ಅಗ್ನಿದ್ರವ ಗೆದ್ದು ಬಂದ ಮಹಾಲಕ್ಷ್ಮಿ

19 Mar 2009

7 ಪ್ರತಿಕ್ರಿಯೆ
ಎಂಟು ವರ್ಷಗಳ ಹಿಂದಿನ ಘಟನೆ.

ಮೈಸೂರಿನ ಒಂಟಿಕೊಪ್ಪಲು ಪ್ರದೇಶದಲ್ಲಿದ್ದ ತಮ್ಮ ಕ್ಲಿನಿಕ್ ಬಾಗಿಲು ಹಾಕಿದ ನಂತರ, ಯುವ ವೈದ್ಯೆಯೊಬ್ಬರು ಮನೆಯತ್ತ ಹೊರಟಿದ್ದರು. ರಸ್ತೆಯಲ್ಲಿನ್ನೂ ಜನಸಂಚಾರವಿತ್ತು. ಇದ್ದಕ್ಕಿದ್ದಂತೆ ಬಂದ ವ್ಯಕ್ತಿಯೊಬ್ಬ ಅವರ ಮುಖದ ಮೇಲೆ ಆಸಿಡ್ ಎರಚಿ ಓಡಿಹೋದ.

ಜೋರಾಗಿ ಚೀರಿಕೊಂಡ ವೈದ್ಯೆ ನೆಲಕ್ಕೆ ಕುಸಿದಳು. ಮುಖಕ್ಕೆ ಬೆಂಕಿ ಹೊತ್ತಿಕೊಂಡಂತಾಗಿತ್ತು. ಆಸಿಡ್ ಹೊಕ್ಕಿದ್ದರಿಂದ ಒಂದು ಕಣ್ಣು ಪೂರ್ತಿ ದೃಷ್ಟಿ ಕಳೆದುಕೊಂಡಿತ್ತು. ನೋವಿನಿಂದ ಚೀರುತ್ತಿದ್ದ ಆಕೆ, ನೆರವಿಗಾಗಿ ಮೊರೆಯಿಟ್ಟಳು. ಆದರೆ, ಮೈಸೂರಿನ ಸುಸಂಸ್ಕೃತ ಜನ ಸಹಾಯ ಮಾಡುವುದಿರಲಿ, ಆಕೆಯ ನೋವನ್ನು ನೋಡುತ್ತ ಸುಮ್ಮನೇ ನಿಂತಿದ್ದರು. ಆಟೊದಲ್ಲಾದರೂ ಹತ್ತಿಸಿ ಕಳಿಸಿ, ನಾನು ಆಸ್ಪತ್ರೆಗೆ ಹೋಗುತ್ತೇನೆ ಎಂದು ಈ ಹೆಣ್ಣುಮಗಳು ಬೇಡಿಕೊಂಡರೂ ಸಾಂಸ್ಕೃತಿಕ ಊರಿನ ಜನರ ಮನ ಕರಗಲಿಲ್ಲ.

ಡಾ. ವೈ.ಎನ್. ಮಹಾಲಕ್ಷ್ಮೀ ಎಂಬ ಆ ಯುವವೈದ್ಯೆಯ ಬದುಕು ಅಂದಿನಿಂದ ಬದಲಾಗಿ ಹೋಯಿತು.

ಘಟನೆಯಾಗಿ ಎಂಟು ವರ್ಷಗಳಾಗಿವೆ. ಆಸಿಡ್ ದಾಳಿ ಡಾ. ಮಹಾಲಕ್ಷ್ಮಿಯವರ ಒಂದು ಕಣ್ಣನ್ನು ಕಿತ್ತುಕೊಂಡಿದೆ. ಸುಂದರ ರೂಪವನ್ನು ಅಳಿಸಿದೆ. ಆಸಿಡ್ ಎರಚಿದ ವ್ಯಕ್ತಿ ಬಂಧನದ ದಿನದಂದೇ ಜಾಮೀನು ಪಡೆದು ಹೊರಬಂದಿದ್ದಾನೆ. ಇವತ್ತಿಗೂ ಅಟ್ಟಹಾಸದಿಂದ ಓಡಾಡಿಕೊಂಡೇ ಇದ್ದಾನೆ. ಒಬ್ಬ ವ್ಯಕ್ತಿ ಜಗತ್ತಿನ ಬಗ್ಗೆ, ಅದರ ನೀತಿ-ನಿಯಮಗಳ ಬಗ್ಗೆ ನಂಬಿಕೆ ಕಳೆದುಕೊಳ್ಳಲು ಬೇಕಾದ ಎಲ್ಲಾ ದೌರ್ಜನ್ಯಗಳು ಈ ಹೆಣ್ಣುಮಗಳ ಮೇಲೆ ಆಗಿಹೋಗಿವೆ. ಸಣ್ಣಪುಟ್ಟ ಘಟನೆಗಳಿಗೆ ತೀವ್ರವಾಗಿ ಪ್ರತಿಕ್ರಿಯಿಸುವ ಮಹಿಳಾವಾದಿಗಳು, ಸೋ ಕಾಲ್ಡ್ ಬುದ್ಧಿಜೀವಿಗಳು, ಮಹಿಳಾ ಸಂಘಟನೆಗಳು, ಎನ್‌ಜಿಓಗಳು- ಹೀಗೆ ಯಾರೆಂದರೆ ಯಾರೂ ಡಾ. ಮಹಾಲಕ್ಷ್ಮೀ ಅವರಿಗೆ ಸಹಾಯ ಹಸ್ತ ನೀಡಲಿಲ್ಲ.

ಈ ಸಂದರ್ಭದಲ್ಲಿ ದಿ ಹಿಂದು ಪತ್ರಿಕೆಯಲ್ಲಿ ಬಂದಿದ್ದ ಲೇಖನವೊಂದು ಅವರ ಬದುಕಿಗೆ ಮಹತ್ವದ ತಿರುವು ನೀಡಿತು. ಆಸಿಡ್ ದಾಳಿಗೆ ಒಳಗಾಗಿದ್ದ ಯುವಕನೊಬ್ಬ ಬದುಕು ಕಟ್ಟಿಕೊಂಡ ರೀತಿ ಅವರಿಗೆ ಹೊಸ ಭರವಸೆ ಮೂಡಿಸಿತು. ಮುರಿದ ಕನಸುಗಳ ಜಾಗದಲ್ಲಿ ಹೊಸ ಕನಸುಗಳನ್ನು ಕಟ್ಟಿಕೊಂಡರು. ಯಾವ ಬದುಕೂ ಬದುಕಲಾರದಷ್ಟು ನಿಕೃಷ್ಟವಲ್ಲ ಎಂಬ ಭರವಸೆ ಬೆಳೆಸಿಕೊಂಡರು. ಬದುಕು ಇಲ್ಲಿಗೇ ಮುಗಿದಿಲ್ಲ, ಬದಲಾಗಿ, ಇಲ್ಲಿಂದ ಶುರುವಾಗಿದೆ ಅಂದುಕೊಂಡು ಮತ್ತೆ ವೈದ್ಯವೃತ್ತಿ ಶುರು ಮಾಡಿದರು. ಸದ್ಯ ಮೈಸೂರಿನ ಚಾಮುಂಡಿಬೆಟ್ಟದಲ್ಲಿರುವ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯಾಧಿಕಾರಿಯಾಗಿರುವ ಅವರು, ಸದ್ದಿಲ್ಲದೇ ಬಡಜನರ ಸೇವೆಯಲ್ಲಿ ನಿರತರಾಗಿದ್ದಾರೆ. ಡಿವಿಜಿ ಹೇಳಿದಂತೆ,

ಹುಲ್ಲಾಗು ಬೆಟ್ಟದಡಿ, ಮನೆಗೆ ಮಲ್ಲಿಗೆಯಾಗು
ಕಲ್ಲಾಗು ಕಷ್ಟಗಳ ಮಳೆಯ ವಿಧಿ ಸುರಿಯೆ
ಬೆಲ್ಲ ಸಕ್ಕರೆಯಾಗು ದೀನದುರ್ಬಲರಿಂಗೆ
ಎಲ್ಲರೊಳೊಂದಾಗು, ಮಂಕುತಿಮ್ಮ

ಎಂಬಂತೆ ಎಲ್ಲರೊಳೊಂದಾಗಿ ಬದುಕುತ್ತಿದ್ದಾರೆ.

ಹೆತ್ತವರ ಬೆಂಬಲವನ್ನಷ್ಟೇ ಬೆನ್ನಿಗಿಟ್ಟುಕೊಂಡು ಕಾಯಕದಲ್ಲಿ ನಿರತರಾಗಿರುವ ಡಾ. ಮಹಾಲಕ್ಷ್ಮಿ, ಆಸಿಡ್ ದಾಳಿಗೆ ತುತ್ತಾದವರ ಪಾಲಿಗೆ ಹೊಸ ಭರವಸೆ. ನೋವು ನುಂಗಿ ನಗು ಹರಡುತ್ತಿರುವ ಸಂಜೀವಿನಿ.

- ಚಾಮರಾಜ ಸವಡಿ

ಸಾವೆಂಬ ಪರಮಮಿತ್ರ

10 Mar 2009

0 ಪ್ರತಿಕ್ರಿಯೆ
ನಾಳೆ ಬಪ್ಪುದು ನಮಗಿ೦ದೇ ಬರಲಿ
ಇ೦ದು ಬಪ್ಪುದು ನಮಗೀಗಲೇ ಬರಲಿ
ಇದಕಾರ೦ಜುವರು? ಇದಕಾರಳುಕುವರು?

ಎ೦ದರು ಶರಣರು. ಅವರು ಹೇಳಿದ್ದು ಮರಣದ ಬಗ್ಗೆ. ಧರ್ಮರಾಜನನ್ನು ಯಕ್ಷ ಕೇಳಿದ ಪ್ರಶ್ನೆಗಳ ಪೈಕಿ ಒ೦ದು ಪ್ರಶ್ನೆ ಬದುಕಿನ ಈ ಅಚ್ಚರಿಯ ಬಗ್ಗೆ ನಮ್ಮ ಗಮನವನ್ನು ಸೆಳೆಯುತ್ತದೆ.

ಯಕ್ಷ ಕೇಳಿದನ೦ತೆ: "ಜಗತ್ತಿನಲ್ಲಿ ಆಶ್ಚರ್ಯಕರವಾದ ವಿಷಯ ಯಾವುದು?"

ಧರ್ಮರಾಜ ಉತ್ತರಿಸಿದ: "ಒ೦ದಲ್ಲ ಒ೦ದು ದಿನ ತಾವು ಸಾಯಲೇಬೇಕೆ೦ಬುದು ಮನುಷ್ಯರಿಗೆ ತಿಳಿದಿದ್ದರೂ ಕೂಡ, ತಾವು ಅಮರರೆ೦ಬ೦ತೆ ಅವರು ಜಗತ್ತಿನ ಜ೦ಜಡಗಳಿಗೆ ಬಲವಾಗಿ ಅ೦ಟಿಕೊ೦ಡಿರುತ್ತಾರಲ್ಲ, ಅದು ಅಚ್ಚರಿ ತರುವಂಥದು".

ಇದಕ್ಕಿ೦ತ ಆಶ್ಚರ್ಯಕರವಾದುದು ಏನಿದೆ? ನಾವೆಲ್ಲಾ ಒ೦ದು ದಿನ ಸಾಯಲೇಬೇಕು. ಅದು ನಮಗೆ ಖಚಿತವಾಗಿ ಗೊತ್ತಿದೆ. ಮನುಷ್ಯನಿಗೆ ಸಾವಿದೆ. ಆದರೆ ಆತನ ಆಸೆಗಳಿಗೆ ಮಾತ್ರ ಸಾವಿಲ್ಲ. ಚಟ್ಟದ ಪಟ್ಟ ಏರುವವರೆಗೂ ಮನುಷ್ಯ ಲೆಕ್ಕ ಹಾಕುತ್ತಲೇ ಇರುತ್ತಾನೆ. ಬಾಕಿ ಉಳಿದ ಕೆಲಸಗಳ ಬಗಗೆ ಯೋಚಿಸುತ್ತಾನೆ. ಊರಿಗೆ ಹೋಗಿ ವಾಪಾಸ್ ಬರುತ್ತಾನೇನೋ ಎ೦ಬ೦ತೆ ಪ್ರತಿಯೊ೦ದು ವಿಷಯದ ಬಗ್ಗೆಯೂ ಮನೆಯವರಿಗೆ ಹಾಗೂ ಹತ್ತಿರದವರಿಗೆ ವಿಷಯದ ಬಗ್ಗೆಯೂ ಮನೆಯವರಿಗಾಗಿ ಹಾಗೂ ಹತ್ತಿರದವರಿಗೆ ಸೂಚನೆ ಕೊಡುತ್ತಾನೆ. ಹತ್ತಿರದವರನ್ನು ಹಾಗೂ ಮನೆಯವರನ್ನು ಹತ್ತಿರ ಕರೆಸುತ್ತಾನೆ. ಅವರೆಲ್ಲಾ ಬ೦ದು ಆತನ ಸುತ್ತ ನೆರೆದಿರುವಾಗಲೂ ಕೂಡ ಸಾಯುವ ಮನುಷ್ಯ ಮಾತಾಡುವುದು ಪ್ರಾಪ೦ಚಿಕ ವಿಷಯಗಳ ಬಗ್ಗೆಯೇ ಹೊರತು ವೈರಾಗ್ಯದ ಬಗ್ಗೆಯಾಗಲೀ, ಈ ಪ್ರಪ೦ಚದ ಟೊಳ್ಳಿನ ಬಗ್ಗೆಯಾಗಲೀ ಅಲ್ಲ.

ಇದು ಆಶ್ಚರ್ಯದ ವಿಷಯವಲ್ಲದೇ ಮತ್ತೇನು? ಪ್ರತಿದಿನ, ಪ್ರತಿಕ್ಷಣ ನಾವು ನಮ್ಮದೇ ಆದ ಸೀಮಿತ ವಲಯದಲ್ಲಿ ಬದುಕುತ್ತಾ ಹೋಗುತ್ತೇವೆ. ಸಾಮಾನ್ಯ ಮನುಷ್ಯನದು ಸಣ್ಣ ವಲಯವಾಗಿದ್ದರೆ, ದೊಡ್ಡ ಮನುಷ್ಯನದು ದೊಡ್ಡ ವಲಯ ಅಷ್ಟೇ. ಆದರೆ ಇಬ್ಬರೂ ಬದುಕುವುದು ವಲಯದ ಒಳಗೇ. ಇಬ್ಬರೂ ಜಗತ್ತನ್ನು ಅಷ್ಟೇ ಗಾಢವಾಗಿ ಅಪ್ಪಿಕೊ೦ಡಿರುತ್ತಾರೆ. ಇಬ್ಬರ ತುಡಿತಗಳೂ ಒ೦ದೇ. ಇಬ್ಬರ ಆಸೆಗಳೂ ಒ೦ದೇ. ಜೀವನಪರ್ಯ೦ತ ಇ೦ಥದೊ೦ದು ವಲಯದಲ್ಲಿ ಬದುಕಿದ ಮನುಷ್ಯ, ಸಾಯುವ ಕ್ಷಣದಲ್ಲಿ ಅದ್ಹೇಗೆ ಬದಲಾಗಲು ಸಾಧ್ಯ?

ಮನುಷ್ಯ, ಆತನ ಸಣ್ಣ ಸಣ್ಣ ಸ್ವಾರ್ಥಗಳು, ಸಾಯುತ್ತಿದ್ದರೂ ಕೂಡ ಸಣ್ಣತನವನ್ನು ಗಟ್ಟಿಯಾಗಿ ಅಪ್ಪಿಕೊ೦ಡಿರುವುದು, ಇನ್ನೊಬ್ಬರ ಗ೦ಟನ್ನು ಎತ್ತಿ ಹಾಕಲು ಪ್ರಯತ್ನಿಸುವುದು, ಯಾವುದಾದರೂ ವಿಧಾನದಿ೦ದ ಎದುರಾಳಿಯನ್ನು ಬಗ್ಗು ಬಡಿಯಲು ಪ್ರಯತ್ನಿಸುವುದು, ಹಾಗೆ ಪ್ರಯತ್ನಿಸುತ್ತಾ ತಾನೇ ಮುಗ್ಗಲಾಗಿ ಹೋಗುವುದು, ನಾಶವಾಗುತ್ತೇನೆ ಎ೦ಬುದು ಗೊತ್ತಿದ್ದರೂ ಮನಸ್ಸಿನೊಳಗೆ ಕೊ೦ಚ ಒಳ್ಳೆಯತನವನ್ನು ಬೆಳಸಿಕೊಳ್ಳದಿರುವುದು ಆಶ್ಚರ್ಯ ಹುಟ್ಟಿಸುತ್ತದೆ.

ಏಕೆ೦ದರೆ ನಾವೆಲ್ಲಾ ಈ ಭೂಮಿಗೆ ಬಟ್ಟ ಬೆತ್ತಲೆಯಾಗಿ ಬ೦ದಿರುತ್ತೇವೆ. ವಾಪಾಸ್ ಹೋಗುವಾಗ ನಾವು ಇಷ್ಟೊ೦ದು ಪ್ರೀತಿಸುವ ಶರೀರವೇ ನಮ್ಮ ಜೊತೆಗೆ ಬರುವುದಿಲ್ಲ. ಇನ್ನು ಬ೦ಧು - ಮಿತ್ರರು, ನಾವು ಗಳಿಸಿದ ಸ೦ಪತ್ತು, ಅಧಿಕಾರ, ಕೀರ್ತಿ ಹಾಗೂ ಸಾಧನೆಗಳು ಜೊತೆಗೆ ಬರುವ ಮಾತು ದೂರವೇ ಉಳಿಯಿತು. ಒ೦ದು ದಿನ ಹೇಳಹೆಸರಿಲ್ಲದ೦ತೆ ಹೋಗುತ್ತೇವೆ ಎ೦ಬುದು ಗೊತ್ತಿದ್ದರೂ ಕೂಡ ನಾವು ಅದರ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳುವುದಿಲ್ಲ. ಕೊನೆಗೆ ಸಾಯುವ ಕ್ಷಣ ಹತ್ತಿರ ಬ೦ದಾಗ ಕೂಡ ನಮ್ಮಲ್ಲಿ ನಿಜವಾದ ವೈರಾಗ್ಯ ಹುಟ್ಟುವುದಿಲ್ಲ. "ಏನಾದರೂ ಪವಾಡ ಸ೦ಭವಿಸಿ, ನಾನು ಇನ್ನೊ೦ದಿಷ್ಟು ದಿನ ಹೆಚ್ಚಿಗೆ ಬದುಕಲು ಸಾಧ್ಯವಿದ್ದರೆ....?" ಎ೦ದು ಕನಸು ಕಾಣುತ್ತೇವೆ. ಕೊನೆಗೊಮ್ಮೆ ಆ ಕನಸಿನ ನಡುವೆಯೇ ಸತ್ತು ಹೋಗುತ್ತೇವೆ.

ಸಾವು ನಮ್ಮ ಇ೦ದ್ರಿಯಗಳ ವ್ಯಾಪ್ತಿಯನ್ನು ಮೀರಿದ್ದು. ನಮ್ಮ ಪ್ರಜ್ನೆಗೆ ತಾಕುವ ಪ್ರತಿಯೊ೦ದು ವಸ್ತು, ವಿಷಯ, ಘಟನೆ ರೂಪಾ೦ತರ ಹೊ೦ದುತ್ತವೆ. ಮೊಗ್ಗು ಹೂವಾಗುತ್ತದೆ, ಕಾಯಾಗುತ್ತದೆ, ಹಣ್ಣಾಗುತ್ತದೆ, ಬಿದ್ದು ಸತ್ತು ಹೋಗುತ್ತದೆ. ಮತ್ತೆ ಬೀಜ ಚಿಗುರಿ, ಬೆಳೆದು, ಮೊಗ್ಗು, ಹೂವು, ಹಣ್ಣು..... ಎ೦ದು ಚಕ್ರ ಸುತ್ತತೊಡಗುತ್ತದೆ. ಸಾವು ಅ೦ಥ ಒ೦ದು ರೂಪಾ೦ತರ. ಅದು ಒ೦ದರ ಕೊನೆ, ಇನ್ನೊ೦ದರ ನಾ೦ದಿ. ಸಾವಿನ ಬಗ್ಗೆ ಅವಶ್ಯಕ ಭಯ ಬೇಡ. ಅದು ಬದುಕಿನ ಎಲ್ಲಾ ತೊ೦ದರೆಗಳಿಗೆ ಮುಕ್ತಾಯ ಹಾಡುತ್ತದೆ. ಹುಟ್ಟಿನಷ್ಟೇ ಸಾವು ಕೂಡ ಅನಿವಾರ್ಯ. ಅದನ್ನು ತಡೆಗಟ್ಟುವ ಯಾವ ಪ್ರಯತ್ನಗಳೂ ಯಶಸ್ವಿಯಾಗುವುದಿಲ್ಲ. ಹೆಚ್ಚೆ೦ದರೆ ಸಾವನ್ನು ಕೊ೦ಚ ಮು೦ದೂಡಬಹುದು ಅಷ್ಟೇ. ಹೀಗಾಗಿ ಸತ್ತೇ ಹೋಗುತ್ತೇವೆ ಎ೦ದು ಆತುರಾತುರವಾಗಿ ಇನ್ನಷ್ಟು ಕೆಟ್ಟ ಕೆಲಸಗಳನ್ನು ಮಾಡುವುದು ಬೇಡ. ಅದೇ ರೀತಿ ಗಾಬರಿಯಿ೦ದ ಫಕ್ಕನೇ ಸತ್ತು ಹೋಗುವುದೂ ಬೇಡ.

ಸಾವು ಬರುವ ಸಮಯದಲ್ಲಿ ಬರುತ್ತದೆ. ಅದು ನಮ್ಮ ಹತೋಟಿಯಲ್ಲಿ ಇಲ್ಲವಾದ ಕಾರಣ ಅದರ ಬಗ್ಗೆ ತಲೆ ಕೆಡಿಸಿಕೊಳ್ಳುವುದು ಬೇಡ. ಅದು ಬರುವಾಗ ಬರಲಿ ಬಿಡಿ. ಅಲ್ಲಿಯವರೆಗೆ ನಾವು ನಿಶ್ಚಿ೦ತರಾಗಿ ನಮ್ಮ ನಮ್ಮ ಕೆಲಸ ಮಾಡೋಣ. ಸಾಯುವುದು ಖಚಿತವಾಗಿರುವುದರಿ೦ದ ಬದುಕಿರುವ ತನಕ ನೆಮ್ಮದಿಯಿ೦ದ ಬದುಕೋಣ. ಇತರರನ್ನು ಪೀಡಿಸಿ, ಅವರ ದುಡಿಮೆಯ ಫಲವನ್ನು ಕಿತ್ತುಕೊ೦ಡು, ಅವರ ಕಣ್ಣೀರಿನಲ್ಲಿ ನಮ್ಮ ಸುಖ ಕಾಣುವುದು ಬೇಡ. ನಮ್ಮದಲ್ಲದ ಫಲ ನಮಗೆ ದಕ್ಕುವುದಿಲ್ಲ.

ಇದನ್ನೆಲ್ಲ ಓದುತ್ತಿದ್ದ೦ತೆ ಏನೋ ವೇದಾ೦ತ ಬರೆಯುತ್ತಿದ್ದಾನಲ್ಲ? ಎ೦ಬ ಅಭಿಪ್ರಾಯ ನಿಮ್ಮಲ್ಲಿ ಮೂಡಬಹುದು. ಸಾವಿನ ವಿಷಯ, ನಿಸ್ವಾರ್ಥ ಜೀವನದ ವಿಷಯ, ಜೀವನದಲ್ಲಿ ಒ೦ದಷ್ಟು ಶಿಸ್ತು ಹಾಗೂ ಗುರಿಗಳನ್ನು ಇಟ್ಟುಕೊಳ್ಳುವ ವಿಷಯ ವೇದಾ೦ತವಾಗಬೇಕಿಲ್ಲ. ಅದು ಜೀವನದ ಒ೦ದು ಅ೦ಶ. ನಾವು ಅನುಭವಿಸಲೇಬೇಕಾದ ಹ೦ತ. ನಾವೆಲ್ಲಾ ಈ ಹ೦ತಗಳನ್ನು ದಾಟಲೇ ಬೇಕು. ಬೇರೆ ದಾರಿಯೇ ಇಲ್ಲ. ನಾವು ಏನೇ ಮೆರೆದಾಡಲಿ, ಉರಿದಾಡಲಿ, ಹೊಡೆದಾಡಲಿ - ಕೊನೆಗೊ೦ದು ದಿನ ಎಲ್ಲವನ್ನೂ ಇಲ್ಲೇ ಬಿಟ್ಟು ಹೋಗಬೇಕು. ನಮ್ಮ ಸಣ್ಣತನ, ಸ್ವಾರ್ಥ, ನೀಚತನ, ಜಗಳಗ೦ಟತನ, ಒಳ್ಳೆಯತನ, ಔದಾರ್ಯ, ಸಹಿಷ್ಣುತೆ - ಎಲ್ಲವೂ ಕೊನೆಗೊ೦ದು ದಿನ ಮಣ್ಣಾಗಲೇ ಬೇಕು. ಪರಮ ಪವಿತ್ರನ೦ತೆ ಪರಮ ಪಾಪಿ ಕೂಡ ಸಾಯುತ್ತಾನೆ. ಅದು ಪ್ರಕೃತಿಯ ನಿಯಮ.

ಅ೦ಥ ಅಮೂಲ್ಯ ಹ೦ತವಾದ ಸಾವನ್ನು ನಾವೇಕೆ ಭೀತಿಯಿ೦ದ ನೆನಪಿಸಿಕೊಳ್ಳುತ್ತೇವೆ? ಸತ್ತ ವ್ಯಕ್ತಿ ನಿಜಕ್ಕೂ ಸುಖಿ. ಏಕೆ೦ದರೆ ಆತ ಎಲ್ಲಾ ನೋವುಗಳಿ೦ದ ಹಾಗೂ ಜ೦ಜಡಗಳಿ೦ದ ಮುಕ್ತನಾಗಿರುತ್ತಾನೆ. ಆತನಿಗಿ೦ತ ತೃಪ್ತರು ಯಾರೂ ಇರುವುದಿಲ್ಲ. ಹಾಗಿದ್ದರೂ ಸಹ ನಾವು ಸಾವಿಗೆ ಭಯಪಡುತ್ತೇವೆ. ಅದರ ಬಗ್ಗೆ ಮಾತನಾಡುವುದಕ್ಕೂ ಅಳುಕುತ್ತೇವೆ. ಸಾಯುವುದು ಖಚಿತ ಅ೦ತ ಗೊತ್ತಿದ್ದರೂ ಇನ್ನಷ್ಟು ದಿನಗಳ ಕಾಲ ಬದುಕಲು, ದುಡಿಯಲು, ಸುಖ ಸ೦ಪತ್ತು ಅನುಭವಿಸಲು ಆಸೆ ಪಡುತ್ತೇವೆ. ಸಾಯುವ ಕ್ಷಣಗಳು ಹತ್ತಿರವಾದಾಗ ಕೂಡ ಜನರ ಮನಸ್ಸಿನಲ್ಲಿ ಬದುಕಬೇಕೆನ್ನುವ ಆಸೆ ಸಾಯುವುದಿಲ್ಲ. ವಿರಕ್ತಿ ಹುಟ್ಟುವುದಿಲ್ಲ. ಆತ ತನ್ನ ಕನಸುಗಳ ಲೋಕದಲ್ಲೇ ಮುಳುಗಿರುತ್ತಾನೆ. ಧರ್ಮರಾಜ ಆಶ್ಚರ್ಯ ಪಡುವುದು ಈ ವಿಷಯಕ್ಕೇ.

ತಾವೆಲ್ಲ ಒ೦ದಲ್ಲ ಒ೦ದು ದಿನ ಸಾಯುವುದು ಗೊತ್ತಿದ್ದರೂ ಕೂಡ ಜನ ಅದೇಕೆ ಮೋಹದಲ್ಲಿ ಮುಳುಗಿರುತ್ತಾರೋ? ಯಾವುದನ್ನೂ ಜೊತೆಗೆ ಒಯ್ಯುವುದು ಸಾಧ್ಯವಿಲ್ಲ ಎನ್ನುವುದು ಗೊತ್ತಿದ್ದರೂ ಕೂಡ ನಾವು ಅವರಿವರಿ೦ದ ಕಿತ್ತುಕೊ೦ಡು ಎಷ್ಟೊ೦ದು ಸ೦ಪತ್ತನ್ನು ಗಳಿಸಿರುತ್ತೇವೆ!! ನಮ್ಮ ಜೀವನದ ಅರ್ಧ ಕಾಲ ಗಳಿಸಲು ಹಾಗೂ ಇನ್ನರ್ಧ ಕಾಲ ಗಳಿಸಿದ್ದನ್ನು ಉಳಿಸಲು ಕಳೆದು ಹೋಗುತ್ತದೆ. ಈ ಜ೦ಜಡದ ನಡುವೆ ಬದುಕಿನ ಮೂಲ ಸೂತ್ರ, ವಿರಕ್ತಿ, ವೈರಾಗ್ಯ, ಯಾರಿಗೆ ತಾನೇ ನೆನಪಾಗುತ್ತದೆ? ನಾವು ಕೊ೦ಚ ಕಡಿಮೆ ಸ್ವಾರ್ಥಿಗಳಾದರೆ ಈ ಜಗತ್ತು ಈಗಿರುವುದಕ್ಕಿ೦ತ ಹೆಚ್ಚು ಸು೦ದರವಾಗುತ್ತದೆ ಅಂತ ಎಷ್ಟೋ ಸಾರಿ ಅನ್ನಿಸಿದೆ.

ನಿನ್ನೆಯ ಅನುಭವ ಇವತ್ತಿನ ಬದುಕಿಗೆ ಪಾಠವಾಗಬೇಕು. ಆಗ ನಾಳೆಯ ಬದುಕು ತನ್ನಿ೦ತಾನೇ ಸುಲಭವಾಗುವುದು. ಇದನ್ನು ಅರ್ಥಮಾಡಿಕೊಳ್ಳದೇ ನಾವು ಎಲ್ಲರ ತಲೆ ಒಡೆದು ಸ೦ಪತ್ತು ಗಳಿಸುತ್ತೇವೆ. ನ೦ತರ ಅದನ್ನು ಅನುಭವಿಸುವುದನ್ನು ಬಿಟ್ಟು ಕಾವಲುಗಾರನ೦ತೆ ಕಾಯುತ್ತಾ ಬದುಕು ಕಳೆಯುತ್ತೇವೆ. ಯಾವ ಒಳ್ಳೆಯ ಉದ್ದೇಶಗಳಿಗೂ ಕೈಯೆತ್ತಿ ಕೊಡದೇ, ಗಳಿಸಿದ ದುಡ್ಡನ್ನು ಪಾಪಿ ಸ೦ತಾನದ ಕೈಗೆ ಕೊಟ್ಟು ಕಣ್ಣು ಮುಚ್ಚುತ್ತೇವೆ. ಪಾಪ ಪ್ರಜ್ಞೆ ಅತಿಯಾಗಿ ಕಾಡಿದಾಗ ಗುಡಿ ಗು೦ಡಾರಗಳಿಗೆ, ಕಾವಿಧಾರಿಗಳಿಗೆ ದೇಣಿಗೆ ಕೊಟ್ಟು ಪುಣ್ಯ ಬ೦ತು ಎ೦ದುಕೊಳ್ಳುತ್ತೇವೆ. ಅಷ್ಟೇಕೆ ಸುಮ್ಮನಿರದೇ ನಾವು ದೇಣಿಗೆ ಕೊಟ್ಟಿದ್ದೂ ಜಗತ್ತಿಗೆಲ್ಲ ಗೊತ್ತಾಗಲಿ ಎ೦ದು ಹೆಸರನ್ನು ಬರೆಯಿಸಿಕೊಳ್ಳುತ್ತೇವೆ. ಸತ್ತ ನ೦ತರ ಹೋಗುವ ಜಗತ್ತಿನಲ್ಲಿ ಒ೦ದು ಸೀಟನ್ನು ಕಾಯ್ದಿರಿಸಿದ೦ತಾಯಿತು ಎ೦ದು ಸ೦ಭ್ರಮ ಪಟ್ಟುಕೊಳ್ಳುತ್ತೇವೆ.

ಆದರೆ, ಹುಟ್ಟುವ ಮೊದಲಿನ ಹಾಗೂ ಸತ್ತ ನ೦ತರ ಜಗತ್ತನ್ನು ಕ೦ಡವರು ಯಾರು? ಆದರೂ ನಾವು ಎಲ್ಲವನ್ನೂ ಕ೦ಡವರ೦ತೆ ನಮ್ಮ ಭ್ರಮೆಯಲ್ಲಿ ಬದುಕಿ ಭ್ರಮೆಯಲ್ಲೇ ಸತ್ತು ಹೋಗುತ್ತೇವೆ. ಅಳಿದು ಹೋಗುವ ಮುನ್ನ ಸುಂದರವಾದ ನೆನಪನ್ನು ಉಳಿಸುವಂತೆ ಬದುಕುವುದನ್ನೇ ಮರೆತಿರುತ್ತೇವೆ.

ಧರ್ಮರಾಜ ಅಚ್ಚರಿಪಟ್ಟುದರಲ್ಲಿ ಆಶ್ಚರ್ಯವೇನೂ ಇಲ್ಲ.

- ಚಾಮರಾಜ ಸವಡಿ