ಆರುಷಿ ಪ್ರಕರಣ: ಮಾಧ್ಯಮದ ಹೊಣೆಗೇಡಿತನ

14 Jul 2008

ಕೊಲೆಯಾದ ಆರುಷಿ

ಇದೊಂದು ನಾಚಿಕೆಗೇಡಿತನದ ಘಟನೆ.

ದೆಹಲಿಯ ಒಂಬತ್ತನೇ ತರಗತಿ ವಿದ್ಯಾರ್ಥಿನಿ ಆರುಷಿ ತಲ್ವಾರ್‌ ಕೊಲೆ ಪ್ರಕರಣವನ್ನು ಮಾಧ್ಯಮಗಳು ಬಿಂಬಿಸಿದ ರೀತಿ, ತಾವೇ ತನಿಖೆದಾರರಂತೆ ವರ್ತಿಸಿದ್ದು, ತಂದೆಯನ್ನೇ ಕೊಲೆಗಾರ ಹಾಗೂ ವ್ಯಭೀಚಾರಿ ಸ್ಥಾನದಲ್ಲಿ ನಿಲ್ಲಿಸಿದ್ದು, ದಿನ ನಿತ್ಯ ಘಟನೆಯನ್ನು ಚ್ಯೂಯಿಂಗ್‌ಗಮ್‌ನಂತೆ ಅಗೆದಿದ್ದು ಎಲ್ಲವೂ ರಾಜೇಶ್‌ ತಲ್ವಾರ್‌ ಜಾಮೀನಿನೊಂದಿಗೆ ಅಂತ್ಯ ಕಂಡಿವೆ. ಮಾಧ್ಯಮವನ್ನು ತಪ್ಪಿತಸ್ಥನ ಸ್ಥಾನದಲ್ಲಿ ನಿಲ್ಲಿಸಿವೆ.

ಸಂಪದದಲ್ಲಿ ಮಾಧ್ಯಮದ ದುಂಡಾವರ್ತನೆ ಬಗ್ಗೆ ಚರ್ಚೆಯಾಗಿದ್ದನ್ನು ಸ್ಮರಿಸಬಹುದು. ಅದಕ್ಕೆ ಜ್ವಲಂತ ಉದಾಹರಣೆ ಈಗ ರಾಜೇಶ್‌ ತಲ್ವಾರ್‌ ಜಾಮೀನಿನ ಮೂಲಕ ದೊರಕಿದೆ.

ಆರುಷಿ ಕೊಲೆ ಪ್ರಕರಣದ ಮುಖ್ಯ ಘಟನಾವಳಿಯನ್ನು ಬಿಂಬಿಸುವ ಮೂಲಕ ಮಾಧ್ಯಮದ ಹೊಣೆಗೇಡಿತನವನ್ನು ನಿಮ್ಮ ಮುಂದಿಡಲು ಇಚ್ಛಿಸುತ್ತೇನೆ.

೧. ದೆಹಲಿ ಪಕ್ಕದ ನೊಯ್ಡಾದ ತಮ್ಮ ನಿವಾಸದಲ್ಲಿ ಮೇ ೧೬ರಂದು ಅರುಶಿ ಸತ್ತುಬಿದ್ದಿರುವುದು ಪತ್ತೆಯಾಗಿತ್ತು. ಆಕೆಯ ಹಣೆ, ಭುಜ ಮತ್ತು ಎದೆಗೆ ತಿವಿತದ ಗಾಯಗಳಾಗಿದ್ದವು. ಅರುಶಿ ಕೊಲೆಯ ಬಗ್ಗೆ ಪೊಲೀಸರು ಆಕೆಯ ಮನೆಯ ಕೆಲಸಗಾರ ಹೇಮರಾಜ್‌ನನ್ನು ತಕ್ಷಣಕ್ಕೆ ಶಂಕಿಸಿದರೂ, ತಲ್ವಾರ್ ಮನೆಯ ಮೇಲ್ಛಾವಣಿಯಲ್ಲಿ ಹೇಮರಾಜ್ ಶವ ಕೂಡ ಪತ್ತೆಯಾಗಿದ್ದು, ಪೊಲೀಸರಿಗೆ ಒಗಟಾಗಿತ್ತು.

೨. ಎರಡು ದಿನಗಳ ನಂತರ ಅರುಶಿ ಮತ್ತು ಮನೆಸೇವಕ ಹೇಮರಾಜ್ ಹತ್ಯೆ ಪ್ರಕರಣದಲ್ಲಿ ಅರುಶಿಯ ತಂದೆ ಡಾ.ರಾಜೇಶ್ ತಲ್ವಾರ್ ಅವರನ್ನು ನೊಯ್ಡಾ ಪೊಲೀಸರು ಬಂಧಿಸಿದರು. ವಿಚಾರಣೆ ವೇಳೆ ತಲ್ವಾರ್ ಅನೇಕ ವೈರುದ್ಧ್ಯದ ಹೇಳಿಕೆಗಳನ್ನು ನೀಡಿದ್ದರೆಂದು ಹೇಳಲಾಯಿತು. ಡಾ. ತಲ್ವಾರ್ ಜತೆ ಕೆಲಸ ಮಾಡುತ್ತಿದ್ದು ಅವರ ಜತೆ ಅಕ್ರಮ ಸಂಬಂಧ ಇರಿಸಿಕೊಂಡಿದ್ದರೆಂದು ಶಂಕಿಸಲಾಗಿರುವ ಡಾ.ಅನಿತಾ ದುರಾನಿ ಅವರನ್ನು ಕೂಡ ಬಂಧಿಸಿ, ಸಹಆರೋಪಿಯೆಂದು ಹೆಸರಿಸಲಾಯಿತು.

ಅರುಶಿ ಕೊಲೆಗೆ ಗೌರವ ಹತ್ಯೆ ಅಥವಾ ಅತಿಯಾದ ವಾಂಛೆ ಪ್ರೇರೇಪಣೆಯೆಂದು ಪೊಲೀಸರು ಅಧಿಕೃತವಾಗಿ ಖಚಿತಪಡಿಸಿದರು. ತಮ್ಮ ಅಕ್ರಮ ಸಂಬಂಧದ ಬಗ್ಗೆ ಅರುಶಿ ತಿಳಿದಿದ್ದ ಸಂಗತಿಯು ತಲ್ವಾರ್‌ಗೆ ಸಹ್ಯವಾಗದೇ ಹತ್ಯೆ ಮಾಡಿರಬಹುದೆಂದು ಶಂಕೆ ವ್ಯಕ್ತಪಡಿಸಲಾಯಿತು.

೩. ಒಂದು ವಾರದ ನಂತರ ರಾಕೇಶ್ ತಲ್ವಾರ್ ಮೊದಲ ಬಾರಿಗೆ ಮಾಧ್ಯಮದೆದುರು ಮಾತಾಡಿ, ಮಗಳ ಕೊಲೆಗೆ ಸಂಬಂಧಿಸಿದಂತೆ ತನಗೇನು ತಿಳಿದಿಲ್ಲ ಎಂದು ಹೇಳಿದರು. ಆದರೆ, ಇದಕ್ಕೂ ಮುಂಚೆ ರಾಕೇಶ್ ದಂಪತಿಗಳು ನೋಯ್ಡಾ ಪೊಲೀಸರಿಗೆ ನೀಡುತ್ತಿದ್ದ ವಿಭಿನ್ನ ಹೇಳಿಕೆಗಳು ಅವರ ಮೇಲೆಯೇ ಸಂಶಯ ಹುಟ್ಟಿಸಿವೆ ಎಂದು ಮಾಧ್ಯಮಗಳು ವರದಿ ಮಾಡಿದವು.

೪. ತನ್ನ ಪುತ್ರಿ ಅರುಷಿ ಕೊಲೆಯ ಅರೋಪ ಹೊತ್ತಿರುವ ರಾಕೇಶ್ ತಲ್ವಾರ್‌ ತಮ್ಮೊಂದಿಗೆ ಅನೈತಿಕ ಸಂಬಂಧ ಹೊಂದಿದ್ದಾರೆಂಬ ಆರೋಪವನ್ನು ಅವರ ಸಹವೈದ್ಯೆ ಅನಿತಾ ದುರ್ರಾನಿ ತಳ್ಳಿಹಾಕಿದರು. "ಪೊಲೀಸರು ಹೇಳಿರುವ ವಿಚಾರ ಅತ್ಯಂತ ಆಘಾತಕಾರಿಯಾದುದು. ಎಲ್ಲವೂ ಸುಳ್ಳು. ಯಾವುದೂ ಸರಿಯಿಲ್ಲ. ಎಲ್ಲವಿಚಾರಗಳು ಆಧಾರರಹಿತವಾದದ್ದು" ಎಂದು ದುರಾನಿ ಹೇಳಿದರು.

೫. ಮಗಳು ಅರುಷಿ ಕೊಲೆ ಪ್ರಕರಣದಲ್ಲಿ ಬಂಧಿತನಾಗಿರುವ ಡಾ|ರಾಜೇಶ್ ತಲ್ವಾರ್ ಬೆಂಬಲಕ್ಕೆ ಅವರ ಪತ್ನಿ ಹಾಗೂ ಅವರು ಸಂಬಂಧವಿರಿಸಿಕೊಂಡಿದ್ದಾರೆ ಎನ್ನಲಾದ ಡಾ|ಅನಿತಾ ದುರಾನಿ ನಿಂತಿದ್ದಾರೆ ಎಂದು ವರದಿಯಾಯಿತು.

ರಾಜ್ಯ ಪೊಲೀಸ್ ಇಲಾಖೆ ಅರುಶಿ ಹತ್ಯೆ ಪ್ರಕರಣವನ್ನು ಸಮರ್ಥವಾಗಿ ಕಂಡುಹಿಡಿಯಲು ಅಸಮರ್ಥವಾಗಿರುವ ಹಿನ್ನೆಲೆಯಲ್ಲಿ ಉತ್ತರಪ್ರದೇಶ ಸರಕಾರ ಪ್ರಕರಣದ ಕುರಿತು ಸಿಬಿಐ ತನಿಖೆ ನಡೆಸುವಂತೆ ಆಗ್ರಹಿಸಿದ ಹಿನ್ನೆಲೆಯಲ್ಲಿ ಅರುಶಿ ತಲ್ವಾರ್ ಹತ್ಯೆ ಪ್ರಕರಣವನ್ನು ಸಿಬಿಐ ವಹಿಸಿಕೊಂಡಿತು.

ಕೊಲೆಯಲ್ಲಿ ಪ್ರಮುಖ ಆರೋಪಿಗಳಾಗಿರುವ ಆರುಶಿಯ ತಂದೆತಾಯಿಯರ ಹೇಳಿಕೆಗಳಲ್ಲಿ ಧ್ವಂಧ್ವಗಳಿರುವುದನ್ನು ಸಿಬಿ‌ಐ ಗುರುತಿಸಿತು. ಆರುಶಿಯ ಕೊಲೆಯಾದ ದಿನ ಬಾಗಿಲು ಮುಚ್ಚಿತ್ತು. ಹಾಗೂ ಏರ್‌ಕಂಡೀಷನರ್‌ನ ಸದ್ದು ಇತ್ತು. ಇದರಿಂದಾಗಿ ಆರುಶಿಯ ಕಿರಿಚಾಟ ತಮಗೆ ಕೇಳಿಸಿರಲಿಲ್ಲ ಎಂದು ಆರುಶಿಯ ತಂದೆ ರಾಜೇಶ್ ತಲ್ವಾರ್ ಮತ್ತು ತಾಯಿ ನೂಪುರ್ ತಲ್ವಾರ್ ಸಿಬಿ‌ಐ ಎದುರು ಹೇಳಿಕೆ ನೀಡಿದ್ದರು. ಆದರೆ, ಕೊಲೆ ಸಂಭವಿಸಿದ ಸ್ಥಳವಾದ ರೂಮಿನ ಬಾಗಿಲು ಆ ದಿನ ತೆರೆದಂತೇ ಇತ್ತು ಎಂಬ ವಿಷಯ ತನಿಖೆಯಿಂದ ಸಾಬೀತಾಗಿದೆ ಎಂದು ಸಿಬಿ‌ಐ ಸ್ಪಷ್ಟಪಡಿಸಿತು.

ರಾಜೇಶ್ ತಲ್ವಾರ್ ಅವರನ್ನು ಸುಳ್ಳುಪತ್ತೆ ಪರೀಕ್ಷೆಗೂ ಗುರಿಮಾಡಿದರೂ ನಿರೀಕ್ಷಿಸಿದ ವಿಷಯಗಳು ಹೊರಬರಲಿಲ್ಲ. ಕೊಲೆಗೆ ಬಳಸಲಾಗಿದ್ದ ಆಯುಧವನ್ನು ಹುಡುಕುವ ಪ್ರಯತ್ನವೂ ವಿಫಲವಾಯಿತು.

೬. ಅರುಷಿ ತಂದೆ ಡಾ| ರಾಜೇಶ್ ತಲ್ವಾರ್ ಕಂಪೌಂಡರ್ ಆಗಿದ್ದ ಕೃಷ್ಣನನ್ನು ಬುಧವಾರ ಬ್ರೈನ್ ಮ್ಯಾಪಿಂಗ್ ಪರೀಕ್ಷೆಗೆ ಒಳಪಡಿಸಲಾಯಿತು. ಆತನ ಹೇಳಿಕೆಯ ಮೇಲೆ ಸಿಬಿಐ ಅಧಿಕಾರಿಗಳು ರಾಜೇಶ್ ತಲ್ವಾರ್ ನಿವಾಸಕ್ಕೆ ತೆರಳಿದ್ದು ಮರು ಶೋಧ ನಡೆಸಿದರು. ಈ ಹಿನ್ನೆಲೆಯಲ್ಲಿ ಹೆಚ್ಚಿನ ಮಾಹಿತಿ ಪಡೆದುಕೊಳ್ಳುವ ನಿಟ್ಟಿನಲ್ಲಿ ಕೃಷ್ಣನನ್ನು ಸುಳ್ಳು ಪತ್ತೆ ಪರೀಕ್ಷೆ ಹಾಗೂ ಮಂಪರು ಪರೀಕ್ಷೆಗೆ ಒಳಪಡಿಸಿದರು.

೭. ನೂತನ ಬೆಳವಣಿಗೆ ಎಂಬಂತೆ ಡಾ.ರಾಜೇಶ್ ತಲ್ವಾರ್ ಅವರ ಮನೆಯ ಮಾಜಿ ಕೆಲಸಗಾರ 24 ವರ್ಷ ಪ್ರಾಯದ ವಿಜಯ್ ಮಂಡಲ್ ಎಂಬಾತನನ್ನು ಸಿಬಿಐ ಬಂಧಿಸಿತು. ತಲ್ವಾರ್ ಅವರ ಪತ್ನಿಯನ್ನು ಮೂರನೇ ಬಾರಿಗೆ ಸುಳ್ಳು ಪತ್ತೆ ಪರೀಕ್ಷೆ ನಡೆಸಿ, ಬಂಧಿಸುವ ಸಾಧ್ಯತೆ ಇರುವುದಾಗಿ ಸಿಬಿಐ ಹೇಳಿತ್ತು.

೮. ಜೂನ್‌ ಕೊನೆಯ ವಾರದಲ್ಲಿ ಡಾ|ರಾಜೇಶ್ ತಲ್ವಾರ್ ಅವರ ಗೆಳತಿ ಡಾ|ಅನಿತಾ ದುರಾನಿ ಬಳಿ ಕೆಲಸ ಮಾಡುತ್ತಿದ್ದ ರಾಜಕುಮಾರ್ ಎಂಬುವನನ್ನು ಸಿಪಿ‌ಐ ಪೊಲೀಸರು ಬಂಧಿಸಿದರು. ಕೃಷ್ಣ ತಾನೇ ಕೊಲೆ ಮಾಡಿದ್ದಾಗಿಯೂ, ಅದಕ್ಕೆ ರಾಜಕುಮಾರ್ ಹಾಗೂ ಮತ್ತೊಬ್ಬನ ಸಹಾಯ ಪಡೆದಿದ್ದಾಗಿಯೂ ಹೇಳಲಾಯಿತು.

ಕೊನೆಗೆ, ರಾಜ್‌ಕುಮಾರ್ ತಪ್ಪಿಪ್ಪಿಕೊಂಡಿರುವುದಾಗಿ ಸಿಬಿಐ ಗಾಜಿಯಾಬಾದ್ ನ್ಯಾಯಾಲಯಕ್ಕೆ ತಿಳಿಸಿತು. ಅರುಶಿ ಹತ್ಯೆ ಪ್ರಕರಣದಲ್ಲಿ ಭಾಗಿ ಎಂಬುದಾಗಿ ಒಪ್ಪಿಕೊಂಡಿರುವ ರಾಜ್‌ಕುಮಾರ್, ಅರುಶಿಯ ಮೊಬೈಲ್ ಅನ್ನು ಸ್ವಿಚ್ ಆಫ್ ಮಾಡಿ , ಅದನ್ನು ನಾಶ ಪಡಿಸಿರುವುದಾಗಿ ಒಪ್ಪಿಕೊಂಡ.

ಅರುಷಿ ಕೊಲೆ ಪ್ರಕರಣಕ್ಕೆ ದ್ವೇಷ ಸಾಧನೆ ಕಾರಣ ಎಂಬ ಅಂಶ ರಾಜ್‌ಕುಮಾರ್ ಮೇಲೆ ನಡೆಸಲಾದ ಮಂಪರು ಪರೀಕ್ಷೆಯಲ್ಲಿ ದೃಢಪಟ್ಟಿತು. ಡಾ.ತಲ್ವಾರ್ ಅವರ ಕ್ಲಿನಿಕ್‌ನಲ್ಲಿ ಕಂಪೌಡರ್ ಆಗಿದ್ದ ಕೃಷ್ಣ, ತನ್ನ ಯಜಮಾನನ ಬಗ್ಗೆ ಅಸಮಧಾನಗೊಂಡಿದ್ದ ಮತ್ತು ಅದಕ್ಕಾಗಿ ಅರುಷಿಯನ್ನು ಕೊಲೆ ಮಾಡಲು ಬಯಸಿದ್ದ ಎಂಬ ವಿಚಾರ ಬಹಿರಂಗ ಪಡಿಸಿದ.

೯. ಕೊಲೆಗೆ ಕಾರಣ

ಕೊಲೆ ನಡೆದ ರಾತ್ರಿ ಹೇಮ್‌ರಾಜ್, ತನ್ನನ್ನು, ಕೃಷ್ಣ ಮತ್ತು ಶಂಭು ಎಂಬ ವ್ಯಕ್ತಿಯನ್ನು ಡಾ.ತಲ್ವಾರ್ ಅವರ ಮನೆಯಲ್ಲಿರುವ ತನ್ನ ಕೊಠಡಿಗೆ ಆಹ್ವಾನಿಸಿದ್ದ. ಜೊತೆಯಾಗಿ ಬಿಯರ್ ಕುಡಿಯುತ್ತಿರುವಾಗ ಕೃಷ್ಣ, ಡಾ.ತಲ್ವಾರ್ ಅವರು ತಾನು ಸರಿಯಾಗಿ ಕೆಲಸ ಮಾಡದಿರುವ ಬಗ್ಗೆ ಪೇಶಂಟ್‌ಗಳ ಎದುರಿನಲ್ಲೆ ತನ್ನನ್ನು ಅವಮಾನಿಸಿದರು ಎಂದು ತಿಳಿಸಿದ. ತನ್ನನ್ನು ಕೆಲಸದಿಂದ ತೆಗೆದು ಹಾಕುವುದಾಗಿ ಬೆದರಿಕೆ ಹಾಕಿದ್ದರು. ಇಷ್ಟು ವರ್ಷಗಳಿಂದ ದುಡಿಯುತ್ತಿದ್ದೇನೆ, ಅವರು ನನಗೆ ಹೀಗೆ ಮಾಡಬಹುದೇ? ನಾನು ಈ ಅವಮಾನಕ್ಕೆ ಸೇಡು ತೀರೀಸಿಕೊಳ್ಳಬೇಕು ಎಂದು ಕೃಷ್ಣ ಹೇಳಿದ್ದಾಗಿ ವರದಿಯಾಯಿತು.

ಅವರ ಈ ಮಾತುಕತೆಯನ್ನು ಬಯಲಿಗೆಳೆಯುವುದಾಗಿ ಆರುಷಿ ಬೆದರಿಸಿದ್ದರಿಂದ ಕೃಷ್ಣ ಅವಳ ಗಂಟಲನ್ನು ಕುಕ್ರಿಯಿಂದ ಸೀಳಿದ. ಆದರೆ ಭಯಭೀತ ಹೇಮ್‌ರಾಜ್ ವಿಷಯವನ್ನು ತಲ್ವಾರ್ ಅವರಿಗೆ ತಿಳಿಸುವುದಾಗಿ ಹೆದರಿಸಿದ. ಅಪಾಯದ ಜಾಡು ಹಿಡಿದು, ಕೃಷ್ಣ ಮತ್ತು ರಾಜ್‌ಕುಮಾರ್ ಅವರಿಬ್ಬರು ಅವನನ್ನು ಟೆರೇಸ್ ಮೇಲೆ ಎಳೆದೊಯ್ದು ಕೊಲೆ ಮಾಡಿದರು. ಈ ಕೊಲೆಗಳಲ್ಲಿ ಡಾ.ತಲ್ವಾರ್ ಯಾವುದೇ ಪಾತ್ರ ವಹಿಸಿಲ್ಲ ಎಂಬುದು ಬಯಲಿಗೆ ಬಂದಿತು.

೧೦. ಕೊನೆಗೆ ಜುಲೈ ೧೧ರಂದು ಅರುಷಿ ತಂದೆ ರಾಜೇಶ್ ತಲ್ವಾರ್ ಅವರನ್ನು 10 ಲಕ್ಷ ರೂಪಾಯಿ ಮುಚ್ಚಳಿಕೆಯೊಂದಿಗೆ ಜಾಮೀನು ಮೇಲೆ ಬಿಡುಗಡೆಗೊಳಿಸಲಾಯಿತು. ಇವರ ವಿರುದ್ಧ ಯಾವುದೇ ಪುರಾವೆಗಳನ್ನು ಕಂಡು ಹಿಡಿಯಲು ಸಿಬಿಐ ವಿಫಲವಾಗಿರುವ ಹಿನ್ನೆಲೆಯಲ್ಲಿ ಜಾಮೀನು ನೀಡಲಾಯಿತು.

ಘಟನೆಯ ಮುಖ್ಯ ಅಂಶಗಳಿವು.

ಆದರೆ, ಮಾಧ್ಯಮ ಎಷ್ಟೊಂದು ಹೊಣೆಗೇಡಿತನದಿಂದ ವರ್ತಿಸಿತೆಂದರೆ, ತನ್ನ ಅಕ್ರಮ ಸಂಬಂಧ ಬಯಲಾಗುತ್ತದೆ ಎಂಬ ಭೀತಿಯಿಂದಾಗಿ ಡಾ. ತಲ್ವಾರ್‌ ಮಗಳ ಕೊಲೆ ಮಾಡಿದರು. ಆಕೆಯ ಕುತ್ತಿಗೆ ಸೀಳಿದ್ದು ಅತ್ಯಂತ ಸೂಕ್ಷ್ಮ ಆಯುಧದಿಂದ. ಅದನ್ನು ಪರಿಣಿತ ವೈದ್ಯ ಮಾತ್ರ ಬಳಸಬಲ್ಲ ಎಂದು ವರದಿಯಾಯಿತು. ಇಡೀ ಪ್ರಕ್ರಿಯೆಯಲ್ಲಿ ಡಾ. ತಲ್ವಾರ್‌ ದಂತ ವೈದ್ಯರು, ಅಂತಹ ಶಸ್ತ್ರ ಬಳಸುವ ಪರಿಣಿತಿ ಅವರಿಗೆ ಇರುವುದಿಲ್ಲ ಎಂಬುದನ್ನೇ ಮರೆಮಾಚಲಾಯಿತು.

ಅಷ್ಟೇ ಅಲ್ಲ, ಅಕ್ರಮ ಸಂಬಂಧದ ಜಾಡು ಹಿಡಿದು ಸಹ ವೈದ್ಯೆಯಾದ ಡಾ. ದುರಾನಿ ಅವರ ನಡತೆಯನ್ನು ಶಂಕಿಸಲಾಯಿತು. ತಲ್ವಾರ್‌ ಪತ್ನಿ ಕೂಡ ಎರಡು ತಿಂಗಳುಗಳ ಕಾಲ ತೀವ್ರ ಆಘಾತ ಅನುಭವಿಸಬೇಕಾಯಿತು. ಇಡೀ ಘಟನೆಗೆ ತಾವು ಕಾರಣರಲ್ಲ ಎಂಬುದನ್ನು ಇವರೆಲ್ಲ ಪದೆ ಪದೆ ಹೇಳಿದರೂ, ಅದಕ್ಕೆ ಆದ್ಯತೆ ನೀಡದೇ ಅವರನ್ನು ವಿಲನ್‌ಗಳಂತೆ ಚಿತ್ರಿಸಲಾಯಿತು.

ಎಲ್ಲಕ್ಕಿಂತ ಮುಖ್ಯ, ಕೊಲೆಯೊಂದನ್ನು ರಾಷ್ಟ್ರೀಯ ಘಟನೆಯಂತೆ ಬಿಂಬಿಸಿದ್ದು ಮೊದಲ ಅಕ್ಷರ ಅಪರಾಧ. ಆರುಷಿ ಕೊಲೆಯಾಗಿದ್ದು ನಿಜಕ್ಕೂ ಅತ್ಯಂತ ಹೇಯ ಘಟನೆ. ಅದರಲ್ಲಿ ಅನುಮಾನವೇ ಇಲ್ಲ. ಆದರೆ, ಅದಕ್ಕಿಂತ ಮಹತ್ವದ ಅಪರಾಧಗಳು, ಘಟನೆಗಳು ಇದರಿಂದಾಗಿ ಮಹತ್ವ ಕಳೆದುಕೊಂಡವು. ದೆಹಲಿಯ ಪಕ್ಕದ ಪ್ರದೇಶದಲ್ಲಿ ನಡೆದ ಘಟನೆಯನ್ನು ರಾಷ್ಟ್ರೀಯ ದುರಂತವೆಂಬಂತೆ ಗಂಟೆಗಟ್ಟಲೇ ಪ್ರಸಾರ ಮಾಡಲಾಯಿತು. ಈ ನಡುವೆ ಆತ್ಮಹತ್ಯೆ ಮಾಡಿಕೊಂಡ ರೈತರು, ಏರಿದ ಹಣದುಬ್ಬರ, ಹೆಚ್ಚಿದ ಬೆಲೆ, ಅಧಃಪತನಕ್ಕಿಳಿದ ರಾಜಕೀಯ, ಬಾರದ ಮುಂಗಾರು- ಮುಂತಾದವೆಲ್ಲ ಮರೆಯಾಗಿ ಹೋದವು.

ಈಗ ಡಾ. ತಲ್ವಾರ್‌ಗೆ ಜಾಮೀನು ದೊರೆತಿದೆ. ಮಾಧ್ಯಮವೀರರು ಕನಿಷ್ಠಪಕ್ಷ ನಾಚಿಕೆ ಕೂಡ ಪಟ್ಟುಕೊಳ್ಳದೆ ಬೇರೆ ಸುದ್ದಿಗಳನ್ನು ಹುಡುಕಿಕೊಂಡು ಹೊರಟಿದ್ದಾರೆ. ಯಾರಲ್ಲಿಯೂ ಒಂದು ಪ್ರಾಮಾಣಿಕ ಪಶ್ಚಾತ್ತಾಪ, ತಾವು ಎಡವಿದ್ದನ್ನು ಒಪ್ಪಿಕೊಳ್ಳುವ, ಕ್ಷಮೆ ಯಾಚಿಸುವ ಸೌಜನ್ಯ ಕಾಣಬರುತ್ತಿಲ್ಲ.

ನಿಜವಾದ ದುರಂತವೆಂದರೆ ಇದು.

- ಚಾಮರಾಜ ಸವಡಿ

(೧೩ ಜುಲೈ ೨೦೦೮)

No comments: