Showing posts with label ಗೌರಿ. Show all posts
Showing posts with label ಗೌರಿ. Show all posts

ಗುರುವಾದ ಮಗಳಿಗೆ ಈಗ ಹತ್ತು ವರ್ಷ

20 Apr 2012

14 ಪ್ರತಿಕ್ರಿಯೆ
ಮನೆ ಎದುರಿನ ರಸ್ತೆಯಲ್ಲಿ ಮಕ್ಕಳ ಗುಂಪು, ಗದ್ದಲ. ಈಗ ತಾನೇ ನಡೆಯಲು ಕಲಿತ ಮಗುವಿನಿಂದ ಹಿಡಿದು ಹೈಸ್ಕೂಲು ಮೆಟ್ಟಿಲು ಹತ್ತಲಿರುವ ವಯಸ್ಸಿನವರೆಗಿನ ಮಕ್ಕಳು ಅಲ್ಲಿದ್ದಾರೆ. ಅವರು ಆಡಿದ್ದೇ ಆಟ. ಹಾಕಿದ್ದೇ ನಿಯಮ. ಪರೀಕ್ಷೆ ಮುಗಿದ ಸಂತಸದಲ್ಲಿ ಕೂಗಾಡುತ್ತ ಆಡುತ್ತಿದ್ದಾರೆ.
 

ಅವರ ಗುಂಪಿನಿಂದ ದೂರ, ಮನೆ ಎದುರಿಗೆ ಹಾಸಿದ ಪುಟ್ಟ ಕಟ್ಟೆಯಂತಿರುವ ಜಾಗದಲ್ಲಿ ಆಯಾ ಮನೆಗಳ ತಾಯಂದಿರು, ಅಜ್ಜಿಯರು ಕೂತಿದ್ದಾರೆ. ಅವರ ಮಧ್ಯೆ ಮಗುವೊಂದು ಕೂತಿದೆ. ಅದಕ್ಕೆ ಆಡುವ ಮಕ್ಕಳ ಕೇಕೆಯ ಕಡೆ ಗಮನವಿಲ್ಲ. ಅದರ ಲೋಕವೇ ಬೇರೆ.
 

ಆಕೆ ಗೌರಿ.
 

ಹತ್ತು ವರ್ಷಗಳ ಹಿಂದೆ, ಇದೇ ದಿನ (ಏಪ್ರಿಲ್ ೧೯) ಗೌರಿ ಜನಿಸಿದಾಗ ನಾನು ಕೊಪ್ಪಳದಲ್ಲಿದ್ದೆ. ಬದುಕು ಕಟ್ಟಿಕೊಳ್ಳುವ ಹೆಣಗಾಟದ ದಿನಗಳವು. ಅನಿವಾರ್ಯವಾಗಿ ಶುರು ಮಾಡಿದ್ದ ವಾರಪತ್ರಿಕೆಯೊಂದಕ್ಕೆ ಬರೆಯುತ್ತ ಕೂತವನನ್ನು ಫೋನ್ ಮಾಡಿ ಕರೆಸಿದ್ದರು ಮಾವ. ನೀವು ಬಿಜಿ ಇರ್ತೀರಂತ ಹೇಳಿರಲಿಲ್ಲ. ರೇಖಾಳನ್ನು ನಿನ್ನೆ ರಾತ್ರಿಯೇ ಆಸ್ಪತ್ರೆಗೆ ಸೇರಿಸಿದ್ವಿ. ಬೇಗ ಬನ್ನಿ ಎಂದಿದ್ದರು.
 

ರಾತ್ರಿಯಿಡೀ ನಿದ್ದೆಗೆಟ್ಟವನು ಹಾಗೇ ಪೆನ್ನು ಮುಚ್ಚಿಟ್ಟು ಅವಸರದಲ್ಲಿ ಆಸ್ಪತ್ರೆಗೆ ಬಂದಿದ್ದೆ. ನನ್ನನ್ನೇ ಕಾಯುತ್ತಿದ್ದ ಡಾಕ್ಟರ್, ಸಿಸೇರಿಯನ್ ಆಗ್ಬೇಕು, ನೀವಿಲ್ಲಿ ಸೈನ್ ಮಾಡಿ ಎಂದು ಮುಂದೆ ಹಿಡಿದ ಹಾಳೆಯಲ್ಲಿ ಸಹಿ ಮಾಡಿ ಅರ್ಧ ಗಂಟೆ ಸುಮ್ಮನೇ ಕೂತಿದ್ದೆ. ವರ್ಷದ ಹಿಂದೆ ಡಿಗ್ರಿ ಕೊನೆಯ ವರ್ಷದ ಪರೀಕ್ಷೆ ಬರೆದು, ರಜೆಯಲ್ಲಿ ಮದುವೆಯಾಗಿದ್ದ ರೇಖಾ ಒಳಗೆ ಲೇಬರ್ ರೂಮಿನಲ್ಲಿ ತಾಯಾಗಲಿದ್ದಳು.
 

ಏನಿದ್ದವು ನನ್ನ ಭಾವನೆಗಳಾಗ?
 

ಇದ್ದ ಇಬ್ಬರೇ ಬಲು ಸಾಧಾರಣ ಜೀವನ ಸಾಗಿಸಲೂ ಕಷ್ಟಪಡಬೇಕಿತ್ತು. ಈಗ ನಮ್ಮ ಮಧ್ಯೆ ಇನ್ನೊಂದು ಜೀವ ಬರಲಿದೆ. ಅದಕ್ಕಾಗಿ ಹರ್ಷ ಪಡಬೇಕೋ, ಚಿಂತೆ ಮಾಡಬೇಕೋ ಎಂಬ ಗೊಂದಲ.
 

ಸುಮ್ಮನೇ ಕೂತವನೆದುರು ಬಂದು ನರ್ಸ್ ಹೇಳಿದ್ದಳು: ಹೆಣ್ಣುಮಗು!
 

ಗೌರಿ ಹುಟ್ಟಿದ್ದು ಹಾಗೆ.
 

*****
 

ಬಲು ಕೆಂಪಗಿತ್ತು ಮಗು. ಆಕೆಯನ್ನು ಮೊದಲ ಬಾರಿ ನೋಡಿದಾಗಿನ ಕ್ಷಣಗಳು ಇವತ್ತಿಗೂ ನೆನಪಿನಲ್ಲಿ ಹಚ್ಚಹಸಿರು. ಹೆರಿಗೆ ನೋವು, ಸಿಸೇರಿಯನ್ ರಗಳೆಯಲ್ಲಿ ಬಾಡಿದಂತಿದ್ದ ರೇಖಾಳ ಮೊಗದಲ್ಲಿ ಬೆಳದಿಂಗಳು. ಪಕ್ಕದಲ್ಲೇ ಮಲಗಿತ್ತು ಪುಟ್ಟ ಗೌರಿ- ಕೆಂಪಗೆ, ದಪ್ಪಗೆ, ಮುಷ್ಠಿ ಬಿಗಿದುಕೊಂಡು.
 

ಆ ಕ್ಷಣದಲ್ಲಿ, ಈಕೆ ಮುಂದೆ ನನಗೆ ಗುರುವಾಗುತ್ತಾಳೆಂದು ಖಂಡಿತ ಅಂದುಕೊಂಡಿರಲಿಲ್ಲ.
 

*****
 

ಮೂರು ತಿಂಗಳಾದರೂ ಗೌರಿಯ ಕತ್ತು ಸ್ಥಿರವಾಗಲಿಲ್ಲ. ದೃಷ್ಟಿ ಎತ್ತಲೋ. ಮಗು ಗೆಲುವಾಗಿತ್ತು. ಊಟ, ನಿದ್ದೆ, ತನ್ನ ಪಾಡಿಗೆ ತಾನು ಆಟವಾಡುವುದು ಎಲ್ಲಾ ಇದ್ದರೂ, ಸುತ್ತಲಿನ ಜಗತ್ತಿನೊಂದಿಗೆ ಸಂಬಂಧ ಇಲ್ಲದಂತಿತ್ತು. ತೊಟ್ಟಿಲ ಮೇಲೆ ಬಾಗಿ, ಲಟಿಕೆ ಹೊಡೆದು, ಗಿಲಿಗಿಲಿ ಆಡಿಸಿದರೂ ನಮ್ಮತ್ತ ದೃಷ್ಟಿ ಕೊಟ್ಟು ನೋಡುತ್ತಿರಲಿಲ್ಲ. ಶಬ್ದಕ್ಕೆ ಮುಖವರಳಿಸುತ್ತಿದ್ದುದನ್ನು ಬಿಟ್ಟರೆ, ಬಾಹ್ಯ ಜಗತ್ತಿಗೆ ಪ್ರತಿಕ್ರಿಯಿಸುತ್ತಿರಲಿಲ್ಲ.
 

‘ಕೆಲ ಮಕ್ಕಳು ಹಾಗೇ. ಅದರಲ್ಲೂ ಮೊದಲ ಮಗು ಕೊಂಚ ನಿಧಾನ’ ಅಂದರು ಹಿರಿಯರು.
 

ಆರು ತಿಂಗಳುಗಳಾದವು. ಕತ್ತು ಕೊಂಚ ಸ್ಥಿರವಾಗಿದ್ದರೂ, ಉಳಿದೆಲ್ಲ ವಿಷಯಗಳಲ್ಲಿ ಅದಿನ್ನೂ ಹಸುಗೂಸೇ.
 

‘ಕೆಲ ಮಕ್ಕಳು ಹಾಗೇ. ನಿಧಾನವಾಗಿ ಪ್ರತಿಕ್ರಿಯಿಸುತ್ತವೆ’ ಅಂದರು ಕೊಪ್ಪಳದ ಮಕ್ಕಳ ಡಾಕ್ಟರು.
 

ಎಂಟು ತಿಂಗಳಾದರೂ ಗೌರಿ ಅದೇ ಸ್ಥಿತಿಯಲ್ಲಿ ಉಳಿದಾಗ ಪಕ್ಕದ ಹೊಸಪೇಟೆಗೆ ಹೋಗಿ ಬೇರೊಬ್ಬ ಮಕ್ಕಳ ತಜ್ಞರಿಗೆ ತೋರಿಸಿದೆವು. ಕೆಲ ಪರೀಕ್ಷೆಗಳನ್ನು ಮಾಡಿ, ಗೌರಿಯ ತಲೆಯ ಗಾತ್ರವನ್ನು ಟೇಪ್‌ನಲ್ಲಿ ಅಳೆದ ಆ ವೈದ್ಯರು ಹೇಳಿದರು:
 

ಈಕೆಯ ಮೆದುಳಿನ ಬೆಳವಣಿಗೆ ಸಹಜವಾಗಿಲ್ಲ. ಬುದ್ಧಿಮಾಂದ್ಯತೆಯ ಲಕ್ಷಣಗಳು ಕಾಣಿಸ್ತಿವೆ. ನೀವೊಮ್ಮೆ ಸ್ಕ್ಯಾನ್ ಮಾಡಿಸೋದು ಉತ್ತಮ. ಹುಬ್ಬಳ್ಳಿ ಅಥವಾ ಬೆಂಗಳೂರಿಗೆ ಹೋಗಿ ಎಂದರು.
 

ಮಗುವನ್ನು ಕರೆದುಕೊಂಡು ಹತ್ತಿರದ ಒಣಗಿದ ಪಾರ್ಕ್‌ನಲ್ಲಿ ಮೌನವಾಗಿ ಕೂತೆವು. ರೇಖಾ ನಿರಂತರವಾಗಿ ಅಳುತ್ತಿದ್ದರೆ, ನಾನು ಒಳಗೊಳಗೇ ಅಳುತ್ತ ಮಂಕಾಗಿ ಕೂತಿದ್ದೆ. ಗೌರಿಯೊಬ್ಬಳೇ ತನ್ನ ಪಾಡಿಗೆ ತಾನು ನಗುತ್ತಿದ್ದಿದ್ದು.
 

*****
 

ಧಾರವಾಡದ ಮಕ್ಕಳ ವೈದ್ಯರು ಆಕೆಯ ಮೆದುಳಿನ ಬೆಳವಣಿಗೆ ಅಸಮರ್ಪಕವಾಗಿದ್ದನ್ನು ಸ್ಕ್ಯಾನಿಂಗ್ ಮಾಡಿ ತೋರಿಸಿದರು. ಅಲ್ಲಿಗೆ ಚಿತ್ರಣ ಸ್ಪಷ್ಟವಾಗಿತ್ತು.
 

ನಡೆಸುತ್ತಿದ್ದ ಪತ್ರಿಕೆ ಮುಚ್ಚಿ ರೇಖಾ ಮತ್ತು ಗೌರಿಯನ್ನು ಕರೆದುಕೊಂಡು ಬೆಂಗಳೂರಿಗೆ ಬಂದೆ. ಓ ಮನಸೇ ಪತ್ರಿಕೆಯಲ್ಲಿ ಕೆಲಸ ಮಾಡುತ್ತ ನಿಮ್ಹಾನ್ಸ್‌ನಲ್ಲಿ ಗೌರಿಯನ್ನು ತೋರಿಸಿದೆವು. ಅವರ ಚಿತ್ರಣ ಇನ್ನೂ ನಿಖರವಾಗಿತ್ತು. ಗೌರಿಯ ಮೆದುಳಿನ ಶೇ.೪೦ರಿಂದ ೪೫ ಭಾಗದಲ್ಲಿ ಚಟುವಟಿಕೆಯೇ ಇರಲಿಲ್ಲ.
 

‘ಸಾಮಾನ್ಯ ಮಗುವಿನೊಂದಿಗೆ ಮಾತಾಡುವಂತೆ ಆಕೆಯ ಜೊತೆ ಮಾತಾಡಿ. ಆಟ ಆಡಿಸಿ. ಫಿಸಿಯೋಥೆರಪಿ ಮಾಡಿಸಿ. ಆಕೆ ಸಾಮಾನ್ಯ ಸ್ಥಿತಿಗೆ ಬರುತ್ತಾಳೆಂದು ಹೇಳಲಾರೆವು. ಆದರೆ, ಆ ಸ್ಥಿತಿಗೆ ಹತ್ತಿರವಾಗಿಸಲು ಪ್ರಯತ್ನಿಸಿ. ಒಳ್ಳೆಯದಾಗಲಿ’ ಎಂದರು ನಿಮ್ಹಾನ್ಸ್‌ನ ಕರುಣಾಮಯಿ ವೈದ್ಯರು.
 

ಅವತ್ತು ಮತ್ತೆ ಅತ್ತಿದ್ದೆವು ಇಬ್ಬರೂ.
 

*****
 

ಈಕೆ ದೇವರಿಗೆ ಹರಕೆ ಹೊತ್ತಳು. ನಾನು ತಜ್ಞರ ಶೋಧದಲ್ಲಿ ತೊಡಗಿದೆ. ಭರವಸೆ ಹುಟ್ಟಿಸಿದ ಪ್ರತಿಯೊಬ್ಬ ವೈದ್ಯರಲ್ಲೂ ತೋರಿಸಿದೆವು. ಅವರ ಚಿಕಿತ್ಸಾ ವಿಧಾನಗಳನ್ನು ಅನುಸರಿಸಿದೆವು. ನಿಮ್ಹಾನ್ಸ್‌ನಲ್ಲೇ ಇದ್ದ ಆಯುರ್ವೇದ ವಿಭಾಗದಲ್ಲಿ ವಾರಪೂರ್ತಿ ಚಿಕಿತ್ಸೆ ಆಯಿತು. ಅವನ್ನೇ ಮನೆಯಲ್ಲೂ ಮಾಡುತ್ತ ಹೋದೆವು.
 

ಊಹೂಂ. ಅವ್ಯಾವೂ ತಕ್ಷಣದ ಭರವಸೆ ಮೂಡಿಸಲಿಲ್ಲ.
 

ಹೋಮಿಯೋಪತಿ ಚಿಕಿತ್ಸೆಯ ಬೆನ್ನು ಹಿಡಿದು ಹುಬ್ಬಳ್ಳಿ, ಪುಣೆ ಎಂದೆಲ್ಲಾ ಓಡಾಡಿದೆವು. ಯಾವುದೂ ಕೈ ಹಿಡಿಯಲಿಲ್ಲ.
 

ಅಷ್ಟೊತ್ತಿಗೆ ಪ್ರಜಾವಾಣಿ ಸೇರಿಕೊಂಡಿದ್ದ ನಾನು ಧಾರವಾಡಕ್ಕೆ ವರ್ಗ ಕೇಳಿ ಪಡೆದೆ. ಹೋದಲ್ಲೆಲ್ಲ ದೇವರು, ಶಾಸ್ತ್ರದವರು, ತಜ್ಞರು ಎಂದೆಲ್ಲಾ ಅಲೆದೆವು.
 

ಇವೆಲ್ಲ ಪ್ರಯೋಗಗಳು ಫಲ ನೀಡದೇ ಹೋದಾಗ ನಿಮ್ಹಾನ್ಸ್‌ನ ವೈದ್ಯರ ಮಾತು ನೆನಪಾದವು.
 

ಸಾಮಾನ್ಯ ಮಗುವಿನೊಂದಿಗೆ ಮಾತಾಡುವಂತೆ ಗೌರಿಯೊಂದಿಗೆ ಮಾತಾಡುವುದು ಶುರುವಾಯ್ತು. ಫಿಜಿಯೋಥೆರಪಿ ಪ್ರಾರಂಭಿಸಿದೆವು. ವಿಶೇಷ ಶಾಲೆಗೂ ಗೌರಿಯನ್ನು ಸೇರಿಸಿದೆವು. ಬದುಕು ನಿಧಾನವಾಗಿ ತಿರುಗಲು ಶುರುವಾಯ್ತು.
 

*****
 

ಗೌರಿ ಕೂಡಲು ಕಲಿತಿದ್ದು ಎರಡು ವರ್ಷಗಳ ನಂತರ. ಅಂಬೆಗಾಲಿಟ್ಟಿದ್ದು ನಾಲ್ಕು ವರ್ಷಗಳಿಗೆ. ತಡವರಿಸುತ್ತ ಪುಟ್ಟ ಪುಟ್ಟ ಹೆಜ್ಜೆಗಳನ್ನಿಟ್ಟಿದ್ದು ಆರು ವರ್ಷಗಳ ನಂತರ.
 

ಇವತ್ತಿಗೂ ಆಕೆ ನಮ್ಮ ಕಣ್ಣನ್ನು ೨-೩ ಸೆಕೆಂಡ್‌ಗಳಿಗಿಂತ ಹೆಚ್ಚು ನೋಡುವುದಿಲ್ಲ. ಕೆಲವು ಶಬ್ದಗಳನ್ನು ಬಿಟ್ಟರೆ ಬೇರೆ ಶಬ್ದಗಳನ್ನು ಆಡಿಲ್ಲ. ಇವತ್ತಿಗೂ ನಡಿಗೆ ಅಸಹಜ. ತಂಗಿಯೊಂದಿಗೆ ಬೆರೆಯುವುದು ತೀರಾ ಕಡಿಮೆ.
 

ಆಟಿಸಂ ಮತ್ತು ಬುದ್ಧಿ ಮಾಂದ್ಯತೆಗಳೆರಡರ ಲಕ್ಷಣಗಳನ್ನೂ ಆಕೆಯಲ್ಲಿ ಗುರುತಿಸಿದ್ದಾರೆ ತಜ್ಞರು. ಈಗ ವಿಶೇಷ ಶಾಲೆಗೆ ಹೋಗುತ್ತಿದ್ದಾಳೆ. ಫಿಜಿಯೋಥೆರಪಿ, ಸ್ಪೀಚ್ ಥೆರಪಿ ಮುಂತಾದವೆಲ್ಲ ನಡೆದಿವೆ. ಈಗ ಆಕೆಗೆ ತಿಳಿವಳಿಕೆ ನಿಧಾನವಾಗಿ, ಬಲು ನಿಧಾನವಾಗಿ ಬೆಳೆಯುತ್ತಿದೆ. ಕೆಲವೊಂದು ಸರಳ ಮಾತುಗಳು ಅರ್ಥವಾಗುತ್ತವೆ. ಕೆಲವು ಸರಳ ಕೆಲಸಗಳನ್ನು ಮಾಡುತ್ತಾಳೆ. ಇವತ್ತಿಗೆ ಹತ್ತು ತುಂಬಿದ್ದರೂ ಗೌರಿ ನಮ್ಮ ಪಾಲಿಗೆ ಒಂದು ವರ್ಷದ ಮಗು.
 

*****
 

ಎಷ್ಟೋ ಸಾರಿ ಯೋಚಿಸುತ್ತೇನೆ: ಮಾತೇ ಆಡದ ಈಕೆ ನಮಗೆ ಎಷ್ಟೊಂದು ಕಲಿಸಿದಳಲ್ಲ ಎಂದು. ಆಕೆ ಬದುಕಿನ ರೀತಿ ನೀತಿಗಳ ಬಗ್ಗೆ ನನಗಿದ್ದ ಎಷ್ಟೊಂದು ಭ್ರಮೆಗಳನ್ನು ಹೋಗಲಾಡಿಸಿದಳು! ವಾಸ್ತವ ಪ್ರಪಂಚದ ಮಗ್ಗುಲಗಳನ್ನು ಪರಿಚಯಿಸಿದಳು. ನನಗೇ ಗೊತ್ತಿರದ ನನ್ನ ಮಿತಿ ಮತ್ತು ಸಾಮರ್ಥ್ಯವನ್ನು ತಿಳಿಸಿದಳು. ಕಿರಾಣಿ ಅಂಗಡಿಗೆ ಹೋಗಿ ರೇಶನ್ ತರಲು ಹಿಂಜರಿಯುತ್ತಿದ್ದ ರೇಖಾಳಿಗೆ ಇಡೀ ಬೆಂಗಳೂರನ್ನು ಕಾರಲ್ಲಿ ಸುತ್ತಿಬರುವಂತೆ ಮಾಡಿದಳು. ನಾನು ಕೆಲಸದ ಮೇಲೆ ಕೆಲಸಕ್ಕೆ ರಾಜೀನಾಮೆ ಬೀಸಾಡಿ ಬಂದು ಕೂತಾಗ, ಹೊಸ ಭರವಸೆ ಇನ್ನೂ ಇದೆ ಎಂಬುದನ್ನು ತೋರಿಸಿದಳು. ಮಂಕಾಗಿ ಕೂತವನಲ್ಲಿ ಹೊಸ ಕನಸು, ಸೋತ ಭಾವದ ಜಾಗದಲ್ಲಿ ಗೆಲುವಿನ ದಾರಿ ಮೂಡಿಸಿದಳು.
 

ಅವಳು ಮೂಡಿಸಿದ ಸ್ಫೂರ್ತಿಯಿಂದ ರೇಖಾ ಮತ್ತೆ ಸಂಗೀತ ಕಲಿಯಲು, ದಿನಾ ಜಿಮ್‌ಗೆ ಹೋಗಲು, ನಾನು ವೃತ್ತಿಯ ಹೊಸ ಸಾಧ್ಯತೆಗಳತ್ತ ಮುಖ ಮಾಡಲು ಸಾಧ್ಯವಾಯಿತು. ಗೌರಿಯಂಥ ಮಗುವನ್ನು ನಾವೇ ನೋಡಿಕೊಳ್ಳಬೇಕೆಂಬ ಅನಿವಾರ್ಯತೆ ನಮ್ಮನ್ನು ನಿತ್ಯ ಚುರುಕಾಗಿರಿಸಿದೆ. ನಿತ್ಯ ಗೆಲುವಾಗಿರಿಸಿದೆ. ಅಪರಿಚಿತರಲ್ಲಿ ಆತ್ಮೀಯರನ್ನು ಹುಟ್ಟುಹಾಕಿದೆ. ಸವಾಲಿನ ಜಾಗದಲ್ಲಿ ಅವಕಾಶ, ಸೋಲಿನ ಜಾಗದಲ್ಲಿ ಹೊಸ ಯತ್ನವನ್ನು ಮೂಡಿಸಿದೆ.
 

ಮಾತೇ ಆಡದ ಗೌರಿ ನಮಗೆ ಬದುಕಲು ಕಲಿಸಿದ್ದಾಳೆ. ಭರವಸೆ ಮೂಡಿಸಿದ್ದಾಳೆ. ನಿತ್ಯ ಹೊಸದೊಂದನ್ನು ಕಲಿಸುತ್ತ, ಹೊಸ ಭರವಸೆ ಮೂಡಿಸುತ್ತ, ತನ್ನ ಪಾಡಿಗೆ ತಾನು ನಗುತ್ತಲೇ ಇದ್ದಾಳೆ.
 

*****
 

ಥ್ಯಾಂಕ್ಸ್ ಗೌರಿ, ನೀನು ನಮ್ಮ ಮಗಳಾಗಿದ್ದಕ್ಕೆ. ನಮ್ಮ ಗುರುವಾಗಿದ್ದಕ್ಕೆ.
 

ಹ್ಯಾಪಿ ಬರ್ತ್‌ಡೇ ನಿನಗೆ.
 

- ಚಾಮರಾಜ ಸವಡಿ

ಅವತ್ತಿನಿಂದ ನಾವು ಪ್ರಬುದ್ಧರಾಗತೊಡಗಿದೆವು...

25 Nov 2009

10 ಪ್ರತಿಕ್ರಿಯೆ
ಏಪ್ರಿಲ್‌ಗೆ ಏಳು ವರ್ಷಗಳಾದವು.

ಕಳೆದ ಏಳು ವರ್ಷಗಳಲ್ಲಿ ಬದುಕು ನಮ್ಮನ್ನು ಅವಶ್ಯಕತೆಗಿಂತ ಹೆಚ್ಚು ಪ್ರಬುದ್ಧರನ್ನಾಗಿಸಿದೆ. ಮಾಗಿಸಿದೆ. ಪೀಡಿಸಿದೆ. ಎಂದೂ ಮರೆಯದ ಪಾಠಗಳನ್ನು ಕಲಿಸಿದೆ.

ಇವೆಲ್ಲಕ್ಕಿಂತ ಹೆಚ್ಚಿನ ಪಾಠಗಳನ್ನು ನಮ್ಮ ಏಳು ವರ್ಷದ ಮಗಳು ಗೌರಿ ಕಲಿಸಿದ್ದಾಳೆ. ಇನ್ನೂ ಕಲಿಸುತ್ತಲೇ ಇದ್ದಾಳೆ.
ವ್ಯತ್ಯಾಸ ಇಷ್ಟೇ: ಮೊದಮೊದಲು ಆ ಪಾಠಗಳನ್ನು ಬಹಳ ಕಷ್ಟಪಟ್ಟು ಕಲಿಯುತ್ತಿದ್ದೆವು. ಕಣ್ಣೀರಿಡುತ್ತ ಕಲಿಯುತ್ತಿದ್ದೆವು. ವೃತ್ತಿಯ ಸವಾಲುಗಳೇನೇ ಇರಲಿ, ಅವು ನಮ್ಮ ಕೈಯೊಳಗೆ ಇರುವಂಥವು. ಅವನ್ನು ಸಮರ್ಥವಾಗಿ ಎದುರಿಸಬಲ್ಲೆವು. ಆದರೆ ಕೆಲವು ಸವಾಲುಗಳು ನಮ್ಮ ವ್ಯಾಪ್ತಿಯಾಚೆಗೂ ಇರುತ್ತವೆ ಎಂಬ ಮಹಾಪಾಠವನ್ನು ಮಾತು ಬಾರದ, ಇದುವರೆಗೂ ಮಾತನ್ನು ಆಡದ ಮಗಳು ಕಲಿಸುವಾಗ ಅದನ್ನು ಜೀರ್ಣಿಸಿಕೊಳ್ಳಲು ನಿಜಕ್ಕೂ ತುಂಬ ಕಷ್ಟಪಟ್ಟೆವು.

ಅವು ನಿಜಕ್ಕೂ ಯಾತನಾಮಯ ದಿನಗಳು.

ಆ ದಿನಗಳಲ್ಲಿ ಆಕೆ ಪೂರ್ತಿ ಕಣ್ಣರಳಿಸಿ ನಮ್ಮನ್ನು ನೋಡುತ್ತಿರಲಿಲ್ಲ. ‘ನಾಲ್ಕು ತಿಂಗಳ ಮಗು ಹಾಗೆ ನೋಡಬೇಕಂತ ಏನು ಅರ್ಜೆಂಟಿದೆ?’ ಎಂದು ಕೇಳಿದವರು ಕೊಪ್ಪಳದ ಮಕ್ಕಳ ಡಾಕ್ಟರ್.

‘ಇಲ್ಲ, ಆಕೆ ಎಲ್ಲ ಮಕ್ಕಳಂತಿಲ್ಲ. ಕಣ್ರೆಪ್ಪೆಗಳು ನಿದ್ರೆಯಿಂದ ಜೋಲುವಂತಿವೆ. ಜೊಲ್ಲು ನಿಲ್ಲುತ್ತಿಲ್ಲ. ಕುಡಿದ ಹಾಲು ಸುಲಭವಾಗಿ ಹೊರಬಂದುಬಿಡುತ್ತದೆ. ಗೋಣು ನಿಂತಿಲ್ಲ...’- ನಮ್ಮ ದೂರುಗಳ ಪಟ್ಟಿ ದೊಡ್ಡದಿತ್ತು.

ಆದರೆ, ಕೇಳಿಸಿಕೊಳ್ಳುವ ವ್ಯವಧಾನ ಅವರಿಗೆ ಇರಲಿಲ್ಲ. ಅವರೊಬ್ಬರೇ ಅಲ್ಲ, ಕಳೆದ ಏಳು ವರ್ಷಗಳಲ್ಲಿ ನಾವು ಕಂಡ ಬಹಳಷ್ಟು ವೈದ್ಯರಲ್ಲಿ ಈ ಅಗತ್ಯ ಗುಣ ಕಂಡುಬರಲಿಲ್ಲ. ‘ಮಗು ಚಿಕ್ಕದು. ಆರು ತಿಂಗಳು ತುಂಬಿದಾಗ ಎಲ್ಲ  ಸರಿಹೋಗುತ್ತದೆ’ ಎಂದು ಅವರು ಮಾತು ಮುಗಿಸಿದರು.

ನನ್ನ ಮನದಲ್ಲಿ ನೂರಾರು ಪ್ರಶ್ನೆಗಳ್ದಿದವು. ಆದರೆ, ಯಾರನ್ನು ಕೇಳಬೇಕು? ಆದರೂ ಒಂದು ಭರವಸೆಯಿತ್ತು. ಮಗು ಚಿಕ್ಕದಿದೆ. ಇನ್ನೆರಡು ತಿಂಗಳು ಹೋಗಲಿ, ಪರಿಸ್ಥಿತಿ ಸುಧಾರಿಸಬಹುದು ಎಂಬ ಮಾತು ಮನದಲ್ಲಿ ಕೂತಿತು.

ಆ ಎರಡು ತಿಂಗಳುಗಳೂ ಕಳೆದು ಹೋದವು. ಆದರೆ ಮಗುವಿನಲ್ಲಿ ನಾವು ಗುರುತಿಸಿದ್ದ ದೋಷಗಳು ಮಾತ್ರ ಕಳೆದು ಹೋಗಲಿಲ್ಲ. ವೈದ್ಯರು ಮತ್ತೆರಡು ತಿಂಗಳಿನ ಭರವಸೆ ನೀಡಿದರು.

ಮಗಳು ಗೌರಿಯ ಕತ್ತು ಸ್ಥಿರವಾಗಿದ್ದು ಹುಟ್ಟಿದ ಆರು ತಿಂಗಳಿನ ನಂತರ. ಆಗಲೂ ಆಕೆ ನಮ್ಮ ಮುಖ ನೋಡುತ್ತಿರಲಿಲ್ಲ. ತನ್ನ ಪಾಡಿಗೆ ತಾನು ಖುಷಿಯಾಗಿ ಕೈಕಾಲು ಆಡಿಸುತ್ತ ಇರುತ್ತಿದ್ದಳು. ಯಾವಾಗಾದರೊಮ್ಮೆ ಬಹಳ ಕಷ್ಟಪಟ್ಟು ಬೋರಲು ಬೀಳುತ್ತಿದ್ದಳು. ಆದರೆ, ಮತ್ತೆ ಬೆನ್ನ ಮೇಲೆ ಹೊರಳಲು ಆಗುತ್ತಿರಲ್ಲಿಲ.

‘ಮಗು ಕೊಂಚ ದಪ್ಪ ಇರುವುದರಿಂದ ಹೀಗಾಗುತ್ತದೆ’ ಎಂಬ ಇನ್ನೂ ಒಂದು ಭರವಸೆ ವೈದ್ಯರಿಂದ ಬಂದಿತು. ಹತ್ತಿರದ ಸಂಬಂಧಿಗಳೂ ಇದನ್ನು ಒಪ್ಪಿದರು. ನನಗೆ ಏನೋ ಅನುಮಾನ.

ಆ ಎರಡು ತಿಂಗಳುಗಳೂ ಗತಿಸಿದವು. ಆದರೆ ಪರಿಸ್ಥಿತಿ ಹಾಗೇ ಇತ್ತು. ಮಗು ದೈಹಿಕವಾಗಿ ಬೆಳೆದಿತ್ತು. ಬೋರಲು ಬೀಳುವ ಪ್ರಮಾಣ ಜಾಸ್ತಿಯಾಗಿದ್ದು ಬಿಟ್ಟರೆ ಅದು ಒಂದು ತಿಂಗಳಿನ ಮಗುವಿನಂತೆ. ಮುಖ ಮಾತ್ರ ತಿಳಿಯಾಗಿತ್ತು. ಮಾನಸಿಕ ವೈಕಲ್ಯದ ಯಾವೊಂದು ಸುಳಿವೂ ಅಲ್ಲಿರಲಿಲ್ಲ.

ಗೌರಿಗೆ ಎಂಟು ತಿಂಗಳಾದ ನಂತರವೂ ಕೊಪ್ಪಳದ ವೈದ್ಯರ ಭರವಸೆಯ ಮಾತುಗಳನ್ನು ನಂಬುವುದು ಕಷ್ಟವೆನಿಸತೊಡಗಿ ಪಕ್ಕದ ನಗರ ಹೊಸಪೇಟೆಗೆ ಹೋದೆವು. ಅಲ್ಲಿಯ ವೈದ್ಯರು ಮಗುವನ್ನು ಕೊಂಚ ಹೆಚ್ಚೇ ಪರೀಕ್ಷಿಸಿ ನೋಡಿದರು. ತಲೆಯ ಗಾತ್ರ ಅಳೆದರು. ದೈಹಿಕ ಚಟುವಟಿಕೆಗಳ ಮಾಹಿತಿ ಕೇಳಿ ಗುರುತು ಹಾಕಿಕೊಂಡರು. ಯಾವುದಕ್ಕೂ ಇರಲಿ ಎಂದು ನೇತ್ರ ತಜ್ಞರ ಹತ್ತಿರ ಕಳಿಸಿದರು. ಪಾಪ, ಅವರು ಕೂಡ ಸಮಾಧಾನದಿಂದಲೇ ವಿವರವಾಗಿ ಪರೀಕ್ಷಿಸಿ ಘೋಷಿಸಿದರು:

‘ಈಕಿ ಕಣ್ಣು ನಾರ್ಮಲ್ ಅದಾವ...!’

ಮುಳುಗುವವರ ಕೈಗೆ ಹುಲ್ಲು ಕಡ್ಡಿ ಸಿಕ್ಕಿತ್ತು.

ಆದರೆ, ಹೊಸಪೇಟೆ ಡಾಕ್ಟರರ ವರದಿ ಆ ಸಣ್ಣ ಕಡ್ಡಿಯನ್ನೂ ಉಳಿಸಲಿಲ್ಲ. ‘ಈಕೆಯ ಬೆಳವಣಿಗೆ ನಿಧಾನವಾಗಿದೆ. ಮೆದುಳು ಪೂರ್ತಿ ವಿಕಾಸವಾಗಿಲ್ಲ. ನೀವು ದೊಡ್ಡ ಡಾಕ್ಟರರಿಗೆ ತೋರಿಸಿ’ ಎಂದಾಗ ನಾವಿಟ್ಟ ಕಣ್ಣೀರಿನ ನೆನಪು ಇವತ್ತಿಗೂ ಕಣ್ಣೀರು ತರಿಸುತ್ತದೆ.

ಮಗು ಮಾತ್ರ ಹಾಗೇ ಇತ್ತು. ಕುಡಿಸಿದ ಹಾಲು ಅನಾಯಾಸವಾಗಿ ಹೊರಬರುತ್ತಿತ್ತು. ಕಂಕುಳಕ್ಕೆ ಕೈಹಾಕಿ ನೆಲದ ಮೇಲೆ ನಿಲ್ಲಿಸಹೋದರೆ ಸಹಜವಾಗಿ ಕಾಣುತ್ತಿದ್ದ ಕಾಲುಗಳು ಜೋಲುತ್ತಿದ್ದವು. ದೃಷ್ಟಿ ಸ್ಥಿರವಾಗಿರುತ್ತಿದ್ದಿಲ್ಲ. ಆದರೆ, ದೋಷ ಕಾಲಿನದಾಗಲಿ, ಕಣ್ಣಿನದಾಗಲಿ ಆಗಿರಲಿಲ್ಲ. ಈ ಅಂಗಗಳನ್ನು ಬೆಂಬಲಿಸಬೇಕಾದ ಮೆದುಳಿನದಾಗಿತ್ತು.

ಇನ್ನೊಬ್ಬ ಡಾಕ್ಟರಿಗೆ ತೋರಿಸಿ ನೋಡೋಣ ಎಂದು ಹೊಸಪೇಟೆಯಿಂದ ಧಾರವಾಡಕ್ಕೆ ಹೋದೆವು. ಇದ್ದುದರಲ್ಲಿಯೇ  ಕೊಂಚ ಹೆಸರು ಪಡೆದಿದ್ದ ಇನ್ನೊಬ್ಬ ಮಕ್ಕಳ ಡಾಕ್ಟರಿಗೆ ತೋರಿಸಿದೆವು. ಮೊದಲ ಬಾರಿ ಗೌರಿಯ ಮೆದುಳನ್ನು ಸ್ಕ್ಯಾನ್ ಮಾಡಲಾಯಿತು. ಚಿತ್ರಗಳು ಸ್ಪಷ್ಟವಾಗಿದ್ದವು. ಗೌರಿಯ ಮೆದುಳಿನ ಕೆಲವು ಭಾಗಗಳು ವಿಕಾಸವಾಗಿರಲಿಲ್ಲ.

ಡಾಕ್ಟರು ಇನ್ನೊಂದಿಷ್ಟು ದುಬಾರಿ ಪರೀಕ್ಷೆಗಳನ್ನು ನಡೆಸಲು ಶಿಫಾರಸು ಮಾಡಿದರು. ’ಔಷಧಿ ನೀಡುತ್ತೇವೆ. ಆದರೆ, ಗುಣವಾಗುವ ಬಗ್ಗೆ ಖಾತರಿ ನೀಡಲಾರೆವು. ಕಾಯ್ದು ನೋಡಬೇಕು’ ಎಂಬ ಹೇಳಿಕೆ ಬಂದಿತು.

ಮಗು ಕರೆದುಕೊಂಡು ವಾಪಸ್ ಕೊಪ್ಪಳಕ್ಕೆ ಬಂದೆವು. ಹಲವಾರು ಕನಸುಗಳನ್ನು ಬಿತ್ತಿದ, ಪೋಷಿಸಿದ ಊರು ಮೊದಲ ಬಾರಿ ದಿಗಿಲು ಉಕ್ಕಿಸಿತ್ತು.

‘ಬೆಂಗಳೂರಿಗೆ ಹೋಗಿ. ನಿಮ್ಹಾನ್ಸ್‌ನ್ಲಲಿ ತೋರಿಸಿ, ಆರಾಮ ಆಗಬಹುದು’ ಎಂಬ ಸಲಹೆ ಬಂದಾಗ ಊರು ಬಿಡದೆ ಬೇರೆ ದಾರಿ ಇರಲಿಲ್ಲ. ನಮ್ಮೂರಲ್ಲೇ ನೆಲೆಯಾಗಬೇಕು ಎಂದು ಹಂಬಲಿಸಿ ಹಲವಾರು ಉತ್ತಮ ಕೆಲಸಗಳನ್ನು ಹಾಗೂ ಅವಕಾಶಗಳನ್ನು ಕೈಬಿಟ್ಟು ಬಂದಿದ್ದ ನಾನು ಮತ್ತೆ ಊರು ಬಿಡಬೇಕಾಯಿತು.

ಇದ್ದ ಕೆಲಸ ಬಿಟ್ಟು, ಕೈಯಲ್ಲಿ ಬೇರೆ ಕೆಲಸ ಕೂಡ ಇಲ್ಲದೇ ಬೆಂಗಳೂರಿಗೆ ಬಂದೆ. ಆಸ್ಪತ್ರೆಗೆ ತೋರಿಸಬೇಕೆಂದರೆ ಹಣದ ಮುಗ್ಗಟ್ಟು. ಕೆಲ ಕಾಲ ಗೆಳೆಯರು ಪೋಷಿಸಿದರು. ಬೇರೆ ಬೇರೆ ಪತ್ರಿಕೆಗಳಿಗೆ ಬರೆಯುತ್ತ, ದೊರೆತ ಅಲ್ಪ ಹಣವನ್ನು ಬಾಡಿಗೆ, ರೇಶನ್ ಎಂದು ಖರ್ಚು ಮಾಡುತ್ತ ಏಳೆಂಟು ತಿಂಗಳು ನೂಕಿಯಾಯಿತು. ಪ್ರಜಾವಾಣಿಯಲ್ಲಿ ಕೆಲಸ ಸಿಕ್ಕಾಗ, ಕೊನೆಗೂ ವೃತ್ತಿಯಲ್ಲಿ ನೆಲೆ ನಿಂತಾಯಿತು ಎಂಬ ಸಮಾಧಾನದಿಂದ ನಿಮ್ಹಾನ್ಸ್‌ಗೆ ಹೋದೆವು.

ಅಲ್ಲಿ ಮತ್ತೆ ಪರೀಕ್ಷೆಗಳು. ಅವೇ ಪ್ರಶ್ನೆಗಳು. ಅವೇ ಉತ್ತರಗಳು. ಆನುವಂಶೀಯತೆಯ ದೋಷ ಇಲ್ಲ, ಮಗು ಹುಟ್ಟಿದ ಕೂಡಲೇ ಸರಿಯಾಗಿ ಅತ್ತಿದೆ, ಮಗುವನ್ನು ಕೆಳಗೆ ಬೀಳಿಸಿಲ್ಲ, ಮೂರ್ಛೆ ರೋಗ ಇಲ್ಲ, ದೈಹಿಕ ನ್ಯೂನತೆಗಳಿಲ್ಲ, ...ಇಲ್ಲ, ...ಇಲ್ಲ. ಆದರೂ ಮಗು ನಾರ್ಮಲ್ ಇಲ್ಲ.

‘ಕೆಲವೊಂದು ಮಕ್ಕಳು ಹೀಗಿರುತ್ತಾರೆ. ಇದಕ್ಕೆ ಇಂಗ್ಲಿಷ್ ಪದ್ಧತಿಯಲ್ಲಿ ಯಾವುದೇ ಔಷಧಿ ಇಲ್ಲ. ಆಯುರ್ವೇದ ಪದ್ಧತಿಯಲ್ಲಿ ಔಷಧಿ ನೀಡುವುದಾಗಿ ಕೇಳಿದ್ದೇವೆ. ಬೇಕಾದರೆ ಪ್ರಯತ್ನಿಸಿ. ಆದರೆ, ಏನೇ ಮಾಡಿದರೂ ನೀವು ಆಕೆಗೆ ನಿಯಮಿತವಾಗಿ ಫಿಜಿಯೋ ಥೆರಪಿ ಮಾಡಿಸಬೇಕು. ನಿತ್ಯ ಮಗುವಿನೊಂದಿಗೆ ಸಹಜವಾಗಿ ಮಾತನಾಡುತ್ತ ಹೋಗಿ. ನಿರಂತರವಾಗಿ ಆಕೆಯ ಸಂಪರ್ಕದಲ್ಲಿರಿ. ತನಗೆ ಸಂಬಂಧಿಸಿದ ಪ್ರತಿಯೊಂದು ವಸ್ತುವಿನ ಸ್ಪರ್ಶ, ವಾಸನೆ ಹಾಗೂ ಸಾಂಗತ್ಯವನ್ನು ಆಕೆ ಅನುಭವಿಸಲಿ. ಎಲ್ಲಕ್ಕಿಂತ ಮೊದಲು ನೀವು ಧೈರ್ಯ ತಂದುಕೊಳ್ಳಬೇಕು. ನೀವು ಎಷ್ಟು ಸಮಾಧಾನಿತರಾಗುತ್ತೀರೋ, ಪ್ರಬುದ್ಧರಾಗಿ ವರ್ತಿಸುತ್ತೀರೋ, ನಿಮ್ಮ ಮಗು ಅಷ್ಟರ ಮಟ್ಟಿಗೆ ಬೆಳೆಯಲು ಸಾಧ್ಯ. ಒಳ್ಳೆಯದಾಗಲಿ’ ಎಂದರು ನಿಮ್ಹಾನ್ಸ್‌ನ ಕರುಣಾಮಯಿ ವೈದ್ಯರು.

ಕಳೆದ ಏಳು ವರ್ಷಗಳಿಂದ ಅಂಥದೊಂದು ಪ್ರಯತ್ನ ನಡೆಸುತ್ತ, ಧೈರ್ಯ ತಂದುಕೊಳ್ಳುತ್ತ, ಸಮಾಧಾನಿತರಾಗಿ ಇರಲು ಯತ್ನಿಸುತ್ತ, ಪ್ರಬುದ್ಧತೆ ಗಳಿಸುವ ದಿಕ್ಕಿನಲ್ಲಿ ಬದುಕು ಸಾಗಿದೆ. ನಾವು ಬೆಳೆದಷ್ಟೂ ನಮ್ಮ ಮಗು ಬೆಳೆಯುತ್ತದೆ. ಹೀಗಾಗಿ ನಾವು ಪ್ರಬುದ್ಧರಾಗಲೇ ಬೇಕಿದೆ. ಸಾಮಾನ್ಯ ಬದುಕು ನೀಡುವುದಕ್ಕಿಂತ ಹೆಚ್ಚಿನ ಪಾಠವನ್ನು ನಮ್ಮ ‘ಅಸಾಮಾನ್ಯ’ ಮಗಳು ಕಲಿಸಿದ್ದಾಳೆ, ಕಲಿಸುತ್ತಿದ್ದಾಳೆ.

ಪ್ರಬುದ್ಧತೆಯತ್ತ ನಮ್ಮನ್ನು ಕರೆದೊಯ್ಯುತ್ತಿದ್ದಾಳೆ.


- ಚಾಮರಾಜ ಸವಡಿ
(ಮಯೂರ ಮಾಸಿಕದ ’ಗುಬ್ಬಚ್ಚಿ ಗೂಡು ವಿಭಾಗ’ದಲ್ಲಿ ಪ್ರಕಟಿತ ಬರಹ)

ಬೆಳ್ಳಂಬೆಳಿಗ್ಗೆ ಅಪ್ಪಳಿಸಿದ ಆಘಾತ-೨ (ಊರೆಲ್ಲ ನೆಂಟರು, ಕೇರಿಯೆಲ್ಲವೂ ಬಳಗ...)

20 May 2009

6 ಪ್ರತಿಕ್ರಿಯೆ
(ಗೌರಿಗೆ ಮೊದಲ ಸಲ ಮೂರ್ಛೆರೋಗ ಬಂದಾಗಿನ ಆಘಾತಕ್ಕೆ ಸಹೃದಯಿ ಓದುಗರು, ಮಿತ್ರರು ದೊಡ್ಡ ಸಂಖ್ಯೆಯಲ್ಲಿ ಸ್ಪಂದಿಸಿದ್ದಾರೆ. ಅವರಿಗೆಲ್ಲ ನಾನು ಮತ್ತು ನನ್ನ ಕುಟುಂಬ ಋಣಿ.)

ಸರ್ವಜ್ಞನ ವಚನವೊಂದು ಪದೆ ಪದೆ ನನಗೆ ನೆನಪಾಗುತ್ತಿರುತ್ತದೆ:

ಊರೆಲ್ಲ ನೆಂಟರು, ಕೇರಿಯೆಲ್ಲವೂ ಬಳಗ ಧಾರುಣಿಯೇ ಕುಲದೈವವಾಗಿರಲು ಯಾರನ್ನು ಬಿಡಲಿ| ಸರ್ವಜ್ಞ

ಗೌರಿಗೆ ಮೂರ್ಛೆ ರೋಗ ಬಂದ ಆ ದಿನದ ಆಘಾತಕ್ಕೆ ಸ್ಪಂದಿಸಿದವರನ್ನು ನೆನೆಯಲು ಹೊರಟರೆ ನೆನಪಿಗೆ ಬಂದಿದ್ದು ಸರ್ವಜ್ಞನ ಈ ವಚನ.

ಮಾರ್ಚ್‌ ತಿಂಗಳಿನ ಆ ಬೆಳಿಗ್ಗೆ ಅನುಭವಿಸಿದ ಆಘಾತ ನನ್ನ ಕುಟುಂಬದ ಮಟ್ಟಿಗೆ ಅತಿ ದೊಡ್ಡದು. ಗೌರಿಯ ಬೆಳವಣಿಗೆ ಎಲ್ಲರಂತಿರುವುದಿಲ್ಲ ಎಂಬುದನ್ನು ಜೀರ್ಣಿಸಿಕೊಳ್ಳಲಿಕ್ಕೇ ವರ್ಷಗಳು ಉರುಳಿದ್ದವು. ಅಂಥದ್ದರಲ್ಲಿ ಅಪಸ್ಮಾರ ಅಂದು ಬೆಳಿಗ್ಗೆ ಅಪ್ಪಳಿಸಿ, ನಮ್ಮ ನಂಬಿಕೆಯೆಲ್ಲವನ್ನೂ ಒಂದೇಟಿಗೇ ಬುಡಮೇಲು ಮಾಡಿತ್ತು.

ನಿಜ, ಇದು ಜಗತ್ತಿನಲ್ಲಿ ಯಾರಿಗೂ ಬಾರದ ಕಾಯಿಲೆ ಏನಲ್ಲ. ಆದರೆ, ಸಾಮಾನ್ಯವಾದ ಒಂದು ಸಮಸ್ಯೆ ನಮಗೇ ಬಂದಾಗ, ನಾವು ಸ್ಪಂದಿಸುವ ರೀತಿ ಮಾತ್ರ ತಕ್ಷಣಕ್ಕೆ ಎಲ್ಲರ ಸ್ಪಂದನೆಯಂತಿರುವುದಿಲ್ಲ.

ಬುದ್ಧಿಮಾಂದ್ಯ ಮಕ್ಕಳನ್ನು ಹೊಂದುವ ನೋವು, ಅಂಥ ತಂದೆತಾಯಿಗಳಿಗಷ್ಟೇ ಅರ್ಥವಾಗುವಂಥದು. ಕಳೆದ ಏಳು ವರ್ಷಗಳಲ್ಲಿ ಇದು ಪದೆ ಪದೆ ನನ್ನ ಅನುಭವಕ್ಕೆ ಬಂದಿದೆ. ಇತರರು ನಮ್ಮ ಸಮಸ್ಯೆಯನ್ನು ಸರಿಯಾಗಿ ಅರ್ಥ ಮಾಡಿಕೊಳ್ಳುವುದಿಲ್ಲ ಎಂದರ್ಥವಲ್ಲ. ಅದರ ತೀವ್ರತೆ, ಅಂಥ ಮಕ್ಕಳನ್ನು ಹೊಂದಿರುವವರಿಗೆ ಮಾತ್ರ ಗೊತ್ತಾಗುತ್ತದೆ.

ಮಾರ್ಚ್‌‌ನ ಆ ಬೆಳಿಗ್ಗೆ ಇನ್ನೇನು ಗೌರಿ ನಮ್ಮ ಕೈಬಿಟ್ಟುಹೋದಳು ಎಂಬ ಆಘಾತದ ನಂತರ, ಬದುಕು ನಮ್ಮ ಪಾಲಿಗೆ ಬೇರೆ ರೀತಿ ಗೋಚರಿಸತೊಡಗಿತು. ಅವು ಚುನಾವಣೆಯ ಬಿರುಸು ಹೆಚ್ಚುತ್ತಿದ್ದ ದಿನಗಳು. ಅದರ ಜವಾಬ್ದಾರಿ ಸಾಕಷ್ಟಿದ್ದು ನಾನು ಕಚೇರಿಗೆ ರಜೆ ಹಾಕುವಂತಿರಲಿಲ್ಲ.

ಅರೆಬರೆ ಮುಖ ತೊಳೆದು ಗೌರಿಯನ್ನೆತ್ತಿಕೊಂಡು ಬಸವೇಶ್ವರನಗರದ ಡಾ. ಶಿವಾನಂದ್‌ ಅವರ ಮನೆ ಕಮ್‌ ಕ್ಲಿನಿಕ್‌ಗೆ ಹೋದೆವು. ವಿಶಿಷ್ಟಚೇತನ ಮಕ್ಕಳ ಚಿಕಿತ್ಸೆಯಲ್ಲಿ ಡಾ. ಶಿವಾನಂದ್‌ ತಜ್ಞರು ಎಂದು ಗೌರಿಯ ಶಾಲೆಯವರು ಸೂಚಿಸಿದ್ದರಿಂದ, ಫೋನ್‌ ಮಾಡಿ ಅಪಾಯಿಂಟ್‌ಮೆಂಟ್‌ ಪಡೆದು ಹೋದೆವು. ಡಾ. ಶಿವಾನಂದ್‌ ಸಾವಧಾನವಾಗಿ ಎಲ್ಲ ವಿಷಯವನ್ನೂ ಕೇಳಿ ತಿಳಿದುಕೊಂಡರು. ಗೌರಿಯನ್ನು ಪರೀಕ್ಷಿಸಿದರು. ಆಕೆಗೆ ಬಂದಿದ್ದು ಅಪಸ್ಮಾರ ಎಂಬುದನ್ನು ದೃಢಪಡಿಸಿ, ಔಷಧಿ ಸೂಚಿಸಿ, ನಿಯಮಿತವಾಗಿ ನೀಡುವಂತೆ ಹೇಳಿದರು. ಅವರ ಪ್ರಕಾರ, ಕನಿಷ್ಠ ೩ ವರ್ಷ ಆಕೆಗೆ ಅಪಸ್ಮಾರದ ಔಷಧಿಯನ್ನು ದಿನಕ್ಕೆ ಮೂರು ಸಲ ಕೊಡಬೇಕು.

ಬದುಕು ಮತ್ತೊಂದು ವೈದ್ಯಕೀಯ ತಿರುವಿಗೆ ನಮ್ಮನ್ನು ಒಯ್ದು ನಿಲ್ಲಿಸಿತ್ತು. ನಾವು ಮತ್ತೆ ತಿರುಗಣಿಯಲ್ಲಿ ಸುತ್ತಬೇಕು.

ಏಕೋ ಮನಸ್ಸು ತುಂಬ ಕ್ಷೋಭೆಗೊಂಡಿತ್ತು.

ನಮ್ಮ ನಮ್ಮ ವೈಯಕ್ತಿಕ ಸಾಧನೆಗಳೇನೇ ಇರಲಿ, ಪ್ರತಿಭೆ-ಅವಕಾಶ ಎಂಥವೇ ಇರಲಿ, ಮಕ್ಕಳ ವಿಷಯದಲ್ಲಿ ಎಲ್ಲರೂ ಅಸಹಾಯಕರೇ. ಗೌರಿಯಂಥ ವಿಶಿಷ್ಟಚೇತನ ಮಕ್ಕಳನ್ನು ಬೆಳೆಸಲು ನಮ್ಮೆಲ್ಲ ಅಭ್ಯಾಸ, ಪದ್ಧತಿಗಳನ್ನು ಬದಲಾಯಿಸಿಕೊಳ್ಳಲೇಬೇಕು. ಅವತ್ತು, ಅಂಥ ಮತ್ತೊಂದು ಪದ್ಧತಿಯನ್ನು ನಾವು ಒಪ್ಪಿಕೊಳ್ಳಬೇಕಾಯಿತು.

ಆಸ್ಪತ್ರೆಯಿಂದ ಹೊರಟಾಗ, ಎಲ್ಲಿಗೆ ಹೋಗಬೇಕು ಎಂಬ ಪ್ರಶ್ನೆ ಎದಿರಾಯಿತು.

ಮನೆಗೆ ಹೋಗಿ ಮಾಡುವುದಾದರೂ ಏನು? ಬೆಳಿಗ್ಗೆ ನಡೆದ ಘಟನೆ ನಮ್ಮನ್ನು ಮಂಕಾಗಿಸಿತ್ತು. ಆಟೊದವ ಎಲ್ಲಿಗೆ ಸರ್‌ ಎಂದಾಗ, ಗೌರಿಯ ಶಾಲೆಯ ವಿಳಾಸ ಹೇಳಿದೆ. ನನಗೆ ಅರ್ಜೆಂಟ್‌ ಶಾಲೆಗೆ ಹೋಗಬೇಕಿತ್ತು. ಅಲ್ಲಿಯ ಶಿಕ್ಷಕಿಯರೊಂದಿಗೆ ಮಾತನಾಡಿ, ನನ್ನ ಕೆಲವು ಗೊಂದಲಗಳನ್ನು ಪರಿಹರಿಸಿಕೊಳ್ಳಬೇಕಿತ್ತು.

ಶಾಲೆಗೆ ಹೋಗುತ್ತಲೇ ನಮಗೆ ಅಚ್ಚರಿ ಕಾಯ್ದಿತ್ತು. ಗೌರಿಗೆ ಹೀಗಾಗಿದೆ ಎಂಬುದರ ಸುದ್ದಿ ತಿಳಿದಿದ್ದ ವಿಶಿಷ್ಟಚೇತನ ಮಕ್ಕಳ ತಾಯಂದಿರ ಗುಂಪೇ ಅಲ್ಲಿ ನೆರೆದಿತ್ತು. ಅವರನ್ನು ನೋಡುತ್ತಲೇ ರೇಖಾ ಮತ್ತೆ ಅಳತೊಡಗಿದಳು. ಅದನ್ನು ನೋಡಿ ಎರಡನೇ ಮಗಳು ನಿಧಿ ಕೂಡಾ ಅಳಲು ಪ್ರಾರಂಭಿಸಿದಳು.

ಕ್ಷಣಾರ್ಧದಲ್ಲಿ ಶಾಲೆಯ ವಾತಾವರಣವೇ ಬದಲಾಯಿತು. ಅಳುತ್ತಿದ್ದ ರೇಖಾಳನ್ನು ಅಲ್ಲಿಯ ತಾಯಂದಿರು ಅಪ್ಪಿಕೊಂಡು ಸಂತೈಸಿದರು. ಗೌರಿಯನ್ನು ಒಬ್ಬ ಶಿಕ್ಷಕಿ ಕರೆದುಕೊಂಡು ಹೋಗಿ ಊಟ ಮಾಡಿಸಲು ತೊಡಗಿದರು. ಇನ್ನಿಬ್ಬರು ತಾಯಂದಿರು ನನ್ನ ಕೈಲಿದ್ದ ಔಷಧ ಚೀಟಿ ಪಡೆದುಕೊಂಡು ಹೋಗಿ ಔಷಧಿ ತೆಗೆದುಕೊಂಡು ಬಂದರು. ಶಾಲೆಯ ಹಿರಿಯ ಶಿಕ್ಷಕಿ ವಿದ್ಯಾ, ಗೌರಿಯ ಶಿಕ್ಷಕಿ ಕಲಾ, ಶಾಲೆಯ ಇತರ ಶಿಕ್ಷಕಿಯರು ಫಿಟ್ಸ್‌ ಬಂದಾಗ ಏನು ಮಾಡಬೇಕೆಂಬುದನ್ನು ಮಕ್ಕಳಿಗೆ ತಿಳಿಸುವಂತೆ ವಿವರವಾಗಿ ತಿಳಿಸಿದರು. ಸಂಕಟಕ್ಕೆ ಸಿಲುಕಿದ ನಮ್ಮನ್ನು ಸಂತೈಸಲು ಅವರೆಲ್ಲ ಎಷ್ಟೊಂದು ಪ್ರಯತ್ನಿಸಿದರು ಎಂದರೆ, ನೆನಪಿಸಿಕೊಂಡರೆ ಈಗಲೂ ಹೃದಯ ಉಕ್ಕುತ್ತದೆ.

ಅಷ್ಟೊತ್ತಿಗೆ ಊಟ ಮಾಡುತ್ತಿದ್ದ ಗೌರಿ ವಾಂತಿ ಮಾಡಿಕೊಂಡಳು. ಅದನ್ನೆಲ್ಲ ಬೊಗಸೆಯೊಡ್ಡಿ ಹಿಡಿದ ಗೌರಿಯ ಶಿಕ್ಷಕಿ ಕಲಾ, ಒಂಚೂರೂ ಬೇಸರಿಸಿಕೊಳ್ಳದೇ ಹೋಗಿ ಚೆಲ್ಲಿ ಬಂದರು. ಗೌರಿಯ ಬಾಯಿ ತೊಳೆಸಿ, ಉಡುಪು ಬದಲಿಸಿ, ಆಕೆಗೆ ಔಷಧಿ ಕುಡಿಸಿದರು. ನಾನು ಎಲ್ಲವನ್ನೂ ಮೂಕಪ್ರೇಕ್ಷಕನಂತೆ ನೋಡುತ್ತಲೇ ನಿಂತಿದ್ದೆ.

ನಂತರದ ಬೆಳವಣಿಗೆಗಳು ನನ್ನನ್ನು ಮತ್ತಷ್ಟು ಮೂಕವಿಸ್ಮಿತನನ್ನಾಗಿಸಿದವು.

ತಂತಮ್ಮ ವಾಹನಗಳಲ್ಲಿ ಗೌರಿ, ನಿಧಿ ಮತ್ತು ರೇಖಾಳನ್ನು ಕೂಡಿಸಿಕೊಂಡು ನಮ್ಮ ಮನೆಗೆ ಬಂದ ತಾಯಂದಿರು, ತಾವೇ ಅಡುಗೆ ಮನೆಗೆ ಹೋಗಿ ತಿಂಡಿ ತಯಾರಿಸಿದರು. ನಾನು ಆಫೀಸ್‌ಗೆ ಹೋಗಬೇಕು ಎಂಬುದನ್ನು ತಿಳಿದು, ಊಟವನ್ನೂ ಸಿದ್ಧಪಡಿಸಿದರು. ಗರಬಡಿದವರಂತೆ ಕೂತ ನಮಗೆ ಅವರೇ ತಿಂಡಿ ಬಡಿಸಿದರು. ನನಗೆ ಊಟದ ಡಬ್ಬ ತುಂಬಿಕೊಟ್ಟರು. ಮಕ್ಕಳಿಬ್ಬರಿಗೂ ಊಟ ಬಡಿಸಿ ಮಲಗಿಸಿದ್ದೂ ಅವರೇ.

ಯಾವ ಜನ್ಮದ ಬಂಧುಗಳು ಇವರೆಲ್ಲ?

ಅವರ ಪೈಕಿ ಬಹಳಷ್ಟು ತಾಯಂದಿರ ಹೆಸರೂ ನನಗೆ ಗೊತ್ತಿಲ್ಲ. ಅವರ ಮಕ್ಕಳು ಇಂಥವರೇ ಎಂಬುದೂ ಸರಿಯಾಗಿ ನೆನಪಿಲ್ಲ. ಆದರೆ, ಕಷ್ಟಕಾಲದಲ್ಲಿ ಅವರೆಲ್ಲ ನಮ್ಮ ಬಂಧುಗಳಾದರು. ನಮ್ಮ ಮನೆಯವರಾದರು. ನಿಮ್ಮ ಜೊತೆಗೆ ನಾವಿದ್ದೇವೆ, ಚಿಂತೆ ಬೇಡ ಎಂಬುದನ್ನು ಮಾತಿನಲ್ಲಷ್ಟೇ ಹೇಳದೇ ಕೃತಿಯ ಮೂಲಕವೂ ತೋರಿಸಿದರು.

ಅಚ್ಚರಿಯ ವಿಷಯ ಎಂದರೆ, ಅವರ ಪೈಕಿ ಬಹುತೇಕ ತಾಯಂದಿರ ಮಕ್ಕಳ ಸ್ಥಿತಿ ಗೌರಿಗಿಂತ ಕೆಟ್ಟದ್ದು. ಎಷ್ಟೋ ಜನ ಮಕ್ಕಳಿಗೆ ಇವತ್ತೂ ನಿಯಮಿತವಾಗಿ ಫಿಟ್ಸ್‌ ಬರುತ್ತದಂತೆ. ಮಗು ಹೀಗಾಗಿದೆ ಎಂಬ ಕಾರಣಕ್ಕೆ, ಹೆಂಡತಿಯೊಂದಿಗೆ ಮಾತು ಬಿಟ್ಟ ಗಂಡಂದಿರಿದ್ದಾರೆ. ಕುಟುಂಬವನ್ನು ದೂರವಿಟ್ಟ ಭೂಪರಿದ್ದಾರೆ. ಸಂಬಂಧಿಕರು ಹತ್ತಿರ ಸೇರಿಸುವುದನ್ನು ಬಿಟ್ಟಿದ್ದಾರೆ. ಅಂಥ ಎಲ್ಲ ನೋವು ನುಂಗಿಕೊಂಡ ಅವರು, ಮೊದಲ ಏಟು ತಿಂದ ನಮ್ಮನ್ನು ಜತನದಿಂದ ನೋಡಿಕೊಂಡರು. ಇಡೀ ದಿನ ಮನೆಯಲ್ಲಿದ್ದು ಸಮಾಧಾನ ಹೇಳಿದರು. ತಂತಮ್ಮ ಫೋನ್‌ ನಂಬರ್‌ಗಳನ್ನು ಬರೆದುಕೊಟ್ಟು, ಯಾವಾಗ ಬೇಕಾದರೂ ಫೋನ್‌ ಮಾಡಿ ಎಂದರು.

ಅವತ್ತಿನಿಂದ ಇವತ್ತಿನತನಕ, ಅವರೆಲ್ಲ ನಮ್ಮ ಬಂಧುಗಳಂತೇ ನಡೆದುಕೊಳ್ಳುತ್ತಿದ್ದಾರೆ. ಫೋನ್‌ ಎತ್ತಿಕೊಂಡರೆ ಬರುವ ಮೊದಲ ಪ್ರಶ್ನೆ: ಗೌರಿ ಹೇಗಿದ್ದಾಳೆ ಎಂದೇ. ನಾವೆಲ್ಲ ಅವರ ಪಾಲಿಗೆ ಚಾಮರಾಜ, ರೇಖಾ ಅಲ್ಲ; ಗೌರಿಯ ಅಪ್ಪ, ಗೌರಿಯ ಅಮ್ಮ ಎಂದು. ಮಾತನಾಡಲು ಬಾರದ, ಭಾವನೆಗಳನ್ನು ಸಹಜವಾಗಿ ಅಭಿವ್ಯಕ್ತಿಸಲೂ ಗೊತ್ತಿಲ್ಲದ ಗೌರಿ ನಮ್ಮ ಪಾಲಿಗೆ ಅತಿ ದೊಡ್ಡ ದಯಾಮಯಿ ಬಳಗವನ್ನು ಕಟ್ಟಿಕೊಟ್ಟಿದ್ದಾಳೆ.

ನನಗೆ ಸರ್ವಜ್ಞನ ವಚನ ಮತ್ತೆ ಮತ್ತೆ ನೆನಪಾಗುತ್ತದೆ: ಊರೆಲ್ಲ ನೆಂಟರು, ಕೇರಿಯೆಲ್ಲವೂ ಬಳಗ, ಧಾರುಣಿಯೇ ಕುಲದೈವವಾಗಿರಲು, ಯಾರನ್ನು ಬಿಡಲಿ, ಸರ್ವಜ್ಞ.

ಹೌದಲ್ಲ? ಒಡಹುಟ್ಟಿದವರೇ ಬಂಧುಗಳಾಗಬೇಕಿಲ್ಲ. ಜೊತೆಗಿದ್ದು ಬೆಂಬಲಿಸುವವರೂ ಬಂಧುಗಳೇ. ಹಾಗೆ ನೋಡಿದರೆ, ಇವರೇ ನಿಜವಾದ ಬಂಧುಗಳು. ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೇ ಕಷ್ಟಕಾಲದಲ್ಲಿ ಇವರೆಲ್ಲ ಜೊತೆಗೆ ನಿಂತರು. ಈಗಲೂ ಜೊತೆಗಿದ್ದಾರೆ. ಒಂದು ಮೂರ್ಛೆರೋಗ ಎಷ್ಟೊಂದು ಹೃದಯಗಳಲ್ಲಿ ಪ್ರೀತಿಯನ್ನು ಎಚ್ಚರಿಸಿತು ನೋಡಿ!

ಇಂಥ ತಾಯಂದಿರ ಪ್ರೀತಿ ಎಲ್ಲ ಮಕ್ಕಳಿಗೂ ದಕ್ಕಲಿ. ನೊಂದವರ ಎದೆಗಳಲ್ಲಿ ಹೊಸ ಕನಸು ಬಿತ್ತಲಿ. ಬದುಕು ಈಗಿರುವುದಕ್ಕಿಂತ ಹೆಚ್ಚು ನೆಮ್ಮದಿ ಕಾಣಲಿ. ಹಾಗಂತ ಹಾರೈಸುತ್ತ, ಆ ಎಲ್ಲ ತಾಯಂದಿರ, ಶಿಕ್ಷಕಿಯರ ಪ್ರೀತಿಯನ್ನು ಮತ್ತೆ ಮತ್ತೆ ಸ್ಮರಿಸಿಕೊಳ್ಳುತ್ತೇನೆ. ಇವರೆಲ್ಲರ ಪ್ರೀತಿ, ಹಾರೈಕೆ ಎಲ್ಲ ವಿಶಿಷ್ಟಚೇತನ ಮಕ್ಕಳಲ್ಲಿ ಹೊಸ ಚೈತನ್ಯ ತುಂಬಲಿ.

ಪ್ರೀತಿಸುವ ಈ ಹೃದಯಗಳ ಸಂತತಿ ಸಾವಿರವಾಗಲಿ.

(ಮುಗಿಯಿತು)

- ಚಾಮರಾಜ ಸವಡಿ

ಬೆಳ್ಳಂಬೆಳಿಗ್ಗೆ ಅಪ್ಪಳಿಸಿದ ಆಘಾತ-೧

28 Apr 2009

7 ಪ್ರತಿಕ್ರಿಯೆ
ಅದು ಮಾರ್ಚ್‌ ತಿಂಗಳ ಮೂರನೇ ವಾರದ ಕೊನೆ.

ಎಂದಿನಂತೆ ನಸುಕಿನಲ್ಲಿ ಎದ್ದು ಕಂಪ್ಯೂಟರ್‌ ಮುಂದೆ ಪತ್ರಿಕೆಗಳ ಅಂತರ್ಜಾಲ ತಾಣಗಳನ್ನು ಹುಡುಕಿ ಓದುತ್ತ, ನೋಟ್ಸ್‌ ಮಾಡಿಕೊಳ್ಳುತ್ತಾ ಕೂತಿದ್ದೆ. ಸಮಯ ಆಗಲೇ ಆರೂ ಕಾಲು. ಇನ್ನೊಂದು ಹದಿನೈದು ನಿಮಿಷ ಸಮಯ. ಮಕ್ಕಳು ಏಳುತ್ತವೆ. ಅವರ ಮುಖ ತೊಳೆದು, ಒಂದಿಷ್ಟು ಹಾಲು ಕುಡಿಸಿಕೊಂಡು ವಾಕಿಂಗ್‌ ಹೋಗುವುದು ರೂಢಿ.

ಮತ್ತೈದು ನಿಮಿಷದಲ್ಲಿ ಚಿಕ್ಕವಳು ಎದ್ದಳು. ರೇಖಾ ಅವಳನ್ನು ರೆಡಿ ಮಾಡುವಷ್ಟರಲ್ಲಿ ದೊಡ್ಡ ಮಗಳು ಗೌರಿ ಕೂಡ ಎದ್ದು ಕೂತಳು. ಹಾಗೇ ಬಿಟ್ಟರೆ ಹಾಸಿಗೆಯಲ್ಲೇ ಸೂಸೂ ಮಾಡುತ್ತಾಳೆಂದು ಅವಳನ್ನು ಎಬ್ಬಿಸಿದ ರೇಖಾ ಬಾತ್‌ರೂಮಿನ ಕಡೆ ನಡೆಸಿಕೊಂಡು ಬಂದಳು.

ಏಕೋ ಗೌರಿ ನಡೆಯಲು ಹಠ ಮಾಡಿದಳು. ಅದು ಹಳೆಯ ಅಭ್ಯಾಸ. ಬಾತ್‌ರೂಮಿನ ನೆಲ ತಂಪಗಿರುತ್ತದೆ. ಎದ್ದ ಕೂಡಲೇ ಕಾಲು ನೆನೆಸಿಕೊಳ್ಳಲು ಆಕೆ ಇಷ್ಟಪಡುವುದಿಲ್ಲ.

ಬಹುಶಃ ಅದೇ ಕಾರಣಕ್ಕೆ ನಡೆಯಲು ಹಠ ಮಾಡುತ್ತಿರಬಹುದೆಂದು ಭಾವಿಸಿ ಆಕೆ ಕೊಂಚ ಒತ್ತಾಯದಿಂದಲೇ ನಡೆಸಿಕೊಂಡು ಬಂದಳು. ಆದರೆ, ನಾನು ಕೂತಿದ್ದ ಕೋಣೆಯ ಬಾಗಿಲ ಚೌಕಟ್ಟನ್ನು ಗಟ್ಟಿಯಾಗಿ ಹಿಡಿದು ನಿಂತುಕೊಂಡ ಗೌರಿ ಹೆಜ್ಜೆ ಎತ್ತಿಡಲಿಲ್ಲ. ರೇಖಾ ಜಗ್ಗಿದರೂ ಈಕೆ ಕದಲಲಿಲ್ಲ. ’ಸೋಮಾರಿತನ ಮಾಡಬಾರದು ಪುಟ್ಟಾ’ ಎಂದು ಕೂತಲ್ಲಿಂದಲೇ ನಾನು ಮೆಲುವಾಗಿ ಗದರಿದೆ. ಆದರೂ, ಗೌರಿ ಅಲ್ಲಾಡಲಿಲ್ಲ. ’ಈಕೆಗೆ ನೀವೇ ಮುಖ ತೊಳೆಸಿ’ ಎಂದು ಆಕೆಯ ಕೈಬಿಟ್ಟ ರೇಖಾ ಚಿಕ್ಕವಳತ್ತ ಗಮನ ಹರಿಸಿದಳು.

ಈಗ ನಾನು ಏಳಲೇಬೇಕಾಯಿತು.

ಏಕೋ ಗೌರಿ ಕೊಂಚ ಹೊಯ್ದಾಡಿದಂತಾಯಿತು. ನಿದ್ದೆಗಣ್ಣಿನಲ್ಲಿ ಬಿದ್ದುಗಿದ್ದಾಳೆಂದು ನಾನು ತಕ್ಷಣ ಎದ್ದು ಆಕೆಯತ್ತ ಹೋಗುವಷ್ಟರಲ್ಲಿ, ಗೌರಿ ಏಕೋ ಅಸಹಜವಾಗಿದ್ದನ್ನು ಗಮನಿಸಿದೆ.

ಆಕೆಯ ಕಣ್ಣುಗಳು ವಿಚಿತ್ರವಾಗಿದ್ದವು. ದೃಷ್ಟಿ ಎಲ್ಲೋ ನೆಟ್ಟಿತ್ತು. ಮೈಯಲ್ಲಿ ಶಕ್ತಿ ಇಲ್ಲದವಳಂತೆ ನಿಂತಿದ್ದ ಆಕೆ ಯಾವ ಕ್ಷಣದಲ್ಲಾದರೂ ಬೀಳಬಹುದು ಅನಿಸಿತು.

ಹೋಗಿ ಆಕೆಯ ರೆಟ್ಟೆ ಹಿಡಿದುಕೊಂಡೆ. ಮೈಯಲ್ಲಿ ಶಕ್ತಿ ಇಲ್ಲದಂತೆ ನಿಂತಿದ್ದ ಆಕೆ ನಿಧಾನವಾಗಿ ಬಿಗಿಯಾಗತೊಡಗಿದಳು. ನಡೆಯಲು ಇಷ್ಟವಿಲ್ಲದಾಗ ಕುಸಿದು ಕೂಡುವಂತೆ ಕಾಣಲಿಲ್ಲ.

ತಕ್ಷಣ ಆಕೆಯನ್ನು ಎತ್ತಿಕೊಂಡು ಹೋಗಿ ಕುರ್ಚಿಯಲ್ಲಿ ಕೂರಿಸಿದೆ. ಆಕೆಯ ಮುಖ ಇನ್ನಷ್ಟು ಅಸಹಜವಾಯಿತು. ದೃಷ್ಟಿ ಎಲ್ಲೋ. ಒಂದು ಲೋಟ ತೆಗೆದುಕೊಂಡು ಅದನ್ನು ತಿರುಗಿಸಿದೆ. ಆ ರೀತಿ ತಿರುಗಿಸುವುದನ್ನು ನೋಡುವುದು ಆಕೆಗೆ ಇಷ್ಟ.

ಆದರೆ, ಗೌರಿ ಪ್ರತಿಕ್ರಿಯಿಸಲಿಲ್ಲ. ಮೈ ಶಕ್ತಿ ಇಲ್ಲದಂತೆ ಇಳಿಬೀಳತೊಡಗಿತು. ಕುರ್ಚಿಯಲ್ಲಿದ್ದರೂ ಆಕೆ ಬಿದ್ದುಬಿಡಬಹುದು ಅನಿಸಿದಾಗ ಮೊದಲ ಬಾರಿ ನಾನು ಕೊಂಚ ಗಾಬರಿಗೊಂಡೆ.

ತಕ್ಷಣ ಆಕೆಯನ್ನು ಎತ್ತಿಕೊಂಡು ದಿವಾನ್‌ ಮೇಲೆ ಮಲಗಿಸಿದೆ. ಗೌರಿಯ ನಡವಳಿಕೆ ವಿಚಿತ್ರವಾಯಿತು. ಕಣ್ಣಿನ ಅಸಹಜತೆ ನನ್ನನ್ನು ಮತ್ತಷ್ಟು ಗಾಬರಿಗೊಳಿಸಿತು. ರೇಖಾಳನ್ನು ಕೂಗಿ ಕರೆದೆ.

ಅಷ್ಟೊತ್ತಿಗೆ ಗೌರಿ ವಿಚಿತ್ರವಾಗಿ ವರ್ತಿಸತೊಡಗಿದಳು. ದೇಹ ಒಂದು ಕಡೆ ವಾಲಿತು. ಕುತ್ತಿಗೆ ಒಂದು ಭಾಗಕ್ಕೆ ತಿರುಚಿತು. ಬಾಯಿ ಅಸಹಜವಾಗಿ ತೆರೆದುಕೊಂಡಿತು. ನಮ್ಮ ಕಣ್ಮುಂದೆಯೇ ನಿಧಾನವಾಗಿ ಅಕೆಯ ಪ್ರಜ್ಞೆ ತಪ್ಪತೊಡಗಿತು.

ಅದನ್ನು ನೋಡಿ ರೇಖಾ ಅಳತೊಡಗಿದಳು. ಆಕೆಯ ಮೈ ಅಲುಗಿಸಿ ಮಾತನಾಡಿಸಲು ಯತ್ನಿಸಿದರೂ ಪ್ರತಿಕ್ರಿಯೆ ಬರಲಿಲ್ಲ. ಜಗತ್ತಿನ ಪರಿವೇ ಇಲ್ಲದಂತೆ ಆಕೆ ನಿಧಾನವಾಗಿ ಕುಸಿಯತೊಡಗಿದಳು. ನಾನು ಪೂರ್ತಿ ಗಾಬರಿಗೊಂಡೆ. ತಕ್ಷಣ ಏನು ಮಾಡಬೇಕೋ ತೋಚಲಿಲ್ಲ. ನಮ್ಮ ಅವಸ್ಥೆ ನೋಡಿ ಚಿಕ್ಕ ಮಗಳು ನಿಧಿ ಅಳಲು ಪ್ರಾರಂಭಿಸಿದಳು.

ತಕ್ಷಣ ಆಕೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗದಿದ್ದರೆ ಅಪಾಯ ತಪ್ಪಿದ್ದಲ್ಲ ಎಂಬ ಭೀತಿಯಲ್ಲಿ ಕೆಳ ಅಂತಸ್ತಿನ ಗೌಡರ ಮನೆಯತ್ತ ಓಡಿ ಹೋದೆ. ಅವರ ಮನೆಯಲ್ಲಿ ಬೈಕಿತ್ತು. ಆ ಸಮಯದಲ್ಲಿ ಆಟೊ ಅಥವಾ ಆಂಬುಲೆನ್ಸ್‌ ಬರುವುದನ್ನು ಕಾಯುವುದಕ್ಕಿಂತ, ಗೌಡರ ಬೈಕ್‌ನಲ್ಲಿ ಗೌರಿಯನ್ನೆತ್ತಿ ಕೂತು ಹತ್ತಿರದಲ್ಲೇ ಇರುವ ೨೪ ಗಂಟೆಗಳೂ ತೆರೆದಿರುವ ಆಸ್ಪತ್ರೆಗೆ ಕರೆದುಕೊಂಡು ಹೋಗುವುದು ನನ್ನ ಉದ್ದೇಶವಾಗಿತ್ತು. ಹೇಗೆ ಮೆಟ್ಟಿಲಿಳಿದೆನೋ ಗೊತ್ತಿಲ್ಲ. ಇನ್ನೇನು ಗೌಡರ ಮನೆಯ ಬಾಗಿಲು ತಟ್ಟಬೇಕು-

ಅಷ್ಟರಲ್ಲಿ ರೇಖಾ ಜೋರಾಗಿ ಚೀರಿದಳು.

ನನ್ನ ಜಂಘಾಬಲವೇ ಉಡುಗಿದಂತಾಯಿತು. ಬಂದ ವೇಗಕ್ಕಿಂತ ದುಪ್ಪಟ್ಟು ವೇಗದಲ್ಲಿ ಮೆಟ್ಟಿಲೇರಿ ಒಳಗೆ ಓಡಿದೆ. ಆ ದೃಶ್ಯವನ್ನು ಬಹುಶಃ ನನ್ನ ಜೀವಮಾನದಲ್ಲಿ ಎಂದಿಗೂ ಮರೆಯಲಾರೆ.

ಗೌರಿಯ ಮೈ ತರಗಲೆಯಂತೆ ಕಂಪಿಸುತ್ತಿದೆ. ಬಾಯಿ ವಿಚಿತ್ರವಾಗಿ ತೆರೆದುಕೊಂಡಿದೆ. ಕಣ್ಣುಗಳು ಅರೆತೆರೆದಿದ್ದವು. ಇಡೀ ದೇಹ ಅಲೆಅಲೆಯಾಗಿ ನಡುಗುತ್ತಿತ್ತು. ರೇಖಾ ಜೋರಾಗಿ ಅಳುತ್ತಿದ್ದಳು. ನಿಧಿ ಕೂಡಾ.

ಅದನ್ನು ನೋಡಿ ನಾನೂ ಅಳತೊಡಗಿದೆ. ನಮ್ಮ ಕಣ್ಣೆದುರೇ ಗೌರಿ ಜಾರಿ ಹೋಗುತ್ತಿರುವಂತೆ ಭಾಸವಾಯಿತು. ಗುರುವಾರದ ಆ ಬೆಳಿಗ್ಗೆ ಇದ್ದ ನಾಲ್ವರ ಪೈಕಿ ಮೂವರು ಅಳುತ್ತ ಕೂತಿದ್ದರೆ, ಗೌರಿ ಇಹದ ಪರಿವೆ ಇಲ್ಲದಂತೆ ಗಡಗಡ ನಡುಗುತ್ತ ಮಲಗಿದ್ದಳು. ಆ ಚಿತ್ರ ಇನ್ನೂ ಮರೆಯಾಗಲೊಲ್ಲದು.

*****

ಮುಕ್ಕಾಲು ನಿಮಿಷದ ಆ ನಡುಗುವಿಕೆ ನನ್ನ ಮನಸ್ಸನ್ನೇ ನಡುಗಿಸಿಬಿಟ್ಟಿದೆ. ಕನ್ನಡದಲ್ಲಿ ಅದಕ್ಕೆ ಮೂರ್ಛೆರೋಗ ಅನ್ನುತ್ತಾರೆ. ಇಂಗ್ಲಿಷ್‌ನಲ್ಲಿ ಫಿಟ್ಸ್‌, ಸಿಝರ್‌, ಅಟ್ಯಾಕ್‌ ಎಂದೆಲ್ಲ ಹೇಳುತ್ತಾರೆ. ವಿಶಿಷ್ಟಚೇತನ ಮಕ್ಕಳಲ್ಲಿ ಫಿಟ್ಸ್‌ ಬರುವ ಸಾಧ್ಯತೆ ನೂರಕ್ಕೆ ನೂರರಷ್ಟಿದೆ. ಆದರೆ, ಗೌರಿಗೆ ಕಳೆದ ಏಳು ವರ್ಷಗಳಿಂದ ಒಮ್ಮೆಯೂ ಬಂದಿದ್ದಿಲ್ಲ. ಆಕೆಯನ್ನು ಅದೆಷ್ಟು ಜತನವಾಗಿ ನೋಡಿಕೊಳ್ಳುತ್ತಿದ್ದೇವೆಂದರೆ, ಬಹುಶಃ ಆಕೆಗೆ ಎಂದಿಗೂ ಬರಲಾರದು ಎಂದೇ ಭಾವಿಸಿದ್ದೆವು.

ಆದರೆ, ಆ ಗುರುವಾರದ ಬೆಳ್ಳಂಬೆಳಿಗ್ಗೆ ನಮ್ಮ ನಂಬಿಕೆ ಛಿದ್ರವಾಯಿತು.

ಅದುವರೆಗೆ ಯಾರಿಗೂ ಫಿಟ್ಸ್‌ ಬಂದಿದ್ದನ್ನು ನಾನು ಕಣ್ಣಾರೆ ನೋಡಿದ್ದಿಲ್ಲ. ಆಸ್ಪತ್ರೆಗೆ ಹೋಗುವವರೆಗೆ ಗೌರಿಗೆ ಬಂದಿದ್ದು ಫಿಟ್ಸ್‌ ಎಂಬುದೂ ನಮಗೆ ಗೊತ್ತಿರಲಿಲ್ಲ. ತಪಾಸಣೆ ನಡೆಸಿದ ಡಾ. ಶಿವಾನಂದ್‌, ಫಿಟ್ಸ್‌ ಎಂದು ದೃಢಪಡಿಸಿದರು. ದಿನಕ್ಕೆ ಮೂರು ಸಲದಂತೆ ಸದ್ಯ ಮೂರು ವರ್ಷ ಔಷಧಿ ಕೊಡಿ. ಆಕೆಯ ಮೆದುಳು ಸ್ಕ್ಯಾನ್‌ ಮಾಡಿಸಿದ ನಂತರ ಮತ್ತೆ ಬನ್ನಿ ಎಂದು ಹೇಳಿದರು. ಅತ್ಯಂತ ಭಾರವಾದ ಹೃದಯದೊಂದಿಗೆ ಗೌರಿಯನ್ನು ಆಟೊದಲ್ಲಿ ಕೂಡಿಸಿಕೊಂಡು, ಆಕೆಯ ಶಾಲೆಗೆ ಹೋದೆವು.

*****

ಅಷ್ಟೊತ್ತಿಗೆ ಶಾಲೆಯಲ್ಲಿ ವಿಷಯ ಗೊತ್ತಾಗಿತ್ತು. ನಡೆದ ಘಟನೆ ವಿವರಿಸುತ್ತಿದ್ದಂತೆ ರೇಖಾಗೆ ದುಃಖ ಉಮ್ಮಳಿಸಿ ಬಂತು.

(ಎರಡನೇ ಭಾಗದಲ್ಲಿ ಮುಕ್ತಾಯ)

- ಚಾಮರಾಜ ಸವಡಿ

ಬದುಕೇ, ನಿನಗೊಂದು ಥ್ಯಾಂಕ್ಸ್‌

8 Oct 2008

6 ಪ್ರತಿಕ್ರಿಯೆ
ಎರಡು ದಿನ ಯೋಗಾಸನ, ವ್ಯಾಯಾಮ ಬಿಟ್ಟರೆ ಮನಸ್ಸಿಗೆ ಏನೋ ತಹತಹ. ಛೇ, ಹೀಗಾದರೆ, ಕ್ರಮೇಣ ನಾನು ಸೋಮಾರಿಯಾಗುತ್ತೇನೆ. ನಸುಕಿನಲ್ಲಿ ಏಳಲು ಆಗುವುದಿಲ್ಲ. ಆರೋಗ್ಯ ಕೆಡುತ್ತದೆ. ತಿಂದು ತಿಂದು ಡುಮ್ಮಣ್ಣನಾಗುತ್ತೇನೆ ಎಂದು ಅಂದುಕೊಂಡು, ಹೆದರಿಸಿ, ಹದ ಮೀರಿದ ದಿನಚರಿಯನ್ನು ಮತ್ತೆ ಹಳಿಗೆ ಹತ್ತಿಸುತ್ತೇನೆ. ಊಟ ಮಾಡುವಾಗಲೂ ಅಷ್ಟೇ. ಮೊದಲಿನಿಂದ ಸರಳ ಆಹಾರ ಇಷ್ಟ. ಅನಗತ್ಯವಾಗಿ ಏನನ್ನೂ ತಿನ್ನಲು ಹೋಗುವುದಿಲ್ಲ. ಒಂದೊಮ್ಮೆ ಆಸೆಪಟ್ಟು ತಿಂದೆನಾದರೂ, ದೇಹದ ಮೇಲೆ ಅದರ ಪರಿಣಾಮ ಆಗುವುದಕ್ಕೂ ಮುನ್ನ ಮನಸ್ಸಿಗೆ ಕಸಿವಿಸಿ ಶುರುವಾಗುತ್ತದೆ. ’ಛೇ ಛೇ ಇಷ್ಟೊಂದು ತಿನ್ನಬಾರದಿತ್ತು’ ಎಂದು ಅಂದುಕೊಳ್ಳುತ್ತ ಒಂದು ಮಿನಿ ಉಪವಾಸ ಮಾಡಿ ಅದನ್ನು ಸರಿದೂಗಿಸಿಕೊಳ್ಳುತ್ತೇನೆ.

ರೇಖಾ ಬೈಯುತ್ತಾಳೆ. ಯಾಕೆ ಇಷ್ಟೊಂದು ಕಟ್ಟು ಮಾಡಿಕೊಳ್ಳುತ್ತೀರಿ? ಒಂದಿಷ್ಟು ಶಿಸ್ತು ತಪ್ಪಿದರೆ ಏನು ಮಹಾ ಆಗುತ್ತದೆ? ಎನ್ನುತ್ತಾಳೆ.

ಆದರೆ, ಆಕೆ ಕೂಡ ಅಂಥದೊಂದು ಕಟ್ಟುಪಾಡನ್ನು ರೂಢಿಸಿಕೊಂಡಿದ್ದಾಳೆ. ಬಹುಶಃ ನಮ್ಮಿಬ್ಬರ ಮನಸ್ಸಿನೊಳಗೆ ಅಂಥದೊಂದು ಶಿಸ್ತು ಇಳಿದುಬಿಟ್ಟಿದೆ.

ಅದು ಅನಿವಾರ್ಯವೂ ಹೌದು. ನಾವು ಕಾಯಿಲೆ ಬೀಳಲಾರೆವು. ಅಂದರೆ, ಕಾಯಿಲೆ ಬೀಳುವಂತಿಲ್ಲ. ನೌಕರಿಯ ಹಂಗಿಗೆ ಸಿಲುಕಿ, ಊರು ತೊರೆದು ಬಂದಾಗಿನಿಂದ ಇಂಥದೊಂದು ಕಟ್ಟುಪಾಡು ನಮಗೆ ಸಹಜ ದಿನಚರಿಯಾಗಿದೆ. ಹಾಗಂತ, ಮುಂಚೆ ತೀರಾ ಅಶಿಸ್ತಿನಿಂದ ಇದ್ದೆವೆಂದೇನೂ ಅರ್ಥವಲ್ಲ. ಆದರೆ, ಗೌರಿ ಹುಟ್ಟಿದ ನಂತರ ಅಂಥದೊಂದು ಶಿಸ್ತು ಸಹಜವಾಗಿ ಬಂದಿದೆ.

ಏಕೆಂದರೆ, ನಾನು ಕಾಯಿಲೆ ಬಿದ್ದರೆ, ಕೆಲಸಕ್ಕೆ ಹೋಗಲು ಆಗುವುದಿಲ್ಲ. ನನ್ನ ನಿತ್ಯದ ಚಟುವಟಿಕೆಗಳು ಮೂಲೆ ಹಿಡಿಯುತ್ತವೆ. ಕಾಯಿಲೆ ಬಿದ್ದರೂ ಡಾಕ್ಟರ್ ಹತ್ತಿರ ನಾನೇ ಹೋಗಬೇಕು. ಏಕೆಂದರೆ, ಮಗುವನ್ನು ಕರೆದುಕೊಂಡು, ಕಾಯಿಲೆ ಬಿದ್ದ ನನ್ನನ್ನೂ ಸಂಭಾಳಿಸಲು ಆಕೆಗೆ ಕಷ್ಟ. ಎರಡನೇ ಮಗು ಹುಟ್ಟಿದ ನಂತರ, ಮನೆಯೇ ಆಕೆಯ ಕಾರ್ಯಕ್ಷೇತ್ರವಾಗಿದೆ. ಹೋದರೆ ಎಲ್ಲರೂ ಒಟ್ಟಿಗೇ ಹೋಗಬೇಕು. ಇಲ್ಲದಿದ್ದರೆ ನಾನೊಬ್ಬನೇ ಹೋಗಬೇಕು. ಅದರಲ್ಲೂ ಗೌರಿಯನ್ನು ಬಿಟ್ಟು ಹೋಗಲು ಆಗದು.

ಏಕೆಂದರೆ, ಗೌರಿ ವಿಶಿಷ್ಟಚೇತನ ಮಗು. ಆಕೆಯ ಬುದ್ಧಿ ಬೆಳವಣಿಗೆ ತೀರಾ ನಿಧಾನ.

ಬಹುಶಃ ಇದು ವಿಶಿಷ್ಟಚೇತನ ಮಕ್ಕಳನ್ನು ಹೊಂದಿದ ಎಲ್ಲಾ ಕುಟುಂಬಗಳ ದಿನಚರಿ ಎಂದು ನಾನು ಅಂದುಕೊಂಡಿದ್ದೇನೆ. ವಿಶಿಷ್ಟಚೇತನ ಮಕ್ಕಳನ್ನು ನೋಡಿಕೊಳ್ಳಲು ಒಬ್ಬರು ಬೇಕೇ ಬೇಕು. ಅದು ನಿರಂತರ ಕರ್ತವ್ಯ. ಅದರಲ್ಲಿ ಯಾಮಾರುವಂತಿಲ್ಲ. ನಿತ್ಯದ ಕೆಲಸಗಳನ್ನು ನಿರ್ಲಕ್ಷ್ಯಿಸುವಂತಿಲ್ಲ. ಗೌರಿಯನ್ನು ವಾಕಿಂಗ್ ಕರೆದುಕೊಂಡು ಹೋಗದಿರಲು ನೆಪಗಳನ್ನು ಹುಡುಕುವಂತಿಲ್ಲ. ಅವರಿಗೆ ಫಿಜಿಯೋಥೆರಪಿ ಮಾಡಿಸುವುದರಲ್ಲಿ ಲೋಪ ಮಾಡುವಂತಿಲ್ಲ. ನಾವು ಬೇಕಾದರೆ ಊಟ ಬಿಡಬಹುದು, ಟಿವಿ ನೋಡದಿರಬಹುದು. ಹರಟೆ ಕೊಚ್ಚದಿರಬಹುದು. ಅನಗತ್ಯ ಮೊಬೈಲ್ ಕರೆಗಳನ್ನು ಮಾಡದಿರಬಹುದು. ಆದರೆ, ಗೌರಿಯ ಕೆಲಸಗಳನ್ನು ನಿರ್ಲಕ್ಷ್ಯಿಸುವಂತಿಲ್ಲ.

ಹೀಗಾಗಿ, ನಾವು ಕಾಯಿಲೆ ಬೀಳಲಾರೆವು. ನಮಗೆ ಅದು ತೀರಾ ದುಬಾರಿ ಸಂಗತಿ. ನಾನು ಕಾಯಿಲೆ ಬಿದ್ದರೆ ಹೇಗೋ ನಿಭಾಯಿಸಬಹುದು. ಆದರೆ, ರೇಖಾ ಮಲಗಿಕೊಂಡರೆ ಮುಗೀತು. ಕಚೇರಿಗೆ ರಜೆ ಹಾಕುವುದು ಅನಿವಾರ್ಯ. ಪೇಪರ್ ಕೂಡಾ ನೋಡಲಾಗುವುದಿಲ್ಲ. ಎಷ್ಟೋ ಸಾರಿ ಮೊಬೈಲ್ ಬಡಿದುಕೊಳ್ಳುತ್ತಿದ್ದರೂ ಮಾತನಾಡುವುದಿರಲಿ, ಅದರ ಮುಖ ನೋಡಲೂ ಆಗುವುದಿಲ್ಲ. ಮಕ್ಕಳ ಜೊತೆಗೆ ಕಾಯಿಲೆ ಬಿದ್ದ ಹೆಂಡತಿಯನ್ನೂ ನೋಡಿಕೊಳ್ಳಬೇಕು. ಒಂದು ದಿನ ತಳ್ಳಬಹುದು. ಎರಡನೇ ದಿನ ಹೇಗೋ ನಿಭಾಯಿಸಬಹುದು. ಅದಕ್ಕಿಂತ ಹೆಚ್ಚಿಗೆ ಆಕೆ ಮಲಗಿದರೆ, ಊರಿನಿಂದ ಯಾರಾದರೂ ಒಬ್ಬರನ್ನು ಕರೆಸುವುದು ಅನಿವಾರ್ಯವಾಗುತ್ತದೆ.

ಅವರಾದರೂ ಎಷ್ಟು ಸಾರಿ ಬಂದಾರು? ಊರಿನಲ್ಲಿ ಅವರಿಗೂ ತಮ್ಮದೇ ಆದ ತಾಪತ್ರಯಗಳಿರುತ್ತವೆ. ಕಾಯಿಲೆ ಮಲಗಿದವಳ ಆರೈಕೆಗೆಂದು ಅಷ್ಟು ದೂರದಿಂದ ಹೇಗೆ ಬಂದಾರು? ನಮ್ಮದು ನಿತ್ಯದ ಗೋಳು. ಒಂದು ಸಾರಿ ಬರಬಹುದು, ಇನ್ನೊಂದು ಸಾರಿ ಬರಬಹುದು. ಅದಕ್ಕಿಂತ ಹೆಚ್ಚು ಬರಲು ಅವರಿಗೂ ಕಷ್ಟ. ಅದು ಗೊತ್ತಿದ್ದೂ ಅವರನ್ನು ಬರ ಹೇಳುವುದು ನಮಗೂ ಕಷ್ಟ.

ಹೀಗಾಗಿ, ನಾವು ಕಾಯಿಲೆ ಬೀಳದಂತೆ ನೋಡಿಕೊಳ್ಳುವುದನ್ನು ಕಲಿತಿದ್ದೇವೆ. ಮಕ್ಕಳಿಗೆ ಫಿಜಿಯೋಥೆರಪಿ ಮಾಡಿಸುವಾಗ ನಮ್ಮ ವ್ಯಾಯಾಮವೂ ಆಗುತ್ತದೆ. ಅವರಿಗೆ ವಾಕಿಂಗ್ ಮಾಡಿಸುತ್ತ ನಾವೂ ವಾಕ್ ಮಾಡಿ ಗಟ್ಟಿಯಾಗುತ್ತೇವೆ. ಅವರಿಗೆ ಕೊಡುವ ಉತ್ತಮ ಗುಣಮಟ್ಟದ ಆಹಾರ ಸೇವಿಸುತ್ತ ನಾವೂ ಉತ್ತಮವಾಗಿದ್ದೇವೆ. ಮಕ್ಕಳಿಗೆ ವರ್ಜ್ಯವಾದ ಬಹುತೇಕ ತಿನಿಸುಗಳು ನಮಗೂ ವರ್ಜ್ಯವೇ.

ಇದನ್ನು ನಾನು ತ್ಯಾಗ ಎಂದು ಕರೆಯುವುದಿಲ್ಲ. ಇದು ಒಂಥರಾ ರೂಢಿ. ಮೊದಮೊದಲು ಕಷ್ಟವಾಯಿತಾದರೂ, ಕ್ರಮೇಣ ನಾವು ಅದಕ್ಕೆ ಒಗ್ಗಿಕೊಂಡಿದ್ದೇವೆ. ನಾವು ಬೆಳೆದಷ್ಟೂ, ನಮ್ಮ ಮಕ್ಕಳು ಬೆಳೆಯುತ್ತಾರೆ ಎಂಬುದನ್ನು ಕಂಡುಕೊಂಡಿದ್ದೇವೆ. ನಾವು ಹಸನ್ಮುಖಿಯಾದಷ್ಟೂ ನಮ್ಮ ಮಕ್ಕಳು ಹಸನ್ಮುಖಿಗಳಾಗುತ್ತಾರೆ, ನಾವು ಬೆಳೆದಷ್ಟೂ ನಮ್ಮ ಮಕ್ಕಳೂ ಬೆಳೆಯುತ್ತವೆ ಎಂಬುದನ್ನು ಕಂಡುಕೊಂಡಿದ್ದೇವೆ.

ಹೀಗಾಗಿ, ನಾವು ಆರೋಗ್ಯವಾಗಿರಲು ಯತ್ನಿಸುತ್ತೇವೆ. ಹಸನ್ಮುಖಿಗಳಾಗಲು ಪ್ರಯತ್ನಿಸುತ್ತೇವೆ. ಉತ್ತಮ ಅಭ್ಯಾಸಗಳನ್ನು ರೂಢಿಸಿಕೊಂಡಿದ್ದೇವೆ. ಈ ಅನಿವಾರ್ಯತೆ, ಈ ರೂಢಿ ನಮಗೆ ಬದುಕಿನ ಹಲವಾರು ಉತ್ತಮಾಂಶಗಳನ್ನು ನೀಡಿದೆ. ನಮ್ಮನ್ನು ನಿತ್ಯ ಪ್ರಬುದ್ಧರನ್ನಾಗಿಸುತ್ತಿದೆ. ಮಾಗಿಸುತ್ತಿದೆ. ಬೆಳೆಸುತ್ತಿದೆ. ಹೊಸ ಹೊಸ ಅನುಭವಗಳಿಗೆ ಒಡ್ಡುತ್ತಿದೆ.

ಇಂಥದೊಂದು ಮನಃಸ್ಥಿತಿಯನ್ನು ನಮಗೆ ನೀಡಿದ್ದಕ್ಕಾಗಿ, ಬದುಕೇ ನಿನಗೊಂದು ಥ್ಯಾಂಕ್ಸ್.

- ಚಾಮರಾಜ ಸವಡಿ