ಮತ್ತೆ ಮತ್ತೆ ಬೇರಿನೆಡೆಗೆ ತುಡಿವ ಮನ

15 Jan 2016

0 ಪ್ರತಿಕ್ರಿಯೆ


ಇನ್ನೇನು ಚಳಿ ಬಲಿಯಬೇಕೆಂಬ ಸಮಯದಲ್ಲೇ ಶುರುವಾಗಿದ್ದು ಮಳೆ. ಆಗ ನಾನು ಬೆಂಗಳೂರಿನಲ್ಲಿದ್ದೆ. ಕನ್ನಡಪ್ರಭ ಬಿಡುವ ಕುರಿತ ನಿರ್ಧಾರ  ಬಹುತೇಕ ಅಂತಿಮವಾಗಿತ್ತು. ಬಂಗಾಳ ಕೊಲ್ಲಿಯಲ್ಲೆಲ್ಲೋ ಎಲ್‍ ನಿನೊ ಎಂಬ ಹವಾಮಾನ ಸಂಬಂಧಿ ಪರಿಣಾಮದಿಂದಾಗಿ ಚೆನ್ನೈ ಕೆರೆಯಂತಾಗಿದ್ದರೆ, ಬೆಂಗಳೂರೆಂಬ ನಗರ ಅರವತ್ತರ ಮುದುಕ ನೆಗಡಿಯಿಂದ ಬಳಲುವಂತೆ ಕಿರುಲುತ್ತಿತ್ತು.

ದಟ್ಟ ಮೋಡ ಕವಿದ, ಆಗಾಗ ಮಳೆ ಜಾಡಿಸುತ್ತಿದ್ದ ದಿನಗಳವು. ಚಳಿ ಇಲ್ಲದ, ಮಳೆ ಬೀಳುತ್ತಿದ್ದ ವಿಚಿತ್ರ ನವೆಂಬರ್ ತಿಂಗಳು. ಕನ್ನಡಪರ ಹೋರಾಟಗಾರರು ಕಟ್ಟಿದ್ದ ನಾಡಬಾವುಟಗಳು ತೊಯ್ದು ತೊಪ್ಪೆಯಾಗಿ, ಹಾರಲು ಹಿಂಜರಿಯುವಂತಿದ್ದ ದಿನಗಳಲ್ಲಿ, ಸಂಜೆ ಮಳೆಗೆ ಬೆಂಗಳೂರಿನಲ್ಲಿ ಭರ್ತಿ ಟ್ರಾಫಿಕ್. ಅಂಥ ಕೆಟ್ಟ ದಟ್ಟಣೆಯಲ್ಲಿ ಸಿಲುಕಿಕೊಂಡಾಗೆಲ್ಲ ಮನಸ್ಸು ಕೊಪ್ಪಳದ ಕಲ್ಲುಬೆಟ್ಟ ಮತ್ತು ಹತ್ತನೇ ತರಗತಿ ಪರೀಕ್ಷೆ ಮುಗಿಸಿದ ದಿನಗಳಲ್ಲಿ ಒಮ್ಮೆ ಅದನ್ನು ಏರಿ ನಿಂತು ಧನ್ಯತೆ ಅನುಭವಿಸಿದ ಕ್ಷಣಗಳ ಸೊಗಸನ್ನು ನೆನೆಯುತ್ತಿತ್ತು.

ಅಂಥ ದಟ್ಟಣೆಯ ನಡುವೆಯೇ, ಮತ್ತೆ ಊರಿಗೆ ಹೋಗುವ ನಿರ್ಧಾರ ಬಲಿತಿದ್ದು, ಮತ್ತು ಅದನ್ನು ಬಲು ಬೇಗ ಜಾರಿಗೆ ತಂದಿದ್ದು. ವೃತ್ತಿ ಜೀವನದಲ್ಲಿ ಏರಿಕೆಯಾಗಬಹುದಾಗಿದ್ದ ದಿನಗಳಲ್ಲಿ, ಇದ್ದುದನ್ನೆಲ್ಲ ಬಿಟ್ಟು ಮತ್ತೆ ಊರಿಗೆ ಹೋಗುವ ನನ್ನ ಯೋಚನೆ ಎಂದಿನಂತೆ ಮನೆಯಲ್ಲಿ ಚಿಂತೆ ಮೂಡಿಸಿತ್ತು. ಹೋಗಿ ಏನು ಮಾಡುವುದು ಎಂಬ ಶಾಶ್ವತ ಪ್ರಶ್ನೆ ಮನೆಯಾಕೆಯನ್ನಷ್ಟೇ ಅಲ್ಲ, ನನ್ನನ್ನೂ ತೀವ್ರವಾಗಿ ಬಾಧಿಸಿತ್ತು.

ಹಾಗೊಮ್ಮೆ ತಡರಾತ್ರಿ ಯೋಚಿಸುತ್ತ ಕೂತಿದ್ದಾಗ ಶುರುವಾಗಿತ್ತು ಭರ್ಜರಿ ಮಳೆ. ಮನೆ ಮಾಲೀಕರು, ತಾವು ತಂದಿದ್ದ ಹೊಸ ಕಾರಿಗೆ ನೆರಳಾಗಲೆಂದು ಹಾಕಿಸಿದ್ದ ತಗಡಿನ ಛಾವಣಿ ಮಳೆಯ ಅಬ್ಬರಕ್ಕೆ ಸ್ಪೀಕರ್ ಜೋಡಿಸಿದಂತಿತ್ತು. ಕಿಟಕಿಯಾಚೆ ಮಂದ ಬೆಳಕು. ಅದನ್ನು ಛಿದ್ರವಾಗಿಸುತ್ತಿದ್ದ ದಪ್ಪ ಮಳೆ ಹನಿಗಳು. ಸತತ ಹದಿನೈದು ದಿನಗಳಿಂದ ಸೂರ್ಯ‍ನನ್ನು ಕಾಣದೇ ಮಂಕಾಗಿದ್ದ ನನಗೆ ಆ ಅಪರಾತ್ರಿಯ ಬಿರುಮಳೆ ಕಂಡು ಎಂಥದೋ ಆಕರ್ಷಣೆ. 

ಥಟ್ ಅಂತ ಹೊಳೆಯಿತೊಂದು ನೆಮ್ಮದಿ ತರುವ ಅಂಶ.

ಹೌದು. ನನ್ನೂರಲ್ಲಿ ಮಳೆ ಕಡಿಮೆ. ಬಿಸಿಲು ಜೋರು. ಆದರೆ, ನೀರನ್ನು ಸಾವಿರಾರು ಕಿಮೀಗಳಿಂದ ತರಬಹುದು. ಬಿಸಿಲನ್ನು ಹಾಗೆ ತರಲಾದೀತೆ? ಊರಿಗೆ ಹೋಗಿ ಏನು ಮಾಡುವುದು ಎಂಬ ಪ್ರಶ್ನೆಗಿಂತ, ಏನೆಲ್ಲ ಮಾಡಬಹುದು ಎಂಬ ಹಲವಾರು ವಿಷಯಗಳು ದಿಢೀರನೇ ಗೋಚರಿಸಿದವು. ನಾನು ತುಂಬ ಇಷ್ಟಪಡುವ, ಆದರೆ, ಇದುವರೆಗೆ ಪ್ರಾಯೋಗಿಕವಾಗಿ ಮಾಡದ ಕೃಷಿ, ಸದಾ ನನ್ನ ಕೈ ಹಿಡಿದ ಇಂಗ್ಲಿಷ್ ಬೋಧನೆ, ಬರವಣಿಗೆ, ಅನುವಾದ, ಶಾಲೆ- ಹೀಗೆ ಹಲವಾರು ಸಾಧ್ಯತೆಗಳು, ಆ ಮಂದ ಬೆಳಕಿನ ಮಳೆ ಹನಿಗಳ ಪ್ರತಿಫಲನದಲ್ಲಿ ಒಂದರ ನಂತರ ಒಂದರಂತೆ ತಾಕಿದವು.

ಹೌದು. ಊರಿಗೆ ಹೋಗಬೇಕು. ನೌಕರಿ ನೆಚ್ಚಿಕೊಂಡಲ್ಲ, ನನ್ನನ್ನು ನಾನು ನೆಚ್ಚಿಕೊಂಡು. ಹೊಸ ಬದುಕು ಕಟ್ಟಿಕೊಳ್ಳಬೇಕು. ಮಗಳು ಗೌರಿಗೆ ಹೊಸ ಜಗತ್ತು. ಇನ್ನೊಬ್ಬ ಮಗಳಿಗೆ ಹೊಸ ಊರು. ಹೆಂಡತಿಗೆ ತವರು. ನನ್ನ ಬಹುತೇಕ ಗೆಳೆಯರೆಲ್ಲ ಅಲ್ಲೇ ಬದುಕು ಕಟ್ಟಿಕೊಂಡಿದ್ದಾರೆ. ಆ ಬಿಸಿಲಲ್ಲೇ ಬದುಕನ್ನು ತಂಪಾಗಿಸಿಕೊಂಡಿದ್ದಾರೆ. ಊರೆಂದರೆ ಥಟ್ ಎಂದು ನೆನಪಾಗುವ ಕೊಪ್ಪಳದಲ್ಲೇ ನನ್ನ ಮುಂದಿನ ಬದುಕು ಎಂದು ನಿರ್ಧರಿಸಿದೆ.

ಇಂಥದೊಂದು ನಿರ್ಧಾ‍ರಕ್ಕೆ ವೈಯಕ್ತಿಕ ಕಾರಣಗಳೂ ಸಾಕಷ್ಟಿದ್ದವು. ನಾವು ದೂರವಿದ್ದೇವೆ ಎಂಬ ಚಿಂತೆಯೂ ಸೇರಿ, ನನ್ನ ಅತ್ತೆ ಕಳೆದ ವರ್ಷ ದಿಢೀರನೇ ತೀರಿಕೊಂಡಿದ್ದರು. ಮನಸ್ಸಿನ ಆಳದಲ್ಲೆಲ್ಲೋ ಆ ಭಾವನೆ ಸಾಕಷ್ಟು ಘಾಸಿ ಮಾಡಿಬಿಟ್ಟಿತ್ತು. ಅರೆ, ನನ್ನ ತಂದೆತಾಯಿಗೂ ವಯಸ್ಸಾಗಿದೆಯಲ್ಲ. ಅವರಿಗೂ ಹೀಗೇ ಹಂಬಲ ಇರಬಹುದಲ್ಲ? ಉಳಿದವರು ಹೇಗೋ ಇರಲಿ, ಇರುವಷ್ಟು ದಿನ ನಾವೇ ಅವರ ಕಣ್ಮುಂದೆ ಇದ್ದುಬಿಡೋಣ ಎಂಬುದೂ ಈ ನಿರ್ಧಾರವನ್ನು ಬಲಗೊಳಿಸಿತ್ತು. 

ಮರುದಿನ ಹೆಂಡತಿಗೆ ನನ್ನ ನಿರ್ಧಾರ, ಅದಕ್ಕೆ ಕಾರಣವಾದ ಹಿನ್ನೆಲೆಯನ್ನು ವಿವರಿಸಿದೆ. ಇಲ್ಲವೆನ್ನಲು ಆಕೆಯಲ್ಲಿ ಬಲವಾದ ಕಾರಣಗಳು ಉಳಿದಿರಲಿಲ್ಲ. ಇಷ್ಟು ವರ್ಷಗಳ ಬಳಿಕವೂ, ನಾನು ಹಳೆಯ ತಪ್ಪುಗಳನ್ನು ಮಾಡಲಿಕ್ಕಿಲ್ಲ ಎಂಬ ನಂಬಿಕೆ ಆಕೆಯಲ್ಲೂ ಬಲಗೊಂಡಿರಬಹುದು. ಇವ ಏನಾದರೂ ಮಾಡ್ತಾನೆ ಎಂಬ ವಿಶ್ವಾಸ ಮೂಡಿರಬಹುದು. ಸರಿ, ಹೋಗೋಣ ಎಂದಳು.ಅವತ್ತೇ ಫೇಸ್ ಬುಕ್‍ನಲ್ಲಿ ಊರಿಗೆ ಹೋಗುವ ಕನಸು ಬಿತ್ತಿದೆ. ನನ್ನನ್ನು ಹತ್ತಿರದಿಂದ ಬಲ್ಲ, ದೂರದಿಂದ ಓದಿದ ಹಲವಾರು ಸಹೃದಯಿಗಳು ಸ್ವಾಗತಿಸಿದರು. ಇಷ್ಟು ವರ್ಷಗಳ ವೃತ್ತಿ ಬದುಕಿನ ನಂತರ, ಪತ್ರಿಕೋದ್ಯಮವನ್ನೇ ಬಿಟ್ಟು ಹೋಗಬೇಡಿ ಎಂದು ಕೆಲವರು ಕಾಳಜಿ ತೋರಿದರು. 

ಆದರೆ, ಅಪರಾತ್ರಿಯ ನಿರ್ಧಾರ ಬದಲಾಗಲಿಲ್ಲ. ಮುಂದೆ ಕೆಲವೇ ದಿನಗಳಲ್ಲಿ ಕನ್ನಡಪ್ರಭಕ್ಕೆ ರಾಜೀನಾಮೆ ನೀಡಿದೆ. ಊರಿಗೆ ಹೋಗುವ ಸಿದ್ಧತೆಗಳಲ್ಲಿ ತೊಡಗಿದೆ. ಮೊದಲು ನಾನು ಹೋಗೋದು, ಪರೀಕ್ಷೆಗಳ ನಂತರ ಮನೆ ಸ್ಥಳಾಂತರಿಸೋದು ಎಂದು ನಿರ್ಧಾರವಾಯಿತು.

ಆ ಹಂತದಲ್ಲಿ, ಪತ್ರಕರ್ತ ಮಿತ್ರರೊಬ್ಬರು ಫೋನ್ ಮಾಡಿ ಹೇಳಿದರು. ಹೇಗೋ ಹೋಗ್ತೀರಿ. ವರದಿಗಾರಿಕೆಗೆ ಅಲ್ಲೇ ಅವಕಾಶ ಸಿಗುವಂತಿದ್ದರೆ ಏಕೆ ಪ್ರಯತ್ನಿಸಬಾರದು ಎಂದರು. ಇಷ್ಟು ವರ್ಷಗಳ ನಂತರವೂ, ಮತ್ತೆ ನೌಕರಿ ಕೇಳಿಕೊಂಡು, ಸಂಸ್ಥೆಗಳ ಬಾಗಿಲು ತಟ್ಟುವ ಮನಸ್ಸಾಗಲಿಲ್ಲ. ಆದರೆ, ಗೆಳೆಯನ ಆಗ್ರಹ ಜೋರಾಗಿತ್ತು. `ವಿಶ್ವವಾಣಿ ಬರ್ತಿದೆ. ಭಟ್ಟರು ಸುಮ್ಮನೇ ಕೂತಿಲ್ಲ. ನಿಮ್ಮಂಥೋರಿಗೆ ಉತ್ತಮ ಅವಕಾಶ ಇದೆ. ಪ್ರಯತ್ನಿಸಿ ನೋಡಿ. ಹೇಗೋ ಹೋಗೋಕೆ ನಿರ್ಧಾರ ಮಾಡಿದ್ದೀರಿ. ಅವಕಾಶ ಸಿಕ್ಕರೆ ಸರಿ, ಸಿಗದಿದ್ದರೂ ಸರಿಯೇ’ ಎಂದರು.

ಮೇಲ್ ಮತ್ತು ಸಂದೇಶದ ನಂತರ ಕರೆ ಬಂದಿತು. ಕೊಪ್ಪಳವೇ ಏಕೆ ಎಂಬ ಪ್ರಶ್ನೆ ಎದುರಾಯಿತು. ವಿವರಿಸಿದೆ. ನಿಮ್ಮ ಅನುಭವಕ್ಕೆ ಸೂಕ್ತವಾದ ಹುದ್ದೆಯಾಗಲಿ, ಸಂಬಳವಾಗಲಿ ಅಲ್ಲಿರಲ್ಲ ಎಂದರು ರಾಧಾಕೃಷ್ಣ ಭಡ್ತಿ. ಅದೇನೂ ಇಲ್ಲದೇ ಹೋಗುತ್ತಿದ್ದೇನೆ. ಹೀಗಾಗಿ, ಸೂಕ್ತ ಹುದ್ದೆ, ಸಂಬಳದ ನಿರೀಕ್ಷೆ ಖಂಡಿತ ಇಲ್ಲ ಎಂದೆ. ಸರಿ, ಇಂಥ ದಿನ ಬನ್ನಿ ಎಂದರು.
ನಾನು ಎದುರಿಸಿದ ಅತಿ ಕಡಿಮೆ ಅವಧಿಯ ಸಂದರ್ಶನ ಅದು. ವಿಶ್ವವಾಣಿ ದಿನಪತ್ರಿಕೆಯ ಕೊಪ್ಪಳ ಜಿಲ್ಲಾ ವರದಿಗಾರ ಎಂಬ ನೇಮಕಾತಿ ಪತ್ರ ನೀಡಿಯೇ ಕಳಿಸಿದರು. 

ನನ್ನೂರಿನತ್ತ ನನ್ನ ಪಯಣ ಆರಂಭವಾಗಿದ್ದು ಹೀಗೆ. 

*****

ಸಂಕ್ರಾಂತಿಯ ದಿನದಂದು, ಚಳಿ ತುಂಬಿದ ಕೊಪ್ಪಳದಲ್ಲಿ ವಿಶ್ವವಾಣಿಯ ಮೊದಲ ಸಂಚಿಕೆ ಇದೆಲ್ಲವನ್ನೂ ಮತ್ತೆ ನೆನಪಿಸಿತು. ಪತ್ರಿಕೆಯೊಂದರ ಹುಟ್ಟಿನ ಹಿಂದೆ ಹಲವಾರು ಕಾರಣಗಳೂ ಹಾಗೂ ಸಾಕಷ್ಟು ವಿನಾಕಾರಣಗಳೂ ಇರುತ್ತವೆ. ಕನಸುಗಳಿರುತ್ತವೆ. ಕನವರಿಕೆಗಳಿರುತ್ತವೆ. ನೋವಿರುತ್ತದೆ. ನಲಿವಿನ ಹಂಬಲವಿರುತ್ತದೆ. ಪ್ರತಿಯೊಂದರ ಹುಟ್ಟಿನ ಹಿಂದಿರುವ ಸಿಹಿ-ಕಹಿ, ನೋವು-ನಲಿವುಗಳೇ ಪತ್ರಿಕೆಯೊಂದರ ಹುಟ್ಟಿನ ಹಿಂದೆಯೂ ಉಂಟು. ಎಲ್ಲಿಯೋ ಹುಟ್ಟಿರಬಹುದಾದ ಕನಸೊಂದು, ಸಮಾನ ಮನಸ್ಸುಗಳ ನಡುವೆ ವಿಕಸವಾಗುತ್ತ, ಅಂತಿಮ ರೂಪುಗೊಂಡು ಕಣ್ಮುಂದೆ ನಿಂತ ಘಳಿಕೆಯೊಂದು ಕೊಡುವ ಸುಖವೇ ಬೇರೆ.

ಪತ್ರಿಕೆಯ ಪುಟಗಳನ್ನು ತಿರುಗಿಸುತ್ತ ಹೋದಂತೆ, ಬದುಕಿನ ಹಲವಾರು ಪುಟಗಳನ್ನು ಮನಸ್ಸು ತಿರುವಿ ಹಾಕುತ್ತಿತ್ತು. ಕೊನೆಯ ಪುಟ ತಿರುಗಿಸಿದಾಗ, ಕೊಪ್ಪಳದ ಕಲ್ಲುಬೆಟ್ಟಗಳ ನಡುವೆ, ಪಥ ಬದಲಿಸಿದ ಸೂರ್ಯ ಇಣುಕಿನೋಡುತ್ತಿದ್ದ.
ಈ ಸಂಕ್ರಾಂತಿ ಬದುಕು ಬದಲಿಸುವುದೆ? ಒಳವಾಣಿಗೊಂದು ವಿಶ್ವವಾಣಿ ತರುವುದೆ?

ಅದಕ್ಕೆ ಕಾಲ ಉತ್ತರ ಹೇಳಲಿದೆ. 

- ಚಾಮರಾಜ ಸವಡಿ

ಮತ್ತದೇ ಕನಸು. ಮತ್ತದೇ ಕನವರಿಕೆ

1 Nov 2015

0 ಪ್ರತಿಕ್ರಿಯೆ
ಸುದೀರ್ಘ ಮೌನದ ನಂತರದ ಮಾತು ನಿಜಕ್ಕೂ ಕಷ್ಟ.

ಹಾಗಂತ ಮಾತಿರುವುದಿಲ್ಲ ಅಂತ ಏನಿಲ್ಲ. ಹೇಳಲಿಕ್ಕೆ, ಹಂಚಿಕೊಳ್ಳಲಿಕ್ಕೆ ಸಾವಿರಾರು ಸಂಗತಿಗಳಿರುತ್ತವೆ. ಈ ಸಂದರ್ಭಕ್ಕೆಂದೇ ಅಂದುಕೊಂಡಿದ್ದ ಸೊಗಸಾದ ಸಾಲುಗಳಿರುತ್ತವೆ. ಮೆಚ್ಚಿದ ಪದ್ಯ, ನಗಿಸಿದ ಹಾಸ್ಯ, ಆರ್ದ್ರವಾಗಿಸಿದ ಭಾವನೆಗಳಿರುತ್ತವೆ. ಹೇಳಬೇಕೆಂಬ ತುಡಿತವೂ ಬಲವಾಗಿರುತ್ತದೆ.

ಆದರೆ, ಹೇಳಲಾಗುವುದಿಲ್ಲ. ಹಾಗಂತ, ಹೇಳದಿರಲೂ ಆಗುವುದಿಲ್ಲ.

ನಿಜವಾದ ಕಷ್ಟ ಅದು. ಮನಸಿನ ಮಾತುಗಳು ನಿಜದ ಮಾತಾಗದಿರುವ ಕಷ್ಟ ಬಲು ಹಿಂಸೆ ಕೊಡುತ್ತದೆ.

ಬರಹವೂ ಹಾಗೇ.

ಏನೋ ಹೇಳಬೇಕೆಂದು ಅಕ್ಷರ ಜೋಡಿಸಲು ಹೊರಡುತ್ತೇವೆ. ಭಾವನೆಗಳು ಸಾಲುಗಳಾಗುವುದಿಲ್ಲ. ಬರೆದ ಸಾಲುಗಳು ಭಾವವನ್ನು ಬಿಂಬಿಸುವುದಿಲ್ಲ. ಬರೆದಿದ್ದನ್ನು ಅಳಿಸಿ, ಹೊಸದಾಗಿ ಬರೆಯಲು ಹೋಗಿ, ಅದು ಕಲಸುಮೇಲೋಗರವಾಗಿ, ಇದಾ ನನ್ನ ಭಾವತೀವ್ರತೆಯ ಪ್ರತಿಬಿಂಬ ಎಂದು ಬೇಸರವಾಗುತ್ತದೆ.

ಬರೆಯುವುದನ್ನು ನಿಲ್ಲಿಸಿ, ಸುಮ್ಮನೇ ಕೂತರೆ, ಎದೆಯೊಳಗಿನ ಭಾವಗಳು ಮಾತಿಗಿಳಿಯುತ್ತವೆ, ಸ್ವಗತವಾಗುತ್ತದೆ. ಒಬ್ಬನೇ ಇಬ್ಬಿಬ್ಬರಾಗಿ ಮಾತಾಡಿಕೊಂಡಂತೆ, ಅಂದುಕೊಂಡ ಭಾವಗಳೆಲ್ಲ ಸಲೀಸಾಗಿ ಹೊರಬಂದಂತೆ, ಅವಕ್ಕೊಂದು ಖಚಿತ ಅರ್ಥವೂ ದಕ್ಕಿದಂತೆ, ಆಹಾ. ಆ ಸ್ವಗತದ ಸೊಗಸೇ ಸೊಗಸು.

*****

ಇತ್ತೀಚೆಗೆ ಇಂಥ ಭಾವತೀವ್ರತೆ, ಹೇಳಲಾಗದ ತೊಳಲಾಡುವಿಕೆ ತುಂಬ ಕಾಡಿದೆ. ಕಾಡುತ್ತಲೇ ಇದೆ. ಏನೋ ಬರೆಯಬೇಕೆಂದುಕೊಳ್ಳುತ್ತಲೇ, ಅದು ಮತ್ತೇನೋ ಆಗಿ, ಛೇ ಇದು ಸರಿ ಹೋಗಲಿಲ್ಲ ಎಂದು ಅಳಿಸಿ, ಊಹೂಂ, ಅಳಿಸಬಾರದಿತ್ತೆಂದು ಹಳಹಳಿಸಿ, ಮತ್ತೆ ಮತ್ತೆ ಸುಮ್ಮನೇ ಕೂತು, ಭಾವಗಳೊಂದಿಗೆ ಸ್ವಗತಕ್ಕಿಳಿಯುವುದೇ ಹೆಚ್ಚಾಗುತ್ತಿದೆ. ತುಂಬ ದಿನ ಬರೆಯುವುದನ್ನು ಬಿಟ್ಟಿದ್ದರ ಪರಿಣಾಮ ಇದು ಎಂದು ಅನಿಸಿದರೂ, ಎಲ್ಲೋ ಕೊಂಡಿ ಜೋಡಣೆಯಾಗುತ್ತಿಲ್ಲ ಎಂದು ಮತ್ತೆ ಮತ್ತೆ ಅನಿಸುತ್ತದೆ. ಈ ಮಾತಿಗೆ, ಭಾವಕ್ಕೆ, ಮಾತು-ಭಾವ ಬೆಸೆಯುತ್ತಿದ್ದ ಮನಸ್ಸೊಂದು ದೂರವಾಗಿದೆ ಎಂಬ ಹಳಹಳಿ.

*****

ಕಳೆದುಕೊಳ್ಳುವುದೆಂದರೆ, ಭಾವತಿವ್ರತೆಯನ್ನು ಹೊರಹಾಕಲು ಸೋಲುವುದು. ಪದೆ ಪದೆ ಮನಸ್ಸಿನಲ್ಲಿ ಮೆಲುಕುಹಾಕುತ್ತಿದ್ದರೂ ಅದು ಮಾತಾಗದಿರುವುದು, ಅಕ್ಷರಗಳಾಗದಿರುವುದು, ಯಾವುದೇ ಕ್ರಿಯಾತ್ಮಕ ಕೆಲಸದಲ್ಲಿ ಹೊಮ್ಮದಿರುವುದು. ಅದು ಕೊಡುವ ಕಾಟ ಸಹಿಸಲಾಗದೇ, ಮತ್ತೆ ಮತ್ತೆ ಬರೆಯಲೆತ್ನಿಸುವುದು. ಸೋಲುವುದು. ಸೋತು ಸೋತು ಸ್ವಗತಕ್ಕಿಳಿಯುವುದು. ಸುದೀರ್ಘ ಕಾಲದವರೆಗೆ ಮತ್ತೆ ಮೌನವಾಗುವುದು.
*****
ಬಹುಶಃ ತುಂಬ ದಿನ ಇಂಥ ಸ್ಥಿತಿ ಉಳಿಯಲಿಕ್ಕಿಲ್ಲ. ಕೈಗಳು ಮತ್ತೆ ಮತ್ತೆ ಕೀಬೋರ್ಡ್ ಸವರುತ್ತವೆ. ಮಾತುಗಳಿಗೆ ಅಕ್ಷರರೂಪ ಕೊಡಲು ಯತ್ನಿಸುತ್ತವೆ. ಹಾಗೆ ಪ್ರಯತ್ನಿಸುತ್ತಲೇ ಸೋಲುತ್ತವೆ. ಬರೆದಿದ್ದನ್ನು ಅಳಿಸುತ್ತ, ಮತ್ತೆ ಮತ್ತೆ ಬರೆಯಲು ಯತ್ನಿಸುತ್ತ, ಬಿಡಿಬಿಡಿ ಭಾವಗಳನ್ನು ಇಡಿಯಾಗಿಸಲು ಪ್ರಯತ್ನಿಸುತ್ತಲೇ ಮನಸ್ಸನ್ನು ಜರಡಿಯಾಗಿಸುತ್ತ ಹೋಗುತ್ತೇನೆ. ಒಂದಾದರೂ ಮುತ್ತು ಉದುರೀತಾ ಎಂದು ಮತ್ತೆ ಮತ್ತೆ ನೋಡಿಕೊಳ್ಳುತ್ತೇನೆ.

ಇದೊಂದು ಮುಗಿಯದ ಕನಸು. ತೀರದ ದಾಹ. ಮತ್ತೆ ಮತ್ತೆ ಕನಸು. ಮತ್ತೆ ಮತ್ತೆ ದಾಹ.

ಹನಿಯೊಡೆಯದ ಕಾರ್ಮುಗಿಲನ್ನು ಕುದಿವ ಭೂಮಿ ದಿಟ್ಟಿಸುವಂತೆ, ಬೀಸುವ ಗಾಳಿಯ ನೆಪಕ್ಕೆ ಕಾಯ್ದಂತೆ, ಮನಸ್ಸು ಮತ್ತದೇ ಸ್ಪೂರ್ತಿಯನ್ನು ಹುಡುಕುತ್ತದೆ. ಹುಡುಕ್ಹುಡುಕಿ ನಿರಾಶೆಗೊಳ್ಳುತ್ತದೆ.

ಬಂದೀತು ಮತ್ತೆ ಮಳೆ ಸುಗ್ಗಿ, ಎಲ್ಲೆಗಳ ಮೀರೀತು ಹಿಗ್ಗಿ.

ಮತ್ತದೇ ಕನಸು. ಮತ್ತದೇ ಕನವರಿಕೆ.

- ಚಾಮರಾಜ ಸವಡಿ

ಹೋಗಿ ಬನ್ನಿ ಕಲಾಂ ಸಾರ್

27 Jul 2015

0 ಪ್ರತಿಕ್ರಿಯೆ
ಕೆಲವೊಂದು ಸಾವುಗಳೇ ಹಾಗೆ. ತೀರಾ ಅನಿರೀಕ್ಷಿತವಾಗಿರುತ್ತವೆ. ಹೀಗಾಗಿ, ಹೆಚ್ಚು ದುಃಖ ತರುತ್ತವೆ. ಸಾವು ನಿರೀಕ್ಷಿತ ಎಂಬ ಭಾವನೆಯೊಂದಿಗೆ ನಿತ್ಯ ಬದುಕುವವರಿಗೂ, ಕೆಲವರ ಸಾವು ತಕ್ಷಣ ಜೀರ್ಣಿಸಿಕೊಳ್ಳಲು ಆಗುವುದಿಲ್ಲ.
ಮಾಜಿ ರಾಷ್ಟ್ರಪತಿ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅವರ ಅನಿರೀಕ್ಷಿತ ನಿರ್ಗಮನ ಅಂಥದು.

ಕಲಾಂ ಎಂದರೆ ನೆನಪಾಗುವುದು ಸರಳತೆ. ಮೇಲೇರಿದವ ಚಿಕ್ಕವನಿರಬೇಕೆಂಬ ಕವಿಮಾತಿಗೆ ನಿದರ್ಶನ. ಶಾಲೆ-ಕಾಲೇಜುಗಳ ಕಾರ್ಯಕ್ರಮಕ್ಕೆ ಆದ್ಯತೆ ಮೇಲೆ ಹೋಗುತ್ತಿದ್ದ ಈ ವಿಜ್ಞಾನಿ ಮಕ್ಕಳೊಂದಿಗೆ ಬೆರೆಯುತ್ತಿದ್ದ ಬಗೆ ನಿಜಕ್ಕೂ ಅಚ್ಚರಿ ಹುಟ್ಟಿಸುವಂಥದು. ಒಂದೇ ಒಂದು ಪುಟ್ಟ ಬಡ್ತಿಗೂ ಹುಚ್ಚರಂತೆ ಆಡುವವರ ಮಧ್ಯೆ, ಅಷ್ಟೆಲ್ಲ ಎತ್ತರ ಏರಿಯೂ ಮಕ್ಕಳ ಮಟ್ಟಕ್ಕೆ ಇಳಿದು ಬೆರೆಯುತ್ತಿದ್ದ ಕಲಾಂ ನಿಜಕ್ಕೂ ಅಪರೂಪದ ವ್ಯಕ್ತಿ.

ಅವರಲ್ಲಿ ವಿಜ್ಞಾನದ ಬಗ್ಗೆ ಅಚ್ಚರಿ, ಕುತೂಹಲ, ಪ್ರೀತಿ ಹಾಗೂ ವಿಪರೀತ ಆಕರ್ಷಣೆ ಇತ್ತು. ರಾಷ್ಟ್ರಪತಿಯಾಗಿದ್ದು ಅನಿರೀಕ್ಷಿತವಾಗಿ. ಐದು ವರ್ಷ ಆ ಹುದ್ದೆಯಲ್ಲಿದ್ದ ಅವರಿಗೂ ಒಂಚೂರು ಮೋಹ ಬೆಳೆದಿತ್ತು. ಹೀಗಾಗಿ, ಎರಡನೇ ಅವಧಿಗೂ ಮುಂದುವರಿಯುವ ಇಚ್ಛೆ ವ್ಯಕ್ತಪಡಿಸಿದರು. ಆದರೆ, ಯುಪಿಎ ಸರ್ಕಾರಕ್ಕೆ ಅವರು ಬೇಡವಾಗಿದ್ದರು. ಕೊಂಚ ಬೇಸರದಿಂದಲೇ ರಾಷ್ಟ್ರಪತಿ ಭವನದಿಂದ ನಿರ್ಗಮನಿಸಿದ ಕಲಾಂ ಹೋಗಿ ನಿಂತಿದ್ದು ಮಕ್ಕಳ ಬಳಿ.

ನಿಜವಾದ ಕಲಾಂ ಹೊಮ್ಮಿದ್ದು ಅಲ್ಲಿಯೇ. ರಾಷ್ಟ್ರಪತಿ ಭವನದ ಎತ್ತರದಲ್ಲಿ ಎದ್ದು ಕಾಣುತ್ತಿದ್ದ ಅವರ ಸರಳತೆಗಿಂತ, ಮಕ್ಕಳ ಜೊತೆ ಬೆಳೆದ ಅವರ ಸರಳತೆ ಹೆಚ್ಚು ಸೆಳೆಯುತ್ತಿತ್ತು. ವಿಜ್ಞಾನವನ್ನು ಮಕ್ಕಳ ಮನಸ್ಸಿನಲ್ಲಿ ತುಂಬಿದರು. ಹೊಸದನ್ನು ಶೋಧಿಸುವ ಹುಚ್ಚನ್ನು ಬೆಳೆಸಿದರು. ರಾಷ್ಟ್ರಪತಿಯಾಗಿ ಮಾಡದ, ಮಾಡಲು ಆಗದ ಕೆಲಸಗಳನ್ನು ಮಾಜಿಯಾದ ನಂತರ ಖುಷಿಯಿಂದ ಮಾಡಿಕೊಂಡು ಬಂದರು ಕಲಾಂ.

ಕಲಾಂ ಸಾವಿನ ಸುದ್ದಿ ಓದುತ್ತ ನನಗೆ ಬಾಲ್ಯದ ಕೆಲವು ಕನಸುಗಳು ನೆನಪಾಗುತ್ತವೆ. ಕಲಿಸಿದ ಶಿಕ್ಷಕರು, ಗೆಳೆಯರು ನೆನಪಾಗುತ್ತಾರೆ. ಒಬ್ಬನೇ ವ್ಯಕ್ತಿಯ ಸಣ್ಣ ತಾಳ್ಮೆ, ತ್ಯಾಗ, ನೆರವು ಜೀವನಪರ್ಯಂತೆ ಅದ್ಹೇಗೆ ಪೊರೆಯುತ್ತ ಹೋಗುತ್ತದೆ ಎಂಬುದನ್ನು ನೆನೆದರೆ ಅಚ್ಚರಿಯಾಗುತ್ತದೆ. ಇಂಥ ಸುಂದರ, ಸ್ನಿಗ್ಧ ಬಾಲ್ಯಕ್ಕೆ ಕಲಾಂರಂಥ ದೈತ್ಯ ವ್ಯಕ್ತಿ ಬಂದಾಗ, ಅದನ್ನು ಅನುಭವಿಸಿದ ಮಕ್ಕಳ ಮನಸ್ಸು ಅದೆಂಥ ಸ್ಪೂರ್ತಿ ಪಡೆಯಲಿಕ್ಕಿಲ್ಲ?

ಚಾಚಾ ನೆಹರು ಎಂದು ನಮಗೆಲ್ಲ ಹೇಳಿಕೊಟ್ಟ ಭಾರತದ ಮಾಜಿ ಪ್ರಧಾನಿ ಮಕ್ಕಳಿಗೆ ನಿಜಕ್ಕೂ ಏನೂ ಮಾಡಲಿಲ್ಲ. ಆದರೆ, ಅಂಥ ಬೂಟಾಟಿಕೆಯೇನೂ ಮಾಡದ ಕಲಾಂ, ಮಕ್ಕಳ ಮನಸ್ಸಿನಲ್ಲಿ ಮೂಡಿಸಿದ ಪ್ರಭಾವ ನಿಜಕ್ಕೂ ಅಗಾಧ. ಬಹುಶಃ 2020 (ಪುರ) ಯೋಜನೆಯನ್ನು ರೂಪಿಸುವ ಸಮಯದಲ್ಲಿ ಕಲಾಂ ಅವರ ಮನಸ್ಸಿನಲ್ಲಿ ಮಕ್ಕಳೇ ಇದ್ದಿರಬೇಕು. ಏಕೆಂದರೆ, ಮಕ್ಕಳಂಥ ಹುಲುಸಾದ ಭೂಮಿಯಲ್ಲಿ ಮಾತ್ರ ಕನಸುಗಳನ್ನು ಬಿತ್ತಲು ಸಾಧ್ಯ. ಬೆಳೆಸಲು ಸಾಧ್ಯ.

ಆ ಕೆಲಸವನ್ನು ಕಲಾಂ ಅದ್ಭುತವಾಗಿ ಮಾಡಿಹೋಗಿದ್ದಾರೆ. ಅವರು ರೂಪಿಸಿದ ಕ್ಷಿಪಣಿಗಳಿಗಿಂತ ಎತ್ತರಕ್ಕೆ ಈ ಕನಸುಗಳು ಹೋಗಲಿವೆ. ಒಬ್ಬ ವ್ಯಕ್ತಿಯ ನಿಜವಾದ ಕೊಡುಗೆ ಇದು.

ಈ ಕಾರಣಕ್ಕಾಗಿ ಬಹುಕಾಲ ನೆನಪಿನಲ್ಲಿರುತ್ತಾರೆ ಕಲಾಂ.

ಅಷ್ಟೇ ಅಲ್ಲ, ಅವರ ಮುಗ್ಧತೆ, ತಿಳಿವಳಿಕೆ, ವಿನಯವಂತಿಕೆ, ಸರಳತೆ, ಏನನ್ನೂ ಇಟ್ಟುಕೊಳ್ಳದೇ ಎಲ್ಲವನ್ನೂ ಹೊಂದುವಂಥ ವ್ಯಕ್ತಿತ್ವ ತುಂಬ ಕಾಲ ಮನಸ್ಸಿನಲ್ಲಿರುತ್ತದೆ.

ಹೋಗಿ ಬನ್ನಿ ಕಲಾಂ ಸಾರ್.

- ಚಾಮರಾಜ ಸವಡಿ

ಒಳಗೊಳಗೇ ಉಳಿದು, ಬೆಳೆದು...

3 Jun 2012

0 ಪ್ರತಿಕ್ರಿಯೆ

ಇವತ್ತು ನನಗೀ ಮಾತಿನ ಯಂತ್ರದ ಹಂಗಿಲ್ಲ
ಹೃದಯಕ್ಕೆ ಮಾತಾಡುವದ ಕಲಿಸಿದ್ದೇನೆ
*****
ಪದೆ ಪದೆ ನೋಡುವಾಸೆ ಮೂಡದಿರಲೆಂದು
ನಿನ್ನ ಜೀವಂತವಾಗಿ ಎದೆಯಲ್ಲಿಟ್ಟುಕೊಂಡಿದ್ದೇನೆ
*****
ಕೈಗೆಟುಕದ ದೂರದಲ್ಲಿದ್ದರೇನು ನೀನು
ಇಲ್ಲೇ ಮಿಡಿಯುತ್ತೀ ಒಳಗೊಳಗೇ
*****
ಜಗವೆಲ್ಲ ಹುಡುಕ್ಹುಡುಕಿ ನಿರಾಶವಾಯಿತು
ಒಳಗೊಳಗೇ ನಕ್ಕ ನಿನ್ನ ನಗೆ ಕೇಳದಾಯಿತು
*****
ಕೊರಳ ದಾಟಿ ಹೊರಗ್ಹರಿಯದ ನಿನ್ನುಲಿಯ
ಅಪಾರ ದೂರದಿಂದ ತನ್ಮಯನಾಗಿ ಆಲಿಸಿದೆ
*****
ಬಿಡು ಮರುಳೆ, ಇರು ಅಲ್ಲೇ, ದೂರ ದೂರ
ಮಾಯೆಯಂಥ ಪ್ರೀತಿ ಅಂತರ ಮಾಯವಾಗಿಸಿದೆ
*****
ಇನ್ನು ನಿನ್ನ ಕರೆಯುವುದಿಲ್ಲ, ಮೊರೆಯಿಡುವುದಿಲ್ಲ
ಇನ್ನೇನಿದ್ದರೂ ಒಳಗೊಳಗೇ ನಿವೇದನೆ, ವೇದನೆ

- ಚಾಮರಾಜ ಸವಡಿ

ಗೋಲದೊಳಗೆ ತಿರುಗುತ್ತಾ ತಿರುಗುತ್ತಾ...

21 May 2012

1 ಪ್ರತಿಕ್ರಿಯೆ
ನಾನು ಮತ್ತೆ ಮತ್ತೆ ಮೊಬೈಲ್‌ನ ಪುಟ್ಟ ಪರದೆಯನ್ನು ದಿಟ್ಟಿಸಿದೆ.

ಅಲ್ಲಿ ನೀನಿದ್ದಿಲ್ಲ.

ನಿರಾಶೆಯಾಯಿತು. ಅದು ಹಾಗೇ ಬಿಡು, ಆಗಾಗ ಎನ್ನುವುದಕ್ಕಿಂತ ಬಹುತೇಕ ಸಮಯದಲ್ಲಿ ಅದು ಹಾಗೇ.

ನಿರಾಶೆ. ಯಾವುದೇ ಹೊಸ ಭರವಸೆ ಮೂಡಿಸದ ಮಾಮೂಲಿ ಭಾವ ಎನ್ನುವಷ್ಟರಮಟ್ಟಿಗೆ ಅದು ರೂಢಿಯಾಗಿಹೋಗಿದೆ. ಮೊಬೈಲ್ ಮುಖವನ್ನು ಆಗಾಗ ದಿಟ್ಟಿಸುವುದು, ಅದರಲ್ಲಿ ಹೊಸದೇನಾದರೂ ಮೂಡಿದೆಯೋ ಎಂದು ಪರೀಕ್ಷಿಸುವುದು, ಇಲ್ಲವೆಂದಾಗ, ಚಿಕ್ಕದೊಂದು ನಿರಾಶೆ ಅನುಭವಿಸುವುದು, ಮತ್ತೆ ಮೊಬೈಲ್ ಮುಚ್ಚಿ, ಕೆಲಸದತ್ತ ಗಮನ ಹರಿಸುವುದು ಬದುಕಿನ ಭಾಗವಾಗೇ ಹೋಗಿದೆ.

ಎಷ್ಟು ದಿನದಿಂದ ಇದು ಹೀಗೆ ಎಂದು ಯೋಚಿಸುವುದೂ ಉಂಟು. ಆಗೆಲ್ಲ ತಲೆ ಕೊಡವಿ ಸುಮ್ಮನಾಗುತ್ತೇನೆ. 

ಹಳೆಯದನ್ನು ನೆನಪಿಸಿಕೊಳ್ಳುತ್ತ ಕೂಡುವುದರಲ್ಲಿ ಅರ್ಥವಿಲ್ಲ ಎಂಬುದನ್ನು ನಿನಗಿಂತ ಇಷ್ಟೊಂದು ಪರಿಣಾಮಕಾರಿಯಾಗಿ ಬೇರ‍್ಯಾರೂ ನನಗೆ ಮನದಟ್ಟು ಮಾಡಿಸಿಲ್ಲ. ಈಗ ನಾನು ಮುಳುಗಿರುವ ಆಳ ನೋಡಿದರೆ, ಬಹುಶಃ ಮತ್ಯಾರೂ ಆ ಸ್ಥಾನವನ್ನು ಕದಿಯಲು ಸಾಧ್ಯವೂ ಇಲ್ಲ.

ಹೀಗಾಗಿ, ಮೊಬೈಲ್ ಪರದೆಯನ್ನು ದಿಟ್ಟಿಸುವುದರ ಹಿಂದಿನ ಭಾವನೆಗಳೇ ಬೇರೆ. 

ನಿನ್ನನ್ನು ಬಿಟ್ಟು ಮತ್ಯಾರೂ ಅದರಲ್ಲಿ ಸಂತೋಷ ಉಕ್ಕಿಸಲಾರರು. 

ಮತ್ತು, ದುಃಖವನ್ನೂ ಸಹ.

ಗಾಡಿ ಓಡಿಸುವಾಗ, ಸಿಗ್ನಲ್‌ನಲ್ಲಿ ಮತ್ತೆ ಮೊಬೈಲ್ ಮುಖ ದಿಟ್ಟಿಸುತ್ತೇನೆ. ಖಾಲಿ ಪರದೆ ಅಣಕಿಸುತ್ತದೆ. ಮೊಬೈಲ್ ಮುಚ್ಚಿ ಸುಮ್ಮನೇ ರಸ್ತೆ ದಿಟ್ಟಿಸುತ್ತೇನೆ. ಎದುರಿಗೆ ನಿಂತಿರುವ ಗಾಡಿಯ ನಂಬರ್ ಪ್ಲೇಟ್‌ಗಳೊಮ್ಮೆ ಅವಲೋಕಿಸುತ್ತೇನೆ. ಅಲ್ಲಿರುವ ನಂಬರ್‌ಗಳನ್ನು ಕೂಡಿಸಿದರೆ ಬರುವ ಸಂಖ್ಯೆಯನ್ನು ಲೆಕ್ಕ ಹಾಕುತ್ತೇನೆ. ಒಂದಕ್ಕಿಂತ ಒಂದು ನಂಬರ್‌ಗಳು ಅಧ್ವಾನವಾಗಿರುತ್ತವೆ. 

ಅಷ್ಟೊತ್ತಿಗೆ ಸಿಗ್ನಲ್ ಹಸಿರಾಗುತ್ತದೆ. 

ಮತ್ತೆ ಓಟ ಶುರು. ಎಲ್ಲಿಗೆ ಓಡುತ್ತಿದ್ದಾರೋ ಇವರೆಲ್ಲ ದಿಕ್ಕೆಟ್ಟವರಂತೆ ಎಂದು ಬೈದುಕೊಳ್ಳುತ್ತಲೇ ನಾನೂ ಓಟದಲ್ಲಿ ಸೇರಿಕೊಳ್ಳುತ್ತೇನೆ. ಬಹುಶಃ ಅವರೂ ನನ್ನಂತೆ ಯೋಚಿಸುತ್ತಿರಬಹುದು. 

ಕಚೇರಿಗೆ ಹೋದಾಗ, ಮೊಬೈಲ್ ಜಾಗವನ್ನು ಮೇಲ್ ಆವರಿಸುತ್ತದೆ.

ನಿನ್ನ ಹೆಸರಿನ ಮುಂದೆ ದೀಪವೇನಾದರೂ ಬೆಳಗುತ್ತಿದೆಯಾ ಎಂದು ದಿಟ್ಟಿಸುತ್ತೇನೆ.

ದೀಪ ಕಂಡರೆ ಹೇಳತೀರದ ಖುಷಿ. ನಂಗೊತ್ತು ನೀನು ಚಾಟ್‌ಗೆ ಬರಲ್ಲ ಅಂತ. ಆದರೂ ಖುಷಿ. ಬಲೂನು ಮಾರುವವನನ್ನು ಕಂಡ ಮಗುವಿನಂತೆ. 

ಬಲೂನು ಸಿಗುತ್ತೋ ಇಲ್ಲವೋ ಎಂಬುದು ಗೊತ್ತಿರದಿದ್ದರೂ, ಬಲೂನು ಕಂಡ ಅಮಾಯಕ ಖುಷಿಯದು. 

ಆಗಾಗ ಮೇಲ್‌ನ ದೀಪ ನೋಡುತ್ತ ಕೆಲಸ ಮಾಡುತ್ತ ಕೂಡುತ್ತೇನೆ. ಮೀಟಿಂಗ್‌ಗಳಿಗೆ ಎದ್ದು ಹೋಗುವಾಗ, ಲಾಗೌಟ್ ಆದರೂ, ವಾಪಸ್ ಬಂದಾಗ ಮತ್ತೆ ಲಾಗಿನ್ ಆಗಿ ದೀಪ ನಿಟ್ಟಿಸುತ್ತೇನೆ. 

ಎಷ್ಟೋ ಸಾರಿ ದೀಪ ಇರಲ್ಲ.

ಮನಸ್ಸು ಮುದುಡುತ್ತದೆ. 

ಇವೆಲ್ಲ ಅರ್ಥವಿಲ್ಲದ ಭಾವಾತಿರೇಕಗಳು ಅಂತ ನನ್ನನ್ನು ನಾನೇ ಬೈದುಕೊಳ್ಳುತ್ತ ಮತ್ತೆ ಕೆಲಸದಲ್ಲಿ ಮಗ್ನನಾಗುತ್ತೇನೆ. ಒಂದಿಷ್ಟು ಕೆಟ್ಟ ಅನುವಾದಗಳು ಬರುತ್ತವೆ. ಅವಕ್ಕೆ ಜೀವ ತುಂಬಿ, ಅನುವಾದಿಸಿ, ಮತ್ಯಾರದೋ ಕೆಟ್ಟ ಬರವಣಿಗೆಯನ್ನು ಒಪ್ಪವಾಗಿ ಎಡಿಟ್ ಮಾಡಿ, ಅವಕ್ಕೆ ತಕ್ಕುದಾದ ಚಿತ್ರಗಳನ್ನು ಹುಡುಕಿ, ಪುಟ ವಿನ್ಯಾಸಕರಿಗೆ ಕಳಿಸಿಕೊಟ್ಟು, ಈ ಮಧ್ಯೆ ಮತ್ತೆ ಮತ್ತೆ ದೀಪ ದಿಟ್ಟಿಸುತ್ತಾ-

ಎಷ್ಟೋ ಸಾರಿ ಅಂದುಕೊಳ್ಳುತ್ತೇನೆ: ಈ ಮೂರ್ಖತನವನ್ನು ಬಿಟ್ಟು ಗಂಭೀರವಾಗಿ ಏನನ್ನಾದರೂ ಮಾಡಬೇಕು.

ಹಾಗೆ ತಿಂಗಳುಗಟ್ಟಲೇ ಅಂದುಕೊಂಡಾಗ ಹುಟ್ಟಿದ್ದು ಈ ನಿರ್ಧಾರ.

ಇನ್ಮೇಲೆ ಮೇಲ್‌ನ ದೀಪ ದಿಟ್ಟಿಸುವುದಿಲ್ಲ. ಪದೆ ಪದೆ ಮೊಬೈಲ್‌ನ ಪರದೆಯಲ್ಲಿ ನಿನ್ನ ಸಂದೇಶ ಹುಡುಕುವುದಿಲ್ಲ. 

ಹಾಗಂದುಕೊಂಡ ಮೊದಲೆರಡು ದಿನ ವಿಪರೀತ ಖಿನ್ನತೆ. ತವಕ ಹುಟ್ಟಿಸುತ್ತಿದ್ದ ಇವೆರಡು ಸಣ್ಣ ಖುಷಿಗಳು ಒಮ್ಮೆಲೇ ಇಲ್ಲವಾದವು. ಮನಸ್ಸು ಖಾಲಿ. 

ಆ ಜಾಗವನ್ನು ತುಂಬಲು ಏನಾದರೂ ಬರೆಯಲು ಶುರು ಮಾಡಿದೆ. ಬರೆದು ಮಾಡುವುದಾದರೂ ಏನು ಅಂತ ಅವನ್ನೆಲ್ಲ ಡಿಲೀಟ್ ಮಾಡಿದೆ.

ಆಗ ಮನಸ್ಸು ಇನ್ನಷ್ಟು ಖಾಲಿಯಾಯ್ತು. ಅದರ ಜಾಗದಲ್ಲಿ ಸಿಡುಕು, ಮಂಕುತನ.

ಕಳೆದುಹೋದವನಂತೆ ಕೂಡುವುದು ರೂಢಿಯಾಯ್ತು. ಗೆಳೆಯರು ಹುಬ್ಬೇರಿಸಿ ನೋಡಿ ಕ್ರಮೇಣ ಸುಮ್ಮನಾದರು. 

ಕೆಲವೊಮ್ಮೆ ನೀನು ಫೋನ್ ಮಾಡುತ್ತೀ. ನಂಗೊತ್ತು, ಅದು ವೃತ್ತಿಪರ ವಿಷಯಕ್ಕೆ ಸಂಬಂಧಿಸಿದ್ದು ಅಂತ. 

ಮತ್ತೇನು ವಿಷಯ ಅನ್ನುತ್ತೀ. ಏನಿಲ್ಲ ಅಂತೀನಿ. ನೀನು ಅದೂ ಇದು ಮಾತಾಡುತ್ತೀ. ನನ್ನ ಗಮನ ಇರಲ್ಲ. ಮತ್ತೇನು ಸಮಾಚಾರ ಅನ್ನುತ್ತೀ. ಏನಿಲ್ಲ ಅಂತೀನಿ. ಏಕೋ ನೀವು ಮೂಡಿಯಾಗ್ತಿದ್ದೀರಾ ಅನ್ನುತ್ತೀ. ಹಾಗೇನಿಲ್ಲ ಅಂತೀನಿ. ಸ್ವಲ್ಪ ಹೊತ್ತು ನೀನು ಸುಮ್ಮನಾಗ್ತೀ. ನಾನು ಸುಮ್ಮನೇ ಇರ್ತೀನಿ. ಸರಿ ಹಾಗಾದ್ರೆ ಅಂತ ಫೋನಿಡ್ತೀ. ನನ್ನ ಮನಸ್ಸು ಪೂರ್ತಿ ಖಾಲಿ.

ಏನಿದೆಲ್ಲ? ಏಕಿದೆಲ್ಲ? ಕಬ್ಬಿಣದ ಪಟ್ಟಿಯ ಗೋಲದಲ್ಲಿ ಸರ್ಕಸ್‌ನವ ಬೈಕ್ ಓಡಿಸುತ್ತಾ ಅಲ್ಲೇ ತಿರುಗುವಂತೆ ಈ ಪ್ರಶ್ನೆಗಳು ಮತ್ತೆ ಮತ್ತೆ ರೊಂಯ್‌ಗುಟ್ಟುತ್ತ ಮನಸ್ಸಲ್ಲಿ ಸುತ್ತುತ್ತವೆ. ಗೋಲದೊಳಗಿನ ಬೈಕ್‌ನವ ಹೇಗೆ ಎಲ್ಲೂ ಹೋಗದೇ ಅಲ್ಲೇ ಸುತ್ತುತ್ತಾನೋ, ಹಾಗೆ ಈ ಪ್ರಶ್ನೆಗಳೂ ಉತ್ತರವಿಲ್ಲದೇ ಸುತ್ತುತ್ತಲೇ ಹೋಗುತ್ತವೆ. ಸುತ್ತಿ ಸುತ್ತಿ ಸುಸ್ತಾಗ್ತವೆ.

ನಿನಗೂ ಹೀಗೆಲ್ಲ ಅನಿಸುತ್ತಾ? ನೀನು ಆಗಾಗ ಮೊಬೈಲ್‌ನ ಪರದೆ ನೋಡಿ ನಿರಾಶಳಾಗ್ತೀಯಾ? ಮೇಲ್‌ನ ದೀಪ ನೋಡ್ತಿರ್ತಿಯಾ? ಕರೆಯೊಂದು ಬರುತ್ತೆ ಅಂತ ಕಾಯ್ತಿರ್ತಿಯಾ? ನಿಂಗೂ ಇದೆಲ್ಲ ಏಕೆ? ಏನು? ಎಂಬೆಲ್ಲ ಪ್ರಶ್ನೆಗಳು ಕಾಡುತ್ವಾ?

ಇಂಥ ಪ್ರಶ್ನೆಗಳು ನಿನ್ನನ್ನು ಕಾಡದಿದ್ರೇ ಒಳ್ಳೆಯದು. 

ಕಾಡಿದ್ರೆ, ನೀನು ನನ್ನ ಹಾಗೇ ಆಗಿಬಿಡ್ತೀ. ಹಾಗಾಗದಿರಲಿ.

ನೀನು ನೀನೇ ಆಗಿರು.

ನಾನು ನಾನೇ ಆಗಿರ್ತೀನಿ. 

ಗೋಲದೊಳಗೆ ತಿರುಗುತ್ತಾ ತಿರುಗುತ್ತಾ...

- ಚಾಮರಾಜ ಸವಡಿ

ಆ ರಾತ್ರಿ ಹಾಗೆ...

13 May 2012

1 ಪ್ರತಿಕ್ರಿಯೆ
ಮೌನವಾಗಬೇಕು
ಕಿವಿಗೊಡಬೇಕು, ಮಾತಾಗಬಾರದು
ಸುಮ್ಮನೇ ನೋಡಬೇಕು
ಹೀರಿಕೊಂಡು ಸುಮ್ಮನಿರಬೇಕು
ಬೆಳೆಯಬೇಕು ಒಳಗೊಳಗೇ

ಉಕ್ಕುವ ಕಡಲಿಂದ ಸದ್ದು ಬರಬಾರದು
ಹೃದಯ ನಿಟ್ಟುಸಿರಿಡಬಾರದು
ಮುರಿದು ಬೀಳುವ ಸದ್ದಿರಲಿ
ಕಣ್ಣೀರೂ ಶಬ್ದವಾಗಬಾರದು

ಮೌನಕ್ಕೆ ಮಾತುಂಟು
ಥೇಟ್ ಹೃದಯದಂತೆ
ಕೊರಳುಬ್ಬಿ ಸುಮ್ಮನಾದಾಗ
ಎದೆಯಾಳದ್ದೇ ಮಾತು

ಹಾಗಂತ ಸುಮ್ಮನೇ ಕೂತಿದ್ದೇನೆ

ಮಾತು ಮೌನವಾಗಿದೆ
ಮೌನ ಮಾತಾಡುತ್ತಿದೆ
ಕೇಳಿಸಿಕೊಳ್ಳುವ ಕಿವಿಗಳ ಜಾಗದಲ್ಲಿ
ಹೃದಯ ಬಂದು ಕೂತಿದೆ

ಮೌನವಾಗಿ ಉಕ್ಕುವ ಕಡಲು
ಸದ್ದಿಲ್ಲದೇ ಮುರಿದುಬೀಳುವ ಕನಸು
ಆ ಕಾರ್ಗತ್ತಲ ರಾತ್ರಿಯಲಿ
ಗಡಿಯಾರಕ್ಕೂ ಮುನಿಸು

ಇದಿರೋದೇ ಹೀಗೆ
ಇದಿರಬೇಕಾಗಿದ್ದೂ ಹೀಗೇ
ಮಾತಿನಂಥ ಮೌನ
ಮೌನದಂಥ ಮಾತು
ಕನಸುನನಸುಗಳ ಕಲಸುಮೇಲೋಗರದಲ್ಲಿ
ನೆನಪೇ ಮರೆವು
ಮರೆವೇ ನೆನಪು

ಅದೇ ಬದುಕು
ಮತ್ತದೇ ಮರಣ

- ಚಾಮರಾಜ ಸವಡಿ

ಅಪರಾತ್ರಿಯಲ್ಲೊಬ್ಬ ಬುದ್ಧ

2 May 2012

2 ಪ್ರತಿಕ್ರಿಯೆ
ಸಣ್ಣ ಕಂಬದಂಥ ಸಿಡಿಲು ಕಣ್ಣೆದುರು ಅಪ್ಪಳಿಸಿದಾಗ, ಕುಬ್ಜ ನಾನು ಎಂಬ ಭಾವನೆ.

ಪ್ರೆಸ್‌ ಕ್ಲಬ್‌ನಿಂದ ಹೊರಟಾಗಲೇ ಹನ್ನೊಂದು ಗಂಟೆ. ಮಳೆ ಬರಬಹುದು ಎಂದು ಡಿಕ್ಕಿಯಲ್ಲಿಟ್ಟಿದ್ದ ಜರ್ಕಿನ್‌ ಧರಿಸಿ, ಲೋಡ್‌ ಆಗಿದ್ದ ಮಿತ್ರನನ್ನು ಹಿಂದೆ ಕೂರಿಸಿಕೊಂಡು, ಎಂದೂ ಹೋಗದಷ್ಟು ಕಡಿಮೆ ವೇಗದಲ್ಲಿ ಗಾಡಿ ಓಡಿಸುತ್ತ ಹೊರಟೆ. ಶಿವಾನಂದ ಸರ್ಕಲ್‌ ಹತ್ತಿರ ಸಿಗ್ನಲ್‌ ಕೆಂಪಡರಿದಾಗ ಗಾಡಿ ನಿಲ್ಲಿಸಿ ನೋಡುತ್ತಿರುವಾಗ ಹೊಡೆಯಿತು ಬರಸಿಡಿಲು.

ಕಣ್ಣೆದುರೇ ದೊಡ್ಡ ಕಂಬದಂಥ ಸಿಡಿಲು.

ಕಣ್ಣು ಕೋರೈಸಿದಂತಾಯ್ತು. ತುಂಬ ದಿನ ಆಗಿತ್ತು ಅಂಥ ಸಿಡಿಲನ್ನು ಹತ್ತಿರದಿಂದ ನೋಡಿ. ಬಾಲ್ಯದಲ್ಲಿ ಸಾಕಷ್ಟು ಬಾರಿ ಕಂಡಿದ್ದೇನೆ. ಅಲೆದಾಟದ ದಿನಗಳಲ್ಲೂ ಅವು ಆಗಾಗ ದರ್ಶನ ಕೊಟ್ಟಿದ್ದುಂಟು. ಆದರೆ, ಹತ್ತಾರು ವರ್ಷಗಳ ನಂತರ ಇದೇ ಮೊದಲ ಬಾರಿ ಕಂಡು ಅರೆಕ್ಷಣ ಮೂಕನಾಗಿದ್ದೆ.

ಆ ಕ್ಷಣಕ್ಕೆ, ಬದುಕು ನಶ್ವರ ಅನಿಸಿದ್ದು ಸುಳ್ಳಲ್ಲ.

ಸಿಗ್ನಲ್‌ ಹಸಿರಾದಾಗ ಗಾಡಿಗೆ ಓಡುವ ಆತುರವಿರಲಿಲ್ಲ. ಮಲ್ಲೇಶ್ವರಂ ತಲುಪಿ, ಮಿತ್ರನನ್ನು ಮನೆಯೊಳಗೆ ಕಳಿಸಿ, ಹುಷಾರಾಗಿ ಬಾಗಿಲು ಹಾಕಿಕೊಳ್ಳಲು ಹೇಳಿ ಮನೆಯತ್ತ ಹೊರಟೆ. ರೈಲ್ವೇ ಸೇತುವೆ ದಾಟಿ, ಮೆಟ್ರೊ ಕೆಲಸ ನಡೆಯುವ ಜಾಗದ ಹತ್ತಿರ ಗಾಡಿ ನಿಧಾನವಾಗಿಸಿದಾಗ ಮತ್ತೊಂದು ಸಿಡಿಲು ಹೊಡೀತು.

ಮತ್ತದೇ ಕೋರೈಸುವ ಕಂಬ.

ಗಾಡಿ ಪೂರ್ತಿ ನಿಧಾನವಾಯ್ತು. ರಸ್ತೆಗೆ ರಸ್ತೆಯೇ ಬಹುತೇಕ ನಿರ್ಜನ. ಮಧ್ಯರಾತ್ರಿ ಸಮೀಪಿಸುವ ಈ ಹೊತ್ತು ಕಾಣುತ್ತಿದ್ದ ಟ್ರಾಫಿಕ್‌ನ ಶೇ.೧೦ರಷ್ಟೂ ಕಾಣಲಿಲ್ಲ.

ಮನಸು ಯೋಚಿಸುತ್ತಿತ್ತು: ಕಂಡ, ಕಾಣದ, ಈಡೇರಿದ, ಈಡೇರದ ಎಲ್ಲವೂ ಛಕಛಕ ಕಣ್ಣೆದುರು ಹಾಯ್ದುಹೋದವು.

ಒಡಲಾಳದೊಳಗಿಂದ ಹಸಿವೆಯ ಜೊತೆಗೆ ಸಣ್ಣಗೇ ಖಿನ್ನತೆ.

ಮಳೆ ಕೊಂಚ ಜೋರಾಯಿತು. ಹೆಲ್ಮೆಟ್‌ನ ಗಾಜಿನ ತುಂಬ ಮಳೆಮಣಿಗಳು. ಗಾಜು ಹಿಂದಕ್ಕೆ ಸರಿಸಿ, ಅಪ್ಪಳಿಸುತ್ತಿದ್ದ ಹನಿಗಳಿಗೆ ಮುಖವೊಡ್ಡಿದಾಗ, ಎಂಥದೋ ಹಿತಕರ ಭಾವನೆ.

ಅದು ನನ್ನ ಬಾಲ್ಯ.

ಬೀಳುವ ಮಳೆಗೆ ಆಕಾಶಕ್ಕೆ ಮುಖವೊಡ್ಡಿ ಗಿರಗಿಟ್ಲೆ ತಿರುಗುತ್ತಿದ್ದ ಚಿಂತೆಯರಿಯದ ಬಾಲ್ಯದ ನೆನಪು.

ನವರಂಗ್‌ ದಾಟಿ, ವೆಸ್ಟ್‌ ಆಫ್‌ ಕಾರ್ಡ್‌ ರಸ್ತೆಯತ್ತ ತಿರುಗಿದಾಗ ರಸ್ತೆಗೆ ರಸ್ತೆಯೇ ನಿರ್ಜನ. ಖಾಲಿ ರಸ್ತೆಯಲ್ಲಿ ಸಣ್ಣ ಮಳೆ ಹನಿಗಳ ಸ್ವಚ್ಛಂದ ಆಟ.

ಒಳಗೂ ಹೊರಗೂ ಒಬ್ಬನೇ ಇರುವ ಇಂಥ ಘಳಿಗೆಗಳೇ ಈ ಅಸಹನೀಯ ರಾತ್ರಿಯನ್ನು ಆಹ್ಲಾದಕರವಾಗಿಸೋದು.

ಅಷ್ಟೊತ್ತಿಗೆ ಖಿನ್ನತೆ ನಿಧಾನವಾಗಿ ಏರುತ್ತಿತ್ತು. ಜೀವನ ನಶ್ವರ ಎಂಬ ಭಾವ ಬಲವಾಗತೊಡಗಿದಂತೆ ವಿಜಯನಗರದ ಖಾಲಿ ರಸ್ತೆಯಲ್ಲಿದ್ದೆ. ಅಲ್ಲಿಂದ ಹತ್ತು ನಿಮಿಷಕ್ಕೆ ಮನೆ ತಲುಪಿ, ಹುಷಾರಾಗಿ ಬಾಗಿಲು ತೆರೆದು, ಕತ್ತಲೆಯಲ್ಲಿ ಸದ್ದಾಗದಂತೆ ಒಂದಿಷ್ಟು ತಿಂದು, ಒಡಲ ಹಸಿವು ತೀರಿಸಿಕೊಂಡೆ.

ಮನದ ಖಾಲಿತನ ವಿಜೃಂಭಿಸತೊಡಗಿತ್ತು.

ರೂಮು ಹೊಕ್ಕು ಕಂಪ್ಯೂಟರ್‌ ಆನ್‌ ಮಾಡುವ ಹೊತ್ತಿಗೆ ಹೊರಗೆ ಮಳೆ ಬಲಿಯುತ್ತಿತ್ತು. ಗುಡುಗು-ಸಿಡಿಲುಗಳ ಅಬ್ಬರವೂ.

ಮನಸ್ಸು ಖಾಲಿ ಖಾಲಿ.

ಅರ್ನೆಸ್ಟ್‌ ಹೆಮಿಂಗ್ವೆನ ಓಲ್ಡ್‌ ಮ್ಯಾನ್‌ ಅಂಡ್‌ ದಿ ಸೀ (Old Man And The Sea) ಕಾದಂಬರಿಯ ಮುದುಕ ಮೀನುಗಾರನ ಭಾವನೆಗಳು ನೆನಪಾಗುತ್ತವೆ. ಬಲೆಗೆ ಬಿದ್ದ ದೊಡ್ಡ ಮೀನಿನೊಂದಿಗೆ, ಅದನ್ನು ನಿಯಂತ್ರಿಸಲು ಹೆಣಗಾಡುತ್ತ, ಸ್ವಗತದಂತೆ ಮೀನಿನೊಂದಿಗೆ ಮಾತಿಗಿಳಿಯುವ ಆ ಭಾವನೆಗಳು ನನ್ನನ್ನು ಸದಾ ಕಾಡುವ ನೆನಪುಗಳು. ಮನಸ್ಸು ಖಿನ್ನವಾದಾಗೆಲ್ಲ, how are you fish? ಎಂದು ಪ್ರಶ್ನಿಸಿಕೊಳ್ಳುತ್ತೇನೆ. ಮನಸ್ಸು ಕೂಡ ಆ ಮುದುಕನ ಬಲೆಗೆ ಬಿದ್ದ ಮೀನಿನಂತೆ. ವಾಪಸ್‌ ಉತ್ತರಿಸಲ್ಲ.

ನನ್ನ ಮನಸ್ಸೂ ಎಲ್ಲೋ ಕಳೆದುಹೋಗಿದೆ.

*****

ಸುಮ್ಮನೇ ಕವಿತೆ ಗೀಚುತ್ತೇನೆ. ಪದಗಳನ್ನು ಬದಲಿಸುತ್ತೇನೆ. ಪ್ಯಾರಾ ಹಿಂದೆಮುಂದೆ ಮಾಡುತ್ತೇನೆ.

ಊಹೂಂ, ಭಾವನೆಗಳು ಸಾಲುಗಳಾಗುವುದಿಲ್ಲ. ನೋವು ಶಬ್ದಗಳಾಗುವುದಿಲ್ಲ.

ಅರ್ಧ ಓದಿಟ್ಟ ಪುಸ್ತಕ ಎತ್ತಿಕೊಳ್ಳುತ್ತೇನೆ. ಮನಸ್ಸು ನಿಲ್ಲುವುದಿಲ್ಲ.

ಲೈಟಾರಿಸಿಕೊಂಡು, ಮಾನಿಟರ್‌ ಆಫ್‌ ಮಾಡಿ, ಗಂವೆನ್ನುವ ಕತ್ತಲೆಯಲ್ಲಿ ಫ್ಯಾನ್‌ ಶಬ್ದ ಕೇಳುತ್ತ ಸುಮ್ಮನೇ ಕೂಡುತ್ತೇನೆ.

ಊಹೂಂ, ಮನಸ್ಸು ಸುಮ್ಮನಾಗುವುದಿಲ್ಲ.

ವಿನಂತಿಸುತ್ತೇನೆ, ಆರ್ತನಾಗಿ ಬೇಡಿಕೊಳ್ಳುತ್ತೇನೆ. ಸಿಟ್ಟು ಮಾಡಿಕೊಳ್ಳುತ್ತೇನೆ.

ರಚ್ಚೆ ಹಿಡಿದ ಮಗುವಿನಂಥದು ಅದು.

ಕಾಡುವ ಆ ದಿವ್ಯ ಭಾವವನ್ನೇ ಧೇನಿಸುತ್ತ ಕೂತಾಗ ಮಾತ್ರ ಕೊಂಚ ಶಾಂತವಾಗುತ್ತದೆ.

ನಿದ್ದೆ ದೂರವಾದರೂ ಪರವಾಗಿಲ್ಲ, ನೆಮ್ಮದಿ ಹತ್ತಿರವಿರಲಿ ಎಂದು ಸುಮ್ಮನಾಗುತ್ತೇನೆ.

ಮಳೆ ಯಾವಾಗ ನಿಂತಿತ್ತೋ. ದೂರದಲ್ಲಿ ಗೂರ್ಖಾ ಸೀಟಿ ಊದುವ, ಕೋಲನ್ನು ಫುಟ್‌ಪಾತ್‌ನ ಕಲ್ಲಿಗೆ ಕುಟ್ಟುವ ಸದ್ದು.

ಅರೆ, ಈ ಗೂರ್ಖಾನ ಹೆಂಡತಿಯ ಭಾವನೆಗಳೇನಿರಬಹುದು ಎಂದು ಯೋಚಿಸತೊಡಗುತ್ತದೆ ಮನಸ್ಸು.

ಇದ್ದಕ್ಕಿದ್ದಂತೆ ಕಸಿವಿಸಿ. ಯಾರದೋ ತಟ್ಟೆಯ ಅನ್ನ ಕಸಿದ ಭಾವ.

ನಮ್ಮ ನೆಮ್ಮದಿಗಳ ಹಿಂದೆ ಯಾರದೋ ನಿದ್ದೆಗೆಟ್ಟ ರಾತ್ರಿ ಇರುತ್ತದೆ, ಶ್ರಮವಿರುತ್ತದೆ. ಇಲ್ಲಿ ಕತ್ತಲೆಯಲ್ಲಿ ಹಾಯಾಗಿ ಕೂತವನ ನೆಮ್ಮದಿಗೆ ಆ ಗೂರ್ಖಾನ ನಿದ್ದೆಗೇಡಿ ರಾತ್ರಿಯ ದುಡಿಮೆ ಕಾರಣ ಎಂಬ ಭಾವ ಹುಟ್ಟಿ ಮನಸ್ಸು ದ್ರವಿಸಿದಂತಾಯ್ತು. ಕಾಣದ ಗೂರ್ಖಾನ ಕುಟುಂಬದ ಚಿತ್ರಣ ಮನಸ್ಸನ್ನು ಆರ್ದ್ರ ಮಾಡಿಬಿಟ್ಟಿತು.

ಸದ್ದಿಲ್ಲದೇ ಕಂಪ್ಯೂಟರ್‌ ಆಫ್‌ ಮಾಡಿ, ರೂಮಿನ ಕದವಿಕ್ಕಿ, ಮಲಗಿದ್ದ ಮನೆಯ ಜೀವಿಗಳನ್ನು ಅಕ್ಕರೆಯಿಂದ ದಿಟ್ಟಿಸಿದೆ.

ನಾನೂ ಒಂಥರಾ ಗೂರ್ಖಾನೇ. ಮತ್ತಿದು ನನ್ನ ಕುಟುಂಬ ಎಂಬ ಭಾವ ಉಕ್ಕಿತು.

ಮನಸ್ಸನ್ನು ಕುಟ್ಟುತ್ತಿದ್ದ ಮೆದು ಭಾವವನ್ನೇ ಧೇನಿಸುತ್ತ ಹಾಸಿಗೆ ಮೇಲೆ ಉರುಳಿಕೊಂಡೆ. ಇವತ್ತು ನಿದ್ದೆ ಬರಬಹುದು.

ಬರದೇ ಇರಲೂಬಹುದು!

- ಚಾಮರಾಜ ಸವಡಿ

ಒಳಗಡಲು ಉಕ್ಕಿದಾಗೆಲ್ಲ ಆ ದಿವ್ಯ ನೆನಪು

29 Apr 2012

2 ಪ್ರತಿಕ್ರಿಯೆ
ಇನ್ನು ಆಡಲು ಮಾತುಗಳಿಲ್ಲ ಅಂತಾದಾಗ, ಅಷ್ಟು ದೂರ ನಂಜೊತೆ ಬರ್ತೀಯಾ? ಅಂತ ಕೇಳಿದೆ.

ಧ್ವನಿಯಲ್ಲಿ ದೈನ್ಯತೆಯಿತ್ತು. ಇನ್ನಿದು ಮುಗಿಯಿತು ಎಂದಾಗ, ಇನ್ನೆಂದೂ ಇದು ಕೊನರುವುದಿಲ್ಲ ಎಂಬುದು ಗಟ್ಟಿಯಾದಾಗ, ಉಳಿಯುವ ಕೊನೆಯ ಭಾವವದು.

ಆಕೆಗೆ ಏನನ್ನಿಸಿತೋ, ಸುಮ್ಮನೇ ಎದ್ದಳು.

ನಾವು ಮೌನವಾಗಿ ಹೊರಟೆವು. ನಂಗೆ ಗೊತ್ತಿತ್ತು, ಇದು ನಾವು ಜೊತೆಯಾಗಿ ಇಡುತ್ತಿರುವ ಕೊನೆಯ ಹೆಜ್ಜೆ ಎಂದು.

ಆಕೆ ತಲೆ ತಗ್ಗಿಸಿಕೊಂಡು, ಕೈಗಳನ್ನು ಕಟ್ಟಿಕೊಂಡು, ಮೌನವಾಗಿ ಹೆಜ್ಜೆ ಹಾಕುತ್ತಿದ್ದಳು.

ಅಷ್ಟು ದೂರದಲ್ಲಿ ರಸ್ತೆ ಹೊರಳಿಕೊಂಡಿತ್ತು. ಜೋರು ಹೆಜ್ಜೆಯಿಟ್ಟರೆ ಎರಡು ನಿಮಿಷದ ದಾರಿ.

ಅಲ್ಲಿಗೆ ತಲುಪಿದರೆ, ಹಿಂದಿರುಗಬೇಕಾಗುತ್ತೆ.

ಆಗ, ಆಕೆ ಹೋಗಿಬಿಡುತ್ತಾಳೆ, ಒಂದೂ ಮಾತಾಡದೇ.

ನಾನೂ ಮೌನವಾಗಿ ಹೆಜ್ಜೆ ಹಾಕುತ್ತಿದ್ದೆ. ಸಾಗರವೊಂದು ಎದೆಯೊಳಗೆ ಭೋರ್ಗರೆದು ಅಪ್ಪಳಿಸುವ ಶಬ್ದ ಇಷ್ಟು ಹತ್ತಿರದಲ್ಲಿದ್ದೂ ದೂರವಿರುವ ಆಕೆಗೆ ಕೇಳಿಸಿತಾದರೂ ಹೇಗೆ?

ನಾನು ಹೆಜ್ಜೆಗಳನ್ನು ಎಣಿಸುತ್ತಿದ್ದೆನಾ? ಇನ್ನೇನು ಆ ತಿರುವು ಬಂದೇಬಿಟ್ಟಿತು ಎಂದು ಅಳುಕುತ್ತಿದ್ದೆನಾ?

ಒಂದೂ ತಿಳಿಯಲಿಲ್ಲ. ಸಾವಿನೆಡೆಗೆ ಹೊರಟವನಂತೆ, ಬದುಕಿನ ಕೊನೆಯ ಹೆಜ್ಜೆಗಳಿವು ಎಂಬಂತೆ ನಡೆಯುತ್ತಿದ್ದೆ.

ಮಾತಾಡಬಾರದೆಂಬಂತೆ ಆಕೆ ಗಂಭೀರಳಾಗಿದ್ದಳು. ಏನು ಮಾತಾಡುವುದಿನ್ನು ಎಂದು ನಾನು ಮೌನವಾಗಿದ್ದೆ.

ಒಳಗೆ ಮೇರೆಯುಕ್ಕುವ ಅಳಲ ಕಡಲು.

ತಿರುವು ಹತ್ತಿರವಾಗುತ್ತಿತ್ತು.

ಏಕೋ ನನ್ನ ಹೆಜ್ಜೆಗಳು ಸೋಲುತ್ತಿದ್ದವು. ಇನ್ನು ಕೆಲ ಹೆಜ್ಜೆಗಳನ್ನಿಟ್ಟರೆ, ತಿರುವು ಬಂದುಬಿಡುತ್ತಿತ್ತು.

ಥಟ್ಟನೇ ನಿಂತೆ. ಆಕೆಯೂ ನಿಂತಳು. ಅವಳ ಮುಖದಲ್ಲಿ ಪ್ರಶ್ನೆ.

‘ಥ್ಯಾಂಕ್ಸ್‌ ಜೊತೆಗೆ ಬಂದಿದ್ದಕ್ಕೆ’ ಎಂದೆ.

ಆಕೆಯ ಮುಖದಲ್ಲಿ ಅದೇ ಪ್ರಶ್ನೆ.

’ಆ ತಿರುವು ಮುಟ್ಟಲು ಕೆಲ ಹೆಜ್ಜೆಗಳೇ ಸಾಕು. ಅವನ್ನೂ ಕ್ರಮಿಸಿಬಿಟ್ಟರೆ ಜೀವನದುದ್ದಕ್ಕೂ ನನಗೆ ಮತ್ತೆ ನಿನ್ನ ಜೊತೆ ಸಿಗಲ್ಲ. ಈ ಸವಿ ನೆನಪಲ್ಲಿ, ನಾನು ಹೀಗೇ, ಆ ತಿರುವನ್ನೇ ಧೇನಿಸುತ್ತ ಇದ್ದುಬಿಡುತ್ತೇನೆ. ಇನ್ನು ಕೆಲ ಹೆಜ್ಜೆಗಳನ್ನಿಟ್ಟಿದ್ದರೆ... ಎಂಬ ದಿವ್ಯ ಊಹೆಯಲ್ಲಿ ಬದುಕನ್ನು ಸಾಗಿಸುತ್ತೇನೆ. ಕೊನೆಯಾಗುವ ಈ ಹಂತದಲ್ಲಿ, ಈ ಸವಿ ನೆನಪಾದರೂ ಜೊತೆಗಿರಲಿ ಬಿಡು...’

ಎಷ್ಟೋ ಹೊತ್ತು ಆಕೆ ಸುಮ್ಮನೇ ನಿಂತಿದ್ದಳು. ನಂತರ ನಿಧಾನವಾಗಿ, ಬಲು ನಿಧಾನವಾಗಿ, ಕಾಲೆಳೆಯುತ್ತ, ಬಂದ ದಾರಿಯತ್ತ ತಿರುಗಿ ಹೊರಟಳು.

ನಾನು ಮಾತ್ರ ಅಲ್ಲಿಯೇ ನಿಂತಿದ್ದೆ, ಅದೇ ಕೊನೆಯ ಗಮ್ಯ ಎಂಬಂತೆ.

*****

ಒಡಲೊಳಗಿನ ಅಳಲ ಕಡಲು ಭೋರ್ಗರೆದಾಗೆಲ್ಲ, ಮತ್ತೆ ಆ ತಿರುವಿನತ್ತ ಹೋಗುತ್ತೇನೆ.

ಜೊತೆಯಾಗಿ ನಡೆದ ನೆನಪು ಅಲ್ಲೆಲ್ಲ.

ಕೆಲ ಹೊತ್ತು ಅಲ್ಲಿ ಕೂಡುತ್ತೇನೆ, ಒಬ್ಬನೇ, ಸುಮ್ಮನೇ. ಅದು ದಿವ್ಯ ಮೌನಾನುಸಂಧಾನ.

ಒಳಗಡಲು ಶಾಂತವಾದಾಗ ಮೌನವಾಗಿ ಎದ್ದು ಬರುತ್ತೇನೆ.

ಅವಳಿಲ್ಲದ ಬದುಕೀಗ, ಅವಳ ನೆನಪಿನಲ್ಲಿ ಸಾಗುತ್ತಿದೆ ಹೀಗೇ.

*****

ಥ್ಯಾಂಕ್ಸ್‌ ಕಣೇ, ನೆಮ್ಮದಿಯ ಗಮ್ಯವೊಂದನ್ನು ಕೊಟ್ಟುಹೋಗಿದ್ದಕ್ಕೆ!

- ಚಾಮರಾಜ ಸವಡಿ

ಗುರುವಾದ ಮಗಳಿಗೆ ಈಗ ಹತ್ತು ವರ್ಷ

20 Apr 2012

14 ಪ್ರತಿಕ್ರಿಯೆ
ಮನೆ ಎದುರಿನ ರಸ್ತೆಯಲ್ಲಿ ಮಕ್ಕಳ ಗುಂಪು, ಗದ್ದಲ. ಈಗ ತಾನೇ ನಡೆಯಲು ಕಲಿತ ಮಗುವಿನಿಂದ ಹಿಡಿದು ಹೈಸ್ಕೂಲು ಮೆಟ್ಟಿಲು ಹತ್ತಲಿರುವ ವಯಸ್ಸಿನವರೆಗಿನ ಮಕ್ಕಳು ಅಲ್ಲಿದ್ದಾರೆ. ಅವರು ಆಡಿದ್ದೇ ಆಟ. ಹಾಕಿದ್ದೇ ನಿಯಮ. ಪರೀಕ್ಷೆ ಮುಗಿದ ಸಂತಸದಲ್ಲಿ ಕೂಗಾಡುತ್ತ ಆಡುತ್ತಿದ್ದಾರೆ.
 

ಅವರ ಗುಂಪಿನಿಂದ ದೂರ, ಮನೆ ಎದುರಿಗೆ ಹಾಸಿದ ಪುಟ್ಟ ಕಟ್ಟೆಯಂತಿರುವ ಜಾಗದಲ್ಲಿ ಆಯಾ ಮನೆಗಳ ತಾಯಂದಿರು, ಅಜ್ಜಿಯರು ಕೂತಿದ್ದಾರೆ. ಅವರ ಮಧ್ಯೆ ಮಗುವೊಂದು ಕೂತಿದೆ. ಅದಕ್ಕೆ ಆಡುವ ಮಕ್ಕಳ ಕೇಕೆಯ ಕಡೆ ಗಮನವಿಲ್ಲ. ಅದರ ಲೋಕವೇ ಬೇರೆ.
 

ಆಕೆ ಗೌರಿ.
 

ಹತ್ತು ವರ್ಷಗಳ ಹಿಂದೆ, ಇದೇ ದಿನ (ಏಪ್ರಿಲ್ ೧೯) ಗೌರಿ ಜನಿಸಿದಾಗ ನಾನು ಕೊಪ್ಪಳದಲ್ಲಿದ್ದೆ. ಬದುಕು ಕಟ್ಟಿಕೊಳ್ಳುವ ಹೆಣಗಾಟದ ದಿನಗಳವು. ಅನಿವಾರ್ಯವಾಗಿ ಶುರು ಮಾಡಿದ್ದ ವಾರಪತ್ರಿಕೆಯೊಂದಕ್ಕೆ ಬರೆಯುತ್ತ ಕೂತವನನ್ನು ಫೋನ್ ಮಾಡಿ ಕರೆಸಿದ್ದರು ಮಾವ. ನೀವು ಬಿಜಿ ಇರ್ತೀರಂತ ಹೇಳಿರಲಿಲ್ಲ. ರೇಖಾಳನ್ನು ನಿನ್ನೆ ರಾತ್ರಿಯೇ ಆಸ್ಪತ್ರೆಗೆ ಸೇರಿಸಿದ್ವಿ. ಬೇಗ ಬನ್ನಿ ಎಂದಿದ್ದರು.
 

ರಾತ್ರಿಯಿಡೀ ನಿದ್ದೆಗೆಟ್ಟವನು ಹಾಗೇ ಪೆನ್ನು ಮುಚ್ಚಿಟ್ಟು ಅವಸರದಲ್ಲಿ ಆಸ್ಪತ್ರೆಗೆ ಬಂದಿದ್ದೆ. ನನ್ನನ್ನೇ ಕಾಯುತ್ತಿದ್ದ ಡಾಕ್ಟರ್, ಸಿಸೇರಿಯನ್ ಆಗ್ಬೇಕು, ನೀವಿಲ್ಲಿ ಸೈನ್ ಮಾಡಿ ಎಂದು ಮುಂದೆ ಹಿಡಿದ ಹಾಳೆಯಲ್ಲಿ ಸಹಿ ಮಾಡಿ ಅರ್ಧ ಗಂಟೆ ಸುಮ್ಮನೇ ಕೂತಿದ್ದೆ. ವರ್ಷದ ಹಿಂದೆ ಡಿಗ್ರಿ ಕೊನೆಯ ವರ್ಷದ ಪರೀಕ್ಷೆ ಬರೆದು, ರಜೆಯಲ್ಲಿ ಮದುವೆಯಾಗಿದ್ದ ರೇಖಾ ಒಳಗೆ ಲೇಬರ್ ರೂಮಿನಲ್ಲಿ ತಾಯಾಗಲಿದ್ದಳು.
 

ಏನಿದ್ದವು ನನ್ನ ಭಾವನೆಗಳಾಗ?
 

ಇದ್ದ ಇಬ್ಬರೇ ಬಲು ಸಾಧಾರಣ ಜೀವನ ಸಾಗಿಸಲೂ ಕಷ್ಟಪಡಬೇಕಿತ್ತು. ಈಗ ನಮ್ಮ ಮಧ್ಯೆ ಇನ್ನೊಂದು ಜೀವ ಬರಲಿದೆ. ಅದಕ್ಕಾಗಿ ಹರ್ಷ ಪಡಬೇಕೋ, ಚಿಂತೆ ಮಾಡಬೇಕೋ ಎಂಬ ಗೊಂದಲ.
 

ಸುಮ್ಮನೇ ಕೂತವನೆದುರು ಬಂದು ನರ್ಸ್ ಹೇಳಿದ್ದಳು: ಹೆಣ್ಣುಮಗು!
 

ಗೌರಿ ಹುಟ್ಟಿದ್ದು ಹಾಗೆ.
 

*****
 

ಬಲು ಕೆಂಪಗಿತ್ತು ಮಗು. ಆಕೆಯನ್ನು ಮೊದಲ ಬಾರಿ ನೋಡಿದಾಗಿನ ಕ್ಷಣಗಳು ಇವತ್ತಿಗೂ ನೆನಪಿನಲ್ಲಿ ಹಚ್ಚಹಸಿರು. ಹೆರಿಗೆ ನೋವು, ಸಿಸೇರಿಯನ್ ರಗಳೆಯಲ್ಲಿ ಬಾಡಿದಂತಿದ್ದ ರೇಖಾಳ ಮೊಗದಲ್ಲಿ ಬೆಳದಿಂಗಳು. ಪಕ್ಕದಲ್ಲೇ ಮಲಗಿತ್ತು ಪುಟ್ಟ ಗೌರಿ- ಕೆಂಪಗೆ, ದಪ್ಪಗೆ, ಮುಷ್ಠಿ ಬಿಗಿದುಕೊಂಡು.
 

ಆ ಕ್ಷಣದಲ್ಲಿ, ಈಕೆ ಮುಂದೆ ನನಗೆ ಗುರುವಾಗುತ್ತಾಳೆಂದು ಖಂಡಿತ ಅಂದುಕೊಂಡಿರಲಿಲ್ಲ.
 

*****
 

ಮೂರು ತಿಂಗಳಾದರೂ ಗೌರಿಯ ಕತ್ತು ಸ್ಥಿರವಾಗಲಿಲ್ಲ. ದೃಷ್ಟಿ ಎತ್ತಲೋ. ಮಗು ಗೆಲುವಾಗಿತ್ತು. ಊಟ, ನಿದ್ದೆ, ತನ್ನ ಪಾಡಿಗೆ ತಾನು ಆಟವಾಡುವುದು ಎಲ್ಲಾ ಇದ್ದರೂ, ಸುತ್ತಲಿನ ಜಗತ್ತಿನೊಂದಿಗೆ ಸಂಬಂಧ ಇಲ್ಲದಂತಿತ್ತು. ತೊಟ್ಟಿಲ ಮೇಲೆ ಬಾಗಿ, ಲಟಿಕೆ ಹೊಡೆದು, ಗಿಲಿಗಿಲಿ ಆಡಿಸಿದರೂ ನಮ್ಮತ್ತ ದೃಷ್ಟಿ ಕೊಟ್ಟು ನೋಡುತ್ತಿರಲಿಲ್ಲ. ಶಬ್ದಕ್ಕೆ ಮುಖವರಳಿಸುತ್ತಿದ್ದುದನ್ನು ಬಿಟ್ಟರೆ, ಬಾಹ್ಯ ಜಗತ್ತಿಗೆ ಪ್ರತಿಕ್ರಿಯಿಸುತ್ತಿರಲಿಲ್ಲ.
 

‘ಕೆಲ ಮಕ್ಕಳು ಹಾಗೇ. ಅದರಲ್ಲೂ ಮೊದಲ ಮಗು ಕೊಂಚ ನಿಧಾನ’ ಅಂದರು ಹಿರಿಯರು.
 

ಆರು ತಿಂಗಳುಗಳಾದವು. ಕತ್ತು ಕೊಂಚ ಸ್ಥಿರವಾಗಿದ್ದರೂ, ಉಳಿದೆಲ್ಲ ವಿಷಯಗಳಲ್ಲಿ ಅದಿನ್ನೂ ಹಸುಗೂಸೇ.
 

‘ಕೆಲ ಮಕ್ಕಳು ಹಾಗೇ. ನಿಧಾನವಾಗಿ ಪ್ರತಿಕ್ರಿಯಿಸುತ್ತವೆ’ ಅಂದರು ಕೊಪ್ಪಳದ ಮಕ್ಕಳ ಡಾಕ್ಟರು.
 

ಎಂಟು ತಿಂಗಳಾದರೂ ಗೌರಿ ಅದೇ ಸ್ಥಿತಿಯಲ್ಲಿ ಉಳಿದಾಗ ಪಕ್ಕದ ಹೊಸಪೇಟೆಗೆ ಹೋಗಿ ಬೇರೊಬ್ಬ ಮಕ್ಕಳ ತಜ್ಞರಿಗೆ ತೋರಿಸಿದೆವು. ಕೆಲ ಪರೀಕ್ಷೆಗಳನ್ನು ಮಾಡಿ, ಗೌರಿಯ ತಲೆಯ ಗಾತ್ರವನ್ನು ಟೇಪ್‌ನಲ್ಲಿ ಅಳೆದ ಆ ವೈದ್ಯರು ಹೇಳಿದರು:
 

ಈಕೆಯ ಮೆದುಳಿನ ಬೆಳವಣಿಗೆ ಸಹಜವಾಗಿಲ್ಲ. ಬುದ್ಧಿಮಾಂದ್ಯತೆಯ ಲಕ್ಷಣಗಳು ಕಾಣಿಸ್ತಿವೆ. ನೀವೊಮ್ಮೆ ಸ್ಕ್ಯಾನ್ ಮಾಡಿಸೋದು ಉತ್ತಮ. ಹುಬ್ಬಳ್ಳಿ ಅಥವಾ ಬೆಂಗಳೂರಿಗೆ ಹೋಗಿ ಎಂದರು.
 

ಮಗುವನ್ನು ಕರೆದುಕೊಂಡು ಹತ್ತಿರದ ಒಣಗಿದ ಪಾರ್ಕ್‌ನಲ್ಲಿ ಮೌನವಾಗಿ ಕೂತೆವು. ರೇಖಾ ನಿರಂತರವಾಗಿ ಅಳುತ್ತಿದ್ದರೆ, ನಾನು ಒಳಗೊಳಗೇ ಅಳುತ್ತ ಮಂಕಾಗಿ ಕೂತಿದ್ದೆ. ಗೌರಿಯೊಬ್ಬಳೇ ತನ್ನ ಪಾಡಿಗೆ ತಾನು ನಗುತ್ತಿದ್ದಿದ್ದು.
 

*****
 

ಧಾರವಾಡದ ಮಕ್ಕಳ ವೈದ್ಯರು ಆಕೆಯ ಮೆದುಳಿನ ಬೆಳವಣಿಗೆ ಅಸಮರ್ಪಕವಾಗಿದ್ದನ್ನು ಸ್ಕ್ಯಾನಿಂಗ್ ಮಾಡಿ ತೋರಿಸಿದರು. ಅಲ್ಲಿಗೆ ಚಿತ್ರಣ ಸ್ಪಷ್ಟವಾಗಿತ್ತು.
 

ನಡೆಸುತ್ತಿದ್ದ ಪತ್ರಿಕೆ ಮುಚ್ಚಿ ರೇಖಾ ಮತ್ತು ಗೌರಿಯನ್ನು ಕರೆದುಕೊಂಡು ಬೆಂಗಳೂರಿಗೆ ಬಂದೆ. ಓ ಮನಸೇ ಪತ್ರಿಕೆಯಲ್ಲಿ ಕೆಲಸ ಮಾಡುತ್ತ ನಿಮ್ಹಾನ್ಸ್‌ನಲ್ಲಿ ಗೌರಿಯನ್ನು ತೋರಿಸಿದೆವು. ಅವರ ಚಿತ್ರಣ ಇನ್ನೂ ನಿಖರವಾಗಿತ್ತು. ಗೌರಿಯ ಮೆದುಳಿನ ಶೇ.೪೦ರಿಂದ ೪೫ ಭಾಗದಲ್ಲಿ ಚಟುವಟಿಕೆಯೇ ಇರಲಿಲ್ಲ.
 

‘ಸಾಮಾನ್ಯ ಮಗುವಿನೊಂದಿಗೆ ಮಾತಾಡುವಂತೆ ಆಕೆಯ ಜೊತೆ ಮಾತಾಡಿ. ಆಟ ಆಡಿಸಿ. ಫಿಸಿಯೋಥೆರಪಿ ಮಾಡಿಸಿ. ಆಕೆ ಸಾಮಾನ್ಯ ಸ್ಥಿತಿಗೆ ಬರುತ್ತಾಳೆಂದು ಹೇಳಲಾರೆವು. ಆದರೆ, ಆ ಸ್ಥಿತಿಗೆ ಹತ್ತಿರವಾಗಿಸಲು ಪ್ರಯತ್ನಿಸಿ. ಒಳ್ಳೆಯದಾಗಲಿ’ ಎಂದರು ನಿಮ್ಹಾನ್ಸ್‌ನ ಕರುಣಾಮಯಿ ವೈದ್ಯರು.
 

ಅವತ್ತು ಮತ್ತೆ ಅತ್ತಿದ್ದೆವು ಇಬ್ಬರೂ.
 

*****
 

ಈಕೆ ದೇವರಿಗೆ ಹರಕೆ ಹೊತ್ತಳು. ನಾನು ತಜ್ಞರ ಶೋಧದಲ್ಲಿ ತೊಡಗಿದೆ. ಭರವಸೆ ಹುಟ್ಟಿಸಿದ ಪ್ರತಿಯೊಬ್ಬ ವೈದ್ಯರಲ್ಲೂ ತೋರಿಸಿದೆವು. ಅವರ ಚಿಕಿತ್ಸಾ ವಿಧಾನಗಳನ್ನು ಅನುಸರಿಸಿದೆವು. ನಿಮ್ಹಾನ್ಸ್‌ನಲ್ಲೇ ಇದ್ದ ಆಯುರ್ವೇದ ವಿಭಾಗದಲ್ಲಿ ವಾರಪೂರ್ತಿ ಚಿಕಿತ್ಸೆ ಆಯಿತು. ಅವನ್ನೇ ಮನೆಯಲ್ಲೂ ಮಾಡುತ್ತ ಹೋದೆವು.
 

ಊಹೂಂ. ಅವ್ಯಾವೂ ತಕ್ಷಣದ ಭರವಸೆ ಮೂಡಿಸಲಿಲ್ಲ.
 

ಹೋಮಿಯೋಪತಿ ಚಿಕಿತ್ಸೆಯ ಬೆನ್ನು ಹಿಡಿದು ಹುಬ್ಬಳ್ಳಿ, ಪುಣೆ ಎಂದೆಲ್ಲಾ ಓಡಾಡಿದೆವು. ಯಾವುದೂ ಕೈ ಹಿಡಿಯಲಿಲ್ಲ.
 

ಅಷ್ಟೊತ್ತಿಗೆ ಪ್ರಜಾವಾಣಿ ಸೇರಿಕೊಂಡಿದ್ದ ನಾನು ಧಾರವಾಡಕ್ಕೆ ವರ್ಗ ಕೇಳಿ ಪಡೆದೆ. ಹೋದಲ್ಲೆಲ್ಲ ದೇವರು, ಶಾಸ್ತ್ರದವರು, ತಜ್ಞರು ಎಂದೆಲ್ಲಾ ಅಲೆದೆವು.
 

ಇವೆಲ್ಲ ಪ್ರಯೋಗಗಳು ಫಲ ನೀಡದೇ ಹೋದಾಗ ನಿಮ್ಹಾನ್ಸ್‌ನ ವೈದ್ಯರ ಮಾತು ನೆನಪಾದವು.
 

ಸಾಮಾನ್ಯ ಮಗುವಿನೊಂದಿಗೆ ಮಾತಾಡುವಂತೆ ಗೌರಿಯೊಂದಿಗೆ ಮಾತಾಡುವುದು ಶುರುವಾಯ್ತು. ಫಿಜಿಯೋಥೆರಪಿ ಪ್ರಾರಂಭಿಸಿದೆವು. ವಿಶೇಷ ಶಾಲೆಗೂ ಗೌರಿಯನ್ನು ಸೇರಿಸಿದೆವು. ಬದುಕು ನಿಧಾನವಾಗಿ ತಿರುಗಲು ಶುರುವಾಯ್ತು.
 

*****
 

ಗೌರಿ ಕೂಡಲು ಕಲಿತಿದ್ದು ಎರಡು ವರ್ಷಗಳ ನಂತರ. ಅಂಬೆಗಾಲಿಟ್ಟಿದ್ದು ನಾಲ್ಕು ವರ್ಷಗಳಿಗೆ. ತಡವರಿಸುತ್ತ ಪುಟ್ಟ ಪುಟ್ಟ ಹೆಜ್ಜೆಗಳನ್ನಿಟ್ಟಿದ್ದು ಆರು ವರ್ಷಗಳ ನಂತರ.
 

ಇವತ್ತಿಗೂ ಆಕೆ ನಮ್ಮ ಕಣ್ಣನ್ನು ೨-೩ ಸೆಕೆಂಡ್‌ಗಳಿಗಿಂತ ಹೆಚ್ಚು ನೋಡುವುದಿಲ್ಲ. ಕೆಲವು ಶಬ್ದಗಳನ್ನು ಬಿಟ್ಟರೆ ಬೇರೆ ಶಬ್ದಗಳನ್ನು ಆಡಿಲ್ಲ. ಇವತ್ತಿಗೂ ನಡಿಗೆ ಅಸಹಜ. ತಂಗಿಯೊಂದಿಗೆ ಬೆರೆಯುವುದು ತೀರಾ ಕಡಿಮೆ.
 

ಆಟಿಸಂ ಮತ್ತು ಬುದ್ಧಿ ಮಾಂದ್ಯತೆಗಳೆರಡರ ಲಕ್ಷಣಗಳನ್ನೂ ಆಕೆಯಲ್ಲಿ ಗುರುತಿಸಿದ್ದಾರೆ ತಜ್ಞರು. ಈಗ ವಿಶೇಷ ಶಾಲೆಗೆ ಹೋಗುತ್ತಿದ್ದಾಳೆ. ಫಿಜಿಯೋಥೆರಪಿ, ಸ್ಪೀಚ್ ಥೆರಪಿ ಮುಂತಾದವೆಲ್ಲ ನಡೆದಿವೆ. ಈಗ ಆಕೆಗೆ ತಿಳಿವಳಿಕೆ ನಿಧಾನವಾಗಿ, ಬಲು ನಿಧಾನವಾಗಿ ಬೆಳೆಯುತ್ತಿದೆ. ಕೆಲವೊಂದು ಸರಳ ಮಾತುಗಳು ಅರ್ಥವಾಗುತ್ತವೆ. ಕೆಲವು ಸರಳ ಕೆಲಸಗಳನ್ನು ಮಾಡುತ್ತಾಳೆ. ಇವತ್ತಿಗೆ ಹತ್ತು ತುಂಬಿದ್ದರೂ ಗೌರಿ ನಮ್ಮ ಪಾಲಿಗೆ ಒಂದು ವರ್ಷದ ಮಗು.
 

*****
 

ಎಷ್ಟೋ ಸಾರಿ ಯೋಚಿಸುತ್ತೇನೆ: ಮಾತೇ ಆಡದ ಈಕೆ ನಮಗೆ ಎಷ್ಟೊಂದು ಕಲಿಸಿದಳಲ್ಲ ಎಂದು. ಆಕೆ ಬದುಕಿನ ರೀತಿ ನೀತಿಗಳ ಬಗ್ಗೆ ನನಗಿದ್ದ ಎಷ್ಟೊಂದು ಭ್ರಮೆಗಳನ್ನು ಹೋಗಲಾಡಿಸಿದಳು! ವಾಸ್ತವ ಪ್ರಪಂಚದ ಮಗ್ಗುಲಗಳನ್ನು ಪರಿಚಯಿಸಿದಳು. ನನಗೇ ಗೊತ್ತಿರದ ನನ್ನ ಮಿತಿ ಮತ್ತು ಸಾಮರ್ಥ್ಯವನ್ನು ತಿಳಿಸಿದಳು. ಕಿರಾಣಿ ಅಂಗಡಿಗೆ ಹೋಗಿ ರೇಶನ್ ತರಲು ಹಿಂಜರಿಯುತ್ತಿದ್ದ ರೇಖಾಳಿಗೆ ಇಡೀ ಬೆಂಗಳೂರನ್ನು ಕಾರಲ್ಲಿ ಸುತ್ತಿಬರುವಂತೆ ಮಾಡಿದಳು. ನಾನು ಕೆಲಸದ ಮೇಲೆ ಕೆಲಸಕ್ಕೆ ರಾಜೀನಾಮೆ ಬೀಸಾಡಿ ಬಂದು ಕೂತಾಗ, ಹೊಸ ಭರವಸೆ ಇನ್ನೂ ಇದೆ ಎಂಬುದನ್ನು ತೋರಿಸಿದಳು. ಮಂಕಾಗಿ ಕೂತವನಲ್ಲಿ ಹೊಸ ಕನಸು, ಸೋತ ಭಾವದ ಜಾಗದಲ್ಲಿ ಗೆಲುವಿನ ದಾರಿ ಮೂಡಿಸಿದಳು.
 

ಅವಳು ಮೂಡಿಸಿದ ಸ್ಫೂರ್ತಿಯಿಂದ ರೇಖಾ ಮತ್ತೆ ಸಂಗೀತ ಕಲಿಯಲು, ದಿನಾ ಜಿಮ್‌ಗೆ ಹೋಗಲು, ನಾನು ವೃತ್ತಿಯ ಹೊಸ ಸಾಧ್ಯತೆಗಳತ್ತ ಮುಖ ಮಾಡಲು ಸಾಧ್ಯವಾಯಿತು. ಗೌರಿಯಂಥ ಮಗುವನ್ನು ನಾವೇ ನೋಡಿಕೊಳ್ಳಬೇಕೆಂಬ ಅನಿವಾರ್ಯತೆ ನಮ್ಮನ್ನು ನಿತ್ಯ ಚುರುಕಾಗಿರಿಸಿದೆ. ನಿತ್ಯ ಗೆಲುವಾಗಿರಿಸಿದೆ. ಅಪರಿಚಿತರಲ್ಲಿ ಆತ್ಮೀಯರನ್ನು ಹುಟ್ಟುಹಾಕಿದೆ. ಸವಾಲಿನ ಜಾಗದಲ್ಲಿ ಅವಕಾಶ, ಸೋಲಿನ ಜಾಗದಲ್ಲಿ ಹೊಸ ಯತ್ನವನ್ನು ಮೂಡಿಸಿದೆ.
 

ಮಾತೇ ಆಡದ ಗೌರಿ ನಮಗೆ ಬದುಕಲು ಕಲಿಸಿದ್ದಾಳೆ. ಭರವಸೆ ಮೂಡಿಸಿದ್ದಾಳೆ. ನಿತ್ಯ ಹೊಸದೊಂದನ್ನು ಕಲಿಸುತ್ತ, ಹೊಸ ಭರವಸೆ ಮೂಡಿಸುತ್ತ, ತನ್ನ ಪಾಡಿಗೆ ತಾನು ನಗುತ್ತಲೇ ಇದ್ದಾಳೆ.
 

*****
 

ಥ್ಯಾಂಕ್ಸ್ ಗೌರಿ, ನೀನು ನಮ್ಮ ಮಗಳಾಗಿದ್ದಕ್ಕೆ. ನಮ್ಮ ಗುರುವಾಗಿದ್ದಕ್ಕೆ.
 

ಹ್ಯಾಪಿ ಬರ್ತ್‌ಡೇ ನಿನಗೆ.
 

- ಚಾಮರಾಜ ಸವಡಿ

ಈ ರಾತ್ರಿಗೆ ಬೆಳಗಾಗುವುದಿಲ್ಲ

26 Mar 2012

1 ಪ್ರತಿಕ್ರಿಯೆ
ಇದ್ದ ಒಂದೇ ಕನ್ನಡಕ
ಬಿದ್ದು ಒಡೆದುಹೋಯಿತು

ಬೆಳಕಿಲ್ಲದ ರಾತ್ರಿ ಗಡಿಯಾರ ಹೆಳವ
ಅವಳ ದೀಪದಂಥ ಕಂಗಳಿಗೆ
ಅಕ್ಷರಗಳ ಹುಡುಕಲಿ ಹೇಗೆ?

ಗಾಜೆಂದುಕೊಂಡಿದ್ದು ಕಣ್ಣೇ ಆಗಿತ್ತೇನೋ
ಖಾಲಿ ಫ್ರೇಮಿನ ಕನ್ನಡಕದಲ್ಲಿ
ಅತಿ ನಿಚ್ಚಳ ಅವಳ ಬಿಂಬ

ಏನು ಮಾಡುವುದು ಅಪರಾತ್ರಿಯಲಿ
ದಿನದ ನಿಟ್ಟುಸಿರಿಗೆ ಹೊಸ ಕನಸ ಪೋಣಿಸಿ
ಹೃದಯದ ತೂತ ಮುಚ್ಚಲಾಗದು
ಸುಮ್‌ಸುಮ್ನೇ ಬೀರಿದ ಮುಗುಳ್ನಗೆಗಳ
ಖಾಲಿತನ ತುಂಬಲಾಗದು

ನಾಳೆ ಬೆಳಗಾಗುವವರೆಗೂ ಕತ್ತಲೆಯೇ
ಈ ರಾತ್ರಿ ದೂಡಬೇಕು, ಹೇಗೋ
ಅಕ್ಷರಗಳ ಕ್ಷಮೆ ಕೇಳಿ,
ಕನಸುಗಳಿಗೆ ಕಾಡದಿರಲು ಹೇಳಿ
ಖಿನ್ನ ಮನಸಿಗೆ ನಿದ್ರಿಸಲೊಂದು ಮನವಿ

ಹೂಂ. ಹಾಗೇ ಮಾಡಬೇಕು
ಮುರಿದ ಗಾಜುಗಳ ಗುಡಿಸಿ,
ಕನ್ನಡಕದ ಫ್ರೇಮು ಎತ್ತಿಟ್ಟು
ಬಾರದ ನಿದ್ದೆಗೆ ಬೇಡಿಕೆ ಇಟ್ಟು
ಮುಚ್ಚಬೇಕು ಕಣ್ಣ

ನಿನ್ನೆಯದೆಲ್ಲ ಇಂದಿಗಾದಂತೆ
ನಾಳೆಗಿರಲಿ ಇಂದು, ಎಂದು
ದೀಪವಾರಿಸಿ, ಎವೆ ಮುಚ್ಚಿದರೆ
ಕಣ್ಣರಳಿಸುತ್ತಾಳೆ ಕಣ್ಣೊಳಗೆ
ಕನ್ನಡಕದ ಹಂಗಿಲ್ಲದೇ ಸ್ಪಷ್ಟವಾಗುತ್ತಾಳೆ
ಮರೆಯಬೇಕೆಂದರೂ ಇಷ್ಟವಾಗುತ್ತಾಳೆ

ಅಷ್ಟೇ,
ಇನ್ನು ಈ ರಾತ್ರಿಗೆ ಬೆಳಗಾಗುವುದಿಲ್ಲ

- ಚಾಮರಾಜ ಸವಡಿ

ನಾಳೆ ಏಳಲಿಕ್ಕಾದರೂ ರಾತ್ರಿ ಮಲಗಬೇಕು

21 Mar 2012

0 ಪ್ರತಿಕ್ರಿಯೆ

ಅಲ್ಲಿಂದ ಹೊರಟಾಗಲೇ ಮಧ್ಯರಾತ್ರಿ. 
ಗುಡ್‌ ಮಾರ್ನಿಂಗ್‌ ಹೇಳಬೇಕೋ, ಗುಡ್‌ನೈಟ್‌ ಇನ್ನೂ ಉಳಿದಿದೆಯೋ ಎಂಬ ಗೊಂದಲ. ರಸ್ತೆಗಳು ಅಗಲಕ್ಕೆ ಮೈಚಾಚಿ ಮಲಗಿದ್ದವು. ಆಗೊಂದು, ಈಗೊಂದು ವಾಹನ, ಬೆಳಕಿನಲ್ಲಿ ರಸ್ತೆಯ ತಗ್ಗು, ಉಬ್ಬುಗಳನ್ನು ಹುಡುಕಿಕೊಂಡು ತಂತಮ್ಮ ಗುರಿಯೆಡೆಗೆ ಹೊರಟಿದ್ದವು. ಎಲ್ಲಿಗೆ ಹೋಗಬೇಕು ನಾನು?
ಗಾಡಿಯ ಮೇಲೆ ಕೂತು ಕತ್ತೆತ್ತಿ ನೋಡಿದೆ. ನಕ್ಷತ್ರಗಳು ತಬ್ಬಲಿಯಂತೆ ಮಂಕಾಗಿ ದಿಟ್ಟಿಸಿದವು. ಅವಕ್ಕೂ ಬೇಸರವಾಗಿದೆಯಾ? ತಲೆ ಕೊಡವಿದೆ. ಬೇಸರಪಡಲು, ಮನಸ್ಸು ಮುದುಡಲು, ಖಿನ್ನವಾಗಲು ಅವೇನು ಪ್ರೀತಿಸಿವೆಯಾ ಎಂದು ಸುಮ್ಮನೇ ಹೊರಟೆ. ಅಗಲ ರಸ್ತೆಯಲ್ಲಿ, ಅಪರಾತ್ರಿಯಲ್ಲಿ, ಒಂಟಿ ಪಯಣ. ಮನೆ ದೂರ. 
ಹಳೆಯ ಹಾಡುಗಳು ಜೊತೆಯಾದವು. ಗಾಡಿ ತನ್ನ ಪಾಡಿಗೆ ಓಡುತ್ತಿತ್ತು. ನಾನು ಸುಮ್ಮನೇ ಹ್ಯಾಂಡಲ್‌ ಹಿಡಿದುಕೊಂಡಿದ್ದೆ. ಸಿಗ್ನಲ್‌ಗಳೆಲ್ಲ ಹಳದಿ ಮಿಣುಕುಗಳಾಗಿ, ನೀನು ಆರಾಮವಾಗಿ ಹೋಗಬಹುದು ಎನ್ನುತ್ತಿದ್ದವು. ಸರ್ಕಲ್‌ ಹತ್ತಿರವಾದಾಗೆಲ್ಲ, ವೇಗ ತಗ್ಗಿಸಿ, ಆಕಡೆ, ಈಕಡೆ ನೋಡಿ, ಮತ್ತೆ ವೇಗ ಹೆಚ್ಚಿಸಿಕೊಂಡು, ಅಷ್ಟರಲ್ಲಿ ಮತ್ತೊಂದು ಸಿಗ್ನಲ್‌ ಹತ್ತಿರವಾಗಿ, ಮನಸ್ಸಿನಲ್ಲಿ ಮೊರೆಯುತ್ತಿದ್ದ ಹಾಡಿನ ಜಾಗದಲ್ಲಿ ಬೇರೆ ಹಾಡು. 
ಮೇಲೆ ಮಾತ್ರ ಅವೇ ದೀನ ನಕ್ಷತ್ರಗಳು. ಒಳಗೆ ಮಂಕು ಭಾವ.
*****
ಮೊದಲೆಲ್ಲ ಇಷ್ಟು ತಡವಾಗಿ ಹೋಗುತ್ತಿರಲಿಲ್ಲ. ನನ್ನಷ್ಟೇ ಖಿನ್ನರಾದ ಕೆಲವರು ಬೇರೆ ಬೇರೆ ಕಾರಣಗಳಿಗಾಗಿ ಜೊತೆಯಾಗಿ, ಅವರ ನೋವುಗಳಿಗೆ ನಾನು ಕಿವಿಯಾಗತೊಡಗಿದಾಗಿನಿಂದ ಹೀಗೆ ತಡವಾಗುತ್ತಿದೆ. ಇಲ್ಲದಿದ್ದರೆ ಕಚೇರಿ ಬಿಟ್ಟರೆ ಮನೆ, ಮನೆ ಬಿಟ್ಟರೆ ಕಚೇರಿ ಎಂಬ ಟೈಂ ಟೇಬಲ್‌ನವ ನಾನು. ಅವರ ಜೊತೆ ಹರಟುತ್ತಿದ್ದರೂ, ಮನಸ್ಸು ಎಲ್ಲೋ ಯಾತ್ರೆ ಹೊರಟಿರುತ್ತದೆ. ಕಾರಣವಿಲ್ಲದೇ ನಕ್ಷತ್ರಗಳನ್ನು ದಿಟ್ಟಿಸುತ್ತದೆ. ಅವಕ್ಕೂ ಖಿನ್ನತೆಯಾ ಎಂದು ಪ್ರಶ್ನಿಸಿಕೊಳ್ಳುತ್ತದೆ. ಛೇ, ಇರಲಿಕ್ಕಿಲ್ಲ ಎಂದು ಸುಮ್ಮನಾಗುತ್ತದೆ. ಮತ್ತೆ ಹರಟೆ, ಮತ್ತೆ ಯಾತ್ರೆ, ಮತ್ತೆ ಗೊಂದಲ.
ಕೊನೆಗೂ ಜೊತೆಗಿರುವ ಗೆಳೆಯನನ್ನು ಮನೆ ಮುಟ್ಟಿಸಿ, ಅಲ್ಲೊಂಚೂರು ಹರಟೆ ಹೊಡೆದು, ಕಟ್ಟೆಯ ಮೇಲೆ, ಅಂಗಡಿಯ ಮುಂದಿನ ಅಗಲ ಫುಟ್‌ಪಾತ್‌ ಮೇಲೆ ಮಲಗಿದವರು ಮುಸುಕು ಸರಿಸಿ, ನಮ್ಮನ್ನೊಮ್ಮೆ ನಿದ್ದೆ ಕೆಟ್ಟ ಕಣ್ಣಲ್ಲಿ ಕೆಕ್ಕರಿಸಿ ನೋಡಿದಾಗ, ಸರಿ ನಾಳೆ ಸಿಕ್ತೀನಿ ಎನ್ನುತ್ತಾ ಮತ್ತೆ ಗಾಡಿ ಏರುತ್ತೇನೆ. ಮುಂದಿನ ಎಂಟೊಂಬತ್ತು ಕಿಮೀ ನನಗೆ ನಾನೇ. 
ಆಗ ಎಲ್ಲಾ ಸಿಗ್ನಲ್ಲುಗಳೂ ಮುಕ್ತ. ಪ್ರತಿಯೊಂದು ಸರ್ಕಲ್‌ನ ಮೂಲೆಯಲ್ಲೂ ಕೆಲವು ಆಟೊಗಳ ಸಾಲು, ಅವುಗಳ ಮುಂದೆ ಹರಟೆ ಹೊಡೆಯುವ ಆಟೊ ಚಾಲಕರು. ಅಪರೂಪಕ್ಕೊಮ್ಮೆ ಪೊಲೀಸರ ಗಸ್ತು ವಾಹನ. ಹಗಲುಹೊತ್ತು ಗಿಜಿಗುಡುವ ರಸ್ತೆಗಳೆಲ್ಲ ದಿನದ ದುಡಿಮೆಯ ನಂತರ ನಿಟ್ಟುಸಿರಿಡುತ್ತ ವಿಶ್ರಾಂತಿಯಲ್ಲಿರುತ್ತವೆ. ಬೀದಿ ದೀಪಗಳಿಗೆ ಬುದ್ಧನ ಪ್ರಶಾಂತತೆ. ಅಲ್ಲಲ್ಲಿ ತೆರೆದುಕೊಂಡ ದೊಡ್ಡ ಆಸ್ಪತ್ರೆಗಳು ಹಾಗೂ ನರ್ಸಿಂಗ್‌ ಹೋಮ್‌ಗಳ ಬಾಗಿಲ ಮುಂದೆ ನಿಂತ ಆಂಬುಲೆನ್ಸ್‌ಗಳು, ಅವಸರದಿಂದ ಆಚೀಚೆ ಓಡಾಡುವ ರೋಗಿಗಳ ಸಂಬಂಧಿಗಳನ್ನು ಬಿಟ್ಟರೆ, ಇಡೀ ಊರಿಗೆ ದೊಡ್ಡ ನಿದ್ದೆ. 
ಹೊಟ್ಟೆ ಸಣ್ಣಗೆ ಚುರುಗುಡುತ್ತದೆ. ಪರವಾಗಿಲ್ಲ, ಹಸಿವೆಯಾಗುತ್ತಿದೆ ಎಂದು ಖುಷಿ. ಬೇರೆ ಸಮಯದಲ್ಲಾದರೆ ಮುಕ್ಕಾಲು ಗಂಟೆ ಹಿಡಿಯುವ ಪಯಣ, ಅಪರಾತ್ರಿಯಲ್ಲಿ ಕೇವಲ ಇಪ್ಪತ್ತು ನಿಮಿಷಕ್ಕೆಲ್ಲ ಮುಗಿಯುತ್ತದೆ. ಆದರೆ, ಇಪ್ಪತ್ತು ನಿಮಿಷ ಅಗಾಧ ಕಾಲವೇನೋ ಎಂಬಂತೆ ಮನಸ್ಸು ಮಂಕುಮಂಕು. 
ಅದು ದಿನದ ಸುಸ್ತಲ್ಲ. ಸಣ್ಣಗೇ ಚುರುಗುಡುವ ಹಸಿವೆಯಿಂದಲೂ ಅಲ್ಲ. ಎಷ್ಟೇ ದಣಿದಿದ್ದರೂ, ರಾತ್ರಿ ಓದಿನ ಕೋಣೆ ಹೊಕ್ಕು, ಅರ್ಧ ಗಂಟೆಯಾದರೂ ಒಂಟಿಯಾಗಿ ಕೂಡದಿದ್ದರೆ, ಅವತ್ತಿನ ದಿನ ಮುಗಿಯುವುದಿಲ್ಲ. ಸಿಗ್ನಲ್‌ಗಳ ಮೇಲೆ ಸಿಗ್ನಲ್‌ ದಾಟಿ, ಅಗಲ ಒಂಟಿ ರಸ್ತೆಗಳನ್ನು ನುಂಗಿಕೊಂಡು ಮನೆಗೆ ಹತ್ತಿರವಾಗುವ ಹೊತ್ತಿಗೆ ಎಂಥದೋ ಸುಸ್ತು. 
*****
ಓದುವ ಕೋಣೆ ಕಾಯುತ್ತಿರುತ್ತದೆ. ಇಡೀ ದಿನ ಹೊರಗೆ ಹೋಗಿದ್ದೆಯಲ್ಲ ಮಿತ್ರಾ, ಹೇಗಿತ್ತು ನಿನ್ನ ದಿನ ಎಂದು ಪ್ರಶ್ನಿಸುತ್ತದೆ. ಅದಕ್ಕೇ ಉತ್ತರ ಗೊತ್ತಿರುವುದರಿಂದ ನಾನು ಏನೂ ಹೇಳುವುದಿಲ್ಲ. ಬಾಗಿಲು ಮುಚ್ಚಿ, ಕಂಪ್ಯೂಟರ್‌ ತೆರೆದು, ಅದರ ಪಾಡಿಗೆ ಅದನ್ನು ಬಿಟ್ಟು ಸುಮ್ಮನೇ ಕೂಡುತ್ತೇನೆ. ಒಂದೇ ಗತಿಯಲ್ಲಿ ತಿರುಗುವ ಫ್ಯಾನ್‌, ಅಲ್ಲೆಲ್ಲೋ ಕೋಲಿನಿಂದ ಫುಟ್‌ಪಾತ್‌ನ ಕಲ್ಲುಗಳನ್ನು ಕುಟ್ಟುತ್ತ ಗೂರ್ಖಾ ಸಿಳ್ಳೆ ಹೊಡೆಯುವ ಸದ್ದು, ಫ್ಯಾನಿನ ಗಾಳಿಗೆ ಸಣ್ಣಗೇ ಅಲುಗುವ ಹಾಳೆಗಳನ್ನು ದಿಟ್ಟಿಸುತ್ತೇನೆ. ದೊಡ್ಡದೊಂದು ಖಾಲಿತನ ಒಳಗೆ. ಅದನ್ನು ತುಂಬುವುದು ಹೇಗೆ?
ಮರೆಯಬೇಕೆಂದಾಗಲೇ ಎಲ್ಲ ನೆನಪಾಗತೊಡಗುತ್ತವೆ. 
ಎಲ್ಲಾ ಎಂದರೆ, ಎಲ್ಲವೂ. ಸ್ಪಷ್ಟ ಚಿತ್ರಗಳಂತೆ, ಸಜೀವವಾಗಿ ನೆನಪಾಗುತ್ತವೆ. ಭಾಷೆ ಗೊತ್ತಿಲ್ಲದ ಸಿನಿಮಾ ನೋಡುವಂತೆ, ಸುಮ್ಮನೇ ಆ ಚಿತ್ರಗಳನ್ನು ನೋಡುತ್ತ ಹೋಗುತ್ತೇನೆ. 
ಹಿಂದಕ್ಕೆ, ಹಿಂದಕ್ಕೆ ಹೋಗುತ್ತದೆ ನೆನಪು. ಗುಜರಾತ್‌ನ ಕಚ್ಛ್‌ ರಣಭೂಮಿಯಲ್ಲಿ ಕಳೆದ ವರ್ಷಗಳು ನೆನಪಾಗುತ್ತವೆ. ಅಲ್ಲೂ ಹೀಗೇ. ವರ್ಷಗಟ್ಟಲೇ ರಾತ್ರಿಗಳನ್ನು ಒಂಟಿಯಾಗಿ ಒಂಟಿ ರಸ್ತೆಗಳಲ್ಲಿ ತಿರುಗುತ್ತ ಕಳೆದಿದ್ದೆ. ಎದೆ ತುಂಬ ಪುಟಿಯುವ ಕನಸುಗಳು. ಸಾವಿರಾರು ನವಿರು ಭಾವನೆಗಳು. 
ಆದರೆ, ಅಲ್ಲಿ ನಕ್ಷತ್ರಗಳು ಉಜ್ವಲವಾಗಿರುತ್ತಿದ್ದವು. ಮರುಭೂಮಿಯಲ್ಲೆಲ್ಲೋ ಒಂಟಿಯಾಗಿದ್ದ ಸೇನಾ ಠಾಣ್ಯದಲ್ಲಿ, ಬೆರಳೆಣಿಕೆಯಷ್ಟಿದ್ದ ಬೀದಿದೀಪಗಳನ್ನು ನಾಚಿಸುವಂತೆ ಪಳಪಳ ಹೊಳೆಯುತ್ತಿದ್ದವು. ಅವುಗಳನ್ನು ಮತ್ತೆ ಮತ್ತೆ ನೋಡುತ್ತ ನಾನು ಗೆಲುವಾಗಲು ಯತ್ನಿಸುತ್ತಿದ್ದೆ. ಅಲ್ಲೂ ಹೀಗೇ ಅಪರಾತ್ರಿಯ ತಿರುಗಾಟ. ಸೇನಾ ಠಾಣ್ಯದ ತಂತಿ ಸುತ್ತಿದ್ದ ಆವರಣದಲ್ಲಿ ಒಂಟಿ ಹುಡುಕಾಟ. 
ಅವತ್ತಿಗೂ ಇವತ್ತಿಗೂ ನಡುವೆ ಇಪ್ಪತ್ತೈದು ವರ್ಷಗಳೇ ಕಳೆದುಹೋಗಿವೆ. ಆದರೆ, ಅದೇ ಒಂಟಿತನ, ಅದೇ ಅಪರಾತ್ರಿ, ಅದೇ ಒಂಟಿ ಅಲೆದಾಟ. ವ್ಯತ್ಯಾಸ ಇಷ್ಟೇ: ಅವತ್ತು ಉಜ್ವಲವಾಗಿದ್ದ ನಕ್ಷತ್ರಗಳು ಈ ನಗರದ ಬೀದಿದೀಪದ ಪ್ರಖರತೆಯಲ್ಲಿ ಮಂಕಾಗಿವೆ.
ಎಷ್ಟು ವಿಚಿತ್ರ! 
ಆ ಉಜ್ವಲ ನಕ್ಷತ್ರಗಳು ಕೊಂಚವಾದರೂ ಭರವಸೆ ಹುಟ್ಟಿಸುತ್ತಿದ್ದವು. ಆದರೆ, ಈ ಬೀದಿ ದೀಪಗಳ ಪ್ರಖರತೆ ಮನಸ್ಸನ್ನು ಇನ್ನಷ್ಟು ಮಂಕಾಗಿಸುತ್ತಿದೆ. 
ಅಗಲ ರಸ್ತೆಗಳಲ್ಲಿ ಒಂಟಿಯಾಗಿ ಓಡಾಡುತ್ತ, ಓದುವ ಕೋಣೆಯಲ್ಲಿ ಒಂಟಿಯಾಗಿ ಕೂತುಕೊಂಡೇ ನಿನ್ನೆ ಕಳೆದು ಇಂದು ಬಂದಿರುತ್ತದೆ. ನಾನು ನಿನ್ನೆಗೂ ಸೇರಿಲ್ಲ, ಇಂದಿಗೂ ಹೊಂದಿಕೊಂಡಿಲ್ಲ. ನಡುವೆ ಎಲ್ಲೋ ಕಳೆದುಹೋಗಿದ್ದೇನೆಂದು ಅನಿಸತೊಡಗುತ್ತದೆ.
ಮರೆತಂತಿರುವ ಹಾಡುಗಳು ನೆನಪಾಗುತ್ತವೆ. ಭಾವನೆಗಳು ನೆನಪಾಗುತ್ತವೆ. ಕನಸುಗಳು ಕರೆಯುತ್ತವೆ. ಅಪರಾತ್ರಿಯ ನೀರವತೆಯಲ್ಲಿ, ನನಗೆ ಮಾತ್ರ ಕೇಳಿಸುವಂತೆ ಹಾಡುತ್ತವೆ, ಕಾಡುತ್ತವೆ. 
ನಿನ್ನೆಯೂ ಹೀಗೇ ಕೂತಿದ್ದೆ. ಮೊನ್ನೆಯೂ. ಅದರ ಹಿಂದಿನ ದಿನವೂ... ವರ್ಷಗಟ್ಟಲೇ ಹೀಗೆ ಕೂತಿದ್ದೇನೆ. ಕೆಲವು ಪ್ರಶ್ನೆಗಳಿಗೆ ಉತ್ತರ ಸಿಕ್ಕಿವೆ. ಆದರೆ, ಅವನ್ನು ನಾನು ಒಪ್ಪಿಕೊಂಡಿಲ್ಲ. ಕೆಲ ಪ್ರಶ್ನೆಗಳು ಹೊಸದಾಗಿ ಮೂಡಿವೆ. ಅವಕ್ಕೆ ಉತ್ತರ ಸಿಕ್ಕಿಲ್ಲ. ಈ ಪ್ರಶ್ನೋತ್ತರಗಳ ಭರಾಟೆಯಲ್ಲಿ ಮೂಡಿರಬಹುದಾದ ಕೊಂಚ ವಿವೇಕವನ್ನು ಅನುಭವ ಎಂದುಕೊಂಡಿದ್ದೇನೆ. ಆದರೆ, ಅದಕ್ಕೂ ನನಗೆ ನಿದ್ದೆಯನ್ನು, ಅಪ್ಪಟ ಹಸಿವನ್ನು, ಕೊಂಚ ನೆಮ್ಮದಿಯನ್ನು ಮೂಡಿಸಲು ಆಗಿಲ್ಲ.
*****
ರಾತ್ರಿ ತನ್ನ ಪಾಡಿಗೆ ತಾನು ಸರಿಯುತ್ತ ಹೋಗುತ್ತದೆ. ಗಡಿಯಾರಕ್ಕೆ ಅವಸರವಿಲ್ಲದ ಒಂದೇ ಗತಿ. ನಾಳೆ ಏಳಲಿಕ್ಕಾದರೂ ಈಗ ಮಲಗಬೇಕು. ನನ್ನ ಕನಸುಗಳು ನನಗಿರಲಿ. ಮಲಗಿಕೊಂಡ ಯಾರ ಕನಸನ್ನೂ ಅವು ಕಾಡದಿರಲಿ. ಸುಖನಿದ್ದೆ ನಂತರದ ಅವರ ಬೆಳಗಿನಲ್ಲೊಂದು ಹೊಂಬೆಳಕು ಮೂಡಲೆಂದು ಅಂದುಕೊಳ್ಳುತ್ತೇನೆ.
ಕಂಪ್ಯೂಟರ್‌ ಆರಿಸಿ, ದೀಪದ ಕತ್ತು ಹಿಸುಕಿ, ಮಂಕು ಬೆಳಕಲ್ಲಿ ಹಾಸಿಗೆಯ ನನ್ನ ಜಾಗ ಹುಡುಕಿಕೊಳ್ಳುತ್ತೇನೆ. ಕಣ್ಣು ಮುಚ್ಚಿಕೊಂಡು ನಿದ್ದೆಗಾಗಿ ಒಂದು ಸದ್ದಿಲ್ಲದ ಪ್ರಾರ್ಥನೆ ಸಲ್ಲಿಸುತ್ತೇನೆ.
ಎಲ್ಲರಿಗೂ ಶುಭರಾತ್ರಿ. 
- ಚಾಮರಾಜ ಸವಡಿ

ಹೀಗೆಂದರೆ ಹೀಗೇ, ಹೇಗಿದೆಯೋ ಹಾಗೆ

4 Mar 2012

0 ಪ್ರತಿಕ್ರಿಯೆ
ಅಂದುಕೊಂಡಂತೆ ಆಗದಿದ್ದರೆ
ಎಂದು ಯೋಚಿಸಿದೆ

ಭಯವಾಯಿತು:
ನಾನು ನಾನಾಗಿರಲ್ಲ

ಅಂದುಕೊಂಡಂತೆ ಆಗಿಬಿಟ್ಟರೆ

ಇನ್ನೂ ಭಯ
ಆಗಲೂ ನಾನು ನಾನಾಗಿರಲ್ಲ

ಹೀಗೇ ಇರಲಿ ಬಿಡು
ಹೀಗೆಂದರೆ ಹೀಗೇ

ಹೇಗಿದೆಯೋ ಹಾಗೆ

***

ಒಮ್ಮೊಮ್ಮೆ ಹೀಗೇ

ನೆನಪಾದಾಗೆಲ್ಲ ವಿಷಾದ
ಕೂತಲ್ಲೇ ಕಳೆದುಹೋಗೋದು
ಎದ್ದಾಗ ಕನಸು
ನಿದ್ದೆಯಲ್ಲಿ ಎಚ್ಚರ

ತುತ್ತು ನೆತ್ತಿಗೇರಿದಾಗ
ನೀರು ಹುಡುಕುವಂತೆ
ಬಿಕ್ಕಳಿಕೆ ನಿಂತಾಗ
ಏನೋ ಕಳಕೊಂಡಂತೆ

ಷೆಲ್ಫು ತುಂಬಿದ ಪುಸ್ತಕಗಳು
ಬರೀ ಲೊಳಲೊಟ್ಟೆ
ಹಸಿದ ಹೊಟ್ಟೆಯ ಮುಂದೆ
ಖಾಲಿ ತಟ್ಟೆ

ಮನಸೆಂಬುದು
ನೆಲೆ ಕಳೆದುಕೊಂಡ ನಾಯಿಮರಿ
ಅಪರಿಚಿತ ಊರಿನ ಬಸ್‌ಸ್ಟ್ಯಾಂಡು
ಒಳಗೇ ಬಚ್ಚಿಟ್ಟುಕೊಂಡು
ಊರೆಲ್ಲ ಹುಡುಕಾಟ

ಬರೀ ಬಿಡಿ ಚಿತ್ರಗಳು
ಜೋಡಿಸಿದಷ್ಟೂ ಗೊಂದಲ

ನಿನ್ನೆ ಎಂಬುದು ಇಂದಾಗಿ
ಇಂದೆಂಬುದೇ ನಾಳೆಯಾಗಿ
ಗಡಿಯಾರ ಮಂಕಾಗಿ
ಕಾಲವೆಂಬುದು ನಾಯಿಬಾಲದಂತೆ

ಸರಿಯಾಗದು
ಬಿಡಲಾಗದು

- ಚಾಮರಾಜ ಸವಡಿ

ಇತ್ತೀಚೆಗೆ ಹೀಗೇ... ಹೇಗೆಂದರೆ ಹಾಗೆ...

24 Feb 2012

0 ಪ್ರತಿಕ್ರಿಯೆ


ತೂಕಡಿಕೆ, ಅರೆಎಚ್ಚರ, ಮಂಪರು ಸೇರಿಕೊಂಡರೆ ಅದನ್ನು ನಿದ್ದೆ ಎಂದು ಅಂದುಕೊಳ್ಳುವ ಹಂತ ತಲುಪಿದ ನಂತರ, ಇನ್ನು ಸಾಕಿದು ಅಂದುಕೊಂಡೆ.


ಅಂದುಕೊಂಡಿದ್ದೇ ಆಯಿತು. ಕಾಡುವ ನೆನಪುಗಳು ದೂರವಾಗಲಿಲ್ಲ. ಮನಸ್ಸಿನ ಭ್ರಾಂತಿ ಇದು ಅಂದುಕೊಂಡರೂ ಸಮಾಧಾನವಾಗಲಿಲ್ಲ.


ಬರೆಯುವುದನ್ನು ಬಿಟ್ಟೆ. ಬಿಟ್ಟ ಓದನ್ನು ಮತ್ತೆ ಶುರು ಮಾಡಿದೆ. ಆದರೂ, ಹಳಹಳಿ ದೂರವಾಗಲಿಲ್ಲ.


ಅದುವರೆಗೆ ಮರೆತೇ ಹೋದಂತಿದ್ದ ಸಂಗೀತ ಆಲಿಸಲು ಶುರು ಮಾಡಿದೆ. ಅದು ಹಳೆಯ ಗಾಯಗಳ ಜೊತೆಗೆ ಹೊಸ ಗಾಯಗಳನ್ನು ಮಾಡಿತು. ಸ್ಪೀಕರ್‌ಗಳನ್ನು ಕಿತ್ತೆಸೆದೆ.


ಮಂಪರೆಂಬ ನಿದ್ದೆ ಮುಗಿಸಿ, ಜಡಗೊಂಡಂತಿದ್ದ ಮೈಮನಸುಗಳಿಗೆ ಕಸುವು ತುಂಬಲು ಯೋಗಾಸನ ಮಾಡಿ, ತರಾತುರಿಯಿಂದ ಬೆಳಗಿನ ಎಲ್ಲ ಕೆಲಸಗಳನ್ನು ಮುಗಿಸಿದ ನಂತರ, ದಿನದ ಶೂನ್ಯಭಾವ ನಿಧಾನಕ್ಕೆ ಬಿಚ್ಚಿಕೊಳ್ಳುತ್ತದೆ. ಕಚೇರಿಗೆ ಹೋಗುವುದು ನಿತ್ಯದ ಕರ್ಮ. ಬರೆಯುವುದೇ ವೃತ್ತಿಯಾದ್ದರಿಂದ, ಬರೆಯುವುದೂ ನಿತ್ಯ ಕರ್ಮವೇ. ಬರೆದಿದ್ದನ್ನು ಒಮ್ಮೆ ಓದಿ, ತಿದ್ದಿ, ಅಚ್ಚಿಗೆ ಸಿದ್ಧಪಡಿಸಿ, ಪುಟ ವಿನ್ಯಾಸ ಮಾಡಿಸಿ, ಮುದ್ರಣಕ್ಕೆ ಕಳಿಸಿದ ನಂತರ ಎರಡನೇ ಶೂನ್ಯ ಬಿಚ್ಚಿಕೊಳ್ಳುತ್ತದೆ. ಕಚೇರಿ ನಿಧಾನವಾಗಿ ಖಾಲಿಯಾಗತೊಡಗಿದಂತೆ, ಮನೆಯೆಡೆಗೆ ದೀರ್ಘ ಪಯಣ. ಹೋಗಿ ಏನ್ಮಾಡ್ತೀರಿ? ಕ್ಲಬ್‌ಗೆ ಹೋಗೋಣ ಬನ್ನಿ ಎಂಬ ಗೆಳೆಯರ ಆಗ್ರಹಕ್ಕೆ ಇಲ್ಲವೆನ್ನಲಾಗದೇ ಅತ್ತ ಹೊರಡುತ್ತೇನೆ. ಮಂಕಾಗಿ ನಿಂತಂತಿದ್ದ ಮರಗಳ ಕೆಳಗೆ ಬಾಟಲಿಗಳು, ಭಾವನೆಗಳು ಬಿಚ್ಚಿಕೊಳ್ಳುತ್ತವೆ. ಏನೇನೋ ಮಾತುಗಳು, ಆವೇಶ, ಉದ್ವೇಗ, ನಿರಾಸೆ, ಹತಾಶೆ, ಹೊಸದೇನನ್ನೋ ಮಾಡುವ ಉಮೇದು ಉಕ್ಕುತ್ತವೆ. ಮದ್ಯ ತಲೆಗೇರಿದೆ ಅನಿಸಿದರೂ, ಅದಕ್ಕೂ ಮುಂಚೆ ತಲೆಯೊಳಗಿದ್ದ ಶೂನ್ಯ ಖಾಲಿಯಾಗುವುದಿಲ್ಲ. 


ಅಪರಾತ್ರಿ ಹೊರಬಿದ್ದು, ನಿರ್ಜನ ರಸ್ತೆಯಲ್ಲಿ ಯಾವುದೋ ಗುಂಗಿನಲ್ಲಿ ಗಾಡಿ ಓಡಿಸುವಾಗ, ಸಿಗ್ನಲ್‌ಗಳ ಹತ್ತಿರ ಪೊಲೀಸರು ಕೈ ಅಡ್ಡ ಮಾಡುತ್ತಾರೆ. ಗಾಡಿ ನಿಲ್ಲುತ್ತದೆ. ಕುಡಿದಿದ್ದೀರಾ? ಎನ್ನುವ ಪ್ರಶ್ನೆಗೆ ಹೌದೆನ್ನುತ್ತೇನೆ. ಪ್ರೆಸ್‌ ಎಂಬ ಫಲಕ ನೋಡಿ, ಏನ್ಸಾರ್‌ ಕುಡಿದು ಗಾಡಿ ಓಡಿಸ್ತಿದ್ದೀರಲ್ಲ? ಎನ್ನುತ್ತಾರೆ ಪೊಲೀಸರು. ಏನ್ಮಾಡೋದು, ಇಲ್ಲದಿದ್ದರೆ ಕ್ಲಬ್‌ನಲ್ಲೇ ಮಲ್ಕೋಬೇಕಾಗುತ್ತದೆ ಎನ್ನುತ್ತೇನೆ. ಸರಿ ಹೋಗಿ, ಹುಷಾರಾಗಿ ಎಂದು ಬೀಳ್ಕೊಡುತ್ತಾರೆ. ಮತ್ತದೇ ಗುಂಗು. ಮತ್ತದೇ ದಾರಿ.


ಬೆಂಗಳೂರಿನ ರಾತ್ರಿಗಳಿಗೆ ವಿಚಿತ್ರ ಸೆಳೆತ. ರಸ್ತೆ ಖಾಲಿ ಖಾಲಿ, ಮನಸ್ಸಿನಂತೆ. ಬೀದಿ ದೀಪಗಳು ಮಂಕು ಮಂಕು, ಥೇಟ್‌ ಮನಸ್ಸಿನಂತೆ. ಕುಳಿರ್ಗಾಳಿಗೆ ಮುಖವೊಡ್ಡಿ ಗಾಡಿ ಓಡಿಸುವಾಗ, ಎಲ್ಲಿದ್ದೇನೆ ಎಂಬ ಪ್ರಜ್ಞೆಯೂ ಇಲ್ಲದಂತಾಗಿರುತ್ತದೆ. ಆದರೂ, ಗಾಡಿ ತನ್ನ ಪಾಡಿಗೆ ತಾನು ರೂಢಿಯಾದ ರಸ್ತೆಯಲ್ಲಿ ಒಂದೇ ಹದಕ್ಕೆ ಓಡುತ್ತದೆ. ಮನೆ ಬಂದಾಗ ನಿಲ್ಲುತ್ತದೆ.


ಹೆಚ್ಚು ಸದ್ದು ಮಾಡದಂತೆ ಬೀಗ ತೆಗೆದು, ಲೈಟೇ ಹಾಕದೇ ಹುಷಾರಾಗಿ ಬಟ್ಟೆ ಬದಲಿಸಿ, ಮುಖ ತೊಳೆದು, ಅಡುಗೆ ಮನೆ ಹೊಕ್ಕಾಗ, ಮುಚ್ಚಿಟ್ಟ ಪಾತ್ರೆಗಳು ನೈಟ್‌ ಬಲ್ಬ್‌ನ ಬೆಳಕಿನಲ್ಲಿ ಮಂದಗೇ ಪ್ರತಿಫಲಿಸುತ್ತವೆ. ಅಪರಾತ್ರಿಯಲ್ಲಿ ಊಟ ಮಾಡಲು ಮನಸ್ಸಾಗುವುದಿಲ್ಲ. ಊಟ ಮಾಡದಿದ್ದರೆ ದಿನಕ್ಕೆ ಒಂದೇ ಹೊತ್ತು ಉಂಡಂತಾದೀತೆಂಬ ಅಳುಕಿಗೆ ಒಂದಿಷ್ಟು ತಿನ್ನುತ್ತೇನೆ. ನಿದ್ದೆ ಎಂಬುದು ಮುನಿದು ವರ್ಷಗಳೇ ಆದವು. ಓದುವ ಕೋಣೆಗೆ ಹೋಗಿ ಕಂಪ್ಯೂಟರ್‌ ಆನ್‌ ಮಾಡುತ್ತೇನೆ. ಜೊತೆಗೆ ಪುಸ್ತಕ. ಮೇಲ್‌ ನೋಡಿ, ನಾಳೆಯ ಬರವಣಿಗೆಗೆ ಒಂದಿಷ್ಟು ವಿಷಯ ಸಂಗ್ರಹಿಸಿ, ತೆರೆದಿಟ್ಟ ಪುಸ್ತಕದ ಕೆಲವು ಹಾಳೆಗಳ ಮೇಲೆ ಕಣ್ಣಾಡಿಸುವಾಗ, ಮೈಮನಸ್ಸು ದಣಿದಿರುತ್ತದೆ. 


ಆದರೂ ನಿದ್ದೆ ಬರುವುದಿಲ್ಲ. ಕುಡಿದ, ದಣಿದ, ಖಿನ್ನಗೊಂಡ ಮನಸ್ಸಿಗೆ ಒಂಚೂರಾದರೂ ನಿದ್ದೆ ಬೇಕು. ಆದರೆ, ಅದನ್ನು ಯಾರೋ ಕದ್ದುಬಿಟ್ಟಿದ್ದಾರೆ. 


ರಾತ್ರಿ ೨ರ ಹೊತ್ತಿಗೆ ಹಾಸಿಗೆಯಲ್ಲಿ ಒರಗಿಕೊಂಡ ನಂತರವೂ ಮನಸ್ಸಿನ ರಿಂಗಣ ನಿಲ್ಲುವುದಿಲ್ಲ. ನಿದ್ದೆಯಲ್ಲೇ ಕನವರಿಸುವ ಮಗಳ ತಲೆ ಸವರಿ, ನೈಟ್‌ ಬಲ್ಬ್‌ನಲ್ಲಿ ವಿಚಿತ್ರವಾಗಿ ಕಾಣುವ ಗೋಡೆಗಳನ್ನು ನೋಡುತ್ತ ಯಾವುದೋ ಹೊತ್ತಿನಲ್ಲಿ ಕಣ್ಮುಚ್ಚಿರುತ್ತೇನೆ. ಹೆಂಡತಿ ಇಟ್ಟ ಐದು ಗಂಟೆ ಅಲಾರಾಮ್‌ ಸದ್ದಿಗೆ ಮತ್ತೆ ಎಚ್ಚರ. ರಾತ್ರಿ ಮುಗಿಯುವುದರೊಳಗೆ ದಿನವೊಂದು ಪ್ರಾರಂಭವಾಗಿರುತ್ತದೆ.


****


ಇನ್ನು ಸಾಕು ಅಂತ ಅಂದುಕೊಂಡೆ.


ಎಷ್ಟು ದಿನ ಅಂತ ಹೀಗೇ, ನಿದ್ದೆ, ಊಟ, ಉತ್ಸಾಹಗಳಿಲ್ಲದೇ ದಿನಗಳೆಯುವುದು? ನಾನು ಮತ್ತೆ ಮುಂಚಿನಂತಾಗಬೇಕು ಎಂಬ ಹಂಬಲ ಶುರುವಾಯ್ತು. ನನ್ನ ಖಿನ್ನತೆಗಳು ನನಗಿರಲಿ. ನನ್ನ ಹವ್ಯಾಸಗಳು ನನ್ನವು. ಉಕ್ಕಿದಾಗೊಮ್ಮೆ ಬರೆದೋ, ಮೌನವಾಗಿದ್ದುಕೊಂಡೋ ಜೀರ್ಣಿಸಿಕೊಂಡು, ಮತ್ತೆ ಹೊಸ ದಿನದ ಉತ್ಸಾಹದಲ್ಲಿ ಏಳುವಂತಾಗಬೇಕು ಎಂದು ನಿರ್ಧರಿಸಿದೆ. 


ನೆನಪುಗಳನ್ನೆಲ್ಲ ಹುಡುಕಿ ಹುಡುಕಿ ದೂರ ಮಾಡಿದೆ. ಹೊಸ ಕನಸುಗಳು ಮೊಳೆಯಲು ಬಿಡಲಿಲ್ಲ. ಮೊದಮೊದಲು ತೀರ ಕಷ್ಟವಾದರೂ, ಅಂದುಕೊಂಡಿದ್ದನ್ನು ಆಚರಣೆಗೆ ತಂದೆ. 


****


ಈಗ ನಾನು ಮತ್ತೆ ಒಂಟಿ. ಮತ್ತೆ ಮೌನಿ. ಕಳೆದುಹೋದವನಂತೆ ಇರುವುದು ರೂಢಿಯಾಗಿಬಿಟ್ಟಿದೆ. ನೀನು ತೀರಾ ಮೂಡಿಯಾಗುತ್ತಿದ್ದೀ ಎನ್ನುತ್ತಾರೆ ಹತ್ತಿರದವರು. 


ಮೋಡಿಗೆ ಒಳಗಾದವ ಮೂಡಿಯಾಗದೇ ಇನ್ನೇನು ಅಂತ ಅಂದುಕೊಂಡು ಸುಮ್ಮನಾಗುತ್ತೇನೆ.


ಮತ್ತದೇ ದಿನಚರಿ, ಕಚೇರಿ, ಮನೆ ದಾರಿ, ಅಪರಾತ್ರಿಯ ಊಟ, ಮಂಪರೆಂಬ ನಿದ್ದೆ.


ನಾನು ಬದಲಾದೆನಾ? ಬದಲಾಗಬಲ್ಲೆನಾ?


- ಚಾಮರಾಜ ಸವಡಿ


ಪ್ರೇಮ, ಯುದ್ಧ ಮತ್ತು ಚುನಾವಣೆಯಲ್ಲಿ ಎಲ್ಲವೂ ನ್ಯಾಯವೇ

25 Jan 2012

0 ಪ್ರತಿಕ್ರಿಯೆ

ಸಲ್ಮಾನ್‌ ರಶ್ದಿ

ಕೆಲವೊಬ್ಬರು ಏನು ಮಾಡಿದರೂ ವಿವಾದವಾಗುತ್ತದೆ. ಅವರು ಸೃಜನಶೀಲ ಕ್ಷೇತ್ರದಲ್ಲಿದ್ದರಂತೂ ವಿವಾದ ಇನ್ನಷ್ಟು ತೀವ್ರ. ಕನ್ನಡದ ಮಟ್ಟಿಗೆ ಆ ಕೀರ್ತಿ ಎಸ್.ಎಲ್. ಭೈರಪ್ಪ ಅವರದಾದರೆ, ಭಾರತೀಯ ಇಂಗ್ಲಿಷ್ ಬರಹಗಾರರ ಪೈಕಿ ಆ ಪಟ್ಟ ಸಲ್ಮಾನ್ ರಶ್ದಿಗೆ.

ಬಹುಶಃ, ದಿ ಸೆಟನಿಕ್ ವರ್ಸಸ್ ಕೃತಿಯನ್ನು ರಶ್ದಿ ಬರೆಯದೇ ಹೋಗಿದ್ದರೆ, ಅವರ ಪಾಲಿಗೆ ವಿವಾದಗಳಾಗಲಿ, ವಿವಾಹಗಳಾಗಲಿ ಈ ಪರಿ ಇರುತ್ತಿರಲಿಲ್ಲವೇನೋ. ಮುಸ್ಲಿಂ ಮನಃಸ್ಥಿತಿಯನ್ನು ಮಾತ್ರ ಕೆರಳಿಸುವಂಥ ಈ ಪುಸ್ತಕವನ್ನು ಮುಗಿಬಿದ್ದು ಮುಟ್ಟುಗೋಲು ಹಾಕಿಕೊಂಡ ಭಾರತ ಸರ್ಕಾರ, ರಶ್ದಿಗೆ ಜೀವಂತ ಇರುವಾಗಲೇ ಹುತಾತ್ಮನ ಪಟ್ಟ ಕಟ್ಟಿಬಿಟ್ಟಿತು.

ಅದರ ಮುಂದುವರಿದ ಅಧ್ಯಾಯವೇ ಜೈಪುರದ ಸಾಹಿತ್ಯ ಉತ್ಸವದಲ್ಲಿ ನಡೆದಿರುವ ಪ್ರಹಸನ. ಅಲ್ಲಿ ನಡೆಯಬೇಕಾಗಿದ್ದುದು ಸಾಹಿತ್ಯದ ಚರ್ಚೆ. ಆದರೆ, ನಡೆದಿದ್ದು ಮತ್ತು ನಡೆಯುತ್ತಿರುವುದು ಲೇಖಕ ಸಲ್ಮಾನ್ ರಶ್ದಿ ಉತ್ಸವದಲ್ಲಿ ಪಾಲ್ಗೊಳ್ಳಬೇಕೆ ಬೇಡವೆ ಎಂಬುದರ ಬಗ್ಗೆ. ಅಂತರ್‌ರಾಷ್ಟ್ರೀಯ ಮಟ್ಟದ ವೇದಿಕೆಯನ್ನು ಯಾವ ರೀತಿ ದುರ್ಬಳಕೆ ಮಾಡಬಹುದು ಮತ್ತು ಅದರ ಉದ್ದೇಶವನ್ನು ಹಾಳು ಮಾಡಬಹುದು ಎಂಬುದಕ್ಕೆ ಇದು ಅತ್ಯುತ್ತಮ ನಿದರ್ಶನ.

ಸರ್ಕಾರಿ ಪಕ್ಷಪಾತ

ಸಲ್ಮಾನ್ ರಶ್ದಿ ಅವರ ದಿ ಸೆಟನಿಕ್ ವರ್ಸ್‌ಸ್ ಕೃತಿಗಿಂತ ನೇರವಾಗಿರುವ ಅನೇಕ ಕೃತಿಗಳು ಎಲ್ಲಾ ಧರ್ಮ, ಜಾತಿ ಹಾಗೂ ಉಪಜಾತಿಗಳ ವ್ಯಕ್ತಿ ಹಾಗೂ ಬದುಕಿಗೆ ಸಂಬಂಧಿಸಿದಂತೆ ಬಹುತೇಕ ಎಲ್ಲಾ ಭಾಷೆಗಳಲ್ಲಿ ಬಂದಿವೆ. ಈಗಲೂ ಈ ಕೃತಿ ವಿದೇಶಗಳಲ್ಲಿ ಮುಕ್ತವಾಗಿ ಮಾರಾಟವಾಗುತ್ತಲೂ ಇದೆ. ಒಂಚೂರು ಹುಡುಕಿದರೆ, ಇದರ ಲಿಖಿತ ಭಾಗಗಳು ಅಂತರ್ಜಾಲದಲ್ಲೂ ಸಿಕ್ಕಾವು. ಮುಕ್ತ ವ್ಯವಸ್ಥೆಯಲ್ಲಿ ಇಂಥ ನಿರ್ಬಂಧಗಳೇ ತಮಾಷೆಯ ಸಂಗತಿ. ಆದರೆ, ಸರ್ಕಾರಕ್ಕೆ ಇದು ಸುಲಭವಾಗಿ ಅರ್ಥವಾಗುವುದಿಲ್ಲ. ಹಾಗೆ ಅರ್ಥವಾಗಿದ್ದರೆ, ಸಲ್ಮಾನ್ ರಶ್ದಿಗೆ ಜೈಪುರಕ್ಕೆ ಬಾರದಂತೆ ಮಾಡುವ ಹುಚ್ಚಾಟ ನಡೆಯುತ್ತಿರಲಿಲ್ಲ.

ಧಾರ್ಮಿಕ ಕಾರಣಗಳಿಗಾಗಿ ಸೃಜನಶೀಲ ಕೃತಿಗಳನ್ನು ಅತ್ಯುತ್ಸಾಹದಿಂದ ನಿಷೇಧ ವಿಧಿಸುವ ಭಾರತ ಅದೇ ಮಾನದಂಡವನ್ನು ಅವುಗಳ ಸೃಷ್ಟಿಕರ್ತರಿಗೂ ವಿಸ್ತರಿಸಿರುವುದು ಮಾತ್ರ ನಿಜಕ್ಕೂ ದುರಂತ. ರಶ್ದಿ ವಿಷಯಕ್ಕೆ ಸಂಬಂಧಿಸಿದಂತೆ ಕೇಂದ್ರ ಮತ್ತು ರಾಜಸ್ತಾನ ಸರ್ಕಾರಗಳು ನಡೆದುಕೊಳ್ಳುತ್ತಿರುವ ರೀತಿ ಅಪ್ಪಟ ಹುಚ್ಚಾಟವೇ. ಏಕೆಂದರೆ, ಸಲ್ಮಾನ್ ರಶ್ದಿಯಂತೆ ವಿವಾದ ಹುಟ್ಟಿಸಿದ ಇನ್ನೊಬ್ಬ ಮುಸ್ಲಿಂ ಲೇಖಕಿ ತಸ್ಲೀಮಾ ನಸ್ರೀನ್ ಮಾತ್ರ ಈ ಯಾವ ಕಟ್ಟುಪಾಡುಗಳೂ, ನಿಷೇಧಗಳೂ ಇಲ್ಲದೆ ಆರಾಮವಾಗಿ ಓಡಾಡಿಕೊಂಡಿದ್ದಾಳೆ. ಒಂದೇ ಧರ್ಮಕ್ಕೆ ಸೇರಿದ ಇಬ್ಬರು ವಿವಾದಿತ ವ್ಯಕ್ತಿಗಳ ನಡುವೆ ಸರ್ಕಾರ ಅನುಸರಿಸುತ್ತಿರುವುದು ಇದೆಂಥ ತಾರತಮ್ಯ? ಕೇಂದ್ರ ಸರ್ಕಾರ ನಿಷೇಧ ಹೇರಿದ್ದು ರಶ್ದಿ ಅವರ ಸೆಟನಿಕ್ ವರ್ಸಸ್ ಕೃತಿಗೆ ಮಾತ್ರವೇ ಹೊರತು ರಶ್ದಿಗೆ ಅಲ್ಲವಲ್ಲ? ಹಾಗಿರುವಾಗ, ರಶ್ದಿ ಮೇಲೇಕೆ ಕೆಂಗಣ್ಣು? 

ಎಲ್ಲಿಂದ ಬೆದರಿಕೆ?

ಸರ್ಕಾರ ತನ್ನ ಈ ಹುಚ್ಚಾಟಗಳಿಗೆ ಹುಡುಕುತ್ತಿರುವ ಸಮರ್ಥನೆಗಳಾದರೂ ಎಂಥವು? ರಶ್ದಿ ಜೀವಕ್ಕೆ ಬೆದರಿಕೆ ಇದೆ ಎಂಬುದು ಮೊದಲ ಸಮರ್ಥನೆ. ಸರಿ, ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಅವರು ಪಾಲ್ಗೊಳ್ತಾರೆ ಬಿಡಿ ಎಂಬ ಉತ್ತರವನ್ನು ಸಂಘಟಕರು ನೀಡಿದರು. ಆದರೆ, ಸರ್ಕಾರ ಅದಕ್ಕೂ ನಿಷೇಧ ಹೇರುವ ಮೂಲಕ, ತನ್ನ ಕೃತ್ಯ ನಿಜಕ್ಕೂ ಹುಚ್ಚಾಟ ಎಂದು ಸಾಬೀತುಪಡಿಸಿತು.

ಈ ಮಧ್ಯೆ, ಜೀವ ಬೆದರಿಕೆ ಎಂಬುದು ವದಂತಿ ಎನ್ನಲಾಯಿತು. ಬೆದರಿಕೆ ಬಂದಿದ್ದು ಎಲ್ಲಿಂದ ಎಂಬುದು ಇವತ್ತಿಗೂ ಸ್ಪಷ್ಟವಾಗಿಲ್ಲ. ಹೀಗಿದ್ದರೂ, ಜೀವ ಬೆದರಿಕೆ ಇತ್ತು ಎಂದೇ ಸರ್ಕಾರ ವಾದಿಸುತ್ತಿದೆ. ಒಂದು ವೇಳೆ ಈ ವಾದ ನಿಜವೇ ಆಗಿದ್ದರೆ, ಭಾರತಕ್ಕಿಂತ ಅಪಾಯಕಾರಿ ದೇಶ ಇನ್ನೊಂದಿರಲಾರದು. ಏಕೆಂದರೆ, ಇಲ್ಲಿ ರಶ್ದಿ ಬಂದರೆ ಜೀವ ಬೆದರಿಕೆ, ಬದುಕಿದ್ದಾಗ ಎಂ.ಎಫ್. ಹುಸೇನ್ ಬಂದಿದ್ದರೂ ಜೀವ ಬೆದರಿಕೆ. ಆದರೆ, ಅವರೆಲ್ಲ ವಿದೇಶಗಳಲ್ಲಿದ್ದರೆ ಅಲ್ಲಿ ಮಾತ್ರ ಯಾವ ಬೆದರಿಕೆಯೂ ಇಲ್ಲ ಎಂಬಂತಿದೆ ಸರ್ಕಾರದ ವಾದ.

ಬಾಂಬಿಟ್ಟು ಮುಂಬೈ ಸೇರಿದಂತೆ ದೇಶದ ಹಲವಾರು ನಗರಗಳಲ್ಲಿ ಸಾವಿರಾರು ಅಮಾಯಕರ ಜೀವ ಕಳೆದ ದಾವೂದ್ ಇಬ್ರಾಹಿಂ ಇವತ್ತಿಗೂ ಪಕ್ಕದ ದೇಶ ಪಾಕಿಸ್ತಾನದಲ್ಲಿ ಚೆನ್ನಾಗೇ ಇದ್ದಾನೆ. ಅದೇ ದೇಶದಿಂದ ಇಲ್ಲಿಗೆ ಕದ್ದುಮುಚ್ಚಿ ಬಂದು, ಮಾರಣಹೋಮ ನಡೆಸಿ ಬಂಧಿತನಾಗಿರುವ ಅಜ್ಮಲ್ ಕಸಬ್ ನಮ್ಮ ದೇಶದೊಳಗೆ ಈಗಲೂ ಆರಾಮವಾಗಿದ್ದಾನೆ. ಅವರ‍್ಯಾರಿಗೂ ಇಲ್ಲದ ಜೀವ ಬೆದರಿಕೆ ತನ್ನ ಪಾಡಿಗೆ ತಾನು ಬಂದು ಸಾಹಿತ್ಯೋತ್ಸವದಲ್ಲಿ ಪಾಲ್ಗೊಳ್ಳಬೇಕೆನ್ನುವ ಸಲ್ಮಾನ್ ರಶ್ದಿಗೆ ಏಕೆ ಬರುತ್ತದೆ? ಒಂದು ವೇಳೆ ಜೀವ ಬೆದರಿಕೆ ಇದೆ ಎನ್ನುವುದಾದರೂ, ಸೀಮಿತ ಅವಧಿಗೆ ಮಾತ್ರ ಬಂದುಹೋಗುವ ರಶ್ದಿಗೆ ಭದ್ರತೆ ಒದಗಿಸುವುದು ಸರ್ಕಾರಕ್ಕೆ ಸಾಧ್ಯವಿಲ್ಲವೆ?

ಧಾರ್ಮಿಕ ಪಕ್ಷಪಾತ

ಇವತ್ತು ರಶ್ದಿ ವಿರುದ್ಧ ಪ್ರತಿಭಟನೆ ನಡೆಸುವ ಜನ, ಬಾಂಬಿಟ್ಟು ಅಮಾಯಕರನ್ನು ಕೊಂದ ದಾವೂದ್ ಇಬ್ರಾಹಿಂ ವಿರುದ್ಧವಾಗಲಿ, ಹೋಟೆಲ್‌ಗೆ ನುಗ್ಗಿ ಮಾರಣಹೋಮ ನಡೆಸಿದ ಅಜ್ಮಲ್ ಕಸಬ್ ವಿರುದ್ಧವಾಗಲಿ ಇದೇ ಉತ್ಸಾಹದಿಂದ ಪ್ರತಿಭಟನೆ ಮಾಡಲಿಲ್ಲ. ಅವರಿಗೆ ಜೀವ ಬೆದರಿಕೆ ಹಾಕಲಿಲ್ಲ. ಅದು ಬಿಡಿ, ಜೀವನದ ಇಳಿಗಾಲದಲ್ಲಿ ಇಸ್ಲಾಂಗೆ ಮತಾಂತರಗೊಂಡ ಕೇರಳ ಮೂಲದ ಇಂಗ್ಲಿಷ್ ಬರಹಗಾರ್ತಿ ಕಮಲಾದಾಸ್‌ಗೂ ಇವರಿಂದ ಜೀವಬೆದರಿಕೆ ಬರಲಿಲ್ಲ. ತನ್ನ ಕೆಂಡದಂಥ ಸಾಹಿತ್ಯವನ್ನು ಆಕೆ ಬರೆದಿದ್ದು ಮತಾಂತರಗೊಳ್ಳುವ ಮೊದಲು ಎಂಬ ಕಾರಣಕ್ಕೆ ಕಮಲಾದಾಸ್‌ಗೆ ದಿಗ್ಬಂಧನಗಳು, ಫತ್ವಾಗಳು, ಪ್ರತಿಭಟನೆಗಳು ಎದುರಾಗಲಿಲ್ಲ. ಇವತ್ತಿಗೂ ಬಾಂಬ್ ಸ್ಫೋಟದಂಥ ನೀಚ ಕೃತ್ಯ ಎಸಗಿದ ನೂರಾರು ಜನ ಜೈಲುಗಳಲ್ಲಿದ್ದಾರೆ, ಶಿಕ್ಷೆಯ ವಿವಿಧ ಹಂತಗಳಲ್ಲಿದ್ದಾರೆ. ಅವರ‍್ಯಾರ ವಿರುದ್ಧವೂ ಪ್ರತಿಭಟನೆಗಳು ನಡೆಯಲಿಲ್ಲ. ಅವರಿಗೆ ಜೀವ ಬೆದರಿಕೆ ಬರಲಿಲ್ಲ. ಹಾಗಿದ್ದ ಮೇಲೆ, ಸಲ್ಮಾನ್ ರಶ್ದಿ ವಿಷಯಕ್ಕೆ ಮಾತ್ರ ಈ ಸಮಸ್ಯೆ ಏಕೆ?

ಚುನಾವಣೆ ಎಂಬ ಮಾಯೆ

ಹಾಗೆ ನೋಡಿದರೆ ಸಮಸ್ಯೆ ಇರುವುದು ಭಾರತ ಸರ್ಕಾರಕ್ಕೆ. ಸರಿಯಾಗಿ ಹೇಳಬೇಕೆಂದರೆ, ಯುಪಿಎ ಸರ್ಕಾರಕ್ಕೆ. ದೇಶದ ಐದು ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆಗಳು ನಡೆಯುತ್ತಿರುವ ಈ ಸಂದರ್ಭದಲ್ಲಿ, ಧಾರ್ಮಿಕ ಅಲ್ಪಸಂಖ್ಯಾತರ ಇಚ್ಛೆಗೆ ವಿರುದ್ಧವಾಗಿ ಹೋಗುವ ಮನಸ್ಸು ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರಕ್ಕೆ ಇಲ್ಲ. ಅಲ್ಪಸಂಖ್ಯತರನ್ನು ಓಲೈಸಲು ಸಲ್ಮಾನ್ ರಶ್ದಿ ಒಂದು ನೆಪ ಮಾತ್ರ. ಇದೇ ಉದ್ದೇಶಕ್ಕಾಗಿ ಜೈಲುಗಳಲ್ಲಿ ವರ್ಷಗಟ್ಟಲೇ ಉಗ್ರರನ್ನು ಸಾಕುತ್ತಿರುವ ಕೇಂದ್ರ ಸರ್ಕಾರಕ್ಕೆ, ಒಬ್ಬ ರಶ್ದಿಯನ್ನು ದೇಶದೊಳಗೆ ಬರುವಂತೆ ತಡೆಯುವುದು ಅದ್ಯಾವ ಕಷ್ಟ?

ಹೀಗಾಗಿ ಸಲ್ಮಾನ್ ರಶ್ದಿ ಭಾರತಕ್ಕೆ ಬರಲಾಗದು. ಆತನಿರಲಿ, ವಿಡಿಯೋ ಮೂಲಕ ಆತನ ಪಾಲ್ಗೊಳ್ಳುವಿಕೆಗೂ ಅವಕಾಶ ಸಿಗದು. ಪ್ರೇಮ ಮತ್ತು ಯುದ್ಧದಲ್ಲಷ್ಟೇ ಏಕೆ, ಬಹುಶಃ ಚುನಾವಣೆಯಲ್ಲಿಯೂ ಎಲ್ಲವೂ ನ್ಯಾಯವೇ ಇರಬೇಕು. ಅದಕ್ಕೆ ರಶ್ದಿ ಪ್ರಸಂಗವೇ ಉತ್ತಮ ನಿದರ್ಶನ.

- ಚಾಮರಾಜ ಸವಡಿ

ಏಕೆ ಇಷ್ಟವಾಗುತ್ತಾರೋ...

10 Dec 2011

1 ಪ್ರತಿಕ್ರಿಯೆ
ಬೆಳಿಗ್ಗೆ ಬೇಗ ಏಳಬೇಕು
ಅಂತ ಮಲಗಿದಾಗ
ಕನಸಿನ ತುಂಬ
ಅಲಾರಾಂ ಮೊಳಗುವ ಸದ್ದು

***
 
ಚೆಂದದ ಕವಿತೆ
ಬರೆಯಲು ಕೂತರೆ
ಪೆನ್ನು ಮಂಕಾಗುತ್ತದೆ
ಕವಿತೆ ನಗುತ್ತದೆ
 
***
 
ಒಂದೇ ಒಂದು ಕನಸಿತ್ತು
ಅದು ನನಸಾಗಲೇ ಇಲ್ಲ

ಈಗಲೂ ನನ್ನ ಬಳಿ ಉಳಿದಿದ್ದು
ಆ ಕನಸೊಂದೇ
 
***
ಇಬ್ಬರು ಮಕ್ಕಳು
ಒಂದು ಕವಿತೆ

ಅದೂ ಮಗುವೇ!
 
***
 
ಕನಸಿಗೂ ಒಂದು ಮನಸಿದೆ
ಅದು ಕೈಗೆ ಸಿಗದಂತಿದೆ
 
***
 
ಕಣ್ಣೀರ ಹನಿಗಳ ಲೆಕ್ಕವಿಟ್ಟೆಯಾ?
ನೀನು ಕವಿಯೂ ಅಲ್ಲ, ಪ್ರೇಮಿಯೂ ಅಲ್ಲ
 
***
 
ಎಲ್ಲಿಂದಲೋ ಬಂದವರು
ಏಕೆ ಇಷ್ಟವಾಗುತ್ತಾರೋ!
 
***

- ಚಾಮರಾಜ ಸವಡಿ

ಮರೆಯಬೇಕಿದೆ ಎಲ್ಲಾ...

3 Oct 2011

3 ಪ್ರತಿಕ್ರಿಯೆ
ಎಲ್ಲಾ ಮರೆಯಬೇಕಿದೆ
ಹಾಗಂತ ಪದೆ ಪದೆ ನೆನಪಿಸಿಕೊಳ್ಳುತ್ತಿದ್ದೇನೆ

ಅಲಾರಾಂ ಅದುಮಿದ್ದೇನೆ
ಕರೆಗಂಟೆ ಕಿತ್ತಿದ್ದೇನೆ
ಗೇಟಿಗೆ ಹಾಕಿದ್ದ ಪತ್ರದ ಡಬ್ಬವನ್ನೂ ಬಿಚ್ಚಿಟ್ಟಾಗಿದೆ
ಯಾರೂ ಬರಬೇಡಿ
ನಾನು ಒಳಗಿಲ್ಲ

ಮುಚ್ಚಿದ ಬಾಗಿಲೊಳಗಿನ ಮನೆಯಲ್ಲಿ
ಬೆಳಕಿಲ್ಲ; ದೀಪ ಹಾಕುವಂತಿಲ್ಲ
ಫ್ಯಾನು, ಫೋನು, ಕುಕ್ಕರ್
ಊಹೂಂ
ನಲ್ಲಿ ತಿರುಗಿಸುವಂತಿಲ್ಲ,
ಹಾಡು ಗುನುಗುವಂತಿಲ್ಲ
ಒಳಗಿದ್ದೇನೆಂಬುದು ಹೊರಹೋಗುವಂತಿಲ್ಲ

ಸದ್ದೇ ಮಾಡದೇ ಕೂತರೂ
ಸೊಳ್ಳೆಗಳು ಮಾತಾಡಿಸುತ್ತವೆ
ಬಾಗಿಲು ಮುಚ್ಚಿದ್ದರೂ
ನೆನಪ ಕಿಟಕಿಗಳು ತೆರೆದುಕೊಳ್ಳುತ್ತವೆ
ಬೇಡವೆಂದ ಬೆಳಕು, ಶಬ್ದ
ಒಳ ಬಂದು ‘ಏನೀಗ?’ ಎಂಬಂತೆ
ಕೆಣಕುತ್ತವೆ, ಕೆರಳಿಸುತ್ತವೆ

ದುರುಗುಟ್ಟಿ ನೋಡಿದರೂ ಬೆದರುವುದಿಲ್ಲ
ಹೋಗಾಚೆ ಎಂದು ಒರಲಿದರೂ ಕೇಳುವುದಿಲ್ಲ
ಮರೆತ ಹಾಡುಗಳನ್ನು ನೆನಪಿಸಿ,
ಒರೆಸಿಹಾಕಿದ ಚಿತ್ರಗಳನ್ನು
ಎಲ್ಲೆಡೆ ಹರವುತ್ತವೆ; ಮನಸ ಕದಡುತ್ತವೆ

ಎಲ್ಲ ಮರೆಯಬೇಕೆಂದರೂ
ಎಲ್ಲಾ ನೆನಪಾಗುತ್ತದೆ
ಆ ಮಾತು, ಧ್ವನಿ, ಸಂದೇಶ, ಕನಸು
ಕವನ, ಕದನ, ಕಾಮನೆ, ಭಾವನೆ
ಒಂದೇ ಎರಡೇ
ಲೆಕ್ಕದ ಬೆಂಬತ್ತಿ, ಸೋತು ಸೋತು
ಮತ್ತೆ ಸುಮ್ಮನೇ ಕೂಡುತ್ತೇನೆ

ಬಾಗಿಲ ಮೇಲೆ ಬೆರಳಾಡಿಸಿದ ಸದ್ದು...
 

ಅದನ್ನೇ ಕಾಯುತ್ತಿದ್ದವನಂತೆ ಎದ್ದು
ಬಾಗಿಲು ತೆರೆದರೆ;

ಅವಳಿಲ್ಲ!

ಮರೆಯಬೇಕೆಂಬ, ಮರೆತ ಸಂಕಲ್ಪ
ಮತ್ತೆ ನೆನಪಾಗುತ್ತದೆ

- ಚಾಮರಾಜ ಸವಡಿ

ಒಂದು ಕನಸು ಹುಡುಕುತ್ತಾ...

21 Sept 2011

4 ಪ್ರತಿಕ್ರಿಯೆ
ಮಗುವೊಂದು ಮಲಗುತ್ತಿತ್ತು.

ಪಕ್ಕದಲ್ಲಿ ಮಲಗಿಕೊಂಡು ಮಗುವಿನ ಮಾತುಗಳನ್ನು ಕೇಳುತ್ತಿದ್ದ ಆತ. ಶಾಲೆಯಲ್ಲಿ ಆಕೆಯ ಮಿಸ್‌ ಹೇಳಿದ್ದು, ಸಹಪಾಠಿಗಳ ಬಟ್ಟೆ, ಊಟದ ಡಬ್ಬ, ತರಹೇವಾರಿ ಚಿತ್ರಗಳಿರುವ ಆಕೆಯ ಶಾಲೆಯ ಕೊಠಡಿ, ಮಿಸ್‌ ಹೇಳಿಕೊಟ್ಟಿದ್ದ ಡ್ರಿಲ್‌ ಎಲ್ಲವನ್ನೂ ಗಿಣಿಪಾಠ ಒಪ್ಪಿಸುತ್ತಿದ್ದ ಮಗು, ನಿನಗೆ ಡ್ರಿಲ್‌ ಬರುತ್ತಾ ಅಪ್ಪ? ಎಂದಳು.

ಈತ ಇಲ್ಲವೆಂದ.

ಆಕೆ ತಕ್ಷಣ ಎದ್ದು ನಿಂತು, ಸಾವಧಾನ್‌, ವಿಶ್ರಾಮ್‌ ತೋರಿಸಿದಳು. ಒಂದೆರಡು ಎಕ್ಸರ್‌ಸೈಜ್‌ಗಳ ಪ್ರದರ್ಶನವೂ ನಡೆಯಿತು. ನೀನು ಮಾಡು ನೋಡೋಣ ಎಂದು ಸವಾಲೆಸೆದಳು. ಇವನಿಗೆ ಆಗಲೇ ಅರ್ಧ ನಿದ್ದೆ. ನಾಳೆ ಬೆಳಿಗ್ಗೆ ನೀನೇ ಹೇಳಿಕೊಡುವೆಯಂತೆ ಎಂದ. ಮಗಳು ಮತ್ತೆ ಮಲಗಿದಳು. ಮತ್ತೆ ಮಾತು.

ಹೊರಗೆ ಸಣ್ಣಗೇ ಶುರುವಾಗಿದ್ದ ಮಳೆ ಜೋರಾಯಿತು. ಅರೆತೆರೆದಿದ್ದ ಕಿಟಕಿಯ ಮೂಲಕ ತಣ್ಣನೆಯ ಗಾಳಿ ಒಳ ನುಗ್ಗಿದಾಗ ಫ್ಯಾನ್‌ ಆಫ್‌ ಮಾಡಿದ್ದಾಯ್ತು. ಅಪ್ಪಾ ನನಗೆ ಚಳಿ ಎಂದಳು ಮಗಳು. ಈತ ಬೆಚ್ಚಗೆ ಹೊದಿಕೆ ಹೊದಿಸಿದ. ಸರಿ, ಈಗ ರಗ್ ಹೊತ್ಕೊಂಡಿದ್ದೀನಿ. ನಾಳೆ ಸ್ಕೂಲಿಗೆ ಹೋಗುವಾಗ ಚಳಿ ಆದರೆ ಏನು ಮಾಡಲಿ? ಎಂದಿತು ಮಗು.

ನಾಳೆ ನಿಂಗೆ ಸ್ವೆಟರ್‌ ಕೊಡಿಸ್ತೀನಿ ಎಂದು ಈತ ಭರವಸೆ ಕೊಟ್ಟ. 

ಈಗ ಮಾತು ಸ್ವೆಟರ್‌ ಕಡೆ ತಿರುಗಿತು. ಎಂಥ ಬಣ್ಣದ ಸ್ವೆಟರ್‌ ತನಗಿಷ್ಟ? ತನ್ನ ಗೆಳತಿಯರು ಎಂತೆಂಥ ಬಣ್ಣದ ಸ್ವೆಟರ್‌ ಇಟ್ಟುಕೊಂಡಿದ್ದಾರೆ ಎಂದೆಲ್ಲ ಮಾತಾಡಿದ ಮಗು, ಸ್ವೆಟರ್‌ ತರೋವಾಗ ನನ್ನನ್ನೂ ಕರ‍್ಕೊಂಡು ಹೋಗ್ತೀಯಾ? ಎಂದಿತು. ಏಕೆ ಎಂದ ಈತ. ನನಗಿಷ್ಟವಾದ ಬಣ್ಣದ ಸ್ವೆಟರ್‌ ನಾನೇ ಆರಿಸಬೇಕಲ್ವಾ? ಎಂದು ಕೇಳಿತು ಮಗು. ಈತ ಹೂಂ ಅಂದ.

ನಂಗೆ ಚಳಿಯಾದ್ರೆ ಸ್ವೆಟರ್‌ ಹಾಕ್ಕೊಂಡು ಮಲ್ಕೋಬಹುದು ಎಂದು ಅದಕ್ಕೆ ರೋಮಾಂಚನ. ನಿಜ್ವಾಗ್ಲೂ ನಂಗೆ ಸ್ವೆಟರ್‌ ಕೊಡಿಸ್ತೀಯಾ ಅಪ್ಪ? ಎಂದು ಮತ್ತೆ ಕೇಳಿ ಖಚಿತಪಡಿಸಿಕೊಂಡಿತು. ಮರುದಿನ ಸ್ವೆಟರ್‌ ಖರೀದಿ ಮಾಡುವ ಬಗ್ಗೆಯೇ ಮಾತಾಡುತ್ತ ಹಾಗೇ ನಿದ್ದೆಗೆ ಜಾರಿತು. 

ಈತನಿಗೆ ನಿದ್ದೆ ಬರಲಿಲ್ಲ. ಹಾಗಂತ ಪೂರ್ತಿ ಎಚ್ಚರದಲ್ಲೂ ಇರಲಿಲ್ಲ. 

ಹೊರಗೆ ಜೋರು ಮಳೆ. ಇತ್ತ ಮಗುವಿಗೆ ಜೋರು ನಿದ್ರೆ. 

ಬೀಸಿದ ತಣ್ಣನೆಯ ಗಾಳಿಗೆ ಮಂಪರು ಹಾರಿಹೋಗಿ ಎಚ್ಚರವಾಯಿತು. ಎದ್ದು ಕಿಟಕಿಯ ಹತ್ತಿರ ಬಂದು ಮಳೆ ನೋಡುತ್ತ ನಿಂತ. ಮುಂಗಾರಿನ ಕೊನೆಯ ಮಳೆ ಇದು ಎಂಬಂತೆ ಆಗಸ ಸೋರುತ್ತಿತ್ತು. 

ಬೀದಿ ದೀಪದ ಮೇಲೆ ನೀರಿನ ಹನಿಗಳು ಬಿದ್ದು  ಸಿಡಿಯುತ್ತಿದ್ದ ದೃಶ್ಯ ಗಮನ ಸೆಳೆಯಿತು. ಡಾಂಬರು ರಸ್ತೆಯುದ್ದಕ್ಕೂ ತರಹೇವಾರಿ ವಿನ್ಯಾಸದ ಹರಿಯುವ ನೀರು. ಅವಸರಕ್ಕೆ ಬಿದ್ದಂತೆ ಸರಿದು ಹೋಗುತ್ತಿದ್ದ ನೀರಿಗೆ ಹಳದಿ ಬೀದಿ ದೀಪದ ಚಿತ್ತಾರ. ನಿಲ್ಲುವುದಿಲ್ಲವೇನೋ ಎಂಬಂತೆ ಒಂದೇ ರೀತಿ ಬೀಳುತ್ತಿದ್ದ ಮಳೆ ಸಂಮೋಹನ ಮಾಡುವಂತಿತ್ತು. ಗುಡುಗಿಲ್ಲ, ಮಿಂಚಿಲ್ಲ, ಸಿಡಿಲುಗಳಿಲ್ಲ. ಕೇವಲ ಶುದ್ಧ ಜೋರು ಮಳೆ. ಸೈನಿಕರಂತೆ ಒಂದೇ ರೀತಿ ಕಾಣುವ ಮಳೆಯ ಹಳದಿ ಎಳೆಗಳು. ಹರಿಯುವ ನೀರಿನ ಮೇಲ್ಮೈಗೆ ಅಪ್ಪಳಿಸಿದಾಗ ಆಗುತ್ತಿದ್ದ ಸೊಗಸಾದ ಕುಳಿಗಳು. ಅವುಗಳ ಒಡಲಿಂದ ಪಕ್ಕಕ್ಕೆ ಛಲ್ಲನೇ ಸಿಡಿಯುವ ಮರಿ ಹನಿಗಳು. ರಸ್ತೆಯುದ್ದಗಲಕ್ಕೂ ಮಳೆ ಹನಿಗಳು ಹರಿಯುವ ನೀರಿನ ಮೇಲೆ ಮೂಡಿಸುತ್ತಿದ್ದ ಸಾವಿರಾರು ನೀರ ಕುಳಿಗಳು. 

ಈತ ಮಂತ್ರಮುಗ್ಧನಂತೆ ಅವನ್ನೇ ನೋಡುತ್ತ ನಿಂತ. 

ರಾತ್ರಿಯ ನೀರವತೆಯ ಜಾಗದಲ್ಲೀಗ ಧಾರಾಕಾರವಾಗಿ ಬೀಳುತ್ತಿದ್ದ ಮಳೆಯ ಶಬ್ದ. ಕಿವಿಗೆ ಹಿತವಾಗಿಸುವ, ಕಣ್ಣಿಗೆ ತಂಪೆನಿಸುವ ಚೇತೋಹಾರಿ ದೃಶ್ಯ. ಎದುರಿಗೆ ಕಾಣುತ್ತಿದ್ದ ಮನೆಗಳ ಕಿಟಕಿಗಳಿಂದ ಬೆಳಕು ಬರುತ್ತಿಲ್ಲ. ಎಲ್ಲಾ ಮಲಗಿರಬೇಕು. ಅಥವಾ ಮಲಗಿದ್ದುಕೊಂಡೇ ಮಳೆಯ ಗಾನ ಕೇಳುತ್ತಿರಬೇಕು. ಅಥವಾ ಮಳೆ ಗಾನ ಕೇಳುತ್ತ ಮಲಗುತ್ತಿರಬೇಕು.

ನಾನೂ ಮಲಗಬೇಕು ಎಂದುಕೊಂಡ. ಮಳೆ ನಿಲ್ಲುವ ಮುನ್ನವೇ, ಅದರ ವಿಶಿಷ್ಟ ಗಾನ ಕೇಳುತ್ತ ನಿದ್ದೆಗೆ ಜಾರಬೇಕು. ಸ್ವೆಟರ್‌ ಕನಸು ಕಾಣುತ್ತ ಮಲಗಿದ ಮಗಳಂತೆ, ನಾನೂ ಚೆಂದನೆಯ ಕನಸು ಕಾಣುತ್ತ ಮಲಗಬೇಕೆಂದುಕೊಳ್ಳುತ್ತ ವಾಪಸ್ ಬಂದ. 


ತಕ್ಷಣ ನಿದ್ರೆ ಬರಲಿಲ್ಲ. ಮಳೆಯ ಸದ್ದು ಹಾಗೇ ಇತ್ತು. ಮುಚ್ಚಿದ ಕಣ್ರೆಪ್ಪೆಯ ಒಳಗೆಲ್ಲ ಮಳೆಯ ಹನಿಗಳು ಉಂಟು ಮಾಡುತ್ತಿದ್ದ ಸಾವಿರ ಸಾವಿರ ನೀರಕುಳಿಗಳು. ಏನು ಕನಸು ಕಾಣಲಿ ಎಂದು ಯೋಚಿಸಿದ. 

ಆಕೆ ನೆನಪಾದಳು. ಆಕೆಯ ಸ್ನಿಗ್ಧ ಮುಖ ಕಣ್ಮುಂದೆ ಬಂದಿತು. ಮಿನುಗುವ ನಕ್ಷತ್ರದಂಥವಳು ಎಂದು ಮತ್ತೆ ಮತ್ತೆ ಅಂದುಕೊಂಡ. ಆಕೆಯ ಮುಂದೆ ಹಾಗೆ ಕರೆದರೆ ‘ಹುಚ್ಚ’ ಎಂಬಂತೆ ನೋಡಿಯಾಳು ಎಂಬುದು ಅರಿವಾಗಿ, ಮುಚ್ಚಿದ ಕಣ್ಣೊಳಗೇ ಸುಮ್ಮನಾದ. ಆಕೆಯೂ ಮಳೆ ನೋಡುತ್ತಿರಬಹುದೇ ಎಂಬ ಪ್ರಶ್ನೆ ಹುಟ್ಟಿತು. ಮಳೆಯ ಕುಳಿಗಳನ್ನು, ಹಳದಿ ಎಳೆಗಳನ್ನು, ಒಂದೇ ರೀತಿ ಬೀಳುತ್ತಿರುವ ಹಿತಕರ ಶಬ್ದವನ್ನು ಅನುಭವಿಸುತ್ತಿರಬಹುದೇ? 

ಇದ್ದಕ್ಕಿದ್ದಂತೆ ಮಗಳು ಕನವರಿಸಿದಳು. ಅಸ್ಪಷ್ಟ ಶಬ್ದಗಳು. ಬಹುಶಃ ಸ್ವೆಟರ್‌ ಕನಸು ಕಾಣುತ್ತಿರಬಹುದು ಅಂತ ಅಂದುಕೊಂಡ. ಪಕ್ಕಕ್ಕೆ ತಿರುಗಿ, ತಲೆ ನೇವರಿಸಿ, ತಾನು ಪಕ್ಕದಲ್ಲೇ ಇದ್ದೇನೆ ಎಂಬುದನ್ನು ಮನವರಿಕೆ ಮಾಡಿಕೊಟ್ಟ. ಆತುಕೊಂಡು ಮಲಗಿದ ಮಗು ಕನವರಿಕೆ ನಿಲ್ಲಿಸಿ ಮತ್ತೆ ಆಳ ನಿದ್ದೆಗೆ ಜಾರಿತು.

ಇವನಿಗೂ ಮಂಪರು. ಕನಸು ಕಾಣಬೇಕೆಂಬುದೂ ಮರೆತು ಹೋಗಿ ನಿಧಾನವಾಗಿ ನಿದ್ದೆಗೆ ಜಾರತೊಡಗಿದ. ಧಾರಾಕಾರವಾಗಿ ಬೀಳುತ್ತಿದ್ದ ಮಳೆಯ ಸದ್ದು, ಸಣ್ಣಗೇ ನುಗ್ಗುತ್ತಿದ್ದ ತಂಗಾಳಿ, ದಿನದ ಆಯಾಸ ಎಲ್ಲ ಸೇರಿ ನಿದ್ದೆ ಕವಿಯತೊಡಗಿತು. 

*****

ಬಹುಶಃ ದೆಹಲಿಯಿಂದ ಹಿಂತಿರುವಾಗ ಇರಬೇಕು. 

ಆಗಲೂ ಇಂಥದೇ ಒಂದು ರಾತ್ರಿ. ಮಳೆ ಬೀಳುತ್ತಿದ್ದಿಲ್ಲ ಎಂಬುದನ್ನು ಬಿಟ್ಟರೆ, ಮಳೆಯ ಸದ್ದಿನ ಜಾಗದಲ್ಲಿ ರೈಲು ಚಲಿಸುವ ವಿಶಿಷ್ಟ ಶಬ್ದ. ಏಕೋ ನಿದ್ದೆ ಬರಲಿಲ್ಲ ಎಂದು ರಾತ್ರಿ ಯಾವುದೋ ಜಾವ ಬರ್ಥ್‌‌ನಿಂದ ಕೆಳಗಿಳಿದಿದ್ದ. ಡಬ್ಬಿಯೊಳಗೆ ಎಲ್ಲೆಡೆ ಹರಡಿಕೊಂಡಿದ್ದ ಮಂಕು ನೀಲಿ ಬೆಳಕಲ್ಲಿ, ಮಲಗಿದ್ದ ಜನರೆಲ್ಲ ಶವಗಳಂತೆ, ಇಡೀ ರೈಲು ಚಲಿಸುವ ಶವಾಗಾರದಂತೆ ಭಾಸವಾಗಿ ಇದ್ದಕ್ಕಿದ್ದಂತೆ ಗಾಬರಿಯಾಗಿದ್ದ. ಹೇಗ್ಹೇಗೋ ಮಲಗಿದ್ದ ಜನರು ಥೇಟ್‌ ಶವಗಳಂತೆ ಕಾಣುತ್ತಿದ್ದರು. ಕೆಲವರ ಕಾಲುಗಳು ಸೀಟ್‌ನಿಂದ ಹೊರಗೆ ಬಂದಿದ್ದು, ಚಲಿಸುವ ರೈಲಿನ ಲಯಕ್ಕನುಗುಣವಾಗಿ ಅಲುಗುತ್ತಿದ್ದವು. 

ಇಳಿದವ ಹಾಗೇ ಕಕ್ಕಾವಿಕ್ಕಿಯಾಗಿ ನಿಂತುಬಿಟ್ಟಿದ್ದ. ಕಾಣುತ್ತಿರುವುದು ಕನಸೋ ಅಥವಾ ವಾಸ್ತವವೋ ಅರಿಯದೇ ದಿಗ್ಭ್ರಮೆಗೊಂಡಿದ್ದ. ಮಂಪರು ತಿಳಿಯಾದಂತೆ ತಾನಿರುವುದು ರೈಲಿನಲ್ಲಿ ಎಂಬುದು ಅರಿವಾಗಿತ್ತು. ಸಧ್ಯ... ಎಂದುಕೊಳ್ಳುತ್ತ ಟಾಯ್ಲೆಟ್‌ಗೆ ಹೋಗಿ ವಾಪಸ್‌ ಬಂದು ಮತ್ತೆ ಬರ್ಥ್‌ ಏರಿದ. 

ನಿದ್ದೆ ಬರಲಿಲ್ಲ. 

ಚಲಿಸುವ ಶವಾಗಾರ ಎಂಬ ಕಲ್ಪನೆ ಕೂತುಬಿಟ್ಟಿತ್ತು. ಬಹುಶಃ ಇಡೀ ಡಬ್ಬಿಯಲ್ಲಿ ನಾನೊಬ್ಬನೇ ಎಚ್ಚರಿರಬಹುದು. ಈ ರೈಲು ಈಗ ಎತ್ತ ಹೋಗುತ್ತಿದೆಯೋ. ಒಂದು ವೇಳೆ ರೈಲು ಎಲ್ಲಿಯೋ ಒಂದೆಡೆ ನಿಂತು, ಮಲಗಿದ ಈ ಜನರೆಲ್ಲ ಶವವಾಗಿದ್ದರೆ, ಆಗ ಯಾರೂ ಇಳಿಯುವುದೇ ಇಲ್ಲವಲ್ಲ ಎಂದು ಕಲ್ಪಿಸಿಕೊಂಡ. ಖುಷ್ವಂತ್‌ ಸಿಂಗ್‌ ಬರೆದ ಟ್ರೇನ್‌ ಟು ಪಾಕಿಸ್ತಾನ ಕಾದಂಬರಿ ನೆನಪಾಯ್ತು. ಅದರಲ್ಲಿಯೂ ಹೀಗೇ ಆಗುತ್ತದೆ. ಇದ್ದದ್ದನ್ನೆಲ್ಲ ಹಿಂದೆ ಬಿಟ್ಟು ಹೊಸ ದೇಶಕ್ಕೆ ಗುಳೆ ಹೊರಟವರಿದ್ದ ರೈಲನ್ನು ಮಧ್ಯೆಯೇ ತಡೆದ ದುಷ್ಕರ್ಮಿಗಳು ಎಲ್ಲರನ್ನೂ ಸಾಯಿಸಿ ಶವಗಳಿದ್ದ ರೈಲನ್ನಷ್ಟೇ ಮುಂದೆ ಹೋಗಲು ಬಿಡುತ್ತಾರೆ. ನಿಲ್ದಾಣ ಬಂದರೂ ಯಾರೂ ಇಳಿಯುವುದಿಲ್ಲ.

ಏಕೋ ಈ ಕಲ್ಪನೆ ಕೆಟ್ಟದ್ದಾಯ್ತು ಎಂದು ಅನ್ನಿಸಿತು. 

ನಿದ್ದೆ ಬರುವುದಿಲ್ಲ ಎಂಬುದು ಖಾತರಿಯಾದಾಗ, ಸುಮ್ಮನೇ ಕಣ್ತೆರೆದುಕೊಂಡೇ ಮಲಗಿದ. ಯಾವ್ಯಾವ ಊರಿನ ಜನರೋ, ಎಲ್ಲೆಲ್ಲಿ ಹೊರಟಿದ್ದಾರೋ, ಏನೇನು ಕನಸು ಕಾಣುತ್ತಿದ್ದಾರೋ. ಇಂಥ ಸಾವಿರಾರು ಜನರನ್ನು ಪ್ರತಿ ದಿನ ಹೊತ್ತೊಯ್ಯುವ ರೈಲು ನಿಜಕ್ಕೂ ವಿಚಿತ್ರ ಅನಿಸಿತು. ನಿಲ್ದಾಣ ಬಂದಂತೆ, ಕೆಲವರು ಇಳಿಯುತ್ತಾರೆ; ಕೆಲವರು ಹತ್ತುತ್ತಾರೆ. ರೈಲು ಹೋಗುತ್ತಲೇ ಇರುತ್ತದೆ. ಇದೆಂದಿಗೂ ನಿಲ್ಲದ ಕ್ರಿಯೆ. ನಾನೂ ಒಂದು ಸ್ಟೇಶನ್‌ನಲ್ಲಿ ಇಳಿಯುತ್ತೇನೆ. ಅಲ್ಲಿಂದ ಮನೆಯತ್ತ ಹೊರಡುತ್ತೇನೆ. ಬಹುಶಃ ಎಲ್ಲರೂ ಹೀಗೇ ಮಾಡುತ್ತಾರೆ. ಎಲ್ಲರೂ ಮನೆ ಸೇರುವ ಕನಸಿನಲ್ಲೇ ನಿದ್ದೆ ಹೋಗಿದ್ದಾರೇನೋ ಅಂತ ಅಂದುಕೊಂಡ. 

ರೈಲು ಹಳಿ ಬದಲಿಸಿದ ಶಬ್ದವಾಯಿತು. 

ಯಾವುದೋ ಸ್ಟೇಶನ್‌ ಬರುತ್ತಿದೆ ಎಂದು ಮಲಗಿದ್ದವ ಎದ್ದು ಕೂತ. ಚಹ ಮಾರುವವನು ಬಂದರೆ ಒಂದು ಕಪ್‌ ತೆಗೆದುಕೊಳ್ಳಬೇಕು. ಹೇಗಿದ್ದರೂ ನಿದ್ದೆ ಬರುವುದಿಲ್ಲ. ಚಹ ಕುಡಿದು ಇನ್ನಷ್ಟು ಫ್ರೆಶ್‌ ಆಗಿ ಯೋಚಿಸಬಹುದು ಎಂದು ಉತ್ಸಾಹಗೊಂಡ. 

ರೈಲೇನೋ ನಿಂತಿತು. ಆದರೆ, ಅಪರಾತ್ರಿಯಲ್ಲಿ ಚಹ ಮಾರುವ ಒಬ್ಬನೂ ಕಾಣಲಿಲ್ಲ. ಅವನಂತೆ ನಿದ್ದೆಗೇಡಿಗಳಾಗಿದ್ದ ಅಲ್ಲೊಬ್ಬರು ಇಲ್ಲೊಬ್ಬರು ಇಳಿದು ದಿಕ್ಕೆಟ್ಟವರಂತೆ ಡಬ್ಬಿಯ ಹತ್ತಿರವೇ ನಿಂತಿದ್ದರು. ಯಾವುದೋ ಒಂದು ಸ್ಟೇಶನ್‌ ಅದು. ನೋಡಲು ದೊಡ್ಡದಾಗೇ ಇದ್ದರೂ ಜನ ಕಾಣಲಿಲ್ಲ. 

ಸಿಳ್ಳೆ ಹೊಡೆದು ಸೂಚನೆ ಕೂಡ ನೀಡದೇ ರೈಲು ನಿಧಾನವಾಗಿ ಚಲಿಸತೊಡಗಿದ್ದನ್ನು ಕಂಡು ಲಗುಬಗೆಯಿಂದ ಏರಿ ನಿಂತ. ಸ್ಟೇಶನ್‌ ದಾಟುವವರೆಗೂ ಬಾಗಿಲ ಹತ್ತಿರ ನಿಂತವ, ಮತ್ತೆ ಬೋಲ್ಟ್‌ ಬಿಗಿದು ತನ್ನ ಬರ್ಥ್‌ ಏರಿ ಮಲಗಿದ. ಮತ್ತೆ ರೈಲಿನ ಗಾನ ಶುರುವಾಯ್ತು. ಅದುವರೆಗೆ ಸ್ತಬ್ದವಾಗಿದ್ದ ಹೊರಚಾಚಿದ ಕಾಲುಗಳು ಮತ್ತೆ ಲಯಬದ್ಧವಾಗಿ ಅಲುಗತೊಡಗಿದವು.

*****

ಧಕ್ಕನೇ ಎಚ್ಚರವಾಯಿತು.

ಎಲ್ಲಿದ್ದೇನೆ ಎಂಬುದು ತಿಳಿಯಾಗಲು ಕೊಂಚ ಸಮಯವೇ ಬೇಕಾಯಿತು. ಮೈ ಬೆವೆತುಹೋಗಿತ್ತು. ಹೊರಗೆ ಮಳೆ ನಿಂತಿದ್ದರಿಂದ, ಕೋಣೆಯೊಳಗೆ ಒಂಥರಾ ಧಗೆ. ಹೊದ್ದುಕೊಂಡಿದ್ದ ರಗ್‌ ಒದ್ದಿದ್ದ ಮಗಳು, ಒಂದು ಕೈಯಿಂದ ಕತ್ತು ಬಳಸಿಕೊಂಡು ಮಲಗಿದ್ದಳು. 

ಓಹ್‌... ಎಂದುಕೊಂಡ. ತಿಳಿಯಾಗುತ್ತಿದ್ದ ಮನಸು ಆಗ ತಾನೆ ಕಂಡಿದ್ದ ಕನಸಿನ ವಿವರಗಳನ್ನು ಹೆಕ್ಕುತ್ತಿತ್ತು. ನಾನೀಗ ಮನೆಯಲ್ಲಿದ್ದೇನೆ. ಶವದ ರೈಲು ಕೇವಲ ಕನಸು ಎಂಬುದು ಮನವರಿಕೆಯಾದಾಗ ನೆಮ್ಮದಿ ಮೂಡಿತು. ಎದ್ದು ಫ್ಯಾನ್ ಹಾಕಿದ. ತಂಗಾಳಿ ಕೋಣೆ ಸುತ್ತತೊಡಗಿದಾಗ ನಿದ್ದೆ ಪೂರ್ತಿ ಹರಿದುಹೋಗಿ ಸುಮ್ಮನೇ ಕೂತ.

ಬದುಕು ಎಷ್ಟು ವಿಚಿತ್ರ. ನಿತ್ಯ ಒಂದಿಷ್ಟು ಕನಸುಗಳು ಬೀಳುತ್ತವೆ. ಕೆಲವೊಂದು ನನಸಾಗದೇ ಕಾಡುತ್ತವೆ. ಕೆಲವೊಂದು ಕನಸಾಗಿದ್ದರೂ ಕಾಡುತ್ತವೆ. 

ಮಗಳು ಮತ್ತೆ ಕನವರಿಸಿದಳು. ತಾನು ಪಕ್ಕದಲ್ಲೇ ಇದ್ದೇನೆ ಎಂಬುದನ್ನು ಆಕೆಗೆ ಮನವರಿಕೆ ಮಾಡಿಕೊಟ್ಟ ಆತ, ಮಗಳ ಕನಸು ಏನಿರಬಹುದು ಎಂದು ಯೋಚಿಸಿದ. 

ಸ್ವೆಟರ್‌ ನೆನಪಾಯ್ತು. 

‘ಆಯ್ತು ಪುಟ್ಟಾ, ನಾಳೆ ನಿನಗೆ ಖಂಡಿತ ಸ್ವೆಟರ್‌ ಕೊಡಿಸ್ತೀನಿ’ ಎಂದು ಗಟ್ಟಿಯಾಗಿ ಹೇಳಿದ. ಆತನ ಮಾತು ಕೇಳಿತೇನೋ ಎಂಬಂತೆ, ಮಲಗಿದ್ದ ಮಗು, ನಿದ್ದೆಯಲ್ಲೇ ಆತನ ಕೈಯನ್ನು ಬಿಗಿಯಾಗಿ ಹಿಡಿದುಕೊಂಡಿತು.

ಮನಸ್ಸು ತಿಳಿಯಾದಂತಾಗಿ ಮೆಲ್ಲಗೇ ಆತ ಒರಗಿಕೊಂಡ. ಏನೊಂದು ಪ್ರಯತ್ನವೂ ಇಲ್ಲದೇ ಕೆಲ ಹೊತ್ತಿನಲ್ಲೇ ಗಾಢ ನಿದ್ದೆ ಆವರಿಸಿತು. 

ಕನಸುಗಳೇ ಇಲ್ಲದ ಮಾಯಾ ನಿದ್ದೆ!

- ಚಾಮರಾಜ ಸವಡಿ 

ವಿಸ್ತಾರ ಜಗತ್ತಿನಲ್ಲಿ ವಸ್ತಾರೆ ಚೌಕಟ್ಟು...

30 May 2011

0 ಪ್ರತಿಕ್ರಿಯೆ

ನಾಗರಾಜ ವಸ್ತಾರೆ ಭಾನುವಾರದ ವಿಜಯ ಕರ್ನಾಟಕ ದಿನಪತ್ರಿಕೆಯ ಲವ್‌ಲವಿಕೆ ಪುರವಣಿಯಲ್ಲಿ ಬರೆದಿರುವ ಲೇಖನ ‘ಒಂದು ಮಿಡಿತ, ಒಂದು ಹೃದಯ...’ಕ್ಕೆ ನನ್ನ ವೈಯಕ್ತಿಕ ಪ್ರತಿಕ್ರಿಯೆ ಇದು.

ಇದನ್ನು ಲೇಖನ ಎನ್ನಲು ನನ್ನದೇ ಆದ ಆಕ್ಷೇಪಗಳಿವೆ. ಇದು ಲೇಖನವೋ, ವೈಯಕ್ತಿಕ ಅನಿಸಿಕೆಯೋ, ಪ್ರಬಂಧವೋ, ಅಥವಾ ಕತೆಯಾಗಲು ಹೊರಟ ವ್ಯಥೆಯೋ ಎನಿಸುತ್ತದೆ. ಅಂತ್ಯದಲ್ಲಿ ಲೇಖಕರು ಹೇಳಿರುವ ಎರಡು ಪ್ಯಾರಾದ ಸೂಕ್ಷ್ಮತೆಯನ್ನು ಇಡೀ ಲೇಖನದುದ್ದಕ್ಕೂ ಬಳಸಿದ್ದರೆ ಅದಕ್ಕೊಂದು ಮರ್ಯಾದೆಯ ಆಯಾಮವಾದರೂ ದಕ್ಕುತ್ತಿತ್ತು. ಆದರೆ ಹಾಗಾಗಿಲ್ಲ ಎಂಬುದೇ ಬೇಸರದ ಸಂಗತಿ. ಲವ್‌ಲವಿಕೆ ಎಂಬ ಮುದ್ದಾದ ಹೆಸರಿನ ಪುರವಣಿಗೆ ಈ ಬರಹ ತಕ್ಕುದಲ್ಲ ಎನಿಸುತ್ತದೆ.


 




ವಸ್ತಾರೆಯವರು ಹೇಳಹೊರಟಿದ್ದಾದರೂ ಏನು? ಅದೇ ಪುರವಣಿಯ ಮುಖ್ಯ ಲೇಖನವಾಗಿ ಪ್ರಕಟವಾದ ‘ಪತಿ, ಪತ್ನಿ ಮತ್ತು ಆಕೆ’ ಎಂಬ ಲೇಖನದ ಅಡಿ ಪ್ಯಾರಾದಂತೆ ಬಂದಿರುವ ಈ ಬರಹ, ಆ ಸ್ಥಾನಕ್ಕೂ ಯೋಗ್ಯವಲ್ಲ. ಮುಖ್ಯ ಲೇಖನಕ್ಕೆ ವ್ಯತಿರಿಕ್ತ ಎನಿಸುವಂತೆ ಭಾವನೆ ಹುಟ್ಟಿಸುವ ಬರಹ ಇದು. ಗಂಡು ಹೆಣ್ಣಿನ ಸಂಬಂಧ ಆಯಾ ಕಾಲಮಾನಕ್ಕೆ ತಕ್ಕಂತೆ ಬದಲಾಗುತ್ತ ಹೋಗುವಂಥದ್ದಾದರೂ, ಕೆಲ ಅಂಶಗಳು ಎಂದಿಗೂ ಬದಲಾಗದಂಥವು. ಆ ಅಂಶಗಳ ಬಗ್ಗೆ ವಸ್ತಾರೆ ಇನ್ನಷ್ಟು ನವಿರಾಗಿ, ಗೇಲಿ ಧ್ವನಿ ಇಲ್ಲದೇ ಹೇಳಬಹುದಿತ್ತು. ಮುಖ್ಯ ಲೇಖನದ ಧ್ವನಿ ನೋಡಿದರೆ, ಅದು ಅವಶ್ಯವೂ ಆಗಿತ್ತು. 

ಆದರೆ, ಅಂಥ ಸೂಕ್ಷ್ಮತೆಯೇನೂ ಇಲ್ಲದ ವಸ್ತಾರೆ ಬರಹ ಪೇಲವವಾಗಿ, ಗೇಲಿ ಮಾತಿನಲ್ಲೇ ಉಳಿದುಕೊಂಡಿದೆ. ವಸ್ತಾರೆಯವರಿಂದ ಇಂಥ ಬರಹವನ್ನು ಖಂಡಿತ ನಿರೀಕ್ಷಿಸಿರಲಿಲ್ಲ. 

ಸಂಬಂಧಗಳು ಅಷ್ಟು ಸುಲಭವಾಗಿ ವ್ಯಾಖ್ಯೆಯ ಚೌಕಟ್ಟಿಗೆ ಸಿಲುಕುವಂಥವಲ್ಲ. ಒಂದು ವೇಳೆ ಅವನ್ನು ಚೌಕಟ್ಟಿನೊಳಗೆ ಕಟ್ಟಿಹಾಕಲು ಹೊರಟರೆ, ಅವು ಸಂಬಂಧವಾಗಿ ಉಳಿಯುವುದಿಲ್ಲ. ಸಂಬಂಧ ಎಂಬುದು ವ್ಯಾಕರಣ ಅಲ್ಲ. ಅದು, ಬದುಕಿನಂಥದು. ಸದಾ ವಿಸ್ತರಿಸುವಂಥದು. ವಿಸ್ತರಿಸುತ್ತಿದ್ದರೂ, ಕೆಲ ಮೂಲ ಅಂಶಗಳನ್ನು ಕಾಪಾಡಿಕೊಂಡು ಬರುವಂಥದು. ದಟ್ಟ ಅರಣ್ಯದಂಥ ಸಂಕೀರ್ಣತೆ ಅದರದು. ಕೇವಲ ಗೇಲಿಯಂಥ ಭಾವನೆ ಇಟ್ಟುಕೊಂಡು ಸಂಬಂಧವನ್ನು ವಿಶ್ಲೇಷಿಸಲು ಹೊರಟರೆ ವಸ್ತಾರೆಯಂಥವರ ಬರಹಗಳೇ ಬರುತ್ತವೆ.

ಹೀಗಾಗಿ, ‘ಪತಿ, ಪತ್ನಿ ಮತ್ತು ಆಕೆ’ ಎಂಬುದು, ‘ಪತಿ, ಪತ್ನಿ ಮತ್ತು ಅವನು’ ಎಂದೂ ಆಗಬಹುದು. ಆದರೆ, ಇಂಥ ವಿಷಯಗಳಲ್ಲಿ ‘ಆಕೆ’ ಎಂಬ ಪದ ಕೊಡುವ ರೋಚಕತೆಯನ್ನು ‘ಅವನು’ ಎಂಬುದು ಕೊಡಲಾರದು ಎಂದು ತುಂಬ ಜನ ಭಾವಿಸಿರುವಂತಿದೆ. ಹೀಗಾಗಿ, ಇಂಥ ಬರಹಗಳು ಪದೆ ಪದೆ ‘ಆಕೆ’ಯ ಸುತ್ತಲೇ ಗಿರಕಿ ಹೊಡೆಯುತ್ತವೆಯೇ ಹೊರತು, ಅದರಾಚೆಗೆ ಇಣುಕಿ ನೋಡುವ ಕುತೂಹಲವನ್ನೂ ವಸ್ತಾರೆಯಂಥವರಲ್ಲಿ ಹುಟ್ಟಿಸುವುದಿಲ್ಲ.

ಪ್ರತಿಯೊಂದು ಭಾವನೆಗೂ, ಸಂಬಂಧಕ್ಕೂ, ಚೌಕಟ್ಟು ಹಾಕುವ ದೃಷ್ಟಿಕೋನ ಇರುವವರೆಗೆ ಇಂಥ ವಿಷಯಗಳ ಬರವಣಿಗೆಗೆ ಜೀವ ಬರುವುದಿಲ್ಲ. ಸಾಮಾನ್ಯ ಜನರ ಅಭಿಪ್ರಾಯಗಳನ್ನೇ ಹಸಿಹಸಿಯಾಗಿ ಹೇಳುವುದು ವರದಿಗಾರಿಕೆಯಾಗಬಹುದೇ ಹೊರತು ಖಂಡಿತ ಪುರವಣಿ ಬರಹವಾಗದು. ಸಂಬಂಧಗಳ ವಿಶ್ಲೇಷಣೆಗೆ ಮನಃಶಾಸ್ತ್ರಜ್ಞರೇ ಆಗಬೇಕಿಲ್ಲ. ನಾವು ಕಂಡುಂಡ ಬದುಕೇ ಅದಕ್ಕೆ ಸಾಕಷ್ಟು ಸಾಮಾಗ್ರಿಗಳನ್ನು ಒದಗಿಸಬಲ್ಲುದು. ದೊರಕಿದ ಅನುಭವ, ಮಾಹಿತಿಯನ್ನೇ ಅಚ್ಚುಕಟ್ಟಾಗಿ ಕಟ್ಟಿಕೊಟ್ಟರೆ ಉತ್ತಮ ಬರಹ ಖಂಡಿತ ದಕ್ಕುತ್ತದೆ. ಅಂಥದೊಂದು ಪ್ರಯತ್ನ ಮಾಡುವ ಮನಃಸ್ಥಿತಿ ವಸ್ತಾರೆಯವರ ಬರಹದಲ್ಲಿ ಕಾಣಲಿಲ್ಲ.

ಅದು ಕಾಣಬೇಕಿತ್ತು ಎಂಬುದು ನನ್ನಂಥವರ ಅನಿಸಿಕೆ. 

- ಚಾಮರಾಜ ಸವಡಿ