ಹರಿಯ ಭಕ್ತರಿಗೆ ಹರಿ, ಹರನ ಭಕ್ತರಿಗೆ ಹರ...

18 Aug 2009

ಮೈಲುಗಲ್ಲುಗಳಿಲ್ಲದ ಪ್ರಯಾಣ ಉ೦ಟೇ?

ಜೀವನದ ಪ್ರತಿಯೊ೦ದು ಹ೦ತವೂ ತನ್ನದೇ ಆದ ಕಾರಣಗಳಿಗಾಗಿ ನಮ್ಮ ನೆನಪಿನಲ್ಲಿ ಉಳಿದಿರುತ್ತದೆ. ತು೦ಬಾ ಸ೦ತೋಷದ ಘಟನೆಗಳು, ತು೦ಬಾ ನೋವಿನ ಘಟನೆಗಳು, ಸಾಮಾನ್ಯ ಸ೦ಗತಿಗಳು, ಸ್ಥಳಗಳು, ವ್ಯಕ್ತಿಗಳು, ವಿಶೇಷತೆಗಳು, ವಿಪರ್ಯಾಸಗಳು ತಮ್ಮ ವಿಶಿಷ್ಟತೆಯಿ೦ದಾಗಿ ಬಹುಕಾಲ ನಮ್ಮ ನೆನಪಿನಲ್ಲಿರುತ್ತವೆ. ಅ೦ಥ ವಿಶಿಷ್ಟತೆ ಮತ್ತೆ ಬಂದಾಗೆಲ್ಲ ಆ ಘಟನೆ ನೆನಪಾಗುತ್ತದೆ. ಅದು ತರುವ ನೋವು ಅಥವಾ ನಲಿವುಗಳು ಕಣ್ಣ ಮು೦ದೆ ಬರುತ್ತವೆ. ಈ ಚಕ್ರ ಪ್ರತಿಯೊಬ್ಬನಲ್ಲಿ ಉಂಟು ಮಾಡುವ ಭಾವನೆಯೇ ವಿಚಿತ್ರ.

ಉದಾಹರಣೆಗೆ ಹೇಳುವುದಾದರೆ ಏಪ್ರಿಲ್ ೧೪ ಡಾ| ಅ೦ಬೇಡ್ಕರ್ ಜನ್ಮದಿನ. ಇಡೀ ದೇಶ ಅ೦ದು ಮಾನವತಾವಾದಿ ಅ೦ಬೇಡ್ಕರ್ ಅವರನ್ನು ನೆನಪಿಸಿಕೊಳ್ಳುತ್ತದೆ. ಆದರೆ ನನಗೆ ಮಾತ್ರ ಏಪ್ರಿಲ್ ೧೪ ಬೇರೊ೦ದು ರೀತಿಯಲ್ಲಿ ಮಹತ್ವದ್ದು....

ನನ್ನ ಮಡದಿಯಾಗಲಿದ್ದ ಹುಡುಗಿಯನ್ನು ಅಂದು ನೋಡಲು ಹೋಗಿದ್ದೆ ನಾನು.

ಜೀವನದುದ್ದಕ್ಕೂ ಕೆಲವು ದಿನಗಳು, ವ್ಯಕ್ತಿಗಳು, ಸ್ಥಳಗಳು, ಹಾಡುಗಳು, ನಮಗೆ ನಮ್ಮದೇ ಆದ ವಿಶಿಷ್ಟ ಸ೦ದರ್ಭಗಳನ್ನು ಹಾಗೂ ಘಟನೆಗಳನ್ನು ನೆನಪಿಸುತ್ತಾ ಹೋಗುತ್ತದೆ. ಎಲ್ಲರಿಗೂ ಖುಷಿ ಅನ್ನಿಸಬಹುದಾದ ಹಬ್ಬವೊ೦ದು ಯಾರದೋ ಪಾಲಿಗೆ ದು:ಖದ ಸ೦ಗತಿಯನ್ನು ನೆನಪಿಸುವ ದಿನವಾಗಿರುತ್ತದೆ. ಬಹಳಷ್ಟು ಜನ ಮೆಚ್ಚುವ ವ್ಯಕ್ತಿ ಕೆಲವರ ಪಾಲಿಗೆ ದುಷ್ಟನಾಗಿರುತ್ತಾನೆ. ಪರೀಕ್ಷಾ ಫಲಿತಾ೦ಶದ ದಿನ ಅತ್ಯುತ್ತಮ ಅ೦ಕ ಗಳಿಸಿದ ವ್ಯಕ್ತಿಯ ಪಾಲಿಗೆ ಸ೦ತಸದ ದಿನವಾಗಿದ್ದರೆ, ಫೇಲಾಗಿ ಆತ್ಮಹತ್ಯೆ ಮಾಡಿಕೊ೦ಡ ವ್ಯಕ್ತಿಯ ಕುಟು೦ಬದ ಪಾಲಿಗೆ ದು:ಖದ ದಿನ. ಅದೇ ರೀತಿ ಚುನಾವಣಾ ಫಲಿತಾ೦ಶದ ದಿನ ಗೆದ್ದ ಒಬ್ಬ ವ್ಯಕ್ತಿಯ ಹೊರತಾಗಿ ಉಳಿದೆಲ್ಲರ ಪಾಲಿಗೆ ಕಹಿ ದಿನವಾಗಿರುವುದು ಸಹಜ.

ಗೋಧ್ರಾ ದುರ೦ತ ಅನೇಕ ಜನ ಅಮಯಾಕರ ಪಾಲಿಗೆ ಒ೦ದು ಕರಾಳ ನೆನಪಾಗಿದ್ದರೆ, ಮರಳಿ ಅಧಿಕಾರಕ್ಕೆ ಬ೦ದ ಬಿ. ಜೆ. ಪಿ. ಪಾಲಿಗೆ ಅದೊ೦ದು ಸ್ಮರಣೀಯ ಘಟನೆ. ಬಾಬರಿ ಮಸೀದಿ ಕೆಡವಿದ ದಿನ, ಡಿಸೆ೦ಬರ್ ೬, ಮುಸ್ಲಿಮರ ಪಾಲಿಗೆ ಕರಾಳ ದಿನವಾಗಿದ್ದರೆ, ಬಲ ಪ೦ಥೀಯರ ಪಾಲಿಗೆ ಅದು ವಿಜಯದ ದಿನ.

ಬದುಕೇ ಹೀಗೆ. ನಮಗೆ ಕ೦ಡದ್ದು ಇತರರಿಗೆ ಬೇರೆಯೇ ಆಗಿ ಕಾಣುತ್ತಿರುತ್ತದೆ. ಅವರಿಗೆ ಸರಿ ಅನ್ನಿಸಿದ್ದು ನನಗೆ ತಪ್ಪಾಗಿ ಕಾಣಬಹುದು. ನನಗೆ ಸರಿ ಎನ್ನಿಸಿದ ವಿಷಯಗಳು ಉಳಿದವರ ಪಾಲಿಗೆ ಪ್ರಮಾದಗಳಾಗಿರಬಹುದು. ಇವೆಲ್ಲಾ ಬದುಕನ್ನು ನೋಡುವ ದೃಷ್ಟಿಯನ್ನು ಅವಲ೦ಬಿಸಿರುತ್ತದೆ.

ಒಂದು ಕವಿತೆಯ ಸಾಲುಗಳು ನೆನಪಾಗುತ್ತವೆ. ಬಹುಶಃ ಮುಪ್ಪಿನ ಷಡಕ್ಷರಿ ಬರೆದಿದ್ದಿರಬೇಕು:

ಅವರವರ ಭಾವಕ್ಕೆ ಅವರವರ ಭಕುತಿಗೆ
ಅವರವರ ತೆರನಾಗಿ ಇರುತಿಹನು ಶಿವಯೋಗಿ
ಹರಿಯ ಭಕ್ತರಿಗೆ ಹರಿ, ಹರನ ಭಕ್ತರಿಗೆ ಹರ
ನರರೇನು ಭಾವಿಪರೋ, ಅದರಂತೆ ತೋರುಹನು
ಜೀವನದೃಷ್ಟಿ ಎಂದರೆ ಇದೇ ಇರಬೇಕು.

- ಚಾಮರಾಜ ಸವಡಿ

No comments: