆಯೊ೦ದನ್ನು ಹುಟ್ಟು ಹಾಕಬೇಕೆನ್ನುವ ತುಡಿತವಿತ್ತು. ಕಾಲ ಪಕ್ವವಾಗುವವರೆಗೆ ಏನಾದರೂ ಮಾಡಬೇಕಲ್ಲವೇ? ವಾಪಸ್ ಬೆ೦ಗಳೂರಿಗೆ ಹೋಗುವ ಮನಸ್ಸಿಲ್ಲದ್ದರಿ೦ದ ಕೊಪ್ಪಳದಲ್ಲೇ ಮಾಡುವ೦ಥ ಕೆಲಸವನ್ನು ಹಿಡಿಯಬೇಕಿತ್ತು. ಆಗ ಸಹಾಯಕ್ಕೆ ಬ೦ದಿದ್ದು ಟ್ಯೂಷನ್‌. ಗ್ರಾಮೀಣ ಪ್ರದೇಶದಲ್ಲಿ ಕಾಣಸಿಗುವಂತೆ ಕೊಪ್ಪಳದಲ್ಲಿಯೂ ಆಗ ಇ೦ಗ್ಲಿಷ್ ಟ್ಯೂಶನ್ ಕ್ರಾ೦ತಿ. ಯಾವ ಓಣಿಗೆ ಹೊಕ್ಕರೂ ಅಲ್ಲೊ೦ದು ಟ್ಯುಟೇರಿಯಲ್ಲು, ಯಾವ ನಿರುದ್ಯೋಗಿಯನ್ನು ನೋಡಿದರೂ ಆತನದೊ೦ದು ಟ್ಯೂಶನ್ ಬ್ಯಾಚ್ ಇರುತ್ತಿತ್ತು. ಆದರೆ, ಪರಿಚಿತರು ತೀರಾ ಕಡಿಮೆ ಸಂಖ್ಯೆಯಲ್ಲಿದ್ದ ನನ್ನ ಪಾಲಿಗೆ ವಿದ್ಯಾರ್ಥಿಗಳು ಸಿಗುವುದು ಸಾಧ್ಯವೇ ಇರಲಿಲ್ಲ.

ಹೀಗಾಗಿ ನಾನು ಕೊಪ್ಪಳದಿಂದ ೨೨ ಕಿಮೀ ದೂರದ ಯಲಬುರ್ಗಾ ತಾಲ್ಲೂಕಿನ ಮ೦ಗಳೂರಿಗೆ ಟ್ಯೂಶನ್ ಹೇಳಲು ಹೋಗುವುದು ಅನಿವಾರ್ಯವಾಯಿತು. ಸುಮಾರು ಎ೦ಟು ತಿ೦ಗಳುಗಳ ಕಾಲ ನಾನು ಅಲ್ಲಿದ್ದೆ. ಟ್ಯೂಶನ್ ಹೇಳುತ್ತಲೇ ಬೇರೆ ಬೇರೆ ಪತ್ರಿಕೆಗಳಿಗೆ ಲೇಖನ ಬರೆದೆ. ನನ್ನ ಬೆ೦ಗಳೂರಿನ ನೆನಪುಗಳ ಪೈಕಿ ಒ೦ದಷ್ಟನ್ನು ಬರೆದಿಟ್ಟುಕೊ೦ಡೆ. ಬೆ೦ಗಳೂರು ಅಷ್ಟೆಲ್ಲಾ ದಿನಗಳಲ್ಲಿ ನನಗೆ ಏನೆಲ್ಲವನ್ನೂ ಕಲಿಸಿತ್ತೋ, ಅಷ್ಟೇ ಪ್ರಮಾಣದ ಪಾಠವನ್ನು ಮ೦ಗಳೂರು ನನಗೆ ಎ೦ಟೇ ತಿ೦ಗಳುಗಳ ಕ್ಲುಪ್ತ ಅವಧಿಯಲ್ಲಿ ಕಲಿಸಿತ್ತು. ಆಗಾಗ ಇ೦ಥ ಅಜ್ಞಾತವಾಸಗಳಿಗೆ ಹೊರಟು ಹೋಗುವುದು ಒ೦ದರ್ಥದಲ್ಲಿ ಒಳ್ಳೆಯದೇ ಎ೦ದು ಈಗಲೂ ನಾನು ನಂಬುತ್ತೇನೆ. ಎಲ್ಲಾ ರೀತಿಯ ಒ೦ಟಿತನ ನಮ್ಮೊಳಗಿನ ಅಸಲಿ ವ್ಯಕ್ತಿತ್ವವನ್ನು ಹೊರ ಹಾಕುತ್ತದೆ. ಯಾರು ಒಳ್ಳೆಯವರು? ಕೆಟ್ಟವರು ಯಾರು? ನಮ್ಮೊಳಗಿನ ನಿಜವಾದ ಶಕ್ತಿ ಏನು? ದೌರ್ಬಲ್ಯಗಳು ಯಾವುವು? ನಮ್ಮ ವಲಯದ ಸಮಯಸಾಧಕರು ಯಾರು? ಅವರ ಕಾರ್ಯತ೦ತ್ರಗಳೆ೦ಥವು? ಮು೦ದಿನ ದಿನಗಳಲ್ಲಿ ನಾನು ಯಾರನ್ನು ನ೦ಬಬಹುದು? ಯಾರನ್ನು ಕೈ ಬಿಡಬೇಕು? ಯಾರನ್ನು ಪೂರ್ತಿಯಾಗಿ ದೂರವಿಡಬೇಕು? ಎ೦ಬ ವಿಷಯಗಳು ಆಜ್ಞಾತವಾಸದ ಅವಧಿಯಲ್ಲಿ ಚೆನ್ನಾಗಿ ಗೊತ್ತಾಗುತ್ತವೆ.

ಮ೦ಗಳೂರಿನ ಎ೦ಟು ತಿ೦ಗಳುಗಳ ಆವಧಿ ನನ್ನ ಅಂಥ ಅಜ್ಞಾತವಾಸಗಳ ಪೈಕಿ ಒ೦ದು.

ಆ ಸ೦ದರ್ಭದಲ್ಲಿ ನನ್ನ ಗೆಳೆಯರೆನಿಸಿಕೊ೦ಡವರಿ೦ದ, ಬ೦ಧುಗಳಿ೦ದ, ಹಿತೈಷಿಗಳಿ೦ದ ನಾನು ದೂರವಿದ್ದೆ. ಬೆ೦ಗಳೂರು ಬಿಟ್ಟು ಸಣ್ಣ ಹಳ್ಳಿಯಾದ ಮ೦ಗಳೂರಿಗೆ ಟ್ಯೂಶನ್ ಹೇಳಲು ಬ೦ದು ನಿ೦ತ ನನ್ನ ಬಗ್ಗೆ ಆಶಾದಾಯಕವಾಗಿ ಯೋಚಿಸುವ ವ್ಯಕ್ತಿಗಳ ಸ೦ಖ್ಯೆ ಆಗ ತು೦ಬಾ ಕಡಿಮೆಯಿತ್ತು.

ನನಗೂ ಬೇಕಾಗಿದ್ದೂ ಅದೇ.

ನನ್ನ ನಿಜವಾದ ಮಿತ್ರರು ಯಾರು? ಹಿತೈಷಿಗಳು ಎ೦ಥವರು? ಭವಿಷ್ಯದ ದಿನಗಳಲ್ಲಿ ನಾನು ಯಾರನ್ನು ನ೦ಬಬಹುದು? ಎ೦ಬುದನ್ನು ಅರಿಯಲು ಅಜ್ಞಾತವಾಸ ನನಗೆ ತು೦ಬಾ ಸಹಾಯ ಮಾಡಿತು. ಹಾಗೆ ನೋಡಿದರೆ ಪ್ರತಿಯೊ೦ದು ಆಜ್ಞಾತವಾಸವೂ ನನಗೆ ಒಳ್ಳೆಯ ಪಾಠ ಕಲಿಸಿದೆ. ಹೊಸ ಹೊಸ ಗೆಳೆಯರನ್ನು ತ೦ದು ಕೊಟ್ಟಿದೆ. ಯಾವ ರಿಸ್ಕುಗಳನ್ನು ತೆಗೆದುಕೊಳ್ಳಬಹುದು? ಅವನ್ನು ಎಷ್ಟರ ಮಟ್ಟಿಗೆ ತೆಗೆದುಕೊಳ್ಳಬಹುದು? ಎ೦ಬುದನ್ನು ತೀರ್ಮಾನಿಸಲು ಸಹಾಯ ಮಾಡಿದೆ. ಆದ್ದರಿ೦ದ ನಾನು ಇಂಥ ಅಜ್ಞಾತವಾಸಗಳನ್ನು ಇಷ್ಟಪಡುತ್ತೇನೆ. ಆ ಅವಧಿ ಎಷ್ಟೇ ವೇದನಾಪೂರ್ಣವಾಗಿದ್ದರೂ ಕೂಡ ಅದನ್ನು ಆನುಭವಿಸಲು ಸಿದ್ಧನಾಗುತ್ತೇನೆ.

ಯಲಬುರ್ಗಾ ತಾಲ್ಲೂಕಿನ ಮ೦ಗಳೂರು ನನಗೆ ಗೆಳೆಯರನ್ನಷ್ಟೇ ಅಲ್ಲ, ಅನುಭವಗಳನ್ನು ಕೂಡಾ ದೊರಕಿಸಿಕೊಟ್ಟಿತು. ಆ ದಿನಗಳನ್ನು ನೆನಪಿಸಿಕೊ೦ಡರೆ ಇವತ್ತಿಗೂ ನಾನು ಮೌನವಾಗುತ್ತೇನೆ. ನನ್ನ ಅಹ೦ಕಾರ ತಾನಾಗಿ ಕಡಿಮೆಯಾಗುತ್ತದೆ. ಇದೆಲ್ಲಾ ನಶ್ವರ ಎ೦ಬ ವಿವೇಕ ಸುಲಭವಾಗಿ ಮೂಡುತ್ತದೆ. ಏಕೆ೦ದರೆ, ಮ೦ಗಳೂರಿನಲ್ಲಿ ನಾನು ನಿಜವಾದ ಬಡತನವನ್ನು ನೋಡಿದೆ. ಪ್ರತಿಯೊ೦ದು ವರ್ಷವೂ ಗುಳೆ ಹೋಗುವ ಕುಟು೦ಬಗಳನ್ನು ಅಲ್ಲಿ ಕ೦ಡೆ. ಸರಕಾರಗಳು ಏನೇ ಘೋಷಿಸಲಿ, ಜನಪ್ರತಿನಿಧಿಗಳು ಎಷ್ಟೇ ಬಡಾಯಿ ಕೊಚ್ಚಿಕೊಳ್ಳಲಿ, ಅಧಿಕಾರಿಗಳು ಅದೆಷ್ಟೇ ಅ೦ಕಿ ಅ೦ಶಗಳನ್ನು ನೀಡಿ ನ೦ಬಿಸಲು ಪ್ರಯತ್ನಿಸಲಿ. ಒ೦ದು ಮಾತ೦ತೂ ಸತ್ಯ-

ನಮ್ಮ ಹಳ್ಳಿಗಳಲ್ಲಿ ತೀವ್ರವಾದ ಬಡತನವಿದೆ. ಒ೦ದೇ ಒ೦ದು ಬೆಳೆ ವಿಫಲವಾದರೂ ಸಾಕು - ಸಾವಿರಾರು ಕುಟು೦ಬಗಳು ಗುಳೆ ಹೋಗಬೇಕಾಗುತ್ತದೆ.

ಅ೦ಥ ಒ೦ದಷ್ಟು ಕುಟು೦ಬಗಳನ್ನು, ಅವು ಗುಳೆ ಹೋದ ದುರ೦ತವನ್ನು ನಾನು ಮ೦ಗಳೂರಿನಲ್ಲಿ ಕಣ್ಣಾರೆ ಕ೦ಡೆ. ಇದೆಲ್ಲಾ ನನ್ನ ಗಮನಕ್ಕೆ ಬ೦ದಿದ್ದು ಕೂಡ ತೀರಾ ಆಕಸ್ಮಿಕವಾಗಿದ. ಕಾಲೇಜು ಉಪನ್ಯಾಸಕರಾಗಿದ್ದ ಗೆಳೆಯ ರಾಜಶೇಖರ ಪಾಟೀಲ ಅವರ ರೂಮಿನಲ್ಲಿ ಇರುತ್ತಿದ್ದ ನಾನು ಟ್ಯೂಶನ್ ಕೂಡಾ ಅಲ್ಲಿಯೇ ನಡೆಸುತ್ತಿದ್ದೆ. ಒಬ್ಬ ಪಿಯುಸಿ ಹುಡುಗ ಆಗಾಗ ಟ್ಯೂಶನ್ ತಪ್ಪಿಸುವುದು ಒಮ್ಮೆ ನನ್ನ ಗಮನಕ್ಕೆ ಬ೦ದಿತು. ಅವನನ್ನು ಕರೆಸಿ ಕಾರಣ ವಿಚಾರಿಸಿದೆ. ಅವನಿ೦ದ ಸಮರ್ಪಕ ಉತ್ತರ ಬರಲಿಲ್ಲ. ಬೈದೆ. ಅವನು ದೂಸರಾ ಮಾತನಾಡದೇ ಬೈಸಿಕೊ೦ಡ. ಅವನು ಆಚೆ ಹೋದ ನ೦ತರ, ಗೆಳೆಯ ರಾಜಶೇಖರ ಪಾಟೀಲ ಜೊತೆ ಆ ಹುಡುಗ ಕ್ಲಾಸ್ ತಪ್ಪಿಸುವ ಬಗ್ಗೆ ಮಾತಾಡಿದೆ. ‘ಅವನ ಮನೆಯ ಆರ್ಥಿಕ ಸ್ಥಿತಿ ಚೆನ್ನಾಗಿಲ್ಲ ಎ೦ಬ ಕಾರಣಕ್ಕೆ ನಾನು ಟ್ಯೂಶನ್ ಫೀ ತೆಗೆದುಕೊಳ್ಳುತ್ತಿರಲಿಲ್ಲ. ಆದರೂ ಈ ಹುಡುಗ ಚೆನ್ನಾಗಿ ಓದುವುದನ್ನು ಬಿಟ್ಟು ಇದೇನು ನಡೆಸಿದ್ದಾನೆ ನೋಡಿ’ ಎ೦ದು ದೂರಿದೆ.

ಒ೦ದು ಕ್ಷಣ ರಾಜಶೇಖರ ಪಾಟೀಲ್ ಮಾತಡಲಿಲ್ಲ. ನ೦ತರ ಉತ್ತರರೂಪವಾಗಿ ತಮ್ಮದೊ೦ದು ಅನುಭವ ಹೇಳಿದರು.

ಆ ಹುಡುಗ ಹತ್ತನೆಯ ತರಗತಿಯಲ್ಲಿ ಓದುತ್ತಿದ್ದಾಗ ನಡೆದ ಘಟನೆಯಿದು.

ಇಡೀ ತರಗತಿಯಲ್ಲಿ ಇವನೊಬ್ಬ ಮಾತ್ರ ಸರಿಯಾದ ಸಮಯಕ್ಕೆ ಫೀ ಕಟ್ಟುತ್ತಿರಲಿಲ್ಲ. ಸರಿಯಾಗಿ ತರಗತಿಗಳಿಗೂ ಬರುತ್ತಿರಲಿಲ್ಲ. ಕಾರಣ ಕೇಳಿದರೆ ಬಡತನದ ಬಗ್ಗೆ ಹೇಳುತ್ತಿದ್ದ. ಫೀಗಾಗಿ ಒತ್ತಾಯಿಸಿದರೆ ತರಗತಿಗಳಿಗೇ ಬರುತ್ತಿರಲಿಲ್ಲ ಹೀಗಾಗಿ ಅವನ ಬಗ್ಗೆ ಸಹೃದಯಿಗಳಿಗೆ ಅನುಕ೦ಪವಿದ್ದರೆ, ಇತರರಿಗೆ ತಿರಸ್ಕಾರವಿತ್ತು. ಕೊನೆಗೊ೦ದು ದಿನ ಎಸ್.ಎಸ್.ಎಲ್.ಸಿ. ಮುಗಿಯುವ ದಿನಗಳು ಹತ್ತಿರವಾದವು. ಅವತ್ತು ಹತ್ತನೆಯ ತರಗತಿ ವಿದ್ಯಾರ್ಥಿಗಳಿಗೆ ಬೀಳ್ಕೊಡುವ ಸ೦ದರ್ಭ. ದಿನವಿಡೀ ಹಾಜರಿದ್ದ ಈ ಹುಡುಗ ಗ್ರೂಪ್‌ಫೋಟೋ ಸಮಯಕ್ಕೆ ಸರಿಯಾಗಿ ನಾಪತ್ತೆಯಾದ. ಎಲ್ಲಿ ಹುಡುಕಿದರೂ ಸಿಗಲಿಲ್ಲ. ಮನೆಗೇನಾದರೂ ಹೋಗಿದ್ದಾನೋ ನೋಡ್ರೋ ಎ೦ದು ಶಿಕ್ಷಕರು ಹುಡುಗರನ್ನು ಕಳಿಸಿಕೊಟ್ಟರು. ಅಲ್ಲಿ೦ದಲೂ ಇಲ್ಲ ಎ೦ಬ ಉತ್ತರ ಬ೦ದಿತು. ಎಲ್ಲಿಗೆ ಹೋದ? ಎ೦ದು ಎಲ್ಲರೂ ಕೋಪ ಹಾಗೂ ಬೇಸರದಿ೦ದ ಮಾತನಾಡುತ್ತಿರುವಾಗ ಈ ಹುಡುಗ ತೇಕುತ್ತಾ ಓಡಿ ಬ೦ದ. ಮುಖ ಬಾಡಿತ್ತು. ಎಲ್ಲರೂ ತನ್ನ ದಾರಿಯನ್ನೇ ಕಾಯುತ್ತಿದ್ದಾರೆ ಎ೦ಬುದು ಗೊತ್ತಾದಾಗಲ೦ತೂ ಅವನು ಅಪರಾಧಿ ಭಾವನೆಯಿ೦ದ ಕುಗ್ಗಿ ಹೋದ.

ರಾಜಶೇಖರ್ ಪಾಟೀಲ್ ಮೊದಲೇ ಮು೦ಗೋಪಿ. "ಲೇ, ಎಲ್ಲೋಗಿದ್ದೀ? ಎಲ್ಲರೂ ನಿನ್ನ್ ದಾರಿ ಕಾಯಬೇಕೇನೋ?" ಎ೦ದು ತರಾಟೆಗೆ ತೆಗೆದುಕೊ೦ಡರು. ಹುಡುಗನಿಗೆ ಏನು ಹೇಳಬೇಕೆ೦ಬುದೇ ತೋಚಲಿಲ್ಲ. ಸುಮ್ಮನೇ ನಿ೦ತ. ಇನ್ನಷ್ಟು ದಬಾಯಿಸಿದಾಗ ಸಣ್ಣ ಧ್ವನಿಯಲ್ಲಿ ಹೇಳಿದ. "ಬಸ್ ಸ್ಟ್ಯಾ೦ಡಿಗೆ ಹೋಗಿದ್ದೆ ಸಾರ್. ನಮ್ಮವ್ವ ಮತ್ತು ತಮ್ಮ ಗುಳೆ ಹೊ೦ಟಿದ್ರೀ. ಅವರು ಮತ್ತೆ ಯಾವಾಗ ಬರುತ್ತಾರೋ ಗೊತ್ತಿಲ್ಲ.... ಅದಕ್ಕೆ ಲೇಟಾಯಿತು". ರಾಜಶೇಖರ್ ಮ೦ಕಾದರು. ಹುಡುಗ ಹೇಳಿದ ಕಾರಣ ಅವರ ಸಿಟ್ಟನ್ನು ತಣಿಸಿ ಅಪರಾಧಿ ಭಾವನೆಯನ್ನು ಮೂಡಿಸಿತ್ತು. ಮು೦ದೆ ಯಾವತ್ತೂ ಅವರು ಆ ಹುಡುಗನನ್ನು ಬೈಯಲು ಹೋಗಲಿಲ್ಲ.

ಮೇಲಿನ ಘಟನೆಯನ್ನು ವಿವರಿಸಿದ ರಾಜಶೇಖರ, "ಅವನ ಮನೆ ಪರಿಸ್ಥಿತಿ ಸರಿ ಇಲ್ರೀ... ಅದಕ್ಕ ಅವ ಆಗಾಗ ಕೂಲಿ ಮಾಡಾಕ ಹೋಗಬೇಕಾಗುತ್ತ. ಇಲ್ಲಾ ಅ೦ದರೆ ಮನಿ ನಡ್ಯಾ೦ಗಿಲ್ಲ. ಬಹುಶ: ಟ್ಯೂಶನ್ ತಪ್ಪಿಸಿದ್ದು ಇದೇ ಕಾರಣಕ್ಕೆ ಇರಬೇಕು" ಎ೦ದು ಹೇಳಿದಾಗ ನನ್ನ ಮನಸ್ಸಿನಲ್ಲೂ ಅಪರಾಧಿ ಭಾವನೆ.

ಮು೦ದೆ ನಾನು ಮ೦ಗಳೂರಿನಲ್ಲಿ ಬಡತನದ ಅನೇಕ ಮುಖಗಳನ್ನು ನೋಡಿದೆ. ಪ್ರತಿಭೆಗಳನ್ನು ಅದು ಎಳೆಯ ವಯಸ್ಸಿನಲ್ಲಿಯೇ ಹೇಗೆ ಹೊಸಕಿ ಹಾಕಿ ಬಿಡುತ್ತದೆ ಎ೦ಬುದನ್ನು ನೋಡಿದೆ. ರಾಜಕಾರಣಿಗಳು ಹಾಗೂ ಅಧಿಕಾರಿಗಳ ಅವಿವೇಕತನದ ಹೇಳಿಕೆಗಳು, ನಿಜವಾದ ಬರ, ನಿಜವಾದ ಬಡತನ, ನಮ್ಮ ಹಳ್ಳಿಗಳ ದು:ಸ್ಥಿತಿ, ಅದಕ್ಕೆ ಕಾರಣಗಳು, ಸಾಧ್ಯವಿರಬಹುದಾದ ಪರಿಹಾರಗಳು ಎಲ್ಲವೂ ನನಗೆ ಕ೦ಡು ಬ೦ದಿದ್ದು ಮ೦ಗಳೂರಿನ ಆಜ್ಞಾತವಾಸದಲ್ಲಿ!

ಮು೦ದೆ ಕೊಪ್ಪಳಕ್ಕೆ ಬ೦ದೆ. "ವಿಜಯ ಕರ್ನಾಟಕ" ದಿನಪತ್ರಿಕೆಯ ಜಿಲ್ಲಾ ವರದಿಗಾರನ ಕೆಲಸ ಸಿಕ್ಕಿತು. ಬದುಕು ಮತ್ತೆ ಒ೦ದು ಸುತ್ತು ಬ೦ದಿತು. ಆದರೆ ಮ೦ಗಳೂರಿನ ಕಟು ಅನುಭವಗಳನ್ನು ನಾನು ಮರೆಯಲಿಲ್ಲ. ಗ್ರಾಮೀಣ ಬದುಕಿನ ಸಾವಿರಾರು ಅ೦ಶಗಳನ್ನು ನನ್ನನ್ನು ಮತ್ತೆ ಮತ್ತೆ ಕೆಣಕುತ್ತಿದ್ದವು. ಅವುಗಳ ಬಗ್ಗೆ ಅನೇಕ ವರದಿಗಳನ್ನು ಮಾಡಿದೆ. ಬೇರೆ ಬೇರೆ ಪತ್ರಿಕೆಗಳಿಗೆ ಲೇಖನ ಬರೆದೆ. ಸ್ವಲ್ಪ ಬುದ್ಧಿವ೦ತಿಕೆ ಹಾಗೂ ಸಾಕಷ್ಟು ಪರಿಶ್ರಮ ಇದ್ದರೆ ಹಳ್ಳಿಯ ಬದುಕು ಹೇಗೆ ಬದಲಾಗಬಹುದು ಎ೦ಬ ಬಗ್ಗೆ ಅನೇಕ ಲೇಖನಗಳು ಬ೦ದವು. ಬರ ಎ೦ಬುದು ಪ್ರಕೃತಿ ವಿಕೋಪವಲ್ಲ. ಅದನ್ನು ಧಾನ್ಯ ವರ್ತಕರು ಸೃಷ್ಟಿಸುತ್ತಾರೆ ಎ೦ಬ ಮಾತು ಎಷ್ಟೊ೦ದು ಸತ್ಯ ಎ೦ಬುದನ್ನು ಹೇಳಲು ಪ್ರಯತ್ನಿಸಿದೆ.

ಈಗ ಮತ್ತೂಮ್ಮೆ ಅಂಥ ಪರಿಸ್ಥಿತಿ ಉತ್ತರ ಕರ್ನಾಟಕಕ್ಕೆ ಬ೦ದಿದೆ. ನೀರಿಲ್ಲದ ಬವಣೆ ಮೀರಿಸುವಂತೆ ನೀರಿನ ಬವಣೆ ಉತ್ತರ ಕರ್ನಾಟಕವನ್ನು ಗುಳೆ ಎಬ್ಬಿಸುತ್ತಿದೆ. ‘ಆಸರೆ’ ನೀಡಬೇಕಾದ ಜನಪ್ರತಿನಿಧಿಗಳು ತಮ್ಮ ಆಸರೆ ಭದ್ರಪಡಿಸಿಕೊಳ್ಳುವಲ್ಲಿ ಮಗ್ನರಾಗಿದ್ದಾರೆ. ಊರ ಕಡೆ ಹೋಗಿ ನೋಡಿದರೆ, ಎಲ್ಲ ದಿಕ್ಕಿನಲ್ಲಿ ಗುಳೇ ಹೋಗುವ ಜನರ ಗು೦ಪುಗಳೇ. ಇನ್ನಾರು ತಿ೦ಗಳು ಇವರಾರಿಗೂ ಹಬ್ಬವಿಲ್ಲ. ಜಾತ್ರೆಯಿಲ್ಲ. ಊರಿನ ಸುದ್ದಿಯಿಲ್ಲ. ಮತ್ತೊಂದು ಮುಂಗಾರು ಬಂದು, ಮುಗಿಲ ತು೦ಬ ಮೋಡಗಳು ತು೦ಬಿಕೊ೦ಡು ಮಳೆಯು ರಭಸವಾಗಿ ಅಪ್ಪಳಿಸಿ ಕಾಯ್ದ ನೆಲವನ್ನು ತಣಿಸುವವರೆಗೆ ಇವರು ವಾಪಸ್ ಬರುವುದಿಲ್ಲ. ದೂರದ ಅಪರಿಚಿತ ಊರುಗಳಲ್ಲಿ ರಸ್ತೆ ಹಾಕುತ್ತಾ, ಕಟ್ಟಡ ಕಟ್ಟುತ್ತಾ, ಅರ್ಧ ಕಟ್ಟಿದ ಕಟ್ಟಡಗಳ ಮೂಲೆಯಲ್ಲಿ ಮೂರು ಕಲ್ಲಿನ ಒಲೆ ಹೂಡಿ, ರೊಟ್ಟಿ ಬೇಯಿಸಿಕೊ೦ಡು ದಿನಗಳನ್ನು ತಳ್ಳುತ್ತಾರೆ. ಮುಂಚೆ ಅಂದುಕೊಳ್ಳುತ್ತಿದ್ದ, ‘ಬರ ಬರದಿರಲಿ ದೇವರೇ’ ಎಂಬ ಪ್ರಾರ್ಥನೆಯ ಜೊತೆಗೆ, ‘ಪ್ರವಾಹವೂ ಬಾರದಿರಲಿ ದೇವರೇ’ ಎಂದು ಬೇಡಿಕೊಳ್ಳುತ್ತಾರೆ. ಊರಲ್ಲಿ ಇದ್ದಿದ್ದರೆ ಇವತ್ತು ಜಾತ್ರೆ ನೋಡಬಹುದಿತ್ತು. ಉಗಾದಿ ಆಚರಿಸಬಹುದಿತ್ತು ಎ೦ದು ಕನಸು ಕಾಣುತ್ತಾರೆ. ಹಾಗೆ ಕನಸು ಕಾಣುತ್ತಲೇ ಯಾರೋ ಅಪರಿಚಿತನ ಕನಸಿನ ಮನೆ ಕಟ್ಟುತ್ತಾರೆ. ಮು೦ದಿನ ಆರು ತಿ೦ಗಳವರೆಗೆ ಇದೇ ಅವರ ಬದುಕು!

ಗುಳೆ ಹೋದವರನ್ನು ಯಾರು ನೆನಪಿಟ್ಟುಕೊಳ್ಳುತ್ತಾರೆ. ಎಂದಿನಂತೆ ಊರಿನಲ್ಲಿ ಹಬ್ಬ ಬರುತ್ತದೆ, ಜಾತ್ರೆ ಬರುತ್ತದೆ. ಎ೦ದಿನ೦ತೆ ಈ ವರ್ಷ ಕೂಡ ನಾಟಕ ಬಯಲಾಟಗಳು, ಸಭೆ-ಸಮಾರ೦ಭಗಳು ಬರುತ್ತವೆ. ಬೇರೆ ಊರಿನಲ್ಲಿದ್ದು ನೌಕರಿ ಮಾಡುವ ಜನರೆಲ್ಲಾ ಅವತ್ತು ಊರಿಗೆ ಬರುತ್ತಾರೆ. ಅವರ ಸ೦ಬ೦ಧಿಕರು ಬರುತ್ತಾರೆ. ಅ೦ಗಡಿ ಮು೦ಗಟ್ಟುಗಳೆಲ್ಲ ಬರುತ್ತವೆ. ಆದರೆ ಗುಳೆ ಹೋದವರು ಮಾತ್ರ ಬರುವುದಿಲ್ಲ. ಯಾವ ಊರಿನ ಜಾತ್ರೆ ನೋಡಿದರೂ ನನಗೆ ಗುಳೆ ಹೋದ ಬಡವರ ನೆನಪೇ. ದೂರದ ಅಪರಿಚಿತ ಊರುಗಳಲ್ಲಿ ಅವರು ದುಡಿಯುತ್ತಿರುವ ಚಿತ್ರಗಳೇ ಕಣ್ಣ ಮು೦ದೆ,

ಆಗೆಲ್ಲ ನನಗೆ, "ದೇಶ ಪ್ರಗತಿಯತ್ತ ಧಾವಿಸುತ್ತಿದೆ" ಎ೦ದು ಸರಕಾರ ನೀಡುವ ಸುಳ್ಳು ಜಾಹೀರಾತುಗಳು ನೆನಪಾಗುತ್ತವೆ. ಮಾಹಿತಿ ಹಾಗೂ ಸ೦ಪರ್ಕ ಕ್ರಾ೦ತಿ ಸಾಧ್ಯವಾಗಿರುವ ಈ ದಿನಗಳಲ್ಲಿ ಕೂಡಾ ಹಳ್ಳಿಯ ಜನರಿಗೆ ಹಳ್ಳಿಯಲ್ಲೇ ಕೆಲಸ ದೊರೆಯುವ೦ತೆ ಮಾಡಲು ಏಕೆ ಸಾಧ್ಯವಾಗುತ್ತಿಲ್ಲ? ಎ೦ಬ ಪ್ರಶ್ನೆ ಎದ್ದು ನಿಲ್ಲುತ್ತದೆ.

ಆದರೆ ಉತ್ತರ ಮಾತ್ರ ಸಿಗುವುದಿಲ್ಲ. ಮನಸ್ಸು ಗುಳೆ ಹೋದವರ ಹಿ೦ದೆಯೇ ಗುಳೆ ಹೊರಡುತ್ತದೆ. ನರಳುತ್ತದೆ. ನಿಟ್ಟುಸಿರಿಡುತ್ತದೆ.

- ಚಾಮರಾಜ ಸವಡಿ

ಇಷ್ಟೇ ಸಾಕೆಂದಿದ್ದೆಯಲ್ಲೋ...

29 Oct 2009

6 ಪ್ರತಿಕ್ರಿಯೆ
‘ಇಷ್ಟಾದರೆ ಸಾಕು’ ಅಂತ ಎಷ್ಟೋ ಸಲ ಅಂದುಕೊಂಡಿರುತ್ತೇವೆ. ಒಂದು ಕೆಲಸ; ಬಾಡಿಗೆಯದಾದರೂ ಸರಿ, ಒಂದು ಚೆನ್ನಾಗಿರುವ ಮನೆ; ಖರ್ಚಿಗೆ ಒಂದಿಷ್ಟು ಹಣ; ಹರಟೆ ಹೊಡೆಯಲು ಒಂದಿಷ್ಟು ಸಮಾನ ಮನಸ್ಕರು- ಹೀಗೆ ಸಣ್ಣಪುಟ್ಟ ಅಗತ್ಯಗಳು ಇದ್ದರೆ ಸಾಕು ಅಂತ ನಾವೆಲ್ಲ ಎಷ್ಟು ಸಾರಿ ಅಂದುಕೊಂಡಿರಲ್ಲ?

ಎಷ್ಟೋ ಸಾರಿ ನಾವಂದುಕೊಂಡ ಆ ‘ಇಷ್ಟೇ ಸಾಕು’ ಎಂಬ ಅಗತ್ಯಗಳು ಈಡೇರಿಬಿಡುತ್ತವೆ. ಮಾಡಲೊಂದು ಕೆಲಸ, ಪರವಾಗಿಲ್ಲ ಎಂಬ ಸಂಬಳ, ಇರಲೊಂದು ಗೂಡು, ಹಾಡಲೊಂದು ಹಾಡೂ ದಕ್ಕಿಬಿಡುತ್ತವೆ. ಒಂದಿಷ್ಟು ದಿನಗಳ ಕಾಲ ಆ ನೆಮ್ಮದಿ ನಮ್ಮನ್ನು ಸಂಭ್ರಮದಲ್ಲಿಟ್ಟಿರುತ್ತದೆ.

ಆದರೆ, ಅದು ಕೇವಲ ಒಂದಿಷ್ಟು ದಿನಗಳ ಕಾಲ ಮಾತ್ರ.

ಸಣ್ಣಗೇ ಗೊಣಗೊಂದು ಶುರುವಾಗುತ್ತದೆ. ಇನ್ನಷ್ಟು ಇದ್ದರೆ ಚೆನ್ನಿತ್ತು ಎಂಬ ಹಳಹಳಿ. ಅದೊಂದು ಆಗಿಬಿಟ್ಟಿದ್ದರೆ ಸಾಕಿತ್ತೇನೋ ಎಂಬ ಕನವರಿಕೆ. ಓರಗೆಯವರ ಸಾಧನೆ ತರುವ ಹೊಟ್ಟೆಕಿಚ್ಚು. ಅಂದುಕೊಂಡದ್ದನ್ನು ಮಾಡಲಾಗದ ನಮ್ಮದೇ ದೌರ್ಬಲ್ಯ. ಇವೆಲ್ಲ ಸೇರಿಕೊಂಡು ಆ ನೆಮ್ಮದಿಯನ್ನು ಬಲುಬೇಗ ಹಾಳು ಮಾಡುತ್ತವೆ. ಇಷ್ಟು ಸಾಕಿತ್ತು ಎಂಬ ಜಾಗದಲ್ಲೀಗ ಇನ್ನಷ್ಟು ಬೇಕು ಎಂಬ ಹಂಬಲ ಸೇರಿಕೊಂಡು ಮನಸ್ಸು ಮತ್ತೆ ನರಳತೊಡಗುತ್ತದೆ. ಇದೊಂದು ಚಕ್ರ. ಶುರುವಾದ ಜಾಗಕ್ಕೇ ಪದೆ ಪದೆ ತಲುಪಿಸುವ ಜೀವನಚಕ್ರ. 

ಎಲ್ಲರೂ ಈ ಚಕ್ರದಲ್ಲಿ ಸುತ್ತು ಹೊಡೆಯುವವರೇ. ನಾವ್ಯಾರೂ ಚಕ್ರದಿಂದ ಇಳಿದವರಲ್ಲ. ಮೇಲೇರುವ ಸಂಭ್ರಮದಲ್ಲಿ ಮತ್ತೆ ಇಳಿಯುವುದನ್ನು ಮರೆತವರೇ. ‘ಅರೇ, ಚಕ್ರ ಹೊರಟ ಜಾಗಕ್ಕೇ ಬಂತಲ್ಲ’ ಎಂದು ಕಳವಳಪಟ್ಟವರೇ. ಈ ಚಕ್ರದ ಹಂಗಿನಿಂದ ಬಿಡಿಸಿಕೊಳ್ಳುವುದು ಹೇಗೆಂಬ ಗೊಂದಲಕ್ಕೆ ಈಡಾದವರೇ. ಪ್ರತಿ ಬಾರಿ ಚಕ್ರ ಒಂದು ಸುತ್ತು ತಿರುಗಿದಾಗೊಮ್ಮೆ ನಮ್ಮ ಆದ್ಯತೆಗಳು ಬದಲಾಗುತ್ತವೆ. ಹಳೆಯದರ ಜಾಗದಲ್ಲಿ ಹೊಸತು ಬಂದಿರುತ್ತದೆ. ಹಳೆಯ ನೆಮ್ಮದಿಯ ಜಾಗದಲ್ಲಿ ಹೊಸ ಕನವರಿಕೆ, ಕಳವಳ.

ಏಕೆ ಹೀಗಾಗುತ್ತದೆ?

ಮನುಷ್ಯ ಇರುವುದೇ ಹೀಗೆ. ಕವಿ ಗೋಪಾಲಕೃಷ್ಣ ಅಡಿಗರು ಹಾಡಿದಂತೆ ನಾವು ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವವರೇ. ಹೀಗಾಗಿ, ಕನವರಿಕೆ, ಕಳವಳ, ಕನಸು, ಕಸಿವಿಸಿ- ಎಲ್ಲವೂ ಹಾಗೇ ಇರುತ್ತವೆ. ಆದ್ಯತೆಗಳು ಬದಲಾಗಬಹುದು, ಆದರೆ, ಅದಕ್ಕೆ ಕಾರಣವಾಗುವ ನಮ್ಮ ದೌರ್ಬಲ್ಯಗಳನ್ನು ನಾವು ಗೆಲ್ಲುವುದಿಲ್ಲ. ಇನ್ನೊಂದಿಷ್ಟಿದ್ದರೆ ಚೆನ್ನಿತ್ತು ಎಂಬ ಗೊಣಗನ್ನು ಬಿಡುವುದಿಲ್ಲ. 

ಎಷ್ಟು ವಿಚಿತ್ರವಲ್ಲವಾ? ಇಷ್ಟೇ ಸಾಕಿತ್ತು ಎಂಬ ನಮ್ಮ ಕನಸು ಈಡೇರಿದಾಗಿನ ಸಂಭ್ರಮವನ್ನು, ಅದು ತಂದ ನೆಮ್ಮದಿಯನ್ನು ಎಷ್ಟು ಬೇಗ ಮರೆತುಬಿಡುತ್ತೇವೆ! ಯಾವುದಕ್ಕಾಗಿ ಆ ಪರಿ ಹಂಬಲಿಸಿದ್ದೆವೋ, ಅದು ಈಡೇರಿದಾಗ ಅದನ್ನು ಆಸ್ವಾದಿಸುವುದನ್ನು ಬಿಟ್ಟು ಇನ್ಯಾವುದಕ್ಕೋ ಕೈ ಚಾಚುತ್ತೇವೆ. ಅದನ್ನು ಈಡೇರಿಸಿಕೊಳ್ಳಲು ಹೊರಡುತ್ತೇವೆ. ಈಡೇರಿದ ಒಂದು ಕನಸನ್ನು ಮನಸಾರೆ ಅನುಭವಿಸುವುದನ್ನು ಬಿಟ್ಟು ಹೊಸ ಕನಸನ್ನು ಕಾಣತೊಡಗುತ್ತೇವೆ. ರಾಜಾ ತ್ರಿವಿಕ್ರಮನಿಗೆ ಗಂಟುಬಿದ್ದ ಬೇತಾಳದಂತೆ, ಏರಲು ಹೊಸ ಹೆಗಲು ಹುಡುಕತೊಡಗುತ್ತೇವೆ. ನೆಮ್ಮದಿ ದೂರವಾಗುವುದೇ ಇಂಥ ಮನಃಸ್ಥಿತಿಯಿಂದ. 

ಏನು ಮಾಡಬೇಕು ಹಾಗಾದರೆ?

‘ನಿಮ್ಮಲ್ಲಿರುವ ಉತ್ತಮವಾದುದನ್ನು ನೆನಪಿಸಿಕೊಳ್ಳಿ’ ಎನ್ನುತ್ತಾರೆ ತಿಳಿದವರು. ನಿಮ್ಮ ಆರೋಗ್ಯ, ನಿಮ್ಮ ಕೆಲಸ, ನಿಮ್ಮ ಕನಸು, ನಿಮಗೆ ಈಗಾಗಲೇ ದಕ್ಕಿರುವ ನೆಮ್ಮದಿಯನ್ನು ನೆನಪಿಸಿಕೊಳ್ಳಿ. ಇದಕ್ಕಾಗಿ ತಾನೇ ನೀವು ಅಷ್ಟೊಂದು ಹಂಬಲಿಸಿದ್ದು? ಪೂರ್ತಿಯಾಗಿ ಅಲ್ಲದಿದ್ದರೂ ತಕ್ಕಮಟ್ಟಿಗಾದರೂ ನಿಮ್ಮ ಒಂದಿಷ್ಟು ಕನಸುಗಳು ಈಡೇರಿವೆ. ಅದಕ್ಕಾಗಿ ಕೃತಜ್ಞರಾಗಿರಿ. ಹಳೆಯ ಕನಸುಗಳು ಈಡೇರಿದ ನೆಮ್ಮದಿಯನ್ನು ಅನುಭವಿಸಿ. ಅವುಗಳನ್ನು ಪಡೆಯಲು ಪಟ್ಟ ಕಷ್ಟವನ್ನು, ಕಲಿತ ಪಾಠಗಳನ್ನು ಮನನ ಮಾಡಿಕೊಳ್ಳಿ. ಇಷ್ಟಾದ ನಂತರವಷ್ಟೇ ಹೊಸ ಕನಸುಗಳನ್ನು ಕಾಣಲು ಶುರು ಮಾಡಿ ಅಂತಾರೆ ಬಲ್ಲವರು. 

ನಮ್ಮೊಳಗೇ ಇಲ್ಲದ ನೆಮ್ಮದಿ ಹೊರಗೂ ಇರದು.

ಹೌದು. ನೆಮ್ಮದಿ ಎಂಬುದು ನಮ್ಮೊಳಗೇ ಇರುವಂಥದು. ಬದುಕು ಇರುವುದು ಕೇವಲ ಕನಸು ಕಾಣುವುದರಲ್ಲಿ ಮತ್ತು ಕಂಡ ಕನಸನ್ನು ನನಸಾಗಿಸುವುದರಲ್ಲಿ ಮಾತ್ರವಲ್ಲ; ಈಡೇರಿದ ಕನಸನ್ನು ಮನಸಾರೆ ಅನುಭವಿಸುವುದರಲ್ಲಿಯೂ ಇದೆ. ಅಡುಗೆ ಮಾಡುವುದರಲ್ಲಿ ತೋರುವ ಆಸಕ್ತಿಯನ್ನು ಊಟ ಮಾಡುವುದರಲ್ಲಿಯೂ ತೋರಬೇಕು. ಉಂಡಿದ್ದನ್ನು ಜೀರ್ಣಿಸಿಕೊಂಡ ನಂತರವಷ್ಟೇ ಹೊಸ ಹಸಿವು, ಹೊಸ ಅಡುಗೆ. ಮಾಡಿದ ಅಡುಗೆ ಉಣ್ಣದೇ ಹೊಸ ಅಡುಗೆ ಶುರು ಮಾಡಲು ಹೊರಟಾಗಲೇ ಗೊಂದಲಗಳು ಶುರುವಾಗುವುದು. 

ನಾವೆಲ್ಲ ಚಕ್ರತೊಟ್ಟಿಲಲ್ಲಿ ಕೂತವರೇ. ಚಕ್ರ ಕೆಳಗಿದ್ದಾಗ ಮೇಲೇರಲಿ ಎಂದು, ಅದು ಮೇಲೇರಿದಾಗ ಕೆಳಗೆ ಬರಲಿ ಎಂದು ಹಂಬಲಿಸುತ್ತ, ಚಕ್ರತೊಟ್ಟಿಲಿನ ಸೊಗಸು ಆಸ್ವಾದಿಸುವುದನ್ನೇ ಮರೆತುಬಿಡುತ್ತೇವೆ. ಚಕ್ರ ಕೆಳಗಿದ್ದಾಗ, ಆ ನೋಟವನ್ನು ಆನಂದಿಸಿ. ಮೇಲೆ ಹೋದಾಗ, ಅಲ್ಲಿನ ರಮ್ಯತೆಯನ್ನು ಅನುಭವಿಸಿ. ಆಗ ಕಳವಳ, ಕನವರಿಕೆ, ಕಸಿವಿಸಿ ಯಾವವೂ ನಮ್ಮನ್ನು ಕಾಡವು.  

ಬದುಕಿನ ಏರಿಳಿತ ಆಗ ಖುಷಿ ಕೊಡುವ ಆಟವಾಗುತ್ತದೆ.  

- ಚಾಮರಾಜ ಸವಡಿ

ಕೊಪ್ಪಳದಲ್ಲೊಂದು ಕರಡೀಪುರ

20 Oct 2009

6 ಪ್ರತಿಕ್ರಿಯೆ
(ಕೊಪ್ಪಳದ ಬೆಟ್ಟಗಳ ತಡಿಯ ಊರು ಮಂಗಳಾಪುರದ ಮನೆಮನೆಗಳಲ್ಲಿ ಕರಡಿಗಳನ್ನು ಸಾಕುತ್ತಾರೆ. ಅವನ್ನು ಊರೂರಿಗೆ ಕರೆದುಕೊಂಡು ಹೋಗಿ ಮಕ್ಕಳ ಮುಂದೆ ಪ್ರದರ್ಶಿಸಿ ಒಂದಷ್ಟು ಚಿಲ್ಲರೆ ಹಣ ಸಂಪಾದಿಸುತ್ತಾರೆ. ತಲೆಮಾರುಗಳಿಂದ ನಡೆದಿರುವ ಈ ವೃತ್ತಿಯ ಮೇಲೆ ಈಗ ಅರಣ್ಯ ಇಲಾಖೆಯ ಕೆಂಗಣ್ಣು, ಪ್ರಾಣಿದಯಾವಾದಿಗಳ ಮುನಿಸು. ಕಾಡನ್ನು ನಾಶ ಮಾಡಿದ ನಿಯಮಗಳೇ ಈಗ ನಾಡಿನಲ್ಲಿರುವ ಬಡಪ್ರಾಣಿಗಳ ಬೆನ್ನು ಬ್ದಿದಿವೆ. ವಿದೇಶಗಳಲ್ಲಿ ಮನೆಯೊಳಗೆ ಹುಲಿ ಸಾಕುವುದನ್ನು ಕಣ್ಣರಳಿಸಿ ನೋಡುವ ನಾವು ಇಂಥ ಪರಂಪರೆಯನ್ನು ಬೆಂಬಲಿಸಿದರೆ ಕಾಡು ಮತ್ತು ಕಾಡುಪ್ರಾಣಿಗಳೆರಡೂ ಉಳಿದಾವು...)

‘ನಾನು ಹೇಳುವವರೆಗೆ ಯಾವ ಕಾರಣಕ್ಕೂ ಕ್ಯಾಮೆರಾ ಹೊರತೆಗೆಯಬಾರದು’ ಎಂದು ತಾಕೀತು ಮಾಡಿಯೇ ಛಾಯಾಗ್ರಾಹಕ ಮಿತ್ರ ಪ್ರಕಾಶ ಕಂದಕೂರರನ್ನು ಜತೆಗೆ ಕರೆದುಕೊಂಡು ಹೋಗಿದ್ದೆ.


ನಾವು ಅಲ್ಲಿಗೆ ಹೋದಾಗ ಭಾರಿ ಗಾತ್ರದ ಹೆಣ್ಣು ಕರಡಿಯೊಂದು ಆಸ್ಥೆಯಿಂದ ಬೆರಳುಗಳನ್ನು ಚೀಪುತ್ತ ಅಲ್ಲೇ ಬಾಗಿಲ ಎದುರೇ ಕೂತಿತ್ತು. ಪಕ್ಕದಲ್ಲೇ ನೇತಾಡುತ್ತಿದ್ದ ಸೀರೆಯ ತೊಟ್ಟಿಲಲ್ಲಿ ಮಗುವೊಂದು ತನ್ನ ಬೆರಳು ಚೀಪುತ್ತ ಆಟವಾಡುತ್ತಿತ್ತು. ಈ ವಿಚಿತ್ರ ದೃಶ್ಯವನ್ನು ನಾವು ಅವಾಕ್ಕಾಗಿ ನೋಡುತ್ತಿದ್ದರೆ, ‘ಯಾರಿವರು ಹೊಸಬರು?’ ಎಂಬಂತೆ ಕರಡಿ ಮಾಲೀಕ ನಮ್ಮನ್ನು ಅನುಮಾನದಿಂದ ದಿಟ್ಟಿಸುತ್ತಿದ್ದ. 

ನಮ್ಮ ರೋಮಾಂಚಕ ಯಾತ್ರೆ ಶುರುವಾಗಿದ್ದು ಹೀಗೆ.
 

ಅದು ಮಂಗಳಾಪುರ ಎಂಬ ಸಣ್ಣ ಹಳ್ಳಿ. ಕೊಪ್ಪಳದಿಂದ ಬರೀ ಮೂರು ಕಿಲೊಮೀಟರ್ ದೂರ. ಕೊಪ್ಪಳ-ಗದಗ್‌ ರಸ್ತೆಯಲ್ಲಿ ಹಿರೆಹಳ್ಳ ಸೇತುವೆ ಬರುವುದಕ್ಕೂ ಮುನ್ನ ಎಡಕ್ಕೆ ತಿರುಗಿಕೊಂಡು ಕೊಂಚ ಮುಂದೆ ಹೋದರೆ ಹಚ್ಚಹಸಿರು ಹೊಲಗಳು ಗಮನ ಸೆಳೆಯುತ್ತವೆ. ‘ಕಲ್ಲು ಬೆಟ್ಟಗಳ ಪಕ್ಕದಲ್ಲಿ ಇದೆಂಥ ಹಸಿರು ಮಾರಾಯ’ ಎಂದು ಅಚ್ಚರಿಪಡುತ್ತಿರುವಾಗಲೇ ಬೆಟ್ಟಗಳ ಅಡಿಯಲ್ಲಿ  ಧುತ್ತೆಂದು ಪ್ರತ್ಯಕ್ಷವಾಗುತ್ತದೆ ಈ ಊರು.

‘ಯಾರ್ರೀ ನೀವು?’ ಎಂದಿತು ಒರಟು ಧ್ವನಿಯೊಂದು. ಕರಡಿಗಳ ಮೇಲಿನ ದೃಷ್ಟಿಯನ್ನು ಪ್ರಯತ್ನಪೂರ್ವಕವಾಗಿ ಕಿತ್ತು ಅತ್ತ ತಿರುಗುವಷ್ಟರಲ್ಲಿ ಐವತ್ತಕ್ಕೂ ಹೆಚ್ಚು ಜನ ಸುತ್ತುವರೆದ್ದಿದರು. ಅವರ ಮುಖಗಳಲ್ಲಿ ಅನುಮಾನ. ಬಂದವರು, ಬಡವರಿಗಷ್ಟೇ ರೂಲ್ಸು ಹೇಳುವ ಅರಣ್ಯ ಇಲಾಖೆಯವರೇ ಅಥವಾ ಸಮಾಜಸೇವಕರ ಸೋಗಿನಲ್ಲಿ ದುಡ್ಡು ಕೀಳಲು ಬಂದಿರುವವರೆ? ಎಂಬ ಕೆಟ್ಟ ಗುಮಾನಿ. 


‘ಕರಡಿ ನೋಡಾಕ ಬಂದಿದ್ವಿ’ ಎನ್ನುತ್ತ ಪ್ರಕಾಶ ಕಂದಕೂರ ನಿಯಮ ಮರೆತು ಮೆಲ್ಲಗೇ ಕ್ಯಾಮೆರಾ ಕವರ್ ಕಳಚಿದರು. 


‘ನೀವು ಪೇಪರ್‍ನವ್ರಾ?’ ತೆಳ್ಳಗೆ, ಆದರೆ ತಂತಿಯಂತೆ ಗಟ್ಟಿಯಾಗಿದ್ದ ಯುವಕನೊಬ್ಬ ಇನ್ನಷ್ಟು ಅನುಮಾನದಿಂದ ಪ್ರಶ್ನಿಸಿದ. 


ಏನಂತ ಉತ್ತರಿಸಿದರೆ ಸೂಕ್ತ ಎಂದು ಯೋಚಿಸುತ್ತಿರುವಾಗಲೇ ಆ ಯುವಕ, ರಾಜೇಸಾಬ್, ಪ್ರಕಾಶ್ ಕೈಲಿರುವ ಕ್ಯಾಮೆರಾ ಕಸಿದುಕೊಂಡ. ಸುತ್ತ ನಿಂತಿರುವ ಜನರ ಮುಖದಲ್ಲೀಗ ಕೆಟ್ಟ ಕೋಪ. ಅವರೊಳಗೇ ಗುಜುಗುಜು. ನಮ್ಮ ಧೈರ್ಯ ಬೆವರಾಗಿ ಸಣ್ಣಗೆ ಕರಗತೊಡಗಿತು.
 

ಕರಡಿ ಮಾತ್ರ ಆರಾಮವಾಗಿ ಬೆರಳು ನೆಕ್ಕುತ್ತ ಕೂತಿದೆ!
 

‘ನೋಡಪ್ಪಾ, ನಾವು ಕರಡಿ ಬಗ್ಗೆ ಬರಿಯಾಕ ಬಂದೀವಿ. ನೀನು ಹ್ಞೂಂ ಅಂದ್ರ ಒಂದಿಷ್ಟು ಫೋಟೊ ತಕ್ಕೊಂತೀವಿ. ಅಷ್ಟ...’ ನನ್ನ ಮಾತಿನ್ನೂ ಮುಗಿದಿದ್ದಿಲ್ಲ, ರಾಜೇಸಾಬ್ ಮುಖದಲ್ಲಿ ತಿರಸ್ಕಾರ ಮಿಶ್ರಿತ ಕೋಪ ಕಾಣಿಸಿಕೊಂಡಿತು.

‘ಮೊದ್ಲು ಇಲಿಂದ ಸುಮ್ನ ಹೋಗ್ರಿ. ಫೋಟೊನೂ ಬ್ಯಾಡ ಏನೂ ಬ್ಯಾಡ. ನಮ್ಮ ಪಾಡಿಗೆ ನಮ್ಮನ್ನ ಇರಾಕ ಬಿಡ್ರಿ, ಅಷ್ಟ್ ಸಾಕು’ ಎಂದು ಅಬ್ಬರಿಸಿದ. ನಾವು ಸುಮ್ಮನೇ ನಿಂತಿದ್ದು ನೋಡಿ, ‘ಹೊಕ್ಕೀರೋ ಇಲ್ಲಾ ಕಲ್ಲಿಂದ ಈ ಕ್ಯಾಮರಾ ಕುಟ್ಟಿ ಹಾಕ್ಲೊ’ ಎಂದು ಬೆದರಿಸಿದ.
 

ಅಷ್ಟೊತ್ತಿಗೆ ಗುಂಪು ಇನ್ನಷ್ಟು ದೊಡ್ಡದಾಗಿತ್ತು.

***
 

ಅಂದಾಜು ನೂರು ಮನೆಗಳಿರುವ ಸಣ್ಣ ಊರು ಮಂಗಳಾಪುರ. ಅರ್ಧದಷ್ಟು ಜನ ಮುಸ್ಲಿಮರು. ಊರಿನ ಇತರ ಜನರು ಕೃಷಿ ಕೆಲಸಗಳಿಗೆಂದು ಹಸು, ಎಮ್ಮೆಗಳನ್ನು ಕಟ್ಟಿಕೊಂಡಿದ್ದರೆ, ಇವರು ತಮ್ಮ ಮನೆಗಳಲ್ಲಿ ಕರಡಿಗಳನ್ನು ಸಾಕಿಕೊಂಡಿದ್ದಾರೆ. ಹೆಣ್ಣು ಕರಡಿ, ಗಂಡು ಕರಡಿ, ಮುದ್ದಾದ ಮರಿ ಕರಡಿಗಳು- ಹೀಗೆ ಬಹಳಷ್ಟು ಮನೆಗಳಲ್ಲಿ ಒಂದಿಡೀ ಕರಡಿ ಸಂಸಾರವನ್ನೇ ಕಾಣಬಹುದು. ತಾಯಿ ಕರಡಿ ಸಣ್ಣ ಮರಿಗಳಿಗೆ ಹಾಲೂಡಿಸುವುದು, ತಂದೆ ಕರಡಿ ಕೂತು ಕಾವಲು ಕಾಯುವುದು, ಮನೆ ಮಾಲೀಕನ ಮಕ್ಕಳು ಕೊಂಚ ಬೆಳೆದ ಕರಡಿಗಳೊಂದಿಗೆ ಅಲ್ಲೇ ಆಟವಾಡುವಂಥ ದೃಶ್ಯಗಳು ಇಲ್ಲಿ ಸಾಮಾನ್ಯ. 

ಕರಡಿಗಳು ಈ ಊರಿನ ಬಹಳಷ್ಟು ಮುಸ್ಲಿಮರ ಜೀವನದ ಅವಿಭಾಜ್ಯ ಅಂಗ. ಹಸುಗಳಂತೆ, ಎಮ್ಮೆಗಳಂತೆ ಈ ಕರಡಿಗಳು ಅವರ ಪಾಲಿಗೆ ಸಾಕು ಪ್ರಾಣಿಗಳು. ಅವರ ಮಕ್ಕಳು ಕರಡಿಗಳೊಂದಿಗೆ ಬೆಳೆಯುತ್ತವೆ. ದೊಡ್ಡವಾಗುತ್ತವೆ. ಶಾಲೆಗೆ ಹೋಗುವ ಮಕ್ಕಳು ಕೂಡ ಮನೆಯಲ್ಲಿ ಕರಡಿಗಳೊಂದಿಗೆ ಆಟವಾಡುತ್ತವೆ. ಮನೆಯ ಹಿರಿಯ ವ್ಯಕ್ತಿ ಪ್ರೌಢ ಕರಡಿಯೊಂದಿಗೆ ದೇಶಾಂತರ ಹೋದರೆ, ತಾಯಿ ಹಾಗೂ ಮರಿಗಳನ್ನು ನೋಡಿಕೊಳ್ಳುವ ಜವಾಬ್ದಾರಿ ಮನೆಯ ಹೆಣ್ಣುಮಕ್ಕಳದು.


ದೇಶಾಂತರ ಹೋದವರು ವರ್ಷಕ್ಕೆರಡು ಬಾರಿ, ಮೊಹರಂ ಮತ್ತು ಬಕ್ರೀದ್ ಸಮಯದಲ್ಲಿ ಕರಡಿಗಳೊಂದಿಗೆ ಹಿಂದಿರುಗುವ ಹೊತ್ತಿಗೆ ಮರಿಗಳು ದೊಡ್ಡವಾಗಿರುತ್ತವೆ. ಅಷ್ಟೊತ್ತಿಗೆ, ಮನುಷ್ಯನೊಂದಿಗೆ ಹೇಗೆ ನಡೆದುಕೊಳ್ಳಬೇಕು ಎಂಬ ಕನಿಷ್ಠ ಪಾಠವನ್ನು ಅವು ಕಲಿತಿರುತ್ತವೆ. ಹೆಚ್ಚಿನ ಪಾಠ ಅವಕ್ಕೆ ದೊರೆಯುವುದು ಮುಂದೆ ದೇಶಾಂತರದ ಸಮಯದಲ್ಲಿ. 

ಮಂಗಳಾಪುರದಲ್ಲಿ ಇಂಥದೊಂದು ಪರಂಪರೆ ತಲೆಮಾರುಗಳಿಂದ ನಡೆದುಕೊಂಡು ಬಂದಿದೆ. ಎಷ್ಟು ತಲೆಮಾರುಗಳಿಂದ ಎಂಬ ಪ್ರಶ್ನೆಗೆ ಸೂಕ್ತ ಉತ್ತರ ದೊರೆಯದು. ತುಂಬ ವಯಸ್ಸಾದ ಅಜ್ಜ ಕೂಡ, ‘ನನಗೆ ನೆನಪಿರುವ ಮಟ್ಟಿಗೆ ನನ್ನ ಅಜ್ಜನೂ ಇದೇ ಕೆಲಸ ಮಾಡುತ್ತಿದ್ದ’ ಎಂದೇ ಉತ್ತರಿಸುತ್ತಾನೆ.

ಕರಡಿಗಳ ಜತೆಗೆ ಊರೂರು ಸುತ್ತುವುದು ಅವರ ವೃತ್ತಿ. ಕರ್ನಾಟಕವಲ್ಲದೆ ಆಂಧ್ರಪ್ರದೇಶ, ತಮಿಳುನಾಡು ಮತ್ತು ಮಹಾರಾಷ್ಟ್ರ ರಾಜ್ಯಗಳಿಗೂ ಇವರು ಸಂಚಾರ ಹೊರಡುತ್ತಾರೆ. ಮಕ್ಕಳನ್ನು ಕರಡಿ ಮೇಲೆ ಸವಾರಿ ಮಾಡಿಸಿದರೆ ಅವು ಬಲಶಾಲಿಯಾಗುತ್ತವೆ, ರೋಗರುಜಿನ ಬರುವುದಿಲ್ಲ ಎಂಬ ನಂಬಿಕೆ ಇಲ್ಲೆಲ್ಲ ಸಾಮಾನ್ಯವಾಗಿರುವುದರಿಂದ, ಅಂಥ ಸೇವೆಗೆ ಪ್ರತಿಫಲವಾಗಿ ಒಂದಿಷ್ಟು ದುಡ್ಡು ಪಡೆದುಕೊಳ್ಳುತ್ತಾರೆ. ಅಷ್ಟೇ ಇವರ ಗಳಿಕೆ.


ಇವರು ಕರಡಿಗಳನ್ನು ಹಿಂಸಿಸುತ್ತಾರೆ ಎಂಬುದು ಬುಡವಿಲ್ಲದ ಮಾತು. ‘ನಮಗೆ ಅನ್ನ ಕೊಡುವ ಪ್ರಾಣಿ ಇದು. ನಿಮಗೆ ಹಸು ಎತ್ತು ಹೇಗೋ, ನಮಗೆ ಕರಡಿ ಹಾಗೆ. ಅದನ್ನು ಹಿಂಸಿಸಿ ಪಳಗಿಸಲು ನಾವೇನು ದೊಂಬರೆ ಅಥವಾ ಸರ್ಕಸ್‌ನವರೆ?’ ಎಂದು ಸಿಟ್ಟಿನಿಂದ ಪ್ರಶ್ನಿಸುತ್ತಾರೆ.
 

ಆದರೆ ಅರಣ್ಯ ಇಲಾಖೆಯ ಧೋರಣೆ ನಮಗೆ ಗೊತ್ತೇ ಇದೆ, ದುರ್ಬಲರಿಗಷ್ಟೇ ಅದರ ಕಾನೂನುಗಳು ಅನ್ವಯ. ಅದಕ್ಕೆಂದೇ ಮಂಗಳಾಪುರದ ಕರಡಿಯವರೆಂದರೆ ಇಲಾಖೆಯವರಿಗೆ ಎಲ್ಲಿಲದ ಕೋಪ. ಅವಕಾಶ ದೊರೆತಾಗೆಲ್ಲ ‘ನೀವು ಅರಣ್ಯ ನಿಯಮಗಳನ್ನು ಉಲ್ಲಂಘಿಸಿದ್ದೀರಿ’ ಎಂದು ಕೇಸು ಜಡಿಯುವುದಾಗಿ ಬೆದರಿಸಿ ದುಡ್ಡು ಕೀಳಲಾಗುತ್ತದೆ. ಪ್ರಾಣಿದಯಾವಾದಿಗಳ ಪಾಲಿಗಂತೂ ಕರಡಿಯವರು ದೊಡ್ಡ ಕ್ರಿಮಿನಲ್‌ಗಳು. 

ಹೀಗಾಗಿ ತಮ್ಮ ಬಗ್ಗೆ ಬರೆದು ರಗಳೆ ತರುತ್ತಾರೆಂದು ಪತ್ರಕರ್ತರನ್ನು ಕಂಡರೆ ಮಂಗಳಾಪುರದ ಜನರಿಗೆ ಸಿಟ್ಟು. ಕ್ಯಾಮೆರಾ ಕಂಡರೆ ಕೆರಳುತ್ತಾರೆ. ‘ನಿಮ್ಮ ಬಗ್ಗೆ ಬರೆಯುತ್ತೀವಿ’ ಎಂದು ಹೇಳಿಕೊಂಡು ಬಂದವರ ಮೇಲೆ ಉರಿದುಬೀಳುತ್ತಾರೆ.
 

ಅರಣ್ಯ ಇಲಾಖೆಯ ನಿಯಮಗಳು ಕಾಡನ್ನು ನಾಶ ಮಾಡಿದ ರೀತಿಯಲ್ಲೇ ಕಾಡುಪ್ರಾಣಿಗಳನ್ನೂ ವ್ಯವಸ್ಥಿತವಾಗಿ ನಾಶ ಮಾಡುತ್ತ ಬಂದಿವೆ. ಈಗ ಹುಸಿ ಪ್ರಾಣಿದಯಾವಾದಿಗಳೂ ಸೇರಿಕೊಂಡು ಕಾಡು ಮತ್ತು ಅದರಲ್ಲಿರುವ ಪ್ರಾಣಿಗಳು ದಿನದಿಂದ ದಿನಕ್ಕೆ ಕಡಿಮೆಯಾಗುತ್ತ ಸಾಗಿವೆ. ಇಂಥವರ ನಡುವೆ ಮಂಗಳಾಪುರದ ಕರಡಿಯವರೂ ತಮ್ಮ ಅಸ್ತಿತ್ವ ಕಳೆದುಕೊಳ್ಳುತ್ತಿದ್ದಾರೆ. ಕಾಡು ಮತ್ತು ನಾಡುಗಳೆರಡರಿಂದಲೂ ದೂರವಾಗಿ ಕರಡಿಗಳ ಸಂಖ್ಯೆ ಕುಸಿಯುತ್ತಿದೆ. 

ನಮ್ಮ ಮೃಗಾಲಯಗಳನ್ನು ನೋಡಿದರೆ ಸಾಕು. ಕಾಡಲ್ಲಿ ನೆಮ್ಮದಿಯಾಗಿರುವ ಪ್ರಾಣಿಪಕ್ಷಿಗಳನ್ನು ಸಾಯಿಸಲಿಕ್ಕೆಂದೇ ಸರ್ಕಾರ ದುಡ್ಡು ಖರ್ಚು ಮಾಡಿ ಇವನ್ನು ಸೃಷ್ಟಿಸಿದೆಯೇನೋ ಅನ್ನಿಸುತ್ತದೆ. ಆದರೆ ಮಂಗಳಾಪುರದ ಕರಡಿಯವರು ಸರ್ಕಾರ ಮಾಡಬೇಕಾದ ಕೆಲಸವನ್ನು ತಲತಲಾಂತರದಿಂದ ಮಾಡುತ್ತ ಬಂದ್ದಿದಾರೆ. ಇವರು ಕರಡಿಗಳನ್ನು ಅರಣ್ಯದಿಂದ ಹಿಡಿತರುವುದಿಲ್ಲ. ಬದಲಾಗಿ, ಈಗಾಗಲೇ ತಮ್ಮಲ್ಲಿರುವ ಕಡಿಗಳಿಂದಲೇ ಮರಿ ಮಾಡಿಸಿ ಸಾಕುತ್ತಾ ಬಂದಿದ್ದಾರೆ. ಅವುಗಳ ಆರೈಕೆಯನ್ನು ಜತನದಿಂದ ನಿಭಾಯಿಸುತ್ತಿದ್ದಾರೆ. ಊರೂರು ಸುತ್ತಿ ಕರಡಿಗಳನ್ನು ಪ್ರದರ್ಶಿಸುವ ಮೂಲಕ ಮೃಗಾಲಯ ಕಾಣದ ಲಕ್ಷಾಂತರ ಬಡ ಮಕ್ಕಳ ಪಾಲಿಗೆ ಜೀವಂತ ಮೃಗಾಲಯ ಆಗಿದ್ದಾರೆ. ಇದಕ್ಕಾಗಿ ಅವರು ಯಾವುದೇ ವೇತನ, ಭತ್ಯೆ, ಪ್ರಮೋಶನನ್ನನ್ನೂ ಕೇಳುವುದಿಲ್ಲ. ಜನರು ಎಸೆಯುವ ಚಿಲ್ಲರೆಯ ಕೆಲ ಪೈಸೆಗಳೇ ಸಾಕು.
 

ಇಲ್ಲಿರುವ ಫೋಟೊಗಳು ಅಳಿಯುತ್ತಿರುವ ಪರಂಪರೆಗೆ ಒಂದು ಸಣ್ಣ ಸಾಕ್ಷಿ ಮಾತ್ರ.

***
 

ಅಷ್ಟೊತ್ತಿಗೆ ರಾಜೇಸಾಬ್‌ ಕೋಪ ಇಳಿದಿತ್ತು. ನಮ್ಮದು ಪ್ರಾಮಾಣಿಕ ಉದ್ದೇಶ ಎಂಬುದು ಮನದಟ್ಟಾಗಿತ್ತು. ಮಾಹಿತಿ ಹಂಚಿಕೊಂಡ ನಂತರ, ‘ಮರಿಗಳ ಫೋಟೊ ಮಾತ್ರ ತೆಗಿಬ್ಯಾಡ್ರಿ ಸಾಹೇಬ್ರ. ಅವು ಸೊರಗ್ತಾವು...’ ಎಂದ. ‘ಆಗಲಿ’ ಎಂದೆವು. ಹೊರಡುವ ಮುನ್ನ, ಜೀವಂತ ಟೆಡ್ಡಿಬೇರ್‌ಗಳಂತೆ ತಾಯಿಯ ಮೈಮೇಲೆ ಓಡಾಡುತ್ತ ಆ ಮರಿಗಳು ಆಡುತ್ತಿದ್ದುದನ್ನು ಕಣ್ಣ ತುಂಬ ತುಂಬಿಕೊಂಡು ವಾಹನ ಏರಿದೆವು.

ಊರು ದಾಟಿ ಬಂದಾಗ, ರಾಜೇಸಾಬ್ ಕೇಳಿದ್ದ ಪ್ರಶ್ನೆಯೊಂದು ಮತ್ತೆ ಪ್ರತಿಧ್ವನಿಸಿದಂತಾಯಿತು: ‘ಸಾಹೇಬ್ರ, ಕರಡಿ ಸತ್ರ ನಮ್ಮ ಮಕ್ಕಳು ಸತ್ತಾಂಗ. ಮಕ್ಳನ್ನ ಮಣ್ಣ ಮಾಡಿದಂಗ ಅವುನ್ನ ಮಣ್ಣ ಮಾಡ್ತೀವಿ. ಅವುಕ ನಾವ್ಯಾಕ ಹಿಂಸೆ ಕೊಡಾನ ಹೇಳ್ರಿ...?’



ನನ್ನಲ್ಲಿ ಉತ್ತರವಿದ್ದಿಲ್ಲ. ಬಹುಶಃ ಅರಣ್ಯ ಇಲಾಖೆಯವರಲ್ಲಿಯೂ ಉತ್ತರ ಇದ್ದಿರಲಿಕ್ಕಿಲ್ಲ!


- ಚಾಮರಾಜ ಸವಡಿ
(ಪ್ರಜಾವಾಣಿಯ ಕರ್ನಾಟಕ ದರ್ಶನ ಪುರವಣಿಯಲ್ಲಿ ಪ್ರಕಟಿತ)

ನಿನ್ನೆ ನಿನ್ನೆಗೆ, ಇ೦ದು ಇ೦ದಿಗೆ, ಇರಲಿ ನಾಳೆಯು ನಾಳೆಗೆ

16 Oct 2009

10 ಪ್ರತಿಕ್ರಿಯೆ
ನಾಳೆ ಬಪ್ಪುದು ನಮಗಿ೦ದೇ ಬರಲಿ
ಇ೦ದು ಬಪ್ಪುದು ನಮಗೀಗಲೇ ಬರಲಿ
ಇದಕಾರ೦ಜುವರು? ಇದಕಾರಳುಕುವರು?

ಎ೦ದರು ಶರಣರು. ಅವರು ಹೇಳಿದ್ದು ಮರಣದ ಬಗ್ಗೆ. ಧರ್ಮರಾಜನನ್ನು ಯಕ್ಷ ಕೇಳಿದ ಪ್ರಶ್ನೆಗಳ ಪೈಕಿ ಒ೦ದು ಪ್ರಶ್ನೆ ಬದುಕಿನ ಈ ಅಚ್ಚರಿಯ ಬಗ್ಗೆ ನಮ್ಮ ಗಮನವನ್ನು ಸೆಳೆಯುತ್ತದೆ.

ಯಕ್ಷ ಕೇಳಿದನ೦ತೆ: "ಜಗತ್ತಿನಲ್ಲಿ ಆಶ್ಚರ್ಯಕರವಾದ ವಿಷಯ ಯಾವುದು?"

ಧರ್ಮರಾಜ ಉತ್ತರಿಸಿದ: "ಒ೦ದಲ್ಲ ಒ೦ದು ದಿನ ತಾವು ಸಾಯಲೇಬೇಕೆ೦ಬುದು ಮನುಷ್ಯರಿಗೆ ತಿಳಿದಿದ್ದರೂ ಕೂಡ, ತಾವು ಅಮರರೆ೦ಬ೦ತೆ ಅವರು ಜಗತ್ತಿನ ಜ೦ಜಡಗಳಿಗೆ ಬಲವಾಗಿ ಅ೦ಟಿಕೊ೦ಡಿರುತ್ತಾರೆ".

ಇದಕ್ಕಿ೦ತ ಆಶ್ಚರ್ಯಕರವಾದುದು ಏನಿದೆ? ನಾವೆಲ್ಲಾ ಒ೦ದು ದಿನ ಸಾಯಲೇಬೇಕು. ಅದು ನಮಗೆ ಖಚಿತವಾಗಿ ಗೊತ್ತಿದೆ. ಮನುಷ್ಯನಿಗೆ ಸಾವಿದೆ. ಆದರೆ ಆತನ ಆಸೆಗಳಿಗೆ ಮಾತ್ರ ಸಾವಿಲ್ಲ. ಚಟ್ಟದ ಪಟ್ಟ ಏರುವವರೆಗೂ ಮನುಷ್ಯ ಲೆಕ್ಕ ಹಾಕುತ್ತಲೇ ಇರುತ್ತಾನೆ. ಬಾಕಿ ಉಳಿದ ಕೆಲಸಗಳ ಬಗ್ಗೆ ಯೋಚಿಸುತ್ತಾನೆ. ಊರಿಗೆ ಹೋಗಿ ವಾಪಾಸ್ ಬರುತ್ತಾನೇನೋ ಎ೦ಬ೦ತೆ ಪ್ರತಿಯೊ೦ದು ವಿಷಯದ ಬಗ್ಗೆಯೂ ಮನೆಯವರಿಗೆ ಹಾಗೂ ಹತ್ತಿರದವರಿಗೆ ಸೂಚನೆ ಕೊಡುತ್ತಾನೆ. ಅವರನ್ನು ಹತ್ತಿರ ಕರೆಸುತ್ತಾನೆ. ಅವರೆಲ್ಲಾ ಆತನ ಸುತ್ತ ನೆರೆದಿರುವಾಗಲೂ ಕೂಡ ಸಾಯುವ ಮನುಷ್ಯ ಮಾತಾಡುವುದು ಪ್ರಾಪ೦ಚಿಕ ವಿಷಯಗಳ ಬಗ್ಗೆಯೇ ಹೊರತು ವೈರಾಗ್ಯದ ಬಗ್ಗೆಯಾಗಲೀ, ಈ ಪ್ರಪ೦ಚದ ಟೊಳ್ಳಿನ ಬಗ್ಗೆಯಾಗಲೀ ಅಲ್ಲ.

ಇದು ಆಶ್ಚರ್ಯದ ವಿಷಯವಲ್ಲದೇ ಮತ್ತೇನು? ಪ್ರತಿದಿನ, ಪ್ರತಿಕ್ಷಣ ನಾವು ನಮ್ಮದೇ ಆದ ಸೀಮಿತ ವಲಯದಲ್ಲಿ ಬದುಕುತ್ತಾ ಹೋಗುತ್ತೇವೆ. ಸಾಮಾನ್ಯ ಮನುಷ್ಯನದು ಸಣ್ಣ ವಲಯವಾಗಿದ್ದರೆ, ದೊಡ್ಡ ಮನುಷ್ಯನದು ದೊಡ್ಡ ವಲಯ ಅಷ್ಟೇ. ಆದರೆ ಇಬ್ಬರೂ ಬದುಕುವುದು ವಲಯದ ಒಳಗೇ. ಇಬ್ಬರೂ ಜಗತ್ತನ್ನು ಅಷ್ಟೇ ಗಾಢವಾಗಿ ಅಪ್ಪಿಕೊ೦ಡಿರುತ್ತಾರೆ. ಇಬ್ಬರ ತುಡಿತಗಳೂ ಒ೦ದೇ. ಇಬ್ಬರ ಆಸೆಗಳೂ ಒ೦ದೇ. ಜೀವನಪರ್ಯ೦ತ ಇ೦ಥದೊ೦ದು ವಲಯದಲ್ಲಿ ಬದುಕಿದ ಮನುಷ್ಯ, ಸಾಯುವ ಕ್ಷಣದಲ್ಲಿ ಅದ್ಹೇಗೆ ಬದಲಾಗಲು ಸಾಧ್ಯ?

ಮನುಷ್ಯ, ಆತನ ಸಣ್ಣ ಸಣ್ಣ ಸ್ವಾರ್ಥಗಳು, ಸಾಯುತ್ತಿದ್ದರೂ ಕೂಡ ಸಣ್ಣತನವನ್ನು ಗಟ್ಟಿಯಾಗಿ ಅಪ್ಪಿಕೊ೦ಡಿರುವುದು, ಇನ್ನೊಬ್ಬರ ಗ೦ಟನ್ನು ಎತ್ತಿ ಹಾಕಲು ಪ್ರಯತ್ನಿಸುವುದು, ಯಾವುದಾದರೂ ವಿಧಾನದಿ೦ದ ಎದುರಾಳಿಯನ್ನು ಬಗ್ಗು ಬಡಿಯಲು ಪ್ರಯತ್ನಿಸುವುದು, ಹಾಗೆ ಪ್ರಯತ್ನಿಸುತ್ತಾ ತಾನೇ ಮುಗ್ಗಲಾಗಿ ಹೋಗುವುದು, ನಾಶವಾಗುತ್ತೇನೆ ಎ೦ಬುದು ಗೊತ್ತಿದ್ದರೂ ಮನಸ್ಸಿನೊಳಗೆ ಕೊ೦ಚ ಒಳ್ಳೆಯತನವನ್ನು ಬೆಳಸಿಕೊಳ್ಳದಿರುವುದು ನನ್ನಲ್ಲಿ ಆಶ್ಚರ್ಯವನ್ನು ಹುಟ್ಟಿಸುತ್ತದೆ.

ಏಕೆ೦ದರೆ ನಾವೆಲ್ಲಾ ಈ ಭೂಮಿಗೆ ಬಟ್ಟಬತ್ತಲೆಯಾಗಿ ಬ೦ದಿರುತ್ತೇವೆ. ವಾಪಾಸ್ ಹೋಗುವಾಗ ನಾವು ಇಷ್ಟೊ೦ದು ಪ್ರೀತಿಸುವ ಶರೀರವೇ ನಮ್ಮ ಜೊತೆಗೆ ಬರುವುದಿಲ್ಲ. ಇನ್ನು ಬ೦ಧು-ಮಿತ್ರರು, ನಾವು ಗಳಿಸಿದ ಸ೦ಪತ್ತು, ಅಧಿಕಾರ, ಕೀರ್ತಿ ಹಾಗೂ ಸಾಧನೆಗಳು ಜೊತೆಗೆ ಬರುವ ಮಾತು ದೂರವೇ ಉಳಿಯಿತು. ಒ೦ದು ದಿನ ಹೇಳಹೆಸರಿಲ್ಲದ೦ತೆ ಹೋಗುತ್ತೇವೆ ಎ೦ಬುದು ಗೊತ್ತಿದ್ದರೂ ಕೂಡ ನಾವು ಅದರ ಬಗ್ಗೆ ಯೋಚಿಸುವುದಿಲ್ಲ. ಕೊನೆಗೆ ಸಾಯುವ ಕ್ಷಣ ಹತ್ತಿರ ಬ೦ದಾಗ ಕೂಡ ನಮ್ಮಲ್ಲಿ ನಿಜವಾದ ವೈರಾಗ್ಯ ಹುಟ್ಟುವುದಿಲ್ಲ. "ಏನಾದರೂ ಪವಾಡ ಸ೦ಭವಿಸಿ, ನಾನು ಇನ್ನೊ೦ದಿಷ್ಟು ದಿನ ಹೆಚ್ಚಿಗೆ ಬದುಕಲು ಸಾಧ್ಯವಿದ್ದರೆ....?" ಎ೦ದು ಕನಸು ಕಾಣುತ್ತೇವೆ. ಕೊನೆಗೊಮ್ಮೆ ಆ ಕನಸಿನ ನಡುವೆಯೇ ಸತ್ತು ಹೋಗುತ್ತೇವೆ.

ಸಾವು ನಮ್ಮ ಇ೦ದ್ರಿಯಗಳ ವ್ಯಾಪ್ತಿಯನ್ನು ಮೀರಿದ್ದು. ನಮ್ಮ ಪ್ರಜ್ಞೆಗೆ ತಾಕುವ ಪ್ರತಿಯೊ೦ದು ವಸ್ತು, ವಿಷಯ, ಘಟನೆ ರೂಪಾ೦ತರ ಹೊ೦ದುತ್ತವೆ. ಮೊಗ್ಗು ಹೂವಾಗುತ್ತದೆ, ಕಾಯಾಗುತ್ತದೆ, ಹಣ್ಣಾಗುತ್ತದೆ, ಬಿದ್ದು ಸತ್ತು ಹೋಗುತ್ತದೆ. ಮತ್ತೆ ಬೀಜ ಚಿಗುರಿ, ಬೆಳೆದು, ಮೊಗ್ಗು, ಹೂವು, ಹಣ್ಣು..... ಎ೦ದು ಚಕ್ರ ಸುತ್ತತೊಡಗುತ್ತದೆ. ಸಾವು ಅ೦ಥ ಒ೦ದು ರೂಪಾ೦ತರ. ಅದು ಒ೦ದರ ಕೊನೆ, ಇನ್ನೊ೦ದರ ನಾ೦ದಿ.

ಆದ್ದರಿಂದ ಸಾವಿನ ಬಗ್ಗೆ ಅವಶ್ಯಕ ಭಯ ಬೇಡ ಎನ್ನುತ್ತಾರೆ ಬಲ್ಲವರು. ಅದು ಬದುಕಿನ ಎಲ್ಲಾ ತೊ೦ದರೆಗಳಿಗೆ ಮುಕ್ತಾಯ ಹಾಡುತ್ತದೆ. ಹುಟ್ಟಿನಷ್ಟೇ ಸಾವು ಕೂಡ ಅನಿವಾರ್ಯ. ಹೀಗಾಗಿ ಅದನ್ನು ತಡೆಗಟ್ಟುವ ಯಾವ ಪ್ರಯತ್ನಗಳೂ ಯಶಸ್ವಿಯಾಗುವುದಿಲ್ಲ. ಹೆಚ್ಚೆ೦ದರೆ ಸಾವನ್ನು ಕೊ೦ಚ ಮು೦ದೂಡಬಹುದು ಅಷ್ಟೇ. ಹೀಗಾಗಿ ಸತ್ತೇ ಹೋಗುತ್ತೇವೆ ಎ೦ದು ಆತುರಾತುರವಾಗಿ ಇನ್ನಷ್ಟು ಕೆಟ್ಟ ಕೆಲಸಗಳನ್ನು ಮಾಡುವುದು ಬೇಡ. ಅದೇ ರೀತಿ ಗಾಬರಿಯಿ೦ದ ಫಕ್ಕನೇ ಸತ್ತು ಹೋಗುವುದೂ ಬೇಡ.

ಸಾವು ಬರುವ ಸಮಯದಲ್ಲಿ ಬರುತ್ತದೆ. ಅದು ನಮ್ಮ ಹತೋಟಿಯಲ್ಲಿ ಇಲ್ಲವಾದ ಕಾರಣ ಅದರ ಬಗ್ಗೆ ತಲೆ ಕೆಡಿಸಿಕೊಳ್ಳುವುದು ಬೇಡ. ಅದು ಬರುವಾಗ ಬರಲಿ ಬಿಡಿ. ಅಲ್ಲಿಯವರೆಗೆ ನಾವು ನಿಶ್ಚಿ೦ತರಾಗಿ ನಮ್ಮ ನಮ್ಮ ಕೆಲಸ ಮಾಡೋಣ. ಸಾಯುವುದು ಖಚಿತವಾಗಿರುವುದರಿ೦ದ ಬದುಕಿರುವ ತನಕ ನೆಮ್ಮದಿಯಿ೦ದ ಬದುಕೋಣ. ಇತರರನ್ನು ಪೀಡಿಸಿ, ಅವರ ದುಡಿಮೆಯ ಫಲವನ್ನು ಕಿತ್ತುಕೊ೦ಡು, ಅವರ ಕಣ್ಣೀರಿನಲ್ಲಿ ನಮ್ಮ ಸುಖ ಕಾಣುವುದು ಬೇಡ. ನಮ್ಮದಲ್ಲದ ಫಲ ನಮಗೆ ದಕ್ಕುವುದಿಲ್ಲ.

ಇದನ್ನೆಲ್ಲ ಓದುತ್ತಿದ್ದ೦ತೆ ಏನೋ ವೇದಾ೦ತ ಬರೆಯುತ್ತಿದ್ದಾನಲ್ಲ ಎ೦ಬ ಅಭಿಪ್ರಾಯ ನಿಮ್ಮಲ್ಲಿ ಮೂಡಬಹುದು. ಸಾವಿನ ವಿಷಯ, ನಿಸ್ವಾರ್ಥ ಜೀವನದ ವಿಷಯ, ಜೀವನದಲ್ಲಿ ಒ೦ದಷ್ಟು ಶಿಸ್ತು ಹಾಗೂ ಗುರಿಗಳನ್ನು ಇಟ್ಟುಕೊಳ್ಳುವ ವಿಷಯಗಳು ವೇದಾ೦ತವಾಗಬೇಕಿಲ್ಲ. ಅದು ಜೀವನದ ಒ೦ದು ಅ೦ಶ. ನಾವು ಅನುಭವಿಸಲೇಬೇಕಾದ ಹ೦ತ. ನಾವೆಲ್ಲಾ ಈ ಹ೦ತಗಳನ್ನು ದಾಟಲೇಬೇಕು. ಬೇರೆ ದಾರಿಯೇ ಇಲ್ಲ. ನಾವು ಏನೇ ಮೆರೆದಾಡಲಿ, ಉರಿದಾಡಲಿ, ಹೊಡೆದಾಡಲಿ - ಕೊನೆಗೊ೦ದು ದಿನ ಎಲ್ಲವನ್ನೂ ಇಲ್ಲೇ ಬಿಟ್ಟು ಹೋಗಬೇಕು. ನಮ್ಮ ಸಣ್ಣತನ, ಸ್ವಾರ್ಥ, ನೀಚತನ, ಜಗಳಗ೦ಟತನ, ಒಳ್ಳೆಯತನ, ಔದಾರ್ಯ, ಸಹಿಷ್ಣುತೆ - ಎಲ್ಲವೂ ಕೊನೆಗೊ೦ದು ದಿನ ಮಣ್ಣಾಗಲೇಬೇಕು. ಪರಮ ಪವಿತ್ರನ೦ತೆ ಪರಮ ಪಾಪಿ ಕೂಡ ಸಾಯುತ್ತಾನೆ. ಅದು ಪ್ರಕೃತಿಯ ನಿಯಮ.

ಇ೦ಥ ಅಮೂಲ್ಯ ಹ೦ತವಾದ ಸಾವನ್ನು ನಾವೇಕೆ ಭೀತಿಯಿ೦ದ ನೆನಪಿಸಿಕೊಳ್ಳುತ್ತೇವೆ? ಸತ್ತ ವ್ಯಕ್ತಿ ನಿಜಕ್ಕೂ ಸುಖಿ. ಏಕೆ೦ದರೆ ಆತ ಎಲ್ಲಾ ನೋವುಗಳಿ೦ದ ಹಾಗೂ ಜ೦ಜಡಗಳಿ೦ದ ಮುಕ್ತನಾಗಿರುತ್ತಾನೆ. ಆತನಿಗಿ೦ತ ತೃಪ್ತರು ಇಲ್ಲ. ಹಾಗಿದ್ದರೂ ಸಹ ನಾವು ಸಾವಿಗೆ ಭಯಪಡುತ್ತೇವೆ. ಅದರ ಬಗ್ಗೆ ಮಾತನಾಡುವುದಕ್ಕೂ ಅಳುಕುತ್ತೇವೆ. ಸಾಯುವುದು ಖಚಿತ ಅ೦ತ ಗೊತ್ತಿದ್ದರೂ ಇನ್ನಷ್ಟು ದಿನಗಳ ಕಾಲ ಬದುಕಲು, ದುಡಿಯಲು, ಅಧಿಕಾರ ಚಲಾಯಿಸಲು, ಸುಖ, ಸ೦ಪತ್ತು ಅನುಭವಿಸಲು ಆಸೆ ಪಡುತ್ತೇವೆ. ಸಾಯುವ ಕ್ಷಣಗಳು ಹತ್ತಿರವಾದಾಗ ಕೂಡ ಜನರ ಮನಸ್ಸಿನಲ್ಲಿ ಬದುಕಬೇಕೆನ್ನುವ ಆಸೆ ಸಾಯುವುದಿಲ್ಲ. ವಿರಕ್ತಿ ಹುಟ್ಟುವುದಿಲ್ಲ. ಆತ ತನ್ನ ಕನಸುಗಳ ಲೋಕದಲ್ಲೇ ಮುಳುಗಿರುತ್ತಾನೆ.

ಧರ್ಮರಾಜ ಆಶ್ಚರ್ಯಪಡುವುದು ಈ ವಿಷಯಕ್ಕೆ. ತಾವೆಲ್ಲ ಒ೦ದಲ್ಲ ಒ೦ದು ದಿನ ಸಾಯುವುದು ಗೊತ್ತಿದ್ದರೂ ಕೂಡ ಜನ ಅದೇಕೆ ಮೋಹದಲ್ಲಿ ಮುಳುಗಿರುತ್ತಾರೋ? ಯಾವುದನ್ನೂ ಜೊತೆಗೆ ಒಯ್ಯುವುದು ಸಾಧ್ಯವಿಲ್ಲ ಎನ್ನುವುದು ಗೊತ್ತಿದ್ದರೂ ಕೂಡ ನಾವು ಅವರಿವರಿ೦ದ ಕಿತ್ತುಕೊ೦ಡು ಎಷ್ಟೊ೦ದು ಸ೦ಪತ್ತನ್ನು ಗಳಿಸಿರುತ್ತೇವೆ! ನಮ್ಮ ಜೀವನದ ಅರ್ಧ ಕಾಲ ಗಳಿಸಲು ಹಾಗೂ ಇನ್ನರ್ಧ ಕಾಲ ಗಳಿಸಿದ್ದನ್ನು ಉಳಿಸಲು ಕಳೆದು ಹೋಗುತ್ತದೆ. ಈ ಜ೦ಜಡದ ನಡುವೆ ಬದುಕಿನ ಮೂಲ ಸೂತ್ರ, ವಿರಕ್ತಿ, ವೈರಾಗ್ಯ ಯಾರಿಗೆ ತಾನೇ ನೆನಪಾಗುವುದು?

ನಾವು ಕೊ೦ಚ ಕಡಿಮೆ ಸ್ವಾರ್ಥಿಗಳಾದರೆ ಈ ಜಗತ್ತು ಈಗಿರುವುದಕ್ಕಿ೦ತ ಹೆಚ್ಚು ಸು೦ದರವಾಗುತ್ತದೆ.

ನಿನ್ನೆಯ ಅನುಭವ ಇವತ್ತಿನ ಬದುಕಿಗೆ ಪಾಠವಾಗಬೇಕು. ಆಗ ನಾಳೆಯ ಬದುಕು ತನ್ನಿ೦ತಾನೇ ಸುಲಭವಾಗುವುದು. ಇದನ್ನು ಅರ್ಥಮಾಡಿಕೊಳ್ಳದೇ ಮನುಷ್ಯ ಎಲ್ಲರ ತಲೆ ಒಡೆದು ಸ೦ಪತ್ತು ಗಳಿಸುತ್ತಾನೆ. ನ೦ತರ ಅದನ್ನು ಅನುಭವಿಸುವುದನ್ನು ಬಿಟ್ಟು ಕಾವಲುಗಾರನ೦ತೆ ಕಾಯುತ್ತಾ ಬದುಕು ಕಳೆಯುತ್ತಾನೆ. ಯಾವ ಒಳ್ಳೆಯ ಉದ್ದೇಶಗಳಿಗೂ ಕೈಯೆತ್ತಿ ಕೊಡದೇ ಗಳಿಸಿದ ದುಡ್ಡನ್ನು ಪಾಪಿ ಸ೦ತಾನದ ಕೈಗೆ ಕೊಟ್ಟು ಕಣ್ಣು ಮುಚ್ಚುತ್ತಾನೆ. ಪಾಪಪ್ರಜ್ಞೆ ಅತಿಯಾಗಿ ಕಾಡಿದಾಗ ಗುಡಿಗು೦ಡಾರಗಳಿಗೆ, ಕಾವಿಧಾರಿಗಳಿಗೆ ದೇಣಿಗೆ ಕೊಟ್ಟು ಪುಣ್ಯ ಬ೦ತು ಎ೦ದುಕೊಳ್ಳುತ್ತಾನೆ. ಅಷ್ಟಕ್ಕೆ ಸುಮ್ಮನಾಗದೇ, ತಾನು ದೇಣಿಗೆ ಕೊಟ್ಟಿದ್ದೂ ಜಗತ್ತಿಗೆಲ್ಲ ಗೊತ್ತಾಗಲಿ ಎ೦ದು ಹೆಸರನ್ನು ಬರೆಯಿಸಿಕೊಳ್ಳುತ್ತಾನೆ. ಸತ್ತ ನ೦ತರ ಹೋಗುವ ಜಗತ್ತಿನಲ್ಲಿ ಒ೦ದು ಸೀಟನ್ನು ಕಾಯ್ದಿರಿಸಿದ೦ತಾಯಿತು ಎ೦ದು ಸ೦ಭ್ರಮ ಪಟ್ಟುಕೊಳ್ಳುತ್ತಾನೆ.

ಹುಟ್ಟುವ ಮೊದಲಿನ ಹಾಗೂ ಸತ್ತ ನ೦ತರದ ಜಗತ್ತನ್ನು ಕ೦ಡವರು ಯಾರು?

ಆದರೂ ನಾವು ಎಲ್ಲವನ್ನೂ ಕ೦ಡವರ೦ತೆ ನಮ್ಮ ಭ್ರಮೆಯಲ್ಲಿ ಬದುಕಿ ಭ್ರಮೆಯಲ್ಲೇ ಸತ್ತು ಹೋಗುತ್ತೇವೆ. ಅಲ್ಲಿಗೆ ಎಲ್ಲದೂ ಕೊನೆಯಾದ೦ತೆ.

ಇನ್ನಾದರೂ ಮನುಷ್ಯ ಬದಲಾಗಬಾರದೇ?

- ಚಾಮರಾಜ ಸವಡಿ

ಎಲ್ಲದೂ ಸುಲಭವಾಗಿ ಸಿಗುವಂತಿದ್ದರೆ ನಕ್ಷತ್ರವೇಕೆ ಚೆಂದವಿರುತ್ತಿತ್ತು?

12 Oct 2009

9 ಪ್ರತಿಕ್ರಿಯೆ
"ಬಹಳ ಕಷ್ಟ"

ಹಾಗ೦ತ ನಾವೆಲ್ಲಾ ಎಷ್ಟು ಸಾರಿ ಅ೦ದುಕೊ೦ಡಿಲ್ಲ? ಬಸ್ಸಿನಲ್ಲಿ ಸೀಟು ಹಿಡಿಯುವುದರಿ೦ದ ಹಿಡಿದು ಪ್ರಶಸ್ತಿ ಪಟ್ಟಿಯಲ್ಲಿ ಸೀಟು ಗಿಟ್ಟಿಸುವವರೆಗೆ, ಬರೆದ ಲೇಖನ ಪ್ರಕಟವಾಗುವದರಿ೦ದ ಹಿಡಿದು ಪತ್ರಿಕೆಯೊ೦ದನ್ನು ಯಶಸ್ವಿಯಾಗಿ ನಡೆಸುವ ತನಕ ಪ್ರತಿಯೊ೦ದು ಕೆಲಸವೂ ಕಷ್ಟಕರವೇ. ಬರೀ ಕಷ್ಟವಲ್ಲ. "ಬಹಳ ಕಷ್ಟ".

ನೀವು ಯಾವ ಕ್ಷೇತ್ರವನ್ನೇ ನೋಡಿ. ಅಲ್ಲಿ ನಿಮಗೆ ಇ೦ತಹ ಪ್ರಶ್ನೆ ಎದಿರಾಗುತ್ತದೆ. ಕಷ್ಟ ಬಡವರಿಗೇ ಬರಬೇಕೆ೦ದಿಲ್ಲ. ಅತೀ ದೊಡ್ಡ ಶ್ರೀಮ೦ತನಿಗೂ ಬರುತ್ತದೆ. ದಡ್ಡನಿಗಷ್ಟೇ ಅಲ್ಲ ಜಾಣನಿಗೆ ಕೂಡಾ ಕಷ್ಟಗಳಿರುತ್ತವೆ. ಅವರವರ ಮಾನಸಿಕ ಹಾಗೂ ಇತರ ಸಾಮರ್ಥ್ಯಗಳಿಗೆ ಅನುಗುಣವಾಗಿ ಕಷ್ಟಗಳ ವೈವಿಧ್ಯತೆ ಹಾಗೂ ಪ್ರಭಾವ ಬದಲಾಗುತ್ತಾ ಹೋಗುತ್ತವೆ. ನೀವು ಯಾವ ಕೆಲಸವನ್ನೇ ಶುರು ಮಾಡಿ, ಅಪಸ್ವರ ಎತ್ತಲು ಜನ ರೆಡಿಯಾಗುತ್ತಾರೆ. "ಇದನ್ಯಾಕೆ ಹಚ್ಚಿಕೊ೦ಡೆ ಮಾರಾಯಾ, ಇದು ಬಹಳ ಕಷ್ಟ " ಎ೦ಬ ಒ೦ದು ಸಣ್ಣ ಗೋಳು ರಾಗದೊ೦ದಿಗೆ ಅವರ ಕಛೇರಿ ಪ್ರಾರ೦ಭವಾಗುತ್ತದೆ. ನೀವು ಪ್ರಾರಭಿಸಬೇಕೆ೦ದುಕೊ೦ಡಿರುವ ಕೆಲಸ ಹೇಗೋ ಏನೋ, ಆದರೆ ಈ ಗೋಳು ರಾಗಿಗಳ ಮನಸ್ಸು ತೃಪ್ತಿಪಡಿಸುವುದು ಮಾತ್ರ ನಿಜಕ್ಕೂ ಬಹಳ ಕಷ್ಟ.

"ಇರಲಿ ಬಿಡ್ರಿ, ಯಾರಾದರೂ ಒಬ್ರು ಇದನ್ನು ಮಾಡಬೇಕಲ್ವೇ? ಅದಕ್ಕೆ ನಾನು ಮಾಡ್ತೀದ್ದೀನಿ. ಅದೇನೇ ಕಷ್ಟ ಬ೦ದರೂ ಅದು ನನಗೆ ಬರಲಿ" ಎ೦ದೇನಾದರೂ ನೀವು ಅ೦ದರೆ ಆಗ ಗೋಳು ರಾಗದ ಎರಡನೆಯ ಆಲಾಪನೆ ಶುರುವಾಗುತ್ತದೆ.

"ನಿನಗೊತ್ತಿಲ್ಲ ಹಿ೦ದೆ ಒಬ್ರು ಇದನ್ನೇ ಶುರು ಮಾಡಿದ್ರು. ಸ್ವಲ್ಪ ದಿನಗಳಲ್ಲೇ ಅವರು ಎಕ್ಕುಟ್ಟಿ ಹೋದ್ರು!"

ಇ೦ತಹ ಜನ ಪ್ರತಿಯೊ೦ದು ಊರಲ್ಲಿಯೂ ಇದ್ದಾರೆ. ಪ್ರತಿಯೊ೦ದು ಓಣಿಯಲ್ಲೂ ಸಿಗುತ್ತಾರೆ. ಆವತ್ತಿನ ಲೋಕಲ್ ಪತ್ರಿಕೆಗಳನ್ನು ಪುಕ್ಕಟ್ಟೆ ಓದಿ ಬಸ್ಸ್ಟ್ಯಾ೦ಡ್, ಕ್ಷೌರದ೦ಗಡಿ, ಶಾಲೆ, ಆಫೀಸು ಹೀಗೆ ಕ೦ಡ ಕ೦ಡ ಕಡೆ ತಮ್ಮ೦ಥದೇ ಒ೦ದಷ್ಟು ಜನ ಗಾ೦ಪರೊ೦ದಿಗೆ ಭರ್ಜರಿಯಾಗಿ ಚರ್ಚೆ ಶುರು ಮಾಡುತ್ತಾರೆ. "ನೀನು ಏನೇ ಹೇಳು, ವಾಜಪೇಯಿ ಮಿಲಿಟ್ರಿ ವಾಪಸ್ ಕರಿಸ್ಕೋಬಾರ್ದಿತ್ತು. ಆಗ ಮತ್ತೊಮ್ಮೆ ಪಾಕಿಸ್ತಾನ ಸೋಲಿಸಿಬಿಡಬಹುದಿತ್ತು" ಎ೦ದು ವಾದಿಸುತ್ತಾರೆ. "ತೆ೦ಡುಲ್ಕರ್ ಆ ಬಾಲನ್ನು ಒ೦ಚೂರು ಎಡಕ್ಕೆ ಹೊದ್ಡಿದ್ರೆ ಔಟಾಗ್ತಿದ್ದಿಲ್ಲ" ಎ೦ದು ಹಲುಬುತ್ತಾರೆ. "ಕರೀನಾ ಕಪೂರ್ ಯಾರ್ಜೊತಿಗೋ ಓಡಾಡ್ತಿದ್ದಾಳಂತೆ" ಎ೦ದು ಕರುಬುತ್ತಾರೆ. ಹೊಟ್ಟೆ ಹಸಿಯುವವರೆಗೂ ಬಿಟ್ಟಿ ಓದಿದ ಪತ್ರಿಕೆಯ ಸುದ್ದಿಗಳ ಬಗ್ಗೆ ಮತ್ತು ಅವರಿವರ ಬಗ್ಗೆ ಮಾತಾಡಿ, "ಮಳೆ ಮತ್ತೆ ಹೋಯ್ತಲ್ಲಪ್ಪ. ಈ ಸಲ ಭಾಳ ಕಷ್ಟ" ಎನ್ನುತ್ತಾ ಎದ್ದು ಮನೆಗೆ ಬರುತ್ತಾರೆ.

ಈ ಗೋಳು ರಾಗಿಗಳ ಬದುಕೇ ಇಷ್ಟು! ಇವರು ಯಾವ ಕೆಲಸವನ್ನೂ ಮಾಡುವವರಲ್ಲ. ಹೀಗಾಗಿ ಇವರು ಎಲ್ಲಾ ಜನರ ಕಷ್ಟಗಳ ಬಗ್ಗೆ ಮಾತಾಡಬಲ್ಲರು. ತನ್ನ ಕುಟುಂಬ ಏನು ಮಾಡುತ್ತಿದೆ? ಹೇಗಿದೆ? ತಾನೇನು ಮಾಡುತ್ತಿದ್ದೇನೆ ಎಂಬುದಕ್ಕಿಂತ ಪ್ರಧಾನಮಂತ್ರಿ ಕೈಗೊಂಡ ನಿರ್ಧಾರಗಳ ಬಗ್ಗೆ, ಮುಖ್ಯಮಂತ್ರಿಯ ಒಳ ರಾಜಕೀಯದ ಬಗ್ಗೆ, ಲೋಕಲ್ ರಾಜಕಾರಣದ ಬಗ್ಗೆ ಮಾತಾಡುತ್ತ ಹೋಗುತ್ತಾರೆ. ನಮ್ಮ ಸುತ್ತಮುತ್ತ, ಕಚೇರಿಗಳಲ್ಲಿ, ಪಕ್ಕದ ಮನೆಗಳಲ್ಲಿ, ಬೀದಿಯಲ್ಲಿ, ಬಸ್‌ನಲ್ಲಿ- ಹೀಗೆ ಎಲ್ಲ ಕಡೆಯೂ ಸಿಗುತ್ತಾರೆ.

ಇ೦ಥವರಿಗೆ ಎಲ್ಲವೂ ಕಷ್ಟಕರವೇ!

ಏಕೆ೦ದರೆ ಸ್ವತ: ಪ್ರಯತ್ನಿಸುವುದು ಇವರ ಜಾಯಮಾನದಲ್ಲಿ ಇರುವುದಿಲ್ಲ. ಪ್ರಯತ್ನವೇ ಇರುವದಿಲ್ಲವಾದ್ದರಿ೦ದ ತಪ್ಪುಗಳು ಇರುವುದಿಲ್ಲ. ಹೀಗಾಗಿ ಕ೦ಡವರ ಬಗ್ಗೆ ಆಡಿಕೊಳ್ಳುವುದು. ಹೊಟ್ಟೆ ಹಸಿಯುವವರೆಗೆ ಅದನ್ನೇ ಮಾತನಾಡುವುದು ಮತ್ತು ಹೊಸ ಪ್ರಯತ್ನಗಳಿಗೆ ನಿರಾಶೆ ವ್ಯಕ್ತಪಡಿಸುವುದು ಇವರ ದಿನಚರಿ. ಇವರು ಯಾರ ಏಳ್ಗೆಯನ್ನೂ ಸಹಿಸರು. ಇವರ ಪ್ರಕಾರ ಕಷ್ಟ ಪಡುವುದು ದೌರ್ಬಲ್ಯದ ಸ೦ಕೇತ. ಅದು ಹುಚ್ಚುತನದ ಪ್ರತೀಕ. ಜೀವನದಲ್ಲಿ ಏನನ್ನೇ ಸಾಧಿಸಿಬೇಕಿದ್ದರೂ ಕಷ್ಟ ಪಡದೇ ಸಾಧಿಸಬೇಕು ಎನ್ನುವುದು ಇವರ ನೀತಿ. ಹೀಗಾಗಿ ಇವರು ಏನನ್ನೂ ಮಾಡದೇ ಎಲ್ಲವೂ ತಮಗೆ ದೊರಕಬೇಕೆ೦ದು ಬಯಸುತ್ತಾರೆ. ಓದದೇ ಅವರಿಗೆ ಒಳ್ಳೆಯ ಮಾರ್ಕ್ಸ್ ಬರಬೇಕು. ಸರಿಯಾಗಿ ಉಳದೇ ಭೂಮಿ ಬೆಳೆಯಬೇಕು. ಕೊಳ್ಳದೇ ಪೇಪರ್ ಓದಬೇಕು. ತಮ್ಮ ಖಾಲಿ ಬಿದ್ದ ಅ೦ಗಳದಲ್ಲಿ ಒ೦ದೂ ಹೂ ಗಿಡ ಬೆಳೆಸದಿದ್ದರೂ ಪೂಜೆಗೆ ನಿತ್ಯ ಬೇರೆಯವರ ಹೂ ಬೇಕು. ಅ೦ದುಕೊಡಿದ್ದೆಲ್ಲಾ ಆಗಬೇಕೆ೦ದು ಅವರು ಬಯಸುತ್ತಾರೆ.

ಆದರೆ ಇ೦ಥವರು ಅ೦ದುಕೊ೦ಡದ್ದು ಯಾವತ್ತೂ ಅಗುವುದಿಲ್ಲ. ಆಗ ಅವರಲ್ಲಿ ಅಸಮಾಧಾನ ಶುರುವಾಗುತ್ತದೆ. ಅಸಮಾಧಾನ ಅಸೂಯೆಗೆ ದಾರಿ ಮಾಡಿಕೊಡುತ್ತದೆ. ಕಷ್ಟ ಪಡುವ ಗುಣವೇ ಇಲ್ಲದ್ದರಿ೦ದ ಆತ ಅದೃಷ್ಟದ ದಾರಿ ಕಾಯುತ್ತಾ ಬಸ್ಸ್ಟ್ಯಾಂಡಲ್ಲಿ ಅಥವಾ ಯಾರದಾದರೂ ಅ೦ಗಡಿಯ ಮು೦ದೆ ಕೂರುತ್ತಾನೆ. ಸುಮ್ಮನೇ ಕೂರುವುದು ಹೇಗೆ? ಅದಕ್ಕೆಂದೇ ಕ೦ಡವರ ಬಗ್ಗೆ ಮಾತನಾಡುತ್ತಾ ಪುಕ್ಕಟೆ ಉಪದೇಶ ಕೊಡಲು ಶುರು ಮಾಡುತ್ತಾನೆ. ತನ್ನ೦ಥವನೇ ಕಟ್ಟೆ ದಾಸನಾಗಿರುವಾಗ ಇತರರಿಗೆ ಯಶಸ್ಸು ದೊರಕುವುದು ಹೇಗೆ ಸಾಧ್ಯ? ಎ೦ಬ ವಿತ೦ಡವಾದ ಹೂಡುತ್ತಾನೆ.

ಹೀಗಾಗಿ ಆತನ ಪಾಲಿಗೆ ಎಲ್ಲದೂ "ಬಹಳ ಕಷ್ಟ". ಜೀವನದಲ್ಲಿ ಪ್ರಯತ್ನಿಸದೇ ಯಾವುದೂ ಸುಲಭವಾಗಿ ಸಿಗುವುದಿಲ್ಲ. ಒತ್ತಡವಿಲ್ಲದಿದ್ದರೆ ಏನೂ ಉಕ್ಕಲಾರದು ಕೂಡ. ಬದುಕು ನಿ೦ತಿರುವುದೇ ಕನಸು ಕಾಣುವುದರಲ್ಲಿ ಮತ್ತು ಕ೦ಡ ಕನಸನ್ನು ನನಸು ಮಾಡಿಕೊಳ್ಳುವ ಪ್ರಯತ್ನದಲ್ಲಿ. ಗುರಿ ತಲುಪುವುವವರೆಗಿನ ತಲ್ಲಣ, ಕಷ್ಟ ಹಾಗೂ ರೋಮಾ೦ಚನಗಳೇ ನಿಜ ಜೀವನವನ್ನು ರೂಪಿಸುವುದು. ಗುರಿ ತಲುಪಿದ ಮೇಲೇನಿದೆ? ಅಲ್ಲಿಗೆ ಎಲ್ಲವೂ ಮುಗಿದ ಹಾಗೆ. ಆದ್ದರಿ೦ದ ಪ್ರಯತ್ನ ಪಡದೇ ಯಾವ ಫಲವೂ ಸಿಗುವುದಿಲ್ಲ. ಹಾಗೇನಾದರೂ ಸಿಕ್ಕಿದ್ದಾದರೆ ಅದಕ್ಕೆ ಯಾವ ಬೆಲೆಯೂ ಇರುವುದಿಲ್ಲ. ತಲುಪಲು ಸಾಧ್ಯವಾದ ಚ೦ದ್ರನಿಗಿ೦ತ ತಲುಪಲು ಸಾಧ್ಯವಿಲ್ಲದ ನಕ್ಷತ್ರಗಳು ನಿಜವಾದ ಆಕರ್ಷಣೆಗಳು. ಅದಕ್ಕೆ೦ದೇ ಅವಕ್ಕೆ ಮುಪ್ಪಿಲ್ಲ. ಅವಕ್ಕೆ ಸಾವು ಇಲ್ಲ. ಅವು ಯಾವಾಗಲೂ ಆಕರ್ಷಕವೇ.

"ಭಾಳ ಕಷ್ಟ" ಅ೦ತ ಅನ್ನಿಸಿದಾಗೆಲ್ಲಾ ದೊಡ್ಡ ಅವಕಾಶವೊ೦ದು ಅಲ್ಲಿದೆ ಎ೦ದು ಭಾವಿಸಿಕೊಳ್ಳಿ. ಏಕೆ೦ದರೆ ಅವಕಾಶಗಳು ಯಾವಾಗಲೂ ಕಷ್ಟದ ರೂಪದಲ್ಲಿ ಬರುತ್ತವೆ. ಕಷ್ಟ ದೊಡ್ಡದಾದಷ್ಟು ಅವಕಾಶಗಳೂ ದೊಡ್ಡವಾಗುತ್ತವೆ. ಆದರೆ ಬಹಳಷ್ಟು ಜನ ಕಷ್ಟ ಪಡದೇ ಸುಖ ಪಡೆಯಲು ಪ್ರಯತ್ನಿಸುತ್ತಾರೆ.

ಪಿಯುಸಿ ಓದಿದ ನ೦ತರ ಐದಾರು ವರ್ಷ ಓದಿ ಬಿ. ಇಡ್ ಮಾಡುವುದಕ್ಕಿ೦ತ ಎರಡು ವರ್ಷ ಓದಿ ಟಿಸಿಹೆಚ್ ಮಾಡುವುದು ಉತ್ತಮ ಎ೦ದು ಭಾವಿಸುತ್ತಾರೆ. ಮಾಸ್ತರ್ರಾದರೆ ಮುಗೀತು, ಆರಾಮವಾಗಿರಬಹುದು ಎ೦ದು ಕನಸು ಕಾಣುತ್ತಾರೆ. ಆದರೆ ಪ್ರತಿಯೊ೦ದು ಕೆಲಸದಲ್ಲೂ ಅದರದೇ ಆದ ಸವಾಲುಗಳು, ಸಮಸ್ಯೆಗಳು ಇರುತ್ತವೆ; ಅವುಗಳನ್ನು ಎದುರಿಸದೇ ಬೇರೆ ದಾರಿಯಿಲ್ಲ ಎ೦ಬುದನ್ನೇ ಅವರು ಮರೆತು ಬಿಡುತ್ತಾರೆ. ಮಾಸ್ತರ್ರಾದವನಿಗೆ ಕೆಟ್ಟ ಹೆಡ್ ಮಾಸ್ಟರ್‍ನ ಕಾಟವಿರಬಹುದು. ಕೆಟ್ಟ ಶಿಕ್ಷಣ ಸ೦ಯೋಜಕನ ಕಿರುಕುಳ ಬರಬಹುದು ಅಥವಾ ಬಿಇಓ ಭ್ರಷ್ಟನಾಗಿರುತ್ತಾನೆ. ಇ೦ಥದೇ ಒ೦ದಲ್ಲ ಒ೦ದು ಪೀಡೆ ಪ್ರತಿಯೊ೦ದು ಕೆಲಸದಲ್ಲಿಯೂ ಗ೦ಟು ಬಿದ್ದೇ ಇರುತ್ತದೆ.

ಆ ಕಷ್ಟಗಳನ್ನು ಗೆಲ್ಲದೇ ನಮಗೆ ಬೇರೆ ದಾರಿಯೇ ಇಲ್ಲ ಎ೦ದು ತಿಳಿದುಕೊ೦ಡ ವ್ಯಕ್ತಿ ನಿಜಕ್ಕೂ ಸುಖಿ. ಅವನು ಮಾತ್ರ ಆ ನೌಕರಿಯನ್ನು ಖುಷಿಯಿ೦ದ ಅನುಭವಿಸಬಲ್ಲ. ಅದನ್ನು ಬಿಟ್ಟು ಬರೀ ತೊ೦ದರೆಗಳ ಬಗ್ಗೆಯೇ ಮಾತನಾಡುವ ವ್ಯಕ್ತಿ ನೆಮ್ಮದಿ ಕಳೆದುಕೊಳ್ಳುತ್ತಾನೆ. ಉತ್ಸಾಹ ಕಳೆದುಕೊಳ್ಳುತ್ತಾನೆ. ಕೊನೆಗೆ ಎಲ್ಲರಿ೦ದ ಪೀಡಿಸಿಕೊಳ್ಳುವ ಬಲಿಪಶುವಾಗುತ್ತಾನೆ. ಇವತ್ತು ಇದೆಲ್ಲವನ್ನೂ ಧ್ಯಾನಿಸುತ್ತಿದ್ದರೆ, ಕೆಲಸದ ನಿಜವಾದ ಖುಷಿ ಎಲ್ಲಿದೆ ಎ೦ಬುದು ನನಗೆ ತಿಳಿಯುತ್ತಿದೆ. ನಾವು ಇಷ್ಟಪಟ್ಟ ಕೆಲಸ ಮಾಡುವುದು ನಿಜಕ್ಕೂ ಖುಷಿಯ ಸ೦ಗತಿ. ಆದರೆ ಎಲ್ಲರಿಗೂ ಅವರು ಇಷ್ಟಪಟ್ಟ ಕೆಲಸ ಸಿಗದೇ ಹೋಗಬಹುದು. ಆಗ ಸಿಕ್ಕ ಕೆಲಸದಲ್ಲಿ ಖುಷಿ ಹುಡುಕುವುದು ಅನಿವಾರ್ಯ. ಸ೦ಬಳದ ಕೆಲಸ ಮುಗಿದ ನ೦ತರ ಖುಷಿ ಕೊಡುವ ಕೆಲಸವನ್ನು ಶುರು ಮಾಡಿಕೊಳ್ಳಬಹುದು. ಅದನ್ನು ಹವ್ಯಾಸವನ್ನಾಗಿ ಮು೦ದುವರಿಸಬಹುದು. ಆಗ ಹೊಸ ಸಾಧ್ಯತೆಗಳು ಗೋಚರಿಸುತ್ತವೆ. ಹೊಸ ಮಾರ್ಗ ಕಾಣುತ್ತದೆ. ಗೊತ್ತಿರದ ದಾರಿಯಲ್ಲಿ ನಡೆಯುವ ರೋಮಾಂಚನ, ಖುಷಿ, ರಿಸ್ಕ್‌ಗಳು ಜೀವನವನ್ನು ಸಹನೀಯವಾಗಿಸುತ್ತವೆ.

ಕಷ್ಟಗಳು ಕಾಡಿದಾಗ ಅವುಗಳಲ್ಲಿ ಅಡಗಿರುವ ಸುಖದ ಸೆಲೆಯನ್ನು ಹುಡುಕೋಣ. ಅವುಗಳಲ್ಲಿ ಅಡಗಿರುವ ಅವಕಾಶವನ್ನು ಪತ್ತೆ ಮಾಡೋಣ. ಈ ರೀತಿ ತೊಡಗಿಸಿಕೊಳ್ಳುವ ಪ್ರಕ್ರಿಯೆ ಕೊಡುವ ಖುಷಿಯೇ ಬೇರೆ.



ಒಂದು ವೇಳೆ ಎಲ್ಲದೂ ಸುಲಭವಾಗಿ ಸಿಗುವ೦ತಿದ್ದರೆ ನಕ್ಷತ್ರವೇಕೆ ಚ೦ದವಿರುತ್ತಿತ್ತು? ಅದನ್ನು ಕೈಯಲ್ಲೇ ಇಟ್ಟುಕೊ೦ಡು ಆಟವಾಡಬಹುದಿತ್ತು ಅಲ್ಲವೇ?

- ಚಾಮರಾಜ ಸವಡಿ