ಮತ್ತದೇ ಕನಸು. ಮತ್ತದೇ ಕನವರಿಕೆ

1 Nov 2015

0 ಪ್ರತಿಕ್ರಿಯೆ
ಸುದೀರ್ಘ ಮೌನದ ನಂತರದ ಮಾತು ನಿಜಕ್ಕೂ ಕಷ್ಟ.

ಹಾಗಂತ ಮಾತಿರುವುದಿಲ್ಲ ಅಂತ ಏನಿಲ್ಲ. ಹೇಳಲಿಕ್ಕೆ, ಹಂಚಿಕೊಳ್ಳಲಿಕ್ಕೆ ಸಾವಿರಾರು ಸಂಗತಿಗಳಿರುತ್ತವೆ. ಈ ಸಂದರ್ಭಕ್ಕೆಂದೇ ಅಂದುಕೊಂಡಿದ್ದ ಸೊಗಸಾದ ಸಾಲುಗಳಿರುತ್ತವೆ. ಮೆಚ್ಚಿದ ಪದ್ಯ, ನಗಿಸಿದ ಹಾಸ್ಯ, ಆರ್ದ್ರವಾಗಿಸಿದ ಭಾವನೆಗಳಿರುತ್ತವೆ. ಹೇಳಬೇಕೆಂಬ ತುಡಿತವೂ ಬಲವಾಗಿರುತ್ತದೆ.

ಆದರೆ, ಹೇಳಲಾಗುವುದಿಲ್ಲ. ಹಾಗಂತ, ಹೇಳದಿರಲೂ ಆಗುವುದಿಲ್ಲ.

ನಿಜವಾದ ಕಷ್ಟ ಅದು. ಮನಸಿನ ಮಾತುಗಳು ನಿಜದ ಮಾತಾಗದಿರುವ ಕಷ್ಟ ಬಲು ಹಿಂಸೆ ಕೊಡುತ್ತದೆ.

ಬರಹವೂ ಹಾಗೇ.

ಏನೋ ಹೇಳಬೇಕೆಂದು ಅಕ್ಷರ ಜೋಡಿಸಲು ಹೊರಡುತ್ತೇವೆ. ಭಾವನೆಗಳು ಸಾಲುಗಳಾಗುವುದಿಲ್ಲ. ಬರೆದ ಸಾಲುಗಳು ಭಾವವನ್ನು ಬಿಂಬಿಸುವುದಿಲ್ಲ. ಬರೆದಿದ್ದನ್ನು ಅಳಿಸಿ, ಹೊಸದಾಗಿ ಬರೆಯಲು ಹೋಗಿ, ಅದು ಕಲಸುಮೇಲೋಗರವಾಗಿ, ಇದಾ ನನ್ನ ಭಾವತೀವ್ರತೆಯ ಪ್ರತಿಬಿಂಬ ಎಂದು ಬೇಸರವಾಗುತ್ತದೆ.

ಬರೆಯುವುದನ್ನು ನಿಲ್ಲಿಸಿ, ಸುಮ್ಮನೇ ಕೂತರೆ, ಎದೆಯೊಳಗಿನ ಭಾವಗಳು ಮಾತಿಗಿಳಿಯುತ್ತವೆ, ಸ್ವಗತವಾಗುತ್ತದೆ. ಒಬ್ಬನೇ ಇಬ್ಬಿಬ್ಬರಾಗಿ ಮಾತಾಡಿಕೊಂಡಂತೆ, ಅಂದುಕೊಂಡ ಭಾವಗಳೆಲ್ಲ ಸಲೀಸಾಗಿ ಹೊರಬಂದಂತೆ, ಅವಕ್ಕೊಂದು ಖಚಿತ ಅರ್ಥವೂ ದಕ್ಕಿದಂತೆ, ಆಹಾ. ಆ ಸ್ವಗತದ ಸೊಗಸೇ ಸೊಗಸು.

*****

ಇತ್ತೀಚೆಗೆ ಇಂಥ ಭಾವತೀವ್ರತೆ, ಹೇಳಲಾಗದ ತೊಳಲಾಡುವಿಕೆ ತುಂಬ ಕಾಡಿದೆ. ಕಾಡುತ್ತಲೇ ಇದೆ. ಏನೋ ಬರೆಯಬೇಕೆಂದುಕೊಳ್ಳುತ್ತಲೇ, ಅದು ಮತ್ತೇನೋ ಆಗಿ, ಛೇ ಇದು ಸರಿ ಹೋಗಲಿಲ್ಲ ಎಂದು ಅಳಿಸಿ, ಊಹೂಂ, ಅಳಿಸಬಾರದಿತ್ತೆಂದು ಹಳಹಳಿಸಿ, ಮತ್ತೆ ಮತ್ತೆ ಸುಮ್ಮನೇ ಕೂತು, ಭಾವಗಳೊಂದಿಗೆ ಸ್ವಗತಕ್ಕಿಳಿಯುವುದೇ ಹೆಚ್ಚಾಗುತ್ತಿದೆ. ತುಂಬ ದಿನ ಬರೆಯುವುದನ್ನು ಬಿಟ್ಟಿದ್ದರ ಪರಿಣಾಮ ಇದು ಎಂದು ಅನಿಸಿದರೂ, ಎಲ್ಲೋ ಕೊಂಡಿ ಜೋಡಣೆಯಾಗುತ್ತಿಲ್ಲ ಎಂದು ಮತ್ತೆ ಮತ್ತೆ ಅನಿಸುತ್ತದೆ. ಈ ಮಾತಿಗೆ, ಭಾವಕ್ಕೆ, ಮಾತು-ಭಾವ ಬೆಸೆಯುತ್ತಿದ್ದ ಮನಸ್ಸೊಂದು ದೂರವಾಗಿದೆ ಎಂಬ ಹಳಹಳಿ.

*****

ಕಳೆದುಕೊಳ್ಳುವುದೆಂದರೆ, ಭಾವತಿವ್ರತೆಯನ್ನು ಹೊರಹಾಕಲು ಸೋಲುವುದು. ಪದೆ ಪದೆ ಮನಸ್ಸಿನಲ್ಲಿ ಮೆಲುಕುಹಾಕುತ್ತಿದ್ದರೂ ಅದು ಮಾತಾಗದಿರುವುದು, ಅಕ್ಷರಗಳಾಗದಿರುವುದು, ಯಾವುದೇ ಕ್ರಿಯಾತ್ಮಕ ಕೆಲಸದಲ್ಲಿ ಹೊಮ್ಮದಿರುವುದು. ಅದು ಕೊಡುವ ಕಾಟ ಸಹಿಸಲಾಗದೇ, ಮತ್ತೆ ಮತ್ತೆ ಬರೆಯಲೆತ್ನಿಸುವುದು. ಸೋಲುವುದು. ಸೋತು ಸೋತು ಸ್ವಗತಕ್ಕಿಳಿಯುವುದು. ಸುದೀರ್ಘ ಕಾಲದವರೆಗೆ ಮತ್ತೆ ಮೌನವಾಗುವುದು.
*****
ಬಹುಶಃ ತುಂಬ ದಿನ ಇಂಥ ಸ್ಥಿತಿ ಉಳಿಯಲಿಕ್ಕಿಲ್ಲ. ಕೈಗಳು ಮತ್ತೆ ಮತ್ತೆ ಕೀಬೋರ್ಡ್ ಸವರುತ್ತವೆ. ಮಾತುಗಳಿಗೆ ಅಕ್ಷರರೂಪ ಕೊಡಲು ಯತ್ನಿಸುತ್ತವೆ. ಹಾಗೆ ಪ್ರಯತ್ನಿಸುತ್ತಲೇ ಸೋಲುತ್ತವೆ. ಬರೆದಿದ್ದನ್ನು ಅಳಿಸುತ್ತ, ಮತ್ತೆ ಮತ್ತೆ ಬರೆಯಲು ಯತ್ನಿಸುತ್ತ, ಬಿಡಿಬಿಡಿ ಭಾವಗಳನ್ನು ಇಡಿಯಾಗಿಸಲು ಪ್ರಯತ್ನಿಸುತ್ತಲೇ ಮನಸ್ಸನ್ನು ಜರಡಿಯಾಗಿಸುತ್ತ ಹೋಗುತ್ತೇನೆ. ಒಂದಾದರೂ ಮುತ್ತು ಉದುರೀತಾ ಎಂದು ಮತ್ತೆ ಮತ್ತೆ ನೋಡಿಕೊಳ್ಳುತ್ತೇನೆ.

ಇದೊಂದು ಮುಗಿಯದ ಕನಸು. ತೀರದ ದಾಹ. ಮತ್ತೆ ಮತ್ತೆ ಕನಸು. ಮತ್ತೆ ಮತ್ತೆ ದಾಹ.

ಹನಿಯೊಡೆಯದ ಕಾರ್ಮುಗಿಲನ್ನು ಕುದಿವ ಭೂಮಿ ದಿಟ್ಟಿಸುವಂತೆ, ಬೀಸುವ ಗಾಳಿಯ ನೆಪಕ್ಕೆ ಕಾಯ್ದಂತೆ, ಮನಸ್ಸು ಮತ್ತದೇ ಸ್ಪೂರ್ತಿಯನ್ನು ಹುಡುಕುತ್ತದೆ. ಹುಡುಕ್ಹುಡುಕಿ ನಿರಾಶೆಗೊಳ್ಳುತ್ತದೆ.

ಬಂದೀತು ಮತ್ತೆ ಮಳೆ ಸುಗ್ಗಿ, ಎಲ್ಲೆಗಳ ಮೀರೀತು ಹಿಗ್ಗಿ.

ಮತ್ತದೇ ಕನಸು. ಮತ್ತದೇ ಕನವರಿಕೆ.

- ಚಾಮರಾಜ ಸವಡಿ

ಹೋಗಿ ಬನ್ನಿ ಕಲಾಂ ಸಾರ್

27 Jul 2015

0 ಪ್ರತಿಕ್ರಿಯೆ
ಕೆಲವೊಂದು ಸಾವುಗಳೇ ಹಾಗೆ. ತೀರಾ ಅನಿರೀಕ್ಷಿತವಾಗಿರುತ್ತವೆ. ಹೀಗಾಗಿ, ಹೆಚ್ಚು ದುಃಖ ತರುತ್ತವೆ. ಸಾವು ನಿರೀಕ್ಷಿತ ಎಂಬ ಭಾವನೆಯೊಂದಿಗೆ ನಿತ್ಯ ಬದುಕುವವರಿಗೂ, ಕೆಲವರ ಸಾವು ತಕ್ಷಣ ಜೀರ್ಣಿಸಿಕೊಳ್ಳಲು ಆಗುವುದಿಲ್ಲ.
ಮಾಜಿ ರಾಷ್ಟ್ರಪತಿ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅವರ ಅನಿರೀಕ್ಷಿತ ನಿರ್ಗಮನ ಅಂಥದು.

ಕಲಾಂ ಎಂದರೆ ನೆನಪಾಗುವುದು ಸರಳತೆ. ಮೇಲೇರಿದವ ಚಿಕ್ಕವನಿರಬೇಕೆಂಬ ಕವಿಮಾತಿಗೆ ನಿದರ್ಶನ. ಶಾಲೆ-ಕಾಲೇಜುಗಳ ಕಾರ್ಯಕ್ರಮಕ್ಕೆ ಆದ್ಯತೆ ಮೇಲೆ ಹೋಗುತ್ತಿದ್ದ ಈ ವಿಜ್ಞಾನಿ ಮಕ್ಕಳೊಂದಿಗೆ ಬೆರೆಯುತ್ತಿದ್ದ ಬಗೆ ನಿಜಕ್ಕೂ ಅಚ್ಚರಿ ಹುಟ್ಟಿಸುವಂಥದು. ಒಂದೇ ಒಂದು ಪುಟ್ಟ ಬಡ್ತಿಗೂ ಹುಚ್ಚರಂತೆ ಆಡುವವರ ಮಧ್ಯೆ, ಅಷ್ಟೆಲ್ಲ ಎತ್ತರ ಏರಿಯೂ ಮಕ್ಕಳ ಮಟ್ಟಕ್ಕೆ ಇಳಿದು ಬೆರೆಯುತ್ತಿದ್ದ ಕಲಾಂ ನಿಜಕ್ಕೂ ಅಪರೂಪದ ವ್ಯಕ್ತಿ.

ಅವರಲ್ಲಿ ವಿಜ್ಞಾನದ ಬಗ್ಗೆ ಅಚ್ಚರಿ, ಕುತೂಹಲ, ಪ್ರೀತಿ ಹಾಗೂ ವಿಪರೀತ ಆಕರ್ಷಣೆ ಇತ್ತು. ರಾಷ್ಟ್ರಪತಿಯಾಗಿದ್ದು ಅನಿರೀಕ್ಷಿತವಾಗಿ. ಐದು ವರ್ಷ ಆ ಹುದ್ದೆಯಲ್ಲಿದ್ದ ಅವರಿಗೂ ಒಂಚೂರು ಮೋಹ ಬೆಳೆದಿತ್ತು. ಹೀಗಾಗಿ, ಎರಡನೇ ಅವಧಿಗೂ ಮುಂದುವರಿಯುವ ಇಚ್ಛೆ ವ್ಯಕ್ತಪಡಿಸಿದರು. ಆದರೆ, ಯುಪಿಎ ಸರ್ಕಾರಕ್ಕೆ ಅವರು ಬೇಡವಾಗಿದ್ದರು. ಕೊಂಚ ಬೇಸರದಿಂದಲೇ ರಾಷ್ಟ್ರಪತಿ ಭವನದಿಂದ ನಿರ್ಗಮನಿಸಿದ ಕಲಾಂ ಹೋಗಿ ನಿಂತಿದ್ದು ಮಕ್ಕಳ ಬಳಿ.

ನಿಜವಾದ ಕಲಾಂ ಹೊಮ್ಮಿದ್ದು ಅಲ್ಲಿಯೇ. ರಾಷ್ಟ್ರಪತಿ ಭವನದ ಎತ್ತರದಲ್ಲಿ ಎದ್ದು ಕಾಣುತ್ತಿದ್ದ ಅವರ ಸರಳತೆಗಿಂತ, ಮಕ್ಕಳ ಜೊತೆ ಬೆಳೆದ ಅವರ ಸರಳತೆ ಹೆಚ್ಚು ಸೆಳೆಯುತ್ತಿತ್ತು. ವಿಜ್ಞಾನವನ್ನು ಮಕ್ಕಳ ಮನಸ್ಸಿನಲ್ಲಿ ತುಂಬಿದರು. ಹೊಸದನ್ನು ಶೋಧಿಸುವ ಹುಚ್ಚನ್ನು ಬೆಳೆಸಿದರು. ರಾಷ್ಟ್ರಪತಿಯಾಗಿ ಮಾಡದ, ಮಾಡಲು ಆಗದ ಕೆಲಸಗಳನ್ನು ಮಾಜಿಯಾದ ನಂತರ ಖುಷಿಯಿಂದ ಮಾಡಿಕೊಂಡು ಬಂದರು ಕಲಾಂ.

ಕಲಾಂ ಸಾವಿನ ಸುದ್ದಿ ಓದುತ್ತ ನನಗೆ ಬಾಲ್ಯದ ಕೆಲವು ಕನಸುಗಳು ನೆನಪಾಗುತ್ತವೆ. ಕಲಿಸಿದ ಶಿಕ್ಷಕರು, ಗೆಳೆಯರು ನೆನಪಾಗುತ್ತಾರೆ. ಒಬ್ಬನೇ ವ್ಯಕ್ತಿಯ ಸಣ್ಣ ತಾಳ್ಮೆ, ತ್ಯಾಗ, ನೆರವು ಜೀವನಪರ್ಯಂತೆ ಅದ್ಹೇಗೆ ಪೊರೆಯುತ್ತ ಹೋಗುತ್ತದೆ ಎಂಬುದನ್ನು ನೆನೆದರೆ ಅಚ್ಚರಿಯಾಗುತ್ತದೆ. ಇಂಥ ಸುಂದರ, ಸ್ನಿಗ್ಧ ಬಾಲ್ಯಕ್ಕೆ ಕಲಾಂರಂಥ ದೈತ್ಯ ವ್ಯಕ್ತಿ ಬಂದಾಗ, ಅದನ್ನು ಅನುಭವಿಸಿದ ಮಕ್ಕಳ ಮನಸ್ಸು ಅದೆಂಥ ಸ್ಪೂರ್ತಿ ಪಡೆಯಲಿಕ್ಕಿಲ್ಲ?

ಚಾಚಾ ನೆಹರು ಎಂದು ನಮಗೆಲ್ಲ ಹೇಳಿಕೊಟ್ಟ ಭಾರತದ ಮಾಜಿ ಪ್ರಧಾನಿ ಮಕ್ಕಳಿಗೆ ನಿಜಕ್ಕೂ ಏನೂ ಮಾಡಲಿಲ್ಲ. ಆದರೆ, ಅಂಥ ಬೂಟಾಟಿಕೆಯೇನೂ ಮಾಡದ ಕಲಾಂ, ಮಕ್ಕಳ ಮನಸ್ಸಿನಲ್ಲಿ ಮೂಡಿಸಿದ ಪ್ರಭಾವ ನಿಜಕ್ಕೂ ಅಗಾಧ. ಬಹುಶಃ 2020 (ಪುರ) ಯೋಜನೆಯನ್ನು ರೂಪಿಸುವ ಸಮಯದಲ್ಲಿ ಕಲಾಂ ಅವರ ಮನಸ್ಸಿನಲ್ಲಿ ಮಕ್ಕಳೇ ಇದ್ದಿರಬೇಕು. ಏಕೆಂದರೆ, ಮಕ್ಕಳಂಥ ಹುಲುಸಾದ ಭೂಮಿಯಲ್ಲಿ ಮಾತ್ರ ಕನಸುಗಳನ್ನು ಬಿತ್ತಲು ಸಾಧ್ಯ. ಬೆಳೆಸಲು ಸಾಧ್ಯ.

ಆ ಕೆಲಸವನ್ನು ಕಲಾಂ ಅದ್ಭುತವಾಗಿ ಮಾಡಿಹೋಗಿದ್ದಾರೆ. ಅವರು ರೂಪಿಸಿದ ಕ್ಷಿಪಣಿಗಳಿಗಿಂತ ಎತ್ತರಕ್ಕೆ ಈ ಕನಸುಗಳು ಹೋಗಲಿವೆ. ಒಬ್ಬ ವ್ಯಕ್ತಿಯ ನಿಜವಾದ ಕೊಡುಗೆ ಇದು.

ಈ ಕಾರಣಕ್ಕಾಗಿ ಬಹುಕಾಲ ನೆನಪಿನಲ್ಲಿರುತ್ತಾರೆ ಕಲಾಂ.

ಅಷ್ಟೇ ಅಲ್ಲ, ಅವರ ಮುಗ್ಧತೆ, ತಿಳಿವಳಿಕೆ, ವಿನಯವಂತಿಕೆ, ಸರಳತೆ, ಏನನ್ನೂ ಇಟ್ಟುಕೊಳ್ಳದೇ ಎಲ್ಲವನ್ನೂ ಹೊಂದುವಂಥ ವ್ಯಕ್ತಿತ್ವ ತುಂಬ ಕಾಲ ಮನಸ್ಸಿನಲ್ಲಿರುತ್ತದೆ.

ಹೋಗಿ ಬನ್ನಿ ಕಲಾಂ ಸಾರ್.

- ಚಾಮರಾಜ ಸವಡಿ