ಬೆಳ್ಳಂಬೆಳಿಗ್ಗೆ ಅಪ್ಪಳಿಸಿದ ಆಘಾತ-೧

28 Apr 2009

7 ಪ್ರತಿಕ್ರಿಯೆ
ಅದು ಮಾರ್ಚ್‌ ತಿಂಗಳ ಮೂರನೇ ವಾರದ ಕೊನೆ.

ಎಂದಿನಂತೆ ನಸುಕಿನಲ್ಲಿ ಎದ್ದು ಕಂಪ್ಯೂಟರ್‌ ಮುಂದೆ ಪತ್ರಿಕೆಗಳ ಅಂತರ್ಜಾಲ ತಾಣಗಳನ್ನು ಹುಡುಕಿ ಓದುತ್ತ, ನೋಟ್ಸ್‌ ಮಾಡಿಕೊಳ್ಳುತ್ತಾ ಕೂತಿದ್ದೆ. ಸಮಯ ಆಗಲೇ ಆರೂ ಕಾಲು. ಇನ್ನೊಂದು ಹದಿನೈದು ನಿಮಿಷ ಸಮಯ. ಮಕ್ಕಳು ಏಳುತ್ತವೆ. ಅವರ ಮುಖ ತೊಳೆದು, ಒಂದಿಷ್ಟು ಹಾಲು ಕುಡಿಸಿಕೊಂಡು ವಾಕಿಂಗ್‌ ಹೋಗುವುದು ರೂಢಿ.

ಮತ್ತೈದು ನಿಮಿಷದಲ್ಲಿ ಚಿಕ್ಕವಳು ಎದ್ದಳು. ರೇಖಾ ಅವಳನ್ನು ರೆಡಿ ಮಾಡುವಷ್ಟರಲ್ಲಿ ದೊಡ್ಡ ಮಗಳು ಗೌರಿ ಕೂಡ ಎದ್ದು ಕೂತಳು. ಹಾಗೇ ಬಿಟ್ಟರೆ ಹಾಸಿಗೆಯಲ್ಲೇ ಸೂಸೂ ಮಾಡುತ್ತಾಳೆಂದು ಅವಳನ್ನು ಎಬ್ಬಿಸಿದ ರೇಖಾ ಬಾತ್‌ರೂಮಿನ ಕಡೆ ನಡೆಸಿಕೊಂಡು ಬಂದಳು.

ಏಕೋ ಗೌರಿ ನಡೆಯಲು ಹಠ ಮಾಡಿದಳು. ಅದು ಹಳೆಯ ಅಭ್ಯಾಸ. ಬಾತ್‌ರೂಮಿನ ನೆಲ ತಂಪಗಿರುತ್ತದೆ. ಎದ್ದ ಕೂಡಲೇ ಕಾಲು ನೆನೆಸಿಕೊಳ್ಳಲು ಆಕೆ ಇಷ್ಟಪಡುವುದಿಲ್ಲ.

ಬಹುಶಃ ಅದೇ ಕಾರಣಕ್ಕೆ ನಡೆಯಲು ಹಠ ಮಾಡುತ್ತಿರಬಹುದೆಂದು ಭಾವಿಸಿ ಆಕೆ ಕೊಂಚ ಒತ್ತಾಯದಿಂದಲೇ ನಡೆಸಿಕೊಂಡು ಬಂದಳು. ಆದರೆ, ನಾನು ಕೂತಿದ್ದ ಕೋಣೆಯ ಬಾಗಿಲ ಚೌಕಟ್ಟನ್ನು ಗಟ್ಟಿಯಾಗಿ ಹಿಡಿದು ನಿಂತುಕೊಂಡ ಗೌರಿ ಹೆಜ್ಜೆ ಎತ್ತಿಡಲಿಲ್ಲ. ರೇಖಾ ಜಗ್ಗಿದರೂ ಈಕೆ ಕದಲಲಿಲ್ಲ. ’ಸೋಮಾರಿತನ ಮಾಡಬಾರದು ಪುಟ್ಟಾ’ ಎಂದು ಕೂತಲ್ಲಿಂದಲೇ ನಾನು ಮೆಲುವಾಗಿ ಗದರಿದೆ. ಆದರೂ, ಗೌರಿ ಅಲ್ಲಾಡಲಿಲ್ಲ. ’ಈಕೆಗೆ ನೀವೇ ಮುಖ ತೊಳೆಸಿ’ ಎಂದು ಆಕೆಯ ಕೈಬಿಟ್ಟ ರೇಖಾ ಚಿಕ್ಕವಳತ್ತ ಗಮನ ಹರಿಸಿದಳು.

ಈಗ ನಾನು ಏಳಲೇಬೇಕಾಯಿತು.

ಏಕೋ ಗೌರಿ ಕೊಂಚ ಹೊಯ್ದಾಡಿದಂತಾಯಿತು. ನಿದ್ದೆಗಣ್ಣಿನಲ್ಲಿ ಬಿದ್ದುಗಿದ್ದಾಳೆಂದು ನಾನು ತಕ್ಷಣ ಎದ್ದು ಆಕೆಯತ್ತ ಹೋಗುವಷ್ಟರಲ್ಲಿ, ಗೌರಿ ಏಕೋ ಅಸಹಜವಾಗಿದ್ದನ್ನು ಗಮನಿಸಿದೆ.

ಆಕೆಯ ಕಣ್ಣುಗಳು ವಿಚಿತ್ರವಾಗಿದ್ದವು. ದೃಷ್ಟಿ ಎಲ್ಲೋ ನೆಟ್ಟಿತ್ತು. ಮೈಯಲ್ಲಿ ಶಕ್ತಿ ಇಲ್ಲದವಳಂತೆ ನಿಂತಿದ್ದ ಆಕೆ ಯಾವ ಕ್ಷಣದಲ್ಲಾದರೂ ಬೀಳಬಹುದು ಅನಿಸಿತು.

ಹೋಗಿ ಆಕೆಯ ರೆಟ್ಟೆ ಹಿಡಿದುಕೊಂಡೆ. ಮೈಯಲ್ಲಿ ಶಕ್ತಿ ಇಲ್ಲದಂತೆ ನಿಂತಿದ್ದ ಆಕೆ ನಿಧಾನವಾಗಿ ಬಿಗಿಯಾಗತೊಡಗಿದಳು. ನಡೆಯಲು ಇಷ್ಟವಿಲ್ಲದಾಗ ಕುಸಿದು ಕೂಡುವಂತೆ ಕಾಣಲಿಲ್ಲ.

ತಕ್ಷಣ ಆಕೆಯನ್ನು ಎತ್ತಿಕೊಂಡು ಹೋಗಿ ಕುರ್ಚಿಯಲ್ಲಿ ಕೂರಿಸಿದೆ. ಆಕೆಯ ಮುಖ ಇನ್ನಷ್ಟು ಅಸಹಜವಾಯಿತು. ದೃಷ್ಟಿ ಎಲ್ಲೋ. ಒಂದು ಲೋಟ ತೆಗೆದುಕೊಂಡು ಅದನ್ನು ತಿರುಗಿಸಿದೆ. ಆ ರೀತಿ ತಿರುಗಿಸುವುದನ್ನು ನೋಡುವುದು ಆಕೆಗೆ ಇಷ್ಟ.

ಆದರೆ, ಗೌರಿ ಪ್ರತಿಕ್ರಿಯಿಸಲಿಲ್ಲ. ಮೈ ಶಕ್ತಿ ಇಲ್ಲದಂತೆ ಇಳಿಬೀಳತೊಡಗಿತು. ಕುರ್ಚಿಯಲ್ಲಿದ್ದರೂ ಆಕೆ ಬಿದ್ದುಬಿಡಬಹುದು ಅನಿಸಿದಾಗ ಮೊದಲ ಬಾರಿ ನಾನು ಕೊಂಚ ಗಾಬರಿಗೊಂಡೆ.

ತಕ್ಷಣ ಆಕೆಯನ್ನು ಎತ್ತಿಕೊಂಡು ದಿವಾನ್‌ ಮೇಲೆ ಮಲಗಿಸಿದೆ. ಗೌರಿಯ ನಡವಳಿಕೆ ವಿಚಿತ್ರವಾಯಿತು. ಕಣ್ಣಿನ ಅಸಹಜತೆ ನನ್ನನ್ನು ಮತ್ತಷ್ಟು ಗಾಬರಿಗೊಳಿಸಿತು. ರೇಖಾಳನ್ನು ಕೂಗಿ ಕರೆದೆ.

ಅಷ್ಟೊತ್ತಿಗೆ ಗೌರಿ ವಿಚಿತ್ರವಾಗಿ ವರ್ತಿಸತೊಡಗಿದಳು. ದೇಹ ಒಂದು ಕಡೆ ವಾಲಿತು. ಕುತ್ತಿಗೆ ಒಂದು ಭಾಗಕ್ಕೆ ತಿರುಚಿತು. ಬಾಯಿ ಅಸಹಜವಾಗಿ ತೆರೆದುಕೊಂಡಿತು. ನಮ್ಮ ಕಣ್ಮುಂದೆಯೇ ನಿಧಾನವಾಗಿ ಅಕೆಯ ಪ್ರಜ್ಞೆ ತಪ್ಪತೊಡಗಿತು.

ಅದನ್ನು ನೋಡಿ ರೇಖಾ ಅಳತೊಡಗಿದಳು. ಆಕೆಯ ಮೈ ಅಲುಗಿಸಿ ಮಾತನಾಡಿಸಲು ಯತ್ನಿಸಿದರೂ ಪ್ರತಿಕ್ರಿಯೆ ಬರಲಿಲ್ಲ. ಜಗತ್ತಿನ ಪರಿವೇ ಇಲ್ಲದಂತೆ ಆಕೆ ನಿಧಾನವಾಗಿ ಕುಸಿಯತೊಡಗಿದಳು. ನಾನು ಪೂರ್ತಿ ಗಾಬರಿಗೊಂಡೆ. ತಕ್ಷಣ ಏನು ಮಾಡಬೇಕೋ ತೋಚಲಿಲ್ಲ. ನಮ್ಮ ಅವಸ್ಥೆ ನೋಡಿ ಚಿಕ್ಕ ಮಗಳು ನಿಧಿ ಅಳಲು ಪ್ರಾರಂಭಿಸಿದಳು.

ತಕ್ಷಣ ಆಕೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗದಿದ್ದರೆ ಅಪಾಯ ತಪ್ಪಿದ್ದಲ್ಲ ಎಂಬ ಭೀತಿಯಲ್ಲಿ ಕೆಳ ಅಂತಸ್ತಿನ ಗೌಡರ ಮನೆಯತ್ತ ಓಡಿ ಹೋದೆ. ಅವರ ಮನೆಯಲ್ಲಿ ಬೈಕಿತ್ತು. ಆ ಸಮಯದಲ್ಲಿ ಆಟೊ ಅಥವಾ ಆಂಬುಲೆನ್ಸ್‌ ಬರುವುದನ್ನು ಕಾಯುವುದಕ್ಕಿಂತ, ಗೌಡರ ಬೈಕ್‌ನಲ್ಲಿ ಗೌರಿಯನ್ನೆತ್ತಿ ಕೂತು ಹತ್ತಿರದಲ್ಲೇ ಇರುವ ೨೪ ಗಂಟೆಗಳೂ ತೆರೆದಿರುವ ಆಸ್ಪತ್ರೆಗೆ ಕರೆದುಕೊಂಡು ಹೋಗುವುದು ನನ್ನ ಉದ್ದೇಶವಾಗಿತ್ತು. ಹೇಗೆ ಮೆಟ್ಟಿಲಿಳಿದೆನೋ ಗೊತ್ತಿಲ್ಲ. ಇನ್ನೇನು ಗೌಡರ ಮನೆಯ ಬಾಗಿಲು ತಟ್ಟಬೇಕು-

ಅಷ್ಟರಲ್ಲಿ ರೇಖಾ ಜೋರಾಗಿ ಚೀರಿದಳು.

ನನ್ನ ಜಂಘಾಬಲವೇ ಉಡುಗಿದಂತಾಯಿತು. ಬಂದ ವೇಗಕ್ಕಿಂತ ದುಪ್ಪಟ್ಟು ವೇಗದಲ್ಲಿ ಮೆಟ್ಟಿಲೇರಿ ಒಳಗೆ ಓಡಿದೆ. ಆ ದೃಶ್ಯವನ್ನು ಬಹುಶಃ ನನ್ನ ಜೀವಮಾನದಲ್ಲಿ ಎಂದಿಗೂ ಮರೆಯಲಾರೆ.

ಗೌರಿಯ ಮೈ ತರಗಲೆಯಂತೆ ಕಂಪಿಸುತ್ತಿದೆ. ಬಾಯಿ ವಿಚಿತ್ರವಾಗಿ ತೆರೆದುಕೊಂಡಿದೆ. ಕಣ್ಣುಗಳು ಅರೆತೆರೆದಿದ್ದವು. ಇಡೀ ದೇಹ ಅಲೆಅಲೆಯಾಗಿ ನಡುಗುತ್ತಿತ್ತು. ರೇಖಾ ಜೋರಾಗಿ ಅಳುತ್ತಿದ್ದಳು. ನಿಧಿ ಕೂಡಾ.

ಅದನ್ನು ನೋಡಿ ನಾನೂ ಅಳತೊಡಗಿದೆ. ನಮ್ಮ ಕಣ್ಣೆದುರೇ ಗೌರಿ ಜಾರಿ ಹೋಗುತ್ತಿರುವಂತೆ ಭಾಸವಾಯಿತು. ಗುರುವಾರದ ಆ ಬೆಳಿಗ್ಗೆ ಇದ್ದ ನಾಲ್ವರ ಪೈಕಿ ಮೂವರು ಅಳುತ್ತ ಕೂತಿದ್ದರೆ, ಗೌರಿ ಇಹದ ಪರಿವೆ ಇಲ್ಲದಂತೆ ಗಡಗಡ ನಡುಗುತ್ತ ಮಲಗಿದ್ದಳು. ಆ ಚಿತ್ರ ಇನ್ನೂ ಮರೆಯಾಗಲೊಲ್ಲದು.

*****

ಮುಕ್ಕಾಲು ನಿಮಿಷದ ಆ ನಡುಗುವಿಕೆ ನನ್ನ ಮನಸ್ಸನ್ನೇ ನಡುಗಿಸಿಬಿಟ್ಟಿದೆ. ಕನ್ನಡದಲ್ಲಿ ಅದಕ್ಕೆ ಮೂರ್ಛೆರೋಗ ಅನ್ನುತ್ತಾರೆ. ಇಂಗ್ಲಿಷ್‌ನಲ್ಲಿ ಫಿಟ್ಸ್‌, ಸಿಝರ್‌, ಅಟ್ಯಾಕ್‌ ಎಂದೆಲ್ಲ ಹೇಳುತ್ತಾರೆ. ವಿಶಿಷ್ಟಚೇತನ ಮಕ್ಕಳಲ್ಲಿ ಫಿಟ್ಸ್‌ ಬರುವ ಸಾಧ್ಯತೆ ನೂರಕ್ಕೆ ನೂರರಷ್ಟಿದೆ. ಆದರೆ, ಗೌರಿಗೆ ಕಳೆದ ಏಳು ವರ್ಷಗಳಿಂದ ಒಮ್ಮೆಯೂ ಬಂದಿದ್ದಿಲ್ಲ. ಆಕೆಯನ್ನು ಅದೆಷ್ಟು ಜತನವಾಗಿ ನೋಡಿಕೊಳ್ಳುತ್ತಿದ್ದೇವೆಂದರೆ, ಬಹುಶಃ ಆಕೆಗೆ ಎಂದಿಗೂ ಬರಲಾರದು ಎಂದೇ ಭಾವಿಸಿದ್ದೆವು.

ಆದರೆ, ಆ ಗುರುವಾರದ ಬೆಳ್ಳಂಬೆಳಿಗ್ಗೆ ನಮ್ಮ ನಂಬಿಕೆ ಛಿದ್ರವಾಯಿತು.

ಅದುವರೆಗೆ ಯಾರಿಗೂ ಫಿಟ್ಸ್‌ ಬಂದಿದ್ದನ್ನು ನಾನು ಕಣ್ಣಾರೆ ನೋಡಿದ್ದಿಲ್ಲ. ಆಸ್ಪತ್ರೆಗೆ ಹೋಗುವವರೆಗೆ ಗೌರಿಗೆ ಬಂದಿದ್ದು ಫಿಟ್ಸ್‌ ಎಂಬುದೂ ನಮಗೆ ಗೊತ್ತಿರಲಿಲ್ಲ. ತಪಾಸಣೆ ನಡೆಸಿದ ಡಾ. ಶಿವಾನಂದ್‌, ಫಿಟ್ಸ್‌ ಎಂದು ದೃಢಪಡಿಸಿದರು. ದಿನಕ್ಕೆ ಮೂರು ಸಲದಂತೆ ಸದ್ಯ ಮೂರು ವರ್ಷ ಔಷಧಿ ಕೊಡಿ. ಆಕೆಯ ಮೆದುಳು ಸ್ಕ್ಯಾನ್‌ ಮಾಡಿಸಿದ ನಂತರ ಮತ್ತೆ ಬನ್ನಿ ಎಂದು ಹೇಳಿದರು. ಅತ್ಯಂತ ಭಾರವಾದ ಹೃದಯದೊಂದಿಗೆ ಗೌರಿಯನ್ನು ಆಟೊದಲ್ಲಿ ಕೂಡಿಸಿಕೊಂಡು, ಆಕೆಯ ಶಾಲೆಗೆ ಹೋದೆವು.

*****

ಅಷ್ಟೊತ್ತಿಗೆ ಶಾಲೆಯಲ್ಲಿ ವಿಷಯ ಗೊತ್ತಾಗಿತ್ತು. ನಡೆದ ಘಟನೆ ವಿವರಿಸುತ್ತಿದ್ದಂತೆ ರೇಖಾಗೆ ದುಃಖ ಉಮ್ಮಳಿಸಿ ಬಂತು.

(ಎರಡನೇ ಭಾಗದಲ್ಲಿ ಮುಕ್ತಾಯ)

- ಚಾಮರಾಜ ಸವಡಿ

ಅವಳಿಲ್ಲದ ಐದು ವರ್ಷ

2 ಪ್ರತಿಕ್ರಿಯೆ
ಎಲ್ಲಿ ಹೋದೆಯೇ ಸೌಮ್ಯ ಹೆಸರಿನ ಸೌಂದರ್ಯವತಿ?

ನೀನಿಲ್ಲದ ಐದು ವರ್ಷ ಇಲ್ಲಿ ಏನೇನು ಬದಲಾವಣೆಯಾಗಿದೆ ಗೊತ್ತೆ? ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ಬಂದಿದೆ. ನೀನು ಆ ಪರಿ ಬೆಂಬಲಿಸಿದ್ದ ಬಿಜೆಪಿ ರಾಜ್ಯದಲ್ಲಿ ಅಧಿಕಾರ ಹಿಡಿದಿದೆ. ಕಾವೇರಿ ಗಲಾಟೆಯಾಗಿಲ್ಲ. ಆಲಮಟ್ಟಿ ಏಕೋ ಉಕ್ಕಿಉಕ್ಕಿ ಹರಿದಿದೆ. ರಾಜ್ಯ ಮೊದಲಿಗಿಂತ ಸದೃಢವಾಗಿದೆ. ಹಣದುಬ್ಬರ ಇಳಿದಿದೆ. ಆರ್ಥಿಕ ಹಿಂಜರಿತವನ್ನೂ ಮೆಟ್ಟಿ ನಿಲ್ಲಬಲ್ಲ ವಿಶ್ವಾಸ ವ್ಯಕ್ತವಾಗಿದೆ. ಇದನ್ನೆಲ್ಲ ನೋಡಲು ನೀನಿರಬೇಕಿತ್ತೇ ಸೌಂದರ್ಯವತಿ.

ಎಂಥಾ ವಿಚಿತ್ರ ನೋಡು, ನೀನು ಅತ್ತ ಹೋದ ಐದು ವರ್ಷದಲ್ಲಿ ಕನ್ನಡ ಚಿತ್ರರಂಗಕ್ಕೆ ಎಪ್ಪತ್ತೈದು ತುಂಬಿತು. ನಿನ್ನ ಅನುಪಸ್ಥಿತಿಯಲ್ಲಿ ಸಡಗರಪಡಬೇಕಾದ ದೌರ್ಭಾಗ್ಯ ಕನ್ನಡಿಗರದು. ನಿನ್ನನ್ನು ಆ ಪರಿ ಮೆರೆಸಿದ ಆಂಧ್ರಪ್ರದೇಶದಲ್ಲಿ ಚಿರಂಜೀವಿ ಹೊಸ ಪಕ್ಷ ಶುರು ಮಾಡಿ ಚುನಾವಣೆಗೆ ನಿಂತಿದ್ದಾರೆ. ನೀನಿದ್ದರೆ ಪ್ರಜಾರಾಜ್ಯಂ ಕಡೆ ವಾಲುತ್ತಿದ್ದೆಯೇನೋ. ಯಾರಿಗೆ ಗೊತ್ತು? ಆಂಧ್ರದಲ್ಲಿ ಚುನಾವಣೆಗೆ ನಿಂತಿದ್ದರೂ ಗೆದ್ದು ಬರಬಲ್ಲ ಜನಪ್ರಿಯತೆ, ಆಕರ್ಷಣೆ ನಿನಗಿತ್ತು. ನಿನ್ನೊಲುಮೆಯಿಂದ ಚಿರುಗೆ ಇನ್ನಷ್ಟು ಸೀಟ್‌ಗಳು ಸಿಗುವ ಸಾಧ್ಯತೆಗಳೂ ಇದ್ದವು. ಎಷ್ಟೊಂದು ಜನ ನಿನ್ನನ್ನು ಮಿಸ್ ಮಾಡಿಕೊಳ್ತಿದ್ದಾರೆ ಗೊತ್ತೆ?

ಏನಂಥ ಅರ್ಜೆಂಟಿತ್ತೇ ತಾಯಿ ನಿನಗೆ. ಹಾರುತ್ತ ಹೊರಟವಳು ದಿಢೀರನೇ ಕುಸಿದುಬಿಟ್ಟೆ. ದೋಷ ಹಾರುವ ವಿಮಾನದಲ್ಲೇ ಇದ್ದಿರಬಹುದು. ಆದರೆ, ಇಲ್ಲಿ ನಮ್ಮಗಳ ಎದೆಯಲ್ಲಿ ಎಂಥ ಆಘಾತವಾಯ್ತೆಂಬ ಪರಿವೆಯಾದರೂ ನಿನಗಿತ್ತೆ? ಸೌಂದರ್ಯ ಇನ್ನಿಲ್ಲ ಎಂಬ ಎರಡು ಸಾಲಿನ ಸುದ್ದಿಗೆ ಈ ಪರಿಯ ಆಘಾತ ತರುವ ಶಕ್ತಿ ಇದೆ ಎಂಬುದು ಅವತ್ತೇ ನಮಗೆ ಗೊತ್ತಾಗಿದ್ದು. ಅದೇ ಕೊನೆ, ಸೌಂದರ್ಯ ಎಂಬ ಹೆಸರು ದುಃಖದ ನೆನಪಾಗಿ, ಪಕ್ಕದ ಮನೆಯ ಹುಡುಗಿಯ ಮುಗ್ಧ ನಗೆಯ ಭಾವನೆಯಾಗಿ, ಮನಸ್ಸರಳಿಸಿದ್ದ ಕಲಾವಿದೆಯಾಗಿ ಉಳಿದುಬಿಟ್ಟಿತು. ಅವತ್ತಿನಿಂದ ನಾವೆಲ್ಲ, ಸೌಂದರ್ಯ ಎಂಬ ಶಬ್ದಕ್ಕೆ ಡಿಕ್ಷನರಿ ನೀಡುವ ಅರ್ಥವನ್ನೇ ಮರೆತುಬಿಟ್ಟೆವು ಕಣೇ.

ಬದುಕು ನಿನಗೇನು ಕಡಿಮೆ ಮಾಡಿತ್ತು ಸೌಂದರ್ಯ? ಚಿಕ್ಕ ವಯಸ್ಸಿಗೆ ಮನ್ನಣೆ ಕೊಟ್ಟಿತು. ಒಂದಲ್ಲ ಎರಡಲ್ಲ, ಐದು ಭಾಷೆಗಳ ಚಿತ್ರರಂಗದಲ್ಲಿ ನಿನ್ನ ಸೌಂದರ್ಯವನ್ನು, ಪ್ರತಿಭೆಯನ್ನು ಮೆರೆಸಿತು. ರಾಜಕೀಯದತ್ತ ನೀನು ಆಸಕ್ತಿ ತೋರಿದಾಗಲೂ ಯಾರೂ ಇಲ್ಲ ಅನ್ನಲಿಲ್ಲ. ಕಮಲದಂತೆ ಅರಳಲಿ ಸೌಂದರ್ಯ ಎಂದೇ ಹರಸಿತು. ನಿನ್ನ ಮನಸ್ಸಿನಲ್ಲಿ ಅದೇನು ನೋವಿತ್ತೋ, ಅದೇನು ಕೊರತೆಯಿತ್ತೋ, ಒಂದೂ ತೋರಗೊಡದೇ ಹೂವಿನಂತೆ ನಗುತ್ತಲೇ ಹೋದೆ. ಯಾರನ್ನೂ ನೀನು ಕೆರಳಿಸಲಿಲ್ಲ. ಎಲ್ಲರ ಮನಸ್ಸಲ್ಲೂ ಅರಳಿದ ಹೂವಾಗುಳಿದೆ.

೨೦೦೪ರ ಆ ಏಪ್ರಿಲ್ ೧೭ನ್ನು ನಾವು ಮರೆಯುವುದಾದರೂ ಹೇಗೆ ಸೌಂದರ್ಯ? ಆಗ ತಾನೆ ಬಿಸಿಲು ಬಲಿಯುತ್ತಿತ್ತು. ಆ ವರ್ಷದಲ್ಲೂ ಇದೇ ರೀತಿ ಚುನಾವಣೆ ಅಬ್ಬರ. ಜಕ್ಕೂರು ವಾಯುನೆಲೆಯಿಂದ ಪ್ರಚಾರಕ್ಕೆಂದು ಹಗುರ ವಿಮಾನ ಏರಿದ ನೀನು ಯಾರಿಗೆ ಭಾರವಾಗಿದ್ದೆಯೋ ಏನೋ. ಇದ್ದಕ್ಕಿದ್ದಂತೆ ವಿಮಾನ ನಿಯಂತ್ರಣ ಕಳೆದುಕೊಂಡು ಕುಸಿಯಿತು. ನೆಲಕ್ಕೆ ಅಪ್ಪಳಿಸಿತು. ಹೊತ್ತಿ ಉರಿಯಿತು. ಹೊರಬರಲು ಒಂಚೂರು ಅವಕಾಶ ದೊರೆತಿದ್ದರೂ ನೀನು ಬದುಕುಳಿಯುತ್ತಿದ್ದೆಯೇನೋ. ಆದರೆ, ವಿಧಿ ಅದಕ್ಕೆ ಅವಕಾಶ ಕೊಡಲಿಲ್ಲ. ಬಹುಶಃ ಅದಕ್ಕೆ ನಮ್ಮ ಮೇಲೆ ಸಿಟ್ಟಿತ್ತು ಅಂತ ಕಾಣುತ್ತೆ. ಹೊರಬರಬಹುದಾದ ಎಲ್ಲ ದಾರಿಯನ್ನೂ ಬಂದ್ ಮಾಡಿ ನಿನ್ನ ಬಲಿ ತೆಗೆದುಕೊಂಡಿತು.

ನಂತರ ಹರಿದಿದ್ದೆಲ್ಲ ಕಣ್ಣೀರೇ. ಒಂದು ವೇಳೆ ಇವೇ ಹನಿಹನಿ ಬಾಷ್ಪಗಳು ಉರಿಯುತ್ತಿದ್ದ ವಿಮಾನದ ಮೇಲೆ ಸುರಿದಿದ್ದರೆ, ಬಹುಶಃ ಬೆಂಕಿಯಾರಿ ಅಲ್ಲಿ ಪುಟ್ಟ ಕೊಳವೇ ನಿರ್ಮಾಣವಾಗುತ್ತಿತ್ತೇನೋ. ನೀನು ಮತ್ತೆ, ಅಗ್ನಿದಿವ್ಯದಿಂದ ಸೀತೆ ಹೊರಬಂದಂತೆ ಎದ್ದು ಬರುತ್ತಿದ್ದೆಯೇನೋ. ಆದರೆ, ದುರ್ವಿಧಿ ಅದಕ್ಕೆ ಅವಕಾಶ ಕೊಡಲಿಲ್ಲ ಸೌಂದರ್ಯ. ಏನು ಮಾಡುವುದು? ನಾವೆಲ್ಲ ಇದ್ದ ಜಾಗದಿಂದಲೇ ಹನಿಯಾದೆವು. ಮರುಗಿದೆವು. ನಲುಗಿಹೋದೆವು. ಕಳೆದ ಐದು ವರ್ಷಗಳಿಂದ, ನಿನ್ನ ನೆನಪಾದಾಗೆಲ್ಲ ಹೀಗೇ ಹನಿಯಾಗಿದ್ದೇವೆ, ಮರುಗಿದ್ದೇವೆ. ಪ್ರತಿಯೊಂದು ಹನಿಯೂ ನಿನ್ನ ನೆನಪಿನ ಗಿಡದ ಬೇರುಗಳನ್ನು ಬಲಗೊಳಿಸಿದೆ. ನಿನ್ನ ಚಿತ್ರವನ್ನು ದಟ್ಟವಾಗಿಸಿದೆ.

ನಾವು ಇನ್ನೇನು ತಾನೆ ಮಾಡಲು ಸಾಧ್ಯ ಸೌಂದರ್ಯ? ನಿನ್ನ ನೆನಪಿಸಿಕೊಳ್ಳುವುದನ್ನು ಬಿಟ್ಟು ನಾವು ಮಾಡುವುದಾದರೂ ಏನಿದೆ? ಕಳೆದ ಐದು ವರ್ಷಗಳ ಅವಧಿಯಲ್ಲಿ, ನಮ್ಮ ಬದುಕಿನಲ್ಲಿ ನಗು ಉಕ್ಕಿದಾಗ, ಕನಸುಗಳು ಮೊಳಕೆಯೊಡೆದಾಗ, ಕನ್ನಡ ಚಿತ್ರರಂಗ ಹೊಸ ದಾಖಲೆ ಬರೆದಾಗೆಲ್ಲ ನಿನ್ನ ನೆನಪಾಗಿದೆ. ನಿನ್ನ ಅನುಪಸ್ಥಿತಿ ಕಾಡಿದೆ. ಎಲ್ಲ ನಗುವಿನ ಆಳದಲ್ಲಿರುವ ವಿಷಾದದಂತೆ ನೀನು ನಮ್ಮೆದೆಯಲ್ಲಿ ಶಾಶ್ವತ ವಿಷಾದವಾಗಿ ಉಳಿದುಬಿಟ್ಟಿರುವೆ.

ಸುಂದರ ನಗುವಿನ ಒಡತಿಯೇ, ನಾವು ಇದಕ್ಕಿಂತ ಹೆಚ್ಚಿಗೆ ಏನು ಹೇಳಲು ಸಾಧ್ಯ? ಎಲ್ಲಿಯೇ ಇರು, ಹೇಗೇ ಇರು, ನಿನ್ನ ನಗು ಮಾಸದಿರಲಿ. ನಗುತ್ತ ಹೋದವಳು ನೀನು. ನಗುತ್ತಲೇ ಇರು. ನಮ್ಮ ಪಾಲಿಗೆ ನೀನು ಬಿಟ್ಟುಹೋಗಿರುವ ಗಾಢ ವಿಷಾದ ಆ ನಗೆಯಿಂದ ಕೊಂಚವಾದರೂ ಕಡಿಮೆಯಾಗಲಿ. ಹಾಗಂತ ಮನತುಂಬಿ ಹಾರೈಸುತ್ತೇವೆ.

- ಚಾಮರಾಜ ಸವಡಿ

ಮಾಮರವೂ ಇಲ್ಲ, ಕೋಗಿಲೆಯೂ ಇಲ್ಲ

0 ಪ್ರತಿಕ್ರಿಯೆ
ಹಣ್ಣುಗಳ ರಾಜ ಮತ್ತೆ ಬಂದಿದ್ದಾನೆ. ಬೆಂಗಳೂರಿನ ಬೀದಿಬೀದಿಗಳಲ್ಲಿ ಮಾವಿನಹಣ್ಣಿನದೇ ಪರಿಮಳ.

ಹಣ್ಣಿನ ಅಂಗಡಿಯ ಮುಂದೆ ನಿಂತರೆ ಕೊಪ್ಪಳ ಜಿಲ್ಲೆ ಅಳವಂಡಿಯ ನಮ್ಮ ಹೊಲದ ನೆನಪಾಗುತ್ತದೆ. ಇಪ್ಪತ್ತೈದು ವರ್ಷಗಳ ಹಿಂದೆ ನಮ್ಮ ಹೊಲದಲ್ಲಿ ಮೂರು ಭರ್ಜರಿ ಮಾವಿನ ಮರಗಳಿದ್ದವು. ಒಂದು ತುಂಬ ಹಳೆಯದು, ಒಂದು ಮಧ್ಯಮ ಹಾಗೂ ಇನ್ನೊಂದು ಸಣ್ಣ ವಯಸ್ಸಿನ ಮರ.

ದೊಡ್ಡ ಮರದಲ್ಲಿ ವರ್ಷಕ್ಕೆ ಹನ್ನೆರಡು ಸಾವಿರಕ್ಕಿಂತ ಹೆಚ್ಚು ಕಾಯಿಗಳು ಬರುತ್ತಿದ್ದವು. ಮಧ್ಯಮ ವಯಸ್ಸಿನ ಮರದಲ್ಲಿ ಏಳೆಂಟು ಸಾವಿರ ಹಾಗೂ ಚಿಕ್ಕ ಮರದಲ್ಲಿ ನಾಲ್ಕೈದು ಸಾವಿರ.

ಬೇಸಿಗೆ ರಜೆ ಬರುತ್ತಲೇ ಮನೆಯಲ್ಲಿ ಹೇಳದಿದ್ದರೂ ಮಾವಿನ ಮರದ ಹೊಲಗಳತ್ತ ಪೇರಿ ಕೀಳುತ್ತಿದ್ದೆವು. ನಮ್ಮದೇ ಹೊಲ, ನಮ್ಮವೇ ಮರ, ಎಷ್ಟು ಬೇಕಾದರೂ ಹಣ್ಣು ತಿನ್ನಬಹುದು. ಒಂದೇ ನಿರ್ಬಂಧನೆ ಎಂದರೆ, ಮರಗಳತ್ತ ಕಲ್ಲು ಬೀರಬಾರದು.

ಮರ ಕಾಯಲು ನೇಮಿಸಿರುತ್ತಿದ್ದ ವೃದ್ಧ, ಜೊತೆಗೆ ತನ್ನ ಮಗನನ್ನೂ ಕರೆತರುತ್ತಿದ್ದ. ಮುದುಕ ನೆರಳಲ್ಲಿ ಎಲೆಯಡಿಕೆ ಹಾಕಿಕೊಂಡು ಕೂತರೆ, ಮಗ ಮರ ಏರಿ ಗಿಣಿ ಕಚ್ಚಿದ ಹಣ್ಣುಗಳನ್ನು ಹುಡುಕುತ್ತಿದ್ದ. ನಾವು ಮರದ ಕೆಳಗೆ ತಲೆ ಎತ್ತಿಕೊಂಡು ಓಡಾಡುತ್ತ, ಆತ ಕೊಂಬೆಯಿಂದ ಕೊಂಬೆಗೆ ಸಾಗುವುದನ್ನೇ ನೋಡುತ್ತಿದ್ದೆವು. ’ಅಗೋ ಅಲ್ಲೊಂದಿದೆ, ಕೆಂಪಾಗಿದೆ, ಅದನ್ನು ಕಿತ್ತುಕೊಡೋ’ ಎಂದು ಗೋಗರೆಯುತ್ತ ಮಧ್ಯಾಹ್ನದವರೆಗೆ ಹೊಲದಲ್ಲೇ ಕಳೆಯುತ್ತಿದ್ದೆವು.

ಸಾಕಷ್ಟು ಹಣ್ಣುಗಳನ್ನು ತಿಂದು, ಮನೆಗೆಂದು ಸ್ವಲ್ಪ ಎತ್ತಿಟ್ಟುಕೊಂಡು ಊಟದ ಹೊತ್ತಿಗೆ ಊರು ಸೇರುತ್ತಿದ್ದೆವು. ಹುಳಿ-ಸಿಹಿ ಹಣ್ಣುಗಳ ಭೋಜನ ಸವಿದವರಿಗೆ ಮನೆಯ ಊಟ ಹಿಡಿಸುವುದಾದರೂ ಹೇಗೆ?

ಈಗ ಬೆಂಗಳೂರಿನ ಹಣ್ಣಿನ ಅಂಗಡಿಗಳ ಮುಂದೆ ನಿಂತರೆ, ಮಾವಿನ ವಾಸನೆ ಊರನ್ನು ನೆನಪಿಸುತ್ತದೆ. ಮಾವಿನ ಹಣ್ಣಿನ ಸೀಸನ್‌ನಲ್ಲಿ ನೂರಾರು ಹಣ್ಣುಗಳನ್ನು ಒಬ್ಬನೇ ತಿನ್ನುತ್ತಿದ್ದ ನನಗೆ ಕೆಜಿ ಲೆಕ್ಕದಲ್ಲಿ ಹಣ್ಣು ತರುವಾಗ ಮನಸ್ಸಿಗೆ ಎಂಥದೋ ಹಳಹಳಿ. ಆಗ ಊರು ನೆನಪಾಗುತ್ತದೆ. ಹೊಲ ನೆನಪಾಗುತ್ತದೆ. ಮಾವಿನ ಮರಗಳು ನೆನಪಾಗುತ್ತವೆ. ಘೋರ ಬಿಸಿಲಿನ ಮಧ್ಯೆಯೂ ಮರದ ಕೆಳಗೆ ತಂಪಿರುತ್ತಿತ್ತು. ಕೋಗಿಲೆಗಳು ಕೂಗುತ್ತಿದ್ದವು. ಮರದ ಕೊಂಬೆಗಳಲ್ಲಿ ಅದೃಶ್ಯನಾಗಿರುತ್ತಿದ್ದ ಆಳು ಎಸೆಯುತ್ತಿದ್ದ ಹಣ್ಣುಗಳು ಅಂತರಿಕ್ಷದಿಂದ ದೇವತೆಗಳು ಪ್ರಸಾದಿಸಿದ ಅಮೂಲ್ಯ ಫಲದಂತೆ ಭಾಸವಾಗುತ್ತಿದ್ದ ನೆನಪು ಒತ್ತರಿಸುತ್ತದೆ.

ನಮ್ಮ ಓದಿಗೆಂದು ಅಪ್ಪ ಮರಗಳನ್ನು ಮಾರಿಬಿಟ್ಟ. ಕೊಂಡವರು ಅವನ್ನು ಕಡಿದು ಸಾ ಮಿಲ್‌ಗಳಿಗೆ ಹೇರಿಕೊಂಡು ಹೋದರು. ನಾವು ನೌಕರಿ ಹುಡುಕಿಕೊಂಡು ಊರು ಬಿಟ್ಟೆವು. ಬದುಕು ಎಲ್ಲೆಲ್ಲಿಗೋ ಕರೆದುಕೊಂಡು ಬಂದಿತು.

ಈಗ ಮಾವಿನ ಹಣ್ಣುಗಳು ಇವೆ. ಆದರೆ, ಮರವಿಲ್ಲ, ಕೋಗಿಲೆಯಿಲ್ಲ. ಉಳಿದಿರುವುದು ಸುಂದರ ನೆನಪುಗಳು ಮಾತ್ರ.

- ಚಾಮರಾಜ ಸವಡಿ