ಕಥೆಯು ಮುಗಿದೇ ಹೋದರೂ, ಮುಗಿಯದಿರಲಿ ಬಂಧನ...

30 Dec 2009

4 ಪ್ರತಿಕ್ರಿಯೆ

ಪರೀಕ್ಷೆ ಮುಗಿಯಲು ಇನ್ನು ಅರ್ಧ ಗಂಟೆ ಮಾತ್ರ ಬಾಕಿ ಇತ್ತು. ಬರೆದ ಉತ್ತರಗಳನ್ನು ಒಮ್ಮೆ ಪರೀಕ್ಷಿಸಿ, ಉಳಿದಿದ್ದ ಕೊನೆಯ ಪ್ರಶ್ನೆಗೆ ಬೇಗ ಬೇಗ ಉತ್ತರಿಸಲು ಶುರು ಮಾಡಿದೆ. ಹದಿನೈದು ನಿಮಿಷಗಳಲ್ಲಿ ಆ ಪ್ರಶ್ನೆಯ ಉತ್ತರವೂ ಮುಗಿಯಿತು. ಎಲ್ಲವೂ ಸರಿಯಾಗಿದೆ ಎಂದು ನೋಡಿಕೊಂಡು, ಇನ್ನೂ ಹತ್ತು ನಿಮಿಷಗಳು ಬಾಕಿ ಇರುವಂತೆ, ಉತ್ತರ ಪತ್ರಿಕೆಯನ್ನು ಕೊಠಡಿಯ ಮೇಲ್ವಿಚಾರಕನಿಗೆ ಕೊಟ್ಟು ದಡಬಡಾಯಿಸಿ ಹೊರಗೋಡಿದೆ. ‘ಏ ತಮ್ಮಾ, ಇನ್ನೂ ಹತ್ತು ನಿಮಿಷ ಐತಿ. ಸರಿಯಾಗಿ ಚೆಕ್‌ ಮಾಡು, ಲಾಸ್ಟ್‌ ಪೇಪರ್‌ ಇದು’ ಅಂತ ಆತ ಕೂಗುತ್ತಿದ್ದರೂ, ಹಿಂತಿರುಗಿ ಕೂಡ ನೋಡದೇ ರೂಮಿನ ಕಡೆ ಓಡುನಡಿಗೆಯಲ್ಲಿ ಹೊರಟೆ.

ಸಿದ್ಧವಾಗಿದ್ದ ಬ್ಯಾಗನ್ನು ಎತ್ತಿಕೊಂಡು, ರೂಮು ಪೂರ್ತಿಯಾಗಿ ಖಾಲಿಯಾಗಿರುವುದನ್ನು ಕಣ್ಣಂದಾಜಿನಲ್ಲೇ ಪರೀಕ್ಷಿಸಿ, ಬೀಗ ಹಾಕಿ ಮಾಲೀಕನಿಗೆ ಕೊಟ್ಟು, ರಜೆ ಮುಗಿದ ನಂತರ ಬರುವೆ ಎಂದು ಹೇಳಿದವನೇ ಒಂದು ಕಿಮೀ ದೂರವಿದ್ದ ಬಸ್‌ ಸ್ಟ್ಯಾಂಡ್‌ ಕಡೆ ಹೊರಟೆ. ಆಗ ಗಂಟೆ ಒಂದೂವರೆ.

ಪರೀಕ್ಷೆ ಮುಗಿಸಿಕೊಂಡು ಬಂದ ಮಿತ್ರ, ‘ಏನಂಥ ಅರ್ಜೆಂಟ್‌? ಇವತ್ತೊಂದಿನ ಇದ್ದು ನಾಳೆ ಹೋಗುವಿಯಂತೆ. ಊರಲ್ಲೇನು ಅಂಥ ಕೆಲಸ?’ ಎಂದು ಕೇಳುತ್ತಿದ್ದರೂ ಗಮನಿಸದೇ, ‘ಮಾರಾಯ, ನನ್ನ ಬಸ್‌ ಸ್ಟ್ಯಾಂಡ್‌ ಹತ್ರ ಬಿಡ್ತಿಯಾ?’ ಎಂದೆ. ಅವನ ಸೈಕಲ್‌ ಹಿಂದೆ ಕೂತು ಬಸ್‌ಸ್ಟ್ಯಾಂಡ್‌ ತಲುಪಿದಾಗ, ಗದಗ್‌ಗೆ ಹೊರಟಿದ್ದ ಬಸ್‌ನ ಬಾಗಿಲು ಹಾಕುತ್ತಿದ್ದ ಕಂಡಕ್ಟರ್‌. ಸೈಕಲ್‌ನಿಂದ ನೆಗೆದವನೇ, ಬಸ್‌ ಏರುತ್ತ, ಗೆಳೆಯನಿಗೆ ಕೈ ಬೀಸುತ್ತ, ಬೆವರೊರೆಸಿಕೊಳ್ಳುತ್ತ ಕೂತೆ.

ನರೇಗಲ್‌ನ ನನ್ನ ಪಿಯುಸಿ ಮೊದಲ ವರ್ಷದ ಪರೀಕ್ಷೆಯ ಕೊನೆಯ ಪೇಪರ್‌ ಮುಗಿಸಿ ನಾನಷ್ಟು ತುರ್ತಾಗಿ ಹೊರಟಿದ್ದು ಗದಗ್‌ಗೆ. ಬಸ್‌ಸ್ಟ್ಯಾಂಡ್‌ ಹತ್ತಿರದಲ್ಲೇ ಇರುವ ಕೃಷ್ಣಾ ಟಾಕೀಸನ್ನು ಮೂರು ಗಂಟೆಯೊಳಗೆ ತಲುಪುವುದು ನನ್ನ ಉದ್ದೇಶ. ಏಕೆಂದರೆ, ಮೂರು ಗಂಟೆಗೆ ಮ್ಯಾಟ್ನಿ ಷೋ ಶುರುವಾಗುತ್ತದೆ. ತಪ್ಪಿಸಿಕೊಂಡರೆ, ಒಂದನೇ ಷೋಗೇ ಹೋಗಬೇಕು. ಆಗ ಅಲ್ಲಿಂದ ಐವತ್ತು ಕಿಮೀ ದೂರವಿರುವ ಊರಿಗೆ ಹೋಗಲು ಬಸ್‌ ಸಿಗುವುದಿಲ್ಲ.

ಬಸ್‌ ತುಂಬ ನಿಧಾನವಾಗಿ ಹೋಗುತ್ತಿದೆ ಅನಿಸುತ್ತಿತ್ತು. ನರೇಗಲ್‌ನಿಂದ ಗದಗ್‌ ಕೇವಲ ೩೦ ಕಿಮೀ ದೂರದಲ್ಲಿದ್ದರೂ, ಕೆಟ್ಟ ರಸ್ತೆಯಿಂದಾಗಿ ಒಂದು ಗಂಟೆಯೊಳಗೆ ತಲುಪುವುದು ಸಾಧ್ಯವಿದ್ದಿಲ್ಲ. ಲೆಕ್ಕಾಚಾರದ ಪ್ರಕಾರ, ಬಸ್‌ ಎಲ್ಲಿಯೂ ಕೆಟ್ಟು ನಿಲ್ಲದಿದ್ದರೆ, ೨.೪೫ಕ್ಕೆ ಗದಗ್‌ ತಲುಪುತ್ತದೆ. ಕೃಷ್ಣಾ ಟಾಕೀಸ್‌ ತಲುಪಲು ಐದು ನಿಮಿಷಗಳು ಸಾಕು. ಟಿಕೆಟ್‌ ತಗೊಂಡು ಸೀಟಲ್ಲಿ ಕೂಡುವ ಹೊತ್ತಿಗೆ ಸರಿಯಾಗಿ ಸಿನಿಮಾ ಶುರುವಾಗುತ್ತದೆ ಎಂದು ಮನಸ್ಸು ಪದೆ ಪದೆ ಎಣಿಕೆ ಹಾಕುತ್ತಿತ್ತು.

ಅದೃಷ್ಟವಶಾತ್‌ ಬಸ್‌ ಕೆಟ್ಟು ನಿಲ್ಲಲಿಲ್ಲ. ಗದಗ್‌ ಹತ್ತಿರವಾಗುತ್ತಿದ್ದಂತೆ, ಬಾಗಿಲ ಹತ್ತಿರ ಬಂದು ನಿಂತಿದ್ದೆ. ಬಸ್‌ಸ್ಟ್ಯಾಂಡ್‌ ಪ್ರವೇಶಿಸುತ್ತಿದ್ದಂತೆ, ಬಾಗಿಲು ತೆರೆದು ಹೊರ ನೆಗೆದವ, ಮತ್ತದೇ ಓಡು ನಡಿಗೆಯಲ್ಲಿ ಕೃಷ್ಣಾ ಟಾಕೀಸ್‌ನತ್ತ ಹೊರಟೆ. ಆಗ ಗಂಟೆ ೨.೫೫.

ಟಿಕೆಟ್‌ ಕೌಂಟರ್‌ ಖಾಲಿಯಾಗಿತ್ತು. ಪಕ್ಕದಲ್ಲೇ ‘ಹೌಸ್‌ಫುಲ್‌’ ಬೋರ್ಡ್‌. ಅದನ್ನು ನೋಡುತ್ತಲೇ ಮನಸ್ಸು ಸೂಜಿ ಚುಚ್ಚಿದ ಬಲೂನಿನಂತಾಯ್ತು. ಅಭ್ಯಾಸ ಬಲದಿಂದ, ಆಚೀಚೆ ಕಳ್ಳನೋಟ ಹರಿಸಿದಾಗ, ಸೆಟಲ್‌ಮೆಂಟ್‌ ಪ್ರದೇಶದ ಯುವಕನೊಬ್ಬ ಸಮೀಪಿಸಿದ. ಪಿಸುದನಿಯಲ್ಲಿ, ‘ಎರಡು ಟಿಕೆಟ್ಟಿವೆ’ ಎಂದ. ಎಷ್ಟೆಂದು ಕೇಳಿದವ, ಹತ್ತು ಸೆಕೆಂಡ್‌ಗಳಲ್ಲಿ ಚೌಕಾಸಿ ಮುಗಿಸಿ, ಟಿಕೆಟ್‌ ಕೊಂಡು ಥೇಟರ್‌ ಪ್ರವೇಶಿಸಿದೆ. ನನ್ನ ನಂಬರ್‌ನ ಸೀಟ್‌ನಲ್ಲಿ ಕೂತು ಬೆವರೊರೆಸಿಕೊಳ್ಳುತ್ತಿದ್ದಂತೆ, ಲೈಟುಗಳು ಆರಿದವು.

ಹೃದಯಾಘಾತದಿಂದ ಮೃತರಾದ ಖ್ಯಾತ ನಟ ವಿಷ್ಣುವರ್ಧನ್‌ ಅವರ ‘ಬಂಧನ’ ಸಿನಿಮಾ ನಾನು ನೋಡಿದ್ದು ಹೀಗೆ.


*****

ಬೇಸಿಗೆ ರಜೆಯ ಎರಡು ತಿಂಗಳಿಡೀ ಬಂಧನ ಸಿನಿಮಾದ್ದೇ ಗುಂಗು. ನನಗೊಬ್ಬನಿಗಷ್ಟೇ ಅಲ್ಲ, ನನ್ನ ಓರಗೆಯ ಹುಡುಗರಿಗಷ್ಟೇ ಅಲ್ಲ, ಬಹುತೇಕ ಎಲ್ಲರಿಗೂ ಬಂಧನ ಸಿನಿಮಾ ಹುಚ್ಚು ಹಿಡಿಸಿತ್ತು. ರೇಡಿಯೋದಲ್ಲಿ ದಿನಕ್ಕೆ ಮೂರು ಹೊತ್ತು, ಸರಾಸರಿ ನಲ್ವತ್ತು ನಿಮಿಷ ಬರುತ್ತಿದ್ದ ರೇಡಿಯೋದ ಚಿತ್ರಗೀತೆಗಳಲ್ಲಿ ಆ ಸಿನಿಮಾದ ಎರಡು ಹಾಡುಗಳಂತೂ ಇದ್ದೇ ಇರುತ್ತಿದ್ದವು. ಹಾಡು ಕೇಳುತ್ತ, ಸಿನಿಮಾವನ್ನು ಮತ್ತೆ ಮತ್ತೆ ನೆನಪಿಸಿಕೊಳ್ಳುತ್ತ ನನ್ನ ಕಾಲೇಜಿನ ದಿನಗಳ ಮೊದಲ ದೀರ್ಘ ರಜೆಯನ್ನು ನಾನು ಹೀಗೆ ಕಳೆದಿದ್ದು ೧೯೮೫ರಲ್ಲಿ.

ಮುಂದೆ ಅದೇ ಸಿನಿಮಾ ೨೩ ಕಿಮೀ ದೂರದ ಕೊಪ್ಪಳಕ್ಕೆ ಬಂದಾಗ, ನನ್ನೂರು ಅಳವಂಡಿ ಹಾಗೂ ಸುತ್ತಲಿನ ಊರುಗಳ ಎಷ್ಟೋ ಜನ ಎತ್ತಿನ ಬಂಡಿ ಕಟ್ಟಿಕೊಂಡು ಹೋಗಿ ನೋಡಿ ಬಂದರು. ಆಗ ತಾನೆ ಕ್ಯಾಸೆಟ್‌ಗಳು ದೊಡ್ಡ ಪ್ರಮಾಣದಲ್ಲಿ ಬರಲಾರಂಭಿಸಿದ್ದವು. ಬಂಧನ ಸಿನಿಮಾದ ಕ್ಯಾಸೆಟ್‌ಗಳನ್ನು ಮಾರಿ ಮಾರಿಯೇ ಎಷ್ಟೋ ಜನ ಉದ್ಧಾರವಾಗಿ ಹೋದರು. ಸಿನಿಮಾವೊಂದು ಜನಮಾನಸವನ್ನು ಆವರಿಸಿಕೊಳ್ಳುತ್ತಿದ್ದ ಪರಿಯನ್ನು ನೆನಪಿಸಿಕೊಂಡರೆ ಈಗಲೂ ಅಚ್ಚರಿಯಾಗುತ್ತದೆ.

ಮುಂದೆ ವಿಷ್ಣುವರ್ಧನ್‌ ಅವರ ಎಷ್ಟೋ ಸಿನಿಮಾಗಳನ್ನು ನೋಡಿದೆ. ನಮ್ಮೂರಿನ ಟೆಂಟ್‌ ಟಾಕೀಸಿಗೆ ಬರುತ್ತಿದ್ದುವೇ ಹಳೆಯ ಸಿನಿಮಾಗಳು. ರಾಜ್‌ಕುಮಾರ್‌ ಹಾಗೂ ವಿಷ್ಣುವರ್ಧನ್‌ ಸಿನಿಮಾ ಬಂದರೆ ಮುಗೀತು, ಎರಡು-ಮೂರು ಬಾರಿ ನೋಡುವುದು ಗ್ಯಾರಂಟಿ. ಮನರಂಜನೆಗೆ ಬೇರೇನೂ ಇಲ್ಲದ ಸಣ್ಣ ಊರಿನಲ್ಲಿ ಈ ಸಿನಿಮಾ ಹಾಗೂ ಚಿತ್ರಗೀತೆಗಳೇ ನಮ್ಮ ಏಕೈಕ ಮನರಂಜನೆಯಾಗಿದ್ದವು.

ನನ್ನ ಯೌವನದ ಮೊದಲ ದಿನಗಳನ್ನು ಆಪ್ತ ನೆನಪಿನಿಂದ ಸಮೃದ್ಧವಾಗಿಸಿದ ಸಿನಿಮಾ ತಾರೆಯರ ಪೈಕಿ ವಿಷ್ಣುವರ್ಧನ್‌ ಹಲವಾರು ಕಾರಣಗಳಿಗಾಗಿ ಪ್ರಮುಖರು. ರಾಜಕುಮಾರ್‌ಗಿಂತ ಈ ವ್ಯಕ್ತಿ ಎಷ್ಟೋ ಭಿನ್ನ ಎಂದು ಯಾವಾಗಲೂ ಅನಿಸುತ್ತಿತ್ತು. ಸಿದ್ಧಮಾದರಿಯಲ್ಲದ ಚಿತ್ರಗಳಿಂದಾಗಿಯೂ ಅವರು ಇಷ್ಟವಾಗುತ್ತಿದ್ದರು. ಆಗ ತಾನೆ ಮೊಳಕೆಯೊಡೆಯುತ್ತಿದ್ದ ರಂಗಿನ ಕನಸುಗಳಿಗೆ ಈ ನಟ ಒದಗಿಸಿದ ವೇದಿಕೆ ಸಮೃದ್ಧವಾದದ್ದು. ಅವನ್ನು ಯಾವತ್ತೂ ಮರೆಯಲಾಗದು.


*****

ಎಂದಿನಂತೆ ರಾತ್ರಿ ತಡವಾಗಿ ಮಲಗಿದ್ದರಿಂದ ಬೆಳಿಗ್ಗೆ ಬೇಗ ಏಳದೇ ಮುಸುಕು ಹಾಕಿಕೊಂಡು ಮಲಗಿದ್ದವನನ್ನು ಎಬ್ಬಿಸಿದ್ದು ಮಿತ್ರ ಮಂಜುನಾಥ ಬಂಡಿ ಅವರ ಎಸ್ಸೆಮ್ಮೆಸ್‌. ವಿಷ್ಣುವರ್ಧನ್‌ ಇನ್ನಿಲ್ಲ ಎಂಬ ಎರಡಕ್ಷರದ ಸಂದೇಶ ಓದಿದ ಕೂಡಲೇ ನಿದ್ದೆ ಹಾರಿಹೋಗಿ, ಇನ್ನೊಂಥರದ ಮಂಕು ಆವರಿಸಿಬಿಟ್ಟಿತು. ಟಿವಿ ಹಾಕಿದರೆ, ಪುಂಖಾನುಪುಂಖವಾಗಿ ವಿವರಗಳು ಬರತೊಡಗಿದವು. ಹೃದಯಾಘಾತದಿಂದ ತಕ್ಷಣ ಸಾವನ್ನಪ್ಪಿದ ವಿಷ್ಣು, ಎಲ್ಲ ಬಂಧನಗಳಿಂದ ಮುಕ್ತರಾಗಿದ್ದರು.

ರಾಜ್‌ ಕುಟುಂಬದ ದಬ್ಬಾಳಿಕೆ ಸಹಿಸಿಯೂ ಈ ಪರಿಯ ಎತ್ತರಕ್ಕೆ ಬೆಳೆದಿದ್ದೊಂದೇ ಅಲ್ಲ, ಇಳಿವಯಸ್ಸಿನಲ್ಲಿಯೂ ಸೊಗಸಾಗಿ ನಟಿಸುತ್ತಿದ್ದುದು ವಿಷ್ಣು ಸಾಧನೆ. ಎಲ್ಲಿಯೂ ಬಾಯ್ಬಿಡದಂತೆ ಸಹ ಕಲಾವಿದರಿಗೆ ನೆರವಾಗುತ್ತಿದ್ದುದು ಅಪರೂಪದ ಹೃದಯವಂತಿಕೆ. ವಿವಾದಗಳಿಂದ ದೂರ ನಿಲ್ಲುತ್ತಿದ್ದ ವಿನಯ, ತಮಗೆ ಕಿರುಕುಳ ನೀಡಿದವರ ಬಗ್ಗೆ ಎಲ್ಲಿಯೂ ಪ್ರಸ್ತಾಪ ಮಾಡದ ಸಜ್ಜನಿಕೆ, ಬೇಸರವಾದರೆ ಮೌನವಾಗಿ ತಮ್ಮ ಪಾಡಿಗೆ ತಾವಿರುತ್ತಿದ್ದ ನಿರ್ಲಿಪ್ತತೆ- ಇವೆಲ್ಲ ಕಾರಣಗಳಿಗೂ ವಿಷ್ಣು ಇಷ್ಟವಾಗುತ್ತಾರೆ.

ಈಗ ಅವೆಲ್ಲ ಬರೀ ನೆನಪು ಮಾತ್ರ. ಸಿನಿಮಾ ಮುಗಿದಿದೆ. ಥೇಟರ್‌ ಖಾಲಿಯಾಗಿದೆ. ಉಳಿದಿದ್ದು ಸವಿ ಸವಿ ನೆನಪುಗಳು ಮಾತ್ರ. ಆದರೆ, ಈ ದುಃಖದ ಸಂದರ್ಭದಲ್ಲಿ, ಆ ನೆನಪುಗಳೂ ವಿಷಾದ ಒಸರಿಸತೊಡಗಿವೆ. ‘ಕಥೆಯು ಮುಗಿದೇ ಹೋದರೂ, ಮುಗಿಯದಿರಲಿ ಬಂಧನ...’ ಅಂತ ಮನಸ್ಸು ಒರಲತೊಡಗಿದೆ.

- ಚಾಮರಾಜ ಸವಡಿ

ಸುನೀತ ನೆನಪುಗಳಲ್ಲಿ ಅಶ್ವಥ್‌ ಜೀವಂತ

29 Dec 2009

0 ಪ್ರತಿಕ್ರಿಯೆ

ಹಾಡಿನ ಮೋಡಿಯಲ್ಲಿ ನಾಡನ್ನೆಲ್ಲ ಸಿಲುಕಿಸಿದ್ದ ಸುಗಮ ಸಂಗೀತದ ದಿಗ್ಗಜ ಸಿ. ಅಶ್ವಥ್‌ ಮೃತರಾಗಿದ್ದಾರೆಯೆ?

ಮಾಧ್ಯಮ ವಲಯದಲ್ಲಿ ಇಂಥದೊಂದು ಸುದ್ದಿ ಇವತ್ತು ತೀವ್ರವಾಗಿ ಕೇಳಿಬರತೊಡಗಿದೆ. ತೀವ್ರ ಅನಾರೋಗ್ಯದ ಹಿನ್ನೆಲೆಯಲ್ಲಿ ಅಶ್ವಥ್‌ ಅವರನ್ನು ಬೆಂಗಳೂರಿನ ಯಶವಂತಪುರದ ಕೊಲಂಬಿಯಾ ಏಷ್ಯ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಪಿತ್ತಜನಕಾಂಗ ಹಾಗೂ ಮೂತ್ರಜನಕಾಂಗದ ಸಮಸ್ಯೆಯಿಂದ ಅವರು ತೀವ್ರವಾಗಿ ಬಳಲುತ್ತಿದ್ದರು. ಮೂರು ದಿನಗಳ ಹಿಂದೆಯೇ ಅವರ ಮೆದುಳು ಕೆಲಸ ಮಾಡುವುದನ್ನು ನಿಲ್ಲಿಸಿತ್ತು ಎಂಬ ವದಂತಿ ಇದೆ. 

ಆದರೆ, ಮಂಗಳವಾರ ಅವರ ೭೦ನೇ ಜನ್ಮದಿನದ ಕಾರ್ಯಕ್ರಮ ದೊಡ್ಡ ಪ್ರಮಾಣದಲ್ಲಿ ಏರ್ಪಾಟಾಗಿರುವುದರಿಂದ, ಕೊಮಾದಲ್ಲಿದ್ದ ಗಾಯಕನ ದೇಹಸ್ಥಿತಿಯ ಬಗ್ಗೆ ಮಾಹಿತಿ ನೀಡುವುದು ಬೇಡ ಎಂದು ಸಂಬಂಧಿಸಿದವರು ನಿರ್ಧರಿಸಿದ್ದಾಗಿ ಕೇಳಿಬರುತ್ತಿದೆ. ಈ ಕುರಿತು ಮಾಧ್ಯಮ ಮಿತ್ರರಲ್ಲೇ ತೀವ್ರ ಭಿನ್ನಾಭಿಪ್ರಾಯವೂ ಇದೆ. ಹಲವಾರು ಪತ್ರಿಕೆ ಹಾಗೂ ದೃಶ್ಯಮಾಧ್ಯಮದ ಹಿರಿಯರು, ಈ ಸುದ್ದಿಯನ್ನು ಅಧಿಕೃತ ಪ್ರಕಟಣೆ ಬರುವವರೆಗೆ ಪ್ರಸಾರ ಮಾಡುವುದು ಬೇಡ ಎಂದು ತೀರ್ಮಾನಿಸಿದ್ದಾಗಿಯೂ ಹೇಳಲಾಗಿದೆ.

ಈ ಎಲ್ಲ ವದಂತಿಗಳು ಸುಳ್ಳಾಗಲಿ. ಅಶ್ವಥ್‌ ಮತ್ತೆ ’ರೇ ರೇ ರೇ ರಾ...’ ಎಂದು ಹಾಡುತ್ತ ಆಸ್ಪತ್ರೆಯಿಂದ ಎದ್ದು ಬರಲಿ ಅಂತ ಹಾರೈಸುವೆ.

- ಚಾಮರಾಜ ಸವಡಿ
(ಚಿತ್ರ ಕೃಪೆ: http://www.kamat.org)

ಸಿಲ್ಲಿ ಕನಸುಗಳೆಂಬ ಸಣ್ಣ ಸೇತುವೆಗಳು

17 Dec 2009

3 ಪ್ರತಿಕ್ರಿಯೆ
ಒಮ್ಮೊಮ್ಮೆ ನೆನಪಿಸಿಕೊಂಡರೆ ಅಚ್ಚರಿಯಾಗುತ್ತದೆ: ನಾವೆಲ್ಲ ಎಂತೆಂಥ ಅನಾಹುತಕಾರಿ ಘಟ್ಟಗಳನ್ನು ದಾಟಿ ಬಂದಿರುತ್ತೇವಲ್ವೆ?

ಬಾಲ್ಯದಲ್ಲಿ ಚಿತ್ರವಿಚಿತ್ರ ಆಸೆಗಳಿರುತ್ತವೆ. ಅವತ್ತಿನ ಮಟ್ಟಿಗೆ ಅವೇ ದೊಡ್ಡವು. ಬಲು ಪಸಂದಾಗಿರುವಂಥವು. ಚಿಕ್ಕವನಿದ್ದಾಗ, ನಮ್ಮೂರಿನ ಹಿಟ್ಟಿನ ಗಿರಣಿಗೆ ನಿಯಮಿತವಾಗಿ ಹೋಗುತ್ತಿದ್ದೆ, ಜೋಳ ಬೀಸಿಕೊಂಡು ಬರಲು. ಅದೇ ಮುಖ್ಯ ಆಹಾರ ನಮಗೆ. ತೀರಾ ಕುಳ್ಳನಾಗಿದ್ದ ನನಗೆ, ಎತ್ತರದಲ್ಲಿದ್ದ ಹಿಟ್ಟು ಬೀಸುವ ಯಂತ್ರದ ಬಾಯಿಗೆ ಜೋಳದ ಬುಟ್ಟಿ ಎತ್ತಿ ಸುರುವಲು ಆಗುತ್ತಿರಲಿಲ್ಲ. ಗಿರಣಿಯ ಕೆಲಸಗಾರ, ನನ್ನ ತಲೆ ಮೇಲಿನ ಬುಟ್ಟಿ ಎತ್ತಿ, ಜೋಳ ಸುರುವಿ ಬುಟ್ಟಿಯನ್ನು ವಾಪಸ್‌ ಕೊಡುತ್ತಿದ್ದ. ಆಗ ಕೆಲ ಗಾಲಿಗಳನ್ನು ತಿರುವಿದ ಕೂಡಲೇ ಯಂತ್ರದ ಸದ್ದು ಬದಲಾಗಿ, ಇದ್ದಕ್ಕಿದ್ದಂತೆ ಹಿಟ್ಟು ಬುಟ್ಟಿಯಲ್ಲಿ ಬೀಳಲು ಶುರುವಾಗುತ್ತಿತ್ತು.

ನನಗೆ ಅದು ಬಹಳ ಕೌತುಕದ ಸಂಗತಿಯಾಗಿತ್ತು. ಯಂತ್ರದ ಬಾಯಿಂದ ಜೋಳ ಅದರ ಹೊಟ್ಟೆಗೆ ಹೇಗೆ ಹೋಗುತ್ತದೆ ಎಂಬುದನ್ನು ನೋಡುವ ಆಸೆ ನನ್ನದು. ಆದರೆ, ಗಿರಣಿಯವ ನನ್ನನ್ನು ಬಿಡುತ್ತಿರಲಿಲ್ಲ. ಅಲ್ಲದೇ, ಜೋಳ ಮುಗಿಯುತ್ತ ಬಂತು ಎಂಬುದು ಅವನಿಗೆ ಹೇಗೆ ಗೊತ್ತಾಗುತ್ತದೆ ಎಂಬುದನ್ನು ತಿಳಿಯುವ ಕುತೂಹಲವೂ ಸಾಕಷ್ಟಿತ್ತು. ಎಷ್ಟೇ ಪ್ರಯತ್ನಿಸಿದರೂ, ಆತ ಹೇಳುತ್ತಿರಲಿಲ್ಲ. ’ಅದಕ್ಕೆಲ್ಲ ತಲೆ ಬೇಕಾಗುತ್ತದೆ’ ಎಂದು ತನ್ನ ತಲೆ ಮುಟ್ಟಿ ನಗುತ್ತಿದ್ದ.

ಆಗ ನನ್ನ ದೊಡ್ಡ ಕನಸೆಂದರೆ, ಗಿರಣಿಯಲ್ಲಿ ಹಿಟ್ಟು ಬೀಸುವ ಕೆಲಸ ಮಾಡಬೇಕೆಂಬುದು. ದೊಡ್ಡವನಾದಾಗ, ಹಿಟ್ಟು ಬೀಸುವ ಕೆಲಸ ಮಾಡಬೇಕು. ಆಗ, ನನ್ನಂಥ ಚಿಕ್ಕಮಕ್ಕಳಿಗೆ ಗಿರಣಿ ಕೆಲಸ ಮಾಡುವುದನ್ನು ತೋರಿಸಿ ಅವರ ಅಚ್ಚರಿ ಗಮನಿಸಬೇಕೆಂಬ ವಿಚಿತ್ರ ಆಸೆ ಹುಟ್ಟಿತ್ತು. ನಾನು ಹೈಸ್ಕೂಲು ಮುಗಿಸುವವರೆಗೂ ಈ ಆಸೆ ಇತ್ತೆಂಬುದನ್ನು ಇವತ್ತು ನೆನೆದರೆ ನಗು ಬರುತ್ತದೆ.

ಮುಂದೆ ಇಂಥ ಹಲವಾರು ಆಸೆಗಳು ಹುಟ್ಟಿಕೊಂಡವು. ನಮ್ಮೂರಿನಲ್ಲಿದ್ದ ಟೆಂಟ್‌ ಸಿನಿಮಾ ಥೇಟರ್‌ನ ಗೇಟ್‌ಕೀಪರ್‌ ಆಗಬೇಕೆಂಬುದು ಅಂಥ ಕನಸುಗಳಲ್ಲಿ ಒಂದು. ಆಗ ದಿನಾ ಸಿನಿಮಾ ನೋಡಬಹುದು. ಅದಕ್ಕಾಗಿ ಕಾಸು ಕೊಡಬೇಕಿಲ್ಲ. ಅಷ್ಟೇ ಅಲ್ಲ, ಸಿನಿಮಾ ಯಾವಾಗ ಬದಲಾಗುತ್ತದೆ, ಹೊಸ ಸಿನಿಮಾ ಯಾವುದೆಂಬುದು ತಕ್ಷಣ ಗೊತ್ತಾಗುತ್ತದೆ ಎಂಬ ರೋಮಾಂಚನ. ಗೇಟ್‌ಕೀಪರ್‌ಗಳು ನನಗೆ ಗಂಧರ್ವ ಲೋಕದ ದ್ವಾರಪಾಲಕರಂತೆ ಕಾಣುತ್ತಿದ್ದರು. ಅವರೊಂದಿಗೆ ಗೆಳೆತನ ಬೆಳೆಸಿಕೊಳ್ಳಬೇಕೆಂದು ಎಷ್ಟೋ ಸಾರಿ ಆಸೆ ಪಟ್ಟಿದ್ದೆ. ಆದರೆ, ನನ್ನಂಥ ಚಿಕ್ಕಹುಡುಗರೊಂದಿಗೆ ಅವರು ಯಾವತ್ತೂ ಸಲಿಗೆಯಿಂದ ಇರುತ್ತಿರಲಿಲ್ಲ ಎಂಬುದೇ ಆಗ ನನಗೆ ವಿಷಾದದ ಹಾಗೂ ದಿನಗಟ್ಟಲೇ ಕಾಡಿದ ಚಿಂತೆಯ ವಿಷಯವಾಗಿತ್ತು.

ಒಂದೊಂದು ಕಾಲಘಟ್ಟದಲ್ಲೂ ನನ್ನ ಆಸೆಯ ರೀತಿಗಳು ಬದಲಾಗುತ್ತ ಹೋಗಿವೆ. ಕಾಲೇಜು ಪ್ರವೇಶಿಸಿದಾಗ, ಇಡೀ ತರಗತಿಯಲ್ಲಷ್ಟೇ ಏಕೆ, ಇಡೀ ಕಾಲೇಜಿನಲ್ಲಿ ನಾನೊಬ್ಬನೇ ಕುಳ್ಳ ವಿದ್ಯಾರ್ಥಿಯಾಗಿದ್ದೆ. ನನ್ನ ಸಹಪಾಠಿ ಹುಡುಗಿಯರೆಲ್ಲ ನನಗಿಂತ ಸಾಕಷ್ಟು ಎತ್ತರವಿದ್ದವರೇ. ಅವರು ಯಾವತ್ತೂ ನನ್ನನ್ನು ಸಹಪಾಠಿಯಂತೆ ಕಾಣಲಿಲ್ಲ. ತಮ್ಮ ಓಣಿಯ ಯಾರದೋ ಮನೆಯ ಪುಟ್ಟ ಹುಡುಗನಂತೆ ನನ್ನೊಂದಿಗೆ ವರ್ತಿಸುತ್ತಿದ್ದರು. ಆಗೆಲ್ಲ ಸಾಕಷ್ಟು ಸಿಟ್ಟು ಬರುತ್ತಿತ್ತು. ನಾನೂ ಎತ್ತರ ಬೆಳೆಯಬೇಕು ಎಂದು ಪದೆ ಪದೆ ಕನಸು ಕಾಣುತ್ತಿದ್ದೆ. ಬೆಳ್ಳಂಬೆಳಿಗ್ಗೆ ಎದ್ದು, ಕಾಲೇಜು ಮೈದಾನ ಹಾಗೂ ಸುತ್ತಮುತ್ತಲಿನ ಮರಗಿಡಗಳ ಕೈಗೆಟಕುವ ಕೊಂಬೆಗಳಿಗೆ ಜೋತು ಬೀಳುತ್ತಿದ್ದೆ. ಹಾಗೆ ಜೋತುಬೀಳುತ್ತಿದ್ದರೆ ಎತ್ತರವಾಗುತ್ತಾರೆ ಎಂದು ನನ್ನ ಗೆಳೆಯರು ಹೇಳಿದ್ದನ್ನು ನಂಬಿದ್ದೆ. ಅದರಿಂದ ಎತ್ತರವೇನೂ ಹೆಚ್ಚಾಗಲಿಲ್ಲ. ಆದರೆ, ಆರೋಗ್ಯಪ್ರಜ್ಞೆ ಚೆನ್ನಾಗಿ ಬೆಳೆಯಿತು. ಮುಂದೆ ನಾನು ಯೋಗಾಸನ ಕಲಿಯಲು ಈ ಪ್ರಯತ್ನ ತುಂಬ ನೆರವಾಯ್ತು.

ಯೋಗಾಸನ ಕಲಿತಿದ್ದು, ಹಿಪ್ನಾಟಿಸಂ ಕಲಿತಿದ್ದು, ಮುಂದೆ ಏರ್‌ಫೋರ್ಸ್‌ ಸೇರಲು ಬಾಲ್ಯ ಮತ್ತು ಕಾಲೇಜಿನ ದಿನಗಳ ಕನಸುಗಳ ಇಂಥ ಪ್ರೇರಣೆಗಳು ಅಪಾರ. ನಿತ್ಯದ ಊಟಕ್ಕೆ ಪರದಾಡಬೇಕಿದ್ದ ಕಾಲೇಜಿನ ದಿನಗಳು ನನ್ನಲ್ಲಿ ಅದೆಷ್ಟು ಅಸಹನೆ ಮೂಡಿಸಿದ್ದವೆಂದರೆ, ಮೊದಲ ಅವಕಾಶಕ್ಕೆ ಏರ್‌ಮನ್‌ ಕೆಲಸ ಸಿಕ್ಕಾಗ, ಎರಡನೇ ವಿಚಾರ ಕೂಡ ಮಾಡದೇ ಮಿಲಿಟರಿ ಸೇರಿಕೊಂಡಿದ್ದೆ. ಆದರೆ, ದುರದೃಷ್ಟ ಅಲ್ಲಿಯೂ ಒಕ್ಕರಿಸಿತ್ತು. ಇಡೀ ತಂಡದಲ್ಲಿ ನಾನೊಬ್ಬನೇ ಕುಳ್ಳ. ದೈಹಿಕ ಪರೀಕ್ಷೆಯಲ್ಲಿ ನನ್ನ ಎತ್ತರವನ್ನು ಮೂರು ಸಲ ಪರೀಕ್ಷಿಸಿದ್ದಾಯ್ತು. ಕೊನೆಗೂ ಕನಿಷ್ಟ ಮಟ್ಟಕ್ಕಿಂತ ಕೇವಲ ಎರಡು ಸೆಂ.ಮೀ. ಎತ್ತರವಿದ್ದುದನ್ನು ದೃಢಪಡಿಸಿಕೊಂಡ ನಂತರವೇ ನನ್ನ ನೇಮಕಾತಿ ಖಚಿತವಾಯ್ತು.

ಸಾಕಷ್ಟು ಎತ್ತರ ಬೆಳೆಯಲಿಲ್ಲ ಎಂಬ ಕೀಳರಿಮೆ ನನ್ನನ್ನು ಕಾಲು ಶತಮಾನ ಕಾಡಿದೆ. ಅದೇ ರೀತಿ ಒಂಚೂರು ದಪ್ಪವಾಗಬೇಕೆಂಬ ಬಯಕೆ ದಶಕಗಳ ಕಾಲ ಜೊತೆಗಿತ್ತು. ತಂತ್ರಜ್ಞಾನ ಕಲಿಯಬೇಕೆಂಬ ಹಂಬಲ, ಇಂಗ್ಲಿಷ್‌ ಓದಿ ಅರ್ಥ ಮಾಡಿಕೊಳ್ಳಬೇಕೆಂಬ ಆಸೆ ಹುಟ್ಟಿದ್ದೇ ಹೀಗೆ. ನಾನು ಪತ್ರಿಕೋದ್ಯಮ ಪ್ರವೇಶಿಸಿದ್ದೂ ಇಂಥದೇ ಒಂದು ಬೆಂಬಿಡದ ಬಯಕೆಯಿಂದಾಗಿ.

ಬರೆಯುತ್ತ ಹೋದರೆ, ಒಂದೊಂದು ಪ್ರಯೋಗದ ಬಗ್ಗೆಯೇ ಪುಟಗಟ್ಟಲೇ ಬರೆಯಬಹುದು. ಮುಂದೆಂದಾದರೂ ಅದನ್ನು ಬರೆದೇನು. ಮುಂದೆಂದೋ ನಕ್ಕುಬಿಡಬಹುದಾದಂಥ ಆಸೆಗಳು ಪ್ರತಿಯೊಬ್ಬ ವ್ಯಕ್ತಿಯನ್ನು ಹೀಗೇ ಕಾಡಿರಬಹುದು ಅಂತ ಅನಿಸುತ್ತದೆ. ಅವತ್ತಿನ ನನ್ನನ್ನು ಇವತ್ತಿನ ದಿನಕ್ಕೆ ಹೋಲಿಸಿದಾಗ, ಇತರರಿಗಿರಲಿ, ನನಗೇ ಸಾಕಷ್ಟು ಅಚ್ಚರಿ ಉಂಟಾಗುತ್ತದೆ. ಎಷ್ಟೊಂದು ದೂರವನ್ನು ಕ್ರಮಿಸಿ ಬಂದೆನೆಲ್ಲ ಎಂದು ಒಮ್ಮೊಮ್ಮೆ ದಿಗಿಲೂ ಆಗುತ್ತದೆ.

ಒಂದೇ ಎರಡೇ, ಇಂಥ ನೂರಾರು ಪ್ರಯೋಗಗಳನ್ನು ಮಾಡಿದ್ದೇನೆ. ಸಾಕಷ್ಟು ಸಾರಿ ದುಬಾರಿ ಬೆಲೆಯನ್ನೂ ಕೊಟ್ಟಿದ್ದೇನೆ. ವರ್ಷಕ್ಕೊಂದರಂತೆ ನೌಕರಿಗಳನ್ನು ಬದಲಿಸಿದ್ದೇನೆ. ಮನೆಗಳನ್ನು ಬದಲಿಸಿದ್ದೇನೆ. ಎಲ್ಲವೂ ಬದಲಾಯ್ತು ಎಂದು ಅನಿಸಿ, ಒಬ್ಬನೇ ಕೂತು ಯೋಚಿಸಿ ನೋಡಿದಾಗ, ನಾನು ಏನೇನೂ ಬದಲಾಗಿಲ್ಲ ಎಂದು ಮತ್ತೆ ಮತ್ತೆ ಅನ್ನಿಸಿದೆ.

ಏಕೆಂದರೆ, ಮಾಡಿದ ತಪ್ಪುಗಳು ಪ್ರಯೋಗನಿರತನಾದಾಗ ಆಗಿದ್ದೇ ಹೊರತು ಉದ್ದೇಶಪೂರ್ವಕವಲ್ಲ. ಮಾಡಿದ ಪ್ರತಿಯೊಂದು ತಪ್ಪಿನಿಂದಲೂ ಪಾಠ ಕಲಿತಿದ್ದೇನೆ. ಕಲಿಯಲು ಯತ್ನಿಸುತ್ತಿದ್ದೇನೆ. ಇವತ್ತು ಏನಾದರೂ ಒಂಚೂರು ವಿವೇಚನೆ, ಅನುಭವ, ಜೀವನಪ್ರೀತಿ ನನ್ನಲ್ಲಿ ಕಂಡು ಬಂದರೆ, ಅವತ್ತಿನ ’ಸಿಲ್ಲಿ’ ಕನಸುಗಳೇ ಅದಕ್ಕೆ ಕಾರಣ ಅಂತ ಮಾತ್ರ ಹೇಳಬಲ್ಲೆ.

ಹೀಗಾಗಿ, ಹೊಸ ತಪ್ಪುಗಳನ್ನು ಮಾಡಲು ಇಷ್ಟಪಡುತ್ತೇನೆ ಮತ್ತು ಅವನ್ನು ಎಂದಿನ ಉತ್ಸಾಹದಿಂದ ಮಾಡುತ್ತಲೇ ಇದ್ದೇನೆ.

- ಚಾಮರಾಜ ಸವಡಿ

ವಸುಧೈವ ಕುಟುಂಬಕಂ (ಭಾಗ-೨)

15 Dec 2009

8 ಪ್ರತಿಕ್ರಿಯೆ


ಲಗ್ನಪತ್ರವನ್ನೊಮ್ಮೆ ನೀವು ನೋಡಬೇಕು. ಅದರ ತುಂಬ ಜೋಡಿಗಳ ಹೆಸರೋ ಹೆಸರು. ಹಾಗಿದ್ದರೂ ಆ ಸಲ ಮದುವೆಯಾಗುತ್ತಿರುವವರ ಸಂಖ್ಯೆ ಕಡಿಮೆ ಇತ್ತು. ಕೇವಲ ಒಂಬತ್ತು ಜೋಡಿಯ ಮದುವೆ. ಅತಿ ಹೆಚ್ಚು ಎಂದರೆ ೨೦ ಜೋಡಿಯ ವಿವಾಹ ಒಮ್ಮೆ ನಡೆದಿತ್ತಂತೆ.

ಅಲ್ಲಿ ಹೋಗಿ ನೋಡಿದರೆ ಸಾಮೂಹಿಕ ಮದುವೆ ನಡೆಯುತ್ತಿದೆಯೇನೋ ಎಂಬಂಥ ವಾತಾವರಣ. ಉದ್ದವಾಗಿ ನಿರ್ಮಿಸಿದ ವೇದಿಕೆಯಲ್ಲಿ ಒಂಬತ್ತು ಮತ್ತು ಒಂಬತ್ತು- ಒಟ್ಟು ೧೮ ನವವಿವಾಹಿತರು ಸಾಲಾಗಿ ಕೂತಿದ್ದರು. ಅಡ್ಡ ಬೇರೆ ಜನ ಬಾರದಂತೆ, ಅಷ್ಟೂ ಜನರ ಫೋಟೊವನ್ನು ಒಂದೇ ಫ್ರೇಮಿನಲ್ಲಿ ತೆಗೆಯುವುದು ಹೇಗೆಂಬ ಪೇಚಾಟ ನಮ್ಮ ಛಾಯಾಗ್ರಾಹಕ ಕೇದಾರನಾಥ ಅವರದು. ಹಾಗೂ ಹೀಗೂ ಯತ್ನಿಸಿ, ಅಡ್ಡ ಬರುತ್ತಿದ್ದವರನ್ನು ಒಂದೆಡೆ ಸರಿಸಿ ಫೋಟೊ ತೆಗೆಯುವ ಹೊತ್ತಿಗೆ ಸಾಕಾಯಿತು.

ಮದುವೆಗೆ ಬಂದವರ ಪೈಕಿ ಮುಕ್ಕಾಲು ಜನ ಮನೆಯವರೇ. ಎಲ್ಲರೂ ಬಳಗವೇ. ಎಲ್ಲರೂ ಎಲ್ಲರಿಗೂ ಪರಿಚಿತರೇ. ಅಪರಿಚಿತರೆಂದರೆ ನಮ್ಮಂಥವರು ಮಾತ್ರ. ಅಕ್ಷತೆ ಹಾಕಿದ ಪ್ರತಿಯೊಬ್ಬರಿಗೂ ಪ್ರತಿಯೊಂದು ಜೋಡಿಯಿಂದ ಪರಿಚಿತ ಮುಗುಳ್ನಗೆ. ಕೈಹಿಡಿದು ಕುಶಲ ವಿಚಾರಣೆ. ದೂರದಲ್ಲಿ ನಿಂತ ಭೀಮಣ್ಣ ನರಸಿಂಗನವರ ಮುಖದ್ಲಲಿ ಧನ್ಯತೆ. ಈ ಒಂಬತ್ತು ಜೋಡಿಯಿಂದ ಮತ್ತೆ ಬದುಕು ಕುಡಿಯೊಡೆಯುತ್ತದೆ. ಬಳಗ ಬೆಳೆಯುತ್ತದೆ. ಜಾನಪದ ಹಾಡಿನಲ್ಲಿ ಮುಗುದೆಯೊಬ್ಬಳು ’ಕರಕಿಯ ಕುಡಿ ಹಂಗ, ಹಬ್ಬಲಿ ಅವರ ರಸಬಳ್ಳಿ’ ಎಂದು ಹಾಡಿದಂತೆ ಲೋಕೂರಿನ ಈ ಅವಿಭಕ್ತ ಕುಟುಂಬ ಚಲ್ಲವರಿದು ಹಬ್ಬುತ್ತ ಹೋಗುತ್ತದೆ.

’ವಸುಧೈವ ಕುಟುಂಬಕಂ’ ಎಂಬ ಸಂದೇಶವನ್ನು ಸದ್ದಿಲ್ಲದೇ ಸಾರುತ್ತದೆ.
 

ಇದು ಒಂದು ಮನೆಯ ಕಥೆ

ನರಸಿಂಗನವರ ಕುಟುಂಬದ ಮೂಲ ಮನೆ ದೊಡ್ಡದು. ನೂರು ಮನೆಗಳಿರಬಹುದಾದ ಈ ಊರಿನಲ್ಲಿ ಇವರಿಗೆ ಒಟ್ಟು ಎಂಟು ಮನೆಗಳಿವೆ. ದೊಡ್ಡ ಮನೆ ಎಂಬುದು ೩೩ ಅಂಕಣಗಳುಳ್ಳ, ೨೨ ಕೋಣೆಗಳುಳ್ಳ, ೪,೦೩೦ ಚದರಡಿ ವಿಸ್ತಾರದ ದೊಡ್ಡ ಬಂಗಲೆ. ಆದರೆ ಇಲ್ಲಿ ವಾಸಿಸುವವರ ಸಂಖ್ಯೆ ಕಡಿಮೆ. ಊಟ, ಮಕ್ಕಳು ಹಾಗೂ ಹೆಣ್ಣುಮಕ್ಕಳ ವಾಸಕ್ಕಾಗಿ ಇದನ್ನು ಬಳಸಲಾಗುತ್ತಿದೆ. ಕುಟುಂಬದ ಬಳಕೆಯಲ್ಲಿ ಇದು ಊಟದ ಮನೆ. ಇನ್ನಿತರ ಮನೆಗಳ ಪೈಕಿ ಒಂದರಲ್ಲಿ ಹಾಲಿನ ಡೈರಿಯಿದೆ, ಇನ್ನೊಂದರಲ್ಲಿ ಹಿಟ್ಟಿನ ಗಿರಣಿ, ಮತ್ತೊಂದರಲ್ಲಿ ಉಗ್ರಾಣ... ಪಟ್ಟಿ ಹೀಗೇ ಬೆಳೆಯುತ್ತದೆ. 

ಮಕ್ಕಳು, ವೃದ್ಧರು ಹಾಗೂ ಹುಡುಗ-ಹುಡುಗಿಯರು ಮೊದಲ ಅಂತಸ್ತಿನಲ್ಲಿರುವ ಸಿನಿಮಾ ಥೇಟರ್ ಮಾದರಿಯ ದೊಡ್ಡ ಹಾಲ್‌ನಲ್ಲಿ ಮಲಗುತ್ತಾರೆ. ದಂಪತಿಗಳಿಗಾಗಿ ಹಾಲ್‌ನ ಎರಡೂ ಕಡೆ ವಸತಿಗೃಹಗಳಲ್ಲಿ ಇರುವಂತೆ ಎದುರುಬದರು ಕೋಣೆಗಳಿವೆ. ಉಳಿದಂತೆ ಕೆಲಸದ ಮೇಲಿರುವವರು ಬಾಕಿ ಏಳು ಮನೆಗಳಲ್ಲಿ ತಂತಮ್ಮ ಪಾಳಿ ಇರುವ ಕಡೆ ಮಲಗುತ್ತಾರೆ.
 

ತೊಟ್ಟಿಲುಗಳೆಲ್ಲ ಕೆಳ ಅಂತಸ್ತಿನಲ್ಲಿ. ಬಾಣಂತಿಯರ ಕೋಣೆಗಳೂ ಅಲ್ಲಿಯೇ. ಉಳಿದಂತೆ ಸ್ನಾನದ ಮನೆ, ಊಟದ ಮನೆಗಳು ಕೆಳಗಿವೆ. ಕೆಳ ಅಂತಸ್ತಿನಲ್ಲಿ ಏನಿಲ್ಲವೆಂದರೂ ಏಳೆಂಟು ತೊಟ್ಟಿಲುಗಳಿವೆ. ಮಗು ದೊಡ್ಡದಾದಂತೆ ತೊಟ್ಟಿಲನ್ನು ಒಂದೆಡೆ ಕಂಬಕ್ಕೆ ಬಿಗಿದು ಕಟ್ಟುತ್ತಾರೆ. ಆದರೆ ಯಾವತ್ತೂ ಅದನ್ನು ಬಿಚ್ಚಿ ಇಡುವುದಿಲ್ಲ. ಏಕೆಂದರೆ ಒಬ್ಬರಲ್ಲ ಒಬ್ಬರು ಗರ್ಭಿಣಿಯರಾಗಿರುವಾಗ ಅದನ್ನು ತುಂಬ ದಿನ ಹಾಗೆ ಇಡುವ ಪ್ರಮೇಯವೇ ಒದಗುವುದಿಲ್ಲ!

ಹೆಗ್ಗಡೆ ಮೆಚ್ಚುಗೆ
 

ಲೋಕೂರಿನ ಅವಿಭಕ್ತ ಕುಟುಂಬದ ಬಗ್ಗೆ ಸ್ಥಳೀಯ ಪತ್ರಿಕೆಗಳ ನಂತರ, ದೊಡ್ಡ ಮಟ್ಟದಲ್ಲಿ ಮೊದಲು ಸುದ್ದಿ ಮಾಡಿದ್ದು ‘ದಿ ಹಿಂದು’ ಆಂಗ್ಲ ಪತ್ರಿಕೆ. ಇದನ್ನು ನೋಡಿದ ಬಿಬಿಸಿ ತಂಡ ಗಿರೀಶ ಕಾರ್ನಾಡ್ ಅವರನ್ನು ಸಂಪರ್ಕಿಸಿ, ಸ್ಥಳೀಯ ಸಹಕಾರಕ್ಕೆ ಕೋರಿತು. ಎಲ್ಲ ವ್ಯವಸ್ಥೆಯಾದ ನಂತರ ಬಿಬಿಸಿಯ ದೊಡ್ಡ ತಂಡ ಲೋಕೂರಿಗೆ ಬಂದು ೧೮ ದಿನಗಳ ಕಾಲ ಚಿತ್ರೀಕರಣ ನಡೆಸಿತು.

ನಂತರ ನಡೆದಿದ್ದು ಇತಿಹಾಸ.
 

ಬಿಬಿಸಿ ಸಾಕ್ಷ್ಯಚಿತ್ರ ನೋಡಿದ ನಂತರ ಜಪಾನ್ ಹಾಗೂ ಕೊರಿಯಾ ದೇಶಗಳಿಂದಲೂ ಬಂದ ಟಿವಿ ತಂಡಗಳು ವಿಸ್ತೃತ ಚಿತ್ರೀಕರಣ ನಡೆಸಿ ಲೋಕೂರು ಅವಿಭಕ್ತ ಕುಟುಂಬದ ಕತೆಯನ್ನು ಇಡೀ ಜಗತ್ತಿಗೆ ಸಾರಿ ಹೇಳಿದವು.

ಒಮ್ಮೆ ಈ ಕಡೆ ಬಂದಾಗ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ತಮ್ಮ ಕುಟುಂಬದೊಂದಿಗೆ ಲೋಕೂರಿಗೆ ಭೇಟಿ ನೀಡಿ ಒಂದಿಡೀ ಹಗಲನ್ನು ನರಸಿಂಗನವರ ಕುಟುಂಬದ ಜತೆಗೆ ಕಳೆದರು. ಸಹಬಾಳ್ವೆ ಬೋಧಿಸಿದ ಜೈನ ತೀರ್ಥಂಕರರ ಮಾದರಿಯನ್ನು ಸಾಕಾರ ಮಾಡಿರುವ ಕುಟುಂಬವನ್ನು ಕೊಂಡಾಡಿದರು. ನರಸಿಂಗನವರ ಕುಟುಂಬಕ್ಕೆ ಅದೊಂದು ಮರೆಯಲಾಗದ ದಿನ.
 

ಎಲ್ಲರ ಹೆಸರು ನೆನಪಿಲ್ಲ!
 

ನರಸಿಂಗನವರ ಕುಟುಂಬದ ಹಿರಿಯ ಭೀಮಣ್ಣನವರಿಗೆ ಕುಟುಂಬದ ಹಿರಿಯ ಸದಸ್ಯರನ್ನು ಬಿಟ್ಟರೆ ಮಕ್ಕಳೆಲ್ಲರ ಹೆಸರುಗಳು ನೆನಪಿಲ್ಲ. 
ಅದು ಸಾಧ್ಯವೂ ಇಲ್ಲ. ‘ಸಣ್ಣ ಮಕ್ಕಳ ಹೆಸರು ನೆನಪಿಡುವುದು ಕಷ್ಟ. ಹೆಸರಿಡಿದು ಕರೆಯಬೇಕಾದಾಗ ಅವರವರ ತಾಯಂದಿರನ್ನು ಕೇಳುತ್ತೇನೆ. ಇಲ್ಲದ್ದಿದರೆ ಏ ಪುಟ್ಟ, ಏ ಪುಟ್ಟಿ, ಏ ತಮ್ಮಾ ಎಂದು ಮಾತಾಡಿಸುತ್ತೇನೆ. ಮನೆಯ ನೂರಾರು ಜನರ ಹೆಸರನ್ನು ನೆನಪಿಡುವುದಾದರೂ ಹೇಗೆ?’ ಎಂದು ತಲೆ ಕೊಡವುತ್ತಾರೆ ಅವರು.

ಆದರೆ, ಇವು ತಮ್ಮ ಮನೆ ಮಕ್ಕಳು, ಇವು ಬೇರೆಯವರವು ಎಂಬುದು ಅವರಿಗೆ ಗೊತ್ತಾಗುತ್ತದೆ. ಅಲ್ಲದೇ, ಈ ಮಗುವಿನ ತಂದೆ ಇಂಥವರು, ತಾಯಿ ಇಂಥವರು ಎಂಬುದೂ ಗೊತ್ತಾಗುತ್ತದೆ. ಮನೆಯಲ್ಲಿರುವ ಎಲ್ಲರಿಗೂ ಮನೆಯ ಸದಸ್ಯರಾರು, ಹೊರಗಿನವರಾರು ಎಂಬುದು ಚೆನ್ನಾಗಿ ಗೊತ್ತಿದೆ.

ಸ್ವಂತ ಡೇರಿ, ಹಿಟ್ಟಿನ ಗಿರಣಿ!
 

ನರಸಿಂಗನವರ ಕುಟುಂಬದ ಬಳಕೆಗೆಂದೇ ಹಿಟ್ಟಿನ ಗಿರಣಿಯೊಂದನ್ನು ಹಾಕಲಾಗಿದೆ. ಕುಟುಂಬದ ಬಳಕೆಗೆಂದೇ ಸ್ವಂತ ಡೇರಿ ಇದೆ. ನಾವು ನೋಡಿದಾಗ ಅಲ್ಲಿ ೪೦ರಿಂದ ೪೫ ಹಸು-ಎಮ್ಮೆಗಳಿದ್ದವು. ‘ಮೊದಲು ಎಂಬತ್ತಕ್ಕೂ ಹೆಚ್ಚು ದನಕರುಗಳ್ಳಿದ್ದವು. ಆದರೆ ಮೂರು ವರ್ಷ ಸತತ ಕಾಡಿದ ಬರಗಾಲದಲ್ಲಿ ಮೇವಿನ ಸಮಸ್ಯೆ ಬಂದು ಅರ್ಧದಷ್ಟು ದನಕರುಗಳನ್ನು ಮಾರಿಬಿಟ್ಟೆ. ದಿನಕ್ಕೆ ೩೦ರಿಂದ ೪೦ ಲೀಟರ್ ಹಾಲು ಬೇಕಾಗುತ್ತದೆ. ಹೀಗಾಗಿ ಡೇರಿ ಇಡುವುದು ಅನಿವಾರ್ಯ’ ಎನ್ನುತ್ತಾರೆ ಭೀಮಣ್ಣ.
ಮನೆಯ ಸದಸ್ಯರಲ್ಲಿ ಅರ್ಧಕ್ಕರ್ಧ ಜನ ಚಹ-ಕಾಫಿ ಕುಡಿಯುವುದಿಲ್ಲ. ಹೀಗಾಗಿ ಇಷ್ಟು ಮಾತ್ರದ ಹಾಲು ಸಾಕು. ಮನೆ ತುಂಬ ಇರುವ ಚಿಕ್ಕ ಮಕ್ಕಳಿಗೆಂದೇ ಅರ್ಧಕ್ಕಿಂತ ಹೆಚ್ಚು ಹಾಲು ಬಳಕೆಯಾಗುತ್ತದೆ. ಉಳಿದಂತೆ ದಿನಸಿ ಸಾಮಾನುಗಳನ್ನಷ್ಟೇ ಹೊರಗಿನಿಂದ ಖರೀದಿ ಮಾಡಲಾಗುತ್ತದೆ. ಮಳೆಗಾಲ ಬಿಟ್ಟರೆ, ಉಳಿದ ದಿನಗಳ್ಲಲಿ ತರಕಾರಿಯೂ ಹೊರಗಿನಿಂದ ಬರುತ್ತದೆ. ಎಷ್ಟೇ ಕಡಿಮೆ ಬಳಸಿದರೂ ಮನೆಯ ವಿದ್ಯುತ್ ಬಿಲ್ ತಿಂಗಳಿಗೆ ರೂ.೧೦,೦೦೦ದಿಂದ ೧೨,೦೦೦ ಬರುತ್ತದೆ.

ಹಳ್ಳಿಯಾಗಿದ್ದರಿಂದ ಕರೆಂಟ್ ಇಲ್ಲದಿರುವುದೇ ಹೆಚ್ಚು. ಕತ್ತಲ್ಲಲಿ ರೊಟ್ಟಿ ಸುಡುವ ಫಜೀತಿ ನೋಡಲಾಗದೇ ಧಾರವಾಡದ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ಉಚಿತವಾಗಿ ಸೋಲಾರ್ ಲೈಟಿಂಗ್ ವ್ಯವಸ್ಥೆ ಮಾಡಿಕೊಟ್ಟಿದೆ. ಬಿಬಿಸಿಯವರು ಸಾಕ್ಷ್ಯಚಿತ್ರ ಮಾಡಿದ ನಂತರ ಟಿವಿ ಒಂದನ್ನು ಉಡುಗೊರೆಯಾಗಿ ಕೊಟ್ಟಿದ್ದಾರೆ. ಹಾಲ್ ಮಧ್ಯೆ ಇರುವ ಟಿವಿಯಲ್ಲಿ ಕನ್ನಡ ಸಿನಿಮಾ ನೋಡಲು ಮನೆ ಮಂದಿ ಕೂತರೆ ಟಾಕೀಸ್‌ಗಳು ನಾಚಬೇಕು.


ವ್ಯಾಪಾರವೂ ಆಗುತ್ತದೆ ಹಾಗೂ ಮನೆ ಬಳಕೆಗೂ ಆಗುತ್ತದೆ ಎಂದು ಮೊದಲು ಕಿರಾಣಿ (ದಿನಸಿ) ಅಂಗಡಿಯೊಂದನ್ನು ತೆರೆಯಲಾಗಿತ್ತು. ಆದರೆ ಸದಾ ಮನೆಯಲ್ಲಿರುವ ಮೂವತ್ತಕ್ಕೂ ಹೆಚ್ಚು ಮಕ್ಕಳು ಅಂಗಡಿಯಲ್ಲಿದ್ದ ಸಿಹಿ ತಿನಿಸು, ಪೆಪ್ಪರ್‌ಮಿಂಟ್, ಬೆಲ್ಲ, ಹುರಿಗಡಲೆ ಇತ್ಯಾದಿ ಸುಲಭ ಖಾದ್ಯ ವಸ್ತುಗಳನ್ನು ಎರಡೇ ದಿನಗಳಲ್ಲಿ ಖಾಲಿ ಮಾಡಿದ್ದರಿಂದ, ಅಂಗಡಿಯನ್ನು ಮುಚ್ಚಲಾಯಿತು.


ನಿತ್ಯದ ದಾಸೋಹಕ್ಕೆ ಸಾಮಾನು ಸರಬರಾಜು ಮಾಡುವ ಕೆಲಸವನ್ನು ಒಬ್ಬನಿಗೆ ವಿಧಿಸಲಾಗಿದೆ. ಆತನ ಕೆಲಸ ಏನೆಂದರೆ, ಬೆಳಿಗ್ಗೆ ಉಗ್ರಾಣದಿಂದ ರೊಟ್ಟಿಗೆ ಹಿಟ್ಟು, ಉಪ್ಪು, ಸೌದೆ ವ್ಯವಸ್ಥೆ, ಚಹ-ಕಾಫಿ-ಸಕ್ಕರೆ ಎತ್ತಿಡುವುದು, ಅವತ್ತಿನ ಅಕ್ಕಿ, ಗೋದಿ, ಬೇಳೆ ಕಾಳು, ತರಕಾರಿ, ತುಪ್ಪ ಇತ್ಯಾದಿ ವಸ್ತುಗಳನ್ನು ಅಗತ್ಯಕ್ಕೆ ತಕ್ಕ ಪ್ರಮಾಣದಲ್ಲಿ ನೀಡುವುದು; ಕೊರತೆಯಾದ ವಸ್ತುಗಳ ಯಾದಿ ತಯಾರಿಸಿ, ಹಿರಿಯರಿಗೆ ತೋರಿಸಿ ಖರೀದಿ ಮಾಡುವುದು, ಇತ್ಯಾದಿ. ಹೀಗಾಗಿ ಅಡುಗೆಗೆ ಯಾವ ಸಾಮಾನುಗಳ ಕೊರತೆಯೂ ಕಾಡುವುದಿಲ್ಲ. 


ಅಡುಗೆ ಮಾಡಲು ಪಾಳಿ
 

ಇಲ್ಲಿ ನಿತ್ಯ ೧,೨೦೦ಕ್ಕೂ ಹೆಚ್ಚು ರೊಟ್ಟಿಗಳನ್ನು ಮಾಡಲಾಗುತ್ತದೆ. ಹಬ್ಬ ಅಥವಾ ಮದುವೆ ಬಂದರೆ ಈ ಸಂಖ್ಯೆ ಇನ್ನೂ ಹೆಚ್ಚು. ಕುಟುಂಬದ ಸದಸ್ಯರ ಪೈಕಿ ಅರ್ಧದಷ್ಟು ಹೆಣ್ಣುಮಕ್ಕಳೇ ಇರುವುದರಿಂದ ಅಡುಗೆ ಮಾಡಲು ಪಾಳಿ ರೂಪಿಸಲಾಗಿದೆ. ಬೆಳಿಗ್ಗೆ ೪ ಗಂಟೆಗೆ ಮೊದಲ ಪಾಳಿ ಹೆಣ್ಣುಮಕ್ಕಳು ಎದ್ದು ಕೆಲಸಕ್ಕೆ ತೊಡಗುತ್ತಾರೆ. ೫ ಗಂಟೆಯಿಂದ ರೊಟ್ಟಿ ಬಡಿಯಲು ಶುರು ಮಾಡಿದರೆ, ನೀವು ನಂಬುತ್ತೀರೋ ಇಲ್ಲವೋ, ರಾತ್ರಿ ೧೧ರವರೆಗೆ ರೊಟ್ಟಿ ಬಡಿಯುವ ಸಪ್ಪಳ ನಿಲ್ಲುವುದೇ ಇಲ್ಲ.

ಮೊದಲ ಪಾಳಿಯಲ್ಲಿ ನಾಲ್ಕು ಜನ ಹೆಣ್ಣುಮಕ್ಕಳು. ಇವರ ಪೈಕಿ ಇಬ್ಬರು ಊಟಕ್ಕೆ ಅಥವಾ ಬೇರೆ ಕೆಲಸಗಳಿಗೆ ಎದ್ದರೆ ಇನ್ನಿಬ್ಬರು ರೊಟ್ಟಿ ಬಡಿಯುವದನ್ನು ಮುಂದುವರೆಸುತ್ತಾರೆ. ಒಂದು ಕಡೆ ರೊಟ್ಟಿ ಬೇಯುತ್ತಿದ್ದರೆ, ಹೊರಗೆ ಪಡಸಾಲೆಯಲ್ಲಿ ತಮಗೆ ಅನುಕೂಲವಾದ ಸಮಯದಲ್ಲಿ ಊಟ ಮಾಡಲು ಬಂದು ಹೋಗುವವರು ಇದ್ದೇ ಇರುತ್ತಾರೆ. ಯಾರೂ ಇಲ್ಲ ಎಂದಾಗ ಮಾತ್ರ ರೊಟ್ಟಿ ಬಡಿಯುವವರಿಗೆ ಬಿಡುವು. 


ಬೆಳಗಿನ ಪಾಳಿ ಮಧ್ಯಾಹ್ನ ೪ಕ್ಕೆ ಮುಗಿದರೆ ಎರಡನೇ ಪಾಳಿ ರಾತ್ರಿ ೧೧ಕ್ಕೆ ಮುಕ್ತಾಯವಾಗುತ್ತದೆ. ಪ್ರತಿ ವಾರ ಪಾಳಿ ಸಮಯ ಬದಲಾಗುತ್ತದೆ. ರೊಟ್ಟಿ ಬಡಿಯುವುದನ್ನು ಬಿಟ್ಟರೆ, ಚಿಕ್ಕ ಮಕ್ಕಳ ಕೆಲಸ ಮಾಡುವುದು, ನೀರು ಕಾಯಿಸುವುದು, ಬಟ್ಟೆ ತೊಳೆಯುವುದು, ಶಾಲೆಗೆ ಹೋಗುವ ಮಕ್ಕಳನ್ನು ಸಿದ್ಧಗೊಳಿಸುವುದು- ಹೀಗೆ ತರಹೇವಾರಿ ಕೆಲಸಗಳಿರುತ್ತವೆ.
 

ಊಟಕ್ಕೆ ಯಾವ ನಿಗದಿತ ಸಮಯವೂ ಇಲ್ಲ. ಎಲ್ಲರೂ ತಮ್ಮ ಕೆಲಸಗಳ ಮಧ್ಯೆ ಬಿಡುವು ಮಾಡಿಕೊಂಡು ಬಂದು ಊಟ ಮಾಡಿ ಹೋಗುತ್ತಾರೆ. ಬೇರೆ ಯಾವ ಸಮಯದಲ್ಲಿ ಸಿಗದಿದ್ದರೂ  ಊಟದ ಸಮಯದಲ್ಲಿ ಮನೆಯ ಸದಸ್ಯರು ಬಂದೇ ಬರುತ್ತಾರೆ. ಹೋಟೆಲ್‌ಗೆ ಹೋಗುವ ಚಟ ಯಾರಲ್ಲೂ ಇಲ್ಲದಿರುವುದರಿಂದ ಊಟಕ್ಕೆ ಬರುವುದು ಗ್ಯಾರಂಟಿ.
 


ಮನೆ ತುಂಬ ಸಮಾನತೆ
 

ಜೈನ ಸಮಾಜದಲ್ಲಿ ಮಹಿಳೆಯರಿಗೆ ತುಂಬ ಗೌರವ.
 

ಆ ಪರಂಪರೆ ಲೋಕೂರಿನ ನರಸಿಂಗನವರ ಮನೆಯಲ್ಲಿಯೂ ಇದೆ. ಇಲ್ಲಿ ಮಹಿಳೆ ಕೆಲಸ ಮಾಡುವ ಯಂತ್ರವಲ್ಲ. ಆಕೆ ಹೊರಗೆ ಹೋಗಿ ದುಡಿಯುವ ಸಂದರ್ಭ ಬಂದಿಲ್ಲ ಎಂಬ ಕಾರಣಕ್ಕೆ ಮನೆಯಲ್ಲಿಯೇ ಉಳಿದಿದ್ದಾಳೆ. ಓದುತ್ತೇನೆಂದ ೨೦-೨೨ ಹುಡುಗ-ಹುಡುಗಿಯರಿಗೆಂದೇ ಧಾರವಾಡದ ಮಾಳಮಡ್ಡಿಯಲ್ಲಿ ದೊಡ್ಡ ಮನೆ ಮಾಡಲಾಗಿದೆ. ಮನೆ ನೋಡಿಕೊಳ್ಳಲು ಇಬ್ಬರು ಹಿರಿಯ ಹೆಣ್ಣುಮಕ್ಕಳನ್ನು ಅಲ್ಲಿಗೆ ಕಳಿಸಲಾಗಿದೆ.

ಲೋಕೂರಿನ ಮನೆಯಲ್ಲಿ ಸ್ನಾನ ಮಾಡಿದ ನಂತರ ಎಲ್ಲ ಗಂಡಸರೂ ತಮ್ಮ ಒಳ ಉಡುಪುಗಳನ್ನು ತಾವೇ ತೊಳೆದುಕೊಳ್ಳುತ್ತಾರೆ. ಅಷ್ಟರಮಟ್ಟಿಗೆ ಮನೆಯ ಹೆಣ್ಣುಮಕ್ಕಳಿಗೆ ಕೆಲಸ ಕಡಿಮೆಯಾಗುತ್ತದೆ ಎಂಬ ಭಾವನೆ ಅವರದು. ಪ್ರತಿಯೊಬ್ಬರೂ ಸಾಧ್ಯವಾದಷ್ಟೂ ತಂತಮ್ಮ ಕೆಲಸಗಳನ್ನು ತಾವೇ ಮಾಡುವುದರಿಂದ ಹೆಣ್ಣುಮಕ್ಕಳು ನಿರಾಳ.


ಯಾವೊಬ್ಬ ತಾಯಿಯೂ ಇದು ತನ್ನ ಮಗು, ಅದು ಪರರದು ಎಂಬ ಭೇದ ಮಾಡುವುದಿಲ್ಲ. ಹಾಲೂಡಿಸುವ ಹಂತ ದಾಟಿದ ನಂತರ ಮಗು ಎಲ್ಲರಿಗೂ ಸೇರಿದ್ದು. ಶಾಲೆಗೆ ಹೋಗುವ ಹೆಣ್ಣುಮಕ್ಕಳು ತಮ್ಮ ತಾಯಿಯ ಕೈಯಿಂದಲೇ ಜಡೆ ಹಾಕಿಸಿಕೊಳ್ಳಬೇಕು ಎಂಬ ನಿಯಮ ಇಲ್ಲ. ಯಾರು ಖಾಲಿ ಇರುತ್ತಾರೋ ಅವರ ಮುಂದೆ ಹೋಗಿ ಮಗು ಕೂಡುತ್ತದೆ. ಹೀಗಾಗಿ ಹೆಣ್ಣುಮಕ್ಕಳಲ್ಲಿ ಒಗ್ಗಟ್ಟು ಬೆಳೆದಿದೆ. ಕಷ್ಟ ಮತ್ತು ಸುಖವನ್ನು ಒಟ್ಟಿಗೇ ಹಂಚಿಕೊಳ್ಳುವುದನ್ನು ಕಲಿಸಿದೆ. 


ಜವಳಿ ಖರೀದಿ!
 

ವರ್ಷಕ್ಕೆ ಎರಡು ಮೂರು ಸಂದರ್ಭಗಳಲ್ಲಿ ಮನೆ ಮಂದಿಗೆಲ್ಲ ಹೊಸ ಬಟ್ಟೆ ಖರೀದಿಸಲಾಗುತ್ತದೆ. ಆ ಸಂಭ್ರಮ ನೋಡಲು ಎರಡು ಕಣ್ಣು ಸಾಲವು. ಅತ್ಯಂತ ಸಾಧಾರಣ ಬಟ್ಟೆ ಖರೀದಿಸಿದರೂ, ಒಂದು ಸಲದ ಖರೀದಿ ಮೌಲ್ಯ ರೂ.೪೦,೦೦೦ಕ್ಕಿಂತ ಕಡಿಮೆಯಾಗುವುದಿಲ್ಲ. 

ಮದುವೆ ಜವಳಿ ಖರೀದಿ ಇನ್ನೂ ಸಂಭ್ರಮದ್ದು. ಏನಿಲ್ಲವೆಂದರೂ ರೂ.೨ರಿಂದ ೨.೫ ಲಕ್ಷ ಜವಳಿ ಖರೀದಿಯಾಗುತ್ತದೆ. ಅದನ್ನು ಟ್ರಾಕ್ಟರ್ ಅಥವಾ ಟ್ರ್ಯಾಕ್ಸ್ ಮೂಲಕ ಹೇರಿಕೊಂಡು ಬರಲಾಗುತ್ತದೆ. ಬಟ್ಟೆ ಹೊಲಿಯುವವರಿಗಂತೂ ತಿಂಗಳಗಟ್ಟಲೆ ಬಿಡುವಿಲ್ಲದ ಕೆಲಸ.

ಮದುವೆಯಲ್ಲಿ ಖರ್ಚು ಐದಾರುಪಟ್ಟು ಹೆಚ್ಚಾಗುತ್ತದೆ. ಬೆಲ್ಲ ಹಾಕಿದ ಉಂಡಿ ಮಾಡಿಸಿದರೆ, ಮನೆಯ ಜನರಿಗೇ ಸಾವಿರಾರು ಉಂಡಿ ಬೇಕಾಗುತ್ತವೆ. ಕ್ವಿಂಟಾಲ್‌ಗಟ್ಟಲೇ ಅನ್ನ, ಕಡಾಯಿಗಟ್ಟಲೇ ಸಾರು ಮನೆ ಮಂದಿಗೇ ಬೇಕು. ಇದರ ಜತೆಗೆ ಮದುವೆಗೆ ಬಂದ ನೆಂಟರು, ಊರ ಜನರು ಸೇರಿದರೆ ಅದೊಂದು ಜಾತ್ರೆ. ಆದರೂ ಯಾವ ವಸ್ತುವಿಗೂ ಕೊರತೆಯಾಗುವುದಿಲ್ಲ. ಒಬ್ಬರಲ್ಲಿಯೂ ಅಸಮಾಧಾನ ತೋರುವುದಿಲ್ಲ. 


ನೂರು ಮತ, ಒಬ್ಬ ತಾ.ಪಂ. ಸದಸ್ಯ!
 

ನರಸಿಂಗನವರ ಮನೆಯಲ್ಲಿಯೇ ಕನಿಷ್ಠ ನೂರು ಮತಗಳಿವೆ. ಹೀಗಾಗಿ ಚುನಾವಣೆ ಬಂತೆಂದರೆ ಈ ಮನೆಗೆ ಆಗಮಿಸದ ಅಭ್ಯರ್ಥಿಯೇ ಇಲ್ಲ. ಅವರಿವರಿಗೆ ಓಟು ಹಾಕುವುದೇಕೆ ಎಂಬ ವಿಚಾರ ಬಂದಾಗ ಕುಟುಂಬದ ಸದಸ್ಯನೊಬ್ಬ ಚುನಾವಣೆಗೆ ನಿಲ್ಲಲು ಮುಂದಾದ. ಟಿಕೆಟ್ ಕೊಡಲು ರಾಜಕೀಯ ಪಕ್ಷಗಳ ನಡುವೆಯೇ ಸ್ಪರ್ಧೆ ನಡೆಯಿತು. ಕೊನೆಗೂ ಗೆದ್ದಿದ್ದು ಜೆಡಿಎಸ್. ಆ ಪಕ್ಷದ ಟಿಕೆಟ್ ಪಡೆದ ನರಸಿಂಗನವರ್ ಕುಟುಂಬದ ಮಂಜುನಾಥ ತಾಲ್ಲೂಕು ಪಂಚಾಯತಿ ಸ್ಪರ್ಧೆಗೆ ನಿಂತ. ಅನಾಯಾಸವಾಗಿ ಆರಿಸಿಯೂ ಬಂದ.

ಇಡೀ ಮನೆ ಮಂದಿಯ ಸಾಮಾನ್ಯ ಕಾಯಿಲೆಗಳಿಗೆಂದೇ ಚಿಕ್ಕ ಔಷಧ ಭಂಡಾರ ಮನೆಯಲ್ಲಿದೆ. ಕಾಯಿಲೆ ಕೊಂಚ ಉಲ್ಬಣಿಸಿದರೆ ನೋಡಲು ಕುಟುಂಬ ವೈದ್ಯ ಹುಬ್ಬಳ್ಳಿಯ ಡಾ. ಆರ್.ಬಿ. ಪಾಟೀಲ ಇದಾರೆ.


ನರಸಿಂಗನವರ್ ಕುಟುಂಬ ಕುಸ್ತಿಪಟುಗಳಿಗೆ ಹೆಸರುವಾಸಿ. ಮನೆಯ ಸಾಮಾನುಗಳು, ಯಂತ್ರಗಳು ದುರಸ್ತಿಗೆ ಬಂದರೆ ಇರಲಿ ಎಂದು ಕುಟುಂಬದ ಸದಸ್ಯ ದೇವೇಂದ್ರನಿಗೆ ತರಬೇತಿ ಕೊಡಿಸಲಾಗಿದೆ. ಟ್ರಾಕ್ಟರ್, ಟ್ರ್ಯಾಕ್ಸ್, ಹಿಟ್ಟಿನ ಗಿರಣಿ- ಇತ್ಯಾದಿ ವಾಹನಗಳು ಹಾಗೂ ಯಂತ್ರಗಳ ದುರಸ್ತಿ ಈತನ ಕೆಲಸ. ಸರ್ಕಾರಿ ಕೆಲಸ ನೋಡಿಕೊಳ್ಳಲು ತಾ.ಪಂ. ಸದಸ್ಯ ಮಂಜುನಾಥ, ಕೃಷಿ ನೋಡಿಕೊಳ್ಳಲು ಪದ್ಮಣ್ಣ, ಮನೆ ವ್ಯವಹಾರ ನಿಭಾಯಿಸಲು ಮಹಾವೀರ, ಡೇರಿ ನೋಡಿಕೊಳ್ಳಲು ಧರ್ಮೇಂದ್ರ ಇದ್ದಾರೆ. ಇವರೆಲ್ಲರ ಮೇಲೆ ಭೀಮಣ್ಣನವರ ಉಸ್ತುವಾರಿ ಇದೆ.
 

ಕರ್ಮ ದೂರಾದವು...
 

ನರಸಿಂಗನವರ್ ಅವರ ಅವಿಭಕ್ತ ಕುಟುಂಬ ಒಂದು ಪ್ರೇಕ್ಷಣೀಯ ಸ್ಥಳವೇ ಸರಿ. ಪ್ರತಿ ವಾರ ಒಬ್ಬಿಬ್ಬರು ಪ್ರವಾಸಿಗರು ಇದ್ದೇ ಇರುತ್ತಾರೆ. ಒಮ್ಮೊಮ್ಮೆ ದೂರದ ಊರುಗಳ ಶಾಲೆಯಿಂದ ಮಕ್ಕಳು ಪ್ರವಾಸ ಬರುವುದೂ ಉಂಟು. ಆಗೆಲ್ಲ ಮಕ್ಕಳ ಊಟ ಈ ಮನೆಯಲ್ಲಿಯೇ. ಜಗಳವಾಡಿ ದೂರಾದ ದಂಪತಿಗಳು, ಬೇರೆ ಮನೆ ಮಾಡಬೇಕೆಂದು ಮೊಂಡು ಕೂತ ಎಳೆಯ ದಂಪತಿಗಳನ್ನು ಕರೆದುಕೊಂಡು ಹಿರಿಯರು ಈ ಮನೆಗೆ ಬರುವುದೂ ಉಂಟು. ಯಾರೇ ಬಂದರೂ ಮನೆಯವರಿಗೆ ಬೇಸರವಿಲ್ಲ. ಅವರು ಕೇಳುವ ಪ್ರಶ್ನೆಗಳಿಗೆ ಸಮಾಧಾನದಿಂದಲೇ ಉತ್ತರ ಕೊಡುತ್ತಾರೆ.
ಬಂದವರೂ ಅಷ್ಟೇ, ತೆರಳುವಾಗ, ‘ನಿಮ್ಮ ಮನೆಗೆ ಬಂದು ನಮ್ಮ ಕರ್ಮ ದೂರಾದವು. ದೇವರು ನಿಮ್ಮನ್ನು ಹೀಗೇ ಚೆನ್ನಾಗಿಟ್ಟಿರಲಿ’ ಎಂದು ಹರಸುತ್ತಾರೆ. ಅದೇ ನಮ್ಮ ಪಾಲಿಗೆ ದೊಡ್ಡ ಆಶೀರ್ವಾದ ಎನ್ನುತ್ತಾರೆ ಭೀಮಣ್ಣ. 


ಆಸಕ್ತರು ‘ಭೀಮಣ್ಣ ನರಸಿಂಗನವರ್, ಅಂಚೆ: ಲೋಕೂರು, ತಾ/ಜಿ. ಧಾರವಾಡ’ ಇಲ್ಲಿಗೆ ಅಥವಾ ಮಂಜುನಾಥ ಅವರನ್ನು ದೂರವಾಣಿ: ೯೩೪೩೧ ೦೯೫೨೭ ಮೂಲಕ ಸಂಪರ್ಕಿಸಬಹುದು. 

ಕುಟುಂಬಗಳ ಮಾತು ಹಾಗಿರಲಿ, ರಾಜ್ಯ-ದೇಶಗಳೇ ತುಂಡಾಗಿಹೋಗುತ್ತಿರುವ ಈ ದಿನಗಳಲ್ಲಿ
ಲೋಕೂರಿನ  ಈ ಅವಿಭಕ್ತ ಕುಟುಂಬ ಅಚ್ಚರಿ ಹುಟ್ಟಿಸುವ ತಾಣ. ಈ ಮನೆಯನ್ನು ನೋಡುತ್ತಿದ್ದಂತೆ ‘ವಸುಧೈವ ಕುಟುಂಬಕಮ್‌’ ಎಂಬ ಮಾತಿನ ಅರ್ಥ ತನಗೆ ತಾನೇ ಹೊಳೆಯುತ್ತದೆ. ಮನಸ್ಸು ತುಂಬಿ ಬರುತ್ತದೆ. 



- ಚಾಮರಾಜ ಸವಡಿ
(ಚಿತ್ರಗಳು: ಬಿ.ಎಂ. ಕೇದಾರನಾಥ್‌)

ಅಪರೂಪದ ವಸುಧೈವ ಕುಟುಂಬಕಂ!

7 Dec 2009

13 ಪ್ರತಿಕ್ರಿಯೆ
ಮನೆಯೊಳಗೇ ಊರು ತುಂಬಿಕೊಂಡ ಅಚ್ಚರಿ ಇದು. ಧಾರವಾಡದ ಹತ್ತಿರ ಇರುವ ಲೋಕೂರು ಒಂದು ಚಿಕ್ಕ ಊರು. ಇಲ್ಲಿರುವ ಮನೆಗಳಲ್ಲಿಯೇ ಅತ್ಯಂತ ದೊಡ್ಡ ಮನೆಯಲ್ಲಿ ರಾಜ್ಯಕ್ಕೇ ದೊಡ್ಡದೆನ್ನಬಹುದಾದ ಕುಟುಂಬವೊಂದು ಕಳೆದ ನಾಲ್ಕುನೂರು ವರ್ಷಗಳಿಂದ ಒಟ್ಟಿಗೇ ವಾಸಿಸುತ್ತಿದೆ. ಕಟ್ಟಿದಾಗಿನಿಂದ ಜೈನರ ಈ ಮನೆ ವಿಭಜನೆಗೊಂಡಿಲ್ಲ. ನೌಕರಿಗಾಗಿ ದೂರ ಹೋದವರು ನಿವೃತ್ತರಾದ ನಂತರ ಮತ್ತೆ ಮನೆ ಸೇರಿದ್ದಾರೆ. ಎಲ್ಲರೂ ಒಟ್ಟಿಗೇ ದುಡಿಯುತ್ತಾರೆ. ಒಂದೇ ಕಡೆ ಉಣ್ಣುತ್ತಾರೆ. ಜಗಳವಿಲ್ಲ. ಆಸ್ತಿ ಹೋರಾಟ ಇಲ್ಲ. ೧೮೦ಕ್ಕೂ ಹೆಚ್ಚು ಜನ ಒಂದೇ ಕಡೆ ಇರುತ್ತ, ಮದುವೆಯಂಥ ಸಂದರ್ಭದಲ್ಲಿ ದೂರ ಹೋದವರೆಲ್ಲ ಬಂದಾಗ ೩೦೦ಕ್ಕೂ ಹೆಚ್ಚು ಜನ ಒಟ್ಟಿಗೇ ಸೇರಿ ಸಮಾರಂಭ ಮಾಡುತ್ತ ’ವಸುಧೈವ ಕುಟುಂಬಕಂ’ ಎಂಬ ಮಾತಿಗೆ ಸಾಕ್ಷಿಯಾಗುತ್ತ ಬಂದಿದ್ದಾರೆ... 




'ಬನ್ನಿ' ಎಂದರು ಯಜಮಾನರು.

ಒಳಗೆ ಮಕ್ಕಳು ಆಡುತ್ತಿದ್ದವು. ಫಕ್ಕನೇ ’ಶಾಲೆ ಇರಬಹುದಾ’ ಅನ್ನಿಸಿತು. ಆದರೆ, ಒಳಗೆಲ್ಲೋ ರೊಟ್ಟಿ ಬಡಿಯುತ್ತಿದ್ದ ಸದ್ದು. ಜೋಳದ ರೊಟ್ಟಿ ಬೇಯುತ್ತಿದ್ದ ಕಮ್ಮನೆ ಪರಿಮಳ. ಎಲ್ಲೋ ಮಗುವೊಂದು ಬಿಕ್ಕಿದಂತೆ, ಹೆಣ್ಣು ಧ್ವನಿಯೊಂದು ಅದನ್ನು ಮಮತೆಯಿಂದ ಸಂತೈಸಿದಂತೆ ಕೇಳಿ ಬಂದಾಗ, ಹೌದು, ಇದು ಮನೆಯೇ ಅನ್ನಿಸಿತು.

ಛಾಯಾಗ್ರಾಹಕ ಮಿತ್ರ ಕೇದಾರನಾಥ ಅವಾಕ್ಕಾಗಿ ನಿಂತಿದ್ದರು.

ಮತ್ತೊಮ್ಮೆ, ’ಬನ್ನಿ’ ಎಂದರು ಯಜಮಾನರು. ಅವರಿಗೆ ೯೦ ವರ್ಷ ವಯಸ್ಸು. ಹೆಸರು ತಮ್ಮಣ್ಣ ಜಿನ್ನಪ್ಪ ನರಸಿಂಗನವರ.

ಅವರಿಗೆ ವಯಸ್ಸಾಗಿರುವುದರಿಂದ ತಮಗಿಂತ ಐದು ವರ್ಷ ಚಿಕ್ಕವರಾಗಿರುವ ತಮ್ಮ ಭೀಮಣ್ಣ ನರಸಿಂಗನವರ ಅವರಿಗೆ ಮನೆಯ ಉಸ್ತುವಾರಿ ವಹಿಸಿಕೊಟ್ಟಿದ್ದಾರೆ. ಮನೆಯ ಅತಿ ಚಿಕ್ಕ ಸದಸ್ಯನಿಗೆ ಇನ್ನೂ ನಾಮಕರಣವಾಗಬೇಕಿದೆ. ತೊಟ್ಟಿಲು ನಿಲ್ಲದ ಮನೆಯಲ್ಲಿ ಸಣ್ಣವರ ಸ್ಥಾನ ಬದಲಾಗುತ್ತಲೇ ಇರುತ್ತದೆ.

ಇದು ಧಾರವಾಡದಿಂದ ೨೦ ಕಿಮೀ ದೂರದಲ್ಲಿರುವ ಲೋಕೂರು ಎಂಬ ಗ್ರಾಮದ ಅವಿಭಕ್ತ ಕುಟುಂಬದ ಕತೆ.


ಕುಟುಂಬದಲ್ಲಿರುವ ಹಾಲಿ ಸದಸ್ಯರ ಸಂಖ್ಯೆ ೧೮೦. ಪ್ರತಿ ತಿಂಗಳು-ಎರಡು ತಿಂಗಳಿಗೆ ಈ ಸಂಖ್ಯೆ ಹೆಚ್ಚುತ್ತದೆಯೇ ಹೊರತು ಕಡಿಮೆಯಾಗದು. ಈ ಅವಧಿಯಲ್ಲಿ ಗರ್ಭಿಣಿಯರ ಪೈಕಿ ಒಬ್ಬರಲ್ಲ ಒಬ್ಬರು ಹೆರುತ್ತಾರೆ. ದೊಡ್ಡ ಮನೆ ತುಂಬ ಕಟ್ಟಿರುವ ಹತ್ತಕ್ಕೂ ಹೆಚ್ಚು ತೂಗು ತೊಟ್ಟಿಲುಗಳಲ್ಲಿ ಅರ್ಧಕ್ಕೂ ಹೆಚ್ಚು ಆಡುತ್ತಲೇ ಇರುತ್ತವೆ. ಬಾಣಂತಿಯನ್ನು ಬೆಚ್ಚಗಿಡಲೆಂದು ಮನೆಯ ಮುಂದೆ ನಿತ್ಯ ಬೆಳಿಗ್ಗೆ ಮತ್ತು ಸಂಜೆ ಹಚ್ಚಿಡುವ ಬೆರಣಿ ಬೆಂಕಿ ಹೊಗೆಯಾಡುವುದನ್ನು ನಿಲ್ಲಿಸುವುದಿಲ್ಲ.

ನಿತ್ಯ ೧೮೦ ಜನರು ಒಂದೇ ಕಡೆ ಉಣ್ಣುತ್ತ, ವಿವಿಧೆಡೆ ಮಲಗುತ್ತ, ಊರ ಸುತ್ತ ಹಬ್ಬಿರುವ ಹೊಲಗಳಲ್ಲಿ ಕೆಲಸ ಮಾಡುತ್ತ, ಯಾವ ಜಗಳ, ಕಿರಿಕಿರಿ ಇಲ್ಲದೇ ನೆಮ್ಮದಿಯಿಂದ ಬದುಕುತ್ತ ಇದ್ದಾರೆ ಎಂದರೆ ನಾಗರಿಕ ಪ್ರಪಂಚಕ್ಕೆ ನಂಬಲು ಕಷ್ಟವಾಗುತ್ತದೆ. ಅಲ್ಲವೆ?

ಆದರೆ ನರಸಿಂಗನವರ ಕುಟುಂಬಕ್ಕೆ ಇದು ನೀರು ಕುಡಿದಷ್ಟು ಸುಲಭ.

’ನಮಗ ನೆನಪಿರಾಗಿಂದ ನಾವೆಲ್ಲ ಹಿಂಗ ಅದೀವ್ರಿ. ಒಬ್ಬೊಬ್ರ ಇದ್ದು ರೂಢಿನಾ ಇಲ್ಲ. ನಮಗ ಸುತ್ತ ಕಡೆ ಜನ ಇರಬೇಕು. ಮಕ್ಳುಮರಿ ಆಡ್ತಿರಬೇಕು, ಆಗ ಮಾತ್ರ ಸಮಾಧಾನ’ ಎನ್ನುತ್ತಾರೆ ದೊಡ್ಡ ಕುಟುಂಬದ ಉಸ್ತುವಾರಿ ನೋಡಿಕೊಳ್ಳುವ ಭೀಮಣ್ಣ ನರಸಿಂಗನವರ.

’ನಾವಷ್ಟ ಅಲ್ಲ, ನಮ್ಮ ಮನಿಗೆ ಹೊರಗ್ನಿಂದ ಬರೋ ಸೊಸೆಯಂದ್ರೂ ಹಿಂಗ ಹೇಳ್ತಾರ. ಮೊದಮೊದ್ಲು ಅವರಿಗೆ ಕಷ್ಟ ಅನಿಸಿದ್ರೂ ಸ್ವಲ್ಪ ದಿನದಾಗ ಎಲ್ರೂ ಹೊಂದಿಕೊಂಡುಬಿಡ್ತಾರ. ಒಬ್ರ ಇರಾಕ ಅವ್ರಿಗೂ ಬ್ಯಾಸರ ಆಗಾಕ ಶುರು ಆಗುತ್ತ. ಮನ್ಯಾಗ ಇರೋ ಎಲ್ರೂ ಹಿಂಗ...’ ಅನ್ನುತ್ತಾರೆ ಅವರು.

ಅದು ಸತ್ಯವೂ ಹೌದು. ನರಸಿಂಗನವರ ಮನೆಯಲ್ಲಿ ನೂರಾರು ಜನರಿದ್ದರೂ ಅದು ಗುಂಪು ಅನ್ನಿಸುವುದಿಲ್ಲ. ಜಂಗುಳಿ ಎಂಬ ಭಾವನೆ ಬರುವುದಿಲ್ಲ. ಅಳುವ ಮಕ್ಕಳು ಅಲ್ಲಿ ಯಾರಿಗೂ ಕಿರಿಕಿರಿ ಅಲ್ಲ. ಆಡುವ ಮಕ್ಕಳ ಸದ್ದು ಗಲಾಟೆ ಅನ್ನಿಸುವುದಿಲ್ಲ. ತೊಟ್ಟಿಲಲ್ಲಿ ಮಲಗಲು ಮಕ್ಕಳು ಇರುವಂತೆ ತೂಗುವ ಕೈಗಳೂ ಅಲ್ಲಿವೆ. ಯಾರು ಯಾರಿಗೂ ಭಾರ ಅಲ್ಲ.

ಏಕೆಂದರೆ ಪ್ರತಿಯೊಬ್ಬರೂ ತಂತಮ್ಮ ಕೆಲಸಗಳನ್ನು ಅಚ್ಚುಕಟ್ಟಾಗಿ ಮಾಡುತ್ತ ಹೋಗುತ್ತಾರೆ. ತಮ್ಮ ಪಾತ್ರವನ್ನು ಚೆನ್ನಾಗಿ ನಿಭಾಯಿಸುತ್ತ ಹೋಗುತ್ತಾರೆ. ಒಬ್ಬ ಕಾಯಿಲೆ ಮಲಗಿದ ಎಂದರೆ ಅವನ ಕೆಲಸವನ್ನು ಇತರರು ಹಂಚಿಕೊಳ್ಳುತ್ತಾರೆ. ಮಲಗಿದವನ ಯೋಗಕ್ಷೇಮ ನೋಡಿಕೊಳ್ಳಲು ಇತರರು ಸಿದ್ಧರಾಗುತ್ತಾರೆ. ಹೀಗಾಗಿ ಎಲ್ಲರಿಗೂ ನೆಮ್ಮದಿ. ತಮಗೇನೇ ಆದರೂ ಇತರರು ಇರುತ್ತಾರೆ ಎಂಬ ಸಮಾಧಾನ. ಖಾಲಿತನವಿಲ್ಲ. ಬೇಸರ ಎನ್ನುವ ಪ್ರಶ್ನೆ ಇಲ್ಲ, ಏಕಾಂಗಿತನ ಕಾಡುವುದಿಲ್ಲ. ಸುತ್ತ ಮುತ್ತ ಜನ ಇದ್ದೇ ಇರುತ್ತಾರೆ. ಆಸರಕ್ಕೆ ಬೇಸರಕ್ಕೆ ಕೈ ಚಾಚುತ್ತಾರೆ.

ಹೀಗಾಗಿ ಇದೊಂದು ಅಪರೂಪದ ಕುಟುಂಬ. ಮಾದರಿ ಕುಟುಂಬ.

ಮೂಲ ಮಹಾರಾಷ್ಟ್ರ

’ಮಹಾರಾಷ್ಟ್ರ ರಾಜ್ಯದ ಮೀರಜ್, ಕೊಲ್ಲಾಪುರ, ಸಾಂಗಲಿ ನಡುವೆ  ಇರುವ ಹಾತಕಲ್ ಅಂಗಡಾ ಎಂಬ ಪ್ರದೇಶದಲ್ಲಿದ್ದ ಜೈನ ಕುಟುಂಬ ನಮ್ಮದು. ಅಲ್ಲಿಯ ನರಸೋಬಾ ದೇವಸ್ಥಾನದ ಅರ್ಚಕರಾಗಿದ್ದ ನಮ್ಮ ಹಿರೀಕರ ಪೈಕಿ ಮೂವರು ಹಿರಿಯರು ಯಾವುದೋ ಕಾರಣಕ್ಕಾಗಿ ೧೬ನೇ ಶತಮಾನದಲ್ಲಿ ತಮ್ಮ ಮೂಲಸ್ಥಳ ಬಿಟ್ಟು ದೇಶಾಂತರ ಹೊರಟು ಇಲ್ಲಿಗೆ ಬಂದರು. ಇವರ ಪೈಕಿ ನರಸಿಂಗಪ್ಪ ಎಂಬ ಪೈಲ್ವಾನ್ ಲೋಕೂರಿನ ದುರ್ಗಾದೇವಿ ದೇವಸ್ಥಾನದಲ್ಲಿ ರಾತ್ರಿ ಮಲಗಿದ್ದ. ಆತನಿಗೆ ಇಲ್ಲಿಯೇ ಉಳಿಯಬೇಕೆಂಬ ಪ್ರೇರಣೆಯಾಯಿತು.

’ತನ್ನಲ್ಲಿದ್ದ ಹಣದಿಂದ ದೇವಸ್ಥಾನದ ಹತ್ತಿರದ ಪ್ರದೇಶವನ್ನು ಖರೀದಿಸಿ, ಅಲ್ಲೊಂದು ಸಣ್ಣ ಮನೆ ಕಟ್ಟಿದ. ಮದುವೆಯಾದ. ಆತನಿಗೆ ಏಳು ಮಕ್ಕಳಾದವು. ಅಲ್ಲಿಂದ ಶುರುವಾದ ಸಂತಾನವೃಕ್ಷ ಹಬ್ಬುತ್ತಲೇ ಇದೆ. ಆತನಿಂದಾಗಿ ನಮ್ಮ ಕುಟುಂಬಕ್ಕೆ ನರಸಿಂಗನವರ ಎಂಬ ಅಡ್ಡ ಹೆಸರು ಬಂದಿತು’ ಎಂದು ಕುಟುಂಬದ ಕತೆ ಪ್ರಾರಂಭಿಸುತ್ತಾರೆ ಭೀಮಣ್ಣ ನರಸಿಂಗನವರ.

’ಈಗ ನಾವು ಕೂತಿರುವುದು ಆತ ಖರೀದಿಸಿದ ಜಾಗದಲ್ಲಿ ಕಟ್ಟಿಸಿದ ಮನೆಯಲ್ಲಿ. ಕ್ರಮೇಣ ಸಂಸಾರ ಬೆಳೆಯಿತು. ಮನೆ ದೊಡ್ಡದಾಗುತ್ತ ಹೋಯಿತು. ದೂರದ ಊರಿನಿಂದ ನೆಲೆ ಹುಡುಕಿಕೊಂಡು ಬಂದವರು ನಾವು. ಮಕ್ಕಳೆಲ್ಲ ಬೇರೆ ಹೋದರೆ ಆಸ್ತಿ ಮೂರಾಬಟ್ಟೆಯಾಗಿ, ಯಾರಿಗೂ ತುಂಡು ನೆಲವೂ ದೊರೆಯುವುದಿಲ್ಲ ಎಂಬ ವಿವೇಕ ಮೊದಲಿನಿಂದಲೇ ಇತ್ತು. ಹೀಗಾಗಿ ಮದುವೆಯಾದ ಹೆಣ್ಣುಮಕ್ಕಳು ಹೊರಹೋಗಿದ್ದು ಬಿಟ್ಟರೆ ಯಾವೊಂದು ಗಂಡು ಕುಡಿಯೂ ಇಲ್ಲಿಂದ ಹೊರಹೋಗಿಲ್ಲ. ಹಾಗೆ ಹೋದ ಒಂದಿಬ್ಬರೂ ಹಿಂದೆಯೇ ವಾಪಸ್ಸಾಗಿದ್ದಾರೆ. ಹೀಗಾಗಿ ನಾಲ್ಕು ಶತಮಾನಗಳಿಂದ ನಮ್ಮದು ಅವಿಭಕ್ತ ಕುಟುಂಬವೇ’ ಎನ್ನುತ್ತಾರೆ ಅವರು.

ಅದು ಸತ್ಯವೂ ಹೌದು. ಒಬ್ಬ ನರಸಿಂಗಪ್ಪನಿಂದ ಪ್ರಾರಂಭವಾದ ಕುಟುಂಬದ ಸದಸ್ಯರ ಸಂಖ್ಯೆ ಬರ, ರೋಗ-ರುಜಿನ, ಸಾವು-ನೋವು, ಯುದ್ಧ, ಬಡತನ ಎಲ್ಲವನ್ನೂ ಎದುರಿಸುತ್ತ ಈ ನಾಲ್ಕುನೂರು ಚಿಲ್ಲರೆ ವರ್ಷಗಳಲ್ಲಿ ೩೦೦ ದಾಟಿದೆ. ಎಲ್ಲರೂ ಒಟ್ಟಾಗಿ ದುಡಿಯುವ ಕಾರಣ ಆದಾಯದ ಪ್ರಮಾಣದಲ್ಲಿಯೂ ಹೆಚ್ಚಳವಾಗುತ್ತ ನಡೆದಿದೆ. ಕೈಯಲ್ಲಿ ಸ್ವಲ್ಪ ದುಡ್ಡಿಟ್ಟುಕೊಂಡು ಬಂದಿದ್ದ ಒಬ್ಬ ವ್ಯಕ್ತಿಯ ಸಂತಾನ ಹಾಗೂ ಆಸ್ತಿ ಈ ಪರಿ ಬೆಳೆಯಲು ಕಾರಣ ಒಗ್ಗಟ್ಟೇ ಹೊರತು ಬೇರೇನೂ ಅಲ್ಲ.

ಒಗ್ಗಟ್ಟಿನಿಂದಾಗಿ ಪ್ರಗತಿ

’ಒಂದು ವೇಳೆ ಊರಲ್ಲಿರೋ ನಾವು ೧೮೦ ಮಂದಿ ಬ್ಯಾರೆ ಆದ್ರ ಎಲ್ರೂ ಬಡವರಾಗೇ ಬದುಕಬೇಕಾಗುತ್ತ’ ಎಂದು ಎಚ್ಚರಿಸುತ್ತಾರೆ ಭೀಮಣ್ಣ. ’ಏಕೆಂದರೆ ನಮ್ಮ ಹತ್ತಿರ ಈಗ ೨೭೦ ಎಕರೆ ಭೂಮಿ ಇದೆ. ಇದರ ಪೈಕಿ ೮ ಎಕರೆಯಲ್ಲಿ ಭತ್ತ ಬೆಳೆಯಲಾಗುತ್ತದೆ. ನೀರಾವರಿ ಭೂಮಿಯ ಪ್ರಮಾಣ ಕೇವಲ ೩೩ ಎಕರೆ ಮಾತ್ರ. ನೂರೆಂಬತ್ತು ಜನರ ಪೈಕಿ ೬ ಜನ ಮಾತ್ರ ಸರ್ಕಾರಿ ನೌಕರಿಯಲ್ಲಿದ್ದಾರೆ. ಖರ್ಚು ತೆಗೆದರೆ ಅವರ ಬಾಕಿ ಆದಾಯವೂ ಇಲ್ಲಿಗೇ ಬರುತ್ತದೆ. ಒಂದು ವೇಳೆ ಎಲ್ಲರೂ ಬೇರೆ ಆದರೆ ಒಬ್ಬರಿಗೆ ಒಂದು ಎಕರೆ ಭೂಮಿಯೂ ಬರುವುದಿಲ್ಲ. ಆಗ ಜೀವನ ನಡೆಯೋದು ಹೇಗೆ?’ ಎಂದು ಅವರು ಪ್ರಶ್ನಿಸುತ್ತಾರೆ.

ಇವರ ಖರ್ಚು ಕೂಡ ಆದಾಯಕ್ಕೆ ತಕ್ಕ ಹಾಗೆ ಇದೆ. ದಿನಕ್ಕೆ ೫೦ರಿಂದ ೬೦ ಕೆಜಿ ಜೋಳ, ೧೫ರಿಂದ ೨೦ ಕೆಜಿ ಗೋದಿ ಖರ್ಚಾಗುತ್ತದೆ. ನಿತ್ಯ ೩೦ರಿಂದ ೪೦ ಲೀಟರ್ ಹಾಲು ಬೇಕು. ಹಬ್ಬ ಬಂದರೆ ದಿನಕ್ಕೆ ಒಂದು ಕ್ವಿಂಟಲ್ ಜೋಳ ಖರ್ಚಾಗುತ್ತದೆ. ಕುಟುಂಬದಲ್ಲಿ ಯಾರೂ ಹೋಟೆಲ್‌ಗೆ ಹೋಗುವುದಿಲ್ಲ. ರೊಟ್ಟಿಪ್ರಿಯರಾಗಿದ್ದರಿಂದ ಅನ್ನದ ಅವಲಂಬನೆ ಕಡಿಮೆ.

ಮದುವೆ... ಮದುವೆ...

ಇಂಥ ಬೃಹತ್ ಕುಟುಂಬದಲ್ಲಿ ನಿತ್ಯದ ಅಡುಗೆಯೇ ಮದುವೆ ಅಡುಗೆ ಮೀರಿಸುವಾಗ, ಇನ್ನು ನಿಜವಾದ ಮದುವೆ ನಡೆದರೆ ಹೇಗಿರುತ್ತದೆ?

ಇಂಥದೊಂದು ಅವಕಾಶಕ್ಕಾಗಿ ಮೂರು ತಿಂಗಳಿಂದ ಕಾಯ್ದುಕೊಂಡಿದ್ದ ನಮಗೆ ನಿರಾಶೆಯಾಗಲಿಲ್ಲ. ’ಮೇ ೧ರಂದು ನಮ್ಮ ಮನೆಯಲ್ಲಿ ಮದುವೆ ನೀವು ಬರಬೇಕು’ ಎಂಬ ಆಮಂತ್ರಣ ಅದೊಂದಿನ ನರಸಿಂಗನವರ ಕುಟುಂಬದಿಂದ ಬಂದಿತು.


(ಮುಂದಿನ ಭಾಗದಲ್ಲಿ ಮುಕ್ತಾಯ)
 

- ಚಾಮರಾಜ ಸವಡಿ
(ಚಿತ್ರಗಳು:
ಬಿ.ಎಂ. ಕೇದಾರನಾಥ. ಹೆಚ್ಚಿನ ಚಿತ್ರಗಳನ್ನು ವೀಕ್ಷಿಸಿ http://picasaweb.google.com/chamarajs/Lokur# )

ಅಲ್ಲಿ ಬಯಲು ಮುಗಿದಿತ್ತು, ಆಲಯ ಕರೆದಿತ್ತು...

4 Dec 2009

2 ಪ್ರತಿಕ್ರಿಯೆ

ಅಲ್ಲಿ ಬಯಲು ಮುಗಿದಿತ್ತು. ದಟ್ಟಡವಿ ನಿಂತಿತ್ತು. ಸುರಿಯುತ್ತಿರುವ ಸೋನೆಮಳೆ ಒಮ್ಮೊಮ್ಮೆ ಬಿರುಮಳೆಯಾಗುತ್ತ, ಮತ್ತೆ ಸೋನೆಗೆ ತಿರುಗುತ್ತ ಕಾಡಿನ ನಿಗೂಢತೆಗೆ ಮೆರುಗು ನೀಡಿತ್ತು. ನಾವು ಹೊರಟಿದ್ದು ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ದಟ್ಟ ಕಾನನದತ್ತ. ಮೈಲುಗಟ್ಟಲೇ ಹಬ್ಬಿರುವ ಮಹಾ ಮಲೆನಾಡಿನ ಒಡಲಿಗೆ. ಕುವೆಂಪು ಬಣ್ಣಿಸಿದ ಮಲೆಗಳ ನಿಗೂಢತೆಗೆ. ಪೂರ್ಣಚಂದ್ರ ತೇಜಸ್ವಿ ಹಂಬಲಿಸಿ ಹಿಂತಿರುಗಿದ ಕಾನನಕ್ಕೆ. ಬಿಜಿಎಲ್‌ ಸ್ವಾಮಿ ಬಣ್ಣಿಸಿದ ಮಾತ ಮೂದಲಿಸುವ ಮಹಾರಣ್ಯದೆಡೆಗೆ. ಜೋಗದ ನಾಡಿಗೆ. ಶ್ರೀಗಂಧದ ಬೀಡಿಗೆ...
 

ಶಿವಮೊಗ್ಗ ಎಂಬುದು ಪಶ್ಚಿಮಘಟ್ಟದ ಹೆಬ್ಬಾಗಿಲು. ಮಳೆ ಎಂಬುದು ಇಲ್ಲಿ ಮನೆಮಗಳು. ಹಸಿರೆಂಬುದು ಜೀವನದ ಉಸಿರು. ಎಷ್ಟೇ ಸುರಿದರೂ ಮಳೆ ಇಲ್ಲಿ ಪ್ರವಾಹವಾಗುವುದಿಲ್ಲ. ಮನೆ ಮಗಳು ಮುಗುಳ್ನಕ್ಕಂತೆ, ಮಳೆ ಇಲ್ಲಿಯ ಜನಕ್ಕೆ ಪುಳಕ. ಅರಣ್ಯಕ್ಕೆ ಅಭ್ಯಂಜನದ ಜಳಕ. ಮಳೆಗೆ ಕಾಡು ಉಕ್ಕುತ್ತದೆ. ಹಸಿರು ಚಿಮ್ಮುತ್ತದೆ. ನೆಲ-ಮುಗಿಲಿಗೆ ಸೇತುವೆ ಕಲ್ಪಿಸುತ್ತ ಬದುಕನ್ನು ಧನ್ಯವಾಗಿಸುತ್ತದೆ...

ಕಾಡಿನ ರೋಚಕತೆಯನ್ನು ತಮ್ಮ 'ಕಲ್ಕಿ' ಕವನದಲ್ಲಿ ಕುವೆಂಪು ಬಣ್ಣಿಸಿದ್ದು ಹೀಗೆ:


ನಿದ್ದೆಯ ಲೋಕದಿ ಕನಸಿನ ಬೀದಿ
ತಿರುಗಿದೆ ತೊಳಲಿದೆ ತಪ್ಪಿದೆ ಹಾದಿ!
ಮುಂದೆ ಕಾಣಿಸಿತೊಂದು ಅರಣ್ಯ
ಅನಂತವಾದುದು ವನವಿಸ್ತೀರ್ಣ
ಹೆಮ್ಮರಗಳು ಕಿಕ್ಕಿರಿದುವು ಅಲ್ಲಿ
ಬಿಡುವಿಲ್ಲದೆ ಹೆಣೆದಿದ್ದವು ಬಳ್ಳಿ... 

ಅರಣ್ಯದ ಒಳ ಹೊಕ್ಕಂತೆ ನಾಗರಿಕತೆ ಹಿಂದಾಗುತ್ತದೆ. ಮೊಬೈಲ್‌ ಸಿಗ್ನಲ್‌ಗಳು ಮುದುರಿಕೊಂಡು ಮಾತು ಮೂಕವಾಗುತ್ತದೆ. ಮುಂದೆ ಎಲ್ಲಾ ಅರಣ್ಯದ್ದೇ ಮಾತು. ಅದರದ್ದೇ ಕಾರುಬಾರು. ಬಿಸಿಲನ್ನು ಬಿಡಲಾರೆ ಎಂಬಂತೆ ಸಣ್ಣಗೆ ಸುರಿಯುವ ಜಡಿಮಳೆಗೆ ಮರಗಿಡಗಳು ಪ್ರೀತಿಯಿಂದ ಒಡ್ಡಿಕೊಂಡಿವೆ. ಹನಿಹನಿಯನ್ನೂ ಆಸ್ವಾದಿಸುತ್ತವೆ. ಅಲ್ಲಿ ಕೇಳಿಬರುವುದು ಮಳೆ ಬೀಳುವ ಮೃದು ಸದ್ದು, ಅಷ್ಟೇ.

ಬಿದ್ದ ಹನಿಹನಿಯನ್ನೂ ತರಗಲೆಗಳಿಂದ ಸಮೃದ್ಧವಾಗಿರುವ ಮಣ್ಣು ಹೀರಿಕೊಳ್ಳುತ್ತದೆ. ಅಂಥ ಜೀವದಾಯಕ ನೆಲದಲ್ಲಿ ಬಿದ್ದ ಪ್ರತಿಯೊಂದು ಬೀಜವೂ ಮೊಳಕೆಯೊಡೆಯುತ್ತದೆ. ಸೂರ್ಯನನ್ನು ಹುಡುಕುತ್ತ ಮೇಲೇಳುತ್ತವೆ. ಅರಣ್ಯಕ್ಕೆ ಅರಣ್ಯವೇ ಹಸಿರುಕ್ಕುವಂತೆ ಬೆಳೆಯುತ್ತವೆ. ಪ್ರತಿಯೊಂದು ಮರಗಿಡಕ್ಕೂ ಆಕಾಶವೇ ದಿಕ್ಕು. ಮೇಲೆ ಏನೋ ಇದೆ ಎಂಬಂತೆ ಮುಗಿಲಿಗೆ ಮುಖವೊಡ್ಡಿ ಏರುತ್ತ ಹೋಗುತ್ತವೆ. ಗಗನಕ್ಕೆ ಮುತ್ತಿಡುವ ಮತ್ತಿನಲ್ಲಿ ಸೊಕ್ಕಿ ಮೇಲೇಳುತ್ತವೆ. 

ಎಲ್ಲಾ ಇರುವ ಈ ಮಹಾರಣ್ಯದಲ್ಲಿ ಸೂರ್ಯನ ಬೆಳಕಿಗೆ ಮಾತ್ರ ಅಭಾವ. ಇಲ್ಲಿನ ಎಲ್ಲ ಜೀವಿಗಳಿಗೆ, ಅಮ್ಮನ ಸೆರಗಿನಡಿ ಮಲಗಿರುವ ಕಂದನಂಥ ಭಾವ. ಹಸಿಯ ಒಡಲಲ್ಲಿ ಜೀವದಾಯಕ ಬಿಸಿ. ಜೀವ ಸೃಷ್ಟಿಯಾಗುವಂಥ ಅರೆಗತ್ತಲು. ಕಾಡಿನ ಇಂಥ ನಸುಗತ್ತಲಿನಲ್ಲಿ ನಿಗೂಢ ಲೋಕವೊಂದು ತೆರೆದುಕೊಳ್ಳುತ್ತದೆ. ಮನುಷ್ಯ ನಿರ್ಮಿಸಿದ ದಾರಿ ಮಾಯವಾಗಿ, ಕಾಡಿನ ದಾರಿ ಬಿಚ್ಚಿಕೊಳ್ಳುತ್ತದೆ. ಹನಿಯಿಕ್ಕುವ ಮರಗಳ ನಡುವೆ, ಮಂತ್ರಮುಗ್ಧರಾದವರಂತೆ ಹೊರಟಾಗ, ಇದ್ದಕ್ಕಿದ್ದಂತೆ ಕಾಡಿನ ಮಧ್ಯೆ ಆಲಯವೊಂದು ಧುತ್ತೆಂದು ಎದುರಾಗುತ್ತದೆ...


ಅದು ಹೊಸಗುಂದದ ಉಮಾ ಮಹೇಶ್ವರ ದೇವಳ. 
ಒಂದು ಸಾವಿರ ವರ್ಷಗಳ ಇತಿಹಾಸವನ್ನು ಒಡಲಲ್ಲಿಟ್ಟುಕೊಂಡ ಊರು ಹೊಸಗುಂದ. ಒಂದಾನೊಂದು ಕಾಲದಲ್ಲಿ ನಾಡಾಗಿದ್ದ ಇಲ್ಲೀಗ ದಟ್ಟ ಕಾಡಿದೆ. ಹನ್ನೊಂದನೇ ಶತಮಾನದಲ್ಲಿ ಇದನ್ನು ಹುಂಚ ಮೂಲದ ಸಾಂತರು ಆಳಿದ್ದರು. ಸುಮಾರು ಮುನ್ನೂರು ವರ್ಷಗಳ ಕಾಲ ವೈಭವದಿಂದ ಮೆರೆದ ಹೊಸಗುಂದ ನಂತರ ಯಾವುದೋ ಕಾರಣಕ್ಕೆ ಅಳಿದುಹೋಯಿತು.

ಕ್ರಮೇಣ ನಾಡನ್ನು ಕಾಡು ಆವರಿಸಿತು. ಜನರಿಲ್ಲದ ಕಡೆ ನೆಲೆಯೂರಿ ನಿಂತ ಕಾಡು ಕ್ರಮೇಣ ಊರಿನ ಕೇಂದ್ರ ಬಿಂದು ಶ್ರೀ ಉಮಾ ಮಹೇಶ್ವರಿ ದೇವಸ್ಥಾನ ಹಾಗೂ ಸುತ್ತಲಿನ ದೇವಳಗಳನ್ನು ತನ್ನ ಒಡಲಲ್ಲಿ ಸೇರಿಸಿಕೊಂಡಿತು. ದೇಗುಲದ ಒಡಲಲ್ಲಿ ಮರಗಳು ಬೆಳೆದು ನಿಂತವು. ಅದರ ಗೋಪುರದ ಎತ್ತರಕ್ಕೂ ಏರಿದವು. ನಾಡಿನಿಂದ ಕಾಡಿನ ಪಾಲಾದ ಉಮಾ ಮಹೇಶ್ವರನಿಗೆ ಮರಗಿಡಗಳ ಪೂಜೆ ಶುರುವಾಯ್ತು. ಒಂದಲ್ಲ ಎರಡಲ್ಲ, ಸುಮಾರು ಆರುನೂರು ವರ್ಷಗಳ ಕಾಲ, ಅರಣ್ಯಪಾಲಾದ ಉಮಾ ಮಹೇಶ್ವರ.

ಮನುಷ್ಯ ಕಾಲಿಡದ ಕಾಡಾಗಿದ್ದರಿಂದ ಸಸ್ಯಪ್ರಭೇದಗಳು ಹೆಚ್ಚಿದವು. ಮರಗಿಡಗಳು ಸೊಕ್ಕಿ ಬೆಳೆದವು. ಕ್ರಮೇಣ ದೇಗುಲದ ಗೋಡೆ, ತೊಲೆಗಳನ್ನು ಸೀಳಿಕೊಂಡು ಹರಡಿದವು. ಅಲ್ಲೊಂದು ರಾಜವಂಶ ಆಳಿತ್ತು, ದೇಗುಲ ಸಮುಚ್ಚಯವಿತ್ತು ಎಂಬುದನ್ನೇ ಮುಚ್ಚಿಹಾಕುವಂತೆ ಕಾಡು ಬೆಳೆಯಿತು. ಮನುಷ್ಯನ ಹಸ್ತಕ್ಷೇಪ ಇಲ್ಲದಿದ್ದರೆ, ಪ್ರಕೃತಿ ಏನು ಮಾಡಬಲ್ಲುದು ಎಂಬುದಕ್ಕೆ ಸಾಕ್ಷಿಯೆಂಬಂತೆ ಹಬ್ಬಿತು. ದೇಗುಲದ ವ್ಯಾಪ್ತಿ ದಾಟಿ, ಸುತ್ತಲಿನ ಪ್ರದೇಶಗಳನ್ನು ಆವರಿಸುತ್ತ ಬೆಳೆದ ಕಾಡು ಸುಮಾರು ಆರುನೂರು ಎಕರೆ ವಿಸ್ತಾರವಾಯ್ತು. ಸೊಕ್ಕಿ ಹರಡಿದ ಕಾಡಿನ ನಡುವೆ ಉಮಾ ಮಹೇಶ್ವರ ದೀರ್ಘ ವನವಾಸಕ್ಕೆ ಈಡಾದ.

ನೈಸರ್ಗಿಕ ಉತ್ಪನ್ನಗಳ ಉದ್ಯಮ ಹೊಂದಿರುವ ’ಫಲದ’ ಸಂಸ್ಥೆಯ ಮುಖ್ಯಸ್ಥ ಸಿಎಂಎನ್‌ ಶಾಸ್ತ್ರಿಯವರು ಒಮ್ಮೆ ಕಾಡಿನಲ್ಲಿ ಸುತ್ತಾಡುತ್ತಿದ್ದಾಗ ಅಲ್ಲಲ್ಲಿ ದೇಗುಲದ ಅವಶೇಷಗಳು ಇರುವುದನ್ನು ಕಂಡರು. ಇದಕ್ಕೂ ಮುನ್ನ ಚಾರಣಿಗರು ಹಾಗೂ ಪ್ರಾಚೀನ ದೇಗುಲಗಳ ಬಗ್ಗೆ ಆಸಕ್ತಿ ಇರುವವರನ್ನು ಬಿಟ್ಟರೆ, ಈ ದಟ್ಟ ಕಾಡಿನ ಮಧ್ಯೆ ದೇವಾಲಯಗಳಿವೆ ಎಂಬುದು ಹೊರಜಗತ್ತಿಗೆ ಅಷ್ಟಾಗಿ ಗೊತ್ತಿದ್ದಿಲ್ಲ. ಕುತೂಹಲಗೊಂಡ ಶಾಸ್ತ್ರಿಯವರು ಅವುಗಳ ಜೀರ್ಣೋದ್ಧಾರಕ್ಕೆ ಮುಂದಾದರು. ಶ್ರೀ ಉಮಾ ಮಹೇಶ್ವರ ಸೇವಾ ಟ್ರಸ್ಟ್‌ ಸ್ಥಾಪನೆಯಾಯಿತು. ಪ್ರಾಚ್ಯವಸ್ತು ಇಲಾಖೆ ಜೊತೆಗೆ ಇಂಥ ದೇಗುಲಗಳ ಜೀರ್ಣೋದ್ಧಾರ ಕೆಲಸದಲ್ಲಿ ಪರಿಣಿತಿ ಹೊಂದಿರುವ ಶ್ರೀ ಧರ್ಮಸ್ಥಳ ಧರ್ಮೋತ್ಥಾನ ಟ್ರಸ್ಟ್‌ ಕೂಡ ಕೈಜೋಡಿಸಿತು. ೨೦೦೧ರಲ್ಲಿ ಜೀರ್ಣೋದ್ಧಾರ ಕೆಲಸ ಶುರುವಾಯ್ತು.

ಆದರೆ, ಜೀರ್ಣೋದ್ಧಾರ ಸುಲಭವಾಗಿದ್ದಿಲ್ಲ. ದೇಗುಲದ ತಳಪಾಯ ಮಣ್ಣಿನೊಳಗೆ ಹೂತು ಹೋಗಿ ಬಿರುಕು ಬಿಟ್ಟಿತ್ತು. ದಕ್ಷಿಣದ ಗೋಡೆಯ ಕಡೆ ದೊಡ್ಡ ಮರವೊ೦ದು ಬೆಳೆದಿದ್ದರಿಂದ ಇಡೀ ದೇವಸ್ಥಾನ ಶಿಥಿಲಗೊಂಡಿತ್ತು. ದೊಡ್ಡ ದೊಡ್ಡ ಕಲ್ಲಿನ ತೊಲೆಗಳು, ಹಾಸುಗಳು ಹಲವಾರು ತುಂಡುಗಳಾಗಿದ್ದವು. ಗರ್ಭಗುಡಿಯಲ್ಲಿದ್ದ ಶಿವಲಿಂಗ ಮಾಯವಾಗಿತ್ತು. ನಿಧಿಯ ಆಸೆಯಲ್ಲಿ ದೇವಸ್ಥಾನದ ಹಲವಾರು ಭಾಗಗಳನ್ನು ಅಗೆದು ಹಾಕಲಾಗಿತ್ತು.

ಈ ಪರಿ ದುಃಸ್ಥಿತಿಯಲ್ಲಿದ್ದ ದೇಗುಲವನ್ನು ಮೂಲಸ್ಥಿತಿಗೆ ತರುವಲ್ಲಿ ಸಿಎಂಎನ್‌ ಶಾಸ್ತ್ರಿ ನೇತೃತ್ವದ ಶ್ರೀ ಉಮಾ ಮಹೇಶ್ವರ ಟ್ರಸ್ಟ್‌ ಅಳವಡಿಸಿಕೊಂಡ ಕ್ರಮಗಳು ನಿಜಕ್ಕೂ ವಿಶಿಷ್ಟ. ಜೀರ್ಣೋದ್ಧಾರದ ಮೊದಲ ಹಂತವಾಗಿ ಹಳೆ ದೇಗುಲವನ್ನು ಹಂತಹಂತವಾಗಿ ಬಿಚ್ಚಲಾಯ್ತು. ಬಿಚ್ಚಿದ ಪ್ರತಿಯೊ೦ದು ಭಾಗಕ್ಕೂ ಗುರುತಿನ ಸಂಖ್ಯೆ ಕೊಡಲಾಯ್ತು. ಹೊರಗಿನ ವಸ್ತುಗಳನ್ನು ಸೇರಿಸದೇ, ಇದ್ದ ಅವಶೇಷಗಳನ್ನು ಬಳಸಿಕೊಂಡೇ ಇಡೀ ದೇವಾಯಲವನ್ನು ಪುನರ್‌ನಿರ್ಮಿಸುವ ಮಹತ್ವಾಕಾಂಕ್ಷಿ ಯೋಜನೆಯನ್ನು ಧರ್ಮಸ್ಥಳದ ಧರ್ಮೋತ್ಥಾನ ಟ್ರಸ್ಟ್‌ ಮುಂದಿಟ್ಟಿತು.

ಈಗ ದೇವಸ್ಥಾನದ ಅರ್ಧಕ್ಕೂ ಹೆಚ್ಚು ಭಾಗ ಪುನರ್‌ ನಿರ್ಮಾಣವಾಗಿದೆ. ಇದಕ್ಕಾಗಿ ಹೊರಗಿನ ವಸ್ತುಗಳನ್ನು ಬಳಸಿದ್ದು ಬಲು ಅಪರೂಪ. ಕಬ್ಬಿಣದ ಸರಳುಗಳನ್ನು ಸೇರಿಸಿ ಮುರಿದುಹೋಗಿದ್ದ ಕಲ್ಲಿನ ತೊಲೆಗಳನ್ನು ಮೂಲರೂಪಕ್ಕೆ ತರಲಾಗಿದೆ. ’ಒಂದು ಮಳೆ ಬಂದರೆ ಸಾಕು, ಈ ಜೋಡಣೆ ಮೂಲ ಕಲ್ಲಿನ ಬಣ್ಣಕ್ಕೇ ತಿರುಗುತ್ತದೆ. ಇಡೀ ರಚನೆಯನ್ನೇ ಪೂರ್ತಿಯಾಗಿ ಕಳಚಿ, ಅವೇ ವಸ್ತುಗಳನ್ನು ಬಳಸಿ ಪುನರ್‌ರೂಪಿಸಿದ ಉದಾಹರಣೆ ಬಹುಶಃ ಅಪರೂಪ’ ಎನ್ನುತ್ತಾರೆ ನಿರ್ಮಾಣದ ಉಸ್ತುವಾರಿ ನೋಡಿಕೊಳ್ಳುತ್ತಿರುವ ಧರ್ಮಸ್ಥಳ ಟ್ರಸ್ಟ್‌ನ ಎಂಜನಿಯರ್‌ ರಾಘವೇಂದ್ರ.

ಸುತ್ತಲಿನ ಪ್ರದೇಶಲ್ಲಿ ದೊರೆತ ಶಿಲಾಲೇಖಗಳಲ್ಲಿರುವ ಮಾಹಿತಿಯ ಪ್ರಕಾರ, ದೇವಳದ ನಿರ್ಮಾಣ ಕಾಲ ಸುಮಾರು ಕ್ರಿ.ಶ. ೧೦೦೦ದಿಂದ ೧೧೦೦. ಆದರೆ, ಇದನ್ನು ನಿರ್ಮಿಸಿದವರಾರು ಎಂಬ ಬಗ್ಗೆ ನಿಖರ ಮಾಹಿತಿ ಇನ್ನೂ ಲಭ್ಯವಾಗಿಲ್ಲ. ಚಾಲುಕ್ಯ ಶೈಲಿಯ ಈ ದೇವಾಲಯ ಸೊಗಸಾದ ಕೆತ್ತನೆಗಳನ್ನು ಒಳಗೊಂಡಿದೆ. ಸಾಕಷ್ಟು ಮಿಥುನ ಶಿಲ್ಪಗಳೂ ಇಲ್ಲಿವೆ. ಮುಖಮಂಟಪದಲ್ಲಿ ೨೦ ನಯವಾದ ಆಕರ್ಷಕ ಕೆತ್ತನೆಯುಳ್ಳ ಕಂಬಗಳಿವೆ. ಜೀರ್ಣೋದ್ಧಾರ ಶುರುವಾದ ನಂತರ ಉಮಾಮಹೇಶ್ವರ ದೇವಸ್ಥಾನ ಕ್ರಮೇಣ ತನ್ನ ಮೊದಲಿನ ವೈಭವ ಪಡೆದುಕೊಳ್ಳತೊಡಗಿತು.

ಜನ ಮನಸ್ಸು ಮಾಡಿದರೆ ಯಾವೊಂದು ಕೆಲಸವೂ ಕಷ್ಟವಲ್ಲ ಎಂಬುದಕ್ಕೆ ಹೊಸಗುಂದವೇ ಸಾಕ್ಷಿ. ಅತ್ತ ದೇಗುಲ ಮೇಲೇಳುತ್ತಿದ್ದಂತೆ, ಇತ್ತ ಇಡೀ ಊರಿನಲ್ಲಿ ಈಗ ಪ್ರಗತಿಯ ಗಾಳಿ. ದೇಗುಲ ಜೀರ್ಣೋದ್ಧಾರವಾದರೆ ಸಾಲದು, ತಾವು ಕೂಡ ಅಭಿವೃದ್ಧಿ ಹೊಂದಬೇಕೆಂಬ ಹಂಬಲ. ತಮ್ಮೂರಿನ ವಿಶಿಷ್ಟ ಸಂಸ್ಕೃತಿ ಮೂಡಿಸಿದ ಹುಮ್ಮಸ್ಸು ಅವರನ್ನು ಹೊಸ ಬದುಕಿನತ್ತ ತಿರುಗಿಸಿದೆ.

ಈಗ ದೇಗುಲದ ಸುತ್ತಲಿನ ಸುಮಾರು ೫೦೦ ಎಕರೆ ಅರಣ್ಯಪ್ರದೇಶವನ್ನು ದೇವರ ಕಾಡೆಂದು ಘೋಷಿಸಲು ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ. ದಾಖಲೆಗಳ ಪ್ರಕಾರ ಇಲ್ಲಿರುವುದು ಕಂದಾಯ ಜಮೀನು. ಅಂದರೆ, ಮುಂಚೆ ಇಲ್ಲಿ ಈ ಪರಿ ಕಾಡು ಇದ್ದಿಲ್ಲ! ನೂರಾರು ವರ್ಷಗಳ ಕಾಲ ಯಾರ ವಾಸವೂ ಇಲ್ಲದ್ದರಿಂದ ಇಲ್ಲಿ ದಟ್ಟ ಕಾಡು ನಿರ್ಮಾಣವಾಗಿದೆ! ಕುವೆಂಪು ವಿಶ್ವವಿದ್ಯಾಲಯದ ಸಸ್ಯ ವಿಜ್ಞಾನ ವಿಭಾಗದ ತಂಡ ಇಲ್ಲಿಯ ಜೀವವೈಧ್ಯತೆಯ ಸಮಗ್ರ ಅಧ್ಯಯನ ಮತ್ತು ದಾಖಲೀಕರಣ ಕೆಲಸ ನಡೆಸಿದೆ. ಸುಮಾರು 350 ಜಾತಿಯ ಗಿಡಮರಗಳನ್ನು ಗುರುತಿಸಿದ ತಂಡ, ಇಲ್ಲಿನ ಹೆಚ್ಚಿನ ಮರಗಳ ಪ್ರಾಯ ಸುಮಾರು 300-500 ವರ್ಷಗಳೆ೦ದು ಅ೦ದಾಜು ಮಾಡಿದೆ. ಇಲ್ಲಿನ ಒ೦ದು ಜಾತಿಯ ಮಾವಿನ ಮರವಂತೂ 650 ವರ್ಷ ಹಳೆಯದು!

ಈ ಎಲ್ಲ ಬೆಳವಣಿಗೆಗಳಿಂದ ಖುಷಿಯಾಗಿರುವ ಹೊಸಗುಂದ ಸುತ್ತಮುತ್ತಲಿನ ಜನತೆಗೆ ದೇವರಕಾಡನ್ನು ಉಳಿಸಿಕೊಳ್ಳಲು ಮುಂದಾಗಿದ್ದಾರೆ. ಇದು ಪರಿಸರ ಪ್ರೇಮಿಗಳ ಮತ್ತು ವಿದ್ಯಾರ್ಥಿಗಳ ಸ೦ಶೋಧನೆಯ ತಾಣವಾಗಲಿ ಎಂಬುದು ಅವರ ಆಶಯ. ಇಲ್ಲಿನ ಜೀವವೈವಿಧ್ಯವನ್ನು ಇನ್ನಷ್ಟು ಸಮೃದ್ಧಗೊಳಿಸಬೇಕೆಂಬುದು ಅವರ ಕನಸು. ನಶಿಸಿಹೋಗುತ್ತಿರುವ ಹಾಗೂ ನಾಶವಾಗಿರುವ ಸಸ್ಯಸ೦ಕುಲಗಳನ್ನು ಇಲ್ಲಿ ಬೆಳೆಸಲು ಮುಂದಾಗಿರುವ ಅವರು, ಪ್ರತಿ ವರ್ಷ 108 ಜಾತಿಯ ಸಸ್ಯಗಳನ್ನು ಹಾಗೂ ಪ್ರತಿಯೊಂದು ಸಸ್ಯದ 108 ಗಿಡಗಳನ್ನು ನೆಡಲು ಯೋಜನೆ ರೂಪಿಸಿದ್ದಾರೆ. ಈಗ ಯೋಜನೆ ಮೂರನೇ ವರ್ಷಕ್ಕೆ ಕಾಲಿಟ್ಟಿದೆ. ೧೨ ಸಾವಿರಕ್ಕೂ ಹೆಚ್ಚು ಸಸ್ಯ ಪ್ರಭೇದಗಳು ದೇವರಕಾಡಿನಲ್ಲಿ ಬೆಳೆಯತೊಡಗಿವೆ.
ಕಾಡಿನ ಪ್ರೀತಿ ಜನರಿಗೆ ನೀರಿನ ಮಹತ್ವ ಮನಗಾಣಿಸಿದೆ. ಹೊಸಗುಂದ ಮತ್ತು ಸುತ್ತಲ ಪರಿಸರದಲ್ಲಿ ದಟ್ಟ ಕಾಡು ಇದ್ದರೂ ಕೂಡ ಬೇಸಿಗೆಯ ದಿನಗಳಲ್ಲಿ ಕುಡಿಯುವ ನೀರಿಗೂ ಕೂಡಾ ಪರದಾಡಬೇಕಾದ ಪರಿಸ್ಥಿತಿ ಇತ್ತು. ಇದಕ್ಕೆ ಪರಿಹಾರ ಕಂಡುಕೊಳ್ಳಲು ಮೂರು ವರ್ಷಗಳ ಹಿಂದೆ ಮಳೆ ನೀರು ಸಂಗ್ರಹ ಯೋಜನೆ ರೂಪಿಸಲಾಯ್ತು. ಇಂಗುಗುಂಡಿಗಳನ್ನು ದೊಡ್ಡ ಸಂಖ್ಯೆಯಲ್ಲಿ ನಿರ್ಮಿಸಲಾಯ್ತು. ಅದರ ಪರಿಣಾಮ: ಡಿಸೆ೦ಬರ್‍-ಜನವರಿ ತಿಂಗಳಲ್ಲಿಯೇ ಬತ್ತಿ ಹೋಗುತ್ತಿದ್ದ ದೇವಾಲಯದ ಪುಷ್ಕರಣಿಯಲ್ಲಿ ಈಗ ಮಳೆಗಾಲದವರೆಗೂ ನೀರು ನಿಲ್ಲತೊಡಗಿದೆ. ಸುತ್ತಮುತ್ತಲಿನ ಕೆರೆಕಟ್ಟೆಗಳಲ್ಲಿಯೂ ನೀರು ಸಮೃದ್ಧ. ರೈತರ ಗಮನ ಈಗ ನೈಸರ್ಗಿಕ ಕೃಷಿಯ ಕಡೆ ಹೊರಳಿದ್ದು ರಾಸಾಯನಿಕ ವಿಷವನ್ನು ಭೂಮಿಗೆ ಉಣಿಸದಿರಲು ನಿರ್ಧರಿಸಿದ್ದಾರೆ. ಪರಂಪರೆ ಅನುಸರಿಸುವುದರಲ್ಲಿಯೇ ನೆಮ್ಮದಿಯಿದೆ ಎಂಬುದನ್ನು ಮನಗಾಣತೊಡಗಿದ್ದಾರೆ.

ಹೊಸಗುಂದ ಈಗ ಮಾದರಿ ಗ್ರಾಮ. ಅಲ್ಲೀಗ ಎಲ್ಲವೂ ಇದೆ. ಪರಂಪರೆಯ ಬೇರುಗಳಿವೆ. ದಟ್ಟ ಕಾಡಿದೆ. ಪ್ರಕೃತಿಯ ಭಾಗವಾದರೆ ಮಾತ್ರ ಪ್ರಗತಿ ಎಂಬ ತಿಳಿವಳಿಕೆಯಿದೆ. ಬೀಳುವ ಪ್ರತಿಯೊಂದು ಮಳೆಹನಿಯನ್ನು ಆಸ್ವಾದಿಸುವ, ಅದನ್ನು ಇಂಗಿಸುವ, ಪ್ರಕೃತಿಯೊಂದಿಗೆ ಒಂದಾಗಿ ಬಾಳುವ ಜೀವನ ಪ್ರೀತಿ ಇದೆ. ಆರು ನೂರು ವರ್ಷಗಳ ಕಾಲ ಅರಣ್ಯದಲ್ಲಿ ಮುಚ್ಚಿಹೋಗಿದ್ದ ದೇಗುಲದ ಜೊತೆಗೆ ಜನರ ಬದುಕೂ ಈಗ ಅರಳತೊಡಗಿದೆ. ಹೊಸ ರೀತಿಯ ಪ್ರಗತಿಯ ಕಂಪು ಎಲ್ಲೆಡೆ ಪಸರಿಸತೊಡಗಿದೆ.

- ಚಾಮರಾಜ ಸವಡಿ

(ಚಿತ್ರ ಕೃಪೆ:  http://sumstrust.blogspot.com)

ಎದ್ದೇಳು ಮಂಜುನಾಥ, ಬೆಳಗಾಯಿತು...

3 Dec 2009

6 ಪ್ರತಿಕ್ರಿಯೆ
ಇತ್ತೀಚೆಗೆ ರಾತ್ರಿ ತಡವಾಗಿ ಮಲಗೋದು ಶುರುವಾಗಿಬಿಟ್ಟಿದೆ. ಅದು ಇದು ಓದುತ್ತ, ಬರೆಯಲೇಬೇಕಾಗಿದ್ದನ್ನು ಬರೆಯುತ್ತ ಕೂತವನಿಗೆ ನಿದ್ದೆ ಬರುತ್ತಿದೆ ಅನ್ನಿಸಿದಾಗ ರಾತ್ರಿ ಒಂದೋ-ಎರಡೋ ಗಂಟೆಯಾಗಿರುತ್ತದೆ. ಹೀಗಾಗಿ ಬೆಳಿಗ್ಗೆ ಏಳುವಾಗ ಏಳಾಗಿರುತ್ತದೆ.

ಮೊನ್ನೆ ಬೆಳಿಗ್ಗೆ ಕ್ಲೈಂಟ್‌ ಒಬ್ಬರ ಕೆಲಸಕ್ಕೆಂದು ಬೇಗ ಏಳಬೇಕಾಯ್ತು. ಹಾಗೆ ನೋಡಿದರೆ ಏಳಲು ಮನಸ್ಸಿರಲಿಲ್ಲ. ಅರೆ ಮನಸ್ಸಿನಿಂದಲೇ ಎದ್ದು, ಬೆಳಗಿನ ಎಲ್ಲ ವಿಧಿಗಳನ್ನು ವಿಧ್ಯುಕ್ತವಾಗಿ ಮುಗಿಸಿ, ಬಾಗಿಲು ತೆರೆದು ಈಚೆ ಬಂದರೆ, ಹೊರಗೆ ಮಜವಾದ ಚಳಿ.

ರಸ್ತೆಗಳು ಸ್ವಚ್ಛವಾಗಿದ್ದವು. ಜನ ಮತ್ತು ವಾಹನಗಳಿಲ್ಲದ್ದರಿಂದ ನನಗೆ ಹಾಗನ್ನಿಸಿತೋ! ಗಾಳಿ ಕೂಡ ನಡುಕ ಹುಟ್ಟಿಸುವಷ್ಟು ಹಿತವಾಗಿತ್ತು. ನಾಗರಬಾವಿಯಿಂದ ಬಸವೇಶ್ವರನಗರದ ಆ ತುದಿಗೆ ಹೋಗಲು ಬೆಳಗಿನ ಸಮಯದಲ್ಲಿ ಹದಿನೈದು ನಿಮಿಷಗಳು ಸಾಕು. ಆದರೆ, ಇಷ್ಟು ಸಣ್ಣ ಅವಧಿ ಎಷ್ಟೊಂದು ವಿಶೇಷತೆಗಳನ್ನು ಪರಿಚಯಿಸಿತೆಂದರೆ, ‘ಛೇ ಇನ್ಮೇಲೆ ಬೇಗ ಏಳಬೇಕು’ ಅಂತ ಪದೆ ಪದೆ ಅನ್ನಿಸಿತು.

ಕಾಲೇಜಿಗೆ, ಬೆಳಗಿನ ಪಾಳಿಯ ಕೆಲಸಕ್ಕೆ ಹೋಗುವವರೆಲ್ಲ ಆರು ಗಂಟೆಗೆಲ್ಲ ಬಸ್‌ ಸ್ಟಾಪ್‌ಗಳಲ್ಲಿ ಹಾಜರು. ಎಲ್ಲರೂ ತಾಜಾ ಗಾಳಿಯಷ್ಟೇ ಫ್ರೆಶ್‌. ಪೇಪರ್‌ ಹಾಗೂ ಹಾಲು ಹಾಕುವ ಹುಡುಗರಷ್ಟೇ ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಓಡಾಡುತ್ತಿದ್ದುದನ್ನು ಬಿಟ್ಟರೆ, ಉಳಿದವರೆಲ್ಲ ಚಳಿಗಾಲದ ಶುರುವಿನ ದಿನಗಳ ಸೊಗಸನ್ನು ಅನುಭವಿಸಲೆಂದೇ ಅಷ್ಟೊತ್ತಿಗೇ ಎದ್ದು ಬಂದಂತಿದ್ದರು. ಫುಟ್‌ಪಾತ್‌ ಅಗಲವಾಗಿರುವ ಕಡೆ ದಿನಪತ್ರಿಕೆಗಳ ವಿಂಗಡಣೆ ನಡೆದಿತ್ತು. ಇದ್ದಕ್ಕಿದ್ದಂತೆ ‘ಛಾಯಾಕನ್ನಡಿ’ ಬ್ಲಾಗ್‌ ಬರೆಯುವ ಶಿವು ನೆನಪಾದರು. ಮಳೆ ಬರಲಿ, ಬಿಡಲಿ. ಚಳಿ ಇರಲಿ, ಇಲ್ಲದಿರಲಿ. ಪಾಪ, ನಸುಕಿನಲ್ಲೇ ಎದ್ದು, ನಮ್ಮ ಬೆಳಗಿನ ಕಾಫಿ ಹೊತ್ತಿಗೆ ಪತ್ರಿಕೆ ತಲುಪಿಸುವ ಕಾಯಕ ಅವರು ಹೇಗೆ ಮಾಡ್ತಾರಪ್ಪ ಅಂತ ಅನ್ನಿಸಿತು. ಮನಸ್ಸಿನಲ್ಲೇ ಅವರಿಗೆ, ಅವರ ವೃತ್ತಿ ಬಾಂಧವರಿಗೆ ಸಲಾಮ್‌ ಹೊಡೆದು ಮುಂದಕ್ಕೆ ಹೋದೆ.

ತರಕಾರಿ ಮಾರುವವರು ಒಬ್ಬೊಬ್ಬರಾಗಿ ಕೂಗಲು ಆರಂಭಿಸಿದ್ದರು. ಬೆಳಿಗ್ಗೆಯೇ ಶುರುವಾದ ಬಸ್‌ಗಳಲ್ಲಿ ದಟ್ಟಣೆ ಇರಲಿಲ್ಲ. ಸಿಗ್ನಲ್‌ಗಳು ಹಳದಿ ದೀಪಗಳನ್ನು ಮಿನುಗಿಸುತ್ತ, ‘ಹೋಗಿ ಬನ್ನಿ’ ಎಂದು ಹೇಳುತ್ತಿದ್ದವು. ಮರಗಳು ದಟ್ಟವಾಗಿರುವ ಕಡೆ ಹಕ್ಕಿಗಳ ಚಿಲಿಪಿಲಿ ಬಿಟ್ಟರೆ ಮತ್ತೆ ಕಿವಿಗೆ ಬಿದ್ದಿದ್ದು ಎಫ್‌.ಎಂ. ರೇಡಿಯೋದ ಬಾನುಲಿಗಳೇ.

ಅಶ್ವಥ್ವ ವೃಕ್ಷಗಳಿರುವೆಡೆ ಮರ ಸುತ್ತುವ ಆಸ್ತಿಕ ಮಹಿಳೆಯರು. ಅವರ ಪೈಕಿ ಹುಡುಗಿಯರೇ ಹೆಚ್ಚು. ದೇವಸ್ಥಾನಗಳು ಬಾಗಿಲು ತೆರೆದುಕೊಂಡಿದ್ದವು. ಹೂ, ಹಣ್ಣು, ತೆಂಗಿನಕಾಯಿ, ಊದುಬತ್ತಿ ಮಾರುವವರ ಗುಂಪು ಹೊರಗೆ. ಸಣ್ಣ ಸಣ್ಣ ದರ್ಶಿನಿಗಳಲ್ಲಿ ಬಿಸಿ ಬಿಸಿ ಇಡ್ಲಿ-ಸಾಂಬಾರಿನ ಘಮ. ಬೇಗ ಎದ್ದಿದ್ದೆನಾದ್ದರಿಂದ ಸಣ್ಣಗೆ ಹಸಿವು ಕೆರಳಿದಂತಾಯ್ತು.

ಅಂಥ ಬೆಳ್ಳಂಬೆಳಿಗ್ಗೆಯೂ ಅಲ್ಲಲ್ಲಿ ಸಣ್ಣ ಸಣ್ಣ ಬಾರ್‌ಗಳು ಬಿಸಿನೆಸ್‌ ಶುರು ಮಾಡಿದ್ದವು. ಅಲ್ಲಿ ಕೂಡ ಕೇಳಿಬಂದಿದ್ದು ಸುಪ್ರಭಾತವೇ. ‘ಎದ್ದೇಳು ಮಂಜುನಾಥ...’ ಎಂಬ ಸೊಗಸಾದ ಹಾಡು. ಬಹುಶಃ ಹಾಡು ಕೇಳಿದ ಕುಡುಕರು ಬೇಗ ಎದ್ದು ಬರಲಿ ಅಂತ ಇರಬೇಕು. ದಣಿದು ಕುಡಿಯುವ ಮಜಾ ಒಂದು ರೀತಿಯದಾದರೆ, ಫ್ರೆಶ್ಶಾಗಿ ಕುಡಿಯುವ ಮಜಾ ಇನ್ನೊಂದು ರೀತಿಯೇನೋ. ಅದಕ್ಕೆಂದೇ ಅಷ್ಟೊತ್ತಿಗೆ ಕುಡುಕರೂ ಹಾಜರಾಗಿದ್ದರು. ಬೋಣಿ ಚೆನ್ನಾಗಿರಬೇಕು. ಬಾರ್‌ ಮಾಲೀಕನ ಮುಖದಲ್ಲಿ ಭರ್ಜರಿ ಲವಲವಿಕೆ.

ಹೌಸಿಂಗ್‌ ಬೋರ್ಡ್‌ ಕಾಲೋನಿ ದಾಟಿ ಬಸವೇಶ್ವರ ನಗರದ ಕಡೆ ತಿರುಗಿಕೊಂಡಾಗ ರಭಸದಿಂದ ವಾಕಿಂಗ್‌ ಮಾಡುತ್ತಿದ್ದ ಒಂದಿಷ್ಟು ಜನ ಧಡೂತಿ ಆಂಟಿಯರು, ಚೂಟಿ ಅಂಕಲ್‌ಗಳು ಕಾಣಿಸಿದರು. ಕಿವಿಯಲ್ಲಿ ಇಯರ್‌ಫೋನ್‌ ಹಾಕಿಕೊಂಡವರೇ ಬಹಳಷ್ಟು. ಹಾಡು ಕೇಳುತ್ತ, ವಾಕ್‌ ಮಾಡುತ್ತ ಮಸ್ತ್‌ ಮಜಾ ಮಾಡ್ತಿದ್ರು. ನಕ್ಕು ಮುಂದೆ ಹೋದೆ.

ಪವಿತ್ರ ಪ್ಯಾರಡೈಸ್‌ ಎಂಬ ಖ್ಯಾತ ಹೋಟೆಲ್‌ ದಾಟಿ ಎಂಟನೇ ಮುಖ್ಯರಸ್ತೆಯ ಒಳ ಹೊಕ್ಕಾಗ, ಬೆಂಗಳೂರಿನ ಈ ಭಾಗ ಇನ್ನೂ ನಿದ್ದೆಯಲ್ಲಿದೆ ಅನ್ನಿಸಿತು. ಅಗಲ ರಸ್ತೆಯಲ್ಲಿ ವಿರಳ ಜನ-ವಾಹನ ಸಂಚಾರ. ಸುತ್ತಲೂ ಇರುವ ವಿವಿಧ ಪಾರ್ಕ್‌‌ಗಳ ಮರಗಿಡಗಳು ಉಸಿರಾಡಿದ ಗಾಳಿ ತಾಜಾ ಇದ್ದರೂ, ಇಲ್ಲಿ ಚಳಿ ಕೊಂಚ ಹೆಚ್ಚೇ ಇದೆ ಅನಿಸಿತು. ಕ್ಲೈಂಟ್‌ ಮನೆ ಹತ್ತಿರವಾಗುತ್ತಿದ್ದಂತೆ, ಟೈಮ್‌ ನೋಡಿಕೊಂಡೆ. ಮನೆ ಬಿಟ್ಟು ಕೇವಲ ಹದಿನೈದು ನಿಮಿಷಗಳಾಗಿದ್ದವು.

ಬೇರೆ ಸಮಯದಲ್ಲಾಗಿದ್ದರೆ, ಇದೇ ದೂರ ಕ್ರಮಿಸಲು ಏನಿಲ್ಲವೆಂದರೂ ಅರ್ಧ ಗಂಟೆ ಬೇಕಾಗುತ್ತಿತ್ತು. ಟ್ರಾಫಿಕ್‌ ಶಪಿಸುತ್ತ ವಾಹನ ಓಡಿಸುವಾಗ, ಸುತ್ತಮುತ್ತಲಿನ ಅಚ್ಚರಿಗಳತ್ತ ಗಮನ ಹರಿಯುವುದಾದರೂ ಹೇಗೆ? ಬೆಳ್ಳಂಬೆಳಿಗ್ಗೆಯ ಈ ಹದಿನೈದು ನಿಮಿಷಗಳಿಗೆ ಅದೆಂಥ ಮಾಂತ್ರಿಕ ಸ್ಪರ್ಶ ಇದೆಯಲ್ಲ ಅನಿಸಿ ಅಚ್ಚರಿಯಾಯ್ತು.

ಕ್ಲೈಂಟ್‌ ಮನೆಯಲ್ಲಿ ಬಿಸಿ ಬಿಸಿ ಕಾಫಿ, ಬಿಸಿ ಬಿಸಿ ದಿನಪತ್ರಿಕೆಗಳು ಕಾಯ್ದಿದ್ದವು. ಹಾಯಾಗಿ ಕಾಫಿ ಕುಡಿಯುತ್ತ, ಪೇಪರ್‌ ಓದುವಾಗ, ಮತ್ತೆ ಮತ್ತೆ ಅಂದುಕೊಂಡೆ- ಇನ್ಮೇಲೆ ಬೆಳಿಗ್ಗೆ ಬೇಗ ಏಳಬೇಕು!

ಏಳ್ತೀನಾ?

- ಚಾಮರಾಜ ಸವಡಿ