Showing posts with label ಕವನ. Show all posts
Showing posts with label ಕವನ. Show all posts

ಒಳಗೊಳಗೇ ಉಳಿದು, ಬೆಳೆದು...

3 Jun 2012

0 ಪ್ರತಿಕ್ರಿಯೆ

ಇವತ್ತು ನನಗೀ ಮಾತಿನ ಯಂತ್ರದ ಹಂಗಿಲ್ಲ
ಹೃದಯಕ್ಕೆ ಮಾತಾಡುವದ ಕಲಿಸಿದ್ದೇನೆ
*****
ಪದೆ ಪದೆ ನೋಡುವಾಸೆ ಮೂಡದಿರಲೆಂದು
ನಿನ್ನ ಜೀವಂತವಾಗಿ ಎದೆಯಲ್ಲಿಟ್ಟುಕೊಂಡಿದ್ದೇನೆ
*****
ಕೈಗೆಟುಕದ ದೂರದಲ್ಲಿದ್ದರೇನು ನೀನು
ಇಲ್ಲೇ ಮಿಡಿಯುತ್ತೀ ಒಳಗೊಳಗೇ
*****
ಜಗವೆಲ್ಲ ಹುಡುಕ್ಹುಡುಕಿ ನಿರಾಶವಾಯಿತು
ಒಳಗೊಳಗೇ ನಕ್ಕ ನಿನ್ನ ನಗೆ ಕೇಳದಾಯಿತು
*****
ಕೊರಳ ದಾಟಿ ಹೊರಗ್ಹರಿಯದ ನಿನ್ನುಲಿಯ
ಅಪಾರ ದೂರದಿಂದ ತನ್ಮಯನಾಗಿ ಆಲಿಸಿದೆ
*****
ಬಿಡು ಮರುಳೆ, ಇರು ಅಲ್ಲೇ, ದೂರ ದೂರ
ಮಾಯೆಯಂಥ ಪ್ರೀತಿ ಅಂತರ ಮಾಯವಾಗಿಸಿದೆ
*****
ಇನ್ನು ನಿನ್ನ ಕರೆಯುವುದಿಲ್ಲ, ಮೊರೆಯಿಡುವುದಿಲ್ಲ
ಇನ್ನೇನಿದ್ದರೂ ಒಳಗೊಳಗೇ ನಿವೇದನೆ, ವೇದನೆ

- ಚಾಮರಾಜ ಸವಡಿ

ಆ ರಾತ್ರಿ ಹಾಗೆ...

13 May 2012

1 ಪ್ರತಿಕ್ರಿಯೆ
ಮೌನವಾಗಬೇಕು
ಕಿವಿಗೊಡಬೇಕು, ಮಾತಾಗಬಾರದು
ಸುಮ್ಮನೇ ನೋಡಬೇಕು
ಹೀರಿಕೊಂಡು ಸುಮ್ಮನಿರಬೇಕು
ಬೆಳೆಯಬೇಕು ಒಳಗೊಳಗೇ

ಉಕ್ಕುವ ಕಡಲಿಂದ ಸದ್ದು ಬರಬಾರದು
ಹೃದಯ ನಿಟ್ಟುಸಿರಿಡಬಾರದು
ಮುರಿದು ಬೀಳುವ ಸದ್ದಿರಲಿ
ಕಣ್ಣೀರೂ ಶಬ್ದವಾಗಬಾರದು

ಮೌನಕ್ಕೆ ಮಾತುಂಟು
ಥೇಟ್ ಹೃದಯದಂತೆ
ಕೊರಳುಬ್ಬಿ ಸುಮ್ಮನಾದಾಗ
ಎದೆಯಾಳದ್ದೇ ಮಾತು

ಹಾಗಂತ ಸುಮ್ಮನೇ ಕೂತಿದ್ದೇನೆ

ಮಾತು ಮೌನವಾಗಿದೆ
ಮೌನ ಮಾತಾಡುತ್ತಿದೆ
ಕೇಳಿಸಿಕೊಳ್ಳುವ ಕಿವಿಗಳ ಜಾಗದಲ್ಲಿ
ಹೃದಯ ಬಂದು ಕೂತಿದೆ

ಮೌನವಾಗಿ ಉಕ್ಕುವ ಕಡಲು
ಸದ್ದಿಲ್ಲದೇ ಮುರಿದುಬೀಳುವ ಕನಸು
ಆ ಕಾರ್ಗತ್ತಲ ರಾತ್ರಿಯಲಿ
ಗಡಿಯಾರಕ್ಕೂ ಮುನಿಸು

ಇದಿರೋದೇ ಹೀಗೆ
ಇದಿರಬೇಕಾಗಿದ್ದೂ ಹೀಗೇ
ಮಾತಿನಂಥ ಮೌನ
ಮೌನದಂಥ ಮಾತು
ಕನಸುನನಸುಗಳ ಕಲಸುಮೇಲೋಗರದಲ್ಲಿ
ನೆನಪೇ ಮರೆವು
ಮರೆವೇ ನೆನಪು

ಅದೇ ಬದುಕು
ಮತ್ತದೇ ಮರಣ

- ಚಾಮರಾಜ ಸವಡಿ

ಈ ರಾತ್ರಿಗೆ ಬೆಳಗಾಗುವುದಿಲ್ಲ

26 Mar 2012

1 ಪ್ರತಿಕ್ರಿಯೆ
ಇದ್ದ ಒಂದೇ ಕನ್ನಡಕ
ಬಿದ್ದು ಒಡೆದುಹೋಯಿತು

ಬೆಳಕಿಲ್ಲದ ರಾತ್ರಿ ಗಡಿಯಾರ ಹೆಳವ
ಅವಳ ದೀಪದಂಥ ಕಂಗಳಿಗೆ
ಅಕ್ಷರಗಳ ಹುಡುಕಲಿ ಹೇಗೆ?

ಗಾಜೆಂದುಕೊಂಡಿದ್ದು ಕಣ್ಣೇ ಆಗಿತ್ತೇನೋ
ಖಾಲಿ ಫ್ರೇಮಿನ ಕನ್ನಡಕದಲ್ಲಿ
ಅತಿ ನಿಚ್ಚಳ ಅವಳ ಬಿಂಬ

ಏನು ಮಾಡುವುದು ಅಪರಾತ್ರಿಯಲಿ
ದಿನದ ನಿಟ್ಟುಸಿರಿಗೆ ಹೊಸ ಕನಸ ಪೋಣಿಸಿ
ಹೃದಯದ ತೂತ ಮುಚ್ಚಲಾಗದು
ಸುಮ್‌ಸುಮ್ನೇ ಬೀರಿದ ಮುಗುಳ್ನಗೆಗಳ
ಖಾಲಿತನ ತುಂಬಲಾಗದು

ನಾಳೆ ಬೆಳಗಾಗುವವರೆಗೂ ಕತ್ತಲೆಯೇ
ಈ ರಾತ್ರಿ ದೂಡಬೇಕು, ಹೇಗೋ
ಅಕ್ಷರಗಳ ಕ್ಷಮೆ ಕೇಳಿ,
ಕನಸುಗಳಿಗೆ ಕಾಡದಿರಲು ಹೇಳಿ
ಖಿನ್ನ ಮನಸಿಗೆ ನಿದ್ರಿಸಲೊಂದು ಮನವಿ

ಹೂಂ. ಹಾಗೇ ಮಾಡಬೇಕು
ಮುರಿದ ಗಾಜುಗಳ ಗುಡಿಸಿ,
ಕನ್ನಡಕದ ಫ್ರೇಮು ಎತ್ತಿಟ್ಟು
ಬಾರದ ನಿದ್ದೆಗೆ ಬೇಡಿಕೆ ಇಟ್ಟು
ಮುಚ್ಚಬೇಕು ಕಣ್ಣ

ನಿನ್ನೆಯದೆಲ್ಲ ಇಂದಿಗಾದಂತೆ
ನಾಳೆಗಿರಲಿ ಇಂದು, ಎಂದು
ದೀಪವಾರಿಸಿ, ಎವೆ ಮುಚ್ಚಿದರೆ
ಕಣ್ಣರಳಿಸುತ್ತಾಳೆ ಕಣ್ಣೊಳಗೆ
ಕನ್ನಡಕದ ಹಂಗಿಲ್ಲದೇ ಸ್ಪಷ್ಟವಾಗುತ್ತಾಳೆ
ಮರೆಯಬೇಕೆಂದರೂ ಇಷ್ಟವಾಗುತ್ತಾಳೆ

ಅಷ್ಟೇ,
ಇನ್ನು ಈ ರಾತ್ರಿಗೆ ಬೆಳಗಾಗುವುದಿಲ್ಲ

- ಚಾಮರಾಜ ಸವಡಿ

ಹೀಗೆಂದರೆ ಹೀಗೇ, ಹೇಗಿದೆಯೋ ಹಾಗೆ

4 Mar 2012

0 ಪ್ರತಿಕ್ರಿಯೆ
ಅಂದುಕೊಂಡಂತೆ ಆಗದಿದ್ದರೆ
ಎಂದು ಯೋಚಿಸಿದೆ

ಭಯವಾಯಿತು:
ನಾನು ನಾನಾಗಿರಲ್ಲ

ಅಂದುಕೊಂಡಂತೆ ಆಗಿಬಿಟ್ಟರೆ

ಇನ್ನೂ ಭಯ
ಆಗಲೂ ನಾನು ನಾನಾಗಿರಲ್ಲ

ಹೀಗೇ ಇರಲಿ ಬಿಡು
ಹೀಗೆಂದರೆ ಹೀಗೇ

ಹೇಗಿದೆಯೋ ಹಾಗೆ

***

ಒಮ್ಮೊಮ್ಮೆ ಹೀಗೇ

ನೆನಪಾದಾಗೆಲ್ಲ ವಿಷಾದ
ಕೂತಲ್ಲೇ ಕಳೆದುಹೋಗೋದು
ಎದ್ದಾಗ ಕನಸು
ನಿದ್ದೆಯಲ್ಲಿ ಎಚ್ಚರ

ತುತ್ತು ನೆತ್ತಿಗೇರಿದಾಗ
ನೀರು ಹುಡುಕುವಂತೆ
ಬಿಕ್ಕಳಿಕೆ ನಿಂತಾಗ
ಏನೋ ಕಳಕೊಂಡಂತೆ

ಷೆಲ್ಫು ತುಂಬಿದ ಪುಸ್ತಕಗಳು
ಬರೀ ಲೊಳಲೊಟ್ಟೆ
ಹಸಿದ ಹೊಟ್ಟೆಯ ಮುಂದೆ
ಖಾಲಿ ತಟ್ಟೆ

ಮನಸೆಂಬುದು
ನೆಲೆ ಕಳೆದುಕೊಂಡ ನಾಯಿಮರಿ
ಅಪರಿಚಿತ ಊರಿನ ಬಸ್‌ಸ್ಟ್ಯಾಂಡು
ಒಳಗೇ ಬಚ್ಚಿಟ್ಟುಕೊಂಡು
ಊರೆಲ್ಲ ಹುಡುಕಾಟ

ಬರೀ ಬಿಡಿ ಚಿತ್ರಗಳು
ಜೋಡಿಸಿದಷ್ಟೂ ಗೊಂದಲ

ನಿನ್ನೆ ಎಂಬುದು ಇಂದಾಗಿ
ಇಂದೆಂಬುದೇ ನಾಳೆಯಾಗಿ
ಗಡಿಯಾರ ಮಂಕಾಗಿ
ಕಾಲವೆಂಬುದು ನಾಯಿಬಾಲದಂತೆ

ಸರಿಯಾಗದು
ಬಿಡಲಾಗದು

- ಚಾಮರಾಜ ಸವಡಿ

ಏಕೆ ಇಷ್ಟವಾಗುತ್ತಾರೋ...

10 Dec 2011

1 ಪ್ರತಿಕ್ರಿಯೆ
ಬೆಳಿಗ್ಗೆ ಬೇಗ ಏಳಬೇಕು
ಅಂತ ಮಲಗಿದಾಗ
ಕನಸಿನ ತುಂಬ
ಅಲಾರಾಂ ಮೊಳಗುವ ಸದ್ದು

***
 
ಚೆಂದದ ಕವಿತೆ
ಬರೆಯಲು ಕೂತರೆ
ಪೆನ್ನು ಮಂಕಾಗುತ್ತದೆ
ಕವಿತೆ ನಗುತ್ತದೆ
 
***
 
ಒಂದೇ ಒಂದು ಕನಸಿತ್ತು
ಅದು ನನಸಾಗಲೇ ಇಲ್ಲ

ಈಗಲೂ ನನ್ನ ಬಳಿ ಉಳಿದಿದ್ದು
ಆ ಕನಸೊಂದೇ
 
***
ಇಬ್ಬರು ಮಕ್ಕಳು
ಒಂದು ಕವಿತೆ

ಅದೂ ಮಗುವೇ!
 
***
 
ಕನಸಿಗೂ ಒಂದು ಮನಸಿದೆ
ಅದು ಕೈಗೆ ಸಿಗದಂತಿದೆ
 
***
 
ಕಣ್ಣೀರ ಹನಿಗಳ ಲೆಕ್ಕವಿಟ್ಟೆಯಾ?
ನೀನು ಕವಿಯೂ ಅಲ್ಲ, ಪ್ರೇಮಿಯೂ ಅಲ್ಲ
 
***
 
ಎಲ್ಲಿಂದಲೋ ಬಂದವರು
ಏಕೆ ಇಷ್ಟವಾಗುತ್ತಾರೋ!
 
***

- ಚಾಮರಾಜ ಸವಡಿ

ಮರೆಯಬೇಕಿದೆ ಎಲ್ಲಾ...

3 Oct 2011

3 ಪ್ರತಿಕ್ರಿಯೆ
ಎಲ್ಲಾ ಮರೆಯಬೇಕಿದೆ
ಹಾಗಂತ ಪದೆ ಪದೆ ನೆನಪಿಸಿಕೊಳ್ಳುತ್ತಿದ್ದೇನೆ

ಅಲಾರಾಂ ಅದುಮಿದ್ದೇನೆ
ಕರೆಗಂಟೆ ಕಿತ್ತಿದ್ದೇನೆ
ಗೇಟಿಗೆ ಹಾಕಿದ್ದ ಪತ್ರದ ಡಬ್ಬವನ್ನೂ ಬಿಚ್ಚಿಟ್ಟಾಗಿದೆ
ಯಾರೂ ಬರಬೇಡಿ
ನಾನು ಒಳಗಿಲ್ಲ

ಮುಚ್ಚಿದ ಬಾಗಿಲೊಳಗಿನ ಮನೆಯಲ್ಲಿ
ಬೆಳಕಿಲ್ಲ; ದೀಪ ಹಾಕುವಂತಿಲ್ಲ
ಫ್ಯಾನು, ಫೋನು, ಕುಕ್ಕರ್
ಊಹೂಂ
ನಲ್ಲಿ ತಿರುಗಿಸುವಂತಿಲ್ಲ,
ಹಾಡು ಗುನುಗುವಂತಿಲ್ಲ
ಒಳಗಿದ್ದೇನೆಂಬುದು ಹೊರಹೋಗುವಂತಿಲ್ಲ

ಸದ್ದೇ ಮಾಡದೇ ಕೂತರೂ
ಸೊಳ್ಳೆಗಳು ಮಾತಾಡಿಸುತ್ತವೆ
ಬಾಗಿಲು ಮುಚ್ಚಿದ್ದರೂ
ನೆನಪ ಕಿಟಕಿಗಳು ತೆರೆದುಕೊಳ್ಳುತ್ತವೆ
ಬೇಡವೆಂದ ಬೆಳಕು, ಶಬ್ದ
ಒಳ ಬಂದು ‘ಏನೀಗ?’ ಎಂಬಂತೆ
ಕೆಣಕುತ್ತವೆ, ಕೆರಳಿಸುತ್ತವೆ

ದುರುಗುಟ್ಟಿ ನೋಡಿದರೂ ಬೆದರುವುದಿಲ್ಲ
ಹೋಗಾಚೆ ಎಂದು ಒರಲಿದರೂ ಕೇಳುವುದಿಲ್ಲ
ಮರೆತ ಹಾಡುಗಳನ್ನು ನೆನಪಿಸಿ,
ಒರೆಸಿಹಾಕಿದ ಚಿತ್ರಗಳನ್ನು
ಎಲ್ಲೆಡೆ ಹರವುತ್ತವೆ; ಮನಸ ಕದಡುತ್ತವೆ

ಎಲ್ಲ ಮರೆಯಬೇಕೆಂದರೂ
ಎಲ್ಲಾ ನೆನಪಾಗುತ್ತದೆ
ಆ ಮಾತು, ಧ್ವನಿ, ಸಂದೇಶ, ಕನಸು
ಕವನ, ಕದನ, ಕಾಮನೆ, ಭಾವನೆ
ಒಂದೇ ಎರಡೇ
ಲೆಕ್ಕದ ಬೆಂಬತ್ತಿ, ಸೋತು ಸೋತು
ಮತ್ತೆ ಸುಮ್ಮನೇ ಕೂಡುತ್ತೇನೆ

ಬಾಗಿಲ ಮೇಲೆ ಬೆರಳಾಡಿಸಿದ ಸದ್ದು...
 

ಅದನ್ನೇ ಕಾಯುತ್ತಿದ್ದವನಂತೆ ಎದ್ದು
ಬಾಗಿಲು ತೆರೆದರೆ;

ಅವಳಿಲ್ಲ!

ಮರೆಯಬೇಕೆಂಬ, ಮರೆತ ಸಂಕಲ್ಪ
ಮತ್ತೆ ನೆನಪಾಗುತ್ತದೆ

- ಚಾಮರಾಜ ಸವಡಿ

ಎಲೆ ಕವಿತೆ, ಎಲ್ಲಿ ಅವಿತೆ?

24 Aug 2009

4 ಪ್ರತಿಕ್ರಿಯೆ
ಒಂದು ಕವಿತೆ ಬರೆಯಲು ಕೂತೆ

ಗಡಿಯಾರ ಸುಮ್ಮನಾಯಿತು
ಅರಳಬೇಕಿದ್ದ ಹೂಗಳು, ರಾತ್ರಿಯ
ಸದ್ದುಗಳು ಸುಮ್ಮನಾದವು
ಹುಳು ಹಿಡಿಯಲು ಹೊಂಚು ಹಾಕಿದ್ದ
ಗೋಡೆಯ ಮೇಲಿನ ಹಲ್ಲಿಯೂ ಸುಮ್ಮನಾಯಿತು

ಅಲೆಯಾಗುತ್ತಿದ್ದ ಸಂಗೀತ ಮೌನವಾಯಿತು
ಷೆಲ್ಫ್‌ನಲ್ಲಿ ಕೂತ ಕವಿಗಳು ಕಿವಿಯಾದರು
ಎದೆಯಲ್ಲಿದ್ದ ಸಾವಿರಾರು ಭಾವನೆಗಳು
ಭೋರ್ಗರೆಯಲು ಪಾಳಿ ಹಚ್ಚಿದವು

ಕಂಬನಿಯಾದ ಕನಸುಗಳು
ಮಾತೇ ಆಗದ ಪಿಸುಮಾತುಗಳು
ನಾಳೆ ಖಂಡಿತ ಅಂದುಕೊಂಡ
ನಿನ್ನೆಯ ಹಳವಂಡಗಳು
ನಾ ಮುಂದು, ತಾ ಮುಂದು
ಎಂದು ಒಂದೇ ಸಮ ನುಗ್ಗಿದವು

ಕಕ್ಕಾವಿಕ್ಕಿಯಾಯಿತು ಕೀಲಿಮಣೆ
ತಡವರಿಸಿದವು ಬೆರಳುಗಳು
ಮಾನಿಟರೂ ಬೆಚ್ಚಿಬಿದ್ದಂತಿತ್ತು
ಸಮಸ್ತ ಕವಿಗಳಾಣೆ, ದಾರ್ಶನಿಕರಾಣೆ
ಅನುಭಾವಿಗಳಾಣೆ, ಚೇತನಗಳಾಣೆ
ಇವು ಸತ್ಯ, ಇವು ನಿತ್ಯ
ಹೊರಬರಲು ಹಂಬಲಿಸಿದ್ದವು
ಕುದಿಯಾಗಿದ್ದವು, ತಿದಿಯೊತ್ತಿದ್ದವು
ಬೆರಳುಗಳ ಭವ ಹರಿದು
ಹಾಳೆ, ಪರದೆಗಳ ಬಂಧನ ತೊರೆದು
ಹಾಡಾಗಲು ಹಾತೊರೆದಿದ್ದವು-

ಏನೇ ಅಂದುಕೊಂಡರೂ,
ಎಷ್ಟೇ ಅಂಗಲಾಚಿದರೂ
ಕವಿತೆ ಏಕೋ ಕನಸ ಕನ್ನಡಿಯಾಗಲಿಲ್ಲ
ಮೂಡಲಿಲ್ಲ, ಅರಳಲಿಲ್ಲ, ಭೋರ್ಗರೆಯಲಿಲ್ಲ
ಮೊದಲ ಸಂಗಮದ ಕನ್ಯೆಯಂತೆ
ಮುದುಡಿತ್ತು, ನಲುಗಿತ್ತು, ಹಸಿದಿತ್ತು
ಚಿಮ್ಮಿ ಬರುವ ಮೊದಲೇ ಕುಸಿದಿತ್ತು

***

‘ಆಯ್ತಾ ಕವಿತೆ ಬರೆದಿದ್ದು?’
ಎಂದು ಕೇಳುತ್ತ ನನ್ನವಳು ಒಳಬರುತ್ತಲೇ
ನಾಚಿ ಕಿಟಕಿಯಿಂದಾಚೆ ಹಾರಿಹೋಯಿತ್ತು.

- ಚಾಮರಾಜ ಸವಡಿ