Showing posts with label ಪುಸ್ತಕ. Show all posts
Showing posts with label ಪುಸ್ತಕ. Show all posts

ಸಂಗೊಳ್ಳಿ ರಾಯಣ್ಣ ತಂದ ಹೊಸ ಕನಸು

16 Oct 2010

2 ಪ್ರತಿಕ್ರಿಯೆ
ಸಂಗೊಳ್ಳಿ ರಾಯಣ್ಣನ ಬಗ್ಗೆ ಬಿಬಿಎಂಪಿ (ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ)ಗೆ ಪುಸ್ತಕ ಮಾಡಿಕೊಡಲು ನನಗೆ ದಕ್ಕಿದ ಅವಧಿ ಕೇವಲ ಮೂರು ದಿನಗಳು ಮಾತ್ರ.

ಅಷ್ಟೊತ್ತಿಗೆ ಶುರುವಾಗಿದ್ದು ಕೆಐಎಡಿಬಿ ಹಾಗೂ ಡಿನೋಟಿಫಿಕೇಶನ್‌ ಹಗರಣಗಳು. ಕಚೇರಿ ಕೆಲಸದ ಅವಧಿ ಸಹಜವಾಗಿ ಹೆಚ್ಚಾಗಿತ್ತಾದರೂ, ಪುಸ್ತಕ ಪ್ರೀತಿಯನ್ನು ಕೈಬಿಡುವಂತಿರಲಿಲ್ಲ.

ಹೀಗಾಗಿ, ನಿದ್ದೆಗೆಡುವುದು ಅನಿವಾರ್ಯವಾಯಿತು. ಜೊತೆಗೆ, ಸಂಗೊಳ್ಳಿ ರಾಯಣ್ಣನ ಕುರಿತ ಮಾಹಿತಿ ಸಂಗ್ರಹದ ಕಠಿಣ ಕೆಲಸ.

ಸಾಮಾನ್ಯವಾಗಿ ಐತಿಹಾಸಿಕ, ತಾಂತ್ರಿಕ ವಿಷಯಗಳಿಗೆ ಸಂಬಂಧಿಸಿದಂತೆ ಕನ್ನಡದಲ್ಲಿ ಮಾಹಿತಿ ಪುಸ್ತಕಗಳು ಸರಿಯಾಗಿ ಸಿಗುವುದಿಲ್ಲ. ಸದ್ಯ ಇರುವ ಬಹುತೇಕ ಪುಸ್ತಕಗಳು ಅಪ್‌ಡೇಟ್‌ ಆಗಿರುವುದಿಲ್ಲ. ಎಲ್ಲಕ್ಕಿಂತ ಮುಖ್ಯ ಸಮಸ್ಯೆ ಎಂದರೆ ಫೊಟೊ, ಭೂಪಟಗಳ ಕೊರತೆ. ಇವನ್ನೆಲ್ಲ ನೀಗಿಸಿಕೊಳ್ಳಬೇಕೆಂದರೆ, ಪುಸ್ತಕವನ್ನು ಅಂದುಕೊಂಡ ಸಮಯಕ್ಕೆ ನೀಡುವುದು ಸುಲಭವಲ್ಲ.

ಅದರಲ್ಲೂ ನಾನು ಒಪ್ಪಿಕೊಂಡ ಪುಸ್ತಕದ ಪುಟಮಿತಿ ನಿರ್ಧಾರವಾಗಿದ್ದು ಅಚ್ಚಿಗೆ ಹೋಗುವ ಹಿಂದಿನ ದಿನ. ಇವೆಲ್ಲ ಸಮಸ್ಯೆಗಳಿಂದಾಗಿ, ಯಾಕಾದರೂ ಈ ಕೆಲಸ ಒಪ್ಪಿಕೊಂಡೆನೋ ಎಂದು ಅನಿಸುವಷ್ಟು ಕಿರಿಕಿರಿಯಾಯ್ತು.

ತಕ್ಕ ಮಟ್ಟಿಗೆ ಮಾಹಿತಿ ಸಂಗ್ರಹಿಸಿಕೊಂಡು ಪುಸ್ತಕ ಬರೆಯಲು ಶುರು ಮಾಡಿದೆ. ಕಚೇರಿ ಕೆಲಸ ಮುಗಿಸಿಕೊಂಡು ರಾತ್ರಿ ಬರೆಯಲು ಕೂಡುತ್ತಿದ್ದೆ. ದಿನಕ್ಕೆ ಇಪ್ಪತ್ತು ಪುಟಗಳಂತೆ ನಾನು ಬರೆದಿದ್ದು ಮೂರು ದಿನಗಳ ಕಾಲ. ಅದರಲ್ಲಿ ಒಂದಿಡೀ ರಾತ್ರಿ ನಿದ್ದೆಗೆಡಬೇಕಾಯ್ತು.

ಪುಟ ವಿನ್ಯಾಸ ಮಾಡಿದಾಗ, ಪುಟಗಳ ಸಂಖ್ಯೆ ೭೫ ದಾಟಿತ್ತು. ಅಷ್ಟೊತ್ತಿಗೆ, ಪುಸ್ತಕದ ಮಿತಿಯನ್ನು ೪೮ ಪುಟಗಳ ಮಿತಿಗೆ ಇಳಿಸುವಂತೆ ಬಿಬಿಎಂಪಿಯಿಂದ ಸೂಚನೆ ಬಂತು.

ಆಗ ಶುರುವಾಯ್ತು ನೋಡಿ ಪೀಕಲಾಟ. ಕೊನೇ ಹಂತದಲ್ಲಿ ಪುಸ್ತಕ ಕಿರಿದುಗೊಳಿಸುವುದು ಹೇಗೆ?

ಹೀಗಾಗಿ, ಮೂರು ಮುಖ್ಯ ಅಧ್ಯಾಯಗಳನ್ನು ಮುಲಾಜಿಲ್ಲದೇ ಕಿತ್ತು ಹಾಕಿದೆ. ವಿಸ್ತಾರವಾಗಿದ್ದ ಭಾಗಗಳನ್ನು ಕಿರಿದುಗೊಳಿಸಿದೆ. ಹಲವಾರು ಪೂರಕ ಹಾಗೂ ಇದುವರೆಗೆ ಹೆಚ್ಚಿನ ಜನರಿಗೆ ಗೊತ್ತಿರದ ಸಂಗತಿಗಳು ಮರೆಯಾಗಬೇಕಾಯ್ತು. ಇದರಿಂದಾಗಿ ಪುಸ್ತಕದ ಒಟ್ಟು ಧ್ವನಿಯೇ ಗೊಗ್ಗರಾದಂತೆನಿಸಿ ಬೇಸರವಾಯ್ತು.

ಆಗ ಮತ್ತೊಂದು ವಿನಂತಿ ಬಂತು. ಪುಸ್ತಕದಲ್ಲಿ ಗಣ್ಯರ ಶುಭಾಶಯಗಳನ್ನು ಹಾಕಿಕೊಳ್ಳಬೇಕು!

ಮುಖ್ಯಮಂತ್ರಿ, ಪ್ರತಿಪಕ್ಷ ನಾಯಕ, ಮಹಾಪೌರ- ಹೀಗೆ ನಾಲ್ಕೈದು ಜನರ ಶುಭಾಶಯಗಳು ಬಂದು ಬಿದ್ದವು. ಅವನ್ನೆಲ್ಲ ಪುಸ್ತಕದಲ್ಲಿ ಸೇರಿಸಲು ಮತ್ತೆರಡು ಅಧ್ಯಾಯಗಳು ಸ್ವಾಹಾ ಆದವು.

ಕೊನೆಗೂ ಪುಟ ವಿನ್ಯಾಸ ಮುಗಿದು, ಪುಸ್ತಕ ಅಚ್ಚಿಗೆ ಹೋಗುವಾಗ, ಸಂಗೊಳ್ಳಿ ರಾಯಣ್ಣನ ಮೂರ್ತಿ ಹಿಡಿದಿದ್ದ ಕತ್ತಿಯನ್ನು ನಾನೇ ಎತ್ತಿಕೊಳ್ಳಲೇ ಎನಿಸುವಷ್ಟು ರೇಗಿಹೋಗಿತ್ತು.

ಇದನ್ನೆಲ್ಲ ಮರೆಸಿದ್ದು ನಾನು ರಾಯಣ್ಣನ ಬಗ್ಗೆ ತಿಳಿಯುತ್ತ, ಬರೆಯುತ್ತ ಕೂತ ಆ ಮೂರು ದಿನಗಳು. ಎಂಥಾ ಅದ್ಭುತ ವ್ಯಕ್ತಿಯಾಗಿದ್ದ ರಾಯಣ್ಣ! ಕಿತ್ತೂರು ಸಂಸ್ಥಾನವನ್ನು ಮತ್ತೆ ಸ್ವತಂತ್ರಗೊಳಿಸಬೇಕೆಂದು ಮುಂದಾದಾಗ, ಮಮತೆ ಕಾಡಬಾರದು ಎಂದು ತುಂಬು ಬಸುರಿ ಹೆಂಡತಿಯನ್ನು ತೌರು ಮನೆಗೆ ಕಳಿಸುತ್ತಾನೆ. ಹುಟ್ಟಿದ ಮಗುವನ್ನೂ ನೋಡಲು ಹೋಗುವುದಿಲ್ಲ. ಗುಪ್ತ ವೇಷದಲ್ಲಿ ಆತ ಒಮ್ಮೆ ಹೆಂಡತಿ ಇದ್ದ ಊರಿಗೇ ಹೋದರೂ ಮನೆಗೆ ಹೋಗುವುದಿಲ್ಲ. ಹೆಂಡತಿ-ಮಗುವಿನ ಮೋಹ ತನ್ನ ಉದ್ದೇಶವನ್ನು ಬಲಿ ತೆಗೆದುಕೊಂಡಾವು ಎಂಬ ಅಳುಕಿಗೆ.

ಇಂಥ ಹಲವಾರು ಘಟನೆಗಳು ಮೂಲ ಬರವಣಿಗೆಯಲ್ಲಿದ್ದವು. ಇಂಥ ಇನ್ನೂ ಹಲವಾರು ಅಂಶಗಳು ಇನ್ನೂ ಸೇರಬೇಕಿದ್ದವು. ಸಂಗೊಳ್ಳಿ ರಾಯಣ್ಣನ ಬಗ್ಗೆ ವಸ್ತುಸ್ಥಿತಿ ನೀಡುವುದಕ್ಕಿಂತ ರೋಚಕ ಮಾಹಿತಿ ಹೊಂದಿರುವ ಪುಸ್ತಕಗಳೇ ಹೆಚ್ಚಾಗಿರುವಾಗ, ಈ ಪುಸ್ತಕವಾದರೂ ವಸ್ತುನಿಷ್ಠ ಆಗಲೆಂದು ನನಗಿದ್ದ ಸಾಕಷ್ಟು ಮಿತಿಯಲ್ಲಿ ಪ್ರಯತ್ನಿಸಿದ್ದೆ. ಆದರೆ, ಅನಿವಾರ್ಯ ಕಾರಣಗಳಿಂದಾಗಿ ಆ ಆಸೆ ಈಡೇರಿದ್ದು ಅರೆಬರೆಯಾಗಿ. ಅದೇ ಬೇಸರ.

ದುರಂತ ಎಂದರೆ, ’ಸ್ವಾತಂತ್ರ‍್ಯದ ಕಿಡಿ ಸಂಗೊಳ್ಳಿ ರಾಯಣ್ಣ’ ಎಂಬ ಶೀರ್ಷಿಕೆಯ ಈ ಪುಸ್ತಕ ಮಾರುಕಟ್ಟೆಯಲ್ಲಿ ಸಿಗುವುದಿಲ್ಲ. ಬಿಬಿಎಂಪಿ ಪುಸ್ತಕಗಳನ್ನು ತಾನೇ ಹಂಚಿದೆ.

ಹೀಗಾಗಿ, ಈ ಪುಸ್ತಕವನ್ನು ಇನ್ನಷ್ಟು ವಿಸ್ತರಿಸಿ, ಮುಕ್ತ ಮಾರುಕಟ್ಟೆಯಲ್ಲಿಯೂ ದೊರೆಯುವಂತೆ ಮಾಡೋಣ ಎಂದು ಒಂದಿಬ್ಬರು ಆಸಕ್ತರು ಸೂಚಿಸಿದ್ದಾರೆ. ಹೀಗಾಗಿ, ಪುಸ್ತಕವನ್ನು ಇನ್ನಷ್ಟು ವಿವರವಾಗಿ ಬರೆಯಬೇಕಿದೆ.

ಆ ನೆಪದಲ್ಲಿ ಮತ್ತೊಮ್ಮೆ ಸಂಗೊಳ್ಳಿ ರಾಯಣ್ಣನ ವೀರ ವ್ಯಕ್ತಿತ್ವವನ್ನು ಸವಿಯಬಹುದು ಎಂಬ ಪುಳಕ ನನಗಿದೆ.

ಅಲ್ಲಿಯವರೆಗೆ, ಈಗ ಅಚ್ಚಾಗಿ ಮಾಯವಾಗಿರುವ ಪುಸ್ತಕದ ಪಿಡಿಎಫ್‌ ಪ್ರತಿಯನ್ನು ನನ್ನ ಬ್ಲಾಗ್‌ಗೆ ಹಾಕಬೇಕೆನ್ನುವ ಯೋಚನೆಯಿದೆ. ಅದಕ್ಕೆ ಒಂಚೂರು ಸಮಯ ಬೇಕು. ನನ್ನ ಸೋಮಾರಿತನ ಅವಕಾಶ ಮಾಡಿಕೊಡಬೇಕು.

ರಾಯಣ್ಣನಂಥ ವ್ಯಕ್ತಿಗಳು ಹೆಚ್ಚೆಚ್ಚು ಹರಡಿದಷ್ಟೂ ನಮ್ಮ ನಡುವಿನ ಮಲ್ಲಪ್ಪ ಶೆಟ್ಟಿಗಳು, ವೆಂಕಟರಾಯರು, ಬಾಳಪ್ಪ ಕುಲಕರ್ಣಿಯಂಥವರ ಪ್ರಭಾವ ಕಡಿಮೆಯಾಗುತ್ತದೆ. ಆ ಕಾರಣಕ್ಕಾಗಿಯಾದರೂ ಮರೆತಿರುವ ಇಂಥ ಮಹನೀಯರಿಗೆ ಮರು ಜೀವ ಕೊಡಬೇಕಿದೆ. ಆ ಕೆಲಸ ಈಗ ರಾಯಣ್ಣನಿಂದ ಶುರುವಾಗಿದೆ. ಮುಂದೆ ಯಾರ‍್ಯಾರು ಇದಕ್ಕೆ ಸೇರಿಕೊಳ್ಳುತ್ತಾರೋ ನೋಡಬೇಕು.

ಈ ಕೆಲಸ ಮಾಡಿ ಮುಗಿಸುವಂಥ ಶಕ್ತಿ ನನಗೆ ದಕ್ಕಲಿ. ಇಚ್ಛಾಶಕ್ತಿ ಕುಸಿಯದಿರಲಿ ಅಂತ ಪದೆ ಪದೆ ಅಂದುಕೊಳ್ಳುತ್ತಿದ್ದೇನೆ.

- ಚಾಮರಾಜ ಸವಡಿ

ನಾವೆಲ್ಲ ಪುಸ್ತಕ ಪ್ರಕಟಿಸುವುದು ಏತಕ್ಕೆ?

18 Aug 2009

3 ಪ್ರತಿಕ್ರಿಯೆ
ಬಹಳಷ್ಟು ಜನ ನನ್ನನ್ನು ಕೇಳುವ ಸಾಮಾನ್ಯ ಪ್ರಶ್ನೆಯೊ೦ದಿದೆ: ನೀವು ಇದುವರೆಗೆ ಎಷ್ಟು ಪುಸ್ತಕಗಳನ್ನು ಪ್ರಕಟಿಸಿದ್ದೀರಿ?

ನನ್ನ ಉತ್ತರ ಕೇಳಿ ಅವರಿಗೆ ನಿರಾಶೆಯಾಗುತ್ತದೆ. ಕೆಲವರು ಅಪನ೦ಬಿಕೆಯನ್ನು ಸಹ ತೋರಿಸುತ್ತಾರೆ. ‘ನಾನು ಇದುವರೆಗೆ ತಂದಿದ್ದು ಒ೦ದೇ ಪುಸ್ತಕವನ್ನು’ ಎ೦ಬ ನನ್ನ ಉತ್ತರ ಅವರ ಮನಸ್ಸಿಗೆ ಸಮಾಧಾನವನ್ನು ತರುವುದಿಲ್ಲ.

‘ಇಷ್ಟೊ೦ದು ನಿಯಮಿತವಾಗಿ ವಿಷಯಗಳನ್ನು ಬರೆಯುತ್ತೀ. ನಿನ್ನ ಬರಹಗಳು ಕೂಡಾ ಆಕರ್ಷಕವಾಗಿತ್ತವೆ. ಅವನ್ನೇ ಆಯ್ದುಕೊ೦ಡು ಒ೦ದು ಪುಸ್ತಕ ಮಾಡಬಹುದಲ್ಲವೇ? ಜನ ಅ೦ತಹ ಪುಸ್ತಕಗಳನ್ನು ಖ೦ಡಿತ ಕೊ೦ಡು ಓದುತ್ತಾರೆ’ ಎ೦ಬ ಇನ್ನೊ೦ದು ಸಲಹೆ ಅವರಿ೦ದ ಬರುತ್ತದೆ.

ನಾನು ಉತ್ತರಿಸುವುದಿಲ್ಲ. ಏಕೆ೦ದರೆ ಪುಸ್ತಕಗಳ ಪ್ರಕಟಣೆಗೆ ಸ೦ಬ೦ಧಿಸಿದ೦ತೆ ನಾನು ಕೊ೦ಚ ನಿಧಾನಿ. ಹೆಚ್ಚು ಓದಬೇಕು, ಕಡಿಮೆ ಬರೆಯಬೇಕು, ಅತೀ ಕಡಿಮೆ ಬರಹಗಳನ್ನು ಪ್ರಕಟಿಸಬೇಕು ಎನ್ನುವ ನ೦ಬಿಕೆಯುಳ್ಳವನು ನಾನು. ಪತ್ರಿಕೋದ್ಯಮಕ್ಕೆ ಬ೦ದಿರದಿದ್ದರೆ ಖ೦ಡಿತವಾಗಿಯೂ ಒ೦ದೆರಡು ಪುಸ್ತಕಗಳನ್ನು ನಾನು ಪ್ರಕಟಿಸಿರುತ್ತಿದ್ದೇನೇನೋ? ಆದರೆ ನಿಯಮಿತವಾದ ಬರವಣಿಗೆಯನ್ನು ಬೇಡುವ ಈ ಉದ್ಯಮ ಪುಸ್ತಕ ಪ್ರಕಟಿಸುವ ಆಸಕ್ತಿಯನ್ನೇ ಇಲ್ಲವಾಗಿಸಿದೆ.

ಹೀಗಿದ್ದರೂ ಒಂದು ಪ್ರಶ್ನೆ ಹಾಗೇ ಉಳಿಯುತ್ತದೆ: ಒಬ್ಬ ವ್ಯಕ್ತಿ ತನ್ನ ಪುಸ್ತಕಗಳನ್ನು ಏಕೆ ಪ್ರಕಟಿಸಲು ಹೋಗುತ್ತಾನೆ?

ತಾನು ಬರೆದಿದ್ದನ್ನು ಬೇರೆಯವರೂ ಓದಲಿ ಎ೦ದು ತಾನೇ? ಹಿಂದೆ ನಾನು ಬರೆದಿದ್ದು ನನ್ನ ಸ್ವಂತ ಪತ್ರಿಕೆಯಲ್ಲಿ ಪ್ರತಿ ವಾರ ಅಚ್ಚಾಗುತ್ತಿತ್ತು. ಮುಂದೆ ವಿವಿಧ ದಿನಪತ್ರಿಕೆಗಳ ವರದಿಗಾರನಾದಾಗ, ಆಯಾ ಪತ್ರಿಕೆಗಳಲ್ಲಿ ಬರುತ್ತಿದ್ದವು. ಈಗ ಅಂತರ್ಜಾಲ ಪ್ರಕಟಣೆಯ ಮಾಧ್ಯಮವಾಗಿದೆ. ಓದಿದ ಕೆಲವರು ಇಷ್ಟಪಡುತ್ತಾರೆ. ಕೆಲವರು ಸಲಹೆ ಕೊಟ್ಟರೆ, ಇನ್ನು ಕೆಲವರು ಟೀಕಿಸುತ್ತಾರೆ. ಸ್ವಂತ ಪತ್ರಿಕೆ ಇದ್ದಾಗ, ಓದಿ ಧಮಕಿ ಹಾಕುವವರೂ ಇದ್ದರು.

ಜನರ ಈ ವಿವಿಧ ಪ್ರತಿಕ್ರಿಯೆಗಳು ನನಗೆ ಅಭ್ಯಾಸವಾಗಿ ಬಿಟ್ಟಿವೆ. ಹೀಗಾಗಿ, ಬರೆದಿದ್ದನ್ನು ಮತ್ತೆ ಪುಸ್ತಕ ರೂಪದಲ್ಲಿ ತರುವ ಆಸಕ್ತಿ ಅಷ್ಟಾಗಿ ಇಲ್ಲ.

ಏಕೆ೦ದರೆ, ಪತ್ರಿಕೆಗಳನ್ನು ಮಾರಿದ೦ತೆ ಪುಸ್ತಕಗಳನ್ನು ಮಾರಲಾಗುವುದಿಲ್ಲ. ಅಲ್ಲದೇ, ಪತ್ರಿಕೆಗಳನ್ನು ಅಚ್ಚು ಹಾಕಿಸುವುದು ಸರಳ, ಅವುಗಳು ಪುಸ್ತಕಗಳಿಗಿ೦ತ ವೇಗವಾಗಿ ಖರ್ಚಾಗುತ್ತವೆ. ಒಂದೇ ಸಮಸ್ಯೆ ಎಂದರೆ, ಅವನ್ನು ಬಹಳ ದಿನಗಳವರೆಗೆ ಕಾಯ್ದಿಡಲಾಗುವುದಿಲ್ಲ. ಈ ಕಾರಣಕ್ಕಾಗಿಯೂ ಪುಸ್ತಕ ಪ್ರಕಟಣೆಯತ್ತ ನನಗೆ ಕಡಿಮೆ ಆಸಕ್ತಿ.

ಆದರೆ, ಎಲ್ಲರೂ ಹೀಗೇ ಯೋಚಿಸಬೇಕೆಂದೇನೂ ಇಲ್ಲ. ಹಾಗೆ ನೋಡಿದರೆ ಪುಸ್ತಕಗಳನ್ನು ಓದುವವರ ಸ೦ಖ್ಯೆ ಕಡಿಮೆಯಾಗುತ್ತಿದೆಯಾದರೂ ಪ್ರಕಟಣೆ ಮಾತ್ರ ಹೆಚ್ಚುತ್ತಲೇ ಇವೆ. ಬೇರೆ ಕ್ಷೇತ್ರಗಳಲ್ಲಿ ಕಾಣದ ಸ್ಪರ್ಧೆ ಇಲ್ಲಿ ಹೆಚ್ಚುತ್ತಲೇ ಇದೆ. ನಮ್ಮ ವಲಯದಲ್ಲಿ ಯಾರಾದರೂ ಒ೦ದು ಪುಸ್ತಕವನ್ನು ಪ್ರಕಟಿಸಿದರೆ ಮುಗಿಯಿತು, ತಾವೂ ಒ೦ದು ಪುಸ್ತಕ ಹೊರ ತರುವ ತನಕ ತುಂಬ ಜನರಿಗೆ ಸಮಾಧಾನವೇ ಆಗುವುದಿಲ್ಲ. ಜನ ನನ್ನ ಪುಸ್ತಕವನ್ನು ಓದುತ್ತಾರೋ ಇಲ್ಲವೋ ಎ೦ಬ ಯೋಚನೆ ಕೂಡಾ ಮಾಡದೇ ಒ೦ದಷ್ಟು ಬರಹಗಳನ್ನು ಸ೦ಗ್ರಹ ಮಾಡಿಕೊ೦ಡು ಪುಸ್ತಕ ಪ್ರಕಟಣೆಯ ಕೆಲಸವನ್ನು ಶುರು ಮಾಡಿಕೊ೦ಡು ಬಿಡುತ್ತಾರೆ. ಪುಸ್ತಕ ಬಿಡುಗಡೆಯಾಗುವರೆಗೆ ಅವರಿಗೆ ನೆಮ್ಮದಿ ಇರುವುದಿಲ್ಲ.

ಆದರೆ, ಅಷ್ಟೊ೦ದು ಕಷ್ಟ ಪಟ್ಟು ಪುಸ್ತಕ ಪ್ರಕಟಿಸಿ, ಆಮೇಲೆ ಅದನ್ನು ಓದದ ಕಗ್ಗ ಮನಸುಗಳಿಗೆ ಉಚಿತವಾಗಿ ಹ೦ಚುವುದರಲ್ಲಿ ಅದ್ಯಾವ ಸ೦ತೋಷ ಇದೆ ಎ೦ಬುದೇ ನನಗೆ ಇದುವರೆಗೆ ಅರ್ಥವಾಗಿಲ್ಲ. ಎಷ್ಟೋ ಜನರಿಗೆ ತಮ್ಮ ಪ್ರತಿಭೆ ಸಾಹಿತ್ಯದ ಯಾವ ಪ್ರಕಾರದಲ್ಲಿ ಇದೆ ಎ೦ಬುದೇ ಗೊತ್ತಿರುವುದಿಲ್ಲ. ಅರ್ಜೆ೦ಟಿದ್ದರೆ ಪದ್ಯ, ಸಮಯವಿದ್ದರೆ ಗದ್ಯ ಬರೆಯುವ ದಿಢೀರ್ ಲೇಖಕರು ಪುಸ್ತಕ ಪ್ರಕಟಣೆ ಬಿಡುಗಡೆ ಹಾಗೂ ಸಡಗರಗಳನ್ನೇ ದೊಡ್ಡ ಸಾಧನೆ ಎ೦ದು ಭಾವಿಸಿ ಬಿಡುತ್ತಾರೆ. ತಿ೦ಗಳುಗಟ್ಟಲೇ ಬಸುರಿ ಹೆ೦ಗಸಿನ೦ತೆ ಸ೦ಭ್ರಮದಿ೦ದ ಓಡಾಡುವ ಲೇಖಕರು ಕೊನೆಗೊಮ್ಮೆ ಹೆತ್ತ ಮಗುವನ್ನು ತ೦ದು ಕೈಗಿಡುತ್ತಾರೆ.

ಅದನ್ನು ಹೇಗೆ ವರ್ಣಿಸುವುದು? ಹೆತ್ತ ಮಗು ಇನ್ನೂ ಭ್ರೂಣಾವಸ್ಥೆಯಲ್ಲೇ ಹಸಿ ಹಸಿಯಾಗಿಯೇ ಇರುತ್ತದೆ. ಅರ್ಜೆ೦ಟಿಗೆ ಹುಟ್ಟಿದ ಪುಸ್ತಕ ಬೆಳೆಯದ ಭ್ರೂಣದ೦ತೆಯೇ. ಅದರ ಯಾವ ಭಾಗವೂ ಪೂರ್ಣವಾಗಿ ಬೆಳೆದಿರುವುದಿಲ್ಲ. ಅದಕ್ಕೊ೦ದು ರೂಪವಿರುವುದಿಲ್ಲ. ಖಚಿತ ಆಕಾರವಿರುವದಿಲ್ಲ. ಕೆಲವ೦ತೂ ಗ೦ಡೋ - ಹೆಣ್ಣೋ ಎ೦ದು ಕೂಡ ಗುರುತಿಸಲಾರದ ಸ್ಥಿತಿಯಲ್ಲಿರುತ್ತವೆ. ಇ೦ತ ಹಸಿ ಹಸಿ ಬರವಣಿಗೆಯ ಮುದ್ದೆಗೆ ಪುಸ್ತಕ ಎ೦ದು ಹೆಸರಿಟ್ಟರೆ ಯಾವ ಓದುಗ ತಾನೆ ಆಸ್ಥೆಯಿ೦ದ ಅದನ್ನು ದುಡ್ಡು ಕೊಟ್ಟು ಖರೀದಿಸುತ್ತಾನೆ? ಇದು ಪುಸ್ತಕ ಪ್ರಕಟಣೆಯ ಕರ್ಮ.

ನಮ್ಮ ಬರಹಗಳು ಮೊದಲು ನಮಗೆ ಮೆಚ್ಚುಗೆಯಾಗಬೇಕು. ಅವುಗಳನ್ನು ಓದಿದ ಇತರರು ಕೂಡಾ ಅವುಗಳನ್ನು ಮೆಚ್ಚುವ೦ತಿರಬೇಕು. ಅದಕ್ಕೊ೦ದು ರೂಪ, ಸ್ಪಷ್ಟತೆ, ತಕ್ಕಮಟ್ಟಿಗಿನ ಬೆಳವಣಿಗೆ, ಮಿಡಿಯುವ ಹೃದಯ, ಕದಲುವ ಶರೀರ, ಪ್ರೀತಿ ಉಕ್ಕಿಸುವ ಚರ್ಯೆ ಇರಬೇಕು. ಮು೦ದೆ ಈ ಶಿಶು ಬೆಳೆದು ಮನುಷ್ಯನಾಗುತ್ತದೆ ಎ೦ಬ ನ೦ಬಿಕೆ ಹುಟ್ಟಿಸುವ೦ತಿರಬೇಕು. ಅದರ ಯಾವುದಾದರೂ ಒ೦ದು ಅ೦ಶ, ಮುಖ್ಯವಾಗಿ ಬರವಣಿಗೆ, ನಿರೂಪಣೆ, ನಮ್ಮನ್ನು ಸೆಳೆಯುವ೦ತಿರಬೇಕು. ದುಡ್ಡು ಕೊಟ್ಟು ಖರೀದಿಸಲು ಹಿ೦ಜರಿಯದ೦ತೆ ಆಕರ್ಷಕವಾಗಿರಬೇಕು. ಹಾಗಿದ್ದರೆ ಮಾತ್ರ ಅದನ್ನೊ೦ದು ಯೋಗ್ಯ ಪುಸ್ತಕ ಎ೦ದು ಒಪ್ಪಿಕೊಳ್ಳಬಹುದು. ಅಷ್ಟೇ ಅಲ್ಲ, ಅದನ್ನು ದುಡ್ಡು ಕೊಟ್ಟು ಖರೀದಿಸಲೂಬಹುದು.

ಪುಸ್ತಕಕ್ಕಷ್ಟೇ ಅಲ್ಲ, ಪತ್ರಿಕೆಗಳಿಗೆ ಕೂಡಾ ಈ ಮಾನದ೦ಡ ಅನ್ವಯವಾಗುತ್ತದೆ. ಸ೦ತೆಗೆ ಮುನ್ನ ಮೂರು ಮೊಳ ನೇಯುವ ಧೋರಣೆಯ ಪತ್ರಕರ್ತನಿಗೆ ಕೊನೆಗೆ ಲ೦ಗೋಟಿ ಮಾತ್ರವೇ ಉಳಿಯುವುದು. ಪತ್ರಿಕೆಯ ಪ್ರತಿಯೊ೦ದು ಪುಟದಲ್ಲಿ ಬಿಸಿ ಬಿಸಿ ಸುದ್ದಿ, ನವಿರಾದ ಬರಹ, ಚಿ೦ತೆಗೆ ಹಚ್ಚುವ ಗದ್ಯ, ಖುಷಿ ತರುವ ಪದ್ಯ, ಕಚಗುಳಿ ಇಡುವ ಹಾಸ್ಯ ಇರದಿದ್ದರೆ ಯಾವ ಓದುವ ಅ೦ಥ ನಿರಾಸಕ್ತ ಪತ್ರಿಕೆಯನ್ನು ದುಡ್ಡು ಕೊಟ್ಟು ಕೊ೦ಡಾನು?
ಹೋಗಲಿ, ಅ೦ತಹ ಅರ್ಜೆ೦ಟು ಮಾಡಿಕೊ೦ಡು ಪುಸ್ತಕವನ್ನೋ, ಪತ್ರಿಕೆಯನ್ನೋ ಅಚ್ಚು ಮಾಡಿಸಿಕೊ೦ಡು ತರುವ ಅನಿವಾರ್ಯತೆ ಏನಿರುತ್ತದೆ?

ಮನುಷ್ಯನ ಮೂಲಭೂತ ದೌರ್ಬಲ್ಯವಿರುವುದೇ ಇಲ್ಲಿ.

ನಮಗೆಲ್ಲರಿಗೂ ಪ್ರಚಾರದ ಹುಚ್ಚು. ಸುತ್ತಮುತ್ತ ಇರುವವರ ಗಮನವನ್ನು ಸೆಳೆಯುವ ಚಪಲ. ಹಾಗೆ ಗಮನ ಸೆಳೆಯಬೇಕೆ೦ದರೆ ಏನಾದರೂ ಬ೦ಡವಾಳ ಬೇಕಲ್ಲವೇ? ಆಗ ನಾನು ಒಬ್ಬ ಬರಹಗಾರ, ನನ್ನಿ೦ದಲೂ ಸಾಹಿತ್ಯ ಸೃಷ್ಟಿ ಸಾಧ್ಯವಿದೆ ಎ೦ಬುದನ್ನು ತೋರಿಸಲು ನಾವು ಪ್ರಯತ್ನಿಸುತ್ತೇವೆ. ಮನಸ್ಸಿಗೆ ತೋಚಿದ್ದನ್ನೆಲ್ಲಾ ಬರೆದು ಅದು ಅಚ್ಚಾಗಲಿ ಎ೦ದು ಹ೦ಬಲಿಸುತ್ತೇವೆ. ನಮ್ಮ ಭ್ರಮೆ ಹೇಗಿದೆಯೆ೦ದರೆ, ನಾವು ಬರೆದಿದ್ದು ಅಚ್ಚಾಗಿದೆಯೆ೦ದರೆ ಅದು ಶ್ರೇಷ್ಠ ಬರಹವೇ ಸರಿ ಎ೦ದು ಭಾವಿಸಿ ಬಿಡುತ್ತೇವೆ. ಅಂಥ ಹಲವಾರು ಬರಹಗಳನ್ನು ಸೇರಿಸಿಕೊ೦ಡರೆ ಸ೦ಕಲನ ರೆಡಿ. ಒ೦ದು ವೇಳೆ ಯಾವ ಪತ್ರಿಕೆಗಳೂ ನಮ್ಮ ಬರಹಗಳನ್ನು ಪ್ರಕಟಿಸದಿದ್ದರೆ ದುಡ್ಡು ಕೊಟ್ಟು ನಾವೇ ಪ್ರಕಟಿಸಿಕೊಳ್ಳುತ್ತೇವೆ. ಭರ್ಜರಿಯಾಗಿ ಪುಸ್ತಕ ಬಿಡುಗಡೆ ಮಾಡಿ ನಾವೂ ಸಾಹಿತಿಗಳಾದೆವು ಎ೦ದು ಬೀಗುತ್ತೇವೆ.

ನನಗೆ ಮತ್ತೆ ಮತ್ತೆ ಅಪಕ್ವ ಭ್ರೂಣದ ಚಿತ್ರ ಕಣ್ಮು೦ದೆ ಬರುತ್ತದೆ. ಅರಳದ ಹೂವಿನ೦ತೆ ಮುರುಟಿರುವ ಮೊಗ್ಗಿನ ನೆನಪಾಗುತ್ತದೆ. ಮನಸ್ಸನ್ನು ಅರಳಿಸದ, ಬೆಚ್ಚಿ ಬೀಳಿಸದ, ಖುಷಿಗೊಳಿಸದ ಬರವಣಿಗೆ ಸಾಹಿತ್ಯವೇ ಅಲ್ಲ. ಅದು ಕೇವಲ ಅಕ್ಷರ ಸೃಷ್ಟಿ. ಅದನ್ನು ಹೊರ ತರುವುದೇ ಒ೦ದು ಸಾಧನೆಯಾಗಬಾರದು.

ಆದ್ದರಿ೦ದ ನಾನು ಪುಸ್ತಕ ಪ್ರಕಟಣೆ ಎ೦ದರೆ ಕೊ೦ಚ ಅಳುಕುತ್ತೇನೆ. ನನ್ನ ಬರಹಗಳು ಪುಸ್ತಕ ರೂಪದಲ್ಲಿ ಬ೦ದರೆ ಜನ ನಿಜವಾಗಿಯೂ ಅವುಗಳನ್ನು ಕೊ೦ಡು ಓದುತ್ತಾರೆಯೇ? ಎಂಬ ಅನುಮಾನ ಈಗಲೂ ಇದೆ. ಇದುವರೆಗೆ ನಾನು ಬರೆದಿದ್ದು ಏಳೆಂಟು ಪುಸ್ತಕಗಳಿಗೆ ಆಗುವಷ್ಟಿದೆ. ಪ್ರಕಟಿಸಿದರೆ ಜೇಬಿಗೆ ಮೋಸವಂತೂ ಆಗುವುದಿಲ್ಲ. ಆದರೂ, ಅಚ್ಚು ಹಾಕಿಸಲು ಅಳುಕು. ಇದುವರೆಗೆ ಪ್ರಕಟಿಸಿದ ಒಂದು ಪುಸ್ತಕ ನನಗೆ ಚೆನ್ನಾಗಿ ದುಡ್ಡು ತಂದುಕೊಟ್ಟಿದ್ದರೂ, ಅಳುಕು ಮಾತ್ರ ಪೂರ್ತಿ ಹೋಗಿಲ್ಲ.

ಮನಸ್ಸು ಇನ್ನು ಒ೦ದಷ್ಟು ಕಾಲ ಕಾಯಲು ಬಯಸುತ್ತದೆ. ಮನಸ್ಸು ಮಾಗಿದ೦ತೆ ಅಕ್ಷರಗಳೂ ಮಾಗುತ್ತವೆ, ಪುಸ್ತಕವೂ ಮಾಗುತ್ತದೆ. ಅ೦ಥ ಮಾಗಿದ ಬರಹ ಮಾತ್ರ ಮನಸ್ಸನ್ನು ಅರಳಿಸಬಲ್ಲದು, ಕೆರಳಿಸಬಲ್ಲದು, ಬೆಚ್ಚಿ ಬೀಳಿಸಬಲ್ಲದು. ಅಲ್ಲಿಯವರೆಗೆ ಪುಸ್ತಕ ಪ್ರಕಟಿಸಬಾರದು ಎ೦ದುಕೊ೦ಡು ಸುಮ್ಮನಾಗುತ್ತೇನೆ.

- ಚಾಮರಾಜ ಸವಡಿ

ಹೊತ್ತಲ್ಲದ ಹೊತ್ತಿನಲ್ಲಿ ಹೊತ್ತಿಗೆ ತೆರೆದು...

22 Jan 2009

0 ಪ್ರತಿಕ್ರಿಯೆ

ರಾತ್ರಿಯಾಗಿದೆ.

ಎಲೆಕ್ಟ್ರಾನಿಕ್‌ ಗಡಿಯಾರವಾದ್ದರಿಂದ ಟಿಕ್‌ ಟಿಕ್‌ ಸದ್ದಿಲ್ಲ. ಡಿಜಿಟಲ್‌ ಅಂಕೆಗಳಿರುವುದರಿಂದ ಮುಳ್ಳುಗಳು ಕಾಣುವುದಿಲ್ಲ. ಗಂಟೆಗೊಮ್ಮೆ ಸಂಗೀತ ಮೊಳಗಿಸಿ, ಗಂಟೆಯ ಸದ್ದು ಹೊರಡಿಸುವುದನ್ನು ಬಿಟ್ಟರೆ ಗಡಿಯಾರ ತನ್ನ ಗಡಿ ದಾಟಿ ತೊಂದರೆ ಕೊಡುವುದಿಲ್ಲ.

ಮಕ್ಕಳು ಮಲಗಿರುತ್ತವೆ. ಮಡದಿಗೂ ಗಾಢ ನಿದ್ರೆ. ಕಚೇರಿಯ ಉದ್ವೇಗವನ್ನು ಇಳಿಸಿಕೊಳ್ಳಲು ಮೌನವಾಗಿ ಕೂತವನಿಗೆ ಕಂಪ್ಯೂಟರ್‌ ತೆರೆಯುವುದು ಏಕೋ ಬೇಸರ.

ಸ್ವಲ್ಪ ಹೊತ್ತು ಸುಮ್ಮನೇ ಕೂಡುತ್ತೇನೆ. ಸಾವಿರ ನೆನಪುಗಳು ಮುಕುರಿಕೊಳ್ಳುತ್ತವೆ. ಬಾಲ್ಯ, ಹರೆಯ, ಓದಿನ ಗುಂಗು, ಬಡತನ, ಹಳ್ಳಿ, ಬೀಸುವ ಗಾಳಿ, ಕೆಟ್ಟ ಬಿಸಿಲು, ಹಸಿವು ನೆನಪಾಗುತ್ತವೆ. ಗದಗ ಜಿಲ್ಲೆ, ರೋಣ ತಾಲ್ಲೂಕಿನ ಕೋಡಿಕೊಪ್ಪ ಎಂಬ ಹಳ್ಳಿಯಲ್ಲಿ ಕಳೆದ ಮೂರು ವರ್ಷಗಳು ಕಣ್ಮುಂದೆ ಸುಳಿಯುತ್ತವೆ. ನನ್ನ ಬದುಕು ಯಾವತ್ತೂ ಬದಲಾಗುವುದಿಲ್ಲ ಬಿಡು ಅಂತ ಅದೆಷ್ಟು ಸಾವಿರ ಸಲ ಹೇಳಿಕೊಂಡಿದ್ದೆನೋ ಅಲ್ಲಿ. ಆದರೆ, ನೋಡನೋಡುತ್ತ ಬದುಕು ಬದಲಾಗುತ್ತಲೇ ಹೋಯಿತು. ಹೌದು: Things fall apart. ಏಕೆಂದರೆ, centre can not hold.

ಪುಸ್ತಕಗಳು ಸೆಳೆಯುತ್ತವೆ. ಇದ್ದ ಷೆಲ್ಫ್‌ ತುಂಬಿದ್ದರಿಂದ, ಡಬ್ಬದಲ್ಲಿರುವ ಪುಸ್ತಕಗಳನ್ನು ಹೊರತೆಗೆಯಲೇ ಆಗಿಲ್ಲ. ಬೇಂದ್ರೆಯವರ ಬಹುತೇಕ ಕವನ ಸಂಕಲನಗಳು ಒಂದೆಡೆ ಕೂತಿವೆ. ಬೇಂದ್ರೆ ಓದುತ್ತಿದ್ದರೆ ಮನಸ್ಸು ಹರಿಯುವ ನೀರಾಗುತ್ತದೆ. ಅಲ್ಲಮಪ್ರಭು ಹೇಳಿದ್ದಾರಲ್ಲ: ಹರಿವ ನೀರಿಗೆ ಮೈಯೆಲ್ಲಾ ಕೈಕಾಲು. ಎಂಥ ಉದಾತ್ತ ವಿಚಾರ!

ಒಂದಿಷ್ಟು ವಚನಗಳನ್ನು ಓದಬೇಕು. ದೂರದಲ್ಲಿರುವ ಮಿತ್ರ ರಾಮಪ್ರಸಾದ್‌ (ಹಂಸಾನಂದಿ) ಅವರ ದಾಸರ ಸಂಕಲನಗಳನ್ನೂ ಓದಬೇಕು. ಆ ಕುರಿತು ನಿಯಮಿತವಾಗಿ ಬರೆಯಬೇಕು. ಕನ್ನಡದ ಅಷ್ಟೂ ಸೊಗಸನ್ನು ಭಕ್ತಿ ಸಾಹಿತ್ಯವೇ ಭಟ್ಟಿ ಇಳಿಸಿಕೊಂಡಿದೆ ಎಂಬಷ್ಟು ತೀವ್ರವಾಗಿರುವ ವಚನ-ದಾಸರ ಪದಗಳನ್ನು ಆಗಾಗ ನೋಡುತ್ತಿದ್ದರೂ ಸಾಕು, ಮನಸ್ಸು ಸ್ವಸ್ಥವಾಗುತ್ತದೆ. ಬರವಣಿಗೆ ಸುಲಭವಾಗುತ್ತದೆ. ಆದರೆ, ನನ್ನ ಹತ್ತಿರ ಈ ಸರಕೇ ಇಲ್ಲ ಎಂಬುದು ಅರಿವಾದಾಗ, ಕ್ಷಣ ಕಾಲ ಪೆಚ್ಚೆನಿಸಿತು.

ಒಂದಿಷ್ಟು ಇಂಗ್ಲಿಷ್‌ ಕವಿತಾ ಸಂಕಲನಗಳನ್ನು ತರಬೇಕು. ಎಜ್ರಾ ಪೌಂಡ್‌ನ ಕವಿತೆಗಳು, ರಸ್ಕಿನ್‌ ಬಾಂಡ್‌ನ ಕತೆಗಳು, ವಿ.ಎಸ್‌. ನಾಯ್‌ಪಾಲ್‌ರ ಗದ್ಯ, ಕಮಲಾ ದಾಸ್‌ ಪದ್ಯ- ಎಲ್ಲ ಸೇರಿಸಿಕೊಂಡು ಸುಮ್ಮನೇ ಒಂದಿಷ್ಟು ಕತೆಗಳನ್ನು ಅನುವಾದ ಮಾಡಬೇಕು. ಕವಿತೆಗಳನ್ನು ಬರೆಯಬೇಕು ಎಂದು ಅಂದುಕೊಂಡು ಖುಷಿಪಟ್ಟೆ.

ರಸ್ಕಿನ್‌ ಬಾಂಡ್‌ನ ಎರಡು ಕತೆಗಳ ಅನುವಾದಗಳು ಈಗಾಗಲೇ ಪತ್ರಿಕೆಗಳಲ್ಲಿ ಅಚ್ಚಾಗಿವೆ. ಸಂಪದದಲ್ಲಿ ಅವನ್ನೇ ಮೊದಲು ಹಾಕಬೇಕು. ನಂತರ ನನಗೆ ಹಿಡಿಸಿದ ಕತೆಗಳನ್ನು ನಿಯಮಿತವಾಗಿ ಅನುವಾದ ಮಾಡಿದರೆ ಹೇಗೆ ಎಂದೂ ಯೋಚಿಸಿದೆ. ಅದೇ ರೀತಿ ಒಂದಿಷ್ಟು ಕವಿತೆಗಳನ್ನೂ ಅನುವಾದ ಮಾಡಬೇಕು. ಒಂದೆರಡು ತಿಂಗಳಲ್ಲಿ ಈ ಕೆಲಸ ಒಂದು ಹದಕ್ಕೆ ಬರಬೇಕು ಎಂದೂ ಕಟ್ಟು ಹಾಕಿಕೊಂಡೆ.

ಗಂಟೆ ಹನ್ನೆರಡಾಗಿರಬೇಕು. ಎಲೆಕ್ಟ್ರಾನಿಕ್‌ ಗಡಿಯಾರ ಮೆಲ್ಲಗೇ ಮೊಳಗಿತು. ಮೊದಲು ಒಂದಿಷ್ಟು ಸಂಗೀತ. ನಂತರ ಢಣ್‌ ಢಣ್‌ ಗಂಟಾನಾದ. ರಾತ್ರಿಯ ಕಾವಳದಲ್ಲಿ ಒಬ್ಬನೇ ಸುಮ್ಮನೇ ಕೂತಿದ್ದನ್ನು ನೋಡಿದವರು ನನ್ನ ಮನಃಸ್ಥಿತಿಯ ಬಗ್ಗೆ ಅನುಮಾನಪಟ್ಟಾರು ಎಂದೂ ಅನಿಸಿತು. ಓದದೇ ಮಲಗಲಾರೆ. ಬೇಂದ್ರೆಯವರ ಕವಿತಾ ಸಂಕಲನ ಹಿಡಿದು ಕೂತೆ.

ಮನಸ್ಸು ಪಾತರಗಿತ್ತಿ ಪಕ್ಕವಾಯಿತು. ನೆನಪುಗಳಿಂದ ನೆನಪುಗಳಿಗೆ ಹಾರುತ್ತ ಹಾರುತ್ತ ಹೊರಟಿತು. ಅದರ ಹಿಂದೆ ಹೊರಟ ಮನಸ್ಸು ಎಲ್ಲಿ ಕಳೆದುಹೋಯಿತೋ-

ನಸುಕಿನಲ್ಲಿ ಎಚ್ಚರವಾದಾಗ, ಬೇಂದ್ರೆ ಪುಸ್ತಕ ಪಕ್ಕದಲ್ಲಿ ಮಲಗಿತ್ತು. ಅದರೊಳಗಿನ ಕನಸುಗಳು ಮಾತ್ರ ಈ ಚಳಿಯಲ್ಲಿಯೂ ಬೆಚ್ಚಗಿವೆ.

- ಚಾಮರಾಜ ಸವಡಿ