Showing posts with label ಭಾವನೆ. Show all posts
Showing posts with label ಭಾವನೆ. Show all posts

ಮತ್ತದೇ ಕನಸು. ಮತ್ತದೇ ಕನವರಿಕೆ

1 Nov 2015

0 ಪ್ರತಿಕ್ರಿಯೆ
ಸುದೀರ್ಘ ಮೌನದ ನಂತರದ ಮಾತು ನಿಜಕ್ಕೂ ಕಷ್ಟ.

ಹಾಗಂತ ಮಾತಿರುವುದಿಲ್ಲ ಅಂತ ಏನಿಲ್ಲ. ಹೇಳಲಿಕ್ಕೆ, ಹಂಚಿಕೊಳ್ಳಲಿಕ್ಕೆ ಸಾವಿರಾರು ಸಂಗತಿಗಳಿರುತ್ತವೆ. ಈ ಸಂದರ್ಭಕ್ಕೆಂದೇ ಅಂದುಕೊಂಡಿದ್ದ ಸೊಗಸಾದ ಸಾಲುಗಳಿರುತ್ತವೆ. ಮೆಚ್ಚಿದ ಪದ್ಯ, ನಗಿಸಿದ ಹಾಸ್ಯ, ಆರ್ದ್ರವಾಗಿಸಿದ ಭಾವನೆಗಳಿರುತ್ತವೆ. ಹೇಳಬೇಕೆಂಬ ತುಡಿತವೂ ಬಲವಾಗಿರುತ್ತದೆ.

ಆದರೆ, ಹೇಳಲಾಗುವುದಿಲ್ಲ. ಹಾಗಂತ, ಹೇಳದಿರಲೂ ಆಗುವುದಿಲ್ಲ.

ನಿಜವಾದ ಕಷ್ಟ ಅದು. ಮನಸಿನ ಮಾತುಗಳು ನಿಜದ ಮಾತಾಗದಿರುವ ಕಷ್ಟ ಬಲು ಹಿಂಸೆ ಕೊಡುತ್ತದೆ.

ಬರಹವೂ ಹಾಗೇ.

ಏನೋ ಹೇಳಬೇಕೆಂದು ಅಕ್ಷರ ಜೋಡಿಸಲು ಹೊರಡುತ್ತೇವೆ. ಭಾವನೆಗಳು ಸಾಲುಗಳಾಗುವುದಿಲ್ಲ. ಬರೆದ ಸಾಲುಗಳು ಭಾವವನ್ನು ಬಿಂಬಿಸುವುದಿಲ್ಲ. ಬರೆದಿದ್ದನ್ನು ಅಳಿಸಿ, ಹೊಸದಾಗಿ ಬರೆಯಲು ಹೋಗಿ, ಅದು ಕಲಸುಮೇಲೋಗರವಾಗಿ, ಇದಾ ನನ್ನ ಭಾವತೀವ್ರತೆಯ ಪ್ರತಿಬಿಂಬ ಎಂದು ಬೇಸರವಾಗುತ್ತದೆ.

ಬರೆಯುವುದನ್ನು ನಿಲ್ಲಿಸಿ, ಸುಮ್ಮನೇ ಕೂತರೆ, ಎದೆಯೊಳಗಿನ ಭಾವಗಳು ಮಾತಿಗಿಳಿಯುತ್ತವೆ, ಸ್ವಗತವಾಗುತ್ತದೆ. ಒಬ್ಬನೇ ಇಬ್ಬಿಬ್ಬರಾಗಿ ಮಾತಾಡಿಕೊಂಡಂತೆ, ಅಂದುಕೊಂಡ ಭಾವಗಳೆಲ್ಲ ಸಲೀಸಾಗಿ ಹೊರಬಂದಂತೆ, ಅವಕ್ಕೊಂದು ಖಚಿತ ಅರ್ಥವೂ ದಕ್ಕಿದಂತೆ, ಆಹಾ. ಆ ಸ್ವಗತದ ಸೊಗಸೇ ಸೊಗಸು.

*****

ಇತ್ತೀಚೆಗೆ ಇಂಥ ಭಾವತೀವ್ರತೆ, ಹೇಳಲಾಗದ ತೊಳಲಾಡುವಿಕೆ ತುಂಬ ಕಾಡಿದೆ. ಕಾಡುತ್ತಲೇ ಇದೆ. ಏನೋ ಬರೆಯಬೇಕೆಂದುಕೊಳ್ಳುತ್ತಲೇ, ಅದು ಮತ್ತೇನೋ ಆಗಿ, ಛೇ ಇದು ಸರಿ ಹೋಗಲಿಲ್ಲ ಎಂದು ಅಳಿಸಿ, ಊಹೂಂ, ಅಳಿಸಬಾರದಿತ್ತೆಂದು ಹಳಹಳಿಸಿ, ಮತ್ತೆ ಮತ್ತೆ ಸುಮ್ಮನೇ ಕೂತು, ಭಾವಗಳೊಂದಿಗೆ ಸ್ವಗತಕ್ಕಿಳಿಯುವುದೇ ಹೆಚ್ಚಾಗುತ್ತಿದೆ. ತುಂಬ ದಿನ ಬರೆಯುವುದನ್ನು ಬಿಟ್ಟಿದ್ದರ ಪರಿಣಾಮ ಇದು ಎಂದು ಅನಿಸಿದರೂ, ಎಲ್ಲೋ ಕೊಂಡಿ ಜೋಡಣೆಯಾಗುತ್ತಿಲ್ಲ ಎಂದು ಮತ್ತೆ ಮತ್ತೆ ಅನಿಸುತ್ತದೆ. ಈ ಮಾತಿಗೆ, ಭಾವಕ್ಕೆ, ಮಾತು-ಭಾವ ಬೆಸೆಯುತ್ತಿದ್ದ ಮನಸ್ಸೊಂದು ದೂರವಾಗಿದೆ ಎಂಬ ಹಳಹಳಿ.

*****

ಕಳೆದುಕೊಳ್ಳುವುದೆಂದರೆ, ಭಾವತಿವ್ರತೆಯನ್ನು ಹೊರಹಾಕಲು ಸೋಲುವುದು. ಪದೆ ಪದೆ ಮನಸ್ಸಿನಲ್ಲಿ ಮೆಲುಕುಹಾಕುತ್ತಿದ್ದರೂ ಅದು ಮಾತಾಗದಿರುವುದು, ಅಕ್ಷರಗಳಾಗದಿರುವುದು, ಯಾವುದೇ ಕ್ರಿಯಾತ್ಮಕ ಕೆಲಸದಲ್ಲಿ ಹೊಮ್ಮದಿರುವುದು. ಅದು ಕೊಡುವ ಕಾಟ ಸಹಿಸಲಾಗದೇ, ಮತ್ತೆ ಮತ್ತೆ ಬರೆಯಲೆತ್ನಿಸುವುದು. ಸೋಲುವುದು. ಸೋತು ಸೋತು ಸ್ವಗತಕ್ಕಿಳಿಯುವುದು. ಸುದೀರ್ಘ ಕಾಲದವರೆಗೆ ಮತ್ತೆ ಮೌನವಾಗುವುದು.
*****
ಬಹುಶಃ ತುಂಬ ದಿನ ಇಂಥ ಸ್ಥಿತಿ ಉಳಿಯಲಿಕ್ಕಿಲ್ಲ. ಕೈಗಳು ಮತ್ತೆ ಮತ್ತೆ ಕೀಬೋರ್ಡ್ ಸವರುತ್ತವೆ. ಮಾತುಗಳಿಗೆ ಅಕ್ಷರರೂಪ ಕೊಡಲು ಯತ್ನಿಸುತ್ತವೆ. ಹಾಗೆ ಪ್ರಯತ್ನಿಸುತ್ತಲೇ ಸೋಲುತ್ತವೆ. ಬರೆದಿದ್ದನ್ನು ಅಳಿಸುತ್ತ, ಮತ್ತೆ ಮತ್ತೆ ಬರೆಯಲು ಯತ್ನಿಸುತ್ತ, ಬಿಡಿಬಿಡಿ ಭಾವಗಳನ್ನು ಇಡಿಯಾಗಿಸಲು ಪ್ರಯತ್ನಿಸುತ್ತಲೇ ಮನಸ್ಸನ್ನು ಜರಡಿಯಾಗಿಸುತ್ತ ಹೋಗುತ್ತೇನೆ. ಒಂದಾದರೂ ಮುತ್ತು ಉದುರೀತಾ ಎಂದು ಮತ್ತೆ ಮತ್ತೆ ನೋಡಿಕೊಳ್ಳುತ್ತೇನೆ.

ಇದೊಂದು ಮುಗಿಯದ ಕನಸು. ತೀರದ ದಾಹ. ಮತ್ತೆ ಮತ್ತೆ ಕನಸು. ಮತ್ತೆ ಮತ್ತೆ ದಾಹ.

ಹನಿಯೊಡೆಯದ ಕಾರ್ಮುಗಿಲನ್ನು ಕುದಿವ ಭೂಮಿ ದಿಟ್ಟಿಸುವಂತೆ, ಬೀಸುವ ಗಾಳಿಯ ನೆಪಕ್ಕೆ ಕಾಯ್ದಂತೆ, ಮನಸ್ಸು ಮತ್ತದೇ ಸ್ಪೂರ್ತಿಯನ್ನು ಹುಡುಕುತ್ತದೆ. ಹುಡುಕ್ಹುಡುಕಿ ನಿರಾಶೆಗೊಳ್ಳುತ್ತದೆ.

ಬಂದೀತು ಮತ್ತೆ ಮಳೆ ಸುಗ್ಗಿ, ಎಲ್ಲೆಗಳ ಮೀರೀತು ಹಿಗ್ಗಿ.

ಮತ್ತದೇ ಕನಸು. ಮತ್ತದೇ ಕನವರಿಕೆ.

- ಚಾಮರಾಜ ಸವಡಿ

ಒಳಗೊಳಗೇ ಉಳಿದು, ಬೆಳೆದು...

3 Jun 2012

0 ಪ್ರತಿಕ್ರಿಯೆ

ಇವತ್ತು ನನಗೀ ಮಾತಿನ ಯಂತ್ರದ ಹಂಗಿಲ್ಲ
ಹೃದಯಕ್ಕೆ ಮಾತಾಡುವದ ಕಲಿಸಿದ್ದೇನೆ
*****
ಪದೆ ಪದೆ ನೋಡುವಾಸೆ ಮೂಡದಿರಲೆಂದು
ನಿನ್ನ ಜೀವಂತವಾಗಿ ಎದೆಯಲ್ಲಿಟ್ಟುಕೊಂಡಿದ್ದೇನೆ
*****
ಕೈಗೆಟುಕದ ದೂರದಲ್ಲಿದ್ದರೇನು ನೀನು
ಇಲ್ಲೇ ಮಿಡಿಯುತ್ತೀ ಒಳಗೊಳಗೇ
*****
ಜಗವೆಲ್ಲ ಹುಡುಕ್ಹುಡುಕಿ ನಿರಾಶವಾಯಿತು
ಒಳಗೊಳಗೇ ನಕ್ಕ ನಿನ್ನ ನಗೆ ಕೇಳದಾಯಿತು
*****
ಕೊರಳ ದಾಟಿ ಹೊರಗ್ಹರಿಯದ ನಿನ್ನುಲಿಯ
ಅಪಾರ ದೂರದಿಂದ ತನ್ಮಯನಾಗಿ ಆಲಿಸಿದೆ
*****
ಬಿಡು ಮರುಳೆ, ಇರು ಅಲ್ಲೇ, ದೂರ ದೂರ
ಮಾಯೆಯಂಥ ಪ್ರೀತಿ ಅಂತರ ಮಾಯವಾಗಿಸಿದೆ
*****
ಇನ್ನು ನಿನ್ನ ಕರೆಯುವುದಿಲ್ಲ, ಮೊರೆಯಿಡುವುದಿಲ್ಲ
ಇನ್ನೇನಿದ್ದರೂ ಒಳಗೊಳಗೇ ನಿವೇದನೆ, ವೇದನೆ

- ಚಾಮರಾಜ ಸವಡಿ

ಗೋಲದೊಳಗೆ ತಿರುಗುತ್ತಾ ತಿರುಗುತ್ತಾ...

21 May 2012

1 ಪ್ರತಿಕ್ರಿಯೆ
ನಾನು ಮತ್ತೆ ಮತ್ತೆ ಮೊಬೈಲ್‌ನ ಪುಟ್ಟ ಪರದೆಯನ್ನು ದಿಟ್ಟಿಸಿದೆ.

ಅಲ್ಲಿ ನೀನಿದ್ದಿಲ್ಲ.

ನಿರಾಶೆಯಾಯಿತು. ಅದು ಹಾಗೇ ಬಿಡು, ಆಗಾಗ ಎನ್ನುವುದಕ್ಕಿಂತ ಬಹುತೇಕ ಸಮಯದಲ್ಲಿ ಅದು ಹಾಗೇ.

ನಿರಾಶೆ. ಯಾವುದೇ ಹೊಸ ಭರವಸೆ ಮೂಡಿಸದ ಮಾಮೂಲಿ ಭಾವ ಎನ್ನುವಷ್ಟರಮಟ್ಟಿಗೆ ಅದು ರೂಢಿಯಾಗಿಹೋಗಿದೆ. ಮೊಬೈಲ್ ಮುಖವನ್ನು ಆಗಾಗ ದಿಟ್ಟಿಸುವುದು, ಅದರಲ್ಲಿ ಹೊಸದೇನಾದರೂ ಮೂಡಿದೆಯೋ ಎಂದು ಪರೀಕ್ಷಿಸುವುದು, ಇಲ್ಲವೆಂದಾಗ, ಚಿಕ್ಕದೊಂದು ನಿರಾಶೆ ಅನುಭವಿಸುವುದು, ಮತ್ತೆ ಮೊಬೈಲ್ ಮುಚ್ಚಿ, ಕೆಲಸದತ್ತ ಗಮನ ಹರಿಸುವುದು ಬದುಕಿನ ಭಾಗವಾಗೇ ಹೋಗಿದೆ.

ಎಷ್ಟು ದಿನದಿಂದ ಇದು ಹೀಗೆ ಎಂದು ಯೋಚಿಸುವುದೂ ಉಂಟು. ಆಗೆಲ್ಲ ತಲೆ ಕೊಡವಿ ಸುಮ್ಮನಾಗುತ್ತೇನೆ. 

ಹಳೆಯದನ್ನು ನೆನಪಿಸಿಕೊಳ್ಳುತ್ತ ಕೂಡುವುದರಲ್ಲಿ ಅರ್ಥವಿಲ್ಲ ಎಂಬುದನ್ನು ನಿನಗಿಂತ ಇಷ್ಟೊಂದು ಪರಿಣಾಮಕಾರಿಯಾಗಿ ಬೇರ‍್ಯಾರೂ ನನಗೆ ಮನದಟ್ಟು ಮಾಡಿಸಿಲ್ಲ. ಈಗ ನಾನು ಮುಳುಗಿರುವ ಆಳ ನೋಡಿದರೆ, ಬಹುಶಃ ಮತ್ಯಾರೂ ಆ ಸ್ಥಾನವನ್ನು ಕದಿಯಲು ಸಾಧ್ಯವೂ ಇಲ್ಲ.

ಹೀಗಾಗಿ, ಮೊಬೈಲ್ ಪರದೆಯನ್ನು ದಿಟ್ಟಿಸುವುದರ ಹಿಂದಿನ ಭಾವನೆಗಳೇ ಬೇರೆ. 

ನಿನ್ನನ್ನು ಬಿಟ್ಟು ಮತ್ಯಾರೂ ಅದರಲ್ಲಿ ಸಂತೋಷ ಉಕ್ಕಿಸಲಾರರು. 

ಮತ್ತು, ದುಃಖವನ್ನೂ ಸಹ.

ಗಾಡಿ ಓಡಿಸುವಾಗ, ಸಿಗ್ನಲ್‌ನಲ್ಲಿ ಮತ್ತೆ ಮೊಬೈಲ್ ಮುಖ ದಿಟ್ಟಿಸುತ್ತೇನೆ. ಖಾಲಿ ಪರದೆ ಅಣಕಿಸುತ್ತದೆ. ಮೊಬೈಲ್ ಮುಚ್ಚಿ ಸುಮ್ಮನೇ ರಸ್ತೆ ದಿಟ್ಟಿಸುತ್ತೇನೆ. ಎದುರಿಗೆ ನಿಂತಿರುವ ಗಾಡಿಯ ನಂಬರ್ ಪ್ಲೇಟ್‌ಗಳೊಮ್ಮೆ ಅವಲೋಕಿಸುತ್ತೇನೆ. ಅಲ್ಲಿರುವ ನಂಬರ್‌ಗಳನ್ನು ಕೂಡಿಸಿದರೆ ಬರುವ ಸಂಖ್ಯೆಯನ್ನು ಲೆಕ್ಕ ಹಾಕುತ್ತೇನೆ. ಒಂದಕ್ಕಿಂತ ಒಂದು ನಂಬರ್‌ಗಳು ಅಧ್ವಾನವಾಗಿರುತ್ತವೆ. 

ಅಷ್ಟೊತ್ತಿಗೆ ಸಿಗ್ನಲ್ ಹಸಿರಾಗುತ್ತದೆ. 

ಮತ್ತೆ ಓಟ ಶುರು. ಎಲ್ಲಿಗೆ ಓಡುತ್ತಿದ್ದಾರೋ ಇವರೆಲ್ಲ ದಿಕ್ಕೆಟ್ಟವರಂತೆ ಎಂದು ಬೈದುಕೊಳ್ಳುತ್ತಲೇ ನಾನೂ ಓಟದಲ್ಲಿ ಸೇರಿಕೊಳ್ಳುತ್ತೇನೆ. ಬಹುಶಃ ಅವರೂ ನನ್ನಂತೆ ಯೋಚಿಸುತ್ತಿರಬಹುದು. 

ಕಚೇರಿಗೆ ಹೋದಾಗ, ಮೊಬೈಲ್ ಜಾಗವನ್ನು ಮೇಲ್ ಆವರಿಸುತ್ತದೆ.

ನಿನ್ನ ಹೆಸರಿನ ಮುಂದೆ ದೀಪವೇನಾದರೂ ಬೆಳಗುತ್ತಿದೆಯಾ ಎಂದು ದಿಟ್ಟಿಸುತ್ತೇನೆ.

ದೀಪ ಕಂಡರೆ ಹೇಳತೀರದ ಖುಷಿ. ನಂಗೊತ್ತು ನೀನು ಚಾಟ್‌ಗೆ ಬರಲ್ಲ ಅಂತ. ಆದರೂ ಖುಷಿ. ಬಲೂನು ಮಾರುವವನನ್ನು ಕಂಡ ಮಗುವಿನಂತೆ. 

ಬಲೂನು ಸಿಗುತ್ತೋ ಇಲ್ಲವೋ ಎಂಬುದು ಗೊತ್ತಿರದಿದ್ದರೂ, ಬಲೂನು ಕಂಡ ಅಮಾಯಕ ಖುಷಿಯದು. 

ಆಗಾಗ ಮೇಲ್‌ನ ದೀಪ ನೋಡುತ್ತ ಕೆಲಸ ಮಾಡುತ್ತ ಕೂಡುತ್ತೇನೆ. ಮೀಟಿಂಗ್‌ಗಳಿಗೆ ಎದ್ದು ಹೋಗುವಾಗ, ಲಾಗೌಟ್ ಆದರೂ, ವಾಪಸ್ ಬಂದಾಗ ಮತ್ತೆ ಲಾಗಿನ್ ಆಗಿ ದೀಪ ನಿಟ್ಟಿಸುತ್ತೇನೆ. 

ಎಷ್ಟೋ ಸಾರಿ ದೀಪ ಇರಲ್ಲ.

ಮನಸ್ಸು ಮುದುಡುತ್ತದೆ. 

ಇವೆಲ್ಲ ಅರ್ಥವಿಲ್ಲದ ಭಾವಾತಿರೇಕಗಳು ಅಂತ ನನ್ನನ್ನು ನಾನೇ ಬೈದುಕೊಳ್ಳುತ್ತ ಮತ್ತೆ ಕೆಲಸದಲ್ಲಿ ಮಗ್ನನಾಗುತ್ತೇನೆ. ಒಂದಿಷ್ಟು ಕೆಟ್ಟ ಅನುವಾದಗಳು ಬರುತ್ತವೆ. ಅವಕ್ಕೆ ಜೀವ ತುಂಬಿ, ಅನುವಾದಿಸಿ, ಮತ್ಯಾರದೋ ಕೆಟ್ಟ ಬರವಣಿಗೆಯನ್ನು ಒಪ್ಪವಾಗಿ ಎಡಿಟ್ ಮಾಡಿ, ಅವಕ್ಕೆ ತಕ್ಕುದಾದ ಚಿತ್ರಗಳನ್ನು ಹುಡುಕಿ, ಪುಟ ವಿನ್ಯಾಸಕರಿಗೆ ಕಳಿಸಿಕೊಟ್ಟು, ಈ ಮಧ್ಯೆ ಮತ್ತೆ ಮತ್ತೆ ದೀಪ ದಿಟ್ಟಿಸುತ್ತಾ-

ಎಷ್ಟೋ ಸಾರಿ ಅಂದುಕೊಳ್ಳುತ್ತೇನೆ: ಈ ಮೂರ್ಖತನವನ್ನು ಬಿಟ್ಟು ಗಂಭೀರವಾಗಿ ಏನನ್ನಾದರೂ ಮಾಡಬೇಕು.

ಹಾಗೆ ತಿಂಗಳುಗಟ್ಟಲೇ ಅಂದುಕೊಂಡಾಗ ಹುಟ್ಟಿದ್ದು ಈ ನಿರ್ಧಾರ.

ಇನ್ಮೇಲೆ ಮೇಲ್‌ನ ದೀಪ ದಿಟ್ಟಿಸುವುದಿಲ್ಲ. ಪದೆ ಪದೆ ಮೊಬೈಲ್‌ನ ಪರದೆಯಲ್ಲಿ ನಿನ್ನ ಸಂದೇಶ ಹುಡುಕುವುದಿಲ್ಲ. 

ಹಾಗಂದುಕೊಂಡ ಮೊದಲೆರಡು ದಿನ ವಿಪರೀತ ಖಿನ್ನತೆ. ತವಕ ಹುಟ್ಟಿಸುತ್ತಿದ್ದ ಇವೆರಡು ಸಣ್ಣ ಖುಷಿಗಳು ಒಮ್ಮೆಲೇ ಇಲ್ಲವಾದವು. ಮನಸ್ಸು ಖಾಲಿ. 

ಆ ಜಾಗವನ್ನು ತುಂಬಲು ಏನಾದರೂ ಬರೆಯಲು ಶುರು ಮಾಡಿದೆ. ಬರೆದು ಮಾಡುವುದಾದರೂ ಏನು ಅಂತ ಅವನ್ನೆಲ್ಲ ಡಿಲೀಟ್ ಮಾಡಿದೆ.

ಆಗ ಮನಸ್ಸು ಇನ್ನಷ್ಟು ಖಾಲಿಯಾಯ್ತು. ಅದರ ಜಾಗದಲ್ಲಿ ಸಿಡುಕು, ಮಂಕುತನ.

ಕಳೆದುಹೋದವನಂತೆ ಕೂಡುವುದು ರೂಢಿಯಾಯ್ತು. ಗೆಳೆಯರು ಹುಬ್ಬೇರಿಸಿ ನೋಡಿ ಕ್ರಮೇಣ ಸುಮ್ಮನಾದರು. 

ಕೆಲವೊಮ್ಮೆ ನೀನು ಫೋನ್ ಮಾಡುತ್ತೀ. ನಂಗೊತ್ತು, ಅದು ವೃತ್ತಿಪರ ವಿಷಯಕ್ಕೆ ಸಂಬಂಧಿಸಿದ್ದು ಅಂತ. 

ಮತ್ತೇನು ವಿಷಯ ಅನ್ನುತ್ತೀ. ಏನಿಲ್ಲ ಅಂತೀನಿ. ನೀನು ಅದೂ ಇದು ಮಾತಾಡುತ್ತೀ. ನನ್ನ ಗಮನ ಇರಲ್ಲ. ಮತ್ತೇನು ಸಮಾಚಾರ ಅನ್ನುತ್ತೀ. ಏನಿಲ್ಲ ಅಂತೀನಿ. ಏಕೋ ನೀವು ಮೂಡಿಯಾಗ್ತಿದ್ದೀರಾ ಅನ್ನುತ್ತೀ. ಹಾಗೇನಿಲ್ಲ ಅಂತೀನಿ. ಸ್ವಲ್ಪ ಹೊತ್ತು ನೀನು ಸುಮ್ಮನಾಗ್ತೀ. ನಾನು ಸುಮ್ಮನೇ ಇರ್ತೀನಿ. ಸರಿ ಹಾಗಾದ್ರೆ ಅಂತ ಫೋನಿಡ್ತೀ. ನನ್ನ ಮನಸ್ಸು ಪೂರ್ತಿ ಖಾಲಿ.

ಏನಿದೆಲ್ಲ? ಏಕಿದೆಲ್ಲ? ಕಬ್ಬಿಣದ ಪಟ್ಟಿಯ ಗೋಲದಲ್ಲಿ ಸರ್ಕಸ್‌ನವ ಬೈಕ್ ಓಡಿಸುತ್ತಾ ಅಲ್ಲೇ ತಿರುಗುವಂತೆ ಈ ಪ್ರಶ್ನೆಗಳು ಮತ್ತೆ ಮತ್ತೆ ರೊಂಯ್‌ಗುಟ್ಟುತ್ತ ಮನಸ್ಸಲ್ಲಿ ಸುತ್ತುತ್ತವೆ. ಗೋಲದೊಳಗಿನ ಬೈಕ್‌ನವ ಹೇಗೆ ಎಲ್ಲೂ ಹೋಗದೇ ಅಲ್ಲೇ ಸುತ್ತುತ್ತಾನೋ, ಹಾಗೆ ಈ ಪ್ರಶ್ನೆಗಳೂ ಉತ್ತರವಿಲ್ಲದೇ ಸುತ್ತುತ್ತಲೇ ಹೋಗುತ್ತವೆ. ಸುತ್ತಿ ಸುತ್ತಿ ಸುಸ್ತಾಗ್ತವೆ.

ನಿನಗೂ ಹೀಗೆಲ್ಲ ಅನಿಸುತ್ತಾ? ನೀನು ಆಗಾಗ ಮೊಬೈಲ್‌ನ ಪರದೆ ನೋಡಿ ನಿರಾಶಳಾಗ್ತೀಯಾ? ಮೇಲ್‌ನ ದೀಪ ನೋಡ್ತಿರ್ತಿಯಾ? ಕರೆಯೊಂದು ಬರುತ್ತೆ ಅಂತ ಕಾಯ್ತಿರ್ತಿಯಾ? ನಿಂಗೂ ಇದೆಲ್ಲ ಏಕೆ? ಏನು? ಎಂಬೆಲ್ಲ ಪ್ರಶ್ನೆಗಳು ಕಾಡುತ್ವಾ?

ಇಂಥ ಪ್ರಶ್ನೆಗಳು ನಿನ್ನನ್ನು ಕಾಡದಿದ್ರೇ ಒಳ್ಳೆಯದು. 

ಕಾಡಿದ್ರೆ, ನೀನು ನನ್ನ ಹಾಗೇ ಆಗಿಬಿಡ್ತೀ. ಹಾಗಾಗದಿರಲಿ.

ನೀನು ನೀನೇ ಆಗಿರು.

ನಾನು ನಾನೇ ಆಗಿರ್ತೀನಿ. 

ಗೋಲದೊಳಗೆ ತಿರುಗುತ್ತಾ ತಿರುಗುತ್ತಾ...

- ಚಾಮರಾಜ ಸವಡಿ

ಮರೆಯಬೇಕೆಂದು ಮತ್ತೆ ಮತ್ತೆ ನೆನಪಿಸಿಕೊಳ್ಳುತ್ತಾ...

8 Apr 2011

4 ಪ್ರತಿಕ್ರಿಯೆ
Art just makes verses; only the heart is a poet.
- Andre Chenier 
ತುಂಬಾ ದಿನಗಳ ಹಿಂದೆ ಬರೆದಿಟ್ಟುಕೊಂಡಿರುವ ಈ ಸಾಲುಗಳನ್ನು ಮತ್ತೆ ಮತ್ತೆ ಓದಿಕೊಳ್ಳುತ್ತಾ ರಾತ್ರಿಯಿಡೀ ಕೂತಿದ್ದೇನೆ. ಕವಿತೆ ಬರೆಯುವುದು ಇತ್ತೀಚೆಗೆ ಕಷ್ಟವಾಗತೊಡಗಿರುವುದರ ಕಾರಣವೇನಾದರೂ ಈ ಸಾಲುಗಳಲ್ಲಿದೆಯಾ ಎಂಬ ಪ್ರಶ್ನೆಗೆ ಸ್ಪಷ್ಟ ಉತ್ತರ ಸಿಗುತ್ತಿಲ್ಲ. 
ಅದೇಕೋ ಗೊತ್ತಿಲ್ಲ, ಮುಂಚಿನಂತೆ ಕವಿತೆ ಬರೆಯುವುದು ಆಗುತ್ತಿಲ್ಲ. ಕವಿತೆ ನನ್ನ ಅತ್ಯಂತ ಇಷ್ಟದ ವಿಷಯ. ಅಷ್ಟೇ ಕಷ್ಟದ ಅಭಿವ್ಯಕ್ತಿಯೂ ಹೌದು. ಎಂಥ ನಿರಾಸೆಯ ನಡುವೆಯೂ ಗದ್ಯವನ್ನು ಒಂದಷ್ಟು ಚೆನ್ನಾಗಿ ಕಾಣುವಂತೆ ಬರೆದುಬಿಡಬಹುದು. ಆದರೆ, ಪದ್ಯದ ವಿಷಯದಲ್ಲಿ ಹಾಗಾಗದು. ಅದು ಒಲಿಯಬೇಕು. ಒಲಿಯುವವರೆಗೆ ಪ್ರಯತ್ನಿಸಬೇಕು. ಎಲ್ಲಿಯೂ ಹದ ತಪ್ಪಬಾರದು. ಒಂದೇ ಒಂದು ಅನಗತ್ಯ ಶಬ್ದ ಇಡೀ ಭಾವವನ್ನೇ ಹಾಳು ಮಾಡಿಬಿಡಬಹುದು. ಅಲ್ಲಿ ಅನುಭವ ಕೆಲಸಕ್ಕೆ ಬಾರದು. 
ಹೀಗಾಗಿ, ಪ್ರತಿಯೊಂದು ಕವಿತೆಯೂ ಹೊಸ ಪ್ರಯತ್ನವೇ. ಥೇಟ್ ಪ್ರೀತಿಯನ್ನು ಒಲಿಸಿಕೊಂಡಂತೆ.
ಸಾಮಾನ್ಯವಾಗಿ ಗದ್ಯಕ್ಕೆ ನಿಲುಕದ ಭಾವನೆಗಳನ್ನು ಕವಿತೆ ಎತ್ತಿಕೊಡುತ್ತದೆ. ಇದನ್ನು ಗದ್ಯದಲ್ಲಿ ಇಷ್ಟು ಚೆನ್ನಾಗಿ, ಇಷ್ಟು ಕಡಿಮೆ ಶಬ್ದಗಳಲ್ಲಿ, ಇಷ್ಟು ಅರ್ಥಗರ್ಭಿತವಾಗಿ, ಮನಸ್ಸಿಗೆ ತಟ್ಟುವಂತೆ ಬರೆಯಲಾಗದು. ಎಷ್ಟೇ ಸಲ ಓದಿದರೂ ಮತ್ತೆ ಮತ್ತೆ ಓದುವ ಭಾವ ಮೂಡುವಂತೆ, ಓದಿದ ಪ್ರತಿ ಸಲವೂ ಹೊಸ ಅರ್ಥಗಳನ್ನು ಹುಟ್ಟುಹಾಕುವಂತೆ ಮಾಡಲಾಗದು. ಪದ್ಯದ ಸೊಗಸದು. ಅದು ಹಾಗಿದ್ದರೇ ಚೆನ್ನ. 
ಹೀಗಾಗಿ, ಕವಿತೆ ಇತ್ತೀಚೆಗೆ ಕಷ್ಟವಾಗುತ್ತಿದೆ. 
ಮನಸ್ಸಿನ ಏರಿಳಿತಗಳ ನಡುವೆ ಯಾವುದೋ ಭಾವವೊಂದು ಕಾರ್ಮುಗಿಲ ನಡುವೆ ಮಿಂಚಿ ಮರೆಯಾಗುವ ಬೆಳಕಿನಂತೆ ಥಟ್ಟನೇ ಹೊಳೆಯುತ್ತದೆ. ಮನಸ್ಸು ಅದನ್ನು ಮತ್ತೆ ಮತ್ತೆ ಕಾಣಲು ಹಂಬಲಿಸುವುದೇ ಕವಿತೆ ಕಟ್ಟುವ ಸಮಯ. ಬಂದರೆ ಅದು ಇಡಿಯಾಗಿ ಬಂದುಬಿಡುತ್ತದೆ. ಇಲ್ಲದಿದ್ದರೆ, ಏನೇ ಪ್ರಯತ್ನಿಸಿದರೂ ಚಿತ್ರವಾಗದು. 
ನಿಜವಾದ ಫಜೀತಿ ಶುರುವಾಗುವುದೇ ಆಗ. ಶಬ್ದಗಳನ್ನು ಹೇಗೋ ಮಾಡಿ, ಆಕರ್ಷಕವಾಗಿ ಜೋಡಿಸಿಬಿಡಬಹುದು. ಆದರೆ, ಅದು ಕವಿತೆಯಾಗದು. ತಾನಾಗಿ ಉಕ್ಕದೇ ಒಲವಾಗದಲ್ಲ, ಹಾಗೆ. 
ಹಾಗಂತ, ಅದನ್ನು ಅಷ್ಟಕ್ಕೇ ಕೈಬಿಡಲೂ ಆಗುವುದಿಲ್ಲ. ಮನಸ್ಸಿನಲ್ಲಿ ಅದೊಂಥರಾ ಗೀಳಾಗಿ ಕಾಡಲು ಶುರುವಾಗುತ್ತದೆ. ಅಪರಾತ್ರಿಯಲ್ಲಿ ನಿದ್ದೆಗೆಡಿಸುತ್ತದೆ. ನಿತ್ಯದ ಕೆಲಸಗಳಿಗೆ ವಿಮುಖನನ್ನಾಗಿಸುತ್ತದೆ. ಪದೆ ಪದೆ ಕರೆಯುತ್ತದೆ. ಮತ್ತೆ ಮತ್ತೆ ಸೋಲಿಸುತ್ತದೆ. ಬೇರೆ ಏನನ್ನೂ ಬರೆಯದ ಮನಃಸ್ಥಿತಿಗೆ ತಂದೊಡ್ಡಿ ಮಂಕಾಗಿಸುತ್ತದೆ.
ನನ್ನ ಬಹುತೇಕ ನಿದ್ದೆಗೇಡಿ ರಾತ್ರಿಗಳಿಗೆ ಕಾರಣ ಇಂಥ ಎಟುಕದ ಕವಿತಾಭಾವ. ಎಷ್ಟೋ ಸಲ ರಾತ್ರಿಯಿಡೀ ಕೂತರೂ ಒಂದು ಭಾವವನ್ನು ತೀರಕ್ಕೆ ತಲುಪಿಸುವುಲ್ಲಿ ಸೋತಿದ್ದೇನೆ. ಮತ್ತೆ ಮತ್ತೆ ಪ್ರಯತ್ನಿಸಿ, ಸಾಧ್ಯವಾಗದೇ ಹತಾಶನಾಗಿದ್ದೇನೆ. ಸಮಾಧಾನವಾಗದೇ, ಅದೇ ಭಾವವನ್ನು ಗದ್ಯಕ್ಕೆ ಬದಲಿಸಿ ಸುಮ್ಮನಾಗಿದ್ದೇನೆ. ಓದಿದವರು ಏನೇ ಹೇಳಲಿ, ಎಷ್ಟೇ ಮೆಚ್ಚಲಿ, ಪದ್ಯವಾಗಬೇಕಿದ್ದ ಭಾವವೊಂದು ಗದ್ಯವಾಗಿದ್ದರ ಕೊರತೆ ಬರೆದ ನನಗೆ ಮಾತ್ರ ಗೊತ್ತು. ಅಂಥ ಗದ್ಯ ಬರಹವನ್ನು ಓದಿದಾಗೊಮ್ಮೆ, ಕೈಗೆ ಸಿಗದ ಪದ್ಯ ತುಂಟತನದಿಂದ ಕೆಣಕುತ್ತದೆ. ಮತ್ತೆ ಮತ್ತೆ ಕವಿತೆ ಬರೆಯಲು ಪ್ರೇರೇಪಿಸುತ್ತದೆ.
ಇವತ್ತೂ ಅಂಥದೇ ದುಃಸ್ಥಿತಿ. 
ಮನಸ್ಸಿನ ಸುನೀತ ಭಾವವೊಂದು ಹಾಡಾಗುತ್ತಿಲ್ಲ ಎಂಬ ನೋವು. ರಾತ್ರಿಯಿಡೀ ಪ್ರಯತ್ನಿಸಿದರೂ ಅದು ದಕ್ಕುತ್ತಿಲ್ಲ. ಪದೆ ಪದೆ ಪ್ರಯತ್ನ ಕೈಬಿಟ್ಟು ಏನೇನೋ ಓದುತ್ತ ಕೂತರೂ, ಕಾಡುವ ಭಾವ ಹಾಡಾಗುತ್ತಿಲ್ಲ. ಏನೋ ಕೊರತೆ. ಯಾವುದೋ ವಿಷಾದ. ತಿಳಿಯಾಗದ ಹಳೆಯ ನೋವು. ಮರೆಯಬೇಕೆಂದು ಮತ್ತೆ ಮತ್ತೆ ನೆನಪಿಸಿಕೊಂಡಂತೆ, ಎಷ್ಟೇ ಯತ್ನಿಸಿದರೂ ದಕ್ಕದೇ ಹೋದಂತೆ, ಏನೇನೋ ಭಾವಾತಿರೇಕಗಳು. ಆದರೆ, ಯಾವೊಂದು ಭಾವವೂ ಅರ್ಥಪೂರ್ಣ ಸಾಲುಗಳಾಗುತ್ತಿಲ್ಲ. ಇಡಿಯಾಗಿ ಒಡಮೂಡುತ್ತಿಲ್ಲ. 
ಅಂದುಕೊಂಡಂತೆ ಮೂಡದ ಕವಿತೆ ಕಳೆದುಕೊಂಡ ಪ್ರೀತಿಯಂತೆ. ಎಷ್ಟೇ ಪ್ರಯತ್ನಿಸಿದರೂ ಸಿಗದೇ ನುಣುಚಿಕೊಳ್ಳುತ್ತದೆ. ಮತ್ತೆ ಮತ್ತೆ ಸುಳಿಯುತ್ತದೆ. ಮತ್ತೆ ಮತ್ತೆ ಕಾಡುತ್ತದೆ. ಕಣ್ಣೆದುರೇ ಇರುತ್ತದೆ, ಹಿಡಿಯಲಾಗದು. ಮತ್ತೆ ಮತ್ತೆ ಪ್ರಯತ್ನಿಸಿ ಸೋತಾಗ, ತಣ್ಣಗೇ ಕೆಣಕುತ್ತದೆ. ಹತಾಶನನ್ನಾಗಿಸುತ್ತದೆ.
ಹೀಗೆ ಸೋತು ಕೂತವನನ್ನು ಸೆಳೆದಿದ್ದು ಈ ಸಾಲು: Art just makes verses; only the heart is a poet.
ನಿಜ. ಎದೆಯೊಳಗೆ ಉಕ್ಕದಿದ್ದುದು ಕವಿತೆಯಾಗದು. ಮನಸ್ಸಿನೊಳಗೆ ಹೊಳೆದ ಮಿಂಚೊಂದು ಎದೆಯೊಳಗೆ ಅರಳಬೇಕು. ಬೆಳೆಯಬೇಕು. ಮೊಗ್ಗೊಂದು ಅರಳಿ ಹೂವಾದಂತೆ, ಕವಿತೆಯಾಗಬೇಕು. ಥೇಟ್ ಪ್ರೀತಿಯಂತೆ. ತಾನಾಗೇ ಉಕ್ಕದೇ ಕವಿತೆಯಾಗದು. ಅದಾಗೇ ಒಲಿಯದೇ ಪ್ರೀತಿಯಾಗದು. 
ಇವತ್ತು ಅದು ನನಗೆ ಮತ್ತೆ ಸಾಧ್ಯವಾಗಲಿಲ್ಲ. ಇತ್ತೀಚೆಗೆ ಅದು ಏಕೋ ಸಾಧ್ಯವಾಗುತ್ತಿಲ್ಲ. ಹೀಗಾಗಿ ಮತ್ತೆ ಗದ್ಯದ ಮೊರೆ ಹೋಗುತ್ತಿದ್ದೇನೆ. 
ಕ್ಷಮಿಸು ಕವಿತಾ ದೇವತೆಯೇ!
- ಚಾಮರಾಜ ಸವಡಿ

ಕಳೆದುಹೋಗಬೇಕು...

26 Feb 2011

2 ಪ್ರತಿಕ್ರಿಯೆ
If I loved you less, I might be able to talk about it more?


ಹಾಗಂತ ಬರೆದುಕೊಂಡು ತುಂಬ ದಿನಗಳಾದವು. ಈ ನಡುವೆ ಗಂಭೀರವಾಗಿ ಏನೇ ಮಾಡಲು ಹೋದರೂ ಅದನ್ನು ಪೂರ್ತಿಗೊಳಿಸಲಾಗದೇ ಒದ್ದಾಡುವಂತಾಗುತ್ತಿದೆ. ಸುಮ್ಮನೇ ಪುಸ್ತಕದ ಷೆಲ್ಫ್ ದಿಟ್ಟಿಸುವುದು, ಅದರೊಳಗಿಂದ ಯಾವುದಾದರೂ ಪುಸ್ತಕ ಹೊರತೆಗೆಯುವುದು, ಒಂದಿಷ್ಟು ಪುಟಗಳನ್ನು ತಿರುವಿಹಾಕುವುದು, ಕೆಲ ಸಾಲುಗಳ ಓದು, ಇನ್ನು ಕೆಲ ಸಾಲುಗಳ ಮನನ-

ಅಷ್ಟೊತ್ತಿಗೆ ಮನಸ್ಸು ಎಲ್ಲೋ ಕಳೆದುಹೋಗಿರುತ್ತದೆ.

ಮಧ್ಯವಯಸ್ಕನ ಗೊಂದಲ ಶುರುವಾಯ್ತಾ ಅಂತ ಆಗೀಗ ಅನಿಸುತ್ತಿರುವುದು ನಿಜವಾದರೂ, ಅದನ್ನು ಒಪ್ಪಿಕೊಳ್ಳುವುದು ಮನಸ್ಸಿಗೆ ಕಷ್ಟ. ಛೇ ಇರಲಾರದು ಎಂದು ಸಮಾಧಾನ ಹೇಳಿಕೊಂಡರೂ, ಗೊಂದಲ ಹಾಗೇ ಇರುತ್ತದೆ. ನಿರ್ದಿಷ್ಟವಾಗಿ ಏನನ್ನೂ ಮಾಡಲು ಆಗುತ್ತಿಲ್ಲ. ಹಾಗಂತ ಸುಮ್ಮನೇ ಕೂಡಲೂ ಆಗುತ್ತಿಲ್ಲ.

ಮೋಡ ದಟ್ಟೈಸಿದೆ, ಗಾಳಿ ತಂಪಾಗಿದೆ. ನೆಲವೂ ಕಾದಿದೆ. ಬೇಂದ್ರೆಯವರ ನೀ ಹೀಂಗ ನೋಡಬ್ಯಾಡ ನನ್ನ ಕವಿತೆಯ ಸಾಲುಗಳು ನೆನಪಾಗುತ್ತವೆ. 

‘ನಿನ್ನ ಕಣ್ಣಿನಲಿ ಕಾಲೂರಿ ನದಿಯು, ನಡನಡುವೆ ಹುಚ್ಚು ನಗಿ ಯಾಕ?

ಹನಿ ಒಡೆಯಲಿಕ್ಕೆ ಬಂದಂಥ ಮೋಡ, ತಡೆದ್ಹಾಂಗ ಗಾಳಿಯ ನೆವಕ...’

ಹನಿ ಒಡೆಯಲೆಂದು ಮನಸ್ಸು ಹಂಬಲಿಸುತ್ತದೆ. ಒಳಗಿನದೆಲ್ಲ ಯಾವುದೋ ನೆಪವೊಡ್ಡಿಕೊಂಡು ಹೊರಗುಕ್ಕಲಿ, ಹರಿದು ಹಗುರವಾಗಲಿ ಅಂತ ಒರಲುತ್ತದೆ. 

ಆದರೆ, ಊಹೂಂ, ಹನಿ ಒಡೆಯುತ್ತಿಲ್ಲ. ಮೋಡ ಹಾಗೇ ಬಿಗಿದುಕೊಂಡಿದೆ. 

ಬರೆದು ಹಗುರಾಗಬೇಕೆಂದು ಹಂಬಲಿಸಿದ್ದಾಯ್ತು. ಆದರೆ, ಮನಸ್ಸನ್ನು ತೀವ್ರವಾಗಿ ಕಾಡುವಂಥ ಭಾವನೆಗಳನ್ನು ತಕ್ಷಣಕ್ಕೆ ಬರೆಯುವುದು ಕಷ್ಟಕರ. ತೀವ್ರತರ ಭಾವನೆಗಳು ಹದಗೊಳ್ಳಬೇಕು, ಕೊಂಚ ತಣಿಯಬೇಕು, ಕೊಂಚ ಇಂಗಬೇಕು. ಅಷ್ಟೊತ್ತಿಗೆ, ಹನಿ ಒಡೆಯಬೇಕಾದ ಘಳಿಗೆ ಬಂದು, ಧೋ ಎಂದು ಸಾಲುಗಳು ಉಕ್ಕತೊಡಗುತ್ತವೆ.

ಅದೊಂಥರಾ ನಾರ್ಮಲ್ ಹೆರಿಗೆ.

ಆದರೆ, ಅದೇ ಸಾಧ್ಯವಾಗುತ್ತಿಲ್ಲ ಎಂಬುದು ಸದ್ಯದ ಸಮಸ್ಯೆ. ಅರ್ಜೆಂಟಾಗಿ ಮನಸ್ಸನ್ನು ಬಿಗಿದಿಟ್ಟಿರುವ ಒತ್ತಡ ಹೊರಬೀಳಬೇಕು. ಅತ್ತೋ, ಬರೆದೋ ಹಗುರಾಗಬೇಕು. ಗಂಡಸಾಗಿ ಅಳೋದಾ? ಎಂಬ ಯಾವ ಸೆಂಟಿಮೆಂಟನ್ನೂ ಇಟ್ಟುಕೊಂಡವನಲ್ಲ ನಾನು. ಅಷ್ಟಕ್ಕೂ ಅಳಬೇಕೆನ್ನುವುದು ಯಾವ ದುಃಖಕ್ಕೂ ಅಲ್ಲ.

ಏಕೆಂದರೆ, ಅಳು ಬರಲು ದುಃಖವೇ ಆಗಬೇಕೆಂದೇನೂ ಇಲ್ಲ.

ವಿಪರೀತ ಸೆಂಟಿಮೆಂಟಾದರೂ ಕಣ್ಣೀರು ಉಕ್ಕುತ್ತದೆ. ತೀವ್ರ ಖುಷಿಯಾದಾಗಲೂ. ನನಗೆ ದುಃಖಕ್ಕಿಂತ ಇಂಥ ಸಂದರ್ಭಗಳಲ್ಲಿ ಕಣ್ಣೀರು ಸುರಿದಿದ್ದೇ ಹೆಚ್ಚು.

ಈ ಸಲ ಅದ್ಯಾವುದೂ ಇಲ್ಲ. 

ಮತ್ಯಾಕೆ ಗಂಟು ಬಿತ್ತೀ ದುಗುಡ ಎಂದು ಖಿನ್ನವಾಗುತ್ತಿದೆ ಮನಸ್ಸು. ಕಾಣದ ತೀರಕ್ಕೆ ಹಂಬಲಿಸಿದೆ ಮನ ಎಂಬ ಕವಿವಾಣಿ ನಿಜವಾಗುವ ಮನಸ್ಸು ಹತ್ತಿರ ಬಂತೆ ಅಂತ ಅಂದುಕೊಳ್ಳುತ್ತೇನೆ. ಕಾಣದ ತೀರವನ್ನು ಪದೆ ಪದೆ ಹುಡುಕಿಕೊಂಡು ಹೋದ, ಬದುಕು ಕಟ್ಟಿಕೊಂಡವನು ನಾನು ಎಂದು ಸಮಾಧಾನ ತಂದುಕೊಳ್ಳುತ್ತೇನೆ. 

ಆದರೂ, ದುಗುಡ. 

ವಿಪರೀತ ಸೆಂಟಿಮೆಂಟ್ ಆಗುವುದೇ ದೊಡ್ಡ ಸಮಸ್ಯೆ ಅಂತ ಪದೆ ಪದೆ ಅಂದುಕೊಂಡರೂ, ದುಗುಡ ಶಮನವಾಗುತ್ತಿಲ್ಲ. ಈ ದುಗುಡದಾಳದಿಂದಲೇ ನೆಮ್ಮದಿ ಉಕ್ಕಲಿ ಎಂದು ಹಂಬಲಿಸುವುದೂ ನಿಂತಿಲ್ಲ. ಮನೋವಿಜ್ಞಾನಿಗಳು ಹೇಳುವ ಕೆಮಿಕಲ್ ಇಂಬ್ಯಾಲೆನ್ಸ್ ಇರಬಹುದೇ ಎಂದು ಸಣ್ಣ ಸಂಶಯ. 

ಅದೇನೇ ಇದ್ದರೂ, ಉಕ್ಕಿದ ಸಾಗರ, ಉಕ್ಕಿದಲ್ಲೇ ಶಮನವಾಗಬೇಕು. ಅದು ಮತ್ತೆಲ್ಲಿ ಹೋದೀತು? ಎದ್ದ ಕಡೆಯೇ ಅಲೆ ನಿಲ್ಲಬೇಕು, ಅಳು ನಿಲ್ಲಬೇಕು. ಮುದುಡಿದ ಕಡೆಯೇ ಬದುಕು ಅರಳಬೇಕು. ಅದು ನಿಯಮ.

ಹಾಗಂದುಕೊಂಡು ಮತ್ತೆ ಪುಸ್ತಕಗಳ ಮೊರೆ ಹೋಗುತ್ತೇನೆ. Our sweetest songs are those, which tell our saddest thoughts ಎಂಬ ಪಿ.ಬಿ. ಷೆಲ್ಲಿ ಮಹಾನುಭಾವನ ಕವಿವಾಣಿ ಕಣ್ಣಿಗೆ ಬೀಳುತ್ತದೆ.

ಅರೆ, ಹೌದಲ್ಲವೆ? ಎಂದು ಮನಸ್ಸು ಕೊಂಚ ಅರಳಿತು. 

ಅಳುವ ಮನಸು ಅರಳುವ ಪರಿಯೇ ವಿಚಿತ್ರ. ಇದ್ದಕ್ಕಿದ್ದಂತೆ ದುಗುಡ ಕರಗುವ ಛಾಯೆ. ಮೋಡ ಹನಿ ಒಡೆದ ಅನುಭವ. ದಟ್ಟೈಸಿದ ಎಲ್ಲವೂ ಕರಗತೊಡಗಿದ ಭಾವ. ವಿಚಿತ್ರ ನೆಮ್ಮದಿ ಅಲೆಅಲೆಯಾಗಿ ಆವರಿಸಿದಂತೆ, ಯಾವ ಮದಿರೆಯೂ ನೀಡದ ನೆಮ್ಮದಿಯನ್ನು ನೀಡಿದಂತೆ, ಅದ್ಭುತ ಕವಿತೆಯೊಂದನ್ನು ಓದಿದ ತೃಪ್ತಿಯಂತೆ, ಮನಸ್ಸು ಹಂತಹಂತವಾಗಿ ತಣಿಯತೊಡಗಿತು.

ಅಷ್ಟೇ-

ಅದೆಲ್ಲಿ ಅಡಗಿದ್ದವೋ ಕಣ್ಣೀರು ಉಕ್ಕತೊಡಗಿದವು. ರಾತ್ರಿಯ ನೀರವ ಮೌನದಲ್ಲಿ, ದನಿ ಕೂಡ ಹೊರಬರಲು ಆಸ್ಪದ ನೀಡದಂತೆ ಕಣ್ಣೀರು ಇಳಿದವು. ಜೊತೆಗೆ, ದಟ್ಟ ದುಗುಡ. ಮುಂದೈದು ನಿಮಿಷದಲ್ಲಿ ಅಬ್ಬರಿಸುತ್ತಿದ್ದ ಕಡಲು ಪ್ರಶಾಂತವಾಗಿ, ಕವಿದ ಕಾರ್ಮೋಡ ಕರಗಿ, ಅಪರಾತ್ರಿಯ ಕಾಳವದಲ್ಲಿ ನಕ್ಷತ್ರಗಳು ಸುಮ್ಸುಮ್ಮನೇ ನಕ್ಕವು.

ನಾನೂ ನಕ್ಕೆ. ನನ್ನನ್ನೇ ನೋಡಿಕೊಂಡು. 

- ಚಾಮರಾಜ ಸವಡಿ

ಆತ್ಮದಷ್ಟು ಹತ್ತಿರ, ಆಕಾಶದಷ್ಟು ದೂರ

6 Feb 2011

3 ಪ್ರತಿಕ್ರಿಯೆ
ನಾವೇಕೆ ಬರೆಯುತ್ತೇವೆ ಎಂಬುದು ಹಳೇ ಪ್ರಶ್ನೆ. ಉತ್ತರಿಸಲು ತಡವರಿಸುವಂಥ ಪ್ರಶ್ನೆ. ಹೀಗಾಗಿ ಎಷ್ಟೋ ಸಲ ಕೇಳಿಕೊಂಡಿದ್ದೇನೆ: ಈ ಬ್ಲಾಗ್ ಬರೆಯುವುದು ಏತಕ್ಕಾಗಿ?

ಮುದ್ರಣ ಮಾಧ್ಯಮದಿಂದ ದೃಶ್ಯ ಮಾಧ್ಯಮಕ್ಕೆ ವಲಸೆ ಬಂದಾಗೆಲ್ಲ ಇಂಥದೊಂದು ಅನಿವಾರ್ಯತೆ ಕಾಡಿದೆ. ನನ್ನ ಬರವಣಿಗೆಗೆ ವೇದಿಕೆ ಸೃಷ್ಟಿಸಿಕೊಳ್ಳುವ ಅನಿವಾರ್ಯತೆಯಿಂದಾಗಿ ಈ ಬ್ಲಾಗ್ ಶುರು ಮಾಡಿದೆ.

ಆದರೆ, ಕೆಲವೇ ವರ್ಷಗಳ ಹಿಂದೆ ಇಂಥ ಸೌಲಭ್ಯವಿದ್ದಿಲ್ಲ. ಬಿಟ್ಟು ಬಂದ ಪತ್ರಿಕೆಗಳವರು ನನ್ನ ಬರಹಗಳನ್ನು ಹಾಕುತ್ತಿದ್ದಿಲ್ಲ. ಅದಕ್ಕೆ ಕಾರಣಗಳು ಹಲವಾರು. ಹಾಕುವುದಿಲ್ಲ ಎಂದು ಗೊತ್ತಾದಾಗ, ಅನಿವಾರ್ಯವಾಗಿ ನೋಟ್‌ಬುಕ್‌ನಲ್ಲಿ ಬರೆದಿಟ್ಟುಕೊಳ್ಳುತ್ತಿದ್ದೆ. ಅವನ್ನು ಒಬ್ಬನೇ ಓದಿ ಖುಷಿಪಡುತ್ತಿದ್ದೆ. ನನ್ನ ಎಷ್ಟೋ ಬರವಣಿಗೆಗಳು ಈಗಲೂ ಹಾಗೇ ಉಳಿದಿವೆ. ಒಂಥರಾ ಖಾಸಗಿ ಗುಟ್ಟುಗಳಂತೆ.

ಇನ್ನು ಬರಹಕ್ಕೆ ಸಂಬಂಧಿಸಿದಂತೆ ನಾನು ಕೆಲವೊಂದು ನಿಯಮಗಳನ್ನು ಹಾಕಿಕೊಂಡಿದ್ದೇನೆ. ಅವು ಕೇವಲ ನನಗಾಗಿ ಮಾಡಿಕೊಂಡಂಥವು.

ಬಿಟ್ಟು ಬಂದ ಸಂಸ್ಥೆಯ ವಿರುದ್ಧ ನಾನು ಬರೆಯುವುದಿಲ್ಲ. ಅಲ್ಲಿಯ ಒಳಜಗಳಗಳು, ಜನಗಳು, ಘಟನೆಗಳ ಬಗ್ಗೆ ಋಣಾತ್ಮಕವಾಗಿ ಬರೆಯಬಾರದು ಎಂಬುದು ಅಂಥದೊಂದು ನಿಯಮ. ಇಲ್ಲಿನ್ನು ಇರಲು ಸಾಧ್ಯವೇ ಇಲ್ಲ ಎಂದು ಅನಿಸಿದಾಗ ಸಂಸ್ಥೆಯೊಂದನ್ನು ಬಿಟ್ಟು ಹೊರಡುವುದು ಅನಿವಾರ್ಯ. ಹೀಗಿದ್ದರೂ, ಬಿಟ್ಟು ಬಂದ ಸಂಸ್ಥೆಯ ವಿರುದ್ಧ, ಅಲ್ಲಿದ್ದ ವ್ಯಕ್ತಿಗಳ ವಿರುದ್ಧ ಬರೆಯಬಾರದು ಎಂಬ ನಿಯಮವನ್ನು ನಾನು ಪಾಲಿಸಿಕೊಂಡು ಬಂದಿದ್ದೇನೆ.

ಹಾಗೆಯೇ ನನ್ನ ಏರ್‌ಫೋರ್ಸ್ ದಿನಗಳ ಬಗ್ಗೆ. ಈ ಕುರಿತು ಇದುವರೆಗೆ ನಾನು ಏನನ್ನೂ ಬರೆಯಲು ಹೋಗಿಲ್ಲ. ಬಹುಶಃ ಬರೆಯಲಾರೆ. ಹಾಗೆ ನೋಡಿದರೆ ಅದು ನಾನು ಸೇರಿದ್ದ ಮೊದಲ ಕೆಲಸ. ಮೊದಲ ತಲ್ಲಣ. ಮೊದಲ ವೃತ್ತಿ ರೋಮಾಂಚನವೂ ಹೌದು. ಹೀಗಿದ್ದರೂ,  ಆ ವೃತ್ತಿಯ ಬಗ್ಗೆ ನಾನು ಬರೆಯಲಾರೆ. ನನ್ನ ಪಾಲಿಗೆ ಅದೊಂದು ಮುಚ್ಚಿದ ಪುಸ್ತಕ.

ನಾನು ಕೆಲಸ ಮಾಡಿದ ಬಹುತೇಕ ಸಂಸ್ಥೆಗಳು, ಮಾಡಿದ ತರಹೇವಾರಿ ಕೆಲಸಗಳ ಬಗ್ಗೆ ನಾನು ಬರೆದಿಲ್ಲ. ಸದ್ಯಕ್ಕಂತೂ ಬರೆಯುವುದಿಲ್ಲ. ಇನ್ನು ಜೊತೆಗೆ ಕೆಲಸ ಮಾಡಿದ ವ್ಯಕ್ತಿಗಳ ಬಗ್ಗೆ ಕೂಡ ಇಂಥದೇ ಅಲಿಖಿತ ನಿಯಮವೊಂದನ್ನು ಪಾಲಿಸಿಕೊಂಡು ಬರುತ್ತಿದ್ದೇನೆ. ತೀರಾ ಬರೆಯಬೇಕಾದಾಗ, ಒಂದೆರಡು ಒಳ್ಳೆಯ ಮಾತು ಬರೆಯುವುದನ್ನು ಬಿಟ್ಟರೆ, ಕೆಟ್ಟದ್ದನ್ನು ಬರೆದಿದ್ದು ಬಲು ಅಪರೂಪ.

ಖಿನ್ನತೆ ತೀವ್ರವಾಗಿ ಕಾಡಿದಾಗ, ನನ್ನ ಬದುಕಿನ ಹಲವಾರು ವಿವಿಧ ಘಟ್ಟಗಳು ಕಣ್ಮುಂದೆ ಬರುತ್ತವೆ. ಕೆಲಸ ಮಾಡಿದ ಸಂಸ್ಥೆಗಳು, ಅಲ್ಲಿನ ವ್ಯಕ್ತಿಗಳು, ಘಟನೆಗಳು ಕಣ್ಮುಂದೆ ತೇಲುತ್ತವೆ. ಮನಸ್ಸು ಅರಳಿಸಿದ, ಮುದುಡಿಸಿದ ಘಟನೆಗಳು ನೆನಪಾಗುತ್ತವೆ. ಆದರೆ, ಅವು ಕೇವಲ ನೆನಪಿಗೆ ಮತ್ತು ಖಾಸಗಿ ಮನನಕ್ಕೆ ಮಾತ್ರ ಸೀಮಿತ. ಅವನ್ನು ನಾನು ಬರೆಯಲಾರೆ. ಕನಿಷ್ಟ, ಈಗಿನ ಪರಿಸ್ಥಿತಿಯಲ್ಲಿ ಬರೆಯಲಾರೆ. ಮುಂದ್ಯಾವತ್ತೋ ಅಧಿಕೃತವಾಗಿ ವೃತ್ತಿ ಬದುಕಿನಿಂದ ಹೊರಬಂದು, ನನ್ನಿಷ್ಟದಂತೆ ಬದುಕುವಾಗ ಬರೆದೇನು. ಅಲ್ಲಿಯವರೆಗೆ, ಆ ನೆನಪುಗಳು ಖಾಸಗಿ ಸಂಚಾರಕ್ಕೆ ಮಾತ್ರ ಸೀಮಿತ.

ಏಕೆ ಬರೆಯಬಾರದು? ಅಂತ ಅದೆಷ್ಟೋ ಸಲ ಕೇಳಿಕೊಂಡಿದ್ದೇನೆ. ಖಚಿತ ಉತ್ತರ ಸಿಕ್ಕಿಲ್ಲ. ಬಹುಶಃ ಸಿಗಲಿಕ್ಕಿಲ್ಲ. ಸಂಸ್ಥೆಯೊಂದನ್ನು ಬಿಟ್ಟು ಬಂದ ವ್ಯಕ್ತಿಗೆ ಹೇಳಲು ಸಾಕಷ್ಟು ವಿಷಯಗಳಿರುತ್ತವೆ. ಹೇಳಿಕೊಳ್ಳಬೇಕಾದ ಒತ್ತಡವಿರುತ್ತದೆ. ಹೇಳಿ ದಕ್ಕಿಸಿಕೊಳ್ಳುವ ಸ್ವಾತಂತ್ರ್ಯವೂ ಇರುತ್ತದೆ. ಅದು ನನಗೂ ಗೊತ್ತು. ಆದರೂ, ಹೇಳಬಾರದು ಎಂಬ ನಿಯಮವನ್ನು ನಾನು ಪಾಲಿಸಿಕೊಂಡು ಬರುತ್ತಿರುವುದೇತಕ್ಕೆ ಎಂಬ ಪ್ರಶ್ನೆಗೆ ಮಾತ್ರ ಉತ್ತರ ಇದುವರೆಗೆ ಸಿಕ್ಕಿಲ್ಲ.
 
*****

ಆತ್ಮದಷ್ಟು ಹತ್ತಿರ, ಆಕಾಶದಷ್ಟು ದೂರ ಎಂಬ ಸಾಲು ಏಕೋ ಇವತ್ತು ಪದೆ ಪದೆ ಕಾಡತೊಡಗಿದೆ. ಜೀವನದಲ್ಲಿ ನಾವೆಲ್ಲ ಏತಕ್ಕೋ ಹಂಬಲಿಸುತ್ತೇವೆ. ಕೈಗೆಟಕುವಷ್ಟು ಹತ್ತಿರದಲ್ಲಿದೆ ಎಂದಾಗಲಂತೂ ಅದು ವಿಚಿತ್ರ ಆಶಾಭಾವ ಹುಟ್ಟಿಸುತ್ತದೆ. ಬದುಕಿಗೆ ಹೊಸ ಭರವಸೆ ತುಂಬುತ್ತದೆ. ಜೀವನದ ಅತಿ ದೊಡ್ಡ ಖಾಲಿತನ ಇನ್ನು ತುಂಬಿತು ಎಂಬ ನೆಮ್ಮದಿಗೆ ಕಾರಣವಾಗುತ್ತದೆ.

ಆದರೆ, ನೋಡನೋಡುತ್ತಿದ್ದಂತೆ, ಒಂದು ಘಟ್ಟದಲ್ಲಿ ಆ ಭರವಸೆ ಕರಗತೊಡಗುತ್ತದೆ. ನೆಚ್ಚಿಕೊಂಡ, ಪ್ರೀತಿಸಿದ್ದ ಆ ವ್ಯಕ್ತಿ, ವೃತ್ತಿ, ಸಂಸ್ಥೆಯ ಮಿತಿ ತಳಮಳ ತರತೊಡಗುತ್ತದೆ. ಅಷ್ಟೊಂದು ಹಚ್ಚಿಕೊಂಡಿದ್ದ, ಅಷ್ಟೊಂದು ನೆಚ್ಚಿಕೊಂಡಿದ್ದ ಅದು ಇನ್ನು ನನ್ನ ಪಾಲಿಗಿಲ್ಲ ಎಂಬ ಭಾವ ತೀವ್ರ ನೋವುಂಟು ಮಾಡುತ್ತದೆ.

ಹಾಗಂತ ಆ ವ್ಯಕ್ತಿ, ಸಂಸ್ಥೆ ಅಥವಾ ಭಾವನೆ ನಮ್ಮಿಂದ ದೂರವಾಗಿರುವುದಿಲ್ಲ. ಆದರೆ, ಮಾನಸಿಕವಾಗಿ ಅಂತರವೊಂದು ಸೃಷ್ಟಿಯಾಗಿರುತ್ತದೆ. ಆ ಅಂತರ ಕ್ರಮೇಣ ಬೆಳೆಯುತ್ತ ಹೋಗುತ್ತದೆ. ಒಳಹರಿವಿಲ್ಲದೇ ಕ್ರಮೇಣ ಭಾವನೆ ಸೊರಗುತ್ತದೆ. ಕನಸು ಕರಗುತ್ತದೆ.

ಅಂಥದೊಂದು ವಿಚಿತ್ರ ಸಂಘರ್ಷದಲ್ಲಿ ನಾನೀಗ ಸಿಲುಕಿದ್ದೇನೆ.

ಇದರಿಂದ ಹೊರಬರಬೇಕು. ಆದರೆ, ಹೇಗಂತ ಗೊತ್ತಾಗುತ್ತಿಲ್ಲ. ಇಷ್ಟು ದಿನಗಳವರೆಗೆ, ಅಡಿಗಡಿಗೂ ಕೈಹಿಡಿದು ಜೊತೆಗೆ ಬರುತ್ತಿದ್ದ ಮಗುವೊಂದು, ಇದ್ದಕ್ಕಿದ್ದಂತೆ ಕೈ ಕೊಸರಿ ಮುಂದೆ ಓಡಿದಂಥ ಭಾವನೆಯದು. ಅರೆರೆ, ನನ್ನ ಮಗು ನನ್ನಾಸರೆಯ ಹಂಗಿಲ್ಲದೇ ನಡೆಯುವುಷ್ಟು ದೊಡ್ಡದಾಯಿತು ಎಂಬ ಸಂತಸದ ಜೊತೆಗೆ, ಮುಗ್ಧತೆ ಉಕ್ಕಿಸುತ್ತಿದ್ದ ಆ ಕಂದನ ಮುದ್ದು ಪ್ರೀತಿ ಇನ್ನಿಲ್ಲ ಎಂಬ ವಾಸ್ತವ ನೋವುಕ್ಕಿಸುತ್ತದೆ. ಮನಸ್ಸು ಒಳಗಣ್ಣಾಗುತ್ತದೆ.

ಬದುಕಿನ ರೀತಿಯೇ ಹೀಗೆ. ಯಾವುದೋ ತಿರುವಿನಲ್ಲಿ ಬದುಕು ದಿಢೀರನೇ ಬದಲಾಗುತ್ತದೆ. ಆ ಕ್ಷಣದ ಅಯೋಮಯ, ಕಕ್ಕಾವಿಕ್ಕಿತನ ಅರಗಿಸಿಕೊಂಡು ಮುಂದಡಿ ಇಡುವವರೆಗೆ ಬರೀ ಗೊಂದಲ. ಬಹುಶಃ ಮುಂದೆಯೂ ಈ ಗೊಂದಲ ಆಗಾಗ ಕಾಡುತ್ತಲೇ ಇರುತ್ತದೆ. ಊರಾಚೆ ಬಿಟ್ಟುಬಂದ ಬೆಕ್ಕು, ಅದ್ಯಾವ ಜಾವದಲ್ಲೋ ಹಾಸಿಗೆ ಹತ್ತಿರ ಬಂದು ಒರಲುವಂತೆ, ನೆನಪುಗಳು ಮತ್ತೆ ಮತ್ತೆ ಉಕ್ಕುತ್ತಲೇ ಇರುತ್ತವೆ. ಮತ್ತೆಂದಿಗೂ ಆ ದಿನಗಳನ್ನು ನಾವು ಬದುಕಲಾರೆವು. ಆ ವ್ಯಕ್ತಿಗಳೊಂದಿಗೆ ಇರಲಾರೆವು. ಮತ್ತೆಂದಿಗೂ ಹಿಂದಿರುಗದ ಸೊಗಸದು.

ಅಂಥದೊಂದು ಗೊಂದಲದಲ್ಲಿ ಮುಳುಗಿಕೊಂಡು ಇದನ್ನು ಬರೆದಿದ್ದೇನೆ. ಕರಗಿಹೋದ ಪೆಪ್ಪರ್‌ಮಿಂಟ್‌ನ ಸವಿ ಬಾಯಲ್ಲಿ ಉಳಿದಿರುವಂತೆ, ಆ ನೆನಪುಗಳು ಹಾಗೇ ಉಳಿದುಬಿಟ್ಟಿವೆ. ಇದುವರೆಗೆ ಸವಿದಿದ್ದು ಭಾಗ್ಯವೆನಲೇ, ಇನ್ನಷ್ಟು ಸವಿಯಬೇಕಿತ್ತೆಂದು ಕೊರಗಲೇ?-

ಬರೀ ಗೊಂದಲ!

- ಚಾಮರಾಜ ಸವಡಿ

ಎಲೆ ಕವಿತೆ, ಎಲ್ಲಿ ಅವಿತೆ?

24 Aug 2009

4 ಪ್ರತಿಕ್ರಿಯೆ
ಒಂದು ಕವಿತೆ ಬರೆಯಲು ಕೂತೆ

ಗಡಿಯಾರ ಸುಮ್ಮನಾಯಿತು
ಅರಳಬೇಕಿದ್ದ ಹೂಗಳು, ರಾತ್ರಿಯ
ಸದ್ದುಗಳು ಸುಮ್ಮನಾದವು
ಹುಳು ಹಿಡಿಯಲು ಹೊಂಚು ಹಾಕಿದ್ದ
ಗೋಡೆಯ ಮೇಲಿನ ಹಲ್ಲಿಯೂ ಸುಮ್ಮನಾಯಿತು

ಅಲೆಯಾಗುತ್ತಿದ್ದ ಸಂಗೀತ ಮೌನವಾಯಿತು
ಷೆಲ್ಫ್‌ನಲ್ಲಿ ಕೂತ ಕವಿಗಳು ಕಿವಿಯಾದರು
ಎದೆಯಲ್ಲಿದ್ದ ಸಾವಿರಾರು ಭಾವನೆಗಳು
ಭೋರ್ಗರೆಯಲು ಪಾಳಿ ಹಚ್ಚಿದವು

ಕಂಬನಿಯಾದ ಕನಸುಗಳು
ಮಾತೇ ಆಗದ ಪಿಸುಮಾತುಗಳು
ನಾಳೆ ಖಂಡಿತ ಅಂದುಕೊಂಡ
ನಿನ್ನೆಯ ಹಳವಂಡಗಳು
ನಾ ಮುಂದು, ತಾ ಮುಂದು
ಎಂದು ಒಂದೇ ಸಮ ನುಗ್ಗಿದವು

ಕಕ್ಕಾವಿಕ್ಕಿಯಾಯಿತು ಕೀಲಿಮಣೆ
ತಡವರಿಸಿದವು ಬೆರಳುಗಳು
ಮಾನಿಟರೂ ಬೆಚ್ಚಿಬಿದ್ದಂತಿತ್ತು
ಸಮಸ್ತ ಕವಿಗಳಾಣೆ, ದಾರ್ಶನಿಕರಾಣೆ
ಅನುಭಾವಿಗಳಾಣೆ, ಚೇತನಗಳಾಣೆ
ಇವು ಸತ್ಯ, ಇವು ನಿತ್ಯ
ಹೊರಬರಲು ಹಂಬಲಿಸಿದ್ದವು
ಕುದಿಯಾಗಿದ್ದವು, ತಿದಿಯೊತ್ತಿದ್ದವು
ಬೆರಳುಗಳ ಭವ ಹರಿದು
ಹಾಳೆ, ಪರದೆಗಳ ಬಂಧನ ತೊರೆದು
ಹಾಡಾಗಲು ಹಾತೊರೆದಿದ್ದವು-

ಏನೇ ಅಂದುಕೊಂಡರೂ,
ಎಷ್ಟೇ ಅಂಗಲಾಚಿದರೂ
ಕವಿತೆ ಏಕೋ ಕನಸ ಕನ್ನಡಿಯಾಗಲಿಲ್ಲ
ಮೂಡಲಿಲ್ಲ, ಅರಳಲಿಲ್ಲ, ಭೋರ್ಗರೆಯಲಿಲ್ಲ
ಮೊದಲ ಸಂಗಮದ ಕನ್ಯೆಯಂತೆ
ಮುದುಡಿತ್ತು, ನಲುಗಿತ್ತು, ಹಸಿದಿತ್ತು
ಚಿಮ್ಮಿ ಬರುವ ಮೊದಲೇ ಕುಸಿದಿತ್ತು

***

‘ಆಯ್ತಾ ಕವಿತೆ ಬರೆದಿದ್ದು?’
ಎಂದು ಕೇಳುತ್ತ ನನ್ನವಳು ಒಳಬರುತ್ತಲೇ
ನಾಚಿ ಕಿಟಕಿಯಿಂದಾಚೆ ಹಾರಿಹೋಯಿತ್ತು.

- ಚಾಮರಾಜ ಸವಡಿ

ಭಾವನೆಗಳು ಮುರುಟುವುದು ಹೀಗೆ...

18 Aug 2009

0 ಪ್ರತಿಕ್ರಿಯೆ
ನನ್ನ ರೂಮಿನ ಕಿಟಕಿ ತೆರೆದರೆ ರಸ್ತೆಯಾಚೆಗಿನ ಅವಳ ಮನೆಯೇ ನೇರವಾಗಿ ಕಣ್ಣಿಗೆ ಬೀಳುತ್ತಿತ್ತು.
ತುಂಬ ದಿನಗಳ ಕಾಲ ಆ ಮನೆಗೆ ಯಾರೂ ಬಂದಿರಲಿಲ್ಲ. ಒಂದಷ್ಟು ಹಕ್ಕಿಗಳು ಆಗಾಗ ಕಾಣದ ಹುಳುಗಳನ್ನು ಹೆಕ್ಕುತ್ತ ವಾಕ್ ಮಾಡುತ್ತಿದ್ದುದನ್ನು ಬಿಟ್ಟರೆ ಅಲ್ಲಿ ಬೇರೆ ಚಟುವಟಿಕೆಗಳಿರಲಿಲ್ಲ. ಬೇಸರದ ದಿನಗಳಲ್ಲಿ ನಾನು ಆ ಮನೆಯ ಖಾಲಿ ಬಾಲ್ಕನಿ ನೋಡುತ್ತ ನಿಲ್ಲುತ್ತಿದ್ದೆ. ನನ್ನ ಮನಸ್ಸಿನ ತುಂಬ ವಿಚಾರದ ಹುಳುಗಳು. ಹೆಕ್ಕಲು ಮಾತ್ರ ಯಾವ ಹಕ್ಕಿಯೂ ಇರಲಿಲ್ಲ.
ಒಂದಿನ, ಕೆಲಸ ಮುಗಿಸಿಕೊಂಡು ಬಂದು ಎಂದಿನಂತೆ ಕಿಟಕಿ ತೆರೆದರೆ, ಬಾಲ್ಕನಿಯಾಚೆ ಜೀವಂತಿಕೆ ಕಾಣಿಸಿತು. ಆ ಮನೆಯ ಬಾಗಿಲು ತೆರೆದಿತ್ತು. ಪಕ್ಕದಲ್ಲಿದ್ದ ರೂಮಿನ ಕಿಟಕಿ ಸಹ. ಬಾಲ್ಕನಿ ಶುಭ್ರವಾಗಿತ್ತು. ಸಂಸಾರವೊಂದರ ಸಂಭ್ರಮದ ಸದ್ದು ರಸ್ತೆಯ ಸಂಜೆ ಗದ್ದಲ ದಾಟಿಕೊಂಡು ನನ್ನ ರೂಮು ತಲುಪಿತು.
ನಾನು ಉಲ್ಲಸಿತನಾದೆ.
ಕತ್ತಲಾಗುತ್ತಿದ್ದಂತೆ ಎದುರು ಮನೆಯಲ್ಲಿ ದೀಪಗಳು ಹೊತ್ತಿಕೊಂಡವು. ಮಧ್ಯವಯಸ್ಕ ಹೆಣ್ಣುಮಗಳೊಬ್ಬಳು ಹೊರ ಬಂದು, ಬಾಗಿಲಿಗೆ ಪೂಜೆ ಮಾಡಿ, ಊದುಬತ್ತಿ ಬೆಳಗಿ ಕೈಮುಗಿದಳು.
ನಾನು ಲೈಟು ಹಾಕುವುದನ್ನೂ ಮರೆತು ಆ ಸಂಭ್ರಮ ನೋಡುತ್ತ ನಿಂತಿದ್ದೆ.
ಎದುರು ಮನೆಯಲ್ಲಿ ಟಿವಿ ಕಣ್ತೆರೆಯಿತು. ‘ಓದೋ ಪುಟ್ಟಾ’ ಎಂದು ದೊಡ್ಡ ದನಿಯಲ್ಲಿ ಕೊನೆಯ ಮಗನಿಗೆ ಆಜ್ಞೆ ನೀಡುತ್ತಲೇ ಮನೆಯೊಡತಿ ಹಾಲ್‌ನಲ್ಲಿದ್ದ ಟಿವಿ ಮುಂದೆ ಕೂತಳು. ಇನ್ನು ಎರಡು ಗಂಟೆಗಳ ತನಕ ಈ ತಾಯಿ ಅಲ್ಲಾಡುವುದಿಲ್ಲ ಎಂದುಕೊಂಡು ನಾನು ಕಿಟಕಿಯಿಂದ ಈಚೆ ತಿರುಗುವುದರಲ್ಲಿದ್ದಾಗ-
ಎದುರು ಮನೆಯ ರೂಮಿನೊಳಗೆ ಲೈಟು ಹೊತ್ತಿಕೊಂಡಿತು!
ಆಕೆ ಕಾಣಿಸಿಕೊಂಡಳು. ಮುಖದಲ್ಲಿ ಉತ್ಸಾಹ ಬೆರೆತ ಸುಸ್ತು. ಕಾಲೇಜಿನಿಂದ ಬಂದಿರಬೇಕು, ಪುಸ್ತಕಗಳನ್ನು ಮೇಜಿನ ಮೇಲಿರಿಸಿದವಳೇ ಕನ್ನಡಿಯ ಮುಂದೆ ನಿಂತು, ದೇವರು ಕೂಡ ಮರುಳಾಗುವಂತೆ ಚಂದಗೆ ಮುಗುಳ್ನಕ್ಕಳು.
ನಾನು ಮಂತ್ರಮುಗ್ಧನಂತೆ ನೋಡುತ್ತಿದ್ದೆ.
ಮುಂದೆ ಐದು ನಿಮಿಷಗಳಲ್ಲಿ ಕನ್ನಡಿ ಎದುರು ಚಿಕ್ಕದೊಂದು ಬ್ಯಾಲೆ ನೃತ್ಯವೇ ನಡೆದುಹೋಯಿತು. ಕನ್ನಡಿಯ ಮೇಲೆ ಕಣ್ಣಿಟ್ಟುಕೊಂಡೇ ಬಾಲೆ ಎಡಕ್ಕೊಮ್ಮೆ ಬಲಕ್ಕೊಮ್ಮೆ ತಿರುಗಿ ತನ್ನ ಭಂಗಿ ಪರೀಕ್ಷಿಸಿದಳು. ಹೇರ್ ಬ್ಯಾಂಡ್ ಎಳೆದುಹಾಕಿ, ಸಡಿಲ ಕೂದಲನ್ನು ಭುಜದ ಎರಡೂ ಪಕ್ಕಕ್ಕೆ ಇಳಿಬಿಟ್ಟು ನೋಡಿದಳು. ಅಷ್ಟೂ ಕೂದಲನ್ನು ಒಂದೇ ಕಡೆ ಹಾಕಿಕೊಂಡು ನೋಡಿದಳು. ಕೈಕಟ್ಟಿ ನಿಂತಳು. ನಿಂತಲ್ಲೇ ಓಲಾಡಿದಳು. ಕೊನೆಗೆ, ಮತ್ತೊಮ್ಮೆ ಚಂದಗೆ ಮುಗುಳ್ನಕ್ಕು ಒಳಗೆ ಹೋಗಿಬಿಟ್ಟಳು.
ನನ್ನ ಜೀವನದ ಧನ್ಯತೆಯ ಕ್ಷಣಗಳು ಶುರುವಾಗಿದ್ದು ಹೀಗೆ.
ಕ್ರಮೇಣ ಕಿಟಕಿ ನನ್ನ ಬೇಸರ ಕಳೆಯುವ ಸಾಧನವಾಯಿತು. ಬಾಲೆಯನ್ನು ನೋಡುವುದನ್ನು ಇಷ್ಟಪಡತೊಡಗಿದೆ. ಆಕೆಯ ವಿಶಿಷ್ಟ ದರ್ಪಣ ಬ್ಯಾಲೆ ಸಹ ನನಗೆ ಇಷ್ಟವಾಯಿತು. ಸಂಜೆಯಾಗುತ್ತಲೇ, ಕಿಟಕಿ ಎದುರು ಪ್ರತಿಷ್ಠಾಪಿತನಾಗತೊಡಗಿದೆ.
ಕೆಲವು ದಿನಗಳ ನಂತರ ಒಮ್ಮೆ, ಆಕೆ ಆಕಸ್ಮಿಕವಾಗಿ ನನ್ನ ಕಿಟಕಿಯತ್ತ ನೋಡಿದಾಗ, ನಸುಗತ್ತಲ್ಲಲಿ ನಿಂತಿದ್ದ ನಾನು ಕಣ್ಣಿಗೆ ಬಿದ್ದೆ.
ಅವತ್ತು ದರ್ಪಣ ಬ್ಯಾಲೆ ನಡೆಯಲಿಲ್ಲ. ರೂಮಿನಲ್ಲಿ ಲೈಟು ಕೂಡ ತುಂಬ ಹೊತ್ತು ಉರಿಯಲಿಲ್ಲ. ಅಷ್ಟೇ ಅಲ್ಲ, ಆಕೆಯ ಮುಖ ನಿಗಿನಿಗಿಯಾಗಿತ್ತು.
ಆದರೆ ಅದು ಕೇವಲ ಒಂದು ದಿನ ಮಾತ್ರ.
ಮರುದಿನ ಯಥಾಪ್ರಕಾರ ಬಾಲೆ ಬಂದಳು. ಮುಖದಲ್ಲೊಂದು ತಿಳಿಯಾದ ಮಂದಹಾಸ. ಕೊಂಚ ಹೊತ್ತು ಕನ್ನಡಿಯ ಮುಂದೆಯೇ ನಿಂತವಳು ನಂತರ ಕಿಟಕಿಯತ್ತ ತಿರುಗಿ ನನ್ನನ್ನೊಮ್ಮೆ ದಿಟ್ಟಿಸಿದಳು.
ಆ ದಿನ ನನಗೆ ಇಂದಿಗೂ ಚೆನ್ನಾಗಿ ನೆನಪಿದೆ.
***
ಮೊದಲ ಬಾರಿ ಬೆಂಗಳೂರು ಇಷ್ಟವಾಗತೊಡಗಿತು. ಸಂಜೆಗಳು ಹೆಚ್ಚು ಅರ್ಥಪೂರ್ಣವಾದವು. ನಮ್ಮ ಕಿಟಕಿಗಳ ನಡುವೆ ರವಾನೆಯಾಗುತ್ತಿದ್ದ ಮೌನ ಸಂದೇಶಗಳೆಷ್ಟು ಎಂಬುದು ಮಧ್ಯದಲ್ಲಿ ಹಾದು ಹೋಗಿದ್ದ ಪೆದ್ದ ರಸ್ತೆಗಾಗಲಿ, ರಾತ್ರಿ ಹಗಲೆನ್ನದೇ ‘ಭರ್ರೋ’ ಎಂದು ಸಂಚರಿಸುತ್ತಿದ್ದ ವಾಹನಗಳಿಗಾಗಲಿ ಗೊತ್ತಾಗುವ ಸಂಭವವೇ ಇರಲಿಲ್ಲ. ಬಹಳ ಸಮಯದವರೆಗೆ ನಾವು ಮೌನವಾಗಿ ನಿಂತಿರುತ್ತಿದ್ದೆವು. ಆಗಾಗ ಮುಗುಳ್ನಗೆ. ಕೊಂಚ ಹೊತ್ತು ಕೆಳಗಿದ್ದ ರಸ್ತೆ ದಿಟ್ಟಿಸುವುದು. ಮತ್ತೊಮ್ಮೆ ಮೌನ ವೀಕ್ಷಣೆ. ಮುಗುಳ್ನಗೆ.
ಆ ದಿನಗಳೂ ನನಗೆ ಚೆನ್ನಾಗಿ ನೆನಪಿವೆ.
***
ಬದುಕು ಹೀಗೇ ಸಾಗಿದ್ದಾಗ, ಒಂದಿನ ಪತ್ರಿಕೆಗಳು ಭೀಕರ ಸುದ್ದಿಯನ್ನು ತಂದವು. ಕಿಟಕಿಗಳ ಕೆಳಗಿದ್ದ ರಸ್ತೆಯ ನಡುವೆಯೇ ಮೇಲ್ಸೇತುವೆಯೊಂದು ಎದ್ದು ನಿಲ್ಲಲಿತ್ತು.
ಮೊದಲ ಬಾರಿ ನನ್ನ ಮುಗುಳ್ನಗೆ ಮಾಯವಾಯಿತು.
ಅಂದು ಸಂಜೆ ಆಕೆ ಕಣ್ಣಲ್ಲೇ ‘ಏಕೆ?’ ಎಂಬಂತೆ ಕೇಳಿದಳು. ನಾನು ಸುಳ್ಳೇ ನಗುವ ಪ್ರಯತ್ನ ಮಾಡಿದೆ. ಆದರೆ, ಭಾರಿ ಗಾತ್ರದ ಯಂತ್ರಗಳು ರಸ್ತೆ ಮಧ್ಯೆಯೇ ಕೊರೆಯಲು ಪ್ರಾರಂಭಿಸುವ ಮೂಲಕ ನನ್ನ ದುಗುಡವನ್ನು ಆಕೆಗೂ ತಲುಪಿಸಿದವು.
ಕಾಮಗಾರಿ ಹಗಲು ರಾತ್ರಿ ಭರದಿಂದ ಸಾಗತೊಡಗಿ, ದೂಳು ಎಲ್ಲೆಡೆ ಹರಡಿ, ಕಿಟಕಿ ತೆರೆಯುವುದೂ ಕಷ್ಟವಾಗತೊಡಗಿತು. ಆದರೂ ಆಕೆ ಏನಾದರೂ ನೆವ ಮಾಡಿ ಅರ್ಧ ಗಂಟೆ ನನ್ನನ್ನು ದಿಟ್ಟಿಸುತ್ತಿದ್ದಳು. ದೂಳಿನ ನಡುವೆ ಆಕೆಯ ಮಂದಹಾಸ ಮಂಕಾಗುತ್ತಿರುವಂತೆ ನನಗನ್ನಿಸಿತು.
ಒಂದಿನ, ನಮ್ಮಿಬ್ಬರ ಕಿಟಕಿಗಳ ಮಧ್ಯೆ ಭಾರಿ ಗಾತ್ರದ ಕಾಂಕ್ರೀಟ್ ಕಂಬದ ನಿರ್ಮಾಣ ಪ್ರಾರಂಭವಾಯಿತು. ಇನ್ನು ಹತ್ತು ದಿನಗಳಲ್ಲಿ ಅದು ನಮ್ಮಿಬ್ಬರ ನಡುವೆ ಗೋಡೆಯಂತೆ ನಿಲ್ಲಲಿದೆ ಎಂದಾದಾಗ, ನಾನೊಂದು ನಿಶ್ಚಯ ಮಾಡಿದೆ.
ಪ್ರೀತಿಯಾಗಬಹುದಾಗಿದ್ದ ಭಾವನೆಗಳು ಸೇತುವೆಗೆ ಬಲಿಯಾಗುವುದನ್ನು ಸಹಿಸುವುದು ನನಗೆ ಕಷ್ಟವಾಗಿತ್ತು.
ಅಂದು ಸಂಜೆ ಕಿಟಕಿಯ ಬಳಿ ನಿಂತಾಗ ಫಲಕವೊಂದನ್ನು ಎತ್ತಿ ಹಿಡಿದೆ. ‘ನೆನಪು ಅಳಿಯದಿರಲಿ’ ಎಂದಷ್ಟೇ ಅದರಲ್ಲಿ ಬರೆದಿದ್ದೆ. ದಿಗಿಲಿನಿಂದ ದಿಟ್ಟಿಸಿದವಳಿಗೆ ಸನ್ನೆಯ ಮೂಲಕ ನನ್ನ ನಿರ್ಧಾರ ತಿಳಿಸಿದೆ.
ಅವತ್ತು ಆಕೆ ಅತ್ತಿದ್ದು ಇವತ್ತಿಗೂ ಅಚ್ಚೊತ್ತಿದಂತಿದೆ.
***
ಮರುದಿನ ಕಂಬ ನಮ್ಮಿಬ್ಬರನ್ನು ಶಾಶ್ವತವಾಗಿ ಮರೆ ಮಾಡಲಿತ್ತು. ಅಂದು ಬೆಳಿಗ್ಗೆ ಬೇಗ ಎದ್ದೆ. ಆಕೆ ಕೂಡ. ಸೂರ್ಯ ಆಕಳಿಸುತ್ತಿರುವಾಗ ನಮ್ಮಿಬ್ಬರ ಕಿಟಕಿಗಳು ತೆರೆದುಕೊಂಡವು. ಕೊನೆಯದಾಗಿ ಪರಸ್ಪರ ದಿಟ್ಟಿಸಿದೆವು. ಆಕೆ ಮತ್ತೆ ಅತ್ತಳು. ಏಕೋ ನನ್ನ ದೃಷ್ಟಿ ಮಂಜಾಗುತ್ತಿದೆ ಅನ್ನಿಸಿತು. ಅಳುತ್ತಿದ್ದೆನೇ ನಾನು?
ಮೌನವಾಗಿ ವಿದಾಯ ಹೇಳಿದೆ. ಉದಯಿಸುತ್ತಿರುವ ಸೂರ್ಯ ಆಕೆಯ ಕಣ್ಣೀರಿನಲ್ಲಿ ವಜ್ರದಂತೆ ಬೆಳಗುತ್ತಿದ್ದ. ಕೊನೆಯದಾಗಿ ಆಕೆಯನ್ನು ಕಣ್ತುಂಬ ತುಂಬಿಕೊಂಡು, ಖಾಲಿ ಮಾಡಿದ್ದ ರೂಮಿನಲ್ಲಿ ಸಿದ್ಧವಾಗಿ ಕೂತಿದ್ದ ಸೂಟ್‌ಕೇಸ್ ಎತ್ತಿಕೊಂಡು, ಹಿಂದಕ್ಕೆ ಕೂಡ ನೋಡದೆ ದಡದಡ ಮೆಟ್ಟಿಲಿಳಿದೆ.
ನನ್ನೊಳಗಿನ ಕಿಟಕಿಯೊಂದು ಅವತ್ತು ಶಾಶ್ವತವಾಗಿ ಮುಚ್ಚಿಕೊಂಡಿತು!
- ಚಾಮರಾಜ ಸವಡಿ
(ಪ್ರಜಾವಾಣಿಯಲ್ಲಿ ಅಚ್ಚಾಗಿದ್ದ ಬರಹ. http://www.prajavani.net/Archives/oct122004/377820041012.php)

ಮೌನ ಎಂಬ ಸಮೃದ್ಧ ಭಾಷೆ

22 Feb 2009

0 ಪ್ರತಿಕ್ರಿಯೆ
ಚಿಕ್ಕವನಿದ್ದಾಗ ತುಂಬ ಮಾತನಾಡುತ್ತಿದ್ದೆ. ಎಷ್ಟು ಮಾತನಾಡುತ್ತಿದ್ದೆನೆಂದರೆ, ಒಮ್ಮೊಮ್ಮೆ ಏದುಸಿರು ಬರುತ್ತಿತ್ತು. ತುಂಬ ಮಾತನಾಡುತ್ತೀ ಎಂದು ಏಟು ಕೂಡ ತಿಂದಿದ್ದೇನೆ. ಆದರೂ ಮಾತು ನಿಲ್ಲುತ್ತಿರಲಿಲ್ಲ.

ಬಹುಶಃ ಹತ್ತನೇ ತರಗತಿಯ ಪರೀಕ್ಷೆಗಳ ನಂತರ ಇರಬೇಕು, ನನ್ನ ಮಾತು ಇದ್ದಕ್ಕಿದ್ದಂತೆ ಕಡಿಮೆಯಾಗತೊಡಗಿತು. ಪಿಯುಸಿ ಮುಗಿಯುವ ಹೊತ್ತಿಗೆ ಅದು ಎಷ್ಟು ಕಡಿಮೆಯಾಯಿತೆಂದರೆ, ಮಾತನಾಡಿದರೆ ನನ್ನ ಧ್ವನಿ ನನಗೇ ಅಪರಿಚಿತ ಅನಿಸುವಷ್ಟು.

ಈ ಸಮಯದಲ್ಲಿಯೇ ನನಗೆ ಓದುವ ಹುಚ್ಚು ಅಂಟಿಕೊಂಡಿದ್ದು. ಮೊದಲಿನಿಂದಲೂ ಸಿಕ್ಕಿದ್ದನ್ನು ಓದುವ ಹವ್ಯಾಸವಿತ್ತಾದರೂ, ಓದಲು ಪುಸ್ತಕಗಳೇ ಸಿಗುತ್ತಿರಲಿಲ್ಲ. ಹಳ್ಳಿಯಲ್ಲಿ ಪುಸ್ತಕಗಳನ್ನು ತರುವವರೂ ಕಡಿಮೆ. ಅಪ್ಪ ಮೊದಲಿನಿಂದಲೂ ಹಿಂದಿ ಕಾದಂಬರಿಪ್ರಿಯ. ನಮಗೋ ಹಿಂದಿ ತೀರಾ ದುಬಾರಿ. ಆದರೆ, ಡಿಗ್ರಿಗೆಂದು ಗದಗ್‌ ಸೇರಿದಾಗ ಕಾಲೇಜ್‌ ಹಾಗೂ ಸಾರ್ವಜನಿಕ ಗ್ರಂಥಾಲಯಗಳು ಮನಸ್ಸು ಸೆಳೆದವು. ಕ್ಲಾಸ್‌ ತಪ್ಪಿಸಿ ಕತೆ-ಕಾದಂಬರಿ ಓದುತ್ತ ಕೂತುಬಿಡುತ್ತಿದ್ದೆ.

ಹೀಗಾಗಿ ಮಾತು ಇನ್ನಷ್ಟು ಕಡಿಮೆಯಾಯಿತು. ಮಾತಿನ ಜಾಗವನ್ನು ಓದು ತುಂಬಿತು.

ಆದರೆ, ಓದಿನ ಜಾಗವನ್ನು ಇದುವರೆಗೆ ಬೇರೆ ಯಾವುದೂ ತುಂಬಲು ಆಗಿಲ್ಲ. ಅದು ಕೊಟ್ಟ ವಿಶಿಷ್ಟ ಖುಷಿ ಬೇರೆ ಯಾವುದರಿಂದಲೂ ಸಿಕ್ಕಿಲ್ಲ. ಇವತ್ತಿಗೂ ಅದು ಹಾಗೇ ಇದೆ.

ಮೌನದಿಂದ ನನ್ನ ವಿಚಾರಗಳನ್ನು ಗಮನಿಸುವುದು ಸುಲಭವಾಯಿತು. ನನ್ನ ವಿಚಾರಗಳನ್ನು ಹಿಂಬಾಲಿಸುತ್ತ ಹಗಲುಕನಸು ಕಾಣುವುದೂ ಜೋರಾಯಿತು. ಇವೆರಡೂ ಇನ್ನೇನು ನನ್ನ ವ್ಯಕ್ತಿತ್ವವನ್ನೇ ಹಾಳು ಮಾಡುತ್ತವೆ ಎಂಬಷ್ಟು ಅತಿಯಾದಾಗ ನಾನು ಬರೆಯಲು ಶುರು ಮಾಡಿದೆ. ನನ್ನ ದಿನಚರಿ ಬರವಣಿಗೆ ಶುರುವಾಗಿದ್ದು ಹೀಗೆ.

ಇದನ್ನೆಲ್ಲ ಏಕೆ ಹೇಳುತ್ತಿದ್ದೇನೆಂದರೆ, ಯಾವುದನ್ನು ಅತಿ ಅಂತ ಅಂದುಕೊಂಡಿರುತ್ತೇವೆಯೋ, ಅದಕ್ಕೆ ಪರಿಹಾರವೂ ಅದರ ಅಕ್ಕಪಕ್ಕದಲ್ಲೆಲ್ಲೋ ಇರುತ್ತದೆ. ಒಂದಿಷ್ಟು ವ್ಯವಧಾನ, ಆಸಕ್ತಿ ಇದ್ದರೆ ಕಾಣುತ್ತದೆ. ತಾಕುತ್ತದೆ. ಗಮನ ಸೆಳೆಯುತ್ತದೆ. ಹೊಸದರ ಹುಡುಕಾಟ, ಅದನ್ನು ತಿಳಿಯುವ ಖುಷಿ ನಮ್ಮ ದೋಷವನ್ನು ತಿದ್ದುತ್ತ ಹೋಗುತ್ತವೆ. ಮನಸ್ಸಿನೊಂದಿಗೆ ಮಾತನಾಡಿಕೊಳ್ಳುತ್ತ ಹಲವಾರು ವಿಷಯಗಳು ನನಗೆ ಸ್ಪಷ್ಟವಾಗಿವೆ. ಇನ್ನೊಬ್ಬರ ವಿಷಯಗಳನ್ನು ತಿಳಿದುಕೊಳ್ಳುವ ಗುಣವನ್ನು ಬೆಳೆಸಿವೆ. ನೋವು ಕಾಡಿದಾಗ, ಸಮಸ್ಯೆಗಳು ಎದುರು ನಿಂತು ಕಂಗೆಡಿಸಿದಾಗ ನಾನು ಮೌನವಾಗಿ ಓದುತ್ತ, ಬರೆಯುತ್ತ, ಹಾಡು ಕೇಳುತ್ತ ಗುಣವಾಗುತ್ತ ಹೋಗುತ್ತೇನೆ.

ಮೌನ ಜಗತ್ತಿನ ಸಮೃದ್ಧ ಭಾಷೆಯಂತೆ. ಅಷ್ಟೇ ಅಲ್ಲ, ಎಷ್ಟು ಬಳಸಿದರೂ ಖರ್ಚಾಗದ ಶಕ್ತಿಯೂ ಹೌದು. ಮನುಷ್ಯನನ್ನು ಬಿಟ್ಟು ಇತರ ಜೀವಜಗತ್ತು ಪರಸ್ಪರ ಸಂಭಾಷಿಸುವುದು ಬಹುತೇಕ ಹೀಗೇ ಅಲ್ಲವೆ? ತನ್ನ ಪಾಡಿಗೆ ತಾನು ನಿಂತಿರುವ ಮರ, ಅರಳುವ ಹೂ, ಮೇಯುವ ಹಸು, ಹಾರುವ ಹಕ್ಕಿ, ತಮ್ಮ ನೆಮ್ಮದಿಯಲ್ಲಿ ತಾವಿರುವುದನ್ನು ನೋಡಿದಾಗ, ಮೌನ ವರ ಎಂದು ಹಲವಾರು ಬಾರಿ ಅನ್ನಿಸಿದೆ.

ಈ ವಿವೇಕ ನನ್ನ ಉದ್ವೇಗವನ್ನು ಕಡಿಮೆ ಮಾಡುತ್ತದೆ. ಅಹಂ ಕುಗ್ಗಿಸುತ್ತದೆ. ಮಾತಿನಾಚೆಯ ಜಗತ್ತಿನ ಸೊಗಸಿನತ್ತ ಸೆಳೆಯುತ್ತದೆ. ಅದನ್ನು ನೆನದಾಗೆಲ್ಲ, ಬೆರಗಿನಿಂದ ಮನಸ್ಸು ಮೂಕವಾಗುತ್ತದೆ. ಮೌನ ಮಾತಾಗುತ್ತದೆ. ನಾನು ಅದನ್ನು ಕೇಳಿಸಿಕೊಳ್ಳುತ್ತ ಸುಮ್ಮನೇ ಕೂತುಬಿಡುತ್ತೇನೆ-

ಈ ಅಪರಾತ್ರಿ ಕೂತಂತೆ!

- ಚಾಮರಾಜ ಸವಡಿ
(ಚಿತ್ರ: ಓಂಶಿವಪ್ರಕಾಶ)

ಕಿಟಕಿಯಾಚೆ ಚಂದ್ರ

19 May 2008

5 ಪ್ರತಿಕ್ರಿಯೆ
ಮೊನ್ನೆ ಮೊನ್ನೆಯಷ್ಟೇ ಕರಗಿ ಹೋದಂತಿದ್ದ ಚಂದ್ರ ಮತ್ತೆ ಬಂದಿದ್ದಾನೆ.

ಇಷ್ಟೇ ಇಷ್ಟು ಚೂರು. ಈಕೆ ಮಗ್ಗಲು ಹೊರಳಿ, ತಲೆಯನ್ನು ದಿಂಬಿನಂತೆ ಅಡ್ಡ ಇಟ್ಟಾಗ ಮುರಿದ ಬಳೆ ಚೂರಿನಂತೆ. ಆದರೆ, ಬೆಳ್ಳಗೆ ತಂಪಾಗಿ ನಳನಳಿಸುತ್ತಿದ್ದಾನೆ.

ಇದಕ್ಕೂ ಮೊದಲು, ಯಾವ ದುಃಖದಲ್ಲಿದ್ದನೋ ಏನೋ, ಬೆಳ್ಳಗೆ ಲಕಲಕಿಸುತ್ತ ದುಂಡಗಿದ್ದವ ಇದ್ದಕ್ಕಿದ್ದಂತೆ ಸೊರಗತೊಡಗಿದ್ದ ರಾತ್ರಿ ತಡವಾಗಿ, ತೂಕಡಿಕೆಯಲ್ಲಿದ್ದವನಂತೆ, ಕುಡಿದು ಕೂತವನು ಎದ್ದು ಹೋಗಲು ಮರೆತಂತೆ ತಾರಾಡುತ್ತ ಬರುತ್ತಿದ್ದ. ಮುಖದಲ್ಲಿ ಮೊದಲಿನ ಕಳೆಯಿದ್ದಿಲ್ಲ. ಹೀಗೆ ಸೊರಗುತ್ತ, ಕರಗುತ್ತ ಹೋದವ ಒಂದಿನ ಬರಲೇ ಇಲ್ಲ.

ಅವತ್ತೇಕೋ ಮನಸ್ಸಿನ ತುಂಬ ಕತ್ತಲು.

ಇನ್ನು ಅವ ಬರಲಾರ ಅಂದುಕೊಂಡಿದ್ದೆ. ಪಾಪದವ. ಯಾಕೆ ನವೆಯುತ್ತಿದ್ದನೋ. ಏನು ಕಾರಣವೋ. ಯಾರೊಂದಿಗೂ ಹೇಳಿಕೊಂಡವನಲ್ಲ. ಹೇಳಿಕೊಳ್ಳಲಾದರೂ ಅವನಿಗೆ ಯಾರಿದ್ದರು? ದೂರದಲ್ಲಿ ನಿಂತು ತಣ್ಣಗೆ ಮುಸಿನಗುವ ಚಿಕ್ಕಿಯರು. ಸೆರಗಿನ ಮರೆಯಲ್ಲಿ ಬಚ್ಚಿಟ್ಟುಕೊಂಡಂತೆ ಮಾಡುತ್ತಲೇ ಬಿಚ್ಚಿ ಓಡುವ ಮೋಡಗಳು. ಕೆಟ್ಟ ಮುಖದ ಸೂರ್ಯ ಉರಿಯುತ್ತ ಬಂದರೆ ಇವನ ಮುಖ ಮಂಕು.

ಉರಿವ ಸೂರ್ಯನಿರುವಾಗ ಮಂಕು ಚಂದ್ರಮ ಯಾರಿಗೆ ಬೇಕು?

ಆದರೂ, ರಾತ್ರಿ ಆಗೀಗ ಅವನ ನೆನಪಾಗುತ್ತಿತ್ತು. ಆದರೆ, ಅವನು ಬರುವುದು ಯಾವಾಗೋ ಏನೋ. ಊರ ದೀಪಗಳು ನೈಟ್‌ ಡ್ಯೂಟಿ ಪ್ರಾರಂಭಿಸಿದಾಗ, ರಾತ್ರಿ ಪಾಳಿ ಮುಗಿಸಿ ಎಲ್ಲರೂ ತಂತಮ್ಮ ನೆಲೆಗಳಲ್ಲಿ ನಿದ್ರೆಗೆ ಜಾರುವ ಹೊತ್ತು, ಒಲ್ಲದ ಅತಿಥಿಯಂತೆ, ಅಪರಾಧಿಯಂತೆ, ದೂಷಣೆಗೆ ಒಳಗಾದವನಂತೆ, ಪಾಪಪ್ರಜ್ಞೆಯಿಂದ ಬಳಲುವವನಂತೆ ಕಳ್ಳ ಹೆಜ್ಜೆ ಇಟ್ಟು ಬರುತ್ತಿದ್ದ. ಅವನಿಗೆ ಕಾಯುತ್ತ ಕೂರಲಾದರೂ ಯಾರಿದ್ದರು?

ಆದರೂ ನನಗೆ ಅವನ ನೆನಪು ತುಂಬಾ ತುಂಬಾ ಆಗುತ್ತಿತ್ತು. ಏಕೋ ಏನೋ, ಅವನ ಬದುಕು ನನಗಿಷ್ಟ. ಎಷ್ಟೋ ಸಾರಿ ನಾನೂ ಚಂದ್ರನಂತೆ ಬದುಕಿದ್ದೇನೆ. ಸೊರಗುತ್ತ, ಕರಗುತ್ತ, ಇಲ್ಲವಾಗುತ್ತ, ಮತ್ತೆ ಬೆಳೆಯುತ್ತ, ಬೆಳಗುತ್ತ, ತುಂಬಿಕೊಂಡು ದುಂಡಗಾಗಿದ್ದೇನೆ. ಅವನಂತೆ ನನಗೂ ನೋವುಗಳಿದ್ದವು. ಅವಮಾನಗಳಿದ್ದವು. ಸಲ್ಲದ ದೂಷಣೆಗಳು, ಗೆಲ್ಲದ ದೌರ್ಬಲ್ಯಗಳಿದ್ದವು. ಇವೆಲ್ಲ ಅತಿರೇಕಕ್ಕೆ ಹೋಗಿ, ಅವನಂತೆ ನಾನೂ ಆಗಾಗ ಇಲ್ಲವಾಗುತ್ತಿದ್ದೆ. ಮತ್ತೆ ಬೀಜದಷ್ಟು ಶ್ರದ್ಧೆ ಬೆಳೆಯುತ್ತಿತ್ತು. ಹೊಸ ಕನಸು ತುಂಬಿಕೊಳ್ಳುತ್ತಿತ್ತು. ಚಿಕ್ಕಿಗಳ ಗೇಲಿ ಲೆಕ್ಕಿಸದೇ ಹುಡುಗಿಯರು ಮೋಹದ ಸೆರಗಿನ ತಡೆಯನ್ನು ದಾಟಿ ಬೆಳೆದು ನಳನಳಿಸುತ್ತಿದ್ದೆ.

ಚಂದ್ರ ನನಗೆ ಇಷ್ಟವಾಗುವುದಕ್ಕೆ ಹಲವಾರು ಕಾರಣಗಳಿವೆ.

ಅವ ಕಿಟಕಿಯಾಚೆಗೇ ಸಿಗುತ್ತಾನೆ. ಕೈ ಚಾಚಿದರೆ ಸಿಕ್ಕೇಬಿಡುತ್ತಾನೇನೋ ಎನ್ನುವಷ್ಟು ಹತ್ತಿರ. ಏನನ್ನಾದರೂ ಹೇಳಿಕೊಂಡರೆ ತುಂಬ ಶ್ರದ್ಧೆಯಿಂದ ಕೇಳಿಸಿಕೊಳ್ಳುತ್ತಾನೆ. ತಂಪಗೇ ಸಮಾಧಾನ ಮಾಡುತ್ತಾನೆ. ತನ್ನ ಮಿತಿಯಲ್ಲೇ ಸಾಧ್ಯವಾದಷ್ಟೂ ದಾರಿ ತೋರುತ್ತಾನೆ. ಸರಳುಗಳಾಚೆ ಇದ್ದರೂ ಬಂಧನ ದಾಟಿ ಒಳಬಂದು ಸಂತೈಸುತ್ತಾನೆ. ನಾನು ಹೇಳಿದ ಕತೆಗಳ ಗುಟ್ಟನ್ನು, ನೋವುಗಳ ಕಾರಣಗಳನ್ನು ಯಾರೆದುರೂ ಬಯಲು ಮಾಡುವುದಿಲ್ಲ. ನನ್ನ ಕತೆಗಳನ್ನು ಗೇಲಿ ಮಾಡುವುದಿಲ್ಲ. ಮೌನವಾಗೇ ಕೇಳಿಸಿಕೊಳ್ಳುತ್ತಾನೆ. ತನ್ನ ಬಗ್ಗೆ ಮೌನವಾಗೇ ಹೇಳಿಕೊಳ್ಳುತ್ತಾನೆ. ಹೇಳುತ್ತ, ಕೇಳುತ್ತ ರಾತ್ರಿ ಯಾವ ಮಾಯದಲ್ಲೋ ಇಬ್ಬರೂ ನಿದ್ರೆಗೆ ಜಾರಿಬಿಟ್ಟಿರುತ್ತೇವೆ.

ಸರಳಿನಾಚೆಯ ಚಂದ್ರನ ಮೌನ ಸಂದೇಶ, ಸಾಂತ್ವನ, ಸಹೃದಯತೆ ನನ್ನನ್ನು ಸಾವಿರ ಸಾವಿರ ಸಲ ಜೀವನ್ಮುಖಿ ಮಾಡಿವೆ. ಬದುಕು ಎದುರಿಸುವಂಥ ಭರವಸೆ ಕೊಟ್ಟಿವೆ. ಎಲ್ಲ ಮೋಡಗಳ ಸೆರಗಿನಾಚೆಗೂ, ತಡೆಗಳಾಚೆಗೂ, ಮೂದಲಿಕೆ, ಹೀಯಾಳಿಕೆ, ಆರೋಪ, ನಿರ್ಲಕ್ಷ್ಯದಾಚೆಗೂ ಬೆಳಗಬಲ್ಲ ವಿಶ್ವಾಸ ತುಂಬಿವೆ. ಏರಿಳಿತಗಳಿವೆ ನಿಜ. ಆದರೆ, ಸಾವಿಲ್ಲ. ಮತ್ತೆ ಮತ್ತೆ ತಲೆ ಎತ್ತಿ ನೋಡುವಂತೆ, ನೋಡಿ ಮೆಚ್ಚುವಂತೆ, ಮೆಚ್ಚಿ ಆದರಿಸುವಂತೆ ಮಾಡಿವೆ.

ಆದ್ದರಿಂದಲೇ ಮನಸ್ಸಿಗೆ ಕಾವಳ ಕವಿದಾಗೆಲ್ಲ ಸರಳಿನಾಚೆ ದಿಟ್ಟಿಸಿ ನೋಡುತ್ತೇನೆ.

ಅಲ್ಲಿ ಚಂದ್ರ ಕಾಣುತ್ತಾನೆ- ಭರವಸೆಯಂತೆ, ಬದುಕಿನಂತೆ, ಅವುತಂದು ಕೊಡುವ ನೆಮ್ಮದಿಯಂತೆ. ತಂಪಾಗಿ, ಚೆಂದಗೆ, ಬೆಳ್ಳಗೇ ಕಳೆಯಾಗಿ ಕಾಣುತ್ತಾನೆ.

ಮನಸ್ಸಿಗೆ ಹಾಯ್‌ ಅನ್ನಿಸುತ್ತದೆ!

- ಚಾಮರಾಜ ಸವಡಿ