ಬದುಕೆಂಬ ಅಚ್ಚರಿಗಳ ಹುತ್ತ

12 Apr 2010

5 ಪ್ರತಿಕ್ರಿಯೆ
ಇದ್ಯಾವತ್ತೂ ಬದಲಾಗಲ್ಲ ಅಂತ ತೀವ್ರವಾಗಿ ಅನಿಸತೊಡಗಿದಾಗಲೇ ನಿಜವಾದ ಬದಲಾವಣೆ ಶುರುವಾಗತೊಡಗುತ್ತದೆ.

ಇದು ನನ್ನ ಹಳೆಯ ಅನುಭವ.  ಎಲ್ಲ ನಿಂತಂತೆ, ಏನೂ ಬದಲಾಗುತ್ತಿಲ್ಲ ಎಂದು ಅನಿಸತೊಡಗಿದಾಗ, ಎಲ್ಲೋ ಬದಲಾವಣೆ ಮಿಸುಕತೊಡಗಿರುತ್ತದೆ. ತೀವ್ರ ಕತ್ತಲಿನ ನಡುವೆ ಬೆಳಕು ಮೊಳಕೆಯೊಡೆದಂತೆ, ಬಿಕ್ಕುವಿಕೆ ಮಧ್ಯೆ ನೆಮ್ಮದಿ ಹುಟ್ಟಿದಂತೆ, ಬಿರುಬಿಸಿಲಿನ ಮಧ್ಯೆ ಕಾರ್ಮೋಡವೊಂದು ಕಣ್ತೆರೆದಂತೆ ಭರವಸೆ ಕಾಣಲು ಶುರುವಾಗುತ್ತದೆ.

ಇವತ್ತು ತುಂಬ ಸೆಕೆಯಿತ್ತು. ಧಗೆ ಎಷ್ಟು ತೀವ್ರವಾಗಿತ್ತೆಂದರೆ, ಮಳೆ ಬರಬಹುದು ಎಂಬ ಅನಿಸಿಕೆ ಬಲಗೊಳ್ಳುವಷ್ಟು. ಯಂತ್ರದಂತೆ ಹವಾಮಾನ ಕೂಡ ಖಚಿತ ಮಾನದಂಡಗಳನ್ನು ಹೊಂದಿರಬಹುದು ಅನಿಸುತ್ತದೆ. ಸಂಜೆ ಹೊತ್ತಿಗೆ ಒಂದೆರಡು ವರಸೆ ಮಳೆ ಬಂದೇಬಿಡ್ತು. ಸೆಕೆಯನ್ನು ಒಂದಿಷ್ಟು ಕಡಿಮೆ ಮಾಡಿತು.

ಅಂದುಕೊಂಡಿದ್ದಕ್ಕಿಂತ ಹೆಚ್ಚಾಗಿಯೇ ಕರೆಂಟ್‌ ಕಣ್ಣಾಮುಚ್ಚಾಲೆಯಾಡುತ್ತಿದ್ದ ಈ ದಿನಗಳಲ್ಲಿ, ವಿದ್ಯುತ್‌ ಕೈಕೊಟ್ಟಾಗ ಮೊದಮೊದಲು ತುಂಬ ಅಸಮಾಧಾನವಾಗುತ್ತಿತ್ತು. ಕ್ರಮೇಣ, ಇದೇ ಸಮಯವನ್ನು ಓದಲು ಬಳಸಲು ಶುರು ಮಾಡಿದೆ. ಕರೆಂಟ್‌ ಇರುವವರೆಗೆ ಕಂಪ್ಯೂಟರ್‌  ಮೇಲೆ ಕೆಲಸ. ಕರೆಂಟ್‌ ಹೋದಕೂಡಲೇ ಓದಲು ಶುರು. ಎಷ್ಟೋ ಸಾರಿ, ಓದಿನ ಗಮ್ಮತ್ತಿನ ನಡುವೆ, ಕರೆಂಟ್‌ ಬಂದರೂ ವಿಶೇಷ ಅನಿಸುತ್ತಿರಲಿಲ್ಲ. ಹೀಗಾಗಿ, ಕರೆಂಟ್‌ ಹೋದಷ್ಟೂ ಓದಲು ಹೆಚ್ಚು ಸಮಯ ಸಿಗುವಂತಾಗಿದೆ. 

ರಾತ್ರಿಯ ನಿಶ್ಯಬ್ದದಲ್ಲಿ ಹೊಸ ಕನಸುಗಳು ಮೊಳಕೆಯೊಡೆಯುತ್ತವೆ. ಓದಿನ ಮಧ್ಯೆ, ಹೊಸ ಬೆಳಕೊಂದು ಮಿಂಚುತ್ತದೆ. ನಿರಾಶೆಯ ಮಧ್ಯೆ ಹೊಸ ಭರವಸೆ. ಬಹುಶಃ ಏನೂ ಬದಲಾಗಲಿಕ್ಕಿಲ್ಲ ಎಂಬ ಅನಿಸಿಕೆಯ ತೀವ್ರತೆಯ ಮಧ್ಯೆಯೇ ಎಂಥದೋ ಬದಲಾವಣೆಯ ಸುಳಿವು. ಹೊಸ ಓದಿನ ಖುಷಿಯ ಮಧ್ಯೆ ಓದಿದ ಪುಸ್ತಕಗಳ ಭಾವಪ್ರವಾಹ. ತಂತ್ರಜ್ಞಾನದ ಸೊಗಸಿನ ನಡುವೆ ಬಾಲ್ಯದಲ್ಲಿ ಆಡಿದ ಮಣ್ಣಿನ ಆಟಿಕೆಗಳ ನೆನಪು.

ಬದುಕು ಹೀಗೇ ಸಾಗುತ್ತಿದೆ. ಪ್ರತಿಯೊಂದು ಬದಲಾವಣೆಯೂ, ಬೆಳವಣಿಗೆಯೂ ಹಳೆಯ ಬೇರುಗಳೊಂದಿಗೆ ನಂಟು ಬೆಸೆಯುತ್ತದೆ. ಹಳೆಯದರೊಂದಿಗೆ ಹೋಲಿಸಿ ನೋಡುತ್ತ ಹೊಸತನವನ್ನು ರೂಢಿಸಿಕೊಳ್ಳುತ್ತದೆ. ಎರಡರ ನಡುವೆ ಸಮನ್ವಯ ಆಯಿತೆನ್ನುವದರೊಳಗೆ ಮತ್ಯಾವುದೋ ಹೊಸ ಬೆಳವಣಿಗೆ. ಬದಲಾವಣೆ. 

ಎಫ್‌.ಎಂ. ಉದ್ಘೋಷಕರ ರಭಸದ ಮಾತುಗಳನ್ನು ಕೇಳುವಾಗ ಕೀರ್ತನಕಾರರ ಮಾತಿನ ಓಘದ ನೆನಪು. ಫ್ರಿಜ್‌ನ ತಣ್ಣೀರು ಸವಿಯುವಾಗ, ಮಡಕೆ ನೀರಿನ ತಂಪಿನ ತೀವ್ರತೆ. ಎಲ್ಲಿಯದೋ ನೆನಪುಗಳಿಗೆ ಇನ್ನೆಲ್ಲಿಯದೋ ಭಾವನೆಗಳೊಂದಿಗೆ ತಳುಕು. 

ಯಾವುದೋ ನೆನಪಿಗೆ ಇನ್ಯಾವುದೋ ತಂತು ಮೀಟುವುದು ಬದುಕಿನ ಚೋದ್ಯಗಳಲ್ಲೊಂದು. ಹುಡುಕುತ್ತ ಹೋದರೆ, ಪ್ರತಿಯೊಂದಕ್ಕೂ ಇನ್ನೊಂದರ ನಂಟಿದೆ ಅನಿಸುತ್ತದೆ. ಯಾವುದೂ ಹೊಸತಲ್ಲ, ಎಲ್ಲವೂ ಒಮ್ಮೆ ಕಂಡುಂಡ ಸಂಗತಿಗಳ ಮುಂದುವರಿಕೆ ಎಂದು ಭಾಸವಾಗುತ್ತದೆ. ಅಲ್ಲೆಲ್ಲೋ ಆಗಸದೆತ್ತರದಲ್ಲಿರುವ ಹೊಸ ಮೊಳಕೆಗೆ ಭೂಮಿಯಾಳದ ಬೇರಿನೊಂದಿಗೆ ನಂಟಿರುವಂತೆ, ಪ್ರತಿಯೊಂದಕ್ಕೂ ಯಾವುದೋ ನಂಟು. ಇನ್ಯಾವುದೋ ಪ್ರೇರಣೆ.

ನಿಜ. ಬದುಕು ಅಚ್ಚರಿಗಳ ಮೊತ್ತ. ಸಾವಿರ ಸಾವಿರ ನೆನಪುಗಳ ಹುತ್ತ.

- ಚಾಮರಾಜ ಸವಡಿ

ಬಿಸಿಲೆಂಬ ನೆನಪ ಸಂಜೀವಿನಿ

10 Apr 2010

4 ಪ್ರತಿಕ್ರಿಯೆ
ಕಣ್ಣು ಕುಕ್ಕುವಂಥ ಬಿಸಿಲ ಪ್ರದೇಶದಲ್ಲಿ ಹುಟ್ಟಿ ಬೆಳೆದವನು ನಾನು. ಬಿಸಿಲು ನನಗೆ ಚೇತೋಹಾರಿ. ಎಷ್ಟೇ ಸೆಕೆ ಕಾಡಿದರೂ, ಮನಸ್ಸು ನನ್ನೂರನ್ನು ನೆನಪಿಸಿಕೊಳ್ಳುತ್ತಿರುತ್ತದೆ. ಸರಾಸರಿ ೪೨ ಡಿಗ್ರಿ ಸೆಲ್ಸಿಯಸ್‌ ಉಷ್ಣಾಂಶದಲ್ಲಿ ಇಪ್ಪತ್ತೈದಕ್ಕೂ ಹೆಚ್ಚು ಬೇಸಿಗೆ ಕಳೆದ ನನಗೆ ಇವತ್ತಿಗೂ ಬಿಸಿಲು ಆಪ್ಯಾಯಮಾನ. 

ಬಿಸಿಲಿನಲ್ಲಿ ಅಷ್ಟೊಂದು ಓಡಾಡಿದರೂ ಆರಾಮವಾಗಿದ್ದೀಯಲ್ಲ ಮಾರಾಯ ಎಂದು ಗೆಳೆಯರು ಅಚ್ಚರಿಪಡುತ್ತಾರೆ. ಅದೇ ಬಿಸಿಲೂರಿನಿಂದ ಬಂದವಳಾಗಿದ್ದರೂ, ನನ್ನ ಹೆಂಡತಿಗೆ ಬಿಸಿಲು ಎಂದರೆ ಅಲರ್ಜಿ. ಆದರೆ, ನನಗೆ ಮಾತ್ರ ಬಿಸಿಲು ಎಂದರೆ ನನ್ನೂರು. ನಾನು ಹುಟ್ಟಿ ಬೆಳೆದ ಪರಿಸರ. ನನ್ನ ಬಾಲ್ಯ. ನನ್ನ ಪ್ರಾಥಮಿಕ ಕನಸುಗಳು. ನನ್ನ ಶಾಶ್ವತ ಕನವರಿಕೆ.

ಸಾವಿರ ಸಾವಿರ ನೆನಪುಗಳು ಬಿಸಿಲಿನೊಂದಿಗೆ ಹೆಣೆದುಕೊಂಡಿವೆ. ಬರ, ಬಡತನ, ಬವಣೆ, ಭಯವಷ್ಟೇ ಅಲ್ಲ, ನನ್ನ ಬದುಕು ಕೂಡ ಬಿಸಿಲ ಪ್ರದೇಶದಲ್ಲಿಯೇ ಅರಳಿದೆ. ಉರಿಯುವ ಸೂರ್ಯನೊಂದಿಗೆ, ಕಡು ಸೆಕೆಯೊಂದಿಗೆ ಶುರುವಾಗುವ ಬೇಸಿಗೆಯ ದಿನ, ಅದೇ ಕಡು ಸೆಕೆಯೊಂದಿಗೆ ಸಂಜೆಯಾಗಿ ಬದಲಾಗುತ್ತಿತ್ತು. ಕರೆಂಟಿಲ್ಲದ ರಾತ್ರಿಯ ಕಗ್ಗತ್ತಲೆಯಲ್ಲಿ, ಬೆಳಕಿನುಂಡೆಯಂಥ ನಕ್ಷತ್ರಗಳ ಆಗಸ. ಮಣ್ಣಿನ ಮನೆಯ ಮಾಳಿಗೆಯ ಮೇಲೆ ಹಳೆಯ ಜಮಖಾನಾ ಹಾಸಿಕೊಂಡು ಆಕಾಶಕ್ಕೆ ಮುಖವೊಡ್ಡಿ ಕಂಡ ಸಾವಿರ ಸಾವಿರ ಕನಸುಗಳು ಇವತ್ತಿಗೂ ನನ್ನ ಜೀವನದುಸಿರು. ಆ ಬಿಸಿಲ ಹೇಗೆ ಮರೆಯಲಿ?

ನನ್ನ ಮೊದಲ ತೀವ್ರ ನಿರಾಶೆ, ನೋವುಗಳು ಬಿಸಿಲಿನೊಂದಿಗೆ ಹೆಣೆದುಕೊಂಡಿವೆ. ಹತ್ತನೆಯ ತರಗತಿಯ ಪರೀಕ್ಷೆ ಬರೆಯಲು ಮೊದಲ ಬಾರಿ ಹದಿನೈದು ದಿನಕ್ಕಿಂತ ಹೆಚ್ಚು ಕಾಲ ತಂಗಿದ್ದ ಪಟ್ಟಣ ಕೊಪ್ಪಳ ನನ್ನಲ್ಲಿ ಉಕ್ಕಿಸಿದ್ದ ದಿಗ್ಭ್ರಮೆ, ಕನಸು, ಕನವರಿಕೆಯನ್ನು ನಾನು ಪದೆ ಪದೆ ಅನುಭವಿಸಿದ್ದು ನನ್ನೂರಿನ ಬಿಸಿಲ ದಿನದ ರಾತ್ರಿಗಳಲ್ಲಿ. ಪಿಯುಸಿ ಓದಲು ದೂರದ ನರೇಗಲ್ಲಿಗೆ ಹೋಗಬೇಕೆಂಬ ಕಳವಳವನ್ನೂ ಅಲ್ಲಿಯೇ ಅನುಭವಿಸಿದ್ದು. ಹುಟ್ಟಿದಾಗಿನಿಂದ ಊರು ಬಿಟ್ಟು ಹೋಗಿರದ ನನಗೆ, ನರೇಗಲ್ಲಿಗೆ ಹೋಗುವಾಗ, ಹೋದ ನಂತರ ಆದ ತಳಮಳ ಅಷ್ಟಿಷ್ಟಲ್ಲ. 

ಇಂಥ ಹಲವಾರು ನೆನಪುಗಳು ಬಿಸಿಲಿನೊಂದಿಗೆ ಹೆಣೆದುಕೊಂಡಿವೆ. ನಮ್ಮ ಹೊಲದಲ್ಲಿದ್ದ ಎರಡು ಜಾತಿಯ ಮಾವಿನ ಮರಗಳು, ಅವುಗಳ ಪರಿಮಳ, ಹಲ್ಲು ಚುಳಿಯುವಂತೆ ಮಾಡುತ್ತಿದ್ದ ಹುಳಿ ರುಚಿ, ಮಾವಿನ ಕಾಯಿಗಳನ್ನು ಹಣ್ಣಾಗಿಸಲು ಹಾಕಿದ್ದ ಬತ್ತದ ಹುಲ್ಲಿನ ವಿಚಿತ್ರ ಘಮ, ಕುಡಿಯುವ ನೀರು ತರಲು ಊರಾಚೆಯ ಕೆರೆಗೆ ಹೋಗುತ್ತಿದ್ದುದು, ಬತ್ತಿದ ದೊಡ್ಡ ಹಳ್ಳದ ಉಸುಕಿನ ಮಧ್ಯೆ ಕೂತು ಭವಿಷ್ಯದ ಕನಸುಗಳನ್ನು ಮಾತಾಗಿಸಿದ್ದು, ಕಾಡುತ್ತಿದ್ದ ಅಪಾರ ಹಸಿವು, ಏನು ಸಿಕ್ಕರೂ ಓದುವ ತೀವ್ರ ತುಡಿತ, ಕಾಣದ ಜಗತ್ತಿನೆಡೆಗಿನ ಬೆರಗು, ಪಟ್ಟಣಗಳು ಹುಟ್ಟಿಸುತ್ತಿದ್ದ ಕೀಳರಿಮೆ, ಅರಳುತ್ತಿದ್ದ ಪ್ರಾಯ, ಹೇಳತೀರದ ದುಗುಡ- ಇಂಥ ನೂರಾರು ಭಾವನೆಗಳಿಗೆ ಬಿಸಿಲು ಸಾಕ್ಷಿಯಾಗಿದೆ. 

ಇವತ್ತಿಗೂ ಶಿವರಾತ್ರಿ ಕಳೆದ ನಂತರ, ಮನಸ್ಸಿಗೆ ಸಣ್ಣಗೆ ದುಗುಡ ಕವಿಯಲಾರಂಭಿಸುತ್ತದೆ. ಬಿಸಿಲು ಬಲಿಯುತ್ತಿದ್ದಂತೆ ಊರಿನ ಹಂಬಲ, ಆಗಿನ ದಿನಗಳ ನೆನಪುಗಳು ಉಕ್ಕತೊಡಗುತ್ತವೆ. ಪತ್ರಿಕೆ ಓದುವಾಗ, ಬಿಸಿಲಿನ ಬಗ್ಗೆ ಬಂದ ವರದಿಗಳು ಊರನ್ನು ನೆನಪಿಸುತ್ತವೆ. ಅಲ್ಲಿ, ನನ್ನಂಥ ಇನ್ಯಾರದೋ ಪಾಲಿಗೆ ಈ ಬಿರು ಬಿಸಿಲು ಸಂಜೀವಿನಿಯಾಗುತ್ತಿದೆಯೇನೋ ಎಂಬ ಕುತೂಹಲ. ರಾತ್ರಿಯಾಗುತ್ತಿದ್ದಂತೆ, ಮಣ್ಣಿನ ಮನೆಗಳ ಮಾಳಿಗೆಗಳ ಮೇಲೆ ವಲಸೆ ಹೋಗುತ್ತಿದ್ದ ಜನ, ಅವರ ಕಷ್ಟಸುಖದ ಮಾತುಕತೆ, ಕಾಣುತ್ತಿದ್ದ ಕನಸು, ಮೇಲೆ ಕಪ್ಪಡರಿರುವ ಆಗಸದ ಚಾದರದೊಳಗಿಂದ ಕಿಂಡಿ ಕೊರೆದು ಇಣುಕಿ ನೋಡುವ ನಕ್ಷತ್ರ ಕಂಗಳು, ಅಲುಗದೇ ನಿಂತ ಮರದ ಎಲೆಗಳು, ಅಪರಾತ್ರಿ ಎಚ್ಚರವಾದಾಗ ತಾಕುತ್ತಿದ್ದ ನೀರವತೆ ಮತ್ತೆ ಮತ್ತೆ ನನಪಾಗುತ್ತವೆ. 

ಎಷ್ಟೋ ಸಾರಿ ರಾತ್ರಿ ಯೋಚಿಸುತ್ತ ಅಡ್ಡಾಗಿದ್ದವನಿಗೆ ಜೆಟ್‌ ವಿಮಾನಗಳ ಮಿಣುಕು ದೀಪಗಳು ಅಪಾರ ಅಚ್ಚರಿ ಹುಟ್ಟಿಸಿದ್ದಿದೆ. ನನ್ನೂರಾಚೆಯ ಜಗತ್ತು ನನಗೆ ತಿಳಿದಿರುವುದಕ್ಕಿಂತ ವಿಶಾಲವಾಗಿದೆ ಎಂಬ ಅಸ್ಪಷ್ಟ ಭಾವನೆಯನ್ನು ಬೆಳೆಸಿದ್ದಿದೆ. ಆ ಜಗತ್ತಿನೆಡೆಗೆ ನಾನು ಹೋಗಲೇಬೇಕಾಗುತ್ತದೆ ಎಂಬ ಅಸ್ಪಷ್ಟ ಅನಿಸಿಕೆ ದಿಗಿಲು ಮೂಡಿಸಿದ್ದಿದೆ. ಅಲ್ಲಿಯ ಜನ ಹೇಗೋ, ಅವರ ಬದುಕಿನ ರೀತಿ-ನೀತಿಗಳೇನೋ, ನಾನು ಅವನ್ನೆಲ್ಲ ಹೇಗೆ ಕಲಿತೇನು ಎಂಬ ಕಳವಳ ಉಕ್ಕಿಸಿದ್ದಿದೆ. ರಾತ್ರಿಯ ಕಡು ನೀರವತೆಯಲ್ಲಿ ಒಬ್ಬನೇ ಎದ್ದು ಕೂತು, ಜೋರು ನಿದ್ದೆಯಲ್ಲಿರುವವರನ್ನು ಕಂಡು ಅಚ್ಚರಿಪಟ್ಟಿದ್ದೇನೆ. ಸುತ್ತಲೂ ಹಬ್ಬಿದ ಕತ್ತಲನ್ನು ಮೂದಲಿಸುವಂತೆ ಬೆಳಗುವ ನಕ್ಷತ್ರಗಳನ್ನು ಕಂಡು ಮೋಹಗೊಂಡಿದ್ದೇನೆ. ಸಾವಿರಾರು ಸುನೀತ ಭಾವನೆಗಳು ಆ ಕತ್ತಲಲ್ಲಿ ಮೂಡಿವೆ. ನಿರಾಶೆಗಳಿಗೆ ಸಮಾಧಾನ ದೊರೆತಿದೆ. 

ರಾತ್ರಿ ತುಂಬ ಹೊತ್ತು ಒಬ್ಬನೇ ಕೂತು ಓದುವ, ಬರೆಯುವ ಈ ದಿನಗಳಲ್ಲಿ ಬಿಸಿಲು ಮತ್ತೆ ಮತ್ತೆ ಕಾಡುತ್ತದೆ. ನನ್ನೂರು ಅಳವಂಡಿ ಮತ್ತೆ ಮತ್ತೆ ನೆನಪಾಗುತ್ತದೆ. ಎಲ್ಲರೂ ಜರಿಯುವ, ಶಪಿಸುವ, ಭಯಪಡುವ ಈ ಬಿರುಬಿಸಿಲು ಅದ್ಹೇಗೆ ನನ್ನ ಪಾಲಿಗೆ ಚೇತೋಹಾರಿಯಾಗಿದೆ ಎಂದು ನೆನೆನೆನೆದು ಅಚ್ಚರಿಪಡುತ್ತೇನೆ. ಮೆತ್ತಗೇ ಗೇಟು ತೆರೆದು, ರಸ್ತೆ ಮಧ್ಯೆ ನಿಂತು, ಆಗಸ ದಿಟ್ಟಿಸಿದರೆ, ನಗರದ ರಾತ್ರಿ ಬೆಳಕಿನ ರಭಸಕ್ಕೆ ನಕ್ಷತ್ರಗಳು ಮಂಕಾಗಿರುವುದು ರಾಚುತ್ತದೆ. 

ಅದನ್ನು ನೋಡುತ್ತಿದ್ದಂತೆ, ನನ್ನ ಮನಸ್ಸೂ ಏಕೋ ಮಂಕಾಗುತ್ತದೆ. 

- ಚಾಮರಾಜ ಸವಡಿ

ನಡೆದಷ್ಟೂ ದಾರಿಯಿದೆ, ಪಡೆದಷ್ಟೂ ಭಾಗ್ಯವಿದೆ

4 Apr 2010

9 ಪ್ರತಿಕ್ರಿಯೆ
ಬದುಕು ಅಂದ್ರೆ ಇಷ್ಟೇನಾ?

ಹಾಗಂತ ನಾವು ಎಷ್ಟು ಸಾರಿ ಅಂದುಕೊಂಡಿಲ್ಲ? ಓಡುತ್ತಿದ್ದ ವಾಹನ ಇದ್ದಕ್ಕಿದ್ದಂತೆ ನಿಂತ ಹಾಗೆ, ಬದುಕು ಕೂಡ ಯಾವುದೋ ಒಂದು ಹಂತದಲ್ಲಿ ಇದ್ದಕ್ಕಿದ್ದಂತೆ ನಿಂತಂತಾಗುತ್ತದೆ. ಚಲಿಸುತ್ತಿದ್ದಾಗಿನ ಭಾವನೆಗಳೆಲ್ಲ ಮಾಯವಾದಂತಾಗಿ, ಕೂತವರು ತಕ್ಷಣ ಇಳಿಯಬೇಕಾಗಿ ಬಂದು, ’ಅರೆ, ಎಲ್ಲಿಗೆ ಬಂದೆ?’ ಎಂದು ಪ್ರಶ್ನಿಸುವಂತಾಗುತ್ತದೆ. ತಕ್ಷಣ ಏನೂ ಮಾಡಲು ತೋಚದೇ ಕಕ್ಕಾವಿಕ್ಕಿಯಾಗುತ್ತೇವೆ. 

ಬದುಕು ತಿರುವು ತೆಗೆದುಕೊಳ್ಳುತ್ತಿದೆ ಎಂಬುದರ ಮೊದಲ ಲಕ್ಷಣವದು.

ಕೆಲಸ ಬದಲಿಸಿದಾಗ, ಕೆಲಸ ಬಿಟ್ಟಾಗ, ಹೊಸ ಕೆಲಸಕ್ಕೆ ಹೋದಾಗ, ಊರು ಬದಲಿಸಿದಾಗ, ಮನೆ ಬದಲಿಸಿದಾಗ, ಹಳೆಯ ಸಂಬಂಧವನ್ನು ಮುರಿದುಕೊಂಡಾಗ- ಹೀಗೆ ಹತ್ತಾರು ಕಾರಣಗಳಿಗಾಗಿ ಸಹಜವಾದಂತಿದ್ದ ಜೀವನ ಇದ್ದಕ್ಕಿದ್ದಂತೆ ತಿರುವು ಪಡೆದುಕೊಳ್ಳುತ್ತದೆ. ಹಳೆಯದೆಲ್ಲ ಮರೆಯಾದಂತಾಗಿ, ಹೊಸತನ ರೂಢಿಯಾಗಬೇಕಿರುವಾಗ, ಬದುಕೆಂದರೆ ಇಷ್ಟೇನಾ ಎಂದು ಪ್ರಶ್ನಿಸಿಕೊಳ್ಳುವಂತಾಗುತ್ತದೆ.

ಏನೇ ಧೈರ್ಯ ಹೇಳಿಕೊಂಡರೂ, ಎಷ್ಟೇ ಪೂರ್ವಾನುಭವವಿದ್ದರೂ, ಹೊಸತನದ ಎದುರು ಅರೆ ಕ್ಷಣ ಮಂಕಾಗುವುದು ಸಹಜ. ಎಷ್ಟೇ ದೋಷಗಳಿದ್ದರೂ ಹಳೆಯದೇ ಚೆನ್ನಿತ್ತು ಎಂದು ಅನಿಸುತ್ತದೆ. ಅದನ್ನು ಬಿಡಬಾರದಿತ್ತು ಎಂದು ಹಳಹಳಿಸುತ್ತೇವೆ. ಮತ್ತೆ, ಅಲ್ಲಿಗೇ ಹೋಗಿಬಿಡಲಾ ಎಂದು ಪ್ರಶ್ನಿಸಿಕೊಳ್ಳುತ್ತೇವೆ. ಅದುವರೆಗೆ ಅಂದುಕೊಂಡ ಭಾವನೆಗಳೆಲ್ಲ ಕೈಕೊಟ್ಟಂತಾಗಿ ತಡವರಿಸುತ್ತೇವೆ. ಇದ್ಯಾವುದೋ ಹೊಸ ನೆಲ. ಇಲ್ಲಿರುವವರು ಹೊಸ ಜನ. ಇಲ್ಲಿರುವುದು ಹೊಸ ವಾತಾವರಣ. ಇದನ್ನೆಲ್ಲ ಗೆದ್ದು ಮತ್ತೆ ಗರಿಗೆದರುವುದು ಯಾವತ್ತೋ ಎಂದು ಕಂಗಾಲಾಗುತ್ತೇವೆ. 

ಎಷ್ಟೋ ಜನ ಮತ್ತೆ ಹಳೆಯದನ್ನು ಹುಡುಕಿಕೊಂಡು ವಾಪಸ್‌ ಹೋಗಲು ಯತ್ನಿಸುತ್ತಾರೆ. ಇನ್ನು ಕೆಲವರು ಹೊಸತನಕ್ಕೆ ಹೊಂದಿಕೊಳ್ಳಲಾಗದೇ ಪೂರ್ತಿಯಾಗಿ ಮಂಕಾಗುತ್ತಾರೆ. ಕೆಲವರು ಮಾತ್ರ ತಡವರಿಸುತ್ತಾ ಹೊಸತನಕ್ಕೆ ಹೊಂದಿಕೊಳ್ಳುವ ಕೆಲಸದಲ್ಲಿ ತೊಡಗುತ್ತಾರೆ. 

ಆದರೆ, ಬದುಕು ವಿರುದ್ಧ ದಿಕ್ಕಿನಲ್ಲಿ, ಬಂದ ದಾರಿಯತ್ತ ಮರಳಿ ಹೋಗುವುದಿಲ್ಲ ಎಂಬುದನ್ನು ಅರ್ಥ ಮಾಡಿಕೊಳ್ಳುವ ಹೊತ್ತಿಗೆ ಸಾಕಷ್ಟು ಸಮಯ ಕಳೆದುಹೋಗಿರುತ್ತದೆ. ಧೈರ್ಯದಿಂದ ಮುನ್ನುಗ್ಗಿದವರಿಗೆ ತಕ್ಷಣ ಯಶಸ್ಸು ಸಿಕ್ಕದಿದ್ದರೂ, ಬದುಕುವ ಸ್ಥೈರ್ಯ ದಕ್ಕಿರುತ್ತದೆ. ಅರೆ ಮನಸ್ಸಿನವರಿಗೆ ವಾಸ್ತವ ಬಲುಬೇಗ ಅರಿವಾಗುತ್ತದೆ. ಆದರೆ, ಭೂತಕಾಲದಲ್ಲೇ ಬದುಕುವವರಿಗೆ ಮಾತ್ರ ಬದುಕು ಕರುಣಾಮಯಿಯಾಗುವುದು ಬಲು ಅಪರೂಪ. 

ಹಲವಾರು ಬಾರಿ ಕೆಲಸಗಳನ್ನು, ಊರುಗಳನ್ನು, ಮನೆಗಳನ್ನು ಹಾಗೂ ಮಿತ್ರರನ್ನು ಬದಲಿಸಿರುವ ನನಗೆ ಇದೆಲ್ಲ ಅರ್ಥವಾಗುವ ಹೊತ್ತಿಗೆ ಅರ್ಧ ಆಯುಷ್ಯ ಕಳೆದುಹೋಗಿತ್ತು. ಮುಂದಿನ ಆಯುಷ್ಯಪೂರ್ತಿ ಬದುಕುವ ಗಟ್ಟಿತನವನ್ನು ಕಲಿಸಿತ್ತು. ’ಹೊತ್ತ ಒಜ್ಜೆಗಳೇನು, ಹಿಡಿದ ಗಿಂಡಿಗಳೇನು, ಹೆಜ್ಜೆ ಸಾಲಿನ ಪಯಣ, ನಾರಾಯಣ’ ಎಂದುಕೊಂಡು ಹೊಸ ದಿಕ್ಕಿನತ್ತ, ಹೊಸ ದಾರಿಯಲ್ಲಿ ನಡೆಯುವುದನ್ನು ರೂಢಿ ಮಾಡಿಸಿತ್ತು. 

ಮೊದಲ ಬಾರಿ ಕೆಲಸ ಬಿಡುವವರು, ಮನೆ ಬದಲಿಸುವವರು, ಊರು ಬಿಟ್ಟು ಬರುವವರು, ನವದಂಪತಿಗಳು, ನವ ವಿಚ್ಛೇದಿತರು- ಹೀಗೆ ತರಹೇವಾರಿ ವ್ಯಕ್ತಿಗಳಿಗೆ ನಾನು ಹೇಳುವುದು ಇದೇ ಮಾತನ್ನು. ಹೊಸತನ ರೂಢಿಯಾಗುವವರೆಗೆ ಗಟ್ಟಿಯಾಗಿರಿ. ನಿಂತಲ್ಲೇ ನಿಂತು ಕೊಳೆತುಹೋಗುವುದಕ್ಕಿಂತ, ಅಪರಿಚಿತ ದಾರಿಯಲ್ಲಿ ನಡೆಯುವುದು ಒಳ್ಳೆಯದು. ಅಪರಿಚಿತತೆ ನಮಗೆ ಬದುಕುವ ದಾರಿ ಕಲಿಸುತ್ತದೆ. ಸವಾಲುಗಳನ್ನು ಎದುರಿಸುವುದನ್ನು ಕಲಿಸುತ್ತದೆ. ನಮ್ಮ ಮೇಲೆ ನಾವು ಅವಲಂಬಿತರಾಗುವ ಅದ್ಭುತ ಕಲೆಯನ್ನು ಕಲಿಸುತ್ತದೆ. ಹೊಸ ದಾರಿಯಲ್ಲಿ ಶತ್ರುಗಳಷ್ಟೇ ಅಲ್ಲ, ಮಿತ್ರರೂ ಸಿಗುತ್ತಾರೆ. ಸಮಸ್ಯೆಗಳಷ್ಟೇ ಅಲ್ಲ, ಅವಕಾಶಗಳೂ ದಕ್ಕುತ್ತವೆ. ಎಲ್ಲಕ್ಕಿಂತ ಮುಖ್ಯ, ನಿಮಗೆ ನೀವೇ ಮಿತ್ರರಾಗುವುದು ಹೇಗೆಂಬುದು ಗೊತ್ತಾಗುತ್ತದೆ. ಆದ್ದರಿಂದ, ಹೊಸ ದಾರಿ ತುಳಿಯಲು ಹಿಂಜರಿಯದಿರಿ. ಅದಕ್ಕೂ ಮುನ್ನ ಸಾಕಷ್ಟು ಯೋಚಿಸಿ, ವಿಚಾರಿಸಿ, ಸಲಹೆ ಪಡೆಯಿರಿ. ಆದರೆ, ನಿರ್ಧಾರ ಮಾತ್ರ ನಿಮ್ಮದೇ. ಗೆದ್ದರೂ, ಸೋತರೂ ಅದಕ್ಕೆ ನೀವೇ ಜವಾಬ್ದಾರರು. ಇತರರ ಸಲಹೆಗಳೇನಿದ್ದರೂ ಬೀದಿ ದೀಪಗಳಂತೆ. ಅವು ನಿಮಗೆ ದಾರಿ ತೋರಬಹುದು. ಆದರೆ, ಜೊತೆಗೆ ಬರಲಾರವು. ಅವುಗಳ ಬೆಳಕಿನಲ್ಲಿ, ನಿಮ್ಮ ಹೆಜ್ಜೆಗಳಲ್ಲಿ ನಿಮ್ಮ ದಾರಿ ಸಾಗಬೇಕು. ನಡೆಯುವವರು ಮಾತ್ರ ನೀವೇ ಎಂಬುದನ್ನು ಮನಸ್ಸಿನಲ್ಲಿಟ್ಟುಕೊಂಡು ಸವಾಲು ಎದುರಿಸಿ.

ಏಕೆಂದರೆ, ಅಂಥ ಸವಾಲುಗಳನ್ನು ಎದುರಿಸಿ ಒಂಟಿಯಾಗಿ ಹೆಜ್ಜೆ ಹಾಕಿದ ಗಟ್ಟಿ ಅನುಭವ ನನ್ನದು. ಇವತ್ತು ಹಿಂತಿರುಗಿ ನೋಡಿದಾಗ, ನಡೆದ ದಾರಿಯ ದೋಷಗಳು, ಅವಕಾಶಗಳು, ಕಳೆದುಕೊಂಡಿದ್ದು, ದಕ್ಕಿದ್ದು ಎಲ್ಲವೂ ಸ್ಪಷ್ಟವಾಗಿ ಕಾಣುತ್ತಿವೆ. ಎಲ್ಲಾ ಲೆಕ್ಕಾಚಾರ ಹಾಕಿದಾಗ, ಪಡೆದುಕೊಂಡಿದ್ದೇ ಹೆಚ್ಚು ಎಂಬ ಅಂಶ ಸಮಾಧಾನ ನೀಡುತ್ತಿದೆ.

ಎಲ್ಲಕ್ಕಿಂತ ಮುಖ್ಯವಾಗಿ, ನನ್ನನ್ನು ನಾನು ಹೆಚ್ಚು ತಿಳಿದುಕೊಂಡೆ. ನನಗೆ ನಾನೇ ಉತ್ತಮ ಗೆಳೆಯನಾದೆ. ನನ್ನೊಳಗಿನ ನಾನು ನನ್ನ ಅತ್ಯುತ್ತಮ ಸಂಗಾತಿಯಾಯಿತು. ಯೋಗ್ಯ ಮಿತ್ರರು ದಕ್ಕಿದರು. ಶತ್ರುಗಳನ್ನು ನಿಖರವಾಗಿ ಗುರುತಿಸುವ ಕಲೆ ದಕ್ಕಿತು. ಹೊಸ ಸವಾಲುಗಳನ್ನು ಎದುರಿಸುವ ಆತ್ಮವಿಶ್ವಾಸ ಬಲಗೊಂಡಿತು.

ಎಲ್ಲಿಯೋ ಓದಿದ್ದ ಮಾತೊಂದು ನೆನಪಾಗುತ್ತಿದೆ: ನಡೆದಷ್ಟೂ ದಾರಿಯಿದೆ, ಪಡೆದಷ್ಟೂ ಭಾಗ್ಯವಿದೆ. ಆ ಮಾತು ಸತ್ಯ ಎಂಬುದು ಪದೆ ಪದೆ ಅರಿವಾಗುತ್ತಿದೆ.

- ಚಾಮರಾಜ ಸವಡಿ