ಬೃಹತ್‌ ಬ್ರಹ್ಮಾಂಡ ಎಂಬ ಬೊಗಳೆ!

22 Apr 2011

3 ಪ್ರತಿಕ್ರಿಯೆ
(ಝೀ ಕನ್ನಡ ವಾಹಿನಿ ನಡೆಸಿಕೊಡುವ ಬೃಹತ್‌ ಬ್ರಹ್ಮಾಂಡ ಎಂಬ ಬೊಗಳೆ ಕಾರ್ಯಕ್ರಮದ ವಿರುದ್ಧ ಸಂಪಾದಕೀಯ ಬ್ಲಾಗ್‌ http://sampadakeeya.blogspot.com/2011/04/blog-post_21.html#comments ಹಮ್ಮಿಕೊಂಡಿರುವ ಅಭಿಯಾನಕ್ಕೆ ನನ್ನ ವೈಯಕ್ತಿಕ ಬೆಂಬಲ ಈ ಪೋಸ್ಟ್. ಓದಿದವರು ಸಂಪಾದಕೀಯದ ಈ ಸಮಾಜಮುಖಿ ಕಾರ್ಯಕ್ರಮಕ್ಕೆ ಬೆಂಬಲ ಸೂಚಿಸಬೇಕೆಂದು ಮನವಿ ಮಾಡಿಕೊಳ್ಳುತ್ತಿದ್ದೇನೆ. ಸಂಪಾದಕೀಯದಲ್ಲಿ ಪ್ರಕಟವಾದ ಲೇಖನವನ್ನು, ಸಂಪಾದಕೀಯದ ಅನುಮತಿ ಕೋರುತ್ತ ಇಲ್ಲಿ ಯಥಾವತ್ತಾಗಿ ಪ್ರಕಟಿಸುತ್ತಿದ್ದೇನೆ. - ಚಾಮರಾಜ ಸವಡಿ)


ಜೀ ಕನ್ನಡ ವಾಹಿನಿ ಮುಖ್ಯಸ್ಥರಿಗೊಂದು ಬಹಿರಂಗ ಆಗ್ರಹ ಪತ್ರ

ಮಾನ್ಯರೆ, 
ಈ ಪತ್ರವನ್ನು ಅತ್ಯಂತ ನೋವು, ವಿಷಾದ, ಕಳವಳದಿಂದ ನಿಮಗೆ ಬರೆಯುತ್ತಿದ್ದೇವೆ. ಪತ್ರ ಓದಿದ ನಂತರವಾದರೂ ನೀವು ನಮ್ಮ ಭಾವನೆಗಳಿಗೆ ಸ್ಪಂದಿಸುತ್ತೀರೆಂಬ ನಂಬಿಕೆ ಇದೆ. ಲಕ್ಷ-ಕೋಟಿ ಜನರನ್ನು ತಲುಪುವ ಮೀಡಿಯಾಗಳು ಸಾಮಾಜಿಕ ಹೊಣೆಗಾರಿಕೆಯನ್ನು ನಿಭಾಯಿಸಬೇಕು. ಇದು ಕಾನೂನಿನ ಪರಿಭಾಷೆಗಳಿಗೆ ಮಾತ್ರ ಒಳಪಡುವ ವಿಷಯ ಎಂದು ಯಾರೂ ಭಾವಿಸಬೇಕಾಗಿಲ್ಲ, ಕಾನೂನನ್ನೂ ಮೀರಿದ ನೈತಿಕತೆ, ಮಾನವೀಯತೆಯ ಹೊಣೆಗಾರಿಕೆಯನ್ನೂ ಒಪ್ಪಿ ಅನುಸರಿಸಬೇಕಾಗುತ್ತದೆ. ತಾವು ಇಡೀ ಪತ್ರವನ್ನು ಓದಿ, ಸೂಕ್ತ, ಅತ್ಯಗತ್ಯ, ಸಕಾಲಿಕ ನಿರ್ಧಾರಕ್ಕೆ ಬರುವಿರೆಂಬ ನಂಬುಗೆ ನಮಗಿದೆ.


ನಮ್ಮ ತಕರಾರು, ಸಿಟ್ಟು, ಆತಂಕ ಇರುವುದು ನಿಮ್ಮ ವಾಹಿನಿಯಲ್ಲಿ ಪ್ರತಿನಿತ್ಯ ಬೆಳಿಗ್ಗೆ ೯ ಗಂಟೆಗೆ ಪ್ರಸಾರವಾಗುವ ಬೃಹತ್ ಬ್ರಹ್ಮಾಂಡ ಎಂಬ ಜ್ಯೋತಿಷ್ಯ ಸಂಬಂಧಿ ಕಾರ್ಯಕ್ರಮದ ಕುರಿತು. ಈ ಕಾರ್ಯಕ್ರಮವನ್ನು ನಡೆಸಿಕೊಡುವವರು ಶ್ರೀ ನರೇಂದ್ರ ಬಾಬು ಶರ್ಮ ಎಂಬುವವರು. ಇವರು ನಿಮ್ಮ ಚಾನಲ್‌ನಲ್ಲಿ ಕಾರ್ಯಕ್ರಮ ನಡೆಸಿಕೊಡುವುದಕ್ಕೆ ಮುನ್ನ ಸುವರ್ಣ ವಾಹಿನಿಯಲ್ಲಿ ಭವ್ಯ ಬ್ರಹ್ಮಾಂಡ ಎಂಬ ಹೆಸರಿನಲ್ಲಿ, ಅದಕ್ಕೂ ಮುನ್ನ ಕಸ್ತೂರಿ ವಾಹಿನಿಯಲ್ಲಿ ಬ್ರಹ್ಮಾಂಡ ಎಂಬ ಹೆಸರಿನಲ್ಲಿ ಇದೇ ಸ್ವರೂಪದ ಕಾರ್ಯಕ್ರಮಗಳನ್ನು ನಡೆಸಿಕೊಡುತ್ತಿದ್ದರು. ಬಹಳಷ್ಟು ಜನರಿಗೆ ಗೊತ್ತಿರುವ ಪ್ರಕಾರ ತೀರಾ ಇತ್ತೀಚಿನವರೆಗೆ ನರೇಂದ್ರ ಶರ್ಮ ಅವರು ಕನ್ನಡ ಸಿನಿಮಾಗಳಲ್ಲಿ ಜೂನಿಯರ್ ಆರ್ಟಿಸ್ಟ್ ಆಗಿದ್ದವರು.


ನರೇಂದ್ರ ಶರ್ಮ ಅವರು ಕಸ್ತೂರಿ ವಾಹಿನಿ ಹಾಗು ಸುವರ್ಣ ವಾಹಿನಿಗಳಲ್ಲಿ ಬ್ರಹ್ಮಾಂಡ ನಡೆಸುತ್ತಿದ್ದಾಗಲೇ ಅವರು ಬಳಸುವ ಭಾಷೆ, ಹೇಳುವ ಹಸಿಹಸಿ ಸುಳ್ಳುಗಳು ಮಾನವಂತರ, ಪ್ರಜ್ಞಾವಂತರ ಆಕ್ರೋಶಕ್ಕೆ ಕಾರಣವಾಗಿತ್ತು. ಮಹಿಳೆಯರನ್ನು ವಿನಾಕಾರಣ ನಿಂದಿಸುವುದು-ಅವಹೇಳನ ಮಾಡುವುದು, ಕೆಳಜಾತಿಯ ಜನರನ್ನು ಗುರಿಪಡಿಸಿ ತಿರಸ್ಕಾರದಿಂದ ಮಾತನಾಡಿ ಅಪಮಾನಿಸುವುದು, ಜ್ಯೋತಿಷ್ಯದ ಹೆಸರಿನಲ್ಲಿ ಸುಳ್ಳುಗಳ ಕಂತೆ ಕಟ್ಟಿ ಜನರನ್ನು ಬೆದರಿಸುವುದು ಇವರು ಹಿಂದಿನಿಂದ ಮಾಡಿಕೊಂಡು ಬಂದಿರುವ ಕೆಲಸ. ಅದನ್ನು ಅವರು ನಿಮ್ಮ ಜೀ ವಾಹಿನಿಯಲ್ಲೂ ಮಾಡುತ್ತಿದ್ದಾರೆ ಹಾಗು ಅದು ಈಗ ಅತಿರೇಕಕ್ಕೆ ತಲುಪಿದೆ.


ನಿಮ್ಮ ಜೀ ವಾಹಿನಿಯ ವೇದಿಕೆಯನ್ನು ಬಳಸಿಕೊಂಡು ನರೇಂದ್ರ ಶರ್ಮ ಏನೇನು ಮಾತನಾಡಿದ್ದಾರೆ ಎಂಬುದಕ್ಕೆ ಕೆಲವು ಸ್ಯಾಂಪಲ್‌ಗಳನ್ನು ಇಲ್ಲಿ ಒದಗಿಸುತ್ತಿದ್ದೇವೆ. ದಯವಿಟ್ಟು ಗಮನವಿಟ್ಟು ಓದಬೇಕಾಗಿ ವಿನಂತಿ.

೧. ನಾನು ಜಗನ್ಮಾತೆಯ ಪುತ್ರ. ಆಕೆ ಮೇ.೧೨ರಂದು ಭೂಮಿಗೆ ಬರುತ್ತಿದ್ದಾಳೆ. ಬಂದವಳು ಭೂಮಿಯನ್ನು ನಾಶಪಡಿಸುತ್ತಾಳೆ. ನಾನು ಇದನ್ನು ಘೋಷಿಸಿರುವುದರಿಂದ, ಜಗನ್ಮಾತೆ ನನ್ನ ಮಾತು ಉಳಿಸುವ ದೃಷ್ಟಿಯಿಂದಲಾದರೂ ಪ್ರಳಯ ನಡೆಸುತ್ತಾಳೆ.

೨. ಕರ್ನಾಟಕದ ಯಾವ ದೇವಸ್ಥಾನಗಳಲ್ಲೂ ದೇವರಿಲ್ಲ. ಕರ್ನಾಟಕದಲ್ಲಿ ಸಾಧು ಸಂತರು ಮಾತ್ರ ಇದ್ದಾರೆ. ದೇವರು ಇರುವುದೆಲ್ಲ ತಮಿಳುನಾಡಿನಲ್ಲಿ. ಅಲ್ಲಿನ ಧರ್ಮಕ್ಷೇತ್ರಗಳಲ್ಲಿ. ಹಾಗಾಗಿ ನಾನು ತಮಿಳುನಾಡಿನ ದೇವಸ್ಥಾನಗಳಿಗೆ ಹೋಗುವಂತೆ ಭಕ್ತರಿಗೆ ಹೇಳುತ್ತೇನೆ.

೩. ಹೆಣ್ಣು ಮಕ್ಕಳು ನೈಟಿ ತೊಡಬಾರದು. ಸಲ್ವಾರ್ ಕಮೀಜ್ ಹಾಕಿದರೆ ಗರ್ಭಕೋಶದ ಕ್ಯಾನ್ಸರ್ ಬರುತ್ತೆ. ರಾತ್ರಿ ಗಂಡನ ಜತೆ ಮಲಗಿ ಬೆಳಿಗ್ಗೆ ಎದ್ದ ಕೂಡಲೇ ಅಡುಗೆ ಮನೆಗೆ ಹೋಗಬಾರದು. ಹೆಣ್ಣು ಮಕ್ಕಳು ಮನೆಯಲ್ಲಿ ಇದ್ದರೆ ಲಕ್ಷಣ. ಅಗಲವಾದ ಬಿಂದಿ ಇಟ್ಟುಕೊಳ್ಳಬೇಕು. ಇಲ್ಲವಾದಲ್ಲಿ ಬೂಬಮ್ಮಗಳ ಹಾಗೆ ಕಾಣುತ್ತೀರಿ. (ಬೂಬಮ್ಮ ಎಂದರೆ ಮುಸ್ಲಿಂ ಹೆಂಗಸು)

೪. ಬೆಳಿಗ್ಗೆ ಎದ್ದ ಕೂಡಲೇ ಪೊರಕೆಯನ್ನು, ಹಜಾಮರ ಮುಖವನ್ನು ನೋಡಬಾರದು. ನೋಡಿದರೆ ಕೆಟ್ಟದಾಗುತ್ತದೆ.

೫. ಇಡೀ ಜಗತ್ತು ಮುಳುಗಿ ಹೋಗುತ್ತದೆ, ಬೆಳಗಾವಿಯ ಒಂದು ಹಳ್ಳಿ ಮಾತ್ರ ಉಳಿದುಕೊಳ್ಳುತ್ತದೆ. ಪಾಪಿಗಳು ಮಾಡಿದ ತಪ್ಪಿಗಾಗಿ ಪಾಪಿಗಳಲ್ಲದವರೂ ನಾಶವಾಗುತ್ತಾರೆ.

೬. ಹಾವು ಎಂದರೆ ದೇವರು. ಜಪಾನ್ ದೇಶದವರು ಹಾವು ತಿನ್ನುತ್ತಾರೆ, ಅದಕ್ಕೆ ಸುನಾಮಿ ಬಂದಿದ್ದು.

ಇವು ಕೆಲವು ಸ್ಯಾಂಪಲ್‌ಗಳು ಮಾತ್ರ. ಈತನ ಇನ್ನಷ್ಟು ಭಯಾನಕ ಉಪದೇಶಗಳ ಕುರಿತು ಈ ಹಿಂದೆ ಇದೇ ಬ್ಲಾಗ್ ನಲ್ಲಿ ಪ್ರಸ್ತಾಪಿಸಿದ್ದೇವೆ. ಒಮ್ಮೆ ಓದಿ ನೋಡಲು ವಿನಂತಿ.  ಈ ಬಗೆಯ ದುರ್ಬೋಧನೆಗಳನ್ನು ನೀಚಾತಿನೀಚರಷ್ಟೆ ಸಮರ್ಥಿಸಿಕೊಳ್ಳಬಹುದು. ಹೀಗಾಗಿ ನೀವು ಇವುಗಳನ್ನೆಲ್ಲ ಒಪ್ಪಲಾರಿರಿ ಎಂದು ನಮ್ಮ ನಂಬಿಕೆ. ನರೇಂದ್ರ ಶರ್ಮ ಬಳಸುವ ಭಾಷೆ ಎಷ್ಟು ಕೊಳಕಾಗಿದೆಯೆಂದರೆ ಆತ ಪದೇಪದೇ ಮುಂಡೇವು, ಮುಂಡೆ (ಗಂಡ ಸತ್ತ ಹೆಂಗಸು), ಕಳ್ ನನ್ ಮಕ್ಕಳು, ಗೂಬೆ, ಗುಗ್ಗು, ದರಿದ್ರದವು.. ಇತ್ಯಾದಿ ಪದಗಳನ್ನೇ ಬಳಸುತ್ತಾರೆ. ವೇದೋಪನಿಷತ್ತುಗಳನ್ನು ಓದಿದ ವ್ಯಕ್ತಿ ಇಷ್ಟು ಅಸಭ್ಯವಾದ ಭಾಷೆಯಲ್ಲಿ ಸಾರ್ವಜನಿಕವಾಗಿ ಮಾತನಾಡಲು ಸಾಧ್ಯವೇ?

ಕಪಟ ಜ್ಯೋತಿಷಿಗಳು ಹರಡುವ ಮೂಢನಂಬಿಕೆಗಳ ಕುರಿತು ಸ್ವಾಮಿ ವಿವೇಕಾನಂದರು ಹೀಗೆ ಹೇಳಿದ್ದರು:
 ಜ್ಯೋತಿಷ್ಯ ಮುಂತಾದುವನ್ನು ಹೇಳಿ ಉದರಪೋಷಣೆ ಮಾಡಿಕೊಳ್ಳುವವರ ಹತ್ತಿರ ಸಂಬಂಧವನ್ನು ಇಟ್ಟುಕೊಳ್ಳಕೂಡದು ಎನ್ನುವನು ಬುದ್ಧ. ಅವನಿಗೆ ಇದರ ರಹಸ್ಯ ಚೆನ್ನಾಗಿ ಗೊತ್ತಾಗಿರಬೇಕು. ತಾರೆಯೊಂದು ನನ್ನ ಜೀವನದ ಮೇಲೆ ತನ್ನ ಪ್ರಭಾವವನ್ನು ಬೀರಿ ವ್ಯಥೆಯನ್ನು ತಂದರೆ ನನ್ನ ಜೀವನ ಕುರುಡು ಕಾಸಿಗೂ ಯೋಗ್ಯವಲ್ಲ. ಜ್ಯೋತಿಷ್ಯ ಮುಂತಾದ ರಹಸ್ಯಗಳನ್ನೆಲ್ಲಾ ನೆಚ್ಚುವುದು ದೌರ್ಬಲ್ಯದ ಚಿಹ್ನೆ. ಈ ಸ್ವಭಾವ ನಿಮ್ಮ ಮನಸ್ಸಿನಲ್ಲಿ ಬಲವಾಗುತ್ತಿದ್ದರೆ ನೀವು ಒಬ್ಬ ವೈದ್ಯನನ್ನು ನೋಡಿ; ಒಳ್ಳೆಯ ಆಹಾರ ಮತ್ತು ವಿಶ್ರಾಂತಿಯನ್ನು ತೆಗೆದುಕೊಳ್ಳಿ..... ಜ್ಯೋತಿಷ್ಯ ಮುಂತಾದವುಗಳಲ್ಲೆಲ್ಲಾ ಸ್ವಲ್ಪ ಸತ್ಯಾಂಶವಿದ್ದರೂ ಅದನ್ನು ನಾವು ನಿರ್ಲಕ್ಷ್ಯದಿಂದ ನೋಡಬೇಕು..... ಮೂಢಭಾವನೆಗಳು ನಾಯಿಕೊಡೆಯಂತೆ ನಮ್ಮ ದೇಶದಲ್ಲಿ ಹಬ್ಬುತ್ತಿವೆ. ವಿಚಾರ ಮಾಡದ ಸ್ತ್ರೀಯರು ಇನ್ನೂ ಸ್ವಾತಂತ್ರ್ಯಕ್ಕೆ ಹೋರಾಡುತ್ತಿರುವರು. ಒಬ್ಬ ಹಣಕ್ಕಾಗಿ ಮತ್ತೊಬ್ಬರನ್ನು ಮೋಸ ಮಾಡಿದರೆ ಅವನನ್ನು ಮೋಸಗಾರ ಎನ್ನುವಿರಿ. ಇತರರನ್ನು ಅಧ್ಯಾತ್ಮಿಕ ದೃಷ್ಟಿಯಿಂದ ಪಾಪಿಗಳು ಎಂದು ಮೋಸಗೊಳಿಸುವವರು ಎಂತಹ ಪಾಪಿಗಳಿರಬೇಕು? ಇದು ಪರಮಪಾತಕ. ಸತ್ಯ ನಿಮ್ಮನ್ನು ಧೀರರನ್ನಾಗಿ ಮಾಡಬೇಕು; ಮೌಢ್ಯತೆಯಿಂದ ಪಾರಾಗುವಂತೆ ಮಾಡಬೇಕು. ಇದೇ ಸತ್ಯದ ಪರೀಕ್ಷೆ.... ಬೇಕಾದರೆ ತಾರೆಗಳನ್ನು ನಿಮ್ಮ ಬೊಗಸೆಯಿಂದ ಎತ್ತಿ ನುಂಗಿಹಾಕಬಹುದು. ನಿಮ್ಮ ನೈಜಸ್ವಭಾವ ಅಂತಹುದು. ಧೀರರಾಗಿ, ಎಲ್ಲಾ ವಿಧದ ಮೂಢನಂಬಿಕೆಗಳಿಂದ ಪಾರಾಗಿ, ಮುಕ್ತರಾಗಿ.
ಇವತ್ತು ನಿಮ್ಮ ಚಾನಲ್ ಮೂಲಕ ನರೇಂದ್ರ ಶರ್ಮ ಅವರು ಇಡೀ ಕರ್ನಾಟಕವನ್ನು ಮೌಢ್ಯದಲ್ಲಿ ಮುಳುಗಿಸಲು ಯತ್ನಿಸುತ್ತಿದ್ದಾರೆ. ಅಮೆರಿಕದ ಕೆಲವು ಸ್ವತಂತ್ರ ಕ್ರಿಶ್ಚಿಯನ್ ಗುಂಪುಗಳು ಹರಡುತ್ತಿರುವ ಪ್ರಳಯದ ಥಿಯರಿಗಳನ್ನೇ (http://www.coffetoday.com/the-doomsday-is-on-may-21-2011/907618/
http://www.allvoices.com/contributed-news/8599025-worlds-doomsday-fixed-for-6-pm-on-21st-may-2011)  ಕದ್ದು ತಂದು, ಅವುಗಳನ್ನು ಜಗನ್ಮಾತೆಯ ಹೆಸರಿನಲ್ಲಿ ಬದಲಾಯಿಸಿ, ಈ ವರ್ಷವೇ ಪ್ರಳಯವಾಗುತ್ತದೆ ಎಂದು ಭೀತಿ ಸೃಷ್ಟಿಸುತ್ತಿದ್ದಾರೆ. ಪ್ರಳಯವನ್ನು ತಪ್ಪಿಸಲು ಸಾಧ್ಯವಿರುವುದು ನನಗೆ ಮಾತ್ರ, ಹೀಗಾಗಿ ನಾನು ಹೇಳಿದಂತೆ ಕೇಳಿ ಎಂದು ಜನರನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಳ್ಳಲು ಯತ್ನಿಸುತ್ತಿದ್ದಾರೆ.

ಹಿಂದೆ ಕಸ್ತೂರಿ ವಾಹಿನಿಯಲ್ಲಿದ್ದಾಗ ಸಹ ಲೋಕ ಕಲ್ಯಾಣ, ಇತ್ಯಾದಿ ಬೊಗಳೆ  ಮಾತುಗಳನ್ನು ಹೇಳಿ ಅರಮನೆ ಮೈದಾನದಲ್ಲಿ ದೊಡ್ಡ ಯಾಗವೊಂದನ್ನು ನಡೆಸಿದ ನರೇಂದ್ರ ಶರ್ಮ ಅವರು ಇದಕ್ಕಾಗಿ ಕೋಟ್ಯಂತರ ರೂಪಾಯಿ ಹಣವನ್ನು ಮುಗ್ಧ, ಅಮಾಯಕ ಜನಸಾಮಾನ್ಯರಿಂದ ಪಡೆದಿದ್ದರು. ಎಷ್ಟು ಹಣ ಪಡೆದಿದ್ದೀರಿ, ಸ್ವಲ್ಪ ಲೆಕ್ಕ ಕೊಡಿ ಎಂದು ಪತ್ರಕರ್ತರು ಪತ್ರಿಕಾಗೋಷ್ಠಿಯೊಂದರಲ್ಲಿ ಕೇಳಿದಾಗ ನರೇಂದ್ರ ಶರ್ಮ ಗೋಷ್ಠಿಯನ್ನೇ ನಿಲ್ಲಿಸಿ ಹೊರಟುಹೋಗಿದ್ದರು. ನರೇಂದ್ರ ಶರ್ಮ ಅವರು ಸಾರ್ವಜನಿಕರ ದೇಣಿಗೆ ಪಡೆಯಲೆಂದೇ ಎರಡು ಟ್ರಸ್ಟ್‌ಗಳನ್ನು ರಚಿಸಿಕೊಂಡಿದ್ದಾರೆ. ಈ ಟ್ರಸ್ಟ್‌ಗಳಿಗೂ ನಿಮ್ಮ ಚಾನಲ್‌ಗಳಿಗೂ ಯಾವ ಸಂಬಂಧವಿರುವುದಿಲ್ಲ. ಪ್ರಚಾರಕ್ಕೆ ನಿಮ್ಮ ಚಾನಲ್‌ಗಳು, ಹಣ ವಸೂಲಿಗೆ ಪ್ರತ್ಯೇಕ ವ್ಯವಸ್ಥೆ ಕಲ್ಪಿಸುವ ಟ್ರಸ್ಟ್‌ಗಳು! ಈ ದುರ್ ವ್ಯವಹಾರ ನಿಲ್ಲಿಸಲು ನೀವು ಹೇಳಿದರೆ, ಅವರು ಚಾನಲ್ ಬದಲಾಯಿಸುತ್ತಾರೆ.  ಬ್ರಹ್ಮಾಂಡ, ಭವ್ಯ ಬ್ರಹ್ಮಾಂಡ, ಬೃಹತ್ ಬ್ರಹ್ಮಾಂಡ ಆಯಿತು, ಇನ್ನು ಸೂಪರ್ ಬ್ರಹ್ಮಾಂಡ ಸೃಷ್ಟಿಯಾಗಬಹುದು ಅಷ್ಟೆ.

ಇಂಥ ಕಾರ್ಯಕ್ರಮ ಬೇಕೆ ಎಂದು ನೀವು ಯೋಚಿಸಲೇಬೇಕಾದ ಸಮಯವಿದು. ನಿಜ, ಈ ಕಾರ್ಯಕ್ರಮದಿಂದ ನಿಮಗೆ ಟಿಆರ್‌ಪಿ ಹೆಚ್ಚಾಗಿರಬಹುದು. ಆದರೆ ಜನ ಹೆಚ್ಚು ನೋಡುತ್ತಾರೆ ಎಂಬ ಕಾರಣಕ್ಕೆ ಅದು ಶ್ರೇಷ್ಠವಾದ ಕಾರ್ಯಕ್ರಮ ಎಂದು ಭಾವಿಸುವುದು ಮೂರ್ಖತನ. ಬೀದಿಯಲ್ಲಿ ಒಬ್ಬ ಹುಚ್ಚ ವಿಚಿತ್ರವಾಗಿ ಮಾತನಾಡುತ್ತ, ಬಟ್ಟೆ ಬಿಚ್ಚಿಕೊಂಡು ಓಡಾಡುತ್ತಿದ್ದರೆ ಆತನನ್ನು ಎಲ್ಲರೂ ನೋಡುತ್ತಾರೆ. ಮಾಮೂಲಿಯಂತೆ ಓಡಾಡುವ ನಮ್ಮ, ನಿಮ್ಮನ್ನು ಯಾರೂ ಗಮನಿಸುವುದಿಲ್ಲ. ಎಲ್ಲರೂ ನೋಡುತ್ತಾರೆ ಅನ್ನುವ ಕಾರಣಕ್ಕೆ ಬೆತ್ತಲೆ ಹುಚ್ಚನನ್ನು ಪ್ರೋತ್ಸಾಹಿಸುವುದು ಸರಿಯೇ? ಬೆತ್ತಲೆ ಓಡಾಡುವ ಹುಚ್ಚನಿಗೆ ಬಟ್ಟೆ ಕೊಡಿಸಿ, ಯಾವುದಾದರೂ ಆಸ್ಪತ್ರೆಗೆ ಸೇರಿಸುವ ಕೆಲಸ ಮಾಡಬೇಕೇ ಹೊರತು, ಹುಚ್ಚನೇ ಶ್ರೇಷ್ಠ ಎಂದು ಭಾವಿಸಬೇಕಾಗಿಲ್ಲ. ಒಬ್ಬ ಹುಚ್ಚನನ್ನು ಸಹಿಸಿಕೊಂಡ ಪರಿಣಾಮ ಈಗ ಬೀದಿ ತುಂಬ ಹುಚ್ಚರು ಸೇರಿಬಿಡುತ್ತಾರೆ. ಆ ಅಪಾಯವನ್ನೂ ನಾವು ಎದುರಿಸುತ್ತಿದ್ದೇವೆ.

ಇದೆಲ್ಲವನ್ನೂ ಗಮನಿಸಿ ತಾವು ದಯಮಾಡಿ ನರೇಂದ್ರ ಶರ್ಮ ಅವರ ಬ್ರಹತ್ ಬ್ರಹ್ಮಾಂಡ ಕಾರ್ಯಕ್ರಮವನ್ನು ಈಗಿಂದೀಗಲೇ ಸ್ಥಗಿತಗೊಳಿಸಬೇಕು ಎಂದು ಆಗ್ರಹಿಸುತ್ತೇವೆ. ಈ ಕಾರ್ಯಕ್ರಮ ಅನೈತಿಕ, ಅಪ್ರಜಾಸತ್ತಾತ್ಮಕ, ಮಾನವ ವಿರೋಧಿಯಾಗಿದೆ.

ಇದನ್ನು ನಾವು ನಿಮ್ಮ ಬೇಡಿಕೆ ಎಂದು ಹೇಳುತ್ತಿಲ್ಲ, ಆಗ್ರಹ ಎಂದೇ ಹೇಳುತ್ತಿದ್ದೇವೆ. ಯಾಕೆಂದರೆ ಇದು ಕಾನೂನು ಪ್ರಕಾರವೂ ಅಪರಾಧ. ನೀವು ಹಾಗು ನರೇಂದ್ರ ಶರ್ಮ ಸರ್ಕಾರ ರಚಿಸಿರುವ ನಿಯಮಾವಳಿಗಳನ್ನು ಗಾಳಿಗೆ ತೂರಿರುವುದು ಸ್ಪಷ್ಟ.

ನಿಮಗೆ ಚೆನ್ನಾಗಿ ಗೊತ್ತಿದೆ. ಭಾರತ ಸರ್ಕಾರದ ವಾರ್ತಾ ಮತ್ತು ಪ್ರಸಾರ ಇಲಾಖೆ ಸಿದ್ಧಪಡಿಸಿರುವ ಮಾರ್ಗಸೂಚಿಗಳನ್ನು ನೀವು ತಪ್ಪದೇ ಪಾಲಿಸಬೇಕು. ಮಾರ್ಗಸೂಚಿಗಳನ್ನು ಅಲಕ್ಷ್ಯ ಮಾಡಿದ ಎಂಟಿವಿ, ಟಿವಿ೫ ಮುಂತಾದ ಚಾನಲ್‌ಗಳನ್ನು ಶಿಕ್ಷಿಸಲಾಗಿರುವ ಉದಾಹರಣೆಗಳೂ ನಮ್ಮ ಮುಂದಿವೆ. ಟಿವಿಗಳಲ್ಲಿ ಪ್ರಸಾರವಾಗುವ ಕಾರ್ಯಕ್ರಮಗಳು ಒಟ್ಟು ೧೩ ವಿವಿಧ ಕಾಯ್ದೆಗಳ ವ್ಯಾಪ್ತಿಗೆ ಒಳಪಡುತ್ತವೆ. ಹೀಗಾಗಿ ತಮಗೆ ಕಾನೂನಿನ ಹೊಣೆಗಾರಿಕೆಯೂ ಇದೆ. ಅವುಗಳನ್ನು ನಿಮಗೆ ನೆನಪಿಸಲು ಯತ್ನಿಸುತ್ತೇವೆ.

ಕಾಯ್ದೆಗಳು ಹೀಗಿವೆ.

1. Cable Television Network (Regulation) Act, 1995 and Certification Rules there under.
2. Drugs and Cosmetics Act, 1940.
3. Emblems and Names (Prevention of Improper Use) Act, 1950.
4. Drugs (Control) Act 1950.
5. Drugs and Magic Remedies (Objectionable Advertisements) Act, 1954.
6. Prevention of Food & Adulteration Act, 1954.
7. Prize Competitions Act, 1955.
8. Indecent Representation of Women (Prohibition) Act, 1986.
9. Trade and Merchandise Marks, Act 1999.
10. Copyright Act, 1957.
11. Cigarette and other Tobacco Products Act 2003.
12. Consumer Protection Act, 1986.
13. The Prevention of Cruelty to Animals Act, 1960

ಪ್ರಸಾರ ವೇಳೆ ಕಾನೂನು ಉಲ್ಲಂಘನೆಯನ್ನು ಮೂರು ಹಂತದಲ್ಲಿ ವಿಚಾರಣೆಗೆ ಒಳಪಡಿಸಬಹುದು. ಮೂರನೆ ಹಂತದಲ್ಲಿ ಸರಕಾರ ನೇಮಿಸಿದ ಸಮಿತಿ ಚಾನೆಲ್ ಮುಖ್ಯಸ್ಥ ತಪ್ಪಿತಸ್ಥ ಎಂದು ಕಂಡುಬಂದರೆ, ಪ್ರಸ್ತುತ ಕಾರ್ಯಕ್ರಮವನ್ನು ಪ್ರಸರಣ ಮಾಡದಂತೆ ನಿರ್ದೇಶಿಸಬಹುದು, ಕ್ಷಮಾಪಣೆಯನ್ನು ಬಿತ್ತರಿಸುವಂತೆ ಹೇಳಬಹುದು ಹಾಗೂ ದಂಡ ವಿದಿಸಬಹುದು. ಈ ಪ್ರಕ್ರಿಯೆಗೆ ದೂರು ದಾಖಲಿಸುವುದು ಮುಖ್ಯ.ಮಾರ್ಗಸೂಚಿ ಸ್ಪಷ್ಟ ಮಾತುಗಳಲ್ಲಿ ಕಾರ್ಯಕ್ರಮಗಳಲ್ಲಿ ಅವಹೇಳನಕಾರಿ ಭಾಷೆ, ಜಾತಿ ನಿಂದನೆ, ಮೂಢನಂಬಿಕೆ ವೈಭವೀಕರಣ ಹಾಗೂ ಜನರನ್ನು ದಿಕ್ಕುತಪ್ಪಿಸುವುದನ್ನು ಖಂಡಿಸುತ್ತದೆ.

ಕಂಟೆಂಟ್ ಸರ್ಟಿಫಿಕೇಷನ್ ನಿಯಮಾವಳಿ ೨೦೦೮ ಪ್ರಕಾರ ಯಾವುದೇ ನಿರ್ದಿಷ್ಟ ಜಾತಿ, ಕೋಮು ಅಥವಾ ನಂಬಿಕೆ ವಿರುದ್ಧ ಮಾತನಾಡುವುದು ಅಪರಾಧ. ಜೊತೆಗೆ ಯಾವುದೇ ಒಂದು ಆಚರಣೆಯನ್ನು ಶ್ರೇಷ್ಠ ಅಥವಾ ಕನಿಷ್ಟ ಎಂದು ಬಿಂಬಿಸುವಂತಿಲ್ಲ. ಹಾಗೆಯೇ ಲಿಂಗ ಅಸಮಾನತೆಯನ್ನು ಹೇಳುವಂತಿಲ್ಲ.

ನಿಮ್ಮ ಬೃಹತ್ ಬ್ರಹ್ಮಾಂಡ ಕಾರ್ಯಕ್ರಮ ಈ ಎಲ್ಲ ಕಾಯ್ದೆಗಳನ್ನು ಉಲ್ಲಂಘಿಸಿರುವುದು ಸ್ಪಷ್ಟ. ಈ ಕಾರ್ಯಕ್ರಮ ಸ್ತ್ರೀಯರನ್ನು ಕೆಟ್ಟದಾಗಿ ಚಿತ್ರಿಸುತ್ತದೆ. ಹಜಾಮರನ್ನು ನೋಡಬಾರದು ಎನ್ನುವ ಮೂಲಕ ಅಸ್ಪೃಶ್ಯತೆಯನ್ನು ಪ್ರಚಾರ ಮಾಡುತ್ತಿದೆ. ಜನರಲ್ಲಿ ಪ್ರಳಯದ ಭೀತಿಯನ್ನು ಸೃಷ್ಟಿಸುತ್ತಿದೆ. ಮಾಂಸಾಹಾರಿಗಳನ್ನು ಈತ ಕೀಳಾಗಿ ನಿಂದಿಸುವ ಮೂಲಕ ಜನಾಂಗೀಯ ನಿಂದನೆಯನ್ನು ಈ ಕಾರ್ಯಕ್ರಮ ಪೋಷಿಸುತ್ತಿದೆ.

ಭಾರತದ ಸಂವಿಧಾನವು ಜನರಲ್ಲಿ ವೈಜ್ಞಾನಿಕ ಮನೋಭಾವ ಹೆಚ್ಚಾಗಬೇಕು ಎನ್ನುತ್ತದೆ. ಆಧುನಿಕ ಕಾಲಘಟ್ಟದಲ್ಲಿ ನಾವು ಇನ್ನೂ ಕಂದಾಚಾರಗಳ ನರಕದಲ್ಲೇ ಕೊಳೆಯುತ್ತಿದ್ದೇವೆ. ಈ ಕೆಟ್ಟ ಬೆಳವಣಿಗೆಯನ್ನು ಟಿವಿ ಚಾನಲ್‌ಗಳು ನಿರಂತರವಾಗಿ ಪೋಷಿಸುತ್ತಿವೆ. ಈ ನಿಟ್ಟಿನಲ್ಲಿ ನಿಮ್ಮ ಚಾನಲ್ ಸೇರಿದಂತೆ ಎಲ್ಲ ಚಾನಲ್‌ಗಳು ಟಿಆರ್‌ಪಿ ಆಸೆಗೆ ಬಲಿಬೀಳದೆ ಕಾಲದ ಅಗತ್ಯಕ್ಕೆ ತಕ್ಕಂಥ, ಮನುಷ್ಯರನ್ನು ಎಲ್ಲ ಮೌಢ್ಯಗಳಿಂದ ಬಿಡುಗಡೆಗೊಳಿಸುವ ಕಾರ್ಯಕ್ರಮಗಳನ್ನು ಪ್ರಸಾರ ಮಾಡುವ ಅಗತ್ಯವಿದೆ.

ಈ ಕಾರ್ಯಕ್ರಮವನ್ನು ಕೂಡಲೇ ನಿಲ್ಲಿಸಬೇಕೆಂದು ಮತ್ತೊಮ್ಮೆ ಆಗ್ರಹಪಡಿಸುತ್ತೇವೆ. ಒಂದು ವೇಳೆ ನಿಲ್ಲಿಸದೇ ಹೋದಲ್ಲಿ ಸಂಬಂಧಪಟ್ಟ ಪ್ರಾಧಿಕಾರಗಳಿಗೆ ದೂರು ಸಲ್ಲಿಸುವುದೂ ಸೇರಿದಂತೆ, ಪ್ರಜಾಸತ್ತಾತ್ಮಕ ಹೋರಾಟಗಳನ್ನು ನಡೆಸಬೇಕಾಗುತ್ತದೆ ಎಂದು ತಿಳಿಸಲು ವಿಷಾದಿಸುತ್ತೇವೆ.

ಧನ್ಯವಾದಗಳು.

ಓದುಗರಿಗೊಂದು ಮನವಿ: ದಯಮಾಡಿ ಈ ಪತ್ರದ ಧಾಟಿಯ ಪತ್ರಗಳನ್ನು ಅಥವಾ ಇದೇ ಪತ್ರವನ್ನು ನಿಮ್ಮ ಐಡಿಗಳಿಂದ  ಈ feedbackzeekannada@zeenetwork.com  ಇಮೇಲ್ ಅಥವಾ ಜೀ ಕನ್ನಡ, ನಂ.೩೯, ಯುನೈಟೆಡ್ ಮ್ಯಾನ್ಷನ್, ಮೂರನೇ ಮಹಡಿ, ಮಹಾತ್ಮಗಾಂಧಿ ರಸ್ತೆ, ಬೆಂಗಳೂರು-೧ ಈ ವಿಳಾಸಕ್ಕೆ ಅಂಚೆ ಮೂಲಕ ಕಳುಹಿಸಬೇಕಾಗಿ ವಿನಂತಿ. ಸಾಧ್ಯವಾಗುವುದಾದರೆ ಈ ಅಭಿಯಾನವನ್ನು ಬೆಂಬಲಿಸುವ ಬ್ಲಾಗರ್‌ಗಳು ಈ ಪತ್ರವನ್ನು ಯಥಾವತ್ತಾಗಿ ತಮ್ಮ ಬ್ಲಾಗ್‌ಗಳಲ್ಲಿ ಪ್ರಕಟಿಸಬೇಕೆಂದು ಕೋರುತ್ತೇವೆ. ಹಾಗೆಯೇ ಇದನ್ನು ಫೇಸ್‌ಬುಕ್ ಹಾಗು ಇತರ ಸೋಷಿಯಲ್ ನೆಟ್‌ವರ್ಕ್‌ಗಳಲ್ಲಿ ಶೇರ್ ಮಾಡಲು ವಿನಂತಿಸುತ್ತೇವೆ.

ನಕ್ಷತ್ರಗಳಿಗೊಂದು ಮೊರೆ

16 Apr 2011

2 ಪ್ರತಿಕ್ರಿಯೆ
ಹೊರಗೆ ಸಣ್ಣಗೆ ಮಳೆ.
ಒಳಗೆ ದಟ್ಟೈಸಿದ ಕಾರ್ಮೋಡ. ಮಿಂಚಿಲ್ಲ, ಗುಡುಗಿಲ್ಲ. ಹನಿಯುತ್ತಿರುವ ಸೋನೆ ಮಳೆ ಬಿರುಮಳೆಯಾಗುವ ಸೂಚನೆಯೂ ಇಲ್ಲ.
ನನ್ನ ಹುಟ್ಟೂರು ಅಳವಂಡಿ ನೆನಪಾಗುತ್ತಿದೆ. 
ಯಾವುದೇ ಸಣ್ಣ ಖುಷಿಯಿರಲಿ, ನೋವಿರಲಿ, ವಂಚನೆ ಆಘಾತ ಕಳವಳ ಖಿನ್ನತೆ ಅಪರಾಧಿ ಭಾವನೆ- ಹೀಗೆ ಯಾವ ಭಾವ ಉಕ್ಕಿದರೂ ಜೊತೆಗೆ ಊರ ನೆನಪು ಉಕ್ಕುತ್ತದೆ. ಇವತ್ತೂ ಹಾಗೇ ಆಯಿತು. ಬಹುದಿನಗಳಿಂದ ರೂಢಿ ಮಾಡಿಕೊಂಡಿರುವ, ಇನ್ನೂ ಅನಾವರಣಗೊಳ್ಳಬೇಕಾಗಿರುವ ವೆಬ್‌ಸೈಟೊಂದಕ್ಕೆ ಎಂದಿನಂತೆ ದಿನದ ಸುದ್ದಿಗಳನ್ನು ಪೋಣಿಸುತ್ತಿದ್ದ ಹೊತ್ತಿನಲ್ಲಿ, ಸದ್ದಿಲ್ಲದೇ ಕರೆಂಟ್ ಮಾಯ. ನಾನಿದ್ದೇನೆ ಬಿಡು ಎಂಬಂತೆ ಯುಪಿಎಸ್ ವಿದ್ಯುತ್ ಬೆಳಗಿದರೂ ಹೊರಗೆ ಓಣಿಯಲ್ಲೆಲ್ಲ ಕವಿದ ಕತ್ತಲಲ್ಲಿ, ಲೈಟಿರುವ ನನ್ನ ಮನೆ ವಿಚಿತ್ರವಾಗಿ ಕಾಣುತ್ತಿದೆ. ಮನೆಯೊಳಗಿನ ಅನಗತ್ಯ ದೀಪಗಳನ್ನಾರಿಸಿ, ಮತ್ತೆ ನನ್ನ ಕೋಣೆಯಲ್ಲಿ ಬಂದು ಕೂತೆ. 
ಹೊರಗೆ ಬೆಳಕಿದ್ದರೂ ಒಳಗೆ ಕತ್ತಲು.
ನನ್ನ ಬಹುತೇಕ ಬದುಕು ಸಾಗಿ ಬಂದ ಪರಿಗೆ ಸಾಕ್ಷಿಯೆಂಬಂತೆ ಈ ವೈರುದ್ಧ್ಯ ರಾಚುತ್ತದೆ. ಹೊರಗೆ ಬೆಳಕಿದ್ದಾಗ ನನ್ನೊಳಗೆ ಕತ್ತಲು, ಒಳಗೆ ಬೆಳಕು ಅರಳಿ ನಿಂತ ಹೊತ್ತಿನಲ್ಲಿ ಹೊರಗೆ ಕತ್ತಲು ಕವಿದಿರುತ್ತದೆ. ಸ್ವಾನುಕಂಪವಲ್ಲ. ಹುಚ್ಚುತನವೂ ಅಲ್ಲ. ಎಷ್ಟೋ ಸಾರಿ ಈ ವೈರುದ್ಧ್ಯ ಕುರಿತು ಯೋಚಿಸಿದ್ದೇನೆ. ಪದೆ ಪದೆ ಏಕೆ ಹೀಗಾಗುತ್ತದೆ ಅಂತ ಅಚ್ಚರಿಪಟ್ಟಿದ್ದೇನೆ. ಬ್ಯಾಟಿಂಗ್ ಬರುವ ಹೊತ್ತಿಗೆ ಓವರ್‌ಗಳು ಮುಗಿದಂತೆ, ನಿರೀಕ್ಷಿಸಿದ್ದು ಬಂತೆಂಬ ಸಡಗರದಿಂದ ಎದ್ದು ನಿಲ್ಲುವ ಮುನ್ನವೇ ಅದು ಸದ್ದಿಲ್ಲದೇ ಇಲ್ಲವಾಗಿರುತ್ತದೆ.
ಹೊರಗೆ ಸಣ್ಣಗೆ ಮಳೆ.
ಸುದ್ದಿ ಜೋಡಿಸಿಯಾಯ್ತು. ದಿನದ ಮುಖ್ಯ ಘಟ್ಟವೊಂದು ಮುಗಿದ ನಿರಾಳತೆ. ಸಿದ್ಧಗೊಳ್ಳುತ್ತಿರುವ ವೆಬ್‌ಸೈಟ್‌ನಲ್ಲಿ ಈ ಸುದ್ದಿಗಳು ಹೇಗೆ ಕಾಣಬಹುದೆಂಬ ಬಸಿರಿ ತಾಯಿಯ ಕನಸೊಂದು ಎಂದಿನಂತೆ ಅರಳುತ್ತದೆ. ಕೆಲ ಕ್ಷಣ ಆ ನಿರಾಳತೆಯಲ್ಲಿ ಮನಸಾರೆ ಮುಳುಗುತ್ತೇನೆ. 
ಆದರೆ, ಅದು ಕೆಲ ಕ್ಷಣಗಳ ಕಾಲ ಮಾತ್ರ.
ಸಣ್ಣಗೇ ಉಕ್ಕತೊಡಗುವ ಖಿನ್ನತೆ ಊರಿನ ನೆನಪುಗಳನ್ನು ಹೊತ್ತು ತರುತ್ತದೆ. ನನ್ನೂರಿನ ಮಣ್ಣಿನ ಮಾಳಿಗೆಯ ಮೇಲೆ, ನೆಲದ ಮೇಲೆ ಏನನ್ನೂ ಹಾಸದೇ, ಹಾಗೇ ಮಲಗಿ, ಕಣ್ಣು ಕೋರೈಸುವ ನಕ್ಷತ್ರಗಳನ್ನು ದಿಟ್ಟಿಸುತ್ತಿದ್ದ ದಿನಗಳು ನೆನಪಾಗುತ್ತವೆ. ನನ್ನೊಳಗಿರುವ ಕನಸುಗಳಿಗೆ ಶಕ್ತಿ ಕೊಟ್ಟ ದಿವ್ಯ ದೇವತೆಗಳವು. ಸವಾಲುಗಳನ್ನು ಎದುರಿಸುವ ಕೆಚ್ಚು ತುಂಬಿದ ಕಿಡಿಗಳವು. ಇವತ್ತೇಕೋ ಹನಿಯುತ್ತಿರುವ ಮಳೆಯ ನಡುವೆ, ಉಕ್ಕತೊಡಗಿರುವ ಖಿನ್ನತೆಯ ಮಧ್ಯೆ, ನನ್ನೂರಿನ ದಿವ್ಯ ಆಗಸದ ಆ ನಕ್ಷತ್ರಕಿಡಿಗಳು ಮತ್ತೆ ಮತ್ತೆ ನೆನಪಾಗತೊಡಗಿವೆ.
ಕೆಲಸ ಮುಗಿದಿದ್ದರಿಂದ, ಯುಪಿಎಸ್ ಏಕೆ ದಣಿಸಬೇಕೆಂದು ಲೈಟಾರಿಸಿ ಕತ್ತಲಲ್ಲಿ ಸುಮ್ಮನೇ ಕೂಡುತ್ತೇನೆ. ಊರ ಮುಗಿಲಿನೊಳಗೆ ಅರಳಿ ನಿಲ್ಲುತ್ತಿದ್ದ ನಕ್ಷತ್ರಗಳು ಛಾವಣಿಯಲ್ಲಿ ಕಂಡಾವೇನೋ ಎಂಬ ವಿಚಿತ್ರ ಆಸೆ. ಆದರೆ, ಬೆಂಗಳೂರಿನ ಬಯಲಲ್ಲಿ ನಿಂತರೂ ಬೆಳಕಿನ ಮೋಡದ ಮಧ್ಯೆ ಮಂಕಾಗುವ ನಕ್ಷತ್ರಗಳು, ಲೈಟಾರಿಸಿದ ಛಾವಣಿಯಲ್ಲಿ ಕಂಡಾವಾದರೂ ಹೇಗೆ? ಮತ್ತದೇ ಕತ್ತಲು, ಏಕಾಂತ, ಖಿನ್ನತೆ. 
ಒಂದು ಸ್ನಿಗ್ಧ ಪ್ರೀತಿಗಾಗಿ ಹಂಬಲಿಸುತ್ತಿದ್ದ ದಿನಗಳು ನೆನಪಾಗುತ್ತಿವೆ. ಓದಲು ಪಠ್ಯಪುಸ್ತಕ ಬಿಟ್ಟು ಬೇರೊಂದು ಸಿಗದ ವಾತಾವರಣದಲ್ಲಿ ಪುಕ್ಕಟೆ ಕನಸುಗಳನ್ನು ಕಾಣುವುದು ಬಿಟ್ಟು ಬೇರೆ ದಾರಿ ಇದ್ದಿಲ್ಲ. ರಜಾ ದಿನಗಳು ಬಂದಾಗ, ಪಠ್ಯಪುಸ್ತಕಗಳ ಓದೂ ಇಲ್ಲವಾಗುತ್ತಿತ್ತು. ನನ್ನ ಮುಂದಿನ ತರಗತಿಯ ಕನ್ನಡ ವಿಷಯದ ಪುಸ್ತಕವನ್ನು ಅದ್ಹೇಗೋ ಹೊಂಚಿಕೊಂಡು ಒಂದೇ ದಿನದಲ್ಲಿ ಓದಿ ಮುಗಿಸುತ್ತಿದ್ದೆ. ನಂತರ ಬಿರು ಬಿಸಿಲು, ಕಡು ಸೆಕೆ ಮತ್ತು ಕನಸುಗಳೊಳಗೆ ಬದುಕು ಮುಳುಗಿಹೋಗುತ್ತಿತ್ತು. ಮನೆಯಲ್ಲಿ ನಡೆಯುತ್ತಿದ್ದ ಹಪ್ಪಳ-ಸಂಡಿಗೆ-ಉಪ್ಪಿನಕಾಯಿ-ಶ್ಯಾವಿಗೆ ತಯಾರಿಯ ಸಡಗರದಲ್ಲಿ ಅರೆಮನಸ್ಸಿನಿಂದ ತೊಡಗಿಕೊಂಡ ಮನಸ್ಸು ಸಂಜೆಯಾಗುವುದನ್ನೇ ಕಾಯುತ್ತಿತ್ತು.
ಸಾಮಾನ್ಯವಾಗಿ ಕರೆಂಟಿಲ್ಲದಿರುತ್ತಿದ್ದ ರಾತ್ರಿಗಳಲ್ಲಿ ಮಾಳಿಗೆ ಮೇಲೆ ಹೋಗಿ ಅಂಗಾತ ಮಲಗಿಕೊಂಡು ನಕ್ಷತ್ರಗಳನ್ನು ದಿಟ್ಟಿಸುತ್ತಿದ್ದೆ. ಸಾವಿರಾರು ಕನಸುಗಳನ್ನು ಆ ನಕ್ಷತ್ರಗಳು ನನ್ನೊಳಗೆ ತುಂಬಿವೆ. ಅವುಗಳೊಂದಿಗೆ ಸುದೀರ್ಘ ಮೌನ ಸಂಭಾಷಣೆ ನಡೆಸಿದ್ದೇನೆ. ಪ್ರಶ್ನೆಗಳನ್ನು ಕೇಳಿ ಉತ್ತರ ಪಡೆದುಕೊಂಡಿದ್ದೇನೆ. ನನ್ನ ನಿರಾಶೆಗಳನ್ನು ಅವು ಸಂತೈಸಿವೆ. ನೋವನ್ನು ಸಹನೀಯವಾಗಿಸಿವೆ. ಮೌನ ಸಾಂಗತ್ಯದಲ್ಲೂ ಪರಮಶಕ್ತಿಯಿದೆ ಎಂಬುದನ್ನು ಮೌನವಾಗಿಯೇ ನನ್ನೊಳಗೆ ತುಂಬಿವೆ. ನಕ್ಷತ್ರಗಳ ಲೋಕದೊಳಗಿನ ಆ ಪಯಣ ಇವತ್ತಿಗೂ ನನ್ನ ಅತ್ಯಂತ ಸ್ಮರಣೀಯ ನೆನಪುಗಳಲ್ಲಿ ಒಂದು.
‘ಕತ್ತಲ್ದಾಗ ಒಬ್ನ ಕೂತು ಏನ್ ಮಾಡ್ತೀ?’ ಎಂದು ಮನೆಯವರು ಆಗಾಗ ಕೇಳುತ್ತಿದ್ದರು. ಏನಂತ ಹೇಳೋದು. ಓರಗೆಯ ಹುಡುಗರು ಕತ್ತಲು ತುಂಬಿದ ಓಣಿಗಳಲ್ಲಿ ಕಳ್ಳ-ಪೊಲೀಸ್ ಆಟವಾಡುತ್ತಿರುವಾಗ ಇವನೊಬ್ಬ ಮೇಲೆ ಹೋಗಿ ಏನು ಮಾಡ್ತಾನೆ ಎಂಬ ಗೊಂದಲ ಅವರದಾಗಿತ್ತು. ಕ್ರಮೇಣ ನನ್ನ ಅನ್ಯಮನಸ್ಕತೆ, ಅಂತರ್ಮುಖತೆ ಅವರಿಗೆ ಅರ್ಥವಾಯಿತೋ ಅಥವಾ ಇವನಿಗೆ ಹೇಳಿ ಉಪಯೋಗವಿಲ್ಲ ಎಂದು ಅಂದುಕೊಂಡರೋ- ಒಟ್ಟಿನಲ್ಲಿ ಪ್ರಶ್ನಿಸುವುದು ತಪ್ಪಿತು. ನಾನು ಮತ್ತಷ್ಟು ಆನಂದದಿಂದ ನಕ್ಷತ್ರ ಸಾಂಗತ್ಯದಲ್ಲಿ ಮುಳುಗಿಹೋದೆ.
ಎಸ್ಸೆಸ್ಸೆಲ್ಸಿ ಮುಗಿಸಿ ಮುಂದಿನ ಓದಿಗೆಂದು ಮೊದಲ ಬಾರಿ ಹುಟ್ಟಿ ಬೆಳೆದ ಊರು ಬಿಡಬೇಕಾಗಿ ಬಂದಾಗ ಇವೇ ನಕ್ಷತ್ರಗಳ ಬಳಿ ಅತ್ತಿದ್ದೆ. ಮುಂದಿನ ಬದುಕು ಹೇಗೋ ಎಂದು ಕಳವಳಪಟ್ಟಿದ್ದೆ. ಉಕ್ಕುತ್ತಿದ್ದ ಕನಸುಗಳಿಗೆ, ನವಿರು ಭಾವನೆಗಳಿಗೆ ಸ್ಪಷ್ಟರೂಪ ಕೊಡಲಾಗದೇ ಒದ್ದಾಡಿದ್ದೆ. ಏರ್‌ಫೋರ್ಸ್‌ಗೆ ನೇಮಕವಾದಾಗಲೂ ಇವೇ ನಕ್ಷತ್ರಗಳು ನನಗೆ ದಾರಿ ತೋರಿದ್ದವು. ನನ್ನೂರಿನಲ್ಲಿ ಕಂಡ ಅವೇ ನಕ್ಷತ್ರಗಳನ್ನು ಕಚ್ಛ್‌ನ ರಣಪ್ರದೇಶದ ಆಗಸದಲ್ಲೂ ಕಂಡಿದ್ದೇನೆ. ಊರು ಸೇರಿದ ನೆಮ್ಮದಿ ಅನುಭವಿಸಿದ್ದೇನೆ.
ಮೋಡ ಮುಸುಕಿ ಮುಸುಮುಸು ಅಳುತ್ತಿರುವ ಬೆಂಗಳೂರಿನ ಆಗಸ ಏಕೋ ನನ್ನೂರ ನಕ್ಷತ್ರಗಳನ್ನು ನೆನಪಿಸುತ್ತಿದೆ. ಸಣ್ಣಗೇ ಖಿನ್ನತೆ ಉಕ್ಕುತ್ತಿದೆ. ಅಂದುಕೊಂಡಿದ್ದಕ್ಕಿಂತ ವೇಗವಾಗಿ ಬದಲಾಗುತ್ತಿರುವ ವೃತ್ತಿ ಜೀವನದ ಮಧ್ಯೆ ನನ್ನ ಪ್ರವೃತ್ತಿ ಬದಲಾಗದೇ ಹಾಗೇ ಉಳಿದಿರುವ ಬಗ್ಗೆ ಅಚ್ಚರಿಯೂ ಆಗುತ್ತಿದೆ. ನನ್ನ ಸೋಲುಗಳಿಗೆ ಈ ನಿರ್ಲಿಪ್ತಭಾವವೇ ಕಾರಣವಾ ಎಂಬ ಗೊಂದಲವೂ ಕಾಡುತ್ತಿದೆ.
ಕೂತ ಕೋಣೆಯ ಛಾವಣಿಯನ್ನೇ ಮತ್ತೆ ಮತ್ತೆ ದಿಟ್ಟಿಸುತ್ತೇನೆ. ಇವತ್ತೇಕೋ ನಾನು ಗೊಂದಲದಲ್ಲಿದ್ದೇನೆ. ಮಿತಿ ದಾಟಿದ ಮಾತೊಂದು ಮನನೋಯಿಸಿತಾ ಎಂಬ ಅಪರಾಧಿ ಭಾವನೆಯೊಂದಿದೆ. ಇತ್ತೀಚೆಗೇಕೋ ತೋರದ ಹಸಿವು ಬಾರದ ನಿದ್ದೆಗಳ ಬಗ್ಗೆ ತಕರಾರಿದೆ. ಇವೆಲ್ಲ ಸೇರಿ ಗೊಂದಲಗೊಂಡಿದ್ದೇನೆ. ಮಂಕಾಗಿದ್ದೇನೆ. ನಕ್ಷತ್ರಗಳ ಬಳಿ ಪರಿಹಾರ ಕಂಡುಕೊಳ್ಳಬೇಕಿದೆ.
ಆದರೆ, ಹೊರಗೆ ಮೋಡ ಮುಸುಕಿದ ಆಗಸ. ಒಳಕೋಣೆಯ ಛಾವಣಿಯೂ ಏಕೋ ಖಾಲಿಖಾಲಿ. ಕರೆಂಟಿಲ್ಲದ ರಾತ್ರಿಯಾಗಿದ್ದರೂ ನಕ್ಷತ್ರಗಳು ಕಾಣುತ್ತಿಲ್ಲ. ಮನಸ್ಸಿನ ಮಂಕು ಕಳೆಯುತ್ತಿಲ್ಲ. ನಾನು ಮತ್ತೆ ಮತ್ತೆ ಅವನ್ನು ಕರೆಯುತ್ತಿದ್ದೇನೆ. ನನ್ನೂರಿನ ಕಡು ಕತ್ತಲೆಯ ಆಗಸದಲ್ಲಿ ಸದ್ದಿಲ್ಲದೇ ಮಿನುಗುತ್ತ ಸಂತೈಸುತ್ತಿದ್ದ ಅವು ಮತ್ತೆ ಮತ್ತೆ ನೆನಪಾಗುತ್ತಿವೆ. 
ಮಳೆ ಸದ್ದಿಲ್ಲದೇ ಹನಿಯುತ್ತಲೇ ಇದೆ, ಒಳಮನೆಯೊಳಗೆ ಕೂತ ನನ್ನಳಲನ್ನು ಅರ್ಥ ಮಾಡಿಕೊಂಡಂತೆ!
- ಚಾಮರಾಜ ಸವಡಿ

ಮರೆಯಬೇಕೆಂದು ಮತ್ತೆ ಮತ್ತೆ ನೆನಪಿಸಿಕೊಳ್ಳುತ್ತಾ...

8 Apr 2011

4 ಪ್ರತಿಕ್ರಿಯೆ
Art just makes verses; only the heart is a poet.
- Andre Chenier 
ತುಂಬಾ ದಿನಗಳ ಹಿಂದೆ ಬರೆದಿಟ್ಟುಕೊಂಡಿರುವ ಈ ಸಾಲುಗಳನ್ನು ಮತ್ತೆ ಮತ್ತೆ ಓದಿಕೊಳ್ಳುತ್ತಾ ರಾತ್ರಿಯಿಡೀ ಕೂತಿದ್ದೇನೆ. ಕವಿತೆ ಬರೆಯುವುದು ಇತ್ತೀಚೆಗೆ ಕಷ್ಟವಾಗತೊಡಗಿರುವುದರ ಕಾರಣವೇನಾದರೂ ಈ ಸಾಲುಗಳಲ್ಲಿದೆಯಾ ಎಂಬ ಪ್ರಶ್ನೆಗೆ ಸ್ಪಷ್ಟ ಉತ್ತರ ಸಿಗುತ್ತಿಲ್ಲ. 
ಅದೇಕೋ ಗೊತ್ತಿಲ್ಲ, ಮುಂಚಿನಂತೆ ಕವಿತೆ ಬರೆಯುವುದು ಆಗುತ್ತಿಲ್ಲ. ಕವಿತೆ ನನ್ನ ಅತ್ಯಂತ ಇಷ್ಟದ ವಿಷಯ. ಅಷ್ಟೇ ಕಷ್ಟದ ಅಭಿವ್ಯಕ್ತಿಯೂ ಹೌದು. ಎಂಥ ನಿರಾಸೆಯ ನಡುವೆಯೂ ಗದ್ಯವನ್ನು ಒಂದಷ್ಟು ಚೆನ್ನಾಗಿ ಕಾಣುವಂತೆ ಬರೆದುಬಿಡಬಹುದು. ಆದರೆ, ಪದ್ಯದ ವಿಷಯದಲ್ಲಿ ಹಾಗಾಗದು. ಅದು ಒಲಿಯಬೇಕು. ಒಲಿಯುವವರೆಗೆ ಪ್ರಯತ್ನಿಸಬೇಕು. ಎಲ್ಲಿಯೂ ಹದ ತಪ್ಪಬಾರದು. ಒಂದೇ ಒಂದು ಅನಗತ್ಯ ಶಬ್ದ ಇಡೀ ಭಾವವನ್ನೇ ಹಾಳು ಮಾಡಿಬಿಡಬಹುದು. ಅಲ್ಲಿ ಅನುಭವ ಕೆಲಸಕ್ಕೆ ಬಾರದು. 
ಹೀಗಾಗಿ, ಪ್ರತಿಯೊಂದು ಕವಿತೆಯೂ ಹೊಸ ಪ್ರಯತ್ನವೇ. ಥೇಟ್ ಪ್ರೀತಿಯನ್ನು ಒಲಿಸಿಕೊಂಡಂತೆ.
ಸಾಮಾನ್ಯವಾಗಿ ಗದ್ಯಕ್ಕೆ ನಿಲುಕದ ಭಾವನೆಗಳನ್ನು ಕವಿತೆ ಎತ್ತಿಕೊಡುತ್ತದೆ. ಇದನ್ನು ಗದ್ಯದಲ್ಲಿ ಇಷ್ಟು ಚೆನ್ನಾಗಿ, ಇಷ್ಟು ಕಡಿಮೆ ಶಬ್ದಗಳಲ್ಲಿ, ಇಷ್ಟು ಅರ್ಥಗರ್ಭಿತವಾಗಿ, ಮನಸ್ಸಿಗೆ ತಟ್ಟುವಂತೆ ಬರೆಯಲಾಗದು. ಎಷ್ಟೇ ಸಲ ಓದಿದರೂ ಮತ್ತೆ ಮತ್ತೆ ಓದುವ ಭಾವ ಮೂಡುವಂತೆ, ಓದಿದ ಪ್ರತಿ ಸಲವೂ ಹೊಸ ಅರ್ಥಗಳನ್ನು ಹುಟ್ಟುಹಾಕುವಂತೆ ಮಾಡಲಾಗದು. ಪದ್ಯದ ಸೊಗಸದು. ಅದು ಹಾಗಿದ್ದರೇ ಚೆನ್ನ. 
ಹೀಗಾಗಿ, ಕವಿತೆ ಇತ್ತೀಚೆಗೆ ಕಷ್ಟವಾಗುತ್ತಿದೆ. 
ಮನಸ್ಸಿನ ಏರಿಳಿತಗಳ ನಡುವೆ ಯಾವುದೋ ಭಾವವೊಂದು ಕಾರ್ಮುಗಿಲ ನಡುವೆ ಮಿಂಚಿ ಮರೆಯಾಗುವ ಬೆಳಕಿನಂತೆ ಥಟ್ಟನೇ ಹೊಳೆಯುತ್ತದೆ. ಮನಸ್ಸು ಅದನ್ನು ಮತ್ತೆ ಮತ್ತೆ ಕಾಣಲು ಹಂಬಲಿಸುವುದೇ ಕವಿತೆ ಕಟ್ಟುವ ಸಮಯ. ಬಂದರೆ ಅದು ಇಡಿಯಾಗಿ ಬಂದುಬಿಡುತ್ತದೆ. ಇಲ್ಲದಿದ್ದರೆ, ಏನೇ ಪ್ರಯತ್ನಿಸಿದರೂ ಚಿತ್ರವಾಗದು. 
ನಿಜವಾದ ಫಜೀತಿ ಶುರುವಾಗುವುದೇ ಆಗ. ಶಬ್ದಗಳನ್ನು ಹೇಗೋ ಮಾಡಿ, ಆಕರ್ಷಕವಾಗಿ ಜೋಡಿಸಿಬಿಡಬಹುದು. ಆದರೆ, ಅದು ಕವಿತೆಯಾಗದು. ತಾನಾಗಿ ಉಕ್ಕದೇ ಒಲವಾಗದಲ್ಲ, ಹಾಗೆ. 
ಹಾಗಂತ, ಅದನ್ನು ಅಷ್ಟಕ್ಕೇ ಕೈಬಿಡಲೂ ಆಗುವುದಿಲ್ಲ. ಮನಸ್ಸಿನಲ್ಲಿ ಅದೊಂಥರಾ ಗೀಳಾಗಿ ಕಾಡಲು ಶುರುವಾಗುತ್ತದೆ. ಅಪರಾತ್ರಿಯಲ್ಲಿ ನಿದ್ದೆಗೆಡಿಸುತ್ತದೆ. ನಿತ್ಯದ ಕೆಲಸಗಳಿಗೆ ವಿಮುಖನನ್ನಾಗಿಸುತ್ತದೆ. ಪದೆ ಪದೆ ಕರೆಯುತ್ತದೆ. ಮತ್ತೆ ಮತ್ತೆ ಸೋಲಿಸುತ್ತದೆ. ಬೇರೆ ಏನನ್ನೂ ಬರೆಯದ ಮನಃಸ್ಥಿತಿಗೆ ತಂದೊಡ್ಡಿ ಮಂಕಾಗಿಸುತ್ತದೆ.
ನನ್ನ ಬಹುತೇಕ ನಿದ್ದೆಗೇಡಿ ರಾತ್ರಿಗಳಿಗೆ ಕಾರಣ ಇಂಥ ಎಟುಕದ ಕವಿತಾಭಾವ. ಎಷ್ಟೋ ಸಲ ರಾತ್ರಿಯಿಡೀ ಕೂತರೂ ಒಂದು ಭಾವವನ್ನು ತೀರಕ್ಕೆ ತಲುಪಿಸುವುಲ್ಲಿ ಸೋತಿದ್ದೇನೆ. ಮತ್ತೆ ಮತ್ತೆ ಪ್ರಯತ್ನಿಸಿ, ಸಾಧ್ಯವಾಗದೇ ಹತಾಶನಾಗಿದ್ದೇನೆ. ಸಮಾಧಾನವಾಗದೇ, ಅದೇ ಭಾವವನ್ನು ಗದ್ಯಕ್ಕೆ ಬದಲಿಸಿ ಸುಮ್ಮನಾಗಿದ್ದೇನೆ. ಓದಿದವರು ಏನೇ ಹೇಳಲಿ, ಎಷ್ಟೇ ಮೆಚ್ಚಲಿ, ಪದ್ಯವಾಗಬೇಕಿದ್ದ ಭಾವವೊಂದು ಗದ್ಯವಾಗಿದ್ದರ ಕೊರತೆ ಬರೆದ ನನಗೆ ಮಾತ್ರ ಗೊತ್ತು. ಅಂಥ ಗದ್ಯ ಬರಹವನ್ನು ಓದಿದಾಗೊಮ್ಮೆ, ಕೈಗೆ ಸಿಗದ ಪದ್ಯ ತುಂಟತನದಿಂದ ಕೆಣಕುತ್ತದೆ. ಮತ್ತೆ ಮತ್ತೆ ಕವಿತೆ ಬರೆಯಲು ಪ್ರೇರೇಪಿಸುತ್ತದೆ.
ಇವತ್ತೂ ಅಂಥದೇ ದುಃಸ್ಥಿತಿ. 
ಮನಸ್ಸಿನ ಸುನೀತ ಭಾವವೊಂದು ಹಾಡಾಗುತ್ತಿಲ್ಲ ಎಂಬ ನೋವು. ರಾತ್ರಿಯಿಡೀ ಪ್ರಯತ್ನಿಸಿದರೂ ಅದು ದಕ್ಕುತ್ತಿಲ್ಲ. ಪದೆ ಪದೆ ಪ್ರಯತ್ನ ಕೈಬಿಟ್ಟು ಏನೇನೋ ಓದುತ್ತ ಕೂತರೂ, ಕಾಡುವ ಭಾವ ಹಾಡಾಗುತ್ತಿಲ್ಲ. ಏನೋ ಕೊರತೆ. ಯಾವುದೋ ವಿಷಾದ. ತಿಳಿಯಾಗದ ಹಳೆಯ ನೋವು. ಮರೆಯಬೇಕೆಂದು ಮತ್ತೆ ಮತ್ತೆ ನೆನಪಿಸಿಕೊಂಡಂತೆ, ಎಷ್ಟೇ ಯತ್ನಿಸಿದರೂ ದಕ್ಕದೇ ಹೋದಂತೆ, ಏನೇನೋ ಭಾವಾತಿರೇಕಗಳು. ಆದರೆ, ಯಾವೊಂದು ಭಾವವೂ ಅರ್ಥಪೂರ್ಣ ಸಾಲುಗಳಾಗುತ್ತಿಲ್ಲ. ಇಡಿಯಾಗಿ ಒಡಮೂಡುತ್ತಿಲ್ಲ. 
ಅಂದುಕೊಂಡಂತೆ ಮೂಡದ ಕವಿತೆ ಕಳೆದುಕೊಂಡ ಪ್ರೀತಿಯಂತೆ. ಎಷ್ಟೇ ಪ್ರಯತ್ನಿಸಿದರೂ ಸಿಗದೇ ನುಣುಚಿಕೊಳ್ಳುತ್ತದೆ. ಮತ್ತೆ ಮತ್ತೆ ಸುಳಿಯುತ್ತದೆ. ಮತ್ತೆ ಮತ್ತೆ ಕಾಡುತ್ತದೆ. ಕಣ್ಣೆದುರೇ ಇರುತ್ತದೆ, ಹಿಡಿಯಲಾಗದು. ಮತ್ತೆ ಮತ್ತೆ ಪ್ರಯತ್ನಿಸಿ ಸೋತಾಗ, ತಣ್ಣಗೇ ಕೆಣಕುತ್ತದೆ. ಹತಾಶನನ್ನಾಗಿಸುತ್ತದೆ.
ಹೀಗೆ ಸೋತು ಕೂತವನನ್ನು ಸೆಳೆದಿದ್ದು ಈ ಸಾಲು: Art just makes verses; only the heart is a poet.
ನಿಜ. ಎದೆಯೊಳಗೆ ಉಕ್ಕದಿದ್ದುದು ಕವಿತೆಯಾಗದು. ಮನಸ್ಸಿನೊಳಗೆ ಹೊಳೆದ ಮಿಂಚೊಂದು ಎದೆಯೊಳಗೆ ಅರಳಬೇಕು. ಬೆಳೆಯಬೇಕು. ಮೊಗ್ಗೊಂದು ಅರಳಿ ಹೂವಾದಂತೆ, ಕವಿತೆಯಾಗಬೇಕು. ಥೇಟ್ ಪ್ರೀತಿಯಂತೆ. ತಾನಾಗೇ ಉಕ್ಕದೇ ಕವಿತೆಯಾಗದು. ಅದಾಗೇ ಒಲಿಯದೇ ಪ್ರೀತಿಯಾಗದು. 
ಇವತ್ತು ಅದು ನನಗೆ ಮತ್ತೆ ಸಾಧ್ಯವಾಗಲಿಲ್ಲ. ಇತ್ತೀಚೆಗೆ ಅದು ಏಕೋ ಸಾಧ್ಯವಾಗುತ್ತಿಲ್ಲ. ಹೀಗಾಗಿ ಮತ್ತೆ ಗದ್ಯದ ಮೊರೆ ಹೋಗುತ್ತಿದ್ದೇನೆ. 
ಕ್ಷಮಿಸು ಕವಿತಾ ದೇವತೆಯೇ!
- ಚಾಮರಾಜ ಸವಡಿ