Showing posts with label ಮಳೆ. Show all posts
Showing posts with label ಮಳೆ. Show all posts

ಅಪರಾತ್ರಿಯಲ್ಲೊಬ್ಬ ಬುದ್ಧ

2 May 2012

2 ಪ್ರತಿಕ್ರಿಯೆ
ಸಣ್ಣ ಕಂಬದಂಥ ಸಿಡಿಲು ಕಣ್ಣೆದುರು ಅಪ್ಪಳಿಸಿದಾಗ, ಕುಬ್ಜ ನಾನು ಎಂಬ ಭಾವನೆ.

ಪ್ರೆಸ್‌ ಕ್ಲಬ್‌ನಿಂದ ಹೊರಟಾಗಲೇ ಹನ್ನೊಂದು ಗಂಟೆ. ಮಳೆ ಬರಬಹುದು ಎಂದು ಡಿಕ್ಕಿಯಲ್ಲಿಟ್ಟಿದ್ದ ಜರ್ಕಿನ್‌ ಧರಿಸಿ, ಲೋಡ್‌ ಆಗಿದ್ದ ಮಿತ್ರನನ್ನು ಹಿಂದೆ ಕೂರಿಸಿಕೊಂಡು, ಎಂದೂ ಹೋಗದಷ್ಟು ಕಡಿಮೆ ವೇಗದಲ್ಲಿ ಗಾಡಿ ಓಡಿಸುತ್ತ ಹೊರಟೆ. ಶಿವಾನಂದ ಸರ್ಕಲ್‌ ಹತ್ತಿರ ಸಿಗ್ನಲ್‌ ಕೆಂಪಡರಿದಾಗ ಗಾಡಿ ನಿಲ್ಲಿಸಿ ನೋಡುತ್ತಿರುವಾಗ ಹೊಡೆಯಿತು ಬರಸಿಡಿಲು.

ಕಣ್ಣೆದುರೇ ದೊಡ್ಡ ಕಂಬದಂಥ ಸಿಡಿಲು.

ಕಣ್ಣು ಕೋರೈಸಿದಂತಾಯ್ತು. ತುಂಬ ದಿನ ಆಗಿತ್ತು ಅಂಥ ಸಿಡಿಲನ್ನು ಹತ್ತಿರದಿಂದ ನೋಡಿ. ಬಾಲ್ಯದಲ್ಲಿ ಸಾಕಷ್ಟು ಬಾರಿ ಕಂಡಿದ್ದೇನೆ. ಅಲೆದಾಟದ ದಿನಗಳಲ್ಲೂ ಅವು ಆಗಾಗ ದರ್ಶನ ಕೊಟ್ಟಿದ್ದುಂಟು. ಆದರೆ, ಹತ್ತಾರು ವರ್ಷಗಳ ನಂತರ ಇದೇ ಮೊದಲ ಬಾರಿ ಕಂಡು ಅರೆಕ್ಷಣ ಮೂಕನಾಗಿದ್ದೆ.

ಆ ಕ್ಷಣಕ್ಕೆ, ಬದುಕು ನಶ್ವರ ಅನಿಸಿದ್ದು ಸುಳ್ಳಲ್ಲ.

ಸಿಗ್ನಲ್‌ ಹಸಿರಾದಾಗ ಗಾಡಿಗೆ ಓಡುವ ಆತುರವಿರಲಿಲ್ಲ. ಮಲ್ಲೇಶ್ವರಂ ತಲುಪಿ, ಮಿತ್ರನನ್ನು ಮನೆಯೊಳಗೆ ಕಳಿಸಿ, ಹುಷಾರಾಗಿ ಬಾಗಿಲು ಹಾಕಿಕೊಳ್ಳಲು ಹೇಳಿ ಮನೆಯತ್ತ ಹೊರಟೆ. ರೈಲ್ವೇ ಸೇತುವೆ ದಾಟಿ, ಮೆಟ್ರೊ ಕೆಲಸ ನಡೆಯುವ ಜಾಗದ ಹತ್ತಿರ ಗಾಡಿ ನಿಧಾನವಾಗಿಸಿದಾಗ ಮತ್ತೊಂದು ಸಿಡಿಲು ಹೊಡೀತು.

ಮತ್ತದೇ ಕೋರೈಸುವ ಕಂಬ.

ಗಾಡಿ ಪೂರ್ತಿ ನಿಧಾನವಾಯ್ತು. ರಸ್ತೆಗೆ ರಸ್ತೆಯೇ ಬಹುತೇಕ ನಿರ್ಜನ. ಮಧ್ಯರಾತ್ರಿ ಸಮೀಪಿಸುವ ಈ ಹೊತ್ತು ಕಾಣುತ್ತಿದ್ದ ಟ್ರಾಫಿಕ್‌ನ ಶೇ.೧೦ರಷ್ಟೂ ಕಾಣಲಿಲ್ಲ.

ಮನಸು ಯೋಚಿಸುತ್ತಿತ್ತು: ಕಂಡ, ಕಾಣದ, ಈಡೇರಿದ, ಈಡೇರದ ಎಲ್ಲವೂ ಛಕಛಕ ಕಣ್ಣೆದುರು ಹಾಯ್ದುಹೋದವು.

ಒಡಲಾಳದೊಳಗಿಂದ ಹಸಿವೆಯ ಜೊತೆಗೆ ಸಣ್ಣಗೇ ಖಿನ್ನತೆ.

ಮಳೆ ಕೊಂಚ ಜೋರಾಯಿತು. ಹೆಲ್ಮೆಟ್‌ನ ಗಾಜಿನ ತುಂಬ ಮಳೆಮಣಿಗಳು. ಗಾಜು ಹಿಂದಕ್ಕೆ ಸರಿಸಿ, ಅಪ್ಪಳಿಸುತ್ತಿದ್ದ ಹನಿಗಳಿಗೆ ಮುಖವೊಡ್ಡಿದಾಗ, ಎಂಥದೋ ಹಿತಕರ ಭಾವನೆ.

ಅದು ನನ್ನ ಬಾಲ್ಯ.

ಬೀಳುವ ಮಳೆಗೆ ಆಕಾಶಕ್ಕೆ ಮುಖವೊಡ್ಡಿ ಗಿರಗಿಟ್ಲೆ ತಿರುಗುತ್ತಿದ್ದ ಚಿಂತೆಯರಿಯದ ಬಾಲ್ಯದ ನೆನಪು.

ನವರಂಗ್‌ ದಾಟಿ, ವೆಸ್ಟ್‌ ಆಫ್‌ ಕಾರ್ಡ್‌ ರಸ್ತೆಯತ್ತ ತಿರುಗಿದಾಗ ರಸ್ತೆಗೆ ರಸ್ತೆಯೇ ನಿರ್ಜನ. ಖಾಲಿ ರಸ್ತೆಯಲ್ಲಿ ಸಣ್ಣ ಮಳೆ ಹನಿಗಳ ಸ್ವಚ್ಛಂದ ಆಟ.

ಒಳಗೂ ಹೊರಗೂ ಒಬ್ಬನೇ ಇರುವ ಇಂಥ ಘಳಿಗೆಗಳೇ ಈ ಅಸಹನೀಯ ರಾತ್ರಿಯನ್ನು ಆಹ್ಲಾದಕರವಾಗಿಸೋದು.

ಅಷ್ಟೊತ್ತಿಗೆ ಖಿನ್ನತೆ ನಿಧಾನವಾಗಿ ಏರುತ್ತಿತ್ತು. ಜೀವನ ನಶ್ವರ ಎಂಬ ಭಾವ ಬಲವಾಗತೊಡಗಿದಂತೆ ವಿಜಯನಗರದ ಖಾಲಿ ರಸ್ತೆಯಲ್ಲಿದ್ದೆ. ಅಲ್ಲಿಂದ ಹತ್ತು ನಿಮಿಷಕ್ಕೆ ಮನೆ ತಲುಪಿ, ಹುಷಾರಾಗಿ ಬಾಗಿಲು ತೆರೆದು, ಕತ್ತಲೆಯಲ್ಲಿ ಸದ್ದಾಗದಂತೆ ಒಂದಿಷ್ಟು ತಿಂದು, ಒಡಲ ಹಸಿವು ತೀರಿಸಿಕೊಂಡೆ.

ಮನದ ಖಾಲಿತನ ವಿಜೃಂಭಿಸತೊಡಗಿತ್ತು.

ರೂಮು ಹೊಕ್ಕು ಕಂಪ್ಯೂಟರ್‌ ಆನ್‌ ಮಾಡುವ ಹೊತ್ತಿಗೆ ಹೊರಗೆ ಮಳೆ ಬಲಿಯುತ್ತಿತ್ತು. ಗುಡುಗು-ಸಿಡಿಲುಗಳ ಅಬ್ಬರವೂ.

ಮನಸ್ಸು ಖಾಲಿ ಖಾಲಿ.

ಅರ್ನೆಸ್ಟ್‌ ಹೆಮಿಂಗ್ವೆನ ಓಲ್ಡ್‌ ಮ್ಯಾನ್‌ ಅಂಡ್‌ ದಿ ಸೀ (Old Man And The Sea) ಕಾದಂಬರಿಯ ಮುದುಕ ಮೀನುಗಾರನ ಭಾವನೆಗಳು ನೆನಪಾಗುತ್ತವೆ. ಬಲೆಗೆ ಬಿದ್ದ ದೊಡ್ಡ ಮೀನಿನೊಂದಿಗೆ, ಅದನ್ನು ನಿಯಂತ್ರಿಸಲು ಹೆಣಗಾಡುತ್ತ, ಸ್ವಗತದಂತೆ ಮೀನಿನೊಂದಿಗೆ ಮಾತಿಗಿಳಿಯುವ ಆ ಭಾವನೆಗಳು ನನ್ನನ್ನು ಸದಾ ಕಾಡುವ ನೆನಪುಗಳು. ಮನಸ್ಸು ಖಿನ್ನವಾದಾಗೆಲ್ಲ, how are you fish? ಎಂದು ಪ್ರಶ್ನಿಸಿಕೊಳ್ಳುತ್ತೇನೆ. ಮನಸ್ಸು ಕೂಡ ಆ ಮುದುಕನ ಬಲೆಗೆ ಬಿದ್ದ ಮೀನಿನಂತೆ. ವಾಪಸ್‌ ಉತ್ತರಿಸಲ್ಲ.

ನನ್ನ ಮನಸ್ಸೂ ಎಲ್ಲೋ ಕಳೆದುಹೋಗಿದೆ.

*****

ಸುಮ್ಮನೇ ಕವಿತೆ ಗೀಚುತ್ತೇನೆ. ಪದಗಳನ್ನು ಬದಲಿಸುತ್ತೇನೆ. ಪ್ಯಾರಾ ಹಿಂದೆಮುಂದೆ ಮಾಡುತ್ತೇನೆ.

ಊಹೂಂ, ಭಾವನೆಗಳು ಸಾಲುಗಳಾಗುವುದಿಲ್ಲ. ನೋವು ಶಬ್ದಗಳಾಗುವುದಿಲ್ಲ.

ಅರ್ಧ ಓದಿಟ್ಟ ಪುಸ್ತಕ ಎತ್ತಿಕೊಳ್ಳುತ್ತೇನೆ. ಮನಸ್ಸು ನಿಲ್ಲುವುದಿಲ್ಲ.

ಲೈಟಾರಿಸಿಕೊಂಡು, ಮಾನಿಟರ್‌ ಆಫ್‌ ಮಾಡಿ, ಗಂವೆನ್ನುವ ಕತ್ತಲೆಯಲ್ಲಿ ಫ್ಯಾನ್‌ ಶಬ್ದ ಕೇಳುತ್ತ ಸುಮ್ಮನೇ ಕೂಡುತ್ತೇನೆ.

ಊಹೂಂ, ಮನಸ್ಸು ಸುಮ್ಮನಾಗುವುದಿಲ್ಲ.

ವಿನಂತಿಸುತ್ತೇನೆ, ಆರ್ತನಾಗಿ ಬೇಡಿಕೊಳ್ಳುತ್ತೇನೆ. ಸಿಟ್ಟು ಮಾಡಿಕೊಳ್ಳುತ್ತೇನೆ.

ರಚ್ಚೆ ಹಿಡಿದ ಮಗುವಿನಂಥದು ಅದು.

ಕಾಡುವ ಆ ದಿವ್ಯ ಭಾವವನ್ನೇ ಧೇನಿಸುತ್ತ ಕೂತಾಗ ಮಾತ್ರ ಕೊಂಚ ಶಾಂತವಾಗುತ್ತದೆ.

ನಿದ್ದೆ ದೂರವಾದರೂ ಪರವಾಗಿಲ್ಲ, ನೆಮ್ಮದಿ ಹತ್ತಿರವಿರಲಿ ಎಂದು ಸುಮ್ಮನಾಗುತ್ತೇನೆ.

ಮಳೆ ಯಾವಾಗ ನಿಂತಿತ್ತೋ. ದೂರದಲ್ಲಿ ಗೂರ್ಖಾ ಸೀಟಿ ಊದುವ, ಕೋಲನ್ನು ಫುಟ್‌ಪಾತ್‌ನ ಕಲ್ಲಿಗೆ ಕುಟ್ಟುವ ಸದ್ದು.

ಅರೆ, ಈ ಗೂರ್ಖಾನ ಹೆಂಡತಿಯ ಭಾವನೆಗಳೇನಿರಬಹುದು ಎಂದು ಯೋಚಿಸತೊಡಗುತ್ತದೆ ಮನಸ್ಸು.

ಇದ್ದಕ್ಕಿದ್ದಂತೆ ಕಸಿವಿಸಿ. ಯಾರದೋ ತಟ್ಟೆಯ ಅನ್ನ ಕಸಿದ ಭಾವ.

ನಮ್ಮ ನೆಮ್ಮದಿಗಳ ಹಿಂದೆ ಯಾರದೋ ನಿದ್ದೆಗೆಟ್ಟ ರಾತ್ರಿ ಇರುತ್ತದೆ, ಶ್ರಮವಿರುತ್ತದೆ. ಇಲ್ಲಿ ಕತ್ತಲೆಯಲ್ಲಿ ಹಾಯಾಗಿ ಕೂತವನ ನೆಮ್ಮದಿಗೆ ಆ ಗೂರ್ಖಾನ ನಿದ್ದೆಗೇಡಿ ರಾತ್ರಿಯ ದುಡಿಮೆ ಕಾರಣ ಎಂಬ ಭಾವ ಹುಟ್ಟಿ ಮನಸ್ಸು ದ್ರವಿಸಿದಂತಾಯ್ತು. ಕಾಣದ ಗೂರ್ಖಾನ ಕುಟುಂಬದ ಚಿತ್ರಣ ಮನಸ್ಸನ್ನು ಆರ್ದ್ರ ಮಾಡಿಬಿಟ್ಟಿತು.

ಸದ್ದಿಲ್ಲದೇ ಕಂಪ್ಯೂಟರ್‌ ಆಫ್‌ ಮಾಡಿ, ರೂಮಿನ ಕದವಿಕ್ಕಿ, ಮಲಗಿದ್ದ ಮನೆಯ ಜೀವಿಗಳನ್ನು ಅಕ್ಕರೆಯಿಂದ ದಿಟ್ಟಿಸಿದೆ.

ನಾನೂ ಒಂಥರಾ ಗೂರ್ಖಾನೇ. ಮತ್ತಿದು ನನ್ನ ಕುಟುಂಬ ಎಂಬ ಭಾವ ಉಕ್ಕಿತು.

ಮನಸ್ಸನ್ನು ಕುಟ್ಟುತ್ತಿದ್ದ ಮೆದು ಭಾವವನ್ನೇ ಧೇನಿಸುತ್ತ ಹಾಸಿಗೆ ಮೇಲೆ ಉರುಳಿಕೊಂಡೆ. ಇವತ್ತು ನಿದ್ದೆ ಬರಬಹುದು.

ಬರದೇ ಇರಲೂಬಹುದು!

- ಚಾಮರಾಜ ಸವಡಿ

ಒಂದು ಕನಸು ಹುಡುಕುತ್ತಾ...

21 Sept 2011

4 ಪ್ರತಿಕ್ರಿಯೆ
ಮಗುವೊಂದು ಮಲಗುತ್ತಿತ್ತು.

ಪಕ್ಕದಲ್ಲಿ ಮಲಗಿಕೊಂಡು ಮಗುವಿನ ಮಾತುಗಳನ್ನು ಕೇಳುತ್ತಿದ್ದ ಆತ. ಶಾಲೆಯಲ್ಲಿ ಆಕೆಯ ಮಿಸ್‌ ಹೇಳಿದ್ದು, ಸಹಪಾಠಿಗಳ ಬಟ್ಟೆ, ಊಟದ ಡಬ್ಬ, ತರಹೇವಾರಿ ಚಿತ್ರಗಳಿರುವ ಆಕೆಯ ಶಾಲೆಯ ಕೊಠಡಿ, ಮಿಸ್‌ ಹೇಳಿಕೊಟ್ಟಿದ್ದ ಡ್ರಿಲ್‌ ಎಲ್ಲವನ್ನೂ ಗಿಣಿಪಾಠ ಒಪ್ಪಿಸುತ್ತಿದ್ದ ಮಗು, ನಿನಗೆ ಡ್ರಿಲ್‌ ಬರುತ್ತಾ ಅಪ್ಪ? ಎಂದಳು.

ಈತ ಇಲ್ಲವೆಂದ.

ಆಕೆ ತಕ್ಷಣ ಎದ್ದು ನಿಂತು, ಸಾವಧಾನ್‌, ವಿಶ್ರಾಮ್‌ ತೋರಿಸಿದಳು. ಒಂದೆರಡು ಎಕ್ಸರ್‌ಸೈಜ್‌ಗಳ ಪ್ರದರ್ಶನವೂ ನಡೆಯಿತು. ನೀನು ಮಾಡು ನೋಡೋಣ ಎಂದು ಸವಾಲೆಸೆದಳು. ಇವನಿಗೆ ಆಗಲೇ ಅರ್ಧ ನಿದ್ದೆ. ನಾಳೆ ಬೆಳಿಗ್ಗೆ ನೀನೇ ಹೇಳಿಕೊಡುವೆಯಂತೆ ಎಂದ. ಮಗಳು ಮತ್ತೆ ಮಲಗಿದಳು. ಮತ್ತೆ ಮಾತು.

ಹೊರಗೆ ಸಣ್ಣಗೇ ಶುರುವಾಗಿದ್ದ ಮಳೆ ಜೋರಾಯಿತು. ಅರೆತೆರೆದಿದ್ದ ಕಿಟಕಿಯ ಮೂಲಕ ತಣ್ಣನೆಯ ಗಾಳಿ ಒಳ ನುಗ್ಗಿದಾಗ ಫ್ಯಾನ್‌ ಆಫ್‌ ಮಾಡಿದ್ದಾಯ್ತು. ಅಪ್ಪಾ ನನಗೆ ಚಳಿ ಎಂದಳು ಮಗಳು. ಈತ ಬೆಚ್ಚಗೆ ಹೊದಿಕೆ ಹೊದಿಸಿದ. ಸರಿ, ಈಗ ರಗ್ ಹೊತ್ಕೊಂಡಿದ್ದೀನಿ. ನಾಳೆ ಸ್ಕೂಲಿಗೆ ಹೋಗುವಾಗ ಚಳಿ ಆದರೆ ಏನು ಮಾಡಲಿ? ಎಂದಿತು ಮಗು.

ನಾಳೆ ನಿಂಗೆ ಸ್ವೆಟರ್‌ ಕೊಡಿಸ್ತೀನಿ ಎಂದು ಈತ ಭರವಸೆ ಕೊಟ್ಟ. 

ಈಗ ಮಾತು ಸ್ವೆಟರ್‌ ಕಡೆ ತಿರುಗಿತು. ಎಂಥ ಬಣ್ಣದ ಸ್ವೆಟರ್‌ ತನಗಿಷ್ಟ? ತನ್ನ ಗೆಳತಿಯರು ಎಂತೆಂಥ ಬಣ್ಣದ ಸ್ವೆಟರ್‌ ಇಟ್ಟುಕೊಂಡಿದ್ದಾರೆ ಎಂದೆಲ್ಲ ಮಾತಾಡಿದ ಮಗು, ಸ್ವೆಟರ್‌ ತರೋವಾಗ ನನ್ನನ್ನೂ ಕರ‍್ಕೊಂಡು ಹೋಗ್ತೀಯಾ? ಎಂದಿತು. ಏಕೆ ಎಂದ ಈತ. ನನಗಿಷ್ಟವಾದ ಬಣ್ಣದ ಸ್ವೆಟರ್‌ ನಾನೇ ಆರಿಸಬೇಕಲ್ವಾ? ಎಂದು ಕೇಳಿತು ಮಗು. ಈತ ಹೂಂ ಅಂದ.

ನಂಗೆ ಚಳಿಯಾದ್ರೆ ಸ್ವೆಟರ್‌ ಹಾಕ್ಕೊಂಡು ಮಲ್ಕೋಬಹುದು ಎಂದು ಅದಕ್ಕೆ ರೋಮಾಂಚನ. ನಿಜ್ವಾಗ್ಲೂ ನಂಗೆ ಸ್ವೆಟರ್‌ ಕೊಡಿಸ್ತೀಯಾ ಅಪ್ಪ? ಎಂದು ಮತ್ತೆ ಕೇಳಿ ಖಚಿತಪಡಿಸಿಕೊಂಡಿತು. ಮರುದಿನ ಸ್ವೆಟರ್‌ ಖರೀದಿ ಮಾಡುವ ಬಗ್ಗೆಯೇ ಮಾತಾಡುತ್ತ ಹಾಗೇ ನಿದ್ದೆಗೆ ಜಾರಿತು. 

ಈತನಿಗೆ ನಿದ್ದೆ ಬರಲಿಲ್ಲ. ಹಾಗಂತ ಪೂರ್ತಿ ಎಚ್ಚರದಲ್ಲೂ ಇರಲಿಲ್ಲ. 

ಹೊರಗೆ ಜೋರು ಮಳೆ. ಇತ್ತ ಮಗುವಿಗೆ ಜೋರು ನಿದ್ರೆ. 

ಬೀಸಿದ ತಣ್ಣನೆಯ ಗಾಳಿಗೆ ಮಂಪರು ಹಾರಿಹೋಗಿ ಎಚ್ಚರವಾಯಿತು. ಎದ್ದು ಕಿಟಕಿಯ ಹತ್ತಿರ ಬಂದು ಮಳೆ ನೋಡುತ್ತ ನಿಂತ. ಮುಂಗಾರಿನ ಕೊನೆಯ ಮಳೆ ಇದು ಎಂಬಂತೆ ಆಗಸ ಸೋರುತ್ತಿತ್ತು. 

ಬೀದಿ ದೀಪದ ಮೇಲೆ ನೀರಿನ ಹನಿಗಳು ಬಿದ್ದು  ಸಿಡಿಯುತ್ತಿದ್ದ ದೃಶ್ಯ ಗಮನ ಸೆಳೆಯಿತು. ಡಾಂಬರು ರಸ್ತೆಯುದ್ದಕ್ಕೂ ತರಹೇವಾರಿ ವಿನ್ಯಾಸದ ಹರಿಯುವ ನೀರು. ಅವಸರಕ್ಕೆ ಬಿದ್ದಂತೆ ಸರಿದು ಹೋಗುತ್ತಿದ್ದ ನೀರಿಗೆ ಹಳದಿ ಬೀದಿ ದೀಪದ ಚಿತ್ತಾರ. ನಿಲ್ಲುವುದಿಲ್ಲವೇನೋ ಎಂಬಂತೆ ಒಂದೇ ರೀತಿ ಬೀಳುತ್ತಿದ್ದ ಮಳೆ ಸಂಮೋಹನ ಮಾಡುವಂತಿತ್ತು. ಗುಡುಗಿಲ್ಲ, ಮಿಂಚಿಲ್ಲ, ಸಿಡಿಲುಗಳಿಲ್ಲ. ಕೇವಲ ಶುದ್ಧ ಜೋರು ಮಳೆ. ಸೈನಿಕರಂತೆ ಒಂದೇ ರೀತಿ ಕಾಣುವ ಮಳೆಯ ಹಳದಿ ಎಳೆಗಳು. ಹರಿಯುವ ನೀರಿನ ಮೇಲ್ಮೈಗೆ ಅಪ್ಪಳಿಸಿದಾಗ ಆಗುತ್ತಿದ್ದ ಸೊಗಸಾದ ಕುಳಿಗಳು. ಅವುಗಳ ಒಡಲಿಂದ ಪಕ್ಕಕ್ಕೆ ಛಲ್ಲನೇ ಸಿಡಿಯುವ ಮರಿ ಹನಿಗಳು. ರಸ್ತೆಯುದ್ದಗಲಕ್ಕೂ ಮಳೆ ಹನಿಗಳು ಹರಿಯುವ ನೀರಿನ ಮೇಲೆ ಮೂಡಿಸುತ್ತಿದ್ದ ಸಾವಿರಾರು ನೀರ ಕುಳಿಗಳು. 

ಈತ ಮಂತ್ರಮುಗ್ಧನಂತೆ ಅವನ್ನೇ ನೋಡುತ್ತ ನಿಂತ. 

ರಾತ್ರಿಯ ನೀರವತೆಯ ಜಾಗದಲ್ಲೀಗ ಧಾರಾಕಾರವಾಗಿ ಬೀಳುತ್ತಿದ್ದ ಮಳೆಯ ಶಬ್ದ. ಕಿವಿಗೆ ಹಿತವಾಗಿಸುವ, ಕಣ್ಣಿಗೆ ತಂಪೆನಿಸುವ ಚೇತೋಹಾರಿ ದೃಶ್ಯ. ಎದುರಿಗೆ ಕಾಣುತ್ತಿದ್ದ ಮನೆಗಳ ಕಿಟಕಿಗಳಿಂದ ಬೆಳಕು ಬರುತ್ತಿಲ್ಲ. ಎಲ್ಲಾ ಮಲಗಿರಬೇಕು. ಅಥವಾ ಮಲಗಿದ್ದುಕೊಂಡೇ ಮಳೆಯ ಗಾನ ಕೇಳುತ್ತಿರಬೇಕು. ಅಥವಾ ಮಳೆ ಗಾನ ಕೇಳುತ್ತ ಮಲಗುತ್ತಿರಬೇಕು.

ನಾನೂ ಮಲಗಬೇಕು ಎಂದುಕೊಂಡ. ಮಳೆ ನಿಲ್ಲುವ ಮುನ್ನವೇ, ಅದರ ವಿಶಿಷ್ಟ ಗಾನ ಕೇಳುತ್ತ ನಿದ್ದೆಗೆ ಜಾರಬೇಕು. ಸ್ವೆಟರ್‌ ಕನಸು ಕಾಣುತ್ತ ಮಲಗಿದ ಮಗಳಂತೆ, ನಾನೂ ಚೆಂದನೆಯ ಕನಸು ಕಾಣುತ್ತ ಮಲಗಬೇಕೆಂದುಕೊಳ್ಳುತ್ತ ವಾಪಸ್ ಬಂದ. 


ತಕ್ಷಣ ನಿದ್ರೆ ಬರಲಿಲ್ಲ. ಮಳೆಯ ಸದ್ದು ಹಾಗೇ ಇತ್ತು. ಮುಚ್ಚಿದ ಕಣ್ರೆಪ್ಪೆಯ ಒಳಗೆಲ್ಲ ಮಳೆಯ ಹನಿಗಳು ಉಂಟು ಮಾಡುತ್ತಿದ್ದ ಸಾವಿರ ಸಾವಿರ ನೀರಕುಳಿಗಳು. ಏನು ಕನಸು ಕಾಣಲಿ ಎಂದು ಯೋಚಿಸಿದ. 

ಆಕೆ ನೆನಪಾದಳು. ಆಕೆಯ ಸ್ನಿಗ್ಧ ಮುಖ ಕಣ್ಮುಂದೆ ಬಂದಿತು. ಮಿನುಗುವ ನಕ್ಷತ್ರದಂಥವಳು ಎಂದು ಮತ್ತೆ ಮತ್ತೆ ಅಂದುಕೊಂಡ. ಆಕೆಯ ಮುಂದೆ ಹಾಗೆ ಕರೆದರೆ ‘ಹುಚ್ಚ’ ಎಂಬಂತೆ ನೋಡಿಯಾಳು ಎಂಬುದು ಅರಿವಾಗಿ, ಮುಚ್ಚಿದ ಕಣ್ಣೊಳಗೇ ಸುಮ್ಮನಾದ. ಆಕೆಯೂ ಮಳೆ ನೋಡುತ್ತಿರಬಹುದೇ ಎಂಬ ಪ್ರಶ್ನೆ ಹುಟ್ಟಿತು. ಮಳೆಯ ಕುಳಿಗಳನ್ನು, ಹಳದಿ ಎಳೆಗಳನ್ನು, ಒಂದೇ ರೀತಿ ಬೀಳುತ್ತಿರುವ ಹಿತಕರ ಶಬ್ದವನ್ನು ಅನುಭವಿಸುತ್ತಿರಬಹುದೇ? 

ಇದ್ದಕ್ಕಿದ್ದಂತೆ ಮಗಳು ಕನವರಿಸಿದಳು. ಅಸ್ಪಷ್ಟ ಶಬ್ದಗಳು. ಬಹುಶಃ ಸ್ವೆಟರ್‌ ಕನಸು ಕಾಣುತ್ತಿರಬಹುದು ಅಂತ ಅಂದುಕೊಂಡ. ಪಕ್ಕಕ್ಕೆ ತಿರುಗಿ, ತಲೆ ನೇವರಿಸಿ, ತಾನು ಪಕ್ಕದಲ್ಲೇ ಇದ್ದೇನೆ ಎಂಬುದನ್ನು ಮನವರಿಕೆ ಮಾಡಿಕೊಟ್ಟ. ಆತುಕೊಂಡು ಮಲಗಿದ ಮಗು ಕನವರಿಕೆ ನಿಲ್ಲಿಸಿ ಮತ್ತೆ ಆಳ ನಿದ್ದೆಗೆ ಜಾರಿತು.

ಇವನಿಗೂ ಮಂಪರು. ಕನಸು ಕಾಣಬೇಕೆಂಬುದೂ ಮರೆತು ಹೋಗಿ ನಿಧಾನವಾಗಿ ನಿದ್ದೆಗೆ ಜಾರತೊಡಗಿದ. ಧಾರಾಕಾರವಾಗಿ ಬೀಳುತ್ತಿದ್ದ ಮಳೆಯ ಸದ್ದು, ಸಣ್ಣಗೇ ನುಗ್ಗುತ್ತಿದ್ದ ತಂಗಾಳಿ, ದಿನದ ಆಯಾಸ ಎಲ್ಲ ಸೇರಿ ನಿದ್ದೆ ಕವಿಯತೊಡಗಿತು. 

*****

ಬಹುಶಃ ದೆಹಲಿಯಿಂದ ಹಿಂತಿರುವಾಗ ಇರಬೇಕು. 

ಆಗಲೂ ಇಂಥದೇ ಒಂದು ರಾತ್ರಿ. ಮಳೆ ಬೀಳುತ್ತಿದ್ದಿಲ್ಲ ಎಂಬುದನ್ನು ಬಿಟ್ಟರೆ, ಮಳೆಯ ಸದ್ದಿನ ಜಾಗದಲ್ಲಿ ರೈಲು ಚಲಿಸುವ ವಿಶಿಷ್ಟ ಶಬ್ದ. ಏಕೋ ನಿದ್ದೆ ಬರಲಿಲ್ಲ ಎಂದು ರಾತ್ರಿ ಯಾವುದೋ ಜಾವ ಬರ್ಥ್‌‌ನಿಂದ ಕೆಳಗಿಳಿದಿದ್ದ. ಡಬ್ಬಿಯೊಳಗೆ ಎಲ್ಲೆಡೆ ಹರಡಿಕೊಂಡಿದ್ದ ಮಂಕು ನೀಲಿ ಬೆಳಕಲ್ಲಿ, ಮಲಗಿದ್ದ ಜನರೆಲ್ಲ ಶವಗಳಂತೆ, ಇಡೀ ರೈಲು ಚಲಿಸುವ ಶವಾಗಾರದಂತೆ ಭಾಸವಾಗಿ ಇದ್ದಕ್ಕಿದ್ದಂತೆ ಗಾಬರಿಯಾಗಿದ್ದ. ಹೇಗ್ಹೇಗೋ ಮಲಗಿದ್ದ ಜನರು ಥೇಟ್‌ ಶವಗಳಂತೆ ಕಾಣುತ್ತಿದ್ದರು. ಕೆಲವರ ಕಾಲುಗಳು ಸೀಟ್‌ನಿಂದ ಹೊರಗೆ ಬಂದಿದ್ದು, ಚಲಿಸುವ ರೈಲಿನ ಲಯಕ್ಕನುಗುಣವಾಗಿ ಅಲುಗುತ್ತಿದ್ದವು. 

ಇಳಿದವ ಹಾಗೇ ಕಕ್ಕಾವಿಕ್ಕಿಯಾಗಿ ನಿಂತುಬಿಟ್ಟಿದ್ದ. ಕಾಣುತ್ತಿರುವುದು ಕನಸೋ ಅಥವಾ ವಾಸ್ತವವೋ ಅರಿಯದೇ ದಿಗ್ಭ್ರಮೆಗೊಂಡಿದ್ದ. ಮಂಪರು ತಿಳಿಯಾದಂತೆ ತಾನಿರುವುದು ರೈಲಿನಲ್ಲಿ ಎಂಬುದು ಅರಿವಾಗಿತ್ತು. ಸಧ್ಯ... ಎಂದುಕೊಳ್ಳುತ್ತ ಟಾಯ್ಲೆಟ್‌ಗೆ ಹೋಗಿ ವಾಪಸ್‌ ಬಂದು ಮತ್ತೆ ಬರ್ಥ್‌ ಏರಿದ. 

ನಿದ್ದೆ ಬರಲಿಲ್ಲ. 

ಚಲಿಸುವ ಶವಾಗಾರ ಎಂಬ ಕಲ್ಪನೆ ಕೂತುಬಿಟ್ಟಿತ್ತು. ಬಹುಶಃ ಇಡೀ ಡಬ್ಬಿಯಲ್ಲಿ ನಾನೊಬ್ಬನೇ ಎಚ್ಚರಿರಬಹುದು. ಈ ರೈಲು ಈಗ ಎತ್ತ ಹೋಗುತ್ತಿದೆಯೋ. ಒಂದು ವೇಳೆ ರೈಲು ಎಲ್ಲಿಯೋ ಒಂದೆಡೆ ನಿಂತು, ಮಲಗಿದ ಈ ಜನರೆಲ್ಲ ಶವವಾಗಿದ್ದರೆ, ಆಗ ಯಾರೂ ಇಳಿಯುವುದೇ ಇಲ್ಲವಲ್ಲ ಎಂದು ಕಲ್ಪಿಸಿಕೊಂಡ. ಖುಷ್ವಂತ್‌ ಸಿಂಗ್‌ ಬರೆದ ಟ್ರೇನ್‌ ಟು ಪಾಕಿಸ್ತಾನ ಕಾದಂಬರಿ ನೆನಪಾಯ್ತು. ಅದರಲ್ಲಿಯೂ ಹೀಗೇ ಆಗುತ್ತದೆ. ಇದ್ದದ್ದನ್ನೆಲ್ಲ ಹಿಂದೆ ಬಿಟ್ಟು ಹೊಸ ದೇಶಕ್ಕೆ ಗುಳೆ ಹೊರಟವರಿದ್ದ ರೈಲನ್ನು ಮಧ್ಯೆಯೇ ತಡೆದ ದುಷ್ಕರ್ಮಿಗಳು ಎಲ್ಲರನ್ನೂ ಸಾಯಿಸಿ ಶವಗಳಿದ್ದ ರೈಲನ್ನಷ್ಟೇ ಮುಂದೆ ಹೋಗಲು ಬಿಡುತ್ತಾರೆ. ನಿಲ್ದಾಣ ಬಂದರೂ ಯಾರೂ ಇಳಿಯುವುದಿಲ್ಲ.

ಏಕೋ ಈ ಕಲ್ಪನೆ ಕೆಟ್ಟದ್ದಾಯ್ತು ಎಂದು ಅನ್ನಿಸಿತು. 

ನಿದ್ದೆ ಬರುವುದಿಲ್ಲ ಎಂಬುದು ಖಾತರಿಯಾದಾಗ, ಸುಮ್ಮನೇ ಕಣ್ತೆರೆದುಕೊಂಡೇ ಮಲಗಿದ. ಯಾವ್ಯಾವ ಊರಿನ ಜನರೋ, ಎಲ್ಲೆಲ್ಲಿ ಹೊರಟಿದ್ದಾರೋ, ಏನೇನು ಕನಸು ಕಾಣುತ್ತಿದ್ದಾರೋ. ಇಂಥ ಸಾವಿರಾರು ಜನರನ್ನು ಪ್ರತಿ ದಿನ ಹೊತ್ತೊಯ್ಯುವ ರೈಲು ನಿಜಕ್ಕೂ ವಿಚಿತ್ರ ಅನಿಸಿತು. ನಿಲ್ದಾಣ ಬಂದಂತೆ, ಕೆಲವರು ಇಳಿಯುತ್ತಾರೆ; ಕೆಲವರು ಹತ್ತುತ್ತಾರೆ. ರೈಲು ಹೋಗುತ್ತಲೇ ಇರುತ್ತದೆ. ಇದೆಂದಿಗೂ ನಿಲ್ಲದ ಕ್ರಿಯೆ. ನಾನೂ ಒಂದು ಸ್ಟೇಶನ್‌ನಲ್ಲಿ ಇಳಿಯುತ್ತೇನೆ. ಅಲ್ಲಿಂದ ಮನೆಯತ್ತ ಹೊರಡುತ್ತೇನೆ. ಬಹುಶಃ ಎಲ್ಲರೂ ಹೀಗೇ ಮಾಡುತ್ತಾರೆ. ಎಲ್ಲರೂ ಮನೆ ಸೇರುವ ಕನಸಿನಲ್ಲೇ ನಿದ್ದೆ ಹೋಗಿದ್ದಾರೇನೋ ಅಂತ ಅಂದುಕೊಂಡ. 

ರೈಲು ಹಳಿ ಬದಲಿಸಿದ ಶಬ್ದವಾಯಿತು. 

ಯಾವುದೋ ಸ್ಟೇಶನ್‌ ಬರುತ್ತಿದೆ ಎಂದು ಮಲಗಿದ್ದವ ಎದ್ದು ಕೂತ. ಚಹ ಮಾರುವವನು ಬಂದರೆ ಒಂದು ಕಪ್‌ ತೆಗೆದುಕೊಳ್ಳಬೇಕು. ಹೇಗಿದ್ದರೂ ನಿದ್ದೆ ಬರುವುದಿಲ್ಲ. ಚಹ ಕುಡಿದು ಇನ್ನಷ್ಟು ಫ್ರೆಶ್‌ ಆಗಿ ಯೋಚಿಸಬಹುದು ಎಂದು ಉತ್ಸಾಹಗೊಂಡ. 

ರೈಲೇನೋ ನಿಂತಿತು. ಆದರೆ, ಅಪರಾತ್ರಿಯಲ್ಲಿ ಚಹ ಮಾರುವ ಒಬ್ಬನೂ ಕಾಣಲಿಲ್ಲ. ಅವನಂತೆ ನಿದ್ದೆಗೇಡಿಗಳಾಗಿದ್ದ ಅಲ್ಲೊಬ್ಬರು ಇಲ್ಲೊಬ್ಬರು ಇಳಿದು ದಿಕ್ಕೆಟ್ಟವರಂತೆ ಡಬ್ಬಿಯ ಹತ್ತಿರವೇ ನಿಂತಿದ್ದರು. ಯಾವುದೋ ಒಂದು ಸ್ಟೇಶನ್‌ ಅದು. ನೋಡಲು ದೊಡ್ಡದಾಗೇ ಇದ್ದರೂ ಜನ ಕಾಣಲಿಲ್ಲ. 

ಸಿಳ್ಳೆ ಹೊಡೆದು ಸೂಚನೆ ಕೂಡ ನೀಡದೇ ರೈಲು ನಿಧಾನವಾಗಿ ಚಲಿಸತೊಡಗಿದ್ದನ್ನು ಕಂಡು ಲಗುಬಗೆಯಿಂದ ಏರಿ ನಿಂತ. ಸ್ಟೇಶನ್‌ ದಾಟುವವರೆಗೂ ಬಾಗಿಲ ಹತ್ತಿರ ನಿಂತವ, ಮತ್ತೆ ಬೋಲ್ಟ್‌ ಬಿಗಿದು ತನ್ನ ಬರ್ಥ್‌ ಏರಿ ಮಲಗಿದ. ಮತ್ತೆ ರೈಲಿನ ಗಾನ ಶುರುವಾಯ್ತು. ಅದುವರೆಗೆ ಸ್ತಬ್ದವಾಗಿದ್ದ ಹೊರಚಾಚಿದ ಕಾಲುಗಳು ಮತ್ತೆ ಲಯಬದ್ಧವಾಗಿ ಅಲುಗತೊಡಗಿದವು.

*****

ಧಕ್ಕನೇ ಎಚ್ಚರವಾಯಿತು.

ಎಲ್ಲಿದ್ದೇನೆ ಎಂಬುದು ತಿಳಿಯಾಗಲು ಕೊಂಚ ಸಮಯವೇ ಬೇಕಾಯಿತು. ಮೈ ಬೆವೆತುಹೋಗಿತ್ತು. ಹೊರಗೆ ಮಳೆ ನಿಂತಿದ್ದರಿಂದ, ಕೋಣೆಯೊಳಗೆ ಒಂಥರಾ ಧಗೆ. ಹೊದ್ದುಕೊಂಡಿದ್ದ ರಗ್‌ ಒದ್ದಿದ್ದ ಮಗಳು, ಒಂದು ಕೈಯಿಂದ ಕತ್ತು ಬಳಸಿಕೊಂಡು ಮಲಗಿದ್ದಳು. 

ಓಹ್‌... ಎಂದುಕೊಂಡ. ತಿಳಿಯಾಗುತ್ತಿದ್ದ ಮನಸು ಆಗ ತಾನೆ ಕಂಡಿದ್ದ ಕನಸಿನ ವಿವರಗಳನ್ನು ಹೆಕ್ಕುತ್ತಿತ್ತು. ನಾನೀಗ ಮನೆಯಲ್ಲಿದ್ದೇನೆ. ಶವದ ರೈಲು ಕೇವಲ ಕನಸು ಎಂಬುದು ಮನವರಿಕೆಯಾದಾಗ ನೆಮ್ಮದಿ ಮೂಡಿತು. ಎದ್ದು ಫ್ಯಾನ್ ಹಾಕಿದ. ತಂಗಾಳಿ ಕೋಣೆ ಸುತ್ತತೊಡಗಿದಾಗ ನಿದ್ದೆ ಪೂರ್ತಿ ಹರಿದುಹೋಗಿ ಸುಮ್ಮನೇ ಕೂತ.

ಬದುಕು ಎಷ್ಟು ವಿಚಿತ್ರ. ನಿತ್ಯ ಒಂದಿಷ್ಟು ಕನಸುಗಳು ಬೀಳುತ್ತವೆ. ಕೆಲವೊಂದು ನನಸಾಗದೇ ಕಾಡುತ್ತವೆ. ಕೆಲವೊಂದು ಕನಸಾಗಿದ್ದರೂ ಕಾಡುತ್ತವೆ. 

ಮಗಳು ಮತ್ತೆ ಕನವರಿಸಿದಳು. ತಾನು ಪಕ್ಕದಲ್ಲೇ ಇದ್ದೇನೆ ಎಂಬುದನ್ನು ಆಕೆಗೆ ಮನವರಿಕೆ ಮಾಡಿಕೊಟ್ಟ ಆತ, ಮಗಳ ಕನಸು ಏನಿರಬಹುದು ಎಂದು ಯೋಚಿಸಿದ. 

ಸ್ವೆಟರ್‌ ನೆನಪಾಯ್ತು. 

‘ಆಯ್ತು ಪುಟ್ಟಾ, ನಾಳೆ ನಿನಗೆ ಖಂಡಿತ ಸ್ವೆಟರ್‌ ಕೊಡಿಸ್ತೀನಿ’ ಎಂದು ಗಟ್ಟಿಯಾಗಿ ಹೇಳಿದ. ಆತನ ಮಾತು ಕೇಳಿತೇನೋ ಎಂಬಂತೆ, ಮಲಗಿದ್ದ ಮಗು, ನಿದ್ದೆಯಲ್ಲೇ ಆತನ ಕೈಯನ್ನು ಬಿಗಿಯಾಗಿ ಹಿಡಿದುಕೊಂಡಿತು.

ಮನಸ್ಸು ತಿಳಿಯಾದಂತಾಗಿ ಮೆಲ್ಲಗೇ ಆತ ಒರಗಿಕೊಂಡ. ಏನೊಂದು ಪ್ರಯತ್ನವೂ ಇಲ್ಲದೇ ಕೆಲ ಹೊತ್ತಿನಲ್ಲೇ ಗಾಢ ನಿದ್ದೆ ಆವರಿಸಿತು. 

ಕನಸುಗಳೇ ಇಲ್ಲದ ಮಾಯಾ ನಿದ್ದೆ!

- ಚಾಮರಾಜ ಸವಡಿ 

ನಕ್ಷತ್ರಗಳಿಗೊಂದು ಮೊರೆ

16 Apr 2011

2 ಪ್ರತಿಕ್ರಿಯೆ
ಹೊರಗೆ ಸಣ್ಣಗೆ ಮಳೆ.
ಒಳಗೆ ದಟ್ಟೈಸಿದ ಕಾರ್ಮೋಡ. ಮಿಂಚಿಲ್ಲ, ಗುಡುಗಿಲ್ಲ. ಹನಿಯುತ್ತಿರುವ ಸೋನೆ ಮಳೆ ಬಿರುಮಳೆಯಾಗುವ ಸೂಚನೆಯೂ ಇಲ್ಲ.
ನನ್ನ ಹುಟ್ಟೂರು ಅಳವಂಡಿ ನೆನಪಾಗುತ್ತಿದೆ. 
ಯಾವುದೇ ಸಣ್ಣ ಖುಷಿಯಿರಲಿ, ನೋವಿರಲಿ, ವಂಚನೆ ಆಘಾತ ಕಳವಳ ಖಿನ್ನತೆ ಅಪರಾಧಿ ಭಾವನೆ- ಹೀಗೆ ಯಾವ ಭಾವ ಉಕ್ಕಿದರೂ ಜೊತೆಗೆ ಊರ ನೆನಪು ಉಕ್ಕುತ್ತದೆ. ಇವತ್ತೂ ಹಾಗೇ ಆಯಿತು. ಬಹುದಿನಗಳಿಂದ ರೂಢಿ ಮಾಡಿಕೊಂಡಿರುವ, ಇನ್ನೂ ಅನಾವರಣಗೊಳ್ಳಬೇಕಾಗಿರುವ ವೆಬ್‌ಸೈಟೊಂದಕ್ಕೆ ಎಂದಿನಂತೆ ದಿನದ ಸುದ್ದಿಗಳನ್ನು ಪೋಣಿಸುತ್ತಿದ್ದ ಹೊತ್ತಿನಲ್ಲಿ, ಸದ್ದಿಲ್ಲದೇ ಕರೆಂಟ್ ಮಾಯ. ನಾನಿದ್ದೇನೆ ಬಿಡು ಎಂಬಂತೆ ಯುಪಿಎಸ್ ವಿದ್ಯುತ್ ಬೆಳಗಿದರೂ ಹೊರಗೆ ಓಣಿಯಲ್ಲೆಲ್ಲ ಕವಿದ ಕತ್ತಲಲ್ಲಿ, ಲೈಟಿರುವ ನನ್ನ ಮನೆ ವಿಚಿತ್ರವಾಗಿ ಕಾಣುತ್ತಿದೆ. ಮನೆಯೊಳಗಿನ ಅನಗತ್ಯ ದೀಪಗಳನ್ನಾರಿಸಿ, ಮತ್ತೆ ನನ್ನ ಕೋಣೆಯಲ್ಲಿ ಬಂದು ಕೂತೆ. 
ಹೊರಗೆ ಬೆಳಕಿದ್ದರೂ ಒಳಗೆ ಕತ್ತಲು.
ನನ್ನ ಬಹುತೇಕ ಬದುಕು ಸಾಗಿ ಬಂದ ಪರಿಗೆ ಸಾಕ್ಷಿಯೆಂಬಂತೆ ಈ ವೈರುದ್ಧ್ಯ ರಾಚುತ್ತದೆ. ಹೊರಗೆ ಬೆಳಕಿದ್ದಾಗ ನನ್ನೊಳಗೆ ಕತ್ತಲು, ಒಳಗೆ ಬೆಳಕು ಅರಳಿ ನಿಂತ ಹೊತ್ತಿನಲ್ಲಿ ಹೊರಗೆ ಕತ್ತಲು ಕವಿದಿರುತ್ತದೆ. ಸ್ವಾನುಕಂಪವಲ್ಲ. ಹುಚ್ಚುತನವೂ ಅಲ್ಲ. ಎಷ್ಟೋ ಸಾರಿ ಈ ವೈರುದ್ಧ್ಯ ಕುರಿತು ಯೋಚಿಸಿದ್ದೇನೆ. ಪದೆ ಪದೆ ಏಕೆ ಹೀಗಾಗುತ್ತದೆ ಅಂತ ಅಚ್ಚರಿಪಟ್ಟಿದ್ದೇನೆ. ಬ್ಯಾಟಿಂಗ್ ಬರುವ ಹೊತ್ತಿಗೆ ಓವರ್‌ಗಳು ಮುಗಿದಂತೆ, ನಿರೀಕ್ಷಿಸಿದ್ದು ಬಂತೆಂಬ ಸಡಗರದಿಂದ ಎದ್ದು ನಿಲ್ಲುವ ಮುನ್ನವೇ ಅದು ಸದ್ದಿಲ್ಲದೇ ಇಲ್ಲವಾಗಿರುತ್ತದೆ.
ಹೊರಗೆ ಸಣ್ಣಗೆ ಮಳೆ.
ಸುದ್ದಿ ಜೋಡಿಸಿಯಾಯ್ತು. ದಿನದ ಮುಖ್ಯ ಘಟ್ಟವೊಂದು ಮುಗಿದ ನಿರಾಳತೆ. ಸಿದ್ಧಗೊಳ್ಳುತ್ತಿರುವ ವೆಬ್‌ಸೈಟ್‌ನಲ್ಲಿ ಈ ಸುದ್ದಿಗಳು ಹೇಗೆ ಕಾಣಬಹುದೆಂಬ ಬಸಿರಿ ತಾಯಿಯ ಕನಸೊಂದು ಎಂದಿನಂತೆ ಅರಳುತ್ತದೆ. ಕೆಲ ಕ್ಷಣ ಆ ನಿರಾಳತೆಯಲ್ಲಿ ಮನಸಾರೆ ಮುಳುಗುತ್ತೇನೆ. 
ಆದರೆ, ಅದು ಕೆಲ ಕ್ಷಣಗಳ ಕಾಲ ಮಾತ್ರ.
ಸಣ್ಣಗೇ ಉಕ್ಕತೊಡಗುವ ಖಿನ್ನತೆ ಊರಿನ ನೆನಪುಗಳನ್ನು ಹೊತ್ತು ತರುತ್ತದೆ. ನನ್ನೂರಿನ ಮಣ್ಣಿನ ಮಾಳಿಗೆಯ ಮೇಲೆ, ನೆಲದ ಮೇಲೆ ಏನನ್ನೂ ಹಾಸದೇ, ಹಾಗೇ ಮಲಗಿ, ಕಣ್ಣು ಕೋರೈಸುವ ನಕ್ಷತ್ರಗಳನ್ನು ದಿಟ್ಟಿಸುತ್ತಿದ್ದ ದಿನಗಳು ನೆನಪಾಗುತ್ತವೆ. ನನ್ನೊಳಗಿರುವ ಕನಸುಗಳಿಗೆ ಶಕ್ತಿ ಕೊಟ್ಟ ದಿವ್ಯ ದೇವತೆಗಳವು. ಸವಾಲುಗಳನ್ನು ಎದುರಿಸುವ ಕೆಚ್ಚು ತುಂಬಿದ ಕಿಡಿಗಳವು. ಇವತ್ತೇಕೋ ಹನಿಯುತ್ತಿರುವ ಮಳೆಯ ನಡುವೆ, ಉಕ್ಕತೊಡಗಿರುವ ಖಿನ್ನತೆಯ ಮಧ್ಯೆ, ನನ್ನೂರಿನ ದಿವ್ಯ ಆಗಸದ ಆ ನಕ್ಷತ್ರಕಿಡಿಗಳು ಮತ್ತೆ ಮತ್ತೆ ನೆನಪಾಗತೊಡಗಿವೆ.
ಕೆಲಸ ಮುಗಿದಿದ್ದರಿಂದ, ಯುಪಿಎಸ್ ಏಕೆ ದಣಿಸಬೇಕೆಂದು ಲೈಟಾರಿಸಿ ಕತ್ತಲಲ್ಲಿ ಸುಮ್ಮನೇ ಕೂಡುತ್ತೇನೆ. ಊರ ಮುಗಿಲಿನೊಳಗೆ ಅರಳಿ ನಿಲ್ಲುತ್ತಿದ್ದ ನಕ್ಷತ್ರಗಳು ಛಾವಣಿಯಲ್ಲಿ ಕಂಡಾವೇನೋ ಎಂಬ ವಿಚಿತ್ರ ಆಸೆ. ಆದರೆ, ಬೆಂಗಳೂರಿನ ಬಯಲಲ್ಲಿ ನಿಂತರೂ ಬೆಳಕಿನ ಮೋಡದ ಮಧ್ಯೆ ಮಂಕಾಗುವ ನಕ್ಷತ್ರಗಳು, ಲೈಟಾರಿಸಿದ ಛಾವಣಿಯಲ್ಲಿ ಕಂಡಾವಾದರೂ ಹೇಗೆ? ಮತ್ತದೇ ಕತ್ತಲು, ಏಕಾಂತ, ಖಿನ್ನತೆ. 
ಒಂದು ಸ್ನಿಗ್ಧ ಪ್ರೀತಿಗಾಗಿ ಹಂಬಲಿಸುತ್ತಿದ್ದ ದಿನಗಳು ನೆನಪಾಗುತ್ತಿವೆ. ಓದಲು ಪಠ್ಯಪುಸ್ತಕ ಬಿಟ್ಟು ಬೇರೊಂದು ಸಿಗದ ವಾತಾವರಣದಲ್ಲಿ ಪುಕ್ಕಟೆ ಕನಸುಗಳನ್ನು ಕಾಣುವುದು ಬಿಟ್ಟು ಬೇರೆ ದಾರಿ ಇದ್ದಿಲ್ಲ. ರಜಾ ದಿನಗಳು ಬಂದಾಗ, ಪಠ್ಯಪುಸ್ತಕಗಳ ಓದೂ ಇಲ್ಲವಾಗುತ್ತಿತ್ತು. ನನ್ನ ಮುಂದಿನ ತರಗತಿಯ ಕನ್ನಡ ವಿಷಯದ ಪುಸ್ತಕವನ್ನು ಅದ್ಹೇಗೋ ಹೊಂಚಿಕೊಂಡು ಒಂದೇ ದಿನದಲ್ಲಿ ಓದಿ ಮುಗಿಸುತ್ತಿದ್ದೆ. ನಂತರ ಬಿರು ಬಿಸಿಲು, ಕಡು ಸೆಕೆ ಮತ್ತು ಕನಸುಗಳೊಳಗೆ ಬದುಕು ಮುಳುಗಿಹೋಗುತ್ತಿತ್ತು. ಮನೆಯಲ್ಲಿ ನಡೆಯುತ್ತಿದ್ದ ಹಪ್ಪಳ-ಸಂಡಿಗೆ-ಉಪ್ಪಿನಕಾಯಿ-ಶ್ಯಾವಿಗೆ ತಯಾರಿಯ ಸಡಗರದಲ್ಲಿ ಅರೆಮನಸ್ಸಿನಿಂದ ತೊಡಗಿಕೊಂಡ ಮನಸ್ಸು ಸಂಜೆಯಾಗುವುದನ್ನೇ ಕಾಯುತ್ತಿತ್ತು.
ಸಾಮಾನ್ಯವಾಗಿ ಕರೆಂಟಿಲ್ಲದಿರುತ್ತಿದ್ದ ರಾತ್ರಿಗಳಲ್ಲಿ ಮಾಳಿಗೆ ಮೇಲೆ ಹೋಗಿ ಅಂಗಾತ ಮಲಗಿಕೊಂಡು ನಕ್ಷತ್ರಗಳನ್ನು ದಿಟ್ಟಿಸುತ್ತಿದ್ದೆ. ಸಾವಿರಾರು ಕನಸುಗಳನ್ನು ಆ ನಕ್ಷತ್ರಗಳು ನನ್ನೊಳಗೆ ತುಂಬಿವೆ. ಅವುಗಳೊಂದಿಗೆ ಸುದೀರ್ಘ ಮೌನ ಸಂಭಾಷಣೆ ನಡೆಸಿದ್ದೇನೆ. ಪ್ರಶ್ನೆಗಳನ್ನು ಕೇಳಿ ಉತ್ತರ ಪಡೆದುಕೊಂಡಿದ್ದೇನೆ. ನನ್ನ ನಿರಾಶೆಗಳನ್ನು ಅವು ಸಂತೈಸಿವೆ. ನೋವನ್ನು ಸಹನೀಯವಾಗಿಸಿವೆ. ಮೌನ ಸಾಂಗತ್ಯದಲ್ಲೂ ಪರಮಶಕ್ತಿಯಿದೆ ಎಂಬುದನ್ನು ಮೌನವಾಗಿಯೇ ನನ್ನೊಳಗೆ ತುಂಬಿವೆ. ನಕ್ಷತ್ರಗಳ ಲೋಕದೊಳಗಿನ ಆ ಪಯಣ ಇವತ್ತಿಗೂ ನನ್ನ ಅತ್ಯಂತ ಸ್ಮರಣೀಯ ನೆನಪುಗಳಲ್ಲಿ ಒಂದು.
‘ಕತ್ತಲ್ದಾಗ ಒಬ್ನ ಕೂತು ಏನ್ ಮಾಡ್ತೀ?’ ಎಂದು ಮನೆಯವರು ಆಗಾಗ ಕೇಳುತ್ತಿದ್ದರು. ಏನಂತ ಹೇಳೋದು. ಓರಗೆಯ ಹುಡುಗರು ಕತ್ತಲು ತುಂಬಿದ ಓಣಿಗಳಲ್ಲಿ ಕಳ್ಳ-ಪೊಲೀಸ್ ಆಟವಾಡುತ್ತಿರುವಾಗ ಇವನೊಬ್ಬ ಮೇಲೆ ಹೋಗಿ ಏನು ಮಾಡ್ತಾನೆ ಎಂಬ ಗೊಂದಲ ಅವರದಾಗಿತ್ತು. ಕ್ರಮೇಣ ನನ್ನ ಅನ್ಯಮನಸ್ಕತೆ, ಅಂತರ್ಮುಖತೆ ಅವರಿಗೆ ಅರ್ಥವಾಯಿತೋ ಅಥವಾ ಇವನಿಗೆ ಹೇಳಿ ಉಪಯೋಗವಿಲ್ಲ ಎಂದು ಅಂದುಕೊಂಡರೋ- ಒಟ್ಟಿನಲ್ಲಿ ಪ್ರಶ್ನಿಸುವುದು ತಪ್ಪಿತು. ನಾನು ಮತ್ತಷ್ಟು ಆನಂದದಿಂದ ನಕ್ಷತ್ರ ಸಾಂಗತ್ಯದಲ್ಲಿ ಮುಳುಗಿಹೋದೆ.
ಎಸ್ಸೆಸ್ಸೆಲ್ಸಿ ಮುಗಿಸಿ ಮುಂದಿನ ಓದಿಗೆಂದು ಮೊದಲ ಬಾರಿ ಹುಟ್ಟಿ ಬೆಳೆದ ಊರು ಬಿಡಬೇಕಾಗಿ ಬಂದಾಗ ಇವೇ ನಕ್ಷತ್ರಗಳ ಬಳಿ ಅತ್ತಿದ್ದೆ. ಮುಂದಿನ ಬದುಕು ಹೇಗೋ ಎಂದು ಕಳವಳಪಟ್ಟಿದ್ದೆ. ಉಕ್ಕುತ್ತಿದ್ದ ಕನಸುಗಳಿಗೆ, ನವಿರು ಭಾವನೆಗಳಿಗೆ ಸ್ಪಷ್ಟರೂಪ ಕೊಡಲಾಗದೇ ಒದ್ದಾಡಿದ್ದೆ. ಏರ್‌ಫೋರ್ಸ್‌ಗೆ ನೇಮಕವಾದಾಗಲೂ ಇವೇ ನಕ್ಷತ್ರಗಳು ನನಗೆ ದಾರಿ ತೋರಿದ್ದವು. ನನ್ನೂರಿನಲ್ಲಿ ಕಂಡ ಅವೇ ನಕ್ಷತ್ರಗಳನ್ನು ಕಚ್ಛ್‌ನ ರಣಪ್ರದೇಶದ ಆಗಸದಲ್ಲೂ ಕಂಡಿದ್ದೇನೆ. ಊರು ಸೇರಿದ ನೆಮ್ಮದಿ ಅನುಭವಿಸಿದ್ದೇನೆ.
ಮೋಡ ಮುಸುಕಿ ಮುಸುಮುಸು ಅಳುತ್ತಿರುವ ಬೆಂಗಳೂರಿನ ಆಗಸ ಏಕೋ ನನ್ನೂರ ನಕ್ಷತ್ರಗಳನ್ನು ನೆನಪಿಸುತ್ತಿದೆ. ಸಣ್ಣಗೇ ಖಿನ್ನತೆ ಉಕ್ಕುತ್ತಿದೆ. ಅಂದುಕೊಂಡಿದ್ದಕ್ಕಿಂತ ವೇಗವಾಗಿ ಬದಲಾಗುತ್ತಿರುವ ವೃತ್ತಿ ಜೀವನದ ಮಧ್ಯೆ ನನ್ನ ಪ್ರವೃತ್ತಿ ಬದಲಾಗದೇ ಹಾಗೇ ಉಳಿದಿರುವ ಬಗ್ಗೆ ಅಚ್ಚರಿಯೂ ಆಗುತ್ತಿದೆ. ನನ್ನ ಸೋಲುಗಳಿಗೆ ಈ ನಿರ್ಲಿಪ್ತಭಾವವೇ ಕಾರಣವಾ ಎಂಬ ಗೊಂದಲವೂ ಕಾಡುತ್ತಿದೆ.
ಕೂತ ಕೋಣೆಯ ಛಾವಣಿಯನ್ನೇ ಮತ್ತೆ ಮತ್ತೆ ದಿಟ್ಟಿಸುತ್ತೇನೆ. ಇವತ್ತೇಕೋ ನಾನು ಗೊಂದಲದಲ್ಲಿದ್ದೇನೆ. ಮಿತಿ ದಾಟಿದ ಮಾತೊಂದು ಮನನೋಯಿಸಿತಾ ಎಂಬ ಅಪರಾಧಿ ಭಾವನೆಯೊಂದಿದೆ. ಇತ್ತೀಚೆಗೇಕೋ ತೋರದ ಹಸಿವು ಬಾರದ ನಿದ್ದೆಗಳ ಬಗ್ಗೆ ತಕರಾರಿದೆ. ಇವೆಲ್ಲ ಸೇರಿ ಗೊಂದಲಗೊಂಡಿದ್ದೇನೆ. ಮಂಕಾಗಿದ್ದೇನೆ. ನಕ್ಷತ್ರಗಳ ಬಳಿ ಪರಿಹಾರ ಕಂಡುಕೊಳ್ಳಬೇಕಿದೆ.
ಆದರೆ, ಹೊರಗೆ ಮೋಡ ಮುಸುಕಿದ ಆಗಸ. ಒಳಕೋಣೆಯ ಛಾವಣಿಯೂ ಏಕೋ ಖಾಲಿಖಾಲಿ. ಕರೆಂಟಿಲ್ಲದ ರಾತ್ರಿಯಾಗಿದ್ದರೂ ನಕ್ಷತ್ರಗಳು ಕಾಣುತ್ತಿಲ್ಲ. ಮನಸ್ಸಿನ ಮಂಕು ಕಳೆಯುತ್ತಿಲ್ಲ. ನಾನು ಮತ್ತೆ ಮತ್ತೆ ಅವನ್ನು ಕರೆಯುತ್ತಿದ್ದೇನೆ. ನನ್ನೂರಿನ ಕಡು ಕತ್ತಲೆಯ ಆಗಸದಲ್ಲಿ ಸದ್ದಿಲ್ಲದೇ ಮಿನುಗುತ್ತ ಸಂತೈಸುತ್ತಿದ್ದ ಅವು ಮತ್ತೆ ಮತ್ತೆ ನೆನಪಾಗುತ್ತಿವೆ. 
ಮಳೆ ಸದ್ದಿಲ್ಲದೇ ಹನಿಯುತ್ತಲೇ ಇದೆ, ಒಳಮನೆಯೊಳಗೆ ಕೂತ ನನ್ನಳಲನ್ನು ಅರ್ಥ ಮಾಡಿಕೊಂಡಂತೆ!
- ಚಾಮರಾಜ ಸವಡಿ

ಕಾಡುವ ಧಾರವಾಡದ ನೆನಪು

13 Feb 2011

2 ಪ್ರತಿಕ್ರಿಯೆ
ಇವತ್ತೇಕೋ ಧಾರವಾಡ ತುಂಬ ನೆನಪಾಗುತ್ತಿದೆ.

ಹಲವಾರು ಕಾರಣಗಳಿಂದಾಗಿ ನೆನಪಿನ ಶಾಶ್ವತ ಭಾಗವಾಗಿರುವ ಧಾರವಾಡವನ್ನು ನಾನು ಮೊದಲ ಬಾರಿ ನೋಡಿದ್ದು ೧೯೮೬ರಲ್ಲಿ. ಪಿಯುಸಿ ಸೈನ್ಸ್‌ನಲ್ಲಿ ನಾನು ಡಿಬಾರಾದ ವರ್ಷ ಅದು. ಖಿನ್ನತೆ ತಾಳಲಾರದೇ ಊರು ಬಿಟ್ಟು ಹೋಗಲು ನಿರ್ಧರಿಸಿದ್ದ ಹಾಗೂ ಹೊರಟೇ ಹೋಗಿದ್ದ ವರ್ಷವದು.

ಪಿಯುಸಿಯಲ್ಲಿ ಏಕೆ ಮತ್ತು ಹೇಗೆ ಡಿಬಾರಾದೆ ಎಂಬುದನ್ನು ಬರೆದರೆ ಅದೇ ದೊಡ್ಡ ಕತೆಯಾಗುವುದರಿಂದ ಸದ್ಯಕ್ಕೆ ಬೇಡ. ಆ ವರ್ಷದ ಬೇಸಿಗೆ ರಜೆಗಳು ಮುಗಿದು ಎಂದಿನಂತೆ ಕಾಲೇಜುಗಳು ಶುರುವಾಗಿದ್ದವು. ಆಗ ಧಾರವಾಡ ಜಿಲ್ಲೆಗೆ ಸೇರಿದ್ದ, ಈಗ ಗದಗ್ ಜಿಲ್ಲೆಯಲ್ಲಿರುವ ರೋಣ ತಾಲ್ಲೂಕಿನ ನರೇಗಲ್ ಪಟ್ಟಣದ ಸೆರಗಿನಲ್ಲಿರುವ ಪುಟ್ಟ ಹಳ್ಳಿ ಕೋಡಿಕೊಪ್ಪದಲ್ಲಿ ನಾನು ರೂಮು ಮಾಡಿಕೊಂಡಿದ್ದೆ. ಏಳಡಿ ಉದ್ದ ಹಾಗೂ ಐದಡಿ ಅಗಲವಿದ್ದ ಪುಟ್ಟ ರೂಮಿನಲ್ಲಿ, ನನ್ನ ಸಹಪಾಠಿಯೊಬ್ಬನೊಂದಿಗೆ ವಾಸವಾಗಿದ್ದೆ. ಅವನ ಬಿ.ಎಸ್ಸಿ. ತರಗತಿಗಳು ಬೆಳಿಗ್ಗೆ ೭ಕ್ಕೇ ಶುರುವಾಗುತ್ತಿದ್ದರಿಂದ, ನಾನು ಕಣ್ಣು ಬಿಡುವಷ್ಟರಲ್ಲಿ ಅವ ಕಾಲೇಜಿಗೆ ಹೋಗಿಯಾಗಿರುತ್ತಿತ್ತು.

ಡಿಬಾರಾಗಿದ್ದರಿಂದ ಒಂದು ವರ್ಷದವರೆಗೆ ಪರೀಕ್ಷೆ ಬರೆಯುವಂತಿರಲಿಲ್ಲ. ತರಗತಿಗಳಿಗೂ ಹೋಗುವಂತಿರಲಿಲ್ಲ. ಅವು ಬಿರು ಮಳೆಯ ದಿನಗಳು. ಬಾಗಿಲು ತೆರೆದರೆ ಹೊರಗೆ ಜಡಿ ಮಳೆ. ಮಂಕಾದ ಆಗಸ. ಅದಕ್ಕಿಂತ ಮಂಕಾದ ಮನಸ್ಸು.

ಕಾಲೇಜಿಗೆ ಹೋಗುವಂತಿರಲಿಲ್ಲ. ಕಳೆದ ವರ್ಷ ಚೆನ್ನಾಗಿ ಓದಿದ್ದೆನಾದ್ದರಿಂದ ಹಾಗೂ ಪರೀಕ್ಷೆಗಿನ್ನೂ ಒಂದು ವರ್ಷ ಬಾಕಿ ಇದ್ದುದರಿಂದ, ಪುಸ್ತಕದ ಮುಖ ನೋಡಲು ಮನಸ್ಸಾಗುತ್ತಿರಲಿಲ್ಲ. ಮನೆ ಮಾಲೀಕ ಸಂಜೆ ೬ರಿಂದ ಬೆಳಗಿನ ೬ರವರೆಗೆ ಮಾತ್ರ ವಿದ್ಯುತ್ ಸಂಪರ್ಕ ಕೊಡುತ್ತಿದ್ದುದರಿಂದ, ಮಳೆಗಾಲದ ಬೆಳಗಿನ ಸಮಯ ರೂಮಿನಲ್ಲಿ ಕತ್ತಲು ತುಂಬಿರುತ್ತಿತ್ತು. ಆ ಅರೆಗತ್ತಲಿನ ಮಂಕು ವಾತಾವರಣದಲ್ಲಿ ಪಿಳಿಪಿಳಿ ಕಣ್ಬಿಡುತ್ತಾ ಗತಕಾಲವನ್ನು ನೆನಪಿಸಿಕೊಂಡು ಕೂಡುತ್ತಿದ್ದೆ.

ನಿಜಕ್ಕೂ ಕೆಟ್ಟ ದಿನಗಳವು.

ಮನಸ್ಸು ಬಿಚ್ಚಿ ಮಾತಾಡಬಲ್ಲಂಥ ಒಬ್ಬನೇ ಒಬ್ಬ ಗೆಳೆಯನಿಲ್ಲದ, ಜೇಬಿನಲ್ಲಿ ಹಣವಿಲ್ಲದ, ಮಾಡಲು ಕೆಲಸವಿಲ್ಲದ, ಓದಲು ಆಸಕ್ತಿಯಿಲ್ಲದ ದರಿದ್ರ ದಿನಗಳವು. ಹಾಗೆ ನೋಡಿದರೆ ನಾನು ಶ್ರದ್ಧಾವಂತ ವಿದ್ಯಾರ್ಥಿ. ಈಗಲೂ ನನ್ನದು ಅದೇ ಮನಃಸ್ಥಿತಿ. ಕಾಲೇಜು, ಟ್ಯೂಶನ್, ಅರ್ಧ ಗಂಟೆಯ ಸಾಧಾರಣ ಅಡುಗೆ ಬಿಟ್ಟರೆ ನನ್ನ ಬಹುತೇಕ ಸಮಯ ಪುಸ್ತಕಗಳೊಂದಿಗೇ ಇರುತ್ತಿತ್ತು. ಈಗ ಅವೆಲ್ಲ ಚಟುವಟಿಕೆಗಳು ಇಲ್ಲವಾಗಿ, ಚಿಂತೆ ಮಾಡುವುದೊಂದೇ ಪೂರ್ಣಾವಧಿ ಕೆಲಸವಾಗಿತ್ತು.

ಹೊರಗೆ ಬಿರುಮಳೆ. ಒಳಗೆ ನೆನಪಿನ ಹೊಳೆ.

ಎರಡೇ ವಾರಗಳಲ್ಲಿ ಸಾಕುಸಾಕಾಗಿ ಹೋಯಿತು. ಓಡುವ ಕುದುರೆಯ ಕಾಲು ಮುರಿಯುವುದಕ್ಕಿಂತ ಕೆಟ್ಟದ್ದು ಇನ್ನೇನಿರುತ್ತದೆ? ಒಂದೆಡೆ ಪುಸ್ತಕಗಳನ್ನು ಕಂಡರಾಗದ ಮನಃಸ್ಥಿತಿ. ಇನ್ನೊಂದೆಡೆ ಪೈಸೆ ಪೈಸೆಯನ್ನೂ ಲೆಕ್ಕ ಹಾಕಿ ಬಳಸಬೇಕಾದ ದುಃಸ್ಥಿತಿ. ಹೊರಗೆ ಹೋಗಲಾಗದ, ಒಳಗೂ ಇರಲಾಗದ ಪರಿಸ್ಥಿತಿ ನನ್ನನ್ನು ಹಿಂಡಿಹಾಕಿತು. ಇನ್ನು ಹೀಗೆ ಇದ್ದರೆ ಸತ್ತೇ ಹೋಗುತ್ತೇನೆ ಎಂದು ತೀವ್ರವಾಗಿ ಅನ್ನಿಸಿದಾಗ, ಓಡಿ ಹೋಗಲು ನಿರ್ಧರಿಸಿದೆ.

ಬಹುಶಃ ಪ್ರತಿಯೊಬ್ಬ ವ್ಯಕ್ತಿಯೂ ಬದುಕಿನ ಒಂದಲ್ಲ ಒಂದು ಹಂತದಲ್ಲಿ ಇಂಥದೊಂದು ಮನಃಸ್ಥಿತಿಗೆ ಬರುತ್ತಾನೆ ಅನಿಸುತ್ತದೆ. ಈಗಿರುವ ಬದುಕು ಹಿಂಡತೊಡಗಿದಂತೆ, ಕಾಣದ ಜಗತ್ತು ಕರೆಯತೊಡಗುತ್ತದೆ. ದುರಸ್ತಿಯಾಗದ ಈಗಿನ ಬದುಕಿಗಿಂತ, ಏನೂ ಗೊತ್ತಿರದ ಬದುಕಿನೆಡೆಗೆ ಮನಸ್ಸು ತುಡಿಯತೊಡಗುತ್ತದೆ. ಕಾಣದ ಜಗತ್ತಿನ ವಿಚಿತ್ರ ಆಕರ್ಷಣೆ ಸೆಳೆಯತೊಡಗುತ್ತದೆ. ಅಲ್ಲಿ ಪರಿಸ್ಥಿತಿ ಈಗಿನದಕ್ಕಿಂತ ನಿಕೃಷ್ಟವಾಗಿರಲಾರದು ಎಂಬ ಅನಿಸಿಕೆ ಬಲಗೊಳ್ಳುತ್ತ ಹೋದಂತೆ, ಎದ್ದು ಹೋಗಬೇಕೆನ್ನುವ ಉತ್ಕಟತೆ ಉಕ್ಕತೊಡಗುತ್ತದೆ.

ಬಿರು ಮಳೆಯ ೧೯೮೬ರ ದಿನಗಳು ಅಂಥದೊಂದು ಬಯಕೆಯನ್ನು ನನ್ನೊಳಗೆ ಬಲಗೊಳಿಸುತ್ತ ಹೋದವು.

ಅವತ್ತೊಂದಿನ ಮನಸ್ಸು ತುಂಬಾ ಬಳಲಿತ್ತು. ಊಟ ಮಾಡಲೂ ಮನಸ್ಸಾಗಲಿಲ್ಲ. ಬೆಳಿಗ್ಗೆಯಿಂದ ಸುಮ್ಮನೇ ಕೂತವನಲ್ಲಿ ಸಾವಿರಾರು ವಿಚಾರಗಳು ಉಕ್ಕುತ್ತಿದ್ದವು. ಪರಿಸ್ಥಿತಿ ಬದಲಾಗದೇ ಇದ್ದಾಗ, ನಾನಾದರೂ ಬದಲಾಗಬೇಕು ಎಂದು ನಿರ್ಧರಿಸಿದೆ. ಮಧ್ಯಾಹ್ನದ ಹೊತ್ತಿಗೆ ಮನಸ್ಸು ದೃಢವಾಯಿತು. ಒಂದು ಚೀಲದಲ್ಲಿ ಒಂದು ಜೊತೆ ಉಡುಪು, ಟವೆಲ್, ಒಂದು ತಂಬಿಗೆ, ಒಂದು ನೋಟ್‌ಬುಕ್ ಇಟ್ಟುಕೊಂಡು, ಟ್ರಂಕಿನಲ್ಲಿದ್ದ ಚಿಲ್ಲರೆ ಕಾಸನ್ನೆಲ್ಲ ಜೇಬೊಳಗೆ ತುಂಬಿಕೊಂಡು ರೂಮಿಗೆ ಬಾಗಿಲು ಜಡಿದು ೧ ಕಿಮೀ ದೂರವಿದ್ದ ನರೇಗಲ್‌ನ ಬಸ್‌ಸ್ಟ್ಯಾಂಡ್‌ನತ್ತ ಹೊರಟುಬಿಟ್ಟೆ.

ಗದಗ್‌ನತ್ತ ಹೊರಟ ಬಸ್ಸೇರಿದಾಗ ಆಗಸ ಮತ್ತೆ ಮಂಕಾಗಿತ್ತು.

ಗದಗ್ ಬಸ್‌ನಿಲ್ದಾಣದಲ್ಲಿ ಇಳಿದಾಗಲೂ ಎತ್ತ ಹೋಗಬೇಕೆಂಬುದು ಸ್ಪಷ್ಟವಾಗಿರಲಿಲ್ಲ. ಚಿತ್ರದುರ್ಗದ ಹತ್ತಿರ ಅಲ್ಲೆಲ್ಲೋ ಮಲ್ಲಾಡಿಹಳ್ಳಿಯಲ್ಲಿ ಸ್ವಾಮಿಗಳೊಬ್ಬರು ಯೋಗಾಸನ ಕಲಿಸುತ್ತಾರೆ ಎಂಬುದನ್ನು ಎಲ್ಲಿಯೋ ಓದಿದ್ದು ನೆನಪಾಯ್ತು. ಅಲ್ಲಿಗೆ ಹೋಗಬೇಕೆಂದು ಆ ಕ್ಷಣಕ್ಕೆ ನಿರ್ಧರಿಸಿಬಿಟ್ಟೆ. ಯಾರನ್ನೋ ವಿಚಾರಿಸಿದಾಗ, ಹುಬ್ಬಳ್ಳಿಗೆ ಹೋದರೆ, ಚಿತ್ರದುರ್ಗಕ್ಕೆ ಸಾಕಷ್ಟು ಬಸ್‌ಗಳು ಸಿಗುತ್ತವೆ ಎಂಬ ಉತ್ತರ ಸಿಕ್ಕಿತು. ಸರಿ ಹುಬ್ಬಳ್ಳಿ ಬಸ್ಸೇರಿದೆ.

ಅದೇ ಮೊದಲ ಬಾರಿಗೆ ನಾನು ಹುಬ್ಬಳ್ಳಿಯತ್ತ ಹೊರಟಿದ್ದೆ. ಹುಟ್ಟಿದಾಗಿನಿಂದ ಗದಗ್ ಬಿಟ್ಟು ಬೇರೆ ದೊಡ್ಡ ಊರನ್ನೇ ನೋಡಿರಲಿಲ್ಲ ನಾನು!

ಕೌತುಕದಿಂದ ಬಸ್ ಹೊರಗೆ ದಿಟ್ಟಿಸುತ್ತ, ಹುಬ್ಬಳ್ಳಿಯೆಂಬ ನಗರವನ್ನು ತಲುಪಿದಾಗ ಸಂಜೆ ಕತ್ತಲು. ಆದರೆ, ಬಸ್ಸು ನಿಲ್ದಾಣದತ್ತ ಹೋಗಲಿಲ್ಲ. ಅವತ್ತು ಯಾವುದೋ ಕಾರಣಕ್ಕೆ ಹುಬ್ಬಳ್ಳಿಯಲ್ಲಿ ಬಂದ್ ಆಚರಿಸಲಾಗುತ್ತಿತ್ತು. ಹೀಗಾಗಿ, ನಾನಿದ್ದ ಬಸ್ ಮುಖ್ಯರಸ್ತೆಯಲ್ಲೇ ನಿಂತುಬಿಟ್ಟಿತು.

ನಾನು ಫಜೀತಿಯಲ್ಲಿ ಸಿಲುಕಿದ್ದೆ.

ನಾನು ನೋಡುತ್ತಿದ್ದ ಮೊದಲನೇ ದೊಡ್ಡ ಊರದು. ಅಪರಿಚಿತ ಊರು. ಮಳೆಗಾಲದ ಸಂಜೆ ಬೇರೆ. ಕೈಯಲ್ಲಿ ಸಾಕಷ್ಟು ದುಡ್ಡು ಬೇರೆ ಇಲ್ಲ. ಇಂಥದ್ದರಲ್ಲಿ ಬಸ್ಸಿಲ್ಲದ ಪರಿಸ್ಥಿತಿ. ಏನು ಮಾಡಬೇಕೆಂಬುದೇ ತೋಚದಂತಾಗಿ ಮಂಕನಂತೆ ರಸ್ತೆಯಲ್ಲಿ ನಿಂತುಬಿಟ್ಟೆ.

ಆದರೆ, ನಾನೊಬ್ಬನೇ ಇದ್ದಿಲ್ಲ. ನೂರಾರು ಜನ ನನ್ನ ಹಾಗೆ ರಸ್ತೆಯ ಬದಿ ನಿಂತಿದ್ದರು. ಎಲ್ಲೆಲ್ಲೋ ಹೋಗಬೇಕಾದವರೆಲ್ಲ, ಅಲ್ಲಲ್ಲೇ ಚದುರಿಹೋಗಿದ್ದರು. ಬಂದ್‌ಗೆ ಕಾರಣರಾದವರನ್ನು ಶಪಿಸುತ್ತ, ರಸ್ತೆಯಲ್ಲಿ ಹೊರಟ ಪ್ರತಿಯೊಂದು ವಾಹನಕ್ಕೂ ಕೈ ಮಾಡುತ್ತ, ಅದು ನಿಂತಾಗ ಓಡಿ ಹೋಗಿ, ಅದೆಲ್ಲಿಗೆ ಹೋಗುತ್ತದೆ ಎಂದು ವಿಚಾರಿಸುತ್ತ, ಹಾಗೆ ನಿಂತ ಪ್ರತಿಯೊಂದು ವಾಹನದಲ್ಲೂ ಒಂದಿಷ್ಟು ಜನ ಹತ್ತುತ್ತ- ಒಟ್ಟಿನಲ್ಲಿ ಅಲ್ಲೊಂದು ಗೊಂದಲಪುರವೇ ನಿರ್ಮಾಣವಾಗಿತ್ತು.

ಗೊಂದಲ ಈಗ ನನ್ನೊಳಗೆ ಮಾತ್ರವಲ್ಲ, ನನ್ನ ಹೊರಗೂ ದೊಡ್ಡ ಪ್ರಮಾಣದಲ್ಲಿತ್ತು.

ಅಷ್ಟೊತ್ತಿಗೆ ಒಂದು ಆಟೊ ಬಂತು. ನನ್ನ ಸುತ್ತಮುತ್ತ ಇದ್ದವರು ಎಂದಿನಂತೆ ಅದರತ್ತ ಓಡಿ ಹೋಗಿ, ಎಲ್ಲಿಗೆ ಹೊರಟಿದೆ ಎಂದು ವಿಚಾರಿಸಿದರು. ನೋಡನೋಡುತ್ತಲೇ ಮೂವರು ಆಟೊ ಏರಿ ಕೂತೇಬಿಟ್ಟರು. ಆಟೊ ಚಾಲಕ ಧಾರವಾಡ, ಧಾರವಾಡ ಎಂದು ಕೂಗಿದ.

ಅದನ್ನು ಕೇಳುತ್ತಲೇ, ನಾನು ಧಾರವಾಡಕ್ಕೆ ಹೋಗಬೇಕು ಅಂತ ದಿಢೀರನೇ ನಿರ್ಧರಿಸಿಬಿಟ್ಟೆ.

ಅದಕ್ಕೆ ಕಾರಣ, ನನ್ನ ದೊಡ್ಡಣ್ಣ ಧಾರವಾಡ ವಿಶ್ವವಿದ್ಯಾಲಯದಲ್ಲಿ ಓದುತ್ತಿದ್ದುದು. ಇವತ್ತು ಆತನ ರೂಮಿನಲ್ಲಿದ್ದು, ಬೆಳಿಗ್ಗೆ ಚಿತ್ರದುರ್ಗಕ್ಕೆ ಬಸ್ ಹಿಡಿದರಾಯ್ತು ಎಂದು ಯೋಚಿಸಿ, ಆಟೋ ಚಾಲಕನ ಹತ್ತಿರ ಚಾರ್ಜೆಷ್ಟು ಎಂದು ಕೇಳಿದೆ. ತೆಳ್ಳಗೇ ಕುಳ್ಳಗೇ ಇದ್ದ ನನ್ನನ್ನು ಹೈಸ್ಕೂಲ್ ಹುಡುಗ ಎಂದು ಯೋಚಿಸಿದನೋ, ನನ್ನ ಕಂದಿದ ಮುಖ ಕಂಡು ಮರುಕಗೊಂಡನೋ ಅಥವಾ ನನ್ನ ಅದೃಷ್ಟವೋ ಗೊತ್ತಿಲ್ಲ, ಐದು ರೂಪಾಯಿ ಕೊಡು ಸಾಕು ಎಂದ.

ನೆನಪಿಸಿಕೊಂಡರೆ ಇವತ್ತೂ ನಂಬಲು ಕಷ್ಟವಾಗುತ್ತದೆ. ಬಂದ್, ಮಳೆಗಾಲ, ಮೂರೂ ಸಂಜೆ ಒಟ್ಟೊಟ್ಟಿಗೇ ಒಕ್ಕರಿಸಿದ ಆ ದಿನದಲ್ಲಿ, ಅದೆಲ್ಲೋ ಹುಬ್ಬಳ್ಳಿಯ ಹೆದ್ದಾರಿಯ ಮಧ್ಯದಿಂದ ಧಾರವಾಡದ ಬಸ್ ನಿಲ್ದಾಣದವರೆಗೆ ನನ್ನನ್ನು ಕರೆದೊಯ್ಯಲು ಆಟೊ ಚಾಲಕ ತೆಗೆದುಕೊಂಡಿದ್ದು ಕೇವಲ ಐದು ರೂಪಾಯಿ ಮಾತ್ರ.

ಆಗ ಧಾರವಾಡ ಮತ್ತು ಹುಬ್ಬಳ್ಳಿ ನಡುವೆ ಎಷ್ಟು ದೂರ ಎಂಬುದು ಕೂಡ ನನಗೆ ಗೊತ್ತಿರಲಿಲ್ಲ. ಐದಾರು ಕಿಮೀ ಇರಬಹುದೇನೋ ಅಂತ ಅಂದುಕೊಂಡವನಿಗೆ ಮೈಲಿಗಲ್ಲು ನೋಡಿದಾಗ, ಎದೆ ಧಸಕ್ಕೆಂದಿತು.

ಧಾರವಾಡ ಇಪ್ಪತ್ಮೂರು ಕಿಮೀ ದೂರವಿತ್ತು. ಹೆಚ್ಚು ಕಡಿಮೆ ಕೊಪ್ಪಳದಿಂದ ನನ್ನೂರು ಅಳವಂಡಿಯವರೆಗಿನ ಅಂತರ!

ಡ್ರೈವರ್ ಹೇಳಿದ್ದು ಐದೇ ರೂಪಾಯಿಯಾ? ಎಂದು ನನಗೇ ಗೊಂದಲವಾಯಿತು. ಮತ್ತೊಮ್ಮೆ ಕೇಳಿ ಖಚಿತಪಡಿಸಿಕೊಂಡೆ. ಆತ ಕೇಳಿದ್ದು ಐದೇ ರೂಪಾಯಿ.

ಅತಿ ವಿರಳವಾಗಿ ಸಂಚರಿಸುತ್ತಿದ್ದ ಹೆದ್ದಾರಿಯಲ್ಲಿ ಹೊರಟ ಆಟೊ ಒಂದೊಂದೇ ಮೈಲುಗಲ್ಲನ್ನು ದಾಟಿದಾಗಲೂ ನನ್ನ ಮನಸ್ಸು, ನಿಜಕ್ಕೂ ಐದೇ ರೂಪಾಯಿಯಾ ಎಂದು ಪ್ರಶ್ನಿಸಿಕೊಳ್ಳುತ್ತಿತ್ತು. ಕೊನೆಗೆ ಕತ್ತಲಾಗಿ, ದೀಪಗಳೂ ಇಲ್ಲದ ಕಾರ್ಗತ್ತಲು ಕವಿದಾಗ, ಅಲ್ಲಲ್ಲಿ ದೀಪಗಳಿದ್ದ ಊರಿನ ಛಾಯೆ ಗೋಚರಿಸಿತು. ದಟ್ಟ ಮರಗಳಿದ್ದ, ಸಣ್ಣಗೇ ಹನಿಯುತ್ತಿದ್ದ ಆ ಊರೇ ಧಾರವಾಡ ಎಂದು ಗೊತ್ತಾದಾಗ ನನ್ನ ಮನಸ್ಸಿನಲ್ಲಿ ಎಂಥದೋ ರೋಮಾಂಚನ.

ಧಾರವಾಡದ ರಸ್ತೆಗಳೂ ಬಹುತೇಕ ನಿರ್ಜನವಾಗಿದ್ದವು. ಅಲ್ಲಿಯೂ ಬಂದ್ ಇತ್ತಂತೆ.

ಕೊನೆಗೂ ಜಿಗಿ ಜಿಗಿ ಮಳೆಯಲ್ಲಿ ಬಸ್ ನಿಲ್ದಾಣದ ಹತ್ತಿರ ಬಂದಾಗ, ಕಂಡಿದ್ದು ಪೊಲೀಸ್ ವಾಹನಗಳು ಮಾತ್ರ. ಬಂದ್‌ನಿಂದಾಗಿ ಸಿಟಿ ಬಸ್‌ನ ಸಂಚಾರ ಬಹುತೇಕ ಸ್ಥಗಿತಗೊಂಡಿತ್ತು. ಆಟೊ ಇಳಿದು, ಐದು ರೂಪಾಯಿ ಕೊಟ್ಟು ಚಾಲಕನ ಮುಖ ನೋಡಿದೆ. ಆತ ತರಾತುರಿಯಿಂದ ಹಣವನ್ನು ಜೇಬಿಗಿಳಿಸುತ್ತ ಆಟೊ ಏರಿ ಹೊರಟುಹೋದ. ನಾನು ಅನಾಥನಂತೆ ಧಾರವಾಡದ ಬಸ್ ನಿಲ್ದಾಣದ ಎದುರು ನಿಂತಿದ್ದೆ.

ಧಾರವಾಡ ಎಂದಾಗ ಈಗಲೂ ನನಗೆ ನೆನಪಾಗುವುದು ನನ್ನ ಮೊದಲ ಭೇಟಿಯ ದಿನ. ಮುಂದೆ ಪ್ರಜಾವಾಣಿ ವರದಿಗಾರನಾಗಿ ಧಾರವಾಡಕ್ಕೆ ಹೋದೆ. ಎರಡೂವರೆ ವರ್ಷ ಕೆಲಸ ಮಾಡಿದೆ. ನನ್ನ ವೃತ್ತಿ ಜೀವನದ ಅತ್ಯುತ್ತಮ ದಿನಗಳವು. ನೂರಾರು ವಿಶೇಷ ವರದಿಗಳನ್ನು, ಲೇಖನಗಳನ್ನು ಅಲ್ಲಿಂದ ಬರೆದಿದ್ದೇನೆ. ನನ್ನ ಬದುಕಿಗೆ ಹೊಸತನ ತಂದುಕೊಟ್ಟ ಊರದು. ಆ ಊರಿನೊಂದಿಗೆ ಸಾವಿರಾರು ನೆನಪುಗಳು ಬೆರೆತುಕೊಂಡಿವೆ.

ಇವತ್ತೇಕೋ ಈ ಊರು ಇನ್ನಿಲ್ಲದಂತೆ ನೆನಪಾಗತೊಡಗಿದೆ. ಅದರ ಬಗ್ಗೆ ಬರೆಯಹೊರಟವನು ಮತ್ತೇನನ್ನೋ ಬರೆದುಬಿಟ್ಟೆ. ಅಷ್ಟಕ್ಕೂ, ಧಾರವಾಡ ಎಂದ ಕೂಡಲೇ ನನ್ನ ನೆನಪಿಗೆ ಬರುವುದು ಮೊದಲ ಭೇಟಿಯೇ. ಹೀಗಾಗಿ ಅದರ ಬಗ್ಗೆ ಬರೆಯದೇ ಇರಲಾಗಲಿಲ್ಲ.

ಕಾಡುವ ನೆನಪುಗಳ ಬಗ್ಗೆ ಮತ್ತೆಂದಾದರೂ ಬರೆದುಕೊಳ್ಳುತ್ತೇನೆ. ಅಲ್ಲಿಯವರೆಗೆ ಅವು ಮಾಗುತ್ತಿರಲಿ. ಧಾರವಾಡದ ಜಿಟಿಜಿಟಿ ಮಳೆಗೆ, ಕುಳಿರ್ಗಾಳಿಗೆ, ಸಣ್ಣ ಚಳಿಗೆ ತಾಗದಂತೆ ಎದೆಯೊಳಗೆ ಬೆಚ್ಚಗಿರಲಿ.

- ಚಾಮರಾಜ ಸವಡಿ

‘ಪಾಟಿ ಮೇಲೆ ಪಾಟಿ, ನಮ್ಮ ಸಾಲಿ ಸೂಟಿ'

26 Sept 2009

9 ಪ್ರತಿಕ್ರಿಯೆ
ಬೆಳೆಯುತ್ತ ಬೆಳೆಯುತ್ತ ನಾವು ಬಾಲ್ಯವನ್ನೇ ಮರೆಯುತ್ತೇವೆ.

ಏಕೋ ಇವತ್ತು ಈ ಭಾವನೆ ಬಲವಾಗಿ ಕಾಡತೊಡಗಿದೆ. ಚಿಕ್ಕವರಿದ್ದಾಗ ಬೇಗ ಬೇಗ ದೊಡ್ಡವರಾಗಬೇಕು ಎಂದು ಹಂಬಲಿಸುತ್ತೇವೆ. ಬೆಳೆದು, ಜವಾಬ್ದಾರಿಗಳು ಹೆಗಲಿಗೇರಿದಾಗ ಬಾಲ್ಯ ಪ್ರಿಯವಾಗತೊಡಗುತ್ತದೆ. ಕಳೆದುಕೊಂಡಿದ್ದಕ್ಕಾಗಿ, ಇಲ್ಲದಿರುವುದಕ್ಕಾಗಿ ಹಂಬಲಿಸುವುದು ಮನುಷ್ಯನ ಜೊತೆಗೇ ಬೆಳೆದುಬಂದ ಗುಣವಿರಬೇಕು.

ಅದಕ್ಕೆಂದೇ ಬಾಲ್ಯ ಒಂದು ಶಾಶ್ವತ ನೆನಪು.

ಬಾಲ್ಯದ ಎಲ್ಲ ನೆನಪುಗಳೂ ಸುಂದರ ಎಂದು ಹೇಳಲಾಗದು. ಆದರೂ, ಹಲವಾರು ಕಾರಣಗಳಿಗಾಗಿ ಅದು ಪ್ರಿಯವೇ. ತೀರ ದುಃಸ್ಥಿತಿ ಎದುರಿಸಿದವರನ್ನು ಬಿಟ್ಟರೆ, ಬಹುತೇಕ ಜನರ ಪಾಲಿಗೆ ಬಾಲ್ಯದ ನೆನಪೇ ಸುಂದರ. ಈಗಿನ ಸೌಲಭ್ಯಗಳ್ಯಾವವೂ ಇದ್ದಿರದಿದ್ದರೂ ನಮ್ಮ ಬಾಲ್ಯ ನಮಗೆ ಸೊಗಸೇ.

ಆಗಿನ ಆಟಿಕೆಗಳಾದರೂ ಎಂಥವು? ಬೀದಿಯಲ್ಲಿ ಬಿದ್ದಿರುತ್ತಿದ್ದ ಕಲ್ಲುಗಳು, ಮಣ್ಣು, ಉದುರಿಬಿದ್ದಿರುತ್ತಿದ್ದ ಹೂಗಳು, ಹಳೆ ಸಾಮಾನು, ರದ್ದಿ ಕಾಗದ, ಶಾಲೆಯಿಂದ ಕದ್ದು ತಂದಿರುತ್ತಿದ್ದ ಚಾಕ್‌ಪೀಸ್- ಇವು ನಮ್ಮ ಬಾಲ್ಯವನ್ನು ಅದೆಷ್ಟು ಸಮೃದ್ಧವಾಗಿಸಿದ್ದವು! ಒಬ್ಬರೇ ಆಡಿಕೊಳ್ಳುವ ನೂರಾರು ಆಟಗಳಿದ್ದವು. ಇಬ್ಬರು ಸೇರಿದರೆ ಅದೊಂದು ತಂಡ. ನಾಲ್ಕೈದು ಜನರಿದ್ದರಂತೂ ಇಡೀ ಊರಿಗೇ ಕೇಳುವಷ್ಟು ಜೋರಾಗಿ ಗದ್ದಲ ಮಾಡುತ್ತ, ಖುಷಿ ಅನುಭವಿಸುತ್ತ ಆಡುತ್ತಿದ್ದೆವು.

ಆಗ ಪ್ರತಿಯೊಂದೂ ನಮಗೆ ಆಟಿಕೆಯೇ, ಅಚ್ಚರಿ ಹುಟ್ಟಿಸುವ ವಿಷಯವೇ. ಬೆಳಗಿನ ಸೂರ್ಯನಿಂದ ಹಿಡಿದು ರಾತ್ರಿಯ ಚುಕ್ಕಿಗಳವರೆಗೆ, ಪ್ರಕೃತಿಯ ಪ್ರತಿಯೊಂದು ಘಟನೆಯೂ ವಿಸ್ಮಯಕಾರಿಯೇ. ಪ್ರತಿಯೊಂದು ಪ್ರಾಣಿಯೂ ಸಂಗಾತಿಯೇ. ಮನೆಯ ಪ್ರತಿಯೊಂದು ವಸ್ತುವೂ ಆಟಿಕೆಯೇ. ಅದು ಕಟ್ಟಿಕೊಟ್ಟ ಸುಂದರ ಜಗತ್ತಿನ ಸವಿ ವರ್ಣಿಸುವುದೂ ಸಾಧ್ಯವಿಲ್ಲವೆನ್ನವಷ್ಟರ ಮಟ್ಟಿಗೆ ಬಾಲ್ಯ ಸಮೃದ್ಧ.

ನಾನು ಹುಟ್ಟಿ ಬೆಳೆದಿದ್ದು ಇಂಥ ಒಂದು ಸಣ್ಣ ಊರಿನಲ್ಲಿ. ಕೊಪ್ಪಳ ಜಿಲ್ಲೆ ಅಳವಂಡಿಯಲ್ಲಿ ಅವತ್ತಿಗಾಗಲೇ ಹೈಸ್ಕೂಲಿತ್ತು. ಏಳನೇ ತರಗತಿಯವರೆಗೆ ಸರ್ಕಾರಿ ಶಾಲೆ, ನಂತರ ಖಾಸಗಿ ಹೈಸ್ಕೂಲು. ತಾಲ್ಲೂಕು ಕೇಂದ್ರ ಕೊಪ್ಪಳ ಬಿಟ್ಟರೆ, ನಮ್ಮೂರೊಂದರಲ್ಲೇ ಹೈಸ್ಕೂಲಿದ್ದುದು. ಆಗ ಕೊಪ್ಪಳದಲ್ಲೂ ಸರ್ಕಾರಿ ಹೈಸ್ಕೂಲು ಇರಲಿಲ್ಲ.

ಪ್ರಾಥಮಿಕ ಶಾಲೆ ಸರ್ಕಾರದದ್ದಾಗಿದ್ದರೂ ಅದಕ್ಕೊಂದು ಸ್ವಂತ ಕಟ್ಟಡವಿದ್ದಿಲ್ಲ. ಮಣ್ಣಿನ ಗೋಡೆಯ, ಮಣ್ಣಿನ ಛಾವಣಿಯ ದೊಡ್ಡ ಮನೆಯೇ ಶಾಲೆ. ಸೆಗಣಿ ಸಾರಿಸಿದ ನೆಲದ ಮೇಲೆಯೇ ಎಲ್ಲರೂ ಕೂಡುತ್ತಿದ್ದೆವು. ಮೂರು ಮತ್ತು ನಾಲ್ಕನೇ ತರಗತಿಯ ವಿದ್ಯಾರ್ಥಿಗಳಿಗೆ ಮಾತ್ರ ಬೆಂಚು. ಇಡೀ ಶಾಲೆಯಲ್ಲಿ ಡೆಸ್ಕುಗಳಿದ್ದಿಲ್ಲ. ಬಿನ್ ಇಯತ್ತೆ (ಬಿನ್ನತ್ತೆ) ಎಂದು ಕರೆಯುತ್ತಿದ್ದ ನರ್ಸರಿ ತರಗತಿಯೂ ಸೇರಿದಂತೆ ಒಂದು ಮತ್ತು ಎರಡನೇ ತರಗತಿಗಳು ನಡೆಯುತ್ತಿದ್ದುದು ಒಂದೇ ಅಂಕಣದಲ್ಲಿ. ಮೂರು ಮತ್ತು ನಾಲ್ಕನೇ ತರಗತಿಗಳಿಗೆ ಪ್ರತ್ಯೇಕ ಕೋಣೆಗಳಿದ್ದರೂ ಯಾವುದಕ್ಕೂ ಬಾಗಿಲೇ ಇರಲಿಲ್ಲ. ಅಲ್ಲಿ ನಡೆಯುತ್ತಿದ್ದ ಪಾಠ ಎಲ್ಲರಿಗೂ ಕೇಳುವಂಥ ವಾತಾವರಣ.

ಅಪ್ಪ ಪ್ರಾಥಮಿಕ ಶಾಲೆಯ ಹೆಡ್ಮಾಸ್ಟರಾಗಿದ್ದರಿಂದ ನಾಲ್ಕನೇ ವಯಸ್ಸಿನಿಂದಲೇ ಶಾಲೆಗೆ ಹೋಗುವುದು ಅಭ್ಯಾಸವಾಗಿತ್ತು. ಮನೆಯಲ್ಲಿದ್ದರೆ ಗಲಾಟೆ ಮಾಡುತ್ತಾರೆ ಎಂಬ ಕಾರಣಕ್ಕೆ ಶಾಲೆಗೆ ಹೋಗುವಾಗ ಅಣ್ಣ ಮತ್ತು ನನ್ನನ್ನು ತಮ್ಮ ಜೊತೆಗೆ ಕರೆದುಕೊಂಡು ಹೋಗುತ್ತಿದ್ದರು. ಇನ್ನಿಬ್ಬರು ಅಣ್ಣಂದಿರು ಅದೇ ಶಾಲೆಯಲ್ಲಿ ಓದುತ್ತಿದ್ದರು. ಹೆಡ್ಮಾಸ್ಟರ ಮಗ ಎಂಬ ಯಾವ ವಿನಾಯಿತಿಯೂ ಇಲ್ಲದಂತೆ ಶಾಲೆ ತಲುಪಿದ ಕೂಡಲೇ ಬಿನ್ನತ್ತೆಯಲ್ಲಿ ಕೂಡಿಸುತ್ತಿದ್ದರು. ಅಲ್ಲಿ ನಮಗೆ ಏನು ಕಲಿಸುತ್ತಿದ್ದರು ಎಂಬುದು ನೆನಪಿಲ್ಲವಾದರೂ, ಅಕ್ಕಪಕ್ಕದಲ್ಲೇ ನಡೆಯುತ್ತಿದ್ದ ಒಂದು ಮತ್ತು ಎರಡನೇ ತರಗತಿಯ ಪಾಠಗಳು ನನಗೆ ಆಗಲೇ ಬಾಯಿಪಾಠವಾಗಿದ್ದವು. ಅಕ್ಷರ ಕಲಿತಿದ್ದು ನಂತರ.

ಬಿದ್ದರೆ ಒಡೆದುಹೋಗುವಂಥ ಪಾಟಿ (ಸ್ಲೇಟು) ಮತ್ತು ಬಳಪದ ಕಲ್ಲಿನ ಪೆನ್ಸಿಲ್ಲೇ ನಮ್ಮ ಆಗಿನ ಸಂಗಾತಿ. ಪೆನ್ಸಿಲ್‌ಗೆ ನಾವು ಪೇಣೆ ಎಂದು ಕರೆಯುತ್ತಿದ್ದೆವು. ನಾಲ್ಕನೇ ತರಗತಿ ಮುಗಿಯುವವರೆಗೆ ಎಲ್ಲರೂ ಬಳಸಲೇಬೇಕಾದ ವಸ್ತುಗಳವು. ನನ್ನ ಮೊದಲ ಅಕ್ಷರಭ್ಯಾಸ ಆಗಿದ್ದು ಪಾಟಿಯಲ್ಲೇ. ಮಗ್ಗಿ ಕಲಿತಿದ್ದು, ಸಣ್ಣ ಸಣ್ಣ ವಾಕ್ಯಗಳನ್ನು ಬರೆದಿದ್ದು ಅದರಲ್ಲಿಯೇ. ಹೋಂ ವರ್ಕ್ ಕೂಡಲ ಅದರಲ್ಲೇ ಮಾಡುತ್ತಿದ್ದೆವು. ರಾತ್ರಿ ಲಾಂದ್ರದ ಬೆಳಕಿನಲ್ಲಿ ಪಾಟಿಯ ಒಂದು ಭಾಗದಲ್ಲಿ ಶಬ್ದಗಳು ಮತ್ತು ವಾಕ್ಯ ರಚನೆ ಹಾಗೂ ಇನ್ನೊಂದು ಭಾಗದಲ್ಲಿ ಮಗ್ಗಿ ಬರೆದು, ಹುಷಾರಾಗಿ ಎತ್ತಿಡುತ್ತಿದ್ದೆವು. ಮರುದಿನ ಅದನ್ನು ಅತ್ಯಂತ ಜತನದಿಂದ ತೆಗೆದುಕೊಂಡು ಹೋಗಿ ಮಾಸ್ತರರ ಟೇಬಲ್‌ ಮೇಲಿಡುತ್ತಿದ್ದೆವು. ಒಂದರ ಮೇಲೆ ಒಂದರಂತೆ ಇಟ್ಟಿದ್ದ ಪಾಟಿಗಳ ಹಿಂದೆ ಮಾಸ್ತರರೇ ಕಾಣುತ್ತಿರಲಿಲ್ಲ.

ಸಹಪಾಠಿಗಳ ಮೇಲೆ ಸೇಡು ತೀರಿಸಿಕೊಳ್ಳುವ ಆಗಿನ ಅತ್ಯಂತ ಸಾಮಾನ್ಯ ವಿಧಾನವೆಂದರೆ, ಪಾಟಿಯಲ್ಲಿ ಬರೆದಿರುತ್ತಿದ್ದ ಹೋಮ್ ವರ್ಕ್ ಅಳಿಸಿಹಾಕುವುದು. ಹಿಂದಿನ ದಿನದ ಜಗಳವನ್ನು ಮನಸ್ಸಿನಲ್ಲಿಟ್ಟುಕೊಂಡಿರುತ್ತಿದ್ದ ಹುಡುಗರು, ಶಾಲೆಗೆ ಹೋಗುವ ದಾರಿಯಲ್ಲಿ ಕಾಯ್ದು ನಿಂತಿರುತ್ತಿದ್ದರು. ತಪ್ಪಿಸಿಕೊಂಡು ಹೋಗುವವರನ್ನು ಬಲವಂತದಿಂದ ಹಿಡಿದು ನಿಲ್ಲಿಸಿ, ಪಾಟಿಯಲ್ಲಿ ಬರೆದಿದ್ದನ್ನು ಅಳಿಸಿಬಿಟ್ಟರೆ ದೊಡ್ಡ ಜಯ ಸಂಪಾದಿಸಿದ ಸಂಭ್ರಮ. ಏಕೆಂದರೆ, ಹೋಮ್ ವರ್ಕ್ ಮಾಡಿಲ್ಲ ಎಂದು ಮಾಸ್ತರು ಏಟು ಕೊಡುವುದು ಖಾತರಿ. ಎಷ್ಟೇ ವಿವರಣೆ ನೀಡಿದರೂ ಮಾಸ್ತರು ಕೇಳುತ್ತಿರಲಿಲ್ಲ. ಅಳಿಸಿಹೋದ ಪಾಟಿ ಸತ್ಯ ನುಡಿಯುವುದಾದರೂ ಹೇಗೆ?

ಆಗ ಪ್ರತಿಯೊಂದನ್ನೂ ಬಾಯಿಪಾಠ ಮಾಡುವುದು ಕಡ್ಡಾಯವಾಗಿತ್ತು. ಮಗ್ಗಿ ಕಲಿತಿದ್ದು ಹಾಗೆ. ಒಂದು ಮತ್ತು ಎರಡನೇ ತರಗತಿಯಲ್ಲಿ ಇಡೀ ವರ್ಷಕ್ಕೆ ಒಂದೇ ಪಠ್ಯಪುಸ್ತಕ ಇರುತ್ತಿತ್ತು. ಅದರಲ್ಲಿರುತ್ತಿದ್ದ ಪದ್ಯಗಳನ್ನೆಲ್ಲ ನಾವು ಕಂಠಪಾಠ ಮಾಡಬೇಕಿತ್ತು. ಪ್ರತಿಯೊಂದು ಪದ್ಯವನ್ನು ಹೇಳಿಕೊಟ್ಟಾಗ, ಮಧ್ಯಾಹ್ನದ ತರಗತಿಯ ಕೊನೆಯ ಪಿರಿಯೆಡ್ಡಿನಲ್ಲಿ ಅದನ್ನು ಸಾಮೂಹಿಕವಾಗಿ ಬಾಯಿಪಾಠ ಮಾಡಿಸುತ್ತಿದ್ದರು. ಸರದಿಯ ಪ್ರಕಾರ, ಒಬ್ಬೊಬ್ಬನೇ ವಿದ್ಯಾರ್ಥಿ ಎದ್ದು, ಕೈಕಟ್ಟಿಕೊಂಡು, ಎರಡ ತರಗತಿಗಳ ನಡುವಿನ ಚಿಕ್ಕ ಕಾಲ್ದಾರಿಯಂಥ ಜಾಗದಲ್ಲಿ, ಆ ಕಡೆಯಿಂದ ಈ ಕಡೆ ನಡೆಯುತ್ತ, ಪದ್ಯದ ಒಂದೊಂದು ನುಡಿಯನ್ನು ರಾಗವಾಗಿ ಹಾಡುತ್ತಿದ್ದ. ಪ್ರತಿಯೊಂದು ಸಾಲಿಗೂ ತರಗತಿಯ ಇತರ ವಿದ್ಯಾರ್ಥಿಗಳು ಅದನ್ನೇ ಸಾಮೂಹಿಕವಾಗಿ ಹೇಳಬೇಕಿತ್ತು. ಶಾಲೆಯಲ್ಲಿದ್ದ ಎಲ್ಲ ನಾಲ್ಕೂ ತರಗತಿಗಳ ವಿದ್ಯಾರ್ಥಿಗಳು ತಂತಮ್ಮ ಪದ್ಯವನ್ನು ಕೋರಸ್‌ನಲ್ಲಿ ಹಾಡುತ್ತಿದ್ದರು. ಪಕ್ಕದ ಕ್ಲಾಸ್‌ನವ ಹೇಳುತ್ತಿದ್ದುದಕ್ಕಿಂತ ಜೋರಾಗಿ ಹೇಳುವ ಉಮೇದು ನಮಗೆ. ಮಾಸ್ತರು ಕೂಡ ಅದನ್ನು ಪ್ರೋತ್ಸಾಹಿಸುತ್ತಿದ್ದರು. ಕಂಠ ಹರಿಯುವಂತೆ ಏರು ಧ್ವನಿಯಲ್ಲಿ ಪದ್ಯದ ಸಾಲುಗಳನ್ನು ಕಿರಿಚುತ್ತಿದ್ದೆವು. ಎಲ್ಲ ತರಗತಿಗಳಿಂದ ಹೊರಡುತ್ತಿದ್ದ ಆ ಘನಘೋರ ಧ್ವನಿಯನ್ನು ಕೇಳಿದ ಜನರಿಗೆ, ಶಾಲೆ ಬಿಡುವ ಹೊತ್ತಾಯಿತು ಎಂಬ ಮುನ್ಸೂಚನೆ ಸಿಗುತ್ತಿತ್ತು.

ರೈಲು ಕಂಬಿಯ ಒಂದು ತುಂಡು ಶಾಲೆಯ ಗಂಟೆಯಾಗಿತ್ತು. ಅದನ್ನು ಬಾರಿಸುವುದೊಂದೇ ತಡ, ಮಾಸ್ತರು ಅಡ್ಡ ನಿಂತಿದ್ದರೂ ತಳ್ಳಿಕೊಂಡು ಹೊರಗೆ ಧಾವಿಸುತ್ತಿದ್ದೆವು. ನಾನಂತೂ ಮನೆ ತಲುಪುವವರೆಗೆ ಓಡಿಕೊಂಡೇ ಹೋಗುತ್ತಿದ್ದೆ. ನಿಧಾನವಾಗಿ ಬಂದ ನೆನಪೇ ಇಲ್ಲ.
ಆಗ ಯಾರಿಗೂ ಯುನಿಫಾರ್ಮ್ ಆಗಲಿ, ಚಪ್ಪಲಿಯಾಗಲಿ ಇರುತ್ತಿದ್ದಿಲ್ಲ. ಹರಕುಬಟ್ಟೆಗಳಂತೂ ಅತಿ ಸಾಮಾನ್ಯ. ಕೈಯಲ್ಲಿ ಹಿಡಿದ ಪಾಟಿಯ ಹೊರತಾಗಿ ಬೇರೇನೂ ಶಾಲಾವಸ್ತುಗಳಿರುತ್ತಿದ್ದಿಲ್ಲ. ಆದರೂ, ಕಲಿಯುವ ಉತ್ಸಾಹಕ್ಕೆ ಕೊರತೆ ಇರಲಿಲ್ಲ. ಮಳೆ ಬಂದರೆ ಸಾಕು, ಇಡೀ ಶಾಲೆ ಸೋರುತ್ತಿತ್ತು. ಸೋರದಿರುವ ಭಾಗದಲ್ಲಿ ಮೂರು ಮತ್ತು ನಾಲ್ಕನೇ ತರಗತಿಯ ವಿದ್ಯಾರ್ಥಿಗಳನ್ನು ಗುಂಪುಗುಂಪಾಗಿ ಕೂಡಿಸಿ ಬಿನ್ನತ್ತೆ, ಒಂದು ಮತ್ತು ಎರಡನೇ ತರಗತಿಯ ವಿದ್ಯಾರ್ಥಿಗಳನ್ನು ಮನೆಗೆ ಕಳಿಸಿಬಿಡುತ್ತಿದ್ದರು. ಮಳೆ ಇನ್ನೂ ಜೋರಾದರೆ, ಇಡೀ ಶಾಲೆಗೇ ರಜೆ. ಆಗ ಅತೀವ ಹರುಷದಿಂದ, ‘ಪಾಟಿ ಮೇಲೆ ಪಾಟಿ, ನಮ್ಮ ಸಾಲಿ ಸೂಟಿ' ಎಂದು ಜೋರಾಗಿ ಹಾಡುತ್ತ, ಮಳೆಯಿಂದ ರಕ್ಷಿಸಿಕೊಳ್ಳಲು ಪಾಟಿಯನ್ನು ತಲೆ ಮೇಲೆ ಇಟ್ಟುಕೊಂಡು ಓಡುತ್ತ ಮನೆಗೆ ಹೋಗುತ್ತಿದ್ದೆವು.

*****

ಆಕಾಶವೇ ತೂತಾಗಿದೆಯೇನೋ ಎಂಬಂತೆ ಬೀಳುತ್ತಿರುವ ಬೆಂಗಳೂರಿನ ಮಳೆ ನನಗೆ ನನ್ನೂರನ್ನು ನೆನಪಿಸುತ್ತಿದೆ. ತಮಾಷೆಯ ಸಂಗತಿ ಎಂದರೆ, ಸೋರಲು ಬೆಂಗಳೂರಿನಲ್ಲಿ ಮಣ್ಣಿನ ಶಾಲೆಗಳಿಲ್ಲ. ಸೋರುವುದೇನಿದ್ದರೂ ರಸ್ತೆಗಳು ಮತ್ತು ಚರಂಡಿಗಳು. ಹೀಗಾಗಿ, ಜೋರು ಮಳೆ ಬಂದರೆ, ನಮ್ಮೂರಲ್ಲಿ ನೀಡುತ್ತಿದ್ದಂತೆ ಇಲ್ಲಿಯೂ ಶಾಲೆಗೆ ರಜೆ.

ಆದರೆ, ‘ಪಾಟಿ ಮೇಲೆ ಪಾಟಿ, ನಮ್ಮ ಸಾಲಿ ಸೂಟಿ' ಹಾಡು ಮಾತ್ರ ಎಲ್ಲಿಯೂ ಕೇಳಿಬರುವುದಿಲ್ಲ!

- ಚಾಮರಾಜ ಸವಡಿ

ಮಳೆ ಎಂದರೆ ಬಾಲ್ಯದ ನೆನಪು ಕಣಾ...

18 Aug 2009

0 ಪ್ರತಿಕ್ರಿಯೆ
ಮುಂಗಾರು ಶುರುವಾಗಿದೆ. ಜೊತೆಗೆ, ನೆನಪುಗಳ ಮಳೆಯೂ.

ಮೊದಲ ಹನಿಗೆ ಬಾಲ್ಯ ನೆನಪಾಗಿದೆ. ಮುಂಗಾರಿನ ಮಳೆಗೆ ಮುಖವೊಡ್ಡಿ ನಿಲ್ಲುತ್ತಿದ್ದ ದಿನಗಳು ಕಣ್ಮುಂದೆ ಬರುತ್ತಿವೆ. ಹಳ್ಳಿಯ ದೂಳು ತುಂಬಿದ ರಸ್ತೆಗಳಲ್ಲಿ ಟಪಟಪ ಬೀಳುತ್ತಿದ್ದ ನೀರ ಹನಿಗಳು, ಅವು ಎಬ್ಬಿಸುತ್ತಿದ್ದ ದೂಳಿನ ಪರದೆ, ಮೂಗಿಗೆ ಅಡರುತ್ತಿದ್ದ ಮಣ್ಣಿನ ಕಮ್ಮನೆ ವಾಸನೆ ಎಲ್ಲವೂ ನಿನ್ನೆ ತಾನೆ ಕಂಡು ಅನುಭವಿಸಿದ ಸುಂದರ ಕನಸೆಂಬಂತೆ ಭಾಸವಾಗುತ್ತಿದೆ.

ಆ ಮಣ್ಣಿನ ವಾಸನೆ ಎಲ್ಲಿ ಹೋಯಿತು? (ಪೂರ್ತಿ ಬರಹ ಇಲ್ಲಿದೆ http://kannada.indiawaterportal.org/b/chamarajsavadi/%E0%B2%AE%E0%B2%B3%... )

ನಿಮಗೂ ಹೀಗೆ ಅನಿಸಿರಬಹುದಲ್ಲವೆ?

- ಚಾಮರಾಜ ಸವಡಿ

ಕಿಟಕಿಯಾಚೆಯ ಚಿತ್ರ

7 Aug 2008

0 ಪ್ರತಿಕ್ರಿಯೆ
ಸಣ್ಣಗೇ ಮಳೆ ಸುರಿಯುತ್ತಿದೆ.

ಕಂಪ್ಯೂಟರ್‌ ಇಟ್ಟಿರುವ ಕೋಣೆಯ ಕಿಟಕಿಯಾಚೆ, ಮಳೆ ಪಟ ಪಟ ಎಂದು ಬಾಳೆ ಎಲೆ ಮೇಲೆ ಬೀಳುವುದು ಕಾಣುತ್ತಿದೆ. ಪಕ್ಕದ ಕಟ್ಟಡದಲ್ಲಿರುವ ಅವಿವಾಹಿತ ಹುಡುಗರು ಯಾವಾಗಲೋ ನೆಟ್ಟಿದ್ದು. ಎಲೆ ಅಗಲಿಸಿ ಬೆಳೆಯುತ್ತಿದೆ. ಅದರ ನೆರಳಡಿ ಪುಟ್ಟ ಬಾವಿ. ಸಿಮೆಂಟ್‌ ರಿಂಗ್‌ಗಳನ್ನು ಪೇರಿಸಿ ಕಟ್ಟಿರುವ ನಗರದ ಬಾವಿ. ಅದಕ್ಕೊಂದು ಜಾಲರಿಯುಳ್ಳ ಮುಚ್ಚಳ. ಆಗೀಗ ಮುಚ್ಚಳ ತೆರೆದು, ಹಗ್ಗ ಇಳಿಬಿಟ್ಟು ನೀರೆತ್ತುತ್ತಾರೆ ಹುಡುಗರು. ಅವರು ಬಳಸಿದ ನೀರನ್ನು ಹೀರಿಕೊಂಡು ಬೆಳೆಯುತ್ತಿದೆ ಬಾಳೆ.


ಮಳೆ ಬೀಳುತ್ತಿರುವುದರಿಂದ ಹುಡುಗರಾರೂ ಕಾಣುತ್ತಿಲ್ಲ. ಬಾವಿಯ ಜಾಲರಿ ಬಾಗಿಲು ಮುಚ್ಚಿಕೊಂಡಿದೆ. ಬಾಳೆ ಗಿಡದ ಹಿಂದೆ ಮಳೆಯ ಮಂಕಿನಲ್ಲಿ ನಿಂತ ಎರಡಂತಸ್ತಿನ ಮನೆಗಳು. ಅದರಾಚೆ ಕಪ್ಪುಗಟ್ಟಿರುವ ಮೋಡ. ಮಧ್ಯಾಹ್ನದವರೆಗೆ ಬಿಸಿಲು ಚೆನ್ನಾಗಿತ್ತು. ಇದ್ದಕ್ಕಿದ್ದಂತೆ ಮೋಡಗಳು ಧಾವಿಸಿ ಬಂದವು. ನೋಡನೋಡುತ್ತಲೇ ಸಣ್ಣಗೆ ಶುರುವಾದ ಮಳೆ ಬಿಟ್ಟೇ ಇಲ್ಲ.

ಈಗ ಕಿಟಕಿಯಾಚೆಯ ಚಿತ್ರಣ ಪೂರ್ತಿ ಬದಲಾಗಿದೆ. ಬಿಸಿಲಿನಲ್ಲಿ ಮಂಕಾದಂತೆ ಕಾಣುತ್ತಿದ್ದ ಬಾಳೆಯ ಎಲೆಗಳಲ್ಲಿ ಈಗ ಹಸಿರಿನ ಹೊಸ ರಂಗು. ಎಲೆಗಳ ಮೇಲೆ ಮಳೆಯ ಮುತ್ತಿನ ಹನಿಗಳು. ತುಸು ಗಾಳಿ ಬೀಸಿದರೂ ಮುತ್ತುಗಳು ಉದುರುತ್ತವೆ. ಹೊಸ ಮುತ್ತುಗಳು ಬಂದು ಸೇರುತ್ತವೆ. ಬಾವಿಯ ಜಾಲರಿ ಮೇಲೆ ಬೀಳುವ ಹನಿಗಳು ಒಡೆದು ಅಲ್ಲೊಂದು ವಿಸ್ಮಯ ಲೋಕ ಸೃಷ್ಟಿಯಾಗಿದೆ.

ಕ್ರಮೇಣ ಮೋಡಗಳು ಚೆದುರಿದವು. ಬೆಳಕು ತೂರಿ ಬಂತು. ಬಾಳೆಗಿಡ ಮೊದಲಿಗಿಂತ ಹೆಚ್ಚು ಸ್ಪಷ್ಟವಾಗಿ ನಳನಳಿಸಿತು. ಅದರ ಎಲೆಗಳಲ್ಲೀಗ ಸಮಾಗಮದ ನಂತರದ ಹೆಣ್ಣಿನ ಸೊಗಸು. ಮಳೆಯಲ್ಲಿ ಮಿಂದು ಬಾವಿಯ ಜಾಲರಿ ಸ್ವಚ್ಛವಾಗಿದೆ. ಕಿಟಕಿಯಾಚೆಗಿನ ಚಿತ್ರ ಈಗ ಮೊದಲಿಗಿಂತ ಸ್ಪಷ್ಟ, ಸ್ಫುಟ.

ಇಡೀ ಕಿಟಕಿಯ ಚೌಕಟ್ಟೇ ಚಿತ್ರವೊಂದರ ಚೌಕಟ್ಟಿನಂತಾಗಿ, ಆಚೆಯ ದೃಶ್ಯಗಳು ಚಿತ್ರವಾಗಿವೆ. ಯಾರು ಬಿಡಿಸಿದರು ಇದನ್ನು? ಮಳೆಯೆ, ಮೋಡವೆ, ನೆಟ್ಟ ಬಾಳೆ ಗಿಡವೇ, ತಿಳಿ ಸಂಜೆಯ ಮುಂಚಿನ ರಂಗೇ? ಎಲ್ಲ ಕೈ ಜೋಡಿಸಿ ಬಿಡಿಸಿದ ಚಿತ್ರಕ್ಕೆ ಕೋಣೆಯ ಕಿಟಕಿಯ ಚೌಕಟ್ಟು. ಅದರ ಹಿಂದೆ ನಾನು. ಹಣ ನೀಡದ, ಹಣ ನೀಡಿದರೂ ಸಿಗದ ಅಪೂರ್ವ ಚಿತ್ರವೊಂದನ್ನು ನೋಡುತ್ತ ನೋಡುತ್ತ ಅದರಲ್ಲೇ ಮುಳುಗಿಹೋದೆ.

ಥ್ಯಾಂಕ್ಸ್‌ ಬದುಕೇ. ಪಕ್ಕದ ಮನೆಯಲ್ಲಿ ಒಂದಿಷ್ಟು ಜಾಗ ಉಳಿಸಿದ್ದಕ್ಕೆ, ಅಲ್ಲಿ ನೆಲೆಸಲು ಬಂದ ಹುಡುಗರಲ್ಲಿ ವೃಕ್ಷಪ್ರೀತಿ ಹುಟ್ಟಿಸಿದ್ದಕ್ಕೆ, ಆವರಣದಲ್ಲೊಂದು ಬಾವಿ ತೋಡಿಸಿದ್ದಕ್ಕೆ, ಮಧ್ಯಾಹ್ನ ಬಂದ ಅಕಾಲಿಕ ಮಳೆಗೆ, ನೆರಳು-ಬೆಳಕಿನಾಟ ಆಡಿದ ಸೂರ್ಯನಿಗೆ, ನಾನಿರುವ ಮನೆಯ ಕಿಟಕಿಗೆ,

ಹಾಗೂ ಅದರ ಮೂಲಕ ಅಪೂರ್ವ ಚಿತ್ರಣ ನೋಡಬಲ್ಲ ಮನಃಸ್ಥಿತಿಯನ್ನು ನನ್ನಲ್ಲಿ ಉಳಿಸಿದ್ದಕ್ಕೆ.

- ಚಾಮರಾಜ ಸವಡಿ