Showing posts with label ಅವಿಭಕ್ತ ಕುಟುಂಬ. Show all posts
Showing posts with label ಅವಿಭಕ್ತ ಕುಟುಂಬ. Show all posts

ವಸುಧೈವ ಕುಟುಂಬಕಂ (ಭಾಗ-೨)

15 Dec 2009

8 ಪ್ರತಿಕ್ರಿಯೆ


ಲಗ್ನಪತ್ರವನ್ನೊಮ್ಮೆ ನೀವು ನೋಡಬೇಕು. ಅದರ ತುಂಬ ಜೋಡಿಗಳ ಹೆಸರೋ ಹೆಸರು. ಹಾಗಿದ್ದರೂ ಆ ಸಲ ಮದುವೆಯಾಗುತ್ತಿರುವವರ ಸಂಖ್ಯೆ ಕಡಿಮೆ ಇತ್ತು. ಕೇವಲ ಒಂಬತ್ತು ಜೋಡಿಯ ಮದುವೆ. ಅತಿ ಹೆಚ್ಚು ಎಂದರೆ ೨೦ ಜೋಡಿಯ ವಿವಾಹ ಒಮ್ಮೆ ನಡೆದಿತ್ತಂತೆ.

ಅಲ್ಲಿ ಹೋಗಿ ನೋಡಿದರೆ ಸಾಮೂಹಿಕ ಮದುವೆ ನಡೆಯುತ್ತಿದೆಯೇನೋ ಎಂಬಂಥ ವಾತಾವರಣ. ಉದ್ದವಾಗಿ ನಿರ್ಮಿಸಿದ ವೇದಿಕೆಯಲ್ಲಿ ಒಂಬತ್ತು ಮತ್ತು ಒಂಬತ್ತು- ಒಟ್ಟು ೧೮ ನವವಿವಾಹಿತರು ಸಾಲಾಗಿ ಕೂತಿದ್ದರು. ಅಡ್ಡ ಬೇರೆ ಜನ ಬಾರದಂತೆ, ಅಷ್ಟೂ ಜನರ ಫೋಟೊವನ್ನು ಒಂದೇ ಫ್ರೇಮಿನಲ್ಲಿ ತೆಗೆಯುವುದು ಹೇಗೆಂಬ ಪೇಚಾಟ ನಮ್ಮ ಛಾಯಾಗ್ರಾಹಕ ಕೇದಾರನಾಥ ಅವರದು. ಹಾಗೂ ಹೀಗೂ ಯತ್ನಿಸಿ, ಅಡ್ಡ ಬರುತ್ತಿದ್ದವರನ್ನು ಒಂದೆಡೆ ಸರಿಸಿ ಫೋಟೊ ತೆಗೆಯುವ ಹೊತ್ತಿಗೆ ಸಾಕಾಯಿತು.

ಮದುವೆಗೆ ಬಂದವರ ಪೈಕಿ ಮುಕ್ಕಾಲು ಜನ ಮನೆಯವರೇ. ಎಲ್ಲರೂ ಬಳಗವೇ. ಎಲ್ಲರೂ ಎಲ್ಲರಿಗೂ ಪರಿಚಿತರೇ. ಅಪರಿಚಿತರೆಂದರೆ ನಮ್ಮಂಥವರು ಮಾತ್ರ. ಅಕ್ಷತೆ ಹಾಕಿದ ಪ್ರತಿಯೊಬ್ಬರಿಗೂ ಪ್ರತಿಯೊಂದು ಜೋಡಿಯಿಂದ ಪರಿಚಿತ ಮುಗುಳ್ನಗೆ. ಕೈಹಿಡಿದು ಕುಶಲ ವಿಚಾರಣೆ. ದೂರದಲ್ಲಿ ನಿಂತ ಭೀಮಣ್ಣ ನರಸಿಂಗನವರ ಮುಖದ್ಲಲಿ ಧನ್ಯತೆ. ಈ ಒಂಬತ್ತು ಜೋಡಿಯಿಂದ ಮತ್ತೆ ಬದುಕು ಕುಡಿಯೊಡೆಯುತ್ತದೆ. ಬಳಗ ಬೆಳೆಯುತ್ತದೆ. ಜಾನಪದ ಹಾಡಿನಲ್ಲಿ ಮುಗುದೆಯೊಬ್ಬಳು ’ಕರಕಿಯ ಕುಡಿ ಹಂಗ, ಹಬ್ಬಲಿ ಅವರ ರಸಬಳ್ಳಿ’ ಎಂದು ಹಾಡಿದಂತೆ ಲೋಕೂರಿನ ಈ ಅವಿಭಕ್ತ ಕುಟುಂಬ ಚಲ್ಲವರಿದು ಹಬ್ಬುತ್ತ ಹೋಗುತ್ತದೆ.

’ವಸುಧೈವ ಕುಟುಂಬಕಂ’ ಎಂಬ ಸಂದೇಶವನ್ನು ಸದ್ದಿಲ್ಲದೇ ಸಾರುತ್ತದೆ.
 

ಇದು ಒಂದು ಮನೆಯ ಕಥೆ

ನರಸಿಂಗನವರ ಕುಟುಂಬದ ಮೂಲ ಮನೆ ದೊಡ್ಡದು. ನೂರು ಮನೆಗಳಿರಬಹುದಾದ ಈ ಊರಿನಲ್ಲಿ ಇವರಿಗೆ ಒಟ್ಟು ಎಂಟು ಮನೆಗಳಿವೆ. ದೊಡ್ಡ ಮನೆ ಎಂಬುದು ೩೩ ಅಂಕಣಗಳುಳ್ಳ, ೨೨ ಕೋಣೆಗಳುಳ್ಳ, ೪,೦೩೦ ಚದರಡಿ ವಿಸ್ತಾರದ ದೊಡ್ಡ ಬಂಗಲೆ. ಆದರೆ ಇಲ್ಲಿ ವಾಸಿಸುವವರ ಸಂಖ್ಯೆ ಕಡಿಮೆ. ಊಟ, ಮಕ್ಕಳು ಹಾಗೂ ಹೆಣ್ಣುಮಕ್ಕಳ ವಾಸಕ್ಕಾಗಿ ಇದನ್ನು ಬಳಸಲಾಗುತ್ತಿದೆ. ಕುಟುಂಬದ ಬಳಕೆಯಲ್ಲಿ ಇದು ಊಟದ ಮನೆ. ಇನ್ನಿತರ ಮನೆಗಳ ಪೈಕಿ ಒಂದರಲ್ಲಿ ಹಾಲಿನ ಡೈರಿಯಿದೆ, ಇನ್ನೊಂದರಲ್ಲಿ ಹಿಟ್ಟಿನ ಗಿರಣಿ, ಮತ್ತೊಂದರಲ್ಲಿ ಉಗ್ರಾಣ... ಪಟ್ಟಿ ಹೀಗೇ ಬೆಳೆಯುತ್ತದೆ. 

ಮಕ್ಕಳು, ವೃದ್ಧರು ಹಾಗೂ ಹುಡುಗ-ಹುಡುಗಿಯರು ಮೊದಲ ಅಂತಸ್ತಿನಲ್ಲಿರುವ ಸಿನಿಮಾ ಥೇಟರ್ ಮಾದರಿಯ ದೊಡ್ಡ ಹಾಲ್‌ನಲ್ಲಿ ಮಲಗುತ್ತಾರೆ. ದಂಪತಿಗಳಿಗಾಗಿ ಹಾಲ್‌ನ ಎರಡೂ ಕಡೆ ವಸತಿಗೃಹಗಳಲ್ಲಿ ಇರುವಂತೆ ಎದುರುಬದರು ಕೋಣೆಗಳಿವೆ. ಉಳಿದಂತೆ ಕೆಲಸದ ಮೇಲಿರುವವರು ಬಾಕಿ ಏಳು ಮನೆಗಳಲ್ಲಿ ತಂತಮ್ಮ ಪಾಳಿ ಇರುವ ಕಡೆ ಮಲಗುತ್ತಾರೆ.
 

ತೊಟ್ಟಿಲುಗಳೆಲ್ಲ ಕೆಳ ಅಂತಸ್ತಿನಲ್ಲಿ. ಬಾಣಂತಿಯರ ಕೋಣೆಗಳೂ ಅಲ್ಲಿಯೇ. ಉಳಿದಂತೆ ಸ್ನಾನದ ಮನೆ, ಊಟದ ಮನೆಗಳು ಕೆಳಗಿವೆ. ಕೆಳ ಅಂತಸ್ತಿನಲ್ಲಿ ಏನಿಲ್ಲವೆಂದರೂ ಏಳೆಂಟು ತೊಟ್ಟಿಲುಗಳಿವೆ. ಮಗು ದೊಡ್ಡದಾದಂತೆ ತೊಟ್ಟಿಲನ್ನು ಒಂದೆಡೆ ಕಂಬಕ್ಕೆ ಬಿಗಿದು ಕಟ್ಟುತ್ತಾರೆ. ಆದರೆ ಯಾವತ್ತೂ ಅದನ್ನು ಬಿಚ್ಚಿ ಇಡುವುದಿಲ್ಲ. ಏಕೆಂದರೆ ಒಬ್ಬರಲ್ಲ ಒಬ್ಬರು ಗರ್ಭಿಣಿಯರಾಗಿರುವಾಗ ಅದನ್ನು ತುಂಬ ದಿನ ಹಾಗೆ ಇಡುವ ಪ್ರಮೇಯವೇ ಒದಗುವುದಿಲ್ಲ!

ಹೆಗ್ಗಡೆ ಮೆಚ್ಚುಗೆ
 

ಲೋಕೂರಿನ ಅವಿಭಕ್ತ ಕುಟುಂಬದ ಬಗ್ಗೆ ಸ್ಥಳೀಯ ಪತ್ರಿಕೆಗಳ ನಂತರ, ದೊಡ್ಡ ಮಟ್ಟದಲ್ಲಿ ಮೊದಲು ಸುದ್ದಿ ಮಾಡಿದ್ದು ‘ದಿ ಹಿಂದು’ ಆಂಗ್ಲ ಪತ್ರಿಕೆ. ಇದನ್ನು ನೋಡಿದ ಬಿಬಿಸಿ ತಂಡ ಗಿರೀಶ ಕಾರ್ನಾಡ್ ಅವರನ್ನು ಸಂಪರ್ಕಿಸಿ, ಸ್ಥಳೀಯ ಸಹಕಾರಕ್ಕೆ ಕೋರಿತು. ಎಲ್ಲ ವ್ಯವಸ್ಥೆಯಾದ ನಂತರ ಬಿಬಿಸಿಯ ದೊಡ್ಡ ತಂಡ ಲೋಕೂರಿಗೆ ಬಂದು ೧೮ ದಿನಗಳ ಕಾಲ ಚಿತ್ರೀಕರಣ ನಡೆಸಿತು.

ನಂತರ ನಡೆದಿದ್ದು ಇತಿಹಾಸ.
 

ಬಿಬಿಸಿ ಸಾಕ್ಷ್ಯಚಿತ್ರ ನೋಡಿದ ನಂತರ ಜಪಾನ್ ಹಾಗೂ ಕೊರಿಯಾ ದೇಶಗಳಿಂದಲೂ ಬಂದ ಟಿವಿ ತಂಡಗಳು ವಿಸ್ತೃತ ಚಿತ್ರೀಕರಣ ನಡೆಸಿ ಲೋಕೂರು ಅವಿಭಕ್ತ ಕುಟುಂಬದ ಕತೆಯನ್ನು ಇಡೀ ಜಗತ್ತಿಗೆ ಸಾರಿ ಹೇಳಿದವು.

ಒಮ್ಮೆ ಈ ಕಡೆ ಬಂದಾಗ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ತಮ್ಮ ಕುಟುಂಬದೊಂದಿಗೆ ಲೋಕೂರಿಗೆ ಭೇಟಿ ನೀಡಿ ಒಂದಿಡೀ ಹಗಲನ್ನು ನರಸಿಂಗನವರ ಕುಟುಂಬದ ಜತೆಗೆ ಕಳೆದರು. ಸಹಬಾಳ್ವೆ ಬೋಧಿಸಿದ ಜೈನ ತೀರ್ಥಂಕರರ ಮಾದರಿಯನ್ನು ಸಾಕಾರ ಮಾಡಿರುವ ಕುಟುಂಬವನ್ನು ಕೊಂಡಾಡಿದರು. ನರಸಿಂಗನವರ ಕುಟುಂಬಕ್ಕೆ ಅದೊಂದು ಮರೆಯಲಾಗದ ದಿನ.
 

ಎಲ್ಲರ ಹೆಸರು ನೆನಪಿಲ್ಲ!
 

ನರಸಿಂಗನವರ ಕುಟುಂಬದ ಹಿರಿಯ ಭೀಮಣ್ಣನವರಿಗೆ ಕುಟುಂಬದ ಹಿರಿಯ ಸದಸ್ಯರನ್ನು ಬಿಟ್ಟರೆ ಮಕ್ಕಳೆಲ್ಲರ ಹೆಸರುಗಳು ನೆನಪಿಲ್ಲ. 
ಅದು ಸಾಧ್ಯವೂ ಇಲ್ಲ. ‘ಸಣ್ಣ ಮಕ್ಕಳ ಹೆಸರು ನೆನಪಿಡುವುದು ಕಷ್ಟ. ಹೆಸರಿಡಿದು ಕರೆಯಬೇಕಾದಾಗ ಅವರವರ ತಾಯಂದಿರನ್ನು ಕೇಳುತ್ತೇನೆ. ಇಲ್ಲದ್ದಿದರೆ ಏ ಪುಟ್ಟ, ಏ ಪುಟ್ಟಿ, ಏ ತಮ್ಮಾ ಎಂದು ಮಾತಾಡಿಸುತ್ತೇನೆ. ಮನೆಯ ನೂರಾರು ಜನರ ಹೆಸರನ್ನು ನೆನಪಿಡುವುದಾದರೂ ಹೇಗೆ?’ ಎಂದು ತಲೆ ಕೊಡವುತ್ತಾರೆ ಅವರು.

ಆದರೆ, ಇವು ತಮ್ಮ ಮನೆ ಮಕ್ಕಳು, ಇವು ಬೇರೆಯವರವು ಎಂಬುದು ಅವರಿಗೆ ಗೊತ್ತಾಗುತ್ತದೆ. ಅಲ್ಲದೇ, ಈ ಮಗುವಿನ ತಂದೆ ಇಂಥವರು, ತಾಯಿ ಇಂಥವರು ಎಂಬುದೂ ಗೊತ್ತಾಗುತ್ತದೆ. ಮನೆಯಲ್ಲಿರುವ ಎಲ್ಲರಿಗೂ ಮನೆಯ ಸದಸ್ಯರಾರು, ಹೊರಗಿನವರಾರು ಎಂಬುದು ಚೆನ್ನಾಗಿ ಗೊತ್ತಿದೆ.

ಸ್ವಂತ ಡೇರಿ, ಹಿಟ್ಟಿನ ಗಿರಣಿ!
 

ನರಸಿಂಗನವರ ಕುಟುಂಬದ ಬಳಕೆಗೆಂದೇ ಹಿಟ್ಟಿನ ಗಿರಣಿಯೊಂದನ್ನು ಹಾಕಲಾಗಿದೆ. ಕುಟುಂಬದ ಬಳಕೆಗೆಂದೇ ಸ್ವಂತ ಡೇರಿ ಇದೆ. ನಾವು ನೋಡಿದಾಗ ಅಲ್ಲಿ ೪೦ರಿಂದ ೪೫ ಹಸು-ಎಮ್ಮೆಗಳಿದ್ದವು. ‘ಮೊದಲು ಎಂಬತ್ತಕ್ಕೂ ಹೆಚ್ಚು ದನಕರುಗಳ್ಳಿದ್ದವು. ಆದರೆ ಮೂರು ವರ್ಷ ಸತತ ಕಾಡಿದ ಬರಗಾಲದಲ್ಲಿ ಮೇವಿನ ಸಮಸ್ಯೆ ಬಂದು ಅರ್ಧದಷ್ಟು ದನಕರುಗಳನ್ನು ಮಾರಿಬಿಟ್ಟೆ. ದಿನಕ್ಕೆ ೩೦ರಿಂದ ೪೦ ಲೀಟರ್ ಹಾಲು ಬೇಕಾಗುತ್ತದೆ. ಹೀಗಾಗಿ ಡೇರಿ ಇಡುವುದು ಅನಿವಾರ್ಯ’ ಎನ್ನುತ್ತಾರೆ ಭೀಮಣ್ಣ.
ಮನೆಯ ಸದಸ್ಯರಲ್ಲಿ ಅರ್ಧಕ್ಕರ್ಧ ಜನ ಚಹ-ಕಾಫಿ ಕುಡಿಯುವುದಿಲ್ಲ. ಹೀಗಾಗಿ ಇಷ್ಟು ಮಾತ್ರದ ಹಾಲು ಸಾಕು. ಮನೆ ತುಂಬ ಇರುವ ಚಿಕ್ಕ ಮಕ್ಕಳಿಗೆಂದೇ ಅರ್ಧಕ್ಕಿಂತ ಹೆಚ್ಚು ಹಾಲು ಬಳಕೆಯಾಗುತ್ತದೆ. ಉಳಿದಂತೆ ದಿನಸಿ ಸಾಮಾನುಗಳನ್ನಷ್ಟೇ ಹೊರಗಿನಿಂದ ಖರೀದಿ ಮಾಡಲಾಗುತ್ತದೆ. ಮಳೆಗಾಲ ಬಿಟ್ಟರೆ, ಉಳಿದ ದಿನಗಳ್ಲಲಿ ತರಕಾರಿಯೂ ಹೊರಗಿನಿಂದ ಬರುತ್ತದೆ. ಎಷ್ಟೇ ಕಡಿಮೆ ಬಳಸಿದರೂ ಮನೆಯ ವಿದ್ಯುತ್ ಬಿಲ್ ತಿಂಗಳಿಗೆ ರೂ.೧೦,೦೦೦ದಿಂದ ೧೨,೦೦೦ ಬರುತ್ತದೆ.

ಹಳ್ಳಿಯಾಗಿದ್ದರಿಂದ ಕರೆಂಟ್ ಇಲ್ಲದಿರುವುದೇ ಹೆಚ್ಚು. ಕತ್ತಲ್ಲಲಿ ರೊಟ್ಟಿ ಸುಡುವ ಫಜೀತಿ ನೋಡಲಾಗದೇ ಧಾರವಾಡದ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ಉಚಿತವಾಗಿ ಸೋಲಾರ್ ಲೈಟಿಂಗ್ ವ್ಯವಸ್ಥೆ ಮಾಡಿಕೊಟ್ಟಿದೆ. ಬಿಬಿಸಿಯವರು ಸಾಕ್ಷ್ಯಚಿತ್ರ ಮಾಡಿದ ನಂತರ ಟಿವಿ ಒಂದನ್ನು ಉಡುಗೊರೆಯಾಗಿ ಕೊಟ್ಟಿದ್ದಾರೆ. ಹಾಲ್ ಮಧ್ಯೆ ಇರುವ ಟಿವಿಯಲ್ಲಿ ಕನ್ನಡ ಸಿನಿಮಾ ನೋಡಲು ಮನೆ ಮಂದಿ ಕೂತರೆ ಟಾಕೀಸ್‌ಗಳು ನಾಚಬೇಕು.


ವ್ಯಾಪಾರವೂ ಆಗುತ್ತದೆ ಹಾಗೂ ಮನೆ ಬಳಕೆಗೂ ಆಗುತ್ತದೆ ಎಂದು ಮೊದಲು ಕಿರಾಣಿ (ದಿನಸಿ) ಅಂಗಡಿಯೊಂದನ್ನು ತೆರೆಯಲಾಗಿತ್ತು. ಆದರೆ ಸದಾ ಮನೆಯಲ್ಲಿರುವ ಮೂವತ್ತಕ್ಕೂ ಹೆಚ್ಚು ಮಕ್ಕಳು ಅಂಗಡಿಯಲ್ಲಿದ್ದ ಸಿಹಿ ತಿನಿಸು, ಪೆಪ್ಪರ್‌ಮಿಂಟ್, ಬೆಲ್ಲ, ಹುರಿಗಡಲೆ ಇತ್ಯಾದಿ ಸುಲಭ ಖಾದ್ಯ ವಸ್ತುಗಳನ್ನು ಎರಡೇ ದಿನಗಳಲ್ಲಿ ಖಾಲಿ ಮಾಡಿದ್ದರಿಂದ, ಅಂಗಡಿಯನ್ನು ಮುಚ್ಚಲಾಯಿತು.


ನಿತ್ಯದ ದಾಸೋಹಕ್ಕೆ ಸಾಮಾನು ಸರಬರಾಜು ಮಾಡುವ ಕೆಲಸವನ್ನು ಒಬ್ಬನಿಗೆ ವಿಧಿಸಲಾಗಿದೆ. ಆತನ ಕೆಲಸ ಏನೆಂದರೆ, ಬೆಳಿಗ್ಗೆ ಉಗ್ರಾಣದಿಂದ ರೊಟ್ಟಿಗೆ ಹಿಟ್ಟು, ಉಪ್ಪು, ಸೌದೆ ವ್ಯವಸ್ಥೆ, ಚಹ-ಕಾಫಿ-ಸಕ್ಕರೆ ಎತ್ತಿಡುವುದು, ಅವತ್ತಿನ ಅಕ್ಕಿ, ಗೋದಿ, ಬೇಳೆ ಕಾಳು, ತರಕಾರಿ, ತುಪ್ಪ ಇತ್ಯಾದಿ ವಸ್ತುಗಳನ್ನು ಅಗತ್ಯಕ್ಕೆ ತಕ್ಕ ಪ್ರಮಾಣದಲ್ಲಿ ನೀಡುವುದು; ಕೊರತೆಯಾದ ವಸ್ತುಗಳ ಯಾದಿ ತಯಾರಿಸಿ, ಹಿರಿಯರಿಗೆ ತೋರಿಸಿ ಖರೀದಿ ಮಾಡುವುದು, ಇತ್ಯಾದಿ. ಹೀಗಾಗಿ ಅಡುಗೆಗೆ ಯಾವ ಸಾಮಾನುಗಳ ಕೊರತೆಯೂ ಕಾಡುವುದಿಲ್ಲ. 


ಅಡುಗೆ ಮಾಡಲು ಪಾಳಿ
 

ಇಲ್ಲಿ ನಿತ್ಯ ೧,೨೦೦ಕ್ಕೂ ಹೆಚ್ಚು ರೊಟ್ಟಿಗಳನ್ನು ಮಾಡಲಾಗುತ್ತದೆ. ಹಬ್ಬ ಅಥವಾ ಮದುವೆ ಬಂದರೆ ಈ ಸಂಖ್ಯೆ ಇನ್ನೂ ಹೆಚ್ಚು. ಕುಟುಂಬದ ಸದಸ್ಯರ ಪೈಕಿ ಅರ್ಧದಷ್ಟು ಹೆಣ್ಣುಮಕ್ಕಳೇ ಇರುವುದರಿಂದ ಅಡುಗೆ ಮಾಡಲು ಪಾಳಿ ರೂಪಿಸಲಾಗಿದೆ. ಬೆಳಿಗ್ಗೆ ೪ ಗಂಟೆಗೆ ಮೊದಲ ಪಾಳಿ ಹೆಣ್ಣುಮಕ್ಕಳು ಎದ್ದು ಕೆಲಸಕ್ಕೆ ತೊಡಗುತ್ತಾರೆ. ೫ ಗಂಟೆಯಿಂದ ರೊಟ್ಟಿ ಬಡಿಯಲು ಶುರು ಮಾಡಿದರೆ, ನೀವು ನಂಬುತ್ತೀರೋ ಇಲ್ಲವೋ, ರಾತ್ರಿ ೧೧ರವರೆಗೆ ರೊಟ್ಟಿ ಬಡಿಯುವ ಸಪ್ಪಳ ನಿಲ್ಲುವುದೇ ಇಲ್ಲ.

ಮೊದಲ ಪಾಳಿಯಲ್ಲಿ ನಾಲ್ಕು ಜನ ಹೆಣ್ಣುಮಕ್ಕಳು. ಇವರ ಪೈಕಿ ಇಬ್ಬರು ಊಟಕ್ಕೆ ಅಥವಾ ಬೇರೆ ಕೆಲಸಗಳಿಗೆ ಎದ್ದರೆ ಇನ್ನಿಬ್ಬರು ರೊಟ್ಟಿ ಬಡಿಯುವದನ್ನು ಮುಂದುವರೆಸುತ್ತಾರೆ. ಒಂದು ಕಡೆ ರೊಟ್ಟಿ ಬೇಯುತ್ತಿದ್ದರೆ, ಹೊರಗೆ ಪಡಸಾಲೆಯಲ್ಲಿ ತಮಗೆ ಅನುಕೂಲವಾದ ಸಮಯದಲ್ಲಿ ಊಟ ಮಾಡಲು ಬಂದು ಹೋಗುವವರು ಇದ್ದೇ ಇರುತ್ತಾರೆ. ಯಾರೂ ಇಲ್ಲ ಎಂದಾಗ ಮಾತ್ರ ರೊಟ್ಟಿ ಬಡಿಯುವವರಿಗೆ ಬಿಡುವು. 


ಬೆಳಗಿನ ಪಾಳಿ ಮಧ್ಯಾಹ್ನ ೪ಕ್ಕೆ ಮುಗಿದರೆ ಎರಡನೇ ಪಾಳಿ ರಾತ್ರಿ ೧೧ಕ್ಕೆ ಮುಕ್ತಾಯವಾಗುತ್ತದೆ. ಪ್ರತಿ ವಾರ ಪಾಳಿ ಸಮಯ ಬದಲಾಗುತ್ತದೆ. ರೊಟ್ಟಿ ಬಡಿಯುವುದನ್ನು ಬಿಟ್ಟರೆ, ಚಿಕ್ಕ ಮಕ್ಕಳ ಕೆಲಸ ಮಾಡುವುದು, ನೀರು ಕಾಯಿಸುವುದು, ಬಟ್ಟೆ ತೊಳೆಯುವುದು, ಶಾಲೆಗೆ ಹೋಗುವ ಮಕ್ಕಳನ್ನು ಸಿದ್ಧಗೊಳಿಸುವುದು- ಹೀಗೆ ತರಹೇವಾರಿ ಕೆಲಸಗಳಿರುತ್ತವೆ.
 

ಊಟಕ್ಕೆ ಯಾವ ನಿಗದಿತ ಸಮಯವೂ ಇಲ್ಲ. ಎಲ್ಲರೂ ತಮ್ಮ ಕೆಲಸಗಳ ಮಧ್ಯೆ ಬಿಡುವು ಮಾಡಿಕೊಂಡು ಬಂದು ಊಟ ಮಾಡಿ ಹೋಗುತ್ತಾರೆ. ಬೇರೆ ಯಾವ ಸಮಯದಲ್ಲಿ ಸಿಗದಿದ್ದರೂ  ಊಟದ ಸಮಯದಲ್ಲಿ ಮನೆಯ ಸದಸ್ಯರು ಬಂದೇ ಬರುತ್ತಾರೆ. ಹೋಟೆಲ್‌ಗೆ ಹೋಗುವ ಚಟ ಯಾರಲ್ಲೂ ಇಲ್ಲದಿರುವುದರಿಂದ ಊಟಕ್ಕೆ ಬರುವುದು ಗ್ಯಾರಂಟಿ.
 


ಮನೆ ತುಂಬ ಸಮಾನತೆ
 

ಜೈನ ಸಮಾಜದಲ್ಲಿ ಮಹಿಳೆಯರಿಗೆ ತುಂಬ ಗೌರವ.
 

ಆ ಪರಂಪರೆ ಲೋಕೂರಿನ ನರಸಿಂಗನವರ ಮನೆಯಲ್ಲಿಯೂ ಇದೆ. ಇಲ್ಲಿ ಮಹಿಳೆ ಕೆಲಸ ಮಾಡುವ ಯಂತ್ರವಲ್ಲ. ಆಕೆ ಹೊರಗೆ ಹೋಗಿ ದುಡಿಯುವ ಸಂದರ್ಭ ಬಂದಿಲ್ಲ ಎಂಬ ಕಾರಣಕ್ಕೆ ಮನೆಯಲ್ಲಿಯೇ ಉಳಿದಿದ್ದಾಳೆ. ಓದುತ್ತೇನೆಂದ ೨೦-೨೨ ಹುಡುಗ-ಹುಡುಗಿಯರಿಗೆಂದೇ ಧಾರವಾಡದ ಮಾಳಮಡ್ಡಿಯಲ್ಲಿ ದೊಡ್ಡ ಮನೆ ಮಾಡಲಾಗಿದೆ. ಮನೆ ನೋಡಿಕೊಳ್ಳಲು ಇಬ್ಬರು ಹಿರಿಯ ಹೆಣ್ಣುಮಕ್ಕಳನ್ನು ಅಲ್ಲಿಗೆ ಕಳಿಸಲಾಗಿದೆ.

ಲೋಕೂರಿನ ಮನೆಯಲ್ಲಿ ಸ್ನಾನ ಮಾಡಿದ ನಂತರ ಎಲ್ಲ ಗಂಡಸರೂ ತಮ್ಮ ಒಳ ಉಡುಪುಗಳನ್ನು ತಾವೇ ತೊಳೆದುಕೊಳ್ಳುತ್ತಾರೆ. ಅಷ್ಟರಮಟ್ಟಿಗೆ ಮನೆಯ ಹೆಣ್ಣುಮಕ್ಕಳಿಗೆ ಕೆಲಸ ಕಡಿಮೆಯಾಗುತ್ತದೆ ಎಂಬ ಭಾವನೆ ಅವರದು. ಪ್ರತಿಯೊಬ್ಬರೂ ಸಾಧ್ಯವಾದಷ್ಟೂ ತಂತಮ್ಮ ಕೆಲಸಗಳನ್ನು ತಾವೇ ಮಾಡುವುದರಿಂದ ಹೆಣ್ಣುಮಕ್ಕಳು ನಿರಾಳ.


ಯಾವೊಬ್ಬ ತಾಯಿಯೂ ಇದು ತನ್ನ ಮಗು, ಅದು ಪರರದು ಎಂಬ ಭೇದ ಮಾಡುವುದಿಲ್ಲ. ಹಾಲೂಡಿಸುವ ಹಂತ ದಾಟಿದ ನಂತರ ಮಗು ಎಲ್ಲರಿಗೂ ಸೇರಿದ್ದು. ಶಾಲೆಗೆ ಹೋಗುವ ಹೆಣ್ಣುಮಕ್ಕಳು ತಮ್ಮ ತಾಯಿಯ ಕೈಯಿಂದಲೇ ಜಡೆ ಹಾಕಿಸಿಕೊಳ್ಳಬೇಕು ಎಂಬ ನಿಯಮ ಇಲ್ಲ. ಯಾರು ಖಾಲಿ ಇರುತ್ತಾರೋ ಅವರ ಮುಂದೆ ಹೋಗಿ ಮಗು ಕೂಡುತ್ತದೆ. ಹೀಗಾಗಿ ಹೆಣ್ಣುಮಕ್ಕಳಲ್ಲಿ ಒಗ್ಗಟ್ಟು ಬೆಳೆದಿದೆ. ಕಷ್ಟ ಮತ್ತು ಸುಖವನ್ನು ಒಟ್ಟಿಗೇ ಹಂಚಿಕೊಳ್ಳುವುದನ್ನು ಕಲಿಸಿದೆ. 


ಜವಳಿ ಖರೀದಿ!
 

ವರ್ಷಕ್ಕೆ ಎರಡು ಮೂರು ಸಂದರ್ಭಗಳಲ್ಲಿ ಮನೆ ಮಂದಿಗೆಲ್ಲ ಹೊಸ ಬಟ್ಟೆ ಖರೀದಿಸಲಾಗುತ್ತದೆ. ಆ ಸಂಭ್ರಮ ನೋಡಲು ಎರಡು ಕಣ್ಣು ಸಾಲವು. ಅತ್ಯಂತ ಸಾಧಾರಣ ಬಟ್ಟೆ ಖರೀದಿಸಿದರೂ, ಒಂದು ಸಲದ ಖರೀದಿ ಮೌಲ್ಯ ರೂ.೪೦,೦೦೦ಕ್ಕಿಂತ ಕಡಿಮೆಯಾಗುವುದಿಲ್ಲ. 

ಮದುವೆ ಜವಳಿ ಖರೀದಿ ಇನ್ನೂ ಸಂಭ್ರಮದ್ದು. ಏನಿಲ್ಲವೆಂದರೂ ರೂ.೨ರಿಂದ ೨.೫ ಲಕ್ಷ ಜವಳಿ ಖರೀದಿಯಾಗುತ್ತದೆ. ಅದನ್ನು ಟ್ರಾಕ್ಟರ್ ಅಥವಾ ಟ್ರ್ಯಾಕ್ಸ್ ಮೂಲಕ ಹೇರಿಕೊಂಡು ಬರಲಾಗುತ್ತದೆ. ಬಟ್ಟೆ ಹೊಲಿಯುವವರಿಗಂತೂ ತಿಂಗಳಗಟ್ಟಲೆ ಬಿಡುವಿಲ್ಲದ ಕೆಲಸ.

ಮದುವೆಯಲ್ಲಿ ಖರ್ಚು ಐದಾರುಪಟ್ಟು ಹೆಚ್ಚಾಗುತ್ತದೆ. ಬೆಲ್ಲ ಹಾಕಿದ ಉಂಡಿ ಮಾಡಿಸಿದರೆ, ಮನೆಯ ಜನರಿಗೇ ಸಾವಿರಾರು ಉಂಡಿ ಬೇಕಾಗುತ್ತವೆ. ಕ್ವಿಂಟಾಲ್‌ಗಟ್ಟಲೇ ಅನ್ನ, ಕಡಾಯಿಗಟ್ಟಲೇ ಸಾರು ಮನೆ ಮಂದಿಗೇ ಬೇಕು. ಇದರ ಜತೆಗೆ ಮದುವೆಗೆ ಬಂದ ನೆಂಟರು, ಊರ ಜನರು ಸೇರಿದರೆ ಅದೊಂದು ಜಾತ್ರೆ. ಆದರೂ ಯಾವ ವಸ್ತುವಿಗೂ ಕೊರತೆಯಾಗುವುದಿಲ್ಲ. ಒಬ್ಬರಲ್ಲಿಯೂ ಅಸಮಾಧಾನ ತೋರುವುದಿಲ್ಲ. 


ನೂರು ಮತ, ಒಬ್ಬ ತಾ.ಪಂ. ಸದಸ್ಯ!
 

ನರಸಿಂಗನವರ ಮನೆಯಲ್ಲಿಯೇ ಕನಿಷ್ಠ ನೂರು ಮತಗಳಿವೆ. ಹೀಗಾಗಿ ಚುನಾವಣೆ ಬಂತೆಂದರೆ ಈ ಮನೆಗೆ ಆಗಮಿಸದ ಅಭ್ಯರ್ಥಿಯೇ ಇಲ್ಲ. ಅವರಿವರಿಗೆ ಓಟು ಹಾಕುವುದೇಕೆ ಎಂಬ ವಿಚಾರ ಬಂದಾಗ ಕುಟುಂಬದ ಸದಸ್ಯನೊಬ್ಬ ಚುನಾವಣೆಗೆ ನಿಲ್ಲಲು ಮುಂದಾದ. ಟಿಕೆಟ್ ಕೊಡಲು ರಾಜಕೀಯ ಪಕ್ಷಗಳ ನಡುವೆಯೇ ಸ್ಪರ್ಧೆ ನಡೆಯಿತು. ಕೊನೆಗೂ ಗೆದ್ದಿದ್ದು ಜೆಡಿಎಸ್. ಆ ಪಕ್ಷದ ಟಿಕೆಟ್ ಪಡೆದ ನರಸಿಂಗನವರ್ ಕುಟುಂಬದ ಮಂಜುನಾಥ ತಾಲ್ಲೂಕು ಪಂಚಾಯತಿ ಸ್ಪರ್ಧೆಗೆ ನಿಂತ. ಅನಾಯಾಸವಾಗಿ ಆರಿಸಿಯೂ ಬಂದ.

ಇಡೀ ಮನೆ ಮಂದಿಯ ಸಾಮಾನ್ಯ ಕಾಯಿಲೆಗಳಿಗೆಂದೇ ಚಿಕ್ಕ ಔಷಧ ಭಂಡಾರ ಮನೆಯಲ್ಲಿದೆ. ಕಾಯಿಲೆ ಕೊಂಚ ಉಲ್ಬಣಿಸಿದರೆ ನೋಡಲು ಕುಟುಂಬ ವೈದ್ಯ ಹುಬ್ಬಳ್ಳಿಯ ಡಾ. ಆರ್.ಬಿ. ಪಾಟೀಲ ಇದಾರೆ.


ನರಸಿಂಗನವರ್ ಕುಟುಂಬ ಕುಸ್ತಿಪಟುಗಳಿಗೆ ಹೆಸರುವಾಸಿ. ಮನೆಯ ಸಾಮಾನುಗಳು, ಯಂತ್ರಗಳು ದುರಸ್ತಿಗೆ ಬಂದರೆ ಇರಲಿ ಎಂದು ಕುಟುಂಬದ ಸದಸ್ಯ ದೇವೇಂದ್ರನಿಗೆ ತರಬೇತಿ ಕೊಡಿಸಲಾಗಿದೆ. ಟ್ರಾಕ್ಟರ್, ಟ್ರ್ಯಾಕ್ಸ್, ಹಿಟ್ಟಿನ ಗಿರಣಿ- ಇತ್ಯಾದಿ ವಾಹನಗಳು ಹಾಗೂ ಯಂತ್ರಗಳ ದುರಸ್ತಿ ಈತನ ಕೆಲಸ. ಸರ್ಕಾರಿ ಕೆಲಸ ನೋಡಿಕೊಳ್ಳಲು ತಾ.ಪಂ. ಸದಸ್ಯ ಮಂಜುನಾಥ, ಕೃಷಿ ನೋಡಿಕೊಳ್ಳಲು ಪದ್ಮಣ್ಣ, ಮನೆ ವ್ಯವಹಾರ ನಿಭಾಯಿಸಲು ಮಹಾವೀರ, ಡೇರಿ ನೋಡಿಕೊಳ್ಳಲು ಧರ್ಮೇಂದ್ರ ಇದ್ದಾರೆ. ಇವರೆಲ್ಲರ ಮೇಲೆ ಭೀಮಣ್ಣನವರ ಉಸ್ತುವಾರಿ ಇದೆ.
 

ಕರ್ಮ ದೂರಾದವು...
 

ನರಸಿಂಗನವರ್ ಅವರ ಅವಿಭಕ್ತ ಕುಟುಂಬ ಒಂದು ಪ್ರೇಕ್ಷಣೀಯ ಸ್ಥಳವೇ ಸರಿ. ಪ್ರತಿ ವಾರ ಒಬ್ಬಿಬ್ಬರು ಪ್ರವಾಸಿಗರು ಇದ್ದೇ ಇರುತ್ತಾರೆ. ಒಮ್ಮೊಮ್ಮೆ ದೂರದ ಊರುಗಳ ಶಾಲೆಯಿಂದ ಮಕ್ಕಳು ಪ್ರವಾಸ ಬರುವುದೂ ಉಂಟು. ಆಗೆಲ್ಲ ಮಕ್ಕಳ ಊಟ ಈ ಮನೆಯಲ್ಲಿಯೇ. ಜಗಳವಾಡಿ ದೂರಾದ ದಂಪತಿಗಳು, ಬೇರೆ ಮನೆ ಮಾಡಬೇಕೆಂದು ಮೊಂಡು ಕೂತ ಎಳೆಯ ದಂಪತಿಗಳನ್ನು ಕರೆದುಕೊಂಡು ಹಿರಿಯರು ಈ ಮನೆಗೆ ಬರುವುದೂ ಉಂಟು. ಯಾರೇ ಬಂದರೂ ಮನೆಯವರಿಗೆ ಬೇಸರವಿಲ್ಲ. ಅವರು ಕೇಳುವ ಪ್ರಶ್ನೆಗಳಿಗೆ ಸಮಾಧಾನದಿಂದಲೇ ಉತ್ತರ ಕೊಡುತ್ತಾರೆ.
ಬಂದವರೂ ಅಷ್ಟೇ, ತೆರಳುವಾಗ, ‘ನಿಮ್ಮ ಮನೆಗೆ ಬಂದು ನಮ್ಮ ಕರ್ಮ ದೂರಾದವು. ದೇವರು ನಿಮ್ಮನ್ನು ಹೀಗೇ ಚೆನ್ನಾಗಿಟ್ಟಿರಲಿ’ ಎಂದು ಹರಸುತ್ತಾರೆ. ಅದೇ ನಮ್ಮ ಪಾಲಿಗೆ ದೊಡ್ಡ ಆಶೀರ್ವಾದ ಎನ್ನುತ್ತಾರೆ ಭೀಮಣ್ಣ. 


ಆಸಕ್ತರು ‘ಭೀಮಣ್ಣ ನರಸಿಂಗನವರ್, ಅಂಚೆ: ಲೋಕೂರು, ತಾ/ಜಿ. ಧಾರವಾಡ’ ಇಲ್ಲಿಗೆ ಅಥವಾ ಮಂಜುನಾಥ ಅವರನ್ನು ದೂರವಾಣಿ: ೯೩೪೩೧ ೦೯೫೨೭ ಮೂಲಕ ಸಂಪರ್ಕಿಸಬಹುದು. 

ಕುಟುಂಬಗಳ ಮಾತು ಹಾಗಿರಲಿ, ರಾಜ್ಯ-ದೇಶಗಳೇ ತುಂಡಾಗಿಹೋಗುತ್ತಿರುವ ಈ ದಿನಗಳಲ್ಲಿ
ಲೋಕೂರಿನ  ಈ ಅವಿಭಕ್ತ ಕುಟುಂಬ ಅಚ್ಚರಿ ಹುಟ್ಟಿಸುವ ತಾಣ. ಈ ಮನೆಯನ್ನು ನೋಡುತ್ತಿದ್ದಂತೆ ‘ವಸುಧೈವ ಕುಟುಂಬಕಮ್‌’ ಎಂಬ ಮಾತಿನ ಅರ್ಥ ತನಗೆ ತಾನೇ ಹೊಳೆಯುತ್ತದೆ. ಮನಸ್ಸು ತುಂಬಿ ಬರುತ್ತದೆ. 



- ಚಾಮರಾಜ ಸವಡಿ
(ಚಿತ್ರಗಳು: ಬಿ.ಎಂ. ಕೇದಾರನಾಥ್‌)

ಅಪರೂಪದ ವಸುಧೈವ ಕುಟುಂಬಕಂ!

7 Dec 2009

13 ಪ್ರತಿಕ್ರಿಯೆ
ಮನೆಯೊಳಗೇ ಊರು ತುಂಬಿಕೊಂಡ ಅಚ್ಚರಿ ಇದು. ಧಾರವಾಡದ ಹತ್ತಿರ ಇರುವ ಲೋಕೂರು ಒಂದು ಚಿಕ್ಕ ಊರು. ಇಲ್ಲಿರುವ ಮನೆಗಳಲ್ಲಿಯೇ ಅತ್ಯಂತ ದೊಡ್ಡ ಮನೆಯಲ್ಲಿ ರಾಜ್ಯಕ್ಕೇ ದೊಡ್ಡದೆನ್ನಬಹುದಾದ ಕುಟುಂಬವೊಂದು ಕಳೆದ ನಾಲ್ಕುನೂರು ವರ್ಷಗಳಿಂದ ಒಟ್ಟಿಗೇ ವಾಸಿಸುತ್ತಿದೆ. ಕಟ್ಟಿದಾಗಿನಿಂದ ಜೈನರ ಈ ಮನೆ ವಿಭಜನೆಗೊಂಡಿಲ್ಲ. ನೌಕರಿಗಾಗಿ ದೂರ ಹೋದವರು ನಿವೃತ್ತರಾದ ನಂತರ ಮತ್ತೆ ಮನೆ ಸೇರಿದ್ದಾರೆ. ಎಲ್ಲರೂ ಒಟ್ಟಿಗೇ ದುಡಿಯುತ್ತಾರೆ. ಒಂದೇ ಕಡೆ ಉಣ್ಣುತ್ತಾರೆ. ಜಗಳವಿಲ್ಲ. ಆಸ್ತಿ ಹೋರಾಟ ಇಲ್ಲ. ೧೮೦ಕ್ಕೂ ಹೆಚ್ಚು ಜನ ಒಂದೇ ಕಡೆ ಇರುತ್ತ, ಮದುವೆಯಂಥ ಸಂದರ್ಭದಲ್ಲಿ ದೂರ ಹೋದವರೆಲ್ಲ ಬಂದಾಗ ೩೦೦ಕ್ಕೂ ಹೆಚ್ಚು ಜನ ಒಟ್ಟಿಗೇ ಸೇರಿ ಸಮಾರಂಭ ಮಾಡುತ್ತ ’ವಸುಧೈವ ಕುಟುಂಬಕಂ’ ಎಂಬ ಮಾತಿಗೆ ಸಾಕ್ಷಿಯಾಗುತ್ತ ಬಂದಿದ್ದಾರೆ... 




'ಬನ್ನಿ' ಎಂದರು ಯಜಮಾನರು.

ಒಳಗೆ ಮಕ್ಕಳು ಆಡುತ್ತಿದ್ದವು. ಫಕ್ಕನೇ ’ಶಾಲೆ ಇರಬಹುದಾ’ ಅನ್ನಿಸಿತು. ಆದರೆ, ಒಳಗೆಲ್ಲೋ ರೊಟ್ಟಿ ಬಡಿಯುತ್ತಿದ್ದ ಸದ್ದು. ಜೋಳದ ರೊಟ್ಟಿ ಬೇಯುತ್ತಿದ್ದ ಕಮ್ಮನೆ ಪರಿಮಳ. ಎಲ್ಲೋ ಮಗುವೊಂದು ಬಿಕ್ಕಿದಂತೆ, ಹೆಣ್ಣು ಧ್ವನಿಯೊಂದು ಅದನ್ನು ಮಮತೆಯಿಂದ ಸಂತೈಸಿದಂತೆ ಕೇಳಿ ಬಂದಾಗ, ಹೌದು, ಇದು ಮನೆಯೇ ಅನ್ನಿಸಿತು.

ಛಾಯಾಗ್ರಾಹಕ ಮಿತ್ರ ಕೇದಾರನಾಥ ಅವಾಕ್ಕಾಗಿ ನಿಂತಿದ್ದರು.

ಮತ್ತೊಮ್ಮೆ, ’ಬನ್ನಿ’ ಎಂದರು ಯಜಮಾನರು. ಅವರಿಗೆ ೯೦ ವರ್ಷ ವಯಸ್ಸು. ಹೆಸರು ತಮ್ಮಣ್ಣ ಜಿನ್ನಪ್ಪ ನರಸಿಂಗನವರ.

ಅವರಿಗೆ ವಯಸ್ಸಾಗಿರುವುದರಿಂದ ತಮಗಿಂತ ಐದು ವರ್ಷ ಚಿಕ್ಕವರಾಗಿರುವ ತಮ್ಮ ಭೀಮಣ್ಣ ನರಸಿಂಗನವರ ಅವರಿಗೆ ಮನೆಯ ಉಸ್ತುವಾರಿ ವಹಿಸಿಕೊಟ್ಟಿದ್ದಾರೆ. ಮನೆಯ ಅತಿ ಚಿಕ್ಕ ಸದಸ್ಯನಿಗೆ ಇನ್ನೂ ನಾಮಕರಣವಾಗಬೇಕಿದೆ. ತೊಟ್ಟಿಲು ನಿಲ್ಲದ ಮನೆಯಲ್ಲಿ ಸಣ್ಣವರ ಸ್ಥಾನ ಬದಲಾಗುತ್ತಲೇ ಇರುತ್ತದೆ.

ಇದು ಧಾರವಾಡದಿಂದ ೨೦ ಕಿಮೀ ದೂರದಲ್ಲಿರುವ ಲೋಕೂರು ಎಂಬ ಗ್ರಾಮದ ಅವಿಭಕ್ತ ಕುಟುಂಬದ ಕತೆ.


ಕುಟುಂಬದಲ್ಲಿರುವ ಹಾಲಿ ಸದಸ್ಯರ ಸಂಖ್ಯೆ ೧೮೦. ಪ್ರತಿ ತಿಂಗಳು-ಎರಡು ತಿಂಗಳಿಗೆ ಈ ಸಂಖ್ಯೆ ಹೆಚ್ಚುತ್ತದೆಯೇ ಹೊರತು ಕಡಿಮೆಯಾಗದು. ಈ ಅವಧಿಯಲ್ಲಿ ಗರ್ಭಿಣಿಯರ ಪೈಕಿ ಒಬ್ಬರಲ್ಲ ಒಬ್ಬರು ಹೆರುತ್ತಾರೆ. ದೊಡ್ಡ ಮನೆ ತುಂಬ ಕಟ್ಟಿರುವ ಹತ್ತಕ್ಕೂ ಹೆಚ್ಚು ತೂಗು ತೊಟ್ಟಿಲುಗಳಲ್ಲಿ ಅರ್ಧಕ್ಕೂ ಹೆಚ್ಚು ಆಡುತ್ತಲೇ ಇರುತ್ತವೆ. ಬಾಣಂತಿಯನ್ನು ಬೆಚ್ಚಗಿಡಲೆಂದು ಮನೆಯ ಮುಂದೆ ನಿತ್ಯ ಬೆಳಿಗ್ಗೆ ಮತ್ತು ಸಂಜೆ ಹಚ್ಚಿಡುವ ಬೆರಣಿ ಬೆಂಕಿ ಹೊಗೆಯಾಡುವುದನ್ನು ನಿಲ್ಲಿಸುವುದಿಲ್ಲ.

ನಿತ್ಯ ೧೮೦ ಜನರು ಒಂದೇ ಕಡೆ ಉಣ್ಣುತ್ತ, ವಿವಿಧೆಡೆ ಮಲಗುತ್ತ, ಊರ ಸುತ್ತ ಹಬ್ಬಿರುವ ಹೊಲಗಳಲ್ಲಿ ಕೆಲಸ ಮಾಡುತ್ತ, ಯಾವ ಜಗಳ, ಕಿರಿಕಿರಿ ಇಲ್ಲದೇ ನೆಮ್ಮದಿಯಿಂದ ಬದುಕುತ್ತ ಇದ್ದಾರೆ ಎಂದರೆ ನಾಗರಿಕ ಪ್ರಪಂಚಕ್ಕೆ ನಂಬಲು ಕಷ್ಟವಾಗುತ್ತದೆ. ಅಲ್ಲವೆ?

ಆದರೆ ನರಸಿಂಗನವರ ಕುಟುಂಬಕ್ಕೆ ಇದು ನೀರು ಕುಡಿದಷ್ಟು ಸುಲಭ.

’ನಮಗ ನೆನಪಿರಾಗಿಂದ ನಾವೆಲ್ಲ ಹಿಂಗ ಅದೀವ್ರಿ. ಒಬ್ಬೊಬ್ರ ಇದ್ದು ರೂಢಿನಾ ಇಲ್ಲ. ನಮಗ ಸುತ್ತ ಕಡೆ ಜನ ಇರಬೇಕು. ಮಕ್ಳುಮರಿ ಆಡ್ತಿರಬೇಕು, ಆಗ ಮಾತ್ರ ಸಮಾಧಾನ’ ಎನ್ನುತ್ತಾರೆ ದೊಡ್ಡ ಕುಟುಂಬದ ಉಸ್ತುವಾರಿ ನೋಡಿಕೊಳ್ಳುವ ಭೀಮಣ್ಣ ನರಸಿಂಗನವರ.

’ನಾವಷ್ಟ ಅಲ್ಲ, ನಮ್ಮ ಮನಿಗೆ ಹೊರಗ್ನಿಂದ ಬರೋ ಸೊಸೆಯಂದ್ರೂ ಹಿಂಗ ಹೇಳ್ತಾರ. ಮೊದಮೊದ್ಲು ಅವರಿಗೆ ಕಷ್ಟ ಅನಿಸಿದ್ರೂ ಸ್ವಲ್ಪ ದಿನದಾಗ ಎಲ್ರೂ ಹೊಂದಿಕೊಂಡುಬಿಡ್ತಾರ. ಒಬ್ರ ಇರಾಕ ಅವ್ರಿಗೂ ಬ್ಯಾಸರ ಆಗಾಕ ಶುರು ಆಗುತ್ತ. ಮನ್ಯಾಗ ಇರೋ ಎಲ್ರೂ ಹಿಂಗ...’ ಅನ್ನುತ್ತಾರೆ ಅವರು.

ಅದು ಸತ್ಯವೂ ಹೌದು. ನರಸಿಂಗನವರ ಮನೆಯಲ್ಲಿ ನೂರಾರು ಜನರಿದ್ದರೂ ಅದು ಗುಂಪು ಅನ್ನಿಸುವುದಿಲ್ಲ. ಜಂಗುಳಿ ಎಂಬ ಭಾವನೆ ಬರುವುದಿಲ್ಲ. ಅಳುವ ಮಕ್ಕಳು ಅಲ್ಲಿ ಯಾರಿಗೂ ಕಿರಿಕಿರಿ ಅಲ್ಲ. ಆಡುವ ಮಕ್ಕಳ ಸದ್ದು ಗಲಾಟೆ ಅನ್ನಿಸುವುದಿಲ್ಲ. ತೊಟ್ಟಿಲಲ್ಲಿ ಮಲಗಲು ಮಕ್ಕಳು ಇರುವಂತೆ ತೂಗುವ ಕೈಗಳೂ ಅಲ್ಲಿವೆ. ಯಾರು ಯಾರಿಗೂ ಭಾರ ಅಲ್ಲ.

ಏಕೆಂದರೆ ಪ್ರತಿಯೊಬ್ಬರೂ ತಂತಮ್ಮ ಕೆಲಸಗಳನ್ನು ಅಚ್ಚುಕಟ್ಟಾಗಿ ಮಾಡುತ್ತ ಹೋಗುತ್ತಾರೆ. ತಮ್ಮ ಪಾತ್ರವನ್ನು ಚೆನ್ನಾಗಿ ನಿಭಾಯಿಸುತ್ತ ಹೋಗುತ್ತಾರೆ. ಒಬ್ಬ ಕಾಯಿಲೆ ಮಲಗಿದ ಎಂದರೆ ಅವನ ಕೆಲಸವನ್ನು ಇತರರು ಹಂಚಿಕೊಳ್ಳುತ್ತಾರೆ. ಮಲಗಿದವನ ಯೋಗಕ್ಷೇಮ ನೋಡಿಕೊಳ್ಳಲು ಇತರರು ಸಿದ್ಧರಾಗುತ್ತಾರೆ. ಹೀಗಾಗಿ ಎಲ್ಲರಿಗೂ ನೆಮ್ಮದಿ. ತಮಗೇನೇ ಆದರೂ ಇತರರು ಇರುತ್ತಾರೆ ಎಂಬ ಸಮಾಧಾನ. ಖಾಲಿತನವಿಲ್ಲ. ಬೇಸರ ಎನ್ನುವ ಪ್ರಶ್ನೆ ಇಲ್ಲ, ಏಕಾಂಗಿತನ ಕಾಡುವುದಿಲ್ಲ. ಸುತ್ತ ಮುತ್ತ ಜನ ಇದ್ದೇ ಇರುತ್ತಾರೆ. ಆಸರಕ್ಕೆ ಬೇಸರಕ್ಕೆ ಕೈ ಚಾಚುತ್ತಾರೆ.

ಹೀಗಾಗಿ ಇದೊಂದು ಅಪರೂಪದ ಕುಟುಂಬ. ಮಾದರಿ ಕುಟುಂಬ.

ಮೂಲ ಮಹಾರಾಷ್ಟ್ರ

’ಮಹಾರಾಷ್ಟ್ರ ರಾಜ್ಯದ ಮೀರಜ್, ಕೊಲ್ಲಾಪುರ, ಸಾಂಗಲಿ ನಡುವೆ  ಇರುವ ಹಾತಕಲ್ ಅಂಗಡಾ ಎಂಬ ಪ್ರದೇಶದಲ್ಲಿದ್ದ ಜೈನ ಕುಟುಂಬ ನಮ್ಮದು. ಅಲ್ಲಿಯ ನರಸೋಬಾ ದೇವಸ್ಥಾನದ ಅರ್ಚಕರಾಗಿದ್ದ ನಮ್ಮ ಹಿರೀಕರ ಪೈಕಿ ಮೂವರು ಹಿರಿಯರು ಯಾವುದೋ ಕಾರಣಕ್ಕಾಗಿ ೧೬ನೇ ಶತಮಾನದಲ್ಲಿ ತಮ್ಮ ಮೂಲಸ್ಥಳ ಬಿಟ್ಟು ದೇಶಾಂತರ ಹೊರಟು ಇಲ್ಲಿಗೆ ಬಂದರು. ಇವರ ಪೈಕಿ ನರಸಿಂಗಪ್ಪ ಎಂಬ ಪೈಲ್ವಾನ್ ಲೋಕೂರಿನ ದುರ್ಗಾದೇವಿ ದೇವಸ್ಥಾನದಲ್ಲಿ ರಾತ್ರಿ ಮಲಗಿದ್ದ. ಆತನಿಗೆ ಇಲ್ಲಿಯೇ ಉಳಿಯಬೇಕೆಂಬ ಪ್ರೇರಣೆಯಾಯಿತು.

’ತನ್ನಲ್ಲಿದ್ದ ಹಣದಿಂದ ದೇವಸ್ಥಾನದ ಹತ್ತಿರದ ಪ್ರದೇಶವನ್ನು ಖರೀದಿಸಿ, ಅಲ್ಲೊಂದು ಸಣ್ಣ ಮನೆ ಕಟ್ಟಿದ. ಮದುವೆಯಾದ. ಆತನಿಗೆ ಏಳು ಮಕ್ಕಳಾದವು. ಅಲ್ಲಿಂದ ಶುರುವಾದ ಸಂತಾನವೃಕ್ಷ ಹಬ್ಬುತ್ತಲೇ ಇದೆ. ಆತನಿಂದಾಗಿ ನಮ್ಮ ಕುಟುಂಬಕ್ಕೆ ನರಸಿಂಗನವರ ಎಂಬ ಅಡ್ಡ ಹೆಸರು ಬಂದಿತು’ ಎಂದು ಕುಟುಂಬದ ಕತೆ ಪ್ರಾರಂಭಿಸುತ್ತಾರೆ ಭೀಮಣ್ಣ ನರಸಿಂಗನವರ.

’ಈಗ ನಾವು ಕೂತಿರುವುದು ಆತ ಖರೀದಿಸಿದ ಜಾಗದಲ್ಲಿ ಕಟ್ಟಿಸಿದ ಮನೆಯಲ್ಲಿ. ಕ್ರಮೇಣ ಸಂಸಾರ ಬೆಳೆಯಿತು. ಮನೆ ದೊಡ್ಡದಾಗುತ್ತ ಹೋಯಿತು. ದೂರದ ಊರಿನಿಂದ ನೆಲೆ ಹುಡುಕಿಕೊಂಡು ಬಂದವರು ನಾವು. ಮಕ್ಕಳೆಲ್ಲ ಬೇರೆ ಹೋದರೆ ಆಸ್ತಿ ಮೂರಾಬಟ್ಟೆಯಾಗಿ, ಯಾರಿಗೂ ತುಂಡು ನೆಲವೂ ದೊರೆಯುವುದಿಲ್ಲ ಎಂಬ ವಿವೇಕ ಮೊದಲಿನಿಂದಲೇ ಇತ್ತು. ಹೀಗಾಗಿ ಮದುವೆಯಾದ ಹೆಣ್ಣುಮಕ್ಕಳು ಹೊರಹೋಗಿದ್ದು ಬಿಟ್ಟರೆ ಯಾವೊಂದು ಗಂಡು ಕುಡಿಯೂ ಇಲ್ಲಿಂದ ಹೊರಹೋಗಿಲ್ಲ. ಹಾಗೆ ಹೋದ ಒಂದಿಬ್ಬರೂ ಹಿಂದೆಯೇ ವಾಪಸ್ಸಾಗಿದ್ದಾರೆ. ಹೀಗಾಗಿ ನಾಲ್ಕು ಶತಮಾನಗಳಿಂದ ನಮ್ಮದು ಅವಿಭಕ್ತ ಕುಟುಂಬವೇ’ ಎನ್ನುತ್ತಾರೆ ಅವರು.

ಅದು ಸತ್ಯವೂ ಹೌದು. ಒಬ್ಬ ನರಸಿಂಗಪ್ಪನಿಂದ ಪ್ರಾರಂಭವಾದ ಕುಟುಂಬದ ಸದಸ್ಯರ ಸಂಖ್ಯೆ ಬರ, ರೋಗ-ರುಜಿನ, ಸಾವು-ನೋವು, ಯುದ್ಧ, ಬಡತನ ಎಲ್ಲವನ್ನೂ ಎದುರಿಸುತ್ತ ಈ ನಾಲ್ಕುನೂರು ಚಿಲ್ಲರೆ ವರ್ಷಗಳಲ್ಲಿ ೩೦೦ ದಾಟಿದೆ. ಎಲ್ಲರೂ ಒಟ್ಟಾಗಿ ದುಡಿಯುವ ಕಾರಣ ಆದಾಯದ ಪ್ರಮಾಣದಲ್ಲಿಯೂ ಹೆಚ್ಚಳವಾಗುತ್ತ ನಡೆದಿದೆ. ಕೈಯಲ್ಲಿ ಸ್ವಲ್ಪ ದುಡ್ಡಿಟ್ಟುಕೊಂಡು ಬಂದಿದ್ದ ಒಬ್ಬ ವ್ಯಕ್ತಿಯ ಸಂತಾನ ಹಾಗೂ ಆಸ್ತಿ ಈ ಪರಿ ಬೆಳೆಯಲು ಕಾರಣ ಒಗ್ಗಟ್ಟೇ ಹೊರತು ಬೇರೇನೂ ಅಲ್ಲ.

ಒಗ್ಗಟ್ಟಿನಿಂದಾಗಿ ಪ್ರಗತಿ

’ಒಂದು ವೇಳೆ ಊರಲ್ಲಿರೋ ನಾವು ೧೮೦ ಮಂದಿ ಬ್ಯಾರೆ ಆದ್ರ ಎಲ್ರೂ ಬಡವರಾಗೇ ಬದುಕಬೇಕಾಗುತ್ತ’ ಎಂದು ಎಚ್ಚರಿಸುತ್ತಾರೆ ಭೀಮಣ್ಣ. ’ಏಕೆಂದರೆ ನಮ್ಮ ಹತ್ತಿರ ಈಗ ೨೭೦ ಎಕರೆ ಭೂಮಿ ಇದೆ. ಇದರ ಪೈಕಿ ೮ ಎಕರೆಯಲ್ಲಿ ಭತ್ತ ಬೆಳೆಯಲಾಗುತ್ತದೆ. ನೀರಾವರಿ ಭೂಮಿಯ ಪ್ರಮಾಣ ಕೇವಲ ೩೩ ಎಕರೆ ಮಾತ್ರ. ನೂರೆಂಬತ್ತು ಜನರ ಪೈಕಿ ೬ ಜನ ಮಾತ್ರ ಸರ್ಕಾರಿ ನೌಕರಿಯಲ್ಲಿದ್ದಾರೆ. ಖರ್ಚು ತೆಗೆದರೆ ಅವರ ಬಾಕಿ ಆದಾಯವೂ ಇಲ್ಲಿಗೇ ಬರುತ್ತದೆ. ಒಂದು ವೇಳೆ ಎಲ್ಲರೂ ಬೇರೆ ಆದರೆ ಒಬ್ಬರಿಗೆ ಒಂದು ಎಕರೆ ಭೂಮಿಯೂ ಬರುವುದಿಲ್ಲ. ಆಗ ಜೀವನ ನಡೆಯೋದು ಹೇಗೆ?’ ಎಂದು ಅವರು ಪ್ರಶ್ನಿಸುತ್ತಾರೆ.

ಇವರ ಖರ್ಚು ಕೂಡ ಆದಾಯಕ್ಕೆ ತಕ್ಕ ಹಾಗೆ ಇದೆ. ದಿನಕ್ಕೆ ೫೦ರಿಂದ ೬೦ ಕೆಜಿ ಜೋಳ, ೧೫ರಿಂದ ೨೦ ಕೆಜಿ ಗೋದಿ ಖರ್ಚಾಗುತ್ತದೆ. ನಿತ್ಯ ೩೦ರಿಂದ ೪೦ ಲೀಟರ್ ಹಾಲು ಬೇಕು. ಹಬ್ಬ ಬಂದರೆ ದಿನಕ್ಕೆ ಒಂದು ಕ್ವಿಂಟಲ್ ಜೋಳ ಖರ್ಚಾಗುತ್ತದೆ. ಕುಟುಂಬದಲ್ಲಿ ಯಾರೂ ಹೋಟೆಲ್‌ಗೆ ಹೋಗುವುದಿಲ್ಲ. ರೊಟ್ಟಿಪ್ರಿಯರಾಗಿದ್ದರಿಂದ ಅನ್ನದ ಅವಲಂಬನೆ ಕಡಿಮೆ.

ಮದುವೆ... ಮದುವೆ...

ಇಂಥ ಬೃಹತ್ ಕುಟುಂಬದಲ್ಲಿ ನಿತ್ಯದ ಅಡುಗೆಯೇ ಮದುವೆ ಅಡುಗೆ ಮೀರಿಸುವಾಗ, ಇನ್ನು ನಿಜವಾದ ಮದುವೆ ನಡೆದರೆ ಹೇಗಿರುತ್ತದೆ?

ಇಂಥದೊಂದು ಅವಕಾಶಕ್ಕಾಗಿ ಮೂರು ತಿಂಗಳಿಂದ ಕಾಯ್ದುಕೊಂಡಿದ್ದ ನಮಗೆ ನಿರಾಶೆಯಾಗಲಿಲ್ಲ. ’ಮೇ ೧ರಂದು ನಮ್ಮ ಮನೆಯಲ್ಲಿ ಮದುವೆ ನೀವು ಬರಬೇಕು’ ಎಂಬ ಆಮಂತ್ರಣ ಅದೊಂದಿನ ನರಸಿಂಗನವರ ಕುಟುಂಬದಿಂದ ಬಂದಿತು.


(ಮುಂದಿನ ಭಾಗದಲ್ಲಿ ಮುಕ್ತಾಯ)
 

- ಚಾಮರಾಜ ಸವಡಿ
(ಚಿತ್ರಗಳು:
ಬಿ.ಎಂ. ಕೇದಾರನಾಥ. ಹೆಚ್ಚಿನ ಚಿತ್ರಗಳನ್ನು ವೀಕ್ಷಿಸಿ http://picasaweb.google.com/chamarajs/Lokur# )