Showing posts with label ಪತ್ರಕರ್ತ. Show all posts
Showing posts with label ಪತ್ರಕರ್ತ. Show all posts

ವೃತ್ತದೊಳಗಿನ ಬದುಕು ಮತ್ತು ಲೊಳಲೊಟ್ಟೆ

24 Jul 2010

13 ಪ್ರತಿಕ್ರಿಯೆ
ತುಂಬ ದಿನಗಳಿಂದ ಏನನ್ನೂ ಬರೆದಿಲ್ಲ. ಪ್ರೋಗ್ರಾಂಗಳಿಗೆ ಸ್ಕ್ರಿಪ್ಟ್‌ಗಳನ್ನು ಬರೆಯುವ ವೃತ್ತಿ ಕೆಲಸ ಹೊರತುಪಡಿಸಿ, ಗೂಗಲ್‌ ಬಝ್‌ನಲ್ಲಿ ಒಂದಿಷ್ಟು ಹರಟೆ ಹೊಡೆದಿದ್ದು ಬಿಟ್ಟರೆ ಮತ್ತೇನನ್ನೂ ಬರೆದಿರಲಿಲ್ಲ. ಬರೆಯುವ ಮನಸ್ಸಿದ್ದರೂ, ಒತ್ತಡ ಸಾಕಷ್ಟಿರಲಿಲ್ಲ.

ಆದರೂ ಒಂಥರಾ ಅಸಮಾಧಾನ ಮಾತ್ರ ಕಾಡುತ್ತಿತ್ತು. ಹಾಗೆ ನೋಡಿದರೆ, ಬರೆಯುವುದು ಸಾಕಷ್ಟಿದೆ. ಅದೊಂಥರಾ ಒರತೆಯಂತೆ. ಮೊಗೆದಷ್ಟೂ ಉಕ್ಕುತ್ತದೆ. ಮೊಗೆಯುವುದನ್ನು ಬಿಟ್ಟರೆ, ಒರತೆಯಲ್ಲಿ ಎಷ್ಟಿರಬೇಕೋ, ಅಷ್ಟು ಮಾತ್ರ ನಿಲ್ಲುತ್ತದೆ.

ಹೀಗಾಗಿ, ಅಸಮಾಧಾನ ಹಾಗೇ ಉಳಿದಿತ್ತು. ಒಂದೆರಡು ಬಾರಿ ಕವಿತೆ ಬರೆಯಲು ಯತ್ನಿಸಿದೆನಾದರೂ, ಅದು ಮುಂದುವರೆಯಲಿಲ್ಲ. ಕಚೇರಿಯಲ್ಲಿ ಕೂತಾಗ ಉಕ್ಕುವ ಭಾವನೆಗಳನ್ನು ಅಕ್ಷರಗಳನ್ನಾಗಿಸಲು ಯತ್ನಿಸಿದರೂ ಅದಕ್ಕೆ ಏನೇನೋ ಸಣ್ಣಪುಟ್ಟ ಅಡ್ಡಿಗಳು.

ಒಂದು ವಿಷಯ ತುಂಬ ದಿನದಿಂದ ಕಾಡುತ್ತಿದೆ.

ಪ್ರತಿಯೊಬ್ಬರೂ ತಮ್ಮದೇ ಆದ ಒಂದು ವೃತ್ತವನ್ನು, ಬಳಗವನ್ನು, ತಂಡವನ್ನು ಕಟ್ಟಿಕೊಳ್ಳುವ ಪರಿ ಅಚ್ಚರಿ ಹುಟ್ಟಿಸುತ್ತದೆ. ಅದು ಮನುಷ್ಯಸಹಜ ಗುಣವಾದರೂ, ಅದರ ಮಿತಿ ಅರಿಯದೇ ನಾವು ವೃತ್ತವೊಂದಕ್ಕೆ ಕಟ್ಟುಬೀಳುವುದೇ ಅಚ್ಚರಿಯ ಸಂಗತಿ. ಒಂದೇ ರೀತಿಯ ವಿಚಾರ ಹೊಂದಿರುವವರು, ವೃತ್ತಿಯಲ್ಲಿರುವವರು, ಪ್ರದೇಶದಲ್ಲಿರುವವರು, ಜಾತಿಯವರು, ಭಾಷೆಯವರು- ಹೀಗೆ ನಾನಾ ಕಾರಣಗಳಿಗಾಗಿ ಜನ ಗುಂಪು ಕಟ್ಟಿಕೊಳ್ಳುತ್ತಾರೆ. ಅಲಿಖಿತ ನಿಯಮಗಳನ್ನು ಹಾಕಿಕೊಂಡು, ಅದರ ಮಿತಿಯೊಳಗೆ ಬದುಕುತ್ತ ಹೋಗುತ್ತಾರೆ. 
 
ಆ ವೃತ್ತದೊಳಗೆ ಪ್ರವೇಶಿಸುವುದು ಸುಲಭವಲ್ಲ. ‘ಹೊರಗಿನವರು’ ಎಂದು ಭಾವಿಸಿದ ಯಾರನ್ನೂ ಅವರು ಒಳಗೆ ಬಿಟ್ಟುಕೊಳ್ಳುವುದಿಲ್ಲ. ಅಂಥವರನ್ನು ಅನುಮಾನದಿಂದ ನೋಡುತ್ತಾರೆ. ಗೊತ್ತಿದ್ದೋ, ಗೊತ್ತಿಲ್ಲದೆಯೋ ತಮ್ಮ ವೃತ್ತದೊಳಗೆ ಪ್ರವೇಶಿಸಲು ಮುಂದಾದವನನ್ನು ಶತ್ರುವಿನಂತೆ ಕಾಣುತ್ತಾರೆ. ಪ್ರಾಣಿ-ಪಕ್ಷಿಗಳಲ್ಲಿ ಇದು ಸಾಮಾನ್ಯ ಸಂಗತಿಯಾಗಿದ್ದರೂ, ಸೂಕ್ಷ್ಮವಾಗಿ ನೋಡಿದರೆ, ನಮ್ಮ ಸುತ್ತಮುತ್ತಲೇ ಅಂಥ ಹಲವಾರು ವೃತ್ತಗಳು ಕಾಣಿಸುತ್ತವೆ.

ನೀವು ಎಷ್ಟೇ ಆತ್ಮೀಯರಾಗಿರಿ, ಎಷ್ಟೇ ಬುದ್ಧಿವಂತರಾಗಿರಿ, ಅವರು ಯಾವ ಕಾರಣಕ್ಕೂ ನಿಮ್ಮನ್ನು ‘ತಮ್ಮವ’ ಎಂದು ಕಾಣುವುದಿಲ್ಲ. ನಿಮ್ಮ ಜೊತೆಗೇ ಇದ್ದರೂ, ನೀರಿನಲ್ಲಿನ ಎಣ್ಣೆಯಂತೆ ಬೇರೆಯಾಗೇ ಇರುತ್ತಾರೆ. ಎಂದೆಂದೂ ನಿಮ್ಮೊಂದಿಗೆ ಆತ್ಮೀಯರಾಗುವುದಿಲ್ಲ. ವರ್ಷಗಟ್ಟಲೇ ಜೊತೆಗಿದ್ದರೂ ನಿಮ್ಮನ್ನು ತಮ್ಮೊಂದಿಗೆ ಸೇರಿಸಿಕೊಳ್ಳುವುದಿಲ್ಲ. ನೀವು ಪ್ರಯತ್ನಪಟ್ಟಷ್ಟೂ ನಿಮ್ಮನ್ನು ದೂರವಾಗೇ ಇಡುತ್ತ ಹೋಗುತ್ತಾರೆ.

ಮೊದಮೊದಲು ನನಗಿದು ಬೇಸರ, ಅಸಮಾಧಾನ, ನೋವು ಉಂಟು ಮಾಡುತ್ತಿತ್ತು. ಒಂದೇ ಪ್ರದೇಶಕ್ಕೆ ಸೇರಿದವರಾಗಿದ್ದರೂ, ಕೆಲವರು ಇನ್ಯಾವುದೋ ಕಾರಣಗಳಿಗಾಗಿ ಹೊರಗಿಡುತ್ತಾರೆ. ಒಂದೇ ಜಾತಿಯವರಾಗಿದ್ದರೂ, ಇಂಥವೇ ಮತ್ಯಾವುದೋ ಕಾರಣಗಳಿಗಾಗಿ ಪ್ರತ್ಯೇಕವಾಗಿ ನಿಲ್ಲುತ್ತಾರೆ. ಅವರ ವೃತ್ತದ ಅಲಿಖಿತ ಸಂವಿಧಾನ ನನ್ನಂಥವರಿಗೆ ಯಾವತ್ತೂ ಅರ್ಥವಾಗುವುದಿಲ್ಲ ಅನಿಸುತ್ತದೆ. ಏಕೆಂದರೆ, ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಿದಷ್ಟೂ ಅದು ಕಗ್ಗಂಟಾಗುತ್ತಲೇ ಹೋಗಿದೆ.

ಪ್ರತಿಯೊಂದು ಪತ್ರಿಕೆ, ಟಿವಿಗಳಲ್ಲೂ ಕೆಲ ವ್ಯಕ್ತಿಗಳಿರುತ್ತಾರೆ. ಅವರು ಪ್ರತಿಭಾಶೂನ್ಯರು. ತೀರಾ ತೆಳು ವಿಷಯಗಳ ಬಗ್ಗೆ ಮಾತ್ರ ಅವರ ಗಮನ. ಯಾರೂ ಅವರ ಬರಹ, ಪ್ರಸ್ತುತಿಯನ್ನು ಗಮನಿಸದೇ ಇದ್ದರೂ, ವೃತ್ತದೊಳಗಿನವರಿಗೆ ಮಾತ್ರ ಅವರು ಅದ್ಭುತ ವರದಿಗಾರಿಕೆ ಮಾಡಿದ್ದಾರೆ ಎನ್ನುವ ಹೆಮ್ಮೆ. ‘ಏನ್‌ ಚೆನ್ನಾಗಿ ಬರೆದಿದ್ದೀ ಕಣೆ, ಸೂಪರ್ ಆಗಿ ಬಂದಿದೆ’ ಎಂದು ಬೆನ್ನು ತಟ್ಟುತ್ತಿರುತ್ತಾರೆ ಅಥವಾ ತಟ್ಟಿಸಿಕೊಳ್ಳುತ್ತಿರುತ್ತಾರೆ. ಕಸದಂಥ ವರದಿ ತಂದವನನ್ನು ಅರುಣ್ ಶೌರಿಯಂತೆ ನೋಡುವವರಿದ್ದಾರೆ. ಆಭರಣ, ಸೀರೆ, ಫ್ಯಾಶನ್, ಮೇಕಪ್, ಋತುಚಕ್ರ ಸಮಸ್ಯೆಗಳ ಬಗ್ಗೆ ಏರಳಿತಗಳಿಲ್ಲದ, ಯಾವುದೇ ಹೊಸದೃಷ್ಟಿ ನೀಡದ ವರದಿ ಮಾಡಿದರೂ ಅಭಿನಂದನೆ ಅವರಿಗೆ ಕಾಯಂ. ಅದ್ಭುತ ವರದಿ ತಂದ, ರಿಸ್ಕ್ ಎದುರಿಸಿ ಗಮನ ಸೆಳೆಯುವ ವರದಿ ಮಾಡಿದವರು ಆಕಸ್ಮಿಕವಾಗಿ ಕೂಡ ಅವರ ಚರ್ಚೆಯ ವಿಷಯವಾಗುವುದಿಲ್ಲ. ತಮಗಿಂತ ಭಿನ್ನವಾಗಿ, ಉತ್ತಮವಾಗಿ ಇನ್ಯಾರೋ ಕೆಲಸ ಮಾಡಿದ್ದಾರೆ ಎಂಬುದನ್ನು ಅವರು ಯಾವತ್ತೂ ಗಮನಿಸುವುದಿಲ್ಲ.

ಬಹುಶಃ ಪ್ರತಿಯೊಂದು ವೃತ್ತಿಯಲ್ಲಿಯೂ ಇಂಥ ವೃತ್ತಗಳು, ‘ವೃತ್ತಪರರು’ ಇರುತ್ತಾರೆ ಅನಿಸುತ್ತದೆ. ಅಂಥ ಬಳಗದ ಒಬ್ಬರ ಕೆಲಸ ಇನ್ನೊಬ್ಬರಿಗೆ ಅತಿ ಮೆಚ್ಚಿನ ವಿಷಯ.  ವೃತ್ತದ ಹೊರಗಿನವರ ಸಾಧನೆ ಅದ್ಭುತವಾಗಿದ್ದರೂ, ಅದು ಅವರಿಗೆ ಕಾಲಕಸ!

ಇಂಥ ವಾತಾವರಣದಲ್ಲಿ ಕ್ರಿಯಾಶೀಲತೆ ಉಳಿಸಿಕೊಳ್ಳುವುದು ಹೇಗಪ್ಪಾ ಎಂದು ಮೊದಮೊದಲು ಚಿಂತೆ ಮಾಡುತ್ತಿದ್ದೆ. ಇವತ್ತು ಬ್ಲಾಗ್‌ಗಳಲ್ಲಿ, ವಿವಿಧ ಮಾಧ್ಯಮಗಳಲ್ಲಿ ಪತ್ರಕರ್ತರ ಈ ಪರಿಯ ‘ಕ್ರಿಯಾಶೀಲತೆ’ಯನ್ನು ಉಗಿಯುತ್ತಿರುವಾಗ, ನನಗೆ ಹಳೆಯ ಅಳುಕು ಮತ್ತೆ ಮತ್ತೆ ನೆನಪಾಗುತ್ತಿದೆ. ಯಾರೇ ಗುರುತಿಸಲಿ, ಬಿಡಲಿ, ನನಗೆ ಸರಿ ಅನಿಸಿದ್ದನ್ನು ಮಾಡುತ್ತ ಹೋಗುವುದೇ ಉತ್ತಮ ಮಾರ್ಗ ಎಂಬುದನ್ನು ಅನುಭವ ನನಗೆ ಕಲಿಸಿದೆ. ಚೆನ್ನಾಗಿ ಬರೆಯುವುದು, ವರದಿ ಮಾಡುವುದು ವೈಯಕ್ತಿಕ ಆನಂದದ ಕೆಲಸ. ಅದಕ್ಕೂ, ಮನ್ನಣೆಗೂ ಸಂಬಂಧ ಕಲ್ಪಿಸಬಾರದು ಎಂದು ವೃತ್ತಿಯ ಮೊದಲ ದಿನಗಳಲ್ಲಿ ನಾನು ತೆಗೆದುಕೊಂಡ ನಿರ್ಧಾರ ಇವತ್ತಿಗೂ ನನ್ನನ್ನು ಪೊರೆಯುತ್ತಿದೆ.

ಆದರೂ, ಹಳೆಯ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ. ಒಂದು ಸೀಮಿತ ವಲಯಕ್ಕೆ, ವೃತ್ತಕ್ಕೆ ಸೀಮಿತವಾಗುವ ಜನರನ್ನು ಕಂಡಾಗೆಲ್ಲ ‘ಏಕೆ ಹೀಗೆ?’ ಎಂಬ ಪ್ರಶ್ನೆ ಮತ್ತೆ ಮತ್ತೆ ಕಾಡುತ್ತದೆ. ಮಾಧ್ಯಮಗಳಲ್ಲಿ ಚಿಲ್ಲರೆ ಸಂಗತಿಗಳಿಗೆ ಈಗ ದೊರೆಯುತ್ತಿರುವ ಪ್ರಾಶಸ್ತ್ಯ, ವಾಸ್ತವ ಗ್ರಹಿಸದೇ ತಮಗೆ ಸರಿ ಅನಿಸಿದಂತೆ ವರದಿ ಮಾಡುವುದನ್ನು ಕಂಡಾಗ, ರೇಗುವಂತಾಗುತ್ತದೆ. ಟಿವಿಗಳ ಬಹುತೇಕ ಕಾರ್ಯಕ್ರಮಗಳಲ್ಲಿ ಹಾಗೂ ವರದಿಯಲ್ಲಿ ಸಿನಿಮಾ ಹಾಡುಗಳನ್ನು, ಶೀರ್ಷಿಕೆಗಳನ್ನು, ಹಾಡುಗಳ ಸಾಲುಗಳನ್ನು ಭಾರಿ ಹೆಡ್ಡಿಂಗ್‌ಗಳಂತೆ ಬಳಸುವುದನ್ನು ಕಂಡಾಗ ನನಗೆ ಮತ್ತೆ ಮತ್ತೆ ‘ವೃತ್ತಪರರು’ ನೆನಪಾಗುತ್ತಾರೆ. ಇದರ ಜೊತೆಗೆ ಬೌದ್ಧಿಕ ದಿವಾಳಿತನ ಸೇರಿಕೊಂಡಾಗ ಮಾತ್ರ ಇಂಥ ಕಳಪೆ ಉತ್ಪನ್ನ ಬರಲು ಸಾಧ್ಯ.

ಹೀಗಾಗಿ, ಚಿಗುರೊಡೆಯದವರೂ ಪ್ರತಿಭಾವಂತರೆನಿಸಿಕೊಳ್ಳುತ್ತಿದ್ದಾರೆ. ಬಂಡವಾಳವೇ ಇಲ್ಲದವರು ಬುದ್ಧಿವಂತರೆನಿಸಿಕೊಂಡಿದ್ದಾರೆ. ಯಾವ ವ್ಯಕ್ತಿ ವೃತ್ತಿಯಲ್ಲಿ ತನಗಿಂತ ಕಿರಿಯರಾದವರಿಗೆ ಏನನ್ನೂ ಕಲಿಸಲಾರನೋ, ಅಂಥ ವ್ಯಕ್ತಿ ವೃತ್ತಿಯನ್ನು ಹಾಳುಮಾಡುತ್ತ ಹೋಗುತ್ತಾನೆ. ತನ್ನ ವೃತ್ತದೊಳಗೇ ಬದುಕುತ್ತ, ಅದರೊಳಗೆ ಯಾವ ಕ್ರಿಯಾಶೀಲತೆಯೂ ಪ್ರವೇಶಿಸದಂತೆ ತಡೆಯುತ್ತ ಬಾವಿಯೊಳಗಿನ ಕಪ್ಪೆಯಂತಾಗುತ್ತಾನೆ. ಒಂದ್ಹತ್ತು ವರ್ಷ ಹೀಗೆ ಮಾಡಿದ ನಂತರ, ಅವನಿಗೆ ಸೀನಿಯರ್ ಪಟ್ಟ ಸಿಗುತ್ತದೆ. ಅಲ್ಲಿಗೆ ಮುಗಿಯಿತು. ಅವನನ್ನು ತಡೆಯುವುದು ಸಾಧ್ಯವಿಲ್ಲ.

‘ಉದಯ ವಾರ್ತೆಗಳು’ ಚಾನೆಲ್ ಹಾಳಾಗಿದ್ದು ಹೀಗೆ. ಕನ್ನಡದ ಬಹುತೇಕ ಪ್ರಮುಖ ದಿನಪತ್ರಿಕೆಗಳು ಮೆನೋಪಾಸ್ ತಲುಪಿದ್ದು ಈ ಕಾರಣಕ್ಕಾಗಿ. ಒಂದು ಅರ್ಥಪೂರ್ಣ ವರದಿಗಾರಿಕೆ, ಬರಹ, ಪ್ರಸ್ತುತಿ ಅಪರೂಪವಾಗುತ್ತ ಹೋಗುತ್ತಿರುವುದು ಈ ಕಾರಣಗಳಿಂದಾಗಿ.

ಹಾಗಂತ ನಾನು ಅಂದುಕೊಂಡಿದ್ದೇನೆ. ಪದೆ ಪದೆ ಈ ಅನಿಸಿಕೆ ದೃಢವಾಗುತ್ತ ಹೋಗಿದೆ. ಪ್ರತಿ ದಿನ, ಪ್ರತಿ ಕ್ಷಣ, ಪ್ರತಿ ಸಂಸ್ಥೆ ಈ ವಿಷಯವನ್ನು ಮತ್ತೆ ಮತ್ತೆ ಮನದಟ್ಟು ಮಾಡುತ್ತ ಹೋಗಿವೆ. ಹೇಳೋದಕ್ಕೆ ‘ಮಾಧ್ಯಮ’ ಎಂಬ ಹೆಸರು. ಆದರೆ, ಜನರಿಗೂ ಸುದ್ದಿಸಂಸ್ಥೆಗೂ ಮಧ್ಯೆ ಇರಬೇಕಾದ ತಂತೇ ಕ್ಷೀಣವಾಗಿದೆ. ಎಲ್ಲವೂ ಸೆನ್ಸೇಶನಲ್, ಉದ್ರೇಕಕಾರಿ, ತಕ್ಷಣ ಗಮನ ಸೆಳೆಯುವಂಥದಾಗಿರಬೇಕು ಎಂಬ ಹಪಾಹಪಿಯಲ್ಲಿ ಸುದ್ದಿ/ಕಾರ್ಯಕ್ರಮ/ವರದಿ ಪ್ರಸ್ತುತಿಯ ಸೊಗಸು ಕಳೆದುಹೋಗುತ್ತಿದೆ. ಹೀಗಾಗಿ ಬಹುತೇಕ ಕಡೆ, ಬಹುತೇಕ ಸಮಯ, ನಮಗೆ ಕಂಡು ಬರುತ್ತಿರುವುದು ಸುದ್ದಿಯ ಇಂಥ ಶೀಘ್ರಸ್ಖಲನ.

ಈ ಭಾವನೆ ತೀವ್ರವಾಗಿ ಕಾಡಿದಾಗೆಲ್ಲ, ಏನಾದರೂ ಬರೆಯಬೇಕೆನ್ನುವ ಹಂಬಲ ದಟ್ಟವಾಗಿ ಉಕ್ಕತೊಡಗುತ್ತದೆ. ಇದುವರೆಗೆ ಬದುಕಿದ್ದೇ ಈ ಭಾವತೀವ್ರತೆಯಿಂದಾಗಿ. ಬಹುಶಃ ಮುಂದೆಯೂ ಹೀಗೇ.

ಪತ್ರಕರ್ತ ‘ವೃತ್ತಕರ್ತ’ನಾದರೆ ಅದು ನಿಜಕ್ಕೂ ದುರಂತ. ಕ್ಷೀಣಧ್ವನಿಯಾದರೇನಾಯ್ತು? ಮೌನವಾಗಿರುವುದಕ್ಕಿಂತ ಇದೇ ವಾಸಿ ಅಂತ ಅನಿಸುತ್ತದೆ. ಒಂದಿಷ್ಟು ಸಾರ್ಥಕ ಪ್ರಯೋಗಗಳಾಗಿದ್ದರೆ, ವೃತ್ತಿನೆಮ್ಮದಿ ದಕ್ಕಿದ್ದರೆ, ಅದು ಈ ಕ್ಷೀಣಧ್ವನಿಯಿಂದಾಗಿ.

ಆ ಧ್ವನಿ ಕಳೆದುಹೋಗದಿರಲಿ ಎಂಬುದೊಂದೇ ನನ್ನ ಆಸೆ. ಯಾವ ಕ್ರಿಯಾಶೀಲನೂ ಆ ಧ್ವನಿಯನ್ನು ಕಳೆದುಕೊಳ್ಳದಿರಲಿ ಎಂಬುದು ನನ್ನ ಶಾಶ್ವತ ಹಾರೈಕೆ.  

- ಚಾಮರಾಜ ಸವಡಿ

ಪ್ರಶ್ನೆಗಳಿಗೆ ಉತ್ತರಿಸದ ಪಲಾಯನವಾದ

21 Oct 2008

11 ಪ್ರತಿಕ್ರಿಯೆ
ಎರಡು ರೀತಿಯ ವ್ಯಕ್ತಿಗಳು ಈ ವಾರ ಅನಾವರಣಗೊಂಡಿದ್ದಾರೆ. ಒಂದು ಎಸ್.ಎಲ್. ಭೈರಪ್ಪ. ಇನ್ನೊಂದು ನಮ್ಮ ಸೋ ಕಾಲ್ಡ್ ಬುದ್ಧಿಜೀವಿಗಳು ಮತ್ತು ಪತ್ರಕರ್ತರು.

ಎಸ್.ಎಲ್. ಭೈರಪ್ಪ ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಬರೆದ ಲೇಖನ, ಅಲ್ಲಿ ಎತ್ತಿರುವ ಪ್ರಶ್ನೆಗಳಿಗೆ ನಮ್ಮ ಪತ್ರಕರ್ತ ಬುದ್ಧಿಜೀವಿಗಳು ಉತ್ತರ ಕೊಡುವುದಾಗಿದ್ದರೆ ಈ ಲೇಖನದ ಪ್ರತಿಕ್ರಿಯೆ ಅಗತ್ಯವಿದ್ದಿಲ್ಲ. ಅಂಥದೊಂದು ಪ್ರಯತ್ನ ಕೈಬಿಟ್ಟು ಭೈರಪ್ಪನವರನ್ನೇ ಗುರಿಯಾಗಿರಿಸಿ ಬರೆಯುತ್ತ ಹೊರಡುವ ಮೂಲಕ ಇವರೆಲ್ಲ ಸಹಜವಾಗಿ ಅನಾವರಣಗೊಂಡಿದ್ದಾರೆ.

ಜೋಗಿಯವರು ಕೆಂಡಸಂಪಿಗೆ ತಾಣದಲ್ಲಿ ಬರೆದ ಅಂಕಣ ಅಂಥದೊಂದು ಬರವಣಿಗೆ. ಸುದ್ದಿಮಾತು ಬ್ಲಾಗ್‌ನಲ್ಲಿ ಬಂದಿರುವ ಲೇಖನವೂ ಇದೇ ವರ್ಗಕ್ಕೆ ಸೇರಿದಂಥದು. ಇಂತಹ ಅಭಿಪ್ರಾಯಗಳು ಹೊರಬಂದಿದ್ದು ಓದುಗರಿಗೆ ಒಳ್ಳೆಯದೇ ಆಗಿದೆ. ಒಂದೆಡೆ ಭೈರಪ್ಪನವರ ಧೋರಣೆ ಸ್ಪಷ್ಟವಾದಂತೆ, ಇನ್ನೊಂದೆಡೆ ಅವರ ಒಂದು ಕಾಲದ ಅಭಿಮಾನಿಗಳು ಹಾಗೂ ಇದ್ದಕ್ಕಿದ್ದಂತೆ ಜಾತ್ಯತೀತರಾಗಲು ಹೊರಟವರ ಧೋರಣೆಗಳೂ ಸ್ಪಷ್ಟವಾಗಿವೆ.

ಭೈರಪ್ಪ ತಮ್ಮ ಅನಿಸಿಕೆ ಹೇಳಿದ್ದಾರೆ. ಅವರ ನಿಲುವಿನ ಬಗ್ಗೆ ಪ್ರಶ್ನೆಗಳಿದ್ದರೆ ಅದನ್ನು ತಾತ್ವಿಕವಾಗಿಯೇ ಖಂಡಿಸಬೇಕಾಗುತ್ತದೆ. ಅಲ್ಲಿ ಕಾದಂಬರಿಕಾರ ಭೈರಪ್ಪನವರನ್ನು ಎಳೆದುಕೊಂಡು ಬರುವ ಅವಶ್ಯಕತೆ ಖಂಡಿತ ಇರಲಿಲ್ಲ. ಅವರ ಕಾದಂಬರಿಗಳಲ್ಲಿ ಗು(ಸು)ಪ್ತ ಉದ್ದೇಶಗಳಿದ್ದವು ಎಂಬುದನ್ನು ಕಾಲು ಶತಮಾನದ ನಂತರ ಪತ್ತೆ ಹಚ್ಚಿದ ಹೆಮ್ಮೆ ಕಾಣಬೇಕಿರಲಿಲ್ಲ. ಭೈರಪ್ಪ ತಮ್ಮ ನಿಲುವನ್ನು ಯಾವಾಗಲೂ ಅತ್ಯಂತ ಸ್ಪಷ್ಟವಾಗಿಯೇ ಹೇಳುತ್ತ ಬಂದಿದ್ದಾರೆ. ಗುಪ್ತ ಉದ್ದೇಶಗಳನ್ನಿಟ್ಟುಕೊಂಡು ದಶಕಗಳ ಕಾಲ ಯಾರಿಗೂ ಅನುಮಾನ ಬರದಂತೆ ಬರೆಯುವುದು ಸಾಧ್ಯವಿಲ್ಲ ಎಂಬುದನ್ನು ಅವರ ಇತ್ತೀಚಿನ ಟೀಕಾಕಾರರು ಗಮನಿಸಬೇಕಿತ್ತು.

ಒಬ್ಬ ಕಾದಂಬರಿಕಾರರಾಗಿ ಅಪಾರ ಸಾಧ್ಯತೆಗಳಿರುವ ವ್ಯಕ್ತಿ ಭೈರಪ್ಪ. ಅವರ ಪ್ರತಿಯೊಂದು ಕೃತಿಯೂ ಅದನ್ನು ಮತ್ತೆ ಮತ್ತೆ ಸ್ಪಷ್ಟಪಡಿಸುತ್ತದೆ. ಒಬ್ಬ ಸಾಮಾನ್ಯ ಓದುಗನಿಗೆ, ಅಥವಾ ಬಹುತೇಕ ಓದುಗರಿಗೆ ಅವರ ಬರವಣಿಗೆ ಇಷ್ಟವಾಗುವುದು ಅವರು ಕತೆ ಹೇಳುವ ರೀತಿಯಿಂದಾಗಿ. ಭಾವನೆಗಳನ್ನು ಕಟ್ಟಿಕೊಡುವ ಹದದಿಂದಾಗಿ. ಕಾದಂಬರಿಯ ಪಾತ್ರಗಳಲ್ಲಿ, ದೃಶ್ಯಗಳಲ್ಲಿ ಓದುಗ ಮುಳುಗಿಹೋಗುತ್ತಾನೆಯೇ ಹೊರತು, ಅದರಲ್ಲಿ ಗುಪ್ತ ಸಂದೇಶ ಇದೆಯಾ? ಎಂಬುದನ್ನು ನೋಡಲು ಆತ ಹೋಗುವುದಿಲ್ಲ. ಇದು ಬಹುತೇಕ ಜನರ ಅಭಿಪ್ರಾಯ. ಅವರ ಇತ್ತೀಚಿನ ಟೀಕಾಕಾರರೂ ತೀರಾ ಇತ್ತೀಚಿನವರೆಗೆ ಭೈರಪ್ಪನವರ ಬರವಣಿಗೆಯ ಅಭಿಮಾನಿಗಳೇ ಆಗಿದ್ದರು ಎಂಬುದೇ ಬರವಣಿಗೆಯ ಸತ್ವವನ್ನು ತೋರಿಸುತ್ತದೆ.

ಆದರೆ, ಇಂತಹ ಎಲ್ಲಾ ಕೃತಿಗಳ ಹಿಂದೆ ಹಿಂದು ಧರ್ಮವನ್ನು ವೈಭವೀಕರಿಸುವ ಉದ್ದೇಶವಿತ್ತು ಎಂಬುದನ್ನು ಇವರೆಲ್ಲ ಇತ್ತೀಚೆಗೆ ಪತ್ತೆ ಹಚ್ಚಿದರೆ? ಒಂದು ವೇಳೆ ಭೈರಪ್ಪನವರ ಮೂಲ ಉದ್ದೇಶವೇ ಇದಾಗಿದ್ದರೆ, ಅವರು ಅದನ್ನು ಸಾಧಿಸಲು ಸೋತಿದ್ದಾರೆ ಎಂದೇ ಹೇಳಬೇಕಾಗುತ್ತದೆ. ಏಕೆಂದರೆ, ನನ್ನಂಥ ಹಲವಾರು ಜನರು ಭೈರಪ್ಪನವರ ಕಾದಂಬರಿಗಳನ್ನು ಓದುವ ಖುಷಿಯಿಂದ ಆಸ್ವಾದಿಸಿದ್ದೇವೆ. ಅವು ನಮ್ಮಲ್ಲಿ ಯಾವತ್ತೂ ಹಿಂದು ಪರ ನಿಲುವನ್ನು ಬೆಳೆಸಲಿಲ್ಲ. ಇಡೀ ಕಾದಂಬರಿಯ ಸಾರಾಂಶ ಇದು ಎಂಬಂಥ ಸಂದೇಶ ನೀಡಲಿಲ್ಲ. ಎಷ್ಟು ಚೆನ್ನಾಗಿ ಬರೆದಿದ್ದಾರೆ ಎಂಬ ಮೆಚ್ಚುಗೆ ಬಿಟ್ಟರೆ ಯಾವುದೇ ಕೋಮು, ಧರ್ಮ ಅಥವಾ ಸಿದ್ಧಾಂತದ ಪರ ನಮ್ಮನ್ನು ಒಯ್ಯಲಿಲ್ಲ. ಬಹುಶಃ ಅವರ ಇತ್ತೀಚಿನ ಟೀಕಾಕಾರರಿಗೂ ಇಂಥದೇ ಅನುಭವ ಆಗಿದೆ. ಹಲವಾರು ಸಂದರ್ಭಗಳಲ್ಲಿ ಆ ಬಗ್ಗೆ ಅವರೇ ಮುಕ್ತವಾಗಿ ಹೇಳಿಕೊಂಡಿದ್ದಾರೆ.

ಹೀಗಿರುವಾಗ, ಭೈರಪ್ಪನವರು ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಬರೆದ ಲೇಖನ ಆಧಾರವಾಗಿಟ್ಟುಕೊಂಡು, ಅವರ ಒಟ್ಟಾರೆ ಕೃತಿಗಳ ಉದ್ದೇಶದ ಬಗ್ಗೆ ಚರ್ಚಿಸಲು ಹೊರಡುವುದು ಹಾಸ್ಯಾಸ್ಪದ. ಇಂತಹ ಪ್ರತಿಕ್ರಿಯಾ ಬರವಣಿಗೆಗಳ ಮೂಲ ಉದ್ದೇಶವನ್ನೇ ಅದು ಪ್ರಶ್ನಿಸುವಂತೆ ಮಾಡುತ್ತದೆ. ಭೈರಪ್ಪ ತಮ್ಮ ನಿಲುವನ್ನು ಅತ್ಯಂತ ಸ್ಪಷ್ಟವಾಗಿ ಹೇಳಿದ್ದಾರೆ. ಅದನ್ನು ಒಪ್ಪದಿದ್ದರೆ, ಅದನ್ನು ಅಷ್ಟೇ ಸ್ಪಷ್ಟವಾಗಿ, ತಾತ್ವಿಕವಾಗಿಯೇ ಖಂಡಿಸಬೇಕು. ಅದು ಬಿಟ್ಟು, ಅವರ ಕಾದಂಬರಿಗಳಲ್ಲೂ ಇಂಥದೇ ಉದ್ದೇಶವಿತ್ತು, ಈ ವ್ಯಕ್ತಿ ಮೊದಲಿನಿಂದಲೂ ಹೀಗೇ ಕಣ್ರೀ ಎಂದು ಹೇಳಲು ಹೊರಡುವುದು ಮೂರ್ಖತನವಾಗುತ್ತದೆ. ಇವರೆಲ್ಲ ಯಾರನ್ನೋ ಮೆಚ್ಚಿಸಲು ಯತ್ನಿಸುತ್ತಿದ್ದಾರೆ ಎಂಬ ಪ್ರಶ್ನೆ ಹುಟ್ಟಿಸುತ್ತದೆ.

ಭೈರಪ್ಪನವರ ಲೇಖನದ ಬಹಳಷ್ಟು ವಿಷಯಗಳು ಮೇಲ್ನೋಟಕ್ಕೆ ಮುಸ್ಲಿಂ-ಕ್ರಿಶ್ಚಿಯನ್ ವಿರೋಧಿಯಾಗಿಯೇ ಕಾಣುತ್ತವೆ. ಆದರೆ, ಅವರು ಎತ್ತಿರುವ ಪ್ರಶ್ನೆಗಳು ಯಾವವೂ ಹೊಸವಲ್ಲ. ಕಾಲಕಾಲಕ್ಕೆ ಇಂತಹ ಪ್ರಶ್ನೆಗಳು ಏಳುತ್ತಲೇ ಇವೆ. ಬಹಳಷ್ಟು ಜನ ಇವನ್ನು ಪ್ರಸ್ತಾಪಿಸಿದ್ದೂ ಆಗಿದೆ. ಈಗಲೂ ಅವುಗಳ ಬಗ್ಗೆ ಚರ್ಚೆಗಳು ನಡೆದೇ ಇವೆ. ಭೈರಪ್ಪನವರು ಅವನ್ನು ಕ್ರೋಡೀಕರಿಸಿದಂತೆ ಬರೆದಿದ್ದಾರೆ, ಅಷ್ಟೇ. ಈಗ ಚರ್ಚೆ ನಡೆಯಬೇಕಿರುವುದು ಭೈರಪ್ಪನವರ ನಿಲುವಿನ ಬಗ್ಗೆ ಅಲ್ಲ. ಅವರು ಎತ್ತಿರುವ ಪ್ರಶ್ನೆಗಳ ಬಗ್ಗೆ.

ಆದರೆ, ಅದೇ ನಡೆಯುತ್ತಿಲ್ಲ.

ಒಂದು ಉದಾಹರಣೆ ಮೂಲಕ ಈ ಬರಹ ಮುಗಿಸುತ್ತೇನೆ. ಇತ್ತೀಚೆಗೆ ಬೆಂಗಳೂರು ಸೇರಿದಂತೆ ದೇಶದ ಹಲವಾರು ಪ್ರಮುಖ ನಗರಗಳಲ್ಲಿ ಸರಣಿ ಬಾಂಬ್ ಸ್ಫೋಟಗಳು ನಡೆದವು. ಆಗ ನಮ್ಮ ಬಹುತೇಕ ಬುದ್ಧಿಜೀವಿಗಳು, ಇತ್ತೀಚೆಗಷ್ಟೇ ಜಾತ್ಯತೀತರಾದ ಬಹುತೇಕ ಜನ ಅದನ್ನು ಖಂಡಿಸಲಿಲ್ಲ. ಖಂಡಿಸಿದ ಕೆಲವರಲ್ಲಿ ತೀವ್ರತೆ ಕಾಣಲಿಲ್ಲ. ಇಂಥ ಬೆಳವಣಿಗೆಗಳು ಅಪಾಯಕಾರಿ ಎಂಬುದರ ಬಗ್ಗೆ ಮಾತನಾಡಲಿಲ್ಲ. ಯಾರೋ ಅವಿವೇಕಿಗಳು, ತಪ್ಪು ಸಿದ್ಧಾಂತ ನಂಬಿಕೊಂಡು ಬಾಂಬಿಡುವುದು ಆ ಧರ್ಮದ ಇತರರನ್ನು ಅನುಮಾನಕ್ಕೆ ಈಡು ಮಾಡುತ್ತವೆ ಎಂಬುದರ ಬಗ್ಗೆ ಕಳವಳ ಪಡಲಿಲ್ಲ.

ಆದರೆ, ದತ್ತ ಜಯಂತಿ ಬಂದ ಕೂಡಲೇ ಇವರೆಲ್ಲ ಮೈಕೊಡವಿ ಎದ್ದು ಕೂತರು. ವರ್ಷ ಪೂರ್ತಿ ಸುಪ್ತವಾಗುವ ಕೋಮು ಸೌಹಾರ್ದ ವೇದಿಕೆ ಹಾಗೂ ಅಂತಹ ಸಂಘಟನೆಗಳು ಎದ್ದು ಕೂತವು. ದತ್ತ ಜಯಂತಿ ಮುಗಿಯುವವರೆಗೆ ಅವರೆಲ್ಲ ಫುಲ್ ಬಿಜಿ. ಹಿಂದು ಪರ ಸಂಘಟನೆಗಳನ್ನು ಸಾರಾಸಗಟಾಗಿ ಟೀಕಿಸುತ್ತ, ಧರಣಿ-ಮುಷ್ಕರದ ಎಚ್ಚರಿಕೆ ಕೊಡುತ್ತ ಕಾಲಹರಣ ಮಾಡುವುದು ಬಿಟ್ಟರೆ ಈ ಸಂಘಟನೆಗಳು ಹಾಗೂ ಇವರ ಹಿಂದಿರುವ ಜನರಿಂದ ಸಮಾಜಕ್ಕೆ ಆದ ಒಳಿತು ಅಷ್ಟಕ್ಕಷ್ಟೇ. ದೇಶಕ್ಕೆ ಬಾಂಬಿಡುವ ಜನರನ್ನು ಟೀಕಿಸದ ಇಂಥವರ ಸಾಲಿಗೆ ಈಗ ಭೈರಪ್ಪನವರ ಇತ್ತೀಚಿನ ಟೀಕಾಕಾರರೂ ಸೇರಿಕೊಂಡಿದ್ದಾರೆ.

ತಪ್ಪು ಯಾರೇ ಮಾಡಿರಲಿ, ಅದನ್ನು ತಪ್ಪೆಂದು ಹೇಳುವ ಎದೆಗಾರಿಕೆ ಬೇಕು. ಭೈರಪ್ಪನವರ ನಿಲುವನ್ನು ಖಂಡಿಸಲು ತೋರಿದಂಥ ಉತ್ಸಾಹವನ್ನೇ ಬಾಂಬಿಡುವ ಜನರ ಬಗ್ಗೆಯೂ ತೋರಬೇಕಾಗುತ್ತದೆ. ಇಲ್ಲದಿದ್ದರೆ ಬೌದ್ಧಿಕ ಬರವಣಿಗೆಗಳೆಲ್ಲ ವ್ಯರ್ಥ ಪ್ರಲಾಪವಾಗುತ್ತವೆ.
- ಚಾಮರಾಜ ಸವಡಿ

ಕರ್ನಾಟಕ ಚುನಾವಣೆ-ಎರಡು ಹಂತಗಳು

18 May 2008

0 ಪ್ರತಿಕ್ರಿಯೆ

ಕರ್ನಾಟಕ ಚುನಾವಣೆ ಹೊಸದೊಂದು ಹೊಸ್ತಿಲು ತಲುಪಿದೆ.

ಎಲ್ಲ ಲೆಕ್ಕಾಚಾರಗಳು ಬಹುತೇಕ ಸರಿಯಾದರೆ, ಬಿಜೆಪಿ ಸರಳ ಬಹುಮತದ ಹತ್ತಿರ ಬರಲಿದೆ. ಎಲ್ಲ ವಾದ-ವಿವಾದಗಳನ್ನು ಮೀರಿ ಪ್ರಥಮ ಬಿಜೆಪಿ ಸರ್ಕಾರ (ಈ ಹಿಂದೆ ಆಗಿದ್ದು ಸಮ್ಮಿಶ್ರ ಸರ್ಕಾರ) ರಾಜ್ಯದಲ್ಲಿ ಅಸ್ತಿತ್ವಕ್ಕೆ ಬರುವ ಲಕ್ಷಣಗಳು ಸ್ಪಷ್ಟ.

ಮೊದಲ ಹಂತದ ಚುನಾವಣೆಯಲ್ಲಿ ೮೯ ಸ್ಥಾನಗಳಿಗೆ ಚುನಾವಣೆ ನಡೆಯಿತು. ಸಮೀಕ್ಷೆಗಳ ಪ್ರಕಾರ ಬಿಜೆಪಿ ಸುಮಾರು ೩೯ ಸ್ಥಾನಗಳನ್ನು ಗಳಿಸಲಿದೆ. ಅಂದರೆ, ಜೆಡಿಎಸ್‌ ಪ್ರಬಲವಾಗಿರುವ ಹಳೆಯ ಮೈಸೂರು ವಿಭಾಗದಲ್ಲಿ ಅದು ಮುಂದಿದೆ ಎಂದಾಯಿತು. ಎರಡನೇ ಹಂತದಲ್ಲಿ ನಡೆದ ಹತ್ತು ಜಿಲ್ಲೆಗಳ ೬೬ ಕ್ಷೇತ್ರಗಳ ಚುನಾವಣೆಯಲ್ಲಿ ಅದು ಕನಿಷ್ಠ ೩೫ ಸ್ಥಾನಗಳನ್ನು ಗಳಿಸಲಿದೆ. ಅಂದರೆ, ಚುನಾವಣೆ ಮುಗಿದಿರುವ ೧೫೫ ಕ್ಷೇತ್ರಗಳಲ್ಲಿ ಬಿಜೆಪಿ ಗಳಿಸಬಹುದಾದ ಸ್ಥಾನಗಳು ೭೦ಕ್ಕೂ ಅಧಿಕ. ಮೂರನೇ ಹಂತದ ಚುನಾವಣೆಯಲ್ಲಿ ೬೯ ಸ್ಥಾನಗಳಿಗೆ ನಡೆಯಲಿರುವ ಸ್ಪರ್ಧೆಯಲ್ಲಿಯೂ ಇದೇ ಪ್ರಮಾಣದ ಮೇಲುಗೈ ಸಾಧಿಸುವ ಲಕ್ಷಣಗಳು ಸ್ಪಷ್ಟವಾಗಿವೆ.

ಅಂದರೆ, ಕರ್ನಾಟಕ ವಿಧಾನಸಭೆಯ ಒಟ್ಟು ೨೨೪ ಸ್ಥಾನಗಳ ಪೈಕಿ ಬಿಜೆಪಿ ೧೦೦ರಿಂದ ೧೧೦ ಸ್ಥಾನಗಳನ್ನು ಪಡೆಯುವ ಸಾಧ್ಯತೆಗಳಿವೆ. ಸರಳ ಬಹುಮತಕ್ಕೆ ೧೧೩ ಸ್ಥಾನಗಳು ಸಾಕು. ತನ್ನ ಹಾಗೂ ಇತರ ಪಕ್ಷದ ಬಂಡಾಯ ಅಭ್ಯರ್ಥಿಗಳು ಹಾಗೂ ಪಕ್ಷೇತರರನ್ನು ತನ್ನೆಡೆಗೆ ಸೆಳೆಯುವುದು ಬಿಜೆಪಿಗೆ ಕಷ್ಟವಾಗದು. ಆಗ ಸರಳ ಬಹುಮತಕ್ಕೆ ಇರುವ ಕೊರತೆ ಸರಳವಾಗಿಯೇ ನಿವಾರಣೆಯಾಗುತ್ತದೆ.

ಇವೆಲ್ಲ ಲಕ್ಷಣಗಳನ್ನು ನೋಡಿದರೆ, ರಾಜ್ಯಕ್ಕೆ ಈ ಬಾರಿ ಅತಂತ್ರ ವಿಧಾನಸಭೆ ಬೆದರಿಕೆ ಕಾಡುವುದಿಲ್ಲ. ಸ್ಪಷ್ಟ ಬಹುಮತ ಇಲ್ಲದಿದ್ದರೂ ಸರಳ ಬಹುಮತಕ್ಕೆ ಮೋಸವಿಲ್ಲ. ಬಿ.ಎಸ್‌. ಯಡಿಯೂರಪ್ಪನವರನ್ನು ಮುಖ್ಯಮಂತ್ರಿ ಎಂದು ಬಿಂಬಿಸಿರುವುದರಿಂದ, ಆ ಗೊಂದಲವೂ ನಿವಾರಣೆಯಾಗಿದೆ. ರಾಜಕೀಯ ಪಂಡಿತರ ಲೆಕ್ಕಾಚಾರ, ಭವಿಷ್ಯ, ಊಹಾಪೋಹಗಳನ್ನು ಮೀರಿ ಮತದಾರ ಬಿಜೆಪಿ ಪರ ನಿಂತಿದ್ದಾನೆ.

ಇದು ಇವತ್ತಿನ ಪರಿಸ್ಥಿತಿ.

ಮಾಧ್ಯಮದ ಮೇಲೆ ಆರೋಪ

ಹಲವಾರು ಪ್ರಶ್ನೆಗಳಿಗೆ ಇಲ್ಲಿ ಉತ್ತರ ಅಗತ್ಯ. ಮೊದಲನೆಯದು, ಮಾಧ್ಯಮಗಳು ಬಿಜೆಪಿ ಪರ ನಿಂತವು ಎಂಬ ಆರೋಪದ ಬಗ್ಗೆ:

ಪತ್ರಿಕೆಗಳು ಹಾಗೂ ಪತ್ರಕರ್ತರು ಒಂದು ಪಕ್ಷ ಅಥವಾ ನಾಯಕನ ಪರ ನಿಲ್ಲುವುದು ಮೊದಲಿನಿಂದಲೂ ನಡೆದೇ ಇದೆ. ಆದರೆ, ಬಿಜೆಪಿಗೆ ’ಇದು ನಮ್ಮ ಪತ್ರಿಕೆ’ ಎಂಬ ಭಾವನೆ ಹುಟ್ಟಿಸಿದ ಪತ್ರಿಕೆಗಳು ಸದ್ಯಕ್ಕೆ ಯಾವೂ ಇಲ್ಲ. ಸಂಯುಕ್ತ ಕರ್ನಾಟಕ ಕಾಂಗ್ರೆಸ್‌ ಪರ. ಅದು ಬಹಿರಂಗವಾಗಿಯೇ ಕಂಡು ಬರುವಂಥದ್ದು. ಸ್ವಲ್ಪ ಮಟ್ಟಿಗೆ ವಿಜಯ ಕರ್ನಾಟಕ ಬಿಜೆಪಿ ಪರ ನಿಂತಿರುವುದೂ ಹೌದು. ಪ್ರಜಾವಾಣಿ ಇದ್ದುದರಲ್ಲಿಯೇ ನಿರ್ಲಿಪ್ತ. ಕುಮಾರಸ್ವಾಮಿ ಮುಖ್ಯಮಂತ್ರಿಯಾದ ನಂತರ, ಕನ್ನಡಪ್ರಭ ಕೊಂಚ ಮಟ್ಟಿಗೆ ಜೆಡಿಎಸ್‌ ಪರ ವಾಲಿದ್ದು ಸ್ವಯಂಗೋಚರ.

ಆದರೆ, ಯಾವ ಪತ್ರಿಕೆಯೂ ಬಿಜೆಪಿ ಪರ ಬಹಿರಂಗ ಪ್ರಚಾರ ನಡೆಸಿಲ್ಲ. ಅದೇ ರೀತಿ ದೃಶ್ಯ ಮಾಧ್ಯಮಗಳೂ ಪಕ್ಷ ನಿಷ್ಠೆ ವ್ಯಕ್ತಪಡಿಸಿಲ್ಲ. ಅಂಥದೊಂದು ಒಳ ಒಪ್ಪಂದ ಆದ ಹಾಗೂ ಕಂಡಿಲ್ಲ. ಚುನಾವಣೆ ಹತ್ತಿರ ಬಂದಾಗ, ಎಲ್ಲ ಪತ್ರಿಕೆ ಹಾಗೂ ದೃಶ್ಯ ಮಾಧ್ಯಮಗಳು ಸಾರ್ವತ್ರಿಕ ಗೊಂದಲವನ್ನೇ ಬಿಂಬಿಸಿದವು. ಈ ಸಾರಿಯೂ ಅತಂತ್ರ ವಿಧಾನಸಭೆಯೇ ಬರಬಹುದು ಎಂದು ಅನುಮಾನ ವ್ಯಕ್ತಪಡಿಸಿದವು. ಬಿಜೆಪಿಗೆ ಸಹಾನುಭೂತಿ ವ್ಯಕ್ತವಾಗುತ್ತದಾದರೂ, ಅದು ಸರಳ ಬಹುಮತ ಗಳಿಸಿ ಕೊಡಲಾರದು ಎಂದೇ ಹೇಳಿದ್ದವು.

ಈ ನಿಟ್ಟಿನಲ್ಲಿ ಪತ್ರಿಕೆ ಹಾಗೂ ಟಿವಿ ಮಾಧ್ಯಮಗಳು ವಾಸ್ತವವನ್ನೇ ಬಿಂಬಿಸುತ್ತ ಬಂದಿವೆ. ಅಲ್ಲಲ್ಲಿ ಪಕ್ಷ ನಿಷ್ಠೆ ಹಾಗೂ ನಾಯಕ ನಿಷ್ಠೆ ಕಂಡಿದೆಯಾದರೂ ಅದು ಮತದಾರರನ್ನು ಪ್ರಭಾವಗೊಳಿಸುವ ಮಟ್ಟಿಗಂತೂ ಇದ್ದಿಲ್ಲ. ಇವತ್ತಿನ ಪರಿಸ್ಥಿತಿಯಲ್ಲಿ ಅಂಥದ್ದೊಂದು ಪ್ರಭಾವ ಬೀರಬಲ್ಲ ಮಾಧ್ಯಮವೂ ಇಲ್ಲ. ಪತ್ರಿಕೆಗಳ ಸಂಖ್ಯೆ, ಚಾನೆಲ್‌ಗಳ ಸಂಖ್ಯೆ ಹೆಚ್ಚಾದಂತೆ, ಪಕ್ಷ ನಿಷ್ಠೆ ಹರಿದು ಹಂಚಿಹೋಗಿದೆ. ಒಂದು ವೇಳೆ ಯಾವುದೇ ಪತ್ರಿಕೆ ಅಥವಾ ಚಾನೆಲ್‌ ಬಯಸಿದರೂ, ಅಂಥದೊಂದು ಪ್ರಭಾವ ವಲಯವನ್ನು ಸೃಷ್ಟಿಸಲಾರದು. ಇದು ಮಾಧ್ಯಮದ ಮಿತಿ.

ಒಬ್ಬ ಪತ್ರಕರ್ತನಾಗಿ ನಾನು ಮಾಧ್ಯಮಗಳ ಪರ ಮಾತನಾಡುತ್ತಿಲ್ಲ. ವಾಸ್ತವ ಏನಿದೆ ಎಂಬುದನ್ನು ಹೇಳುತ್ತಿದ್ದೇನೆ. ರಂಜನೀಯ ವರದಿಗಳು, ವಿಶೇಷ ವರದಿಗಳು ಹಾಗೂ ಸಂವಾದ ಕಾರ್ಯಕ್ರಮಗಳ ಹೊರತಾಗಿಯೂ ಮತದಾರ ತನಗನಿಸಿದ್ದನ್ನು ಮಾಡಬಲ್ಲ ಎಂಬುದಕ್ಕೆ ಚುನಾವಣೆ ಸಾಕ್ಷಿ. ಅಂತಿಮವಾಗಿ, ಒಂದು ಚುನಾವಣೆಯನ್ನು ಗೆಲ್ಲಿಸುವುದು ಆಯಾ ಪಕ್ಷದ ನಿಷ್ಠಾವಂತ ಕಾರ್ಯಕರ್ತನೇ ಹೊರತು, ವರದಿಗಾರರೂ ಅಲ್ಲ, ಮಾಧ್ಯಮವೂ ಅಲ್ಲ, ಪಕ್ಷದ ನಾಯಕನೂ ಅಲ್ಲ. ಕಾರ್ಯಕರ್ತ ಪ್ರೇರಿತನಾಗಿದ್ದರೆ, ಆತ ಮಾಡಬಹುದಾದ ಅಪೂರ್ವ ಕೆಲಸವನ್ನು ಮಾಧ್ಯಮಗಳು ಮಾಡಲಾರವು. ಅದು ಸತ್ಯ.

ಈ ಚುನಾವಣೆ ಇಂತಹ ಹಲವಾರು ವಾಸ್ತವ ಸಂಗತಿಗಳನ್ನು ಬಯಲಿಗೆ ತಂದಿದೆ.

ಜೆಡಿಎಸ್‌ನ ಅಧೋಗತಿ

ಎರಡನೆಯದು ಜೆಡಿಎಸ್‌ನ ಸ್ಥಿತಿ.

ಆ ಪಕ್ಷ ತಾನು ಆಡಿದ್ದೇ ಆಟ ಎಂದು ಭಾವಿಸಿಕೊಂಡಿತ್ತು. ಜೆಡಿಎಸ್‌ನವರು ಅದಕ್ಕೆ ತಕ್ಕಂತೆ ನಡೆದೂಕೊಂಡಿದ್ದೂ ಆಯಿತು. ಪಕ್ಷವನ್ನು ಸ್ವಂತ ಆಸ್ತಿ ಎಂಬಂತೆ ನಡೆದುಕೊಂಡ ಎಚ್‌.ಡಿ. ದೇವೇಗೌಡರ ಮಾತೇ ಅಲ್ಲಿ ಅಂತಿಮ. ಉಳಿದವರು ಅದನ್ನು ಒಪ್ಪಬೇಕು ಇಲ್ಲವೆ ಹೊರನಡೆಯಬೇಕು ಎಂಬಂಥ ವಾತಾವರಣ ನಿರ್ಮಾಣವಾಗಿದೆ. ಅನಿವಾರ್ಯ ಸಂದರ್ಭಗಳಲ್ಲಿ ಅದೆಲ್ಲ ನಡೆಯಬಹುದು. ಆದರೆ, ಚುನಾವಣೆ ಎಂಬುದು ಎಲ್ಲ ಅನಿವಾರ್ಯತೆಗಳನ್ನು ಹೋಗಲಾಡಿಸುವಂಥ ಸಮಯ.

ಹೀಗಾಗಿ, ಚುನಾವಣೆ ಘೋಷಣೆಯಾದಂತೆ, ಜೆಡಿಎಸ್‌ನ ಭ್ರಮೆಗಳು ಒಂದೊಂದಾಗಿ ಕರಗತೊಡಗಿದವು. ಅದರ ಹಿರಿಯ ನಾಯಕರು ಪಕ್ಷ ತೊರೆದು ಹೋದರು. ಅದೇ ರೀತಿ, ಟಿಕೆಟ್‌ ಸಿಕ್ಕಿಲ್ಲ ಎಂಬ ಕಾರಣಕ್ಕೆ ಇತರ ಪಕ್ಷಗಳ ನಾಯಕರು ಜೆಡಿಎಸ್‌ ಕಡೆ ಬಂದರು. ತಮ್ಮ ಜೊತೆಗೆ ಚುನಾವಣೆ ಗೆಲ್ಲಬಲ್ಲ ಪ್ರಭಾವವೂ ಬರುತ್ತದೆ ಎಂದು ವಲಸೆ ನಾಯಕರು ಭ್ರಮೆ ಇಟ್ಟುಕೊಂಡಿದ್ದರು. ಅದು ನಡೆಯುವುದಿಲ್ಲ ಎಂಬುದನ್ನು ಪ್ರಾಥಮಿಕ ಸಮೀಕ್ಷೆ ಈಗ ಸ್ಪಷ್ಟಪಡಿಸಿದೆ.

ಅದಕ್ಕೇ ಇರಬೇಕು, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಮಾಧ್ಯಮಗಳ ವಿರುದ್ಧ ಹೇಳಿಕೆ ನೀಡಿದ್ದು. ಬಿಜೆಪಿ ಜೊತೆ ಯಾವ್ಯಾವ ಪತ್ರಕರ್ತರು ಒಪ್ಪಂದ ಮಾಡಿಕೊಂಡಿದ್ದಾರೆ, ಎಷ್ಟು ಹಣ ಪಡೆದಿದ್ದಾರೆ ಎಂಬುದನ್ನು ಪಾರ್ಟಿ ಏರ್ಪಡಿಸಿ ವಿವರಿಸುತ್ತೇನೆ ಎಂದಿದ್ದಾರೆ. ಒಂದು ವೇಳೆ ಸಮೀಕ್ಷಾ ವರದಿ ಜೆಡಿಎಸ್‌ ಮುನ್ನಡೆ ಸೂಚಿಸಿದ್ದರೆ, ಕುಮಾರಸ್ವಾಮಿ ಇಂಥ ಮಾತನ್ನು ಹೇಳುತ್ತಿರಲಿಲ್ಲ. ಇದು ಸೋಲುವವನ ಹತಾಶ ಕೂಗಾಗುತ್ತದೆಯೇ ಹೊರತು ಸತ್ಯವಾಗದು.

ಮಾಧ್ಯಮಗಳು ವರದಿ ಮಾಡಿದ್ದು ಜೆಡಿಎಸ್‌ನ ಅನಾಚಾರವನ್ನು. ವಚನಭ್ರಷ್ಟತೆಯನ್ನು. ಎಡಬಿಡಂಗಿತನವನ್ನು. ಏಕವ್ಯಕ್ತಿ ಸಿದ್ಧಾಂತವನ್ನು. ಕುಟುಂಬ ರಾಜಕಾರಣವನ್ನು. ಅದೇ ರೀತಿ, ಮಾಧ್ಯಮಗಳು ಬಿಜೆಪಿಯ ಬಂಡವಾಳವನ್ನೂ ಬಯಲಿಗಿಟ್ಟಿವೆ. ಮುಖ್ಯಮಂತ್ರಿಯಾಗಬೇಕು ಎಂಬ ಒಂದೇ ತಪನೆಯಿಂದ ಇಡೀ ಪಕ್ಷವನ್ನೇ ಅಡ ಇಡಲು ಮುಂದಾಗಿದ್ದ ಯಡಿಯೂರಪ್ಪನವರ ಕ್ರಮವನ್ನು ಕಟುವಾಗಿ ಟೀಕಿಸಿವೆ. ಒಬ್ಬ ಶೋಭಾ ಕರಂದ್ಲಾಜೆಗಾಗಿ ಅವರು ಬಡಿದಾಡಿದ ಬಡಿವಾರವನ್ನು ಬಯಲು ಮಾಡಿವೆ. ಅದೇ ರೀತಿ, ಕಾಂಗ್ರೆಸ್‌ನ ಸೋಮಾರಿತನವನ್ನು, ಯಾವತ್ತೂ ಜನರೊಂದಿಗೆ ಬೆರೆಯದ ಮಾಜಿ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಅವರ ಡಂಬಾಚಾರವನ್ನು, ದೂರದೃಷ್ಟಿಯೇ ಇಲ್ಲದ ಧರಂ ಸಿಂಗ್‌ ಹಾಗೂ ಮಲ್ಲಿಕಾರ್ಜುನ ಖರ್ಗೆಯವರನ್ನೂ ಟೀಕಿಸಿವೆ.

ಅಷ್ಟೇ ಏಕೆ? ಸಜ್ಜನ, ಸಂಸ್ಕಾರವಂತ ಎಂದೆಲ್ಲ ’ಅಪವಾದ’ ಹೊತ್ತಿರುವ ಮಾಜಿ ಉಪಮುಖ್ಯಮಂತ್ರಿ ಎಂ.ಪಿ. ಪ್ರಕಾಶ್‌ ಅವರ ಸೈದ್ಧಾಂತಿಕ ದಿವಾಳಿತನವನ್ನೂ ಮಾಧ್ಯಮಗಳು ಬಯಲಿಗಟ್ಟಿವೆ. ಬಿಜೆಪಿ ಅಥವಾ ಕಾಂಗ್ರೆಸ್‌ನಲ್ಲಿ, ಯಾರೊಬ್ಬರು ಕರೆದರೂ ಹೋಗುತ್ತೇನೆ ಎಂಬ ಹೇಳಿಕೆ ನೀಡಿದ್ದ ಪ್ರಕಾಶ್‌ ಅವರಲ್ಲಿ ಯಾವ ಆದರ್ಶಗಳಿವೆ? ಸ್ವಂತ ಜಿಲ್ಲೆ ಬಳ್ಳಾರಿಯಲ್ಲಿ ಅವರು ಏಕೆ ವಿಫಲರಾಗುತ್ತ ಬಂದಿದ್ದಾರೆ? ತಾವು ಸಚಿವರಾಗಿದ್ದ ಅವಧಿಯಲ್ಲಿ ಪ್ರಕಾಶ್‌ ಮಾಡಿರುವ ಸಾಧನೆಗಳಾದರೂ ಏನು? ಅವಕಾಶವಾದಿತನವನ್ನು ದೇವೇಗೌಡರು ಬಹಿರಂಗವಾಗಿ ಮಾಡುತ್ತ ಬಂದಿದ್ದರೆ, ಎಂ.ಪಿ. ಪ್ರಕಾಶ್‌ ಅದನ್ನೇ ಸಂಸ್ಕಾರದ ಸೋಗಿನಲ್ಲಿ ಮಾಡುತ್ತ ಬಂದಿದ್ದಾರೆ. ಇಬ್ಬರಿಗೂ ಅಂತಹ ವ್ಯತ್ಯಾಸವೇನಿಲ್ಲ.

ಈ ಸಲದ ಚುನಾವಣೆ ಇಂತಹ ಎಲ್ಲರ ಢೋಂಗಿತನವನ್ನು ಬಯಲಿಗೆ ಎಳೆದಿದೆ. ಎಲ್ಲ ಪಕ್ಷಗಳೂ ಅಷ್ಟೇ ಕೆಟ್ಟಿವೆ ಎಂಬುದನ್ನು ಸ್ಪಷ್ಟಪಡಿಸಿವೆ.

ಜನಾದೇಶ ಬಿಜೆಪಿ ಪರ ಅಲ್ಲ

ಮೂರನೆಯದಾಗಿ, ಬಿಜೆಪಿಗೆ ಬಹುಮತ ಬರುತ್ತದಾದರೆ, ಆ ಪಕ್ಷ ಚೆನ್ನಾಗಿದೆ ಎಂಬ ಕಾರಣಕ್ಕಂತೂ ಖಂಡಿತ ಅಲ್ಲ. ಅದಕ್ಕೂ ಒಂದು ಅವಕಾಶ ಕೊಟ್ಟು ನೋಡೋಣ ಎಂಬ ಪ್ರಯೋಗಶೀಲತೆಯಿಂದ. ಅಧಿಕಾರ ಎಂದರೆ ಯಡಿಯೂರಪ್ಪನವರಿಗೆ ಎಷ್ಟು ಪ್ರೀತಿ ಎಂಬುದನ್ನು ಮತದಾರ ಬಲ್ಲ. ಅದಕ್ಕಾಗಿ, ಅವರು ಎಷ್ಟು ಬಾಗಬೇಕೋ ಅಷ್ಟೂ ಬಾಗಿದ್ದಾರೆ, ಜಾಡಿಸಿ ಒದ್ದ ಮೇಲೂ ಮತ್ತೆ ಮತ್ತೆ ಬಾಗಿದ್ದಾರೆ. ಇನ್ನು ಕೆಲಸವಾಗದು ಎಂದು ಸ್ಪಷ್ಟವಾದ ಮೇಲಷ್ಟೇ ಅವರು ಎದ್ದು ಚುನಾವಣೆಗೆ ಸಜ್ಜಾಗಿದ್ದು. ಅವರಿಂದಲೂ ಜನರಿಗೆ ಹೆಚ್ಚಿನ ನಿರೀಕ್ಷೆಗಳೇನಿಲ್ಲ. ಆದರೆ, ಅತಂತ್ರ ವಿಧಾನಸಭೆ ಬಂದರೆ, ಹೆಚ್ಚಿನ ಕಷ್ಟ ನಮಗೇ ಎಂಬ ಅರಿವಿನಿಂದಾಗಿ, ಇದುವರೆಗೆ ಅಧಿಕಾರಕ್ಕೆ ಬಂದಿರದ ಪಕ್ಷಕ್ಕೊಂದು ಅವಕಾಶ ಕೊಟ್ಟು ನೋಡೋಣ ಎಂದು ಬಿಜೆಪಿ ಬೆಂಬಲಿಸಿದ್ದಾರೆ. ಅಷ್ಟೇ.

ಹೀಗಾಗಿ, ಇದು ಯಾವ ಪಕ್ಷದ ವಿಜಯವೂ ಅಲ್ಲ. ಈ ಜನಾದೇಶ ಶಾಶ್ವತವೂ ಅಲ್ಲ. ಒಂದು ವೇಳೆ ಹಿಂದೆಯೇ ಲೋಕಸಭಾ ಚುನಾವಣೆಗಳು ಬಂದರೆ, ಆಗ ಲೆಕ್ಕಾಚಾರ ಖಂಡಿತ ಬದಲಾಗುತ್ತದೆ. ಗೆದ್ದ ಪಕ್ಷ, ಇದು ತನ್ನ ಸ್ವಂತ ವಿಜಯ ಎಂದು ಬೀಗುವಂತಿಲ್ಲ. ಸೋತ ಪಕ್ಷಗಳು, ಇದು ನಮ್ಮ ಸೋಲು ಎಂದು ನಿರಾಶರಾಗಬೇಕಿಲ್ಲ. ಇದು ಇವತ್ತಿನ ಸಂದರ್ಭಕ್ಕೆ ಮಾತ್ರ ನೀಡಲಾದ ಜನಾದೇಶ.

ಮತದಾರನ ಎಚ್ಚರಿಕೆ

ಇದರ ಜೊತೆಗೆ, ಈ ಸಲದ ಚುನಾವಣೆ ಹಲವಾರು ಸಂದೇಶಗಳನ್ನೂ ರವಾನಿಸಿದೆ.

  • ಅಧಿಕಾರದ ಹಪಾಹಪಿಯ ಬಹಿರಂಗ ಪ್ರದರ್ಶನ ಮತದಾರನಿಗೆ ಇಷ್ಟವಾಗುವುದಿಲ್ಲ. ರಾಜಕೀಯ ಪಕ್ಷಗಳಿಗೆ ಅಧಿಕಾರವೇ ಪರಮಧ್ಯೇಯ ಎಂದಾದರೆ, ನಮ್ಮಗಳ ಬಗ್ಗೆ ತಲೆ ಕೆಡಿಸಿಕೊಳ್ಳುವವರು ಯಾರು? ಎಂಬ ಪ್ರಶ್ನೆ ಅವರಲ್ಲಿ ಏಳುತ್ತದೆ. ಆಗ, ಪಕ್ಷ ಪ್ರೀತಿ ಹೊರಟುಹೋಗಿ, ಮತದಾರ ಕೂಡ ರಾಜಕೀಯ ನೇತಾರರಂತೆ ವ್ಯವಹಾರ ಬುದ್ಧಿ ಬೆಳೆಸಿಕೊಳ್ಳುತ್ತಾನೆ. ಆಗ ರಾಜಕೀಯ ಪಕ್ಷಗಳಿಗೆ ಆತನನ್ನು ವಂಚಿಸುವುದು, ಸುಳ್ಳು ಭರವಸೆ ಕೊಟ್ಟು ನಂಬಿಸುವುದು ಕಷ್ಟವಾಗುತ್ತದೆ. ಈ ಸಲ ಆಗಿರುವುದೇ ಅದು.
  • ಚುನಾವಣಾ ಆಯೋಗದ ಬಿಗಿ ಕ್ರಮದಿಂದಾಗಿ, ಮತದಾರನ ಮೇಲೆ ’ವಾತ್ಸಲ್ಯ’ ತೋರಿಸುವುದು ರಾಜಕೀಯ ಪಕ್ಷಗಳಿಗೆ ಸಾಧ್ಯವಾಗಿಲ್ಲ. ಆದರೆ, ತುಂಬ ಜನ ಮತದಾರರು ಇದನ್ನು ಅರ್ಥ ಮಾಡಿಕೊಂಡಿಲ್ಲ. ಬೇಕಂತಲೇ ರಾಜಕೀಯ ಪಕ್ಷಗಳು ನಮ್ಮನ್ನು ನಿರ್ಲಕ್ಷ್ಯಸಿವೆ. ಅಧಿಕಾರದಲ್ಲಿ ಇದ್ದಾಗಂತೂ ಸರಿಯಾಗಿ ಕೆಲಸ ಮಾಡಿಲ್ಲ. ಚುನಾವಣೆ ಸಮಯದಲ್ಲಾದರೂ ಕೈಬಿಚ್ಚಿ ಕೊಡಲು ಏನು ರೋಗ ಎಂದು ಭಾವಿಸಿದ್ದಾರೆ. ಹೀಗಾಗಿ, ಮತದಾನ ಮಾಡುವ ಉತ್ಸಾಹ ಕಡಿಮೆಯಾಗಿದೆ. ಚುನಾವಣೆಯಿಂದ ಚುನಾವಣೆಗೆ ಆಯೋಗದ ಹಿಡಿತ ಬಿಗಿಯಾಗುತ್ತ ಹೋಗುತ್ತಿದ್ದು, ಆಮಿಷ ಒಡ್ಡಿ ಮತದಾರರನ್ನು ಸೆಳೆಯುವುದು ರಾಜಕೀಯ ಪಕ್ಷಗಳಿಗೆ ಸಾಧ್ಯವಾಗದು. ಹೀಗಾಗಿ, ಕೆಲಸಗಳ ಮೂಲಕವೇ ಆತನನ್ನು ಹಿಡಿದಿಟ್ಟುಕೊಳ್ಳುವ ಅನಿವಾರ್ಯತೆ ಉಂಟಾಗಿದೆ.
  • ಯಾವ ಪಕ್ಷಕ್ಕೂ ಮತದಾರ ನಿಷ್ಠೆ ವ್ಯಕ್ತಪಡಿಸಿಲ್ಲ. ಎಲ್ಲ ಪಕ್ಷಗಳ ಬಗ್ಗೆಯೂ ಆತನಿಗೆ ಒಂದೇ ತೆರನಾದ ನಿರ್ಲಕ್ಷ್ಯ ಅಥವಾ ತಿರಸ್ಕಾರ. ಎಲ್ಲರೂ ತಂತಮ್ಮ ಹಿತವನ್ನಷ್ಟೇ ನೋಡಿಕೊಳ್ಳುವವರು ಎಂಬ ತಾತ್ಸಾರ. ಹೀಗಾಗಿ, ಜನಪರ ಕೆಲಸಗಳ ಮೂಲಕ ಮಾತ್ರ, ಜನರ ವಿಶ್ವಾಸ ಉಳಿಸಿಕೊಳ್ಳಬಹುದೇ ಹೊರತು ಭಾಷಣ ಅಥವಾ ಪತ್ರಿಕಾ ಹೇಳಿಕೆಗಳಿಂದ ಸಾಧ್ಯವಿಲ್ಲ.
  • ರಾಜ್ಯದ ಬಹುತೇಕ ಕ್ಷೇತ್ರಗಳಲ್ಲಿ ಮತದಾರ ಜಾಗೃತನಾಗಿದ್ದಾನೆ. ಅದರಲ್ಲೂ ಮೊದಲ ಬಾರಿ ಮತದಾನ ಮಾಡುತ್ತಿರುವವರು ನಿಜಕ್ಕೂ ಜಾಗೃತ ಮತದಾರರು. ತಮ್ಮ ಕ್ಷೇತ್ರದ ಅಭಿವೃದ್ಧಿ ಏಕೆ ಆಗಿಲ್ಲ? ಎಂಬ ಪ್ರಶ್ನೆಗಳು ಈಗ ಹುಟ್ಟಿಕೊಂಡಿವೆ. ಅಧಿಕಾರದಲ್ಲಿದ್ದಾಗ ನೀವೇನು ಮಾಡಿದಿರಿ? ಎಂಬ ಪ್ರಶ್ನೆಗಳು ಕೇಳಿ ಬರತೊಡಗಿವೆ. ಆರಿಸಿ ತಂದರೆ ಏನು ಮಾಡಬಲ್ಲಿರಿ? ಎಂಬ ವಿಚಾರಣೆ ಶುರುವಾಗಿದೆ. ಇದು ಹೊಸ ಬೆಳವಣಿಗೆ. ಬಹುಶಃ ಮಾಧ್ಯಮಗಳ ವಿಸ್ತರಣೆಯಿಂದ ಮೂಡಿರುವ ಅರಿವಿದು.
  • ಎಲ್ಲಕ್ಕಿಂತ ಮುಖ್ಯ: ಮಾಧ್ಯಮಗಳನ್ನು ಮತದಾರ ಪೂರ್ತಿಯಾಗಿ ನಂಬದಿರುವುದು. ಪತ್ರಿಕೆಗಳು ಹಾಗೂ ಟಿವಿಗಳಿಂದ ಆತ ತನಗೆ ಬೇಕಾದ ಮಾಹಿತಿಯನ್ನು ಪಡೆಯುತ್ತಾನೆಯೇ ಹೊರತು, ಅವು ಹೇರುವ ಅಭಿಪ್ರಾಯಗಳನ್ನಲ್ಲ. ’ಮಾಧ್ಯಮಗಳಲ್ಲಿ ಕೆಲಸ ಮಾಡುವವರೂ ಮನುಷ್ಯರು ತಾನೆ? ಅವರು ಆಮಿಷಕ್ಕೆ ಒಳಗಾಗಿಲ್ಲ ಎಂಬುದಕ್ಕೆ ಏನು ಗ್ಯಾರಂಟಿ?’ ಎಂಬ ಅಭಿಪ್ರಾಯಗಳೂ ಬಹಳಷ್ಟು ಕಡೆ ಕೇಳಿ ಬಂದಿವೆ. ನೀವು ಪತ್ರಕರ್ತರು ದುಡ್ಡು ಕೊಟ್ಟವರ ಪರ ಬರೆಯುತ್ತೀರಿ ಎಂದು ಜನ ಆರೋಪಿಸುತ್ತಿದ್ದುದನ್ನು ಬಹಳ ಸಾರಿ ನಾನೇ ಕೇಳಿದ್ದೇನೆ. ಅದು ಸತ್ಯವೂ ಹೌದು. ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಪತ್ರಿಕಾಗೋಷ್ಠಿಗಳು ರಂಗಾದಷ್ಟು ಬೇರೆ ಯಾವ ಅವಧಿಯಲ್ಲೂ ಆಗಲಿಲ್ಲ. ಪತ್ರಕರ್ತನ ನಿಷ್ಠೆ ಈ ಪರಿ ಖರೀದಿಯಾದ ಉದಾಹರಣೆಗಳು ಹಿಂದೆ ಯಾವತ್ತೂ ಸಿಗಲಿಕ್ಕಿಲ್ಲ.

ಆದರೆ, ಮತದಾರ ರಾಜಕೀಯ ಪಕ್ಷಗಳು, ಮಾಧ್ಯಮಗಳು ಹಾಗೂ ಭವಿಷ್ಯವಾದಿಗಳ ಲೆಕ್ಕಾಚಾರವನ್ನು ಒಂದೇ ಹೊಡೆತಕ್ಕೆ ತಲೆ ಕೆಳಗಾಗಿಸಿದ್ದಾನೆ. ಹೀಗಾಗಿ, ಈ ಸಲದ ಚುನಾವಣೆಯ ಗೆಲುವು ಆತನದೇ.

- ಚಾಮರಾಜ ಸವಡಿ

http://chamarajsavadi.blogspot.com