Showing posts with label ಟಿವಿ. Show all posts
Showing posts with label ಟಿವಿ. Show all posts

ವೃತ್ತದೊಳಗಿನ ಬದುಕು ಮತ್ತು ಲೊಳಲೊಟ್ಟೆ

24 Jul 2010

13 ಪ್ರತಿಕ್ರಿಯೆ
ತುಂಬ ದಿನಗಳಿಂದ ಏನನ್ನೂ ಬರೆದಿಲ್ಲ. ಪ್ರೋಗ್ರಾಂಗಳಿಗೆ ಸ್ಕ್ರಿಪ್ಟ್‌ಗಳನ್ನು ಬರೆಯುವ ವೃತ್ತಿ ಕೆಲಸ ಹೊರತುಪಡಿಸಿ, ಗೂಗಲ್‌ ಬಝ್‌ನಲ್ಲಿ ಒಂದಿಷ್ಟು ಹರಟೆ ಹೊಡೆದಿದ್ದು ಬಿಟ್ಟರೆ ಮತ್ತೇನನ್ನೂ ಬರೆದಿರಲಿಲ್ಲ. ಬರೆಯುವ ಮನಸ್ಸಿದ್ದರೂ, ಒತ್ತಡ ಸಾಕಷ್ಟಿರಲಿಲ್ಲ.

ಆದರೂ ಒಂಥರಾ ಅಸಮಾಧಾನ ಮಾತ್ರ ಕಾಡುತ್ತಿತ್ತು. ಹಾಗೆ ನೋಡಿದರೆ, ಬರೆಯುವುದು ಸಾಕಷ್ಟಿದೆ. ಅದೊಂಥರಾ ಒರತೆಯಂತೆ. ಮೊಗೆದಷ್ಟೂ ಉಕ್ಕುತ್ತದೆ. ಮೊಗೆಯುವುದನ್ನು ಬಿಟ್ಟರೆ, ಒರತೆಯಲ್ಲಿ ಎಷ್ಟಿರಬೇಕೋ, ಅಷ್ಟು ಮಾತ್ರ ನಿಲ್ಲುತ್ತದೆ.

ಹೀಗಾಗಿ, ಅಸಮಾಧಾನ ಹಾಗೇ ಉಳಿದಿತ್ತು. ಒಂದೆರಡು ಬಾರಿ ಕವಿತೆ ಬರೆಯಲು ಯತ್ನಿಸಿದೆನಾದರೂ, ಅದು ಮುಂದುವರೆಯಲಿಲ್ಲ. ಕಚೇರಿಯಲ್ಲಿ ಕೂತಾಗ ಉಕ್ಕುವ ಭಾವನೆಗಳನ್ನು ಅಕ್ಷರಗಳನ್ನಾಗಿಸಲು ಯತ್ನಿಸಿದರೂ ಅದಕ್ಕೆ ಏನೇನೋ ಸಣ್ಣಪುಟ್ಟ ಅಡ್ಡಿಗಳು.

ಒಂದು ವಿಷಯ ತುಂಬ ದಿನದಿಂದ ಕಾಡುತ್ತಿದೆ.

ಪ್ರತಿಯೊಬ್ಬರೂ ತಮ್ಮದೇ ಆದ ಒಂದು ವೃತ್ತವನ್ನು, ಬಳಗವನ್ನು, ತಂಡವನ್ನು ಕಟ್ಟಿಕೊಳ್ಳುವ ಪರಿ ಅಚ್ಚರಿ ಹುಟ್ಟಿಸುತ್ತದೆ. ಅದು ಮನುಷ್ಯಸಹಜ ಗುಣವಾದರೂ, ಅದರ ಮಿತಿ ಅರಿಯದೇ ನಾವು ವೃತ್ತವೊಂದಕ್ಕೆ ಕಟ್ಟುಬೀಳುವುದೇ ಅಚ್ಚರಿಯ ಸಂಗತಿ. ಒಂದೇ ರೀತಿಯ ವಿಚಾರ ಹೊಂದಿರುವವರು, ವೃತ್ತಿಯಲ್ಲಿರುವವರು, ಪ್ರದೇಶದಲ್ಲಿರುವವರು, ಜಾತಿಯವರು, ಭಾಷೆಯವರು- ಹೀಗೆ ನಾನಾ ಕಾರಣಗಳಿಗಾಗಿ ಜನ ಗುಂಪು ಕಟ್ಟಿಕೊಳ್ಳುತ್ತಾರೆ. ಅಲಿಖಿತ ನಿಯಮಗಳನ್ನು ಹಾಕಿಕೊಂಡು, ಅದರ ಮಿತಿಯೊಳಗೆ ಬದುಕುತ್ತ ಹೋಗುತ್ತಾರೆ. 
 
ಆ ವೃತ್ತದೊಳಗೆ ಪ್ರವೇಶಿಸುವುದು ಸುಲಭವಲ್ಲ. ‘ಹೊರಗಿನವರು’ ಎಂದು ಭಾವಿಸಿದ ಯಾರನ್ನೂ ಅವರು ಒಳಗೆ ಬಿಟ್ಟುಕೊಳ್ಳುವುದಿಲ್ಲ. ಅಂಥವರನ್ನು ಅನುಮಾನದಿಂದ ನೋಡುತ್ತಾರೆ. ಗೊತ್ತಿದ್ದೋ, ಗೊತ್ತಿಲ್ಲದೆಯೋ ತಮ್ಮ ವೃತ್ತದೊಳಗೆ ಪ್ರವೇಶಿಸಲು ಮುಂದಾದವನನ್ನು ಶತ್ರುವಿನಂತೆ ಕಾಣುತ್ತಾರೆ. ಪ್ರಾಣಿ-ಪಕ್ಷಿಗಳಲ್ಲಿ ಇದು ಸಾಮಾನ್ಯ ಸಂಗತಿಯಾಗಿದ್ದರೂ, ಸೂಕ್ಷ್ಮವಾಗಿ ನೋಡಿದರೆ, ನಮ್ಮ ಸುತ್ತಮುತ್ತಲೇ ಅಂಥ ಹಲವಾರು ವೃತ್ತಗಳು ಕಾಣಿಸುತ್ತವೆ.

ನೀವು ಎಷ್ಟೇ ಆತ್ಮೀಯರಾಗಿರಿ, ಎಷ್ಟೇ ಬುದ್ಧಿವಂತರಾಗಿರಿ, ಅವರು ಯಾವ ಕಾರಣಕ್ಕೂ ನಿಮ್ಮನ್ನು ‘ತಮ್ಮವ’ ಎಂದು ಕಾಣುವುದಿಲ್ಲ. ನಿಮ್ಮ ಜೊತೆಗೇ ಇದ್ದರೂ, ನೀರಿನಲ್ಲಿನ ಎಣ್ಣೆಯಂತೆ ಬೇರೆಯಾಗೇ ಇರುತ್ತಾರೆ. ಎಂದೆಂದೂ ನಿಮ್ಮೊಂದಿಗೆ ಆತ್ಮೀಯರಾಗುವುದಿಲ್ಲ. ವರ್ಷಗಟ್ಟಲೇ ಜೊತೆಗಿದ್ದರೂ ನಿಮ್ಮನ್ನು ತಮ್ಮೊಂದಿಗೆ ಸೇರಿಸಿಕೊಳ್ಳುವುದಿಲ್ಲ. ನೀವು ಪ್ರಯತ್ನಪಟ್ಟಷ್ಟೂ ನಿಮ್ಮನ್ನು ದೂರವಾಗೇ ಇಡುತ್ತ ಹೋಗುತ್ತಾರೆ.

ಮೊದಮೊದಲು ನನಗಿದು ಬೇಸರ, ಅಸಮಾಧಾನ, ನೋವು ಉಂಟು ಮಾಡುತ್ತಿತ್ತು. ಒಂದೇ ಪ್ರದೇಶಕ್ಕೆ ಸೇರಿದವರಾಗಿದ್ದರೂ, ಕೆಲವರು ಇನ್ಯಾವುದೋ ಕಾರಣಗಳಿಗಾಗಿ ಹೊರಗಿಡುತ್ತಾರೆ. ಒಂದೇ ಜಾತಿಯವರಾಗಿದ್ದರೂ, ಇಂಥವೇ ಮತ್ಯಾವುದೋ ಕಾರಣಗಳಿಗಾಗಿ ಪ್ರತ್ಯೇಕವಾಗಿ ನಿಲ್ಲುತ್ತಾರೆ. ಅವರ ವೃತ್ತದ ಅಲಿಖಿತ ಸಂವಿಧಾನ ನನ್ನಂಥವರಿಗೆ ಯಾವತ್ತೂ ಅರ್ಥವಾಗುವುದಿಲ್ಲ ಅನಿಸುತ್ತದೆ. ಏಕೆಂದರೆ, ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಿದಷ್ಟೂ ಅದು ಕಗ್ಗಂಟಾಗುತ್ತಲೇ ಹೋಗಿದೆ.

ಪ್ರತಿಯೊಂದು ಪತ್ರಿಕೆ, ಟಿವಿಗಳಲ್ಲೂ ಕೆಲ ವ್ಯಕ್ತಿಗಳಿರುತ್ತಾರೆ. ಅವರು ಪ್ರತಿಭಾಶೂನ್ಯರು. ತೀರಾ ತೆಳು ವಿಷಯಗಳ ಬಗ್ಗೆ ಮಾತ್ರ ಅವರ ಗಮನ. ಯಾರೂ ಅವರ ಬರಹ, ಪ್ರಸ್ತುತಿಯನ್ನು ಗಮನಿಸದೇ ಇದ್ದರೂ, ವೃತ್ತದೊಳಗಿನವರಿಗೆ ಮಾತ್ರ ಅವರು ಅದ್ಭುತ ವರದಿಗಾರಿಕೆ ಮಾಡಿದ್ದಾರೆ ಎನ್ನುವ ಹೆಮ್ಮೆ. ‘ಏನ್‌ ಚೆನ್ನಾಗಿ ಬರೆದಿದ್ದೀ ಕಣೆ, ಸೂಪರ್ ಆಗಿ ಬಂದಿದೆ’ ಎಂದು ಬೆನ್ನು ತಟ್ಟುತ್ತಿರುತ್ತಾರೆ ಅಥವಾ ತಟ್ಟಿಸಿಕೊಳ್ಳುತ್ತಿರುತ್ತಾರೆ. ಕಸದಂಥ ವರದಿ ತಂದವನನ್ನು ಅರುಣ್ ಶೌರಿಯಂತೆ ನೋಡುವವರಿದ್ದಾರೆ. ಆಭರಣ, ಸೀರೆ, ಫ್ಯಾಶನ್, ಮೇಕಪ್, ಋತುಚಕ್ರ ಸಮಸ್ಯೆಗಳ ಬಗ್ಗೆ ಏರಳಿತಗಳಿಲ್ಲದ, ಯಾವುದೇ ಹೊಸದೃಷ್ಟಿ ನೀಡದ ವರದಿ ಮಾಡಿದರೂ ಅಭಿನಂದನೆ ಅವರಿಗೆ ಕಾಯಂ. ಅದ್ಭುತ ವರದಿ ತಂದ, ರಿಸ್ಕ್ ಎದುರಿಸಿ ಗಮನ ಸೆಳೆಯುವ ವರದಿ ಮಾಡಿದವರು ಆಕಸ್ಮಿಕವಾಗಿ ಕೂಡ ಅವರ ಚರ್ಚೆಯ ವಿಷಯವಾಗುವುದಿಲ್ಲ. ತಮಗಿಂತ ಭಿನ್ನವಾಗಿ, ಉತ್ತಮವಾಗಿ ಇನ್ಯಾರೋ ಕೆಲಸ ಮಾಡಿದ್ದಾರೆ ಎಂಬುದನ್ನು ಅವರು ಯಾವತ್ತೂ ಗಮನಿಸುವುದಿಲ್ಲ.

ಬಹುಶಃ ಪ್ರತಿಯೊಂದು ವೃತ್ತಿಯಲ್ಲಿಯೂ ಇಂಥ ವೃತ್ತಗಳು, ‘ವೃತ್ತಪರರು’ ಇರುತ್ತಾರೆ ಅನಿಸುತ್ತದೆ. ಅಂಥ ಬಳಗದ ಒಬ್ಬರ ಕೆಲಸ ಇನ್ನೊಬ್ಬರಿಗೆ ಅತಿ ಮೆಚ್ಚಿನ ವಿಷಯ.  ವೃತ್ತದ ಹೊರಗಿನವರ ಸಾಧನೆ ಅದ್ಭುತವಾಗಿದ್ದರೂ, ಅದು ಅವರಿಗೆ ಕಾಲಕಸ!

ಇಂಥ ವಾತಾವರಣದಲ್ಲಿ ಕ್ರಿಯಾಶೀಲತೆ ಉಳಿಸಿಕೊಳ್ಳುವುದು ಹೇಗಪ್ಪಾ ಎಂದು ಮೊದಮೊದಲು ಚಿಂತೆ ಮಾಡುತ್ತಿದ್ದೆ. ಇವತ್ತು ಬ್ಲಾಗ್‌ಗಳಲ್ಲಿ, ವಿವಿಧ ಮಾಧ್ಯಮಗಳಲ್ಲಿ ಪತ್ರಕರ್ತರ ಈ ಪರಿಯ ‘ಕ್ರಿಯಾಶೀಲತೆ’ಯನ್ನು ಉಗಿಯುತ್ತಿರುವಾಗ, ನನಗೆ ಹಳೆಯ ಅಳುಕು ಮತ್ತೆ ಮತ್ತೆ ನೆನಪಾಗುತ್ತಿದೆ. ಯಾರೇ ಗುರುತಿಸಲಿ, ಬಿಡಲಿ, ನನಗೆ ಸರಿ ಅನಿಸಿದ್ದನ್ನು ಮಾಡುತ್ತ ಹೋಗುವುದೇ ಉತ್ತಮ ಮಾರ್ಗ ಎಂಬುದನ್ನು ಅನುಭವ ನನಗೆ ಕಲಿಸಿದೆ. ಚೆನ್ನಾಗಿ ಬರೆಯುವುದು, ವರದಿ ಮಾಡುವುದು ವೈಯಕ್ತಿಕ ಆನಂದದ ಕೆಲಸ. ಅದಕ್ಕೂ, ಮನ್ನಣೆಗೂ ಸಂಬಂಧ ಕಲ್ಪಿಸಬಾರದು ಎಂದು ವೃತ್ತಿಯ ಮೊದಲ ದಿನಗಳಲ್ಲಿ ನಾನು ತೆಗೆದುಕೊಂಡ ನಿರ್ಧಾರ ಇವತ್ತಿಗೂ ನನ್ನನ್ನು ಪೊರೆಯುತ್ತಿದೆ.

ಆದರೂ, ಹಳೆಯ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ. ಒಂದು ಸೀಮಿತ ವಲಯಕ್ಕೆ, ವೃತ್ತಕ್ಕೆ ಸೀಮಿತವಾಗುವ ಜನರನ್ನು ಕಂಡಾಗೆಲ್ಲ ‘ಏಕೆ ಹೀಗೆ?’ ಎಂಬ ಪ್ರಶ್ನೆ ಮತ್ತೆ ಮತ್ತೆ ಕಾಡುತ್ತದೆ. ಮಾಧ್ಯಮಗಳಲ್ಲಿ ಚಿಲ್ಲರೆ ಸಂಗತಿಗಳಿಗೆ ಈಗ ದೊರೆಯುತ್ತಿರುವ ಪ್ರಾಶಸ್ತ್ಯ, ವಾಸ್ತವ ಗ್ರಹಿಸದೇ ತಮಗೆ ಸರಿ ಅನಿಸಿದಂತೆ ವರದಿ ಮಾಡುವುದನ್ನು ಕಂಡಾಗ, ರೇಗುವಂತಾಗುತ್ತದೆ. ಟಿವಿಗಳ ಬಹುತೇಕ ಕಾರ್ಯಕ್ರಮಗಳಲ್ಲಿ ಹಾಗೂ ವರದಿಯಲ್ಲಿ ಸಿನಿಮಾ ಹಾಡುಗಳನ್ನು, ಶೀರ್ಷಿಕೆಗಳನ್ನು, ಹಾಡುಗಳ ಸಾಲುಗಳನ್ನು ಭಾರಿ ಹೆಡ್ಡಿಂಗ್‌ಗಳಂತೆ ಬಳಸುವುದನ್ನು ಕಂಡಾಗ ನನಗೆ ಮತ್ತೆ ಮತ್ತೆ ‘ವೃತ್ತಪರರು’ ನೆನಪಾಗುತ್ತಾರೆ. ಇದರ ಜೊತೆಗೆ ಬೌದ್ಧಿಕ ದಿವಾಳಿತನ ಸೇರಿಕೊಂಡಾಗ ಮಾತ್ರ ಇಂಥ ಕಳಪೆ ಉತ್ಪನ್ನ ಬರಲು ಸಾಧ್ಯ.

ಹೀಗಾಗಿ, ಚಿಗುರೊಡೆಯದವರೂ ಪ್ರತಿಭಾವಂತರೆನಿಸಿಕೊಳ್ಳುತ್ತಿದ್ದಾರೆ. ಬಂಡವಾಳವೇ ಇಲ್ಲದವರು ಬುದ್ಧಿವಂತರೆನಿಸಿಕೊಂಡಿದ್ದಾರೆ. ಯಾವ ವ್ಯಕ್ತಿ ವೃತ್ತಿಯಲ್ಲಿ ತನಗಿಂತ ಕಿರಿಯರಾದವರಿಗೆ ಏನನ್ನೂ ಕಲಿಸಲಾರನೋ, ಅಂಥ ವ್ಯಕ್ತಿ ವೃತ್ತಿಯನ್ನು ಹಾಳುಮಾಡುತ್ತ ಹೋಗುತ್ತಾನೆ. ತನ್ನ ವೃತ್ತದೊಳಗೇ ಬದುಕುತ್ತ, ಅದರೊಳಗೆ ಯಾವ ಕ್ರಿಯಾಶೀಲತೆಯೂ ಪ್ರವೇಶಿಸದಂತೆ ತಡೆಯುತ್ತ ಬಾವಿಯೊಳಗಿನ ಕಪ್ಪೆಯಂತಾಗುತ್ತಾನೆ. ಒಂದ್ಹತ್ತು ವರ್ಷ ಹೀಗೆ ಮಾಡಿದ ನಂತರ, ಅವನಿಗೆ ಸೀನಿಯರ್ ಪಟ್ಟ ಸಿಗುತ್ತದೆ. ಅಲ್ಲಿಗೆ ಮುಗಿಯಿತು. ಅವನನ್ನು ತಡೆಯುವುದು ಸಾಧ್ಯವಿಲ್ಲ.

‘ಉದಯ ವಾರ್ತೆಗಳು’ ಚಾನೆಲ್ ಹಾಳಾಗಿದ್ದು ಹೀಗೆ. ಕನ್ನಡದ ಬಹುತೇಕ ಪ್ರಮುಖ ದಿನಪತ್ರಿಕೆಗಳು ಮೆನೋಪಾಸ್ ತಲುಪಿದ್ದು ಈ ಕಾರಣಕ್ಕಾಗಿ. ಒಂದು ಅರ್ಥಪೂರ್ಣ ವರದಿಗಾರಿಕೆ, ಬರಹ, ಪ್ರಸ್ತುತಿ ಅಪರೂಪವಾಗುತ್ತ ಹೋಗುತ್ತಿರುವುದು ಈ ಕಾರಣಗಳಿಂದಾಗಿ.

ಹಾಗಂತ ನಾನು ಅಂದುಕೊಂಡಿದ್ದೇನೆ. ಪದೆ ಪದೆ ಈ ಅನಿಸಿಕೆ ದೃಢವಾಗುತ್ತ ಹೋಗಿದೆ. ಪ್ರತಿ ದಿನ, ಪ್ರತಿ ಕ್ಷಣ, ಪ್ರತಿ ಸಂಸ್ಥೆ ಈ ವಿಷಯವನ್ನು ಮತ್ತೆ ಮತ್ತೆ ಮನದಟ್ಟು ಮಾಡುತ್ತ ಹೋಗಿವೆ. ಹೇಳೋದಕ್ಕೆ ‘ಮಾಧ್ಯಮ’ ಎಂಬ ಹೆಸರು. ಆದರೆ, ಜನರಿಗೂ ಸುದ್ದಿಸಂಸ್ಥೆಗೂ ಮಧ್ಯೆ ಇರಬೇಕಾದ ತಂತೇ ಕ್ಷೀಣವಾಗಿದೆ. ಎಲ್ಲವೂ ಸೆನ್ಸೇಶನಲ್, ಉದ್ರೇಕಕಾರಿ, ತಕ್ಷಣ ಗಮನ ಸೆಳೆಯುವಂಥದಾಗಿರಬೇಕು ಎಂಬ ಹಪಾಹಪಿಯಲ್ಲಿ ಸುದ್ದಿ/ಕಾರ್ಯಕ್ರಮ/ವರದಿ ಪ್ರಸ್ತುತಿಯ ಸೊಗಸು ಕಳೆದುಹೋಗುತ್ತಿದೆ. ಹೀಗಾಗಿ ಬಹುತೇಕ ಕಡೆ, ಬಹುತೇಕ ಸಮಯ, ನಮಗೆ ಕಂಡು ಬರುತ್ತಿರುವುದು ಸುದ್ದಿಯ ಇಂಥ ಶೀಘ್ರಸ್ಖಲನ.

ಈ ಭಾವನೆ ತೀವ್ರವಾಗಿ ಕಾಡಿದಾಗೆಲ್ಲ, ಏನಾದರೂ ಬರೆಯಬೇಕೆನ್ನುವ ಹಂಬಲ ದಟ್ಟವಾಗಿ ಉಕ್ಕತೊಡಗುತ್ತದೆ. ಇದುವರೆಗೆ ಬದುಕಿದ್ದೇ ಈ ಭಾವತೀವ್ರತೆಯಿಂದಾಗಿ. ಬಹುಶಃ ಮುಂದೆಯೂ ಹೀಗೇ.

ಪತ್ರಕರ್ತ ‘ವೃತ್ತಕರ್ತ’ನಾದರೆ ಅದು ನಿಜಕ್ಕೂ ದುರಂತ. ಕ್ಷೀಣಧ್ವನಿಯಾದರೇನಾಯ್ತು? ಮೌನವಾಗಿರುವುದಕ್ಕಿಂತ ಇದೇ ವಾಸಿ ಅಂತ ಅನಿಸುತ್ತದೆ. ಒಂದಿಷ್ಟು ಸಾರ್ಥಕ ಪ್ರಯೋಗಗಳಾಗಿದ್ದರೆ, ವೃತ್ತಿನೆಮ್ಮದಿ ದಕ್ಕಿದ್ದರೆ, ಅದು ಈ ಕ್ಷೀಣಧ್ವನಿಯಿಂದಾಗಿ.

ಆ ಧ್ವನಿ ಕಳೆದುಹೋಗದಿರಲಿ ಎಂಬುದೊಂದೇ ನನ್ನ ಆಸೆ. ಯಾವ ಕ್ರಿಯಾಶೀಲನೂ ಆ ಧ್ವನಿಯನ್ನು ಕಳೆದುಕೊಳ್ಳದಿರಲಿ ಎಂಬುದು ನನ್ನ ಶಾಶ್ವತ ಹಾರೈಕೆ.  

- ಚಾಮರಾಜ ಸವಡಿ

ಮಧ್ಯಮದಲ್ಲೇ ಉಳಿದ ಮಾಧ್ಯಮ

13 Aug 2008

3 ಪ್ರತಿಕ್ರಿಯೆ
(ಶಶಿಕುಮಾರ್‌ ಅವರು ಸಂಪದದಲ್ಲಿ ಬರೆದಿದ್ದ ಲೇಖನಕ್ಕೆ ಪ್ರತಿಕ್ರಿಯೆ/ಪೂರಕವಾಗಿ ಇದನ್ನು ಬರೆಯುತ್ತಿದ್ದೇನೆ. ಮೂಲ ಲೇಖನವನ್ನು http://sampada.net/article/10660 ದಲ್ಲಿ ನೋಡಬಹುದು )

ಶಶಿಕುಮಾರ್‌ ಅವರು ’ಸುದ್ದಿಸೂಳೆಯ ಬೆನ್ನತ್ತಿ ಹೊರಟಿರುವ ಮಾಧ್ಯಮಗಳು’ (ಭಾಗ-೧)ರಲ್ಲಿ ಸಾಕಷ್ಟು ಮುಖ್ಯ ವಿಷಯಗಳನ್ನು ಪ್ರಸ್ತಾಪಿಸಿದ್ದಾರೆ. ಮಾಧ್ಯಮ ಹೇಗೆ ಮಧ್ಯಮ ಹಂತದಲ್ಲೇ ಉಳಿದುಬಿಟ್ಟಿದೆ ಎಂಬುದನ್ನು ವಿವರವಾಗಿಯೇ ಬರೆದಿದ್ದಾರೆ. ಅವರು ಬರೆದಿದ್ದು ಒಂದೇ ಕಂತು ಹಾಗೂ ಇತರ ಕಂತುಗಳು ಇನ್ನೂ ಬರಬೇಕಿವೆ. ಆದರೆ, ಮೊದಲನೇ ಕಂತಿನಲ್ಲಿ ಪ್ರಸ್ತಾಪವಾಗಿರುವ ವಿಷಯಗಳು ಹಾಗೂ ಧೋರಣೆ ನೋಡಿದರೆ, ಇತರ ಕಂತುಗಳು ಬರಬಹುದಾದ ರೀತಿಯನ್ನು ತಕ್ಕಮಟ್ಟಿಗೆ ಊಹಿಸಬಹುದು.

ನಾನೂ ಪತ್ರಕರ್ತ. ವೃತ್ತಿಗಷ್ಟೇ ಅಲ್ಲ, ಪ್ರವೃತ್ತಿಗೂ ಅದನ್ನೇ ನೆಚ್ಚಿಕೊಂಡವನು. ಮಾಡುತ್ತಿದ್ದ ಸರ್ಕಾರಿ ಕೆಲಸ ಬಿಟ್ಟು ಪತ್ರಕರ್ತನಾದವನು. ಆದ್ದರಿಂದ, ವೃತ್ತಿಯ ಬಗ್ಗೆ ನನಗೆ ಸಾಕಷ್ಟು ಬದ್ಧತೆ, ಆಸಕ್ತಿ ಹಾಗೂ ಪ್ರೀತಿ ಇದೆ. ಹಾಗಂತ ಅದರ ದೋಷಗಳನ್ನು ಸಮರ್ಥಿಸುವುದಿಲ್ಲ. ಸಂಸ್ಥೆಯೊಂದರಲ್ಲಿ ಕೆಲಸ ಮಾಡುವಾಗ, ತೋರಲೇಬೇಕಾದ ಅನಿವಾರ್ಯತೆಗಳನ್ನು ಹೊರತುಪಡಿಸಿ, ಅದನ್ನು ಕಟುವಾಗಿ ಟೀಕಿಸುತ್ತಲೇ ಬಂದಿದ್ದೇನೆ. ಹೀಗಾಗಿ, ಶಶಿಕುಮಾರ ಹೇಳಲು ಹೊರಟಿರುವ ವಿಷಯಗಳ ಬಗ್ಗೆ ಅಧಿಕೃತವಾಗಿ ಪ್ರತಿಕ್ರಿಯೆ ಬರೆಯುವ ಅಧಿಕಾರ ನನಗಿದೆ. ಅದಕ್ಕಿಂತ ಹೆಚ್ಚಾಗಿ, ಬರೆಯಲೇಬೇಕಾದ ಜವಾಬ್ದಾರಿಯೂ ಇದೆ.

ಮಾಧ್ಯಮ ವರ್ತಿಸುತ್ತಿರುವ ರೀತಿಯ ಬಗ್ಗೆ ನನಗೆ ಸಾಕಷ್ಟು ಆಕ್ಷೇಪಣೆಗಳಿವೆ.

ಜನಾಕರ್ಷಣೆಯೇ ಮಾಧ್ಯಮದ ಮುಖ್ಯ ಗುರಿಯಾಗಿರುವುದು ಮೊದಲನೇ ಆಕ್ಷೇಪಣೆ. ಏನಾದರೂ ಸರಿ, ಓದುಗರನ್ನು/ವೀಕ್ಷಕರನ್ನು ಸೆಳೆಯಬೇಕು ಎಂಬುದು ಇವತ್ತಿನ ಮಾಧ್ಯಮದ ಅಲಿಖಿತ ನಿಯಮ. ಬದ್ಧತೆ, ಸಾಮಾಜಿಕ ಜವಾಬ್ದಾರಿ, ವಿವೇಚನೆ ಮುಂತಾದ ವಿಷಯಗಳು ಅಥವಾ ಭಾವನೆಗಳನ್ನು ನನ್ನ ವೃತ್ತಿ ಜೀವನದಲ್ಲಿ ನಾನು ಕಂಡಿದ್ದು ಅತಿ ವಿರಳ ಎಂದೇ ಹೇಳಬಹುದು. ಒಂದು ವಿಷಯವನ್ನು ಹೇಗೆ ಪ್ರಸ್ತುತಪಡಿಸಬೇಕು ಎಂಬುದಕ್ಕಿಂತ, ಹೇಗೆ ಪ್ರಸ್ತುತಪಡಿಸಿದರೆ ಇತರರಿಗಿಂತ ಹೆಚ್ಚು ವೀಕ್ಷಕರು/ಓದುಗರನ್ನು ಅದು ಆಕರ್ಷಿಸುತ್ತದೆ ಎಂಬುದರ ಬಗ್ಗೆ ತಲೆ ಕೆಡಿಸಿಕೊಳ್ಳುವವರೇ ಹೆಚ್ಚು. ಇದೊಂದು ರೋಗದಂತೆ ಮಾಧ್ಯಮ ಕಚೇರಿಗಳನ್ನು ಆವರಿಸಿದ್ದು, ಇಂಥದೇ ರೀತಿಯಲ್ಲಿ ಸುದ್ದಿ ಬರೆಯಿರಿ ಎಂದು ತಮ್ಮ ಆಧೀನ ಪತ್ರಕರ್ತ ಸಹೋದ್ಯೋಗಿಗಳ ಮೇಲೆ ಒತ್ತಡ ಹೇರಲಾಗುತ್ತದೆ. ಪತ್ರಿಕೋದ್ಯಮ ಕೇವಲ ವೃತ್ತಿಯಾಗುತ್ತಿರುವ ಈ ದಿನಗಳಲ್ಲಿ, ಹಿರಿಯ ಪತ್ರಕರ್ತರ ಆಜ್ಞೆಯನ್ನು ಉಲ್ಲಂಘಿಸಲು ಆದೀತೆ? ಒಂದು ವೇಳೆ ಉಲ್ಲಂಘಿಸಿದರೂ, ಅವನು ಬಹುಕಾಲ ಆ ಸಂಸ್ಥೆಯಲ್ಲಿ ಇರಲಾರ. ಇರುವಂತಹ ವಾತಾವರಣವೂ ಅವನ ಪಾಲಿಗೆ ಉಳಿಯುವುದಿಲ್ಲ. ಹಲವಾರು ಪತ್ರಿಕಾ ಕಚೇರಿಗಳಲ್ಲಿ, ಟಿವಿ ಮಾಧ್ಯಮದಲ್ಲಿ ನಾನು ಕೆಲಸ ಮಾಡುವಂತಾಗಲು ಇಂತಹ ಉಲ್ಲಂಘನೆಯೂ ಒಂದು ಮುಖ್ಯ ಕಾರಣ.

ಹೀಗಿರುವಾಗ, ಸುದ್ದಿಯ ಔಚಿತ್ಯ ಹಾಗೂ ಅದನ್ನು ಪ್ರಸ್ತುತಪಡಿಸುವ ಔಚಿತ್ಯದ ಬಗ್ಗೆ ಯಾರು ಯೋಚಿಸಬೇಕು? ಯಾರು ಅದನ್ನು ಸಮದೃಷ್ಟಿಯಿಂದ ಜಾರಿಗೊಳಿಸಬೇಕೋ, ಅವರೇ ರಂಜನೀಯವಾಗಿ ಅದನ್ನು ಬಿಂಬಿಸಲು ಮುಂದಾಗಿರುವಾಗ, ತೀರ ಕೆಳ ಹಂತದಲ್ಲಿರುವ ವಿವೇಚನೆಯುಳ್ಳ ಪತ್ರಕರ್ತ ತನ್ನ ಹೃದಯದ ಮಾತನ್ನು ನಡೆಸಲು ಹೇಗೆ ಸಾಧ್ಯವಾದೀತು?

ಮಾಧ್ಯಮ ಕಚೇರಿಯಲ್ಲಿ ನಿತ್ಯ ಹಲವಾರು ರೀತಿಯ ಸುದ್ದಿಗಳು ಬರುತ್ತಿರುತ್ತವೆ. ಎಲ್ಲವನ್ನೂ ಹೃದಯಕ್ಕೆ ಹತ್ತಿರವಾಗಿ ತೆಗೆದುಕೊಂಡು ವಿಶ್ಲೇಷಿಸುವುದು ಸಾಧ್ಯವಾಗದು. ಅಲ್ಲಿ ಭಾವನೆಗಿಂತ, ಕರ್ತವ್ಯಪ್ರಜ್ಞೆಯೇ ಹೆಚ್ಚು ಕೆಲಸ ಮಾಡಬೇಕಾಗುತ್ತದೆ. ನಿಜ. ಹಾಗಂತ, ನಿರ್ಭಾವುಕರಾಗಿ ಕೆಲಸ ಮಾಡಲಾಗದು. ವೃತ್ತಿ ಪ್ರಜ್ಞೆಯೊಂದಿಗೆ ವಿವೇಚನೆಯಿಂದಲೂ ಕೆಲಸ ಮಾಡುವುದು ನಿಜವಾದ ವೃತ್ತಿಪರತೆ. ಆದರೆ, ನಮ್ಮ ಮಾಧ್ಯಮ ಸಂಸ್ಥೆಗಳಲ್ಲಿ ಆ ಬದ್ಧತೆ ತೀರಾ ವಿರಳವಾಗುತ್ತಿದೆ.

ನಾನೂ ತುಂಬ ಮಾಧ್ಯಮ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದೇನೆ. ಇಂತಹ ಬದ್ಧತೆ ಇಟ್ಟುಕೊಂಡು ಕೆಲಸ ಮಾಡಿದವರನ್ನು ನೋಡಿದ್ದು ಬಲು ಅಪರೂಪ. ಸಮದೃಷ್ಟಿ ಇರುವ ಹಿರಿಯ ಪತ್ರಕರ್ತರು ಸಾಕಷ್ಟಿದ್ದರೂ, ಮ್ಯಾನೇಜ್‌ಮೆಂಟ್‌ನ ಒತ್ತಡಗಳಿಗೆ ಸಿಲುಕಿ ಅವರ ಸಮದೃಷ್ಟಿ ಹೊರಟುಹೋಗಿದೆ. ಅವರಿಂದ ಉತ್ತಮ ಪ್ರತಿಕ್ರಿಯೆ ನಿರೀಕ್ಷಿಸಲು ಆಗದು.

ಇದಕ್ಕೆ ಪರಿಹಾರ ಎಂದರೆ, ನಮ್ಮ ನಮ್ಮ ಮಿತಿಯಲ್ಲಿ ಸುದ್ದಿಯನ್ನು ರಂಜನೀಯ ಮಾಡಲು ಹೋಗದಿರುವುದು. ಅದನ್ನು ನಾನು ವೃತ್ತಿ ಜೀವನದುದ್ದಕ್ಕೂ ಪಾಲಿಸುತ್ತ ಬಂದಿದ್ದೇನೆ. ಅದಕ್ಕಾಗಿ ಕೆಲ ಬಾರಿ ನೌಕರಿಯನ್ನೂ ಕಳೆದುಕೊಂಡಿದ್ದೇನೆ. ಆದರೂ, ನನ್ನ ಮಿತಿಯಲ್ಲಿ ಅದನ್ನು ಪಾಲಿಸುವಲ್ಲಿ ಹಿಂದೇಟು ಹಾಕಿಲ್ಲ. ಬಹಳಷ್ಟು ಸಾರಿ, ಅಂತಹ ವಿವೇಚನೆಯುಳ್ಳ ಬರವಣಿಗೆಗಾಗಿ ಹಿರಿಯ ಸಹೋದ್ಯೋಗಿಗಳಿಂದ ಬೈಸಿಕೊಂಡಾಗಿದೆ. ಬರೆದಿದ್ದನ್ನು ರಂಜನೀಯವಾಗುವಂತೆ ತಿದ್ದಿಕೊಡುವ ಅನಿವಾರ್ಯತೆಗೂ ಸಿಲುಕಿದ್ದಾಗಿದೆ. ಆದರೂ, ಮೊದಲ ಬರವಣಿಗೆ ರಂಜನೀಯವಾಗದಂತೆ ನೋಡಿಕೊಳ್ಳುವ ಪ್ರಯತ್ನ ಮಾತ್ರ ಬಿಟ್ಟಿಲ್ಲ.

ಶಶಿಕುಮಾರ್‌ ಬರೆದಂತೆ, ಮಾಧ್ಯಮಗಳು ಸುದ್ದಿಸೂಳೆಯ ಬೆನ್ನತ್ತಿ ಹೊರಟಿವೆ. ಅದರಲ್ಲಿ ಎರಡು ಮಾತಿಲ್ಲ. ಆದರೆ, ಹಾಗೆ ಬೆನ್ನು ಹತ್ತುವ ಭರದಲ್ಲಿ ಅವು ಎಲ್ಲರನ್ನೂ ಸೂಳೆಯರು ಎಂಬಂತೆ ನೋಡುತ್ತಿರುವುದು ನಿಜಕ್ಕೂ ಅಪಾಯಕಾರಿ. ಕಂಡ ಪ್ರತಿಯೊಂದು ಹೆಣ್ಣೂ ಬೆಲೆವೆಣ್ಣು ಇರಬಹುದೆ ಎಂಬ ಅನುಮಾನ ಖಂಡಿತ ಆರೋಗ್ಯಕರವಲ್ಲ. ಇದು ಇಡೀ ಸಮಾಜವನ್ನು ಹಾದಿ ತಪ್ಪಿಸುವ ಬೆಳವಣಿಗೆ. ಇದಕ್ಕೆ ಬೇಕಾದಷ್ಟು ಕಾರಣಗಳಿರಬಹುದು, ಬೇಕಾದಷ್ಟು ಅನಿವಾರ್ಯತೆಗಳಿರಬಹುದು. ಆದರೆ, ಅವ್ಯಾವೂ ಈ ದೃಷ್ಟಿಕೋನಕ್ಕೆ ಸಮರ್ಥನೆಗಳಲ್ಲ ಹಾಗೂ ಅಂತಹ ವಿವರಣೆಯನ್ನು ಒಪ್ಪುವುದು ಸಾಧ್ಯವೂ ಇಲ್ಲ.

ದುರಂತವೆಂದರೆ, ರಂಜನೀಯ ಸುದ್ದಿಗಳನ್ನು ಕೊಡದ ಮಾಧ್ಯಮಗಳು ವೀಕ್ಷಕರನ್ನು ಸೆಳೆಯುವಲ್ಲಿ, ಓದುಗರನ್ನು ಆಕರ್ಷಿಸುವಲ್ಲಿ ಹಿಂದೆ ಬೀಳುತ್ತಿವೆ. ಮಾಧ್ಯಮ ಕೂಡಾ ಒಂದು ವೃತ್ತಿ. ಅಲ್ಲಿ ಹಣ ಹಾಕಿ ಹಣ ಗಳಿಸಬೇಕಿದೆ. ಹೀಗಾಗಿ, ಹೆಚ್ಚು ಲಾಭ ಬರುವ ಸರಕನ್ನು ಮಾರಲು ಮಾಧ್ಯಮ ಸಂಸ್ಥೆಗಳು ಯತ್ನಿಸುತ್ತಿವೆ. ಇದು ತಪ್ಪಬೇಕೆಂದರೆ, ಓದುಗರಲ್ಲಿ ಹೆಚ್ಚಿನ ಜಾಗೃತಿ ಮೂಡಬೇಕು. ಜೊತೆಜೊತೆಗೆ ಮಾಧ್ಯಮಗಳಿಗೂ ಒಂದು ಮಟ್ಟದ ಅಂಕುಶ ಬೇಕೇಬೇಕು. ಎರಡೂ ಕಡೆಯಿಂದ ಈ ಕ್ರಿಯೆ ನಡೆದಾಗ ಮಾತ್ರ, ಮಾಧ್ಯಮ ಕೊಂಚ ಜವಾಬ್ದಾರಿ ಕಲಿಯಲು ಸಾಧ್ಯ. ಇಲ್ಲದಿದ್ದರೆ, ಬಲುಬೇಗ ಇಡೀ ಸಮಾಜದ ಸ್ವಾಸ್ಥ್ಯ ಕೆಟ್ಟುಹೋಗುತ್ತದೆ.

ಒಂದಂತೂ ನಿಜ. ಸಮಾಜದಲ್ಲಿ ಏನು ನಡೆಯುತ್ತಿದೆಯೋ, ಮಾಧ್ಯಮದಲ್ಲಿ ಅದೇ ಬರುತ್ತದೆ. ಸಮಾಜಕ್ಕೆ ಹೊರತಾದ ಯಾವುದನ್ನೂ ಮಾಧ್ಯಮ ನೀಡಲು ಹೋಗುವುದಿಲ್ಲ. ಸಮಾಜದಲ್ಲಿರುವ ಅನಾಚಾರ, ಕೊಳಕು, ದುಷ್ಟತನದ ಚಿತ್ರಣವೇ ಮಾಧ್ಯಮದಲ್ಲಿಯೂ ಕಾಣುತ್ತಿದೆ. ಆದರೆ, ಕೇವಲ ಈ ಚಿತ್ರಣ ಮಾತ್ರ ಕಾಣುವಂತಾಗಿರುವುದು ಅಪಾಯಕಾರಿ. ಈ ಕೊಳಚೆಯ ಹೊರತಾಗಿಯೂ ಸಮಾಜದಲ್ಲಿ ಉತ್ತಮವಾದ ವಿಷಯಗಳು ಬೇಕಾದಷ್ಟಿವೆ. ಅವನ್ನು ಪ್ರಸ್ತುತಪಡಿಸುವ ಜವಾಬ್ದಾರಿಯನ್ನು ಮಾಧ್ಯಮ ಬೆಳೆಸಿಕೊಳ್ಳಬೇಕು. ಅದೇ ರೀತಿ, ಅಂತಹ ವಿಷಯಗಳನ್ನು ಆಸ್ವಾದಿಸುವ ಅಭಿರುಚಿಯನ್ನು ಓದುಗ/ವೀಕ್ಷಕರೂ ಬೆಳೆಸಿಕೊಳ್ಳಬೇಕಿದೆ.

ಇಷ್ಟೆಲ್ಲ ಹೇಳಿದ ನಂತರವೂ, ಮಾಧ್ಯಮ ಇವತ್ತು ತುಳಿಯುತ್ತಿರುವ ಹಾದಿ ಸರಿಯಲ್ಲ ಎಂದು ಮತ್ತೆ ಒಪ್ಪಿಕೊಳ್ಳುತ್ತೇನೆ. ಇದಕ್ಕೊಂದು ಅಂಕುಶ ಇರಲಿ. ಸ್ವಯಂ ಸಂಯಮ ಸಾಧ್ಯವಿಲ್ಲ ಎಂಬುದು ಈಗಾಗಲೇ ಸಾಬೀತಾಗಿರುವುದರಿಂದ, ಕಾನೂನು ಅಂಕುಶ ಸ್ವಲ್ಪಮಟ್ಟಿಗೆ ಕೆಲಸ ಮಾಡಬಲ್ಲುದು. ಆದರೆ, ಸರ್ಕಾರಿ ಅಂಕುಶ ಅಭಿವ್ಯಕ್ತಿ ಸ್ವಾತಂತ್ರವನ್ನು ಕಿತ್ತುಕೊಳ್ಳದಿರಲಿ. ಗಾಳಿಪಟದ ಸೂತ್ರದಂತೆ, ಪಟವನ್ನು ಹಿಡಿದಿಟ್ಟಿರಲಿ. ಆದರೆ, ಅದರ ಹಾರಾಟಕ್ಕೆ ಧಕ್ಕೆ ತಾರದಿರಲಿ.

ಬಹುಶಃ ಶಶಿಕುಮಾರ್‌ ಹಾಗೂ ಅವರಂಥ ಸಾವಿರಾರು ಮಿತ್ರರ, ಸಹೃದಯಿ ಓದುಗ/ವೀಕ್ಷಕರ ಬಯಕೆಯೂ ಇದೇ ಇರಬಹುದು.
- ಚಾಮರಾಜ ಸವಡಿ