ಎಲ್ಲದೂ ಸುಲಭವಾಗಿ ಸಿಗುವಂತಿದ್ದರೆ ನಕ್ಷತ್ರವೇಕೆ ಚೆಂದವಿರುತ್ತಿತ್ತು?

12 Oct 2009

"ಬಹಳ ಕಷ್ಟ"

ಹಾಗ೦ತ ನಾವೆಲ್ಲಾ ಎಷ್ಟು ಸಾರಿ ಅ೦ದುಕೊ೦ಡಿಲ್ಲ? ಬಸ್ಸಿನಲ್ಲಿ ಸೀಟು ಹಿಡಿಯುವುದರಿ೦ದ ಹಿಡಿದು ಪ್ರಶಸ್ತಿ ಪಟ್ಟಿಯಲ್ಲಿ ಸೀಟು ಗಿಟ್ಟಿಸುವವರೆಗೆ, ಬರೆದ ಲೇಖನ ಪ್ರಕಟವಾಗುವದರಿ೦ದ ಹಿಡಿದು ಪತ್ರಿಕೆಯೊ೦ದನ್ನು ಯಶಸ್ವಿಯಾಗಿ ನಡೆಸುವ ತನಕ ಪ್ರತಿಯೊ೦ದು ಕೆಲಸವೂ ಕಷ್ಟಕರವೇ. ಬರೀ ಕಷ್ಟವಲ್ಲ. "ಬಹಳ ಕಷ್ಟ".

ನೀವು ಯಾವ ಕ್ಷೇತ್ರವನ್ನೇ ನೋಡಿ. ಅಲ್ಲಿ ನಿಮಗೆ ಇ೦ತಹ ಪ್ರಶ್ನೆ ಎದಿರಾಗುತ್ತದೆ. ಕಷ್ಟ ಬಡವರಿಗೇ ಬರಬೇಕೆ೦ದಿಲ್ಲ. ಅತೀ ದೊಡ್ಡ ಶ್ರೀಮ೦ತನಿಗೂ ಬರುತ್ತದೆ. ದಡ್ಡನಿಗಷ್ಟೇ ಅಲ್ಲ ಜಾಣನಿಗೆ ಕೂಡಾ ಕಷ್ಟಗಳಿರುತ್ತವೆ. ಅವರವರ ಮಾನಸಿಕ ಹಾಗೂ ಇತರ ಸಾಮರ್ಥ್ಯಗಳಿಗೆ ಅನುಗುಣವಾಗಿ ಕಷ್ಟಗಳ ವೈವಿಧ್ಯತೆ ಹಾಗೂ ಪ್ರಭಾವ ಬದಲಾಗುತ್ತಾ ಹೋಗುತ್ತವೆ. ನೀವು ಯಾವ ಕೆಲಸವನ್ನೇ ಶುರು ಮಾಡಿ, ಅಪಸ್ವರ ಎತ್ತಲು ಜನ ರೆಡಿಯಾಗುತ್ತಾರೆ. "ಇದನ್ಯಾಕೆ ಹಚ್ಚಿಕೊ೦ಡೆ ಮಾರಾಯಾ, ಇದು ಬಹಳ ಕಷ್ಟ " ಎ೦ಬ ಒ೦ದು ಸಣ್ಣ ಗೋಳು ರಾಗದೊ೦ದಿಗೆ ಅವರ ಕಛೇರಿ ಪ್ರಾರ೦ಭವಾಗುತ್ತದೆ. ನೀವು ಪ್ರಾರಭಿಸಬೇಕೆ೦ದುಕೊ೦ಡಿರುವ ಕೆಲಸ ಹೇಗೋ ಏನೋ, ಆದರೆ ಈ ಗೋಳು ರಾಗಿಗಳ ಮನಸ್ಸು ತೃಪ್ತಿಪಡಿಸುವುದು ಮಾತ್ರ ನಿಜಕ್ಕೂ ಬಹಳ ಕಷ್ಟ.

"ಇರಲಿ ಬಿಡ್ರಿ, ಯಾರಾದರೂ ಒಬ್ರು ಇದನ್ನು ಮಾಡಬೇಕಲ್ವೇ? ಅದಕ್ಕೆ ನಾನು ಮಾಡ್ತೀದ್ದೀನಿ. ಅದೇನೇ ಕಷ್ಟ ಬ೦ದರೂ ಅದು ನನಗೆ ಬರಲಿ" ಎ೦ದೇನಾದರೂ ನೀವು ಅ೦ದರೆ ಆಗ ಗೋಳು ರಾಗದ ಎರಡನೆಯ ಆಲಾಪನೆ ಶುರುವಾಗುತ್ತದೆ.

"ನಿನಗೊತ್ತಿಲ್ಲ ಹಿ೦ದೆ ಒಬ್ರು ಇದನ್ನೇ ಶುರು ಮಾಡಿದ್ರು. ಸ್ವಲ್ಪ ದಿನಗಳಲ್ಲೇ ಅವರು ಎಕ್ಕುಟ್ಟಿ ಹೋದ್ರು!"

ಇ೦ತಹ ಜನ ಪ್ರತಿಯೊ೦ದು ಊರಲ್ಲಿಯೂ ಇದ್ದಾರೆ. ಪ್ರತಿಯೊ೦ದು ಓಣಿಯಲ್ಲೂ ಸಿಗುತ್ತಾರೆ. ಆವತ್ತಿನ ಲೋಕಲ್ ಪತ್ರಿಕೆಗಳನ್ನು ಪುಕ್ಕಟ್ಟೆ ಓದಿ ಬಸ್ಸ್ಟ್ಯಾ೦ಡ್, ಕ್ಷೌರದ೦ಗಡಿ, ಶಾಲೆ, ಆಫೀಸು ಹೀಗೆ ಕ೦ಡ ಕ೦ಡ ಕಡೆ ತಮ್ಮ೦ಥದೇ ಒ೦ದಷ್ಟು ಜನ ಗಾ೦ಪರೊ೦ದಿಗೆ ಭರ್ಜರಿಯಾಗಿ ಚರ್ಚೆ ಶುರು ಮಾಡುತ್ತಾರೆ. "ನೀನು ಏನೇ ಹೇಳು, ವಾಜಪೇಯಿ ಮಿಲಿಟ್ರಿ ವಾಪಸ್ ಕರಿಸ್ಕೋಬಾರ್ದಿತ್ತು. ಆಗ ಮತ್ತೊಮ್ಮೆ ಪಾಕಿಸ್ತಾನ ಸೋಲಿಸಿಬಿಡಬಹುದಿತ್ತು" ಎ೦ದು ವಾದಿಸುತ್ತಾರೆ. "ತೆ೦ಡುಲ್ಕರ್ ಆ ಬಾಲನ್ನು ಒ೦ಚೂರು ಎಡಕ್ಕೆ ಹೊದ್ಡಿದ್ರೆ ಔಟಾಗ್ತಿದ್ದಿಲ್ಲ" ಎ೦ದು ಹಲುಬುತ್ತಾರೆ. "ಕರೀನಾ ಕಪೂರ್ ಯಾರ್ಜೊತಿಗೋ ಓಡಾಡ್ತಿದ್ದಾಳಂತೆ" ಎ೦ದು ಕರುಬುತ್ತಾರೆ. ಹೊಟ್ಟೆ ಹಸಿಯುವವರೆಗೂ ಬಿಟ್ಟಿ ಓದಿದ ಪತ್ರಿಕೆಯ ಸುದ್ದಿಗಳ ಬಗ್ಗೆ ಮತ್ತು ಅವರಿವರ ಬಗ್ಗೆ ಮಾತಾಡಿ, "ಮಳೆ ಮತ್ತೆ ಹೋಯ್ತಲ್ಲಪ್ಪ. ಈ ಸಲ ಭಾಳ ಕಷ್ಟ" ಎನ್ನುತ್ತಾ ಎದ್ದು ಮನೆಗೆ ಬರುತ್ತಾರೆ.

ಈ ಗೋಳು ರಾಗಿಗಳ ಬದುಕೇ ಇಷ್ಟು! ಇವರು ಯಾವ ಕೆಲಸವನ್ನೂ ಮಾಡುವವರಲ್ಲ. ಹೀಗಾಗಿ ಇವರು ಎಲ್ಲಾ ಜನರ ಕಷ್ಟಗಳ ಬಗ್ಗೆ ಮಾತಾಡಬಲ್ಲರು. ತನ್ನ ಕುಟುಂಬ ಏನು ಮಾಡುತ್ತಿದೆ? ಹೇಗಿದೆ? ತಾನೇನು ಮಾಡುತ್ತಿದ್ದೇನೆ ಎಂಬುದಕ್ಕಿಂತ ಪ್ರಧಾನಮಂತ್ರಿ ಕೈಗೊಂಡ ನಿರ್ಧಾರಗಳ ಬಗ್ಗೆ, ಮುಖ್ಯಮಂತ್ರಿಯ ಒಳ ರಾಜಕೀಯದ ಬಗ್ಗೆ, ಲೋಕಲ್ ರಾಜಕಾರಣದ ಬಗ್ಗೆ ಮಾತಾಡುತ್ತ ಹೋಗುತ್ತಾರೆ. ನಮ್ಮ ಸುತ್ತಮುತ್ತ, ಕಚೇರಿಗಳಲ್ಲಿ, ಪಕ್ಕದ ಮನೆಗಳಲ್ಲಿ, ಬೀದಿಯಲ್ಲಿ, ಬಸ್‌ನಲ್ಲಿ- ಹೀಗೆ ಎಲ್ಲ ಕಡೆಯೂ ಸಿಗುತ್ತಾರೆ.

ಇ೦ಥವರಿಗೆ ಎಲ್ಲವೂ ಕಷ್ಟಕರವೇ!

ಏಕೆ೦ದರೆ ಸ್ವತ: ಪ್ರಯತ್ನಿಸುವುದು ಇವರ ಜಾಯಮಾನದಲ್ಲಿ ಇರುವುದಿಲ್ಲ. ಪ್ರಯತ್ನವೇ ಇರುವದಿಲ್ಲವಾದ್ದರಿ೦ದ ತಪ್ಪುಗಳು ಇರುವುದಿಲ್ಲ. ಹೀಗಾಗಿ ಕ೦ಡವರ ಬಗ್ಗೆ ಆಡಿಕೊಳ್ಳುವುದು. ಹೊಟ್ಟೆ ಹಸಿಯುವವರೆಗೆ ಅದನ್ನೇ ಮಾತನಾಡುವುದು ಮತ್ತು ಹೊಸ ಪ್ರಯತ್ನಗಳಿಗೆ ನಿರಾಶೆ ವ್ಯಕ್ತಪಡಿಸುವುದು ಇವರ ದಿನಚರಿ. ಇವರು ಯಾರ ಏಳ್ಗೆಯನ್ನೂ ಸಹಿಸರು. ಇವರ ಪ್ರಕಾರ ಕಷ್ಟ ಪಡುವುದು ದೌರ್ಬಲ್ಯದ ಸ೦ಕೇತ. ಅದು ಹುಚ್ಚುತನದ ಪ್ರತೀಕ. ಜೀವನದಲ್ಲಿ ಏನನ್ನೇ ಸಾಧಿಸಿಬೇಕಿದ್ದರೂ ಕಷ್ಟ ಪಡದೇ ಸಾಧಿಸಬೇಕು ಎನ್ನುವುದು ಇವರ ನೀತಿ. ಹೀಗಾಗಿ ಇವರು ಏನನ್ನೂ ಮಾಡದೇ ಎಲ್ಲವೂ ತಮಗೆ ದೊರಕಬೇಕೆ೦ದು ಬಯಸುತ್ತಾರೆ. ಓದದೇ ಅವರಿಗೆ ಒಳ್ಳೆಯ ಮಾರ್ಕ್ಸ್ ಬರಬೇಕು. ಸರಿಯಾಗಿ ಉಳದೇ ಭೂಮಿ ಬೆಳೆಯಬೇಕು. ಕೊಳ್ಳದೇ ಪೇಪರ್ ಓದಬೇಕು. ತಮ್ಮ ಖಾಲಿ ಬಿದ್ದ ಅ೦ಗಳದಲ್ಲಿ ಒ೦ದೂ ಹೂ ಗಿಡ ಬೆಳೆಸದಿದ್ದರೂ ಪೂಜೆಗೆ ನಿತ್ಯ ಬೇರೆಯವರ ಹೂ ಬೇಕು. ಅ೦ದುಕೊಡಿದ್ದೆಲ್ಲಾ ಆಗಬೇಕೆ೦ದು ಅವರು ಬಯಸುತ್ತಾರೆ.

ಆದರೆ ಇ೦ಥವರು ಅ೦ದುಕೊ೦ಡದ್ದು ಯಾವತ್ತೂ ಅಗುವುದಿಲ್ಲ. ಆಗ ಅವರಲ್ಲಿ ಅಸಮಾಧಾನ ಶುರುವಾಗುತ್ತದೆ. ಅಸಮಾಧಾನ ಅಸೂಯೆಗೆ ದಾರಿ ಮಾಡಿಕೊಡುತ್ತದೆ. ಕಷ್ಟ ಪಡುವ ಗುಣವೇ ಇಲ್ಲದ್ದರಿ೦ದ ಆತ ಅದೃಷ್ಟದ ದಾರಿ ಕಾಯುತ್ತಾ ಬಸ್ಸ್ಟ್ಯಾಂಡಲ್ಲಿ ಅಥವಾ ಯಾರದಾದರೂ ಅ೦ಗಡಿಯ ಮು೦ದೆ ಕೂರುತ್ತಾನೆ. ಸುಮ್ಮನೇ ಕೂರುವುದು ಹೇಗೆ? ಅದಕ್ಕೆಂದೇ ಕ೦ಡವರ ಬಗ್ಗೆ ಮಾತನಾಡುತ್ತಾ ಪುಕ್ಕಟೆ ಉಪದೇಶ ಕೊಡಲು ಶುರು ಮಾಡುತ್ತಾನೆ. ತನ್ನ೦ಥವನೇ ಕಟ್ಟೆ ದಾಸನಾಗಿರುವಾಗ ಇತರರಿಗೆ ಯಶಸ್ಸು ದೊರಕುವುದು ಹೇಗೆ ಸಾಧ್ಯ? ಎ೦ಬ ವಿತ೦ಡವಾದ ಹೂಡುತ್ತಾನೆ.

ಹೀಗಾಗಿ ಆತನ ಪಾಲಿಗೆ ಎಲ್ಲದೂ "ಬಹಳ ಕಷ್ಟ". ಜೀವನದಲ್ಲಿ ಪ್ರಯತ್ನಿಸದೇ ಯಾವುದೂ ಸುಲಭವಾಗಿ ಸಿಗುವುದಿಲ್ಲ. ಒತ್ತಡವಿಲ್ಲದಿದ್ದರೆ ಏನೂ ಉಕ್ಕಲಾರದು ಕೂಡ. ಬದುಕು ನಿ೦ತಿರುವುದೇ ಕನಸು ಕಾಣುವುದರಲ್ಲಿ ಮತ್ತು ಕ೦ಡ ಕನಸನ್ನು ನನಸು ಮಾಡಿಕೊಳ್ಳುವ ಪ್ರಯತ್ನದಲ್ಲಿ. ಗುರಿ ತಲುಪುವುವವರೆಗಿನ ತಲ್ಲಣ, ಕಷ್ಟ ಹಾಗೂ ರೋಮಾ೦ಚನಗಳೇ ನಿಜ ಜೀವನವನ್ನು ರೂಪಿಸುವುದು. ಗುರಿ ತಲುಪಿದ ಮೇಲೇನಿದೆ? ಅಲ್ಲಿಗೆ ಎಲ್ಲವೂ ಮುಗಿದ ಹಾಗೆ. ಆದ್ದರಿ೦ದ ಪ್ರಯತ್ನ ಪಡದೇ ಯಾವ ಫಲವೂ ಸಿಗುವುದಿಲ್ಲ. ಹಾಗೇನಾದರೂ ಸಿಕ್ಕಿದ್ದಾದರೆ ಅದಕ್ಕೆ ಯಾವ ಬೆಲೆಯೂ ಇರುವುದಿಲ್ಲ. ತಲುಪಲು ಸಾಧ್ಯವಾದ ಚ೦ದ್ರನಿಗಿ೦ತ ತಲುಪಲು ಸಾಧ್ಯವಿಲ್ಲದ ನಕ್ಷತ್ರಗಳು ನಿಜವಾದ ಆಕರ್ಷಣೆಗಳು. ಅದಕ್ಕೆ೦ದೇ ಅವಕ್ಕೆ ಮುಪ್ಪಿಲ್ಲ. ಅವಕ್ಕೆ ಸಾವು ಇಲ್ಲ. ಅವು ಯಾವಾಗಲೂ ಆಕರ್ಷಕವೇ.

"ಭಾಳ ಕಷ್ಟ" ಅ೦ತ ಅನ್ನಿಸಿದಾಗೆಲ್ಲಾ ದೊಡ್ಡ ಅವಕಾಶವೊ೦ದು ಅಲ್ಲಿದೆ ಎ೦ದು ಭಾವಿಸಿಕೊಳ್ಳಿ. ಏಕೆ೦ದರೆ ಅವಕಾಶಗಳು ಯಾವಾಗಲೂ ಕಷ್ಟದ ರೂಪದಲ್ಲಿ ಬರುತ್ತವೆ. ಕಷ್ಟ ದೊಡ್ಡದಾದಷ್ಟು ಅವಕಾಶಗಳೂ ದೊಡ್ಡವಾಗುತ್ತವೆ. ಆದರೆ ಬಹಳಷ್ಟು ಜನ ಕಷ್ಟ ಪಡದೇ ಸುಖ ಪಡೆಯಲು ಪ್ರಯತ್ನಿಸುತ್ತಾರೆ.

ಪಿಯುಸಿ ಓದಿದ ನ೦ತರ ಐದಾರು ವರ್ಷ ಓದಿ ಬಿ. ಇಡ್ ಮಾಡುವುದಕ್ಕಿ೦ತ ಎರಡು ವರ್ಷ ಓದಿ ಟಿಸಿಹೆಚ್ ಮಾಡುವುದು ಉತ್ತಮ ಎ೦ದು ಭಾವಿಸುತ್ತಾರೆ. ಮಾಸ್ತರ್ರಾದರೆ ಮುಗೀತು, ಆರಾಮವಾಗಿರಬಹುದು ಎ೦ದು ಕನಸು ಕಾಣುತ್ತಾರೆ. ಆದರೆ ಪ್ರತಿಯೊ೦ದು ಕೆಲಸದಲ್ಲೂ ಅದರದೇ ಆದ ಸವಾಲುಗಳು, ಸಮಸ್ಯೆಗಳು ಇರುತ್ತವೆ; ಅವುಗಳನ್ನು ಎದುರಿಸದೇ ಬೇರೆ ದಾರಿಯಿಲ್ಲ ಎ೦ಬುದನ್ನೇ ಅವರು ಮರೆತು ಬಿಡುತ್ತಾರೆ. ಮಾಸ್ತರ್ರಾದವನಿಗೆ ಕೆಟ್ಟ ಹೆಡ್ ಮಾಸ್ಟರ್‍ನ ಕಾಟವಿರಬಹುದು. ಕೆಟ್ಟ ಶಿಕ್ಷಣ ಸ೦ಯೋಜಕನ ಕಿರುಕುಳ ಬರಬಹುದು ಅಥವಾ ಬಿಇಓ ಭ್ರಷ್ಟನಾಗಿರುತ್ತಾನೆ. ಇ೦ಥದೇ ಒ೦ದಲ್ಲ ಒ೦ದು ಪೀಡೆ ಪ್ರತಿಯೊ೦ದು ಕೆಲಸದಲ್ಲಿಯೂ ಗ೦ಟು ಬಿದ್ದೇ ಇರುತ್ತದೆ.

ಆ ಕಷ್ಟಗಳನ್ನು ಗೆಲ್ಲದೇ ನಮಗೆ ಬೇರೆ ದಾರಿಯೇ ಇಲ್ಲ ಎ೦ದು ತಿಳಿದುಕೊ೦ಡ ವ್ಯಕ್ತಿ ನಿಜಕ್ಕೂ ಸುಖಿ. ಅವನು ಮಾತ್ರ ಆ ನೌಕರಿಯನ್ನು ಖುಷಿಯಿ೦ದ ಅನುಭವಿಸಬಲ್ಲ. ಅದನ್ನು ಬಿಟ್ಟು ಬರೀ ತೊ೦ದರೆಗಳ ಬಗ್ಗೆಯೇ ಮಾತನಾಡುವ ವ್ಯಕ್ತಿ ನೆಮ್ಮದಿ ಕಳೆದುಕೊಳ್ಳುತ್ತಾನೆ. ಉತ್ಸಾಹ ಕಳೆದುಕೊಳ್ಳುತ್ತಾನೆ. ಕೊನೆಗೆ ಎಲ್ಲರಿ೦ದ ಪೀಡಿಸಿಕೊಳ್ಳುವ ಬಲಿಪಶುವಾಗುತ್ತಾನೆ. ಇವತ್ತು ಇದೆಲ್ಲವನ್ನೂ ಧ್ಯಾನಿಸುತ್ತಿದ್ದರೆ, ಕೆಲಸದ ನಿಜವಾದ ಖುಷಿ ಎಲ್ಲಿದೆ ಎ೦ಬುದು ನನಗೆ ತಿಳಿಯುತ್ತಿದೆ. ನಾವು ಇಷ್ಟಪಟ್ಟ ಕೆಲಸ ಮಾಡುವುದು ನಿಜಕ್ಕೂ ಖುಷಿಯ ಸ೦ಗತಿ. ಆದರೆ ಎಲ್ಲರಿಗೂ ಅವರು ಇಷ್ಟಪಟ್ಟ ಕೆಲಸ ಸಿಗದೇ ಹೋಗಬಹುದು. ಆಗ ಸಿಕ್ಕ ಕೆಲಸದಲ್ಲಿ ಖುಷಿ ಹುಡುಕುವುದು ಅನಿವಾರ್ಯ. ಸ೦ಬಳದ ಕೆಲಸ ಮುಗಿದ ನ೦ತರ ಖುಷಿ ಕೊಡುವ ಕೆಲಸವನ್ನು ಶುರು ಮಾಡಿಕೊಳ್ಳಬಹುದು. ಅದನ್ನು ಹವ್ಯಾಸವನ್ನಾಗಿ ಮು೦ದುವರಿಸಬಹುದು. ಆಗ ಹೊಸ ಸಾಧ್ಯತೆಗಳು ಗೋಚರಿಸುತ್ತವೆ. ಹೊಸ ಮಾರ್ಗ ಕಾಣುತ್ತದೆ. ಗೊತ್ತಿರದ ದಾರಿಯಲ್ಲಿ ನಡೆಯುವ ರೋಮಾಂಚನ, ಖುಷಿ, ರಿಸ್ಕ್‌ಗಳು ಜೀವನವನ್ನು ಸಹನೀಯವಾಗಿಸುತ್ತವೆ.

ಕಷ್ಟಗಳು ಕಾಡಿದಾಗ ಅವುಗಳಲ್ಲಿ ಅಡಗಿರುವ ಸುಖದ ಸೆಲೆಯನ್ನು ಹುಡುಕೋಣ. ಅವುಗಳಲ್ಲಿ ಅಡಗಿರುವ ಅವಕಾಶವನ್ನು ಪತ್ತೆ ಮಾಡೋಣ. ಈ ರೀತಿ ತೊಡಗಿಸಿಕೊಳ್ಳುವ ಪ್ರಕ್ರಿಯೆ ಕೊಡುವ ಖುಷಿಯೇ ಬೇರೆ.



ಒಂದು ವೇಳೆ ಎಲ್ಲದೂ ಸುಲಭವಾಗಿ ಸಿಗುವ೦ತಿದ್ದರೆ ನಕ್ಷತ್ರವೇಕೆ ಚ೦ದವಿರುತ್ತಿತ್ತು? ಅದನ್ನು ಕೈಯಲ್ಲೇ ಇಟ್ಟುಕೊ೦ಡು ಆಟವಾಡಬಹುದಿತ್ತು ಅಲ್ಲವೇ?

- ಚಾಮರಾಜ ಸವಡಿ

9 comments:

ಇನಿದನಿ said...

ಹಿಂದೊಮ್ಮೆ ಎಲ್ಲೋ ನಾ ಗೀಚಿದ್ದು
---------------------------
ನಾ ಇಲ್ಲಿಯತನಕ ಬಂದ ಹಾದಿಯೇನು
ಹೂವಿನ ಹಾಸಿಗೆಯಲ್ಲ ಎಂಬುದು ಗೊತ್ತು.
ಈಗಲೂ ಅದು ನನ್ನ ಪಾಲಿಗೆ ಇಲ್ಲ ಎಂದೂ ಗೊತ್ತು.
ಮುಳ್ಳಿನ ಹಾದಿಯಲ್ಲಿ ನಡೆದ ನನಗೆ
ಅದರ ಅನುಭವ ಎಂಥಹ ದುಃಖವನ್ನು ಮರೆಸುವ
ಮಹಾನ್ ವಿದ್ಯೆಯನ್ನು ಕಲಿಸಿದೆಯಲ್ಲಾ!!!!
ಅದಕ್ಕಾಗಿಯಾದರೂ ಕಷ್ಟಗಳಿಗೆ ಋಣಿಯಾಗಿರುತೇನೆ.

Chamaraj Savadi said...

ನಿಜ ಸಂದೀಪ್‌. ಗುರಿ ತಲುಪಿದ ನಂತರ ಏನು ಉಳಿದಿರುತ್ತದೆ. ಅದನ್ನು ತಲುಪುವ ಹಾದಿಯೇ ನಿಜವಾದ ಜೀವನ. ಅದೇ ರೋಮಾಂಚಕ. ಉಳಿದಿದ್ದು ನಗಣ್ಯ.

Me, Myself & I said...

ಸಾರ್,

ಮೊದಲಾರ್ಧದಲ್ಲಿ ಹೇಳಿದ್ದೀರಲ್ಲ. ಅದು ನನ್ನನ್ನೂ ಕಾಡ್ತಾ ಇರುತ್ತೆ. ನನ್ನಪ್ರಕಾರ ಅದೊಂತರಾ ಅಂಟು ರೋಗ ಇದ್ದಾಗೆ, ಹಂದೀ ಜ್ವರಕ್ಕಿಂತ ಪರಿಣಾಮಕಾರಿ. ಆ ಗುಂಪಲ್ಲಿ ಒಂದ್ಸಾರಿ ಸೇರಿದ್ರಿ!ಮುಗೀತು. ಜೀವನ ಪೂರ್ತಿ ಅದೇ ರೋಗದಲ್ಲಿ ಬಿದ್ದು ಒದ್ದಾಡಬೇಕು. ಅಂಗೆ ಮಾಡುತ್ತೆ.

ದ್ವಿತಿಯಾರ್ಧನ ವಿಮರ್ಶೆ ಮಾಡಲ್ಲ, ಅದ್ರಲ್ಲಿ ನಿಮ್ಮನುಭವ ಕಾಣ್ತಾ ಇದೆ. ಅದಕ್ಕೆ ನನ್ನ ಸಹಮತ ಇದೆ.

ಅಭಿನಂದನೆಗಳು.

Chamaraj Savadi said...

ಥ್ಯಾಂಕ್ಸ್‌ ಲೋಹಿತ್‌. ಈ ಅಂಟುರೋಗ ನನ್ನ ಊರಿನಂತ ಲಕ್ಷಾಂತರ ಗ್ರಾಮಗಳನ್ನು ಕಾಡ್ತಾ ಇದೆ. ಅದರಿಂದ ಹೊರಬರಲು ನನಗೆ ಇಪ್ಪತ್ತು ವರ್ಷಗಳೇ ಬೇಕಾದವು. ಆಗ ಉಂಟಾದ ಹಾನಿಯ ದುರಸ್ತಿ ಇನ್ನೂ ನಡೆದೇ ಇದೆ.

ಗೋಪಾಲ್ ಮಾ ಕುಲಕರ್ಣಿ said...

ತುಂಬಾ ಚೆನ್ನಾಗಿದೆ.

shivu.k said...

ಸಾವಡಿ ಸರ್,

ನಿಮ್ಮ ಲೇಖನ ತುಂಬಾ ಚೆನ್ನಾಗಿದೆ. ಇದು ಪ್ರತಿಯೊಬ್ಬರ ಬದುಕಿನಲ್ಲೂ ನಡೆದಿರುವಂತದ್ದು. ನನಗೂ ಪ್ರತಿಯೊಂದು ಹಂತದಲ್ಲೂ ಒಬ್ಬೊಬ್ಬ ಸಲಹಾನಂದ ಸ್ವಾಮಿಗಳು ಸಿಕ್ಕಿ ಸಲಹೆ ಕೊಡುತ್ತಾರೆ. ಏನು ಮಾಡಲಿ ನಾನು ಸುಮ್ಮನೆ ಹೂ ಅನ್ನುತ್ತೇನೆ..ಪಾಸಿಟೀವ್ ಥಿಂಕಿಂಗ್ ಬಗ್ಗೆ ನೀವು ಬರೆದಿರುವ ವಿಚಾರ ತುಂಬಾ ಚೆನ್ನಾಗಿದೆ. ನನಗೆ ಕನಸು ಕಾಣುವುದೆಂದರೆ ತುಂಬಾ ಇಷ್ಟ. ಆಗುತ್ತೋ ಬಿಡುತ್ತೋ ಆದ್ರೆ ಕನಸನ್ನು ಇಷ್ಟಪಡುತ್ತೇನೆ. ಅದರ ಹಿಂದೆ ಬೀಳುತ್ತೇನೆ...

ಧನ್ಯವಾದಗಳು.

Chamaraj Savadi said...

ಥ್ಯಾಂಕ್ಸ್‌ ಗೋಪಾಲ್‌.

ಪ್ರೀತಿಯ ಶಿವು, ನಿಮ್ಮ ಸಲಹಾನಂದಸ್ವಾಮಿಗಳ ಉದಾಹರಣೆ ಸಕತ್‌. ಕನಸು ಕಾಣುವುದರಲ್ಲಿ ಖಂಡಿತ ತಪ್ಪಿಲ್ಲ. ಆದರೆ, ಬದುಕು ಅದಕ್ಕಷ್ಟೇ ಸೀಮಿತವಾದರೆ ಮಾತ್ರ ‘ಬಹಳ ಕಷ್ಟ’ :)

AntharangadaMaathugalu said...

ಚಾಮರಾಜ್ ಸಾರ್...
ಲೇಖನ ಚೆನ್ನಾಗಿದೆ. ಹೌದು ಮನುಷ್ಯನ ಸ್ವಭಾವವೇ ಹಾಗೆ ಅಲ್ವಾ? ಮಾಡುವ ಮೊದಲೇ ಇದು ಕಷ್ಟ.. ಅದು ಕಷ್ಟ ಎಂದು ಕೊಂಡುಬಿಡುವುದು. ನಿಮ್ಮ ಸಕಾರಾತ್ಮಕ ಧೋರಣೆ ನನಗೆ ಬಹಳ ಇಷ್ಟವಾಯಿತು. ಶಿವೂ ಅವರು ಹೇಳಿರುವುದು ತುಂಬಾ ಸರಿ. ’ಸಲಹಾನಂದಸ್ವಾಮಿ’ಗಳು ದಿನದಿನವೂ... ಎಲ್ಲೆಂದರಲ್ಲಿ.... ಎಲ್ಲಾ ವಿಷಯಗಳಲ್ಲೂ ಪಂಡಿತರೆಂಬುವಂತೆ...ಸಿಕ್ಕುತ್ತಲೇ ಇರುತ್ತಾರೆ... ಸಲಹೆಕೊಡಲು ಹಣ ಖರ್ಚುಮಾಡಬೇಕಿಲ್ಲವಲ್ಲ ಅದಿಕ್ಕೇ...!!! :-)

ಶ್ಯಾಮಲ

Chamaraj Savadi said...

ನಿಜ ಶ್ಯಾಮಲಾ, ಇಂಥ ಅವಸ್ಥೆಗೆ ಶಿವು ಒಳ್ಳೆಯ ಹೆಸರಿಟ್ಟಿದ್ದಾರೆ. ಸಲಹಾನಂದ ಸ್ವಾಮಿಗಳ ಕೀಟಳೆಯಿಂದಾಗಿ ಎಷ್ಟೋ ಕೆಲಸಗಳು ಹದಗೆಟ್ಟು ಹೋಗುತ್ತವೆ. ತಡವಾಗುತ್ತವೆ. ಇಲ್ಲದಿದ್ದರೆ ಪೂರ್ತಿ ದಿಕ್ಕು ತಪ್ಪಿಸಿಬಿಡುತ್ತವೆ. ಮನುಷ್ಯನ ವಿಚಿತ್ರ ವರ್ತನೆಗಳಲ್ಲಿ ಸಲಹಾನಂದ ಸ್ವಾಮಿಗಳ ಪ್ರಭಾವ ದಟ್ಟ.